ಗುರುವಾರ, ಜನವರಿ 31, 2013


     "ಮನ್ವಂತರದ ಲಾಲಿತ್ಯ"
ಈ ಸಂಜೆಯೇಕೋ ನೆನಪುಗಳ ಸಂತೆ
ಬಣ್ಣಗಳೆಲ್ಲ ನಿನ್ನ ಸ್ಪರ್ಶದಾ ಚಿತ್ರದಂತೆ..
ಸವಿ ತಂಗಾಳಿ ನಿನ್ನ ನಗೆಯ ಕಂಪು
ಹಕ್ಕಿಯಾ ಸುವ್ವಾಲಿ ನಿನ್ನ ಧ್ವನಿಯ ಇಂಪು..

ಈ ಸಮಯ ಜೋಡಿಸಿಟ್ಟ ಸಾಲು ನೆರಳು
ಕನಸುಗಳು ಹಲವಾರು ಅಲ್ಲಿ ಸೆರೆಯಾಳು..
ಕತ್ತಲು ಬೆಳಕಿನ ಭ್ರಮೆಯ ಸಂಗಮ
ನಗುತ ನಡೆದಿಹ ಎಲ್ಲ ತೊರೆದ ಜಂಗಮ...

ಗಿಡಗಳ ಬುಡದಲ್ಲಿ ನಿನ್ನೆಯ ಎಸಳುಗಳು
ಹೆಜ್ಜೆ ಕಾದಿಹ ಬಿಸಿಯುಸಿರ ಆ ಕ್ಷಣಗಳು..
ಅಲ್ಲೇ ದೂರದಿ ಮಧುರ ಮುರಳಿಗಾನ
ಅಲೆಯಲ್ಲಿ ಹಸಿಯಾದ ತೀರದ ಮಧು ಯೌವನ...

ಆ ಮನೆಯ ಕಂದನ ಅಳುವಿನಾ ಸದ್ದು
ಮತ್ತೆ ಮತ್ತೆ ರಮಿಸಲು ಅಮ್ಮನಾ ಮುದ್ದು..
ಮತ್ತೆಲ್ಲೋ ಗೋಡೆಯಲಿ ರಕ್ತದಾ ಕಲೆಯೆದ್ದು
ನಾನೇ ಎಂದಿದೆ ಬದುಕು ಸಾವಿನಾ ಜಿದ್ದು..

ಈ ಸಂಜೆಯೇಕೋ ನೆನಪುಗಳ ಸಂತೆ..
ಎದೆಯಲ್ಲಿ ಹುದುಗಿದ್ದ ವಿವಿಧ ಪದಗಳ ಕವಿತೆ..
ಎಲ್ಲಕ್ಕೂ ಇದೆ ಈ ಸಂಜೆಯಾ ಸಾಂಗತ್ಯ
ಸೃಷ್ಟಿಲಯನಾದ ಮನ್ವಂತರದ ಜೀವಲಾಲಿತ್ಯ...

                                        ~‘ಶ್ರೀ’
                                          ತಲಗೇರಿ

       "ಸ್ವಪ್ನ ತಂತಿ"
ಬೆಳ್ಳಿಮೋಡದ ಅಂಚಲ್ಲಿ
ನೀಲಿ ತಾರೆಯು ನೀನು
ಸುಪ್ತ ಮನದ ಸೀಮೆಯಲ್ಲಿ
ಗುಪ್ತ ಮೌನವು ನೀನು..
ಓ ಸ್ವಪ್ನ ಲಹರಿ..
ನಿನ್ನದೇ ಬಿಡಾರವು
ಮನವೆಂಬ ಈ ಅಲೆಮಾರಿ..

ಆಸೆಗಳ ಗೂಟಗಳಿಗೆ
ಚಿಗುರು ಸ್ವಪ್ನದ ಸೌರಭ
ಮಾಸಗಳ ಭಾಸಗಳಿಗೆ
ಮನೆಕೊಟ್ಟ ಬಣ್ಣದಾ ಕಂಬ..

ಹಿತವಾದ ಗಾಳಿಯಲಿ
ತೇಲುವ ರೇಷ್ಮೆಯ ತುಣುಕು
ಭ್ರಮೆಗಳಾ ಸಾಲಿನಲಿ
ಅಸ್ತಿತ್ತ್ವ ಪಡೆವ ಬದುಕು..

ಆತ್ಮದೊಲವ ಹಾದಿಯಲ್ಲಿ
ತೀರಿಹೋಗದ ಭಾವಮಹಾಯಾನ
ಜೀವಗಳ ಜೊತೆಯಲ್ಲಿ
ನಾಳೆಯೊಂದಿಗೆ ನಾಜೂಕು ಸಂಧಾನ...

ಹೇ ಕನಸೇ ನೀ ನನ್ನೆದೆಯ ತಂತಿ
ಮೀಟುವುದು ನಿನ್ನ ಅಲ್ಲಲ್ಲೇ ಮುಗ್ಧ ಪ್ರೀತಿ...

                                      ~‘ಶ್ರೀ’
                                        ತಲಗೇರಿ