ಶನಿವಾರ, ಅಕ್ಟೋಬರ್ 8, 2016

"ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ"...

                         

    ಹೌದು, ಕಡಲೇ.. ಚಿಕ್ಕವರಿದ್ದಾಗ ಜಾತ್ರೆ ಸಂತೆಗಳು ಬಂತೆಂದರೆ ಸಾಕು, ಅದೆಷ್ಟೋ ದಿನಗಳಿಂದಲೇ ಕನಸುಗಳ ಹೆಣೆಯುವಿಕೆ ಶುರುವಾಗಿಬಿಡುತ್ತಿತ್ತು. ತೆಗೆದುಕೊಂಡ ವಿಮಾನದ ರೆಕ್ಕೆ ಮುರಿದಿದೆ, ಕೀಲಿ ಕೊಡುವ ಹಕ್ಕಿ ಯಾಕೋ ಚೀಂವ್ ಚೀಂವ್ ಗುಡುತ್ತಿಲ್ಲ, ಬಡಿಯುವ ತಮಟೆಯ ಚರ್ಮ ಹರಿದುಹೋಗಿದೆ, ದುಡ್ಡಿಟ್ಟಾಗ ಬರುತ್ತಿದ್ದ ನಾಯಿಮರಿ ಬಾಗಿಲು ತೆಗೆಯುತ್ತಲೇ ಇಲ್ಲ.. ಈ ಸಲದ ಜಾತ್ರೆಯಲ್ಲಿ ಇವೆಲ್ಲವನ್ನೂ ಹೊಸದಾಗಿ ತೆಗೆದುಕೊಳ್ಳಬೇಕು ಅನ್ನೋ ಆಸೆಯ ಜೊತೆ, ಹಿಂದಿನ ಸಲ ಪಿಳಿ ಪಿಳಿ ಕಣ್ಣಿನ ಚಿಗುರು ಮೀಸೆಯ ಅಚ್ಚುಕಪ್ಪಿನ ಕಣ್ಣು ಹುಬ್ಬಿನ ಮುಖವಾಡ ತೆಗೆದುಕೊಂಡಿದ್ದೆ, ಈ ಸಲ ಒಂದೆರಡು ರಾಕ್ಷಸನ ಮುಖವಾಡ ಕೊಂಡುಕೊಳ್ಳಬೇಕು ಅಂತಂದುಕೊಳ್ಳುವಾಗ ಮುಖ ಮತ್ತು ಕಣ್ಣು ಇಷ್ಟಗಲ ಆಗುತ್ತಿತ್ತಲ್ಲಾ! ಆ ಮುಖವಾಡ ತೊಟ್ಟುಕೊಂಡು ಗೆಳೆಯನನ್ನೋ ಗೆಳತಿಯನ್ನೋ ಬೆಚ್ಚಿಬೀಳಿಸಿ ಹುಚ್ಚುಹುಚ್ಚಾಗಿ ಕುಣಿವಾಗ ಅದೆಷ್ಟು ಸಂಭ್ರಮವಿರುತ್ತಿತ್ತು. ಅಪ್ಪನ ಧ್ವನಿಯಲ್ಲಿ ಅಮ್ಮನ ಸೆರಗಿನಲ್ಲಿ ಹೊಕ್ಕಿಕೊಳ್ಳುತ್ತಿದ್ದ ಪ್ರೀತಿಯನ್ನು ಹೆಕ್ಕಿ ಹೆಕ್ಕಿ ಎತ್ತಿ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವಿಕೆಯಿತ್ತಲ್ವಾ, ಅದೆಷ್ಟು ಮಧುರವಾಗಿತ್ತು! ಹಟ ಹಿಡಿದು ದಕ್ಕಿಸಿಕೊಂಡ ಮುಖವಾಡದ ಬಣ್ಣ ಮಾಸುವವರೆಗೆ ಮತ್ತೆ ಜಾತ್ರೆ ಬರುತ್ತದೆ, ಆಗ ಇನ್ನೊಂದು ಮುಖವಾಡ ಎಂಬ ಮುಗ್ಧತೆಯಲ್ಲಿ ಎಷ್ಟೊಂದು ಜೀವವಿತ್ತು.. ಬಹುಶಃ ಆಗ ಗೊತ್ತಿರಲಿಲ್ಲ ಕಡಲೇ, ದೊಡ್ಡವರಾಗುತ್ತ ಆಗುತ್ತ ಶಾಶ್ವತವಾಗಿ ಮುಖವಾಡ ತೊಟ್ಟುಕೊಂಡು ಅದರ ದಾಸರೇ ಆಗಿಬಿಡುತ್ತೇವೆಂದು.. ಕನ್ನಡಿಯೆದುರು ತಲೆಯೆತ್ತುವುದಕ್ಕೂ ಹೆದರುತ್ತೇವೆಂದು...

     ಕಿತ್ತಿಟ್ಟು ಬಂದಿದ್ದೇನೀಗ ಎಲ್ಲವನ್ನೂ.. ಇಷ್ಟು ದಿನಗಳ ಕಾಲ ಬಾಚಿ ಬಾಚಿ ಹಚ್ಚಿಕೊಂಡ ಮುಖವಾಡಗಳಲ್ಲಿ ಒಂದೂ ನನ್ನದಾಗಲೇ ಇಲ್ಲ, ಯಾವ ಮುಖವಾಡದ ಬಣ್ಣವೂ ನನ್ನ ಕೆನ್ನೆ ಮೇಲೆ ಆಪ್ತವಾಗಿ ಕೂರಲೇ ಇಲ್ಲ. ಚರ್ಮವನ್ನು ಸುಡುತ್ತ ಒಳಗೊಳಗೇ ಬೇಯುತ್ತಾ, ನನ್ನನ್ನು ನಾನು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನನ್ನನ್ನು ಇಟ್ಟುಬಿಟ್ಟಿತ್ತು.. ನಾನು, ನನ್ನವರು ಎನ್ನುತ್ತಲೇ ಹೋದೆ; ಒಂದಷ್ಟು ಜನರ ಗುಂಪು ಅದನ್ನು ಸ್ವಾಭಿಮಾನ, ಪ್ರೀತಿ ಎಂದಿತು. ಎದುರು ಗುಂಪು ಅದನ್ನೇ ಸ್ವಾರ್ಥ ಎಂದಿತು. ಸಂಬಂಧಗಳ ಗೋಜಲನ್ನು ಬಿಡಿಸುತ್ತಾ ಹೋಗಬೇಕೆಂದುಕೊಂಡೆ ತತ್ವಜ್ಞಾನಿ ಎಂದರು. ನಿರ್ಲಿಪ್ತಳಾಗಿರಬೇಕೆಂದುಕೊಂಡೆ, ಕಲ್ಲುಬಂಡೆ ಅಂದರು.. ಚರ್ಮದ ಬಿಗಿತಕ್ಕೆ ಸ್ಪಂದಿಸುತ್ತಾ ಕತ್ತಲೆಯಲ್ಲಿ ದಿನನಿತ್ಯ ಚಿತ್ರಬಿಡಿಸಬೇಕೆಂದುಕೊಂಡೆ, ವೇಶ್ಯೆ ಅಂದರು. ಸಣ್ಣ ಸಣ್ಣ ವಯೋಸಹಜ ಬಯಕೆಗಳನ್ನು ಎದೆಯುಬ್ಬಿಸಿ ಈಡೇರಿಸಿಕೊಳ್ಳಹೋದೆ, ಗಂಡುಭೀರಿ ಎಂದರು. ಅನಿಸಿದ್ದನ್ನು ಎಲ್ಲರಲ್ಲೂ ಮನಬಿಚ್ಚಿ ಹೇಳಿಕೊಂಡೆ, ವಾಚಾಳಿ ಅಂದರು. ಮಾತುಗಳಿಗೆ ಲಗಾಮಿಟ್ಟು, ಎಲ್ಲ ಮೆಟ್ಟಿ ನಿಂತೆ; ವಿರಾಗಿಯೆಂದರು. ಎಲ್ಲರಂತೆ ಮನೆ ಜಮೀನು ಆಸ್ತಿಯೆಂದೆ, ಮೋಹಿಯೆಂದರು.. ಬೀದಿಗಳಲ್ಲಿ ಒಂದಷ್ಟು ದಿನ ಭಿಕ್ಷೆ ಬೇಡೋಣವೆಂದುಕೊಂಡೆ, ಮೈಬಗ್ಗಿಸಿ ದುಡಿಯೆಂದರು.. ಬಿಸಿಲಲ್ಲಿ ಚರ್ಮ ಸುಟ್ಟುಕೊಂಡರೆ, ಚಂದಿರನ ಬೆಳಕಲ್ಲಿ ಹವಾಮಾನದ ಬಿಸಿಯೇರಿಸುತ್ತೀಯಾ ಅಂತ ಕೇಳಿದರು.. ಹಸಿದಿದ್ದೇನೆ ಊಟ ಹಾಕೆಂದರೆ, ದುಡ್ಡು ಬೇಕೆಂದರು. ದುಡ್ಡಿನ ನೆರಳನ್ನಾದರೂ ಹಿಡಿಯಬೇಕೆಂದುಕೊಂಡೆ, ಲೋಭಿಯೆಂದರು. ಮೇಘಗಳೆಲ್ಲಾ ಒಟ್ಟುಗೂಡಿ ಹಬ್ಬ ಮಾಡುತ್ತಿದ್ದಾಗ, ಆಗ ತಾನೇ ಅರಳಿಕೊಂಡ ಘಮಲಿಗೆ ನಾಸಿಕದ ಸೊಗವಿಕ್ಕಿ, ಬೊಗಸೆಯಲಿ ಮುಗಿಲರಸ ಹಿಡಿಹಿಡಿದು ನಡುವಲ್ಲಿ ನವಿಲಾಗಬೇಕೆಂದುಕೊಂಡೆ, ಹುಚ್ಚುಚ್ಚಾಗಿ ಕುಣಿಯದಿರು; ನೀನು ಹುಡುಗಿಯೆಂದರು. ಅಮಾವಾಸ್ಯೆಯ ರಾತ್ರಿಯಲ್ಲಿ ಕಂದೀಲು ಹಿಡಿದು ಚಂದ್ರನನ್ನರಸುತ್ತಾ, ಅರಚುವ ಕಾಡುಜಿರಳೆಗಳ ಕತೆಗೆ ಕಿವಿಯಾಗಬೇಕೆಂದರೆ, ಹೊಕ್ಕುಳಿಗೆ ಹೂ ಬಿಡುವ ಸಮಯ, ಸಿಕ್ಕ ಸಿಕ್ಕ ಬೆರಳುಗಳಿಗಂಟಿ ಬಣ್ಣ ಕದಡೀತು ಪಕ್ಕಾ ಮಾಗುವ ಮುನ್ನವೇ ಎಂದು ಹೆದರಿಸಿದರು.. ಹೇಳು, ಕಡಲೇ.. ಹತ್ತೆಂಟು ಹುಚ್ಚು ಕಲ್ಪನೆಗಳಿದ್ದಿದ್ದರಿಂದಲೇ ನಾನು ಹೆಣ್ಣಲ್ಲವೇ!.. ರಾತ್ರಿ ನಕ್ಷತ್ರಗಳ ಕೊಯ್ದು ನನ್ನ ಹೆರಳಲ್ಲಿ ಸಿಕ್ಕಿಸಿ, ಮಧು ಬಟ್ಟಲ ಮಾಲೆ ಕಟ್ಟುವವನ ಎದೆಯ ರೋಮದ ಬೆವರಲ್ಲಿ ಕೈಯದ್ದಿ ಹೆಣ್ತನದ ಕ್ಯಾನ್ವಾಸಿಗಿಷ್ಟು ಕೈಯಚ್ಚು ಬರೆದುಕೊಳ್ಳುತ್ತೇನೆ ಅಂತ ಅಂದುಕೊಳ್ಳುವುದೂ ತಪ್ಪಾ ಕಡಲೇ.. ಇಷ್ಟೇ ಅಲ್ಲ ಕಡಲೇ, ಇನ್ನೂ ಏನೇನೋ.. ಇಷ್ಟೆಲ್ಲಾ ಮಾಡಿಯೂ ಯಾವ ಮುಖವಾಡವೂ ನನ್ನ ಸ್ವಂತದ್ದಾಗಲೇ ಇಲ್ಲ, ಇದೇ ನಾನೆಂದು ಹೇಳಿಕೊಳ್ಳುವಷ್ಟು ಆಪ್ತವಾಗಲೇ ಇಲ್ಲ.. ನಾನಾಗಲೇ ಇಲ್ಲ.. ಅಸಹ್ಯವಾಯಿತು. ಅದಕ್ಕೆಂದೇ ಇಂದು ಎಲ್ಲ ಮುಖವಾಡಗಳನ್ನು ಕಳಚಿಟ್ಟು ಬಂದಿದ್ದೇನೆ ಕಡಲೇ ನಿನ್ನಲ್ಲಿಗೆ. ನಾನು ಕೂತ ಈ ಕಲ್ಲಿನ ಮೇಲೆ ಅದೆಷ್ಟೋ ಪಾಚಿ  ಹಸಿರು ಹಸಿರಾಗಿ ಮೆರೆಯುತ್ತಿದೆ. ಒಂದಷ್ಟು ದಿನ.. ಅರೆಗಂದು ಬಣ್ಣದ ಹುಡಿಯಾಗಿ ಉದುರಿಹೋಗುತ್ತದೆ. ಈ ನೆನಪುಗಳೂ ಹೀಗೇ ಆಗಿದ್ದರೆ?!.. ಋತುಮಾನಗಳಿಗೆ ತಕ್ಕ ಫಸಲು ಯಾವತ್ತೂ ಬರುವಂತಿದ್ದರೆ!.. ಊಹ್ಞೂ.. ಕಳೆಗಳೇ ಜಾಸ್ತಿಯಾದಾಗ ಇಳುವರಿ ಎಲ್ಲಿಯದು.. ಹೀಗೇ ಎಷ್ಟೋ ವರ್ಷಗಳ ಬೆತ್ತಲೆ ಕಲ್ಲು ಮುಂದೊಂದು ದಿನ ಇನ್ನ್ಯಾರದೋ ಮನೆಯ ಮಣ್ಣಾಗಿ ಹೊಚ್ಚ ಹೊಸ ನೆರಳ ಬೇರಿಳಿಸಿಕೊಳ್ಳುವಾಗ ಈ ಪಾಚಿಯ ಗುರುತನ್ನು ಉಳಿಸಿಕೊಂಡು ಬಿಕ್ಕುತ್ತದೆಯೇ? ಮೋಡಗಳೆಲ್ಲವನ್ನೂ ತನ್ನೆದೆಗೆ ಬಿಟ್ಟುಕೊಂಡು , ಉಕ್ಕಿನ ಹಕ್ಕಿಗಳ ಧೂಮದ ಸುರುಳಿಸುರುಳಿಗೆ ಮತ್ತೆ ಮತ್ತೆ ತೆರೆದುಕೊಂಡು ತಿಳಿ ನೀಲಿ ತೊದಲಿನಲ್ಲಿ ಕಪ್ಪು ಬಿಳಿ ಕನಸುಗಳ ಬಾಯಿಪಾಠ ಮಾಡುವ ಓಹ್ ಗಗನಾ, ನಿನಗಿದು ಅರ್ಥವಾಗುವುದಿಲ್ಲ ಬಿಡು.. ನೀನು ಮತ್ತು ಭೂಮಿ  ಎಂದೂ ಭೇಟಿಯೇ ಆಗದ ಪ್ರೇಮಿಗಳಂತೆ.. ಅಥವಾ ದಿಗಂತದಲ್ಲಿ ಕೂಡಿಸಿದ್ದು ನಾವೇ; ಅದೂ ಭ್ರಮೆಯೇ!.. ಅದಕ್ಕೇ ಕಡಲೇ.. ಇದು ನಿನಗೆ ಮಾತ್ರ ಅರ್ಥವಾಗಬಹುದು.. ತವರು ಬಿಟ್ಟ ಅದೆಷ್ಟೋ ನದಿಗಳು ಬಂದು ನಿನ್ನ ಸೇರುತ್ತವೆ. ಎಲ್ಲಿಯದೋ ಕೊರಕಲು, ಎಲ್ಲಿಯದೋ ಮಣ್ಣ ಗಂಧ, ಎಲ್ಲಿಯದೋ ಸಸಿಯ ಕೊಳೆತ ಎಲೆಗಳ ಅಸ್ಥಿಪಂಜರ ಕರಗಿಸಿಕೊಂಡ ನೀರ ಪಾತ್ರಗಳು ನಿನ್ನೆದೆಯಲ್ಲಿ ಬೆರೆಯುತ್ತವೆ. ಇಷ್ಟೆಲ್ಲ ಆದರೂ ನಿನಗೊಂದು ಅಸ್ತಿತ್ವ ಸಿಕ್ಕಿಬಿಟ್ಟಿತು.; ಜೊತೆಗೆ ರುಚಿಯೂ.. ಅದೆಷ್ಟೋ ಭಾವಗಳು ನನ್ನೆದೆಯಲ್ಲಿ ಈಗಲೂ ಹುಟ್ಟಿಕೊಳ್ಳುತ್ತವೆ, ಇನ್ನೊಂದಿಷ್ಟು ಹುಟ್ಟಿಕೊಳ್ಳುವ ಮೊದಲೇ  ಗೋರಿ ಕಟ್ಟಿಕೊಳ್ಳುತ್ತವೆ. ಯಾರಿಗೂ ನನ್ನ ಅಸ್ತಿತ್ವವನ್ನು ಗಟ್ಟಿಪಡಿಸುವ ಎದೆಗಾರಿಕೆಯಿಲ್ಲ.. ಹೇಳು ಕಡಲೇ, ಹೇಳಲಿಲ್ಲವೇ ಯಾರೂ ನಿನಗೆ, ಹೂಟ್ಟೆಬಾಕನೆಂದು.. ಮಿಲನ ದರ್ಬಾರು ನಡೆಸುತ್ತಾ ಅದೇನೇನೋ ತನ್ನೊಳಗೇ ಬಚ್ಚಿಟ್ಟುಕೊಳ್ಳುವ ವ್ಯಾಮೋಹಿಯೆಂದು.. ಇಲ್ಲ, ಕಡಲೇ.. ನಿನ್ನೊಳಗೂ ಪಲ್ಲಟವಾಗುತ್ತಿರುವ ತುಂಡುಗಳಿವೆ.. ಅದಕ್ಕಾಗಿಯೇ ಅಲ್ಲವೇ ಒಮ್ಮೊಮ್ಮೆ ನೀನೂ ಸಿಡಿದೇಳುವುದು.. ಆದರೂ ಅದ್ ಹೇಗೆ ನೀನು ಆ ನಿರಂತರತೆಯನ್ನು ಕಾಯ್ದುಕೊಂಡೆ; ಬಹುತೇಕ ಒಂದೇ ತೆರನಾದ ಅಲೆ.. ಅದೆಷ್ಟೋ ತಪ್ಪಲುಗಳಲ್ಲಿ ಹಾಗೂ ಜಟೆಗಳಲ್ಲಿ ಮೂಲವಿಟ್ಟುಕೊಂಡು ಅದೆಷ್ಟೋ ಸಂಕ ಸೇತುವೆಗಳ ಕೆಳಗೆ ಹರಿದು, ಮತ್ತಿನ್ನೆಷ್ಟೋ  ಬಂಡೆಗಳ ಮೈಸವರಿ ಹೋಗುವ ನದಿಗಳು ನಿನ್ನೆದೆಯ ಸೇರಿದ ಮೇಲೆ ತಕರಾರೆತ್ತುವುದಿಲ್ಲವೇನೆ? ಅವೆಲ್ಲ ಮುಖವಾಡ ಕಳಚಿಟ್ಟವೇ, ಒಂದೇ ಒಳಗಾಗುವಂತೆ.. ಒಂದೇ ಹದವಾಗುವಂತೆ.. ಅಥವಾ ಪಾರದರ್ಶಕತೆಯ ಮುಖವಾಡ ತೊಟ್ಟಿದೆಯೇ?!.. ನಿನ್ನ ಆ ಅಗಾಧತೆಯ ಇದಿರು ನಾವೆಲ್ಲಾ ಅದೆಷ್ಟು ಚಿಕ್ಕವರಾಗಿಬಿಡುತ್ತೇವೆ ಅಲ್ವಾ!.. ಮತ್ತೆ ಮತ್ತೆ ಉಕ್ಕುತ್ತೀಯಾ ಗರ್ಭದೊಳಗಿನದೆಲ್ಲವನ್ನೂ ಗುಟ್ಟಾಗಿಯೇ ಇಟ್ಟುಕೊಂಡು; ಅದೆಂಥ ಕ್ರಿಯಾಶೀಲ ನೀನು..!

     ಗುರುತ್ವಗಳ ಗತಿಯಲ್ಲಿ ಏರುಪೇರಿದ್ದರೂ , ನಿನ್ನ ಮತ್ತು ದಡದ ಮರಳ ಸಂಬಂಧಗಳ ಮಧ್ಯ, ಮೈದಡವುತ್ತಾ ತಾಯ್ತನದ ಸುಖ ಪಡೆಯುತ್ತೀಯಾ.. ನೀಲ ನೀಲ ವಿಸ್ತಾರ.. ದೂರ ದೂರ ಹೋದಂತೆ ಇನ್ನೂ ಹತ್ತಿರ ಹತ್ತಿರ.. ಮುಳ್ಳುಪೊದೆಯ ಪುಟ್ಟ ಹೂವಿಗೆ ಹಾಡು ಹೇಳೋ ಗೆಳತಿ.. ನಿನ್ನ ಮೇಲೆ ಬಿದ್ದು ಬಿದ್ದು ನಿನ್ನ ಚೀಲದಿಂದ ಕದ್ದು ಕದ್ದು ತಿನ್ನುವ ಹದ್ದುಗಳಿಗೆ ಅಕ್ಕರೆಯ ಅಕ್ಕ.. ಭೂಮಿ ಮಡಿಲ ನೆರಿಗೆಯಲ್ಲಿ ಆಷ್ಟಷ್ಟೇ ಮೈಯ ಹರಡಿ, ಕಾಲು ಮುದುಡಿ ಮಲಗಿಕೊಂಡ ಮಗಳು.. ನಾನೂ ಒಬ್ಬ ಮಡದಿ.. ಬಹುಶಃ ಈ ನದಿಯಂತಿರಬೇಕು ನಾನು.. ಹರಿಯುತ್ತಿದ್ದರೆ ಮಾತ್ರ ಹಾಡು ಕೇಳುವುದು.. ಇನ್ನು ತಡ ಮಾಡುವುದಿಲ್ಲ; ಕಡಲೇ ಮತ್ತೆ ತಿರುಗಿ ಓಡಬೇಕು ನಾನು.. ಮತ್ತೆ ತಿರುಗಿ ನೋಡಬೇಕು ನಾನು.. ತುರ್ತಾಗಿ.. ತೊಟ್ಟುಕೊಂಡಿದ್ದೇನೆಂದೇ ತಿಳಿಯದ, ಮತ್ತೆ ಎಂದೂ ಕಳಚದ, ದಿಕ್ಕು ದಿಕ್ಕಿಗೆ ಬೇರೆ ಬೇರೆ ಬಣ್ಣ ತೋರುವ ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ.. ಬದುಕಿಸಿಕೊಳ್ಳುತ್ತೇನೆ.. ಸಂತೆ ಇನ್ನೂ ಮುಗಿದಿಲ್ಲ; ವ್ಯಾಪಾರವೂ...

