ಗುರುವಾರ, ಏಪ್ರಿಲ್ 28, 2011


ಹ೦ಬಲಿಸುತಿದೆ ಮನ.....


    ಅ೦ತರ೦ಗದ ಗೋಡೆಗಳಿಗೆ ನೀರು ಬ೦ದು ಬಡಿಯುತ್ತಿದೆ...ಕಡಲ ಕಿನಾರೆಗೆ ತೆರೆಗಳಪ್ಪಳಿಸಿದ೦ತೆ...ವರುಷ ವರುಷಗಳ ಸೇಡನ್ನು ತೀರಿಸಿಕೊಳ್ಳಲು ಮುನ್ನುಗ್ಗುತ್ತಿರುವ೦ತೆ...ಸು೦ದರ ಕಲಾಕೃತಿಗಳಲ೦ಕರಿಸಿರುವ ನನ್ನ೦ತರ೦ಗದ ಗೋಡೆಗಳನ್ನು ಕೆಡವಲು ಬರುತ್ತಿದೆ,ಕಲಾಭಗ್ನಪ್ರೇಮಿಯೋ ಎ೦ಬ೦ತೆ....ಕಲ್ಪನೆಗೆ ನಿಲುಕದ೦ತೆ,ಮುಗ್ಧತೆಯಿ೦ದ ಜನ್ಮತಾಳಿದ ನನ್ನೆದೆಯ ಅರಮನೆಯನ್ನು ದಗ್ಧಗೊಳಿಸುವುದೇ ಜೀವನದ ಪರಮಗುರಿ ಎ೦ಬ೦ತೆ!!ಮರಳಿ ಮರಳಿ,ಹಿತವಾಗಿ ನರಳಿ ಆಸರೆಯನೊದಗಿಸಿದ ನನ್ನರಮನೆಯ ಕ೦ಬಗಳನ್ನು ತನ್ನೊ೦ದಿಗೇ ಕೊಚ್ಚಿಸಿಕೊ೦ಡು ಹೋಗುವ ಇಚ್ಛೆಯೋ ಎ೦ಬ೦ತೆ....ಅಪ್ಪಿಕೊಳ್ಳುತ್ತಾ,ನೆಲಕ್ಕಪ್ಪಳಿಸಿ ನುಚ್ಚುನೂರು ಮಾಡಿ,ಹುಚ್ಚನ೦ತೆ ನಗಬೇಕು ಎ೦ಬ೦ತೆ!!...ಬರುತ್ತಿದೆ,ಬಡಿಯುತ್ತಿದೆ ಸೊಕ್ಕಿನಿ೦ದ;ಕೊನೆಯ ಪ್ರಯತ್ನವೋ ಎ೦ಬ೦ತೆ;ತಿಳಿಯದೆಯೇ ನನ್ನ೦ತರ೦ಗದ ಅಮರತ್ವದ ಚರಿತೆ..!!
    ನಿತ್ಯವೂ ಗೋಡೆಗಳನ್ನು ಮುದ್ದಾಡುತ್ತಲೇ ಒದೆಯುತ್ತಿದೆ ಈ ನೀರು...ಆ ನೀರಿಗೂ ನನ್ನ೦ತರ೦ಗವೇ ಸೂರು!!..ಆ ನೀರಿನಿ೦ದಲೇ ಭದ್ರಗೊಳ್ಳುತ್ತಿದೆ ನನ್ನೆದೆಯ ಬೇರು!!..ಕೋಪದಿ೦ದಲೋ,ಮಾತ್ಸರ್ಯದಿ೦ದಲೋ ದಿನವೂ ನನ್ನೆದೆಯ ಗೋಡೆಗಳನ್ನು ಸ್ಪರ್ಶಿಸುತ್ತಿದೆ ಆ ನೀರು...ತಬ್ಬುವ ಈ ಸ್ಪರ್ಶದಿ೦ದಲೇ,ಮೊಳೆಯುತ್ತಿದೆ ಪ್ರೀತಿ ಚಿಗುರು...ನೀರದು,ನನ್ನರಮನೆಯ,ನನ್ನರಗಿಣಿಯ ನಾಶಗೊಳಿಸಬಯಸಿದರೂ....!!ಭೂಕ೦ಪನವೂ ಒಮ್ಮೊಮ್ಮೆ ಸವಿತಲ್ಲಣದ೦ತೆ ಅನಿಸುವುದು..ನಿತ್ಯ ಜೊತೆಯಲ್ಲೇ ಗುದ್ದಾಡಿದರೂ,ಮುದ್ದಾಡಿದ೦ತೆ ತೋರುವುದು..ನೀರ ಸೆಳೆತಕ್ಕೆ ಗೋಡೆಗಳೆಲ್ಲಿ ಕಳೆದುಹೋಗುವವೋ ಎ೦ಬ ಭಯವೇ,ನನಗೆ ಅಭಯಹಸ್ತ ನೀಡಿದ೦ತೆ ಕಾಣುವುದು...ಬೆಳಕಿಗೆ ನಿ೦ತಾಗ,ಗೋಡೆಗಳ ಮೇಲೆ ಬೀಳುವ ನನ್ನ ಭಾವಗಳ ನೆರಳುಗಳಲ್ಲಿ ಸೌ೦ದರ್ಯವೊ೦ದು,ಸ೦ದೇಶಗಳ ತಾಣವೊ೦ದು ಗೋಚರಿಸುವುದು..ಬದುಕಿನ ಸತ್ಯ~ಮಿಥ್ಯಗಳ ಅರಿವಾದ೦ತೆ ಅನಿಸುವುದು..ಆ ಗೋಡೆಗಳೇ ಬಿದ್ದುಹೋದರೆ,ಗೋಡೆಗಳ ಮೇಲೆ ಬೀಳುವ ನೆರಳುಗಳನ್ನು ಹುಡುಕಲೆಲ್ಲಿ ಹೋಗಲಿ?ಕಾಲ ಬಳಿಯಲೇ?!..ಅಲ್ಲಿ ನೀರ ಹನಿಗಳ ಬಳಗ ನನ್ನನ್ನೇ ಪ್ರತಿಫಲಿಸುವವು..ನನಗೆ ಬೇಕಾಗಿರುವುದು ಕಪ್ಪು ನೆರಳು ಮಾತ್ರ..!ನನ್ನ೦ತೆಯೇ ಕಾಣುವ ಮಿಥ್ಯ ಪಾತ್ರವಲ್ಲ!!ನನಗೆ ನನ್ನ೦ತೆಯೇ ನಗುವ ಬಿ೦ಬ ಬೇಕಿಲ್ಲ;ನಿರ್ಲಿಪ್ತ ಸ್ಥಿತಿಯ ಕಪ್ಪು ಬಿ೦ಬ ಬೇಕಿಹುದಲ್ಲ...ಬೆಳಕಿನ ಕಿರಣಗಳು ಒಮ್ಮೊಮ್ಮೆ ಮಾತ್ರ ಕೃಪೆ ಬೀರುತ್ತವೆ..ಬೆಳಕೇ ಇಲ್ಲದ ಆ ಕತ್ತಲೆಯಲ್ಲೂ ಮೌನವಾದ ಮಾತಿದೆ..ಕತ್ತಲಲ್ಲಿ ಕುಳಿತು,ಬೆಳಕಿಗಾಗಿ ಕಾಯ್ವ ಆ ತುಡಿತದಲ್ಲೂ ಒ೦ಥರದ ಮಿಡಿತವಿದೆ..ಬಾಳ ಮೇಲಿನ ಹಿಡಿತವಿದೆ..ಸೊಗಡಿದೆ...ಬೆಡಗಿದೆ....
    ಇಷ್ಟೊ೦ದು ಭಾವನೆಗಳ,ನೂರೊ೦ದು ಕಲ್ಪನೆಗಳ,ಹಲವಾರು ಸ೦ಘರ್ಷಗಳ,ಕೆಲವೊ೦ದು ಸ್ಪರ್ಶಗಳ,ಜೊತೆ ಬಾಳೋ ಕ್ಷಣಗಳ,ಮಾತಾಡೋ ಮೌನಗಳ,ಎದೆಯಾಳೋ ನೆನಪುಗಳ ಸುಳಿಗೆ ಸಿಲುಕಿ,ನಲುಗುವ,ಮುಲುಗುವ,ಬದುಕಲು ಕಲಿಸುವ ಅನುಭವಗಳ ನೀಡುವ ಅಲೆಗಳ ಬಡಿತವು ಗಳಿಗೆ ಗಳಿಗೆಗೂ ಇರಬೇಕು...ಕೊನೆವರೆಗೂ ಅವುಗಳ ಮೊರೆತವು ಕಿವಿಯ ತಾಕುತಲಿರಬೇಕು..ಜೊತೆಗೆ,ಗೋಡೆಗಳು ಮಣ್ಣಾಗದ೦ತೆ ನಿ೦ತಿರಬೇಕು ಎ೦ದು ಹ೦ಬಲಿಸುತಿದೆ ಮನವು;ದಿನವೂ...ಗೆದ್ದು,ಎಲ್ಲ ರೀತಿಯ ಸೋಲು,ನೋವು;ಜೊತೆಗೆ ಸಾವು..!!...

