ಭಾನುವಾರ, ಏಪ್ರಿಲ್ 19, 2015

"ಅರ್ಥ"...

           "ಅರ್ಥ"...

ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ
ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ..
ಬರೆದ ಪದಗಳಾ ಅಂತರದ ನಿಲುವಿಗೆ
ಕಾರಣದ ಲೇಪವಿಹುದೇ ಲೇಖನಿಯ ತುದಿಗೆ..

ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ
ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ..
ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ
ತುಂಬಿಬಂದೀತು ಬಾನು,ಬೆಳಕ ನೆರಳಿನಲಿ..

ಅಂಕುಡೊಂಕಿನ ಪಥದ ಕೊನೆಗೆ
ಚಾಚಿಕೊಂಡಿದೆಯೇನು ನಿಟ್ಟುಸಿರ ಗಮ್ಯ..
ಬಿಂಕ ಸೋಕಿದ ಹೆಜ್ಜೆ ದನಿಗೆ
ಹೇಳಿಕೊಟ್ಟಿತೇ ಹವೆಯು ಹರಿತದಾ ರಮ್ಯ..

ಸುಮದ ಜೇನ ಸತತ ಹೀರಿಯೂ
ಪತಂಗದಾ ರೆಕ್ಕೆಗಿಲ್ಲ,ಎಸಳ ಬಣ್ಣ..
ಅಮಲು ಸ್ಪರ್ಶದ ಪ್ರವರ ಭೇಟಿಯು
ಹಂಗಿನಾಚೆಗೂ ಮೀರಿದೆ ಗರ್ಭದಾ ತನನ..

ಹನಿಯುದುರಿ ಹಸನಾಯ್ತು ಹರೆಯದಾ ಸ್ವಾರ್ಥ
ಮಣ್ಣಿನಲಿ ಚಿಗುರಿತ್ತು ನೂರು ಆಗಸ..
ವಿನಿಮಯದ ಕೊನೆಯಲ್ಲಿ ಉಳಿದಿದ್ದು ಅರ್ಥ
ಬರೆದಾಯ್ತು ಸೋಜಿಗದ ತಾಜಾ ವಿನ್ಯಾಸ..

                                           ~‘ಶ್ರೀ’
                                              ತಲಗೇರಿ

ಶುಕ್ರವಾರ, ಏಪ್ರಿಲ್ 17, 2015

"ಸಮಯ"...

            "ಸಮಯ"...

ಬದುವೆಲ್ಲಾ ಹದವಾಗಿ ಕಾದಿಹುದು ಮೃದುವ
ಅತ್ತ ತಂಪಿನ ಮಾಡು ಮೂಡುವ ಭ್ರಮೆಯಲಿ..
ನದಿಯೆಲ್ಲಾ ಕಡಲನ್ನು ಸೇರುವಾ ಸ್ವರವ
ಮತ್ತೆ ಇಂಪಿನ ಒನಪು ಮಾಡಿತು ಹೊಸತಿನಲಿ..

ನಿಶೆಯ ಪ್ರಸವದಲಿ ಚಂದ್ರನೆನ್ನುವ ಮಧುವು
ಹವೆಯೊಳಗೆ ಹಂಬಲದಿ ಅಲೆದಿಹುದು ಮುಗಿಲು..
ಸರಿಸಿ ತೆರೆದೀತೇ ಅಗಳಿಯನು ಕದವು
ತುಂಬೀತೇ ಮತ್ತೊಮ್ಮೆ ಖಾಲಿಯಾಗಿಹ ಬಿಸಿಲು..

ಗಾಳಿಯಾ ಗಡಿಬಿಡಿ ಋಣದ ಮಾತು
ಕಾಯದೇ ಉದುರಿತು ಕಾಲಕೆ ಹಳತು..
ಭೂಮಿಯಾ ಬಸಿರಿನ ಜೋಗುಳ ಸೆಳೆತ
ಕಾಮದ ಸಮಯವ ಕೇಳದೇ ಕಸಿಯಿತು..

ರೆಕ್ಕೆಯ ಬಿಚ್ಚಿತು ಬೆಳಕಿನ ಹಕ್ಕಿ
ಹಾದಿಯ ಮೋಹದ ಮಂಜನು ಕರಗಿಸಿ..
ಪಕ್ಕದ ಪಯಣಿಗ ಎಲೆಗಳ ಹೆಕ್ಕಿ
ಜೋಳಿಗೆ ತುಂಬಿಹ ಆಸೆಯ ಪೋಣಿಸಿ..

ಹರಿದ ಚೀಲದ ಮೈಗೆ,ತೇಪೆಗಳ ಉಪಚಾರ
ಬೊಗಸೆಯಲಿ ಉಳಿದಿಹುದು ಬರಿಯ ಮಣ್ಣಿನ ವಾಸನೆ..
ಬಿರಿದ ಹೂಗಳು ಕೈಗೆ,ಎಟುಕದಾ ಪರಿವಾರ
ಕಿಸೆಯೊಳಗೆ,ಕದಲುತಿದೆ ಗಡಿಯಾರದಾ ಮುಳ್ಳು ತಂತಾನೇ..


                                                                  ~‘ಶ್ರೀ’
                                                                      ತಲಗೇರಿ

"ನೀನು..."

         "ನೀನು..."

ನನ್ನಯ ಹಾಡಿನ ಪ್ರತಿ ಪದ ನೀನು
ಅಕ್ಷರ ಅಕ್ಷರ ನಿನ್ನದೇ ಧ್ಯಾನ..
ಒಲವಿನ ಬಿಂಬಕೆ ಕನ್ನಡಿ ನೀನು
ಬಿಂದುವು ಬಿಂದುವು ಸೋಜಿಗ ರಚನಾ..

ಕೇಳದೇ ಕಾಡಿದೆ ನಿನ್ನಯ ಹೆರಳು
ಅರಳಿದೆಯೀಗ ಗಾಳಿಯ ತೋಳು..
ಬಾರದೆ ಬೆರೆಯದೆ ನಿಂತಿದೆ ನೆರಳು
ಚಿಗುರಿದೆಯೀಗ ನಾಚಿಕೆ ಮುಗುಳು..
ಕ್ಷಣಕೂ ಕೂಡ ಒನಪು ತಂತು
ಚೈತ್ರಕೀಗ ವಯಸು ಬಂತು..

ನನ್ನೆದೆ ಹೂವಿಗೆ ನಿನ್ನಯ ಕಣ್ಣು
ತಂದಿದೆಯೀಗ ಬಣ್ಣದ ಬಂಧ..
ಅದರೆದೆ ಬೀದಿಗೆ ನಿನ್ನಯ ಸ್ಪರ್ಶ
ತುಂಬಿದೆಯೀಗ ಹೊಸತರ ಗಂಧ..
ಹವೆಗೂ ಕೂಡ ಹುರುಪು ತಂತು
ಚೈತ್ರಕೀಗ ವಯಸು ಬಂತು..

                                 ~‘ಶ್ರೀ’
                                     ತಲಗೇರಿ

ಭಾನುವಾರ, ಏಪ್ರಿಲ್ 12, 2015

"ಸಂಭ್ರಮ..."

  "ಸಂಭ್ರಮ..."

ಗೂಡು ಕಟ್ಟುವಾ
ಹಕ್ಕಿ ಕಂಗಳಲಿ
ಮೋಡಗಳ ಮೀರಿ ಬೆಳೆವಾಸೆ..
ತುತ್ತು ಕಾಯುವಾ
ಚುಂಚಿನುಸಿರಲ್ಲಿ
ಅಮ್ಮನೆದೆಗೆ ಒರಗಿ ನಗುವಾಸೆ..

ಬಿಸಿಲು ಚಾಚಲು
ತೆರೆವ ಮೊಗ್ಗಿಗೆ
ಸೌಗಂಧ ಬೀರೋ ತವಕ..
ಒಲವ ತೊದಲಲಿ
ಬೆರೆವ ದುಂಬಿಗೆ
ಮಕರಂದ ಹೀರೋ ಪುಳಕ..