~‘ಶ್ರೀ’
  ತಲಗೇರಿ

ಗುರುವಾರ, ಅಕ್ಟೋಬರ್ 6, 2016

"ಬಿಸಿಲು ಮಳೆ ಚಳಿಗೆ"...



ಅವಳೂರ ಕಡಲಲ್ಲಿ ಪ್ರತಿರಾತ್ರಿ ಮೃದಂಗದಂತೆ ಗುಂಯ್ ಗುಟ್ಟುವ ಅಲೆಗಳಿಗೆ ಅವನೂರ ಚಂದ್ರಮನ ತೋಳತೆಕ್ಕೆಯಲಿ ಪಿಸುಗುಡುತ್ತಿದ್ದ ನಾಳೆಗಳ ಇಂದಿನುಸಿರ ಬಿಸಿ ಸೆಳೆತ ಕಾರಣವಂತೆ.. ಇಷ್ಟಕ್ಕೂ, ಅಷ್ಟುದ್ದ ಮೈಹರವಿ ಬಿದ್ದಿರುವ ದಾರಿಗದು ಗೊತ್ತಿಲ್ಲವಂತೆ..ಆಯತದ ತಲೆದಿಂಬು ಅವಳ ಸುರುಳಿ ಸ್ವಪ್ನಗಳ ಎಳೆಯನ್ನು ಇಣುಕಿಣುಕಿ ಓದಿತ್ತಂತೆ.. ಹೆರಳಿಗಂಟಿದ್ದ ಹಳೇ ತಲೆಮಾರಿನ ಜಿಗುಟು ಸ್ನಾನಕ್ಕೆ ಹೊರಡುವಾಗ ಅಳಿದುಳಿದ ಗುಸುಗುಸು, ಮಂಚದ ಚಿತ್ತಾರಕ್ಕೆ ಕಣ್ಣುಮುಚ್ಚಾಲೆಯಾಡುವುದನ್ನು ಹೇಳಲೆತ್ನಿಸುತ್ತಿತ್ತಂತೆ.. ಒಂದೇ ನೆರಳ ಹಿಂದೆ ಅಡಗಿದ್ದ ದೀಪ, ಬೇರೆ ಬಣ್ಣ ಹಚ್ಚಲು ಕುಂಚ ಹುಡುಕುತ್ತಿತ್ತಂತೆ.. ಅವನಂತೂ ಅರ್ಧರಾತ್ರಿಯಲ್ಲಿ ಸುರಿದ ಮಳೆಯನ್ನು ಕೊಡಗಟ್ಟಲೆ ಹಿಡಿದು ರುಚಿ ನೋಡುತ್ತೇನೆಂದು ಚಪ್ಪಲಿ ಮೆಟ್ಟಿ, ಕೊಡೆಹಿಡಿದು ನಿಂತಿದ್ದಾನಂತೆ.. ಹೆಸರಿಲ್ಲದ ಕಾಡಹೂವೊಂದು ಎದ್ದು ಕುಳಿತು ತನ್ನ ನೆರಿಗೆ ಸರಿಪಡಿಸಿಕೊಂಡು, ಮಣ್ಣಿನಲಿ ಯಾರೋ ಧೂಪ ಹಚ್ಚಿಟ್ಟ ಕನಸು ಕಾಣುತ್ತ ಮತ್ತೆ ಮಲಗಿತಂತೆ.. ಅಷ್ಟಿಷ್ಟು ಸಂಗೀತ ಕಲಿತಿದ್ದ ಮುಗಿಲು ಆಗಾಗ ಅಭ್ಯಾಸ ಮಾಡುತ್ತಿತ್ತಂತೆ.. ಮೊನ್ನೆ ಅದು ಹೇಳಿದ ಮೇಲೆಯೇ ತಿಳಿದದ್ದು, ನಾಚಿಕೆಗೂ ಬಹಳಷ್ಟು ಅರ್ಥವುಂಟಂತೆ.. ಹ್ಞಾ, ಹೇಳುವುದ ಮರೆತಿದ್ದೆ; ಆದರಲ್ಲಿ ಯಾರಿಗೂ ತಿಳಿದಿರಲಿಲ್ಲ.. ಪ್ರೀತಿಗೆ ಸ್ವಂತ ಬಣ್ಣ ರುಚಿ ವಾಸನೆಯಿಲ್ಲ; ಅದು ಅನುಭೂತಿ ಅಷ್ಟೇ..! ನೆನಪಿಡಿ, ಬಾಡಿಗೆಯ ಫಲಕಗಳ ವಿಳಾಸದ ಅಕ್ಷರಗಳು ಮಸುಕಾಗುತ್ತವೆ ಬಿಸಿಲು ಮಳೆ ಚಳಿಗೆ...

~`ಶ್ರೀ'
    ತಲಗೇರಿ

ಸೋಮವಾರ, ಸೆಪ್ಟೆಂಬರ್ 19, 2016

"ಹೌದು, ಗಡಿಯಾರಗಳು ಮಾತನಾಡುತ್ತವೆ"...

                    

     ಇಷ್ಟಿಷ್ಟೇ ಮಾತನ್ನು ತಡೆತಡೆದು ಹೇಳಬಹುದೇ, ಅಷ್ಟೇನೂ ಗಮನಿಸದೆ ವಾಕ್ಯಗಳ ತಿದ್ದದೇನೆ.. ಪಾರಿಜಾತದ ನಗೆಯ ನಿನ್ನ ಕಂಗಳ ಕುಡಿಯ ಮೇಲುದುರಿದ ಇಬ್ಬನಿಯ ಕತೆಗಳನು ಹೆಕ್ಕಿ ಹೆಕ್ಕಿ ತಂದು ನಾ ಬರೆಯಲೇನು.. ಪರಿಚಯದ ಪುರವಣಿಯ ಗರಿಗರಿಯ ಹಾಳೆಗಳ ಎದೆಯೊಳಗೆ ಬೆಚ್ಚಗೆ ನಿನ್ನನ್ನು ಇರಿಸಲೇನು.. ನಾ ಒರಗಲೇನು ಹಾಗೇ ತಬ್ಬಿಕೊಂಡು.. ನೆನಪುಗಳನು ಮುದ್ದಾಗಿ ಹೊದ್ದುಕೊಂಡು...ಹೌದಂತೆ ಗೆಳತೀ.. ಈ ನೆನಪುಗಳಿಗೂ ಮತ್ತು ಕನಸುಗಳಿಗೂ ಒಂದೇ ರೂಪವಂತೆ.. ಸುರುಳಿ ಸುರುಳಿ ಮೆದುಳಿನಲಿ ಅಲ್ಲಲ್ಲಿ ಅಂಟಿ ಕೂತ ಇಬ್ಬರದೂ ಒಂದೇ ಗಮಕವಂತೆ.. ನುಸುಳಿಬರುವ ಪದಗಳಲ್ಲಿ ಪಲುಕು ಮಾತ್ರ ಬೇರೆಯಂತೆ!.. ಎಲ್ಲಕ್ಕೂ ಮೂಲ ಕಾಲವಂತೆ...

     ತುಂಬಾನೇ ವಿಚಿತ್ರ ಕಣೇ ಹುಡುಗಿ.. ಬದಲಾವಣೆಯನೇ ಕಾಲವೆಂದರೋ ಇಲ್ಲಾ, ಕಾಲವನೇ ಬದಲಾವಣೆಯೆಂದರೋ.... ಅಲ್ಲಿ ಇಲ್ಲಿ ಅದಲು ಬದಲೋ ಅಥವಾ ಒಂದೇ ತೊಗಲೋ.. ಗಟ್ಟಿ ಬಿಗಿದ ಮಾಂಸಖಂಡ ಹವೆಯ ಹಟದಲಿ, ಜೋತುಬೀಳೋ ತನಕ ತಿಕ್ಕಿಕೊಂಡ ‘ನಾನೂ’ ಕೂಡ ಹದಕೆ ಬರುವ ಹರಿವಿಗೆಂದೂ ತುಂಬು ಪ್ರಾಯವೇ?.. ಅಲ್ಲೂ ಎಳೆಯ ಮಧ್ಯ ಮುಪ್ಪುಗಳ ನ್ಯಾಯವೇ!.. ಅನುಕ್ರಮದ ಸರಣಿಯಲ್ಲಿ ಕಾಲವೆಂಬುದು ಭ್ರಮೆಯೇ.. ಅಥವಾ ತೀರಲಾರದ ಉಪಮೆಯೇ!.. ಒಂದಷ್ಟು ಕಿಸೆಗಳನು ಹೊಲಿದುಕೊಡು ಮಾರಾಯ್ತೀ, ನೆನಪುಗಳನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎದೆಗೆ ತುಂಬ ಹತ್ತಿರದಲ್ಲಿ... ತೇಪೆ ಹಚ್ಚಿದ ಎದೆಯೊಳಗೆ ತಡವಿಕೊಂಡಂತೆಲ್ಲಾ.., ಎಂದೋ ಮಾಸಿದ ನುಣುಪು, ಮೊನ್ನೆಯಷ್ಟೇ ಹೊಲಿದುಕೊಂಡ ಹಸಿ ಹುರುಪು, ಜೊತೆ ಜೊತೆಗೇ ಅರ್ಧರ್ಧ ಬಿಟ್ಟ ದಾರದ ಸೋಂಕು.. ಇರಲಿಬಿಡು, ನೆನಪುಗಳಲಾದರೂ ನೀನು ಪಾಲುದಾರಳಾದೆಯಲ್ಲ!.. ನೇರಳೆ ಮರದ ನೆರಳ ಕೆಳಗೆ ನವಿಲುಗರಿ ತಂದು ಬಣ್ಣಗಳ  ಬೇರ್ಪಡಿಸು ಎಂದಿದ್ದೆಯಲ್ಲ.. ಕಾಲುದಾರಿಯ ಬೇಲಿತುದಿಗೆ ಅಡಗಿಕೊಂಡ ಮೊಗ್ಗ ತಂದು ಹೆರಳ ಸಲಿಗೆಯ ಕೇಳಿಕೊಂಡ ನನಗೆ ಪೂರ್ತಿ ಹಕ್ಕು ಕೊಟ್ಟ ಮೇಲೂ, ಬಾಡಲಿಲ್ಲ ಮೊಗ್ಗು.. ಅರಳಿಕೊಂತು ಬಿಸಿಲು ಬಿದ್ದ ಹಾಗೆ..! ಅಂದು ಒಮ್ಮೆ ಕೆಸರಿನಲ್ಲಿ ಹೆಸರ ಬರೆದು ಕೆನ್ನೆಗೊಂದು ಬೊಟ್ಟು ಇಟ್ಟ ಮೇಲೆ ಸ್ಪರ್ಶಕೊಂದು ಅರ್ಥ ಬಂದಿತ್ತು..

     ಆಗಾಗ ಹಲುಬುತ್ತೇನೆ ಹುಡುಗೀ.. ಒಮ್ಮೆ ಜೋರಾದ ಮಳೆಯಲ್ಲಿ ತುಂಬಾನೇ ನೆನೆಯಬೇಕು.. ನಿನಗೆಂದೇ ನಾ ಹಚ್ಚಿಕೊಂಡ ಬಣ್ಣಗಳೆಲ್ಲಾ ತೊಳೆದುಹೋಗಿ ಖಾಲಿಯೆಂಬ(?) ನಾನುಳಿಯಬೇಕು.. ಬೆರಕೆ ಬಣ್ಣಗಳು ನೀರಿನಲಿ ಅದೆಷ್ಟು ಚಿತ್ರ ಬಿಡಿಸುವವೋ, ನಾ ಕಾದು ನೋಡಬೇಕು.. ಬೇಡ, ಬೇಡ.. ಮಳೆ ಬರುವುದೇ ಬೇಡ.. ನಿನಗೆಂದೇ ನಾ ಒಣಗಿಸಿಟ್ಟ ನಿನ್ನದೇ ಚಹರೆಗಳವು ಗೆಳತೀ.. ಹೇಳಿದೆನಲ್ಲ, ಮತ್ತೊಂದು ಮಗ್ಗುಲಲ್ಲಿ ಕನಸುಗಳಿವೆ.. ನನ್ನತನವ ಅಡವಿಡಬೇಕಿಲ್ಲವಂತೆ ಕನಸು ಕಾಣೋದಿಕ್ಕೆ.. ನೆನಪುಗಳೇ ಕನಸುಗಳೆಂದು, ಕನಸುಗಳೇ ನೆನಪುಗಳೆಂದು ಬಿಕರಿಗಿಡುತ್ತೇನೆ.. ದರ ಮಾತ್ರ ಕೇಳಬೇಡ; ಇದು ಮನಸಿನ ವ್ಯಾಪಾರ.. ! ಇನ್ನೊಂದಿಷ್ಟು ದಿನದಲ್ಲಿ ಹೊಸ ಒಪ್ಪಂದ ಶುರುವಾಗಬಹುದು.. ಮತ್ತ್ಯಾವುದೋ ಲೇಖನಿ ಇನ್ನೊಂದು ಶೀರ್ಷಿಕೆಯ ಬರೆಯಬಹುದು.. ನಾನು ಕೇಳಿಸಿಕೊಳ್ಳುತ್ತೇನೆ; ಹೌದು, ಇನ್ನು ಮುಂದೆ ಗಡಿಯಾರಗಳು ಮಾತನಾಡುತ್ತವೆ...


~‘ಶ್ರೀ’
  ತಲಗೇರಿ 

ಶನಿವಾರ, ಸೆಪ್ಟೆಂಬರ್ 17, 2016

‘ಅನ್ವೇಷಣ’ದ ಹಾದಿಯಲ್ಲಿ...

                 


     ಈ ಹುಡುಕಾಟ ಎನ್ನುವುದು ಹೇಗೆ ಮತ್ತು ಯಾಕೆ ಹುಟ್ಟಿಕೊಳ್ಳುತ್ತದೆ ಅನ್ನುವುದು ಒಂಥರಾ ವಿಸ್ಮಯ.. ಯಾರೂ ಇದರಿಂದ ಹೊರತಾಗಿಲ್ಲ; ಈ ಹುಡುಕಾಟವನ್ನೇ ವಸ್ತುವಾಗಿಸಿಕೊಂಡು ಶ್ರೀ ಎಸ್ ಎಲ್ ಭೈರಪ್ಪನವರು ಬರೆದಂಥ ಕಾದಂಬರಿ ‘ಅನ್ವೇಷಣ’. ಪಾತ್ರಗಳ ಗಟ್ಟಿತನ, ಕತೆಯ ಓಘ ಇತ್ಯಾದಿಗಳ ಬಗ್ಗೆ ಹೇಳಿ ವಿಮರ್ಶಾತ್ಮಕ ಓದುಗನಾಗುವುದಕ್ಕಿಂತ, ಅದರ ಸೌಂದರ್ಯವನ್ನು ಹಾಗೇ ಎದೆಗೆ ತುಂಬಿಕೊಂಡು ರಸಾಸ್ವಾದಕನಾಗುವುದೇ ಆಪ್ಯಾಯಮಾನ ಎನಿಸಿತು.‘ಅನ್ವೇಷಣ’ದ ಹಾದಿಯಲ್ಲಿ ನಾನು ಕಂಡ ನೆರಳು ಬೆಳಕುಗಳ ಸಂಯೋಜನೆಯನ್ನು ತಮ್ಮ ಮುಂದೆ ಈಗ ಹೀಗೆ ಹರಡುತ್ತಿದ್ದೇನೆ...

     ವ್ಯಕ್ತಿತ್ವಕ್ಕನುಗುಣವಾಗಿ ಆಲೋಚನೆ, ನಿರ್ಧಾರ, ಕೆಲಸಗಳ ಸರಣಿಯಲ್ಲಿ ಏರುಪೇರಾಗುತ್ತದೆ; ಅನುಕ್ರಮವಾಗೇ ಜರುಗಬೇಕೆಂದೇನಿಲ್ಲ.. ಇದು ಊಟ ಮಾಡುವಾಗ ಹಾಕಿಸಿಕೊಳ್ಳುವ ಪದಾರ್ಥಗಳಂತೆ!.. ಒಂದು ವಿಷಯ ಹೊರಗಿನಿಂದ ನೋಡುವವರಿಗೆ ಬೇರೆಯದಾಗಿಯೇ ಕಾಣಬಹುದು. ಆದರೆ, ಅದರಲ್ಲಿನ ತಿರುಳು ಇನ್ನೇನೋ ಆಗಿರಬಹುದು. ಅಂತೆಯೇ ಸಂಬಂಧಗಳು; ಹೊರಗಿನಿಂದ ಒಂದು ಹೆಣ್ಣು ಗಂಡಿನ ಸಂಬಂದ್ಘಕ್ಕೆ ಕಲ್ಪನೆಯ ರೆಕ್ಕೆ ಕೊಟ್ಟು, ಅದನ್ನು ಎಷ್ಟು ಕೆಳ ಮಟ್ಟಕ್ಕಾದರೂ ಇಳಿಸಬಹುದು ( ಇಳಿಸುತ್ತೇವೆಂಬುದೂ ಭ್ರಮೆಯೇ?! ).. ಆದರೆ ಆ ಸಂಬಂಧದ ಒಳ, ತಾಯಿ ಮಕ್ಕಳಷ್ಟು ಪವಿತ್ರವೂ ಆಗಿರಬಹುದು. ನಮ್ಮವರು ಎಂದುಕೊಡವರ ಬಗೆಗಿನ ಯೋಚನೆಗಳ ವರ್ತುಲದಲ್ಲಿ ಅವರ ಬಗೆಗೆ ಒಂದಷ್ಟು ಚಿತ್ರಗಳು ಗಾಢವಾಗಿ ಅಚ್ಚೊತ್ತಿಕೊಂಡಿರುತ್ತವೆ; ಅದು ಎಂಥಹುದೇ ಸ್ಥಿತಿಯಲ್ಲಿ ನಾವಿದ್ದರೂ!.. ಮನುಷ್ಯ ಸಂಬಂಧಗಳ ಕುರಿತಾಗಿ ಹೇಳುತ್ತಾ, ಒಂದು ಕಡೆ, ದಾರಿಯಲ್ಲಿ ನಡೆದುಹೋಗುವ ಪಾತ್ರವೊಂದನ್ನು ಮಾತನಾಡಿಸುವ ಜನರ ಮೂಲಕ ಅಂದಿನ ಹಳ್ಳಿಯ ಜೀವನಶೈಲಿಗೂ, ಇಂದಿನ ನಮ್ಮ ಜೀವನಶೈಲಿಗೂ ಇರುವ ವ್ಯತ್ಯಾಸವನ್ನು ಥಟ್ಟನೆ ನಮ್ಮೆದುರಿಗೆ ತಂದು ನಿಲ್ಲಿಸುತ್ತಾರೆ.

     ಸಾವಿರಾರು ಜನ ಓಡಾಡೋ ದಾರಿಯಲ್ಲಿ ಗರಿಕೆಯೂ ಬೆಳೆಯೋದಿಲ್ಲ. ಆದರೆ ಆ ದಾರಿಗೂ ‘ತನ್ನವರದ್ದು’ ಅನ್ನುವ ಹೆಜ್ಜೆಗಳು ಶಾಶ್ವತವಾಗಿ ಉಳಿಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ದಾರಿಯ ಧ್ವನಿ ಯಾರಿಗೂ ಕೇಳುವುದಿಲ್ಲ. ಎಲ್ಲೋ ಒಂದು ಚಿಗುರು ಕಾಣಿಸಿಕೊಳ್ಳಲಿ ಅಥವಾ ಉಳಿದುಹೋಗಲಿ ಅನ್ನುವಾಗ ಸಂಬಂಧದ ಬೇರುಗಳ ಗಟ್ಟಿತನ ಪ್ರಶ್ನೆಯಾಗುತ್ತದೆ. ಅಸಹಾಯಕ ದಾರಿಯ ಮೌನವು ಕಣ್ಣನ್ನು ತೇವವಾಗಿಸುತ್ತದೆ. ನೆನಪುಗಳು ಅದೆಷ್ಟು ಕೊಲ್ಲುತ್ತವೆ ; ಆದರೆ ಭಯವನ್ನು ಮೀರಿದವನು ಸಾವಿಗೆ ಹೆದರುವುದಿಲ್ಲ.. ಯಾವಾಗಲೂ ಕೇವಲ ದುಡ್ಡು ಕೊಟ್ಟು ತಂದ ವಸ್ತುವಿನಲ್ಲಿ ಋಣದ ಭಾರ ಕಡಿಮೆ ಅನ್ನುತ್ತಾ, ಅದು ಪ್ರೀತಿಗೆ ಅಂಟಿಕೊಳ್ಳುವುದು ಕೂಡಾ ಕಡಿಮೆಯೆಂದು ಶ್ರೀಯುತರು ಹೇಳಿದ್ದಾರೆ.

     ಒಂದು ಕಡೆ ಓದುವ ಮನಸ್ಸು (ಕರ್ತವ್ಯ), ಬಣ್ಣದ ಬದುಕಿನ ಸೆಳೆತ (ನಾವು ಹಾಕುವ ಸೋಗು), ಅಮ್ಮನನ್ನು ಹುಡುಕುತ್ತಾ ಅಲೆಯುವಿಕೆ (ನಮ್ಮೊಳಗಿನ ಮಗುತನ), ಹುತ್ತದೊಳಗೆ ಕೈಯಿಡುವಿಕೆ, ರೈಲುಹಳಿಗಳಲ್ಲಿ ನಡೆಯುವುದು (ಭಂಡತನ), ಆಗಾಗ ಅಳುವ ಹುಡುಗ (ಎಲ್ಲವನ್ನೂ ಕಳೆದುಕೊಳ್ಳುವ ಹತಾಶ ಭಾವ), ಒಂದಷ್ಟು ಗುಟ್ಟುಗಳು, ಎಲ್ಲವನ್ನೂ ತಿಳಿದು ನಿರ್ಲಿಪ್ತ ಸ್ಥಿತಿ, ನಮ್ಮೊಳಗೇ ಇರುವ ಒಂದು ಸತ್ತ್ವಯುತ ಅಧಿಕಾರ, ಎಲ್ಲೇ ಹೋದರೂ ನಮ್ಮ ಜೊತೆಗೇ ಸಾಗುವ ಗಾಯ, ಬೇನೆಗಳು, ನಮ್ಮನ್ನು ತಿದ್ದಿ ತೀಡುವ ಅನುಭವ ಮುಪ್ಪಂತೆ ಒಬ್ಬ ಪ್ರೌಢ, ತನ್ನನ್ನೇ ತಾನು ಒರೆಹಚ್ಚಿಕೊಳ್ಳುವ ಪ್ರಕ್ರಿಯೆ, ಪುರುಷಾರ್ಥಗಳೊಂದರ ಅಭಿವ್ಯಕ್ತಿ ಇದ್ದುದನ್ನು ಬಿಟ್ಟು ಇಲ್ಲದಿದ್ದುದರ ಕಡೆ ಅಥವಾ ಬೇರೆಯವರ ವಸ್ತುವಿನ ಕಡೆಗೆ ಸೆಳೆವ ಮನಸ್ಸು ಹೀಗೇ ಹೀಗೇ ಪ್ರತಿಯೊಂದು ಭಾವವೂ ಇಲ್ಲಿ ಒಂದೊಂದು ಪಾತ್ರವಾಗಿ ಕತೆಯ ತುಂಬಾ ಅಲೆದಾಡುತ್ತವೆ

     ನಮ್ಮ ಬೆನ್ನ ಮೇಲಿನ ಗಾಯ ನಮಗೆ ಕಾಣಿಸೋದಿಲ್ಲ, ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ನಾವು ಮಾಡೋದಿಲ್ಲ. ನೋವು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಗಮನಿಸಿದರೆ ಮಾತ್ರವೇ ಅರಿವಿಗೆ ಬರುತ್ತದೆ; ಅಂದರೆ ಇದಕ್ಕೆಲ್ಲಾ ಕಾರಣ ಮನಸ್ಸು ಮಾತ್ರ...

