ಸೋಮವಾರ, ಮಾರ್ಚ್ 11, 2024

ಇಂಥದ್ದೊಂದು ಸಿನೆಮಾ‌ ಬೇಕಿತ್ತು!


 ಇಂಥದ್ದೊಂದು ಸಿನೆಮಾ ಬೇಕಿತ್ತು! 

********


ಅಷ್ಟ್ ನಿಧಾನ ಸಿನೆಮಾ, ಅಲ್ಲಾ, ಈಗೆಲ್ಲಾ ಯಾರ್ ಹಾಂಗ್ ಇರ್ತಾರೆ? ಇದು ವಾಸ್ತವಕ್ಕೆ ಹತ್ತಿರಾನೇ ಇಲ್ಲಪಾ,‌ ಕತೇನೂ ಇಲ್ಲ ಸಿನೆಮಾದಲ್ಲಿ, ಚೂರೂ ಇಷ್ಟ ಆಗಿಲ್ಲ, ತುಂಬಾ ಬೇಜಾರ್ ಬಂತು, ಕವಿತೆ ಥರ ಇದ್ಯಪಾ, ಎಲ್ಲಾ ಒಂಥರಾ ಚೆಂದ ಚೆಂದ ಫ್ರೇಮುಗಳು,‌ ನನ್ ಸಮುದ್ರ ನೀನು ಅನ್ನೋ ಹೊಸ ಭಾಷೇನೇ ಹುಟ್ಟಾಕ್ತಪಾ, ಕಣ್ಣಲ್‌ ನೀರ್ ಬರ್ದೇ ಥಿಯೇಟರ್ ಇಂದ ಆಚೆ ಬರೋದಿಲ್ಲ, ನಾನೆಲ್ಲಿ ಅತ್ತ್ಬಿಡ್ತೀನೋ ಅಂತ ಭಯಕ್ಕೆ ಇನ್ನೂ ಸಿನೆಮಾ ನೋಡಿಲ್ಲ ಅಂತೆಲ್ಲಾ ನೂರಾರು ಅಭಿಪ್ರಾಯಗಳ ಮಧ್ಯ ನನಗೆ ಅನಿಸಿದ್ದು ಇಂಥದ್ದೊಂದು ಸಿನೆಮಾ ಬೇಕಿತ್ತು ನಮ್ಮ ಕನ್ನಡಕ್ಕೆ! ಹೇಗೆ ಕೆಜಿಎಫ್ ಥರದ ಸಿನೆಮಾವೊಂದು ಕನ್ನಡದ ಮಾರುಕಟ್ಟೆಗೆ ಅಗತ್ಯವಿತ್ತೋ, ಹೇಗೆ ಲೂಸಿಯಾ ಥರದ ಸಿನೆಮಾವೊಂದು ಕನ್ನಡದ ಚಿತ್ರರಂಗದ ಏಕತಾನತೆಯನ್ನು ಮುರಿಯುವುದಕ್ಕೆ ಅವಶ್ಯಕವಿತ್ತೋ, ಹೇಗೆ ಉಳಿದವರು ಕಂಡಂತೆ ಥರದ ಸಿನೆಮಾವೊಂದು ಕನ್ನಡದ ಕತೆಯ ಹೇಳುವಿಕೆಗೆ ಅಗತ್ಯವಿತ್ತೋ, ಹಾಗೆಯೇ ಇಂಥದ್ದೊಂದು ಸಿನೆಮಾ ಈ ಹೊತ್ತಿಗೆ ಬಹಳ ಅಗತ್ಯವಿತ್ತು. ಕ್ರೌರ್ಯ, ರಕ್ತ, ಕಾಮ, ಭೋಗ, ಲೋಭ, ಮದ ಇವಿಷ್ಟೇ ಸದ್ಯದ ಚಿತ್ರಗಳ ಕಥಾವಸ್ತುಗಳು. ಬದುಕಿನ ಯಾವುದೋ ಒಂದು ಏಕಾಂತದ ಮಧ್ಯಾಹ್ನದಲ್ಲೋ, ಅಥವಾ ಶನಿವಾರದ ಸಂಜೆಯಲ್ಲೋ ಸುಮ್ಮನೆ ಕೂತು ನೋಡುವಂಥ ಚಿತ್ರಗಳು ಬರದೇ ಅದೆಷ್ಟು ದಿನಗಳಾಗಿದ್ದವು! ಎಲ್ಲರೂ ಕ್ರೌರ್ಯದ ಹಿಂದೆ ಓಡುತ್ತಿರುವಾಗ, ಅರ್ಥವೇ ಇಲ್ಲದ ವಿಜೃಂಭಣೆಗೆ ಒತ್ತು ಕೊಡುತ್ತಿರುವಾಗ, ಒಂದು ಅಪ್ಪಟ ಹಾಗೂ ಶುದ್ಧ ಪ್ರೇಮದ ಕತೆಯನ್ನು ಹೇಳುವುದು ಸುಲಭವಲ್ಲ. ಜೊತೆಗೆ, ನಮ್ಮ ಇಡೀ ಜನಾಂಗವೇ ರೀಲ್ಸ್ ಸ್ಕ್ರಾಲ್ ಮಾಡಿದಷ್ಟು ಸುಲಭವಾಗಿ ಬೇರೆ ಬೇರೆ ಸಂಬಂಧಗಳಿಗೆ ಟಕಟಕಟಕ ಅಂತ ಬದಲಾಗುತ್ತಿರುವಾಗ, ತನಗೆ ಸಿಗದವರು ಇನ್ನ್ಯಾರಿಗೂ ಸಿಗಬಾರದು ಅಂತಲೋ, ಅಥವಾ ತನಗೆ ಸಿಗಲಿಲ್ಲವಲ್ಲ ಅಂತ ನೆನಪುಗಳಲ್ಲೇ ಹಲಬುತ್ತಾ ಬದುಕಿಡೀ ಕೊರಗುವವರ ಮಧ್ಯದಲ್ಲಿ, ಬದುಕನ್ನು ಹೇಗೆ ಚೆಂದವಾಗಿಸಬಹುದು ಅಥವಾ ಬದುಕೇ ಆಗಿದ್ದ ಒಬ್ಬರು ಯಾವುದೋ ಕಾರಣಗಳಿಗಾಗಿ, ಪರಿಸ್ಥಿತಿಗಳಿಂದಾಗಿ ನಮಗೆ ಸಿಕ್ಕದೇ ಹೋದಾಗ, ಅದನ್ನು ಹೇಗೆ ನಿಭಾಯಿಸಬಹುದು, ಪ್ರೀತಿಯ ಅಂತಿಮ ಗುರಿ ಏನು ಇತ್ಯಾದಿಗಳನ್ನೆಲ್ಲವನ್ನೂ ಒಟ್ಟಿಗೆ ನಮ್ಮ ಮುಂದಿಡುವ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ'


ನಿರ್ದೇಶಕರು ಹಾಗೂ ನಟ ಇಬ್ಬರೂ ಹೇಳಿದ ಹಾಗೆ ಈ ಚಿತ್ರ ಒಂದು ಕಾವ್ಯ. ಕಾವ್ಯದ ಗುಣವೇ ಅದು. ಎಲ್ಲರಿಗೂ ರುಚಿಸುವುದಿಲ್ಲ. ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಎಲ್ಲರಿಗೂ ಇದು ಅಗತ್ಯ ಅಂತ ಅನ್ನಿಸುವುದೂ ಇಲ್ಲ. ಕಾವ್ಯ ಯಾವತ್ತಿಗೂ ನಮ್ಮ ನಮ್ಮ ಪಾಲಿಗೆ ದಕ್ಕಿದಷ್ಟೇ! ಸಿನೆಮಾದ ಮೊದಲ‌ ಭಾಗದಲ್ಲಿ ನಡೆದಂಥ ಒಂದು ಘಟನೆ ಹಾಗೂ ಅದರಿಂದ ಬಹುದೊಡ್ಡ ಕನಸನ್ನು ಕಟ್ಟಿಕೊಂಡಿರುವ ಹುಡುಗನೊಬ್ಬ ತೆಗೆದುಕೊಂಡ ಸಾಮಾನ್ಯವಾದ ಸಣ್ಣ ನಿರ್ಧಾರವೊಂದು ಆ ಹುಡುಗನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತಲ್ಲಾ ಅಂತ ನೆನೆದಾಗಲೆಲ್ಲಾ ಎದೆ ಬಡಿತ ಜೋರಾಗುತ್ತದೆ. ಇಂಥ ತಪ್ಪುಗಳನ್ನು ಮಾಡಿ ಈ ಹೊತ್ತಿನಲ್ಲಿ ಅದೆಷ್ಟು ಜನ ಜೈಲುಗಳಲ್ಲಿ ಇದ್ದಿರಬಹುದು ಹಾಗೂ ಅವರೆಲ್ಲರ ಅಷ್ಟು ವರ್ಷಗಳ‌ ಆ ಬದುಕು ಕೇವಲ‌ ಒಂದು ನಿರ್ಧಾರದಿಂದ ಅದೆಷ್ಟು ಭಿನ್ನವಾಯಿತಲ್ಲಾ ಅಂತ‌ ನೆನೆಸಿಕೊಂಡರೆ ಉಸಿರು ಭಾರವಾಗುತ್ತದೆ. ಸಿನೆಮಾ ನೋಡುವಾಗಲೂ ಇಂಥದ್ದೇ ಭಾರದ ಉಸಿರು ಬಾರಿ ಬಾರಿ ಎದುರಾಗುತ್ತಿತ್ತು. ಮೊದಲ ಭಾಗ ಮುಗಿದಾಗ ಅದೆಷ್ಟು ಜನರು "ಎರಡನೇ ಭಾಗದಲ್ಲಾದರೂ ಅವರನ್ನು ಒಂದಾಗಿಸಿ ನಿರ್ದೇಶಕರೇ" ಅಂತ ಅಂದವರಿಲ್ಲ! ಅಂಥದ್ದೊಂದು ಮಾತನ್ನು ಇತ್ತೀಚಿನ ಯಾವ ಸಿನೆಮಾಗಳಿಗೆ ನಾವು ಕೇಳಿದ್ದೆವು! ಎರಡು ಭಾಗಗಳಲ್ಲಿ ಬಂದಿದ್ದರೆ ಕೇಳುತ್ತಿದ್ದೆವೇನೋ ಅನ್ನಬಹುದು. ಆದರೆ, ಎರಡು ಭಾಗಗಳಲ್ಲಿ ಹೇಳುವುದಕ್ಕೆ ಕತೆಯೊಂದು ಇರಬೇಕಲ್ಲಾ! ಅಂಥ ಕತೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ. ಪ್ರೇಮಕತೆಗಳನ್ನು ಎಷ್ಟು ಅಂತ ಹೇಳಬಹುದು ಅಂತ ಅಂದುಕೊಳ್ಳುತ್ತಿರುವಾಗಲೇ, ಹೀಗೊಂದು ಪ್ರಾಮಾಣಿಕವಾದ ಕತೆ ಸಿಕ್ಕಿದರೆ ಅದಕ್ಕಿಂತ ಚೆಂದದ ಸಂಗತಿ ಇನ್ನೇನಿದೆ. 


ಮೊದಲನೇ ಭಾಗದಲ್ಲಿ ಇದ್ದಂಥ ದೃಶ್ಯ ಸೂಕ್ಷ್ಮತೆಗಳು "ಆಹ್ಞಾ, ವ್ಹಾ!" ಅನ್ನಿಸುವಷ್ಟು ಚೆಂದ. ಬಸ್ಸಿನಲ್ಲಿ ನಿತ್ಯವೂ ನಡೆವ ಘಟನೆ ಹೇಗೆ ಕೊನೆಯಲ್ಲಿ ಇಡೀ ಚಿತ್ರದ ಹಾಗೂ ಬದುಕಿನ ದಾರಿಯನ್ನು ಸೂಚಿಸುತ್ತದೋ, ಹಾಗೆಯೇ ಭಾಗ ಎರಡರ ಶುರುವಿನಲ್ಲಿ ನಟ ಗೊಂಬೆಯನ್ನು ಹೇಗೆ ಎತ್ತಿಕೊಂಡು ಹೋಗುತ್ತಾನೆ ಅಂತ‌ ತೋರಿಸುವ ದೃಶ್ಯ ಮುಂದಿನ ಇಡೀ ಕಥಾಹಂದರವನ್ನು ಸೂಚಿಸುತ್ತದೆ. ಇಂಥ ಸೂಚ್ಯ ದೃಶ್ಯಗಳು ಚಿತ್ರದ ಜೀವಾಳ. ಕವಿತೆ ಅಂದರೂ ಅದೇ ಅಲ್ವಾ! ವಾಚ್ಯವಾಗದೇ ಸೂಚ್ಯವಾಗುವುದು. ಖುಷಿಯ ವಿಷಯವೆಂದರೆ ಎಲ್ಲಿಯೂ ಕತೆಯ ಮೂಲ‌ ಆಶಯದಿಂದ ಆಚೆ ಹೋಗದೇ, ಅದೇ ವಿಷಯಕ್ಕೆ‌ ಅಂಟಿಕೊಂಡಿದ್ದು. "ಒಂದು ಕನಸು ಕಂಡೆ. ಆದರೆ, ಮತ್ತೆಂದಿಗೂ ಆ ಕನಸಿಗೆ ವಾಪಸ್ಸು ಹೋಗುವುದಕ್ಕೆ ಸಾಧ್ಯವಾಗಲೇ‌ ಇಲ್ಲ" ಅಂತ ಅಂದಾಗ, ಆ ಕನಸೇ ಬದುಕಿನ ಅಂತಿಮ ಗುರಿ ಹಾಗೂ ಅದಕ್ಕಿಂದ ಭಿನ್ನವಾದ ಆಸೆಗಳೇನೂ ಇಲ್ಲ ಅಂದಾಗ ಅಂಥ ಕನಸಿಗೆ ಹತ್ತಿರವಾದ ವಾಸ್ತವವನ್ನು ಕಟ್ಟಿಕೊಳ್ಳುವುದೇ ಬಹುಶಃ ಅತ್ಯಂತ ಸಮರ್ಪಕವಾದ ಕೆಲಸ ಅಂತನ್ನಿಸದೇ ಹೋಗುವುದಿಲ್ಲ. ಬೇರೆ ಕನಸು ಕಾಣಬಹುದಿತ್ತು. ಬೇರೆ ಬದುಕು ಬಾಳಬಹುದಿತ್ತು. ಆದರೆ, ಕೊನೆಯಲ್ಲಿ ಎಲ್ಲವೂ ನಮ್ಮ ಆಯ್ಕೆಗಳೇ ಅಲ್ಲವಾ!  ಆಯ್ಕೆಗಳು ಬದಲಾದರೆ, ಬದುಕಿನ ದಾರಿ ಬದಲಾಗುತ್ತದೆ. ಆದರೆ, ಆಯ್ಕೆಗಳೇ ಬೇಡ ಅಂತಂದುಕೊಂಡಾಗ ದಾರಿಯೂ ಒಂದೇ, ನಡೆಯುವುದು ಹೇಗೆಲ್ಲಾ ಅನ್ನುವುದನ್ನು ಮಾತ್ರವೇ ನೋಡಿಕೊಳ್ಳಬೇಕಷ್ಟೇ! 


