ಬುಧವಾರ, ಏಪ್ರಿಲ್ 17, 2013


ಅವಳು‘ಜಗತ್ತಿನ ಸು೦ದರಿ’...‘ಮಮತೆಯ ಸಾಗರಿ’!!...

    "ಎ೦ದೆ೦ದೂ ಕ೦ದ ನುಡಿವ ಮೊದಲ ಮಾತು ಅಮ್ಮನೇ..ಅಮ್ಮ..ಅಮ್ಮ..ಅಮ್ಮ..ಎ೦ಬ ಪದವೇ ಒ೦ದು ಸು೦ದರ ಕಾವ್ಯ...ಅಮ್ಮ ಎ೦ಬ ರಾಗವೇ ಒ೦ದು ಮೋಹಿತ ರಾಗ..."ಎ೦ತಹ ಅದ್ಭುತ ಗೀತೆ!‘ಅಮ್ಮ’ಎ೦ಬ ಪದ ಕಿವಿಗೆ ಬಿದ್ದರೆ ಸಾಕು,ಮಗುವಿನ ಮನಸ್ಸು ನಲಿದಾಡುತ್ತದೆ..ಅಮ್ಮನನ್ನು ಕ೦ಗಳಿ೦ದ ನೋಡಿದರೆ,ಆ ಕ೦ಗಳಲ್ಲಿ ಪ್ರೀತಿ ತಾನುಕ್ಕಿ ಬರುತ್ತದೆ.."ಕೆಟ್ಟ ಮಕ್ಕಳು ಹುಟ್ಟಬಹುದು;ಆದರೆ ಕೆಟ್ಟ ತಾಯಿ ಹುಟ್ಟೋದಿಲ್ಲ"!ಇದು ಜಗದುಕ್ತಿ...ಭಾರತೀಯ ಸ೦ಸ್ಕೃತಿಯಲ್ಲಿ ತಾಯಿಗೆ ಅತ್ಯ೦ತ ಉನ್ನತವಾದ ಸ್ಥಾನವನ್ನು ನೀಡಲಾಗಿದೆ..ಎಲ್ಲ ಗ್ರ೦ಥಗಳನ್ನು ನಾವು ತಾಯಿ ರೂಪದಲ್ಲಿ ನೋಡುತ್ತೇವೆ..ಜೀವಮಾನವಿಡೀ ಹಾಲನ್ನು ನೀಡಿ ನಮ್ಮನ್ನು ಸಾಕುವ ಹಸುವನ್ನು ‘ಗೋಮಾತೆ’ಎ೦ದು ಕರೆದು ಆರಾಧಿಸುತ್ತೇವೆ..ನಮ್ಮ ನೆಲವನ್ನು ತಾಯಿ ರೂಪದಲ್ಲಿ ಕ೦ಡು,‘ಅಮ್ಮಾ, ಬ೦ಗಾರದ ಬೆಳೆ ಕೊಡು’ಎ೦ದು ಬೇಡುತ್ತೇವೆ..ತಾಯಿಯೇ ಹಾಗೆ..ಮಕ್ಕಳ ಮಾತಿಗೆ ಬೆಲೆ ಕೊಡುವವಳೂ ಅವಳೇ;ಮಣ್ಣಿನ ಕುವರರಿಗೆ ಬೆಳೆ ನೀಡೋದು ಅವಳೇ..
     ಹೆಣ್ಣು...ಎ೦ದರೇ ವಾತ್ಸಲ್ಯದ ಪ್ರತೀಕ..ಅದರಲ್ಲೂ ತಾಯಿ ವಾತ್ಸಲ್ಯವೇ ಮೈದಾಳಿ ಬ೦ದ ದೇವತೆ..ಮಗು ಅತ್ತಾಗ ಎದೆಗಪ್ಪಿಕೊ೦ಡು,ನೆತ್ತಿಗೆ ಮುತ್ತು ಕೊಡುವವಳು ಅಮ್ಮನೇ...ಆಕೆಯ ಮನಸ್ಸು ಕುಸುಮ ಕೋಮಲ...ಹೃದಯ ಬಾನಿನ೦ತೆ ವಿಶಾಲ...ಆಕೆ ಮನೆಯ ನಾಲ್ಕು ಗೋಡೆಗಳನ್ನು ಬಿಟ್ಟು ಹೊರಗೆ ಬರದೇ ಇರಬಹುದು;ಆದರೆ ಆಕೆ ಇರದ ಸ್ಥಳವಿಲ್ಲ ಈ ಧರಣಿಯೊಳಗೆ...!ಶ೦ಕರಾಚಾರ್ಯರು..ಸನಾತನ ಧರ್ಮ ಪ್ರತಿಪಾದಕರು,ಸರ್ವಸ೦ಗ ಪರಿತ್ಯಾಗಿಗಳು;ತಾಯಿಗೆ ಕೊಟ್ಟ ವಚನವನ್ನು ಮರೆಯಲಿಲ್ಲ..ಇದು ತಾಯಿಯ ಮಹಿಮೆ..
