ಸೋಮವಾರ, ಮಾರ್ಚ್ 11, 2024

ಇಂಥದ್ದೊಂದು ಸಿನೆಮಾ‌ ಬೇಕಿತ್ತು!


 ಇಂಥದ್ದೊಂದು ಸಿನೆಮಾ ಬೇಕಿತ್ತು! 

********


ಅಷ್ಟ್ ನಿಧಾನ ಸಿನೆಮಾ, ಅಲ್ಲಾ, ಈಗೆಲ್ಲಾ ಯಾರ್ ಹಾಂಗ್ ಇರ್ತಾರೆ? ಇದು ವಾಸ್ತವಕ್ಕೆ ಹತ್ತಿರಾನೇ ಇಲ್ಲಪಾ,‌ ಕತೇನೂ ಇಲ್ಲ ಸಿನೆಮಾದಲ್ಲಿ, ಚೂರೂ ಇಷ್ಟ ಆಗಿಲ್ಲ, ತುಂಬಾ ಬೇಜಾರ್ ಬಂತು, ಕವಿತೆ ಥರ ಇದ್ಯಪಾ, ಎಲ್ಲಾ ಒಂಥರಾ ಚೆಂದ ಚೆಂದ ಫ್ರೇಮುಗಳು,‌ ನನ್ ಸಮುದ್ರ ನೀನು ಅನ್ನೋ ಹೊಸ ಭಾಷೇನೇ ಹುಟ್ಟಾಕ್ತಪಾ, ಕಣ್ಣಲ್‌ ನೀರ್ ಬರ್ದೇ ಥಿಯೇಟರ್ ಇಂದ ಆಚೆ ಬರೋದಿಲ್ಲ, ನಾನೆಲ್ಲಿ ಅತ್ತ್ಬಿಡ್ತೀನೋ ಅಂತ ಭಯಕ್ಕೆ ಇನ್ನೂ ಸಿನೆಮಾ ನೋಡಿಲ್ಲ ಅಂತೆಲ್ಲಾ ನೂರಾರು ಅಭಿಪ್ರಾಯಗಳ ಮಧ್ಯ ನನಗೆ ಅನಿಸಿದ್ದು ಇಂಥದ್ದೊಂದು ಸಿನೆಮಾ ಬೇಕಿತ್ತು ನಮ್ಮ ಕನ್ನಡಕ್ಕೆ! ಹೇಗೆ ಕೆಜಿಎಫ್ ಥರದ ಸಿನೆಮಾವೊಂದು ಕನ್ನಡದ ಮಾರುಕಟ್ಟೆಗೆ ಅಗತ್ಯವಿತ್ತೋ, ಹೇಗೆ ಲೂಸಿಯಾ ಥರದ ಸಿನೆಮಾವೊಂದು ಕನ್ನಡದ ಚಿತ್ರರಂಗದ ಏಕತಾನತೆಯನ್ನು ಮುರಿಯುವುದಕ್ಕೆ ಅವಶ್ಯಕವಿತ್ತೋ, ಹೇಗೆ ಉಳಿದವರು ಕಂಡಂತೆ ಥರದ ಸಿನೆಮಾವೊಂದು ಕನ್ನಡದ ಕತೆಯ ಹೇಳುವಿಕೆಗೆ ಅಗತ್ಯವಿತ್ತೋ, ಹಾಗೆಯೇ ಇಂಥದ್ದೊಂದು ಸಿನೆಮಾ ಈ ಹೊತ್ತಿಗೆ ಬಹಳ ಅಗತ್ಯವಿತ್ತು. ಕ್ರೌರ್ಯ, ರಕ್ತ, ಕಾಮ, ಭೋಗ, ಲೋಭ, ಮದ ಇವಿಷ್ಟೇ ಸದ್ಯದ ಚಿತ್ರಗಳ ಕಥಾವಸ್ತುಗಳು. ಬದುಕಿನ ಯಾವುದೋ ಒಂದು ಏಕಾಂತದ ಮಧ್ಯಾಹ್ನದಲ್ಲೋ, ಅಥವಾ ಶನಿವಾರದ ಸಂಜೆಯಲ್ಲೋ ಸುಮ್ಮನೆ ಕೂತು ನೋಡುವಂಥ ಚಿತ್ರಗಳು ಬರದೇ ಅದೆಷ್ಟು ದಿನಗಳಾಗಿದ್ದವು! ಎಲ್ಲರೂ ಕ್ರೌರ್ಯದ ಹಿಂದೆ ಓಡುತ್ತಿರುವಾಗ, ಅರ್ಥವೇ ಇಲ್ಲದ ವಿಜೃಂಭಣೆಗೆ ಒತ್ತು ಕೊಡುತ್ತಿರುವಾಗ, ಒಂದು ಅಪ್ಪಟ ಹಾಗೂ ಶುದ್ಧ ಪ್ರೇಮದ ಕತೆಯನ್ನು ಹೇಳುವುದು ಸುಲಭವಲ್ಲ. ಜೊತೆಗೆ, ನಮ್ಮ ಇಡೀ ಜನಾಂಗವೇ ರೀಲ್ಸ್ ಸ್ಕ್ರಾಲ್ ಮಾಡಿದಷ್ಟು ಸುಲಭವಾಗಿ ಬೇರೆ ಬೇರೆ ಸಂಬಂಧಗಳಿಗೆ ಟಕಟಕಟಕ ಅಂತ ಬದಲಾಗುತ್ತಿರುವಾಗ, ತನಗೆ ಸಿಗದವರು ಇನ್ನ್ಯಾರಿಗೂ ಸಿಗಬಾರದು ಅಂತಲೋ, ಅಥವಾ ತನಗೆ ಸಿಗಲಿಲ್ಲವಲ್ಲ ಅಂತ ನೆನಪುಗಳಲ್ಲೇ ಹಲಬುತ್ತಾ ಬದುಕಿಡೀ ಕೊರಗುವವರ ಮಧ್ಯದಲ್ಲಿ, ಬದುಕನ್ನು ಹೇಗೆ ಚೆಂದವಾಗಿಸಬಹುದು ಅಥವಾ ಬದುಕೇ ಆಗಿದ್ದ ಒಬ್ಬರು ಯಾವುದೋ ಕಾರಣಗಳಿಗಾಗಿ, ಪರಿಸ್ಥಿತಿಗಳಿಂದಾಗಿ ನಮಗೆ ಸಿಕ್ಕದೇ ಹೋದಾಗ, ಅದನ್ನು ಹೇಗೆ ನಿಭಾಯಿಸಬಹುದು, ಪ್ರೀತಿಯ ಅಂತಿಮ ಗುರಿ ಏನು ಇತ್ಯಾದಿಗಳನ್ನೆಲ್ಲವನ್ನೂ ಒಟ್ಟಿಗೆ ನಮ್ಮ ಮುಂದಿಡುವ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ'


ನಿರ್ದೇಶಕರು ಹಾಗೂ ನಟ ಇಬ್ಬರೂ ಹೇಳಿದ ಹಾಗೆ ಈ ಚಿತ್ರ ಒಂದು ಕಾವ್ಯ. ಕಾವ್ಯದ ಗುಣವೇ ಅದು. ಎಲ್ಲರಿಗೂ ರುಚಿಸುವುದಿಲ್ಲ. ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಎಲ್ಲರಿಗೂ ಇದು ಅಗತ್ಯ ಅಂತ ಅನ್ನಿಸುವುದೂ ಇಲ್ಲ. ಕಾವ್ಯ ಯಾವತ್ತಿಗೂ ನಮ್ಮ ನಮ್ಮ ಪಾಲಿಗೆ ದಕ್ಕಿದಷ್ಟೇ! ಸಿನೆಮಾದ ಮೊದಲ‌ ಭಾಗದಲ್ಲಿ ನಡೆದಂಥ ಒಂದು ಘಟನೆ ಹಾಗೂ ಅದರಿಂದ ಬಹುದೊಡ್ಡ ಕನಸನ್ನು ಕಟ್ಟಿಕೊಂಡಿರುವ ಹುಡುಗನೊಬ್ಬ ತೆಗೆದುಕೊಂಡ ಸಾಮಾನ್ಯವಾದ ಸಣ್ಣ ನಿರ್ಧಾರವೊಂದು ಆ ಹುಡುಗನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತಲ್ಲಾ ಅಂತ ನೆನೆದಾಗಲೆಲ್ಲಾ ಎದೆ ಬಡಿತ ಜೋರಾಗುತ್ತದೆ. ಇಂಥ ತಪ್ಪುಗಳನ್ನು ಮಾಡಿ ಈ ಹೊತ್ತಿನಲ್ಲಿ ಅದೆಷ್ಟು ಜನ ಜೈಲುಗಳಲ್ಲಿ ಇದ್ದಿರಬಹುದು ಹಾಗೂ ಅವರೆಲ್ಲರ ಅಷ್ಟು ವರ್ಷಗಳ‌ ಆ ಬದುಕು ಕೇವಲ‌ ಒಂದು ನಿರ್ಧಾರದಿಂದ ಅದೆಷ್ಟು ಭಿನ್ನವಾಯಿತಲ್ಲಾ ಅಂತ‌ ನೆನೆಸಿಕೊಂಡರೆ ಉಸಿರು ಭಾರವಾಗುತ್ತದೆ. ಸಿನೆಮಾ ನೋಡುವಾಗಲೂ ಇಂಥದ್ದೇ ಭಾರದ ಉಸಿರು ಬಾರಿ ಬಾರಿ ಎದುರಾಗುತ್ತಿತ್ತು. ಮೊದಲ ಭಾಗ ಮುಗಿದಾಗ ಅದೆಷ್ಟು ಜನರು "ಎರಡನೇ ಭಾಗದಲ್ಲಾದರೂ ಅವರನ್ನು ಒಂದಾಗಿಸಿ ನಿರ್ದೇಶಕರೇ" ಅಂತ ಅಂದವರಿಲ್ಲ! ಅಂಥದ್ದೊಂದು ಮಾತನ್ನು ಇತ್ತೀಚಿನ ಯಾವ ಸಿನೆಮಾಗಳಿಗೆ ನಾವು ಕೇಳಿದ್ದೆವು! ಎರಡು ಭಾಗಗಳಲ್ಲಿ ಬಂದಿದ್ದರೆ ಕೇಳುತ್ತಿದ್ದೆವೇನೋ ಅನ್ನಬಹುದು. ಆದರೆ, ಎರಡು ಭಾಗಗಳಲ್ಲಿ ಹೇಳುವುದಕ್ಕೆ ಕತೆಯೊಂದು ಇರಬೇಕಲ್ಲಾ! ಅಂಥ ಕತೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ. ಪ್ರೇಮಕತೆಗಳನ್ನು ಎಷ್ಟು ಅಂತ ಹೇಳಬಹುದು ಅಂತ ಅಂದುಕೊಳ್ಳುತ್ತಿರುವಾಗಲೇ, ಹೀಗೊಂದು ಪ್ರಾಮಾಣಿಕವಾದ ಕತೆ ಸಿಕ್ಕಿದರೆ ಅದಕ್ಕಿಂತ ಚೆಂದದ ಸಂಗತಿ ಇನ್ನೇನಿದೆ. 


ಮೊದಲನೇ ಭಾಗದಲ್ಲಿ ಇದ್ದಂಥ ದೃಶ್ಯ ಸೂಕ್ಷ್ಮತೆಗಳು "ಆಹ್ಞಾ, ವ್ಹಾ!" ಅನ್ನಿಸುವಷ್ಟು ಚೆಂದ. ಬಸ್ಸಿನಲ್ಲಿ ನಿತ್ಯವೂ ನಡೆವ ಘಟನೆ ಹೇಗೆ ಕೊನೆಯಲ್ಲಿ ಇಡೀ ಚಿತ್ರದ ಹಾಗೂ ಬದುಕಿನ ದಾರಿಯನ್ನು ಸೂಚಿಸುತ್ತದೋ, ಹಾಗೆಯೇ ಭಾಗ ಎರಡರ ಶುರುವಿನಲ್ಲಿ ನಟ ಗೊಂಬೆಯನ್ನು ಹೇಗೆ ಎತ್ತಿಕೊಂಡು ಹೋಗುತ್ತಾನೆ ಅಂತ‌ ತೋರಿಸುವ ದೃಶ್ಯ ಮುಂದಿನ ಇಡೀ ಕಥಾಹಂದರವನ್ನು ಸೂಚಿಸುತ್ತದೆ. ಇಂಥ ಸೂಚ್ಯ ದೃಶ್ಯಗಳು ಚಿತ್ರದ ಜೀವಾಳ. ಕವಿತೆ ಅಂದರೂ ಅದೇ ಅಲ್ವಾ! ವಾಚ್ಯವಾಗದೇ ಸೂಚ್ಯವಾಗುವುದು. ಖುಷಿಯ ವಿಷಯವೆಂದರೆ ಎಲ್ಲಿಯೂ ಕತೆಯ ಮೂಲ‌ ಆಶಯದಿಂದ ಆಚೆ ಹೋಗದೇ, ಅದೇ ವಿಷಯಕ್ಕೆ‌ ಅಂಟಿಕೊಂಡಿದ್ದು. "ಒಂದು ಕನಸು ಕಂಡೆ. ಆದರೆ, ಮತ್ತೆಂದಿಗೂ ಆ ಕನಸಿಗೆ ವಾಪಸ್ಸು ಹೋಗುವುದಕ್ಕೆ ಸಾಧ್ಯವಾಗಲೇ‌ ಇಲ್ಲ" ಅಂತ ಅಂದಾಗ, ಆ ಕನಸೇ ಬದುಕಿನ ಅಂತಿಮ ಗುರಿ ಹಾಗೂ ಅದಕ್ಕಿಂದ ಭಿನ್ನವಾದ ಆಸೆಗಳೇನೂ ಇಲ್ಲ ಅಂದಾಗ ಅಂಥ ಕನಸಿಗೆ ಹತ್ತಿರವಾದ ವಾಸ್ತವವನ್ನು ಕಟ್ಟಿಕೊಳ್ಳುವುದೇ ಬಹುಶಃ ಅತ್ಯಂತ ಸಮರ್ಪಕವಾದ ಕೆಲಸ ಅಂತನ್ನಿಸದೇ ಹೋಗುವುದಿಲ್ಲ. ಬೇರೆ ಕನಸು ಕಾಣಬಹುದಿತ್ತು. ಬೇರೆ ಬದುಕು ಬಾಳಬಹುದಿತ್ತು. ಆದರೆ, ಕೊನೆಯಲ್ಲಿ ಎಲ್ಲವೂ ನಮ್ಮ ಆಯ್ಕೆಗಳೇ ಅಲ್ಲವಾ!  ಆಯ್ಕೆಗಳು ಬದಲಾದರೆ, ಬದುಕಿನ ದಾರಿ ಬದಲಾಗುತ್ತದೆ. ಆದರೆ, ಆಯ್ಕೆಗಳೇ ಬೇಡ ಅಂತಂದುಕೊಂಡಾಗ ದಾರಿಯೂ ಒಂದೇ, ನಡೆಯುವುದು ಹೇಗೆಲ್ಲಾ ಅನ್ನುವುದನ್ನು ಮಾತ್ರವೇ ನೋಡಿಕೊಳ್ಳಬೇಕಷ್ಟೇ! 


ಈ ಸಿನೆಮಾ ಸುಮ್ಮನೆ 'ನಂದೂ ಒಂದಿರ್ಲಿ' ಅಂತ ಮಾಡಿದ ಸಿನೆಮಾವಲ್ಲ. ಸಿನೆಮಾ ಮಾಡುವಾಗ ಸಿನೆಮಾದ ಕುರಿತಾಗಿನ ಕಾಳಜಿಯಿದೆ‌. ಸಿನೆಮಾದ ಕತೆಯ ಕುರಿತಾಗಿನ ಕಾಳಜಿಯಿದೆ. ಅಲ್ಲಿ ಬರುವ ಪಾತ್ರಗಳ ಕುರಿತಾಗಿಯೂ, ಆ ಪಾತ್ರಗಳ ವಸ್ತ್ರಗಳ ಕುರಿತಾಗಿಯೂ, ಇಡೀ ಚಿತ್ರದಲ್ಲಿ ಬರುವ ಬಣ್ಣಗಳ ಕುರಿತಾಗಿಯೂ ನಿರ್ದೇಶಕರು ಯೋಚಿಸಿದ್ದಾರೆ. ಅದರಲ್ಲೂ ಕನ್ನಡದ ಪ್ರಸಿದ್ಧ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅದರಲ್ಲೂ ಆಧ್ಯಾತ್ಮಿಕವಾಗಿ ಬಹಳ ಆಳದ ಸಂಗತಿಯೊಂದನ್ನು ಹೇಳುವ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅಷ್ಟೇ ಚೆಂದದ ಪ್ರೇಮದ ಸಿದ್ಧಾಂತವನ್ನು ಹೇಳುವುದು ಸುಲಭವಲ್ಲ. ನೀನೂ ಆ ಕಡಲಿನ ಭಾಗ, ನಾನೂ ಆ ಕಡಲಿನ ಭಾಗ, ನಮ್ಮಿಬ್ಬರ ದಡಗಳು ಮಾತ್ರ ಬೇರೆ ಅನ್ನುವ ಅರಿವಿಟ್ಟುಕೊಂಡು ಕಡಲನ್ನೇ ಸೇರದ ನದಿಯ ಬಳಿಗೆ ಕಡಲೂ ಹೋಗದೇ, ಆದರೆ, ನದಿಯ ಹರಿವು ಮಾತ್ರ ಕಳೆದುಹೋಗದ ಹಾಗೆ ನೋಡಿಕೊಳ್ಳುವ ಕಡಲಿನ ಗುಣ ಬೇಕಲ್ಲವೇ ಈ ಹೊತ್ತಿಗೆ! ಪುಟ್ಟ ಶಂಖವೊಂದನ್ನು ಕಿವಿಗಿಟ್ಟುಕೊಂಡಾಗಲೆಲ್ಲಾ ಕಡಲಿನ ಅಲೆಗಳ‌ ಸದ್ದೇ ಕೇಳುತ್ತದೆ ಅಂತ ನಾಯಕ ಅಂದುಕೊಂಡಾಗಲೆಲ್ಲಾ ನಾನೂ ಒಮ್ಮೆ ಕಿವಿಗಿಟ್ಟು ನೋಡಬೇಕು ಅಂತ ನನಗೆ ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ. ಅದು ಅಂಥ ದೃಶ್ಯಗಳ‌ ತಾಕತ್ತು. ಒಡೆದ ಕನ್ನಡಿಯ ಬಿಂಬ, ವ್ಯಕ್ತಿಗಳ ಇತಿಹಾಸವನ್ನು ಕೆದಕದೇ ಸದ್ಯದ ಬದುಕಿಗೆ ಅಂಟಿಕೊಳ್ಳುವುದು, ಸ್ಥಗಿತವಾದ ರೈಲು ಹೇಗೆ ಅವನ ಬದುಕಿನ ಕತೆಯನ್ನು ಕಟ್ಟಿಕೊಡುತ್ತದೋ, ಭ್ರಮೆಯಲ್ಲಿಯೂ ವಾಸ್ತವದ ನೆರಳು ಇವೆಲ್ಲವೂ ಕತೆಯ ಸೂಕ್ಷ್ಮ ಹೆಣಿಗೆಗಳು. 


ಹಾಗಂತ ಸಿನೆಮಾದಲ್ಲಿ ಎಲ್ಲವೂ ಸರಿಯಿತ್ತಾ? ಅಂದರೆ, ಒಬ್ಬೊಬ್ಬರಿಗೆ ಒಂದೊಂದು ಅಂಶಗಳು ಸರಿಯಿಲ್ಲ ಅಂತನ್ನಿಸಿರಬಹುದು. ನನಗೆ ಚಿತ್ರದ ಶೀರ್ಷಿಕೆ ಹಾಡೇ ಇಷ್ಟವಾಗಲಿಲ್ಲ; ಅದಕ್ಕೆ ಕಾರಣವೂ ಆ ಶೀರ್ಷಿಕೆಯೂ ಹಾಗೂ ಆ ಶೀರ್ಷಿಕೆಗಿರುವ ಹಿನ್ನೆಲೆಯೂ! ಅದರ ಜೊತೆಗೆ ಚಿತ್ರದ ಕೊನೆ ಭಾವನಾತ್ಮಕವಾಗುವ ಭರದಲ್ಲಿ ಚೂರು ವಾಸ್ತವಕ್ಕಿಂತ ದೂರವಾಯಿತು ಅಂತ ಅನಿಸಿದ್ದು ಹೌದು. ಮನಸ್ಸನ್ನು ಕದಡದ ಕಾವ್ಯ ಬಹುಶಃ ಒಳ್ಳೆಯ ಕಾವ್ಯವಾಗಿರಲಿಕ್ಕಿಲ್ಲ ಅನ್ನುವುದು ಒಂದು ನಂಬಿಕೆ. ಹಾಗಂತ‌ ಎಲ್ಲಾ ಕಾವ್ಯಗಳು ಬರೀ ದುಃಖವನ್ನೇ ತುಂಬಿಕೊಂಡಿದ್ದರೆ ಮಾತ್ರ ಅವು ಒಳ್ಳೆಯ ಕಾವ್ಯ ಅಂತಲ್ಲ. ಈ ಎಲ್ಲಾ ನೋವುಗಳನ್ನು ಮಡುಗಟ್ಟಿಸಿ ಕಾವ್ಯ ಹುಟ್ಟುವುದು. ಹಾಗಾಗಿಯೇ ಕಾವ್ಯದ ಒಂದೊಂದು ಸಾಲೂ ಬಹಳಷ್ಟನ್ನು ಹೇಳುತ್ತದೆ. ಯಾಕೆಂದರೆ, ಅದು ತೆಳುವಾದದ್ದಲ್ಲ. ತೇಲಿಸುವಿಕೆ ಅಲ್ಲ. ಅದು ಭಾರವಾದದ್ದು, ಮುಳುಗಿಸುವಂಥದ್ದು,‌ ಕಡಲಿನಂಥದ್ದು. 


ಇವತ್ತಿನ ಜನಾಂಗಕ್ಕೆ ಇದು ತಾರ್ಕಿಕತೆ ಮತ್ತು ವಾಸ್ತವವಿಲ್ಲದ ಸಿನೆಮಾದಂತೆ ಕಂಡರೂ, ಈ ಸಿನೆಮಾದಲ್ಲೊಂದು ಕನಸಿದೆ. ಮತ್ತೆ, ನಾವು ಆ ಕನಸಿಗೆ ವಾಪಸ್ಸು ಹೋಗಬಹುದಾ! 


ನಿಜ,‌ ಈ ಹೊತ್ತಿಗೆ ನಮಗೊಂದು ಇಂಥ ಕಡಲ ಕತೆ ಬೇಕಿತ್ತು!


ಧನ್ಯವಾದಗಳು Hemanth M Rao , Hemanth M Rao , Rakshit Shetty ನಿಮ್ಮಿಬ್ಬರಿಗೂ!


~`ಶ್ರೀ' 

‌‌   ತಲಗೇರಿ

ಕಥಾಗತ - ನಮ್ಮ ಮಣ್ಣಿನ ಕಥನ


 ಕಥಾಗತ - ನಮ್ಮ ಮಣ್ಣಿನ ಕಥನ


ನಮ್ಮ ಕತೆಗಳೆಲ್ಲವನ್ನೂ ಕೇವಲ ಕಾಲ್ಪನಿಕವೆಂಬಂತೆಯೋ ಅಥವಾ ಎಲ್ಲರ ಕೈಯಲ್ಲೂ ಸೋತ ಕತೆಗಳಂತೆಯೂ ಬಿಂಬಿಸಿರುವಾಗ, ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಾದರೂ ಹೇಗಿದ್ದೀತು? ಇತಿಹಾಸದ ಬಗ್ಗೆ ಹೆಮ್ಮೆ ಯಾಕೆ ಬೇಕು, ಭೂತಕಾಲವನ್ನು ಕಟ್ಟಿಕೊಂಡು ನಮಗೇನಾಗಬೇಕು ಅನ್ನುವ ಇಂದಿನ ತಲೆಮಾರಿಗೆ‌ ಅರ್ಥವಾಗಬೇಕಾದ ಒಂದು ವಿಷಯ ಏನೆಂದರೆ, ಯಾರಲ್ಲಿ ಹೆಮ್ಮೆಪಡಬಹುದಾದಂಥ ಭೂತಕಾಲವಿರುತ್ತದೆಯೋ ಅವರಲ್ಲಿ ಆತ್ಮವಿಶ್ವಾಸ ಯಾವಾಗಲೂ ಜಾಸ್ತಿ; ಹಾಗೆಯೇ, ಹಿಂದೆ ಆಗಿದ್ದನ್ನು ತಿಳಿದವರು ಅಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡಲಾರರು. ಅದೇ ಕಾರಣಕ್ಕಾಗಿಯೇ‌ ಯಾವ ಜನಾಂಗವನ್ನಾದರೂ ನಾಶ ಮಾಡಬೇಕು ಅಂತಾದರೆ, ಆ ಜನಾಂಗದ ಇತಿಹಾಸವನ್ನು ಹಾಗೂ ಅದರಲ್ಲಿನ ಮಹಾನ್ ಸಂಗತಿಗಳನ್ನು ಮೊದಲು ಅಳಿಸಲಾಗುತ್ತದೆ. ಆತ್ಮವಿಶ್ವಾಸವಿಲ್ಲದ ಮನುಷ್ಯ ಜನಾಂಗ ಮಾಡುವುದಾದರೂ ಏನನ್ನು? ಒಂದು ವಿಷಯವನ್ನು ಮಾತ್ರ ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕು. ಭಾರತದ ಇತಿಹಾಸವೂ ಗಟ್ಟಿಯಾಗಿತ್ತು ಹಾಗೂ ನಮ್ಮ ಕಥನ ಪರಂಪರೆಯೂ. ಅಂತೆಯೇ ಇತಿಹಾಸವೆಂದರೆ ಶುಷ್ಕ, ಅದರಲ್ಲೇನಿದೆ ಅನ್ನುವ ಹೊತ್ತಿನಲ್ಲಿ, ಇತಿಹಾಸದೊಂದಿಗೆ ಕಥನ ಪರಂಪರೆ ಜೊತೆಯಾದರೆ ಹೇಗಿರಬಹುದು ಅನ್ನುವ ಆಲೋಚನೆಯೊಂದಿಗೆ ಡಾ. ನವೀನ್ ಗಂಗೋತ್ರಿ ( Naveen Gangotri ) ಅವರು ಬರೆದಿರುವ, ಸ್ವಸ್ತಿ ಪ್ರಕಾಶನ ( Priya Bhat ) ತನ್ನ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಕಟಿಸಿರುವ ಕೃತಿಯೇ 'ಕಥಾಗತ'. ಅದಕ್ಕೆ ತಕ್ಕದಾದ ಉಪ ಶೀರ್ಷಿಕೆ‌ 'ನೆಲದ ನಿನ್ನೆಯ ಮರೆಯಬಾರದ ಕಥಾನಕ'.


ಇಲ್ಲಿ ಎಂಟು ಕತೆಗಳಿವೆ. ಭಾರತದ ಇತಿಹಾಸ ಕೇವಲ ಎಂಟು ಕತೆಗಳಲ್ಲಿ ಹೇಳಬಹುದಾದದ್ದಾ ಅಂದರೆ ಖಂಡಿತಾ ಅಲ್ಲ. ಆದರೆ, ಇಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಹೇಳಲಾಗಿದೆ. ಮುಖ್ಯ ಸಂಗತಿಗಳೂ ಕೇವಲ ೮ ಕತೆಗಳಲ್ಲಿ ಹೇಳಬಹುದಾದದ್ದಲ್ಲ.‌ ನಮ್ಮ ಗತದ ಕೆಲವು ಕಥಾನಕಗಳಿವೆ ಇಲ್ಲಿ ಅಂದರೆ ಹೆಚ್ಚು ಸೂಕ್ತವಾದೀತು. ಇತಿಹಾಸವೆಂದರೆ ಇಸವಿ, ಯುದ್ಧ, ಶಸ್ತ್ರಾಸ್ತ್ರ, ಸೈನ್ಯದ ಲೆಕ್ಕಾಚಾರ, ಕರ‌ ಪದ್ಧತಿ, ಸಮಾಜಕ್ಕೆ ಕೊಡುಗೆ ಇವಿಷ್ಟೇ ಅನ್ನುವಂತೆ ನಾವು ನಮ್ಮ ಪಠ್ಯದಲ್ಲಿ ಓದಿಕೊಂಡು ಬಂದಿದ್ದೇವೆ. ಆದರೆ, ಇದಕ್ಕೂ ಮೀರಿದ ಕತೆಗಳಿವೆಯಾ? ಇದ್ದರೆ ಆ ದಾಖಲಾತಿಗಳ್ಯಾಕೆ ನಮ್ಮ‌‌ ಪಠ್ಯಗಳಲ್ಲಿ ಇರಲಿಲ್ಲ ಅನ್ನುವುದು ಒಂದು ಕುತೂಹಲದ ಪ್ರಶ್ನೆಯಾಗಬಹುದು. ಒಂದು ಸಾಮ್ರಾಜ್ಯ ಹುಟ್ಟಿದ್ದರ ಹಿನ್ನೆಲೆ ಹಾಗೂ ಅದು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿತ್ತು ಅನ್ನುವುದನ್ನು ಹೇಳಹೊರಟರೆ ಭಾರತದ ಇತಿಹಾಸ ಒಂದು ಮಹಾನ್ ಇತಿಹಾಸವಾಗಿಬಿಡಬಹುದು ಅನ್ನುವ ಚಿಂತನೆಯೇನಾದರೂ ಪಠ್ಯ ತಯಾರಿಸುವವರಿಗೆ ಇತ್ತಾ ಅಂತಲೂ ಪ್ರಶ್ನೆ ಹುಟ್ಟಿಕೊಳ್ಳಬಹುದು. ನಮ್ಮಲ್ಲಿ, ನಮ್ಮ ಸಾಮ್ರಾಜ್ಯಗಳಲ್ಲಿ ಒಡಕುಗಳಿದ್ದುದು ನಿಜ. ಆದರೆ, ನಮ್ಮ ಜೀವನ ಪದ್ಧತಿಯ ಕುರಿತಾದ ನಂಬಿಕೆಗಳು ಛಿದ್ರವಾಗಿರಲಿಲ್ಲ. ಜೊತೆಗೆ, ಯಾವಾಗ ಸಮಾಜದಲ್ಲಿ ಬಿರುಕುಗಳು ಮೂಡಿದವೋ, ಭಯದ ನೆರಳು ಕವಿಯಿತೋ ಆಗೆಲ್ಲಾ ಯಾವುದೋ ಒಬ್ಬ ರಾಜ, ನಮ್ಮ ಸಮಾಜದ ಪುನರುತ್ಥಾನಕ್ಕಾಗಿ ಹುಟ್ಟಿಬಂದಿದ್ದಿದೆ. ಇವೆಲ್ಲವೂ ಓದುವುದಕ್ಕೆ, ಹೇಳುವುದಕ್ಕೆ, ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಚೆಂದ, ನಿಜ ಸ್ಥಿತಿ ಬೇರೆಯೇ ಇತ್ತು ಅಂತ ಹಲವರು ಅಂದುಕೊಳ್ಳಬಹುದು. ಆದರೆ, ನಿಜಕ್ಕೆ ಹಲವು ಮುಖಗಳಿಲ್ಲ; ನಾವು ನೋಡುವ ಕೋನದಿಂದ ಕಂಡಿದ್ದಷ್ಟೇ ನಿಜವಲ್ಲ ಅನ್ನುವ ಅರಿವು ನಮಗಿದ್ದರೆ 'ಎಲ್ಲ ಕಡೆಯಿಂದಲೂ ಜ್ಞಾನ ಹರಿದು ಬರಲಿ' ಅನ್ನುವ ವರ್ಗಕ್ಕೆ ನಾವು ಸೇರುತ್ತೇವೆ‌. 