                                                                                                           ~‘ಶ್ರೀ’
                                                                                                             ತಲಗೇರಿ

"ಕಣ್ಣೊಳಗಿನ ಕಾವ್ಯ...."


    ಎದೆಯ ಒಳಗಿನ ಮಧುರ ‘ತನನ’ಗಳ ತರ೦ಗಗಳು ಸಾಗರದ ಅಲೆಗಳ೦ತೆ...ಸಾಗರದ ಅಲೆಗಳು ತೀರಕೆ ಬಡಿದು ಮತ್ತೆ ಸಾಗರವ ಸೇರುವವು...ಆದರೆ ಭಾವದ ತರ೦ಗಗಳು ಕಣ್ಣಿನ ಮೂಲಕ ಅಲೆಅಲೆಯಾಗಿ ಇನ್ನೊ೦ದು ಹೃದಯವ ಸೇರುವವು....ಮು೦ದಕೆ ಮು೦ದಕೆ ಸಾಗುವವು...ಏರಿಳಿತ,ಸ೦ತಸದಾ ಕುಣಿತ,ಹೃದಯ ವಿದ್ರಾವಕ ಕುಸಿತ....ಇದೇ ಜೀವನ!!...
    ಕಣ್ಣು ಮನುಜನ ಅಭಿವ್ಯಕ್ತಿಯ ಮಾಧ್ಯಮ...ಮಾತಿನಲ್ಲಿ ವರ್ಣಿಸಲಾಗದ,ಶಬ್ದಗಳು ವಿವರಿಸಲಾಗದ,ಅಕ್ಷರಗಳು ಸೆರೆಹಿಡಿಯದ ಅದೆಷ್ಟೋ ಭಾವನೆಗಳ,ಅದೆಷ್ಟೋ ಕನಸುಗಳ ‘ವಿಶ್ವ ದರ್ಶನ’ವನ್ನು ಅನಾವರಣಗೊಳಿಸುವ ವೇದಿಕೆ ಈ ಕಣ್ಣು...ಕಣ್ಣುಗಳಲ್ಲಿನ ಮುಗ್ಧತೆ,ಸೂಕ್ಷ್ಮತೆ ವ್ಯಕ್ತಿಯ ನಡತೆಯನ್ನು ತೋರ್ಪಡಿಸುತ್ತದೆ...ಕಣ್ಣುಗಳಲ್ಲೇ ನಡೆಯುತ್ತದೆ ಪ್ರೀತಿಯ ಸ೦ಭಾಷಣೆ...ಕಣ್ಣುಗಳಲ್ಲೇ ಇಣುಕುತ್ತದೆ ಸುಖ ದುಃಖಗಳ ಸ೦ಘರ್ಷಣೆ...ಭವಿತವ್ಯದ ಬದುಕಿನಾ ವಿಶ್ಲೇಷಣೆ!
    ಬಿಳಿಯ ಕಡಲಲಿ ಕಪ್ಪು ನೌಕೆ ತೇಲುವ೦ತೆ,ಕಡಲ ಅಲೆಗಳ ಕವಲುಗಳು ಸೇರಿಕೊ೦ಡ೦ತೆ;ಕಣ್ಣೆ೦ಬ ಕವಿತೆ!!ಮಹಾಸಾಗರದ ತೀರ ದಿಗ೦ತದಲ್ಲಿರುವ೦ತೆ ಭಾಸವಾಗುತ್ತದೆ..ನಮ್ಮ ಯೋಚನೆಗೆ,ನಮ್ಮ ನೋಟಕೆ ನಿಲುಕುವುದಕ್ಕಿ೦ತಲೂ ಮು೦ದೆ ತೀರ ಇರಬಹುದು ಅಲ್ಲವೇ?ಅ೦ತೆಯೇ ಕಣ್ಣೊಳಗಿದೆ ಕಾವ್ಯಸಾಗರ!..ಮನದ ಭಾವನೆಗಳ ಮಹಾಪೂರ!!..ವಿಷಾದ,ವಿನೋದ,ಸ೦ತೋಷ,ಸ೦ತಾಪ ಹೀಗೆ ಎಲ್ಲವುಗಳ ಸಮಾಗಮ...ಹೊಸತೊ೦ದು ‘ಜೀವ’ದ ಉಗಮ!ಆಳಕ್ಕೆ ಹೋದ೦ತೆ ಎಲ್ಲವೂ ಗಹನ...ಒಳಗೊಳಗೇ ತಲ್ಲಣ...ಸವಿಯ ಮೃದು ಕ೦ಪನ!!ಕಣ್ಣೊಳಗೆ ಸತ್ಯ ಗೋಚರಿಸುತ್ತದೆಯ೦ತೆ!ವ್ಯಕ್ತಿಯ ವ್ಯಕ್ತಿತ್ವದ ದಕ್ಷತೆಯನ್ನು,ಕ್ಷಮತೆಯನ್ನು ಬಿ೦ಬದಲ್ಲಿ ಮೂಡಿಸುವ ಕನ್ನಡಿಯೇ ಕಣ್ಣು!ಅಲ್ಲವೇ?...ಮನಸ್ಸು ಬಿಚ್ಚಿ ನಕ್ಕರೂ ಕ೦ಗಳಲ್ಲಿ ನೀರು;ಎದೆ ಬಿರಿದು ಅತ್ತರೂ...!!ಇದಾವ ವಿಸ್ಮಯ?!ಒ೦ಥರಾ ಅಯೋಮಯ!!ಬದುಕೆ೦ಬ ಕಾವ್ಯವ ಅರಿತ ಕ್ಷಣದಿ೦ದ ಮೂಡುವನು ಅಲೆಗಳ ಮೇಲೆ ತರಣಿಯು;‘ಮತ್ತೆ ಮುಳುಗೆನೆ೦ಬ’ಭರವಸೆಯಿ೦ದ!‘ಮುಳುಗಿದರೂ ಇರುವೆ ನಾನು ಚ೦ದ್ರಮನ ಪ್ರತಿಫಲನದಿ೦ದ’ಎ೦ಬ ನ೦ಬಿಕೆಯಿದ...
    ಬತ್ತದ ಕಣ್ಣೀರು ನೀಡುವುದು,ಕಣ್ಣೀರನೊರೆಸುವ ಕೈಗಳನು....ಜೊತೆಗೆ ಹೃದಯವನು....ಅನ೦ತವನು ಬೊಗಸೆಗೆಳೆವ ಸಾಗರಗಳ ಜೋಡಿಯನು...ಕವಿಸಮಯವಿನ್ನು;ರಚನೆಗೆ ಕಾಯುತಿದೆ ಹೃದಯವ ತೆರೆದಿಟ್ಟು ಲೇಖನಿ...ಹರಿದು ಬರಲಿ ಬಚ್ಚಿಟ್ಟುಕೊ೦ಡಿರುವ ‘ಪದಗಳಾ ಗುಪ್ತಗಾಮಿನಿ!!’....
                                                                                                               ~‘ಶ್ರೀ’
                                                                                                                ತಲಗೇರಿ

ಶನಿವಾರ, ಏಪ್ರಿಲ್ 23, 2011


‘ಬಿ೦ದು’ರೂಪೇಣ....
         ....ಬದುಕಿನ ಅನಾವರಣ....!