ಶಿಲೆಯ ಚೂರಿಗೆ
ಉಳಿಯ ಏಟಿಗೆ
ಶಿಲ್ಪವೆಂದೆನಿಸಿಕೊಳುವ ಅವಸರ..
ಕಲೆಯ ಹಸಿವಿಗೆ
ದಿನದ ಕಸುಬಲಿ
ಅನ್ನ ಕಲಸಲು ಬೆರಳಿಗಾಧಾರ..

ಋತುವಂಥ ನೆಪದಲ್ಲಿ
ಬಣ್ಣಗಳ ಸೃಜಿಸುವವು
ಎದೆತುಂಬ ಭೂಮಿ ಆಕಾಶ..
ಸ್ವಪ್ನಗಳ ತಪದಲ್ಲಿ
ರೂಪಿಸುತ್ತ ಸ್ತರವನ್ನು
ಬರೆಯಬೇಕಿದೆ ನಿನ್ನದೇ ವಿನ್ಯಾಸ..
ಶೂನ್ಯದೆಳೆಗಳ ತುಂಬ ತುಂಬ
ತಾಜಾತನವ ತುಂಬಿಸಿ..
ತೋರಬೇಕಿದೆ ಗಳಿಗೆ ಗಳಿಗೆ
ದಿವ್ಯ ಸಂಭ್ರಮಕೆ ಸಾಕ್ಷಿ..

                         ~‘ಶ್ರೀ’
                           ತಲಗೇರಿ

ಶನಿವಾರ, ಮಾರ್ಚ್ 21, 2015

"ಗಮ್ಯ"...

        "ಗಮ್ಯ"...

ಮುಗಿಲ ತೂಕಕೆ ಮೂಲ
ಒಳಹನಿಯ ಕೂಟವೋ...
ಮೈ ತುಂಬ ಹರಿವ
ಗಾಳಿಯಲೆಗಳ ಮಾಟವೋ...
ಬೊಗಸೆ ಚಾಚುವ ಇಳೆಯ
ಕೈ ಗೆರೆಗಳಾ ಸೆಳೆತವೋ...
ಕರಗುವುದು ಘನತಿಮಿರ
ಕಳೆಯುತ್ತ ಎದೆಭಾರ...

ಶಶಿಯ ತೊಗಲಿಂದ ಬಸಿವ
ತಂಗದಿರು ಯಾವ ಮಾಪನ..
ಉಬ್ಬು ತಗ್ಗುಗಳ ಇದಿರು
ಪ್ರತಿಫಲಿಸಿಹ ತನಗೊದಗಿದ ಬಿಸಿಲನ್ನ..
ನೆರೆಮನೆಯ ಒಳಮನೆಯು
ಕನಸುಗಳ ಹೆಕ್ಕಿ ಇಡಲೆಂದು..
ಅದುಮಿಟ್ಟ ಒಳದನಿಯು
ನವಿರಾಗಿ ನಗಲೆಂದು...

ಕೂಡದಿರು ಕಡಲನ್ನ
ಹೆಸರಿರದ ತೊರೆಯಂತೆ..
ಎದೆಯೊಳಗೆ ಬದು ಕಟ್ಟಿ
ಬದಲಿಸು ಹರಿವನ್ನ..
ಚಿಗಿತು ಬೀಗಲಿ ದಡವು
ತುತ್ತು ಕಾಣಲಿ ಮಗುವು..
ಚಾಚಿಕೊಳಲಿ ಕವಲು ಕವಲಲಿ
ದೂರ ದೂರದ ಊರಲಿ...

                          ~‘ಶ್ರೀ’
                             ತಲಗೇರಿ

"ಗತಿ..."

     "ಗತಿ..."

ಕಾಲನಾ ಕವಿತೆಯಲಿ
ಅಕ್ಷರವ ಬಿತ್ತು
ಕನಸು ತುಂಬಿದ ಲೇಖನಿಯೇ..
ಆಲದಾ ಮೂಲವನು
ನನಗೆ ತೋರಿಸಿಯೇನು
ಕಾಡು ಮಣ್ಣಿನಾ ವಾಸನೆಯೇ..

ಹಸ್ತರೇಖೆಯು ಯಾಕೋ
ಹರಡುತ್ತ ಹುಡುಕುತಿಹುದೇ,
ಆದಿಯನು,ಅಂತ್ಯವನು
ಇಲ್ಲಾ ಮಧ್ಯಂತರದ ಸ್ಥಿತಿಯನು..
ಮತ್ತೆ ಮಾಗುವ ಗತಿಯನು..

ಹದ ಬೇಕೇ ನಿಲುವಿಗೆ,
ಮುಗಿವ ಚಂದ್ರನ ಬೆಳಕು
ಕರಗಿಸೀತೇ ಇಷ್ಟುದ್ದ ನೆಳಲನು..
ಹಗಲು ಬಂದರೆ ಸಾಕೇ,
ಶೂನ್ಯವೆಲ್ಲವೂ ತುಂಬಿಕೊಳಲು ಇನ್ನು..
ಪರಿಧಿ ಹೇಗೆ ಇದ್ದೀತು ಹೊರಗೆ
ಮೀರಿ
ಕೇಂದ್ರ ಬಿಂದುವಿನ ಸೆಳೆತವನ್ನು..

ವಕ್ರದೇಹದ ಅವಧಿ ಮುಗಿಸಲು
ಲೆಕ್ಕವಿಟ್ಟಿದೆ ಋತುವು..
ಸೊಕ್ಕುವಾಗಿನ ಬಡಿತ
ಮುಟ್ಟಬಲ್ಲದೇ ಕೊನೆಯ ಪಲುಕು..
ಆರುವಾ ಮುನ್ನ ಎಂದೋ ಹಚ್ಚಿಟ್ಟ ಮಿಣುಕು..

                                              ~‘ಶ್ರೀ’
                                                  ತಲಗೇರಿ

ಭಾನುವಾರ, ಫೆಬ್ರವರಿ 22, 2015

"ಭಿತ್ತಿ ಮೀರಿ"....

"ಭಿತ್ತಿ ಮೀರಿ"....

ಇಟ್ಟಿಗೆಯ ಪೇರಿಸಿಡಲು
ಭಿನ್ನವಾಗುವ ಹಂಬಲಕೆ
ಮೊದಲ ಮಜಲು...
ಎಲ್ಲ ದಿಕ್ಕಲೂ
ಕಲ್ಲ ಸಾಲಿಗೆ
ತಳವ ಕೊಡಲು
ಮನೆಯ ಮಧ್ಯವೇ
ಹುಟ್ಟುತಿಹವು
ಮತ್ತೆ ಗೋಡೆಗಳು...

ಕತ್ತಲೆಯ ಸಂಗ್ರಹಕೆ
ಬೆಳಕು ದಾಟದ ಹೊದಿಕೆ...
ತಪ್ತ ಬಯಕೆಯ ಝಳಕೆ
ಸಂದು ಸಂದಿಗೂ
ಬಿಸಿಯು ಸೋಕಲು
ಸದ್ದು ಮಾಡೀತೇ ಇನ್ನು
ಸ್ತಬ್ಧ ಕುರ್ಚಿಯಾ ಕೀಲು...

ಮುಗಿಲೆದೆಯ ಬಿಗಿಯು
ನೆರಿಗೆಯನು ಕರಗಿಸಲು..
ತೆರೆ ಕದವ,ಮಳೆ ಹನಿಯ
ಬೊಗಸೆಯಲಿ ಹಿಡಿದುಕೊಳಲು..
ಗರಿಗೆದರಿ ಹಬ್ಬಿಕೊಳಲಿ ಹಕ್ಕಿ
ಇಣುಕಿರಲು ಎಳೆಬಿಸಿಲು...
ತುಂಬಿಕೊಳಲಿ ಗೋಡೆಗಳ ಮೀರಿ
ರಂಗು ರಂಗಿನ ಬೆಳಕಿನೆಸಳು...

