ಮಂಗಳವಾರ, ನವೆಂಬರ್ 10, 2015

"ವರದಿ"...

                "ವರದಿ"...

ನೇಸರನ ಕಿಸೆಯಲ್ಲಿ ಹಣತೆಯನು ಹಚ್ಚಿ
ನಿಶೆಯನ್ನು ಚಂದ್ರಮನ ದರ್ಬಾರಿಗೆ ಬರೆದು
ಗಡಿಯಾರದಾ ಮುಳ್ಳು ಮುಲುಗುತಿರಲಿ ಪುನಃ
ಒಂದಿನಿತೂ ಕದಲದೇ,ನೀ ಇರಲು ಸನಿಹ..
ಮುಂಗುರುಳು ಕರೆವಾಗ ಕುಣಿಯುವುದು ಹೃದಯ
ಕಾಲುಂಗುರವು ನಾಚಿರಲು ಹುಟ್ಟುವುದು ವಿಷಯ..

ಎದೆಯೆದೆಯ ಮೃದು ಪಲ್ಲಂಗದಿ
ಮಿಲನ ರೇಖೆಗಳದೇ ಮಂದಾರ ಕುಸುರಿ..
ಮುಗಿಲ ಬದುಗಳಿಗೆ ಕಟ್ಟಿದಾ ಕಮಾನಿಗೆ
ನೀನೀಗ ತಂದಿರುವೆ ಜೀವಗಳ ಬೆಸುಗೆ..
ಮೊದಲ ಮಳೆಯ ಪರಿಮಳದ ಸುವ್ವಾಲಿ
ಆಗಾಗ ಗರಿಗೆದರೋ ಶೀತಲದ ಗಾಳಿ..


ಬಿಡಾರದಾ ಹೊಸ್ತಿಲಲಿ ಉಷೆಯ ಹೆಜ್ಜೆಯ ಸದ್ದು
ಇಬ್ಬನಿಯು ಕರಗಿಹುದು,ಹಸಿರ ತೋಳಲಿ ಬೆಚ್ಚನೆಯ ಮುದ್ದು..
ಕಲರವದ ಮೆರವಣಿಗೆಗೆ ಅಣಿಯಾಯ್ತು ಬೀದಿ
ಕನಸುಗಳೆಲ್ಲಾ ಕಲೆತಿಹವು ರಂಗೋಲಿಯಾ ತೆರದಿ..
ಎಲ್ಲೆಲ್ಲೂ ನೀ ತಂದ ಋತುಮಾನದಾ ಸುದ್ದಿ..
ಈಗಷ್ಟೇ ತಲುಪಿಹುದು,ಪಾರಿಜಾತ ಅರಳಿದಾ ವರದಿ...

                                                   ~‘ಶ್ರೀ’
                                                      ತಲಗೇರಿ

ಮಂಗಳವಾರ, ನವೆಂಬರ್ 3, 2015

"ಹರಿವು"...

                 "ಹರಿವು"...

ಇಂದು,ನನ್ನೆದೆಯ ಅಂಗಳದಿ ಸೋನೆಯಂತೆ..
ತಾರಸಿಯಲಿ ತಂಗಿದ್ದ ಹನಿಗಳೆಲ್ಲಾ ಹೇಳುತಿವೆ
ಮುಗಿಲ ಸಂತೆಯ ಕುರಿತಂತೆ..
ಮೆಲ್ಲ ಮೆಲ್ಲ ಅರಳುತಿವೆ ಸಾಲಿನಲಿ
ಹಚ್ಚಿಕೊಂಡು ಪದರಕೆಲ್ಲಾ ಮಣ್ಣ ಮಿಲನ ಪುಳಕ..
ಕಾಡಲೆಂದು ಪಳೆಯುಳಿಕೆಯಂತೆ,ಜಾರಿದಾ ಬಳಿಕ...

ನೀರ ಕನ್ನಡಿಯಲಿ ತೇಲುವಾ ಚಂದಿರನ ಹೆಣವು
ತಿಳಿದೀತು ಎಂದು,ಮರಣದಾ ಕಲೆಗಳಲೂ
ಕನಸು ಕಟ್ಟುವವ ತಾನೆಂದು ಅವಗೆ..
ಮರುದಿನದ ಹಗಲು
ಹೂವಿಗೆಲ್ಲಾ ತುಂಬುವುದು ಘಮಲು..
ಹಲವು ಮೈಲಿ ಹರಿವ ನೀರಿಗೆ
ಚಂದಿರನೇ ಈಗ ಹೊಸ ನಗೆ..
ಹಾಯಿದೋಣಿಯ ಹಾದಿಗೀಗ
ಅಂಟಿಕೊಂಬುದು ಹದವಾದ ಪೂರ..
ಮತ್ತಷ್ಟು ದೂರ...

ತತ್ತಿಯೊಡೆಯಲು ಬಿಸಿಯ ಹಾಸಬೇಕು..
ಸತ್ತ ತಾರೆಗಳ ಎತ್ತರಕೆ ಭೂಮಿಯೊಂದೇ..
ಬಣ್ಣ ಬಣ್ಣದ ನೀರು ಕಲೆವ
ಭೂಮಿಕೆಯೂ ಒಂದೇ..
ಆದಿ ಅಂತ್ಯದ ಪಠ್ಯದಲಿ
ಬಸಿರ ಬಿಂದುವಲಿ ಮೊಳೆತು..
ಹರಿವು ಬದಲಾದಂತೆ,ಪಾತ್ರ ಬದಲಾದೀತು...!

                                                  ~‘ಶ್ರೀ’
                                                     ತಲಗೇರಿ