ಈಗ ಭಾರತದ ಅಥವಾ ಒಂದರ್ಥದಲ್ಲಿ ಇಡೀ ಜಗತ್ತಿನ ಬದ್ಧ ವೈರಿಯಾಗಿರುವ ಚೀನಾದ ಜನರಲ್ಲಿ ಒಂದು ಕಾಲದಲ್ಲಿ ಒಂದು ಕೊರಗು ಇತ್ತಂತೆ; ಅದೇನೆಂದರೆ "ಬುದ್ಧ ಹುಟ್ಟಿದ ನಾಡಿನಲ್ಲಿ ತಾವು ಹುಟ್ಟಲಿಲ್ಲವಲ್ಲ" ಅಂತ. ಚೀನಾದ ರಾಜಕಾರಣ ಹಾಗೂ ಅಲ್ಲಿನ ಮನಸ್ಥಿತಿ ಈಗ ಅದೆಷ್ಟು ಬದಲಾಗಿದೆಯೆಂದರೆ,‌‌‌ ಅಂಥ ಬದಲಾವಣೆಗೆ ಕೊಡುಗೆಗಳು ಏನೇನಿರಬಹುದು, ಒಮ್ಮೆ ಯೋಚಿಸಿ! ಚೀನಾದ ಯಾತ್ರಿಕನೊಬ್ಬ ಭಾರತಕ್ಕೆ ಬರುತ್ತಾನೆ ಹಾಗೂ ಆತ ಭಾರತದಲ್ಲಿ ಸುಮಾರು ವರ್ಷ ಅಧ್ಯಯನವನ್ನೂ ಕೈಗೊಳ್ಳುತ್ತಾನೆ ಅಂದರೆ, ಆತನಿಗೆ ಭಾರತದ ಕುರಿತಾಗಿ ಇದ್ದ ಪ್ರೀತಿ, ಗೌರವ ಅದೆಷ್ಟು ಗಾಢವಾಗಿದ್ದಿರಬಹುದು. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಯೊಬ್ಬ ಕೇವಲ ಪ್ರವಾಸಿಯಾಗಿರದೇ ಇನ್ನೂ ಏನೇನೆಲ್ಲಾ ಆಗಿದ್ದ, ಹಾಗೂ ಭಾರತ ಆತನನ್ನು ನಡೆಸಿಕೊಂಡ ಪರಿ, ಹಾಗೂ ಅಂಥ ವಿದೇಶಿ ಪ್ರವಾಸಿಗನೊಬ್ಬನ ಬರೆಹಗಳಿಂದ ನಾವೀಗ ನಮ್ಮ ಇತಿಹಾಸವನ್ನು ತಿಳಿಯುತ್ತಿರುವುದು ಇತ್ಯಾದಿಗಳನ್ನು ಬಹಳ ಹೆಮ್ಮೆಯಿಂದ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಗೆ ಸಲ್ಲಲೇಬೇಕಾದ ಗೌರವ ಅದು. 


ತತ್ವಜ್ಞಾನ ಭಾರವಾಗಬಾರದು, ಬೇರೂರಬೇಕು. ಬೇರೂರಬೇಕು ಅಂದರೆ ಅದು‌ ಸಮಯ ಬೇಡುವ ಪ್ರಕ್ರಿಯೆ. ಹಾಗೆ ಬೇರೂರಿರುವ ತತ್ವಜ್ಞಾನವನ್ನು ಕಿತ್ತೊಗೆಯುವುದು ಕೂಡಾ ಅಷ್ಟು ಸಸಾರದ ಕೆಲಸವಲ್ಲ. ಭಾರತದ ಜೀವನ ಪದ್ಧತಿ ಕೂಡಾ ಅಂಥದ್ದೇ ಒಂದು ತತ್ವಜ್ಞಾನ. ಒಂದು ತತ್ವ ಜನಪ್ರಿಯವಾದಂತೆ ಹೇಗೆ ಕವಲುಗಳನ್ನು ಪಡೆದುಕೊಳ್ಳುತ್ತದೆ ಅನ್ನುವುದನ್ನು ಹಾಗೂ ಅದಕ್ಕಿರುವ ಉದಾಹರಣೆಗಳನ್ನೂ ಲೇಖಕರು ಇಲ್ಲಿ ತಿಳಿಸಿದ್ದಾರೆ. ಸಿದ್ಧಾಂತ ಮತ್ತು ಆರ್ಥಿಕತೆ ಇವೆರಡರಲ್ಲಿ ಯಾವುದು ಜಗತ್ತನ್ನಾಳುತ್ತದೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಎರಡು ಚೆಂದದ ಪ್ರಸ್ತುತಿ ಅಥವಾ ವಾದಗಳಿವೆ. ಅವು ಬಹಳ ಗಹನ ಆಲೋಚನೆಗಳನ್ನು ಸ್ಫುರಿಸುತ್ತವೆ. ಹಾಗೆಯೇ ಈ ಪುಸ್ತಕದಲ್ಲಿ ಅಲ್ಲಲ್ಲಿ ಸಮಾಜಪರವಾದ ಧ್ವನಿಗಳಿವೆ, ಕಿವಿಮಾತುಗಳಿವೆ ಕೂಡಾ. 


ಭಾರತದಲ್ಲಿ ಉಚಿತವಾಗಿ ಏನನ್ನು ಹಂಚುತ್ತಿದ್ದರು ಹಾಗೂ ಅಂಥ ದೇಶದ ಸ್ಥಿತಿ ಹೇಗಿದ್ದಿರಬಹುದು ಅನ್ನುವುದಕ್ಕೆ ಒಂದು ಮಾತನ್ನು ಲೇಖಕರು ಬಳಸಿದ್ದಾರೆ. ವರ್ತಮಾನದ ಕೆಲವು‌ ಸಂಗತಿಗಳನ್ನು ನೋಡಿದಾಗ, ಅದರಲ್ಲೂ ಕೊರೊನಾದ ಕಾಲಘಟ್ಟದಲ್ಲಿ ಭಾರತ ಜಗತ್ತಿನೊಡನೆ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ತನ್ನಿಂದ ತಾನಾಗಿಯೇ ತಾಳೆಹಾಕಬೇಕು ಅನಿಸುತ್ತದೆ. ಭಾರತವನ್ನಾಶ್ರಯಿಸಿ ಬಂದ ಯಾರೂ ಭಾರತೀಯರಿಂದ ಘಾಸಿಗೊಳಗಾಗಿಲ್ಲ ಅಂದರೆ ಅದು ಭಾರತದ ಹಿರಿಮೆ! ಹಿಂದೆಲ್ಲಾ ಆಶ್ರಯ ಬೇಡಿ ಬಂದ‌ ಜನಾಂಗ, ಬರುವಾಗ ಯಾವ ಧರ್ಮದ್ದಾಗಿತ್ತೋ ಮತ್ತೆ ವಾಪಸ್ ಹೋಗುವಾಗ ಅದೇ ಧರ್ಮಕ್ಕೆ ಸೇರಿದ ಜನಾಂಗವಾಗಿಯೇ ಹೋಗಿದ್ದು ಕೆಲವೇ ದೇಶಗಳಿಂದ. ಅಂಥ‌‌ ದೇಶಗಳಲ್ಲಿ ಭಾರತವೂ ಒಂದು ಅಂದರೆ ಅದು ಹೆಮ್ಮೆಯ ವಿಷಯವಲ್ವಾ!


"ಸಾವಿರ ದೇವರನ್ನು ಪೂಜಿಸುವ ನೆಲದಲ್ಲಿ ಇನ್ನೊಂದು ದೇವರನ್ನು ಸೇರಿಸಿಕೊಳ್ಳುವುದು ದೊಡ್ಡ ಕೆಲಸವೂ ಆಗಿರಲಿಲ್ಲ" ಅನ್ನುವ ಮಾತು ಭಾರತದ ಸಹಿಷ್ಣುತೆಯ ಸಾರಾಂಶವಲ್ಲದೇ ಇನ್ನೇನೂ ಅಲ್ಲ. ಅದಕ್ಕಾಗಿಯೇ ಹೇಳುವುದಲ್ವಾ 'ಭಾರತ ಯಾವತ್ತಿಗೂ ಅನ್ವೇಷಕರ ನಾಡು' ಅಂತ.  ಜೊತೆಗೆ, ಇಂಥದ್ದೊಂದು ಸಂಸ್ಕೃತಿಯ ಭಾಗವಾಗಿರುವುದಕ್ಕೆ ನಾವು ಸದಾ ಈ ಬದುಕಿಗೆ, ಇಂಥ ತತ್ವಜ್ಞಾನಗಳನ್ನು ಕೊಟ್ಟ ನಮ್ಮ ಪೂರ್ವಜರಿಗೆ ಕೃತಜ್ಞರಾಗಿರಬೇಕು. ಇಡೀ ಜೀವಕುಲದ ವಿಕಸನಕ್ಕೆ 'ಅನ್ವೇಷಣೆ'ಯ ಮನಸ್ಥಿತಿ ಮಹತ್ವದ ಕೊಡುಗೆ ಕೊಟ್ಟಿದೆಯೆಂದರೆ ತಪ್ಪಲ್ಲವೇನೋ. 'ಮಾಗಧಿಯ ಕಂಗಳಲ್ಲಿ' ಅನ್ನುವ ಲೇಖನದಲ್ಲಿ ಮಣ್ಣಿನ ಕುರಿತಾದ ಅದ್ಭುತವಾದ ಮಾತೊಂದಿದೆ. ಅದನ್ನು ಓದಿಯೇ ಮನಸ್ಸು ತುಂಬಿಕೊಳ್ಳಬೇಕು. 


ಕಲೆಗಳೆಲ್ಲವೂ ಬೇರೆಬೇರೆಯಲ್ಲ. ಒಂದು ಇನ್ನೊಂದಕ್ಕೆ ಪೂರಕ ಅನ್ನುವ ಅರಿವಿದ್ದವರು ಮಾತ್ರವೇ ಕಲೆಯ ಉಪಾಸನೆಯನ್ನು ಪಕ್ವವಾಗಿಸಿಕೊಳ್ಳುತ್ತಾರೆ ಅನ್ನುವುದು ಅದೆಷ್ಟು ಸತ್ಯದ ಮಾತು. ಚೆನ್ನಕೇಶವ ದೇವಾಲಯದ ಕೆತ್ತನೆಗಳ ವರ್ಣನೆ ಮಾಡುವಾಗ ಚೆನ್ನಕೇಶವನ ಕುರಿತಾಗಿ ಒಂದಷ್ಟು ಪದಗಳು ಬರುತ್ತವೆ, ಅದೊಂಥರಾ ರೋಮಾಂಚನಕಾರಿ ಅನ್ನಿಸಿತು ನನಗೆ. ಆ ಪದಗಳಿಗೆ ಇರುವ ಘನತೆಯೇ ಬೇರೆ. 


ಭಾರತದ ಕಥಾಪರಂಪರೆ ಹಾಗೂ ಅದರಿಂದ ಒದಗಬಹುದಾದ ಮಹತ್ವದ ಸಂಗತಿಗಳನ್ನು ಲೇಖಕರು ಭಾಗಮತಿಯ ಕುರಿತಾದ ಲೇಖನದಲ್ಲಿ ಹೇಳಿದ್ದಾರೆ. ಇಡೀ ಮನುಕುಲದ ಕಥಾಕೌಶಲಕ್ಕೆ ಕಳಸವಿಡುವ ಮಾತೊಂದು ಇಲ್ಲಿದೆ. ಹಾಗೆಯೇ ಇನ್ನೊಂದು ಲೇಖನದಲ್ಲಿ ಬಂಗಾಲದ ಹೆಣ್ಣುಮಕ್ಕಳ ಕುರಿತಾಗಿ ಒಂದು ಸಿಹಿ ಆರೋಪವಿದೆ; ಲೇಖಕರಿಗೆ ಇಷ್ಟು ಚೆನ್ನಾಗಿ ಹೇಗೆ ಗೊತ್ತು ಅನ್ನುವ ಪ್ರಶ್ನೆ ಎದುರಾದರೆ ನೀವೂ ನನ್ನಂತೆಯೇ !


ವಿಜಯನಗರ ಸಾಮ್ರಾಜ್ಯದ ವರ್ಣನೆಗೆ ಬರುವಾಗ ನಮಗೆ ಬೇರೆಯದೇ ಲೇಖಕರು ಸಿಗುತ್ತಾರೆ‌. ವಿಜಯನಗರದ ಸ್ಥಾಪನೆಯ ಸಮಯದಲ್ಲಿ ಎಂಥ ವಾತಾವರಣವಿತ್ತೋ, ಅಂಥ ಸಮಯದಲ್ಲಿ ಪುನರುತ್ಥಾನದ ಯಾವ ಉದ್ವೇಗವಿತ್ತೋ ಅದು ಲೇಖಕರ ಸಾಲುಗಳಲ್ಲೂ ಉಸಿರಾಡುತ್ತದೆ. ಪುಸ್ತಕದ ಎಲ್ಲಾ ಭಾಗಗಳಿಗಿಂತ ವಿಜಯನಗರದ ಭಾಗ ಬಹುಶಃ ಲೇಖಕರನ್ನು ಹೆಚ್ಚು ತಟ್ಟಿದೆ ಅಂತ ಅಲ್ಲಿನ ಸಾಲುಗಳಿಂದಲೇ ಹೇಳಬಹುದು. ವಿಜಯನಗರದ ಕತೆಯ ಸ್ವರೂಪವೂ ಇಲ್ಲಿ ಹೇಳಿ ಮಾಡಿಸಿದ ಹಾಗಿದೆ. ಅನಾದರಕ್ಕೆ ಒಳಗಾದ ಹಾಳುಹಂಪೆಯಲ್ಲದೇ‌ ಇನ್ನಾರು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವುದು ಸಾಧ್ಯ! ಸ್ವಗತದ ಮಾದರಿಯ ನಿರೂಪಣೆ ಹಂಪೆಯ ಕತೆಗೆ ಅತ್ಯಂತ ಸೂಕ್ತವಾದದ್ದು. ಮುಪ್ಪಿನಲ್ಲಿ ಸ್ವಗತವೊಂದೇ ಸಂಗಾತವಲ್ಲವೇ! 


"ಶುದ್ಧ ಇತಿಹಾಸ ಅನ್ನುವುದು ಒಂದು ಮಾಯಾಜಿಂಕೆ, ಅದೆಂದಿಗೂ ಇದ್ದಿರಲಿಲ್ಲ" ಅನ್ನುವ ಮಾತು ಒಂದೊಮ್ಮೆ ಇಡೀ ಇತಿಹಾಸದ ಉಲ್ಲೇಖಗಳ ಬುಡವನ್ನೇ ಅಲ್ಲಾಡಿಸುವ ಮಾತಂತೆ ತೋರುತ್ತದೆ. ಜೊತೆಗೆ, ಇತಿಹಾಸ ಅಂದರೆ "ಹೀಗೆ ನಡೆದಿತ್ತು" ಅನ್ನುವುದನ್ನು ಹೇಳುವುದಕ್ಕಿಂತ ಹಾಗೆ ನಡೆದಿದ್ದನ್ನು "ಹೇಗೆಲ್ಲಾ ಹೇಳಬಹುದು" ಅನ್ನುವುದನ್ನೇ ಹೆಚ್ಚು ಧ್ವನಿಸುತ್ತದೆ ಅಂದರೆ ತಪ್ಪಾಗಲಾರದು ಅನ್ನುವ ಸಂಗತಿಯನ್ನು ಮತ್ತೆ ಈ ಸಾಲು ನಮ್ಮೆದುರಿಗೆ ಇಡುತ್ತದೆ.


ಹಾಗೆಯೇ ಈ ಪುಸ್ತಕದಲ್ಲಿರುವುದು‌ ಇತಿಹಾಸವಾದರೂ ಕತೆಯ ಮೂಲಕ ಹೇಳಿದ ಕಾರಣಕ್ಕೆ, ಕತೆಯನ್ನು ಹೇಳಲು ಬರುವ ಹಲವು ಪಾತ್ರಗಳು ಕೇವಲ ನೆಪ ಮಾತ್ರಕ್ಕೆ ಬಂದಂತೆಯೂ, ಅದು ಸ್ವಲ್ಪ ಯಾಂತ್ರಿಕವಾಗಿಯೂ ಕೆಲವು ಕಡೆಗಳಲ್ಲಿ ಕಂಡಿತು. ಆದರೆ, ಅಂಥ ಪಾತ್ರಗಳನ್ನು ತರುವುದು ಹಾಗೂ ಅದರ ಸುತ್ತ ವರ್ತಮಾನದ ಕತೆ ಹೆಣೆದು ಅವುಗಳಿಂದ ಇತಿಹಾಸಕ್ಕೆ ವರ್ಗಾವಣೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಅನ್ನುವ ಅರಿವಿದ್ದರೂ, ಕೆಲವು ಪಾತ್ರಗಳು ಇನ್ನಷ್ಟು ಪಳಗಬಹುದಿತ್ತೇನೋ ಅಥವಾ ಇನ್ನಷ್ಟು ಕೊಡುಗೆ ಕೊಡಬಹುದಿತ್ತೇನೋ ಅಂತಲೂ ಅನ್ನಿಸಿತು. ಈ ಸಂಗತಿಯೇ ಕೆಲವೊಂದು ಕಡೆಗಳಲ್ಲಿ ಕೆಲವು ಪಾತ್ರಗಳ ಅಗತ್ಯತೆಯನ್ನು ಹಾಗೂ ಅವು ಕತೆಯಾಗುವಲ್ಲಿ ಸೋಲುವ ಸಾಧ್ಯತೆಗಳನ್ನೂ ಎತ್ತಿಹಿಡಿದಿದೆ.


ಒಟ್ಟಿನಲ್ಲಿ ಹೇಳುವುದಾದರೆ, ಇತಿಹಾಸವನ್ನು ಇಷ್ಟಪಡುವ ಹಾಗೂ ನಮ್ಮ ನಾಡನ್ನು ಇನ್ನಷ್ಟು ಮತ್ತಷ್ಟು ಪ್ರೀತಿಸುವ ನಾವೆಲ್ಲರೂ ಓದಲೇಬೇಕಾದ ನಮ್ಮ ಗತದ, ನಮ್ಮ ಸ್ವಂತದ ಕಥಾನಕ 'ಕಥಾಗತ'


~`ಶ್ರೀ' 

‌    ತಲಗೇರಿ

ಕುಣಿಗಲ್‌ ಟು ಕಂದಹಾರ್


 ಕುಣಿಗಲ್ ಟು ಕಂದಹಾರ್


ಯುದ್ಧಭೂಮಿಗಳ ಕುರಿತಾಗಿ ನಾವು ಅಲ್ಲಲ್ಲಿ ಚೂರು ಚೂರು ಓದಿದ್ದೇವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡಾಗ ವಿಮಾನದ ರೆಕ್ಕೆಗಳ ಮೇಲೆಲ್ಲಾ ಜನರು ಹತ್ತುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ, ಅಂಥದ್ದೇನಿತ್ತು ಹಾಗೆಲ್ಲಾ ದೇಶ ಬಿಟ್ಟು ಓಡುವುದಕ್ಕೆ? ಒಂದಷ್ಟು ವರ್ಷಗಳ ಕಾಲ ನ್ಯಾಟೋ ಸೈನ್ಯದ ಆಡಳಿತಕ್ಕೆ ಅಫ್ಘಾನಿಸ್ತಾನ ಒಳಪಟ್ಟಾಗ ಆದಂಥ ಬದಲಾವಣೆಗಳೇನಾಗಿದ್ದವು? ನಿಜಕ್ಕೂ ಆಗಿದ್ದವಾ? ಯುದ್ಧದ ನೆರಳು ಹೊತ್ತ ನಾಡು ಹೇಗೆಲ್ಲಾ ಇರಬಹುದು. ಯುದ್ಧದ ಕತೆ ಒಂದೆಡೆಯಾದರೆ, ಬೇರೆ ಬೇರೆ ದೇಶದ, ಸಂಸ್ಕೃತಿಯ, ಮತ ಪಂಥಗಳ ಮನುಷ್ಯ ಮನುಷ್ಯರ ನಡುವಣ ಸಂಬಂಧ ಇಂಥ ಸ್ಥಿತಿಗಳಲ್ಲಿ ಹೇಗಿರುತ್ತವೆ? ಅಂಥದ್ದೊಂದು ಜಾಗಕ್ಕೆ ಕೆಲಸಕ್ಕೆ ಕರೆದಾಗ ಅಲ್ಲಿಗೆ ಹೋದವರ ತಳಮಳಗಳೇನು? ಪ್ರವಾಸ ಕಥನವೆಂದರೆ ಅಲ್ಲಿ ಆರಾಮಾಗಿ ಮಜಾ ಮಾಡಬಹುದಾದ ಜಾಗ, ಆಹಾರ, ಚಟುವಟಿಕೆಗಳ ಕುರಿತಾದ ಸಂಗತಿ ಮಾತ್ರವಾ? ಹಾಗಿದ್ದರೆ, ಇಂಥ ಕಡೆಗಳಿಗೆ ಪ್ರವಾಸ ಹೋದಾಗ ಅದರ ಕಥನ ಹೇಗಿದ್ದೀತು? ಇಂಥ ಪ್ರವಾಸದೊಂದಿಗೆ ಅಂಟಿಕೊಂಡ ಪ್ರಯಾಸದ ಜೊತೆಗೆ ಒದಗಬಹುದಾದ ಬದುಕಿನ ಒಳನೋಟಗಳ ದಾಖಲಾತಿ ಏನಿದ್ದೀತು? ಮುಂದಿನ ಕ್ಷಣದ ಭರವಸೆಯಿಲ್ಲದೇ ಬದುಕುವುದಕ್ಕೆ ಸಾಧ್ಯವಾ? ಹಾಗೆ ಬದುಕುವವರ ಮನಸ್ಥಿತಿಗಳೇನು? ಯಾಕೆ ಮನುಷ್ಯ ತನ್ನ ಊರು, ದೇಶ ಬಿಟ್ಟು ಇನ್ನ್ಯಾವುದೋ ದೇಶಕ್ಕೆ ಹೋಗುವುದು? ಹಾಗೆ ಹೋದವರೆಲ್ಲಾ ವೈಭೋಗದ ಬದುಕನ್ನೇ ಪಡೆದಿದ್ದಾರಾ? ಇತ್ಯಾದಿ ಪ್ರಶ್ನೆಗಳಿಗೆ ಅತ್ಯಂತ ಸಂಯಮದಿಂದ ಉತ್ತರಿಸಬಲ್ಲ ಬಹಳ ಬಹಳ ಚೆಂದದ ಪುಸ್ತಕ ಶ್ರೀ ಮಂಜುನಾಥ್ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್' 


ಇದು ಚೆಂದದ ಪುಸ್ತಕ ಅನ್ನುವುದಕ್ಕೂ ಕಾರಣಗಳಿವೆ. ಎಷ್ಟೆಲ್ಲಾ ನೋವುಗಳ ನಡುವೆಯೂ ಮನುಷ್ಯ ಜನಾಂಗ ಸಂಭ್ರಮವನ್ನು ಹುಡುಕಿಕೊಳ್ಳುತ್ತದೆ. ಭರವಸೆಯ ಆಕಾಶದೀಪದತ್ತ ಕಣ್ಣೋಣವನ್ನು ಸದಾ ನೆಟ್ಟಿರುತ್ತದೆ. ಬಹುಶಃ ಅಂಥ ಆಶಾಭಾವ ಇರದೇ ಹೋದಲ್ಲಿ ಮನುಷ್ಯರ ಸಾಹಸಗಾಥೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಸಿಗುತ್ತಿರಲೇ ಇಲ್ಲ. ಇತಿಹಾಸಗಳಲ್ಲಿ ಇರದಿದ್ದ ಮೇಲೆ ಅದರ ಆಧಾರದ ಮೇಲೆ ಬೆಳೆವ ಮುಂದಿನ ಜನಾಂಗಗಳು ಬಹುಶಃ ದುರ್ಬಲವಾಗುತ್ತಲೇ ಹೋಗಬಹುದು. ಯುದ್ಧಭೂಮಿಯಂಥದ್ದೇ ವಾತಾವರಣವಿರುವ ಜಾಗಗಳಿಗೆ ಪದೇ ಪದೇ ಕೆಲಸಕ್ಕೆ ಹೋಗಬೇಕಾಗಿ ಬಂದಾಗ ಲೇಖಕರು ಹೇಗೆ ಪ್ರತಿಕ್ರಿಯಿಸಿದರು‌ ಅನ್ನುವಲ್ಲಿಂದ ಹಿಡಿದು, ಇಂಥ ಮಾನವೀಯ ಕ್ಷಣಗಳಲ್ಲೂ ಮನುಷ್ಯ ಲೋಕ ತನ್ನ ಲಾಭವನ್ನು ಹೇಗೆಲ್ಲಾ ಹುಡುಕಿಕೊಳ್ಳುತ್ತದೆ ಅನ್ನುವಲ್ಲಿಯ ತನಕ ಹಲವಾರು ಸಂಗತಿಗಳು ಇಲ್ಲಿ ಬಂದು ಹೋಗುತ್ತವೆ. 


ಪ್ರವಾಸ ಕಥನವೆಂದರೆ ಹೀಗೂ ಇರಬಹುದು ಅನ್ನುವ ಹೊಸ ಪಂಕ್ತಿಯನ್ನು ಹಾಕಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಯಾವತ್ತಿನ ಶೈಲಿಯಲ್ಲಿ ಈ ಪುಸ್ತಕದ ಕುರಿತು ಬರೆಯುವುದು ತುಸು ಕಷ್ಟವೇ ಆಗುತ್ತಿದೆ; ಕಾರಣ ಇಷ್ಟೇ, ಈ ಪುಸ್ತಕವನ್ನು ಸುಮ್ಮನೆ ಹೀಗೆ ಕಾಟಾಚಾರಕ್ಕೆ ನಾಲ್ಕು ಸಾಲುಗಳಲ್ಲಿ ಹೊಗಳಲು ಹೋದರೆ ಅದು ನೀರಸ ಪ್ರಯತ್ನವಷ್ಟೇ ಆದೀತು. ಬೇರೆ ಭಾಷೆಯ ಹಲವರು ಈ ಥರದ ಪುಸ್ತಕಗಳನ್ನು ಬರೆದಿರಬಹುದು. ಆದರೆ, ನಮ್ಮ ಕನ್ನಡದಲ್ಲೇ ನಮ್ಮ ಕನ್ನಡದವರದ್ದೇ ಕಥನವನ್ನು ಓದುವಾಗ ಇರುವ ಆಪ್ತತೆ ಕನ್ನಡಕ್ಕೆ ಇಂಥದ್ದೊಂದು ಪುಸ್ತಕ ಬೇಕಾಗಿತ್ತು ಅಂತ ಅನ್ನಿಸುವ ಹಾಗೆ ಮಾಡಿದರೆ ಅದು ಅತಿಶಯೋಕ್ತಿಯಲ್ಲ ಅಂತಂದುಕೊಳ್ಳುತ್ತೇನೆ. ನಾವೆಲ್ಲರೂ ಅದೆಷ್ಟು ಆರಾಮಾಗಿ ಆ ದೇಶ ಹೀಗೆ ಮಾಡಬೇಕಿತ್ತು, ಈ ದೇಶ ಹಾಗೆ ಮಾಡಬೇಕಿತ್ತು ಅಂತನ್ನುತ್ತಾ ರಾಜಕೀಯದ ನಿಪುಣರಂತೆ ವರ್ತಿಸುವಾಗ ದೇಶ ದೇಶಗಳ ನಡುವಿನ ಆಯಾಮಗಳು ಬೇರೆಯೇ ಅನ್ನುವುದನ್ನು ಈ ಪುಸ್ತಕ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ, ಅಫ್ಘನ್ನರ  ಕನಸುಗಳನ್ನು, ಶಾಂತಿಯ ಕುರಿತಾಗಿನ ತಹತಹಗಳನ್ನೂ ಈ ಪುಸ್ತಕ ಸೂಕ್ಷ್ಮವಾಗಿ ಹೇಳುತ್ತದೆ. ಲೇಖಕರು ಅವರ ಹಳೆಯ ಕಂಪನಿಯ ಕುರಿತಾಗಿಯೂ, ಕಾರ್ಪೋರೇಟಿನ ಕುರಿತಾಗಿಯೂ ಕೆಲವು ಸಂಗತಿಗಳನ್ನು ಬರೆದಿದ್ದಾರೆ; ಅದು ಅವರು ಈ ಬರೆಹದಲ್ಲಿ ಅದೆಷ್ಟು ಪ್ರಾಮಾಣಿಕರಾಗಿದ್ದರು ಅನ್ನುವುದನ್ನು ಸೂಚಿಸುತ್ತದೆ. 


~`ಶ್ರೀ'

   ತಲಗೇರಿ


ಒಂದೊಳ್ಳೆಯ ಪುಸ್ತಕಕ್ಕಾಗಿ ತಮಗೆ ಧನ್ಯವಾದಗಳು Manjunath Kunigal ಅವರೇ🙏💐

ನೀಲಿ‌ ಬಣ್ಣದ ಸ್ಕಾರ್ಫು


 ನೀಲಿ ಬಣ್ಣದ ಸ್ಕಾರ್ಫು


ಈ ಪುಸ್ತಕದ ಹೆಸರು ಕೇಳಿದ ದಿನದಿಂದ ಇದನ್ನು ಓದಬೇಕು ಅನ್ನುವ ಕುತೂಹಲ ಬಹಳ ಇತ್ತು. ಆದರೆ, ಯಾವುದೇ ಪುಸ್ತಕದ ಹಾರ್ಡ್ ಕಾಪಿ ಖರೀದಿ ಮಾಡುವುದನ್ನು ಬಿಟ್ಟು ೩-೪ ವರ್ಷಗಳಾಗಿದ್ದರಿಂದ ಈ ಪುಸ್ತಕವನ್ನು ಓದುವುದಕ್ಕೆ ಸಾಧ್ಯವಾಗಿರಲಿಲ್ಲ.


ಅನ್ನಿಸಬಹುದು, ಹೆಸರು ಕೇವಲ ಪದಗಳ ಗುಚ್ಛ ಅಂತ. ಆದರೆ, ಕೆಲವು ಹೆಸರುಗಳಿಗೆ ಆಯಸ್ಕಾಂತೀಯ ಗುಣಗಳಿರುತ್ತವೆ. ಹೆಸರುಗಳೇ ಕುತೂಹಲವನ್ನು ಹುಟ್ಟಿಸುತ್ತವೆ. ಅದರಲ್ಲೂ ಸಿನೆಮಾದ, ಪುಸ್ತಕದ, ಲೇಖನದ ಹೆಸರುಗಳಿಗಾಗಿ ಬಹಳಷ್ಟು ತಲೆಕೆಡಿಸಿಕೊಳ್ಳುವುದು ಸಹಜ ಸಂಗತಿ. ಸ್ಕಾರ್ಫಿಗೆ ಫ್ಯಾಷನ್ ಜಗತ್ತಿನಲ್ಲಿ ವಿಶಿಷ್ಟವಾದ ಜಾಗ ಇದೆ. ಅಂಥ ಸ್ಕಾರ್ಫು ಕನ್ನಡದ ಹಳ್ಳಿಯ ಕತೆಯೊಳಗೆ ಸೇರಿಕೊಂಡಿದ್ದು ಒಂದು ಭಿನ್ನ ಪ್ರಪಂಚವನ್ನು ನಮ್ಮೆದುರು ತೆರೆದಿಡುತ್ತದೆ. ಹಿಂದೊಂದು ಕಾಲದಲ್ಲಿ ನೀಲಿ ಬಣ್ಣ ಹೆಣ್ತನದ ಸಂಕೇತವಾಗಿತ್ತಂತೆ ಹಾಗೂ ಗುಲಾಬಿ ಬಣ್ಣ ಪುರುಷರ ಪ್ರತಿನಿಧಿಯಾಗಿತ್ತಂತೆ. ಆದರೆ, ಬಹುಶಃ ಹಿಟ್ಲರಿನ ಕಾಲದಲ್ಲಿ ಈ ಎರಡೂ ಬಣ್ಣಗಳ ಸ್ಥಾನಪಲ್ಲಟವಾಗಿರಬಹುದು ಅಂತ ಒಂದು ವಾದವಿದೆ. ನೀಲಿ ಅನ್ನುವುದು ಆಕಾಶದ ಬಣ್ಣ, ಹಾಗೆಯೇ ಅದನ್ನು ಪ್ರತಿಫಲಿಸುವ ಸಮುದ್ರದ ಬಣ್ಣ. ಅಂದರೆ ಅಗಾಧತೆಯ, ಪ್ರಶಾಂತತೆಯ, ಸ್ಥಿರತೆಯ ಬಣ್ಣ. ಇಲ್ಲಿನ ಕತೆಗಳಲ್ಲಿ ಹೆಣ್ಣು ಮನಸ್ಸಿನೊಳಗೆ ಅಡಿಯಿಡುವ ಪ್ರವೇಶ ದ್ವಾರವಿದೆ. ಅಲ್ಲಿನ ಪ್ರಪಂಚ ಸ್ಥಿರವೋ ಅಸ್ಥಿರವೋ, ಪ್ರಶಾಂತವೋ ಅಥವಾ ಸದಾ ಪ್ರಕ್ಷುಬ್ಧವೋ ಅನ್ನುವುದು ಬೇರೆಯ ಸಂಗತಿ, ಆದರೆ ಅಗಾಧ ಅನ್ನುವುದಂತೂ ಸತ್ಯ. 