ಈ ಸಿನೆಮಾ ಸುಮ್ಮನೆ 'ನಂದೂ ಒಂದಿರ್ಲಿ' ಅಂತ ಮಾಡಿದ ಸಿನೆಮಾವಲ್ಲ. ಸಿನೆಮಾ ಮಾಡುವಾಗ ಸಿನೆಮಾದ ಕುರಿತಾಗಿನ ಕಾಳಜಿಯಿದೆ‌. ಸಿನೆಮಾದ ಕತೆಯ ಕುರಿತಾಗಿನ ಕಾಳಜಿಯಿದೆ. ಅಲ್ಲಿ ಬರುವ ಪಾತ್ರಗಳ ಕುರಿತಾಗಿಯೂ, ಆ ಪಾತ್ರಗಳ ವಸ್ತ್ರಗಳ ಕುರಿತಾಗಿಯೂ, ಇಡೀ ಚಿತ್ರದಲ್ಲಿ ಬರುವ ಬಣ್ಣಗಳ ಕುರಿತಾಗಿಯೂ ನಿರ್ದೇಶಕರು ಯೋಚಿಸಿದ್ದಾರೆ. ಅದರಲ್ಲೂ ಕನ್ನಡದ ಪ್ರಸಿದ್ಧ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅದರಲ್ಲೂ ಆಧ್ಯಾತ್ಮಿಕವಾಗಿ ಬಹಳ ಆಳದ ಸಂಗತಿಯೊಂದನ್ನು ಹೇಳುವ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅಷ್ಟೇ ಚೆಂದದ ಪ್ರೇಮದ ಸಿದ್ಧಾಂತವನ್ನು ಹೇಳುವುದು ಸುಲಭವಲ್ಲ. ನೀನೂ ಆ ಕಡಲಿನ ಭಾಗ, ನಾನೂ ಆ ಕಡಲಿನ ಭಾಗ, ನಮ್ಮಿಬ್ಬರ ದಡಗಳು ಮಾತ್ರ ಬೇರೆ ಅನ್ನುವ ಅರಿವಿಟ್ಟುಕೊಂಡು ಕಡಲನ್ನೇ ಸೇರದ ನದಿಯ ಬಳಿಗೆ ಕಡಲೂ ಹೋಗದೇ, ಆದರೆ, ನದಿಯ ಹರಿವು ಮಾತ್ರ ಕಳೆದುಹೋಗದ ಹಾಗೆ ನೋಡಿಕೊಳ್ಳುವ ಕಡಲಿನ ಗುಣ ಬೇಕಲ್ಲವೇ ಈ ಹೊತ್ತಿಗೆ! ಪುಟ್ಟ ಶಂಖವೊಂದನ್ನು ಕಿವಿಗಿಟ್ಟುಕೊಂಡಾಗಲೆಲ್ಲಾ ಕಡಲಿನ ಅಲೆಗಳ‌ ಸದ್ದೇ ಕೇಳುತ್ತದೆ ಅಂತ ನಾಯಕ ಅಂದುಕೊಂಡಾಗಲೆಲ್ಲಾ ನಾನೂ ಒಮ್ಮೆ ಕಿವಿಗಿಟ್ಟು ನೋಡಬೇಕು ಅಂತ ನನಗೆ ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ. ಅದು ಅಂಥ ದೃಶ್ಯಗಳ‌ ತಾಕತ್ತು. ಒಡೆದ ಕನ್ನಡಿಯ ಬಿಂಬ, ವ್ಯಕ್ತಿಗಳ ಇತಿಹಾಸವನ್ನು ಕೆದಕದೇ ಸದ್ಯದ ಬದುಕಿಗೆ ಅಂಟಿಕೊಳ್ಳುವುದು, ಸ್ಥಗಿತವಾದ ರೈಲು ಹೇಗೆ ಅವನ ಬದುಕಿನ ಕತೆಯನ್ನು ಕಟ್ಟಿಕೊಡುತ್ತದೋ, ಭ್ರಮೆಯಲ್ಲಿಯೂ ವಾಸ್ತವದ ನೆರಳು ಇವೆಲ್ಲವೂ ಕತೆಯ ಸೂಕ್ಷ್ಮ ಹೆಣಿಗೆಗಳು. 


ಹಾಗಂತ ಸಿನೆಮಾದಲ್ಲಿ ಎಲ್ಲವೂ ಸರಿಯಿತ್ತಾ? ಅಂದರೆ, ಒಬ್ಬೊಬ್ಬರಿಗೆ ಒಂದೊಂದು ಅಂಶಗಳು ಸರಿಯಿಲ್ಲ ಅಂತನ್ನಿಸಿರಬಹುದು. ನನಗೆ ಚಿತ್ರದ ಶೀರ್ಷಿಕೆ ಹಾಡೇ ಇಷ್ಟವಾಗಲಿಲ್ಲ; ಅದಕ್ಕೆ ಕಾರಣವೂ ಆ ಶೀರ್ಷಿಕೆಯೂ ಹಾಗೂ ಆ ಶೀರ್ಷಿಕೆಗಿರುವ ಹಿನ್ನೆಲೆಯೂ! ಅದರ ಜೊತೆಗೆ ಚಿತ್ರದ ಕೊನೆ ಭಾವನಾತ್ಮಕವಾಗುವ ಭರದಲ್ಲಿ ಚೂರು ವಾಸ್ತವಕ್ಕಿಂತ ದೂರವಾಯಿತು ಅಂತ ಅನಿಸಿದ್ದು ಹೌದು. ಮನಸ್ಸನ್ನು ಕದಡದ ಕಾವ್ಯ ಬಹುಶಃ ಒಳ್ಳೆಯ ಕಾವ್ಯವಾಗಿರಲಿಕ್ಕಿಲ್ಲ ಅನ್ನುವುದು ಒಂದು ನಂಬಿಕೆ. ಹಾಗಂತ‌ ಎಲ್ಲಾ ಕಾವ್ಯಗಳು ಬರೀ ದುಃಖವನ್ನೇ ತುಂಬಿಕೊಂಡಿದ್ದರೆ ಮಾತ್ರ ಅವು ಒಳ್ಳೆಯ ಕಾವ್ಯ ಅಂತಲ್ಲ. ಈ ಎಲ್ಲಾ ನೋವುಗಳನ್ನು ಮಡುಗಟ್ಟಿಸಿ ಕಾವ್ಯ ಹುಟ್ಟುವುದು. ಹಾಗಾಗಿಯೇ ಕಾವ್ಯದ ಒಂದೊಂದು ಸಾಲೂ ಬಹಳಷ್ಟನ್ನು ಹೇಳುತ್ತದೆ. ಯಾಕೆಂದರೆ, ಅದು ತೆಳುವಾದದ್ದಲ್ಲ. ತೇಲಿಸುವಿಕೆ ಅಲ್ಲ. ಅದು ಭಾರವಾದದ್ದು, ಮುಳುಗಿಸುವಂಥದ್ದು,‌ ಕಡಲಿನಂಥದ್ದು. 


ಇವತ್ತಿನ ಜನಾಂಗಕ್ಕೆ ಇದು ತಾರ್ಕಿಕತೆ ಮತ್ತು ವಾಸ್ತವವಿಲ್ಲದ ಸಿನೆಮಾದಂತೆ ಕಂಡರೂ, ಈ ಸಿನೆಮಾದಲ್ಲೊಂದು ಕನಸಿದೆ. ಮತ್ತೆ, ನಾವು ಆ ಕನಸಿಗೆ ವಾಪಸ್ಸು ಹೋಗಬಹುದಾ! 


ನಿಜ,‌ ಈ ಹೊತ್ತಿಗೆ ನಮಗೊಂದು ಇಂಥ ಕಡಲ ಕತೆ ಬೇಕಿತ್ತು!


ಧನ್ಯವಾದಗಳು Hemanth M Rao , Hemanth M Rao , Rakshit Shetty ನಿಮ್ಮಿಬ್ಬರಿಗೂ!


~`ಶ್ರೀ' 

‌‌   ತಲಗೇರಿ

ಕಥಾಗತ - ನಮ್ಮ ಮಣ್ಣಿನ ಕಥನ


 ಕಥಾಗತ - ನಮ್ಮ ಮಣ್ಣಿನ ಕಥನ


ನಮ್ಮ ಕತೆಗಳೆಲ್ಲವನ್ನೂ ಕೇವಲ ಕಾಲ್ಪನಿಕವೆಂಬಂತೆಯೋ ಅಥವಾ ಎಲ್ಲರ ಕೈಯಲ್ಲೂ ಸೋತ ಕತೆಗಳಂತೆಯೂ ಬಿಂಬಿಸಿರುವಾಗ, ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಾದರೂ ಹೇಗಿದ್ದೀತು? ಇತಿಹಾಸದ ಬಗ್ಗೆ ಹೆಮ್ಮೆ ಯಾಕೆ ಬೇಕು, ಭೂತಕಾಲವನ್ನು ಕಟ್ಟಿಕೊಂಡು ನಮಗೇನಾಗಬೇಕು ಅನ್ನುವ ಇಂದಿನ ತಲೆಮಾರಿಗೆ‌ ಅರ್ಥವಾಗಬೇಕಾದ ಒಂದು ವಿಷಯ ಏನೆಂದರೆ, ಯಾರಲ್ಲಿ ಹೆಮ್ಮೆಪಡಬಹುದಾದಂಥ ಭೂತಕಾಲವಿರುತ್ತದೆಯೋ ಅವರಲ್ಲಿ ಆತ್ಮವಿಶ್ವಾಸ ಯಾವಾಗಲೂ ಜಾಸ್ತಿ; ಹಾಗೆಯೇ, ಹಿಂದೆ ಆಗಿದ್ದನ್ನು ತಿಳಿದವರು ಅಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡಲಾರರು. ಅದೇ ಕಾರಣಕ್ಕಾಗಿಯೇ‌ ಯಾವ ಜನಾಂಗವನ್ನಾದರೂ ನಾಶ ಮಾಡಬೇಕು ಅಂತಾದರೆ, ಆ ಜನಾಂಗದ ಇತಿಹಾಸವನ್ನು ಹಾಗೂ ಅದರಲ್ಲಿನ ಮಹಾನ್ ಸಂಗತಿಗಳನ್ನು ಮೊದಲು ಅಳಿಸಲಾಗುತ್ತದೆ. ಆತ್ಮವಿಶ್ವಾಸವಿಲ್ಲದ ಮನುಷ್ಯ ಜನಾಂಗ ಮಾಡುವುದಾದರೂ ಏನನ್ನು? ಒಂದು ವಿಷಯವನ್ನು ಮಾತ್ರ ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕು. ಭಾರತದ ಇತಿಹಾಸವೂ ಗಟ್ಟಿಯಾಗಿತ್ತು ಹಾಗೂ ನಮ್ಮ ಕಥನ ಪರಂಪರೆಯೂ. ಅಂತೆಯೇ ಇತಿಹಾಸವೆಂದರೆ ಶುಷ್ಕ, ಅದರಲ್ಲೇನಿದೆ ಅನ್ನುವ ಹೊತ್ತಿನಲ್ಲಿ, ಇತಿಹಾಸದೊಂದಿಗೆ ಕಥನ ಪರಂಪರೆ ಜೊತೆಯಾದರೆ ಹೇಗಿರಬಹುದು ಅನ್ನುವ ಆಲೋಚನೆಯೊಂದಿಗೆ ಡಾ. ನವೀನ್ ಗಂಗೋತ್ರಿ ( Naveen Gangotri ) ಅವರು ಬರೆದಿರುವ, ಸ್ವಸ್ತಿ ಪ್ರಕಾಶನ ( Priya Bhat ) ತನ್ನ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಕಟಿಸಿರುವ ಕೃತಿಯೇ 'ಕಥಾಗತ'. ಅದಕ್ಕೆ ತಕ್ಕದಾದ ಉಪ ಶೀರ್ಷಿಕೆ‌ 'ನೆಲದ ನಿನ್ನೆಯ ಮರೆಯಬಾರದ ಕಥಾನಕ'.


ಇಲ್ಲಿ ಎಂಟು ಕತೆಗಳಿವೆ. ಭಾರತದ ಇತಿಹಾಸ ಕೇವಲ ಎಂಟು ಕತೆಗಳಲ್ಲಿ ಹೇಳಬಹುದಾದದ್ದಾ ಅಂದರೆ ಖಂಡಿತಾ ಅಲ್ಲ. ಆದರೆ, ಇಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಹೇಳಲಾಗಿದೆ. ಮುಖ್ಯ ಸಂಗತಿಗಳೂ ಕೇವಲ ೮ ಕತೆಗಳಲ್ಲಿ ಹೇಳಬಹುದಾದದ್ದಲ್ಲ.‌ ನಮ್ಮ ಗತದ ಕೆಲವು ಕಥಾನಕಗಳಿವೆ ಇಲ್ಲಿ ಅಂದರೆ ಹೆಚ್ಚು ಸೂಕ್ತವಾದೀತು. ಇತಿಹಾಸವೆಂದರೆ ಇಸವಿ, ಯುದ್ಧ, ಶಸ್ತ್ರಾಸ್ತ್ರ, ಸೈನ್ಯದ ಲೆಕ್ಕಾಚಾರ, ಕರ‌ ಪದ್ಧತಿ, ಸಮಾಜಕ್ಕೆ ಕೊಡುಗೆ ಇವಿಷ್ಟೇ ಅನ್ನುವಂತೆ ನಾವು ನಮ್ಮ ಪಠ್ಯದಲ್ಲಿ ಓದಿಕೊಂಡು ಬಂದಿದ್ದೇವೆ. ಆದರೆ, ಇದಕ್ಕೂ ಮೀರಿದ ಕತೆಗಳಿವೆಯಾ? ಇದ್ದರೆ ಆ ದಾಖಲಾತಿಗಳ್ಯಾಕೆ ನಮ್ಮ‌‌ ಪಠ್ಯಗಳಲ್ಲಿ ಇರಲಿಲ್ಲ ಅನ್ನುವುದು ಒಂದು ಕುತೂಹಲದ ಪ್ರಶ್ನೆಯಾಗಬಹುದು. ಒಂದು ಸಾಮ್ರಾಜ್ಯ ಹುಟ್ಟಿದ್ದರ ಹಿನ್ನೆಲೆ ಹಾಗೂ ಅದು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿತ್ತು ಅನ್ನುವುದನ್ನು ಹೇಳಹೊರಟರೆ ಭಾರತದ ಇತಿಹಾಸ ಒಂದು ಮಹಾನ್ ಇತಿಹಾಸವಾಗಿಬಿಡಬಹುದು ಅನ್ನುವ ಚಿಂತನೆಯೇನಾದರೂ ಪಠ್ಯ ತಯಾರಿಸುವವರಿಗೆ ಇತ್ತಾ ಅಂತಲೂ ಪ್ರಶ್ನೆ ಹುಟ್ಟಿಕೊಳ್ಳಬಹುದು. ನಮ್ಮಲ್ಲಿ, ನಮ್ಮ ಸಾಮ್ರಾಜ್ಯಗಳಲ್ಲಿ ಒಡಕುಗಳಿದ್ದುದು ನಿಜ. ಆದರೆ, ನಮ್ಮ ಜೀವನ ಪದ್ಧತಿಯ ಕುರಿತಾದ ನಂಬಿಕೆಗಳು ಛಿದ್ರವಾಗಿರಲಿಲ್ಲ. ಜೊತೆಗೆ, ಯಾವಾಗ ಸಮಾಜದಲ್ಲಿ ಬಿರುಕುಗಳು ಮೂಡಿದವೋ, ಭಯದ ನೆರಳು ಕವಿಯಿತೋ ಆಗೆಲ್ಲಾ ಯಾವುದೋ ಒಬ್ಬ ರಾಜ, ನಮ್ಮ ಸಮಾಜದ ಪುನರುತ್ಥಾನಕ್ಕಾಗಿ ಹುಟ್ಟಿಬಂದಿದ್ದಿದೆ. ಇವೆಲ್ಲವೂ ಓದುವುದಕ್ಕೆ, ಹೇಳುವುದಕ್ಕೆ, ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಚೆಂದ, ನಿಜ ಸ್ಥಿತಿ ಬೇರೆಯೇ ಇತ್ತು ಅಂತ ಹಲವರು ಅಂದುಕೊಳ್ಳಬಹುದು. ಆದರೆ, ನಿಜಕ್ಕೆ ಹಲವು ಮುಖಗಳಿಲ್ಲ; ನಾವು ನೋಡುವ ಕೋನದಿಂದ ಕಂಡಿದ್ದಷ್ಟೇ ನಿಜವಲ್ಲ ಅನ್ನುವ ಅರಿವು ನಮಗಿದ್ದರೆ 'ಎಲ್ಲ ಕಡೆಯಿಂದಲೂ ಜ್ಞಾನ ಹರಿದು ಬರಲಿ' ಅನ್ನುವ ವರ್ಗಕ್ಕೆ ನಾವು ಸೇರುತ್ತೇವೆ‌. 


ಈಗ ಭಾರತದ ಅಥವಾ ಒಂದರ್ಥದಲ್ಲಿ ಇಡೀ ಜಗತ್ತಿನ ಬದ್ಧ ವೈರಿಯಾಗಿರುವ ಚೀನಾದ ಜನರಲ್ಲಿ ಒಂದು ಕಾಲದಲ್ಲಿ ಒಂದು ಕೊರಗು ಇತ್ತಂತೆ; ಅದೇನೆಂದರೆ "ಬುದ್ಧ ಹುಟ್ಟಿದ ನಾಡಿನಲ್ಲಿ ತಾವು ಹುಟ್ಟಲಿಲ್ಲವಲ್ಲ" ಅಂತ. ಚೀನಾದ ರಾಜಕಾರಣ ಹಾಗೂ ಅಲ್ಲಿನ ಮನಸ್ಥಿತಿ ಈಗ ಅದೆಷ್ಟು ಬದಲಾಗಿದೆಯೆಂದರೆ,‌‌‌ ಅಂಥ ಬದಲಾವಣೆಗೆ ಕೊಡುಗೆಗಳು ಏನೇನಿರಬಹುದು, ಒಮ್ಮೆ ಯೋಚಿಸಿ! ಚೀನಾದ ಯಾತ್ರಿಕನೊಬ್ಬ ಭಾರತಕ್ಕೆ ಬರುತ್ತಾನೆ ಹಾಗೂ ಆತ ಭಾರತದಲ್ಲಿ ಸುಮಾರು ವರ್ಷ ಅಧ್ಯಯನವನ್ನೂ ಕೈಗೊಳ್ಳುತ್ತಾನೆ ಅಂದರೆ, ಆತನಿಗೆ ಭಾರತದ ಕುರಿತಾಗಿ ಇದ್ದ ಪ್ರೀತಿ, ಗೌರವ ಅದೆಷ್ಟು ಗಾಢವಾಗಿದ್ದಿರಬಹುದು. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಯೊಬ್ಬ ಕೇವಲ ಪ್ರವಾಸಿಯಾಗಿರದೇ ಇನ್ನೂ ಏನೇನೆಲ್ಲಾ ಆಗಿದ್ದ, ಹಾಗೂ ಭಾರತ ಆತನನ್ನು ನಡೆಸಿಕೊಂಡ ಪರಿ, ಹಾಗೂ ಅಂಥ ವಿದೇಶಿ ಪ್ರವಾಸಿಗನೊಬ್ಬನ ಬರೆಹಗಳಿಂದ ನಾವೀಗ ನಮ್ಮ ಇತಿಹಾಸವನ್ನು ತಿಳಿಯುತ್ತಿರುವುದು ಇತ್ಯಾದಿಗಳನ್ನು ಬಹಳ ಹೆಮ್ಮೆಯಿಂದ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಗೆ ಸಲ್ಲಲೇಬೇಕಾದ ಗೌರವ ಅದು. 