     ದಟ್ಟನೆಯ ಕಪ್ಪು ಬಣ್ಣದ ಗೋಡೆ...ಅದರ ಮೇಲೊ೦ದು ಶ್ವೇತ ವರ್ಣದ ಕಾಗದ...ಆ ಕಾಗದದ ಮೇಲೆ,ಮಧ್ಯದಲ್ಲೊ೦ದು ಕಪ್ಪು ಬಿ೦ದು...ಎಷ್ಟು ತಾಸುಗಳು ಕಳೆದವೋ ಏನೋ,ಇನ್ನೂ ಆ ಕಪ್ಪು ಚುಕ್ಕೆಯನ್ನು ನೋಡುತ್ತಲೇ ಕುಳಿತಿದ್ದೆ...ಯಾಕೋ,ಆ ಬಿ೦ದುವನ್ನು ನೋಡುತ್ತ ಕೂತಿದ್ದಾಗ,ಏಳುವ ಮನಸ್ಸಾಗಲೇ ಇಲ್ಲ...ಅರೇ!ಇದ್ದಕ್ಕಿದ್ದ೦ತೆ ಆ ಕಪ್ಪು ಬಿ೦ದು ದೊಡ್ಡದಾಗುತ್ತಿದೆಯಲ್ಲಾ!..ಕಣ್ಣುಗಳನ್ನು ಉಜ್ಜಿದೆ;ಚಿವುಟಿಕೊ೦ಡೆ.ಕನಸಲ್ಲ...ವಾಸ್ತವ!ಆಶ್ಚರ್ಯದಿ೦ದ ಅದನ್ನೇ ನೋಡತೊಡಗಿದೆ.ದೊಡ್ಡದಾದ ಆ ಬಿ೦ದು ಮತ್ತೆ ಚಿಕ್ಕದಾಗತೊಡಗಿತು...ಹಾಗೆಯೇ,ಒ೦ದು ಮಗು ಜನಿಸಿದ೦ತೆ,ಅತ್ತ೦ತೆ ಕ೦ಡಿತು...ಮನೆಯಲ್ಲಿ ಹರ್ಷದ ಹೊನಲು..ಮಗುವಿನ ಬಾಲ್ಯ,ತು೦ಟಾಟಗಳು,ಅದರ ನಗು,ಪಿಳಿ ಪಿಳಿ ನೋಡುವ ಕಣ್ಣುಗಳು,ಏನನ್ನೂ ಅರಿಯದ ಸಹಜ ಸು೦ದರ ಮುಗ್ಧತೆ...ಇವೆಲ್ಲವೂ,ಒ೦ದಾದ ಮೇಲೊ೦ದರ೦ತೆ,ಆ ಬಿಳಿ ಹಾಳೆಯಲ್ಲಿ ಮೂಡಿ ಮಾಯವಾಗತೊಡಗಿದವು...ಒ೦ದು ದೃಶ್ಯದ ನ೦ತರ,ಇನ್ನೊ೦ದು ಗೋಚರಿಸುತ್ತಿತ್ತು.ಮಗು ನಿಧಾನವಾಗಿ ಯೌವನಕ್ಕೆ ಕಾಲಿಡುತ್ತಿರುವ ದೃಶ್ಯ...ಬಾಲ್ಯದ ಮುಗ್ಧತೆ ಈಗ ಮರೆತ೦ತೆ ಭಾಸವಾಗುತ್ತಿತ್ತು...ಹೆ೦ಡ,ಹಣ,ಹೆಣ್ಣಿನೊ೦ದಿಗೆ ಮೋಜು,ಜೊತೆಗೆ ಜೂಜು...ಪ್ರಾಣಕ್ಕೆ ಪ್ರಾಣ ಕೊಡುವವರ೦ತೆ ಅನಿಸುವ ಸ್ನೇಹಿತರು...ಹಣ ಖಾಲಿಯಾದ೦ತೆಲ್ಲಾ ತೊರೆದುಹೋಗುವವರು...ಕೊನೆಯವರೆಗೆ ಕ೦ಬನಿಯನೊರೆಸೋ ಒ೦ದಿಬ್ಬರು..ಯೌವನದಲ್ಲಿ ಬಾಳ ಸ೦ಗಾತಿಯ ಪ್ರವೇಶ..ಅವಳೊಡನೆ ಸರಸ ವಿರಸಗಳು...ಎಲ್ಲಿ೦ದಲೋ ಬೆಸೆದ ಅನುಬ೦ಧ..ಮಕ್ಕಳಿರಲೆಷ್ಟು ಚ೦ದ...ಬದುಕಿನಲ್ಲಿ ನೆಲೆಯೂರುತ್ತಿದ್ದೇನೆ ಎ೦ದು ಅನಿಸತೊಡಗಿದಾಗ,ಸಾಲು ಸಾಲಾಗಿ ಬರುವ ಕಷ್ಟಗಳು..ಏನೂ ಅರಿಯದ ಪುಟ್ಟ ಕ೦ದಮ್ಮಗಳ ಮುಗ್ಧ ಅಳು..ಸಾಲಕೊಟ್ಟವರ ಕಾಟಗಳು...ಅತ್ತ~ಇತ್ತಲಿನ ಸು೦ದರಾ೦ಗಿಯರ ಮೈಮಾಟಗಳು...ಬೇಸತ್ತು,ಆತ್ಮಹತ್ಯೆಯ ಯೋಚನೆಗಳು...ಒ೦ದೆರಡು ಪ್ರಯತ್ನಗಳು...ಹಿರಿಯರ ಧೈರ್ಯದ ಮಾತುಗಳು...ಮತ್ತೆ ಬದುಕುವ ಆಸೆಗಳು..!ಅನುಭವಗಳ ಸೂಚನೆ..ಹೊಸದೊ೦ದು ಬೃಹತ್ ಕಾರ್ಯದ ಕಲ್ಪನೆ...ಕಳೆದುಹೋದ ಯೌವನದ ಚಿ೦ತನೆ...ಕಾಲ ನೀಡುವ ಯಾತನೆ...ಆದರೂ ಜೊತೆಗಿರಲೆ೦ದು ಮಾಡಿದ ಪುಟ್ಟ ಸಾಧನೆ....ಸಹಾಯ ಪಡೆದ ಮನಸುಗಳ ಹಾರೈಕೆಯ ಭಾವನೆ...ಬದುಕು ಸಾರ್ಥಕವಾಯಿತೆ೦ದುಕೊಳ್ಳುತ್ತಿರುವ ಕ್ಷಣವೇ ಹಾರಿಹೋಗುವ ಬ೦ಧು ಬಾ೦ಧವರ ಪ್ರಾಣ ಪಕ್ಷಿಯ ವಿಚಿತ್ರ ವರ್ತನೆ...ಮತ್ತೆ ಅಪ್ಪಿಕೊಳ್ಳುವ ವೇದನೆ....ಎಲ್ಲ ನಶ್ವರ,ಜಗಕೊಬ್ಬನೇ ಈಶ್ವರ ಎ೦ದು ತಿಳಿವ ಹೊತ್ತಿಗೆ,ಉಸಿರು ಹಾಗೇ ಸುಮ್ಮನೆ ಮಾಡಿದ ವ೦ಚನೆ..ಒ೦ದಿಬ್ಬರಿ೦ದ,ಕಾಲನ ಗರ್ಭದಿ ಲೀನವಾದ ಈತನ ಒ೦ದೆರಡು ದಿನದ ಸ್ಮರಣೆ!!..ಕೊನೆಗೆ ಮೂಡಿತ್ತು,ಆ ಕಾಗದದಲ್ಲಿ ಒ೦ದು ಪ್ರಕಟಣೆ..."ಇದುವೇ ಜೀವನ;ರಹಸ್ಯ,ಸ್ವಾರಸ್ಯ,ವಿಶೇಷ್ಯಗಳ ಸಮ್ಮಿಲನ...‘ಇ೦ದು ಅವನು,ನಾಳೆ ನಾನು’ಎ೦ಬ ವಾಕ್ಯದ ಚಿತ್ರಣವೇ ಈ ಕಥನ...ಇಲ್ಲಿ ಎಲ್ಲರೂ ಕಾಲನ ಅಧೀನ...!"ಇಷ್ಟು ಮೂಡಿ ಮಾಯವಾಗುತ್ತಿದ್ದ೦ತೆಯೇ,ನಿಧಾನವಾಗಿ ಆ ಕಪ್ಪು ಬಿ೦ದುವೂ ಕರಗತೊಡಗಿತು...ಜೊತೆಗೆ ಕತ್ತಲೆಯೂ ಆಗತೊಡಗಿತು...ಬಹುಶಃ ರಾತ್ರಿಯೇ ಆಯಿತಿರಬೇಕು...ನಾನು ಮಾತ್ರ ಹಾಗೆಯೇ,ಆ ಹಾಳೆಯನ್ನೇ ನೋಡುತ್ತಾ ಕುಳಿತಿದ್ದೆ...ಹುಡುಕುತ್ತಾ,ಕಳೆದುಹೋದ ಚುಕ್ಕೆಗಾಗಿ...ನಾಳೆ ಮತ್ತೆ ಬರುವ ಬೆಳಕಿಗಾಗಿ...ಭರವಸೆಯ ಕಣ್ಣಾಗಿ!!...!!...

                                                                                                             ~‘ಶ್ರೀ’
                                                                                                               ತಲಗೇರಿ

ಗುರುವಾರ, ಏಪ್ರಿಲ್ 21, 2011


"ದೀಪವೂ ನಿನ್ನದೇ...ಗಾಳಿಯೂ...!"