ಮೀಡಿಯಾ ಚೆರ್ರಿ ಪ್ರಕಾಶನದ ಚೈತ್ರಿಕಾ ಹೆಗಡೆಯವರ  ಮೊದಲ ಕಥಾ ಸಂಕಲನವಿದು. ಒಂದು ಕಾರ್ಯಕ್ರಮದಲ್ಲಿ ಚೈತ್ರಿಕಾ ಮತ್ತು ಅವರ ಪತಿ ನಾಗರಾಜ ವೈದ್ಯ ಅವರನ್ನು ಭೇಟಿಯಾಗಿದ್ದಾಗ ಈ ಪುಸ್ತಕದ ಇ-ಬುಕ್ ಆವೃತ್ತಿ ಹೊರತರಬಹುದಾ ನೋಡಿ ಅಂತ ವಿನಂತಿಸಿಕೊಂಡಿದ್ದೆ. ಅದಕ್ಕೆ ಸ್ಪಂದಿಸಿದ ಅವರು ಒಂದೆರಡು ವಾರದಲ್ಲೇ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಇ-ಬುಕ್ ಲಭ್ಯವಾಗುವ ಹಾಗೆ ಮಾಡಿದರು. ಕನ್ನಡದ ಇನ್ನಷ್ಟು ಮತ್ತಷ್ಟು ಪುಸ್ತಕಗಳು ಇ-ಪುಸ್ತಕಗಳಾಗಿ ಬರಬೇಕು ಅನ್ನುವುದು ನನ್ನ ಆಸೆ. 


೧೨ ಕತೆಗಳಿರುವ ಈ ಸಂಕಲನದಲ್ಲಿ ಚೈತ್ರಿಕಾ ಅವರು ಕಳೆದ ಪರಿಸರದ ಒಡನಾಟದ ಕತೆಗಳಿವೆ. ಬಹುಶಃ ಎಲ್ಲ ಬರಹಗಾರರ ಶಕ್ತಿಯೂ ಇದೇ. ಜಯಂತ ಕಾಯ್ಕಿಣಿಯವರು ಹೇಳ್ತಾರಲ್ಲಾ, ಬದುಕಿನಿಂದ ಬರಹ ಬರಬೇಕು ಅಂತ, ಹಾಗೆಯೇ ಬರಹಗಾರರ ಸುತ್ತಮುತ್ತಲಿನ ಸಂಗತಿಗಳು ಕತೆಗಳಾಗಿ ಬರಬೇಕು. ಆಗಲೇ, ಅಂಥ‌ ಕತೆಗಳಿಗೆ ಸ್ವಂತಿಕೆಯೂ ನೂತನತೆಯೂ ಸಿಕ್ಕುವುದು. ಕಾಂತಾರದ ಸಮಯದಲ್ಲಿ ರಿಷಭ್ ಶೆಟ್ಟಿಯವರು ಒಂದು ಮಾತನ್ನು ಪದೇ ಪದೇ‌ ಉಲ್ಲೇಖಿಸುತ್ತಿದ್ದರು; "ಹೆಚ್ಚು ಹೆಚ್ಚು ಪ್ರಾದೇಶಿಕವಾದಷ್ಟೂ ಅದು ಜಾಗತಿಕ" ಅಂತ. 


ಇಲ್ಲಿನ ಕತೆಗಳೆಲ್ಲವೂ ಸಹಜವಾದ ಕತೆಗಳು. ಬಹುತೇಕ ಎಲ್ಲಾ ಕತೆಗಳಲ್ಲೂ ಪ್ರೀತಿ, ಮದುವೆ, ಸಂಸಾರ ನನಗೆ ಸಾಮಾನ್ಯ ಅಂಶಗಳಾಗಿ ಕಂಡವು. ಬಹುತೇಕ ಕತೆಗಳಲ್ಲಿ ಬೇರೆ ಬೇರೆ ಪರಿಸರದಲ್ಲಿ ಹುಡುಗ ಮತ್ತು ಹುಡುಗಿಯ ಪ್ರೇಮದ ಬದುಕನ್ನು, ಹೆಣ್ಣಿನ ಸಣ್ಣ ಸಣ್ಣ ಇಚ್ಛೆಗಳನ್ನು ಹುಡುಕುವ, ಆ ಮೂಲಕ ಬದುಕಿನ ಪುಟಗಳನ್ನು ತೆರೆದಿಡುವ ಪ್ರಯತ್ನ ಕಂಡಿತು. ಅದರ ಜೊತೆಗೆ ಉತ್ತರ ಕನ್ನಡದ ನಿತ್ಯದ ಬದುಕಿನ ಶೈಲಿಗಳನ್ನು ಎಲ್ಲಾ ಕತೆಗಳು ಬಹುತೇಕ ತೆರೆದಿಡುತ್ತಾ ಹೋದವು. ಉತ್ತರ ಕನ್ನಡ ಅನ್ನುವ ಜಿಲ್ಲೆಯೊಂದು ಇದೆಯೆಂದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಉತ್ತರ ಕನ್ನಡವೆಂದರೆ ನಾರ್ಥ್ ಕರ್ನಾಟಕಾನಾ ಅಂತಲೋ, ಯಾವಾಗ್ಲೂ ಅಲ್ಲಿ ಬಿಸಿಲು ಜಾಸ್ತಿ ಅಲ್ವಾ ಅಂತಲೋ, ರೊಟ್ಟಿ ಜಾಸ್ತಿ‌ ತಿನ್ನೋದು ಅಲ್ವಾ ಅಂತಲೋ ಕೇಳೋ ಪರಿಸ್ಥಿತಿ ಇರುವಾಗ ಇಂಥ ಉತ್ತರ ಕನ್ನಡಿಗರ ಬದುಕನ್ನು ದಾಖಲಿಸುವ ಕತೆಗಳು‌, ಅದರ ಮೂಲಕ ‌ಅಲ್ಲಿನ ಜನಜೀವನವನ್ನು ಹೊರ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ ಖುಷಿಯಾಗದೇ ಹೋದೀತಾ! ಇಲ್ಲಿನ ಕತೆಗಳಲ್ಲಿ ಈ ಭಾಗದ ಹೆಣ್ಮನಗಳ ಬದುಕಿನ ನೋಟಗಳಿವೆ. ಹೊಂದಾಣಿಕೆಯೆಂಬುದು ಈ ಭಾಗದ ಜನರ ಬಹುಮುಖ್ಯ ಗುಣ, ಅದರಲ್ಲೂ ಇಲ್ಲಿನ ಹೆಣ್ಣುಮಕ್ಕಳಿಗೆ ಅದು ವಿಶೇಷವಾಗಿ ತುಸು ಹೆಚ್ಚೇ ಇರುವ ಸಂಗತಿ. ಜಗತ್ತಿನ ಬಹುತೇಕ ಎಲ್ಲಾ ಹಳ್ಳಿಗಳ ಹೆಣ್ಣುಮಕ್ಕಳ‌ ಕತೆ ಇದೇ ಇರಬಹುದು. ಹೆಚ್ಚಿನ ಆಸೆಗಳಿಲ್ಲದೇ, ಯಾರ ತಂಟೆಗೂ ಹೋಗದೇ, ಊರಿನ ಸಣ್ಣಪುಟ್ಟ ರಾಜಕೀಯ ತಕರಾರುಗಳಷ್ಟರಲ್ಲೇ ಬದುಕು ಸಾಗಿಸುವವರು ಇಲ್ಲಿನ ಜನರು. ಈ ಎಲ್ಲಾ ಸಂಗತಿಗಳನ್ನು ಈ ಕತೆಗಳಲ್ಲಿ ಸ್ಪರ್ಶಿಸಲಾಗಿದೆ.


ಮದುವೆಯೆಂಬುದು ಬಹುದೊಡ್ಡ ಸಂಗತಿ. ಅದರಲ್ಲೂ ಹಳ್ಳಿಗಳಲ್ಲಿ ಮದುವೆಯೆಂಬುದು ಒಂದು ಮಹಾಕನಸು. ಅಂದರೆ, ಮದುವೆಯಾದರೆ, ಬದುಕೊಂದು ಪೂರ್ಣವಾದಂತೆ, ಜವಾಬ್ದಾರಿಗಳು ಮುಗಿದಂತೆ ಅನ್ನುವ ನಂಬಿಕೆಯಿದೆಯಲ್ಲಾ ಅದು ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಈ ಸಂಕಲನದ ಕತೆಗಳಲ್ಲಿನ ಹೆಣ್ಣು ಪಾತ್ರಗಳು ಬಹುತೇಕವಾಗಿ ಮದುವೆಯ ಸುತ್ತಮುತ್ತಲೇ ಕೇಂದ್ರೀಕೃತವಾಗಿರುವುದರಿಂದ ಚೂರು ಭಿನ್ನ ಕತೆಗಳನ್ನು ಕತೆಗಾರ್ತಿಯಿಂದ ಇನ್ನು ಮುಂದೆ ನಿರೀಕ್ಷಿಸಬಹುದು ಅಂದುಕೊಂಡಿದ್ದೇನೆ. ಬೇರೆ ಥರದ ಕತೆಗಳಿದ್ದಿದ್ದರೆ ಹೇಗಿರುತ್ತಿದ್ದವು ಅನ್ನುವ ಕುತೂಹಲವೊಂದು ನನ್ನಲ್ಲಿ ಉಳಿದುಕೊಂಡಿದೆ‌. ಹೊಸ ಕತೆಗಾರ್ತಿಯ ಈ ಪ್ರವೇಶ ಈ ಭಾಗದ ಇನ್ನಷ್ಟು ಕತೆಗಳಿಗೆ, ಬದುಕಿನ ಮತ್ತಷ್ಟು ನೋಟಗಳಿಗೆ ಪ್ರವೇಶ ಒದಗಿಸಲಿ ಅನ್ನುವ ಆಶಯದೊಂದಿಗೆ... 


~`ಶ್ರೀ' 

    ತಲಗೇರಿ

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'

 

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'


ಕೆಲವು ಸಂಗತಿಗಳು ಬಹಳ ವಿಭಿನ್ನವೂ, ವಿಶೇಷವೂ ಆಗಿರುತ್ತವೆ. ಅದರಲ್ಲಿ ಲೇಖಕರು ಹಾಗೂ ಓದುಗರ ನಡುವಿನ ಸಂಬಂಧ ಕೂಡಾ ಹೌದು. ಲೇಖಕರು ತಮ್ಮ ಅದ್ಯಾವುದೋ ಒಂದಷ್ಟು ಗಳಿಗೆಗಳಲ್ಲಿ ಎದುರಾದ ಭಾವ ತೀವ್ರತೆಯನ್ನು ಪದಗಳಲ್ಲಿ ಇಳಿಸಿ, ಅದರ ಭಾರವನ್ನು, ಅದರ ಆಳವನ್ನು, ಅದರ ಹಗುರವನ್ನು, ಅದರ ವೈಶಾಲ್ಯವನ್ನು, ಅದರ ಹಿಂಜರಿಕೆಗಳನ್ನು ಓದುಗರಿಗೆ ದಾಟಿಸಿಬಿಡುತ್ತಾರೆ. ಓದುಗರು ಇನ್ನ್ಯಾವುದೋ ಗಳಿಗೆಗಳಲ್ಲಿ, ಅವರ ಬದುಕಿನ ಅದೆಂಥದ್ದೋ ಕ್ಷಣಗಳಲ್ಲಿ ಇವುಗಳನ್ನು ಓದುವುದಕ್ಕೆ ಶುರುಮಾಡುತ್ತಾರೆ. ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಆಧಾರದ ಮೇಲೆ ಆ ಬರಹಗಳು ಇಷ್ಟವಾಗಬಹುದು, ಅಥವಾ ಇಷ್ಟವಾಗದೇ ಇರಬಹುದು ಕೂಡಾ. ಆದರೆ, ಇಂಥದ್ದೊಂದು ಪ್ರಕ್ರಿಯೆ ಇದೆಯಲ್ಲಾ, ಇದು ಯಾವತ್ತಿಗೂ ಕೊನೆಯಾಗದಿರಲಿ ಅನ್ನುವುದು ಬಹುಶಃ ಎಲ್ಲ‌ ಕಾಲಕ್ಕೂ ಸಲ್ಲಬಹುದಾದ ಪ್ರಾರ್ಥನೆ ಅನ್ನಿಸುತ್ತದೆ. ನಾನು ಓದುವ ಪುಸ್ತಕಗಳ ಲೇಖಕರಿಂದ ಯಾವತ್ತೂ ದೂರ ಇರುವುದಕ್ಕೆ ಬಯಸುವವನು, ಅದು ಎಷ್ಟು ಸರಿ ಅಥವಾ ತಪ್ಪು, ಅದರಿಂದ ನನಗಾಗುವ ನಷ್ಟಗಳೇನು ಅನ್ನುವುದು ಬೇರೆ ಮಾತು. ಅಜ್ಞಾತ ಓದುಗರ ಕುರಿತಾಗಿ ನನಗಿರುವ ಸೆಳೆತವೂ ಇದಕ್ಕೆ ಕಾರಣವಿರಬಹುದು. ಆದರೂ, ಕೆಲವೊಮ್ಮೆ ಓದುಗರು ಮತ್ತು ಲೇಖಕರು ಒಂದೇ ಹಾದಿಯಲ್ಲಿ ಮತ್ತೆ ಮತ್ತೆ ಭೇಟಿಯಾಗುತ್ತಲೇ ಇರುತ್ತಾರೆ ಅಪರಿಚಿತರಾಗಿಯೂ! ಅಂಥ ಒಂದು ಸಂದರ್ಭ ನನಗೆ ಅಬ್ದುಲ್ ರಶೀದರ ಜೊತೆ ನೆನಪಿದೆ. ಕನ್ನಡದ ಹೆಸರಾಂತ ಲೇಖಕರೊಬ್ಬರು ಇಹಲೋಕ ತ್ಯಜಿಸಿದ ದಿನ ಅವರ ಕುರಿತಾಗಿ ಲೇಖನ ಬರೆದುಕೊಡುವಂತೆ ಒಂದು ಪತ್ರಿಕೆಯಿಂದ ಕರೆಬಂದಿತ್ತು. ಅಬ್ದುಲ್ ರಶೀದರು ನನ್ನನ್ನು ಕೇಳುವಂತೆ ಹೇಳಿದರೆಂದು ಕರೆ‌ ಮಾಡಿದವರು ಹೇಳಿದ್ದರು. ಆ ಕರೆ ಇನ್ನೊಬ್ಬ ಹಿರಿಯ ಲೇಖಕರಿಗೆ ಹೋಗುವ ಬದಲಾಗಿ ನನಗೆ ಬಂದಿತ್ತೆಂದು ಇವತ್ತಿಗೂ ನನ್ನ ನಂಬಿಕೆ. ಯಾಕೆಂದರೆ, ನಾನು ಅಬ್ದುಲ್ ರಶೀದರೊಂದಿಗೆ ಯಾವತ್ತೂ ಮಾತನಾಡಿದ್ದಿಲ್ಲ. ಅವರಿಗೆ ನನ್ನ ಪರಿಚಯವೂ ಇರಲಿಕ್ಕಿಲ್ಲ. ಆದರೆ, ಇಂಥ ಗಳಿಗೆಗಳು ಬಹಳ ವಿಶಿಷ್ಟವಾದವು ಅಂತ ನನಗನಿಸುತ್ತದೆ. ಅಬ್ದುಲ್ ರಶೀದರ ಬಹಳಷ್ಟು ಪುಸ್ತಕಗಳನ್ನು ನಾನು ಓದಿಲ್ಲ. ಕೆಲವೊಂದನ್ನು ಓದಿದ್ದೇನೆ, ಇನ್ನು ಕೆಲವನ್ನು ಓದುತ್ತಲೇ ಇದ್ದೇನೆ, ಅರ್ಧ ಓದಿದ್ದೇನೆ, ಕೆಲವಷ್ಟನ್ನು ಓದುವುದಕ್ಕೆ ನಾನಿನ್ನೂ ತಯಾರಾಗಿಲ್ಲ ಅನ್ನುವ ಕಾರಣಕ್ಕೆ ಮುಂದೂಡಿದ್ದೇನೆ. ಅದರಲ್ಲಿ ಕೆಲವು ಪುಸ್ತಕಗಳು 'ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್' ಅನ್ನುವ ಕಥಾ ಸಂಕಲನ,  'ಹೂವಿನ ಕೊಲ್ಲಿ' ಅನ್ನುವ ಅವರ ಚೊಚ್ಚಲ ಕಾದಂಬರಿ, ಅಂಕಣ ಬರಹಗಳ ಸಂಗ್ರಹವಾದ 'ಕಾಲು ಚಕ್ರ' ಹಾಗೂ ಈಗ ಮಾತನಾಡುತ್ತಿರುವ ಪುಸ್ತಕ 'ಮೈಸೂರ್ ಪೋಸ್ಟ್' ಅನ್ನುವ ಅಂಕಣ ಬರಹಗಳ ಸಂಗ್ರಹ. ಹೀಗೆ ಅವರ ಹತ್ತಿರ ಇಷ್ಟು ಓದಲಿಲ್ಲ ಇನ್ನೂ ಅಂತಂದರೆ, ಒಳ್ಳೇ‌ ಕೆಲಸ ಮಾಡಿದೀಯಾ, ಓದಬೇಡ! ಅಂತ ಅಂದರೂ ಅನ್ನಬಹುದು ಎನ್ನುವ ಎಲ್ಲ ನಂಬಿಕೆಗಳೂ ನನಗಿವೆ! 


ಅಬ್ದುಲ್ ರಶೀದರ ಕುರಿತಾಗಿ ಚೆಂದದ ಸಂಗತಿಗಳನ್ನು ಕೇಳಿದ್ದು ಬಹಳ, ಹಾಗೆಯೇ ಅವರ ಮಾತುಗಳನ್ನೂ ಕೇಳಿದ್ದೇನೆ ಯುಟ್ಯೂಬ್ ಅಲ್ಲಿ ಬಹಳ ಸಲ. ಅವರದೇ ಒಂದು ಪುಸ್ತಕದ ಹೆಸರು ‌ಹೇಳುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುತ್ತಾರೇನೋ ಅನ್ನಿಸಿದರೆ ಅದು ಅತಿಶಯೋಕ್ತಿ ಅಲ್ಲ ಅಂತಲೂ ಅನ್ನಿಸುತ್ತದೆ. ಅದು ಅವರ ಬರಹಗಳಲ್ಲಿಯೂ, ಅದರ ವೈವಿಧ್ಯತೆಗಳಲ್ಲಿಯೂ ಕಾಣಸಿಗುತ್ತದೆ. ಇಂಥ ತಿರುಗಾಟ ಬಹುಶಃ ಕೆಲವರಿಂದ ಮಾತ್ರ ಸಾಧ್ಯ. ಅಬ್ದುಲ್ ರಶೀದರಂಥವರು, ಡಾ. ಬ್ರೋ (ಗಗನ್ ಶ್ರೀನಿವಾಸ್ ) ಥರದಂಥವರು ಇಂಥ ಬದುಕನ್ನು ಹಾಗೂ ಅಲ್ಲಿನ ಕತೆಗಳನ್ನು ಹೇಳಬಲ್ಲರು. ಮಲೆಯಾಳಂನ ಒಂದು ಚಿತ್ರ 'ಚಾರ್ಲಿ' ಇಂಥದ್ದೇ ಕಾರಣಗಳಿಗಾಗಿ ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ತನ್ನತ್ತ ಕರೆಸಿಕೊಳ್ಳುವ ಚಿತ್ರ. ಸದಾ ಓಡಾಟ, ಒಡನಾಟ, ಜನರಲ್ಲಿ ಬೆರೆಯುವಿಕೆ ಇರುವ ಅಬ್ದುಲ್ ರಶೀದರ ಬರಹಗಳಲ್ಲಿ ಕೂಡಾ ಈ ಎಲ್ಲಾ ಭೇಟಿಗಳ, ಕ್ಷಣಗಳ, ವಿಷಯಗಳ ನೆರಳಿದೆ. ಹೀಗೆ ಅವರು ಭೇಟಿಯಾದ ಅಥವಾ ಯಾವುದೋ ಒಂದು ಹೆಸರಿಲ್ಲದ ಭೇಟಿಗಳಲ್ಲಿ ಸಿಕ್ಕವರ ಕಥನಗಳ ಸಂಗ್ರಹವೇ 'ಮೈಸೂರ್ ಪೋಸ್ಟ್'. ಸ್ವತಃ ಛಾಯಾಗ್ರಾಹಕರೂ ಆಗಿರುವ ಅಬ್ದುಲ್ ರಶೀದರೇ ತೆಗೆದ ಛಾಯಾಚಿತ್ರಗಳೂ ಇಲ್ಲಿವೆ. ಈ ಪುಸ್ತಕದ ಉಪಶೀರ್ಷಿಕೆ 'ಅರಮನೆ ನಗರಿಯ ಉಳಿದ ಚಿತ್ರಗಳು'. ಈ ಪುಸ್ತಕದಲ್ಲಿರುವ ಕಥನಗಳು ಸಾಮಾನ್ಯ ಜನರ, ಯಾರ ಗಮನಕ್ಕೂ ಬಾರದೇ ಬದುಕುವವರ, ಅಥವಾ ಅಸಾಮಾನ್ಯರಾಗಬೇಕಾಗಿಯೂ ಸಾಮಾನ್ಯರಂತಾದವರದ್ದೇ ಆಗಿವೆ. ಬೇರೆ ಬೇರೆ ಬದುಕಿನ ತುಣುಕುಗಳನ್ನು ಇಲ್ಲಿ ಅಬ್ದುಲ್ ರಶೀದರು ತೆರೆದಿಟ್ಟಿದ್ದಾರೆ. ಈ ಎಲ್ಲಾ ತುಣುಕುಗಳನ್ನು ಒಟ್ಟಗೂಡಿಸಿಕೊಂಡು ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಳ್ಳಬೇಕೋ ಅಥವಾ ಎಲ್ಲವನ್ನೂ ಬಿಡಿಬಿಡಿಯಾಗಿಯೇ ಇಟ್ಟು, ಸ್ವತಂತ್ರವಾಗಿಯೇ ನೋಡಿ, ಸುಮ್ಮನೆ ಇದ್ದುಬಿಡಬೇಕಾ ಅನ್ನುವುದು ಓದುಗರಿಗೆ ಬಿಟ್ಟಿದ್ದು ಅನಿಸುತ್ತದೆ. 


ಲೇಖಕರ ಮಾತಿನಲ್ಲಿ ಲೇಖಕರು ಕೆಲವು ಬಹಳ ಅಗತ್ಯವಾದ ಹಾಗೂ ಹೇಳಲೇಬೇಕಾದ ಸಂಗತಿಗಳನ್ನು ಹೇಳಿದ್ದಾರೆ. "ಕಥೆ ಬರೆಯಲು ನೆನಪುಗಳು ಬೇಕಂತೆ, ಕವಿತೆಗಳಿಗೆ ಪ್ರತಿಮೆಗಳು ಬೇಕಂತೆ" ಇದು ಲೇಖಕರ ಒಂದು ಮಾತು. ನೆನಪುಗಳ ಬಣ್ಣ ವೈವಿಧ್ಯಮಯವಾದಷ್ಟೂ ಕತೆಯ ಸೊಗಡು ಹೆಚ್ಚುತ್ತದೆ ಅನ್ನುವುದು ಬಹುಶಃ ನಮ್ಮೆಲ್ಲಾ ಲೇಖಕರಿಗೆ, ಕತೆಗಾರರಿಗೆ, ಒಟ್ಟಾರೆ ಮನುಷ್ಯ ಕುಲಕ್ಕೆ ಅರಿವಾಗಬೇಕಾದ ವಿಚಾರ. ಹಾಗೆ ನೆನಪುಗಳ ಹರವು ದೊಡ್ಡದಾಗಬೇಕೆಂದರೆ ಬಹುಶಃ ಅಂಥ ಬದುಕನ್ನು ಬದುಕಬೇಕು.  ಅಂಥ ಬದುಕಿನ ಒಂದಷ್ಟು ಭೇಟಿಗಳ, ಅದರಲ್ಲಿ ಇದಿರಾದ ವ್ಯಕ್ತಿತ್ವಗಳ, ಸಹಸ್ರ ಸಹಸ್ರ ಕೋಟಿ ಜೀವಾಣುಗಳ ಮಧ್ಯದ ಕೆಲವೇ ಕೆಲವು ಹೋರಾಟಗಳ, ತೊಳಲಾಟಗಳ, ಎಲ್ಲಿಯೂ ಯಾವ ಪತ್ರಿಕೆ,‌ಮಾಧ್ಯಮಗಳಲ್ಲಿಯೂ ದಿನನಿತ್ಯ ತಲೆಬರಹಗಳಾಗದವರ, ನಮಗ್ಯಾರಿಗೂ ಬಹುಶಃ ಸಂಬಂಧವೇ ಇರದ ಚಿತ್ರಣಗಳು ಇಲ್ಲಿವೆ. ಲೇಖಕರು ತಮ್ಮ ಮಾತಿನಲ್ಲಿ ಮುಂದುವರೆದು ಹೇಳುತ್ತಾರೆ "ನಾನು ಬರೆಯಲೋಸುಗ ಇವರೆಲ್ಲಾ ನೆಪದಂತೆ ಆಗಿಬಿಟ್ಟರಲ್ಲಾ ಅಂತ". ಇಂಥದ್ದೊಂದು ಪ್ರಜ್ಞೆ ಹಾಗೂ ಅವಲೋಕನ ನಿಜವಾದ ಬರಹಗಾರರಿಗೂ, ಛಾಯಾಗ್ರಾಹಕರಿಗೂ ಆಗಾಗ ಕಾಣಿಸಿಕೊಳ್ಳಬೇಕು. ನಮಗೆ ಬರಹಕ್ಕೆ ವಸ್ತು ಸಿಗಬಹುದು, ನಮಗೆ ಒಂದು ಅದ್ಭುತವಾದ ಚಿತ್ರವೊಂದು ಆ ಕ್ಷಣಕ್ಕೆ ಸಿಗಬಹುದು. ಆದರೆ, ನಮ್ಮ ವಸ್ತುವಾದ ಅವರಿಗೆ ಸಿಕ್ಕಿದ್ದಾದರೂ ಏನು? ಅನ್ನುವ ಪ್ರಶ್ನೆ ಒಂದು ಸಲ ಹುಟ್ಟಿಕೊಂಡರೆ ಅದು ಬಹಳಷ್ಟು ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ. ಜೊತೆಗೆ, ನಮ್ಮ ಬರಹಗಳಲ್ಲಿ, ಛಾಯಾಚಿತ್ರಗಳಲ್ಲಿ ಬರುವ ವ್ಯಕ್ತಿತ್ವಗಳ ಕುರಿತಾಗಿ ನಾವು ಸದಾ ಕಾಲ ಜಾಗೃತರೂ, ಜಾಗರೂಕರೂ ಆಗಿರುವ ಹಾಗೆ ನಮ್ಮನ್ನು ಈ ಪ್ರಶ್ನೆ ಎಚ್ಚರಿಸುತ್ತದೆ. ಎಲ್ಲಕ್ಕಿಂತ ಮೊದಲು ಸಹಜವಾದ ಮನುಷ್ಯರಾಗಬೇಕಲ್ಲವಾ! ಆದರೆ, ಇಂಥ ಕತೆಗಳನ್ನು ಬಹಳ ಗೌರವಪೂರ್ಣವಾಗಿಯೂ, ಯಾವ ಕಲ್ಮಶಗಳಿಲ್ಲದೇ, ಅಭಿಪ್ರಾಯಗಳಿಲ್ಲದೇ, ಅಲಂಕಾರಗಳಿಲ್ಲದೇ ಹೇಗಿದೆಯೋ ಹಾಗೆ ಇಡುವುದೂ ಬರಹಗಾರರ, ಛಾಯಾಗ್ರಾಹಕರ ಜವಾಬ್ದಾರಿ. ಅಬ್ದುಲ್ ರಶೀದರ ಈ ಪುಸ್ತಕ ಓದಿದಾಗ ಅಂಥದ್ದೊಂದು ಜವಾಬ್ದಾರಿಯ ಸೂಕ್ಷ್ಮತೆಯೂ, ಅವರು ಅದನ್ನು ನಿರ್ವಹಿಸಿದ ರೀತಿಯೂ ಬಹಳ ಖುಷಿ ಕೊಡುತ್ತದೆ. 


ಕೆಲವೊಮ್ಮೆ ಇಲ್ಲಿನ ಬರಹಗಳು ಕತೆಯ ಅರ್ಧಕ್ಕೆ ಎದ್ದು ನಡೆದ ಹಾಗೆ ಗೋಚರಿಸುತ್ತವೆ. ಇನ್ನೇನೋ ಗಹನವಾದದ್ದು ಶುರುವಾಗುತ್ತದೆ ಅನ್ನುವಾಗ, ಏನೂ ಇಲ್ಲವೆಂಬಂತೆ ನಿರಾಯಾಸವಾಗಿ ಮುಗಿದುಹೋಗುತ್ತದೆ, ಇಷ್ಟು ಹೊತ್ತು ಹೇಳಿದ್ದು ಏನೂ ಅಲ್ಲ, ಅದು ಇಷ್ಟೇ ಅನ್ನುವಂತೆ ಅಪೂರ್ಣವಾಗಿಬಿಡುತ್ತದೆ. ಮೊದಮೊದಲ ಬರಹಗಳಲ್ಲಿ ಇದು ಚೂರು " ಅರೇ, ಇದೇನಿದು!" ಅಂತ ಅನ್ನಿಸುವ ಹಾಗೆ ಮಾಡಿದರೂ, ಆಮೇಲೆ "ಬಹುಶಃ ಬದುಕು ಕೂಡಾ ಹೀಗೆಯೇ" ಅನ್ನಿಸುವಷ್ಟರ ಮಟ್ಟಿಗೆ ಹೊಂದಿಕೊಂಡೆ. 


ಖುಷಿಯ ವಿಷಯವೆಂದರೆ, ಬಹಳಷ್ಟು ಬರಹಗಾರರು, ಪ್ರಕಾಶಕರು ಇ-ಪುಸ್ತಕಗಳನ್ನು ಮಾಡಲು ಅದ್ಯಾಕೋ ಇನ್ನೂ ಹಿಂಜರಿಯುತ್ತಲೇ ಇರುವ ಸಂದರ್ಭದಲ್ಲಿ ಅಬ್ದುಲ್ ರಶೀದರ ಈ ಎಲ್ಲಾ ಪುಸ್ತಕಗಳು ಇ-ಪುಸ್ತಕಗಳಾಗಿ ಋತುಮಾನ, ಗೂಗಲ್ ಪ್ಲೇ ಬುಕ್ಸ್ ಗಳಲ್ಲಿ ಲಭ್ಯ. 