     ಮನುಷ್ಯ ತನಗೇ ತಾನು ಸತ್ಯ ಹೇಳಿಕೊಳ್ಳುವಲ್ಲಿಯೂ ತಡವರಿಸುತ್ತಾನೆ. ತನ್ನ ನಿಜವಾದ ಚಿತ್ರ ಮನಸ್ಸಿನಲ್ಲಿ ಮೂಡಿದಾಗ, ಅರೆಬರೆ ಸುಳ್ಳು ಅಲ್ಲಿಂದಲೇ ಆರಂಭವಾಗುತ್ತದೆ. ಅದಕ್ಕೆ ಸಮರ್ಥನೆಗಳೂ ಹುಟ್ಟಿಕೊಳ್ಳುತ್ತವೆ. ಈ ಸತ್ಯ ಸುಳ್ಳುಗಳೆಲ್ಲಾ ಅವರವರ ದೃಷ್ಟಿಗೆ ಸಂಬಂಧಿಸಿದ್ದಷ್ಟೇ ಅಲ್ಲವೇ! ಯಾವತ್ತು ಮನುಷ್ಯ ತನಗೇ ತಾನು ನಿಜ ಹೇಳಿಕೊಳ್ಳುವ ಶಕ್ತಿ ಪಡೆಯುತ್ತಾನೋ, ಆಗ ಆತ ಒಂದು ಮಟ್ಟ ಮುಟ್ಟಿದ ಅಂತ ಅರ್ಥ. ಕೆಲವೊಮ್ಮೆ ಪರಿಸ್ಥಿತಿ ಮನುಷ್ಯನ ಆಚಾರ ವಿಚಾರಗಳನ್ನು ರೂಪಿಸುತ್ತದೆ.

     ಪುರುಷಾರ್ಥಗಳಲ್ಲಿನ ಆಸಕ್ತಿ ಕಡಿಮೆಯಾದಂತೆ ನಾವು ಮಾಗುತ್ತಿದ್ದೇವೆ ಅಂತ ಅರ್ಥ. ಆ ನಿರಾಸಕ್ತಿ, ಒಳಗಿನ ಆಸಕ್ತಿಗೆ ಪೂರಕ. ನಮ್ಮನ್ನು ನಾವು ತಿಳಿಯುವ ಈ ಪ್ರಕ್ರಿಯೆಯಲ್ಲಿ, ಆಸಕ್ತಿ ನಿರಾಸಕ್ತಿಗಳು ಹಗಲು ರಾತ್ರಿಗಳಿದ್ದಂತೆ. ಅಕ್ಕಿ ಬೇಯುತ್ತದೆ, ಬೇಳೆಯೂ ಬೇಯುತ್ತದೆ.. ಆದರೆ ಉತ್ತಮ ಊಟದ ರುಚಿ ನಮ್ಮ ಕೈಯಲ್ಲೇ ಇದೆ. ಕೆಲವೊಮ್ಮೆ ಮನುಷ್ಯನ ಆಸೆಗಳು ಆತನನ್ನು ಮತ್ತೆ ಜೀವನ್ಮುಖಿಯಾಗಿಸುತ್ತವೆ. ನಮ್ಮಲ್ಲಿ ಅಂದರೆ, ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ, ನಮ್ಮಲ್ಲಿನ ಸೌಂದರ್ಯಕ್ಕೆ ಅದನ್ನು ಬಳಸಿಕೊಳ್ಳಬೇಕಾದುದು ನಮಗೇ ಬಿಟ್ಟಿದ್ದು.

     ಬೇರೆಯವರ ಮೇಲೆ ಹೊರಿಸುವ ತಪ್ಪುಗಳು ನಮ್ಮ ತಪ್ಪುಗಳಿಂದ ನಮ್ಮ ಮೇಲಾದ ಕಲೆಯನ್ನು ಅಳಿಸಿಹಾಕುವುದಿಲ್ಲ. ಆ ಕಲೆಯನ್ನು ತಿಕ್ಕಬೇಕು, ಹಳೇ ಪೊರೆ ಕಳಚಿ ಮತ್ತೆ ಮರುಹುಟ್ಟು ಇರಬೇಕು.

     ಅಧ್ಯಾತ್ಮ ಎನ್ನುವುದು ಜೀವನವನ್ನು ತುಂಬ ಕಂಡವರಲ್ಲಿ ಮತ್ತು ಅನುಭವಿಸಿದವರಲ್ಲಿ ಜಾಗೃತವಾಗುತ್ತದೆ. ಏನೂ ಕಾಣದವರಲ್ಲಿ ಅದರ ಕಲ್ಪನೆಯಷ್ಟೇ ಮೂಡುತ್ತದೆ.

     ಬರೆಯುವಿಕೆಯ ಮಹತ್ವವನ್ನೂ ಸೂಚ್ಯವಾಗಿ ಶ್ರೀಯುತರು ಹೇಳುತ್ತಾರೆ. ಬರೆಯುತ್ತಾ ಹೋದರೆ ಎಷ್ಟು ಪುಸ್ತಕ ಪ್ರಕಟಿಸಬಹುದಾಗಿತ್ತು ಎಂದು ಒಂದು ಪಾತ್ರದ ಮೂಲಕ ಹೇಳುತ್ತಾ, ಬರವಣಿಗೆಯಲ್ಲಿ ಗಟ್ಟಿತನ ಇರಬೇಕು, ಬರೆದದ್ದು ನೆಲೆ ಕೊಡಬೇಕು, ಅನಿಸಿದ್ದೆಲ್ಲವೂ ಬರವಣಿಗೆಯ ರೂಪ ಪಡೆದುಕೊಳ್ಳಲಿಕ್ಕಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

     ಹುಡುಕಾಟದಲ್ಲಿ ಹತ್ತಿರ ಬಂದ ನಮ್ಮನ್ನೇ ನಾವು ಕೆಲವೊಮ್ಮೆ ದೂರ ತಳ್ಳಿಕೊಳ್ಳುತ್ತೇವೆ. ಬಹುಶಃ ಅಷ್ಟು ವರ್ಷಗಳ ತಿಕ್ಕಾಟದ ಮೇಲಿನ ಜಿಗುಪ್ಸೆಯೋ ಅಥವಾ ಅಸ್ತಿತ್ವಕ್ಕೊಂದು ಅರ್ಥ ಕಂಡುಕೊಳ್ಳಲಾರದ ತಳಮಳದ ಇನ್ನೊಂದು ಮುಖವೋ.. ಹಪಹಪಿಸುತ್ತೇವೆ, ಸುಕ್ಕಾಗುತ್ತೇವೆ, ಮತ್ತೆ ಮತ್ತೆ ಬಿದ್ದು ಬಿದ್ದು ಏಳುತ್ತೇವೆ, ಗಟ್ಟಿಯಾಗುತ್ತೇವೆ. ಇನ್ನ್ಯಾವುದರಲ್ಲೋ ಅರ್ಥ ಹುಡುಕಲು ಶುರುವಿಟ್ಟುಕೊಳ್ಳುತ್ತೇವೆ. ಕೊನೆಗೆ ಯಾವುದೋ ಒಂದು ಮುಖವನ್ನಿಟ್ಟುಕೂಂಡು ಸಮಾಧಾನದ ಭ್ರಾಂತಿಯಲ್ಲಿ ಕಣ್ಣು ಮುಚ್ಚುತ್ತೇವೆ.

     ನಾವದೆಷ್ಟು ಜನ ಸ್ಥಿರಚಿತ್ತರಿದ್ದೇವೆ? ಏನೋ ಆಗಬೇಕೆಂದು ಕನವರಿಸುತ್ತೇವೆ. ಆ ಕನವರಿಕೆ ಒಳ್ಳೆಯ ನಿದ್ರೆಯಲ್ಲಿನ ಒಂದೆರಡು ಕ್ಷಣಗಳಾಗಿ ಹೊರಟುಹೋಗುತ್ತದೆಯೇ ಹೊರತು, ಹಗಲಿನ ಚುರುಕಾಗುವುದೇ ಇಲ್ಲ. ಸುಮ್ಮನೆ ನಡೆಯುತ್ತೇವೆ ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ಉದ್ದೇಶವೇ ಇರದೆ!.. ಸಂಬಂಧಗಳಿಗೆ ವ್ಯಾಖ್ಯೆ ಮತ್ತು ಅರ್ಥವನ್ನು ಕೊಟ್ಟುಕೊಳ್ಳುವವರು ನಾವೇ.. ಸಂಬಂಧಗಳ ಹೆಸರಿಗಿಂತಲೂ ಹೆಚ್ಚಾದ ಅನುಭೂತಿಯನ್ನು ನಾವೇ ಹುಟ್ಟಿಸಿಕೊಳ್ಳಬಹುದಲ್ವಾ?..

     ಬದುಕಿನ ಒಂದಷ್ಟು ಪುಟಗಳು ಖಾಲಿ ಅನ್ನುವುದಕ್ಕಿಂತ ಅವು ಮುಂದೆ ಬರೆಯಬೇಕಾದವುಗಳು ಅಂತ ಅಂದುಕೊಳ್ಳುವುದರಲ್ಲಿ ಅದೆಂಥ ಜೀವನೋತ್ಸಾಹವಿದೆ ಅಲ್ಲವೇ!.. ಬಹುಶಃ ಇದನ್ನೇ ಹುಡುಕಾಟ ಎನ್ನಬಹುದೇನೋ..!

     ಸಾವು ಭೌತಿಕವಾದದ್ದಲ್ಲ; ಅದು ಬೌದ್ಧಿಕವಾದದ್ದು.. ಹೊಸಹುಟ್ಟು, ಪುನರ್ ಸೃಷ್ಟಿಗೊಳ್ಳುತ್ತಲೇ ಇರುವ ನಮ್ಮ ವ್ಯಕ್ತಿತ್ವದ ಪಕ್ವತೆಗೆ ಪರಿಕರವಾಗಬೇಕು.. ನಿಜ, ಅದೆಷ್ಟೋ ಜನ ತಮ್ಮನ್ನು ತಾವು ಅರಿತಿದ್ದರೆ, ಪರಿಸ್ಥಿತಿಯ ಪರಿಹಾಸ್ಯಕ್ಕೆ ಪೆಚ್ಚು ಮೋರೆ ಹಾಕಿಕೊಂಡು ಆಗ ಸಿಕ್ಕ ಮುಖವಾಡಗಳನ್ನು ಹಾಕಿಕೊಳ್ಳುತ್ತಾ, ಒಂದಷ್ಟು ದಿನ ಭ್ರಮೆಯಲ್ಲಿ ಮೆರೆಯುತ್ತಾ ಮತ್ತೆ ಮತ್ತೆ ಸಾಯುತ್ತೇವೆ, ಹಾಗೇ ಹುಟ್ಟುತ್ತೇವೆ (ಕೆಲವೊಮ್ಮೆ!).. ಆಗಾಗ ಸತ್ತು ಹುಟ್ಟಬೇಕಂತೆ, ಹೇಗೆ?.. ಹೊಸ ಬದುಕಿನ ಅಥವಾ ಹೊಸ ಚೈತನ್ಯದ ಮರುಹುಟ್ಟೇ ಅಥವಾ ಹೊಸ ವ್ಯಕ್ತಿತ್ವದ್ದೇ?.. ಪ್ರತೀ ಸಲ ಮುಖವಾಡ ಬದಲಿಸಿಕೊಂಡಾಗಲೂ ಸಾವು ಹುಟ್ಟಿನ ಸರಸ ಖಚಿತವೇ? ಇಷ್ಟೆಲ್ಲಾ ಪಾತ್ರಗಳ ಭಾಗವಾಗುವಾಗ ‘ನಮ್ಮದು’ ಅಂತ ಒಂದು ಭಾವ ಆವರಿಸಿಕೊಳ್ಳುವುದಿಲ್ಲವೇ? ಒಂದಕ್ಕೇ ಆತುಕೊಳ್ಳುವವ ಬಹುಶಃ ಮನುಷ್ಯನಾಗಿರುವುದೇ ಇಲ್ಲವೇನೋ!.. ಪಾತ್ರಗಳ ಮತ್ತು ಅವುಗಳ ಸಂಬಂಧಗಳ ನಡುವಿನ ಎಳೆತ, ಸೆಳೆತ, ಬಿಗಿತಗಳೇ ಮನುಷ್ಯನನ್ನು ಕ್ರಿಯಾಶೀಲನಾಗಿಸುವುದು?!.. ಅಥವಾ ತಡೆದು ತಡೆದು ಬಣ್ಣಬಿಡುವ ತೀವ್ರತೆಯ ಹೆಚ್ಚಿಸುವುದು.. ಹುಡುಕುತ್ತೇವೆ, ಹುಡುಕಿಯೇ ಹುಡುಕುತ್ತೇವೆ ಯಾವುದೋ ಒಂದು ಘಟ್ಟದಲ್ಲಿ.. ಅದುವೇ ನಮ್ಮದೆಂದು ಅಥವಾ ಅದೇ ನಾವೆಂದು ಒಪ್ಪಿಕೊಳ್ಳುವ ಧೈರ್ಯ ಅಥವಾ ಮನಃಸ್ಥಿತಿ ಬಹುಶಃ ನಮಗಿರುವುದು ತುಂಬಾ ಕಡಿಮೆ. ಸಿಕ್ಕಿದೆ ಅಂದುಕೊಳ್ಳುತ್ತಿರುವಾಗಲೇ ಕಳೆದುಕೊಂಡಿರುತ್ತೇವೆ. ಯಾಕೆಂದರೆ ನಾವು ಹುಡುಕುವುದು ನಾವಾಗಿ ಅಲ್ಲ; ಅವರಾಗಿ!.. ನನಗೆ ಗೊತ್ತಿರುವ ನಾನಾದರೂ ಎಷ್ಟು ಸತ್ಯ? ಅಥವಾ ನಾನು ನನ್ನ ಚಿತ್ರ ಇಷ್ಟೇ ಇರಬೇಕೆಂದು ನನ್ನ ಸಂತೋಷಕ್ಕೆ ನಾನೇ ಎಳೆದ ಗೆರೆಗಳಲ್ಲಿ ಅದೆಷ್ಟು ನಾನಿದ್ದೇನೆ?!.. ಇದೇ ‘ಅನ್ವೇಷಣ’... :) :) :)


~‘ಶ್ರೀ’
  ತಲಗೇರಿ

ಭಾನುವಾರ, ಆಗಸ್ಟ್ 21, 2016

                                                  "ಅರ್ಧ ಅರ್ಧವೇ ಆವರಿಸು"...

     ಮೊದಲೇ ಹೇಳಿಬಿಡುತ್ತೇನೆ ಹುಡುಗೀ.. ಇವು ದಿನರಾತ್ರಿ ಸರಿವ, ಪೋಲಿ ಹುಡುಗನ ಸರಣಿ ಸ್ವಪ್ನದ ಕಂತುಗಳ ತುಣುಕುಗಳಲ್ಲ.. ಎಲ್ಲೋ ಮುಚ್ಚಿಟ್ಟ ನಕ್ಷತ್ರದೆದೆಯಿಂದ ಸ್ರವಿಸಿದ ಹಾಲ್ನೊರೆಯ ಹಸೀ ಸುಳ್ಳುಗಳೂ ಅಲ್ಲ!. ಪ್ರಾಯದ ಹರಿವಾಣದಲ್ಲಿ ಹಚ್ಚಿಟ್ಟ ಕಿರುಹಣತೆಗಳ ಹೊಂಬೆಳಕಿಗೆ ಚಿತ್ರ ಬರೆವ ಧೀಮಂತ ನೆರಳುಗಳ ಪಲ್ಲವಿಯಿದು..ಬಿಸಿಯೆದೆಯ ಅದೆಷ್ಟೋ ಕಂಪನಗಳಿಗೂ ಆರದೇ ಉಳಿದ ನನ್ನದೆಂಬುವ ಪ್ರೀತಿ ಬಿಂದುಗಳ ಜೋಡಿ ಜೋಡಿ ಕನವರಿಕೆಗಳ ತುಸು ತಲ್ಲಣವಿದು.. ನನಗೂ ನಿನಗೂ ಇಲ್ಲೊಂದು ಕತೆಯ ಕಟ್ಟುತಿದೆ ನೋಡು, ಗೊತ್ತಿಲ್ಲದೇ ಹುಟ್ಟಿಕೊಂಡ ಪದಪುಂಜಗಳ ಬಿಡಿಬಿಡಿಯ ಲಹರಿಗಳು ಒಟ್ಟಾಗಿ ಹರಿದಂಥ ಹಾಡು...

     ಗೆಳತೀ.. ಚಂದ್ರಮನ ಮೈಯಿಂದ ಜಾರಿದ ಬೆವರಿಗೆ ಆಯಸ್ಕಾಂತೀಯ ಗುಣವಿದೆಯೆಂದು ತಿಳಿದಿದ್ದೇ ಅದು ನಿನ್ನ ಹೆರಳುಗಳಲ್ಲಿ ಹೆಪ್ಪುಗಟ್ಟಿ ಮತ್ತೆ ಕರಗಿ ಮೈಯೆಲ್ಲಾ ಚದುರಿದಾಗ..ಮುಗಿಲ ದಿಬ್ಬಗಳು ಒಂದಾಗಿ ನಿನ್ನ ಮುಟ್ಟಲು ರಾಯಭಾರಿಯ ಅಟ್ಟಿದಾಗ ನಾ ಸುಮ್ಮನಿರುವುದು ಶಾಸ್ತ್ರ ಸಮ್ಮತವೇನೇ ಹುಡುಗೀ..!

                          ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
                          ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ..
                          ನನ್ನೆದೆಯ ಅಂಗಳದಿ ನಡೆದಾಡು ಗೆಳತಿ
                          ಅದಕಿರಲಿ ತಂಪು ಜಡಿಮಳೆಯ ಸಂಗೀತ...

     ಬಿಟ್ಟುಬಿಡೆಂದು ನಟ್ಟ ನಡುವೆ ಅಲ್ಲಲ್ಲಿಯೇ ಕನವರಿಸುವಾಗ, ಕದ್ದು ಕದ್ದು ಪಿಸುಮಾತ ಉಸುರಿದ್ದವಂತೆ ಸುತ್ತಲಿದ್ದ ಮಿಂಚುಹುಳುಗಳು..ಕತ್ತಲೆಯ ಹಂಗಿನಲ್ಲೂ ಕಡು ಶಾಪ ಕರಗಿದಂತೆ ಉರಿದುರಿದು ಮೆರೆದ ಮೇಣದ ಬತ್ತಿಯ ಬಿಸಿ ಗಂಧಕ್ಕೆ ರೆಕ್ಕೆ ಸುಟ್ಟಿದ ಪತಂಗಗಳು ಕೊರಗಲಿಲ್ಲವಂತೆ! ಬೆಳಕಿನೆದೆಯಲ್ಲಿ ಈಜುವುದು ಒಪ್ಪಂದವಿರದ ಹಕ್ಕೆಂದು ನೆನಪಾಗಿ ಉಳಿದವಂತೆ!.. ಇನ್ನು, ಇಷ್ಟು ವರ್ಷಗಳ ಕಾಲ ನಿನ್ನ ಮುಂಗುರುಳ ಜೋಕಾಲಿಯನು ಜೀಕಿದ್ದ ತಂಗಾಳಿಗೆ ನನ್ನ ಬೆರಳುಗಳ ಮೇಲೆ ಹೊಸದಾದ ಹೊಟ್ಟೆಕಿಚ್ಚಂತೆ... ನನ್ನುಸಿರ ಮೊಗೆಮೊಗೆದು ನಿನ್ನೆದೆಗೆ ತುಂಬುವ ಹೊಸ ಹುನ್ನಾರದ ರೂವಾರಿ ತಂಗಾಳಿಗೀಗ ನಮ್ಮಿಬ್ಬರಲೂ ಒಂದಾಗೋ ತವಕವಂತೆ.. ಸದಾ ಹಸಿವೆಂದು ಭೋರ್ಗರೆವ ಕಡಲ ಮೊರೆತಕ್ಕೆ, ನಮ್ಮ ಹೆಜ್ಜೆಗಳು ಕೂಡಿ, ಅದರ ತೀರದಲ್ಲಿ ಮೆಲ್ಲ ಮೆಲ್ಲ ಗುರುತು ಬಿಟ್ಟಾಗ, ಕಿರು ಬೆರಳಿಂದ ಹೆಬ್ಬೆರಳ ತನಕ ಹಬ್ಬಿಕೊಂಡ ಪುಟ್ಟ ಪುಟ್ಟ ಆಸೆಗಳ ಭಾಷೆ ಅರ್ಥವಾಯಿತಂತೆ! ಕಡಲೂ ತನ್ನ ಒಳಹರಿವ ನಿರಂತರತೆಗೆ ದನಿಯಾದ ನದಿಗಳ ಕುರಿತು ಪದ್ಯ ಬರೆಯುತ್ತೇನೆಂದು ಸದ್ಯ ಪ್ರೀತಿಯಲ್ಲಿ ಮತ್ತೊಮ್ಮೆ ಒದ್ದೆಯಾಗಲು ಕಾಯುತ್ತಿದೆಯಂತೆ!..