     ಪುಟ್ಟ ಕ೦ದ ತಾಯಿಯನ್ನು ಅಗಲಿರುವುದು ಕಡಿಮೆ!ಆ ಮಗುವಿಗೆ ತಾಯಿಯೇ ಸರ್ವಸ್ವ..ಆ ಮಗುವಿಗೆ ತನ್ನ ತಾಯಿ ಸು೦ದರಿಯೋ,ಕುರೂಪಿಯೋ ಬೇಕಿಲ್ಲ..ಅದು ಬಯಸುವುದು ನಿಷ್ಕಲ್ಮಶ ಪ್ರೀತಿಯನ್ನು..ಅ೦ತಃಕರಣದ ಸೌ೦ದರ್ಯವನ್ನು..ಆ ಅ೦ತಃಕರಣವೇ ಇ೦ದೂ ತಾಯಿಗೆ ‘ಜಗದ ಶ್ರೇಷ್ಠ ವ್ಯಕ್ತಿ’ಯ ಪಟ್ಟವನ್ನು ಹಾಗೇ ಉಳಿಸಿದೆ.ಆದರೆ ಆಕೆಗೆ ಅದು ಬೇಕಿಲ್ಲ.ಆಕೆ ನಿಸ್ವಾರ್ಥಿ.ಅಮ್ಮಾ ಎ೦ದ ಕೂಡಲೇ ರೋಮಾ೦ಚನವಾಗುತ್ತದೆ...ಆಕೆಯ ಹೃದಯವೇ ವಾತ್ಸಲ್ಯದ ಶರಧಿ..ಅದಕ್ಕೆ೦ದೇ ಹೇಳೋದು ‘ಮಾತೃ ಹೃದಯಿ’..ಆ ಹೃದಯಕ್ಕೆ ಸ್ವಾರ್ಥ ಗೊತ್ತಿಲ್ಲ..ಪ್ರೀತಿಯಲ್ಲದೇ ಬೇರೇನೂ ಉಕ್ಕಲ್ಲ.ಶರಧಿಯ ನೀರು ಉಪ್ಪಾದರೂ,ಕೊನೆಗೆ ಕೊಡುವುದು ಬದುಕಲ್ಲಿ ಚೈತನ್ಯ ತು೦ಬುವ ಸಿಹಿಯಾದ ಮಳೆಹನಿಯನ್ನು..ನವ ವಸ೦ತದ ಕಲರವವನ್ನು...!!
     ಕ೦ಗಳಲ್ಲಿ ಬದುಕು ಕಟ್ಟಿಕೊಡುವ ಆಕೆಯ ಆ ಚೇತನದ ಶಕ್ತಿಯೆಷ್ಟು?ಸ್ವರದಲ್ಲೇ ಮನಸ್ಸು ಕದಿಯುವ ಆ ಪ್ರೀತಿಯ ಮೌಲ್ಯವೆಷ್ಟು?ಮಮತೆಯನ್ನೇ ತು೦ಬಿಕೊ೦ಡ ಆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿದೆಯೇ?ಅದಕ್ಕೆ೦ದೇ ಆಕೆ ‘ಕರುಣಾಮಯಿ’..ಜೀವವಾಹಿನಿ...ನಿತ್ಯಗಾಮಿನಿ...ದೇವತೆಯ ಅವತಾರಿ...ಜಗತ್ತಿನ ಸು೦ದರಿ...ಮಮತೆಯ ಸಾಗರಿ...ಅಮ್ಮ೦ದಿರಿಗೆಲ್ಲಾ ನಮಿಸೋಣ ಒ೦ದು ಸಾರಿ..ಇದು ಎಲ್ಲ ತಾಯ೦ದಿರಿಗೆ ಅರ್ಪಣೆ..ಅಮ್ಮಾ ಎ೦ದೂ ನಗುತಿರು ಹಾಗೇ...ಬೆಸೆದುಕೊಳ್ಳಲಿ‘ಭಾವ ಹೂನಗೆ’!!......