ಯಾವ ನಿರೀಕ್ಷೆಯೂ ಇರದೇ, ಯಾವ ಪೂರ್ವಾಲೋಚನೆಗಳೂ ಇಲ್ಲದೇ, ಬೇರೆ ಬೇರೆ ಬದುಕುಗಳಲ್ಲಿ ನಿರ್ಭಾವುಕರಾಗಿ ಒಂದೊಮ್ಮೆ ಇಣುಕಿ ಅಲ್ಲಿಂದ ನಮ್ಮ ಬದುಕನ್ನು ಇನ್ನಷ್ಟು ಸರಳೀಕರಿಸಿಕೊಳ್ಳಬಹುದು ಅಥವಾ ಇನ್ನಷ್ಟು ಸಂಭ್ರಮಿಸಬಹುದು ಅಂತಾದಲ್ಲಿ 'ಮೈಸೂರ್ ಪೋಸ್ಟ್' ಅನ್ನು ಒಮ್ಮೆ ತೆರೆದು ನೋಡಿ. 


ಧನ್ಯವಾದಗಳು Abdul Rasheed  ಸರ್ ಹಾಗೂ ಋತುಮಾನದ Kuntady Nithesh  ಅವ್ರೇ ಈ ಎಲ್ಲಾ ಇ-ಪುಸ್ತಕಗಳಿಗಾಗಿ ✨🙏


~`ಶ್ರೀ'

 ‌  ತಲಗೇರಿ

ಸ್ವಾತಿ‌ ಮುತ್ತಿನ ಮಳೆಯ ಗಂಧ

 

ಸ್ವಾತಿ‌ ಮುತ್ತಿನ ಮಳೆಯ ಗಂಧ


ನಾನು ನನ್ನ ಹೆಸರಲ್ಲ, ನಾನು ನನ್ನ ದೇಹವಲ್ಲ, ನಾನು ನನ್ನ ಆಸ್ತಿ, ಮನೆ, ಸಂಸಾರವಲ್ಲ. ಹಾಗಾದರೆ ನಾನು ಯಾರು ಅನ್ನುವ ಪ್ರಶ್ನೆಗೆ ಈಗಾಗಲೇ ನಮ್ಮ ಪೂರ್ವಜರು ಉತ್ತರವನ್ನು ಕಂಡುಕೊಂಡು ಅದನ್ನು ನಮಗೂ ಬಿಟ್ಟುಹೋಗಿದ್ದಾರೆ. ತೆಗೆದುಕೊಂಡು ಹೋಗುವುದಾದರೂ ಏನನ್ನು, ಬಿಟ್ಟುಹೋಗದೇ! ಆದರೂ, ಸಹಸ್ರ ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿರುವ 'ನಾನು' ಅನ್ನುವುದರ ಅರಿವು ನಮಗ್ಯಾರಿಗೂ ಇರುವುದಿಲ್ಲ. ಅದು ಮರೆತುಹೋಗುವಂತೆ ಬಹುಶಃ ವರವೋ ಶಾಪವೋ ಏನೋ ಒಂದು ಇರಬೇಕು. ನಶ್ವರದ ಅರಿವು ಮರೆಯಬೇಕು, ನಾವೆಲ್ಲಾ ಮೆರೆಯಬೇಕು, ಕೊನೆಗೊಂದು ದಿನ ಏನಾಯಿತು ಅನ್ನುವುದರ ಅರಿವೂ ನಮಗೆ ಆಗದ ಹಾಗೆ ನಾವು 'ಇನ್ನಿಲ್ಲ'ವಾಗುತ್ತೇವೆ. ಆದರೆ, ಅಲ್ಲಿಯವರೆಗೂ ನಾವು ಹೇಗೆಲ್ಲಾ, ಏನೆಲ್ಲಾ 'ಸಂಪಾದಿಸಬಹುದು' ಅಥವಾ ಏನೇನನ್ನೆಲ್ಲಾ ಅಂಟಿಸಿಕೊಳ್ಳಬಹುದು ಅಂತಂದುಕೊಳ್ಳುತ್ತಾ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಧರ್ಮಾರ್ಥ ಕಾಮಗಳ ಆಚರಣೆಗಳಿಂದಲೇ ಮೋಕ್ಷಕ್ಕೆ ದಾರಿಯಾಗುತ್ತದೆ ಅನ್ನುವುದನ್ನು ಹೇಗೆ ಅರ್ಥೈಸಿಕೊಳ್ಳಬಾರದೋ ಹಾಗೆ ಅದನ್ನು ಅರ್ಥೈಸಿಕೊಂಡು ಶಾಶ್ವತದ ಪರಿಕಲ್ಪನೆಯಲ್ಲಿ ವಿಜೃಂಭಿಸುತ್ತೇವೆ. ಅದೆಷ್ಟೋ ತಲೆಮಾರುಗಳು ಕಳೆದಿವೆ, ಅದೆಷ್ಟೋ ಮನುಷ್ಯ ದೇಹಗಳು ಸುಟ್ಟಿವೆ, ಹೂಳಲ್ಪಟ್ಟಿವೆ, ಇನ್ನು ಕೆಲವಷ್ಟು ಸಂರಕ್ಷಿಸಲ್ಪಟ್ಟಿವೆ. ಆದರೆ, 'ನಾನು' ಅನ್ನಿಸಿಕೊಳ್ಳುತ್ತಿದ್ದ ಜೀವವೊಂದು ಅಲ್ಲಿಲ್ಲವೇ ಇಲ್ಲ. ಆದರೆ, ಒಂದೊಮ್ಮೆ ಸಾವು ಎದುರಿಗೇ ಇದೆ ಅಂತಾದಲ್ಲಿ, ಸಮೀಪಿಸುತ್ತಿರುವ ಆ ಸಾವಿನ ಅರಿವಿದೆ ಅಂತಾದಲ್ಲಿ, ಮನುಷ್ಯರು ಹೇಗೆಲ್ಲಾ ವರ್ತಿಸಬಹುದು, ಅಂಥ ಸಂದರ್ಭಗಳಲ್ಲಿ ಅವರಿಗಿರುವ ಆಲೋಚನೆಗಳೇನು ಅನ್ನುವುದನ್ನು ಹೇಳುತ್ತಾ ಸಾವಿಗೆ ಹೇಗೆ ತಯಾರಾಗಬೇಕು ಅಥವಾ ಹೇಗೆ ತಯಾರಾದರೆ ಚೆಂದ ಅನ್ನುವುದನ್ನು ಹೇಳುವ ಸಿನೆಮಾ ರಾಜ್ ಬಿ ಶೆಟ್ಟಿ ಅವರ 'ಸ್ವಾತಿ ಮುತ್ತಿನ ಮಳೆ ಹನಿಯೇ' 


"ಮೆಲ್ಲಗೆ ಧ್ಯಾನಿಸು" ಹಾಡಿನಲ್ಲಿ ಒಂದು ಸಾಲು ಬರುತ್ತದೆ; 'ಹಗುರಾದೆ ನಾನು ಈಗ ರೆಕ್ಕೆ ಬಲಿತಂತೆ'. ರೆಕ್ಕೆ ಬಲಿತಾಗ ಹಕ್ಕಿಗೆ ಅದರ ದೇಹ ಭಾರವಲ್ಲ, ಅದು ಆರಾಮಾಗಿ ಗಾಳಿಯಲ್ಲಿ ತೇಲುತ್ತಾ ಹಾರುತ್ತದೆ. ಆದರೆ, ಮನುಷ್ಯರ ವಿಷಯದಲ್ಲಿ, ಆಯಸ್ಸು 'ಬಲಿತಾಗ' ದೇಹ ಭಾರವಾಗುತ್ತದೆ, ಕೆಲವೊಮ್ಮೆ ಸಂಸಾರದ ಮನಸ್ಸು ಭಾರವಾಗುತ್ತದೆ. ಆದರೆ ಇನ್ನೇನೋ ಒಂದು ಗೊತ್ತೂ ಆಗದ ಹಾಗೆ ಹಾರಿಹೋಗುತ್ತದೆ. ಅದನ್ನು ಹಲವರು ಪ್ರಾಣಪಕ್ಷಿಯೆಂದೂ, ಆತ್ಮವೆಂದೂ, ಜೀವವೆಂದೂ ಕರೆಯುತ್ತಾರೆ. ಅದೆಷ್ಟು ಹಗುರ; ಕೆಲವೊಮ್ಮೆ ಭೂಮಿಗೂ! ಈ ಸಿನೆಮಾದಲ್ಲಿ ಮೌನಕ್ಕೆ ಹೇಗೆ ಜಾಗವಿದೆಯೋ, ಹಾಗೆಯೇ ಸದ್ದಿಗೂ ವಿಶೇಷ ಸ್ಥಾನವಿದೆ. ನಿತ್ಯದ ಏಕತಾನತೆಯನ್ನು ಹೇಳಲೆಂದೇ ಒಂದು ಸದ್ದಿದೆ ಹಾಗೂ ಆ ಏಕತಾನತೆಯನ್ನು ಮುರಿಯುವುದಕ್ಕೂ ಒಂದು ಸದ್ದಿದೆ. ಸಾಯುವುದಕ್ಕೆ ಕೆಲವೇ ದಿನ ಇರುವವರು ಬಂದು ಸೇರುವ ಜಾಗದಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿರುವವರಿಗೆ ಎಲ್ಲರ ನೋವನ್ನು ನಿತ್ಯವೂ ನೋಡಿ ಅಭ್ಯಾಸವಾಗಿರುವಾಗ, ಇನ್ನೊಂದು ರೋಗಿ ಬಂದಾಗಲೂ ಅಂಥದ್ದೇ ಒಂದು ನಿರೀಕ್ಷೆಯಿರುತ್ತದೆ ಅಥವಾ ಅಂಥ ಯಾವ ನಿರೀಕ್ಷೆಯೂ ಇರದೇ, ಅದು ಸಹಜವಾಗಿರುತ್ತದೆ. ಆದರೆ, ಮೊದಲ ಭೇಟಿಯಲ್ಲಿ ಏಕತಾನತೆಯನ್ನು ಮುರಿಯುವ ಒಂದು ಸದ್ದಿದೆ.‌ ನಿರೀಕ್ಷೆಗಳ ಹಾಗೂ ಬದುಕಿನ ಅಂದಾಜನ್ನೇ ಪಲ್ಲಟಗೊಳಿಸುವ ಒಂದು ಸದ್ದಿದೆ. ನಿರ್ದೇಶಕರು ಆ ಸನ್ನಿವೇಶವನ್ನು‌ ಹಾಗೂ ಕ್ಷಣದ ಬದಲಾವಣೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. 


ಸಾವು ಅಂದ ಮೇಲೆ ಹೂವಿರಲೇಬೇಕಲ್ಲ! ಈ ಸಿನೆಮಾದಲ್ಲೂ ಹೂವಿದೆ. ನಂದಿಬಟ್ಟಲು ಹೂವು ಬಹಳ ಮುಖ್ಯವಾದ ಪಾತ್ರವಾಗಿ ಇಡೀ ಸಿನೆಮಾದುದ್ದಕ್ಕೂ ಇರುತ್ತದೆ. ಇಂಥದಕ್ಕೇ ಬಹುಶಃ ನಾವು ಕಾವ್ಯ ಅನ್ನುತ್ತೇವೆ. ಹಾಗೆಯೇ ರಾಜ್ ಅವರು ಬಹಳ ಚೆಂದಕ್ಕೆ ಕವಿತೆ ಓದಬಲ್ಲರು ಅನ್ನುವುದನ್ನು ಒಂದಷ್ಟು ವರ್ಷಗಳ ಹಿಂದೆಯೇ ಕೇಳಿಸಿಕೊಂಡಿದ್ದ ನನಗೆ, ಈ ಸಿನೆಮಾದಲ್ಲಿ ಒಂದು ಬಹಳ ಚೆಂದದ‌‌ ಕವಿತೆ ಇದ್ದಿದ್ದು ಈ ಸಿನೆಮಾಕ್ಕೊಂದು ಧ್ಯಾನಸ್ಥ ಸ್ಥಿತಿಯನ್ನು ತಂದುಕೊಡುತ್ತದೆ ಅನಿಸಿತು. ಉದುರಿಹೋಗುವುದು ಎಲ್ಲಾ ಹೂವಿನ ಅಥವಾ ಇಡೀ ಜೀವಕುಲದ ಲಕ್ಷಣ. ಉದುರುವ ಕಾಲದ ಮಾಪನ‌ ಬೇರೆ ಬೇರೆಯಷ್ಟೇ. ಈ ಸಿನೆಮಾ ನೋಡಿದ ಬಳಿಕ ನಂದಿಬಟ್ಟಲನ್ನು ನಾವು ಬೇರೆಯದೇ ರೀತಿಯಲ್ಲಿ ಗಮನಿಸುತ್ತೇವೆ ಹಾಗೂ ಗ್ರಹಿಸುತ್ತೇವೆ ಅನ್ನುವ ಸಣ್ಣ ನಂಬಿಕೆ ನನ್ನದು. ಇನ್ನೂ ಒಂದು ಸಂಗತಿಯೆಂದರೆ ನಂದಿಬಟ್ಟಲು ಹೂವಿರುವವರೆಗೂ ಈ ಸಿನೆಮಾ ನೋಡಿದವರಿಗೆ ಈ ಸಿನೆಮಾದ ನೆನಪು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ. ಅದು ಸಿನೆಮಾದ, ನಿರ್ದೇಶಕರ ಜಾಣ್ಮೆ. ನನಗೆ ನಂದಿಬಟ್ಟಲು ಹೂವಿನ ಸಂಗತಿ ಬಂದಾಗ, 'ಅಕ್ಟೋಬರ್' ಸಿನೆಮಾದ ನೆನಪಾಯಿತು. ಎರಡರ ಕತೆಯೂ ಬೇರೆ. ಆದರೆ, ತಳಹದಿ ಒಂದೇ! ರಾಜ್ ಅವರು ಶುದ್ಧ ಮನುಷ್ಯನಾಗುವುದರ ಕುರಿತಾಗಿಯೂ ಆಗಾಗ ಮಾತಾಡುತ್ತಿರುತ್ತಾರೆ, ಅದು ಕೂಡಾ ಈ ಚಿತ್ರದ ಕತೆಗೆ ಜೀವಾಳ. 


ಈ ಸಿನೆಮಾ ಬೇಗ ಮುಗಿದುಹೋಗುತ್ತದೆ. ಇದನ್ನು ಎರಡು ರೀತಿಯಲ್ಲಿ ಸ್ವೀಕರಿಸಬಹುದು ಅಂತ ನನಗನ್ನಿಸಿತು. ಒಂದು, ಮೊದಲೇ ಸಾವಿನ ಗಾಢತೆ ಬಹಳ ಭಾರ, ಅದು ಅಚ್ಚೊತ್ತುವ ಮೊದಲೇ‌ ಸಿನೆಮಾ ಮುಗಿಯುತ್ತದೆ, ಸಾವಿನಲ್ಲೇ ಕಾಡುತ್ತಾ ಅಲ್ಲಲ್ಲೇ ಸುತ್ತುವುದಿಲ್ಲ. ಇದು ಕತೆ ಅಷ್ಟು ಗಾಢವಾಗಿ ತಟ್ಟದೇ ಹೋಗಬಹುದು ಅನ್ನುವುದು ಒಂದು ಕಡೆಯಾದರೆ, ಇನ್ನೊಂದು ಕೂಡಾ ಅಷ್ಟೇ ವಿಶಿಷ್ಟವಾಗಿ ಕಂಡಿತು. ಸಿನೆಮಾದ ಹಾಗೆಯೇ ನೋಡುನೋಡುತ್ತಿದ್ದಂತೆಯೇ ಬದುಕು ಮುಗಿದುಹೋಗುತ್ತದೆ; ಬಹಳ ಚಿಕ್ಕದು. ನಮ್ಮ ಬದುಕು ಇಲ್ಲಿನ ಮನಸ್ಸುಗಳಲ್ಲಿ ದಾಖಲಾಗುವುದರೊಳಗಾಗಿಯೇ ನಾವು ಹೊರಟಾಗಿರುತ್ತದೆ. ಹಾಗಾಗಿ ಈ ಸಿನೆಮಾದ ಒಟ್ಟು ಅವಧಿಯನ್ನು ಹೇಗೆ ಬೇಕಾದರೂ ಪರಿಗಣಿಸಬಹುದು. ಆದರೆ, ಸಿನೆಮಾ ಸಣ್ಣದು ಅಂದ ಮಾತ್ರಕ್ಕೆ ಸಿನೆಮಾದ ಸಂಗತಿ ಸಣ್ಣದಲ್ಲ.‌ ಸಿನೆಮಾ ಮುಗಿದ ಮೇಲೆ‌ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಸಿನೆಮಾವಾಗಿ ಅಷ್ಟು ಮಾಡಿದರೆ ಸಾಕು. ಇನ್ನೇನೋ ಬೇಕಿತ್ತು ಅನಿಸಿತು, ಆದರೆ, ಬಹಳಷ್ಟನ್ನು ಹೇಳಿದ್ದಾರಲ್ಲಾ ಅಂತ ಕೂಡಾ ಅನಿಸಿತು. 


ಇನ್ನು ಸಿರಿಯವರು ಯಾಕೆ ಹಾಗೆ 'ಕಾಣುತ್ತಾರೆ' ಅಂತ ಯೋಚಿಸುತ್ತಿದ್ದ ನನಗೆ ಉತ್ತರ ಸಿನೆಮಾದಲ್ಲಿ ಸಿಕ್ಕಿತು. ನನ್ನ ಪ್ರಶ್ನೆಯನ್ನೇ ಸಿನೆಮಾದ ಇನ್ನೊಂದು ಪಾತ್ರವೂ ಕೇಳುತ್ತದೆ. ಅದು ಸಿರಿಯವರ ಪಾತ್ರದ ಪ್ರಸ್ತುತಿಗೆ ಕೊಟ್ಟ ಮಹತ್ವ. ಸಾಯುವುದನ್ನು ನೋಡುವುದು, ಅಥವಾ ಸಾಯುವವರನ್ನು ತಯಾರುಮಾಡುವುದೇ ಅಭ್ಯಾಸವಾದರೆ ಏನಾಗಬಹುದು. ಶೋಕ ಯಾರಿಗೆ? ಶೋಕದ ಮಧ್ಯ ಬೇರೆ ಸಂಗತಿಗಳಿಗೆ ಜಾಗವಿದೆಯಾ? ಕೌನ್ಸಿಲರ್ ಹಾಗೂ ರೋಗಿ ಇಬ್ಬರೂ ಮನುಷ್ಯರೇ ಆದರೂ, ಬೇರೆ ಬೇರೆ ರೋಗಿಯ ಜೊತೆಗಿನ ಕೌನ್ಸಿಲರ್ ಅವರ ಭಾವನಾತ್ಮಕ ಬಂಧವೇನು? ನಿತ್ಯವೂ ಸಾವಿನ ಸುತ್ತಲೇ ಬದುಕು ಕಟ್ಟಿಕೊಂಡವರ ಬದುಕಿನ ನಿತ್ಯದ ಸಂಗತಿಗಳೇನು? ಇತ್ಯಾದಿಗಳೆಲ್ಲವನ್ನೂ ನಿರ್ದೇಶಕರು ಬಹಳ‌ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ. ಹಲವಾರು ಸಂಗತಿಗಳನ್ನು ಮುಟ್ಟಿಹೋಗಿದ್ದಾರೆ 'ಅನಿಕೇತ್'. ಯಾಕೆಂದರೆ, ಆ ಸಂಗತಿಗಳಲ್ಲೇ ಬದುಕುವುದಕ್ಕೆ ಅವರು 'ಅನಿಕೇತ್' ಅಲ್ಲವಾ, ಅಲ್ಲಿಯೇ ಇರುವ ಹಾಗಿಲ್ಲ, ಅನಿಕೇತನ ಆಗಲೇಬೇಕು!


ಕವಿತೆ ಇಷ್ಟವಾಗುತ್ತದೆ ಅಂತಾದರೆ, ಸಾವು‌ ಕಾಡುತ್ತದೆ ಅಂತಾದರೆ, ಸಾವಿನ ಕುರಿತಾಗಿ ವಿಶೇಷ ಆಸಕ್ತಿ ಇದೆ ಅಂತಾದಲ್ಲಿ, ಬದುಕಿನ ಕ್ಷಣಿಕತೆಯ ಕುರಿತಾಗಿ ಎಂದಾದರೂ ಯೋಚಿಸಿದ್ದೀರಿ ಅಂತಾದಲ್ಲಿ ಈ ಸಿನೆಮಾ ಇಷ್ಟವಾಗುತ್ತದೆ. 


ಧನ್ಯವಾದಗಳು Raj B Shetty ಅವ್ರೇ, Siri Ravikumar ಅವ್ರೇ, Applebox Studios ನ Divya Spandana/Ramya ಅವ್ರೇ, ಒಂದು ಚೆಂದದ ಸಿನೆಮಾಕ್ಕಾಗಿ ✨✨✨


~`ಶ್ರೀ' 

‌‌‌    ತಲಗೇರಿ

Days at the Morisaki Bookshop

 

Days at the Morisaki Bookshop


ಬದುಕಲ್ಲಿ ಸರಳವಾದದ್ದು ಕೊಡುವ ಖುಷಿಯನ್ನು ಬಹುಶಃ ವ್ಯಾಖ್ಯಾನಿಸುವುದು ತುಸು ಕಷ್ಟ. ಆ ಸಂತೃಪ್ತಿಯನ್ನು ವಿವರಿಸುವುದಕ್ಕೆ ನಾವು ಹೊರಟ ತಕ್ಷಣವೇ ಅದು ಪೇಲವವಾಗುತ್ತದೆ. ಯಾವ ಸುಂದರ ಅನುಭೂತಿಯನ್ನೂ ಅಕ್ಷರಕ್ಕಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಭಾವವನ್ನು ಅಕ್ಷರಗಳಿಗೆ ಅನುವಾದಿಸುವುದಕ್ಕೆ ಹೊರಟಾಗ ಅದೆಷ್ಟೋ ಅರ್ಥಗಳು ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಅನುಭವವಷ್ಟೇ ಪರಮ ಸತ್ಯ. ಅಂಥದ್ದೊಂದು ಚೆಂದದ‌ ಅನುಭವವನ್ನು ಕಟ್ಟಿಕೊಟ್ಟಿದ್ದು ಸತೋಶಿ ಯಾಗಿಸಾವಾ ಅವರ ಕಾದಂಬರಿ "Days at the Morisaki Bookshop" 


ಬಹಳ ಆಳವಾದ ಅಷ್ಟೇ ತೀವ್ರ ಧ್ವನಿಗಳುಳ್ಳ ಸಾಹಿತ್ಯವನ್ನು ಓದಿ ಓದಿ ಭಾರವಾದ ಯೋಚನೆಗಳೊಳಗೆ ಮುಳುಗಿಹೋಗಿರುವಾಗ ಇಂಥದ್ದೊಂದು ಪುಸ್ತಕ ಹೊಸ ಬಿಡುಗಡೆಯನ್ನು ಕೊಡುತ್ತದೆ. ಕತೆಯಲ್ಲೇನೂ ಭಿನ್ನವಾದುದು ಇಲ್ಲ ಅಥವಾ ಭಯಂಕರ ತಿರುವು ಅನ್ನಬಹುದಾದಂಥದ್ದೆಲ್ಲಾ ಏನೂ ಇಲ್ಲ. ಆದರೂ ಈ ಕಾದಂಬರಿ ಓದಿಸಿಕೊಳ್ಳುತ್ತದೆ; ಉದುರಿ ನೆಲಕ್ಕೆ ಬಿದ್ದ ಹೂವ ಮೇಲೆ ತಂಪಾದ ತಾಜಾ ಮಳೆ‌ ಹನಿಗಳು ಬಿದ್ದು ಇಡೀ ವಾತಾವರಣಕ್ಕೊಂದು ಹೊಸ ಆಹ್ಲಾದವನ್ನು ಕೊಡುವ ಹಾಗೆ. ಕೆಸರು, ಕಿರಿಕಿರಿ‌, ಕಸಕಡ್ಡಿಗಳ ನಡುವೆಯೂ ಮಳೆಗೊಂದು ಚಿಕಿತ್ಸಕ ಗುಣವಿದೆ. ಅರ್ಥವೇ ಆಗದ ಸಮ್ಮೋಹಕತೆಯೂ ಮಳೆಗಿದೆ. ಅಂಥ ಗುಣ ಈ ಕಾದಂಬರಿಗೂ ಇದೆ. ಒಂದು ಊರಿನ ತುಂಬಾ ಪುಸ್ತಕದ ಅಂಗಡಿಗಳೇ ತುಂಬಿದ್ದರೆ ಹಾಗೂ ಆ ಪುಸ್ತಕದ ಸುತ್ತಮುತ್ತಲೇ ಇಡೀ ಕತೆ ನಡೆದರೆ, ಪುಸ್ತಕದ ಕುರಿತಾಗಿ ಚೂರು ವಿಶೇಷವೇ ಅನ್ನಬಹುದಾದ ಆಸಕ್ತಿ ಇರುವವರಿಗೆ ಈ ಕಾದಂಬರಿ ಇಷ್ಟವಾಗದೇ ಇರಲಿಕ್ಕೆ ಹೇಗೆ ಸಾಧ್ಯ! 


ಈ ಕಾದಂಬರಿ ಒಂದರ್ಥದಲ್ಲಿ ಬಿರುಬೇಸಿಗೆಯ ಮಧ್ಯಾಹ್ನದಲ್ಲಿ ತಂಪಾದ ನಿದಿರೆ ಹೊತ್ತು ತರುವ ಆತ್ಮೀಯ ಗಾಳಿ. ಜಪಾನಿನ ಟೋಕಿಯೋದಲ್ಲಿ ಜಿಂಬೋಚೋ ( Jimbocho ) ಅನ್ನುವ ಜಾಗವೊಂದಿದೆ. ಅದನ್ನು 'ಪುಸ್ತಕಗಳ ಪಟ್ಟಣ'ವೆಂದೇ ಕರೆಯುತ್ತಾರೆ. ಅಂಥದ್ದೊಂದು ನಿಜ ಜಾಗದ ಹಿನ್ನೆಲೆಯಿಟ್ಟುಕೊಂಡು ಹೆಣೆದ ಕಾಲ್ಪನಿಕ ಕತೆಯೇ ಈ ಕಾದಂಬರಿ. ಬಹಳಷ್ಟು ಸ್ಥಳೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವವರೇ ಇಲ್ಲ ಅನ್ನುವ ಕೊರಗು ಕೇಳುತ್ತಲೇ ಇರುವಾಗ ಪುಸ್ತಕ, ಅದರ ಓದಿನ ಕುರಿತಾದ ಅಪ್ಪಟ ಪ್ರೇಮ, ಓದಿನಿಂದಾಗಿಯೇ ಹುಟ್ಟಿಕೊಳ್ಳುವ ಒಂದಷ್ಟು ಮನುಷ್ಯ ಸಂಬಂಧಗಳು, ಈ ಪರಿಧಿಯಿಂದಾಚೆ ದೂರ ಹೋಗುವ ಒಂದಷ್ಟು ವ್ಯಕ್ತಿಗಳು, ಮಧ್ಯದಲ್ಲೆಲ್ಲಾ ಬದಲಾಗುತ್ತಲೇ ಇರುವ ಬದುಕು, ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುವ ಒಂದರ್ಥದಲ್ಲಿ ಪ್ರಮುಖ ಪಾತ್ರವೇ ಆಗುವ ಪುಸ್ತಕದಂಗಡಿ ಇವಿಷ್ಟನ್ನೂ ಈ ಕಾದಂಬರಿ ಹದವಾಗಿ ಬೆರೆಸಿಕೊಂಡು ನಮ್ಮೆದುರು ತೆರೆದುಕೊಳ್ಳುತ್ತದೆ. ಈ ಪುಸ್ತಕದ ಮೂಲಭಾಷೆ ಜಪಾನೀಸ್ ಆಗಿರಬಹುದು, ಈ ಪುಸ್ತಕದ ಕತೆ ನಡೆಯುವ ಮೂಲ ಜಾಗ ಜಪಾನಿನ ಜಿಂಬೋಚೋ ಆಗಿರಬಹುದು, ಇಲ್ಲಿನ ಪಾತ್ರಗಳ ಹೆಸರೆಲ್ಲವೂ ಜಪಾನಿನ ಹೆಸರುಗಳಾಗಿರಬಹುದು, ಆದರೆ‌ ಇಲ್ಲಿ ಬರುವ ಪಾತ್ರಗಳ್ಯಾವವೂ ನಮಗೆ ಅಪರಿಚಿತವಲ್ಲ. ಒಂದು ಕತೆ ಸಾರ್ವತ್ರಿಕವಾಗಬೇಕಾದರೆ ಅದರೊಳಗಿರುವ ಪಾತ್ರದ ಪೋಷಣೆಯು ಒಂದೇ ಸಮಯಕ್ಕೆ ಸ್ಥಳೀಯವೂ, ಜೊತೆಗೆ ಜಾಗತಿಕವೂ ಆಗಿರಬೇಕು. ಇಲ್ಲಿನ ಪಾತ್ರಗಳ್ಯಾವವೂ ನಮಗೆ ಹೊರಗಿನದು ಅಂತ ಅನ್ನಿಸುವುದೇ ಇಲ್ಲ. ಹಾಗಾಗಿಯೇ ಇನ್ನಷ್ಟು ಆಪ್ತವಾಗುತ್ತವೆ. ಕನ್ನಡದಲ್ಲಿ ಇಂಥ ಪ್ರಕಾರದ ಕಾದಂಬರಿಗಳು ಬಹಳ ಕಡಿಮೆ. 


ಹಿಂದೊಮ್ಮೆ Nagaraj Ramaswamy Vastarey ಸರ್ ಅವರ 'ಪ್ರಿಯೇ ಚಾರುಶೀಲೆ' ಓದಿದಾಗಲೂ ಇಂಥದ್ದೇ ಅನುಭವವಾಗಿತ್ತು. ಈಗ ಈ ಕಾದಂಬರಿ ಓದಿದಾಗ ಕೂಡಾ ಹೆಚ್ಚೂ ಕಡಿಮೆ ಅಂಥದ್ದೇ ಅನುಭವ. ಏಕತಾನತೆಯ ಬದುಕಿನಲ್ಲೊಂದು ಎಳೇ ಸ್ವಪ್ನ ರೂಪುಗೊಳ್ಳುವ ಹಾಗೆ, ಆ ಸ್ವಪ್ನದಿಂದಾಗಿಯೇ ನಮ್ಮ ಬದುಕಿನ ತಂತುಗಳು ಹೊಸ ಸ್ವರವನ್ನು ಮೀಟುವುದಕ್ಕೆ ಅಣಿಯಾಗುವ ಹಾಗೆ. ಕನ್ನಡಕ್ಕೆ ಬಹುಶಃ ಇದನ್ನು ಯಾರಾದರೂ ಅನುವಾದಿಸಿದರೆ ಅದನ್ನು ಕನ್ನಡೀಕರಿಸುವಾಗ ಎಷ್ಟೆಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಹಾಗೂ ಕನ್ನಡದಂಥ ಭಾಷೆಯಲ್ಲಿ ಅದು ಅರಳಿಕೊಳ್ಳುವ ಬಗೆಯೇ ಒಂದು ಸಂಭ್ರಮವಾಗಬಹುದು ಅನ್ನುವ ಯೋಚನೆಗಳೇ ರೋಮಾಂಚಕ ಅಂತ ಅನಿಸಿದ್ದು ಹೌದು. ಸಂಸಾರದ ತಾಪತ್ರಯಗಳು, ಹುಡುಗ ಹುಡುಗಿಯರ ಹರೆಯದ ತುಮುಲಗಳು, ನೆರೆಹೊರೆಯ ಚೇಷ್ಟೆಗಳು, ಅಪ್ಪಟ ಮಾನವೀಯ ಸಂಬಂಧಗಳು ಇವೆಲ್ಲಾ ಇದ್ದರೂ ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಪುಸ್ತಕ. ಭಾರತದ ಸಂಸ್ಕೃತಿ ಕಥನ ಪರಂಪರೆಯದ್ದು. ಜನಪದದ ಮೂಲಕ ಕತೆಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತ ಬಂದರೂ, ಪುಸ್ತಕದ ಕುರಿತಾಗಿ ಅದೇನೋ ವಿಶೇಷ ಭಾವ ನಮ್ಮಲ್ಲಿ. ಜ್ಞಾನದ ಪರಂಪರೆಯನ್ನು ಆರಾಧಿಸುತ್ತಾ ಬಂದ ನಮಗೆ ಪುಸ್ತಕಗಳು ಯಾವಾಗಲೂ ಮಾರ್ಗದರ್ಶನದ ಮೂಲಬಿಂದುಗಳು. ನಮ್ಮಲ್ಲಿಯೂ ಇಂಥ ಕತೆಗಳು ಬರಲಿ ಅನ್ನುವುದೊಂದು ಬಿನ್ನಹವಷ್ಟೇ. 