ತತ್ವಜ್ಞಾನ ಭಾರವಾಗಬಾರದು, ಬೇರೂರಬೇಕು. ಬೇರೂರಬೇಕು ಅಂದರೆ ಅದು‌ ಸಮಯ ಬೇಡುವ ಪ್ರಕ್ರಿಯೆ. ಹಾಗೆ ಬೇರೂರಿರುವ ತತ್ವಜ್ಞಾನವನ್ನು ಕಿತ್ತೊಗೆಯುವುದು ಕೂಡಾ ಅಷ್ಟು ಸಸಾರದ ಕೆಲಸವಲ್ಲ. ಭಾರತದ ಜೀವನ ಪದ್ಧತಿ ಕೂಡಾ ಅಂಥದ್ದೇ ಒಂದು ತತ್ವಜ್ಞಾನ. ಒಂದು ತತ್ವ ಜನಪ್ರಿಯವಾದಂತೆ ಹೇಗೆ ಕವಲುಗಳನ್ನು ಪಡೆದುಕೊಳ್ಳುತ್ತದೆ ಅನ್ನುವುದನ್ನು ಹಾಗೂ ಅದಕ್ಕಿರುವ ಉದಾಹರಣೆಗಳನ್ನೂ ಲೇಖಕರು ಇಲ್ಲಿ ತಿಳಿಸಿದ್ದಾರೆ. ಸಿದ್ಧಾಂತ ಮತ್ತು ಆರ್ಥಿಕತೆ ಇವೆರಡರಲ್ಲಿ ಯಾವುದು ಜಗತ್ತನ್ನಾಳುತ್ತದೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಎರಡು ಚೆಂದದ ಪ್ರಸ್ತುತಿ ಅಥವಾ ವಾದಗಳಿವೆ. ಅವು ಬಹಳ ಗಹನ ಆಲೋಚನೆಗಳನ್ನು ಸ್ಫುರಿಸುತ್ತವೆ. ಹಾಗೆಯೇ ಈ ಪುಸ್ತಕದಲ್ಲಿ ಅಲ್ಲಲ್ಲಿ ಸಮಾಜಪರವಾದ ಧ್ವನಿಗಳಿವೆ, ಕಿವಿಮಾತುಗಳಿವೆ ಕೂಡಾ. 


ಭಾರತದಲ್ಲಿ ಉಚಿತವಾಗಿ ಏನನ್ನು ಹಂಚುತ್ತಿದ್ದರು ಹಾಗೂ ಅಂಥ ದೇಶದ ಸ್ಥಿತಿ ಹೇಗಿದ್ದಿರಬಹುದು ಅನ್ನುವುದಕ್ಕೆ ಒಂದು ಮಾತನ್ನು ಲೇಖಕರು ಬಳಸಿದ್ದಾರೆ. ವರ್ತಮಾನದ ಕೆಲವು‌ ಸಂಗತಿಗಳನ್ನು ನೋಡಿದಾಗ, ಅದರಲ್ಲೂ ಕೊರೊನಾದ ಕಾಲಘಟ್ಟದಲ್ಲಿ ಭಾರತ ಜಗತ್ತಿನೊಡನೆ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ತನ್ನಿಂದ ತಾನಾಗಿಯೇ ತಾಳೆಹಾಕಬೇಕು ಅನಿಸುತ್ತದೆ. ಭಾರತವನ್ನಾಶ್ರಯಿಸಿ ಬಂದ ಯಾರೂ ಭಾರತೀಯರಿಂದ ಘಾಸಿಗೊಳಗಾಗಿಲ್ಲ ಅಂದರೆ ಅದು ಭಾರತದ ಹಿರಿಮೆ! ಹಿಂದೆಲ್ಲಾ ಆಶ್ರಯ ಬೇಡಿ ಬಂದ‌ ಜನಾಂಗ, ಬರುವಾಗ ಯಾವ ಧರ್ಮದ್ದಾಗಿತ್ತೋ ಮತ್ತೆ ವಾಪಸ್ ಹೋಗುವಾಗ ಅದೇ ಧರ್ಮಕ್ಕೆ ಸೇರಿದ ಜನಾಂಗವಾಗಿಯೇ ಹೋಗಿದ್ದು ಕೆಲವೇ ದೇಶಗಳಿಂದ. ಅಂಥ‌‌ ದೇಶಗಳಲ್ಲಿ ಭಾರತವೂ ಒಂದು ಅಂದರೆ ಅದು ಹೆಮ್ಮೆಯ ವಿಷಯವಲ್ವಾ!


"ಸಾವಿರ ದೇವರನ್ನು ಪೂಜಿಸುವ ನೆಲದಲ್ಲಿ ಇನ್ನೊಂದು ದೇವರನ್ನು ಸೇರಿಸಿಕೊಳ್ಳುವುದು ದೊಡ್ಡ ಕೆಲಸವೂ ಆಗಿರಲಿಲ್ಲ" ಅನ್ನುವ ಮಾತು ಭಾರತದ ಸಹಿಷ್ಣುತೆಯ ಸಾರಾಂಶವಲ್ಲದೇ ಇನ್ನೇನೂ ಅಲ್ಲ. ಅದಕ್ಕಾಗಿಯೇ ಹೇಳುವುದಲ್ವಾ 'ಭಾರತ ಯಾವತ್ತಿಗೂ ಅನ್ವೇಷಕರ ನಾಡು' ಅಂತ.  ಜೊತೆಗೆ, ಇಂಥದ್ದೊಂದು ಸಂಸ್ಕೃತಿಯ ಭಾಗವಾಗಿರುವುದಕ್ಕೆ ನಾವು ಸದಾ ಈ ಬದುಕಿಗೆ, ಇಂಥ ತತ್ವಜ್ಞಾನಗಳನ್ನು ಕೊಟ್ಟ ನಮ್ಮ ಪೂರ್ವಜರಿಗೆ ಕೃತಜ್ಞರಾಗಿರಬೇಕು. ಇಡೀ ಜೀವಕುಲದ ವಿಕಸನಕ್ಕೆ 'ಅನ್ವೇಷಣೆ'ಯ ಮನಸ್ಥಿತಿ ಮಹತ್ವದ ಕೊಡುಗೆ ಕೊಟ್ಟಿದೆಯೆಂದರೆ ತಪ್ಪಲ್ಲವೇನೋ. 'ಮಾಗಧಿಯ ಕಂಗಳಲ್ಲಿ' ಅನ್ನುವ ಲೇಖನದಲ್ಲಿ ಮಣ್ಣಿನ ಕುರಿತಾದ ಅದ್ಭುತವಾದ ಮಾತೊಂದಿದೆ. ಅದನ್ನು ಓದಿಯೇ ಮನಸ್ಸು ತುಂಬಿಕೊಳ್ಳಬೇಕು. 


ಕಲೆಗಳೆಲ್ಲವೂ ಬೇರೆಬೇರೆಯಲ್ಲ. ಒಂದು ಇನ್ನೊಂದಕ್ಕೆ ಪೂರಕ ಅನ್ನುವ ಅರಿವಿದ್ದವರು ಮಾತ್ರವೇ ಕಲೆಯ ಉಪಾಸನೆಯನ್ನು ಪಕ್ವವಾಗಿಸಿಕೊಳ್ಳುತ್ತಾರೆ ಅನ್ನುವುದು ಅದೆಷ್ಟು ಸತ್ಯದ ಮಾತು. ಚೆನ್ನಕೇಶವ ದೇವಾಲಯದ ಕೆತ್ತನೆಗಳ ವರ್ಣನೆ ಮಾಡುವಾಗ ಚೆನ್ನಕೇಶವನ ಕುರಿತಾಗಿ ಒಂದಷ್ಟು ಪದಗಳು ಬರುತ್ತವೆ, ಅದೊಂಥರಾ ರೋಮಾಂಚನಕಾರಿ ಅನ್ನಿಸಿತು ನನಗೆ. ಆ ಪದಗಳಿಗೆ ಇರುವ ಘನತೆಯೇ ಬೇರೆ. 


ಭಾರತದ ಕಥಾಪರಂಪರೆ ಹಾಗೂ ಅದರಿಂದ ಒದಗಬಹುದಾದ ಮಹತ್ವದ ಸಂಗತಿಗಳನ್ನು ಲೇಖಕರು ಭಾಗಮತಿಯ ಕುರಿತಾದ ಲೇಖನದಲ್ಲಿ ಹೇಳಿದ್ದಾರೆ. ಇಡೀ ಮನುಕುಲದ ಕಥಾಕೌಶಲಕ್ಕೆ ಕಳಸವಿಡುವ ಮಾತೊಂದು ಇಲ್ಲಿದೆ. ಹಾಗೆಯೇ ಇನ್ನೊಂದು ಲೇಖನದಲ್ಲಿ ಬಂಗಾಲದ ಹೆಣ್ಣುಮಕ್ಕಳ ಕುರಿತಾಗಿ ಒಂದು ಸಿಹಿ ಆರೋಪವಿದೆ; ಲೇಖಕರಿಗೆ ಇಷ್ಟು ಚೆನ್ನಾಗಿ ಹೇಗೆ ಗೊತ್ತು ಅನ್ನುವ ಪ್ರಶ್ನೆ ಎದುರಾದರೆ ನೀವೂ ನನ್ನಂತೆಯೇ !


ವಿಜಯನಗರ ಸಾಮ್ರಾಜ್ಯದ ವರ್ಣನೆಗೆ ಬರುವಾಗ ನಮಗೆ ಬೇರೆಯದೇ ಲೇಖಕರು ಸಿಗುತ್ತಾರೆ‌. ವಿಜಯನಗರದ ಸ್ಥಾಪನೆಯ ಸಮಯದಲ್ಲಿ ಎಂಥ ವಾತಾವರಣವಿತ್ತೋ, ಅಂಥ ಸಮಯದಲ್ಲಿ ಪುನರುತ್ಥಾನದ ಯಾವ ಉದ್ವೇಗವಿತ್ತೋ ಅದು ಲೇಖಕರ ಸಾಲುಗಳಲ್ಲೂ ಉಸಿರಾಡುತ್ತದೆ. ಪುಸ್ತಕದ ಎಲ್ಲಾ ಭಾಗಗಳಿಗಿಂತ ವಿಜಯನಗರದ ಭಾಗ ಬಹುಶಃ ಲೇಖಕರನ್ನು ಹೆಚ್ಚು ತಟ್ಟಿದೆ ಅಂತ ಅಲ್ಲಿನ ಸಾಲುಗಳಿಂದಲೇ ಹೇಳಬಹುದು. ವಿಜಯನಗರದ ಕತೆಯ ಸ್ವರೂಪವೂ ಇಲ್ಲಿ ಹೇಳಿ ಮಾಡಿಸಿದ ಹಾಗಿದೆ. ಅನಾದರಕ್ಕೆ ಒಳಗಾದ ಹಾಳುಹಂಪೆಯಲ್ಲದೇ‌ ಇನ್ನಾರು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವುದು ಸಾಧ್ಯ! ಸ್ವಗತದ ಮಾದರಿಯ ನಿರೂಪಣೆ ಹಂಪೆಯ ಕತೆಗೆ ಅತ್ಯಂತ ಸೂಕ್ತವಾದದ್ದು. ಮುಪ್ಪಿನಲ್ಲಿ ಸ್ವಗತವೊಂದೇ ಸಂಗಾತವಲ್ಲವೇ! 


"ಶುದ್ಧ ಇತಿಹಾಸ ಅನ್ನುವುದು ಒಂದು ಮಾಯಾಜಿಂಕೆ, ಅದೆಂದಿಗೂ ಇದ್ದಿರಲಿಲ್ಲ" ಅನ್ನುವ ಮಾತು ಒಂದೊಮ್ಮೆ ಇಡೀ ಇತಿಹಾಸದ ಉಲ್ಲೇಖಗಳ ಬುಡವನ್ನೇ ಅಲ್ಲಾಡಿಸುವ ಮಾತಂತೆ ತೋರುತ್ತದೆ. ಜೊತೆಗೆ, ಇತಿಹಾಸ ಅಂದರೆ "ಹೀಗೆ ನಡೆದಿತ್ತು" ಅನ್ನುವುದನ್ನು ಹೇಳುವುದಕ್ಕಿಂತ ಹಾಗೆ ನಡೆದಿದ್ದನ್ನು "ಹೇಗೆಲ್ಲಾ ಹೇಳಬಹುದು" ಅನ್ನುವುದನ್ನೇ ಹೆಚ್ಚು ಧ್ವನಿಸುತ್ತದೆ ಅಂದರೆ ತಪ್ಪಾಗಲಾರದು ಅನ್ನುವ ಸಂಗತಿಯನ್ನು ಮತ್ತೆ ಈ ಸಾಲು ನಮ್ಮೆದುರಿಗೆ ಇಡುತ್ತದೆ.


ಹಾಗೆಯೇ ಈ ಪುಸ್ತಕದಲ್ಲಿರುವುದು‌ ಇತಿಹಾಸವಾದರೂ ಕತೆಯ ಮೂಲಕ ಹೇಳಿದ ಕಾರಣಕ್ಕೆ, ಕತೆಯನ್ನು ಹೇಳಲು ಬರುವ ಹಲವು ಪಾತ್ರಗಳು ಕೇವಲ ನೆಪ ಮಾತ್ರಕ್ಕೆ ಬಂದಂತೆಯೂ, ಅದು ಸ್ವಲ್ಪ ಯಾಂತ್ರಿಕವಾಗಿಯೂ ಕೆಲವು ಕಡೆಗಳಲ್ಲಿ ಕಂಡಿತು. ಆದರೆ, ಅಂಥ ಪಾತ್ರಗಳನ್ನು ತರುವುದು ಹಾಗೂ ಅದರ ಸುತ್ತ ವರ್ತಮಾನದ ಕತೆ ಹೆಣೆದು ಅವುಗಳಿಂದ ಇತಿಹಾಸಕ್ಕೆ ವರ್ಗಾವಣೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಅನ್ನುವ ಅರಿವಿದ್ದರೂ, ಕೆಲವು ಪಾತ್ರಗಳು ಇನ್ನಷ್ಟು ಪಳಗಬಹುದಿತ್ತೇನೋ ಅಥವಾ ಇನ್ನಷ್ಟು ಕೊಡುಗೆ ಕೊಡಬಹುದಿತ್ತೇನೋ ಅಂತಲೂ ಅನ್ನಿಸಿತು. ಈ ಸಂಗತಿಯೇ ಕೆಲವೊಂದು ಕಡೆಗಳಲ್ಲಿ ಕೆಲವು ಪಾತ್ರಗಳ ಅಗತ್ಯತೆಯನ್ನು ಹಾಗೂ ಅವು ಕತೆಯಾಗುವಲ್ಲಿ ಸೋಲುವ ಸಾಧ್ಯತೆಗಳನ್ನೂ ಎತ್ತಿಹಿಡಿದಿದೆ.