                                                                                                               ~‘ಶ್ರೀ’
                                                                                                                ತಲಗೇರಿ

ಗುರುವಾರ, ಏಪ್ರಿಲ್ 11, 2013


       ""ನನಗೆ ಸ್ವಂತ"...

ನೀ ಕೊಟ್ಟ ಕನಸ ಸಾಲು ನೆರಳ
ಮನಸಲ್ಲೇ ಸಾಕುವೆನು ಇನ್ನು ಗೆಳತಿ
ನೀನಿಟ್ಟ ಒಲವ ದಾರಿ ಕವಲ
ಸವೆಯಲು ಉಸಿರೊಂದು ಬೇಕು ಗೆಳತಿ...

ನಿನ್ನ ಕಣ್ಣ ಅಂಚಲ್ಲಿ ಆ ಹನಿಯ ತವಕ
ಒರೆಸುತ್ತ ಕೂರುವೆನು ನಾನಿರುವ ತನಕ
ಮರೆಸುತ್ತ ಸಾಗುವೆನು ನೋವ ಗೆಳತಿ
ನಿನ್ನ ಕಣ್ಣ ಮಿಂಚಲ್ಲಿ ನಾ ಬೆರೆವ ತುಡಿತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!...

ನನದೆನ್ನೋ ಬಾನಲ್ಲಿ ಆ ಮುಗಿಲ ಸೆಳೆತ
ಅರಸುತ್ತ ಮಳೆಬಿಲ್ಲ ಮುಗಿಯದಾ ಮಿಡಿತ
ಒಲವಿತ್ತು ತುಂಬುವೆಯಾ ಬಣ್ಣ ಗೆಳತಿ
ಎದೆಯೆನ್ನೋ ಬದಿಯಲ್ಲಿ ನೀ ಬರಲಿ ಎನುತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!..

ಬರಲಿ ಬಿಡು ಬಿಸಿಲು ಬೆಳಕಿನಂತೆ
ಅರಳು ಮೆಲ್ಲಗೆ ಎದೆಯ ಮಲ್ಲಿಗೆ
ಸೋಕುತಿರಲಿ ಸುತ್ತ ಒಲವ ಸೌರಭ
ಗೆಳತಿ ನೀನು ನನಗೆ ಸ್ವಂತ....


                              ~‘ಶ್ರೀ’
                                ತಲಗೇರಿ

       "ಚೆಂದ ಹಂಗಾಮ"..

ನೀ ನನ್ನ ಗುರುತಿನ ಹೆಸರು
ನಾ ಹೇಗೆ ಮರೆಯಲಿ ನಿನ್ನ
ನೀ ನನ್ನ ಉಸಿರಿನ ಉಸಿರು
ನಾ ಹೇಗೆ ತೊರೆಯಲಿ ನಿನ್ನ..

ಎದೆಯಂದು ನಡೆಸಿತ್ತು ಖಾಲಿ ಜೀವನ
ಒಲವಲ್ಲೇ ನೀ ತುಂಬಿದೆ ಈ ಮೈಮನ..
ಸ್ವರವೊಂದು ಮಿಡಿದಾಗ ಬಹುಮೆಲ್ಲನೆ
ಜಾರಿತಲ್ಲೇ ಬರಿ ಏಕಾಂತ ಸುಮ್ಮನೆ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನಎಲ್ಲ ಕನಸಿನಾ ಚೆಂದ ಹಂಗಾಮ...

ಮಿಂಚೊಂದು ಸುಳಿದಾಗ ತುಸು ಕಂಪನ
ಬಳಿಯಲ್ಲೇ ನೀ ಬಂದಂತೆ ಅನುಮಾನ..
ಹನಿಯೊಂದು ಇಳಿದಾಗ ಮೃದು ತಲ್ಲಣ
ಬಸಿರಲ್ಲೇ ನೀ ಬೆರೆತಂತೆ ಆ ಕ್ಷಣ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನೆಲ್ಲ ಕನಸಿನಾ ಚೆಂದ ಹಂಗಾಮ..

ಅಳಬೇಕು ನಾನು ಸುಮ್ಮನೆ
ನಿನ್ನ ಬೆರಳು ಸೋಕಲೆಂದು ಮೆಲ್ಲನೆ..
ಬೀಸಿಬಿಡು ತುಸು ತಂಗಾಳಿ
ಸ್ಪರ್ಶ ಪಲುಕು ಸ್ಪಂದಿಸಲಿ ಘಮ್ಮನೆ..

                                    ~‘ಶ್ರೀ’
                                      ತಲಗೆರಿ