     ಹುಡುಗೀ.. ಋತುಮಾನವೆಲ್ಲ ನಿನ್ನದೇ ಗುಂಗಿನಲಿ ಬೀಗಬೇಕೆಂದು ಕಾದು ಕುಳಿತವನು ನಾನು.. ಮುದ್ದು ಮುದ್ದು ಅಂತರದಲ್ಲಿ ಅದೇನೋ ಸೆಳೆತ.. ಇದ್ದರೂ ಇಲ್ಲದಂತೆ, ಒಮ್ಮೊಮ್ಮೆ ಉಬ್ಬು ತಗ್ಗುಗಳಲ್ಲೆಲ್ಲಾ ಅಲೆದಲೆದು ಇಳಿದಿಳಿದು ಬಸವಳಿದು, ಕಣಿವೆಯಲ್ಲರಳಿದ ಹೂವ ಕಿಸೆಯಲ್ಲಿ ಜೋಪಾನವಾಗಿಟ್ಟು, ಬೊಗಸೆಯಲ್ಲೇ ತಬ್ಬುವ ಭಾಗ್ಯ ತೊದಲಿದಾ ತಕಧಿಮಿತಾ.. ಪೂರ್ತಿ ದಕ್ಕುವ ಪರಿಚಯದ ದಿಕ್ಕಾಗಬೇಡ ಹುಡುಗೀ..ಮೊಗ್ಗು ಮುಸುಕಿದ ಇಡಿಯ ಪಲ್ಲಂಗದಿ ಅರ್ಧ ಅರ್ಧವೇ ಆವರಿಸು.. ಅರಳುವಾಗಲೂ ಇರಲಿ ಅಲ್ಪ ವಿರಾಮ...


 ~`ಶ್ರೀ'
     ತಲಗೇರಿ 

ಬುಧವಾರ, ಆಗಸ್ಟ್ 3, 2016

"ಪ್ರಕ್ರಿಯೆ"...

ಧರೆಯೊಳಗೆ ಅಧರವನ್ನಿಟ್ಟು
ಎಂದೋ ಕದ್ದ ಗುಲಾಬಿ ಪಕಳೆಗೆ
ಬಿಂಕ ತುಂಬಿದ ಕಾಲ..
ದಾರಿ ತುಂಬ ಸುಳಿವು
ಅಲೆದಿದ್ದು ಯಾಕೆ!..
ದುಂಬಿಗೀಗ ತಿಳಿದಿಹುದು
ಅರೆ ಒಗರು ಜೇನ
ನೀನಲ್ಲಿ ಮೆತ್ತಿದ್ದು...

ತಗ್ಗಿನಲೂ ಉಬ್ಬುಗಳ
ಕಾಯ್ದುಕೊಳ್ಳುವಿಕೆ ಹೊಸತಲ್ಲ
ಪ್ರಕೃತಿಗೆ...
ಬಣ್ಣದಾ ಹನಿ
ಜಾರಿದಾ ಬಳಿಕವೂ
ಹಗ್ಗದಂತೆ ಹುರಿಗೊಳಿಸಿ
ಮೈಗಂಟಿಕೊಂಬುದರ
ತಾತ್ಪರ್ಯವೇನು!
ಕಣಿವೆಯ ಅಂಚುಗಳ
ತೀಡಿತೇ ಮಳೆಬಾನು...

ಕಳೆದದ್ದು ಹುಡುಕುವುದು
ಕಳೆದುಹೋದದ್ದರಲ್ಲಲ್ಲ;
ಉಳಿದುಕೊಂಡಿದ್ದರಲ್ಲಿ!..
ಬೆಳಕು ತೀರಿದ್ದು
ಕಾವು ಇಳಿಯಿತೆಂದಲ್ಲ;
ಟಿಸಿಲೊಡೆವ ಗಳಿಗೆಗೆ
ಮತ್ತೆ ಅಣಿಯಾಗಲೆಂದು..
ಯಾರೋ ಬಚ್ಚಿಟ್ಟ ಹಿತವಿದೆ
ಅಲ್ಲೂ ಇಲ್ಲೂ;
ಕಪ್ಪಿನಲಿ ಕರಗಿರುವ
ಕಸುವ ಹುಡುಕುವುದರಲ್ಲಿ..
ಮೈಬಿರಿದು, ತೊದಲಿಗೆ
ಬಿಡಿಬಿಡಿಯ ಕಡಲಾಗುವುದರಲ್ಲಿ..
ಹಗಲು ಹರೆಯದಿ ಕೊಟ್ಟ
ಕಲೆಯಿಹುದು ಚಂದ್ರನಲ್ಲೂ..!

                        ~‘ಶ್ರೀ’
                          ತಲಗೇರಿ

ಮಂಗಳವಾರ, ಆಗಸ್ಟ್ 2, 2016

ಮಳೆಗಾಲದಲ್ಲಿ ನಾ ಕಂಡ ‘ಗ್ರಹಣ’

    ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ ಮುಂತಾದವುಗಳು ಇಲ್ಲಿನ ಪ್ರಮುಖ ಅಂಶಗಳು.

   ಗ್ರಹಣದ ಬಗೆಗಿನ ವೈಜ್ಞಾನಿಕ ಉಪನ್ಯಾಸದೊಂದಿಗೆ ಆರಂಭವಾಗುವ ಕತೆ ಮುಂದೆ ಇನ್ನಷ್ಟು ಆಳಕ್ಕಿಳಿಯುತ್ತದೆ. ಮುಖದ ತೇಜಸ್ಸಿಗೆ ವರ್ಣ ಕಾರಣವಲ್ಲ, ಕಲಿತ ವಿದ್ಯೆ ಕಾರಣ ಅನ್ನುತ್ತಾ ಶ್ರೀಯುತರು ಜ್ಞಾನದ ಮಹತ್ತತೆಯನ್ನು ಹೇಳಿದ್ದಾರೆ. ವಿಜ್ಞಾನವನ್ನು ಎಷ್ಟೇ ನಂಬಿದರೂ ಭಾರತೀಯರ ಮನಸ್ಸಿನಲ್ಲಿರುವ ಗ್ರಹಣದ ಪರಿಕಲ್ಪನೆ, ಸಂಬಂಧಗಳ ವಿಷಯ ಬಂದಾಗ ವಿಜ್ಞಾನಕ್ಕಿಂತ ನಂಬಿಕೆಗಳಿಗೆ ಒತ್ತುಕೊಡುವ ಜನಾಂಗದ ಮನಃಸ್ಥಿತಿ ಇಲ್ಲಿ ವ್ಯಕ್ತ. ಒಂದೊಮ್ಮೆ ದ್ವೇಷಿಸಿದವರೂ ಮುಂದೊಮ್ಮೆ ಆಪ್ತರಾಗಬಹುದಾದ ಸಾಧ್ಯತೆಯನ್ನು  ಹೇಳಿದ್ದಾರೆ. ಆಶ್ರಮ ಪದ್ಧತಿಯ ವಿಶ್ಲೇಷಣೆ ಇದರ ಮೂಲ ಕಥಾವಸ್ತುವಾಗಿದೆ. ಅದರಲ್ಲೂ ಸನ್ಯಾಸ ಮತ್ತು ಗಾರ್ಹಸ್ಥ್ಯದ ನಡುವಣ ತಾಕಲಾಟಗಳು ಪ್ರತಿಬಿಂಬಿಸಲ್ಪಟ್ಟಿವೆ.

   ಸನ್ಯಾಸಿಯಂತೆ ಜೀವನ ನಡೆಸಿದಾತ ಇದ್ದಕ್ಕಿದ್ದಂತೆ ಮದುವೆಯಾಗುತ್ತೇನೆಂದರೆ ಅದು ತಪ್ಪಾಗುತ್ತದೆಯೇ? ಅದು ಚಿಂತಿಸುವವರ ಮನಃಸ್ಥಿತಿಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೊಂದು ಪ್ರೇರಣೆ, ನೈತಿಕ ಸ್ಥೈರ್ಯ ಮತ್ತು ಒಂದು ಶಕ್ತಿಶಾಲಿ ಹಿನ್ನೆಲೆ ಬೇಕು ಎನ್ನುತ್ತಾ ಬಹುಶಃ ಅದಕ್ಕಾಗಿಯೇ ದೇವರ ಅಸ್ತಿತ್ವ ಬಲವಾಯಿತೇನೋ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಒಂದು ನಿಮಿತ್ತವಿರಬೇಕು. ಎಲ್ಲ ಕ್ರಿಯೆಗಳಲ್ಲೂ ಒಂದು ಇನ್ನೊಂದನ್ನು ಉದ್ದೀಪಿಸುವಂತಿರುತ್ತವೆ; ಪರೋಕ್ಷ ಅಥವಾ ಅಪರೋಕ್ಷವಾಗಿ.. ದೇವರು ಅನ್ನುವುದು ನಮ್ಮ ಅಜ್ಞತೆಯನ್ನು ಮುಚ್ಚಿಕೊಳ್ಳುವ ಒಂದು ಒಣಮಾತು ಅನ್ನುತ್ತಾ ಒಂದು ವಿಭಿನ್ನ ವಾದವನ್ನು ಮಂಡಿಸುತ್ತಾರೆ. ಹಿಮಾಲಯ ಅನ್ನುವುದು ಕೇವಲ ಭೌತವಸ್ತುವಾಗದೆಯೇ ಅಹಂಕಾರವನ್ನು ಮೆಟ್ಟಿ ನಿಲ್ಲುವ ಒಂದು ಪ್ರಚಂಡ ಶಕ್ತಿ, ಇಂತಹ ಶಕ್ತಿಯನ್ನೇ ದೈವತ್ವವೆನ್ನಬಹುದೆಂಬ ಅರ್ಥಕ್ಕೆ ಇಲ್ಲಿ ನೆಲೆಯಿದೆ. ಮಾಡುವ ಕೆಲಸಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಬಹುದು, ಇಲ್ಲದಿದ್ದಲ್ಲಿ ಅದು ಅಹಂಕಾರಕ್ಕೆಡೆ ಮಾಡಬಹುದು ಎಂಬ ಸಂಶಯವನ್ನೂ ಹೊರಹಾಕಿ, ಸೇವೆ ಎನ್ನುವುದು ಪವಿತ್ರವಾದದ್ದು, ಆದರೆ ಅದಕ್ಕೆ ಮತಧರ್ಮವೆಂಬ ಆಧಾರ ಬೇಕೆ? ಇದ್ಯಾವುದೂ ಇಲ್ಲದೆಯೂ ಸೇವೆ ಇರಲಾರದೇ, ಇರಬಾರದೇ ಎಂದು ಪ್ರಶ್ನಿಸುತ್ತಾರೆ. ದಯವಿಲ್ಲದ ಧರ್ಮವಿಲ್ಲ ಧರ್ಮವಿಲ್ಲದ ದಯವೂ ಇಲ್ಲ, ಪರೋಪಕಾರಕ್ಕೆ ಅಧ್ಯಾತ್ಮದ ಆಧಾರವೇ ಬೇಕಿಲ್ಲ, ಸಹಕಾರ ಅನ್ನೋದು ಕೆಳವರ್ಗದ ಪ್ರಾಣಿಗಳಲ್ಲಿಯೂ ಇರುತ್ತದೆ ಅನ್ನುವ ಮಾತು, ಮಾನವನ ಹೆಚ್ಚುವಂತಿಕೆಯ ಜಂಭಕ್ಕೆ ಕಡಿವಾಣ ಹಾಕುತ್ತದೆ.

   ಸನ್ಯಾಸವೆಂದರೆ ಸಾಗರ, ಮಾತೃ ಗರ್ಭದಿಂದ ಹೊರಬಂದು ಮಗುವಿನಂತೆ ಹರಿದು, ಗೃಹಸ್ಥನಾಗಿ ಹರವಿಕೊಂಡು, ವಾನಪ್ರಸ್ಥನಂತೆ ಸಮುದ್ರ ತಟದಲ್ಲಿ ಹರಿದು, ಅನಂತರ ಮಹಾಜಲದಲ್ಲಿ ತನ್ನ ಪ್ರತ್ಯೇಕತೆಯನ್ನು ಅಳಿಸಿಹಾಕುತ್ತದೆ ಈ ನದಿ. ಸನ್ಯಾಸವೆಂದರೆ ಐಕ್ಯತೆಯ ಅಥವಾ ಸಂಗಮದ ಸಮಯ. ತನ್ನ ಅಸ್ತಿತ್ವವನ್ನು ಇನ್ನೊಂದು ಮಹಾನ್ ಅಸ್ತಿತ್ವದೊಂದಿಗೆ ಬೆರೆಸಿ ಆ ಶಕ್ತಿಯಲ್ಲಿ ಲೀನವಾಗುವ ಪ್ರಕ್ರಿಯೆ. ಉಗಮವು ಯಾವಾಗಲೂ ಕೆಳಗಿನ ಪಾತ್ರಕ್ಕಿಂತ ಸಣ್ಣದು, ಬೆಟ್ಟ ಗುಡ್ಡಗಳ ಸಾವಿರಾರು ಜಿನುಗು ಸ್ಥಳಗಳ ನೀರು ಕೂಡಿ ಹರಿದು ಕೆಳಗಿನ ವಿಸ್ತಾರದಿಂದ ನದಿ ಎಂಬ ಹೆಸರನ್ನು ಪಡೆಯುತ್ತದೆ. ಈ ಜಿನುಗುಗಳಲ್ಲಿ ಎದ್ದು ಕಾಣುವಂಥದ್ದನ್ನು ಗುರುತಿಸಿ ಅದಕ್ಕೆ ಮೂಲದ ಪಟ್ಟ ಕಟ್ಟುತ್ತೇವೆ. ಇಷ್ಟೇ ನಮ್ಮ ತಿಳಿವಳಿಕೆ ಎಂದು ತಿಳಿಸುತ್ತಾರೆ. ಶುದ್ಧ ನೀತಿಯ, ಆತ್ಮ ಸಾಕ್ಷಿಯ ಜೀವನ ನಡೆಸುವುದು ಸಂಸಾರಿಗೆ ಸಾಧ್ಯವಿಲ್ಲ; ಅದಕ್ಕೇ ಅದನ್ನು ಬಂಧನವೆನ್ನುತ್ತಾರೆ ಅನ್ನುವಾಗ ಅರ್ಥಕ್ಕೀಗ ರೆಕ್ಕೆ ಮೂಡುತ್ತದೆ. ಗೆಲುವು ಸೋಲುಗಳು ಕೇವಲ ಭಾಸಗಳು ಅನ್ನುವ ಸತ್ಯ ಇಲ್ಲಿ ಹೇಳಲ್ಪಟ್ಟಿದೆ. ಸನ್ಯಾಸ ಅನ್ನುವುದನ್ನು ಪ್ರತಿಯೊಬ್ಬ ಸಂಸಾರಿಯೂ ಪಾಲಿಸತಕ್ಕದ್ದು, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ.

   ಮನುಷ್ಯನಿಗೆ ಬದುಕುವುದಕ್ಕೆ ಪೊರೆಯ ಅಗತ್ಯ ಬೇಕೇ? ಎಂದು ಕೇಳುತ್ತಾ, ಬಿರುದನ್ನು ಸ್ವೀಕರಿಸಿದವನು ತನ್ನ ಸ್ವಂತ ಹೆಸರನ್ನು ಕಳೆದುಕೊಂಡಂತೆಯೇ ಅನ್ನುತ್ತಾರೆ. ಹೆಸರಿನೊಂದಿಗೆ ವ್ಯಕ್ತಿತ್ವವನ್ನು ತಳುಕು ಹಾಕಿ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಗುವಿಗೆ ಹೆಸರಿಡುವಾಗ ಯಾರೂ ಅದರ ಒಪ್ಪಿಗೆಯನ್ನು ಕೇಳುವುದಿಲ್ಲ, ಮಗುವಿನೊಂದಿಗೆ ಹೆಸರೂ ಬೆಳೆಯುತ್ತದೆ, ಹೆಸರಿನೊಂದಿಗೆ ಮಗುವೂ.. ವ್ಯಕ್ತಿತ್ವ ಮತ್ತು ಹೆಸರು ಅವಿಭಾಜ್ಯವಾಗುತ್ತದೆ; ಹೆಸರು ಬದಲಾದರೆ ವ್ಯಕ್ತಿತ್ವ ಬದಲಾದಂತೆ ಅನ್ನುತ್ತಾ ಪ್ರತಿಯೊಬ್ಬರ ಬದುಕಿನಲ್ಲಿ ಹೆಸರೆನ್ನುವುದು ಅಸ್ತಿತ್ವದ ಕುರುಹೇ? ಎಂಬುದನ್ನು ಯೋಚಿಸುವಂತೆ ಮಾಡುತ್ತಾರೆ.

  ಒಂದು ವಿಭಿನ್ನ ಮನೋರೋಗವನ್ನು ಕತೆಯಲ್ಲಿ ಸಮರ್ಥವಾಗಿ ಬಳಸಲಾಗಿದೆ. ಮೋಹ ಮನಸ್ಸನ್ನು ಮುಚ್ಚುವಂಥದ್ದು ಪ್ರೀತಿ ಮನಸ್ಸನ್ನು ತೆರೆಯುವಂಥದ್ದು. ತುಂಬಿದ ಎಲ್ಲ ಕರಿಮೋಡ ಮಳೆ ತರಿಸುವುದಿಲ್ಲ; ಇದ್ದ ಮೋಡ ಮುಂದೆ ಸಾಗುತ್ತದೆ, ಹೊಸ ಮೋಡ ಬರುತ್ತದೆ ಅನ್ನುತ್ತಾ ಯೋಚನೆಗಳ ಪ್ರಕ್ರಿಯೆಯನ್ನು ಅವುಗಳಿಂದುಂಟಾಗುವ ಸನ್ನಿವೇಶಗಳನ್ನು ಬಣ್ಣಿಸಿದ್ದಾರೆ. ಮಳೆಯಲ್ಲಿ ನಿಂತ ಕೈ ಗಡಿಯಾರ ಮತ್ತೆ ಸದ್ದು ಮಾಡಲಿಲ್ಲ ಅನ್ನುತ್ತಾ ಆ ಕತೆಯಲ್ಲಿನ ಒಂದು ಪಾತ್ರದ ಸಂಬಂಧದ ಪರಿಸ್ಥಿತಿಯನ್ನು ಹೇಳಿದ ಪರಿ ಚೆಂದ.

  ಹೀಗೆ, ಗ್ರಹಣ ಅನ್ನುವುದು ಒಂದಷ್ಟು ಹೊತ್ತಿನ ಮಂಕೇ? ಎಂದು ವಿಶ್ಲೇಷಣೆಗೊಳಪಡಿಸಿದ, ಆಶ್ರಮ ಪದ್ಧತಿಯ ಕೊನೆಯ ಸ್ತರವಾದ ಸನ್ಯಾಸಕ್ಕೆ ಧುಮುಕಿ ಮತ್ತೆ ಗೃಹಸ್ಥನಾಗುವ ಬಯಕೆ ಏನೆಲ್ಲಾ ಪರಿವರ್ತನೆಗಳನ್ನು ತರಬಲ್ಲದು, ಅದರ ಪರಿಣಾಮಗಳೇನಾಗಬಹುದು, ಪ್ರಕೃತಿ ನಿಯಮದ ವಿಶೇಷತೆಗಳೇನು, ಧರ್ಮಕ್ಕೆ ಯಾವ ವ್ಯಾಖ್ಯಾನ ಕೊಡಬಹುದು ಎಂಬಿತ್ಯಾದಿ ಪ್ರಶ್ನಾವಳಿಗಳ ಒಟ್ಟು ಮೊತ್ತ ಗ್ರಹಣ. ಕೆಲವರಿಗೆ ಕತೆ ಅಪೂರ್ಣವೆನಿಸಿದರೆ ಕೆಲವರಿಗೆ ಪೂರ್ಣ ಅನಿಸಬಹುದು. ಯಾವುದೇ ಕತೆಯಲ್ಲಾದರೂ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅಂತ್ಯ ಇರುತ್ತದೆ. ಆ ಅಂತ್ಯಕ್ಕೂ ಒಂದು ಅರ್ಥ ಇರುತ್ತದೆ. ನನಗೀ ಕತೆ ಅಪೂರ್ಣವಾದಂತೆ ಕಂಡಿಲ್ಲ, ತಾವೂ ಒಮ್ಮೆ ಓದಿ, ಅಭಿಪ್ರಾಯ ಹಂಚಿಕೊಳ್ಳಿ...

                                                                                                                               ~‘ಶ್ರೀ’
                                                                                                                                  ತಲಗೇರಿ

"ಯಾನ"ದ ಜೊತೆ ಮಳೆಗಾಲದ ಸಂಜೆ...

     ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’..ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ..

    ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ ಅನಿಸುತ್ತದೆ. ವಿಭಿನ್ನ ದೃಷ್ಟಿಕೋನದಲ್ಲಿ ಎಲ್ಲಿಯೂ ಲಯ ತಪ್ಪದಂತೆ ಒಂದು ವಿಷಯವನ್ನು ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾದಂಬರಿಯಲ್ಲಿ ಎಲ್ಲವುಗಳ ಸಮಾಗಮವಿದೆ. ಅವರೇ ಹೇಳಿರುವಂತೆ, ಇದು ಕೇವಲ ವಿಜ್ಞಾನದ ಕತೆಯಲ್ಲ; ಯಾವುದೇ ವರ್ಗಕ್ಕೂ ಸೇರುವುದಿಲ್ಲ. ಮನುಷ್ಯನ ಅನುಭವಗಳ ಶೋಧದ ಗುಚ್ಛ ಇದು, ಅಸ್ತಿತ್ವದ ಹುಡುಕಾಟ ಇದು. ಒಂದಷ್ಟು ನಂಬಿಕೆಗಳನ್ನ ಪ್ರಶ್ನಿಸುತ್ತಲೇ ಅದರಾಳಕ್ಕೆ ನಮ್ಮನ್ನೂ ಇಳಿಸಿ, ಮತ್ತೆ ಅಲ್ಲೇ ಉತ್ತರವನ್ನೂ ದೊರಕಿಸುವ ಅವರ ಪಾಂಡಿತ್ಯಕ್ಕೆ ಯಾರಾದರೂ ಶರಣಾಗಲೇಬೇಕು. ಒಂದು ಕಾದಂಬರಿ ಬರೆಯುವಾಗ ಪೂರ್ವಭಾವಿಯಾಗಿ ಒಂದಷ್ಟು ಸಂಶೋಧನೆಗಳಿರುತ್ತವಲ್ಲಾ, ಬಹುಶಃ ಮತ್ತ್ಯಾರೂ ಒಂದು ಕಾದಂಬರಿಗಾಗಿ ಇಷ್ಟು ಆಳಕ್ಕಿಳಿಯುವುದಿಲ್ಲವೇನೋ; ಕೇವಲ ಆಳವಲ್ಲ, ವಿಸ್ತಾರಕ್ಕೂ ಕೂಡ...