ಒಟ್ಟಿನಲ್ಲಿ ಹೇಳುವುದಾದರೆ, ಇತಿಹಾಸವನ್ನು ಇಷ್ಟಪಡುವ ಹಾಗೂ ನಮ್ಮ ನಾಡನ್ನು ಇನ್ನಷ್ಟು ಮತ್ತಷ್ಟು ಪ್ರೀತಿಸುವ ನಾವೆಲ್ಲರೂ ಓದಲೇಬೇಕಾದ ನಮ್ಮ ಗತದ, ನಮ್ಮ ಸ್ವಂತದ ಕಥಾನಕ 'ಕಥಾಗತ'


~`ಶ್ರೀ' 

‌    ತಲಗೇರಿ

ಕುಣಿಗಲ್‌ ಟು ಕಂದಹಾರ್


 ಕುಣಿಗಲ್ ಟು ಕಂದಹಾರ್


ಯುದ್ಧಭೂಮಿಗಳ ಕುರಿತಾಗಿ ನಾವು ಅಲ್ಲಲ್ಲಿ ಚೂರು ಚೂರು ಓದಿದ್ದೇವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡಾಗ ವಿಮಾನದ ರೆಕ್ಕೆಗಳ ಮೇಲೆಲ್ಲಾ ಜನರು ಹತ್ತುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ, ಅಂಥದ್ದೇನಿತ್ತು ಹಾಗೆಲ್ಲಾ ದೇಶ ಬಿಟ್ಟು ಓಡುವುದಕ್ಕೆ? ಒಂದಷ್ಟು ವರ್ಷಗಳ ಕಾಲ ನ್ಯಾಟೋ ಸೈನ್ಯದ ಆಡಳಿತಕ್ಕೆ ಅಫ್ಘಾನಿಸ್ತಾನ ಒಳಪಟ್ಟಾಗ ಆದಂಥ ಬದಲಾವಣೆಗಳೇನಾಗಿದ್ದವು? ನಿಜಕ್ಕೂ ಆಗಿದ್ದವಾ? ಯುದ್ಧದ ನೆರಳು ಹೊತ್ತ ನಾಡು ಹೇಗೆಲ್ಲಾ ಇರಬಹುದು. ಯುದ್ಧದ ಕತೆ ಒಂದೆಡೆಯಾದರೆ, ಬೇರೆ ಬೇರೆ ದೇಶದ, ಸಂಸ್ಕೃತಿಯ, ಮತ ಪಂಥಗಳ ಮನುಷ್ಯ ಮನುಷ್ಯರ ನಡುವಣ ಸಂಬಂಧ ಇಂಥ ಸ್ಥಿತಿಗಳಲ್ಲಿ ಹೇಗಿರುತ್ತವೆ? ಅಂಥದ್ದೊಂದು ಜಾಗಕ್ಕೆ ಕೆಲಸಕ್ಕೆ ಕರೆದಾಗ ಅಲ್ಲಿಗೆ ಹೋದವರ ತಳಮಳಗಳೇನು? ಪ್ರವಾಸ ಕಥನವೆಂದರೆ ಅಲ್ಲಿ ಆರಾಮಾಗಿ ಮಜಾ ಮಾಡಬಹುದಾದ ಜಾಗ, ಆಹಾರ, ಚಟುವಟಿಕೆಗಳ ಕುರಿತಾದ ಸಂಗತಿ ಮಾತ್ರವಾ? ಹಾಗಿದ್ದರೆ, ಇಂಥ ಕಡೆಗಳಿಗೆ ಪ್ರವಾಸ ಹೋದಾಗ ಅದರ ಕಥನ ಹೇಗಿದ್ದೀತು? ಇಂಥ ಪ್ರವಾಸದೊಂದಿಗೆ ಅಂಟಿಕೊಂಡ ಪ್ರಯಾಸದ ಜೊತೆಗೆ ಒದಗಬಹುದಾದ ಬದುಕಿನ ಒಳನೋಟಗಳ ದಾಖಲಾತಿ ಏನಿದ್ದೀತು? ಮುಂದಿನ ಕ್ಷಣದ ಭರವಸೆಯಿಲ್ಲದೇ ಬದುಕುವುದಕ್ಕೆ ಸಾಧ್ಯವಾ? ಹಾಗೆ ಬದುಕುವವರ ಮನಸ್ಥಿತಿಗಳೇನು? ಯಾಕೆ ಮನುಷ್ಯ ತನ್ನ ಊರು, ದೇಶ ಬಿಟ್ಟು ಇನ್ನ್ಯಾವುದೋ ದೇಶಕ್ಕೆ ಹೋಗುವುದು? ಹಾಗೆ ಹೋದವರೆಲ್ಲಾ ವೈಭೋಗದ ಬದುಕನ್ನೇ ಪಡೆದಿದ್ದಾರಾ? ಇತ್ಯಾದಿ ಪ್ರಶ್ನೆಗಳಿಗೆ ಅತ್ಯಂತ ಸಂಯಮದಿಂದ ಉತ್ತರಿಸಬಲ್ಲ ಬಹಳ ಬಹಳ ಚೆಂದದ ಪುಸ್ತಕ ಶ್ರೀ ಮಂಜುನಾಥ್ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್' 


ಇದು ಚೆಂದದ ಪುಸ್ತಕ ಅನ್ನುವುದಕ್ಕೂ ಕಾರಣಗಳಿವೆ. ಎಷ್ಟೆಲ್ಲಾ ನೋವುಗಳ ನಡುವೆಯೂ ಮನುಷ್ಯ ಜನಾಂಗ ಸಂಭ್ರಮವನ್ನು ಹುಡುಕಿಕೊಳ್ಳುತ್ತದೆ. ಭರವಸೆಯ ಆಕಾಶದೀಪದತ್ತ ಕಣ್ಣೋಣವನ್ನು ಸದಾ ನೆಟ್ಟಿರುತ್ತದೆ. ಬಹುಶಃ ಅಂಥ ಆಶಾಭಾವ ಇರದೇ ಹೋದಲ್ಲಿ ಮನುಷ್ಯರ ಸಾಹಸಗಾಥೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಸಿಗುತ್ತಿರಲೇ ಇಲ್ಲ. ಇತಿಹಾಸಗಳಲ್ಲಿ ಇರದಿದ್ದ ಮೇಲೆ ಅದರ ಆಧಾರದ ಮೇಲೆ ಬೆಳೆವ ಮುಂದಿನ ಜನಾಂಗಗಳು ಬಹುಶಃ ದುರ್ಬಲವಾಗುತ್ತಲೇ ಹೋಗಬಹುದು. ಯುದ್ಧಭೂಮಿಯಂಥದ್ದೇ ವಾತಾವರಣವಿರುವ ಜಾಗಗಳಿಗೆ ಪದೇ ಪದೇ ಕೆಲಸಕ್ಕೆ ಹೋಗಬೇಕಾಗಿ ಬಂದಾಗ ಲೇಖಕರು ಹೇಗೆ ಪ್ರತಿಕ್ರಿಯಿಸಿದರು‌ ಅನ್ನುವಲ್ಲಿಂದ ಹಿಡಿದು, ಇಂಥ ಮಾನವೀಯ ಕ್ಷಣಗಳಲ್ಲೂ ಮನುಷ್ಯ ಲೋಕ ತನ್ನ ಲಾಭವನ್ನು ಹೇಗೆಲ್ಲಾ ಹುಡುಕಿಕೊಳ್ಳುತ್ತದೆ ಅನ್ನುವಲ್ಲಿಯ ತನಕ ಹಲವಾರು ಸಂಗತಿಗಳು ಇಲ್ಲಿ ಬಂದು ಹೋಗುತ್ತವೆ. 


ಪ್ರವಾಸ ಕಥನವೆಂದರೆ ಹೀಗೂ ಇರಬಹುದು ಅನ್ನುವ ಹೊಸ ಪಂಕ್ತಿಯನ್ನು ಹಾಕಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಯಾವತ್ತಿನ ಶೈಲಿಯಲ್ಲಿ ಈ ಪುಸ್ತಕದ ಕುರಿತು ಬರೆಯುವುದು ತುಸು ಕಷ್ಟವೇ ಆಗುತ್ತಿದೆ; ಕಾರಣ ಇಷ್ಟೇ, ಈ ಪುಸ್ತಕವನ್ನು ಸುಮ್ಮನೆ ಹೀಗೆ ಕಾಟಾಚಾರಕ್ಕೆ ನಾಲ್ಕು ಸಾಲುಗಳಲ್ಲಿ ಹೊಗಳಲು ಹೋದರೆ ಅದು ನೀರಸ ಪ್ರಯತ್ನವಷ್ಟೇ ಆದೀತು. ಬೇರೆ ಭಾಷೆಯ ಹಲವರು ಈ ಥರದ ಪುಸ್ತಕಗಳನ್ನು ಬರೆದಿರಬಹುದು. ಆದರೆ, ನಮ್ಮ ಕನ್ನಡದಲ್ಲೇ ನಮ್ಮ ಕನ್ನಡದವರದ್ದೇ ಕಥನವನ್ನು ಓದುವಾಗ ಇರುವ ಆಪ್ತತೆ ಕನ್ನಡಕ್ಕೆ ಇಂಥದ್ದೊಂದು ಪುಸ್ತಕ ಬೇಕಾಗಿತ್ತು ಅಂತ ಅನ್ನಿಸುವ ಹಾಗೆ ಮಾಡಿದರೆ ಅದು ಅತಿಶಯೋಕ್ತಿಯಲ್ಲ ಅಂತಂದುಕೊಳ್ಳುತ್ತೇನೆ. ನಾವೆಲ್ಲರೂ ಅದೆಷ್ಟು ಆರಾಮಾಗಿ ಆ ದೇಶ ಹೀಗೆ ಮಾಡಬೇಕಿತ್ತು, ಈ ದೇಶ ಹಾಗೆ ಮಾಡಬೇಕಿತ್ತು ಅಂತನ್ನುತ್ತಾ ರಾಜಕೀಯದ ನಿಪುಣರಂತೆ ವರ್ತಿಸುವಾಗ ದೇಶ ದೇಶಗಳ ನಡುವಿನ ಆಯಾಮಗಳು ಬೇರೆಯೇ ಅನ್ನುವುದನ್ನು ಈ ಪುಸ್ತಕ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ, ಅಫ್ಘನ್ನರ  ಕನಸುಗಳನ್ನು, ಶಾಂತಿಯ ಕುರಿತಾಗಿನ ತಹತಹಗಳನ್ನೂ ಈ ಪುಸ್ತಕ ಸೂಕ್ಷ್ಮವಾಗಿ ಹೇಳುತ್ತದೆ. ಲೇಖಕರು ಅವರ ಹಳೆಯ ಕಂಪನಿಯ ಕುರಿತಾಗಿಯೂ, ಕಾರ್ಪೋರೇಟಿನ ಕುರಿತಾಗಿಯೂ ಕೆಲವು ಸಂಗತಿಗಳನ್ನು ಬರೆದಿದ್ದಾರೆ; ಅದು ಅವರು ಈ ಬರೆಹದಲ್ಲಿ ಅದೆಷ್ಟು ಪ್ರಾಮಾಣಿಕರಾಗಿದ್ದರು ಅನ್ನುವುದನ್ನು ಸೂಚಿಸುತ್ತದೆ. 


~`ಶ್ರೀ'

   ತಲಗೇರಿ


ಒಂದೊಳ್ಳೆಯ ಪುಸ್ತಕಕ್ಕಾಗಿ ತಮಗೆ ಧನ್ಯವಾದಗಳು Manjunath Kunigal ಅವರೇ🙏💐

ನೀಲಿ‌ ಬಣ್ಣದ ಸ್ಕಾರ್ಫು


 ನೀಲಿ ಬಣ್ಣದ ಸ್ಕಾರ್ಫು


ಈ ಪುಸ್ತಕದ ಹೆಸರು ಕೇಳಿದ ದಿನದಿಂದ ಇದನ್ನು ಓದಬೇಕು ಅನ್ನುವ ಕುತೂಹಲ ಬಹಳ ಇತ್ತು. ಆದರೆ, ಯಾವುದೇ ಪುಸ್ತಕದ ಹಾರ್ಡ್ ಕಾಪಿ ಖರೀದಿ ಮಾಡುವುದನ್ನು ಬಿಟ್ಟು ೩-೪ ವರ್ಷಗಳಾಗಿದ್ದರಿಂದ ಈ ಪುಸ್ತಕವನ್ನು ಓದುವುದಕ್ಕೆ ಸಾಧ್ಯವಾಗಿರಲಿಲ್ಲ.


ಅನ್ನಿಸಬಹುದು, ಹೆಸರು ಕೇವಲ ಪದಗಳ ಗುಚ್ಛ ಅಂತ. ಆದರೆ, ಕೆಲವು ಹೆಸರುಗಳಿಗೆ ಆಯಸ್ಕಾಂತೀಯ ಗುಣಗಳಿರುತ್ತವೆ. ಹೆಸರುಗಳೇ ಕುತೂಹಲವನ್ನು ಹುಟ್ಟಿಸುತ್ತವೆ. ಅದರಲ್ಲೂ ಸಿನೆಮಾದ, ಪುಸ್ತಕದ, ಲೇಖನದ ಹೆಸರುಗಳಿಗಾಗಿ ಬಹಳಷ್ಟು ತಲೆಕೆಡಿಸಿಕೊಳ್ಳುವುದು ಸಹಜ ಸಂಗತಿ. ಸ್ಕಾರ್ಫಿಗೆ ಫ್ಯಾಷನ್ ಜಗತ್ತಿನಲ್ಲಿ ವಿಶಿಷ್ಟವಾದ ಜಾಗ ಇದೆ. ಅಂಥ ಸ್ಕಾರ್ಫು ಕನ್ನಡದ ಹಳ್ಳಿಯ ಕತೆಯೊಳಗೆ ಸೇರಿಕೊಂಡಿದ್ದು ಒಂದು ಭಿನ್ನ ಪ್ರಪಂಚವನ್ನು ನಮ್ಮೆದುರು ತೆರೆದಿಡುತ್ತದೆ. ಹಿಂದೊಂದು ಕಾಲದಲ್ಲಿ ನೀಲಿ ಬಣ್ಣ ಹೆಣ್ತನದ ಸಂಕೇತವಾಗಿತ್ತಂತೆ ಹಾಗೂ ಗುಲಾಬಿ ಬಣ್ಣ ಪುರುಷರ ಪ್ರತಿನಿಧಿಯಾಗಿತ್ತಂತೆ. ಆದರೆ, ಬಹುಶಃ ಹಿಟ್ಲರಿನ ಕಾಲದಲ್ಲಿ ಈ ಎರಡೂ ಬಣ್ಣಗಳ ಸ್ಥಾನಪಲ್ಲಟವಾಗಿರಬಹುದು ಅಂತ ಒಂದು ವಾದವಿದೆ. ನೀಲಿ ಅನ್ನುವುದು ಆಕಾಶದ ಬಣ್ಣ, ಹಾಗೆಯೇ ಅದನ್ನು ಪ್ರತಿಫಲಿಸುವ ಸಮುದ್ರದ ಬಣ್ಣ. ಅಂದರೆ ಅಗಾಧತೆಯ, ಪ್ರಶಾಂತತೆಯ, ಸ್ಥಿರತೆಯ ಬಣ್ಣ. ಇಲ್ಲಿನ ಕತೆಗಳಲ್ಲಿ ಹೆಣ್ಣು ಮನಸ್ಸಿನೊಳಗೆ ಅಡಿಯಿಡುವ ಪ್ರವೇಶ ದ್ವಾರವಿದೆ. ಅಲ್ಲಿನ ಪ್ರಪಂಚ ಸ್ಥಿರವೋ ಅಸ್ಥಿರವೋ, ಪ್ರಶಾಂತವೋ ಅಥವಾ ಸದಾ ಪ್ರಕ್ಷುಬ್ಧವೋ ಅನ್ನುವುದು ಬೇರೆಯ ಸಂಗತಿ, ಆದರೆ ಅಗಾಧ ಅನ್ನುವುದಂತೂ ಸತ್ಯ. 


ಮೀಡಿಯಾ ಚೆರ್ರಿ ಪ್ರಕಾಶನದ ಚೈತ್ರಿಕಾ ಹೆಗಡೆಯವರ  ಮೊದಲ ಕಥಾ ಸಂಕಲನವಿದು. ಒಂದು ಕಾರ್ಯಕ್ರಮದಲ್ಲಿ ಚೈತ್ರಿಕಾ ಮತ್ತು ಅವರ ಪತಿ ನಾಗರಾಜ ವೈದ್ಯ ಅವರನ್ನು ಭೇಟಿಯಾಗಿದ್ದಾಗ ಈ ಪುಸ್ತಕದ ಇ-ಬುಕ್ ಆವೃತ್ತಿ ಹೊರತರಬಹುದಾ ನೋಡಿ ಅಂತ ವಿನಂತಿಸಿಕೊಂಡಿದ್ದೆ. ಅದಕ್ಕೆ ಸ್ಪಂದಿಸಿದ ಅವರು ಒಂದೆರಡು ವಾರದಲ್ಲೇ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಇ-ಬುಕ್ ಲಭ್ಯವಾಗುವ ಹಾಗೆ ಮಾಡಿದರು. ಕನ್ನಡದ ಇನ್ನಷ್ಟು ಮತ್ತಷ್ಟು ಪುಸ್ತಕಗಳು ಇ-ಪುಸ್ತಕಗಳಾಗಿ ಬರಬೇಕು ಅನ್ನುವುದು ನನ್ನ ಆಸೆ. 