"The rainy season had completely given way to summer while i was asleep." ನಮ್ಮಲ್ಲಿ ಬಹುತೇಕರು ಇಂಥ ಗಾಢ ನಿದ್ರೆಗಳಲ್ಲೇ ಇದ್ದೇವೆ. ನಮಗೆ ತಿಳಿದಿದೆ ಕಾಲ ಯಾರಿಗೂ ಕಾಯುವುದಿಲ್ಲ, ಜಗತ್ತು ಯಾರಿಗೂ ಕಾಯುವುದಿಲ್ಲ, ಹಾಗೂ ಮತ್ತೆ ನಾವಿಲ್ಲಿಗೆ ಬರುತ್ತೇವೋ ಇಲ್ಲವೋ ಅನ್ನುವ ಯಾವ ಖಾತ್ರಿಯೂ ಇಲ್ಲ. ಆದರೂ, ಏನೇನೋ ಕಾರಣಗಳಿಗಾಗಿ ಅದೊಂದು ವಿಚಿತ್ರವಾದ ಗಾಢ ನಿದ್ರೆಯಲ್ಲಿ ನಾವಿದ್ದೇವೆ, ಏಳಬಹುದು, ಏಳುವುದಕ್ಕೆ ಮನಸ್ಸು ಮಾಡಬೇಕಷ್ಟೇ. 


"Maybe it takes a long time to figure out what you’re truly searching for. Maybe you spend your whole life just to figure out a small part of it". ನಮ್ಮಿಡೀ ಬದುಕಿನ ಪೂರಾ ನಾವು ಬದುಕಿನ ಅರ್ಥಕ್ಕಾಗಿ ಹುಡುಕುತ್ತೇವೆ. ಶಬರಿಯ ಬದುಕು ಪೂರ್ಣವಾಗುವುದು, ಬದುಕಿನ ಉದ್ದೇಶ ಪೂರ್ಣವಾಗುವುದು ರಾಮನನ್ನಪ್ಪಿ ತನ್ನ ಸುಕ್ಕು ಸುಕ್ಕಾದ ಕೈಗಳಿಂದ ಅವನಿಗೆ ಹಣ್ಣುಗಳನ್ನು ತಿನ್ನಿಸಿದಾಗಲೇ. ಒಂದಿಡೀ ಬದುಕಿನ ಪೂರ್ಣತೆ ದಕ್ಕುವುದು ಕೇವಲ ಕೆಲವೇ ಕೆಲವು ಗಳಿಗೆಯ ಭಾಗದಲ್ಲಿ; ಕೇವಲ ಕೆಲವೇ ಕೆಲವು ಗಳಿಗೆಯ ಭಾಗ್ಯದಲ್ಲಿ. 


"Human beings are full of contradictions". ಸಂಕೀರ್ಣ ಬೌದ್ಧಿಕ ವ್ಯವಸ್ಥೆಯಿರುವ ಮನುಷ್ಯರಲ್ಲಿ ದ್ವಂದ್ವಗಳು ಸಹಜವೇ ಅಲ್ಲವಾ? ವಾಲ್ಟ್ ವಿಟ್ಮನ್ ತಮ್ಮ Song of Myself ಕವಿತೆಯಲ್ಲಿ ಹೇಳುವುದೂ ಬಹುಶಃ ಇಂಥದ್ದೇ ಒಂದು ಧ್ವನಿ :


"Do I contradict myself?

Very well then I contradict myself,

(I am large, I contain multitudes.)"


ಮನುಷ್ಯನಲ್ಲಿ ಯಾವಾಗ ಆಳದ ಚಿಂತನೆಗಳು ಶುರುವಾಗುತ್ತವೆಯೋ ಆಗಲೇ ಇಂಥ ದ್ವಂದ್ವಗಳೂ ಶುರುವಾಗುತ್ತವೆ‌. ದ್ವಂದ್ವಗಳು ಬಲಹೀನತೆಯಲ್ಲ, ಅಥವಾ ಸ್ಪಷ್ಟತೆಯಿಲ್ಲದೇ ಇರುವುದರ ಸಂಕೇತಗಳೂ ಅಲ್ಲ. ದ್ವಂದ್ವಗಳು ಹಲವು ಸಾಧ್ಯತೆಗಳ‌ ಅಭಿವ್ಯಕ್ತಿ. ಒಂದು ಸಂಗತಿಯನ್ನು ಹಲವು ಮಜಲುಗಳಲ್ಲಿ ನೋಡುವುದರ ಭೂಮಿಕೆ. 


ಓದಿನ ಸುಖ ನಿಮ್ಮದೂ ಆಗಲಿ.


~`ಶ್ರೀ'

   ತಲಗೇರಿ

ಗುರುವಾರ, ಜೂನ್ 29, 2023

ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


 
ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


ಸಖೀ ರಾಧೆ,


ಹಿಂದೊಮ್ಮೆ ಹೀಗೇ ದಟ್ಟ ಕತ್ತಲೆಯ ಮೋಡಗಳು ಆಕಾಶದಲ್ಲಿ ಆವರಿಸಿ, ಇಡೀ ವಾತಾವರಣ ಒಂದು ಗಾಢವಾದ ಆತ್ಮೀಯತೆಯನ್ನೂ, ನಿರೀಕ್ಷೆಯನ್ನೂ, ಆಹ್ಲಾದಕತೆಯನ್ನೂ, ತಲ್ಲಣವನ್ನೂ ಕಟ್ಟಿಕೊಟ್ಟಂಥ ಸಮಯದಲ್ಲಿ, ಕೊನೆಗೆ ಕಪ್ಪೆಲ್ಲವೂ ನೀರಾಗಿ, ಭೂದೇವಿಯ ಎದೆಯೊಳಗಿಳಿದಂಥ ಸಂದರ್ಭದಲ್ಲಿ ನಿನಗೆ ಪತ್ರ ಬರೆದಿದ್ದೆ. ವರ್ಷಗಳೆರಡಾದವೀಗ, ಪತ್ರ ಬರೆಯದೇ. ಕೃಷ್ಣ ಮರೆತಿರುವನು ಅಂತ ಅಂದುಕೊಂಡಿರುತ್ತೀಯೇನೋ ಅಥವಾ ಇವನನ್ನು ನಂಬಿ‌ ಕೂತರೆ ಕಾಯುವುದಷ್ಟೇ 'ಕಾಯ'ದ ಕೆಲಸ‌ ಅಂತಲೂ ನಸುನಗುತ್ತೀಯೇನೋ, ಅಥವಾ ಆಗಿನ್ನೂ ಮಳೆಗಾಲ‌ ಶುರುವಾಗಿರಲಿಲ್ಲ, ಕಪ್ಪು ಮೋಡ ಅಂತೆಲ್ಲಾ ಸುಳ್ಳು ಸುಳ್ಳೇ ಹೇಳಬೇಡ, ಬರೀ ಹೀಗೆಲ್ಲಾ ಏನೇನೋ ಹೇಳುತ್ತಲೇ ನನ್ನ ಕೋಪವನ್ನು ಬೇರೆಡೆ ಸೆಳೆಯುವುದಕ್ಕೆ ಯತ್ನಿಸಬೇಡ ಅಂತ ನೀನು ಸಿಟ್ಟಾಗುತ್ತಿಯೇನೋ ಅಂತೆಲ್ಲಾ ನಾನು ಕಲ್ಪಿಸಿಕೊಳ್ಳುವುದರಲ್ಲೇ ಎಷ್ಟು ಚೆಂದದ ಸುಖವಿದೆ ತಿಳಿದಿದೆಯಾ ನಿನಗೆ? ಹಾಗೆಯೇ, ಒಂದು ವೇಳೆ ನೀನು ಕೋಪಿಸಿಕೊಂಡರೂ,‌ ಅದೆಷ್ಟು ಹೊತ್ತು? ಪಾಪದವನಲ್ಲವಾ ನಾನು? ಏನೋ ಹೆಚ್ಚು ಕಡಿಮೆ ಆಗುತ್ತದಲ್ಲವಾ, ಏನೋ ಸೈರಿಸಿಕೊಳ್ಳಬೇಕಪ್ಪಾ ಅಂತೆಲ್ಲಾ ಹೇಳಿ ಕಿವಿ ಹಿಡಿದುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ನಿನ್ನೆಡೆಗೆ ನೋಡುತ್ತಾ ನಿಲ್ಲುವುದು ನನಗೆ ಹೊಸದಲ್ಲ ಬಿಡು. ಕೃಷ್ಣ ಹಾಗೆ ನೋಡಿದಾಗಲೆಲ್ಲಾ ವಾತ್ಸಲ್ಯದ ತೊಟ್ಟಿಲೇ ನೀನಾಗುವುದೂ ಹೊಸದಲ್ಲ ಬಿಡು! ವಾತ್ಸಲ್ಯ ಅಂದಾಗಲೆಲ್ಲಾ ಮಮತೆ ತುಂಬಿದ ಅಮ್ಮ ಯಶೋದೆಯ ಕಣ್ಣುಗಳು ಕಣ್ಣ ಮುಂದೆ ಬರುತ್ತವೆ. ಅರಿವಿಲ್ಲದೆಯೇ ತುಟಿ ಬಿರಿಯುತ್ತದೆ, ಸಂಭ್ರಮದ ನಗೆ ಹೂವು ತಾನಾಗೇ ಅರಳುತ್ತದೆ. ಎದೆಯಲ್ಲೊಂದು ಅಲೌಕಿಕ ಸಂಭ್ರಮ ಮೊದಲಾಗುತ್ತದೆ. ಅಮ್ಮನೆಂದರೆ ಹಾಗೆಯೇ ಅಲ್ಲವಾ ರಾಧಾ.. 


ನನ್ನದು ಬಹಳ ಭಿನ್ನವಾದ ಪರಿಸ್ಥಿತಿಯಾಗಿತ್ತು ನೋಡು. ಕಾರಾಗೃಹದಲ್ಲಿ ಹುಟ್ಟಿ, ಹುಟ್ಟಿದ ಕೆಲವೇ ಕ್ಷಣಕ್ಕೆ ಹೆತ್ತಮ್ಮನಿಂದ ದೂರವೇ ಉಳಿಯಬೇಕಾದ ಸ್ಥಿತಿ. ಹುಟ್ಟಿದ ಮಗುವಿಗೆ ಅಮ್ಮನ ಎದೆ ಹಾಲೇ ತಾನೇ ಈ ಜಗತ್ತನ್ನು ನೋಡುವ ಶಕ್ತಿ ಕೊಡುವುದು, ಎದ್ದು ನಿಲ್ಲುವ, ನಿಲ್ಲುತ್ತಲೇ ನಡೆಯುವ, ನಡೆಯುತ್ತಲೇ ಓಡುವ,‌ ಕುಣಿಯುವ, ನರ್ತಿಸುವ, ಸಂಭ್ರಮಿಸುವ ಚೈತನ್ಯ ಕೊಡುವುದು. ಹಸಿ ಮೈಯ ತಾಯಿ ಕಾರಾಗೃಹದಲ್ಲೇ ಉಳಿದಳು. ಬೇರ್ಪಟ್ಟ ನಾನು ಬದುಕಿಗಾಗಿ ಇನ್ನೊಬ್ಬರ ಮನೆಯನ್ನು ಆಶ್ರಯಿಸಿದೆ. ವಿಚಿತ್ರ ಅನ್ನಿಸುತ್ತದಲ್ಲವಾ? ಈ ಜಗತ್ತು ಅದನ್ನು ಮಾಯೆ ಅನ್ನುವುದೋ, ಲೀಲೆ ಅನ್ನುವುದೋ ಅದು ಜಗತ್ತಿಗೆ ಬಿಟ್ಟಿದ್ದು. ಹಾಲುಣಿಸುವುದೆಂದರೆ ಅಮ್ಮ ಯಶೋದೆಗೆ ಅದೆಂಥ ಸಂಭ್ರಮ. ನಾನು ಇಂಥ ಸಮಯ ಅಂಥ ಸಮಯ ಅಂತೆಲ್ಲಾ ಇಲ್ಲದೇ ಕೂಗುತ್ತಿದ್ದೆ. ಅಮ್ಮ ಯಶೋದೆ ಕೆಲವೊಮ್ಮೆ ಹಾಲುಣಿಸುತ್ತ ಊಟ ನಿದ್ದೆ ಮನೆಗೆಲಸ ಮರೆಯುತ್ತಿದ್ದಳು. ಕೆಲವೊಮ್ಮೆ ನನ್ನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತಲ್ಲೇ ಗೋಡೆಗೆ ಆತು‌ ನಿದ್ದೆಹೋಗುತ್ತಿದ್ದಳು. ಆದರೆ, ನನ್ನ ಒಂದು ಮುಲುಕಾಟ ಅವಳನ್ನು ಎಚ್ಚರಾಗಿಸುತ್ತಿತ್ತು. ಕರುಳಬಂಧ ಅಮ್ಮ ದೇವಕಿಯದ್ದಾದರೂ ಆತ್ಮಬಂಧ ಅಮ್ಮ ಯಶೋದೆಯದ್ದು. ಜಗತ್ತಿನ‌ ಹೆಣ್ಣು ಮಕ್ಕಳಿಗೆಲ್ಲಾ ಈ ತಾಯ್ತನವೆನ್ನುವುದು ತಾನಾಗಿಯೇ ಬಂದುಬಿಡುತ್ತದೆ ನೋಡು. ಯಾರೋ ಹೆತ್ತ ಮಗುವಾದರೂ ತನ್ನದೇ ಇದು ಅನ್ನುವಂತೆ ಕಾಪಿಡುವ ಹೃದಯವೇನಿದ್ದರೂ ಅದು ತಾಯಿಯದು ಮಾತ್ರ. ಹೇಳಬಹುದು ನೀನು, ಅಲ್ಲಾ ಕೃಷ್ಣ, ಅಮ್ಮ ಯಶೋದೆಗೆ ನೀನು ಅವಳ ಮಗ ಅಲ್ಲವೆಂದು ತಿಳಿದಿರಲಿಲ್ಲ‌ವಲ್ಲಾ ಅಂತ. ಅದು ನಿಜವೇ ಅದರೂ, ಗೋಕುಲದ ಗೋಪಿಕೆಯರ್ಯಾರಿಗೂ ನಾನು ಅವರ ಮಗನಾಗಿರಲಿಲ್ಲವಲ್ಲ. ಆದರೆ, ಕೃಷ್ಣನಿಗೆ ಹಸಿವಾದಾಗಲೆಲ್ಲಾ‌ ಗೋಕುಲದ ಎಲ್ಲಾ ಗೋಪಿಕೆಯರಲ್ಲಿ ಎದೆಹಾಲು ಒಸರುತ್ತಿತ್ತು. ಬಹುಶಃ ಕಾರಾಗೃಹದಲ್ಲಿ ಅಮ್ಮ ದೇವಕಿಯ ಎದೆಯಲ್ಲೂ ಹೀಗೆ ಹಾಲು ಒಸರುತ್ತಿತ್ತೇನೋ, ಅವಳು ಪರಿತಪಿಸುತ್ತಲೇ ಸಮಸ್ತ ಸೃಷ್ಟಿಯಲ್ಲಿ ಬೇಡಿಕೊಳ್ಳುತ್ತಿದ್ದಳೇನೋ, ನನ್ನ ಕಂದನಿಗೆ ಹಾಲುಣಿಸಿ ದೈವಗಳೇ ಅಂತ ಕೈಮುಗಿದು..


ಜಗದೋದ್ಧಾರಕ್ಕಾಗಿ ಅವತಾರವೆತ್ತಿದವ ನಾನಾದರೂ ಅಮ್ಮ ದೇವಕಿ ಆ ಅವತಾರಕ್ಕೊಂದು ರೂಪ‌ ಕೊಟ್ಟಳು. ಇಂದು ಅದೇ ರೂಪವನ್ನಲ್ಲವಾ ಸೃಷ್ಟಿ ಕೊಂಡಾಡುವುದು, ಮೋಹಕವೆಂದು ಬಗೆಬಗೆಯಲ್ಲಿ ವರ್ಣಿಸುವುದು. ಮೋಹಗಳ ತೊರೆಯಿರಿ ಅಂತ ಹೇಳುವವ ನಾನಾದರೂ ಈ ವಾತ್ಸಲ್ಯವನ್ನು ತಿರಸ್ಕರಿಸಲಾರೆ. ನಾನ್ಯಾರೆಂದು ತಿಳಿಯದೆಯೇ ಅಮ್ಮ ಯಶೋದೆ ನನ್ನ ಬಾಲ್ಯವನ್ನು ನನಗೆ ಕಟ್ಟಿಕೊಟ್ಟಳು. ಮೊಸರ ಮಡಕೆಯಲ್ಲಿ ನಾನು ಕೈಹಾಕಿ ಬೆಣ್ಣೆ ಕದ್ದು ತಿಂದಾಗಲೆಲ್ಲಾ ಕಿವಿ ಹಿಂಡುತ್ತಿದ್ದಳು. ಆಮೇಲೆ, ಅವಳೇ ಬರಸೆಳೆದು ಅಪ್ಪಿ ಮುತ್ತಿಟ್ಟು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ನನ್ನ ಕಿವಿ ಹಿಂಡುವಾಗಲೆಲ್ಲಾ ಅವಳ ಕಂಗಳನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರುತ್ತಿರಲಿಲ್ಲ. ಒಮ್ಮೆ ಮಾತ್ರ ನೋಡಿದ್ದೆ, ದೊಡ್ಡ ಕಣ್ಣು ಮಾಡಿದ್ದಳು, ಆದರೆ ಕಣ್ಣೀರಿನಿಂದ ತುಂಬಿಹೋಗಿತ್ತು. ಲಾಲಿ ಹಾಡುವಾಗ ಕೂಡಾ, ಅವಳ ಮಡಿಲಲ್ಲಿ ಮಲಗಿದ್ದ ನನ್ನ ಕೆನ್ನೆಯ ಮೇಲೆ‌ ಒಂದೆರಡು ಬಾರಿ ಬಿಸಿ ಹನಿಗಳು ಬಿದ್ದ ನೆನಪಿದೆ ನನಗೆ. ಅವಳ ಧ್ವನಿ ಕಂಪಿಸುತ್ತಿರಲಿಲ್ಲ, ಆದರೆ, ನಾನು ಮಲಗಿದೆ ಅಂತ ತಿಳಿದ ಮೇಲೆ, ಕಿವಿ ಹಿಂಡಿದ್ದಕ್ಕಾಗಿ ಬೇಸರಿಸಿಕೊಂಡು ಅಳುತ್ತಿದ್ದಳು. ನಾನು ಬೇಕಂತಲೇ‌ ನನ್ನ ಕಣ್ಣು ತಿಕ್ಕುತ್ತಿದ್ದೆ. ತಕ್ಷಣ ಏನೂ ಆಗಿಲ್ಲವೆಂಬಂತೆ ಸಾವರಿಸಿಕೊಂಡು ನಿಧಾನಕ್ಕೆ ತಲೆತಟ್ಟುತ್ತಿದ್ದಳು. ಮಣ್ಣು ತಿಂದ ನನ್ನ ಬಾಯ್ತೆರೆಸಿದಾಗ ಬ್ರಹ್ಮಾಂಡ ಕಂಡ ಮೇಲೂ ಆಕೆ ನನ್ನ ಕಿವಿ ಹಿಂಡುವುದ ಬಿಡಲಿಲ್ಲ, ಬೆತ್ತ ಹಿಡಿದ ಅವಳನ್ನು ಗೋಕುಲದ ತುಂಬಾ ಓಡುವಂತೆ ಮಾಡುವುದನ್ನು ನಾನೂ ಬಿಡಲಿಲ್ಲ. ಆಡಿದಳು, ಹಾಡಿದಳು ಅಮ್ಮ ಯಶೋದೆ ನನ್ನ ಜೊತೆ. ಗೋಪಿಕೆಯರೂ ಕಡಿಮೆ ಇರಲಿಲ್ಲ. ಅಮ್ಮ ಯಶೋದೆಗೆ ನಾನೆಂದರೆ ಬಹಳ ಪ್ರೀತಿ. ಯಾರಾದರೂ ಪದೇ ಪದೇ ನನ್ನನ್ನು ನೋಡಿದರೆ ದೃಷ್ಟಿ ಆಗಿಬಿಡುತ್ತದೆ ಅನ್ನುವ ಆತಂಕ ಅವಳಿಗೆ. ಅದರಲ್ಲೂ ಗೋಪಿಕೆಯರು ನನ್ನನ್ನು ಎವೆಯಿಕ್ಕದೇ ನೋಡುವುದನ್ನು ಅವಳು ನೋಡಿದ್ದಳು. ಹಾಗಾಗಿ ಗೋಪಿಕೆಯರೆಲ್ಲರಿಗೂ ತಾಕೀತು ಮಾಡಿದ್ದಳು, ಯಾರೂ ಕೃಷ್ಣನನ್ನು ನೋಡುತ್ತ ನಿಲ್ಲಬಾರದು. ಅವನೇನಾದರೂ ದಾರಿಯಲ್ಲಿ ಸಿಕ್ಕರೆ ತಲೆಬಗ್ಗಿಸಿಕೊಂಡು ನಡೆಯಬೇಕು ಇತ್ಯಾದಿ ಇತ್ಯಾದಿ.‌‌ ಆದರೆ, ಗೋಪಿಕೆಯರು ಅವೆಲ್ಲವನ್ನೂ ಕೇಳುವರೇ! ಬೇಕು ಬೇಕಂತಲೇ ನಾನು ಬರಲಿ ಅಂತಲೇ ಬೆಣ್ಣೆ ಮಡಕೆಗಳನ್ನು ಮೇಲೆ ಕಟ್ಟದೇ ನೆಲದ‌‌ ಮೇಲೇ ಇಡುತ್ತಿದ್ದರು. ತಮ್ಮ ಗಂಡ ಮಕ್ಕಳು ಕೇಳಿದರೆ ಖಾಲಿಯಾಗಿದೆ ಅನ್ನುತ್ತಿದ್ದ ಇವರು ನನಗಂತಲೇ ಬೇರೆ ಮಡಕೆಯನ್ನು ಅಡಗಿಸಿಡುತ್ತಿದ್ದುದೂ ಉಂಟು. ಆಮೇಲೆ, ನಾನು ಬೆಣ್ಣೆ ತೆಗೆಯುವಾಗಲೆಲ್ಲಾ‌ ಅಲ್ಲಿಯೇ ಇದ್ದರೂ ನೋಡದವರಂತೆ ಇದ್ದು, ಆಮೇಲೆ ಅಮ್ಮ ಯಶೋದೆಯ ಬಳಿಗೆ ಬಂದು ದೂರುತ್ತಿದ್ದರು. ಆಗ, ಅಮ್ಮ ಯಶೋದೆ ನನ್ನ ಕರೆದು ಎದುರಲ್ಲಿ ನಿಲ್ಲಿಸಿ ಕೇಳುವಾಗಲೆಲ್ಲಾ ತಮ್ಮ ದೂರುಗಳನ್ನು ಮರೆತು ನಗುತ್ತಾ ನಿಂತುಬಿಡುತ್ತಿದ್ದರು. ಅಮ್ಮ ಯಶೋದೆಗೆ ಗೊಂದಲ. ಕೊನೆಕೊನೆಗೆ ಅಮ್ಮ ನೀವುಂಟು ನಿಮ್ಮ ಕೃಷ್ಣನುಂಟು, ನನ್ನ ಹತ್ತಿರ ಅವನ ದೂರು ತರಬೇಡಿ ಅಂತನ್ನುವುದಕ್ಕೆ ಶುರು ಮಾಡಿದ್ದಳು. ನಿನಗಿದೆಲ್ಲಾ ಗೊತ್ತಿದೆಯಲ್ಲವಾ ರಾಧಾ? ಆತ್ಮೀಯರೊಂದಿಗೆ ಹೀಗೆ ನೆನಪುಗಳನ್ನು ಹಂಚಿಕೊಳ್ಳುವ ಸುಖಕ್ಕೆ ಬೇರೆ ಯಾವ ವ್ಯಾಖ್ಯಾನಗಳೂ ಬೇಕಿಲ್ಲ ಅಲ್ಲವಾ. ಅದರಲ್ಲೂ, ನನ್ನೆಲ್ಲಾ‌‌ ನೆನಪಿನ ಪಾಲುದಾರಳು ನೀನು. ರಾಧೆಯಿಲ್ಲದ ಕೃಷ್ಣನ ನೆನಪುಗಳು ಅಪೂರ್ಣ. ಬರೀ ನೆನಪುಗಳಲ್ಲೇ ನಾವಿರುವುದು ಈಗ ಕೃಷ್ಣಾ ಅನ್ನದಿರು. ಸಮಯದ ಹಂಗು ತೊರೆದ ನದಿಗಳ ಹಾಗೆ ಈ ನೆನಪುಗಳು. ನದಿಗಳು ಬತ್ತುತ್ತವೆ, ಉಕ್ಕುತ್ತವೆ, ಕಾಣೆಯಾಗುತ್ತವೆ ಅಂತನ್ನಬೇಡ. ನದಿ ತನ್ನ ಹರಿವನ್ನು ನೆನಪಿಟ್ಟುಕೊಳ್ಳುತ್ತದೆ. ಯಾವತ್ತೋ ಒಂದು ದಿನ ಸಮಯ ಕೂಡಿಬಂದಾಗ ಮತ್ತದೇ ಹಾದಿಯಲ್ಲಿ ಅದೆಂಥದ್ದೇ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿಕೊಂಡು ಹರಿಯುತ್ತದೆ. ನನ್ನೀ ನೆನಪಿನ ನದಿಯ ಹರಿವನ್ನು ನಿರಂತರವಾಗಿಸುತ್ತಿರುವವಳು ನೀನು. ಋತು ನಾನಾದರೂ ಸ್ಪಂದಿಸುವ‌ ಪ್ರಕೃತಿ ನೀನು. ಆತ್ಮ‌ ನಾನಾದರೂ ಸ್ಮೃತಿ ನೀನು.. 


ನೆನಪು ಅಂದಾಗ ಮತ್ತೆರಡು ಘಟನೆಗಳು ಮುನ್ನೆಲೆಗೆ ಬಂದವು ನೋಡು. ನೆನಪಿದೆಯಾ ನಿನಗೆ ಪೂತನಿ ನನಗೆ ಹಾಲುಣಿಸಿದ್ದು. ಯಾವ ಅಪರಿಚಿತರಿಗೂ ನನ್ನ ಹತ್ತಿರವೂ ಹೋಗಗೊಡದ ಅಮ್ಮ ಯಶೋದೆ ಅಂದು ದಿಗ್ಭ್ರಮೆಯಿಂದ ನಿಂತುಬಿಟ್ಟಿದ್ದಳು ಪೂತನಿಯನ್ನು ನೋಡಿ. ಸೌಂದರ್ಯದ ಉಪಮೆಯೇ ಗೋಕುಲಕ್ಕೆ ಬಂದಂತೆ ಬಂದಿದ್ದಳು ಪೂತನಿ. ಬಂದವಳೇ ನಡೆದಿದ್ದು ನನ್ನ ತೊಟ್ಟಿಲ‌ ಬಳಿಗೆ. ನಾನು ಅಂದು ಕಣ್ಣು ಪಿಳಕಿಸುತ್ತಾ ಮಲಗಿದ್ದೆ. ಎರಡೂ ಕೈಗಳಲ್ಲಿ ಎತ್ತಿಕೊಂಡಳು.‌ ಒಮ್ಮೆ ನನ್ನ ಮುಖ ನೋಡಿದಳು; ದೊಡ್ದದಾಗಿ ನಿಟ್ಟುಸಿರು ಬಿಟ್ಟಳು. ವಿಷದ ಹಾಲಿಂದ ಕೊಲ್ಲಬೇಕೆಂದು ಅವಳಿಗೆ ಆಜ್ಞೆಯಾಗಿತ್ತು. ಸ್ತನಪಾನಕ್ಕಾಗಿ ಅವಳ ಸ್ತನಗಳನ್ನು ನನ್ನ ಬಾಯಿಯಲ್ಲಿಟ್ಟಳು. ನಾನು ಅವಳ ಪ್ರಾಣವನ್ನೂ ಹೀರಿದ್ದೆ. ಆ ಭಯಂಕರ ನೋವಿಗೆ ಅವಳ ಸೌಂದರ್ಯದ ಮಾರುವೇಷ ಬದಲಾಗಿ ರಾಕ್ಷಸಿಯ ನಿಜರೂಪದ ದೇಹ ಬಿದ್ದಿತ್ತು. ನಾನು ಅದರ ಮೇಲೆ ಆಟವಾಡುತ್ತಿದ್ದೆ. ಅಂದು ಆ ದೇಹವನ್ನು ಗೋಕುಲದಲ್ಲಿ ಬೆಂಕಿ ಹಾಕಿ ಸುಟ್ಟಾಗ ಸುಗಂಧವೊಂದು ಇಡೀ ವಾತಾವರಣವನ್ನು ವ್ಯಾಪಿಸಿತ್ತು. ಪೂತನಿ ಭವದ ಬದುಕಿಂದ ಮುಕ್ತಳಾಗಿದ್ದಳು. ಯಾಕೆ ಕೃಷ್ಣಾ, ಕೊಲ್ಲಲು ಬಂದವಳಿಗೆ ಮುಕ್ತಿ ಅಂತ ನೀನು ಪ್ರಶ್ನಿಸಬಹುದು. ನಿನಗೆ ಗೊತ್ತಾ ರಾಧಾ, ರಕ್ಕಸಿಯಾಗಿದ್ದರೂ, ಕೊಲ್ಲುವುದೇ ಉದ್ದೇಶವಾಗಿದ್ದರೂ ನನಗೆ ಎದೆ ಹಾಲು ಉಣಿಸುವ ಆ ಸಂದರ್ಭದಲ್ಲವಳು ಯಾವ ಕಲ್ಮಶಗಳೂ ಇಲ್ಲದ ತಾಯಾಗಿದ್ದಳು. ಕೊಲ್ಲುವುದ ಮರೆತಿದ್ದಳು. ತಾಯ್ತನದ ಪೂರ್ಣಭಾವವನ್ನು ಅನುಭವಿಸಿದಳು. ನಿಜವಾಗಿಯೂ ಹಾಲುಣಿಸಿದವಳು ಕೊಲ್ಲಲಾರಳು ಅನ್ನುವ ಸಂದೇಶ ಜಗತ್ತಿಗೆ ಮುಟ್ಟಬೇಕಿತ್ತಲ್ಲವಾ, ಹಾಗಾಗಿಯೇ ಅಂದು ಪೂತನಿ ತಾಯ್ತನದ ಪದವಿ ಪಡೆದಳು ಹಾಗೂ ಅದರಿಂದಾಗಿಯೇ ಅವಳ ಅಷ್ಟೂ ದಿನದ ಕ್ಲೇಶಗಳಿಂದ ಮುಕ್ತಳಾದಳು. 