                                   ~`ಶ್ರೀ'
                                        ತಲಗೇರಿ

ಶನಿವಾರ, ಫೆಬ್ರವರಿ 7, 2015

"ವರ್ತಮಾನ..."

   "ವರ್ತಮಾನ..."

ಬಿಂದುವಿನ ಸೆಳೆತದಲಿ
ಪರಿಧಿಗೊಂದು ಅಸ್ತಿತ್ತ್ವ..
ಚೆದುರದಂತೆ ಚಲನೆಯಲಿ
ಅಂಟಿಕೊಂಡಿದೆ ಹದವ...
ಅಂತರದ ಕಾವಿಗೆ
ಸ್ವಂತವಾಗಿದೆ ಹೊಸ ಮೊರೆತ...

ಹೇಳಲಿಲ್ಲವೇ ನಿನಗೆ..
ನಿಂತ ನೀರಿಗೂ,ತೆರೆದ ಕವಲಿಗೂ
ಬೇರೆ ಬೇರೆಯದೇ ವಿನ್ಯಾಸ...
ಜೀಕುತಿರೆ,ಜೋಕಾಲಿ..
ಗಾಳಿಗೊರಗೆ,ಬಾನಾಡಿ..
ಬೆರಗ ತುಳುಕಿಸುವ ಆಗಸ...

ಕಂಡಿದ್ದೆ ನಿನ್ನೆಗಳಲಿ
ಬಣ್ಣ ಬಣ್ಣದ ಬುಗುರಿ;
ಅಂಗಳದ ತುಂಬೆಲ್ಲ
ದಾರಗಳು ಚೆದುರಿ...
ರಾತ್ರಿ ಇಟ್ಟ ಚುಕ್ಕಿಗಳಿಗೆ
ಚಂದ್ರ ಹರಡಿಹ ಮೌನ...
ಸ್ವಪ್ನಗಳ ಗುಡಿಸಲಿಗೆ
ಬಳಿದು ಇಡಲೇ
ವಾಸ್ತವಿಕ ಬಣ್ಣ...

                        ~‘ಶ್ರೀ’
                           ತಲಗೇರಿ


ಶನಿವಾರ, ಜನವರಿ 17, 2015

"ಪಾತ್ರ"...

      "ಪಾತ್ರ"...

ಜಗವ ಕಾಣುವ ಮೊದಲೇ
ಹಸಿವನ್ನು ಕಳೆದವಳು..
ಇಟ್ಟ ಪುಟ್ಟ ಹೆಜ್ಜೆಗೆಲ್ಲ
ಎದೆಹಾಲ ಕಸುವಿತ್ತವಳು..
ಗರ್ಭದಾ ಒಳಹೊರಗು
ಸ್ವರ್ಗವನೇ ಹರಸಿಹಳು..
ಇಲ್ಲಿ ‘ಅವಳೊಬ್ಬ’ ತಾಯಿ..

ಒಂದೇ ನೂಲಿನ ಒಡಲಲಿ
ಹುಟ್ಟಿದಾ ನವಿರು ಎಳೆಯು..
ಬಿಡಿ ದೇಹ ಹಿಡಿ ಜೀವ
ತುಸುಮುನಿಸಿನಲಿ ಗುದ್ದು
ಮರು ಗಳಿಗೆ ಮುಗುಧತೆಯ ಮುದ್ದು..
ಇಲ್ಲಿ ‘ಅವಳೊಬ್ಬ’ ಅನುಜೆ..

ತೊದಲಿನಾ ಸೊಗಡಿಗೆ
ಮೃದು ಸಲಿಗೆಯಾದವಳು..
ಶೈಶವದ ಬೆಳಗಿಂದ
ಸಂಜೆ ಬಿಸಿಲಾರುವ ತನಕ
ನೆರಳಂತೆ ಉಳಿದವಳು..
ಕೈ ಬೆರಳ ತುದಿಗಳಾ
ಮಣ್ಣಿನಲಿ ನೆನಪಾಗುವಳು..
ಇಲ್ಲಿ ‘ಅವಳೊಬ್ಬ’ ಗೆಳತಿ..

ಮಣ್ಣರಸಿ ಬೇರೊಂದು
ಎದೆಯೊಳಗೆ ಇಳಿದಾಗ
ಕಣ ಕಣಕೆ ಹರಡುವುದು
ಭದ್ರತೆಯ ಸುಳಿವು..
ಪೊರೆ ಕಳಚಿ ಕಲೆತಾಗ
ರಕ್ತದಲಿ ಹೊಸಗಂಧ
ಫಲವಾಗುವುದು ಒಲವು..
ಇಲ್ಲಿ ‘ಅವಳೊಬ್ಬ’ ಮನದನ್ನೆ..

ಮಡಿಲಲ್ಲಿ ವಾತ್ಸಲ್ಯ,ಬೊಗಸೆಯಲಿ ನೇಹ
ಪ್ರೀತಿಯಾ ಸಾನ್ನಿಧ್ಯ,ಅರ್ಪಣೆಯ ಗೇಹ..
ಎಲ್ಲ ದಿಕ್ಕಿನಲೂ ಸೋಕಿಹೋಗುತಿದೆ
ಋಣದ ಗಾಳಿ..
ನಿತ್ಯ ಪರ್ವದಾ ಪ್ರತಿ ಬಿಂದು ‘ಅವಳು’
ಭಿನ್ನ ಪಾತ್ರದಲಿ....

                                       ~‘ಶ್ರೀ’
                                           ತಲಗೇರಿ 

ಸೋಮವಾರ, ಜನವರಿ 12, 2015

"ಬುದ್ಧನಾಗಿಲ್ಲ..."

 "ಬುದ್ಧನಾಗಿಲ್ಲ..."

ಕಾಷಾಯದಾಶ್ರಯದಲ್ಲಿ
ಧರ್ಮ ಕರ್ಮಗಳ ಕಡೆದು
ನವನೀತ ಪಡೆವ
ತಾಳ್ಮೆ ನನಗಿಲ್ಲ...
ನನ್ನೆದೆಯರಮನೆಯ
ಮೂಲೆ ಮೂಲೆಯಲೂ ಅನುರಣಿಸುತಿದೆ
ನಾನಿನ್ನೂ ಬುದ್ಧನಾಗಿಲ್ಲ...

ಸ್ಖಲಿತ
ಬೆಳಕ ಚೂರಿನ ಸ್ವಪ್ನ
ಎಡೆಬಿಡದೇ
ಕದಡುತಿದೆ ಬಿಂಬ...
ಭ್ರಮೆಯ ತೊಲಗಿಪ ರವಿಯು
ಬಾಂದಳದಿ ಹುಟ್ಟಿಲ್ಲ...
ನಾನಿನ್ನೂ ಬುದ್ಧನಾಗಿಲ್ಲ...

ಕಲ್ಲೆದೆಯ ರಾಗ
ಕುಸುರಿಯಲಿ ಸೃಜಿಸಿಲ್ಲ...
ಉಳಿಪೆಟ್ಟು ಬಿದ್ದಿಲ್ಲ..
ಕರಗಬೇಕಿದೆ ದಾಹ..
ನಾನಿನ್ನೂ ಬುದ್ಧನಾಗಿಲ್ಲ...

ಅವಸರದ ಕರೆಗೆ
ಪ್ರತಿ ಗಳಿಗೆ ಮೆರವಣಿಗೆ..
ಕಮಲದಾ ಎಲೆಯ
ಹನಿ ಜಾರಿ ಬೆರೆತೀತು...
ಬೇರುಗಳಲಿ
ಹರಡಿಹುದೇ ಮೋಹ...
ನಾನಿನ್ನೂ ಬುದ್ಧನಾಗಿಲ್ಲ...

                        ~‘ಶ್ರೀ’
                           ತಲಗೇರಿ


ಬುಧವಾರ, ಜನವರಿ 7, 2015

"ಪುನರಾವರ್ತನ".....