    ಸವಿಯ ನಿದ್ದೆಯಲ್ಲಿ ಹಾಗೇ ಬೀಳುವ ಸ್ವಪ್ನದ ಹಾಗೆ...ಶಾ೦ತ ಶರಧಿಯಲ್ಲಿ ಎದ್ದ ಅಲೆಗಳ ಹಾಗೆ....ನಿ೦ತ ನೀರಲ್ಲಿ ಕಲ್ಲೆಸೆದ ಹಾಗೆ...ಹಸಿರು ಎಲೆಗಳ ನಡುವೆ ಬಿಳಿಯ ವರ್ಣದ ಹಾಗೆ...ಸ೦ಜೆಯ ಏಕಾ೦ತದ ಗಗನದಲ್ಲಿ ಕ್ಷಣ ಬ೦ದುಹೋಗುವ ವರ್ಣಗೆರೆಗಳ ಹಾಗೆ...ಮುನಿಸಿರುವ ಮೊಗದಲ್ಲಿ ಮೂಡೋ ನಸುನಗೆಯ ಹಾಗೆ...ಬರಿದೆ ಬೆರಳುಗಳ ನಡುವೆ ಮತ್ತೆ ಸಿಲುಕಿಕೊ೦ಡಿದೆ ಲೇಖನಿ ಹೀಗೆ...
     ಬರೆದ ಬಾಳು ತೊರೆದ ಗೋಳು...ತು೦ಬಿಬರುವ ಪುಟ್ಟ ಕ೦ಗಳು...ಜಾರಿಹೋಗುವ ಕಣ್ಣಬಿ೦ದುವ ತು೦ಬಿಕೊಳ್ಳುವ ಕೆಲವು ಕೈಗಳು..ನೋಡಿ ನಗುವ ಹಲವು ತುಟಿಗಳು..ಮರುಕಪಡುವ ಮನವು ಹಲವು...ನಡುಕ ತೋರುವ ಜೀವವು,ಜನ್ಮಜನ್ಮದ ಕರ್ಮಫಲವು,ಇರಲೇಬೇಕು ಎಲ್ಲವೂ,ಎನುವ ಬೇರೆ ಕವಲು...ಜೀವನವಲ್ಲವೇ,ಇರಲಿ ಎಲ್ಲ ಕಷ್ಟಗಳ ಒಲವು.....
     ದೀಪವು ಉರಿಯುತಿಹುದು....ಗಾಳಿ ಬೀಸುತಿಹುದು...ಬತ್ತಿಯ ಮೇಲೆ ಉರಿವ ಜ್ವಾಲೆ,ಗಾಳಿಯ ತಾಳಕೆ ಕುಣಿಯುತಿಹುದು...ಪತ೦ಗವಲ್ಲೇ ಹಾರುತಿಹುದು...ಹಣತೆ ತನ್ನ ಉಳಿವನು ಬಯಸದೇನು?..ಬಯಸಿ,ತಾನು ಮಾಡುತಿಹುದು ಹೋರಾಟವನು...ಆರಿಸಬ೦ದ ಪತ೦ಗದ ನಾಶವನು...ಆದರೆ,ಗಾಳಿ ಬೀಸಲು,ಹಣತೆ ಆರಿತು...ಯಾವ ಕೈಯಲೋ ಮತ್ತೆ ಪಡೆಯಿತು ಜೀವವನು...ಬೆಳಕು ನೀಡೋ ಬದುಕನು...ಇದುವೇ ಜೀವನ..ಉಳಿವು~ಅಳಿವುಗಳ ಸ೦ಗಮದ ತಾಣ...ನಾಳೆ ನಿನ್ನೆಗಳ ಮಧುರತೆಯ ತನನ....ಹುಟ್ಟು ಸಾವುಗಳ ನಡುವೆ,ಕೆಲವೊಮ್ಮೆ ಕಣಿವೆ...ಹಲವಾರು ಪರ್ವತವೇ!...
     ದೀಪದ ಆಯಸ್ಸು ಮುಗಿಯಿತೆನ್ನುವಾಗ ಬೆಳಗುವುದಲ್ಲವೇ ಕೊನೆಯ ಬಾರಿ...ನೆನಪು ಉಳಿಸುತ ಹೋದರೂ ಆರಿ...ಅದುವೇ ತಾನೇ ನಿಜದ ಬಾಳ ವೈಖರಿ....ಇರಬಹುದು ನಾವಿರುವವರೆಗೂ,ಈ ಭೂಮಿಯಲ್ಲಿ...ಇರಬೇಕಲ್ಲವೇ ಸತ್ತರೂ,ಜನರ ಹೃದಯದಲ್ಲಿ...ಹುಟ್ಟುವುದು ಸಹಜ,ಸಾಯುವುದು ನಿಜ..ತು೦ಬಿರಬೇಕಲ್ಲವೇ ಮಾನವತೆಯಿ೦ ಮನವೆ೦ಬ ಕಣಜ!!..ಭವಿಷ್ಯವೆನ್ನುವುದು ಇ೦ದು ಬಿತ್ತುವ ಬೀಜ...ಸೃಜಿಸುವುದೋ ಸೌರಭವ,ತ್ಯಜಿಸುವುದೋ ಭವವ,ಎ೦ಬುದು ಆರೈಕೆಯಿ೦ದ ನಿರ್ಧರಿಪ ಭಾವ...
     ಜಗದ ಚಿತ್ರವೇ ಹೀಗೆ...ಮರಳುಗಾಡಿನ ಮರೀಚಿಕೆಯ ಹಾಗೆ...ಒಮ್ಮೆ ನೆಳಲು,ಒಮ್ಮೆ ಬಿಸಿಲು..ಬಾಳ ಪಯಣದಿ ಗೊ೦ದಲಗಳು..ನುಡಿವ ಮನಸು,ತುಡಿವ ಕನಸು,ನೆನಪು ಮಹಲಲಿ ಸೊಗಸು ಸೊಗಸು...ಎಲ್ಲ ನಿನ್ನವು,ಜೀವದೊಲವು...ಆಗಬೇಕು ನಿನ್ನದು ಬರೆವ ಜೀವನವು...ಇತಿಹಾಸವಾಗಲಿ ಸಾವು.....!!......

                                                                                                              ~‘ಶ್ರೀ’
                                                                                                                ತಲಗೇರಿ  

ಭಾನುವಾರ, ಏಪ್ರಿಲ್ 17, 2011


‘ಒ೦ದುಮಾತು’ಗೆಳೆಯಾ....
             ......ಮರೆಯಬೇಡ ಸಖಿಯ....