೧೨ ಕತೆಗಳಿರುವ ಈ ಸಂಕಲನದಲ್ಲಿ ಚೈತ್ರಿಕಾ ಅವರು ಕಳೆದ ಪರಿಸರದ ಒಡನಾಟದ ಕತೆಗಳಿವೆ. ಬಹುಶಃ ಎಲ್ಲ ಬರಹಗಾರರ ಶಕ್ತಿಯೂ ಇದೇ. ಜಯಂತ ಕಾಯ್ಕಿಣಿಯವರು ಹೇಳ್ತಾರಲ್ಲಾ, ಬದುಕಿನಿಂದ ಬರಹ ಬರಬೇಕು ಅಂತ, ಹಾಗೆಯೇ ಬರಹಗಾರರ ಸುತ್ತಮುತ್ತಲಿನ ಸಂಗತಿಗಳು ಕತೆಗಳಾಗಿ ಬರಬೇಕು. ಆಗಲೇ, ಅಂಥ‌ ಕತೆಗಳಿಗೆ ಸ್ವಂತಿಕೆಯೂ ನೂತನತೆಯೂ ಸಿಕ್ಕುವುದು. ಕಾಂತಾರದ ಸಮಯದಲ್ಲಿ ರಿಷಭ್ ಶೆಟ್ಟಿಯವರು ಒಂದು ಮಾತನ್ನು ಪದೇ ಪದೇ‌ ಉಲ್ಲೇಖಿಸುತ್ತಿದ್ದರು; "ಹೆಚ್ಚು ಹೆಚ್ಚು ಪ್ರಾದೇಶಿಕವಾದಷ್ಟೂ ಅದು ಜಾಗತಿಕ" ಅಂತ. 


ಇಲ್ಲಿನ ಕತೆಗಳೆಲ್ಲವೂ ಸಹಜವಾದ ಕತೆಗಳು. ಬಹುತೇಕ ಎಲ್ಲಾ ಕತೆಗಳಲ್ಲೂ ಪ್ರೀತಿ, ಮದುವೆ, ಸಂಸಾರ ನನಗೆ ಸಾಮಾನ್ಯ ಅಂಶಗಳಾಗಿ ಕಂಡವು. ಬಹುತೇಕ ಕತೆಗಳಲ್ಲಿ ಬೇರೆ ಬೇರೆ ಪರಿಸರದಲ್ಲಿ ಹುಡುಗ ಮತ್ತು ಹುಡುಗಿಯ ಪ್ರೇಮದ ಬದುಕನ್ನು, ಹೆಣ್ಣಿನ ಸಣ್ಣ ಸಣ್ಣ ಇಚ್ಛೆಗಳನ್ನು ಹುಡುಕುವ, ಆ ಮೂಲಕ ಬದುಕಿನ ಪುಟಗಳನ್ನು ತೆರೆದಿಡುವ ಪ್ರಯತ್ನ ಕಂಡಿತು. ಅದರ ಜೊತೆಗೆ ಉತ್ತರ ಕನ್ನಡದ ನಿತ್ಯದ ಬದುಕಿನ ಶೈಲಿಗಳನ್ನು ಎಲ್ಲಾ ಕತೆಗಳು ಬಹುತೇಕ ತೆರೆದಿಡುತ್ತಾ ಹೋದವು. ಉತ್ತರ ಕನ್ನಡ ಅನ್ನುವ ಜಿಲ್ಲೆಯೊಂದು ಇದೆಯೆಂದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಉತ್ತರ ಕನ್ನಡವೆಂದರೆ ನಾರ್ಥ್ ಕರ್ನಾಟಕಾನಾ ಅಂತಲೋ, ಯಾವಾಗ್ಲೂ ಅಲ್ಲಿ ಬಿಸಿಲು ಜಾಸ್ತಿ ಅಲ್ವಾ ಅಂತಲೋ, ರೊಟ್ಟಿ ಜಾಸ್ತಿ‌ ತಿನ್ನೋದು ಅಲ್ವಾ ಅಂತಲೋ ಕೇಳೋ ಪರಿಸ್ಥಿತಿ ಇರುವಾಗ ಇಂಥ ಉತ್ತರ ಕನ್ನಡಿಗರ ಬದುಕನ್ನು ದಾಖಲಿಸುವ ಕತೆಗಳು‌, ಅದರ ಮೂಲಕ ‌ಅಲ್ಲಿನ ಜನಜೀವನವನ್ನು ಹೊರ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ ಖುಷಿಯಾಗದೇ ಹೋದೀತಾ! ಇಲ್ಲಿನ ಕತೆಗಳಲ್ಲಿ ಈ ಭಾಗದ ಹೆಣ್ಮನಗಳ ಬದುಕಿನ ನೋಟಗಳಿವೆ. ಹೊಂದಾಣಿಕೆಯೆಂಬುದು ಈ ಭಾಗದ ಜನರ ಬಹುಮುಖ್ಯ ಗುಣ, ಅದರಲ್ಲೂ ಇಲ್ಲಿನ ಹೆಣ್ಣುಮಕ್ಕಳಿಗೆ ಅದು ವಿಶೇಷವಾಗಿ ತುಸು ಹೆಚ್ಚೇ ಇರುವ ಸಂಗತಿ. ಜಗತ್ತಿನ ಬಹುತೇಕ ಎಲ್ಲಾ ಹಳ್ಳಿಗಳ ಹೆಣ್ಣುಮಕ್ಕಳ‌ ಕತೆ ಇದೇ ಇರಬಹುದು. ಹೆಚ್ಚಿನ ಆಸೆಗಳಿಲ್ಲದೇ, ಯಾರ ತಂಟೆಗೂ ಹೋಗದೇ, ಊರಿನ ಸಣ್ಣಪುಟ್ಟ ರಾಜಕೀಯ ತಕರಾರುಗಳಷ್ಟರಲ್ಲೇ ಬದುಕು ಸಾಗಿಸುವವರು ಇಲ್ಲಿನ ಜನರು. ಈ ಎಲ್ಲಾ ಸಂಗತಿಗಳನ್ನು ಈ ಕತೆಗಳಲ್ಲಿ ಸ್ಪರ್ಶಿಸಲಾಗಿದೆ.


ಮದುವೆಯೆಂಬುದು ಬಹುದೊಡ್ಡ ಸಂಗತಿ. ಅದರಲ್ಲೂ ಹಳ್ಳಿಗಳಲ್ಲಿ ಮದುವೆಯೆಂಬುದು ಒಂದು ಮಹಾಕನಸು. ಅಂದರೆ, ಮದುವೆಯಾದರೆ, ಬದುಕೊಂದು ಪೂರ್ಣವಾದಂತೆ, ಜವಾಬ್ದಾರಿಗಳು ಮುಗಿದಂತೆ ಅನ್ನುವ ನಂಬಿಕೆಯಿದೆಯಲ್ಲಾ ಅದು ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಈ ಸಂಕಲನದ ಕತೆಗಳಲ್ಲಿನ ಹೆಣ್ಣು ಪಾತ್ರಗಳು ಬಹುತೇಕವಾಗಿ ಮದುವೆಯ ಸುತ್ತಮುತ್ತಲೇ ಕೇಂದ್ರೀಕೃತವಾಗಿರುವುದರಿಂದ ಚೂರು ಭಿನ್ನ ಕತೆಗಳನ್ನು ಕತೆಗಾರ್ತಿಯಿಂದ ಇನ್ನು ಮುಂದೆ ನಿರೀಕ್ಷಿಸಬಹುದು ಅಂದುಕೊಂಡಿದ್ದೇನೆ. ಬೇರೆ ಥರದ ಕತೆಗಳಿದ್ದಿದ್ದರೆ ಹೇಗಿರುತ್ತಿದ್ದವು ಅನ್ನುವ ಕುತೂಹಲವೊಂದು ನನ್ನಲ್ಲಿ ಉಳಿದುಕೊಂಡಿದೆ‌. ಹೊಸ ಕತೆಗಾರ್ತಿಯ ಈ ಪ್ರವೇಶ ಈ ಭಾಗದ ಇನ್ನಷ್ಟು ಕತೆಗಳಿಗೆ, ಬದುಕಿನ ಮತ್ತಷ್ಟು ನೋಟಗಳಿಗೆ ಪ್ರವೇಶ ಒದಗಿಸಲಿ ಅನ್ನುವ ಆಶಯದೊಂದಿಗೆ... 


~`ಶ್ರೀ' 

    ತಲಗೇರಿ

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'

 

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'


ಕೆಲವು ಸಂಗತಿಗಳು ಬಹಳ ವಿಭಿನ್ನವೂ, ವಿಶೇಷವೂ ಆಗಿರುತ್ತವೆ. ಅದರಲ್ಲಿ ಲೇಖಕರು ಹಾಗೂ ಓದುಗರ ನಡುವಿನ ಸಂಬಂಧ ಕೂಡಾ ಹೌದು. ಲೇಖಕರು ತಮ್ಮ ಅದ್ಯಾವುದೋ ಒಂದಷ್ಟು ಗಳಿಗೆಗಳಲ್ಲಿ ಎದುರಾದ ಭಾವ ತೀವ್ರತೆಯನ್ನು ಪದಗಳಲ್ಲಿ ಇಳಿಸಿ, ಅದರ ಭಾರವನ್ನು, ಅದರ ಆಳವನ್ನು, ಅದರ ಹಗುರವನ್ನು, ಅದರ ವೈಶಾಲ್ಯವನ್ನು, ಅದರ ಹಿಂಜರಿಕೆಗಳನ್ನು ಓದುಗರಿಗೆ ದಾಟಿಸಿಬಿಡುತ್ತಾರೆ. ಓದುಗರು ಇನ್ನ್ಯಾವುದೋ ಗಳಿಗೆಗಳಲ್ಲಿ, ಅವರ ಬದುಕಿನ ಅದೆಂಥದ್ದೋ ಕ್ಷಣಗಳಲ್ಲಿ ಇವುಗಳನ್ನು ಓದುವುದಕ್ಕೆ ಶುರುಮಾಡುತ್ತಾರೆ. ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಆಧಾರದ ಮೇಲೆ ಆ ಬರಹಗಳು ಇಷ್ಟವಾಗಬಹುದು, ಅಥವಾ ಇಷ್ಟವಾಗದೇ ಇರಬಹುದು ಕೂಡಾ. ಆದರೆ, ಇಂಥದ್ದೊಂದು ಪ್ರಕ್ರಿಯೆ ಇದೆಯಲ್ಲಾ, ಇದು ಯಾವತ್ತಿಗೂ ಕೊನೆಯಾಗದಿರಲಿ ಅನ್ನುವುದು ಬಹುಶಃ ಎಲ್ಲ‌ ಕಾಲಕ್ಕೂ ಸಲ್ಲಬಹುದಾದ ಪ್ರಾರ್ಥನೆ ಅನ್ನಿಸುತ್ತದೆ. ನಾನು ಓದುವ ಪುಸ್ತಕಗಳ ಲೇಖಕರಿಂದ ಯಾವತ್ತೂ ದೂರ ಇರುವುದಕ್ಕೆ ಬಯಸುವವನು, ಅದು ಎಷ್ಟು ಸರಿ ಅಥವಾ ತಪ್ಪು, ಅದರಿಂದ ನನಗಾಗುವ ನಷ್ಟಗಳೇನು ಅನ್ನುವುದು ಬೇರೆ ಮಾತು. ಅಜ್ಞಾತ ಓದುಗರ ಕುರಿತಾಗಿ ನನಗಿರುವ ಸೆಳೆತವೂ ಇದಕ್ಕೆ ಕಾರಣವಿರಬಹುದು. ಆದರೂ, ಕೆಲವೊಮ್ಮೆ ಓದುಗರು ಮತ್ತು ಲೇಖಕರು ಒಂದೇ ಹಾದಿಯಲ್ಲಿ ಮತ್ತೆ ಮತ್ತೆ ಭೇಟಿಯಾಗುತ್ತಲೇ ಇರುತ್ತಾರೆ ಅಪರಿಚಿತರಾಗಿಯೂ! ಅಂಥ ಒಂದು ಸಂದರ್ಭ ನನಗೆ ಅಬ್ದುಲ್ ರಶೀದರ ಜೊತೆ ನೆನಪಿದೆ. ಕನ್ನಡದ ಹೆಸರಾಂತ ಲೇಖಕರೊಬ್ಬರು ಇಹಲೋಕ ತ್ಯಜಿಸಿದ ದಿನ ಅವರ ಕುರಿತಾಗಿ ಲೇಖನ ಬರೆದುಕೊಡುವಂತೆ ಒಂದು ಪತ್ರಿಕೆಯಿಂದ ಕರೆಬಂದಿತ್ತು. ಅಬ್ದುಲ್ ರಶೀದರು ನನ್ನನ್ನು ಕೇಳುವಂತೆ ಹೇಳಿದರೆಂದು ಕರೆ‌ ಮಾಡಿದವರು ಹೇಳಿದ್ದರು. ಆ ಕರೆ ಇನ್ನೊಬ್ಬ ಹಿರಿಯ ಲೇಖಕರಿಗೆ ಹೋಗುವ ಬದಲಾಗಿ ನನಗೆ ಬಂದಿತ್ತೆಂದು ಇವತ್ತಿಗೂ ನನ್ನ ನಂಬಿಕೆ. ಯಾಕೆಂದರೆ, ನಾನು ಅಬ್ದುಲ್ ರಶೀದರೊಂದಿಗೆ ಯಾವತ್ತೂ ಮಾತನಾಡಿದ್ದಿಲ್ಲ. ಅವರಿಗೆ ನನ್ನ ಪರಿಚಯವೂ ಇರಲಿಕ್ಕಿಲ್ಲ. ಆದರೆ, ಇಂಥ ಗಳಿಗೆಗಳು ಬಹಳ ವಿಶಿಷ್ಟವಾದವು ಅಂತ ನನಗನಿಸುತ್ತದೆ. ಅಬ್ದುಲ್ ರಶೀದರ ಬಹಳಷ್ಟು ಪುಸ್ತಕಗಳನ್ನು ನಾನು ಓದಿಲ್ಲ. ಕೆಲವೊಂದನ್ನು ಓದಿದ್ದೇನೆ, ಇನ್ನು ಕೆಲವನ್ನು ಓದುತ್ತಲೇ ಇದ್ದೇನೆ, ಅರ್ಧ ಓದಿದ್ದೇನೆ, ಕೆಲವಷ್ಟನ್ನು ಓದುವುದಕ್ಕೆ ನಾನಿನ್ನೂ ತಯಾರಾಗಿಲ್ಲ ಅನ್ನುವ ಕಾರಣಕ್ಕೆ ಮುಂದೂಡಿದ್ದೇನೆ. ಅದರಲ್ಲಿ ಕೆಲವು ಪುಸ್ತಕಗಳು 'ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್' ಅನ್ನುವ ಕಥಾ ಸಂಕಲನ,  'ಹೂವಿನ ಕೊಲ್ಲಿ' ಅನ್ನುವ ಅವರ ಚೊಚ್ಚಲ ಕಾದಂಬರಿ, ಅಂಕಣ ಬರಹಗಳ ಸಂಗ್ರಹವಾದ 'ಕಾಲು ಚಕ್ರ' ಹಾಗೂ ಈಗ ಮಾತನಾಡುತ್ತಿರುವ ಪುಸ್ತಕ 'ಮೈಸೂರ್ ಪೋಸ್ಟ್' ಅನ್ನುವ ಅಂಕಣ ಬರಹಗಳ ಸಂಗ್ರಹ. ಹೀಗೆ ಅವರ ಹತ್ತಿರ ಇಷ್ಟು ಓದಲಿಲ್ಲ ಇನ್ನೂ ಅಂತಂದರೆ, ಒಳ್ಳೇ‌ ಕೆಲಸ ಮಾಡಿದೀಯಾ, ಓದಬೇಡ! ಅಂತ ಅಂದರೂ ಅನ್ನಬಹುದು ಎನ್ನುವ ಎಲ್ಲ ನಂಬಿಕೆಗಳೂ ನನಗಿವೆ! 