            "ಪುನರಾವರ್ತನ".....

ಆಗಸವು ಬಿರಿದು,ಬಣ್ಣಗಳು ಹರಿದು
ಒತ್ತಾಗಿ ಸುರಿವುದು ದ್ಯುತಿಯ ಬಾಣ..
ಶೈತ್ಯ ರಾತ್ರಿಯ ಅಮಲು ಇಳಿದು
ಕಾಡುತ್ತ ಕಳೆವುದು ಹುಲ್ಲಿನೆದೆಯ ಶ್ರಾವಣ..

ನಿಲುಕು ನೋಟಕೆ ನೆಲದ ಸಲುಗೆ
ಪರಿಮಿತಿಯ ಪಥ್ಯದಲಿ ಘಮಿಸುವಾ ಹೂವು..
ಅಲೆದು ಕಲೆಯುವ ಬಯಲ ಗಾಳಿಗೆ
ಕವಲೆಸೆದು ನಿಲ್ಲುವುದು ತಾನೊಂಟಿ ಮರವು..

ರತಿರಾಗ ಭ್ರಮೆಯ ನವಿರಾದ ಮೊರೆತ
ಹೊಂಬೆಳಕ ತುರುಬಲ್ಲಿ ರಸಿಕತೆಯ ಕದಿರು..
ಬಿಸಿಲ ಭಾಷೆಯಲಿ ಕರಗುವಾ ತುಡಿತ
ತನಿನಾದ ಸ್ಫುರಿಸುವುದು ಒರಟಾದ ಬಿದಿರು..

ಚಿಪ್ಪಿನಾ ಸೆರೆಯೊಡೆದು ಪುಟಿಯುವಾ ಚಿಗುರು
ಕಂಪನದ ತಳದೊಳಗೆ ಇಳಿಯುವುದು ಬೇರು..
ಮುಪ್ಪಿನಾ ಗೆರೆ ಬಿಡಿಸಿ ಸಂಜೆಯದು ತೃಪ್ತ
ಕಂತಲಿಹ ದಿನಮಣಿಗೆ ಆಚೆಲೋಕದ ಸೆಳೆತ..

ಹಗಲ ಹಿರಿತನ ಮುಗಿದ ಗಳಿಗೆ
ಮತ್ತೆ ಮುಗಿಲಲಿ ನಡೆದೀತು ಪ್ರತಿಫಲನ..
ಅಂತ್ಯ ಆದಿಗೆ ಯುಗದ ಬೆಸುಗೆ
ಸತ್ಯ ಮಿಥ್ಯದ ಕೂಟದ ಪುನರಾವರ್ತನ...

                                                    ~`ಶ್ರೀ'
                                                        ತಲಗೇರಿ

"ಮಾರುವೇಷ"....

         "ಮಾರುವೇಷ"....

ಹಗಲ ಬಗಲಿಗೆ ಹರಿದ ಜೋಳಿಗೆ
ನಿಶೆಯ ಮೈತುಂಬ ಚಂದಿರನ ಬೆವರು..
ಕಡಲ ಮಡಿಲಿಗೆ ಕರೆದಂತೆ ಬೆಸುಗೆ
ನದಿಯ ಹರಿವಿನಲಿ ನೆನಪಾಗೋ ತವರು..

ಬಿಸಿಲ ಕುಸುರಿಯಲಿ ಅರಳುವುದು ಗಂಧ
ಮುಳ್ಳ ಜತನದಲಿ ದುಂಬಿಗೆ ಮಕರಂದ..
ತರಗೆಲೆಯ ಪ್ರಣಯಕ್ಕೆ ತರತರದ ಸ್ವರವು
ಹೆಜ್ಜೆಗಳ ಕಚಗುಳಿಗೆ ಅನುಭವದ ಮಧುವು...

ಕಂಪನದ ಪಿಸುದನಿಗೆ ಮರುದನಿಯ ಮದಿರೆ
ಸಂವಹನ ಹದವರಿತ ಯೌವನದ ಥಳುಕು..
ಬಿಡಿತನದ ಒಡೆತನಕೆ ಕೆನೆಯುವಾ ಕುದುರೆ
ಮುಗಿಯದಾ ಮಾಗಿಯಲಿ ಬೆಚ್ಚನೆಯ ಅಳುಕು..

ಗರಗೆದರಿದಾ ಹಕ್ಕಿ ಗೆರೆ ದಾಟಿ ಬರಲು
ಆಸೆಗಳ ರೆಕ್ಕೆಗೆ ಹೊಸ ಮಾರುವೇಷ..
ಬರಿ ಭ್ರಾಂತಿಯಾ ಹಗಲು ನವಿರಾಗಿ ನಗಲು
ಕತ್ತಲಿನ ಪಕ್ಕೆಯಲಿ ಬಣ್ಣಗಳ ಸಮಾವೇಶ..

ಬೆರಗಿನಾ ಮುಗಿಲು ಬಾಗಿನದ ತೆರದಿ
ಪುಳಕ ತರುವುದು ಬಾನೆದೆಯ ಪದರದಿ..
ಕರಗಿದಾ ಕಲ್ಲು ಹೊಸ ಮನ್ವಂತರದಿ
ಬೆಳಕ ಹಡೆವುದು ಹಣತೆಯಾ ಪಾತ್ರದಿ...

                                                      ~`ಶ್ರೀ'
                                                          ತಲಗೇರಿ

ಸೋಮವಾರ, ಜನವರಿ 5, 2015

"ಪುನರ್ಮಿಲನ.."

           "ಪುನರ್ಮಿಲನ.."

ಎದೆಯ ಗಾಳಿ ಕೊರಳೊಳಗೆ ಹರಿದು
ಕೊಳಲೊಳಗೆ ಕಳೆದು,ಬೆರಳ್ತುದಿಗೆ ಸುಳಿದು
ಅವಕಾಶದಲಿ ಮತ್ತೆ ಲೀನ..
ಗ್ರೀಷ್ಮದಲಿ ಮುಗಿಲು ಕಟ್ಟುವ ತವಕ
ಮತ್ತೆ ಬಿಂದುವಲಿ ಉದುರುವಾ ಪುಳಕ..

ಒಡಲ ಸುಳಿಯು ಒಳಗೊಳಗೆ ಬೆಳೆದು
ಅಲೆಯೊಳಗೆ ಅಳೆದು,ದಡ ತಲುಪಿ ಅಲೆದು
ಕಡಲಾಳದಲಿ ಮತ್ತೆ ಧ್ಯಾನ..
ಸ್ಪರ್ಶದಲಿ ನಿಶೆಯ ಬಿತ್ತುವ ಗಣಿತ
ಭಿನ್ನ ಬಂಧದಲಿ ಚಂದ್ರಮನ ಸಹಿತ..

ತೊದಲ ಕುಡಿಯು ಮಿಗಿಲೆಲೆಯ ತಳೆದು
ಪರಿಮಳದಿ ಪುಟಿದು,ಹಗಲ ತೇಗಿಗೆ ಸೆಟೆದು
ಮಣ್ಣಿನೆದೆಯಲಿ ಮತ್ತೆ ಮೌನ..
ದೃಶ್ಯದಲಿ ಹಸಿವ ತುತ್ತಿನ ಒಲವು
ನಿತ್ಯ ದ್ರವ್ಯದಲಿ ಬಯಕೆಯಾ ಹರವು..

ಬಿಗಿದ ತಂತಿಗೆ ಬೆಸುಗೆ ಬಿಸಿಯು
ಮೀಟಿದಾಗ ತಾನೇ ನಾದ ಲಹರಿಯು..
ನವಿರು ಗರ್ಭದಿ ಕಂಪನದ ಗುಣಕ
ಮರಳಬೇಕು ಆದಿಗೆ ಅಂತ್ಯದಾ ಮೂಲಕ..

                                                      ~`ಶ್ರೀ'
                                                          ತಲಗೇರಿ

ಭಾನುವಾರ, ಜನವರಿ 4, 2015

"ಹಂಗು.."