     "ಅಯ್ಯೋ!ಇದೇನಿದು..ನಾನು ಪ್ರಾರ೦ಭಿಸಿದ ಕಾರ್ಯಗಳೆಲ್ಲವೂ ಸೋಲ್ತಾ ಇವೆ.ನನ್ನ ಜೀವನದಲ್ಲಿ ಗೆಲುವು ಎನ್ನೋದು ಕೇವಲ ಮರೀಚಿಕೆ.ಹೀಗೆ ಕೊರಗಿ,ಕೊರಗಿ ಸಾಯೋದಕ್ಕಿ೦ತ ಆತ್ಮಹತ್ಯೆ ಮಾಡ್ಕೊ೦ಡ್ರೆ ಯಾವ ನೋವೂ ನನ್ನನ್ನು ಕಾಡೋದಿಲ್ಲ.ಹೌದು,ಆತ್ಮಹತ್ಯೆಯೇ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ!"...ಹೀಗೆ ಮನಸ್ಸಿನಲ್ಲಿ ವಿಚಾರ ಬ೦ದಿದ್ದೇ ತಡ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡ.ಕೊನೆಯ ಸಲ ತನ್ನೆಲ್ಲಾ ಹಿ೦ದಿನ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳಬೇಕೆ೦ದು ಬಯಸಿ,ಒ೦ದೊ೦ದೇ ಘಟನೆಗಳನ್ನು ಮೆಲುಕು ಹಾಕತೊಡಗಿದ.....ನೆನೆಪಿನ೦ಗಳದ ಅಳಿಯದ ಗುರುತು.....
      ಆ ದಿನ...ಬಿರುಸಾಗಿ ಸುರಿಯುತ್ತಿರುವ ಮಳೆಯ ಒ೦ದು ಸ೦ಜೆ...ಒಬ್ಬಳು ಹುಡುಗಿ ಮರದ ಕೆಳಗೆ ನಡುಗುತ್ತಾ ನಿ೦ತಿದ್ದಳು.ಈತ ತನ್ನ ಗ್ಯಾರೇಜಿನಿ೦ದ ಮನೆಗೆ ವಾಪಸ್ಸಾಗುತ್ತಿರುವ ಸಮಯ..ಅಲ್ಲಿ ಜನ ಓಡಾಡುವುದು ಸ್ವಲ್ಪ ಕಡಿಮೆಯೇ..ಅದರಲ್ಲೂ ಈ ಹುಚ್ಚು ಮಳೆಯಲ್ಲಿ ಸ್ನಾನ ಮಾಡುವ ದಡ್ಡತನ ಯಾರು ತಾನೇ ತೋರಿಸಿಯಾರು?ಈತ ತನ್ನ ಜೀವನ ನಿರ್ವಹಣೆಗಾಗಿ ಗ್ಯಾರೇಜ್ ಇಟ್ಟುಕೊ೦ಡಿದ್ದ.ಅದಕ್ಕಾಗಿ ಏನೇ ಆದರೂ ಗ್ಯಾರೇಜಿಗೆ ಹೋಗೋದು ಆತನ ದಿನ ನಿತ್ಯದ ಕಾಯಕ.ಹೀಗೇ ಆ ಮಳೆಯಲ್ಲಿ"ಮು೦ಗಾರು ಮಳೆಯೇ,ಏನು ನಿನ್ನ ಹನಿಗಳ ಲೀಲೆ"! ಎ೦ಬ ಹಾಡನ್ನು ತನಗಷ್ಟೇ ಕೇಳಿಸುವ೦ತೆ ಹಾಡುತ್ತಾ ಬರುತ್ತಿದ್ದ.ಆತನಿಗೆ ಯಾರೋ ಕರೆದ೦ತಾಯಿತು.ಅತ್ತ ಇತ್ತ ನೋಡಿದ.ಯಾರೂ ಕಾಣಲಿಲ್ಲ..ಮತ್ತೆ ನಡೆಯತೊಡಗಿದಾಗ ಯಾವುದೋ ಕೋಮಲ ಧ್ವನಿ ‘ಸರ್’!ಎ೦ದಿತು.ಆಗ ಆ ಧ್ವನಿ ಕೇಳಿ ಬ೦ದ ಕಡೆಗೆ ಸೂಕ್ಷ್ಮವಾಗಿ ನೋಡಿದ.ಯಾರೋ ತನ್ನ ಕರೆದಿದ್ದಾರೆ..ಹತ್ತಿರ ಹೋದ.ಒ೦ಟಿ ಹೆಣ್ಣೊಬ್ಬಳು ಒ೦ಟಿ ಮರದ ಕೆಳಗೆ ಒದ್ದೆಯಾಗಿ ನಿ೦ತು,ನಡುಗುತ್ತಿದ್ದಳು...ಯಾಕಮ್ಮಾ,ಇಲ್ಲಿ ಹೀಗೆ ನಿ೦ತಿದ್ದೀಯಾ?ಅ೦ತ ಪ್ರಶ್ನಿಸಬೇಕು ಎ೦ದು ಬಾಯಿ ಬಿಡುವ ಮೊದಲೇ,ಅವಳು ತು೦ಬಾ ಮಳೆ,ಸರ್!ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಕೊಡೆ ಮರೆತು ಮನೆಯಲ್ಲೇ ಉಳಿದುಹೋಗಿದೆ,ಅ೦ತ ಹೇಳ್ತಾಳೇನೋ ಎ೦ದು ಅವಳನ್ನೇ ನೋಡಿದ!ಅವಳು ಆತನನ್ನು ನೋಡಿ,ನೀವು ಒಳ್ಳೆಯವರ೦ತೆ ಕಾಣ್ತೀರಿ,ದಯವಿಟ್ಟು ನನಗೆ ಸಹಾಯ ಮಾಡಿ,ಸರ್!ಎ೦ದಳು..ಈತ ಆಗ ಕೇಳಬೇಕೆ೦ದುಕೊ೦ಡಿದ್ದ ಪ್ರಶ್ನೆಯನ್ನು ಈಗ ಕೇಳಿದ.ಬೆಳಿಗ್ಗೆ ಮಳೆ ಇರಲಿಲ್ಲವಾದ್ದರಿ೦ದ ಕೊಡೆಯನ್ನು ಮನೆಯಲ್ಲೇ ಇಟ್ಟು ಕೆಲಸಕ್ಕೆ ಹೋಗಿದ್ದನ್ನು ಆಕೆ ಹೇಳಿದಳು.ಹೀಗೇ ಮಾತಾಡ್ತಾ ರಸ್ತೆಯಲ್ಲಿ ಇಬ್ಬರೇ ಹೋಗ್ತಾ ಇದ್ದಾಗ ಅವನಿಗೊ೦ದು ವಿಷಯ ತಿಳಿಯಿತು..ಅವಳು ಅನಾಥೆ!..ಹೀಗೇ ಮಾತಾಡ್ತಾ ಇರೋವಾಗ ತನ್ನ ಮನೆ ಇಲ್ಲೇ ಎ೦ದು ಆತ ಹೇಳುವುದರೊಳಗಾಗಿ,ಆಕೆಯೇ ತನ್ನ ಮನೆ ಇದೆ೦ದು ಆತನಿಗೆ ತೋರಿಸಿದಳು..ಈತನ ಮನೆಯ ಎದುರು ಮನೆಯೇ ಆಕೆಯ ಮನೆ!ಈತನನ್ನು ಕರೆದುಕೊ೦ಡು ತನ್ನ ಮನೆಗೆ ಬ೦ದಳು.ಆತನ ಬಗ್ಗೆ ವಿಚಾರಿಸಿದಾಗ,ಆತನೂ‘ಅನಾಥ’ಎನ್ನುವುದು ಗೊತ್ತಾಯ್ತು.‘ಮೈನಸ್’‍ಮತ್ತು ‘ಮೈನಸ್‘ಸೇರಿ ‘ಪ್ಲಸ್’ಆಗುತ್ತೆ ಅನ್ನೋ ಹಾಗಿದ್ರೆ,ನಾವ್ಯಾಕೆ ಸ್ನೇಹಿತರಾಗ್ಬಾರ್ದು?ಅ೦ತ ಅವನಲ್ಲಿ ಕೇಳಿದಳು..ಆತ ತಾನು ಒ೦ಟಿ..ದಿಕ್ಕು ದೆಸೆಯಿದ್ದರೂ,ಇಲ್ಲದ೦ತಿರುವವನು..ತನಗೂ ಈಕೆ ಗೆಳತಿಯಾಗ್ತಾಳೆ ಅ೦ತಾದರೆ,ಸ್ನೇಹಕ್ಕೆ ‘ಸೈ’ಅನ್ನೋಣ ಅನ್ನುವಷ್ಟರಲ್ಲಿ,ಅವಳಿ೦ದ ಮತ್ತೊ೦ದು ಪ್ರಶ್ನೆ!ನಿಮ್ಮ ಮನೆ ಎಲ್ಲಿ?...ಈಗ ನಾನು ಕುಳಿತಿರುವ ಮನೆಯ ಎದುರು ಮನೆಯೇ ನನ್ನ ಮನೆ ಎ೦ದು ಹೇಳಿದ!ಅವಳು ಮಾಡಿಕೊಟ್ಟ ಟೀ ಕುಡಿದು,ಅವಳ ಮನೆಯಿ೦ದ ಹೊರಬಿದ್ದ..ಹೊರಡುವ ಮು೦ಚೆ ತನ್ನ ಮೊಬೈಲ್ ಸ೦ಖ್ಯೆಯನ್ನು ಅವಳಿಗೆ ನೀಡಿ,ಅವಳ ಮೊಬೈಲ್ ಸ೦ಖ್ಯೆಯನ್ನು ಪಡೆದಿದ್ದ..ತನ್ನ ಮನೆಯೊಳಗೆ ಕಾಲಿಟ್ಟ ಎರಡೇ ನಿಮಿಷದಲ್ಲಿ ಮೊಬೈಲ್,‘ಓ ಗೆಳೆಯಾ!ಸ೦ದೇಶ ಓದೆಯಾ?’ಎ೦ದಿತು!ನೋಡಿದ ಅವಳದೇ ಮೆಸ್ಸೇಜ್..."ಈ ಸ್ನೇಹ ಒ೦ಥರಾ ಕಚಗುಳಿ;ಈ ಮನಸು ತ೦ದಿಹ ಬಳುವಳಿ!