ಶನಿವಾರ, ಫೆಬ್ರವರಿ 16, 2013


"ಕವಿಯಾಗಬೇಕಿದೆ ನಾನಿನ್ನು"...

ಏಕಾಂತವೇ ಸುಖವೆನುತಿರುವಾಗ
ಸಂಗಾತಿಯಾದೆ ಯಾಕೆ ನೀ
ಹೇಳದೇ ಯಾವ ಸಂಗತಿ
ಹೀಗೊಮ್ಮೆ ನಸುಮುನಿಸು ಬಂದಾಗ
ತಂಗಾಳಿಯಾದೆ ಯಾಕೆ ನೀ
ಬೇಕಂತಲೇ ಹುಟ್ಟಿತೇ ಈ ಪ್ರೀತಿ!..

ನೀ ನುಡಿವ ಕೊನೆಮಾತ
ಉಸಿರು ನಾನಾಗಬೇಕೆನಿಸಿದೆ
ಇನ್ನೇಕೆ ಅನುಮಾನ
ಉಸಿರಿನ್ನು ನಿನ್ನದೇ ಮುಗುಧೆ...
ನನ್ನೆದೆಯ ಪ್ರತಿಬಡಿತ
ಬೆಸೆದು ಹೊಸದಾಗಬೇಕೆನಿಸಿದೆ
ಇನ್ನೇಕೆ ಅನುಮಾನ
ಕನಸಿನ್ನು ನಿನ್ನದೇ ಕವಿತೆ..

ನೀ ಬಳಿಯೆ ಸುಳಿವಾಗ
ಸೆರಗಿನ ಬಿಸಿ ತಾಕಬೇಕೆನಿಸಿದೆ
ನಾನಿನ್ನು ನಿನ್ನವನು
ಮನಸಿನ್ನು ನಿನ್ನದೇ ಒಲವೇ..
ಬಣ್ಣಿಸಲು ನಿನ್ನ ಚೆಲುವ
ನಾನಿನ್ನು ಕವಿಯಾಗಬೇಕಿದೆ
ಇನ್ನೇನು ತಿಳಿಯೆನು
ನೀನಿನ್ನು ಪ್ರೀತಿಯಾ ಪದವೇ...

                          ~‘ಶ್ರೀ’
                            ತಲಗೇರಿ

ಶನಿವಾರ, ಫೆಬ್ರವರಿ 9, 2013


          "ಅದ್ವೈತ"
ಆಗ ತಾನೇ ಮಿಡಿವ ಕನಸಿನಲ್ಲಿ
ಬರಲೇ;ನಾನು ಆಗಂತುಕ..
ಬೀಗವಿಟ್ಟ ಎದೆಯ ಕೋಣೆಯಲ್ಲಿ
ಒಲವು,ಕಡಲಂತೆ ಭಾವುಕ..

ಕನಸ ಬಣ್ಣ ನೂರು ರಾಶಿ
ಬಿಳಿಯ ಪರದೆ ಹಾಗೇ ಹಾಸಿ
ಚೆಲ್ಲಲೇನು ಗಂಧ ಸೂಸಿ
ಬಿಟ್ಟುಬಿಡದೆ ಒಲವ ಹೂನಗೆ..

ಹಸಿರು ನಿನ್ನ ಒಲವ ಬಳ್ಳಿ
ಹಬ್ಬಿಕೊಳಲಿ ಹಾಗೇ ಸುರುಳಿ
ಕಾಯುವೆನು ಜತನದೊಡನೆ
ಒಣಗಗೊಡದೆ,ಖುಷಿಯ ನಾಳೆಗೆ..

ಮೊದಲ ಭೇಟಿ ಅದರ ಧಾಟಿ
ಹೊಸತು ಸ್ವರದ ಕಾವ್ಯ ಮಿಲನ
ಮೀಟಲೇನು ಎದೆಯ ತಂತಿ
ನಿಲ್ಲಗೊಡದೆ ರಾಗಮಾಲಿಕೆ..

ಬಳಿಯೆ ಸುಳಿಯಲೆ
ಹಿತದ ಅಲೆಯಾಗಿ ನಾನು ಸೋಕುತ..
ಬಿಂದು ಬಿಂದು ಬೆರೆಯಲು
ಒಂದೇ ನೆರಳಾಗಿ ಪ್ರೀತಿ ಅದ್ವೈತ..

                          ~"ಶ್ರೀ"
                            ತಲಗೇರಿ