ಅಬ್ದುಲ್ ರಶೀದರ ಕುರಿತಾಗಿ ಚೆಂದದ ಸಂಗತಿಗಳನ್ನು ಕೇಳಿದ್ದು ಬಹಳ, ಹಾಗೆಯೇ ಅವರ ಮಾತುಗಳನ್ನೂ ಕೇಳಿದ್ದೇನೆ ಯುಟ್ಯೂಬ್ ಅಲ್ಲಿ ಬಹಳ ಸಲ. ಅವರದೇ ಒಂದು ಪುಸ್ತಕದ ಹೆಸರು ‌ಹೇಳುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುತ್ತಾರೇನೋ ಅನ್ನಿಸಿದರೆ ಅದು ಅತಿಶಯೋಕ್ತಿ ಅಲ್ಲ ಅಂತಲೂ ಅನ್ನಿಸುತ್ತದೆ. ಅದು ಅವರ ಬರಹಗಳಲ್ಲಿಯೂ, ಅದರ ವೈವಿಧ್ಯತೆಗಳಲ್ಲಿಯೂ ಕಾಣಸಿಗುತ್ತದೆ. ಇಂಥ ತಿರುಗಾಟ ಬಹುಶಃ ಕೆಲವರಿಂದ ಮಾತ್ರ ಸಾಧ್ಯ. ಅಬ್ದುಲ್ ರಶೀದರಂಥವರು, ಡಾ. ಬ್ರೋ (ಗಗನ್ ಶ್ರೀನಿವಾಸ್ ) ಥರದಂಥವರು ಇಂಥ ಬದುಕನ್ನು ಹಾಗೂ ಅಲ್ಲಿನ ಕತೆಗಳನ್ನು ಹೇಳಬಲ್ಲರು. ಮಲೆಯಾಳಂನ ಒಂದು ಚಿತ್ರ 'ಚಾರ್ಲಿ' ಇಂಥದ್ದೇ ಕಾರಣಗಳಿಗಾಗಿ ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ತನ್ನತ್ತ ಕರೆಸಿಕೊಳ್ಳುವ ಚಿತ್ರ. ಸದಾ ಓಡಾಟ, ಒಡನಾಟ, ಜನರಲ್ಲಿ ಬೆರೆಯುವಿಕೆ ಇರುವ ಅಬ್ದುಲ್ ರಶೀದರ ಬರಹಗಳಲ್ಲಿ ಕೂಡಾ ಈ ಎಲ್ಲಾ ಭೇಟಿಗಳ, ಕ್ಷಣಗಳ, ವಿಷಯಗಳ ನೆರಳಿದೆ. ಹೀಗೆ ಅವರು ಭೇಟಿಯಾದ ಅಥವಾ ಯಾವುದೋ ಒಂದು ಹೆಸರಿಲ್ಲದ ಭೇಟಿಗಳಲ್ಲಿ ಸಿಕ್ಕವರ ಕಥನಗಳ ಸಂಗ್ರಹವೇ 'ಮೈಸೂರ್ ಪೋಸ್ಟ್'. ಸ್ವತಃ ಛಾಯಾಗ್ರಾಹಕರೂ ಆಗಿರುವ ಅಬ್ದುಲ್ ರಶೀದರೇ ತೆಗೆದ ಛಾಯಾಚಿತ್ರಗಳೂ ಇಲ್ಲಿವೆ. ಈ ಪುಸ್ತಕದ ಉಪಶೀರ್ಷಿಕೆ 'ಅರಮನೆ ನಗರಿಯ ಉಳಿದ ಚಿತ್ರಗಳು'. ಈ ಪುಸ್ತಕದಲ್ಲಿರುವ ಕಥನಗಳು ಸಾಮಾನ್ಯ ಜನರ, ಯಾರ ಗಮನಕ್ಕೂ ಬಾರದೇ ಬದುಕುವವರ, ಅಥವಾ ಅಸಾಮಾನ್ಯರಾಗಬೇಕಾಗಿಯೂ ಸಾಮಾನ್ಯರಂತಾದವರದ್ದೇ ಆಗಿವೆ. ಬೇರೆ ಬೇರೆ ಬದುಕಿನ ತುಣುಕುಗಳನ್ನು ಇಲ್ಲಿ ಅಬ್ದುಲ್ ರಶೀದರು ತೆರೆದಿಟ್ಟಿದ್ದಾರೆ. ಈ ಎಲ್ಲಾ ತುಣುಕುಗಳನ್ನು ಒಟ್ಟಗೂಡಿಸಿಕೊಂಡು ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಳ್ಳಬೇಕೋ ಅಥವಾ ಎಲ್ಲವನ್ನೂ ಬಿಡಿಬಿಡಿಯಾಗಿಯೇ ಇಟ್ಟು, ಸ್ವತಂತ್ರವಾಗಿಯೇ ನೋಡಿ, ಸುಮ್ಮನೆ ಇದ್ದುಬಿಡಬೇಕಾ ಅನ್ನುವುದು ಓದುಗರಿಗೆ ಬಿಟ್ಟಿದ್ದು ಅನಿಸುತ್ತದೆ. 


ಲೇಖಕರ ಮಾತಿನಲ್ಲಿ ಲೇಖಕರು ಕೆಲವು ಬಹಳ ಅಗತ್ಯವಾದ ಹಾಗೂ ಹೇಳಲೇಬೇಕಾದ ಸಂಗತಿಗಳನ್ನು ಹೇಳಿದ್ದಾರೆ. "ಕಥೆ ಬರೆಯಲು ನೆನಪುಗಳು ಬೇಕಂತೆ, ಕವಿತೆಗಳಿಗೆ ಪ್ರತಿಮೆಗಳು ಬೇಕಂತೆ" ಇದು ಲೇಖಕರ ಒಂದು ಮಾತು. ನೆನಪುಗಳ ಬಣ್ಣ ವೈವಿಧ್ಯಮಯವಾದಷ್ಟೂ ಕತೆಯ ಸೊಗಡು ಹೆಚ್ಚುತ್ತದೆ ಅನ್ನುವುದು ಬಹುಶಃ ನಮ್ಮೆಲ್ಲಾ ಲೇಖಕರಿಗೆ, ಕತೆಗಾರರಿಗೆ, ಒಟ್ಟಾರೆ ಮನುಷ್ಯ ಕುಲಕ್ಕೆ ಅರಿವಾಗಬೇಕಾದ ವಿಚಾರ. ಹಾಗೆ ನೆನಪುಗಳ ಹರವು ದೊಡ್ಡದಾಗಬೇಕೆಂದರೆ ಬಹುಶಃ ಅಂಥ ಬದುಕನ್ನು ಬದುಕಬೇಕು.  ಅಂಥ ಬದುಕಿನ ಒಂದಷ್ಟು ಭೇಟಿಗಳ, ಅದರಲ್ಲಿ ಇದಿರಾದ ವ್ಯಕ್ತಿತ್ವಗಳ, ಸಹಸ್ರ ಸಹಸ್ರ ಕೋಟಿ ಜೀವಾಣುಗಳ ಮಧ್ಯದ ಕೆಲವೇ ಕೆಲವು ಹೋರಾಟಗಳ, ತೊಳಲಾಟಗಳ, ಎಲ್ಲಿಯೂ ಯಾವ ಪತ್ರಿಕೆ,‌ಮಾಧ್ಯಮಗಳಲ್ಲಿಯೂ ದಿನನಿತ್ಯ ತಲೆಬರಹಗಳಾಗದವರ, ನಮಗ್ಯಾರಿಗೂ ಬಹುಶಃ ಸಂಬಂಧವೇ ಇರದ ಚಿತ್ರಣಗಳು ಇಲ್ಲಿವೆ. ಲೇಖಕರು ತಮ್ಮ ಮಾತಿನಲ್ಲಿ ಮುಂದುವರೆದು ಹೇಳುತ್ತಾರೆ "ನಾನು ಬರೆಯಲೋಸುಗ ಇವರೆಲ್ಲಾ ನೆಪದಂತೆ ಆಗಿಬಿಟ್ಟರಲ್ಲಾ ಅಂತ". ಇಂಥದ್ದೊಂದು ಪ್ರಜ್ಞೆ ಹಾಗೂ ಅವಲೋಕನ ನಿಜವಾದ ಬರಹಗಾರರಿಗೂ, ಛಾಯಾಗ್ರಾಹಕರಿಗೂ ಆಗಾಗ ಕಾಣಿಸಿಕೊಳ್ಳಬೇಕು. ನಮಗೆ ಬರಹಕ್ಕೆ ವಸ್ತು ಸಿಗಬಹುದು, ನಮಗೆ ಒಂದು ಅದ್ಭುತವಾದ ಚಿತ್ರವೊಂದು ಆ ಕ್ಷಣಕ್ಕೆ ಸಿಗಬಹುದು. ಆದರೆ, ನಮ್ಮ ವಸ್ತುವಾದ ಅವರಿಗೆ ಸಿಕ್ಕಿದ್ದಾದರೂ ಏನು? ಅನ್ನುವ ಪ್ರಶ್ನೆ ಒಂದು ಸಲ ಹುಟ್ಟಿಕೊಂಡರೆ ಅದು ಬಹಳಷ್ಟು ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ. ಜೊತೆಗೆ, ನಮ್ಮ ಬರಹಗಳಲ್ಲಿ, ಛಾಯಾಚಿತ್ರಗಳಲ್ಲಿ ಬರುವ ವ್ಯಕ್ತಿತ್ವಗಳ ಕುರಿತಾಗಿ ನಾವು ಸದಾ ಕಾಲ ಜಾಗೃತರೂ, ಜಾಗರೂಕರೂ ಆಗಿರುವ ಹಾಗೆ ನಮ್ಮನ್ನು ಈ ಪ್ರಶ್ನೆ ಎಚ್ಚರಿಸುತ್ತದೆ. ಎಲ್ಲಕ್ಕಿಂತ ಮೊದಲು ಸಹಜವಾದ ಮನುಷ್ಯರಾಗಬೇಕಲ್ಲವಾ! ಆದರೆ, ಇಂಥ ಕತೆಗಳನ್ನು ಬಹಳ ಗೌರವಪೂರ್ಣವಾಗಿಯೂ, ಯಾವ ಕಲ್ಮಶಗಳಿಲ್ಲದೇ, ಅಭಿಪ್ರಾಯಗಳಿಲ್ಲದೇ, ಅಲಂಕಾರಗಳಿಲ್ಲದೇ ಹೇಗಿದೆಯೋ ಹಾಗೆ ಇಡುವುದೂ ಬರಹಗಾರರ, ಛಾಯಾಗ್ರಾಹಕರ ಜವಾಬ್ದಾರಿ. ಅಬ್ದುಲ್ ರಶೀದರ ಈ ಪುಸ್ತಕ ಓದಿದಾಗ ಅಂಥದ್ದೊಂದು ಜವಾಬ್ದಾರಿಯ ಸೂಕ್ಷ್ಮತೆಯೂ, ಅವರು ಅದನ್ನು ನಿರ್ವಹಿಸಿದ ರೀತಿಯೂ ಬಹಳ ಖುಷಿ ಕೊಡುತ್ತದೆ. 


ಕೆಲವೊಮ್ಮೆ ಇಲ್ಲಿನ ಬರಹಗಳು ಕತೆಯ ಅರ್ಧಕ್ಕೆ ಎದ್ದು ನಡೆದ ಹಾಗೆ ಗೋಚರಿಸುತ್ತವೆ. ಇನ್ನೇನೋ ಗಹನವಾದದ್ದು ಶುರುವಾಗುತ್ತದೆ ಅನ್ನುವಾಗ, ಏನೂ ಇಲ್ಲವೆಂಬಂತೆ ನಿರಾಯಾಸವಾಗಿ ಮುಗಿದುಹೋಗುತ್ತದೆ, ಇಷ್ಟು ಹೊತ್ತು ಹೇಳಿದ್ದು ಏನೂ ಅಲ್ಲ, ಅದು ಇಷ್ಟೇ ಅನ್ನುವಂತೆ ಅಪೂರ್ಣವಾಗಿಬಿಡುತ್ತದೆ. ಮೊದಮೊದಲ ಬರಹಗಳಲ್ಲಿ ಇದು ಚೂರು " ಅರೇ, ಇದೇನಿದು!" ಅಂತ ಅನ್ನಿಸುವ ಹಾಗೆ ಮಾಡಿದರೂ, ಆಮೇಲೆ "ಬಹುಶಃ ಬದುಕು ಕೂಡಾ ಹೀಗೆಯೇ" ಅನ್ನಿಸುವಷ್ಟರ ಮಟ್ಟಿಗೆ ಹೊಂದಿಕೊಂಡೆ. 


ಖುಷಿಯ ವಿಷಯವೆಂದರೆ, ಬಹಳಷ್ಟು ಬರಹಗಾರರು, ಪ್ರಕಾಶಕರು ಇ-ಪುಸ್ತಕಗಳನ್ನು ಮಾಡಲು ಅದ್ಯಾಕೋ ಇನ್ನೂ ಹಿಂಜರಿಯುತ್ತಲೇ ಇರುವ ಸಂದರ್ಭದಲ್ಲಿ ಅಬ್ದುಲ್ ರಶೀದರ ಈ ಎಲ್ಲಾ ಪುಸ್ತಕಗಳು ಇ-ಪುಸ್ತಕಗಳಾಗಿ ಋತುಮಾನ, ಗೂಗಲ್ ಪ್ಲೇ ಬುಕ್ಸ್ ಗಳಲ್ಲಿ ಲಭ್ಯ. 


ಯಾವ ನಿರೀಕ್ಷೆಯೂ ಇರದೇ, ಯಾವ ಪೂರ್ವಾಲೋಚನೆಗಳೂ ಇಲ್ಲದೇ, ಬೇರೆ ಬೇರೆ ಬದುಕುಗಳಲ್ಲಿ ನಿರ್ಭಾವುಕರಾಗಿ ಒಂದೊಮ್ಮೆ ಇಣುಕಿ ಅಲ್ಲಿಂದ ನಮ್ಮ ಬದುಕನ್ನು ಇನ್ನಷ್ಟು ಸರಳೀಕರಿಸಿಕೊಳ್ಳಬಹುದು ಅಥವಾ ಇನ್ನಷ್ಟು ಸಂಭ್ರಮಿಸಬಹುದು ಅಂತಾದಲ್ಲಿ 'ಮೈಸೂರ್ ಪೋಸ್ಟ್' ಅನ್ನು ಒಮ್ಮೆ ತೆರೆದು ನೋಡಿ. 


ಧನ್ಯವಾದಗಳು Abdul Rasheed  ಸರ್ ಹಾಗೂ ಋತುಮಾನದ Kuntady Nithesh  ಅವ್ರೇ ಈ ಎಲ್ಲಾ ಇ-ಪುಸ್ತಕಗಳಿಗಾಗಿ ✨🙏


~`ಶ್ರೀ'

 ‌  ತಲಗೇರಿ

ಸ್ವಾತಿ‌ ಮುತ್ತಿನ ಮಳೆಯ ಗಂಧ

 

ಸ್ವಾತಿ‌ ಮುತ್ತಿನ ಮಳೆಯ ಗಂಧ


ನಾನು ನನ್ನ ಹೆಸರಲ್ಲ, ನಾನು ನನ್ನ ದೇಹವಲ್ಲ, ನಾನು ನನ್ನ ಆಸ್ತಿ, ಮನೆ, ಸಂಸಾರವಲ್ಲ. ಹಾಗಾದರೆ ನಾನು ಯಾರು ಅನ್ನುವ ಪ್ರಶ್ನೆಗೆ ಈಗಾಗಲೇ ನಮ್ಮ ಪೂರ್ವಜರು ಉತ್ತರವನ್ನು ಕಂಡುಕೊಂಡು ಅದನ್ನು ನಮಗೂ ಬಿಟ್ಟುಹೋಗಿದ್ದಾರೆ. ತೆಗೆದುಕೊಂಡು ಹೋಗುವುದಾದರೂ ಏನನ್ನು, ಬಿಟ್ಟುಹೋಗದೇ! ಆದರೂ, ಸಹಸ್ರ ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿರುವ 'ನಾನು' ಅನ್ನುವುದರ ಅರಿವು ನಮಗ್ಯಾರಿಗೂ ಇರುವುದಿಲ್ಲ. ಅದು ಮರೆತುಹೋಗುವಂತೆ ಬಹುಶಃ ವರವೋ ಶಾಪವೋ ಏನೋ ಒಂದು ಇರಬೇಕು. ನಶ್ವರದ ಅರಿವು ಮರೆಯಬೇಕು, ನಾವೆಲ್ಲಾ ಮೆರೆಯಬೇಕು, ಕೊನೆಗೊಂದು ದಿನ ಏನಾಯಿತು ಅನ್ನುವುದರ ಅರಿವೂ ನಮಗೆ ಆಗದ ಹಾಗೆ ನಾವು 'ಇನ್ನಿಲ್ಲ'ವಾಗುತ್ತೇವೆ. ಆದರೆ, ಅಲ್ಲಿಯವರೆಗೂ ನಾವು ಹೇಗೆಲ್ಲಾ, ಏನೆಲ್ಲಾ 'ಸಂಪಾದಿಸಬಹುದು' ಅಥವಾ ಏನೇನನ್ನೆಲ್ಲಾ ಅಂಟಿಸಿಕೊಳ್ಳಬಹುದು ಅಂತಂದುಕೊಳ್ಳುತ್ತಾ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಧರ್ಮಾರ್ಥ ಕಾಮಗಳ ಆಚರಣೆಗಳಿಂದಲೇ ಮೋಕ್ಷಕ್ಕೆ ದಾರಿಯಾಗುತ್ತದೆ ಅನ್ನುವುದನ್ನು ಹೇಗೆ ಅರ್ಥೈಸಿಕೊಳ್ಳಬಾರದೋ ಹಾಗೆ ಅದನ್ನು ಅರ್ಥೈಸಿಕೊಂಡು ಶಾಶ್ವತದ ಪರಿಕಲ್ಪನೆಯಲ್ಲಿ ವಿಜೃಂಭಿಸುತ್ತೇವೆ. ಅದೆಷ್ಟೋ ತಲೆಮಾರುಗಳು ಕಳೆದಿವೆ, ಅದೆಷ್ಟೋ ಮನುಷ್ಯ ದೇಹಗಳು ಸುಟ್ಟಿವೆ, ಹೂಳಲ್ಪಟ್ಟಿವೆ, ಇನ್ನು ಕೆಲವಷ್ಟು ಸಂರಕ್ಷಿಸಲ್ಪಟ್ಟಿವೆ. ಆದರೆ, 'ನಾನು' ಅನ್ನಿಸಿಕೊಳ್ಳುತ್ತಿದ್ದ ಜೀವವೊಂದು ಅಲ್ಲಿಲ್ಲವೇ ಇಲ್ಲ. ಆದರೆ, ಒಂದೊಮ್ಮೆ ಸಾವು ಎದುರಿಗೇ ಇದೆ ಅಂತಾದಲ್ಲಿ, ಸಮೀಪಿಸುತ್ತಿರುವ ಆ ಸಾವಿನ ಅರಿವಿದೆ ಅಂತಾದಲ್ಲಿ, ಮನುಷ್ಯರು ಹೇಗೆಲ್ಲಾ ವರ್ತಿಸಬಹುದು, ಅಂಥ ಸಂದರ್ಭಗಳಲ್ಲಿ ಅವರಿಗಿರುವ ಆಲೋಚನೆಗಳೇನು ಅನ್ನುವುದನ್ನು ಹೇಳುತ್ತಾ ಸಾವಿಗೆ ಹೇಗೆ ತಯಾರಾಗಬೇಕು ಅಥವಾ ಹೇಗೆ ತಯಾರಾದರೆ ಚೆಂದ ಅನ್ನುವುದನ್ನು ಹೇಳುವ ಸಿನೆಮಾ ರಾಜ್ ಬಿ ಶೆಟ್ಟಿ ಅವರ 'ಸ್ವಾತಿ ಮುತ್ತಿನ ಮಳೆ ಹನಿಯೇ' 