    ಅಸ್ತಿತ್ವದ ಹುಡುಕಾಟದ ಈ ಕತೆ ಒಂದು ವಿಶಿಷ್ಟ ವಿಷಯದೊಂದಿಗೆ ಶುರುವಾಗುತ್ತದೆ. ಅಕ್ಕ ಮತ್ತು ತಮ್ಮನ ನಡುವಿನ ಮದುವೆ..! ಅಲ್ಲಿಂದಲೇ ಕಾದಂಬರಿ ನನ್ನನ್ನ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು. ಮೇಲ್ನೋಟಕ್ಕೆ ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವಂತೆ ತೋರಿದರೂ ಕೊನೆಯಲ್ಲಿ ಇದಕ್ಕೆ ನ್ಯಾಯ ಒದಗಿಸುತ್ತಾರೆ. ನಮ್ಮೆಲ್ಲರ ಮನಸುಗಳ ಪಾವಿತ್ರ್ಯವನ್ನ ಎತ್ತಿ ಹಿಡಿಯುತ್ತಾ ಭಾರತೀಯತೆಯನ್ನ ಮತ್ತೆ ಮತ್ತೆ ಪ್ರತಿಬಿಂಬಿಸುತ್ತಾರೆ. ಕರ್ತವ್ಯ ಮತ್ತು ನೈತಿಕತೆಯ ವಿಷಯ ಬಂದಾಗ ಕರ್ತವ್ಯವನ್ನೇ ಮೊದಲಾಗಿಸಿ, "ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು" ಎಂಬ ತತ್ತ್ವಕ್ಕೆ ಒತ್ತು ಕೊಡುತ್ತಾರೆ. ಒಂದು ವಿಶಿಷ್ಟ ಕರ್ತವ್ಯವನ್ನು ಪೂರೈಸಬೇಕಾದ ಹೆಣ್ಣೊಬ್ಬಳಿಗೆ ನೈತಿಕತೆ ಮತ್ತು ಕರ್ತವ್ಯದ ಬಗೆಗಿನ ದ್ವಂದ್ವಕ್ಕೆ ಸಮರ್ಥ ಧ್ವನಿ ಈ ಕಾದಂಬರಿಯಲ್ಲಿದೆ. ಕೇದಾರನಾಥನನ್ನು ಬಣ್ಣಿಸುತ್ತಾ ಒಂದಷ್ಟು ವರ್ಷಗಳ ಹಿಂದಿನ ಭಾರತದ ಭೌಗೋಳಿಕ ಸ್ಥಿತಿ ಮತ್ತು ಇಂದಿನ ಭಾರತದ ಪರಿಸ್ಥಿತಿಯನ್ನ ಹೇಳುತ್ತಾರೆ. ವಾಣಿಜ್ಯೀಕರಣದ ಸ್ಪರ್ಶದಿಂದ ಪವಿತ್ರ ಕ್ಷೇತ್ರಗಳಲ್ಲಾಗುವ ಬದಲಾವಣೆಗೆ ಮನಸ್ಸು ದುಃಖಿಸುತ್ತದೆ. ಜೊತೆಗೆ ವೈಜ್ಞಾನಿಕತೆಯ ಇಂದಿನ ಯುಗದಲ್ಲೂ ಅಪ್ಪಟ ಭಾರತೀಯ ನಾರಿಯೋರ್ವಳ ಮನಃಸ್ಥಿತಿ ಹೇಗಿರುತ್ತದೆ ಅನ್ನುವುದನ್ನ ಕತೆಯುದ್ದಕ್ಕೂ ಹೇಳುತ್ತಾ ಸಾಗುತ್ತಾರೆ; ಅದು ಭಾರತದ ಪೂಜನೀಯ ಸ್ಥಾನಕ್ಕೆ ಪುಷ್ಟಿ ಕೊಡುತ್ತದೆ. ಇಲ್ಲಿನ ನಾರಿ ಎಂದಿಗೂ ಪ್ರಬುದ್ಧಳು, ಮಾನಸಿಕವಾಗಿ ಹಾಗೇ ದೈಹಿಕವಾಗಿ ಅಷ್ಟೇ ಗಟ್ಟಿಗಳು ಅನ್ನುತ್ತಾ ಅವಳ ಮಹತ್ತತೆಯನ್ನ ಗಹನತೆಯನ್ನ ಪಾವಿತ್ರ್ಯತೆಯನ್ನ ಪ್ರತಿಧ್ವನಿಸುತ್ತಾರೆ.

    ಜಗತ್ತಿನಲ್ಲಿ ಅದೆಷ್ಟೇ ಧರ್ಮಗಳಿದ್ದರೂ, ಎಲ್ಲ ನಂಬಿಕೆಗಳೂ ಆಯಾ ಕಾಲಘಟ್ಟಕ್ಕೆ, ಆಯಾ ಪರಿಸ್ಥಿತಿಗೆ ತಕ್ಕಂತೆ ಪುನರ್ರಚನೆಗೊಳ್ಳುತ್ತವೆ. ಆ ಧರ್ಮಗಳ ಹೊರತಾಗಿಯೂ ಕೆಲವೊಮ್ಮೆ ನಂಬಿಕೆಗಳು ಅಸ್ತಿತ್ವ ಪಡೆಯುತ್ತವೆ. ಪರಿಸ್ಥಿತಿಗೆ ತಕ್ಕಂತೆ, ಮನಃಸ್ಥಿತಿಗೆ ತಕ್ಕಂತೆ ಒಂದು ವಿಷಯ/ವಸ್ತು ವಿಭಿನ್ನ ಅರ್ಥವನ್ನು, ವಿಭಿನ್ನ ದೃಷ್ಟಿಕೋನವನ್ನು ಪಡೆಯುತ್ತದೆ. ಅದಕ್ಕೆ ಉದಾಹರಣೆಯೆಂಬಂತೆ ಅರಳು ಮಲ್ಲಿಗೆಯಂತೆ ಕಂಡ ನಕ್ಷತ್ರ ಇನ್ನೊಮ್ಮೆ ಉರಿವ ಜ್ವಾಲೆಯಾಗಿ ಕಾಣುವಿಕೆಯನ್ನ ಹೇಳಿದ್ದಾರೆ. ಇದು ಒಂದೇ ವ್ಯಕ್ತಿಯ ಬೇರೆ ಬೇರೆ ಮನಃಸ್ಥಿತಿ ಮತ್ತು ಸನ್ನಿವೇಶಗಳಲ್ಲಿನ ಎರಡು ವಿಭಿನ್ನ ದೃಷ್ಟಿಕೋನಗಳು. ಅನಂತದ ಬಗೆಗಿನ ಆಸಕ್ತಿ, ಅನಂತತೆಯಲ್ಲೇ ಕೊನೆಗೊಳ್ಳುತ್ತದೆ. ಆಸಕ್ತಿ ಅಥವಾ ಮಗ್ನತೆ ಕೊನೆಯಲ್ಲಿ ನಮ್ಮನ್ನೇ ತಾನಾಗಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಇಲ್ಲಿನ ಪ್ರತಿ ಪಾತ್ರವೂ ಒಂದೊಂದು ಭಾವವಾಗಿ ರೂಪುಗೊಂಡಿದ್ದು.. ವೈಜ್ಞಾನಿಕತೆ ಅನ್ನುವುದು ಅನಂತದ ಹೊರತಾಗಿಲ್ಲ; ಅದೂ ಕೂಡ ಪೂರ್ಣತೆ ಮತ್ತು ಶೂನ್ಯತೆಗಳ ಹುಡುಕಾಟದಲ್ಲಿದೆ..

    ಭೂಮಿಯಿಂದ ಆಚೆ ಬಂದಾಗ, ಹಿಮಾಲಯದಲ್ಲಿನ ಅವಘಡಗಳು ಬೆಂಗಳೂರಿನ ಸ್ವಂತ ಮನೆಯಲ್ಲಾಗುವ ಅವಘಡದಂತೆ ಏಕರೂಪವಾಗುತ್ತದೆ. ಒಂದು ಪರಿಧಿಯಿಂದಾಚೆಗೆ ಎಲ್ಲವೂ ಏಕತ್ವದಲ್ಲಿ ಸಂಗಮಿಸುತ್ತವೆ. ಪ್ರಜ್ಞೆ ಮತ್ತು ನೋವು ಒಂದಕ್ಕೊಂದು ಸಂಬಂಧಿಸಿದವುಗಳು.. ಇಲ್ಲಿ ಎಲ್ಲವೂ ನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು.. ನಮ್ಮ ಮನಃಸ್ಥಿತಿಗೆ ತಕ್ಕಂತೆ ಬದಲಾಗುತ್ತವೆ; ರೂಪುಗೊಳ್ಳುತ್ತವೆ.. ಒಂದಕ್ಕೊಂದು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ, ಆದರೆ ಪೂರಕವಾಗಿ.. ! ಎಲ್ಲಕ್ಕೂ ಒಂದು ಅಂತ್ಯ ಅನ್ನುವುದು ಇದ್ದೇ ಇದೆ; ಅದೇ ತರ ವೈಭವ ಅನ್ನುವುದು ಒಂದು ಸಲ ನೇಪಥ್ಯಕ್ಕೆ ಸರಿದ ಮೇಲೆ ಜನರ ಮನಸ್ಸಿನಿಂದಲೂ ಕ್ರಮೇಣ ಅದು ಮರೆಯಾಗುತ್ತದೆ, ಅದೇ ತರ ನಮ್ಮೆಲ್ಲರ ಬೇರೆ ಬೇರೆ ಸ್ತರಗಳ ಸ್ಥಿತಿಗಳು..

    ಸೂರ್ಯನನ್ನು ಸತ್ಯದ ನೆಲೆಯಾಗಿರಿಸಿಕೊಂಡು ಅದರ ಮೂಲವನ್ನು ಹುಡುಕುತ್ತಾ, ಕಪ್ಪು ರಂಧ್ರದಲ್ಲಿನ ವಿಸ್ಮಯವನ್ನ ಹೆಣ್ಣೊಳಗಿನ ಭಾವಕ್ಕೆ ಏಕೀರ್ಭವಿಸುತ್ತಾ, ತತ್ತ್ವಜ್ಞಾನ ಮತ್ತು ಭೌತವಿಜ್ಞಾನಗಳೊಂದಿಗೆ ಸಮೀಕರಿಸಿಕೊಂಡು ಹೋಗುವಿಕೆಯ ಚೆಂದವನ್ನ ನಾವಾಗೇ ಅನುಭವಿಸಬೇಕು. ನನ್ನೊಳಗೇ ನಾನಾಗಿ, ನಾನೇ ನನ್ನೊಳಗಾಗುವ ಪ್ರಕ್ರಿಯೆ, ಹಾಗೆಯೇ ಮೆದುಳು ಭೌತ ವಸ್ತುವೇ ಅಥವಾ ಭೌತ ವಸ್ತು ಎನ್ನುವುದು ಬುದ್ಧಿಯ ರೂಪವೇ ಎನ್ನುವಂತಹ ಸಿದ್ಧಾಂತ.. ಸತ್ಯವೆಂದರೇ ಬರಿ ಭಾವವೇ? ಅಂತ ಪ್ರಶ್ನಿಸುತ್ತಾ, ಸಾರ್ವಕಾಲಿಕ ಮತ್ತು ಸಾರ್ವದೇಶಿಕ ಸತ್ಯವೆಂಬುದಿಲ್ಲ ಅನ್ನುವುದನ್ನ ಅನಾವರಣಗೊಳಿಸುತ್ತಾರೆ. ಅರಿವಿನ ಅರಿವಿಲ್ಲದೇ ಅಪೂರ್ಣ ಎಲ್ಲಾ, ಒಲಿಯದ ಪ್ರಕೃತಿಯಿಂದ ವಿಮುಖನಾದಾಗ ಮಾತ್ರವೇ ಅಧ್ಯಾತ್ಮದ ಅಗತ್ಯ ಕಾಣುವುದು ಅನ್ನುತ್ತಾ, ನಾವು ಭಾರತೀಯರು ಗಂಡು ಹೆಣ್ಣಿನ ಮಿಲನವನ್ನು ಕೇವಲ ಭೌತಿಕ ಕ್ರಿಯೆಯಾಗಿ ಕಾಣುವುದಿಲ್ಲ, ಅದು ಕೇವಲದ ಭೌತಿಕತೆ ಅಲ್ಲಾ, ಅದು ಆತ್ಮಗಳಿಗೆ ಸಂಬಂಧಿಸಿದ್ದು ಅನ್ನುವುದನ್ನ ಸೂಚ್ಯವಾಗಿ ಹೇಳಿದ್ದಾರೆ.. ಹೀಗೇ ಭೌತವಿಜ್ಞಾನ, ತತ್ತ್ವಜ್ಞಾನ, ಖಗೋಳ, ಭೂಗೋಳ, ಮನಃಶ್ಶಾಸ್ತ್ರ ಹೀಗೆ ಹತ್ತು ಹಲವು ಮಜಲುಗಳ ಪ್ರಬುದ್ಧ ಅಂಶಗಳನ್ನು ಒಂದೇ ಕಡೆ ಕಲೆ ಹಾಕಿದ್ದು ಈ ಕಾದಂಬರಿಯಲ್ಲಿ ಕಂಡುಬರುತ್ತದೆ.. ನಿಮ್ಮಲ್ಲೂ ಯಾರಿಗಾದರೂ ‘ಯಾನ’ದ ಬಗೆಗೆ ಹೇಳಿಕೊಳ್ಳಬೇಕೆನಿಸಿದರೆ ದಯವಿಟ್ಟು ಹಂಚಿಕೊಳ್ಳಿ, ಹೊಸ ಜಗತ್ತಿಗೆ ಮತ್ತೆ ಮತ್ತೆ ತೆರೆದುಕೊಳ್ಳುತ್ತಾ ಇರೋಣ... :) :) :)

                                                                                                                                       ~‘ಶ್ರೀ’
                                                                                                                                          ತಲಗೇರಿ

ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು...

     ‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ...

     ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ ಮೂಲದಿಂದಾನೇ ಹುಟ್ಟುತ್ತವೋ ಏನೋ ಯಾರಿಗೆ ಗೊತ್ತು ಅನ್ನುತ್ತಾ ಅಂತರ್ಜಾತೀಯ ವಿವಾಹವಾಗಲು ಯೋಚಿಸುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಿದ್ದಾರೆ. ಪ್ರವಾಹವನ್ನು ಪ್ರೇಮಕ್ಕೆ ಹೋಲಿಸಿ, ಕೊನೆಯಲ್ಲಿ ಕ್ಷಣ ಕ್ಷಣಕ್ಕೆ ಅವಳು ದೂರಾಗುತ್ತಿದ್ದಳು ಅನ್ನುವಾಗ ನಾವೇ ನಮ್ಮ ಸ್ವಂತದ್ದೇ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಭಾವ ಆವರಿಸಿಕೊಳ್ಳುತ್ತದೆ. ಪ್ರವಾಹ ಇಳಿಯುವುದು ಹೇಗೆ ಒಳ್ಳೆಯದೋ ಹಾಗೇ ಕೆಲವೊಮ್ಮೆ ದೂರಾಗುವ ಪ್ರೀತಿ ಕೂಡಾ ಭವಿಷ್ಯದ ಹಿತಕ್ಕಾಗಿ ಎಂಬುದನ್ನ ಸೂಚ್ಯವಾಗಿ ತಿಳಿಸಿದ್ದಾರೆ.

     ಅವರ ಇನ್ನೊಂದು ಕತೆಯಲ್ಲಿ, ಹೆಣವೊಂದು ದೇವಸ್ಥಾನದ ಎದುರಿಗಿದ್ದರೂ ಜನರು ತಮ್ಮದೇ ಧಾಟಿಗಳಲ್ಲಿ ಅದನ್ನು ವಿಶ್ಲೇಷಿಸಿ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ, ಶವ ಸಂಸ್ಕಾರಕ್ಕಾಗಿ ಒಟ್ಟಾದ ಹಣ ಅವಳ ಹಸಿವನ್ನು ನೀಗಿಸಲೂ ಸಹಾಯ ಮಾಡುತ್ತದೆ. ಅಸಹಾಯಕತೆ, ಆಸೆ ಕೊನೆಗೆ ಗಟ್ಟಿಯಾಗಿ ಅಳುವಲ್ಲಿಗೆ ಕಾಡುವ ವಿಷಯವಾಗಿ ಉಳಿಯುತ್ತದೆಯಷ್ಟೆ..

    ‘ತಲೆಗೊಂದು ಕೋಗಿಲೆ’ ಎನ್ನುವ ಕತೆಯಲ್ಲಿ ಊಹೆಯೆಂಬುದು ಕಟ್ಟುವಿಕೆಗೆ ಸಹಕಾರಿಯಾಗುತ್ತದೆ, ಆದರೆ ಯೋಚನೆ ಏನನ್ನೂ ಕಟ್ಟಲಾರದು ಎಂದು ಹೇಳುತ್ತಾರೆ. ಊಹೆ ಸುಳ್ಳನ್ನು ಅಲಂಕರಿಸುತ್ತದೆ, ಸತ್ಯವನ್ನು ಸುಳ್ಳಿನ ಕೋಟೆಯಲ್ಲಿಟ್ಟು ಕಾಪಾಡುತ್ತದೆ. ಪ್ರಾಣಿ ಪಕ್ಷಿಗಳ ಹೆಸರನ್ನು ಬರೆದಿಟ್ಟ ಹಲಗೆಗಳು ಯಾರಿಗಾಗಿ ಮತ್ತು ಯಾತಕ್ಕಾಗಿ ಇವೆ ಎಂದು ಕೇಳುತ್ತಾ ಅಸ್ತಿತ್ವದ ಬಗೆಗೆ ವಿಶ್ಲೇಷಿಸಿದ್ದಾರೆ.

     ಮನಸ್ಸಿನಲ್ಲಿರುವ ಆಸೆಗಳೇ ಕನಸುಗಳಾಗುತ್ತವೆ ಎಂಬುದು ‘ಉಳಿಕೆ’ ಕತೆಯಲ್ಲಿ ವ್ಯಕ್ತವಾಗಿದೆ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎನ್ನುವುದೂ ಸೂಚ್ಯ. ಬೆಳಕಿನಲ್ಲಿ ಕಲ್ಪನೆ ಬೆಳೆಯಲಾರದು, ಕತ್ತಲಿನಲ್ಲಿ ಮಾತ್ರವೇ ಕಲ್ಪನೆ ಬೆಳೆಯುವುದು, ಯಾಕಂದ್ರೆ ಕತ್ತಲೆಗೆ ನಿರ್ದಿಷ್ಟ ರೂಪು ಇರುವುದಿಲ್ಲ.. ಆದರೆ ಬೆಳಕಿನಲ್ಲಿ ಜಗತ್ತು ಸೀಮಿತವಾಗುತ್ತದೆ ಎಂಬುದು ಅತ್ಯಂತ ಆಳದ ವಿಷಯ. ಮರವೊಂದು ಉದುರಿದಾಗ ಅದರಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳೆಲ್ಲಾ ಹಾರಿಹೋಗುತ್ತವೆ ಅನ್ನುವಾಗ ಸಂಬಂಧಗಳ ಪದರಗಳು ಒಂದೊಂದೇ ಕಳಚಿಕೊಂಡಂತಾಗುತ್ತದೆ.

    ಸಾಯುವ ಕನಸೂ ಕೂಡ ಕೆಲವೊಮ್ಮೆ ಸುಂದರವಾಗಿ ಕಾಣುತ್ತದೆ ಎಂದಾಗ, ಬದುಕಿನ ಬಗೆಗಿನ ಒಬ್ಬ ವ್ಯಕ್ತಿಯ ದ್ವೇಷ ಅನಾವರಣವಾಗುತ್ತದೆ. ಅವನು ಬದುಕಿನ ಕ್ರೂರ ಆಘಾತಕ್ಕೆ ಸಿಲುಕಿ ಅದೆಷ್ಟು ನಲುಗಿರಬಹುದು ಎಂಬುದು ತಿಳಿಯುತ್ತದೆ. ಅಸಹಾಯಕತೆ, ಬಡತನ ಇದ್ದರೂ ಕೂಡ ಬಿಡದ ಸ್ವಾಭಿಮಾನ ಒಂದು ವಿಶಿಷ್ಟ ಅಂಶವಾಗಿ ಸ್ಥಾನ ಪಡೆದ ಕತೆ ‘ಚಂಬಣ್ಣನ ಬೊಂಬೆ ವ್ಯಾಪಾರ’. ಇಲ್ಲಿ ಹಣ ಕೂಡ ಗೌಣವಾಗಿದೆ ಸ್ವಾಭಿಮಾನದ ಇದಿರು..

    ‘ಅದೇ ಮುಖ’ ಎಂಬ ಕತೆಯಲ್ಲಿ ಚೌಕವನ್ನ ಚೌಕದ ಪಾಲಿಗೆ ಬಿಟ್ಟು ಚಲಿಸಲಾಗದೆ ಹೆಜ್ಜೆ ಕಿತ್ತಿಡಲಾಗದೆ ಇರುವ ಮರವನ್ನ ತಮ್ಮ ತಮ್ಮಲ್ಲೇ ಚೌಕಟ್ಟು ನಿರ್ಮಿಸಿಕೊಂಡು ಅದರಲ್ಲೇ ಒದ್ದಾಡುವ ಜನರ ಮನಃಸ್ಥಿತಿಯಯ ಚಿತ್ರಣವಿದೆ. ಯಾವುದೇ ಒಬ್ಬ ವ್ಯಕ್ತಿ, ಯಾವುದೋ ಒಂದು ಪ್ರದೇಶವನ್ನ ಅಥವಾ ಸಂಬಂಧವನ್ನ ಅತಿಯಾಗಿ ಹಚ್ಚಿಕೊಳ್ಳುವುದೆಂದರೆ ಅದು ಮಣ್ಣಿನಲ್ಲಿ ಸಿಕ್ಕಿಕೊಂಡ ಮರದ ಹಾಗೆ ಭಯಂಕರ ಹಿಂಸೆ, ಕೆಲವೊಮ್ಮೆ ಬಿಡಿಸಿಕೊಳ್ಳುವುದರಲ್ಲಿ ಮತ್ತು ಕ್ಷಮಿಸುವುದರಲ್ಲಿ ಬದುಕಿನ ಅರ್ಥ ಹುದುಗಿರಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ.

    ‘ಪುಟ್ಟಾರಿಯ ಮತಾಂತರ’ ನನ್ನನ್ನು ತುಂಬಾನೇ ಕಾಡಿದ ಕತೆ. ಸಂಬಂಧ ಎಂದರೇನು ಎಂಬ ಪ್ರಶ್ನೆಗೆ ಹಚ್ಚಿಕೊಂಡರೆ ಉಂಟು, ಬಿಟ್ಟರೆ ಇಲ್ಲ ಎಂಬ ಅತ್ಯಂತ ಸಮರ್ಪಕ ಉತ್ತರವನ್ನು ಕೊಟ್ಟಿದ್ದಾರೆ.  ನೆನಪುಗಳ ಮಹತ್ವವನ್ನು ಹೇಳುತ್ತಾ, ನೆನಪುಗಳು ಬೆಳೆಯದ ಯಾವ ವಸ್ತುವೂ ಸ್ವಂತದ್ದಾಗುವುದಿಲ್ಲವೇನೋ ಅನ್ನುತ್ತಾರೆ. ಧರ್ಮ ಶಾಸ್ತ್ರಗಳು ಒಬ್ಬ ಮನುಷ್ಯನ ಬದುಕನ್ನು ಕಟ್ಟಬೇಕು, ಮನಃಶಾಂತಿಯನ್ನು ನೀಡಬೇಕು. ಸಂತಸರಹಿತ ಧರ್ಮ ಆಚರಣೆ ಮತ್ತು ಕಟ್ಟಳೆಗಳು ಬದುಕಿನ ಅರ್ಥದಿಂದ ಬಲು ದೂರ ಎಂಬುದು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ.