ಅಶ್ವತ್ಥಾಮನು ಅಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುವುದಕ್ಕೆ ಹವಣಿಸಿದ್ದು ನೆನಪಿದೆಯಾ ನಿನಗೆ? ಜಗತ್ತನ್ನೇ ‌ನೋಡಿರದ ಭ್ರೂಣವೊಂದಕ್ಕೆ ಅಸ್ತ್ರ ಪ್ರಯೋಗ ಮಾಡಬಾರದಿತ್ತು ಅಶ್ವತ್ಥಾಮ. ಆದರೆ, ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವ ದ್ವೇಷದಲ್ಲಿ ಮಹಾಗುರು ದ್ರೋಣರ ಮಗ ಅಶ್ವತ್ಥಾಮ ಧರ್ಮದ ಕಟ್ಟಳೆಗಳನ್ನು ಮೀರಿ ನಿಂತಿದ್ದ. ಒಂದು ವೇಳೆ ಆ ದಿನ ಉತ್ತರೆಯ ಗರ್ಭವೇನಾದರೂ ಬಲಿಯಾಗಿದ್ದರೆ ಇತಿಹಾಸದಲ್ಲೊಂದು ಘೋರ ಕೃತ್ಯ ದಾಖಲಾಗುತ್ತಿತ್ತು. ಹಾಗಾಗಿಯೇ ನಾನು ಆ ದಿನ ಆ ಗರ್ಭಕ್ಕೆ ರಕ್ಷಣಾಕವಚವಾಗಿ ನಿಲ್ಲಬೇಕಾಯಿತು. ಆ ದಿನ ಧರ್ಮಕ್ಕಿಂತಲೂ ಮುಖ್ಯವಾದ ಇನ್ನೇನೋ ಒಂದು ಸಂದೇಶ ಇಡೀ ಸೃಷ್ಟಿಗೆ ತಲುಪಬೇಕಿತ್ತು. ತಾಯಿಯ ಗರ್ಭವೂ ಸುರಕ್ಷಿತವಲ್ಲ ಅಂತ ತಿಳಿದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಯುಗಗಳ ತನಕ ಜೀವ ಸೃಜನೆ ಆಗುವುದಾದರೂ ಹೇಗೆ ಅಲ್ಲವಾ ರಾಧೆ? 


ಮಾತೃತ್ವದ ನೆನಪುಗಳನ್ನು ಮೆಲುಕು ಹಾಕುತ್ತಾ, ನೀನು ಹೇಗಿದ್ದೀಯಾ ಅಂತ ಕೇಳುವುದನ್ನೇ ಮರೆತೆ ನೋಡು ನಾನು. ಕಾಯುತ್ತಿದ್ದೀಯಾ ಅಂತ ತಿಳಿದಿದೆ. ಕಾಯುವುದು ಹೆಣ್ಣು ಜೀವಕ್ಕೆ ಹುಟ್ಟಿನಿಂದಲೇ‌ ಬಂದ ಸಾಮರ್ಥ್ಯ ಅಂತ ನಾನು ಅಂದರೆ, ಹೌದಪ್ಪಾ, ನಿಮಗೇನು ಗಂಡಸರಿಗೆ, ಹೇಳಿಬಿಡುತ್ತೀರಿ, ಕಾಯುವುದರಲ್ಲೂ ಒಂಥರಾ ಸುಖವಿದೆ, ವಿರಹ ಹೆಚ್ಚಾದಷ್ಟೂ ಮಿಲನದ ತೀವ್ರತೆ ಹೆಚ್ಚು, ಸಂಬಂಧಗಳು ಗಟ್ಟಿಯಾಗುವುದೇ ಕಾಯುವುದರಿಂದ ಇತ್ಯಾದಿ ಇತ್ಯಾದಿ, ಅಂತೆಲ್ಲಾ ನನ್ನ ಮೇಲೆ ಹರಿಹಾಯಬೇಡ. ಜೀವವೊಂದು ಕರುಳ ಬಳ್ಳಿಗೆ ಅಂಟಿಕೊಂಡಿರುವಾಗ ಒಂಬತ್ತು ತಿಂಗಳುಗಳ ಕಾಲ ಪೊರೆದು, ಕ್ಷಣಕ್ಷಣವೂ ತನ್ನ ದೇಹದಿಂದ ಸೃಜಿಸುವ ಇನ್ನೊಂದು ಜೀವವನ್ನು ಕೈಯಲ್ಲಿ ಹಿಡಿಯುವ ಪುಳಕದಲ್ಲಿ ಕಾಯುತ್ತಾಳಲ್ಲವಾ ತಾಯಿ ಅನ್ನುವ ಕಾರಣಕ್ಕೆ ನಾನು ಹಾಗೆ ಹೇಳಿದೆನಷ್ಟೇ. ಕಾಯುವುದೂ ಸಂಭ್ರಮವಾಗಬಲ್ಲದು, ಮಗು ಒದೆಯುವುದೂ ನಗೆ ಚೆಲ್ಲಬಲ್ಲದು ಅನ್ನುವುದನ್ನು ತಾಯಲ್ಲದೇ ಇನ್ನಾರು ತೋರಿಸಲು ಸಾಧ್ಯ! 


ರಾಧೇ, ಬೃಂದಾವನದ ಗೋಮಾತೆಯರು ಹೇಗಿದ್ದಾರೆ ಈಗ? ನನಗೆ ಬಿರುಬಿಸಿಲಲ್ಲಿ ನೆರಳನ್ನಿತ್ತ ವೃಕ್ಷಗಳು ಹೇಗಿದ್ದಾವೆ? ನಾವು ಕಾಲುಬಿಟ್ಟು ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದ ಹಳ್ಳ‌ಕೊಳ್ಳಗಳು ಹೇಗಿದ್ದಾವೆ? ನನಗೆ ಮತ್ತೆ ನಿನ್ನ ಜೊತೆ ಕೂತು ಮಡಕೆಗಳ ಮೇಲೆಲ್ಲಾ ಚಿತ್ತಾರ ಬರೆಯಬೇಕು. ಕಪಿಲೆ ಗಂಗೆಯರ ಮೈಮೇಲೆ ವೃತ್ತಾಕಾರದ‌ ಚಿತ್ರಗಳನ್ನು ಬಿಡಿಸಬೇಕು, ಝರಿಯ ಹತ್ತಿರ ಅವುಗಳ ಮೈತೊಳೆಸಬೇಕು, ಕೋಗಿಲೆ, ನವಿಲುಗಳ ಜೊತೆ ಕೊಳಲೂದುತ್ತಾ ಸ್ಪರ್ಧಿಸಬೇಕು, ಆಗಷ್ಟೇ‌ ಮಿಂದುಬಂದ ನಿನ್ನ ಹೆರಳ ಒದ್ದೆ ಪರಿಮಳವನ್ನು ಆಘ್ರಾಣಿಸಬೇಕು, ಧೂಪದ ಗಂಧದ ಗಾಳಿಯಲ್ಲಿ ಸಂಜೆಯ ಉದ್ಯಾನದ ತುಂಬಾ ನಿನ್ನ ಜೊತೆ ಸೇರಿ ಹಣತೆಗಳನ್ನಿಡಬೇಕು. ಗಾಳಿಗೆ ಆರಿ ಹೋಗದ ಹಾಗೆ, ನಿನ್ನ ಹಿಂದಿನಿಂದ ನಿನ್ನ ಕೈಗಳೊಂದಿಗೆ ನನ್ನ ಕೈಗಳನ್ನು ಕೂಡಿಸಬೇಕು, ನಿನ್ನ ಸೊಂಟದಿಂದ ತುಸು ದೂರದಲ್ಲಿಯೇ ನನ್ನ ಕೈಗಳು ಹಾದುಹೋಗುವಾಗ ನಿನ್ನ ಕಿಬ್ಬೊಟ್ಟೆಯ ಪಕ್ಕ ಕಂಪಿಸುವುದ ನೋಡಬೇಕು, ಬಿದಿಗೆ ಚಂದ್ರನ ಬೆಳಕಲ್ಲಿ ನಿನ್ನ ನಾಚಿಕೆಯನ್ನು ಅಳೆಯಬೇಕು, ಮತ್ತೆ ಬೆಳಿಗ್ಗೆ ನದಿ ದಡದಲ್ಲಿ ನೀನು ಒಗೆದುಕೊಟ್ಟ ಬಟ್ಟೆಯನ್ನೆಲ್ಲಾ ಹಿಂಡುತ್ತಾ ಒಣಗಿಸುವುದಕ್ಕೆ ಅಣಿಯಾಗಬೇಕು, ಯಮುನೆಯ ದಡದಗುಂಟ ನಡೆದರೆ ಒಂದು ಕಾಡಿದೆಯಲ್ಲಾ, ಅಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ನಾವಿಬ್ಬರೇ ಕೂತು ತೂಗಬೇಕು, ಅದೆಷ್ಟೋ ಮಧ್ಯಾಹ್ನಗಳ ನೀರವತೆಯಲ್ಲಿ ನಿನ್ನ ಮುಂಗುರುಳುಗಳ ಜೊತೆ ಆಟವಾಡಬೇಕು, ಕಣ್ಣುಮುಚ್ಚಾಲೆಯಾಡುವಾಗಲೆಲ್ಲಾ ನೀನೆಲ್ಲಿದ್ದೀಯ ಅಂತ ಗೊತ್ತಿದ್ದರೂ ಗೊತ್ತಿಲ್ಲದವರ ಹಾಗೆ ಊರ ತುಂಬಾ ಹುಡುಕಾಡಬೇಕು, ಅಶ್ವತ್ಥ ಎಲೆಗಳ ಮೇಲೆ ನಿನ್ನ ಹೆಸರನ್ನು ಬರೆದು ನದಿಯಲ್ಲಿ ತೇಲಿಬಿಡಬೇಕು, ರಾಧೇ.. ಅಂಥ ದಿನಗಳಿಗಾಗಿ ಕೃಷ್ಣನೂ ಕಾಯುತ್ತಿದ್ದಾನೆ ಅನ್ನುವುದು ತಿಳಿದಿದೆಯಲ್ಲವಾ ನಿನಗೆ?


ನೀನು ಬೆಳಿಗ್ಗೆಯೇ ಎದ್ದು ಹಾಕುವ ರಂಗೋಲಿಯಲ್ಲಿ ಪ್ರತಿದಿನವೂ ಎರಡು ಚುಕ್ಕಿಗಳನ್ನು ಹಾಗೆಯೇ ಬಿಟ್ಟಿರು, ಒಂದು ಮುಂಜಾನೆ ಹಿಮದ ದಪ್ಪ ಪದರಗಳು ತುಂಬಿಕೊಂಡ ಹಾದಿಯಲ್ಲಿ ಕೋಮಲ‌ ಪಾದಗಳು ನಡೆದುಬರುತ್ತವೆ. ಅಪೂರ್ಣ ಕತೆಗಳನ್ನು ಇನ್ನಷ್ಟು ಮುಂದುವರೆಸುವ ನನ್ನ ಇಂಗಿತವನ್ನು ಇನ್ನಷ್ಟು ವರುಷಗಳ ಕಾಲ‌ ನಾವು ಒಯ್ಯಲೇಬೇಕು. ಕೃಷ್ಣ ಬರುತ್ತಾನೆ, ಅಂದು ಬೃಂದಾವನದ ಆಕಳ ಕೊರಳ ಗಂಟೆಗಳು ತಾವಾಗಿಯೇ ತೂಗುತ್ತವೆ, ಕೊಟ್ಟಿಗೆಯಿಂದಾಚೆ ಬಂದು ಅವೆಲ್ಲವೂ ಗುಂಪುಗಟ್ಟಿ ನಿಲ್ಲುತ್ತವೆ. ಕಡೆದಂತೆಲ್ಲಾ ತುಂಬಿಸಲಿಕ್ಕೆ ಮಡಕೆಗಳು ಸಾಕಾಗದಷ್ಟು ಬೆಣ್ಣೆ ಬೆಳೆಯುತ್ತದೆ,  ಹಿಂದಿನ ದಿನ ಸಂಜೆ ನೀ ಮಲಗುವ ಕೋಣೆಗೆ ಎಲ್ಲಿಂದಲೋ ನವಿಲುಗರಿಯೊಂದು ಹಾರಿ ಬಂದು ಬೀಳುತ್ತದೆ, ರಾತ್ರಿ ಪೂರ ಚಕ್ರವಾಕ ಕೂಗುತ್ತದೆ, ಬೆಳದಿಂಗಳ ಮೃದು ಕಿರಣಗಳು ಕಿಟಕಿಗಳನ್ನು ದಾಟಿ ನಿನ್ನ ಹೊಕ್ಕುಳನ್ನು ಹೊಕ್ಕುತ್ತವೆ. ನಾ‌ ಬರುವ ದಿನ ನೀ ಹೊದ್ದ ಸೆರಗು ಪದೇ ಪದೇ ಜಾರುತ್ತದೆ, ನಿನಗೆ ಇದ್ದಕ್ಕಿದ್ದ ಹಾಗೆ ಕಾಲ್ಗೆಜ್ಜೆಯ ನೆನಪಾಗುತ್ತದೆ.. ಅದೆಷ್ಟೋ ವರುಷಗಳ ಧೂಳನ್ನು ಕೊಡವುವ ಹಾಗೆ ಗಾಳಿ ಬೀಸಿ ಆಮೇಲೆ ತಂಗಾಳಿಯು ಊರ ತುಂಬಾ ಹಬ್ಬುತ್ತದೆ, ಕೊಳಲು ಹಿಡಿದು ಊರ ಹೊಸಲಲ್ಲಿ ಇದಿರುಗೊಳ್ಳುತ್ತೀಯಲ್ಲವಾ ರಾಧೆ?


ಇಂತಿ ನಿನ್ನ 

ಗೊಲ್ಲ


~`ಶ್ರೀ'

    ತಲಗೇರಿ

ಶನಿವಾರ, ಫೆಬ್ರವರಿ 11, 2023

ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ...

 


ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... 

ಅಲೆಮಾರಿ ಮನುಷ್ಯ ಒಂದು ಕಡೆ ನೆಲೆ ನಿಂತ ಅನ್ನುವುದು ನಾಗರಿಕತೆಯ ಶುರುವಾದರೂ, ನೆಲೆ‌ ನಿಂತ ಮನುಷ್ಯ ಮತ್ತೆ ಅಲೆಮಾರಿತನದ ಕನಸಿನೊಂದಿಗೆ ಬದುಕತೊಡಗಿದ. ಒಂದು ಊರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ‌ ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊನೆಗೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವುದೂ ಮನುಷ್ಯನ ಅಲೆಮಾರಿತನದ ಭಾಗವೇ ಆಗಿಹೋಗಿದೆ. ಉದ್ಯೋಗ, ಬದುಕಿನ ಗುಣಮಟ್ಟದ ಉನ್ನತಿಗಾಗಿ, ಬೇರೆ ಬೇರೆ ಜಾಗ, ಜನ ಜೀವನ, ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ, ಓದಿಗಾಗಿ, ನೆಮ್ಮದಿಗಾಗಿ ಹೀಗೆ ಹತ್ತು ಹಲವು ಕಾರಣಗಳೇ ನೆಪವಾಗಿ ಅಲೆದಾಟ ನಾಗರಿಕತೆಯ ಭಾಗವೂ ಆಯಿತು. ಕೆಲವೊಮ್ಮೆ ತಾವಿರುವ ಜಾಗದಲ್ಲಿ ತಮಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂದು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ತಾವಿರುವ ಕಡೆಯಲ್ಲಿ ಮನ್ನಣೆ ದೊರೆತು, ಮನ್ನಣೆಯ ಮುಂದುವರಿದ ಭಾಗವಾಗಿಯೇ ವಿದೇಶಕ್ಕೆ ಹೋಗುವವರು. ಇನ್ನು ಕೆಲವರು, ನೀರ ಹರಿವಿಗೆ ಅನುಗುಣವಾಗಿ ನೀರಲ್ಲಿ ಉದುರಿದ ಎಲೆಗಳು ಸಾಗುವ ಹಾಗೆ. ಅವಕಾಶಗಳು ಎಲ್ಲೆಲ್ಲಿ ಕರೆದೊಯ್ಯುತ್ತವೆಯೋ ಅಲ್ಲೆಲ್ಲಾ ಹೋಗುತ್ತಾರೆ. ಈ ಪಾತ್ರದಲ್ಲಿ ಬರುವ ದಂಪತಿಗಳ ಕತೆಯೂ ಹೆಚ್ಚೂ ಕಡಿಮೆ ನೀರ ಹರಿವಿನೊಂದಿಗೆ ಸಾಗುವ ಎಲೆಗಳ ಹಾಗೆಯೇ. ಆದರೆ, ಇದು ಬರೀ ಅಸಹಾಯಕತೆಯಲ್ಲ, ಹರಿವಿನೊಂದಿಗೆ ಈಜು ಕಲಿತು, ಆಮೇಲೆ ಅದರ ವಿರುದ್ಧ ಈಜುವ ಪ್ರಕ್ರಿಯೆಯ ಭಾಗವೂ ಆಗಿರಬಹುದೇನೋ ಅನ್ನುವ ಹಾಗೆ! ಅಂದ ಹಾಗೆ, ಕಾದಂಬರಿಯ ಹೆಸರು 'ದ್ವೀಪವ ಬಯಸಿ', ಬರೆದವರು ಎಂ ಆರ್ ದತ್ತಾತ್ರಿ ಅವರು.

ಕಾರ್ಪೊರೇಟ್ ಜಗತ್ತು ಅಂದ ತಕ್ಷಣ ಒಂದಷ್ಟು ಅದೇ ಹಳಸಲು ರೂಪಕಗಳು, ಈಗಾಗಲೇ ತಿಕ್ಕಿ ತಿಕ್ಕಿ ಬರೆದು ಬರೆದು ತೆಳುವಾದ ಅಭಿವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಕಣ್ಣ‌ಮುಂದೆ ಬರುತ್ತವೆ. ಆದರೆ, ಈ ಕಾದಂಬರಿ ಭಿನ್ನವಾಗುವುದೇ ಇಲ್ಲಿ. ಇದು ಕಾರ್ಪೊರೇಟಿನ ಕತೆಯಾದರೂ, ಅದೊಂದು ದ್ವೀಪವಷ್ಟೇ; ಅಂಥದ್ದೇ ಇನ್ನೂ ಹಲವು ದ್ವೀಪಗಳಿವೆ ಇಲ್ಲಿ! ಕಾರ್ಪೊರೇಟಿನ ಯಾವತ್ತಿನ ಸಂಗತಿಗಳ ಜೊತೆಜೊತೆಗೆ ಇಲ್ಲಿ ಮನುಷ್ಯರ ಕತೆಗಳಿವೆ. ಮನುಷ್ಯರ ಸಂಬಂಧಗಳ, ಮನೋವ್ಯಾಪಾರಗಳ ಕತೆಗಳಿವೆ. ವೀಕೆಂಡು, ಬಾಸಿಗೆ ಬೈಗುಳ ಇಷ್ಟಕ್ಕೇ ಸೀಮಿತವಾಗದೇ, ಕಾರ್ಪೊರೇಟಿನ ಒಳಸುಳಿಗಳೂ ಕೆಲವಷ್ಟಿವೆ. ಒಂದು ಸಂಗತಿಯನ್ನು ಕಾರ್ಪೊರೇಟ್ ಅಥವಾ ರಾಜಕೀಯ ಹೇಗೆ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಮುಂದಿಡುತ್ತದೆ ಹಾಗೂ ಅದನ್ನು ನಂಬಿಸುವಲ್ಲಿ ಸಫಲವಾಗುತ್ತದೆ ಅನ್ನುವುದನ್ನು ಹೇಳುವುದರ ಜೊತೆಜೊತೆಗೆ, ಇಲ್ಲಿ ಹುಡುಕಾಟದ ಕತೆಯಿದೆ. ಜಗತ್ತು ಒಂದೇ ಆದರೂ, ಅಲ್ಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಪ್ರತಿ ದ್ವೀಪವನ್ನು ತಲುಪುವುದಕ್ಕೂ ಬೇರೆ ಬೇರೆಯದೇ ದಾರಿ. ಪ್ರತಿ ದ್ವೀಪದ ಒಳ ಪ್ರಪಂಚ ಬೇರೆ ಬೇರೆ. 

ನಮಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಒಂದು ಹಂತದವರೆಗೆ ದೇಹ ಸೌಂದರ್ಯವನ್ನೂ ನೋಡಿ ಮದುವೆಯಾದವರಿಗೆ ವರುಷಗಳು ಉರುಳಿದ ಹಾಗೆ, ಅದು ದೇಹಕ್ಕಿಂತಲೂ ಮನಸ್ಸುಗಳ ಬೆಸುಗೆಯಾಗಿ ಸಂಬಂಧ ಗಟ್ಟಿಯಾಗುತ್ತ ಹೋಗುತ್ತದೆ.‌ ದೇಹ ಒಂದು ಸಾಧನವಷ್ಟೇ, ಬಂಧ ಇರುವುದು ಮನಸ್ಸುಗಳ‌ ಸಂಬಂಧದಲ್ಲಿ. ಬಹುಶಃ ಈ ಮಾತು ಮತ್ತು ಮೌನಗಳ ಸಂಗತಿಯೂ ಹೀಗೇ ಇರಬಹುದು ಅನಿಸುತ್ತದೆ. ಮಾತು, ಸಂವಹನದ ಮಾಧ್ಯಮವೇ ಆದರೂ ಮೌನದ ಸಾನ್ನಿಧ್ಯವನ್ನು ಹಾಗೂ ಅದರ ಅಗತ್ಯವನ್ನು ಗುರುತಿಸಲಾರದವರು ಮಾತಿನ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರೇನೋ ಅನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಸಾಲಿದೆ; "ನಮ್ಮ ನಮ್ಮ ಮೌನ ಭಾಷೆಯನ್ನು ಕೇಳಬಲ್ಲ ಮತ್ತೊಂದು ಜೀವವನ್ನು ಗುರುತಿಸಿಕೊಟ್ಟಿತ್ತು". ಸಂಗಾತಿಯಾಗುವುದೆಂದರೆ ಮಾತುಗಳನ್ನು ಕೇಳುವುದಷ್ಟೇ ಅಲ್ಲ, ಮೌನವನ್ನು ಆಲಿಸುವುದು ಕೂಡಾ ಬಹುಮುಖ್ಯ, ಮುಂದೊಂದು ದಿನ ಬದುಕಿನ ಮಹತ್ವದ ನಿರ್ಧಾರಗಳಿಗೆ ಬೆನ್ನೆಲುಬಾಗುವುದು ಈ ಮೌನ ಭಾಷೆಗಳ ನಡುವಿನ ಸಂವಹನ ಅನ್ನುವುದು ಒಂದು ವಿಸ್ಮಯಕಾರಿ ವಿಷಯ. 

ಫೋಟೋಗಳ ಪ್ರಪಂಚ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಪಂಚ. ಒಂದೊಂದು ಥರದ ಫೋಟೋಗಳು ಒಬ್ಬೊಬ್ಬರಿಗೆ ಇಷ್ಟವಾಗುತ್ತವೆ. ಆದರೆ, ಎಲ್ಲದರಲ್ಲೂ ಒಂದು ಸಾಮಾನ್ಯ ಸಂಗತಿಯೆಂದರೆ, ಆ ಫೋಟೋ ಇಷ್ಟವಾಗುವುದರ ಅಥವಾ ಅದು ಆತ್ಮೀಯವಾಗುವುದರ ಹಿಂದೆ ಯಾವುದೋ ಒಂದು ಕತೆಯಿರುತ್ತದೆ. ಅದು ನಮ್ಮ ಹಿನ್ನೆಲೆಯೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ನಾವು ಬದುಕಿದ ಪರಿಸರ ಅಥವಾ ನಮ್ಮ ಕನಸಿನ ಪರಿಸರ, ನಮ್ಮ ಜೀವನದ ಎಷ್ಟೋ ಘಟನೆಗಳು ಹಾಗೂ ಅದರ ಸುತ್ತಲೂ ಹಬ್ಬಿಕೊಂಡ ನಮ್ಮ ಭಾವಗಳು, ನಾವು ಇಷ್ಟಪಡುವ ಅಥವಾ ಹೆಚ್ಚಾಗಿ ಹಚ್ಚಿಕೊಂಡ ವ್ಯಕ್ತಿಗಳು ಹೀಗೆ ಹಲವು ಕಾರಣಗಳು ಒಂದು ಫೋಟೋವನ್ನು ನಮಗೆ ಹತ್ತಿರವಾಗಿಸುತ್ತವೆ. ಕೆಲವೊಮ್ಮೆ 'ಇಷ್ಟ'ದ ಫೋಟೋ ಅನ್ನುವುದಕ್ಕಿಂತ ಅದನ್ನು 'ಕಾಡಿದಂಥ' ಫೋಟೋ ಅಂತಲೂ ಅನ್ನಬಹುದು. ಒಂದು ಫೋಟೋ ಅದ್ಯಾಕೆ‌ ನಮ್ಮೊಂದಿಗೆ ತಳುಕು ಹಾಕಿಕೊಳ್ಳುತ್ತದೆ ಅನ್ನುವುದಕ್ಕೆ ಒಂದು ಸಂದರ್ಭ ಇದೆ ಈ ಕಾದಂಬರಿಯಲ್ಲಿ. ಅಲ್ಲಿ ಬರುವ ಮಾತುಗಳು ಹೆಚ್ಚೂ ಕಡಿಮೆ ಸ್ಟೀಫನ್ ಶೋರ್ (stephen shore)  ಅವರ ಮಾತುಗಳನ್ನು ನೆನಪಿಸಿತು. ಮಜದ ಸಂಗತಿಯೆಂದರೆ ಈ ಕಾದಂಬರಿಯಲ್ಲಿ ಬರುವ ಈ ಸಂದರ್ಭವನ್ನು ಓದಿದ್ದು ಮತ್ತು ಸ್ಟೀಫನ್ ಅವರ ಸಾಲುಗಳನ್ನು ಓದಿದ್ದು ಒಂದೇ ದಿ‌ನ! ಸ್ಟೀಫನ್ ಅವರ ಸಾಲುಗಳು ಹೀಗಿವೆ: "The context in which a photograph is seen affects the meaning the viewer draws from it" - ಯಾವ ಸಂದರ್ಭದಲ್ಲಿ ಒಂದು ಫೋಟೋ ನೋಡಲ್ಪಟ್ಟಿತು ಅನ್ನುವುದು, ಅದನ್ನು ಅರ್ಥೈಸಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. 

ಮನುಷ್ಯ ಲೋಕವೇ ಒಂದು ವಿಸ್ಮಯದ ಲೋಕ. ಇಲ್ಲಿ ಯಾವ ವ್ಯಕ್ತಿಯನ್ನಾದರೂ ನಾವು ಎಷ್ಟು ಅರ್ಥೈಸಿಕೊಂಡಿದ್ದೇವೆ ಅಂದುಕೊಂಡರೂ, ಯಾವತ್ತೋ ನಮಗೆ ಗೊತ್ತಿಲ್ಲದ ಯಾವುದೋ ಹೊಸ ಗುಣದೊಂದಿಗೆ, ಹೊಸ ಅಂಶದೊಂದಿಗೆ ನಮ್ಮೆದುರು ಬರುತ್ತಾರೆ. ವ್ಯಕ್ತಿಯನ್ನು ಅರಿತುಕೊಂಡಷ್ಟೂ, ಅರಿಯದೇ ಹೋದದ್ದು ಬಹಳಷ್ಟಿದೆ ಅನ್ನುವುದರ ಅರಿವಾದರೆ, ಬಹುಶಃ ಬದುಕು ಇನ್ನಷ್ಟು ಸಲೀಸಾದೀತೇನೋ. ಮೊದಮೊದಲಿಗೆ ಇಬ್ಬರು ವ್ಯಕ್ತಿಗಳು ಪರಿಚಿತರಾದಾಗ, ಇಬ್ಬರಿಗೂ ಮಾತಾಡುವುದಕ್ಕೆ ಬಹಳಷ್ಟಿರುತ್ತದೆ. ಕಾರಣ, ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕುತೂಹಲ. ಆದರೆ, ಒಂದೆರಡು ವರ್ಷಗಳ ನಂತರವೂ ಆ ಬಾಂಧವ್ಯ, ಆ ಮಾತುಕತೆಗಳು ಹಾಗೆಯೇ ಇದ್ದರೆ, ಅದನ್ನು ಖಂಡಿತವಾಗಿಯೂ ವಿಶೇಷ ಸಂಬಂಧವೆಂದೇ ಪರಿಗಣಿಸಬಹುದೇನೋ. ಕುತೂಹಲ ತಣಿದ ಮೇಲೆ ಮನುಷ್ಯರಿಗೆ ಆಸಕ್ತಿ ಕಡಿಮೆಯಾಗುವುದು ಸಹಜ ಗುಣ. ಹಾಗಾಗಿಯೇ ಹಲವು ಸಂಬಂಧಗಳು ಒಂದೆರಡು ವರ್ಷಗಳ ನಂತರ ಸಡಿಲವಾಗುತ್ತವೆ. ಮಾತುಕತೆಗಳು ನಿಲ್ಲುತ್ತವೆ. "ಪ್ರತಿ ವ್ಯಕ್ತಿಯೊಂದಿಗೂ ನಾವು ಗುರುತಿಸಿ ಪದಗಳಿಗೆ ರೂಪಾಂತರಿಸಬಲ್ಲ ಚಹರೆಗಳು ಒಂದಿಷ್ಟಿದ್ದರೆ ಅವ್ಯಕ್ತವಾಗಿ ಹೊರಹೊಮ್ಮುವ ಚಹರೆಗಳು ಸಾವಿರವಿರುತ್ತವೆ" ಅಂತ ಲೇಖಕರು ಒಂದು ಕಡೆ ಹೇಳಿದ್ದಾರೆ.

ಜಾಗತಿಕವಾದ ಅಥವಾ ವಿಶ್ವಾತ್ಮಕವಾದ ಸತ್ಯ ಒಂದೇ ಇರುವುದು ಅನ್ನುವುದು ನಿಜವಾದರೂ, ಆ ಕ್ಷಣದ ಸತ್ಯಗಳು ಹಲವು. ಯಾವ ಪರಿಸರದಲ್ಲಿ, ಯಾವ ಸಂದರ್ಭದಲ್ಲಿ ನಾವು ಒಂದು ಸಂಗತಿಯನ್ನು ನೋಡುತ್ತೇವೆಯೋ ಅದಕ್ಕೆ ಅನುಗುಣವಾಗಿ ನಾವು ಅರ್ಥಗಳನ್ನು ಹುಡುಕಿಕೊಳ್ಳುತ್ತೇವೆ. ಎಲ್ಲವೂ ಸತ್ಯದ ಒಂದೊಂದು ಭಾಗವಾಗಿರುತ್ತವೆಯೇ ಹೊರತೂ 'ಪೂರ್ಣ ಸತ್ಯ'ವಾಗಿರುವುದಿಲ್ಲ. ಹಾಗೆ, ಪೂರ್ಣ ಸತ್ಯ ಅರಿವಾಗಬೇಕಾದರೆ, ಎಲ್ಲಾ ಕೋನಗಳಿಂದಲೂ ಆ ಸತ್ಯದ ನೋಟ ಸಿಗಬೇಕು. ಹಾಗಾಗಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಸತ್ಯ ಬದಲಾಗುತ್ತದೆ. ನಿಜ ಹೇಳಬೇಕೆಂದರೆ, ಅದು ಸತ್ಯ ಬದಲಾಗುವುದಲ್ಲ. ಆದರೆ, ಸತ್ಯದ ತುಣುಕುಗಳಷ್ಟೇ ದಕ್ಕುವುದು. ಅದೇ ಅವರವರ ಪಾಲಿನ ಸತ್ಯ. 