         "ಹಂಗು.."

ಮುಗಿಲ ಹಕ್ಕಿ ಹಾರೋ ಪಥದಿ
ಸರಿದು ನಿಲುವ ಬಾನ ಗಾಳಿ..
ಕಡಲು ಉಕ್ಕಿ ಅಲೆವ ಕ್ಷಣದಿ
ಎದೆಯ ಕೊಡುವ ಮರಳ ಕೇಳಿ..

ಚೆದುರಿರುವ ಅಕ್ಷರವ ಕರೆದು
ನಡೆಯುವುದು ಪದಗಳಾ ಅಧಿವೇಶನ..
ಹವೆಯೊಳಗೆ ಪರಿಮಳವ ಹೊಸೆದು
ಕರೆಯುವುದು ಭ್ರಮರವಾ ಸುಮದ ಗಾನ..

ಕಳೆದಿರುವ ಪ್ರಾಯವನು ನೆನೆದು
ಬಯಸುವುದು ಆ ಬಾನು ಚಂದ್ರಮನ ಸಂಗ..
ಅಲೆಯುತಿಹ ಕಾಲುಗಳ ಸೆಳೆದು
ಕೆಣಕುವುದು ಸತ್ತ್ವವನು ಮೃಗಜಲದ ವೇಗ..

ಬೊಗಸೆ ಹಸಿವಿಗೆ ಇಡಲು ಮಧ್ಯಂತರ
ಶೃತಿಲಯದ ಸಲ್ಲಾಪ ಕಂಪಿಸಲು ತಂತು..
ಮೊಗದ ಗೆರೆಗಳ ನಡುವೆ ಆನಂತರ
ಋತು ಬರೆವ ಸರದಿ ಕವಲುಗಳ ಕುರಿತು...

ಯಾರು ತಂಗುವರೋ ನನ್ನೆದೆಯ ಜಗುಲಿಯಲಿ
ಅಂತರಂಗದ ಅಗಳಿಗೆ ಬೇಕೇನು ಕೀಲಿ!..
ಸೂರ ಹಂಗಿಗೇಕೋ ಬಣ್ಣಗಳ ವೇಷಾವಳಿ
ನಿಲಬಹುದೇ ನಾನು ನನ್ನದೇ ನೆರಳಿನಲಿ!!..

                                                  ~`ಶ್ರೀ'
                                                      ತಲಗೇರಿ


ಶನಿವಾರ, ಜನವರಿ 3, 2015

"ಒಲವ ಕೊಡು..ಅಲೆಗಳಿಗೆ.."

 "ಒಲವ ಕೊಡು..ಅಲೆಗಳಿಗೆ.."

ಗಾಳಿಯಲಿ ಗೀಚಿದಾ ಗೆರೆಗೆ
ಮರುಗಳಿಗೆ ಉಳಿದೀತೇ ಅಸ್ತಿತ್ತ್ವ..
ಬಾನಿನಲಿ ಸೋರುವಾ ಬಿದಿಗೆಗೆ
ತಿಂಗಳಿಗೆ ಕಾಡುವುದೇ ವ್ಯಕ್ತಿತ್ತ್ವ...
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ನೀರಿನಲಿ ಬರೆದಾಗ ಅಕ್ಷರವ
ಹನಿಗಳಲಿ ಕರಗೀತೇ ಅದರರ್ಥ..
ಮಣ್ಣಿನಲಿ ಉದುರಿಸಲು ಹೂದಳವ
ಅದರೊಳಗೆ ಇಳಿದೀತೇ ಕಂಪಹಿತ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ತಾವರೆಯ ಎಲೆ ಮೇಲಿನ ಹನಿಯು
ಜಾರುತಲಿ ಮರೆತೀತು ಅನುಬಂಧ..
ಹುಲ್ಲಿನಲಿ ಎದೆಚಾಚಿದಾ ಇಬ್ಬನಿಯು
ಆರುತಲಿ ಸರಿದೀತು ನೆನಪಿಂದ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

                                                          ~`ಶ್ರೀ'
                                                              ತಲಗೇರಿ

ಗುರುವಾರ, ಜನವರಿ 1, 2015

"ಋಣ"....

          "ಋಣ"....

ನೀಲರಾಶಿಯ ಉಲಕ ರಾಗದಿ
ಹಾಯಿದೋಣಿಯ ಹಗುರ ಚಲನ
ಮರಳ ಮೌನದಿ ಬೆರೆವ ತವಕದಿ
ಬೀರಿ ಸೋಕಿದೆ ಅಲೆಯ ಗಮನ..

ದೂರ ಯಾನವ ನೆನೆದು ಸಾಗಿದೆ
ಅಂತರದ ಹಳಿಗಳ ಅಂತರಂಗದ ಪ್ರೀತಿ..
ಭ್ರಮರ ನೇಹದ ನೆಪದಿ ಅರಳಿದೆ
ಮಂದಾರ ಮಧುವಿನ ಚೆಂದಚಾಮರ ವಿತತಿ..

ಕೊರಳ ಗಾಳಿಗೆ ಶ್ರುತಿಯ ಹಿಡಿಯಲು
ಬಿದಿರ ಕೊಳವೆಯ ನುಡಿಸಬೇಕು ಬೆರಳು..
ವಿರಳ ದಾರಿಗೆ ಸೆಳೆತ ಕೊಡಲು
ಎದೆಯ ಕೊಳದಲಿ ಕರೆಯಬೇಕು ಅಮಲು..

ಮಳೆಯ ಉಲಿಯ ಲಹರಿ ಸುಳಿಯಲು
ನವಿಲು ಸಲುಗೆಗೆ ನೆಲದ ತೀರ ಕಾತರ..
ಉಳಿದ ಎಲೆಯ ಜೊತೆಗೆ ಕೂಡಲು
ತಳಿರ ತವಕಕೆ ಉರುಳಬೇಕು ಶಿಶಿರ..

ಮನೆಗೆ ಬೇಲಿಯು ಮಿತಿಯ ಪರಿಧಿ
ಬಂಧಿಯಲ್ಲ ಬಿಂದುವಲ್ಲಿ ಹವೆಯ ಋಣವು..
ನನಗೆ ಸೇರಿಯೂ ಬೇರೆ ತರದಿಂದಲೂ
ಬೆಳಕಿನಲ್ಲಿ ಆಚೆ ನಿಲದೇ ನೆರಳ ಹರವು..!!

                                                   ~`ಶ್ರೀ'
                                                       ತಲಗೇರಿ

ಬುಧವಾರ, ಡಿಸೆಂಬರ್ 31, 2014

"ಧಾತು...."

              "ಧಾತು...."
     
ಚಿಗುರಿದ ಚಂದ್ರನ ತುಟಿಗಳ ತುದಿಯಲಿ
ಹರಡಿದೆ ನಿಬಿಡದಿ ಘಮ್ಮನೆ ಮೊಲ್ಲೆ
ಕರಗುವ ಮೇಘದ ಮಗ್ಗುಲ ಸ್ತರದಲಿ
ತರುವುದು ಸಡಗರ ಬೆಳಕಿನ ಜಲ್ಲೆ...

ಬರಡು ಭೋಗದ ಕರಡು ನೆಲದಲಿ
ಹುಲ್ಲಿಗೆ ಇಬ್ಬನಿಯ ಹೊದೆವಾಸೆ ವಿಸ್ಮಯ
ಮರಳ ತೇಗುವ ಬಿಸಿಯ ಎದೆಯಲಿ
ಬಳ್ಳಿಗೆ ಕಡಲಾಳ ಬೇರುಗಳ ವಿಷಯ

ಎದುರು ಗೋಡೆಯ ಬಸಿರ ಪುಟದಲಿ
ಬರೆದ ಸಾಲಿಗೆ ಹಾಕಬೇಕೇನು ಕನ್ನ!
ಅಕ್ಷರದ ನೆರಳ ನಿಲ್ಲಿಸಲು ಸಾಲಿನಲಿ
ಬೆಂಕಿಕಡ್ಡಿಯ ಕೊನೆಗೆ ಬೆಳಕಿನಾ ಬಣ್ಣ..