    ಎಚ್ಚೆಸ್ವಿ ಅವರ ಪ್ರತಿಯೊಂದು ಕತೆಯಲ್ಲಿಯೂ ಹಳ್ಳಿಯ ಪರಿಸರದ ಸೊಗಡಿದೆ. ಮನುಷ್ಯ ಸಂಬಂಧಗಳ ವಿವಿಧ ಸ್ತರಗಳ ಜೀವನಾಡಿಯಂತೆ  ಅವರ ಕತೆಗಳಲ್ಲಿನ ಪಾತ್ರಗಳು ಮಿಡಿಯುತ್ತವೆ. ವಿಭಿನ್ನ ಮನಃಸ್ಥಿತಿಯ ಸಂವೇದಿನಿಯಾಗಿ ನಿಲ್ಲುತ್ತವೆ. ಒಂದಷ್ಟು ಕತೆಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿರುವಂತೆ ಕಂಡರೂ  ಆಳ ಬೇರೆಯದೇ ಇದೆ. ಮೇಲ್ಪದರ ಕಳಚಿ ಒಳಗಿಳಿದರೆ ಅದರ ಅನುಭೂತಿಯೇ ಬೇರೆ. ಹಲವಾರು ವಿಷಯಗಳು ಅವ್ಯಕ್ತವಾಗಿಯೂ ವ್ಯಕ್ತವಾಗಿರುವುದು ಅವರ ಕತೆಗಳ ಸೌಂದರ್ಯ. ಹೀಗಾಗಿ ಅವರ ಪ್ರತೀ ಕತೆಯೂ ತನ್ನ ಪ್ರತ್ಯೇಕತೆಯನ್ನ ಉಳಿಸಿಕೊಂಡಿದೆ...

                                                                                                                                             ~‘ಶ್ರೀ’
                                                                                                                                                 ತಲಗೇರಿ

ಶನಿವಾರ, ಜುಲೈ 30, 2016

"ಬಿನ್ನಹ"...

ಖಾಲಿ ಹೆದ್ದಾರಿಯಲಿ
ಗೆಜ್ಜೆ ಸೋಕಿ ಬಂದ ತಂಗಾಳಿ
ಎಲೆಗಳೆದೆಯ ಮೆದೆಯಲ್ಲಿ
ಮುಖ ಹುದುಗಿಸಿದ ಹೂಗಳಿಗೆ
ಹೇಳುತ್ತಿತ್ತು ಕೂಜನದ ಕತೆಯ..
ಅದು ನಿನ್ನದೇ ವಿಷಯ...

ನಂಬಿರಲಿಲ್ಲ ನಾನೂ
ನೀ ಕುಂಚ ಹಿಡಿವವರೆಗೆ
ಅರೆಗಂದು ಬಣ್ಣದ ಕನಸ ಇದಿರು..
ದಿನನಿತ್ಯ ಜಾತ್ರೆಯೀಗ
ಗದ್ದಲದ ನಡುವೆಯೂ
ಕಣ್ತುಂಬಿಕೊಳಲು ನೀನೊಂದು ತೇರು..
ಬಿದಿಗೆಯಾ ರಾತ್ರಿಯಲಿ
ಸ್ವೇದದಲಿ ನೆನೆದಿತ್ತು ನಾಚಿಕೆಯ ನವಿರು..

ಚಂದ್ರ ಸೊಕ್ಕುತಿಹ
ನಿನ್ನ ಬೆವರ ಹನಿಗಳ ಬಿಂಕಕ್ಕೆ
ಲೆಕ್ಕವಿಡಬೇಡ ಆಕಾಶದಿಂದುದುರುವ
ಜೊಂಪೆ ಜೊಂಪೆ ನಕ್ಷತ್ರಗಳ..
ಕಿಟಕಿ ಪರದೆಯಲಿ ಇರಲಿ
ಉತ್ಸವಕೆ ಮುಗಿಲ ಫಸಲು..

ಬೆಳಕಿನ ಮೋಹದಿಂದಲ್ಲ
ಪುಟ್ಟ ಹಣತೆ ಹಚ್ಚಿ ನಕ್ಕಿದ್ದು..
ಹೀಗೊಮ್ಮೆ ನೋಡಿಕೊಳಲು
ನಮ್ಮೀರ್ವರ ನೆರಳು ಬೆಸೆವುದ, ಮೊದಲು..
ನಿನ್ನ ಅಂಗಾಲ ಮೇಲೆ
ಒಂದರೆಗಳಿಗೆ
ಬೆರಳ ಪಲ್ಲವಿ ಬರೆವ
ಹಕ್ಕೀಗ ನನಗೆ ದೊರೆಯಬಹುದೇ..
ಪ್ರೀತಿಯಲಿ
ಕವಿಯಾಗುವುದು ನನಗೂ ಹೊಸದೇ!...

                                    ~‘ಶ್ರೀ’
                                        ತಲಗೇರಿ

ಭಾನುವಾರ, ಜುಲೈ 24, 2016

"ಕರೆ"...

ಎದೆಯೆದೆಯ ಬದು ದಾಟಿ
ಯಾವ ದಿಕ್ಕಲೋ ಒಂದು ಭೇಟಿ..
ಅತ್ತ ವಾರಿಧಿ ದೂರದಳತೆ
ಕವಲು ಕಲೆತು ಕಡಲ ಕವಿತೆ..
ಗರ್ಭದಲೇ ಬಿರಿದು
ಹಾದಿಯುದ್ದ ಟಿಸಿಲು, ಮತ್ತೆ ಒಂದೇ ಉಸಿರು..

ಒರಟು ಚರ್ಮದ ಬೆವರ ದಾರಿ
ಯಾವ ಉಳಿಯ ಬಿಸಿಯು ಜಾರಿ..
ಹೊಸತು ರೂಪ, ಹಡೆದ ಮೊದಲಿಗೆ
ಬಿಡದೇ ಮಿಸುಕುವ ಕಸುವು, ಎದುರಿಗೆ..
ಅರ್ಧದಲೇ ಮುರಿದು
ಬೆರಳು ಬಿಕ್ಕುವ ಸಮಯ, ನೆನೆದು ಸ್ಥಿರವದು ಹೃದಯ...

ಮಿಣುಕು ದೀಪದಿ ನೇಯ್ದು ಆಸೆಯ
ಯಾವ ಮಣ್ಣಲೋ ಕನಸ ಸಂಚಯ..
ಬಿಸಿಲ ತಾಪ, ಒಡೆದ ಗಳಿಗೆ
ಬಣ್ಣ ಬಳಿವುದು ಮೈಗೆ, ಕೊನೆಗೆ..
ಚಿಪ್ಪಿನಲೇ ಕಮರಿ
ಬೇರು ಬಿಡದಿರೆ ಹೇಗೆ, ಕಪ್ಪು ತಂಪಿನ ಕಾಯ!...

ಎಲ್ಲ ಇರುವಿನ ಹೆಗಲ ತುದಿಗೂ
ಜೋತುಬಿದ್ದ ಪುಟ್ಟ ಗಡಿಯಾರ..
ಪಿಸುದನಿಯ ಪರಿಮಿತಿಗೆ
ವೃತ್ತ ದಾಟುವ ಬಯಕೆ
ಹರಡಬಲ್ಲೆಯಾ ಕೇಳಿ, ಪಲುಕ ಲಹರಿ...

                                  ~‘ಶ್ರೀ’
                                      ತಲಗೇರಿ

ಬುಧವಾರ, ಜುಲೈ 20, 2016

"ಬೆರಗು"...

ಘಮ್ಮೆಂದು ಸದ್ದಿಲ್ಲದೆ
ಬಿರಿದ ಕತ್ತಲೆಯ ನಡುವಲ್ಲಿ
ಬಿತ್ತಿಹೆನು ಬೆಳಕಿನ ಬೀಜ..
ಗರ್ಭದಲಿ ಧಾತು
ಹೊರ ಕವಚ ಕಳಚಿ
ದಿಕ್ಕುಗಳ ಪಾದ ಧೂಳಿಯ
ಕಣಕೆ ಕೊಬ್ಬಿರಲು
ಒಸರುವುದು ಕಪ್ಪು ರಸವೋ,
ಇಲ್ಲಾ, ಬಿಳಿಯ ಬೂದಿಯೋ!
ಹುಡುಕಿದರೆ ನೆಪಕಷ್ಟೇ
ಎದೆಗೊಂದು ಬೇಲಿ...

ಇಹುದೇ, ಪೊರೆವ ಸದ್ದಿನ
ತೊದಲು ಕಡಲಿಗೆ
ಅಲೆಯ ಹಚ್ಚಿಕೊಳಲೊಂದು
ತಟದ ತುಡಿತ..
ಅರ್ಧ ರೆಕ್ಕೆಯ ಸುಳಿಗೆ
ಹುಟ್ಟಿಕೊಂತೇ
ಮುಕ್ತವಾಗುವ ಬಯಕೆ..
ಗಾಳಿಗುಂಟ ಅಂಟಿಬಂದು
ಕರೆವ ಹೆಜ್ಜೆ ಮೊರೆತ!..

ಹಡೆದ ಒಗರು ತಿಮಿರ
ಅರೆ ನಾಚಿಕೆಯ ಮುಗುಳು
ಅಲ್ಲಲ್ಲಿ ಬೇಲಿ ವೃತ್ತದಲಿ..
ಬೇರ ನರದಲಿ
ಹರಿದ ದ್ಯುತಿಗೆ
ಯಾರ ಕಸುವಿನ ಬಿಸಿಲು..
ಒಲವು ಹುಟ್ಟಿದ್ದೋ, ಹುಟ್ಟಿಸಿದ್ದೋ!..
ಬಿಕ್ಕುವಿಕೆ, ದನಿಯಿಲ್ಲದ ಸದ್ದು..
ಇಲ್ಲದಿದ್ದರೂ ಇದೆ ಬೆರಗು
ಒಳಗೂ ಹೊರಗೂ
ಅಂತರದ ನಡುವಲ್ಲಿ!...

                   ~‘ಶ್ರೀ’
                     ತಲಗೇರಿ

ಮಂಗಳವಾರ, ಜೂನ್ 7, 2016

"ಅಲೆಮಾರಿ"...

ಚಪ್ಪರದ ತೂತಿಂದ
ಸ್ಖಲಿತ ಭ್ರಮೆಯ ರಸಗವಳ
ತುಂಬಿಕೊಳಲೆಂದು ನಿಲ್ಲದಾ ಓಟ..
ಒಂದೇ ನೀಲಿ ಹಾಸಿನ ಅಡಿಗೆ
ವ್ಯಾಪ್ತಿಗಳ ಸಹಿಯಿಹುದೇ!
ದಿಕ್ಕು ಬದಲಿಸುವ ಹಣತೆಗಳಿಗೆ
ನಾ ಗೋಡೆ ಮೇಲಣ ನೆರಳೇ?!..

ಅವಳ ದೇಹದ ಬೀದಿಯ
ಉಬ್ಬು ತಗ್ಗುಗಳಲ್ಲಿ ಇಣುಕಿದಾಗ
ಸ್ವೇದ ಟಿಸಿಲೊಡೆವ ಹಾದಿಯಲಿ
ಅದೆಂಥ ಕುಸುರಿಯೋ!
ಖಾಸಗಿ ಬಿಡಾರ ಹೂಡಲು
ತುಸು ತುಸುವೇ
ಋತುಗಳಿಗೆ ತುತ್ತನಿಡುತಿಹ
ಮೈಧೂಪ ಲಹರಿಯೋ!..
ನಿಯಮಿತವಲ್ಲ;
ಆಗಬಹುದು ನಾಳೆಯೇ ನಿರ್ವಾತ...

ಸುಟ್ಟಿರುವ ಹೂವ ಗಂಧ
ಸತ್ತಿದ್ದಾದರೂ ಹೇಗೆ?
ಅಥವಾ ಇಲ್ಲೆಲ್ಲೋ ಗಾಳಿಯಲ್ಲಿ
ಅನಾಥವಾಗಿ ಅಲೆಯುತ್ತಿರಬಹುದೇ
ಮತ್ತೊಂದು ಹೂವರಳಲು;
ಆತ್ಮದಂತೆ!...

ನಿಶೆಗೀಗ ಹಲವು ಬಣ್ಣ
ಬೆಳಕಿನಾ ಅಮಲು ನಡು ನೆತ್ತಿಗೇರಿ..
ನನ್ನೊಳಗೆ ನಾ ಇಳಿದಂತೆ
ಅರ್ಥವಾಗದ ಗದ್ದಲ ಪ್ರತಿ ಸಾರಿ..
ಈಗಲೂ
ಅಂತರ್ ಬಹಿರ್ ಮಧ್ಯಂತರದಿ
ನಾ ಅಲೆಮಾರಿ!...

                             ~‘ಶ್ರೀ’
                                 ತಲಗೇರಿ

ಶನಿವಾರ, ಮೇ 21, 2016

"ಪಾರ್ಲರ್ ಕಿಟಕಿಯ ಒಳ ಹೊರಗೂ..."

             ‘ಅವಧಿ’ಯಲ್ಲಿ ಜಯಂತ್ ಕಾಯ್ಕಿಣಿ ಸರ್ ಅವರ ಒಂದು ಲಹರಿ ಪ್ರಕಟವಾಗಿತ್ತು. ಅದನ್ನೇ ಎಳೆಯಾಗಿಟ್ಟುಕೊಂಡು ನಾನು ಬರೆದಂಥ ಲೇಖನ ಕೂಡ ಪ್ರಕಟವಾಗಿದೆ :) :) :)    



"ಪಾರ್ಲರ್ ಕಿಟಕಿಯ ಒಳ ಹೊರಗೂ..."


ಬಂದ ಕ್ಷಣದಿಂದ ಬರೀ ಕುತ್ಕೊಂಡ್ ಕಾಯೋದೇ ಆಗೋಯ್ತು, ಅಂದ್ಕೊಳ್ತಾ ಇದ್ದೆ ಮನಸ್ಸಿನಲ್ಲಿ! ಕಾಯುವಿಕೆಯಲ್ಲೂ ಖುಷಿ ಇದೆಯಂತೆ, ಜೊತೆ ಕೊಡೋ ಜೀವ ಇದ್ರೆ.. ! ಕನ್ನಡಿಯತ್ತ ನೋಡ್ದೆ;ಅದೇನು ಆಸೆಗಳೋ ನಮಗೆ..ಕಣ್ಣ ಹುಬ್ಬನ್ನ ತೀಡಬೇಕಂತೆ, ಗುಲಾಬಿಯ ಎಸಳುಗಳಂತೆ ಕದಪು ರಂಗೇರಬೇಕಂತೆ.. ಚರ್ಮಕ್ಕೂ ಕಾಂತಿ ಹಚ್ಚಬೇಕಂತೆ... ಸುತ್ತಮುತ್ತಲೂ ಕಾಣುವ ಕನ್ನಡಿಗಳಲ್ಲಿ ಒಂದೊಂದಕ್ಕೆ ಒಂದೊಂದು ತರದ ಫ್ರೇಮ್ ! ಎಲ್ಲದರಲ್ಲೂ ಬಂಧಿ ನಮ್ಮ ಪ್ರತಿಬಿಂಬ... ಅಲ್ಲಲ್ಲಿ ಹರಡಿರುವ ಬ್ರಶ್ಗಳು, ಹಾಗೇ ಸಣ್ಣದಾಗಿ ಅಣಕಿಸುವ ಬಣ್ಣದ ಕಲೆಗಳು... ಅದಾಗ್ಲೇ ಸಂಜೆ ಆಗ್ತಾ ಬಂತು, ಇನ್ನೂ ಎಷ್ಟೊತ್ತು ಅಂತ ಕಾಯುವುದು! ಅಂತ ಯೋಚಿಸ್ತಾ ಪಾರ್ಲರಿನ ಕಿಟಕಿಯಲ್ಲಿ ಇಣುಕಿದೆ.

ಹವಾಮಾನಕ್ಕೆ ಸಂಜೆಯ ಪರಿಮಳ ಸೋಕಿತ್ತು. ನೀಲಿ ನೀಲಿ ಪೆಟ್ಟಿಗೆಗಳ ಕೈ ಗಾಡಿಗಳು ರಸ್ತೆಗಿಳಿದಿದ್ದವು. ಕಾದ ಬಂಡಿಯ ಎಣ್ಣೆಯಲ್ಲಿ ಮುಳುಗೇಳುವ ಬೋಂಡಾ ಭಜ್ಜಿಗಳು, ದೊಡ್ಡ ದೊಡ್ಡ ಬಾಣಲೆಗಳಲ್ಲಿ ಬಣ್ಣ ಬಣ್ಣದ ಮಸಾಲೆ ಸವರಿಕೊಂಡು ಕುಳಿತ ಅನ್ನದಗುಳುಗಳು.. ನಾನಾ ವಿಧದ ವೇಷ ತೊಡಲು ಸಜ್ಜಾಗುತ್ತಿರುವ ಪುರಿಗಳು.. ಇದೇ ಮೊದಲ ಬಾರಿ ಎಂಬಂತೆ ಚಪ್ಪರಿಸಿ ತಿನ್ನುತ್ತಿರುವ ಇನ್ಯಾರ್ಯಾರೋ.. ! ರಸ್ತೆಯ ಇಕ್ಕೆಲಗಳಲ್ಲಿ ನಿನ್ನೆ ಇಂದು ನಾಳೆಗಳನ್ನ ತಮ್ಮ ತಮ್ಮದೇ ಧಾಟಿಯಲ್ಲಿ ಅನುಭವಿಸುತ್ತಿರುವ ಜನ ಸಮೂಹ. ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಮೊಮ್ಮಗಳ ಕೈ ಹಿಡಿದು ಬರುತ್ತಿರುವ ತಾತ, ಅಪ್ಪನ ಹೆಗಲ ಮೇಲೆ ಕುಳಿತ ರಾಜ ಠೀವಿಯ ಮಗ, ಪಾಪುವಿನ ಕೆನ್ನೆ ಹಿಂಡುತ್ತ ಮುದ್ದಿಸುತ್ತಿರುವ ಅಮ್ಮ, ಗೆಳೆತಿಯನ್ನ ಸೈಕಲ್ ಮೇಲೆ ಕೂರಿಸ್ಕೊಂಡು ಜಗತ್ತನೇ ಗೆದ್ದ ಸಂಭ್ರಮದ ಕಣ್ಣ ಹೊಳಪಿನ ಗೆಳೆಯ, ಮೋಡ ಕವಿದ ಆ ಮಳೆಗಾಲದ ಸಂಜೆಯಲ್ಲಿ ತಮ್ಮ ತಮ್ಮ ಗೂಡುಗಳಲ್ಲಿ ಬೆಚ್ಚನೆ ಮಲಗಿಸಿಟ್ಟು ಬಂದ ಮರಿಗಳಿಗಾಗಿ ತುತ್ತು ಕೊಂಡೊಯ್ಯುತ್ತಿರುವ ಹಕ್ಕಿ ಸಾಲು.. ಒಂದು ಕಡೆ ತಮ್ಮದೇ ಲೋಕಗಳಲ್ಲಿ ಮುಳುಗಿರುವ ಜನರ ಗಿಜಿಗಿಜಿ; ಇನ್ನೊಂದೆಡೆ ಪ್ರತ್ಯೇಕ ಜಗತ್ತನ್ನೇ ಕಟ್ಟಿಕೊಡುವ ಪ್ರಕೃತಿಯ ಕಲರವ.ಈ ಕ್ಷಣವನ್ನ ಹೀಗೆ ನಿಲ್ಸೋ ಹಾಗಿದ್ದಿದ್ರೆ ಎಷ್ಟು ಚೆಂದ ಅಲ್ವಾ!.. ನಮ್ಮ ಕಣ್ಣುಗಳಲ್ಲಿ ಸೆರೆಯಾಗೋ ಅದೆಷ್ಟೋ ಕ್ಷಣಗಳಿಗಿರುವ ಮೌಲ್ಯ, ಕ್ಯಾಮೆರಾಗಳಲ್ಲಿ ನಾವು ಸೆರೆಹಿಡಿಯೋ ಅದೆಷ್ಟೋ ಚಿತ್ರಗಳಿಗೆ ಇಲ್ಲ ಅನಿಸುತ್ತದೆ, ಯಾಕೆ ಗೊತ್ತಾ, ನಾವು ಕಣ್ಣುಗಳಲ್ಲಿ ಸೆರೆಹಿಡಿಯೋ ಚಿತ್ರ ಭಾವಗಳೊಂದಿಗೆ ಬೆಸೆದುಕೊಂಡಿರುತ್ತದೆ, ಅದನ್ನ ಅನುಭವಿಸಿದ ಕ್ಷಣದ ಮಜವೇ ಬೇರೆ!..