ಲೈಫ್ ಆಫ್ ಪೈ' ( Life of Pi ) ಪುಸ್ತಕ ಹಾಗೂ ಸಿನೆಮಾದಲ್ಲಿ ಒಂದು ಮಾತಿದೆ. "I suppose in the end, the whole of life becomes an act of letting go, but what always hurts the most is not taking a moment to say goodbye" - ಕೊನೆಯಲ್ಲಿ, ಇಡೀ ಬದುಕು ಬೀಳ್ಕೊಡುಗೆಯ ಒಂದು ಪ್ರಕ್ರಿಯೆಯೇ ಆಗಿಹೋಗುತ್ತದೆ. ಆದರೆ, ನೋವು ಕೊಡುವ ಸಂಗತಿಯೆಂದರೆ, ಹಾಗೆ ಬೀಳ್ಕೊಡುವಾಗ, ಒಂದು ಸರಿಯಾದ ವಿದಾಯವನ್ನು ಹೇಳಲಿಕ್ಕೆ ಒಂದು ಕ್ಷಣವನ್ನು ಕೂಡಾ ತೆಗೆದುಕೊಳ್ಳದೇ‌ ಹೋಗುವುದು. ಬಹುಶಃ ಎಲ್ಲ ನಿರ್ಗಮನಗಳೂ ಹಾಗೆಯೇ. ಎಲ್ಲಿಯೇ ಹೋದರೂ, ನಿರ್ಗಮನದ ದಿನ ಭಾವುಕತೆ ಜಾಸ್ತಿ. ಅದರಲ್ಲೂ ಅಲ್ಲಿನ ಜಾಗ, ಮನುಷ್ಯರು, ಸಂಸ್ಕೃತಿ ಇತ್ಯಾದಿಗಳು ಇಷ್ಟವಾದರಂತೂ ಮುಗಿಯಿತು. ತುಸು ಹೆಚ್ಚೇ ಮನಸ್ಸು ಚಡಪಡಿಸುತ್ತದೆ. ಹಾಗಿರುವಾಗ, ಈ 'ಕೊನೆಯ ದಿನ' ಅನ್ನುವುದು ಬಹಳಷ್ಟನ್ನು ಹೇಳುತ್ತದೆ ಕೂಡಾ. ಜಪಾನಿನಲ್ಲಿ ಒಂದು ಸಂಸ್ಕೃತಿಯಿದೆ. ಸತ್ತಮೇಲೆ ದೇಹವನ್ನು ಶುಚಿಯಾಗಿಸಿ,‌ ಅಲಂಕರಿಸಿ ತಯಾರು ಮಾಡಲಾಗುತ್ತದೆ. ನಮ್ಮಲ್ಲಿನ ಭಾರತೀಯ ಸಂಸ್ಕೃತಿಯಲ್ಲೂ ಹೀಗೆಯೇ ದೇಹವನ್ನು ಶುದ್ಧೀಕರಿಸುವ ಆಚರಣೆಯಿದೆ. ಯಾಕೆಂದರೆ, ಯಾವತ್ತಿಗೂ "ಒಂದು ಗೌರವಯುತವಾದ ಬೀಳ್ಕೊಡುಗೆ ಬೇಕು". 

ನಮಗೆಲ್ಲಾ ಅದೆಷ್ಟೋ ಸಲ ಅನಿಸಿದ್ದಿದೆ. ಬಹುಶಃ ಪ್ರತಿದಿನವೂ ಅನಿಸುತ್ತದೆ. ನಮ್ಮೆಲ್ಲರ ಬದುಕು ಯಾಕಿಷ್ಟು ವಿಚಿತ್ರ. ಪ್ರತಿಯೊಬ್ಬರೂ ಅವರವರ ಆರ್ಥಿಕ ಮಟ್ಟಕ್ಕಿಂತ ಮೇಲಿನವರನ್ನು ನೋಡಿ, " ಅವರಿಗೇನು, ಸುಖದ ಸುಪ್ಪೊತ್ತಿಗೆ" ಅಂತಲೇ ಅನ್ನುವುದು. ಆದರೆ, ಪ್ರತಿಯೊಬ್ಬರಿಗೂ ಅವರವರ ಕಷ್ಟಗಳು ಇರುವಂಥದ್ದೇ. "ಜೀವನ ಯಾಕಿಷ್ಟು ಸಂಕೀರ್ಣವಾಗಬೇಕು. ನೂರು ಕಷ್ಟಗಳನ್ನು ಅನುಭವಿಸಿಯೂ ಒಂದು ಸುಖ ಕಾಣದಿದ್ದರೆ, ಅಂತಹ ಜೀವನವನ್ನು ಮುಂದುವರೆಸುವುದರಲ್ಲಿ ಯಾವ ಅರ್ಥವಿದೆ" ಅನ್ನುವ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮೆಲ್ಲರಲ್ಲಿಯೂ ಹುಟ್ಟಿರುವಂಥದ್ದೇ. ಹಾಗೆಯೇ, ಅದಕ್ಕೆ ಬೇಕಾದ ಸಮಜಾಯಿಷಿಗಳನ್ನೂ ನಮ್ಮ ಬದುಕೇ ಒದಗಿಸಿಕೊಡುತ್ತದೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಪ್ರಶ್ನೆಗೆ ಸರಿಯಾದ 'ತಿಳಿವಳಿಕೆ'ಯನ್ನು ನಮ್ಮ ಬದುಕೇ ನಮ್ಮಲ್ಲಿ ಬಿತ್ತುತ್ತದೆ. ಪ್ರತೀ ಬದುಕಿಗೂ ಅದರದ್ದೇ ಆದ ಮಹತ್ವವಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕು, ಜಗತ್ತಿನ ಇನ್ನೊಂದು ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕಿನ ಮೇಲೆ ಹೇಗೆ ಪರಿಣಾಮ ಬೀರೋದಕ್ಕೆ ಸಾಧ್ಯ ಅಂತನ್ನುವುದು ವಿಚಿತ್ರ ಕುತೂಹಲವಾದರೂ, ಒಂದು ಮನೆಯಲ್ಲಿರುವ ಪ್ರತಿ ವ್ಯಕ್ತಿಯ ನಡೆಯೂ, ಅದೇ ಕುಟುಂಬದ ಇನ್ನೊಂದು ವ್ಯಕ್ತಿಯ ನಡೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಂತ ಹೇಳಲಾದೀತೇ, ಇಲ್ಲ ತಾನೇ? ಜಗತ್ತೇ ಒಂದು ಕುಟುಂಬ ಕಾಲದ ಸೂರಿನ ಕೆಳಗೆ. 

ಈ ಕಾದಂಬರಿಯಲ್ಲಿ, ಒಂದು ಬಹುಮುಖ್ಯವಾದ ಹಾಗೂ ಬಹುತೇಕರು ಗುರುತಿಸುವ ಸಂಗತಿಯೆಂದರೆ ನಮ್ಮಲ್ಲಿನ ಒಳ ಹೊರ ಎರಡು ವೃತ್ತಗಳ‌ ಕುರಿತಾಗಿ ಮತ್ತು ಭಿನ್ನ ವ್ಯಕ್ತಿತ್ವಗಳ ಕುರಿತಾಗಿ ಇರುವಂಥ ಸಾಲುಗಳನ್ನು. ನಮ್ಮೆಲ್ಲರಲ್ಲಿಯೂ ಎರಡು ಪ್ರಪಂಚಗಳು. ಒಂದು ಹೊರ ಪ್ರಪಂಚ, ಇನ್ನೊಂದು ಒಳ ಪ್ರಪಂಚ. ಎಷ್ಟೋ ಸಂಗತಿಗಳಲ್ಲಿ ಹೊರಗಡೆ ನಾವು 'ತೋರಿಸಿಕೊಳ್ಳುವ' ರೀತಿಯೇ ಬೇರೆ, ಒಳಗಡೆ ಇರುವ ರೀತಿಯೇ ಬೇರೆ. ಇದು ಕಪಟತೆಯ ಪ್ರಶ್ನೆ ಅಲ್ಲ, ಅದಕ್ಕಿಂತ ಮಿಗಿಲಾದ ಒಂದು ಸಹಜ ಮಾನವ ಲೋಕದ ಪ್ರತಿಫಲನ ಅಷ್ಟೇ. ಆ ಒಳಗಿನ ವೃತ್ತಕ್ಕೆ ಕೆಲವರಿಗಷ್ಟೇ, ಇಷ್ಟೇ ಇಷ್ಟು ಮಾತ್ರವೇ ಪ್ರವೇಶವಿರುವುದು, ಆ ಒಳಗಿನ ವೃತ್ತದಲ್ಲಿ ಮನುಷ್ಯ ಬಹುತೇಕ ಒಂಟಿಯೇ! ಇದು ಒಂದು ಕಡೆಯಾದಲ್ಲಿ, ಇನ್ನೊಂದು ಕಡೆ, ಈ ಜಗತ್ತಿನ ಸಂಗತಿಗಳಂತೂ ಬಲು ಸೋಜಿಗ. "ಎಡಮನೆಯಲ್ಲೊಬ್ಬ ಪ್ರೇಮಿಯಿದ್ದರೆ ಬಲಮನೆಯಲ್ಲೊಬ್ಬನಿಗೆ ವೈರಾಗ್ಯ ಅಂಕುರಿಸಿರುತ್ತದೆ" ಅನ್ನುತ್ತಾರೆ ಲೇಖಕರು. 

ಮನುಷ್ಯಲೋಕದ ವಿಸ್ಮಯಗಳು ಮುಗಿಯುವಂಥದ್ದಲ್ಲ. ಹೂವಿಗೆ ಗಂಧ ಹೇಗೋ ಹಾಗೆಯೇ, ಮನುಷ್ಯರಿಗೆ ನೆನಪುಗಳು. ಈ ನೆನಪುಗಳೇ ಮನುಷ್ಯರ ನಾಳೆಗಳನ್ನು ರೂಪಿಸುತ್ತವೆ. ಈ ನೆನಪುಗಳೇ ಮನುಷ್ಯರ ಬದುಕುಗಳನ್ನು ಕಟ್ಟಿಕೊಡುತ್ತವೆ. ಈ ನೆನಪಿನ ಪ್ರಪಂಚದಲ್ಲಿ ಏನೆಲ್ಲಾ ಆಗಿರಬಹುದು, ಆದರೆ ಅದರಲ್ಲಿ ಎಲ್ಲವೂ ನೆನಪಿರುವುದಿಲ್ಲ. ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದು ಮನುಷ್ಯರೊಳಗಿನ ಒಳವೃತ್ತವನ್ನು ಸೋಕದ ಹೊರತು, ನೆನಪಿನ ಪ್ರಪಂಚದಲ್ಲಿ ಅಚ್ಚಾಗುವುದಿಲ್ಲವೇನೋ ಅಥವಾ ಕಾಲಕ್ರಮೇಣ ಅಳಿಸಿಯೂ ಹೋಗಬಹುದು. ಆದರೆ, ಅಂಥ‌ ನೆನಪುಗಳಿರುವುದರಿಂದಲೇ ಮನುಷ್ಯರು ಬರೆಯಬಲ್ಲರು. ವಾಸ್ತವಗಳನ್ನೂ ಮೀರಿದ ಹಲವು ಪ್ರಪಂಚಗಳನ್ನು ತೆರೆದಿಡಬಲ್ಲರು. ಕಲೆ ಮತ್ತು ಕಲಾವಿದ ಇರುವುದೇ ನೆನಪುಗಳಿಂದಾಗಿ ಅಂದರೆ ಜಾಸ್ತಿಯೇನೂ ಆಗುವುದಿಲ್ಲ ಅನಿಸುತ್ತದೆ. ನೆನಪುಗಳು ವಸ್ತುಗಳೊಂದಿಗೆ, ಕ್ಷಣಗಳೊಂದಿಗೆ ಅಂಟಿಕೊಂಡಿರುವುದರಿಂದಲೇ ಮನುಷ್ಯರ ಭಾವಪ್ರಪಂಚ ಅಷ್ಟು ಚೆಂದ. 

ನಾವು ನೈತಿಕತೆಗಳ ಬಗ್ಗೆ ಬಹಳಷ್ಟು ಭಾಷಣ ಮಾಡುತ್ತೇವೆ. ಆದರೆ, ಯುದ್ಧದ ಮಧ್ಯ ನಿಂತು ಫೋಟೋ ತೆಗೆಯುವ ಛಾಯಾಗ್ರಾಹಕರನ್ನು ಅಥವಾ ಅದನ್ನು ವಿವಿಧ ಸುದ್ದಿ ಮಾಧ್ಯಮಗಳಿಗೆ ದಾಟಿಸುವ ವರದಿಗಾರರನ್ನು ಕೇಳಿ, ನೈತಿಕತೆ ಅಂದರೇನು? ಅಂತ. ಕಣ್ಣೆದುರಿಗೇ ಹೆಣಗಳು ಉದುರುತ್ತಿರುತ್ತವೆ. ಆದರೆ, ಆ ಪರಿಸರದಲ್ಲಿ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದು ವಿಚಿತ್ರ ಅನ್ನಿಸಬಹುದು, ಜೊತೆಗೆ ಮನುಷ್ಯರಿಗೆ ನೆರವಾಗದ ಇನ್ನೊಬ್ಬ ಮನುಷ್ಯ ಇದ್ದು ಏನು ಪ್ರಯೋಜನ ಅಂತಲೂ ಅನ್ನಿಸಬಹುದು. ಆದರೆ, ಇದು ಇರುವುದೇ ಹಾಗೆ. ವನ್ಯಜೀವಿ ಛಾಯಾಗ್ರಾಹಕರ ಕಣ್ಣೆದುರೇ ಬೇಟೆ ನಡೆಯುತ್ತದೆ. ಆದರೆ, ತಪ್ಪಿಸುವ ಹಾಗಿಲ್ಲ. ಬೇಟೆ ತಪ್ಪಿಸಿದರೆ, ಜೀವ ಉಳಿಸಿದ್ದು ಹೌದು, ಆದರೆ ಇನ್ನೊಂದು ಪ್ರಾಣಿ ಉಪವಾಸವಿರುವುದೂ ಹೌದು. ವನ್ಯಜೀವಿ ಲೋಕದ ಕತೆಯಲ್ಲಿ ಬದುಕಿಗಾಗಿ ಮಾತ್ರವೇ ಬೇಟೆ. ಆದರೆ, ಮನುಷ್ಯಲೋಕದಲ್ಲಿ ಆಸೆಗಳಿಗಾಗಿ. ಆ ಆಸೆಗಳಿಗೆ ಭಿನ್ನ ಭಿನ್ನ ಕಾರಣಗಳು. ಯುದ್ಧದ ಭೀಕರತೆ ಮತ್ತು ಯುದ್ಧವನ್ನು ಸೆರೆಹಿಡಿಯುವ ಫೋಟೋಗ್ರಾಫರ್ರುಗಳ, ವರದಿಗಾರರ ಮನಸ್ಸಿನಲ್ಲಾಗುವ ಅಲ್ಲೋಲ‌ ಕಲ್ಲೋಲವನ್ನು ಈ ಕಾದಂಬರಿ ಆರ್ದ್ರವಾಗಿ ಹೇಳುತ್ತದೆ. ಇದನ್ನು ಓದುವಾಗ, ಸ್ಯೂಡಾನಿನ ಫೋಟೋ 'ರಣಹದ್ದು ಮತ್ತು ಪುಟ್ಟ ಹುಡುಗಿ' ( the vulture and the little girl ) ಹಾಗೂ ಅದನ್ನು ಸೆರೆಹಿಡಿದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಗುತ್ತದೆ. ಯಾವುದು ನೈತಿಕತೆ ಅನ್ನುವ ಪ್ರಶ್ನೆಯೇ ಹೆಚ್ಚು ಕಾಡುತ್ತದೆ. 

'ದ್ವೀಪವ ಬಯಸಿ' ಕಾದಂಬರಿ ನಮ್ಮನ್ನು ಹಲವು ದ್ವೀಪಗಳಿಗೆ ಕರೆದೊಯ್ಯುತ್ತದೆ ಹಾಗೂ ಅಗಾಧವಾದ ಕಾರ್ಪೋರೇಟ್ ಕರಾಳತೆಯ ಚೂರೇ ಚೂರು ರುಚಿ ತೋರಿಸುತ್ತದೆ. ಭರವಸೆಯ ನಾಳೆಗಳನ್ನು ಮಾತಿನಲ್ಲಿಯೇ ತೋರಿಸುವ ಎಲ್ಲರೂ ನಿಜವಾಗಿಯೂ ಅಂಥ ನಿಮ್ಮ ನಾಳೆಗಳಲ್ಲಿ ಆಸಕ್ತರಾಗಿರುವುದಿಲ್ಲ ಅನ್ನುವ ಸತ್ಯವನ್ನೂ ತೆರೆದಿಡುತ್ತಾ ಹೋಗುತ್ತದೆ. ಬರೀ ಅಷ್ಟಕ್ಕೇ ನಿಲ್ಲದೇ, ನಮ್ಮೊಳಗಣ ವೃತ್ತವನ್ನೂ, ಅದರ ತಲ್ಲಣಗಳನ್ನೂ ಆತ್ಮೀಯವಾಗಿ ಅಪ್ಪಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಬರೀ ಕತೆಯನ್ನಷ್ಟೇ ಹೇಳದೇ,‌ ಕತೆಯೊಂದಿಗೆ ಇನ್ನೂ ಏನನ್ನೋ ಹುಡುಕಿಹೊರಡುವ ಇಂಥ ಪುಸ್ತಕಗಳು ಇಷ್ಟವಾಗದೇ ಇರುವುದಾದರೂ ಹೇಗೆ!

ಗೂಗಲ್ ಪ್ಲೇ ಬುಕ್ಸಲ್ಲಿ ,ಇಂಗ್ಲೀಷ್ ಅಕ್ಷರದ ಒಂದಷ್ಟು ವಾಕ್ಯಗಳು ಸರಿಯಾದ ಫಾರ್ಮ್ಯಾಟಲ್ಲಿ ಇಲ್ಲ ಅಂದ ತಕ್ಷಣವೇ ಅವೆಲ್ಲವನ್ನೂ ಸರಿಪಡಿಸಿದ ವಸುಧೇಂದ್ರ ಸರ್-ಗೆ ವಿಶೇಷ ಧನ್ಯವಾದಗಳು. 

- 'ಶ್ರೀ'
   ‌ತಲಗೇರಿ



ಭಾನುವಾರ, ಜನವರಿ 1, 2023

ಬಯಲ ಹೂವಿನ ಗಂಧ

ಬಯಲ ಹೂವಿನ ಗಂಧ





ಈ ಪುಸ್ತಕದ ಕುರಿತಾಗಿ ಬರೆಯಬೇಕು ಅಂತ ಅಂದುಕೊಂಡಿದ್ದು ಬಹಳ ಸಲ. ಸುಮಾರು ಒಂದು ವರ್ಷವಾಯಿತು‌ ಇದನ್ನು ಓದಿ. ಕೆಲವೊಮ್ಮೆ ಕೆಲವು ಸಂಗತಿಗಳು ಕಟ್ಟಿಕೊಡುವ ಅನುಭವಗಳು ಗಾಢವಾಗಿರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವುದಕ್ಕೆ ನಾವು ಸೋಲಬಹುದು ಅನ್ನುವ ಹಿಂಜರಿಕೆಯೇ ಹೀಗೆ ಬರೆಯದೇ ದಿನ ದೂಡುವುದಕ್ಕೆ ನೆಪವಾಗುತ್ತದೆ. ಈ ಸಲ ಬರೆಯಲೇಬೇಕೆಂದು ಮರುಓದಿಗೆ ತೊಡಗಿದೆ. ಬಹುಶಃ ಒಂದು ಸಲ ಓದಿದ ಮೇಲೆ ಮತ್ತೆ ಓದಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದು. ಹಾಗಂತ ಇದು ಸಿಕ್ಕಾಪಟ್ಟೆ ಅದ್ಭುತವಾದ, ಎಲ್ಲಿಯೂ ಸಿಗದ ಕತೆಗಳಿರುವ ಪುಸ್ತಕ ಅಂತೆಲ್ಲಾ ಹೊಗಳುವುದಿಲ್ಲ! ಆದರೆ, ಈ ಪುಸ್ತಕ ಒಂದು ಗಾಢವಾದ ಅನುಭವದ ಜಗತ್ತನ್ನು ಕಟ್ಟಿಕೊಡುತ್ತದೆ. ಸಣ್ಣ ಸಣ್ಣ ಸಂಗತಿಗಳೇ ಕತೆಗಾರರ ಶಕ್ತಿ. ಅಂಥದ್ದೊಂದು ಭಂಡಾರವೇ ಇಲ್ಲಿದೆ. ಅವುಗಳಲ್ಲಿ ಕೆಲವನ್ನು ಈ ಬರೆಹದ ಕೊನೆಯಲ್ಲಿ ಹಂಚಿಕೊಳ್ಳುತ್ತೇನೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಅಂದರೆ ಅದೊಂದು ಥರದ ನಂಬಿಕೆ; ಅದು ಒಂದೊಳ್ಳೆಯ ಓದನ್ನು ಕೊಡುತ್ತದೆ ಅನ್ನುವ ಗಟ್ಟಿ ನಂಬಿಕೆ. ಅದರಲ್ಲೂ ಸಶಕ್ತ ಕತೆಗಾರ್ತಿಯರು ಕತೆ ಹೇಳಿದಾಗ ಪುರುಷ ಕತೆಗಾರರಿಗೆ ದಕ್ಕದ ಇನ್ನೊಂದು ಲೋಕ ಮತ್ತು ಆ ಲೋಕದ ಸೂಕ್ಷ್ಮತೆ ಆ ಕತೆಗಳಲ್ಲಿರುತ್ತವೆ ಅನ್ನುವುದನ್ನು ನಾನು ಓದಿದ ಕೆಲವೇ ಕೆಲವು ಕತೆಗಾರ್ತಿಯರ ಕತೆಗಳಿಂದ ಗಮನಿಸಿದ್ದೇನೆ. ಇಲ್ಲಿಯೂ ನನಗೆ ಅಂಥದ್ದೊಂದು ಜಗತ್ತು ಸಿಕ್ಕಿತು. ಮಹತ್ತರವಾದ ಅಥವಾ ಗಹನವಾದ ಸಂಗತಿಗಳನ್ನು ತೀವ್ರವಾಗಿ ತುಂಬಿಕೊಂಡಿರುವ ಕತೆಗಳೇನಲ್ಲ ಇವು. ಆದರೆ, ಈ ಜಗತ್ತಿನ ಪುಟ್ಟ ಪುಟ್ಟ ಸಂಗತಿಗಳನ್ನು ಗಮನಿಸಿ ಅದನ್ನು ಕತೆಯ ಭಾಗವಾಗಿಸುವುದಿದೆಯಲ್ಲಾ; ಅದನ್ನೇ ಬಹುಶಃ 'ಘಟಿಸುವುದು' ಅನ್ನಬಹುದೇನೋ!  ಅಂಥದ್ದೇ ಒಂದು ಸಂಕಲನ ಛಾಯಾ ಭಟ್ ಅವರ 'ಬಯಲರಸಿ ಹೊರಟವಳು' 

ನಮ್ಮೆಲ್ಲರ ಬದುಕಿನಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಹೇಗಾದರೂ ಮಾಡಿ ನಮ್ಮನ್ನು ಕೆಣಕುವವರೂ ಅವರೇ, ಸಹಾಯಕ್ಕೆ ಬರುವವರೂ ಅವರೇ. ಈ ನಡುವಿನ ಬದುಕಿನಲ್ಲಿ ಅದೊಂದು ತೆರನಾದ ಸಂಬಂಧ ಅವರ ಜೊತೆ ಬೆಳೆದುಹೋಗಿರುತ್ತದೆ. ಅದನ್ನು ಆತ್ಮೀಯತೆ ಅಂತಲಾದರೂ ಕರೆಯಿರಿ ಅಥವಾ ಅನಿವಾರ್ಯತೆ ಅಂತಲಾದರೂ! ದೇವಳದ ಸೂರಿನಲ್ಲಿ , ಪ್ರಕೃತಿಯ ಕೋಪದಲ್ಲಿ ಎಲ್ಲರೂ ಒಂದೇ ಅನ್ನುವ ಮಾತು ಎಷ್ಟು ವಾಸ್ತವಿಕ. ಪ್ರಕೃತಿ ವಿಕೋಪಗಳಾದಾಗ, ಊರ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಚರ್ಚು, ಮಸೀದಿಗಳಲ್ಲೋ ಗಂಜಿಕೇಂದ್ರಗಳನ್ನು ತೆರೆಯುವುದು ನಮಗೆ ತಿಳಿದ ಸಂಗತಿಯೇ. ಮತ್ತೆ ಮತ್ತೆ ಇಂಥ ವಿಕೋಪಗಳಾದಾಗ ಮಾತ್ರ ಮನುಷ್ಯನಿಗೆ ಮನುಷ್ಯನಾಗುವುದಕ್ಕೆ ಸಾಧ್ಯವಾಗುತ್ತದೆಯೇನೋ ಬಹುಶಃ! ಮನುಷ್ಯ ನಾಗರಿಕತೆಗಳ ಏಳುಬೀಳುಗಳನ್ನು ಕಂಡು ಪೊರೆವ ನದಿಯೇ ಒಮ್ಮೊಮ್ಮೆ ಉಕ್ಕುತ್ತದೆ ಅನ್ನುವ ಲೇಖಕಿ, ಪ್ರಕೃತಿಗೆ ತನ್ನ ಸಮತೋಲನವನ್ನು ತಾನೇ ಕಾಯ್ದುಕೊಳ್ಳುವುದು ಗೊತ್ತಿದೆ ಅನ್ನುವ ಮೂಲಕ ಮನುಷ್ಯ ತಾನು ಮಾಡಿಕೊಳ್ಳುವ ಅನರ್ಥಗಳಿಗೆ ಏನೇನೋ ಉದ್ಧಾರದ ಸಮಜಾಯಿಷಿ ಕೊಡುವುದನ್ನು ಸೂಕ್ಷ್ಮವಾಗಿ ಟೀಕಿಸಿಸುತ್ತಾರೆ. ಒಮ್ಮೊಮ್ಮೆ ಅನಿಸುತ್ತದೆ, ನಾವು ಮಾತಾಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ, ಮನುಷ್ಯ ಮನುಷ್ಯರ‌ ನಡುವಿನ ವೈಮನಸ್ಯಗಳು ತಿಳಿಯಾಗುತ್ತಿದ್ದವೇನೋ ಅಂತೆಲ್ಲಾ. ಬಹಳ ಸಲ ಮಾತು ಒಂದು ಮಟ್ಟಿಗೆ ಕೆಲಸ ಮಾಡುವುದು ಹೌದಾದರೂ, ಮಾತಿನಿಂದಲೇ ಎಲ್ಲವೂ ಅರ್ಥವಾಗುವುದೇ? ಸಂವಹನ ನಡೆಯುವುದು ಕೇವಲ ಮಾತಿನ ಅರ್ಥದಿಂದಲೇ? ಅನ್ನುವ ಪ್ರಶ್ನೆ ಮೌನದ ಸಂವಹನಕ್ಕೆ ಇನ್ನಷ್ಟು ಬಲ ತುಂಬುತ್ತದೆ. ಮನುಷ್ಯನಿಗೆ ಇಂದ್ರಿಯಗಳು ಮತ್ತದಕ್ಕೆ ಅಂಟಿಕೊಂಡ ಸಂವೇದನೆಗಳೇ ಎಲ್ಲಾ ನೆನಪುಗಳಿಗೂ ಕಾರಣ. ಹಾಗೂ ಬದುಕಿನ ಭರವಸೆಗಳಿಗೂ ಕಾರಣ. ಇನ್ನೂ ಏನೋ ಉಳಿದಿದೆ ಅನ್ನುವುದೇ ನಾಳೆಗಳನ್ನು ಅನಿವಾರ್ಯವಾಗಿಸುತ್ತದೆ. 'ನೆರೆ' ಅನ್ನುವ ಈ ಕತೆ ಈ ಪುಸ್ತಕದ ಮೊದಲ‌ ಕತೆ. ಇದರಲ್ಲಿ ಒಂದು ಸಾಲಿದೆ "ನೆಟ್ಟವರಿಗಷ್ಟೇ ಕೀಳುವ ಹಕ್ಕಿರುವುದು"

ಕೆಲವರಿಗೆ ಊರಿಗೆ ಹೋಗುವುದೆಂದರೆ ನೆಮ್ಮದಿಯ ಆತ್ಮೀಯತೆ. ಇನ್ನು ಕೆಲವರಿಗೆ ಊರೆಂದರೆ ಅದು ತಳಮಳಗಳನ್ನು ಹುಟ್ಟುಹಾಕುವ, ಮನಸ್ಸೊಳಗಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಹಾಗೂ ಕೌಟುಂಬಿಕ ಸುಖಕ್ಕೆ ವಿರುದ್ಧವಾದ ಕಿರಿಕಿರಿಯನ್ನು ದಾಟಿಸುವ ಜಾಗ. ಯಾಕೆ ಹಾಗಾಗುತ್ತದೆ ಅಂತ ಕೇಳಿದರೆ ಬದುಕಿನೊಂದಿಗೆ ಹೆಣೆಯಲ್ಪಟ್ಟ ನೆನಪುಗಳು, ಭಿನ್ನ ಘಟನೆಗಳು, ಅವುಗಳ ಅನುಭವಗಳು ಇತ್ಯಾದಿ. ಬಹುಶಃ ನಮ್ಮದು ಅಂತ ಅನ್ನಿಸುವವರೆಗೂ ಅದರೊಂದಿಗೆ ನಾವು ಸುಖಿಸಲು ಸಾಧ್ಯವೇ ಇಲ್ಲವೇನೋ! ಬದುಕಿನ ಪ್ರತೀ ಹಂತದಲ್ಲೂ ಭಯ ಉಂಟಾಗುತ್ತಲೇ ಇರುತ್ತದೆ. ಒಂದು ಸಂಗತಿಯಿಂದ ಆಚೆ ಬಂದು ತೆಗೆದುಕೊಳ್ಳುವ ನಿರ್ಧಾರದಿಂದ ಹುಟ್ಟುವ ಧೈರ್ಯ ಇನ್ನಷ್ಟು ಹುರುಪಿಗೆ ನಾಂದಿ ಅನ್ನುವುದನ್ನು 'ಕೋಲ್ಮಿಂಚು' ಕತೆ ನಮಗೆ ದಾಟಿಸುತ್ತದೆ. 

ಪ್ರತಿ ಜನಾಂಗವೂ ತನ್ನ ಹಿಂದಿನ ಜನಾಂಗದ ನಂಬಿಕೆಗಳ ಆಧಾರದ ಮೇಲೆಯೇ ಬದುಕು ಕಟ್ಟಿಕೊಳ್ಳುವುದು.‌ ಕೆಲವೊಮ್ಮೆ ಆ ನಂಬಿಕೆಗಳು ಹಳತಾದವೆಂದು ನವೀಕರಿಸುತ್ತಲೇ, ಇನ್ನು ಕೆಲವೊಮ್ಮೆ ಆ ನಂಬಿಕೆಯೇ ಅಂತಿಮ ಸತ್ಯವೆಂದು ಆದರಿಸುತ್ತಲೇ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಗಳು ವರ್ಗಾವಣೆಯಾಗುತ್ತವೆ. ತಲೆಮಾರುಗಳ ನಡುವಿನ ನಂಬಿಕೆಗಳು ಹಾಗೂ ಅವುಗಳ ಒಳ ಪದರಗಳು ತಂದೊಡ್ಡುವ ವಿಪರೀತಗಳು ನೋಡುವುದಕ್ಕೆ ಸರಳವಾಗಿದ್ದರೂ, ಕೆಲವೊಮ್ಮೆ ಒಂಥರದ ಕಗ್ಗಂಟು. ಒಮ್ಮೆ ಮನಸ್ತಾಪ ಶುರುವಾದರೆ, ಪದೇ ಪದೇ ವಿಷಯವೇ ಇಲ್ಲದೇ ಮನಸ್ತಾಪಗಳಾಗುತ್ತವೆ. ಕುಟುಂಬದ ಹೆಣಿಗೆಗಳಿಗೆ ಪರಿಹಾರ ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಅಲ್ಲವಾ ಸಂಸಾರ ಸಾಗರ ಅಂತನ್ನುವುದು. ಅಲೆಗಳು ಒಂದಾದ ಮೇಲೊಂದರಂತೆ ಬರದೇ ಸಾಗರ ಇರುವುದಾದರೂ ಹೇಗೆ! 'ತೊಟ್ಟು ಕಳಚಿದ ಹೂವು' ಎನ್ನುವ ಈ ಕತೆಯಲ್ಲಿ ಅಬ್ಬೆ, ಮಗ, ಮಗನ ಹೆಂಡತಿಯ ನಡುವಿನ ತಾಕಲಾಟಗಳು, ಸಂಬಂಧಗಳ ನಡುವಣ ಸಂಘರ್ಷಗಳಿವೆ. 