"ಮೆಲ್ಲಗೆ ಧ್ಯಾನಿಸು" ಹಾಡಿನಲ್ಲಿ ಒಂದು ಸಾಲು ಬರುತ್ತದೆ; 'ಹಗುರಾದೆ ನಾನು ಈಗ ರೆಕ್ಕೆ ಬಲಿತಂತೆ'. ರೆಕ್ಕೆ ಬಲಿತಾಗ ಹಕ್ಕಿಗೆ ಅದರ ದೇಹ ಭಾರವಲ್ಲ, ಅದು ಆರಾಮಾಗಿ ಗಾಳಿಯಲ್ಲಿ ತೇಲುತ್ತಾ ಹಾರುತ್ತದೆ. ಆದರೆ, ಮನುಷ್ಯರ ವಿಷಯದಲ್ಲಿ, ಆಯಸ್ಸು 'ಬಲಿತಾಗ' ದೇಹ ಭಾರವಾಗುತ್ತದೆ, ಕೆಲವೊಮ್ಮೆ ಸಂಸಾರದ ಮನಸ್ಸು ಭಾರವಾಗುತ್ತದೆ. ಆದರೆ ಇನ್ನೇನೋ ಒಂದು ಗೊತ್ತೂ ಆಗದ ಹಾಗೆ ಹಾರಿಹೋಗುತ್ತದೆ. ಅದನ್ನು ಹಲವರು ಪ್ರಾಣಪಕ್ಷಿಯೆಂದೂ, ಆತ್ಮವೆಂದೂ, ಜೀವವೆಂದೂ ಕರೆಯುತ್ತಾರೆ. ಅದೆಷ್ಟು ಹಗುರ; ಕೆಲವೊಮ್ಮೆ ಭೂಮಿಗೂ! ಈ ಸಿನೆಮಾದಲ್ಲಿ ಮೌನಕ್ಕೆ ಹೇಗೆ ಜಾಗವಿದೆಯೋ, ಹಾಗೆಯೇ ಸದ್ದಿಗೂ ವಿಶೇಷ ಸ್ಥಾನವಿದೆ. ನಿತ್ಯದ ಏಕತಾನತೆಯನ್ನು ಹೇಳಲೆಂದೇ ಒಂದು ಸದ್ದಿದೆ ಹಾಗೂ ಆ ಏಕತಾನತೆಯನ್ನು ಮುರಿಯುವುದಕ್ಕೂ ಒಂದು ಸದ್ದಿದೆ. ಸಾಯುವುದಕ್ಕೆ ಕೆಲವೇ ದಿನ ಇರುವವರು ಬಂದು ಸೇರುವ ಜಾಗದಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿರುವವರಿಗೆ ಎಲ್ಲರ ನೋವನ್ನು ನಿತ್ಯವೂ ನೋಡಿ ಅಭ್ಯಾಸವಾಗಿರುವಾಗ, ಇನ್ನೊಂದು ರೋಗಿ ಬಂದಾಗಲೂ ಅಂಥದ್ದೇ ಒಂದು ನಿರೀಕ್ಷೆಯಿರುತ್ತದೆ ಅಥವಾ ಅಂಥ ಯಾವ ನಿರೀಕ್ಷೆಯೂ ಇರದೇ, ಅದು ಸಹಜವಾಗಿರುತ್ತದೆ. ಆದರೆ, ಮೊದಲ ಭೇಟಿಯಲ್ಲಿ ಏಕತಾನತೆಯನ್ನು ಮುರಿಯುವ ಒಂದು ಸದ್ದಿದೆ.‌ ನಿರೀಕ್ಷೆಗಳ ಹಾಗೂ ಬದುಕಿನ ಅಂದಾಜನ್ನೇ ಪಲ್ಲಟಗೊಳಿಸುವ ಒಂದು ಸದ್ದಿದೆ. ನಿರ್ದೇಶಕರು ಆ ಸನ್ನಿವೇಶವನ್ನು‌ ಹಾಗೂ ಕ್ಷಣದ ಬದಲಾವಣೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. 


ಸಾವು ಅಂದ ಮೇಲೆ ಹೂವಿರಲೇಬೇಕಲ್ಲ! ಈ ಸಿನೆಮಾದಲ್ಲೂ ಹೂವಿದೆ. ನಂದಿಬಟ್ಟಲು ಹೂವು ಬಹಳ ಮುಖ್ಯವಾದ ಪಾತ್ರವಾಗಿ ಇಡೀ ಸಿನೆಮಾದುದ್ದಕ್ಕೂ ಇರುತ್ತದೆ. ಇಂಥದಕ್ಕೇ ಬಹುಶಃ ನಾವು ಕಾವ್ಯ ಅನ್ನುತ್ತೇವೆ. ಹಾಗೆಯೇ ರಾಜ್ ಅವರು ಬಹಳ ಚೆಂದಕ್ಕೆ ಕವಿತೆ ಓದಬಲ್ಲರು ಅನ್ನುವುದನ್ನು ಒಂದಷ್ಟು ವರ್ಷಗಳ ಹಿಂದೆಯೇ ಕೇಳಿಸಿಕೊಂಡಿದ್ದ ನನಗೆ, ಈ ಸಿನೆಮಾದಲ್ಲಿ ಒಂದು ಬಹಳ ಚೆಂದದ‌‌ ಕವಿತೆ ಇದ್ದಿದ್ದು ಈ ಸಿನೆಮಾಕ್ಕೊಂದು ಧ್ಯಾನಸ್ಥ ಸ್ಥಿತಿಯನ್ನು ತಂದುಕೊಡುತ್ತದೆ ಅನಿಸಿತು. ಉದುರಿಹೋಗುವುದು ಎಲ್ಲಾ ಹೂವಿನ ಅಥವಾ ಇಡೀ ಜೀವಕುಲದ ಲಕ್ಷಣ. ಉದುರುವ ಕಾಲದ ಮಾಪನ‌ ಬೇರೆ ಬೇರೆಯಷ್ಟೇ. ಈ ಸಿನೆಮಾ ನೋಡಿದ ಬಳಿಕ ನಂದಿಬಟ್ಟಲನ್ನು ನಾವು ಬೇರೆಯದೇ ರೀತಿಯಲ್ಲಿ ಗಮನಿಸುತ್ತೇವೆ ಹಾಗೂ ಗ್ರಹಿಸುತ್ತೇವೆ ಅನ್ನುವ ಸಣ್ಣ ನಂಬಿಕೆ ನನ್ನದು. ಇನ್ನೂ ಒಂದು ಸಂಗತಿಯೆಂದರೆ ನಂದಿಬಟ್ಟಲು ಹೂವಿರುವವರೆಗೂ ಈ ಸಿನೆಮಾ ನೋಡಿದವರಿಗೆ ಈ ಸಿನೆಮಾದ ನೆನಪು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ. ಅದು ಸಿನೆಮಾದ, ನಿರ್ದೇಶಕರ ಜಾಣ್ಮೆ. ನನಗೆ ನಂದಿಬಟ್ಟಲು ಹೂವಿನ ಸಂಗತಿ ಬಂದಾಗ, 'ಅಕ್ಟೋಬರ್' ಸಿನೆಮಾದ ನೆನಪಾಯಿತು. ಎರಡರ ಕತೆಯೂ ಬೇರೆ. ಆದರೆ, ತಳಹದಿ ಒಂದೇ! ರಾಜ್ ಅವರು ಶುದ್ಧ ಮನುಷ್ಯನಾಗುವುದರ ಕುರಿತಾಗಿಯೂ ಆಗಾಗ ಮಾತಾಡುತ್ತಿರುತ್ತಾರೆ, ಅದು ಕೂಡಾ ಈ ಚಿತ್ರದ ಕತೆಗೆ ಜೀವಾಳ. 


ಈ ಸಿನೆಮಾ ಬೇಗ ಮುಗಿದುಹೋಗುತ್ತದೆ. ಇದನ್ನು ಎರಡು ರೀತಿಯಲ್ಲಿ ಸ್ವೀಕರಿಸಬಹುದು ಅಂತ ನನಗನ್ನಿಸಿತು. ಒಂದು, ಮೊದಲೇ ಸಾವಿನ ಗಾಢತೆ ಬಹಳ ಭಾರ, ಅದು ಅಚ್ಚೊತ್ತುವ ಮೊದಲೇ‌ ಸಿನೆಮಾ ಮುಗಿಯುತ್ತದೆ, ಸಾವಿನಲ್ಲೇ ಕಾಡುತ್ತಾ ಅಲ್ಲಲ್ಲೇ ಸುತ್ತುವುದಿಲ್ಲ. ಇದು ಕತೆ ಅಷ್ಟು ಗಾಢವಾಗಿ ತಟ್ಟದೇ ಹೋಗಬಹುದು ಅನ್ನುವುದು ಒಂದು ಕಡೆಯಾದರೆ, ಇನ್ನೊಂದು ಕೂಡಾ ಅಷ್ಟೇ ವಿಶಿಷ್ಟವಾಗಿ ಕಂಡಿತು. ಸಿನೆಮಾದ ಹಾಗೆಯೇ ನೋಡುನೋಡುತ್ತಿದ್ದಂತೆಯೇ ಬದುಕು ಮುಗಿದುಹೋಗುತ್ತದೆ; ಬಹಳ ಚಿಕ್ಕದು. ನಮ್ಮ ಬದುಕು ಇಲ್ಲಿನ ಮನಸ್ಸುಗಳಲ್ಲಿ ದಾಖಲಾಗುವುದರೊಳಗಾಗಿಯೇ ನಾವು ಹೊರಟಾಗಿರುತ್ತದೆ. ಹಾಗಾಗಿ ಈ ಸಿನೆಮಾದ ಒಟ್ಟು ಅವಧಿಯನ್ನು ಹೇಗೆ ಬೇಕಾದರೂ ಪರಿಗಣಿಸಬಹುದು. ಆದರೆ, ಸಿನೆಮಾ ಸಣ್ಣದು ಅಂದ ಮಾತ್ರಕ್ಕೆ ಸಿನೆಮಾದ ಸಂಗತಿ ಸಣ್ಣದಲ್ಲ.‌ ಸಿನೆಮಾ ಮುಗಿದ ಮೇಲೆ‌ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಸಿನೆಮಾವಾಗಿ ಅಷ್ಟು ಮಾಡಿದರೆ ಸಾಕು. ಇನ್ನೇನೋ ಬೇಕಿತ್ತು ಅನಿಸಿತು, ಆದರೆ, ಬಹಳಷ್ಟನ್ನು ಹೇಳಿದ್ದಾರಲ್ಲಾ ಅಂತ ಕೂಡಾ ಅನಿಸಿತು. 


ಇನ್ನು ಸಿರಿಯವರು ಯಾಕೆ ಹಾಗೆ 'ಕಾಣುತ್ತಾರೆ' ಅಂತ ಯೋಚಿಸುತ್ತಿದ್ದ ನನಗೆ ಉತ್ತರ ಸಿನೆಮಾದಲ್ಲಿ ಸಿಕ್ಕಿತು. ನನ್ನ ಪ್ರಶ್ನೆಯನ್ನೇ ಸಿನೆಮಾದ ಇನ್ನೊಂದು ಪಾತ್ರವೂ ಕೇಳುತ್ತದೆ. ಅದು ಸಿರಿಯವರ ಪಾತ್ರದ ಪ್ರಸ್ತುತಿಗೆ ಕೊಟ್ಟ ಮಹತ್ವ. ಸಾಯುವುದನ್ನು ನೋಡುವುದು, ಅಥವಾ ಸಾಯುವವರನ್ನು ತಯಾರುಮಾಡುವುದೇ ಅಭ್ಯಾಸವಾದರೆ ಏನಾಗಬಹುದು. ಶೋಕ ಯಾರಿಗೆ? ಶೋಕದ ಮಧ್ಯ ಬೇರೆ ಸಂಗತಿಗಳಿಗೆ ಜಾಗವಿದೆಯಾ? ಕೌನ್ಸಿಲರ್ ಹಾಗೂ ರೋಗಿ ಇಬ್ಬರೂ ಮನುಷ್ಯರೇ ಆದರೂ, ಬೇರೆ ಬೇರೆ ರೋಗಿಯ ಜೊತೆಗಿನ ಕೌನ್ಸಿಲರ್ ಅವರ ಭಾವನಾತ್ಮಕ ಬಂಧವೇನು? ನಿತ್ಯವೂ ಸಾವಿನ ಸುತ್ತಲೇ ಬದುಕು ಕಟ್ಟಿಕೊಂಡವರ ಬದುಕಿನ ನಿತ್ಯದ ಸಂಗತಿಗಳೇನು? ಇತ್ಯಾದಿಗಳೆಲ್ಲವನ್ನೂ ನಿರ್ದೇಶಕರು ಬಹಳ‌ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ. ಹಲವಾರು ಸಂಗತಿಗಳನ್ನು ಮುಟ್ಟಿಹೋಗಿದ್ದಾರೆ 'ಅನಿಕೇತ್'. ಯಾಕೆಂದರೆ, ಆ ಸಂಗತಿಗಳಲ್ಲೇ ಬದುಕುವುದಕ್ಕೆ ಅವರು 'ಅನಿಕೇತ್' ಅಲ್ಲವಾ, ಅಲ್ಲಿಯೇ ಇರುವ ಹಾಗಿಲ್ಲ, ಅನಿಕೇತನ ಆಗಲೇಬೇಕು!


ಕವಿತೆ ಇಷ್ಟವಾಗುತ್ತದೆ ಅಂತಾದರೆ, ಸಾವು‌ ಕಾಡುತ್ತದೆ ಅಂತಾದರೆ, ಸಾವಿನ ಕುರಿತಾಗಿ ವಿಶೇಷ ಆಸಕ್ತಿ ಇದೆ ಅಂತಾದಲ್ಲಿ, ಬದುಕಿನ ಕ್ಷಣಿಕತೆಯ ಕುರಿತಾಗಿ ಎಂದಾದರೂ ಯೋಚಿಸಿದ್ದೀರಿ ಅಂತಾದಲ್ಲಿ ಈ ಸಿನೆಮಾ ಇಷ್ಟವಾಗುತ್ತದೆ. 