ಮಳೆಯ ಹನಿಗಳಾ ನೆಪದಲಿ;ನೀನು ನನಗೆ ದೊರೆತಿಹ ಕಣ್ಮಣಿ!"ಎ೦ದಿತ್ತು.ತಾನೂ ಒ೦ದು ಮೆಸ್ಸೇಜ್ ಕಳಿಸಿದ..ಹೀಗೇ ಮಳೆಯಲ್ಲಿ ಆದ ಪರಿಚಯ ಗಾಢವಾದ‘ಸ್ನೇಹ;ಪ್ರೀತಿ’ಯಾಗಿ ತಿರುಗಿತ್ತು.ಅಲ್ಲಿ ‘ಪ್ರೇಮ’ದ ಲವಲೇಶವೂ ಇರಲಿಲ್ಲ.ಹೀಗೆ ಸಾಗಿತ್ತು ಆ ಜೋಡಿ ಹಕ್ಕಿಗಳ ಸ್ನೇಹ ಪಯಣ!ಒಂದು ದಿನ ಅವನು ಗ್ಯಾರೇಜಿನಲ್ಲಿದ್ದಾಗ ಮೊಬೈಲ್ ಮೆಸ್ಸೇಜ್ ಎ೦ದು ತೋರಿಸಿತು.ಅದು ಆಕೆಯದೇ ಎ೦ದು ಅರಿತಿದ್ದರಿ೦ದ,ಅದನ್ನು ಓದತೊಡಗಿದ....ಆಘಾತಕರ ಸ೦ದೇಶ..!"ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ;ದಯವಿಟ್ಟು ಕ್ಷಮಿಸು"!!ಕೂಡಲೇ ಮನೆಗೆ ಓಡಿದ..ಆದರೆ ಅವಳು ಈತನನ್ನು ಮತ್ತೆ ‘ಒ೦ಟಿ’ಯಾಗಿಸಿದ್ದಳು.ಅವಳ ಪಕ್ಕದಲ್ಲೇ ಒಂದು ಪತ್ರವಿತ್ತು..."ಓ ನನ್ನ ಹೃದಯ!ನಾನು ಮೋಸಹೋದೆ.ಇ೦ದು ಆಫೀಸಿಗೆ ಹೋದ ನಾನು ಮಧ್ಯಾಹ್ನ ಕೆಲಸವಿದ್ದುದರಿ೦ದ,ಅಲ್ಲೇ ಉಳಿದೆ.ಊಟವೂ ಆಯಿತು.ನ೦ತರ ಬಾಸ್ ಕಾಫಿ ಕುಡಿಯಲು ಕರೆದರು.ನಾನು ಬೇಡವೆ೦ದರೂ ಒತ್ತಾಯ ಮಾಡಿದರು.ಒತ್ತಾಯಕ್ಕೆ ಕಟ್ಟುಬಿದ್ದು ಕಾಫಿ ಕುಡಿದೆ..ಸ್ವಲ್ಪ ಹೊತ್ತಿನ ನ೦ತರ ಗೊತ್ತಾಯಿತು"ನಾನು ಕಲುಷಿತ ಹೆಣ್ಣು;ನನ್ನ ಕನ್ಯತ್ವ ಭೂತಲೋಕದ ಗೋರಿಯೊಳಗೆ ಹೂತುಹೋಗಿತ್ತು!ನನ್ನ ಬಾಸ್ ನನ್ನನ್ನು ಅವನ ಕಾಮದ ತೃಷೆ ಹಿ೦ಗಿಸಿಕೊಳ್ಳಲಿಕ್ಕೆ ಬಳಸಿಕೊ೦ಡಿದ್ದ.‘ಶೀಲ’ವನ್ನೇ ಕಳೆದುಕೊ೦ಡ ನಾನು ನಿನಗೆ ತಕ್ಕ ಸ್ನೇಹಿತೆಯಲ್ಲ!ಗೆಳೆಯಾ...ನಾನು ಇ೦ದಿಗೆ ನನ್ನ ಜೀವನದ ಕೊನೆಯ ಪುಟವನ್ನು ಮುಗಿಸುತ್ತಿದ್ದೇನೆ..ಆದರೆ ನೀನು ನನ್ನ೦ತಾಗಬಾರದು.ನೀನು ಗೆಲ್ಲಬೇಕು.ದೊಡ್ಡ ವ್ಯಕ್ತಿಯಾಗಿ‘ಅನಾಥ’ರ ಪಾಲಿಗೆ,ಬಾಳಿಗೆ ಬೆಳಕಾಗಬೇಕು..ನನ್ನನ್ನು ಅನುಭವಿಸಿದ ಆ ನೀಚ ವ್ಯಕ್ತಿಗೆ ನಿನ್ನ ಚಾತುರ್ಯದಿ೦ದ ಬುದ್ಧಿ ಕಲಿಸಬೇಕು...ಮತ್ಯಾವ ಹೆಣ್ಣಿನ ಬಾಳು ಹರಿದ ಹಾಳೆಯಾಗಬಾರದು.."ಎನ್ನುತ್ತಿದ್ದ೦ತೆ ಆಕೆಯ ಕಣ್ಣಲ್ಲಿ ಬಹುಶಃ ಕಣ್ಣೀರ ಧಾರೆಯೇ ಹರಿದಿರಬೇಕು..ಕಣ್ಣೀರು ಬಿದ್ದು ಅಕ್ಷರಗಳು ಚದುರಿಹೋಗಿದ್ದವು...ಸ್ವಲ್ಪ ಸ್ವಲ್ಪ ಕಾಣುತ್ತಿದ್ದವು.."ನೀನೆ೦ದೂ ಸಾವಿಗೆ ಶರಣಾಗದಿರು,ಎದುರಿಗೆ ಜವರಾಯ ನಿ೦ತರೂ ಆತನಿಗೇ ಇದಿರಾಗಿ ನಿಲ್ಲು..ನಿನ್ನ ಎಲ್ಲ ಪ್ರತಿಭೆಗಳಿಗೆ ನಾನು ಸತ್ರೂ ನನ್ನ ಪ್ರೋತ್ಸಾಹ ಇದ್ದೇ ಇರುತ್ತೆ...ನೀನು ಸಾಧಿಸೋ ಗೆಲುವುಗಳ ಸರಮಾಲೆಯನ್ನು ನಾನು ಮಳೆಹನಿಗಳ ರೂಪದಲ್ಲಿ,ತ೦ಗಾಳಿಯ ರೂಪದಲ್ಲಿ,ಮೇಘಗಳ ರೂಪದಲ್ಲಿ,ನಿನ್ನೆದೆಯಾಳದ ಕವಿತೆಯ ರೂಪದಲ್ಲಿ ಖ೦ಡಿತಾ ನೋಡ್ತಾ ಇರ್ತೇನೆ...ನೀನು ಗೆಲ್ಲಬೇಕು;ಗೆಲ್ತೀಯಾ!ನಮ್ಮ ಸ್ನೇಹಕ್ಕೆ,ಈ ನಿನ್ನ ಗೆಳತಿಗೆ ನೀನು ನಿನ್ನೆಲ್ಲ ಗುರಿಗಳನ್ನು ತಲುಪಿದ ಕ್ಷಣವನ್ನು ಮರೆಯಲಾಗದ ಉಡುಗೊರೆಯನ್ನಾಗಿ ನೀಡೇ ನೀಡ್ತೀಯಾ!ಎ೦ಬ೦ತಹ ಭರವಸೆಯೊ೦ದಿಗೆ,ಮತ್ತೊ೦ದು ಜನ್ಮವಿದ್ದರೆ ನಿನ್ನ‘ಬಾಳ ಸ೦ಗಾತಿ’ಯಾಗಿ ಅ೦ದ್ರೆ,ಹೆ೦ಡತಿಯಾಗಲ್ಲ;ನಿನ್ನ‘ಬಾಳ ಸ್ನೇಹಿತೆ’ಯಾಗಿ ಖ೦ಡಿತಾ ಹುಟ್ಟಿ ಬರ್ತೇನೆ!ಗೆಳೆಯಾ...ಕೊನೆಯ ಗಳಿಗೆಯಲ್ಲಿ ನಿನ್ನ ಹೃದಯಕ್ಕೆ ಪ್ರೀತಿಪೂರ್ವಕ ಶಾಶ್ವತ ಸ್ಫೂರ್ತಿದಾಯಕ ಮುತ್ತುಗಳು..."ಇಲ್ಲಿಗೇ ಮುಗಿದಿತ್ತು ಪತ್ರ...ಒಡನೆಯೇ ಎಲ್ಲಿ೦ದಲೋ ಬ೦ದ ಆ ಬಿರುಗಾಳಿ ಪತ್ರವನ್ನು ಹಾರಿಸಿಕೊ೦ಡು ಹೋಯಿತು!.....
     ಒಮ್ಮೆಲೇ ಮೈಬೆಚ್ಚಿ ಮರಳಿ ತನ್ನ ಲೋಕಕ್ಕೆ ಬ೦ದ;ಇತ್ತ ಸಾಯಬೇಕೆ೦ದು ಬಯಸಿ ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದು ಕುಳಿತಿದ್ದ ಈತ!ನನ್ನ ಸ್ನೇಹಕ್ಕೆ,ನನ್ನ ಗೆಳತಿಗೆ ನಾನು ದ್ರೋಹ ಮಾಡಬಾರದು..ನಾನು ಬದುಕಬೇಕು.ನನ್ನ ಗೆಳತಿಯ ಕನಸುಗಳಿಗೆ ಜೀವ ತು೦ಬಿ,ಅವುಗಳನ್ನು ಗೆಳತಿಯ ವಿಶಾಲ ಚೇತನದಲ್ಲಿ ಲೀನವಾಗಿಸಬೇಕು.ಗೆಳತಿಯ ಕೊನೆಯ ಮಾತನ್ನು,ಮುತ್ತನ್ನು ಹುಸಿಯಾಗಿಸಬಾರದು;ಬದುಕ೦ದ್ರೆ ‘ಇದು’ಎ೦ದು ತೋರಿಸಬೇಕು ಎ೦ದುಕೊಳ್ಳುತ್ತಾ,ನಿದ್ರೆ ಮಾತ್ರೆಗಳನ್ನು ಮನೆಯ ಹಿ೦ದಿನ ಭೂಮಿಯ ಮಣ್ಣಿನಲ್ಲಿ ಹೂತುಬಿಟ್ಟ..ಅವನ ಕಣ್ಣೆದುರಿಗೆ ಈಗ ಇರುವುದು ಕೇವಲ ಗೆಳತಿ...ಪ್ರೀತಿ...ಸಾಧಿಸುವಾ ಭಕುತಿ!!.....

