ಭಾನುವಾರ, ಸೆಪ್ಟೆಂಬರ್ 22, 2013

"ಅಲ್ಲಿ ತನಕ"..

"ಅಲ್ಲಿ ತನಕ"..

ಒಲವ ಪಯಣದಲಿ ನೀನು ನಾನು
ಕೈ ಹಿಡಿದು ನಡೆವಂಥ ಕನಸು
ಏಳು ಹೆಜ್ಜೆಗಳ ಜೊತೆಯ ಸಲಿಗೆಯನು
ಹಂಚುವೆಯಾ ನನಗೆ ಅಂಥ ಸೊಗಸು

ಮುಗಿಲ ಅಂಚಿನ ಹನಿಯೆರಡು
ಕೊಂಚ ಹಿತವೆನಿಸಬಹುದೇ ಈ ನೆಲಕೆ
ಮೊದಲ ಮಿಂಚಿನ ಸೆಳೆತ ಕುರುಡು
ಹೊಚ್ಚ ಹೊಸತು ಎನಿಸಿ,ತುಂಬು ಬಯಕೆ

ಇನ್ನೂನು ಸುಳಿದಿಲ್ಲ ಪ್ರೀತಿ ತಂಗಾಳಿ
ಕಾಯುತಿದೆ ಹುಲ್ಲು ಭೂಮಿಯೆದೆಗೆ ಒರಗಲು
ಕೆಣಕುತಿದೆ ಸಮಯ ತುಸು ಸತಾಯಿಸಿ
ಸರಿಯದೇ ಆ ನಿನ್ನ ಬಿಗುಮೌನ ಮುಂಗುರುಳು..

ಮೀಟೋ ಬೆರಳಿಗೂ,ತಂತಿ ಕೊರಳಿಗೂ
ಸ್ವರ ಬೆರೆವ ಸಲುವಾಗಿ ಅನುಬಂಧ
ಆ ನೆರಳು ಈ ನೆರಳು ಅಂತರದ ಕೂಗು
ಕರಗಿ ಹುಟ್ಟಲಿ ಮೆಲ್ಲ ಪಿಸುದನಿಯದೊಂದು..

ಮುಂದೆಂದೋ ಒಂದೇ ದಾರಿಯ ಬದಲು
ತಂತಾನೇ ಮೆಲ್ಲ ಹುಟ್ಟಿಕೊಂಡರೆ ಕವಲು
ಸೇರೋಣವಲ್ಲಿ ಮತ್ತೆ ನಾಳೆಗಳ ಕೊನೆಯಲ್ಲಿ
ಅಲ್ಲಿ ತನಕ ಗಾಳಿ,ಸದ್ದಿಲ್ಲದೆ ಸ್ಪರ್ಶವಾಹಿನಿ ಆಗಲಿ...

                                               ~‘ಶ್ರೀ’
                                                 ತಲಗೇರಿ

ತೊರೆಯದಿರು "ನೀರೇ"...

      ತೊರೆಯದಿರು "ನೀರೇ"...

ಕಿರುತೊರೆಯ ಕಲಕಲ ನಾದ
ಕಲ್ಲೆದೆಯ ಗರ್ಭದಲೂ
ತಂತಾನೇ ಚಿಗುರು ಸಂಭ್ರಮ..
ನೀ ತೊರೆಯದಿರು ‘ನೀರೇ’..
ಹರಿಯುತಿಹೆ ಈ ದಾರಿಯಲಿ
ಅದಕೂ ನೀ ತಾನೇ ರೂವಾರಿ..

ತಿಳಿದಿಲ್ಲ ನಿನ್ನ ಹುಟ್ಟಿನಾ ಗುಟ್ಟು
ಎಲ್ಲಿ ಬೆರೆಯುವುದೋ ಕೊನೆಗೆ
ಆ ನಿನ್ನ ಕೊನೆಯ ತೊಟ್ಟು..
ತುಂಬಿಹುದು ಮಾತ್ರ ಆ ತಂಪು ಸ್ಪರ್ಶ
ಜೀವಜೀವದ ತುಂಬ ತುಂಬ
ಜಿನುಗುತಿದೆ ಪ್ರೀತಿಯಾ ಅಂಶ
ನೀನೇನೇ ಅಂತರಂಗದಾ ಉತ್ಕರ್ಷ..

ಗುಪ್ತಗಾಮಿನಿಯೋ,ಸುಪ್ತ ಇನಿದನಿಯೋ
ಅಭಿಸರಣ ಸನ್ನಿಹಿತ ಭಾಮಿನಿಯೋ..
ಕಾಣದ ಒಡಲ ಬಂಧದ ಕವಲೋ
ಧ್ಯಾನದ ದಿವ್ಯ ತೇಜದ ಲಹರಿಯೋ...
ನೀ ತೊರೆಯದಿರು ನೀರೇ..
ಈ ತೊರೆಯ...ಸುಪ್ತ ತೆರೆತೆರೆಯ...


                              ~‘ಶ್ರೀ’
                                ತಲಗೇರಿ