ಧನ್ಯವಾದಗಳು Raj B Shetty ಅವ್ರೇ, Siri Ravikumar ಅವ್ರೇ, Applebox Studios ನ Divya Spandana/Ramya ಅವ್ರೇ, ಒಂದು ಚೆಂದದ ಸಿನೆಮಾಕ್ಕಾಗಿ ✨✨✨


~`ಶ್ರೀ' 

‌‌‌    ತಲಗೇರಿ

Days at the Morisaki Bookshop

 

Days at the Morisaki Bookshop


ಬದುಕಲ್ಲಿ ಸರಳವಾದದ್ದು ಕೊಡುವ ಖುಷಿಯನ್ನು ಬಹುಶಃ ವ್ಯಾಖ್ಯಾನಿಸುವುದು ತುಸು ಕಷ್ಟ. ಆ ಸಂತೃಪ್ತಿಯನ್ನು ವಿವರಿಸುವುದಕ್ಕೆ ನಾವು ಹೊರಟ ತಕ್ಷಣವೇ ಅದು ಪೇಲವವಾಗುತ್ತದೆ. ಯಾವ ಸುಂದರ ಅನುಭೂತಿಯನ್ನೂ ಅಕ್ಷರಕ್ಕಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಭಾವವನ್ನು ಅಕ್ಷರಗಳಿಗೆ ಅನುವಾದಿಸುವುದಕ್ಕೆ ಹೊರಟಾಗ ಅದೆಷ್ಟೋ ಅರ್ಥಗಳು ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಅನುಭವವಷ್ಟೇ ಪರಮ ಸತ್ಯ. ಅಂಥದ್ದೊಂದು ಚೆಂದದ‌ ಅನುಭವವನ್ನು ಕಟ್ಟಿಕೊಟ್ಟಿದ್ದು ಸತೋಶಿ ಯಾಗಿಸಾವಾ ಅವರ ಕಾದಂಬರಿ "Days at the Morisaki Bookshop" 


ಬಹಳ ಆಳವಾದ ಅಷ್ಟೇ ತೀವ್ರ ಧ್ವನಿಗಳುಳ್ಳ ಸಾಹಿತ್ಯವನ್ನು ಓದಿ ಓದಿ ಭಾರವಾದ ಯೋಚನೆಗಳೊಳಗೆ ಮುಳುಗಿಹೋಗಿರುವಾಗ ಇಂಥದ್ದೊಂದು ಪುಸ್ತಕ ಹೊಸ ಬಿಡುಗಡೆಯನ್ನು ಕೊಡುತ್ತದೆ. ಕತೆಯಲ್ಲೇನೂ ಭಿನ್ನವಾದುದು ಇಲ್ಲ ಅಥವಾ ಭಯಂಕರ ತಿರುವು ಅನ್ನಬಹುದಾದಂಥದ್ದೆಲ್ಲಾ ಏನೂ ಇಲ್ಲ. ಆದರೂ ಈ ಕಾದಂಬರಿ ಓದಿಸಿಕೊಳ್ಳುತ್ತದೆ; ಉದುರಿ ನೆಲಕ್ಕೆ ಬಿದ್ದ ಹೂವ ಮೇಲೆ ತಂಪಾದ ತಾಜಾ ಮಳೆ‌ ಹನಿಗಳು ಬಿದ್ದು ಇಡೀ ವಾತಾವರಣಕ್ಕೊಂದು ಹೊಸ ಆಹ್ಲಾದವನ್ನು ಕೊಡುವ ಹಾಗೆ. ಕೆಸರು, ಕಿರಿಕಿರಿ‌, ಕಸಕಡ್ಡಿಗಳ ನಡುವೆಯೂ ಮಳೆಗೊಂದು ಚಿಕಿತ್ಸಕ ಗುಣವಿದೆ. ಅರ್ಥವೇ ಆಗದ ಸಮ್ಮೋಹಕತೆಯೂ ಮಳೆಗಿದೆ. ಅಂಥ ಗುಣ ಈ ಕಾದಂಬರಿಗೂ ಇದೆ. ಒಂದು ಊರಿನ ತುಂಬಾ ಪುಸ್ತಕದ ಅಂಗಡಿಗಳೇ ತುಂಬಿದ್ದರೆ ಹಾಗೂ ಆ ಪುಸ್ತಕದ ಸುತ್ತಮುತ್ತಲೇ ಇಡೀ ಕತೆ ನಡೆದರೆ, ಪುಸ್ತಕದ ಕುರಿತಾಗಿ ಚೂರು ವಿಶೇಷವೇ ಅನ್ನಬಹುದಾದ ಆಸಕ್ತಿ ಇರುವವರಿಗೆ ಈ ಕಾದಂಬರಿ ಇಷ್ಟವಾಗದೇ ಇರಲಿಕ್ಕೆ ಹೇಗೆ ಸಾಧ್ಯ! 


ಈ ಕಾದಂಬರಿ ಒಂದರ್ಥದಲ್ಲಿ ಬಿರುಬೇಸಿಗೆಯ ಮಧ್ಯಾಹ್ನದಲ್ಲಿ ತಂಪಾದ ನಿದಿರೆ ಹೊತ್ತು ತರುವ ಆತ್ಮೀಯ ಗಾಳಿ. ಜಪಾನಿನ ಟೋಕಿಯೋದಲ್ಲಿ ಜಿಂಬೋಚೋ ( Jimbocho ) ಅನ್ನುವ ಜಾಗವೊಂದಿದೆ. ಅದನ್ನು 'ಪುಸ್ತಕಗಳ ಪಟ್ಟಣ'ವೆಂದೇ ಕರೆಯುತ್ತಾರೆ. ಅಂಥದ್ದೊಂದು ನಿಜ ಜಾಗದ ಹಿನ್ನೆಲೆಯಿಟ್ಟುಕೊಂಡು ಹೆಣೆದ ಕಾಲ್ಪನಿಕ ಕತೆಯೇ ಈ ಕಾದಂಬರಿ. ಬಹಳಷ್ಟು ಸ್ಥಳೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವವರೇ ಇಲ್ಲ ಅನ್ನುವ ಕೊರಗು ಕೇಳುತ್ತಲೇ ಇರುವಾಗ ಪುಸ್ತಕ, ಅದರ ಓದಿನ ಕುರಿತಾದ ಅಪ್ಪಟ ಪ್ರೇಮ, ಓದಿನಿಂದಾಗಿಯೇ ಹುಟ್ಟಿಕೊಳ್ಳುವ ಒಂದಷ್ಟು ಮನುಷ್ಯ ಸಂಬಂಧಗಳು, ಈ ಪರಿಧಿಯಿಂದಾಚೆ ದೂರ ಹೋಗುವ ಒಂದಷ್ಟು ವ್ಯಕ್ತಿಗಳು, ಮಧ್ಯದಲ್ಲೆಲ್ಲಾ ಬದಲಾಗುತ್ತಲೇ ಇರುವ ಬದುಕು, ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುವ ಒಂದರ್ಥದಲ್ಲಿ ಪ್ರಮುಖ ಪಾತ್ರವೇ ಆಗುವ ಪುಸ್ತಕದಂಗಡಿ ಇವಿಷ್ಟನ್ನೂ ಈ ಕಾದಂಬರಿ ಹದವಾಗಿ ಬೆರೆಸಿಕೊಂಡು ನಮ್ಮೆದುರು ತೆರೆದುಕೊಳ್ಳುತ್ತದೆ. ಈ ಪುಸ್ತಕದ ಮೂಲಭಾಷೆ ಜಪಾನೀಸ್ ಆಗಿರಬಹುದು, ಈ ಪುಸ್ತಕದ ಕತೆ ನಡೆಯುವ ಮೂಲ ಜಾಗ ಜಪಾನಿನ ಜಿಂಬೋಚೋ ಆಗಿರಬಹುದು, ಇಲ್ಲಿನ ಪಾತ್ರಗಳ ಹೆಸರೆಲ್ಲವೂ ಜಪಾನಿನ ಹೆಸರುಗಳಾಗಿರಬಹುದು, ಆದರೆ‌ ಇಲ್ಲಿ ಬರುವ ಪಾತ್ರಗಳ್ಯಾವವೂ ನಮಗೆ ಅಪರಿಚಿತವಲ್ಲ. ಒಂದು ಕತೆ ಸಾರ್ವತ್ರಿಕವಾಗಬೇಕಾದರೆ ಅದರೊಳಗಿರುವ ಪಾತ್ರದ ಪೋಷಣೆಯು ಒಂದೇ ಸಮಯಕ್ಕೆ ಸ್ಥಳೀಯವೂ, ಜೊತೆಗೆ ಜಾಗತಿಕವೂ ಆಗಿರಬೇಕು. ಇಲ್ಲಿನ ಪಾತ್ರಗಳ್ಯಾವವೂ ನಮಗೆ ಹೊರಗಿನದು ಅಂತ ಅನ್ನಿಸುವುದೇ ಇಲ್ಲ. ಹಾಗಾಗಿಯೇ ಇನ್ನಷ್ಟು ಆಪ್ತವಾಗುತ್ತವೆ. ಕನ್ನಡದಲ್ಲಿ ಇಂಥ ಪ್ರಕಾರದ ಕಾದಂಬರಿಗಳು ಬಹಳ ಕಡಿಮೆ. 


ಹಿಂದೊಮ್ಮೆ Nagaraj Ramaswamy Vastarey ಸರ್ ಅವರ 'ಪ್ರಿಯೇ ಚಾರುಶೀಲೆ' ಓದಿದಾಗಲೂ ಇಂಥದ್ದೇ ಅನುಭವವಾಗಿತ್ತು. ಈಗ ಈ ಕಾದಂಬರಿ ಓದಿದಾಗ ಕೂಡಾ ಹೆಚ್ಚೂ ಕಡಿಮೆ ಅಂಥದ್ದೇ ಅನುಭವ. ಏಕತಾನತೆಯ ಬದುಕಿನಲ್ಲೊಂದು ಎಳೇ ಸ್ವಪ್ನ ರೂಪುಗೊಳ್ಳುವ ಹಾಗೆ, ಆ ಸ್ವಪ್ನದಿಂದಾಗಿಯೇ ನಮ್ಮ ಬದುಕಿನ ತಂತುಗಳು ಹೊಸ ಸ್ವರವನ್ನು ಮೀಟುವುದಕ್ಕೆ ಅಣಿಯಾಗುವ ಹಾಗೆ. ಕನ್ನಡಕ್ಕೆ ಬಹುಶಃ ಇದನ್ನು ಯಾರಾದರೂ ಅನುವಾದಿಸಿದರೆ ಅದನ್ನು ಕನ್ನಡೀಕರಿಸುವಾಗ ಎಷ್ಟೆಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಹಾಗೂ ಕನ್ನಡದಂಥ ಭಾಷೆಯಲ್ಲಿ ಅದು ಅರಳಿಕೊಳ್ಳುವ ಬಗೆಯೇ ಒಂದು ಸಂಭ್ರಮವಾಗಬಹುದು ಅನ್ನುವ ಯೋಚನೆಗಳೇ ರೋಮಾಂಚಕ ಅಂತ ಅನಿಸಿದ್ದು ಹೌದು. ಸಂಸಾರದ ತಾಪತ್ರಯಗಳು, ಹುಡುಗ ಹುಡುಗಿಯರ ಹರೆಯದ ತುಮುಲಗಳು, ನೆರೆಹೊರೆಯ ಚೇಷ್ಟೆಗಳು, ಅಪ್ಪಟ ಮಾನವೀಯ ಸಂಬಂಧಗಳು ಇವೆಲ್ಲಾ ಇದ್ದರೂ ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಪುಸ್ತಕ. ಭಾರತದ ಸಂಸ್ಕೃತಿ ಕಥನ ಪರಂಪರೆಯದ್ದು. ಜನಪದದ ಮೂಲಕ ಕತೆಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತ ಬಂದರೂ, ಪುಸ್ತಕದ ಕುರಿತಾಗಿ ಅದೇನೋ ವಿಶೇಷ ಭಾವ ನಮ್ಮಲ್ಲಿ. ಜ್ಞಾನದ ಪರಂಪರೆಯನ್ನು ಆರಾಧಿಸುತ್ತಾ ಬಂದ ನಮಗೆ ಪುಸ್ತಕಗಳು ಯಾವಾಗಲೂ ಮಾರ್ಗದರ್ಶನದ ಮೂಲಬಿಂದುಗಳು. ನಮ್ಮಲ್ಲಿಯೂ ಇಂಥ ಕತೆಗಳು ಬರಲಿ ಅನ್ನುವುದೊಂದು ಬಿನ್ನಹವಷ್ಟೇ. 


"The rainy season had completely given way to summer while i was asleep." ನಮ್ಮಲ್ಲಿ ಬಹುತೇಕರು ಇಂಥ ಗಾಢ ನಿದ್ರೆಗಳಲ್ಲೇ ಇದ್ದೇವೆ. ನಮಗೆ ತಿಳಿದಿದೆ ಕಾಲ ಯಾರಿಗೂ ಕಾಯುವುದಿಲ್ಲ, ಜಗತ್ತು ಯಾರಿಗೂ ಕಾಯುವುದಿಲ್ಲ, ಹಾಗೂ ಮತ್ತೆ ನಾವಿಲ್ಲಿಗೆ ಬರುತ್ತೇವೋ ಇಲ್ಲವೋ ಅನ್ನುವ ಯಾವ ಖಾತ್ರಿಯೂ ಇಲ್ಲ. ಆದರೂ, ಏನೇನೋ ಕಾರಣಗಳಿಗಾಗಿ ಅದೊಂದು ವಿಚಿತ್ರವಾದ ಗಾಢ ನಿದ್ರೆಯಲ್ಲಿ ನಾವಿದ್ದೇವೆ, ಏಳಬಹುದು, ಏಳುವುದಕ್ಕೆ ಮನಸ್ಸು ಮಾಡಬೇಕಷ್ಟೇ. 


"Maybe it takes a long time to figure out what you’re truly searching for. Maybe you spend your whole life just to figure out a small part of it". ನಮ್ಮಿಡೀ ಬದುಕಿನ ಪೂರಾ ನಾವು ಬದುಕಿನ ಅರ್ಥಕ್ಕಾಗಿ ಹುಡುಕುತ್ತೇವೆ. ಶಬರಿಯ ಬದುಕು ಪೂರ್ಣವಾಗುವುದು, ಬದುಕಿನ ಉದ್ದೇಶ ಪೂರ್ಣವಾಗುವುದು ರಾಮನನ್ನಪ್ಪಿ ತನ್ನ ಸುಕ್ಕು ಸುಕ್ಕಾದ ಕೈಗಳಿಂದ ಅವನಿಗೆ ಹಣ್ಣುಗಳನ್ನು ತಿನ್ನಿಸಿದಾಗಲೇ. ಒಂದಿಡೀ ಬದುಕಿನ ಪೂರ್ಣತೆ ದಕ್ಕುವುದು ಕೇವಲ ಕೆಲವೇ ಕೆಲವು ಗಳಿಗೆಯ ಭಾಗದಲ್ಲಿ; ಕೇವಲ ಕೆಲವೇ ಕೆಲವು ಗಳಿಗೆಯ ಭಾಗ್ಯದಲ್ಲಿ. 


"Human beings are full of contradictions". ಸಂಕೀರ್ಣ ಬೌದ್ಧಿಕ ವ್ಯವಸ್ಥೆಯಿರುವ ಮನುಷ್ಯರಲ್ಲಿ ದ್ವಂದ್ವಗಳು ಸಹಜವೇ ಅಲ್ಲವಾ? ವಾಲ್ಟ್ ವಿಟ್ಮನ್ ತಮ್ಮ Song of Myself ಕವಿತೆಯಲ್ಲಿ ಹೇಳುವುದೂ ಬಹುಶಃ ಇಂಥದ್ದೇ ಒಂದು ಧ್ವನಿ :


"Do I contradict myself?

Very well then I contradict myself,

(I am large, I contain multitudes.)"


ಮನುಷ್ಯನಲ್ಲಿ ಯಾವಾಗ ಆಳದ ಚಿಂತನೆಗಳು ಶುರುವಾಗುತ್ತವೆಯೋ ಆಗಲೇ ಇಂಥ ದ್ವಂದ್ವಗಳೂ ಶುರುವಾಗುತ್ತವೆ‌. ದ್ವಂದ್ವಗಳು ಬಲಹೀನತೆಯಲ್ಲ, ಅಥವಾ ಸ್ಪಷ್ಟತೆಯಿಲ್ಲದೇ ಇರುವುದರ ಸಂಕೇತಗಳೂ ಅಲ್ಲ. ದ್ವಂದ್ವಗಳು ಹಲವು ಸಾಧ್ಯತೆಗಳ‌ ಅಭಿವ್ಯಕ್ತಿ. ಒಂದು ಸಂಗತಿಯನ್ನು ಹಲವು ಮಜಲುಗಳಲ್ಲಿ ನೋಡುವುದರ ಭೂಮಿಕೆ. 


ಓದಿನ ಸುಖ ನಿಮ್ಮದೂ ಆಗಲಿ.


~`ಶ್ರೀ'

   ತಲಗೇರಿ