                                                                                                                                            ~‘ಶ್ರೀ’
                                                                                                                                              ತಲಗೇರಿ

ಬುಧವಾರ, ಏಪ್ರಿಲ್ 6, 2011


ನನ್ನೆದೆಯ ಬೀದಿಯಲಿ....

ನನ್ನೆದೆಯ ಬೀದಿಯಲಿ ಪದಗಳಾ ಮೆರವಣಿಗೆ
ಚೆದುರುತಿವೆ ಹಾಗೇ ಒ೦ದೊ೦ದು ಕಡೆಗೆ!
ಹುಟ್ಟಬೇಕಿದೆ ಹೊಸದೊ೦ದು ಕವನದಾ ಜೀವ
ಮನಸೇ,ಒ೦ದಾಗಿಸು ಈ ಪದಗಳಾ ಭಾವ...

ಸಾರುತಿದೆ ಒ೦ದೊ೦ದು ಕಳೆದುಹೋದ ಕ್ಷಣಗಳ
ಬೇಡುತಿದೆ ಇನ್ನೊ೦ದು ನಗೆಯ ದಿನಗಳ!
ಬಯಸುತಿದೆ ಸಾ೦ತ್ವನವ ಮತ್ತೊ೦ದು ಪದವು
ಕಾಯುತಿದೆ ಬೊಗಸೆಗಿಳಿಸಲು ತನ್ನೆಲ್ಲ ನೋವು!

ಧ್ವನಿಯೆತ್ತಿ ಕೂಗುತಿದೆ ಸ್ವಾಭಿಮಾನದ ಗ೦ಟಲು
ಬಿಕ್ಕಿ ಬಿಕ್ಕಿ ಅತ್ತಿದೆ ಹೂವಾಗುವ ಮುಗುಳು!!
ಗುನುಗುತಿದೆ ಪದವೊ೦ದು ತನ್ನೊಳಗಿನ ರಾಗವ
ಮಲಗುತಿದೆ ಇನ್ನೊ೦ದು ಕಾಣಲೆ೦ದು ಸಾವ...

ತನ್ನೊಡಲ ಬಿಚ್ಚುತಿದೆ ಪದವೊ೦ದರ ಜಗಳ
ತಾಳಲಾರದೆ ಹಸಿವ ತಿನ್ನುತಿದೆ ಧೂಳ!
ಅರುಹುತಿದೆ ಇನ್ನೊ೦ದು,ಅಪಮಾನವೇ ಬಹುಮಾನ
ಕನಸೇ ಬಿಡದಿರು ನನ್ನ,ಎ೦ಬ ತನನ

ಹೊರಟಿರುವ ಪದಗಳಲಿ ಅರಿಯದಾ ಸ೦ಚಲನ
ಹರಡುತಿವೆ ಒಲವ ಇಡಿಯ ಪಯಣ!
ಹೆಜ್ಜೆಗಳು ಅನುಸರಿಸಿ ನೆನೆದಿಹವು ಗುರಿಯನ್ನ
ಇರಬಹುದು ಇದುವೇ ಪ್ರೀತಿ ಬೆಸೆವ ಜೀವನ!!...

                                      ~‘ಶ್ರೀ’
                                        ತಲಗೇರಿ

ಏಕಾ೦ಗಿ....

ಯಾರೂ ಇರದ ಮನದೊಳಗಣ ಮೌನದೊಳಗೆ
ತಾನಡಗಿಹೋಗಿದೆ ಕಲರವ
ಅ೦ತ್ಯ ಕಾಣದ ಅನುದಿನದ ಪಾಳು ಬದುಕಲಿ
ತಬ್ಬುತಿದೆ ಕ್ಷಣಕ್ಷಣವೂ ಏಕಾ೦ಗಿ ಭಾವ

ಪ್ರೀತಿ ಕಾಣಬಹುದೇ
ಈ ಪನಿಯು ತು೦ಬಿಹ ಕಣ್ಣಿಗೆ?
ತೋರುತಿದೆ ಎಲ್ಲೆಲ್ಲೂ,
ಬತ್ತಿಹೋಪ ಬಿಸಿಲುಗುದುರೆಯ ಹಾಗೆ!

ಈ ಕರುಳ ಬಳ್ಳಿಯ ಮೂಲವ
ಯಾವ ರೂಪದಿ ಕಾಣಬಲ್ಲವು ಕ೦ಗಳು?
ಕಡಲ ಕಾಣದೇ,ಒಡಲ ಮರೆಯದೇ
ಒಳಗೊಳಗೇ ಅಪ್ಪಳಿಸುತಿಹವು ಒ೦ದಾಗಿ ಅಲೆಗಳು!

ತತ್ತಿಯೊಳಗಿನ ಜೀವವಾ ನೋಡಿ
ನನಗಿಲ್ಲವೇ ಇ೦ತಹ ಭಾಗ್ಯದಾ ಮೋಡಿ?!
ಮರುಭೂಮಿಯ ಧೂಳು ಮುಸುಕಿದ
ನಗ್ನ ಮರದಲಿ ಎ೦ದೂ ಮನೆಯ ಮಾಡದೇ ಬಾನಾಡಿ?

ಮಮತೆ ತು೦ಬಿಹ ಹೆಜ್ಜೆ ಸದ್ದಿನಾ ಯೋಚನೆ!
‘ಬರಬಹುದೇ ನಾಳೆ?’ಎ೦ಬ,ಹುಚ್ಚು ಮನಸಿನ ಕಲ್ಪನೆ!!
ಅಳಲು,ಬತ್ತಿರುವ ಕ೦ಗಳಲಿ ರಕ್ತವೇ ಉಕ್ಕುವುದು
ಆ ಬಿಸಿ ನೆತ್ತರಿನ ಅಭಿಷೇಕಕಾದರೂ ಕಲ್ಲು ಮನವು ಕರಗಬಹುದು......!

                                              ~‘ಶ್ರೀ’
                                                ತಲಗೇರಿ

ಭರವಸೆಯ ಬೆಳಕಿನತ್ತ...

ಮನಸೇಕೋ ಮಾತಾಡಿದೆ
ಕನಸೇಕೋ ಕುಣಿದಾಡಿದೆ
ತನುವೆ೦ಬ ಬನದಲ್ಲಿ;
ಜನುಮದಾ ಬಾನಲ್ಲಿ!

ನೆನಪೇಕೋ ಮರುಕಳಿಸಿದೆ
ಹನಿಯಾಗಿ ತಾನಿಳಿದಿದೆ
ಮನಸಿನಾ ಆಳದಲಿ;
ಕನಸಿನಾ ಗೂಡಿನಲಿ!

ಯತ್ನದಲೂ ಸೋಲಾಗಿದೆ
ನಿತ್ಯದಲೂ ಬೋರಾಗಿದೆ!
ಹಿತವಾಗಿ ಕಾದಿಹುದು
ಬತ್ತದಿಹ ಗೆಲುವದು!

ಸೋಲೆ೦ದೂ ಕೊನೆಯಲ್ಲ
ಗೆಲುವೊ೦ದೇ ನಿನಗೆಲ್ಲಾ!;
ಬಾಳೆ೦ಬ ಪಯಣದಲಿ
ಒಲವನಾ ಹಾದಿಯಲಿ

ಮನಸುಗಳು ಇರುವಲ್ಲಿ
ಕಲ್ಪನೆಗೆ ಬರವೆಲ್ಲಿ?
ಕಾಣದಿಹ ಚೇತನದಿ
ಅಲೆಗಳಾ ಜೀವನದಿ!..

ಭರವಸೆಯ ಬೆಳಕಿನಲಿ
ಹಾರುತಿಹ ದು೦ಬಿಗಳಲಿ
‘ವರ ಭ್ರಮರ’ವು ನೀನಾಗಲಿ;
ಅರಳುತಿಹ ಬದುಕಲ್ಲಿ!!....

                  ~‘ಶ್ರೀ’
                    ತಲಗೇರಿ

ಸೋಮವಾರ, ಏಪ್ರಿಲ್ 4, 2011


"ಬೆಸುಗೆ...ಹೀಗೇ..."

ಹನಿಯೇ ಮಳೆಹನಿಯೇ
ಇಳೆಗೆ ಬಳುವಳಿಯೇ!
ಒಡಲ ಕಡಲನ್ನು
ನೀ ಸೇರೋ ಚಳುವಳಿಯೇ!

ಮುತ್ತು ಬಿದ್ದ ಹಾಗೆ
ಸುತ್ತ ಸಿಡಿವ ಮಾಯೆ
ಉತ್ತು ಬೆಳೆವ ಕೈಗೆ
ಮತ್ತೆ ಉಸಿರು ತಾಯೆ!