ಅಷ್ಟರಲ್ಲಿ ರಸ್ತೆಯ ಆ ತುದಿಯಿಂದ ಯಾರೊ ಒಬ್ಬ ಹುಡುಗ ಬಲೂನುಗಳನ್ನು ಹಿಡಿದುಕೊಂಡು ಬಂದ. ಹಾಕಿಕೊಂಡ ಬಟ್ಟೆಗಳು ಕೊಳೆಯಾಗಿದ್ದರೂ ಮುಖದಲ್ಲಿನ ಮಂದಹಾಸ ಎಂಥವರನ್ನೂ ಒಂದು ಕ್ಷಣ ಸೆಳೆದುಬಿಡುವಂತಿತ್ತು.. ಮೊಮ್ಮಗಳ ಜೊತೆ ಬಂದಿದ್ದ ತಾತ ಅಲ್ಲೇ ಹತ್ತಿರದ ಬೇಕರಿಯಲ್ಲಿ ಬ್ರೆಡ್ ತೆಗೆದುಕೊಳ್ತಾ ಇದ್ರು. ಈ ಹುಡುಗ ಬಂದು ಅಲ್ಲೇ ಎದುರಲ್ಲಿ ನಿಂತ; ತಾತನ ಜೊತೆ ಬಂದಿದ್ದ ಪುಟ್ಟ ಹುಡುಗಿಯ ಕೈಲಿದ್ದ ಬ್ರೆಡ್ಡನ್ನೇ ನೋಡುತ್ತಾ.. ಅದನ್ನು ನೋಡಿದ ಅಂಗಡಿಯವನು, ಇಲ್ಲ್ಯಾರಿಗೂ ಬಲೂನು ಬೇಕಾಗಿಲ್ಲ, ಹೋಗು ಹೋಗು ಅಂತ ದಬಾಯಿಸತೊಡಗಿದ. ಆದರೆ ಆ ಹುಡುಗ ಮಾತ್ರ ಅವಳ ಕೈಲಿದ್ದ ಬ್ರೆಡ್ಡನ್ನೇ ನೋಡುತ್ತಾ ನಿಂತಿದ್ದ. ಅದನ್ನು ಗಮನಿಸಿದ ತಾತ, ಒಂದೆರಡು ಬ್ರೆಡ್ ತೆಗೆದು ಆ ಹುಡುಗನಿಗೆ ಕೊಟ್ರು. ಮೊದಲು ಸಂಕೋಚಪಟ್ಟುಕೊಂಡ ಹುಡುಗ, ತಾತ, ಪರವಾಗಿಲ್ಲ ತಗೋ ಅಂತ ಹೇಳಿದ ಕೂಡಲೇ ಖುಷಿಯಿಂದ ತೆಗೆದುಕೊಂಡು ತಿನ್ನತೊಡಗಿದ. ಹಸಿವಾದಾಗ ಸಿಕ್ಕಂತಹ ಆ ಬ್ರೆಡ್ಡಿನ ರುಚಿ ಎಷ್ಟಿರಬಹುದು!..ಹಾಗೇ ಒಂದಷ್ಟು ಬಲೂನುಗಳನ್ನು ತೆಗೆದು ಆ ಪುಟಾಣಿ ಹುಡುಗಿಯ ಕೈಯಲ್ಲಿಟ್ಟ ಹುಡುಗ, ತಾತನೆಡೆಗೆ ಒಂದು ವಿಶಿಷ್ಟ ನೋಟ ಬೀರಿ, ಮುಂದೆ ನಡೆದ. ಇವೆಲ್ಲವನ್ನೂ ಕಿಟಕಿಯಿಂದ ನೋಡುತ್ತಿದ್ದ ನನಗೆ "ಅಬ್ಬಾ!" ಅನಿಸಿತು. ಹುಡುಗನ ಹಸಿವನ್ನು ಅರ್ಥ ಮಾಡಿಕೊಂಡ ತಾತ, ಕೃತಜ್ಞತೆಯನ್ನು ಬಣ್ಣ ಬಣ್ಣದ ಬಲೂನುಗಳ ಮೂಲಕ ಸಲ್ಲಿಸಿದ ಆ ಬಾಲಕ, ಬದುಕು ಅದೆಷ್ಟು ಚೆಂದ ಅಲ್ವಾ!.. ಕೆಲವೊಂದು ಸಲ ನಾವು ನಮ್ಮ ಸುತ್ತಮುತ್ತಲೂ ಏನು ನಡೀತಾ ಇದೆ ಅನ್ನೋದನ್ನೇ ಗಮನಿಸೋದಿಲ್ಲ. ಖುಷಿ, ಎಲ್ಲೋ ಇರುವ ವಸ್ತು ಅಲ್ಲ; ನಾವು ಸೃಷ್ಟಿಸಿಕೊಳ್ಳಬೇಕಾದದ್ದು ಅನ್ನಿಸ್ತು. ಪಾರ್ಲರ್ ಒಳಗಿನ ಕನ್ನಡಿ ನನ್ನನ್ನ ನೋಡಿ ಗಹಗಹಿಸಿದಂತೆ ಕಂಡಿತು. ಪಾರ್ಲರ್ ಒಳಗೆ ಕೂರಲು ಮನಸ್ಸಾಗಲಿಲ್ಲ; ಹೊರಗೆ ಕಾಲಿಟ್ಟೆ. ಮಳೆ ಜಿನುಗುವುದಕ್ಕೆ ಶುರು ಆಯ್ತು. ಅಲ್ಲೇ ಪಕ್ಕದಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಒಂದು ಕಪ್ ಚಹಾ ಕೇಳಿ ಪಡೆದು, ಅದನ್ನು ಹೀರುತ್ತಾ ನಿಂತೆ. ಮಳೆ ಹನಿಗಳು ಪ್ರೀತಿಯಿಂದ ಭೂಮಿಯನ್ನು ಸ್ಪರ್ಶಿಸ್ತಾ ಇದ್ವು.. ಮತ್ತೆ ಪಾರ್ಲರಿನ ಕಿಟಕಿಯ ನೆನಪಾಯ್ತು. ಮತ್ತ್ಯಾರಾದರೂ ಬಂದು ಕೂತಿರಬಹುದು. ಅವರ ಫ಼್ರೇಮಿನಲ್ಲಿ ನಾನೂ ಒಂದು ಚೆಂದ ಚಿತ್ರ ಆಗ್ಲಿ ಅಂದ್ಕೊಳ್ತಾ ಮುಗುಳ್ನಗತೊಡಗಿದೆ. ಏನ್ ಮ್ಯಾಡಮ್! ಟೀ ಚೆನ್ನಾಗಿದ್ಯಾ? ಅಂದ ಅಂಗಡಿಯವ. ಈ ಮಳೇಲಿ ನೀವು ಕೊಟ್ಟಿರೋ ಚಹಾದ ಪರಿಮಳಕ್ಕೆ ಮತ್ತೊಂದಿಷ್ಟು ಹೊತ್ತು ಮಳೆ ಸುರೀತಾನೇ ಇರ್ಲಿ ಅನ್ನಿಸ್ತಿದೆ ಅಂದೆ. ಅರೆರೆ! ಅಂಗಡಿಯವನ ಕಣ್ಣುಗಳಲ್ಲಿ ಅದೆಂಥದೋ ಹೊಳಪು, ಏನನ್ನೋ ಸಾಧಿಸಿದ ಸಂತೃಪ್ತ ಭಾವ.. ! ಇಷ್ಟೇ ಅಲ್ವಾ ಬದುಕು, ಖುಷಿ ಅನ್ನುವುದು ನಾವು ಸೃಷ್ಟಿಸಿಕೊಳ್ಳಬೇಕಾದ ಸರಕು...

                                                                                                                                                  ~‘ಶ್ರೀ’
                                                                                                                                                      ತಲಗೇರಿ

‘ಅವಧಿ’ಯಲ್ಲಿ ಪ್ರಕಟವಾದ ನನ್ನ ಲೇಖನದ ಕೊಂಡಿ ಇಲ್ಲಿದೆ : http://avadhimag.com/2016/05/21/%E0%B2%95%E0%B2%BE%E0%B2%AF%E0%B3%8D%E0%B2%95%E0%B2%BF%E0%B2%A3%E0%B2%BF-%E0%B2%95%E0%B2%BF%E0%B2%9F%E0%B2%95%E0%B2%BF/

ಗುರುವಾರ, ಮೇ 19, 2016

"ಸ್ವತ್ತು"...

ಬಿಕ್ಕಿದ ಮಳೆಯಲ್ಲಿ
ಬಣ್ಣ ಕಳೆದುಕೊಂಡ
ಪಾತರಗಿತ್ತಿಗಳ ರೆಕ್ಕೆಯನ್ನು
ಓರೆಗಣ್ಣಿಂದ ನೋಡುತ್ತ
ಮಾತನಾಡುತ್ತಾರೆ
ಅವರವರ ನೋಟಕ್ಕೆ
ನಿಲುಕಿದಷ್ಟನ್ನು...

ಹೆಸರು ಹೇಳಲು
ಹೊರಟವನು ಕಂಗಾಲಾಗುತ್ತಾನೆ
ತನ್ನೊಳಗೇ ಇರುವ
ಹೆಣ್ಣು ಗಂಡಿನ ಮಿಶ್ರ ಭಾವಕ್ಕೆ!
ಗಳಿಸಿಕೊಂಡಿದ್ದೇ ಈ ಹೆಸರನ್ನು?
ಅಥವಾ, ಉಳಿಸಿಕೊಂಡಿದ್ದೇ!..

ಆಗಸದಲ್ಲಿರುವ ಬಿರುಕುಗಳ
ಹೊಲಿಯುವೆನೆಂದು ಹೋದಾತನ
ಚರ್ಮದ ರಂಧ್ರಗಳಲ್ಲಿ ಬೆವರು..
ಚಂದ್ರನ ಮೇಲಿರುವ
ಹೆಜ್ಜೆ ಗುರುತುಗಳ ಕಂಡು
ನನಗ್ಯಾಕೆ ಇಲ್ಲದ ಉಸಾಬರಿ!
ಬೆಳಕು ಸೋರಿದ್ದು ದೀಪಗಳ
ಹಚ್ಚಲೆಂದಲ್ಲ; ಕಳೆಯಲೆಂದು
ಬೇಸರ, ಆ ನೇಸರ...

ಉದ್ಯಾನದ ಕಲ್ಲಿನಾಸನಗಳು
ಅದೆಷ್ಟು ಬೆವರ ವಾಸನೆಯ
ಹೀರಿವೆಯೋ; ಪ್ರಣಯದ
ಪಿಸುಮಾತುಗಳ ಇದಿರು
ನಾಚಿ ಕೆರಳಿವೆಯೋ!
ಆದರೂ, ಒಂದಿನಿತು ತನ್ನ
ಗುಟ್ಟು ಬಿಟ್ಟುಕೊಡದ ನಿರ್ಲಿಪ್ತ...

ನಾ ಬಿಡಿಸಿಟ್ಟುಕೊಂಡಿದ್ದ ಚಿತ್ತಾರಗಳಿಗೆ
ನಿನ್ನ ಚಾದರದಲ್ಲೇನು ಕೆಲಸ!..
ಪ್ರಾಮಾಣಿಕನಾಗಿದ್ದರೆ ಕೇಳು,
ಬೇಲಿ ಹಾಕಿದ್ದು ನೀ ನನಗಲ್ಲ,
ಕನಸಿನ ಒಂದೆರಡು
ಬಿಡಿ ಸರಕುಗಳಿಗಷ್ಟೇ!...

                             ~‘ಶ್ರೀ’
                                 ತಲಗೇರಿ

ಗುರುವಾರ, ಮೇ 12, 2016

"ಹುಟ್ಟು"...

ನರಗಳಲ್ಲಿ ತುಂಬಿ ಹರಿವ
ರಕ್ತಕ್ಕೆ ಅದೆಂಥ ವಾಸನೆಯೋ..
ಮತ್ತೆ ಮತ್ತೆ ಕೆಂಪಾಗುತ್ತ
ಕಪ್ಪಾಗಿ ಹೆಪ್ಪಾಗುತ್ತದೆ
ಆಸೆಗಳ ತೆಕ್ಕೆಯಲ್ಲಿ..

ಚರ್ಮದಾ ವ್ಯಾಮೋಹದಲಿ
ಅಂಟಿಕೊಂಡ ರೋಮಗಳು
ನಿಲ್ಲುತ್ತವೆ ಭಗ್ಗನೆ
ಕಣ್ಣು ಕಿವಿಗಳ ಕೀರಲು ಸ್ವರದ
ಆಸ್ವಾದಕ್ಕೆ..

ಎಲ್ಲಿಯದೋ ಮಣ್ಣ ಕಣಕ್ಕೆ
ಯಾವ ಉಗುರ ಸಂಧಿಯ ಋಣವೋ!
ಕೊಳೆತಿದೆ ಬಿತ್ತಿದ್ದ ಬೀಜ;
ಹಸಿರ ಹಡೆಯುವ ವಿಷಯದಲ್ಲಿ
ನೀರು, ಬೆಳಕು, ಮಣ್ಣು ಸ್ತಬ್ಧವೀಗ..

ಕೀಲುಗಳಿಗೆಲ್ಲ ಎಣ್ಣೆ ಸವರಿ
ಬಯಲಿನಲ್ಲಿ ಬಿಟ್ಟಿದ್ದೇನೆ ಬೊಂಬೆಗಳ..
ಚಿಟ್ಟೆಯ ರೆಕ್ಕೆಗಳ ಬಣ್ಣದ ಹುಡಿ
ಗಾಳಿಯಲ್ಲಿ ಲೀನ ಯಾರಿಗೂ ಕಾಣದಂತೆ!
ತಮ್ಮನ್ನೇ ತಾವು
ಕಳೆದುಕೊಂಡಂತಾಡುತ್ತಿವೆ ಬೊಂಬೆಗಳು..!
ಕೃತಕವಾಗುತ್ತಿವೆ ಹಗಲು ರಾತ್ರಿ
ಬೇರ್ಪಡಿಸಲಾಗದಂತೆ..

ಬೇಲಿ ಕಟ್ಟಬೇಕೀಗ
ನನದೆಂಬ ವ್ಯಾಪ್ತಿಗೆ..!
ಎಳೆದಿದ್ದ ಗೆರೆಯನೆಲ್ಲ
ಕಂಗೆಡಿಸುವೆನೆಂದು
ಶಪಥ ತೊಟ್ಟಿದ್ದಾಳೆ ಅವಳು
ಗೋಡೆಗಳನೆಲ್ಲ ಕೆಡವಿ
ತುಂಡಾದ ಹಂಚಿನ ಮೇಲೆ
ಹಣತೆಯಿಟ್ಟು;
ಜರಿ ಉದುರಿದ ಸೀರೆಯನುಟ್ಟು..
ಹುಟ್ಟು ಯಾರೆದೆಯಲ್ಲಿ ಸೃಜಿಸಿದ
ಸತ್ಯ ಸ್ವಪ್ನವೋ!...

                           ~‘ಶ್ರೀ’
                               ತಲಗೇರಿ

ಶನಿವಾರ, ಮೇ 7, 2016

"ಬಂಧ"...

ಅದೆಷ್ಟೋ ಆಸೆಗಳ
ಅಷ್ಟಷ್ಟೇ ಶೇಖರಿಸಿ
ತವಕದಾ ಬಿಸಿಗೆ ಮೈ ಬಿರಿದು
ಹಂಬಲದ ಹಸಿವಿನಾ ಪರಿಮಳವ
ಸೂಸುತ್ತ ಮಲಗಿಹುದು ಭೂಮಿ..
ಉಸಿರ ಲಯದಿ ಮೆಲ್ಲ
ಹೊಕ್ಕಿತು ಮಿಲನ ಗಾಳಿ..
ಸೃಷ್ಟಿಯೆಲ್ಲ ಸಖ್ಯ ಸುಧೆಯು
ಎದೆಯ ಸೇರಿತ್ತು ಮಳೆಯ ಹನಿಗಳಲಿ...

ಅವನು ಇವಳು
ಹೊಸೆದು ಬರೆದ ಮುಗಿಲ ಬಿಲ್ಲು..
ಒಂದೆಂದ ಕ್ಷಣಕೀಗ
ಯಾವ ಬಣ್ಣ!
ಹೆಜ್ಜೆ ನಾಚಲು
ಅಲ್ಲೇ ಮುಲುಗಿತು ನವಿಲು..
ನುಸುಳುವ ಬಿಸಿಲ ಅಲೆಗೆ
ಬೇಲಿಗಳ ಕಿತ್ತೆಸೆದು
ಬೆರಗು ಮೌನದಿ ಈಗ
ಧ್ಯಾನಸ್ಥ ಬಯಲು...

ದಿಕ್ಕು ದಿಕ್ಕಲಿ ವಕ್ರ ವಾರ್ತೆಯ
ಚೆಲ್ಲಿ ಕೂರುವ ಅಪಸ್ವರ..
ಚಂದ್ರ ಚಲನೆಯ ಅಂಕುಡೊಂಕಿಗೆ
ಕಡಲ ಎದೆಯಲಿ ಏರುಪೇರು..
ಉಳಿಸುವುದು ಹೇಗೆ
ಮಳಲ ಮೇಲೆ
ನೆರಳು ಬರೆದ ಹೆಸರ..!

ಅಂಟಿಕೊಳ್ಳುವ ಆಸೆಯಿದ್ದರೆ
ಶಂಖ ಚಿಪ್ಪುಗಳ ಭಿತ್ತಿ ಚಿತ್ತಾರ
ಮತ್ತೆ ಮಗುಚಲು ಇರುಳು..
ಬೆಸೆದ ಬೆರಳಿವೆ ತೀರದಾಚೆಗೂ..
ಕಾದ ಕಿವಿಯಿದೆ ಮುರಲಿಗೂ..!
ಮತ್ತೆ ಬೆಳಕಿನ ರಾತ್ರಿ
ಸಮಯ ಕೊಡುವುದು ಚಕ್ರವಾಕ
ಜಂಟಿಯಾಗಿ ಕೂತು
ಅವನಿಗೂ, ಇವಳಿಗೂ...

                            ~‘ಶ್ರೀ’
                                ತಲಗೇರಿ

ಶನಿವಾರ, ಏಪ್ರಿಲ್ 30, 2016

"ಅಸ್ತಿತ್ವ"...

ರಾತ್ರಿ ಕಂಡ ಸ್ವಪ್ನಗಳ ಗಂಧ
ಅಂಟಿಕೊಂಡಿಲ್ಲ ಅಕ್ಷಿಪಟಲಕ್ಕೆ..
ಉಳಿದಿಲ್ಲ ಪರದೆಯಂತಿದ್ದ
ಅದ್ಯಾವುದೋ ವಿಸ್ತಾರದಲ್ಲಿ
ಬಣ್ಣಗಳ ನೆರಳು..
ಸ್ವಪ್ನವೂ ಬರಿಯ ಸ್ವಪ್ನವೇ!..

ಮುರುಕು ಗೋಡೆಯ ತೂತಿನಲ್ಲಿ
ಕಂಡಷ್ಟೇ ಜಗತ್ತೆಂದರೆ
ಬಿರುಕುಗಳಾಚೆ ಹರಡಿರುವ
ಇಟ್ಟಿಗೆಯ ಅಸ್ತಿತ್ವವೇನು!
ನೋಟ, ನಾವೇ ನಿರ್ಮಿಸಿಕೊಂಡ
ಆಗ ಈಗಿನ ಪರಿಧಿ..

ಈಗಷ್ಟೇ ಬಿರಿದ ಹೂವ ಪರಿಮಳದ
ತಂತು, ಮಣ್ಣಿನದೇ ಸೂರ್ಯನದೇ
ನೀರಿನದೇ, ಇಲ್ಲಾ
ದುಂಬಿಯ ಕಾಲ ಧೂಳಿನದೇ..
ಆಘ್ರಾಣಿಸಿದ ನಾಸಿಕಕ್ಕೆ
ನಿಲುಕಿದ್ದೇ ಅನುಭವ..

ಪ್ರಾಯದಾ ಧಾತುವಿನ ಪೊರೆಗೆ
ಒಸರಿಕೊಂಡ ನಾನು ನೀನು
ಕೇವಲ ಮತ್ತೊಬ್ಬನ ಭಾವವೇ!
ಅಲೆಯುತ್ತೇವೆ ವಿಳಾಸದ ಗುಂಗಿನಲ್ಲಿ..
ಅವರಿವರ ಮನೆಯ ಭಿತ್ತಿಗಳಲ್ಲಿ
ಮತ್ತೆ ಮತ್ತೆ ಹಳಸು ಹೊಸತು ಸುತ್ತಿನಲ್ಲಿ...

                               ~‘ಶ್ರೀ’
                                 ತಲಗೇರಿ

ಗುರುವಾರ, ಏಪ್ರಿಲ್ 14, 2016

"ಧ್ವನಿ"...

ಯಾರು ಹೇಳಿದ್ದು
ಅವು ಮಾತನಾಡುವುದಿಲ್ಲವೆಂದು!..
ನಮಗೆ ನಾವೇ
ಹಲ್ಲು ಮಸೆಯುವ ಶಬ್ದಕ್ಕೆ
ಸುಮ್ಮನಾಗಿವೆ ಬೇಕಂತಲೇ..

ಪಕ್ಕದ ಖಾನಾವಳಿಯ
ಖುರ್ಚಿಗಳಿಗೆ ಗೊತ್ತಿರಬಹುದು
ಹಸಿವಿನ ವಾಸನೆಯ ಅದೆಷ್ಟೋ ಕತೆ..
ಮೇಜುಗಳ ಮೇಲೆ ಬಿದ್ದ
ಚಹಾವನ್ನು ಒರೆಸಿಬಿಡುತ್ತೇವೆ
ಅದರ ಬಿಸಿ ಆರುವುದರೊಳಗೆ..

ಹಾದಿ ಬದಿಯಲ್ಲಿ ಹರಿದು ಬಿದ್ದ
ಚಪ್ಪಲಿಯ ಮೈಗೆ
ಅಂಟಿಕೊಂಡಿರಬಹುದು
ಅದೆಷ್ಟೋ ಹಗಲಿರುಳುಗಳ
ಬೆವರ ಹನಿಯ ಕಲೆಗಳು..
ಆದರೆ ಕೊನೆಗೆ ಕೆಲವೊಮ್ಮೆ
ಇನ್ನೊಂದು ಚಪ್ಪಲಿಯ
ಜೊತೆಯೂ ಸಿಗದ ಅನಾಥ..

ಪ್ರತಿ ಸಂಜೆ ಚಿಟ್ಟೆ ಹೂವಿನ
ಬಣ್ಣ ನೋಡಲು
ಉದ್ಯಾನದಲ್ಲಿ ನಡೆಯುವಾಗ
ಗಮನಿಸಿಲ್ಲ ನಾವು..
ಕಲ್ಲು ಆಸನಗಳ ಬಣ್ಣ
ಬದಲಾಗಿರಬಹುದೇ
ಅದೆಷ್ಟೋ ಪ್ರಣಯದ
ಪಿಸುಮಾತ ಕೇಳಿ..
ಅಥವಾ, ಚರ್ಮ
ಹಸಿಯಾಗುತ್ತಲೇ ಒಣಗಿರಬಹುದೇ
ಗೊತ್ತಾಗದೇ ಅತ್ತು, ಬಿದ್ದ ಕಣ್ಣೀರಿಗೆ..

ಯಾರು ಹೇಳಿದ್ದು
ಅವುಗಳೆಲ್ಲಾ ನಿರ್ಜೀವವೆಂದು!
ಇದೆ ಎಲ್ಲಕ್ಕೂ ಒಂದು ಧ್ವನಿ;
ಆಲಿಸುವ ಪ್ರೀತಿ ನಮಗಿದ್ದರೆ..
ನಮ್ಮೊಳಗೂ ಜೀವವಿದ್ದರೆ!..

                       ~‘ಶ್ರೀ’
                          ತಲಗೇರಿ

ಮಂಗಳವಾರ, ಮಾರ್ಚ್ 29, 2016

"ಸಂಜೆ"...

ಸಂಜೆ ಆರೇಳರ ಸಮಯ..
ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ
ಚಿತ್ರಿಸಿದ ಬಳ್ಳಿಗಳಿಗೆ
ಅರಳುತ್ತವಂತೆ ಹೂಗಳು;
ಅವನ ಕಾಲ್ಗಳ ಸದ್ದಿಗೆ..
ನೆರಳು ಕರಗುವ ಕ್ಷಣದಿ
ಗರಿ ಬಿಚ್ಚಲೆಂದೇ ಕಾದಿರುವ
ಕನಸುಗಳ ಸರದಿ...

ತೇಲಿಬಿಟ್ಟ ಹಿಟ್ಟಿನುಂಡೆ
ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ
ಎಣ್ಣೆಯ ಕಮಟು ವಾಸನೆಯ
ಅಭ್ಯಂಜನಕೆ
ನಾಸಿಕದ ರೋಮಗಳ ತಳಮಳ..
ಗಾಳಿಗೀಗ ತುಂಬು ಆಮಂತ್ರಣ...