ಇಳಿಬಿಟ್ಟ ಜೋಕಾಲಿ ಜೀಕುವಾ ದನಿಗೆ
ಬೇಸರವು ಒಣಗಿರಲು ಮರಕೀಗ ಪ್ರಾಯ..
ಹಸಿದಿದ್ದ ಗಳಿಗೆಯಲಿ ತುತ್ತಿಟ್ಟ ಒಲವಿಗೆ
ಮರಿ ಹೇಗೆ ಮರೆತೀತು ಇನ್ನೀಗ ತಾಯ..

ಋತುಗಳಾ ಸರಪಣಿಗೆ ಹವೆಯಾಯ್ತು ತಂತು
ಅವಕಾಶ ಒದಗಿಹುದೇ ಮಿಲನಕ್ಕೆ ಶೂನ್ಯದಲಿ!
ಮೋಹಗಳ ಮರುದನಿಗೆ ಮನವಾಯ್ತು ಧಾತು
ಜಿನನೆಂತು ಜನಿಸುವನು ಕಟ್ಟಿಟ್ಟ ಗೂಡಿನಲಿ...

                                                             ~`ಶ್ರೀ'
                                                                 ತಲಗೇರಿ

"ಈಗೀಗ..."

"ಈಗೀಗ..."

ನನ್ನೆದೆಯ ಹೊಸ್ತಿಲ ಎದೆಯ ಮೇಲೀಗ
ಸದ್ದಿಲ್ಲದೆ ಶುರುವಾಗಿದೆ ಹೆಜ್ಜೆಗಳ ಸಂಕ್ರಮಣ..
ಏಕಾಂತದಾ ಆಲಾಪ ಇಳಿಯುವಾಗ ಕ್ಷಣಕೀಗ
ಸಲ್ಲಾಪ ತೊದಲುತಿದೆ ಪ್ರಣಯದಾ ಪರಿಧ್ಯಾನ..

ನೋಡುತ್ತ ಘನವಾಯ್ತು ಕಾದಂಬಿನಿ
ನಿಡುಲಜ್ಜೆಯಲಿ ನೀ ಕರಗುವುದನ್ನ...
ಪ್ರತಿಗಳಲಿ ಬರೆದಿಡಲೇ ಕಿರು ಟಿಪ್ಪಣಿ
ನಿನ್ನ ರೆಪ್ಪೆಗಳಲಿ ನಾ ಕಂತುವಾ ಮುನ್ನ..

ಪ್ರೀತಿ ಸಹಿಯ ಬರೆವಾಸೆ ದಿಗಂತದಲಿ
ನಿನ್ನ ಬೆರಳ ಹಿಡಿದು ಬೆಳ್ಳಕ್ಕಿ ಸಾಲಿನಲಿ..
ಒಂದೆರಡು ಕ್ಷಣ ಕಳೆವಾಸೆ ಜೊತೆಯಲ್ಲಿ
ಬಾಗಿದಾ ಮಳೆಬಿಲ್ಲ ಬಣ್ಣಗಳ ನೆರಿಗೆಯಲಿ...

ನಿನ್ನ ಪ್ರೀತಿ ಕಿರಣಗಳ ಸ್ಪರ್ಶಕ್ಕೆ
ಅರಳಿತು ನನ್ನೆದೆ ಕೊಳದಾ ನೈದಿಲೆ..
ನಿನ್ನ ಕುರಿತ ಕುಸುರಿಗಳ ತರ್ಕಕ್ಕೆ
ಏರಿತು ಋತುವಿನಾ ಅಮಲು ಆಗಲೇ..

ಕೂಡಿಡುವೆ ನಿನ್ನೊಲವ ಪ್ರತಿಪದವ
ಚಿತ್ರಕ್ಕೆ ತೊಡಿಸುವಾ ಕಿರು ಚೌಕಟ್ಟಿನಂತೆ
ಬಯಸುತ್ತ ಪ್ರತಿಕ್ಷಣವೂ ನಿನ್ನ ಸನಿಹವ
ಕನಸಲ್ಲೇ ಚಲಿಸುವೆ ನಿನ್ನತ್ತ ಅಲೆಮಾರಿಯಂತೆ!..

                                                          ~'ಶ್ರೀ'
                                                             ತಲಗೇರಿ

ಬುಧವಾರ, ಅಕ್ಟೋಬರ್ 22, 2014

"ಜೀವನ್ಮುಖಿ..."

            "ಜೀವನ್ಮುಖಿ..."

ವಿರಾಗಿಯ ಬಗಲಲ್ಲಿ ಜೋಳಿಗೆಯ ಪರಿಭಾಷೆ
ಕರಗದಿರುವ ನೆರಳಿಗೂ ಬೆರಳಿನಾ ಆಸೆ..
ಸಾರಿಗೆಯ ರಹದಾರಿ ಬಿಸಿಲಿನಾ ಪಿಸುಮಾತು
ಹಾಸಿಹುದು ಕಡುಗಪ್ಪು ಮೌನವೂ ಬೆರೆತು..

ಮಿಥ್ಯ ಸಂಜೆಯಲಿ ಚಂದಿರನ ಹೆಣವು
ಸಿಕ್ಕು ಸಿಕ್ಕಾದ ಶೃಂಗಾರಕೆ ತಾರೆಗಳ ಮೊಗ್ಗು..
ತಥ್ಯ ತೀಟೆಯಲಿ ಮುಗಿಲಿನಾ ಸೆಳವು
ಜಲಬಿಂದು ಜೋಡಿಕೆಗೂ ಬೆಳಕಿನಾ ಹಂಗು..

ಬೆಚ್ಚುತಿಹ ಬಣ್ಣಗಳ ಒಟ್ಟುಗೂಡಲಿಟ್ಟು
ಗುಟ್ಟಾಗಿ ಬರೆದಿರುವ ಚಿತ್ತಾರ ಬಾನು..
ಮುಂಚಿತವೇ ಮನೆಯ ಬಾಗಿಲನು ತೆರೆದಿಟ್ಟು
ಹೆಜ್ಜೆಗಳ ಸಲಿಗೆಯನು ಬಯಸಿಹೆನೇ ನಾನು!..

ಬೇಡಿಕೆಯ ಸೇರಿಕೆಗೆ ಯಂತ್ರಗಳ ಆಲಾಪ
ಕೀಲುಗಳ ಕದಲಿಕೆಗೆ ಪ್ರತಿಕ್ಷಣದ ಮಿಸುಕಾಟ..
ಬಾಡಿಗೆಯ ನಿದಿರೆಗೆ ರಾತ್ರಿಯಾ ಸಂತಾಪ
ನೂಲುಗಳ ಪೋಣಿಕೆಗೆ ಕನಸುಗಳ ತಡಕಾಟ..

ಇಂದ್ರಿಯದ ನರುಗಂಪು ಭ್ರಮೆಗಳಾ ಬೀದಿ
ಹವೆಯ ಪ್ರಾಯ ಹಾಗೇ ಏರುತಿರಲು..
ಕಣ್ಣೆವೆಗೆ ನಿಲುಕೀತು ವಾಸ್ತವದ ಪರಿಧಿ
ಬಲಿತ ರೆಕ್ಕೆಗೆ ಒಂದು ದಿಕ್ಕು ಕೊಡಲು..

                              ~‘ಶ್ರೀ’
                               ತಲಗೇರಿ

ಶನಿವಾರ, ಅಕ್ಟೋಬರ್ 11, 2014

"ಸಂತೆಯ ಸೋಗಿಗಿಲ್ಲಿ..."

   "ಸಂತೆಯ ಸೋಗಿಗಿಲ್ಲಿ..."