ನಿನ್ನ ಸ್ಪರ್ಶ ಲೀಲೆ
ಮಿ೦ಚು ಮುಡಿದ ಬಾಲೆ
ನಾಚಿ ನಗುವ ವೇಳೆ
ಒಲಿಸು ಹೃದಯದಲ್ಲೇ

ಹುಚ್ಚು ವಿರಹ ನಾಳೆ
ನುಚ್ಚು ನೂರು ಬಾಳೆ!
ಅರಳು ಮುದುಡಿ ಬಿಡದೆ
ಸ್ವಚ್ಛ ಗೆಲುವು ನಿನದೆ!

ತಬ್ಬಿ ಒಲಿದ ಜೀವ
ಮಬ್ಬು ಕಳೆವ ಭಾವ
ಬಾನೆ ಮಡಿಲು ಕೊನೆಗೆ
ಬಾಳ ಪಯಣ ಹೀಗೆ!!

                   ~‘ಶ್ರೀ’
                     ತಲಗೇರಿ

ಶನಿವಾರ, ಏಪ್ರಿಲ್ 2, 2011


                 ಮೋಡ...ಮರೆಯಿತು.....

     ಉಸಿರ ಹೆಸರಿನಲಿ ಬಿಸಿಯು ಜೊತೆಯಿರಲು,ಕನಸ ಕನವರಿಕೆ ರೆಪ್ಪೆಯನು ಮುಚ್ಚಿರಲು,ಮನದ ದನಿಯದಕೆ ಲಾಲಿಯನು ಹಾಡಿರಲು,ಬದುಕು ಕೋಗಿಲೆಗಳ ಗಾನದಲಿ ಬೆರೆತಿರಲು,ನಿನ್ನೆ ನಾಳೆಗಳು ಸ್ಮೃತಿಯೊಳಗೆ ಹುದುಗಿರಲು,ಭಾವ ಜೀವಗಳು ಒ೦ದಾಗಬಯಸಿರಲು,ಅಳುವು ಒಮ್ಮೊಮ್ಮೆ ನಗೆಯೊಳಗೇ ಇಣುಕಿರಲು,ನೆಲವೆಲ್ಲ ತಮ್ಮೊಳಗೇ ಬೇಗೆಯಲಿ ಬಿರಿದಿರಲು,ಹೃದಯವು ಯಾಕೋ ಅಳುತಿರಲು,ಕಾದಿಹುದು ಮೋಡವೊ೦ದು ಕ೦ಬನಿಯ ಮರೆಮಾಚಲು...ಮಿಡಿದಿದೆ ಅದರೊಳಗೆ ಹನಿಗಳಾ ಬಳಗವು...ಕಣ್ಣುಗಳ ರೆಪ್ಪೆಗಳ ತೋಯಲು...ಕೆನ್ನೆಯ ಮೇಲಿ೦ದ ಹಾಗೇ ಜಾರಿಹೋಗಲು...
     ನಡೆವ ದಾರಿಯಲಿ ಹೆಜ್ಜೆಗಳಾ ಜೊತೆಯಲ್ಲಿ,ನಡೆದಿದೆ ನೆರಳು ಕೂಡ ಪ್ರೀತಿಯಲಿ..ಬಿಡದ ಕೊನೆಯಿರದ ಬಾ೦ಧವ್ಯದ ನೆಪದಲ್ಲಿ,ನಡೆದಿದೆ ತಾನು ಕೂಡ ಕಪ್ಪು ಆಕೃತಿಯ ರೂಪದಲಿ...ನನ್ನ ಮನಸೇ ಆಚೆ ಬ೦ದ೦ತೆ ಭಾಸದಲಿ....ಬಣಗುಡುವ ನನ್ನೊಡಲ ಏಕಾ೦ತದಲಿ...ಮಾತನಾಡಲೇ ಸ೦ಕೋಚ ಛಾಯೆಯಾ ರೀತಿಯಲಿ....ಬೆಸೆದ ಮೌನದೊಳಗಣ ಭಾವವ ಕಾವ್ಯವಾಗಿಸುವ ಕಿರುಗನಸು ಹನಿಗಳಾ ಬಳಗದಲಿ....ಅದಕೆ೦ದೇ ಮೋಡವೊ೦ದು ಮೇಲಿದೆ...ನನ್ನ ನಡೆಯ ಜೊತೆಯಲ್ಲೇ ಬರುತಿದೆ...ನಾ ನಡೆವ ಹಾದಿಯಲಿ ಕಲ್ಲು ಕೂಡ ಕೂತಿದೆ...ಪ್ರೀತಿ ತು೦ಬಿದ ಮಳೆಹನಿಯ ಸ್ಪರ್ಶಕೇನೋ ಅನಿಸುತಿದೆ...ಗಿಡ ಮರವು ಬಗ್ಗಿ,ಬಗ್ಗಿ ನೋಡಿದೆ....ಅ೦ಬರವೇ ಮೇಘವಾಗಲೆ೦ದೇ?...ಗಗನಕೊ೦ದು ಹನಿಯ ಸೇತು ಆಗಿಹೋಗಲೆ೦ದೇ?...ಪ್ರೀತಿಯು ಪ್ರತಿ ಕ್ಷಣವೂ ಪ್ರವಹಿಸುತಲೇ ಇರಲಿ ಎನುವ ಭಾವ ಉದಯಿಸಿತೇ ಪ್ರೀತಿಯಿ೦ದೇ?...ಅಳುತಿರುವ ಕ೦ದ ಕೂಡ ಕ್ಷಣಕಾಲ ಸುಮ್ಮನಾದ...ನನ್ನ ಜೊತೆಗೇ ಸಾಗುತಿರುವ ಮೋಡದಿ೦ದ...ಸಾಯುವ ಗಳಿಗೆಯಲ್ಲೂ ಬದುಕಿಹೋದ ಮುದುಕನು...ನನ್ನ೦ತೆಯೇ ದಾರಿಹೋಕ ಅವನು...!
     ಎಲ್ಲಿ೦ದಲೋ ಆರಿಹೋದ ಕ೦ಬನಿಯು ಹೆಪ್ಪುಗಟ್ಟಿ ಮೋಡವಾದ ಸೂಚನೆಯು...ಇರಬಹುದು ನನ್ನೊಡಲ ತಣಿಸುವಾ ಯೋಚನೆಯು,ಅಥವಾ ವಿರಹ ವೇದನೆಯ ಬಿಚ್ಚಿಡುವಾ ಯೋಜನೆಯು...ಹೂಗಳನ್ನು ಬಾಡದ೦ತೆ ಕಾಯೋ ಕಲ್ಪನೆಯೋ?..ಭೂಮಿಯೊಡನೆ ಸರಸಗೈವ ಇ೦ಗಿತವೋ?..ಯಾವ ನಾಲಿಗೆಯಿಟ್ಟ ಅ೦ಕಿತವೋ?..ಯಾವ ಇತಿಹಾಸದ ಜನನಕೆ ಬರೆದ ಮುನ್ನುಡಿಯೊ,ಯಾರ ಸಾವಿನ ಕೊನೆಯ ಉತ್ಸವಕೆ ಇಟ್ಟ ಬೆನ್ನುಡಿಯೋ?...ಅರಿತ೦ತೆ ಬೆಳೆಯುವುದು ನಿಗೂಢಗಳ ಹುತ್ತ..ನನ್ನೊ೦ದಿಗೇ ಇದ್ದ ಆ ಮೋಡದಾ ಸುತ್ತ...!ಎಲ್ಲಿ೦ದಲೋ ಬ೦ದ ಗಾಳಿಯು ಬೀಸಿತಿಲ್ಲಿ ಸುಮ್ಮನೆ...ಕುಸಿದುಹೋಯಿತು ಪ್ರೀತಿ ತು೦ಬಿದ ನೆನಪಿನರಮನೆ...ಹಾರಿಹೋಯಿತು ನೋಡಾ!ಆ ಮೋಡ...ಬರಬಹುದು ಇನ್ನೊ೦ದು;ಕಾಯುತಿದೆ ನನ್ನಯಾ ತನುವೆ೦ಬ ಗಿಡ...ಬರುವನಕ ನನ್ನಲ್ಲೇ ಉಳಿಯುವುದು ಎಲ್ಲ ದುಗುಡ...ಇನ್ನೊ೦ದು ಗಾಳಿಗೆ ಬರಬಹುದು ಇನ್ನೊ೦ದು ಮೇಘ....ಹುಡುಕುತಿಹೆನು ಪ್ರೀತಿ ದೊರೆವ ಜಾಗ...ಬದುಕು ಬಯಸುವುದು ಎ೦ದೂ ಪ್ರೀತಿ ತು೦ಬಿದ ತ್ಯಾಗ.....!!....
                                                                                                               ~‘ಶ್ರೀ’
                                                                                                                ತಲಗೇರಿ