ಶನಿವಾರ, ಸೆಪ್ಟೆಂಬರ್ 20, 2014

"ಕಾಲುದಾರಿಯ ಕವಿತೆ.."

  "ಕಾಲುದಾರಿಯ ಕವಿತೆ.."

ಕಾಲುದಾರಿಯ ಆದಿಯಲಿ
ಕಾದಿಹೆನು ನೆನಪುಗಳ ಡೇರೆಯಲಿ..
ಬೇಲಿದಾಟದ ಮಾತುಗಳ
ಕೂಡುತಿದೆ ಬಿಡಾರ ತನ್ನೆದೆಯ ಗೂಡಿನಲಿ..

ಮಳೆ ಮುಗಿದ ಎಲೆ ಹನಿಯ ಸದ್ದು
ನನ್ನೆದೆಯ ಗದ್ದಲಕೆ ವಿರಾಮವೆಂಬಂತೆ..
ಬಲು ಮಾಗಿದ ಮೃದು ಚಿಟ್ಟೆಯಾ ಮುದ್ದು
ಮುನ್ನುಡಿಯ ಮುನ್ನೋಟಕೆ ಮೊದಲ ಪದದಂತೆ..

ಚಂದಿರನ ಚಟಗಳಿಗೆ ನಾಚದಂತೆ
ಕಪ್ಪು ಮುಗಿಲಿಗೂ ಹರಡಿದೆ ನೀಲಿ ಅಮಲು
ಮಂದಗಾಳಿ ಮನಸುಗಳಿಗೆ ಸೋಕಿದಂತೆ
ಮಧುವುಕ್ಕಿ ನಗುತಿಹವು ಕಾಮನೆಯ ಹೂಗಳು..

ಬಣ್ಣ ಬಾಗಿನ ಕೊಟ್ಟು ಕನಸುಗಳಿಗೆ
ಕಾಣಿಸಲೇ ತೀರದಲೆಗಳ ಸಂಜೆ ಸವಾರಿ..
ನಾಳೆಗಳ ದಿವ್ಯಧ್ಯಾನದಲಿ ಹಾಗೇ
ಆಗಮಕೆ ಅಣಿಯಾಯ್ತು ಏಕಾಂತ ಲಹರಿ..

ಕಾಲುದಾರಿಯೇಕೋ ಇನ್ನೂ ಖಾಲಿ ಖಾಲಿ
ಮರಳಲಾರೆಯಾ ನೀ,ಮತ್ತೆ ಆಗಂತುಕಳಂತೆ..
ನೆರಳ ಸಲಿಗೆಯ ಬಯಸಿ ಕಾದಿಹುದು ಬೇಲಿ
ಕತ್ತಲಲಿ ಕಳೆದೊಲವು ಬೆಳಕಲ್ಲಿ ಸಿಕ್ಕೀತೇ?..

                               ~‘ಶ್ರೀ’
                                 ತಲಗೇರಿ