ಕೋಲು ಹಿಡಿದ ಪೋರ
ಗೀಚುತ್ತಾನೆ ಮಣ್ಣಿನೆದೆಯ ತುಂಬಾ..
ಕಾಣಿಸುತ್ತದೆ ಆಗಸದಿ
ಮಂಟಪ ಕಟ್ಟುತಿಹ ಹಕ್ಕಿಹಿಂಡು;
ತಾನೂ ರೆಕ್ಕೆಗಳ ಹಚ್ಚಿಕೊಳುವಾಸೆ..
ಇನ್ನು ಕೆಲವರಿಗೆ
ಬರಲಿಷ್ಟವಿಲ್ಲ ಗೋಡೆಗಳಾಚೆ..
ತಾವಾಗಿಯೇ ಕೃತಕ ಬೆಳಕಿನಲಿ ಖೈದಿ...

ಕೊಲ್ಲುತ್ತ ಕೊಲ್ಲುತ್ತ ದಿನಗಳನ್ನು
ಹರಡಿಹೋಗುತ್ತಾನೆ ರಕ್ತ
ಕೊನೆಗೆ ಸೂರ್ಯ..
ಬಹುಶಃ ಅಣಕಿಸುತ್ತಿರುವವು
ಇರಬೇಕು ಅವುಗಳೇ
ಮತ್ತೊಬ್ಬನ ಅಧಿಪತ್ಯದಂಗಳದಿ
ತೂಗಿಬಿಟ್ಟ ಶ್ವೇತಾಗ್ನಿಗಳಾಗಿ..
ನಿನ್ನೆಯಷ್ಟೇ ಹೇಳಿದ್ದ ಆತ,
ಅಷ್ಟಕ್ಕೂ ಸುಳ್ಳಲ್ಲ;
ಗಡಿಯಾರಗಳು ಮಾತನಾಡುತ್ತವೆ..
ಪುಟ್ಟ ಬಟ್ಟಲಿನಲಿ ಹಚ್ಚಿಟ್ಟ ಧೂಪ
ಅಸ್ತಿತ್ತ್ವ ಪಡೆಯುತ್ತದೆ
ಗಾಳಿಯಲ್ಲೇ ಪರಿಮಳದ ಗೆರೆಗಳಾಗಿ...

                                  ~‘ಶ್ರೀ’
                                     ತಲಗೇರಿ

ಶನಿವಾರ, ಫೆಬ್ರವರಿ 13, 2016

"ಕಾಗದದ ದೋಣಿ"...

ಹೆಪ್ಪುಗಟ್ಟಿದ ಮೋಡವುದುರಿ
ಕಾದ ಮನದಲಿ ಪುಳಕ ತುಳುಕಿಸೆ
ಬೆರಗು ಬಾನಿಗೆ ರೆಕ್ಕೆ ಹಚ್ಚಿತು ನವಿಲು..
ಜಿಟಿ ಜಿಟಿಯ ಮಳೆಯ ಸದ್ದಿಗೆ
ಕೊಳಗಳೆಲ್ಲವೂ ಬಳೆಯ ತೊಡುತಿರೆ
ಮೆರಗು ತಂದಿತು ಇಳೆಗೆ ಒದ್ದೆ ಮುಗುಳು...

ಎಲೆಯ ಮೈಗೆ ಅಂಟಿ ಕುಳಿತು
ಬೀಳೋ ಹನಿಗಳ ತೂಕಡಿಕೆ ಕಂಡು
ರಸ್ತೆಗಿಳಿದವು ಮೆಲ್ಲ ಪುಟ್ಟ ಕಾಲ್ಗಳು..
ನೆನೆದ ಮಣ್ಣು ಸೂಸೋ ಘಮದಿ
ಬೆರೆಯಬಯಸಿತು ಹಳೆಯ ಕಾಗದ
ರೂಪ ತಂದವು ಈಗ ಕನಸ ಕಂಗಳು...

ಬಣ್ಣ ಬಣ್ಣದ ಕೊಡೆಯ ಹಿಡಿದು
ಪುಟ್ಟ ಗೆಜ್ಜೆಗೆ ಮಾತು ಕಲಿಸಿ
ದಡವ ಬಿಡಲು ಸಿದ್ಧಗೊಂಡಿತು ದೋಣಿ..
ಕಲ್ಲು ಕೊರಕಲು ಮುಳ್ಳು ಕಸಗಳು
ಬಲೆಯ ಹೆಣೆದಿಹ ಹಲವು ಪೊದೆಗಳು
ಎಲ್ಲ ದಾಟಿಸೋ ಅವನ ನೆಳಲಿನ ಗಾಮಿನಿ...

ದೋಣಿಯೆಂದರೆ ಅದು ಕಾಗದದ ವಸ್ತುವಲ್ಲ;
ಮುಗುಧ ಮುನಿಸು, ತೊದಲು ಒಲವು
ರಾಜಿಯಾಗಿಹ ಕ್ಷಣಗಳ ಮೂರ್ತ ಸಾಕ್ಷಿ..
ನೆನಪಿನೆಸಳಿಗೆ ಲಾಲಿ ಹಾಡುತ
ಎದೆಯ ಜಗುಲಿಗೆ ತಳಿರ ಮುದವಿಟ್ಟು
ಬಾಲ್ಯ ಕಟ್ಟಿಹ ಹಲವು ಭಾವ ಭಾಷಿ...

                                     ~‘ಶ್ರೀ’
                                         ತಲಗೇರಿ

ಮಂಗಳವಾರ, ಫೆಬ್ರವರಿ 9, 2016

"ಮೈಲಿಗಲ್ಲು"...

ನೀಳ ಚಾಚಿದ ದಾರಿ
ಅತ್ತಿತ್ತ ಸರಿಯದಂತೆ
ನಿಂತು ಕಾಯುವ ಬಗಲ ದಳಗಳು..
ಅರಸಿ ಬರುವ ಆಸೆಗಳಿಗೆ
ಗರಿಯ ತೇರು ಚಿಗುರುವಂತೆ
ಇದಿರುಗೊಳ್ಳುವ ಬಳಗ ಸಾಲು...

ಬಿಸಿಲ ಕೊರಳ ಬೆವರ ಕುಡಿದು
ತೊದಲು ಚಂದ್ರನ ಜೊಲ್ಲ ಅಳೆದು
ಮನೆಯ ತೋರುವ ಅನಿಕೇತನ..
ಭೃಂಗ ಗಾನದ ಪಲುಕ ಶೃಂಗಕೂ
ಹೂವು ಹಡೆಯುವ ಅಮಲು ಗಂಧಕೂ
ಸಡಿಲಗೊಳ್ಳದ ಬುದ್ಧ ಧ್ಯಾನ...

ಹಲವು ಹೆಸರ ಬರೆಸಿಕೊಂಡರೂ
ಎಷ್ಟೋ ಸದ್ದಿಗೆ ತೆರೆದುಕೊಂಡರೂ
ವರ್ಣಸಂತೆಯ ಅನಾಮಿಕ..
ಖಾಲಿಗೂಡನು ಕಾಯ್ವ ಮರಕೆ
ಅಂಟಿಕೊಂಡ ಕಲೆಯ ರಕ್ತಕೆ
ಮರುಗುಭಾಷೆಯ ಮೂಕ...

ದಾರಿಹೋಕನ ನೆರಳ ಸದ್ದಲೇ
ಧರಣಿ ನನ್ನೊಳು ಬೆರೆತ ಭಾವ..
ಕರಡು ಕನಸದು ಕಳೆವ ಮುನ್ನವೇ
ಬಿಡಲೇಬೇಕು ಇರುವ ಕುರಿತು
ಒಂದೆರಡು ಸುಳಿವ,ಕಟ್ಟಿ ಕಾಲವ...

                             ~‘ಶ್ರೀ’
                                ತಲಗೇರಿ

ಭಾನುವಾರ, ಜನವರಿ 31, 2016

"ಬೆಸುಗೆ"...

ಒರಟು ಬಿದಿರಿನಲೂ ಜೀವ ಸ್ವರವು
ನಿನ್ನುಸಿರ ಆಸೆಗಳ ಬಿಸಿ
ಅದರೆದೆಗೆ ಸೇರಿದಾಗ..
ಬೆರಳುಗಳ ಭಾಷೆಯನು
ನೀ ಒಲವಲ್ಲಿ ತಿದ್ದಿದಾಗ...

ನಿನ್ನೆಗಳ ನೆರಳಲ್ಲಿ
ಕಟ್ಟಿದಾ ಬಿಡಾರಕೆಲ್ಲ
ನಾಳೆಗಳ ಹೊದಿಕೆಯು ನಿನ್ನದೇನೇ..
ಬಣ್ಣ ಬಣ್ಣದ ಕನಸು
ರಂಗೋಲಿ ಇಡುತಿವೆ;
ಆ ಅಂಗಳವು ನಮ್ಮದೇನೇ...

ಒಂಟಿಗೂಡಿನ ಹಕ್ಕಿ
ಏಕಾಂಗಿಯಲ್ಲ;ಒಣಗಿದರೂ
ಮರ,ಹಚ್ಚಿಕೊಂಡಿರುವ ತನಕ..
ರೆಕ್ಕೆ ಹರಡಿ,ಮುಗಿಲ ದಾಟಿ
ಅನುಭವಿಸಿ ನೋಡಬೇಕು
ಮರದ ಬೇರ ಕಣ್ಣ ಪುಳಕ...

ಹರವು ಹಿರಿದಾದರೇನು;
ನಾ ನಿಂತಷ್ಟೇ ಜಾಗ
ಈ ಕ್ಷಣಕೆ ನನಗೆ..
ಬೆರಳು ಹಲವಿದ್ದರೇನು,
ತಟ್ಟಿ ಮಲಗಿಸಿ
ಹೊಸದಾರಿ ತೆರೆವವರೆಗೆ..
ಬೆಸೆದು ನಡೆವವರೆಗೆ!...

                       ~‘ಶ್ರೀ’
                          ತಲಗೇರಿ

ಶುಕ್ರವಾರ, ಜನವರಿ 22, 2016

"ಹೆಜ್ಜೆ"...

ಕೆಲವೊಂದು ಗಿಡಗಳು
ನಡೆದಾಡುತ್ತವೆ ಗಾಳಿಯ ಸಂಗಡ;
ತಮ್ಮ ತಮ್ಮ ಪರಿಧಿಯಲ್ಲಿ
ಸೌರಭದ ಮೂಲಕ..

ಇನ್ನು ಕೆಲವಷ್ಟು
ಪರಾಗದ ರೂಪದಲ್ಲಿ
ಚಿಟ್ಟೆಗಳ ಕಾಲಿಗಂಟಿಕೊಂಡು
ಇನ್ನೊಂದು ಹೂವಿನ
ಎದೆ ಸೇರುತ್ತವೆ..

ಈ ನಡಿಗೆ ಕೇವಲ
ಚಿಟ್ಟೆಯ ಮೇಲಿನ
ವ್ಯಾಮೋಹದಿಂದಲ್ಲ;
ಬದಲಾಗಿ,
ನಾಳೆಗಳ ಕಟ್ಟುವಿಕೆಗೆ!
ಒಲವ ಜೇನ ಹಸ್ತಾಂತರಕೆ
ಚಿಟ್ಟೆ ಇಲ್ಲಿ ರಾಯಭಾರಿ..

ಕಾಯೊಂದು ಹುಟ್ಟಿಕೊಳ್ಳುತ್ತದೆ
ಗುರುತಾಗಿ;
ಕಡೆದಾಗ ಮೂಡಿಬರುವ
ನವನೀತದಂತೆ..
ವ್ಯತ್ಯಾಸವಿಷ್ಟೆ;
ನಾವೂ ನೀವೂ ನಡೆಯುತ್ತೇವೆ
ಕೇವಲ ಹೆಜ್ಜೆ ಮಾತ್ರ ಇರುತ್ತದೆ;
ಗುರುತಿಲ್ಲದಂತೆ!...

                              ~‘ಶ್ರೀ’
                                  ತಲಗೇರಿ

ಮಂಗಳವಾರ, ಜನವರಿ 19, 2016

‘ಬಿಡಿ’ತಗಳು...-೪

‘ಬಿಡಿ’ತಗಳು...-೪

ಅತ್ತ,ಮುಗಿಲು ಬಿಕ್ಕಲು..
ಕಾದಿದ್ದ ಇಳೆಗೆ ಒಲವು ದಕ್ಕಿತೆಂದು,
ಇತ್ತ,ನವಿಲು ಲಯದಿ ಹೆಜ್ಜೆ ಹಾಕಿತು...

*****

ಅಂದು ರಾತ್ರಿ ನಕ್ಷತ್ರವೊಂದು
ಉದುರಿತು..
ಎತ್ತರದಲ್ಲಿದ್ದರೇನಂತೆ?..ಎಂದು ಹುಲ್ಲು
ಹಲುಬಿತು...

*****

ಕತ್ತಲ ಕಾಡಿನ
ಜೀರುಂಡೆಯ ಸದ್ದು
ಭಯದ ಬೆದರಿಕೆಯಲ್ಲ,
ನಾವೆಲ್ಲಾ ಎಚ್ಚರಿದ್ದೇವೆ
ಎಂಬ ಅಭಯಹಸ್ತ...

*****

ನನ್ನ ಮನೆ
ರಸ್ತೆ ಬದಿಗಿರಲಿ..
ದಿನಕ್ಕೊಬ್ಬ ಆಗಂತುಕ ಬರಲಿ,
ಒಲವ ತುತ್ತನ್ನ ಉಂಡುಹೋಗಲಿ...

*****

ಕರ್ಪೂರ
ಕರಗಿದ ಮೇಲೂ
ತಾನುರಿದುದರ ಬಗೆಗೆ
ಕಪ್ಪು ಕಲೆಯನ್ನಿಟ್ಟು ಹೋಗುತ್ತದೆ...

*****

ಒಂದು ಬಿಂದು,
ವಾಕ್ಯಕ್ಕೆ ಪೂರ್ಣವಿರಾಮ ಕೊಡುತ್ತದೆ;
ನಿಂತಲ್ಲೇ ನಿಂತರೆ!..
ಆದರೆ,ಅದೇ ಬಿಂದು
ಒಂದೆರಡು ಹೆಜ್ಜೆ ಮುನ್ನಡೆದರೆ
ಅದು ನಿರಂತರತೆ...!

*****

ಆ ಮರ ಬಳ್ಳಿಗಳು ಬೆತ್ತಲಾಗಿದ್ದು
ಕೇವಲ ಚಳಿಯ ತೀವ್ರತೆಗಲ್ಲ,
ಜೊತೆಗೆ ಮುಂದೆ ಬರಲಿರುವ
ಬದುಕಿನ ಚೈತ್ರಕ್ಕಾಗಿ...

                            ~‘ಶ್ರೀ’
                               ತಲಗೇರಿ

ಸೋಮವಾರ, ಜನವರಿ 11, 2016

‘ಬಿಡಿ’ತಗಳು-೩

ಹಾದಿ ಬದಿಗೆ
ಮುಳ್ಳುಗಳ ಮಧ್ಯ ಅರಳಿದ್ದರೂ
ಆ ಹೂವು ನಗುತ್ತಿತ್ತು...

*****

ಕಲ್ಲು,ಮಳೆ ಗಾಳಿ ಬಿಸಿಲಿಗೆ
ಮೈಯೊಡ್ಡಿ,ಒಳಗಿಂದ ಬಿರಿದಾಗ;
ಉದುರಿದೆಲೆಗಳ ಜೊತೆ ಬೆರೆತಾಗ
ದೊರಕುವುದು ಫಲವತ್ತಾದ ಮಣ್ಣು...

*****

ಅಷ್ಟೊತ್ತಿಂದ
ತುಂಬಿಕೊಳ್ಳುತ್ತಿದ್ದ ಬೆಳಕು
ಎಣ್ಣೆ ಮುಗಿದಾಗ
ಎಲ್ಲಿ ಹೋಯಿತು..!

*****

ಬಿಳಿಯ ಹಾಳೆಯ ಮೇಲೆ
ನೀನೇನೇ ಬರೆದರೂ
ಅದು ಚಿತ್ತಾರವೇ!..

*****

ನೀ ನಕ್ಕ ಮೇಲೇನೇ
ತಿಳಿದದ್ದು,
ನಗುವಿಗೂ ಸೌಂದರ್ಯ
ನಿನ್ನಿಂದಲೇ ಬಂದಿದ್ದೆಂದು!..

*****

ನನ್ನ ಕವಿತೆಯ ಪದಗಳು
ಹುಚ್ಚೆದ್ದು ಕುಣಿಯಬೇಕಿಲ್ಲ,
ಇಂದು ಬರೆದಿದ್ದು
ನಾಳೆ ಮಾಸದಿದ್ದರೆ ಸಾಕು...

*****

ಸಮುದ್ರದ ತೆರೆಗಳು
ತೀರದ ಮೇಲಿನ
ಹೆಜ್ಜೆಗುರುತುಗಳನ್ನು ಅಳಿಸುವುದಿಲ್ಲ;
ಬದಲಾಗಿ,ವಿಲೀನಗೊಳಿಸುತ್ತವೆ..!
ಅವೆಲ್ಲವನ್ನೂ ಮೈಗಂಟಿಸಿಕೊಂಡ ಮರಳು
ಇನ್ಯಾರದೋ ಕನಸಿನ ಮನೆ ಕಟ್ಟುತ್ತದೆ...

                                     ~‘ಶ್ರೀ’
                                        ತಲಗೇರಿ

ಬುಧವಾರ, ಜನವರಿ 6, 2016

"ಖಾಲಿಯಾಗಬೇಕೆಂದಿದ್ದೇನೆ"...

ಬಿಸಿಯುಸಿರ ತುದಿಗೆ ಅಂಟಿಕೊಂಡಿಹ
ಹೊಟ್ಟೆಕಿಚ್ಚಿನ ಹೊಗೆಯ ವಾಸನೆ..
ಅಸಹ್ಯವಾಗಿ ಮೈಯೆಲ್ಲಾ ಹರಡಿರುವ
ನಾನೆಂಬ ಝೇಂಕಾರದ ಆಲಾಪನೆ..
ಮತ್ತೆಂದೂ ಎದೆಯ
ತುಂಡಿನ ಬದಿಗೂ ಹುಟ್ಟದಂತೆ
ಖಾಲಿಯಾಗಬೇಕೆಂದಿದ್ದೇನೆ...

ನುಣುಪು ಸೀರೆಯ ಚಿತ್ತಾರದಾ ಅಂಚಲ್ಲಿ
ಜಾರಿಬಿಡುವ ಜೋರು ತುಡಿತಗಳಿಗೆ
ನನ್ನದಲ್ಲದ ಚಂದ್ರಬಿಂಬದ ಚಾವಡಿಯ ಒಳಗೆ
ಹಚ್ಚೆ ಹಾಕುವ ಬೆರಳಿನೆಲ್ಲ ಉದ್ವೇಗಗಳಿಗೆ
ನನ್ನಿಂದ ನಾನಾಗೇ
ಹೊರಬಂದು ವಿದಾಯ ಹೇಳಿ
ಖಾಲಿಯಾಗಬೇಕೆಂದಿದ್ದೇನೆ...

ನಾ ಬರೆದ ರೇಖೆಗಳ ಅಳತೆಯನು ಪ್ರಶ್ನಿಸಿದ
ನಿನ್ನ ಹೆಜ್ಜೆಗಳ ಮೇಲೆ ಸುರಿದ ಕೆಂಬಣ್ಣ..
ಅಂಗಳದ ಬೇಲಿಯನು ಊರಗಲ ಹಬ್ಬಿಸಲು
ನಾ ಬೇಕಂತಲೇ ತುಳಿದ ಹಾದಿಯಾ ರಾಡಿ ಮಣ್ಣ..
ಈ ದಿನವೇ ದೂರ ಒಯ್ದು
ಚೆಂಗುಲಾಬಿ ಗಿಡವಲ್ಲಿ ನೆಟ್ಟು
ಖಾಲಿಯಾಗಬೇಕೆಂದಿದ್ದೇನೆ...

ಮುಂದೊಂದು ದಿನ ಹೂ ಬಿಡುವ ಮಧ್ಯಂತರದಿ
ಬುದ್ಧ ನಗುತ್ತಾನೆ..
ನನ್ನಲ್ಲೂ ಕೊಂಚ ಇಟ್ಟು ಕೂರುತ್ತಾನೆ..!
ಈಗ..
ಶೂನ್ಯದಲ್ಲಿಯೇ ನಾ
ಪೂರ್ಣನಾಗಬೇಕೆಂದಿದ್ದೇನೆ...

                                           ~‘ಶ್ರೀ’
                                              ತಲಗೇರಿ

ಭಾನುವಾರ, ಜನವರಿ 3, 2016

‘ಬಿಡಿತ’ಗಳು-೨

‘ಬಿಡಿತ’ಗಳು-೨

ಹುಟ್ಟಿದಾಗ,
ತೆರೆದ ಎದೆ,ಬೊಚ್ಚು ಬಾಯಿ..
ಈಗ,
ಸಣ್ಣ ಮನಸಿನ ಮೇಲೆ ಜಾರದ ಹೊದಿಕೆ,
ಭೋಗದ ಬಿಚ್ಚು ಬಾಯಿ...

*****

ಅವಳು ಕಾದಿದ್ದು
ಕೇವಲ ವ್ಯಕ್ತಿಗಾಗಿ ಅಲ್ಲಾ,
ಜೊತೆಗೆ ಭಕ್ತಿಗಾಗಿ...

*****

ಹೊಸ ಸೀರೆ
ಮುಳ್ಳು ತಾಕಿ ಹರಿದೀತು ಎಂದಿದ್ದ..
ಆಗೊಮ್ಮೆ ಈಗೊಮ್ಮೆ ಮಾತನಾಡುವ
ಅವನಿಗೇನು ಗೊತ್ತು,
ನಿತ್ಯ ಹತ್ತಿಕ್ಕಿದಾ ಭಾವಗಳು
ಮುಲುಗಿ ಎದೆಯಲ್ಲಿ ಬಿದ್ದ ಗೀರುಗಳು...

*****

ನನ್ನ ರಾತ್ರಿಗಳು ಈಗ
ಬಣ್ಣಗಳಿಂದ ತುಳುಕುತ್ತಿವೆ..
ಏಕೆಂದರೆ ನಾನು ಕನಸು ಕಾಣಲು
ಶುರು ಮಾಡಿದ್ದೇನೆ..

*****

ಕಾಗೆ ಮತ್ತು ಕೋಗಿಲೆ,
ಇಬ್ಬರದೂ ಬಣ್ಣ ಒಂದೇ,
ಆದರೆ ಗಂಟಲಿನ ಕೆರೆತ ಬೇರೆ...

*****

ನನ್ನ ನೆರಳಿಗೆ
ಬಗೆಬಗೆಯ ಬೆಳಕಿನ ಬಣ್ಣಗಳ ಲೇಪನವಿಲ್ಲ..
ಯಾಕೆಂದರೆ,ನಾನು ‘ಪಾರದರ್ಶಕ’ನಲ್ಲ...

*****

ನಿನ್ನೆ ಕಂಡ ಸ್ವಪ್ನಗಳಲ್ಲಿ
ನೀನು ಅನಾಮಿಕ..
ಆದರೆ,
ಇಂದಿನ ಸರಣಿಯಲ್ಲಿ ನೀನೇ ನಾವಿಕ...

                                   ~‘ಶ್ರೀ’
                                       ತಲಗೇರಿ