ಹಕ್ಕಿ ಹಚ್ಚಿಹುದು ನನ್ನೆದೆಗೆ ರೆಕ್ಕೆಗಳ
ಹುಡುಕಿಹೆನು ಮತ್ತೆ ಭ್ರಮೆಗಳಾ ಬರಿಗಾಲು
ತಟ್ಟಿ ಎಬ್ಬಿಸಲೇ ನಕ್ಷತ್ರ ನೆರಳುಗಳ
ದಿಕ್ಕುಗಳ ದಾಖಲೆಗೆ ಚುಕ್ಕಿಗಳ ಸಾಲು..

ಮಬ್ಬಾದ ಹವೆಯ ಹರೆಯದಾ ಚಾಳಿ
ಬೇಕೇನು ಕಾಲುದಾರಿಗೆ ಸಣ್ಣ ರೂಪಾಂತರ
ದಿಬ್ಬಣದ ಸಂಭ್ರಮ ಭ್ರಮರದಾ ಪಾಳಿ
ಮೊಗ್ಗಾಯ್ತು ಮನದೊಳಗೆ ಸ್ಪರ್ಶದಾ ಪ್ರವರ..

ಕತ್ತಲೆಗೆ ಕಾಡೀತು ಬೆಳಕಿನಾ ಅಮಲು
ಜೋಪಡಿಯ ಜಗುಲಿಯಲಿ ಸ್ವಪ್ನಗಳ ಸಾಕಲು..
ನಿಂತಿರಲು ಎದುರು ಭೂಮಿಕೆಯ ಹಗಲು
ಕರಗಿರುವ ಇಬ್ಬನಿಗೆ ತಾ ಕೊರಗೀತೇ ಬಿಸಿಲು..

ಸುಕ್ಕುಗಳ ಪುರವಣಿಗೆ ಬೇಕೇನು ಅನುವಾದ
ಅಕ್ಷರದ ಸಂಚಿಯಲಿ ಹಲವು ಮುಖಗಳು..
ಬೇಕುಗಳ ಜಾತ್ರೆಯಲಿ ಹರಡಿರುವ ಭವನಾದ
ಮಂದ್ರದಲಿ ಕರೆದಿಹುದು ಆಟಿಕೆಯ ಕೊರಳು..

ಅರಸುತ್ತ ಹರವಿನಲಿ ಶಾಪ ಕರಗಿದ ಗೂಡು
ಪರಿಧಿಗಳ ಪರಿಧಿಯನು ಮೀರಬಲ್ಲದೇ ಹಕ್ಕಿ..
ಸಂತೆಯ ಸೋಗಿಗಿಲ್ಲಿ ತಿದ್ದಬೇಕಿದೆ ಕರಡು
ಅರಿವಿರದೆ ಬರೆದಿಟ್ಟ ರೂಪಕವ ಹುಡುಕಿ..

                                          ~‘ಶ್ರೀ’
                                             ತಲಗೇರಿ

ಬುಧವಾರ, ಅಕ್ಟೋಬರ್ 1, 2014

"ತಾಜಾ ಬೇಸಿಗೆಗೆ.."

    "ತಾಜಾ ಬೇಸಿಗೆಗೆ.."

ಗೂಡು ಕಟ್ಟಿದೆ ಕನಸ ಗುಂಗು
ಅದಕೂ ಕೂಡ ಈಗ ನಿನದೇ ರಂಗು
ತುತ್ತು ತರುವ ತಾಯಿ ಹಕ್ಕಿ
ಹಾರಬಯಸಿದೆ ತಾನು ಮುಗಿಲ ಹೆಗಲಿಗೂ..

ಮೂಡಿಹನು ಚಂದ್ರ ಚಾಮರದ ಜಾಡಿನಲಿ
ಹರವಿಟ್ಟ ಹರೆಯದ ಗರಿಗಳಾ ಹೆಕ್ಕಿ..
ಹಿಂದೊಮ್ಮೆ ಎಂದೋ ಅರಳಿದಾ ಕುಸುರಿಯಲಿ
ಕೊಸರಿಹುದು ಗೆರೆಯು ಕಾರಣವ ಹುಡುಕಿ..

ನಮ್ಮಿಬ್ಬರಾ ನಡುವೆ ನುಸುಳಿರಲು ತಂಗಾಳಿ
ತಂತಿಗಳ ಹರಿದಿತ್ತು ನಾಚಿಕೆಯ ಬೇಲಿ..
ಹೊಸದಾಗಿ ಹಾಗೇ ಹೂ ಬಿಡುವ ಹಂಬಲ
ಬಾಡಿದಾ ವಲ್ಲಿಗೆ ಸೋಕಿ ಹೊಸ ಪರಿಮಳ..

ಬಿಡಿ ನುಡಿಯ ಸರಕೆಲ್ಲ ಒತ್ತೊಟ್ಟಿಗೆ
ಬೇಕೇನು ಈ ಗಳಿಗೆ ಭಾವಾಂತರ..
ಕುಡಿ ಕುಡಿಯ ಸಂಗೀತ ಮನದಾಸೆಗೆ
ಹೂವಿಗೂ ಮುನ್ನ ಏನೋ ಮಧ್ಯಂತರ..

ಮೊಗ್ಗಿನಾ ಬಣ್ಣ ತುರುಬಿನಾ ತುದಿಗೆ
ಮೆರಗನ್ನು ಹಚ್ಚೀತೇ ಈ ತಾಜಾ ಬೇಸಿಗೆಗೆ..
ಸೆರೆಹಿಡಿದು ಕವಲ,ಹವೆಯಾಯ್ತು ಖಾಸಗಿ
ಸಂಕ್ರಮಣ ಬಂದಾಯ್ತು ಸದ್ಯದಾ ಋತುವಿಗೆ..

                                               ~‘ಶ್ರೀ’
                                                   ತಲಗೇರಿ

"ಅಮಲಿನ ತಂತು.."

     "ಅಮಲಿನ ತಂತು.."

ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ
ಗೆರೆಯನು ಗೀಚುತ ಮುಗಿಲಿನ ಹಕ್ಕಿ
ಕರಗಿದೆ ನೆರಳು,ಕಾಣದ ಕ್ಷಣದಲಿ
ಕಾರಣ ಅರಸಿದೆ ಅರಳದ ಚುಕ್ಕಿ..

ಕಂಪನ ಕಾಮದ ಸೊಂಪಿನ ತಂಪಿಗೆ
ಋತು ಬರೆದಿದೆ ಒಲವಿನ ಸಾರ
ಅವಿರತ ಅಮಲಿನ ಅರಿವಿನ ಧಾಟಿಗೆ
ಸ್ವರ ಹೊಸೆದಿದೆ ಹರೆಯದ ಪೂರ

ಬೆರಗು ಬಾನಿನ ಮೌನದ ಗರಿಗೆ
ಬಣ್ಣದ ಹೊಸನಶೆ ಕಾಮನಬಿಲ್ಲು
ನೆರಿಗೆ ನಾಚುವ ಸೀರೆಯ ತುದಿಗೆ
ಕುಸುರಿಯ ಕರೆದಿದೆ ಗೊಲ್ಲನ ಕೊಳಲು..

ಹಸಿವಿನ ಹೊಸನಗು ತುಟಿಯಾ ಮುಡಿಗೆ
ಇಂಗಿದೆ ಹಂಗಿನ ನೆಲದಲಿ ಬಿಸಿಲು..
ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
ಕಾದಿದೆ ತವಕದಿ ಚಿಟ್ಟೆಯ ಕಾಲು..

ಕರಗುವ ಮೇಣದ ಬೆಳಕಿನ ರಾಶಿಗೆ
ಕತ್ತಲ ಪ್ರಸವದ ಕನಸಿನ ಲಹರಿ..
ತಂತಿಯ ಒಳಗೂ ನರಳುವ ಕೂಗಿಗೆ
ಸರಿಗಮ ಕಲಿಸಿದೆ ಬದುಕಿನ ತಂಬೂರಿ..

                              ~‘ಶ್ರೀ’
                                ತಲಗೇರಿ

"ನವಿಲು ನಾಚಿದ ಮಳೆಗೆ.."

     "ನವಿಲು ನಾಚಿದ ಮಳೆಗೆ.."

ರಾತ್ರಿಗೂ ಹಗಲಿಗೂ ಹಾದಿಯ ಹಾಸಿದೆ
ಪಸಗಳ ನೆಳಲಲಿ ನಸು ಬೆಳಕಿನ ಸಂಕ..
ತೆರೆಗಳ ಗಾಳಿಗೂ ಎದೆಯನು ತೆರೆದಿದೆ
ಯೌವ್ವನ ಸವೆಯದ ನೀಲ ಮಯೂಖ..

ಮುಗಿಲ ಮಳಿಗೆಯ ಬೇಲಿಯ ಒಳಗೆ
ನಡೆದಿದೆ ಅವಿರತ ತಾರೆಯ ಜೀತ..
ಒಲವಿನ ಮುಡಿಯದು ಸೋಕದ ಹೆಗಲಿಗೆ
ಕರಗುವ ಚಂದ್ರನ ಒಡಲಿನ ಮೊರೆತ..

ನಿನ್ನೆಯ ಅಮಲನು ಆರಿಸಿ ಬರೆದ
ಗೋರಿಯ ಬಸಿರಲಿ ಕಾಲನ ಕೆರೆತ..
ನಾಳೆಯ ಮಿಡಿತಕೆ ಹೆಸರನು ಹೇಳದೆ
ಹಸಿವನು ಹರಸಿದೆ ಬಿಸಿಲಿನ ಸೆಳೆತ..

ಗ್ರೀಷ್ಮದ ಕೊರಳಿಗೆ ಹನಿಗಳ ಹಾರ
ತೊದಲು ಮಾತಿಗು ಮೊದಲು ಬೆತ್ತಲೆ ಶಿಶಿರ..
ನಿಮಿಷದ ನಶೆಯೊಳು ಪ್ರಾಯದ ಮಧುವು
ಪರ್ಣದ ಎದುರಲೇ ದಿನವಹಿ ಪಕಳೆಯ ಸಾವು..

ನವಿಲು ನಾಚಿದ ಮಳೆಗೆ ಮೊಳೆತಿದೆ
ನೆನಪುಗಳ ಉಲಿಯುತ್ತ ಬಿಡಿ ಪಾರಿಜಾತ
ಹಂಗಾಮಿ ಗೆರೆಯ ಸುಳಿಗೆ ಸಿಲುಕಿದೆ
ಬಣ್ಣಗಳ ಕನವರಿಸಿ ಬಿಂದುಗಳ ಕಾಗುಣಿತ..

                                            ~‘ಶ್ರೀ’
                                                ತಲಗೇರಿ

ಶನಿವಾರ, ಸೆಪ್ಟೆಂಬರ್ 20, 2014

"ಕಾಲುದಾರಿಯ ಕವಿತೆ.."

  "ಕಾಲುದಾರಿಯ ಕವಿತೆ.."

ಕಾಲುದಾರಿಯ ಆದಿಯಲಿ
ಕಾದಿಹೆನು ನೆನಪುಗಳ ಡೇರೆಯಲಿ..
ಬೇಲಿದಾಟದ ಮಾತುಗಳ
ಕೂಡುತಿದೆ ಬಿಡಾರ ತನ್ನೆದೆಯ ಗೂಡಿನಲಿ..

ಮಳೆ ಮುಗಿದ ಎಲೆ ಹನಿಯ ಸದ್ದು
ನನ್ನೆದೆಯ ಗದ್ದಲಕೆ ವಿರಾಮವೆಂಬಂತೆ..
ಬಲು ಮಾಗಿದ ಮೃದು ಚಿಟ್ಟೆಯಾ ಮುದ್ದು
ಮುನ್ನುಡಿಯ ಮುನ್ನೋಟಕೆ ಮೊದಲ ಪದದಂತೆ..

ಚಂದಿರನ ಚಟಗಳಿಗೆ ನಾಚದಂತೆ
ಕಪ್ಪು ಮುಗಿಲಿಗೂ ಹರಡಿದೆ ನೀಲಿ ಅಮಲು
ಮಂದಗಾಳಿ ಮನಸುಗಳಿಗೆ ಸೋಕಿದಂತೆ
ಮಧುವುಕ್ಕಿ ನಗುತಿಹವು ಕಾಮನೆಯ ಹೂಗಳು..

ಬಣ್ಣ ಬಾಗಿನ ಕೊಟ್ಟು ಕನಸುಗಳಿಗೆ
ಕಾಣಿಸಲೇ ತೀರದಲೆಗಳ ಸಂಜೆ ಸವಾರಿ..
ನಾಳೆಗಳ ದಿವ್ಯಧ್ಯಾನದಲಿ ಹಾಗೇ
ಆಗಮಕೆ ಅಣಿಯಾಯ್ತು ಏಕಾಂತ ಲಹರಿ..

ಕಾಲುದಾರಿಯೇಕೋ ಇನ್ನೂ ಖಾಲಿ ಖಾಲಿ
ಮರಳಲಾರೆಯಾ ನೀ,ಮತ್ತೆ ಆಗಂತುಕಳಂತೆ..
ನೆರಳ ಸಲಿಗೆಯ ಬಯಸಿ ಕಾದಿಹುದು ಬೇಲಿ
ಕತ್ತಲಲಿ ಕಳೆದೊಲವು ಬೆಳಕಲ್ಲಿ ಸಿಕ್ಕೀತೇ?..

                               ~‘ಶ್ರೀ’
                                 ತಲಗೇರಿ

ಬುಧವಾರ, ಜುಲೈ 30, 2014

"ಅಭಿಸಾರಿಕೆ..."

"ಅಭಿಸಾರಿಕೆ..."

ಕಾಲುದಾರಿಯಲಿ ಕಾದಿದ್ದ
ನವಿಲುಗರಿಯೊಂದು
ಗೊಲ್ಲನಾ ಕೊಳಲ ದನಿಯ
ಕತೆ ಹೇಳಿತ್ತು..
ತನ್ನ ನಲ್ಲನ ನೆನೆದು ಆಕೆ
ಬಿರಬಿರನೆ ನಡೆವಾಗ
ಕಾಲುಂಗುರದ ಮಿಡಿತಕ್ಕೆ
ತರಗೆಲೆಯೂ ತಾಳ ಹಾಕಿತ್ತು..

ಮುಂಗುರುಳನು ಮೆಲ್ಲನೆ
ತೂಗುವ ತಂಗಾಳಿಗೆ
ಬಿಸಿಯಾಯಿತು ಯೌವನ;
ಇದು ಚಳಿ ಸಂಜೆಯ ಚಾಳಿ..
ಅವಳೆದೆ ಪುಟದಾ
ಸಲಿಗೆಯ ಮೇಲೆ
ನಡೆದಿದೆ ಈಗ
ಬಣ್ಣ ಬಣ್ಣದಾ ಕುಂಚದ ಹಾವಳಿ..

ಚಂದಿರ ಎರವಲು ಪಡೆದ
ಅವಳಾ ಹೊಳಪನು
ನಾಚುತ ತಾನು...
ಮುಗಿಲದು ಮಂಟಪ ಕಟ್ಟಿತು,
ಹಬ್ಬಕೆ ಅಣಿಯಾಯಿತು
ಬೆರಗು ಮೌನದಿ ಬಾನು..

ಬೆಳದಿಂಗಳ ಲೀಲೆಗೆ
ಅವಳಾದಳು ನೈದಿಲೆ;
ಹೇಳದೆ ಕೇಳದೆ ಹಾಗೇ..
ಭ್ರಮರದ ಸ್ಪರ್ಶಕೆ
ಎರೆದಳು ತನ್ನಯ ಮಧುವ..
ಹವೆಯಲಿ ಈಗ
ಮಿಲನದಾ ಮೆರವಣಿಗೆ...

                               ~`ಶ್ರೀ'
                                   ತಲಗೇರಿ