ಮುಂದಿನ ಕತೆ ಪಾತಿಚಿಕ್ಕಿಯದ್ದು. ಜೀವನದಲ್ಲಿ ಎದುರಾಗುವ ಸಾವಿರ‌ ಕಷ್ಟ ಕಾರ್ಪಣ್ಯಗಳಿಗೆ ಮಾತನಾಡದ ದೇವರುಗಳಿಗಿಂತ ಒರಟೊರಟಾಗಿ ಮಾತಾಡಿ, ಎಲ್ಲರ‌ ನಂಬಿಕೆಯನ್ನೇ ಅಲ್ಲಾಡಿಸುವಂತೆ ಬದುಕುವುದು ಪಾತಿಚಿಕ್ಕಿಯ ಪಾತ್ರ. ಮುಗ್ಧರ ಹಾಗೂ ನಿತ್ಯದ ಅಗತ್ಯಕ್ಕಾಗಿ ಹೆಣಗುವವರ ಮನುಷ್ಯ ಸಹಜ ಆಸೆಗಳನ್ನು  ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ ಅನ್ನುವುದನ್ನೂ ಈ ಕತೆ ತೆರೆದಿಡುತ್ತದೆ. ಒಂದು ಗಂಭೀರ ಸನ್ನಿವೇಶದಲ್ಲೂ ಮಕ್ಕಳ ಮನಸ್ಸಿನಲ್ಲಿ ಮೂಡಬಹುದಾದ ಮುಗ್ಧ ಹಾಗೂ ಮಜವಾದ ಸಂಗತಿಯೊಂದು ಪಾತಿಚಿಕ್ಕಿಯ ಗಂಡ ಮನೆಬಿಟ್ಟು ಹೋದಾಗಿನ ಸಂದರ್ಭದಲ್ಲಿದೆ. ಹೆಣ್ಣು ತಾನು ಸೇರಿದ ಮನೆಯನ್ನು, ಹೊಸ ಸಂಬಂಧವನ್ನು ಅಪ್ಪಿಕೊಂಡಷ್ಟು ಸುಲಭವಾಗಿ ಗಂಡಸಿಗೆ ಅದು ಸಾಧ್ಯವಾಗುವುದು ಬಹಳ ಅಪರೂಪ ಅನ್ನುತ್ತಾರೆ ಕತೆಗಾರ್ತಿ. ಮುರಿದು ಮತ್ತಷ್ಟು ಚೆಂದಕ್ಕೆ ಕಟ್ಟುವುದು ಹೆಣ್ಣಿಗೊಲಿದ ವಿಶೇಷ ಕಲೆಯೇ ಇರಬೇಕು. ಅಲ್ಲದೇ ಇದ್ದರೆ ಹಳಬರು ಸುಮ್ಮನೆ ಹೇಳುತ್ತಿದ್ದರೇ; "ಮದುವೆ ಅಂತ ಒಂದ್ ಮಾಡಿ, ಹುಡುಗ ಸರಿ ಹೋಗ್ತಾನೆ" ಅಂತ! ಒಂದು ವಸತಿಗೃಹವನ್ನು ಮನೆಯಾಗಿಸುವವಳು ಹೆಣ್ಣು. ಒಂಟಿತನ ಎನ್ನುವುದು ಪೂರಾ ಮಾನಸಿಕ ಅವಸ್ಥೆ , ಯಾವಾಗ ಬೇಕಾದರೂ ಬರಬಹುದು, ತುಂಬು ಸಂಸಾರದಲ್ಲಿಯೂ ಮನುಷ್ಯ ತನಗ್ಯಾರಿಲ್ಲವೆಂದು ನೋಯಬಹುದು ಅನ್ನುವ ಸಂಗತಿಯನ್ನು ಲೇಖಕಿ ಹೇಳುತ್ತಾರೆ. ಬಹುಶಃ ಇದು ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗಬಹುದಾದ ಹೇಳಿಕೆ ಅಂತ ನನಗನಿಸುತ್ತದೆ. ಜನರ ಕಷ್ಟ ಎಷ್ಟಿದೆಯೆಂದರೆ ಎಷ್ಟೇ ಗುಡಿ ಕಟ್ಟಿ ಕೈಮುಗಿದರೂ ಬೇಡಿ ಮುಗಿಯಲಾರದಷ್ಟು ಕೋರಿಕೆಗಳಿರುತ್ತವೆ ಅವರಿಗೆ! ತನಗಿಂತ ಹೆಚ್ಚು ಶಕ್ತಿಶಾಲಿಯಾದವರಲ್ಲಿ ನಂಬಿಕೆ ಹುಟ್ಟಿಕೊಳ್ಳುವುದೇ ಹೀಗೆ. ಅದಕ್ಕೆಂದೇ ಮನುಷ್ಯ ದೇವರನ್ನು ನಂಬತೊಡಗಿದ ಅಂತ ಭಗತ್ ಸಿಂಗ್ ತಮ್ಮ 'ನಾನೇಕೆ ನಾಸ್ತಿಕ' ಪುಸ್ತಕದಲ್ಲಿ ಬರೆದಿರುವ ಮಾತಿಗೆ ಇದು ಹೆಚ್ಚು ಹತ್ತಿರದ ಸಾಲು ಅನಿಸಿತು. ನಾವೆಲ್ಲರೂ ಪ್ರತಿ ದಿನ ಬಯಲರಸಿ ಹೊರಡುವುದಕ್ಕೆ ಹಲುಬುತ್ತಲೇ ಇರುತ್ತೇವೆ ಅಲ್ಲವಾ! ಸಂಕಲನದ ಶೀರ್ಷಿಕೆ ಕತೆ ಇದು; 'ಬಯಲರಸಿ ಹೊರಟವಳು' 

ಮುಂದಿನ ಕತೆಯ ಶುರುವಿನಲ್ಲಿ ಬರುವ ಕೊಂಕಣ ರೈಲಿನ ವರ್ಣನೆ, ಅಲ್ಲಿ ಹೊರಟಿದ್ದು ಮುಂಬಯಿಯಿಂದಾದರೂ, 'ಹಾಯ್, ಹೋಯ್, ಇಶ್ಶೀ' ಎನ್ನುವ ಉದ್ಗಾರಗಳು ಪಕ್ಕಾ ಉತ್ತರ ಕನ್ನಡದವು! ಹಲವು ಸಲ ಅನಿಸಿದ್ದಿದೆ, ನಾವು ಮತ್ತೆ ಮತ್ತೆ ಅದದೇ ಕತೆಗಳನ್ನು, ಅದದೇ ಪರಿಸರವನ್ನು, ಅದದೇ ಸಾಹಿತ್ಯವನ್ನು ತಿರುಗಾಮುರುಗಾ ಮಾಡಿ ಹೇಳುತ್ತಿದ್ದೇವಾ ಅಂತ. ಆದರೆ, ಇನ್ನೂ ಕೆಲವೊಮ್ಮೆ ಅನಿಸಿದ್ದಿದೆ. ನಮಗೆ ಗೊತ್ತಿಲ್ಲದ ಇನ್ನ್ಯಾವುದೋ ಪರಿಸರವನ್ನು ನಾವು ನಮ್ಮ ಕತೆಯಲ್ಲಿ ತರುವುದಾದರೂ ಹೇಗೆ ಸಾಧ್ಯ? ತಂದರೂ, ಅದು ಅಷ್ಟು ನೈಜವಾಗಿ ಇರುವುದಕ್ಕೆ ಸಾಧ್ಯವಾ? ಅಂತ. ಹಾಗಾಗಿ ಕೊನೆಗೆ ನಾನು ಕಂಡುಕೊಂಡ ಉತ್ತರ; ನಮ್ಮದೇ ಪರಿಸರದಲ್ಲಿ, ನಮ್ಮದೇ ಬಾಲ್ಯದಲ್ಲಿ, ನಮ್ಮದೇ ಊರಿನಲ್ಲಿ, ನಮ್ಮದೇ ನಗರಗಳಲ್ಲಿ ಹೇಳದೇ ಉಳಿದ ಅದೆಷ್ಟೋ ಕತೆಗಳಿವೆ. ಅವುಗಳನ್ನು ಹೇಳದೇ ಹೋದರೆ, ಆ ಕತೆಗಳಿಗೂ ದನಿ ಬೇಕಲ್ಲವಾ ಎಂಬುದಾಗಿ. ಹಾಗಾಗಿ, ಈಗ ಊರ ಕತೆಗಳು 'ಮತ್ತದೇ ಹಾಡು' ಎಂಬಂತಾಗುವುದಿಲ್ಲ. ಈ ಕತೆಯ ಶುರುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಗಂಡಸಿನ ಲೋಕ ಏನು ಅನ್ನುವುದನ್ನು ಕತೆಗಾರ್ತಿ ಹೇಳುತ್ತಾರೆ. ಅದಾದ ನಂತರ ಇಡೀ ಕತೆಯಲ್ಲಿರುವುದು ಒಂದು ಘಟನೆ ನಮ್ಮ ಜೀವನ ಪೂರ್ತಿ ಬೆನ್ನು ಹತ್ತಿ ಕೂತು ಕಾಡುತ್ತದೆ ಅನ್ನುವುದು ಹಾಗೂ ಅದರಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು. ಕತೆಯ ಹೆಸರು 'ಆ ಕಡುಗಪ್ಪು ಕಣ್ಣುಗಳು'

ಒಂದು ಸಣ್ಣ ಮನಸ್ತಾಪ ಯಾವ್ಯಾವುದೋ ಅಮಲಿನಲ್ಲಿ ಇನ್ನೇನೋ ಆಗುವುದರಿಂದಲೇ‌ ಮನುಷ್ಯ ಜಾತಿಯನ್ನು ಇನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಿರುವುದು. ಎಲ್ಲ ಸಲ ಗಲಾಟೆಯಾದಾಗಲೂ, ಯಾವ ಕಾರಣಕ್ಕಾಗಿ ಗಲಾಟೆ ನಿಗದಿಯಾಗಿತ್ತೋ ಅದಕ್ಕಿಂತಲೂ ಕೊನೆಯಲ್ಲಿ ಅದು ಉಳಿಯುವುದು ಇನ್ನೇನೋ ಆಗಿಯೇ! ಇದು ಇಂದಿನ ಸ್ಥಿತಿ.‌ ಮನುಷ್ಯನ ಭಾವಲೋಕ ವಿಚಿತ್ರವಾದದ್ದು. ಕೃತಜ್ಞತೆ ಮತ್ತು ಕೃತಘ್ನತೆಗೆ ಕೇವಲ ಒಂದು ಅಕ್ಷರದ ವ್ಯತ್ಯಾಸವಷ್ಟೇ. ಹಿಂಸಿಸುವುದೂ ಒಂದು ಉನ್ಮಾದವಿದ್ದಂತೆ, ಮಾಡಿದಂತೆ ಏರುತ್ತಲೇ ಹೋಗುತ್ತದೆ, ನಿಲ್ಲಿಸಬೇಕೆಂದು ಅನಿಸುವುದೇ ಇಲ್ಲ ಅನ್ನುವ ಸಾಲು ಎಲ್ಲಾ ಕಾಲದಲ್ಲಿಯೂ ಮನುಷ್ಯ ಯಾಕೆ ಕ್ರೌರ್ಯವನ್ನು ವಿಜೃಂಭಿಸುತ್ತಾನೆ ಅನ್ನುವುದಕ್ಕೆ ಉತ್ತರದಂತಿದೆ. ಈ ಕತೆಯ ಹೆಸರು 'ಸುಳಿ'

ನಂತರದ ಕತೆ ಬಾಡಿಗೆ ತಾಯ್ತನ, ಕಲಾಶಾಲೆಗೆ ಮಾಡೆಲ್ ಆಗುವ ಹೆಣ್ಣೊಬ್ಬಳ ಕುರಿತಾಗಿದ್ದು, ಜೊತೆಗೆ, ಯಾರ ಚಿತ್ರವನ್ನು ಬಿಡಿಸಿದ್ದೆನೋ, ಆ ಚಿತ್ರ ಹೆಚ್ಚಿನ ಬೆಲೆಗೆ ಮಾರಾಟವಾದಾಗ, ಆ ಹಣ ಅವರಿಗೂ ಸಲ್ಲಬೇಕು ಎಂದು ಮತ್ತೆ ಅವರನ್ನು ಹುಡುಕಿ ಹೋಗುವ ಒಬ್ಬ ಕಲಾವಿದನ ಕುರಿತಾಗಿಯೂ ಇದೆ. ಇದು ಒಬ್ಬ ಕಲಾವಿದನಿಗೆ ಅಥವಾ ಛಾಯಾಗ್ರಾಹಕನಿಗೆ (ಛಾಯಾಗ್ರಾಹಕನೂ ಕಲಾವಿದನೇ, ಅದರಲ್ಲಿ ಅನುಮಾನವಿಲ್ಲ!) ಇರಬೇಕಾದ ನೈತಿಕ ಪ್ರಜ್ಞೆ ಅನಿಸುತ್ತದೆ ನನಗೆ. ಇದು ನನಗೆ ಪಾಕಿಸ್ತಾನದ ಕ್ಯಾಂಪಿನಲ್ಲಿ ತೆಗೆದ 'ಅಪ್ಘನ್ ಗರ್ಲ್' ಫೋಟೋದಲ್ಲಿದ್ದ ಶರ್ಬತ್ ಗುಲಾಳನ್ನು ಫೋಟೋ ತೆಗೆದ ಸುಮಾರು ಇಪ್ಪತ್ತು ವರ್ಷಗಳ ನಂತರ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು ಹುಡುಕಿಹೋದದ್ದನ್ನು ನೆನಪಿಸಿತು. ಈ ಕತೆಯ ಹೆಸರು 'ಶುಭ್ರಜ್ಯೋತ್ಸ್ನೆ'

ಖಾಲಿ ಜಾಗವನ್ನು ಹದ ಮಾಡಿ ಮನೆ ಕಟ್ಟುವುದು ಕಷ್ಟವೇನಲ್ಲ, ಆದರೆ ನೆನಪುಗಳೇ‌ ತುಂಬಿಕೊಂಡಿರುವ ಹಳೆ ಮನೆಯನ್ನು ಉದುರಿಸಿ ಹೊಸ ಮನೆ ಕಟ್ಟಿದರೂ ನೆನಪುಗಳು ಕಾಡದೇ ಇರುತ್ತವೆಯಾ? ಅನ್ನುವುದನ್ನು ಹೇಳುವ ಕತೆ 'ಹುಲ್ಲಾಗು ಬೆಟ್ಟದಡಿ'. ಕೊನೆಗೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯಾ ಅಥವಾ ದೊಡ್ಡ ದೊಡ್ಡ ನಗರದ ಜೀವನವಾ ಅನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತದೆ. 

ಎಂಥದ್ದೇ ಘಟನೆಯಾದರೂ ಮನೆಯಲ್ಲಿ ಮರುದಿನ ದೋಸೆ ಬಂಡಿಯ ಮೇಲೆ ದೋಸೆ ಹೊಯ್ಯಲೇಬೇಕು; ಅದೇ ಬದುಕು. ಹೊಯ್ಯುವವರಷ್ಟೇ ಬದಲಾಗಬಹುದು. ಆದರೆ, ಬೆಳಗಾಗುತ್ತದೆ, ಸಂಜೆಯಾಗುತ್ತದೆ,‌ ಕಾಲ ಜಾರುತ್ತದೆ, ಯಾರದೋ ಯೌವನಕ್ಕೆ ಮುಪ್ಪು ಬರುತ್ತದೆ. ಇನ್ನ್ಯಾರದೋ ಗರ್ಭದೊಳಗಿಂದಿಳಿದು ಪುಟ್ಟ ಅಳು ನಗು ಮೊದಲ ಬಾರಿಗೆ ಗಾಳಿಗೆ ಮೈಯೊಡ್ಡುತ್ತದೆ. ಇದು ಕಾಲದ ಪ್ರವಾಹ ಅನ್ನುವುದನ್ನು ಹೇಳುವ ಈ ಕತೆಯಲ್ಲಿ ನನ್ನನ್ನು ಕಾಡಿದ ರೂಪಕ ದೂರ್ವೆಯದ್ದು. ಈ ರೂಪಕ ವರ್ಷಗಟ್ಟಲೆ ನನ್ನನ್ನು ಕಾಡಿದೆ ಅಂದರೆ ಸುಳ್ಳಲ್ಲ. ಬಹುಶಃ ಇನ್ನಷ್ಟು ವರ್ಷಗಳ ಕಾಲ ಇದು ನೆನಪಿನಲ್ಲಿ ಉಳಿಯುತ್ತದೆ. "ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಗೂನುಬೆನ್ನಿನವರಂತೆ ಬಾಗಿ ನಿಲ್ಲುವ ದೂರ್ವೆ ಕಾವೇರಿ ಕೊಯ್ದು ತೊಳೆದರೆ ಸಾಕು ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತಿತ್ತು. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ!". ಕತೆಯ ಹೆಸರು 'ಮಾಕಬ್ಬೆ'

ಬರೆಹದ ಮೊದಲಿಗೆ ಹೇಳಿದ್ದೆ; ಕೆಲವು ಸಣ್ಣ ಸಣ್ಣ ರೂಪಕಗಳು ಈ ಕಥಾಸಂಕಲನದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತವೆ ಅಂತ. ಜೊತೆಗೆ, ಕಥೆಗಾರರಿಗೆ ಇರಬೇಕಾದದ್ದು ಮೈಯೆಲ್ಲಾ ಕಣ್ಣು ಅನ್ನುವುದು ಈ ಕತೆಗಾರ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿ ಕಾಣಸಿಕ್ಕಿದ್ದು ಬಹಳ ಹೊಸದಾದ ರೂಪಕಗಳು. ಒಂದೆರಡು ನಿಮ್ಮ ಓದಿಗೆ..

"ಡಬ್ಬದಲ್ಲಿರುವ ಮದುವೆಯ ಬೂಂದಿಲಾಡಿಗೆ ಗಡ್ಡ ಮೀಸೆ ಆಗ ತಾನೇ ಮೂಡುತ್ತಿತ್ತು"

"ಭರಣಿಯಲ್ಲಿ ಹತ್ತತ್ತಿಟ್ಟ ಉಪ್ಪಿನಕಾಯಿಯ ಮುಖ"

"ಹಾಲೇ‌ ಕಾಣದ ಚಹದಂತೆ , ಹೆಚ್ಚು ಕಮ್ಮಿ ಛಾ ಕಣ್ಣು ಬಣ್ಣದ ಅರಲು ನೀರು"

"ಅಲ್ಲೇ ಮೂಲೆಯಲ್ಲಿದ್ದ ಪುಟ್ಟ ಗಿಡವೆರಡು ಮನೆಯೊಳಗೆ ತಂಪಗೆ ಹಬ್ಬಿದ್ದರೂ ಕಿಡಕಿಯತ್ತಲೇ ಮುಖಮಾಡಿ ಸೂರ್ಯನಿಗಾಗಿ ತಪಿಸುತ್ತಿದ್ದವು. ಬಹುಶಃ ಚಿಕ್ಕಿಯ ಅವಸ್ಥೆಯೂ ಈಗ ಹೀಗೆಯೇ ಇದ್ದಿರಬಹುದು"

ಒಮ್ಮೊಮ್ಮೆ ಗೋಡೆಗಳಾಚೆಯೂ, ಕೆಲವೊಮ್ಮೆ ಗೋಡೆಗಳ ನಡುವೆಯೂ ನಿಂತು ಸಂಬಂಧಗಳ ಕತೆಯನ್ನು ಹೇಳಿ ಕತೆಗಾರ್ತಿ ಬಯಲರಸಿ ಹೊರಟಿದ್ದಾರೆ. ಅರಸಿ ಹೊರಟ ಬಯಲು ಕೂಡಾ ಇನ್ನಷ್ಟು ಕತೆಗಳಾಗಿ ಅವರನ್ನೇ 'ಹರಸಿ' ಬರಲಿ ಅನ್ನುವ ಆಶಯಗಳೊಂದಿಗೆ ಹಾಗೂ ಸಂಕಲನಕ್ಕಾಗಿ ಕತೆಗಾರ್ತಿಗೆ ಧನ್ಯವಾದಗಳೊಂದಿಗೆ,

~'ಶ್ರೀ'
   ತಲಗೇರಿ



ಬುಧವಾರ, ಅಕ್ಟೋಬರ್ 5, 2022

ವರಾಹ ರೂಪಂ...

 ವರಾಹರೂಪಂ... 



ಬಹುಶಃ ಮನುಷ್ಯ ಹುಟ್ಟಿದಾಗಿನಿಂದ‌ ನಂಬಿಕೆಗಳೂ ಹುಟ್ಟಿರಬಹುದು. ನಂಬಿಕೆ ಅಂದ್ರೆ ಕೆಲವೊಮ್ಮೆ ಪ್ರಶ್ನಿಸುವಂಥದ್ದು, ಇನ್ನು ಕೆಲವೊಮ್ಮೆ ಪ್ರಶ್ನಿಸಲು ಹೆದರುವಂಥದ್ದು. ಆದರೆ, ಇನ್ನು ಕೆಲವು ಸಂಗತಿಗಳನ್ನು ಪ್ರಶ್ನಿಸುವುದಕ್ಕೂ ಮನುಷ್ಯನ ಹತ್ತಿರ ಸಾಧ್ಯವಾಗುವುದಿಲ್ಲ. ಮನುಷ್ಯ ಸಂಕುಲ‌ ಸೃಷ್ಟಿಯಾದ ನಂತರ 'ದೇವರು' ಅಂತ ಏನನ್ನೋ ಮೊದಲ ಬಾರಿಗೆ ಕಂಡುಕೊಂಡಾಗ, ಅದನ್ನು ಗುರುತಿಸಿದಾಗ ಮನುಷ್ಯನಿಗೆ ತನಗಿಂತ ಭಿನ್ನವಾದ ಅಸ್ತಿತ್ವವೊಂದರ ಅನುಭವ ಆಗಿರಲೇಬೇಕಲ್ಲ! ತನ್ನನ್ನು ಮೀರಿದ ಶಕ್ತಿಯೊಂದನ್ನು ಮನುಷ್ಯನೇ ಬೆಳೆಸಿಕೊಂಡ, ಅದಕ್ಕೆ ದೇವರು ಅಂತ ಕರೆದ. ತಾನು ಕಂಡುಕೊಂಡ ಆ ಶಕ್ತಿಯೇ ಇಡೀ ಜಗತ್ತಿನ ಸೃಷ್ಟಿಗೆ ಕಾರಣವೆಂದೂ ಹಾಗೂ ಅದರ ನಾದ ಮಾತ್ರದಿಂದಲೇ ಜಗತ್ತು ತನ್ನ ಲಯವನ್ನು ಕಂಡುಕೊಳ್ಳುತ್ತದೆಂದು ನಂಬಿದ. ಹಾಗೆ ಜಗತ್ತು ‌ನಡೆಯುವಾಗ, ಅದರೊಳಗೆ ನಡೆಯುವ ಎಲ್ಲ ಕಾರ್ಯಗಳನ್ನೂ ಆ ಶಕ್ತಿ ಈ ಜಗತ್ತಿನ ಸ್ಥಿತಿಯನ್ನು ಕಾಪಾಡುವುದಕ್ಕೆ ನಡೆಸುವ ಕೆಲಸವೆಂದೂ ಕರೆದ. ನಂಬುವುದಷ್ಟೇ ಅಲ್ಲದೇ, ತನ್ನ ನಂಬಿಕೆಗಳನ್ನೂ ಆರಾಧಿಸತೊಡಗಿದ. ದೇವರ ಜೊತೆ ಜೊತೆಗೆ ಗಣಗಳೂ ಹುಟ್ಟಿಕೊಂಡವು. ಎಲ್ಲವೂ ಒಂದು ಸಮತೋಲನದ ಪ್ರಕ್ರಿಯೆಯ ಭಾಗವೇ ಆದವು. ಜಗತ್ತಿನ ವಾಸ್ತುಶಿಲ್ಪಕ್ಕೆ ದೇವರು ಮತ್ತು ನಂಬಿಕೆಗಳು ಕೊಟ್ಟಷ್ಟು ಕೊಡುಗೆಯನ್ನು ಮತ್ತ್ಯಾವುದೂ ಕೊಟ್ಟಿಲ್ಲ.‌ ಬೇರೆ ಬೇರೆ ಕಲಾಪ್ರಕಾರಗಳು ಈ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಕ್ಕೂ ಈ ಎಲ್ಲಾ ನಂಬಿಕೆಗಳೇ ಮುಖ್ಯ ಕಾರಣ. ಇಂಥ ನಂಬಿಕೆಗಳೇ ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಹುಟ್ಟುಹಾಕಿದವು. ಈ ಸಂಸ್ಕೃತಿಗಳೇ ಮನುಷ್ಯನ ಬದುಕನ್ನು ಕಲಾತ್ಮಕವಾಗಿಸಿದವು. ನಂಬಿಕೆಗಳು ಬದುಕಿಗೆ ನೆಮ್ಮದಿ, ಧೈರ್ಯ, ಸಂಸ್ಕಾರ, ಆತ್ಮ ಸಂತೃಪ್ತಿಯನ್ನು ಕೊಟ್ಟವು. ನಂಬಿಕೆಗಳನ್ನು ಪ್ರಶ್ನಿಸುವುದನ್ನೂ ಇದೇ ಸಂಸ್ಕೃತಿ ಹೇಳಿಕೊಟ್ಟಿತು. ಪ್ರಶ್ನಿಸುವುದಕ್ಕೂ ಹೀಗಳೆಯುವುದಕ್ಕೂ ವ್ಯತ್ಯಾಸವಿದೆ. ಭಾರತ ಯಾವತ್ತಿಗೂ ಅನ್ವೇಷಕರ ನಾಡು. ಇದಮಿತ್ಥಂ ಅನ್ನುವ ನಂಬಿಕೆಯಿಂದ ಶುರುವಾಗಿ ಆ ನಂಬಿಕೆಗಳ ಪರಿಧಿಯನ್ನು ಮೀರಿ ಉತ್ತರ ಹುಡುಕುವ ಸಂಸ್ಕೃತಿ ಭಾರತದ್ದು. ಹೀಗೆ ಹುಡುಕುವ ಪ್ರಕ್ರಿಯೆಯಲ್ಲಿ ಒಂದಷ್ಟು ಆಚರಣೆಗಳು, ಪದ್ಧತಿಗಳೂ ರೂಪುಗೊಳ್ಳುತ್ತವೆ. ಅವೇ ಪರಂಪರೆಯಾಗಿ ಮುಂದುವರೆಯುತ್ತವೆ. "ಅರೇ, ಮನುಷ್ಯ ಹುಟ್ಟಿದ ಮೇಲಲ್ಲವಾ ಇವೆಲ್ಲಾ ಆಗಿದ್ದು?" ಅಂತ ಪ್ರಶ್ನಿಸಬಹುದಷ್ಟೇ, ಆದರೆ ಮನುಷ್ಯ ಪ್ರಪಂಚ ಹುಟ್ಟುವುದಕ್ಕೂ ಮೊದಲು ಏನಿತ್ತು? ಮನುಷ್ಯ ಪ್ರಪಂಚವೇ ಪೂರ್ತಿ ಕಣ್ಮರೆಯಾದ ಮೇಲೆ ಏನು ಉಳಿಯಬಹುದು? ಇವೆಲ್ಲಕ್ಕೂ ಏನೇನೋ ಊಹಿಸಿಕೊಂಡು ಉತ್ತರಿಸಬಹುದು ಬಿಟ್ಟರೆ, ನಿಖರವಾದ ಉತ್ತರ ಹೇಳುವುದಾದರೂ ಹೇಗೆ ಸಾಧ್ಯ? ಇಂದ್ರಿಯಗಳ ಅನುಭವದ ಪರಿಧಿಗೆ ನಿಲುಕದೇ ಇರುವುದನ್ನು ವ್ಯಂಗ್ಯ ಮಾಡುವ ಬದಲು, ಆ ಅನುಭವ ನಮಗಿನ್ನೂ ಆಗಿಲ್ಲ ಅಂತ ಒಪ್ಪಿಕೊಳ್ಳುವುದೇ ಹೆಚ್ಚು ಪ್ರಾಮಾಣಿಕತೆ. ತನಗಿಂತ ಹೆಚ್ಚು ಬಲಾಢ್ಯವಾದ ಯಾವುದೋ ಶಕ್ತಿ ತನ್ನನ್ನು ಕಾಯುತ್ತದೆ ಅನ್ನುವ ನಂಬಿಕೆಯಿಂದ ಮನುಷ್ಯ ಅಸಾಧ್ಯಗಳನ್ನು ಸಾಧ್ಯವಾಗಿಸಬಲ್ಲ‌. ಅದು ನಂಬಿಕೆಗೆ ಇರಬಹುದಾದ ಹರವು. 


ಜಗತ್ತಿನೆಲ್ಲೆಡೆಯೂ ಮನುಷ್ಯರ ಕತೆಗಳು ಒಂದೇ ಥರವೇ. ಆದರೆ, ಯಾವಾಗ ಆ ನೆಲದ, ಆ ಪರಿಸರದ ಭಿನ್ನತೆಗಳು ಕತೆಯಾಗುತ್ತವೆಯೋ ಆಗ ಅವು ಹೊಸ ಆಯಾಮವನ್ನು ಕತೆಗೆ ಒದಗಿಸುತ್ತವೆ. ಹಾಗೆ ಹುಟ್ಟಿಕೊಂಡ ಕತೆಗಳು ಒಟ್ಟೊಟ್ಟಿಗೆ ಜಾಗತಿಕವೂ, ಪ್ರಾದೇಶಿಕವೂ ಆಗುತ್ತವೆ‌. ಒಂದು ಕತೆ ಏಕತಾನತೆಯ ಹಾದಿಯಲ್ಲಿ ಸಾಗುವುದನ್ನು ತಪ್ಪಿಸುವುದೂ ಇದೇ ಪ್ರಾದೇಶಿಕತೆ. ಒಂದೇ ತೆರನಾದ ಕತೆಗಳು ಸಾಹಿತ್ಯದಲ್ಲಿ ಕಾಣುತ್ತಿವೆ, ಸಾಹಿತ್ಯ ನಿಂತ‌ ನೀರಾಗಿದೆ, ಅದೇ ಊರು ಅದೇ ಕೇರಿ, ಅದೇ ನಗರ ಅದೇ ಉದ್ಯೋಗ, ಇವಿಷ್ಟರ ಸುತ್ತಲೇ ಕತೆಗಳು ಮತ್ತು ಕಥಾ ಪಾತ್ರಗಳು ಸುತ್ತು ಹೊಡೆಯುತ್ತಿವೆ ಅನ್ನುವ ಆರೋಪಗಳ ಮಧ್ಯ, ನಾವು ನಿಜವಾಗಿಯೂ ಈ ನೆಲದ ಕತೆಗಳನ್ನು ಪೂರ್ತಿಯಾಗಿ ಹೇಳಿದೆವಾ ಅಂತ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಬಹುಶಃ ಇಲ್ಲ‌ ಅಂತಲೇ ಅನ್ನಿಸದಿದ್ದರೆ ನಾವಿನ್ನೂ ಕತೆಗಳನ್ನು ಗುರುತಿಸಬಲ್ಲವರಾಗಿಲ್ಲವೆಂದೇ ಅರ್ಥ. ಸಮೃದ್ಧ ಜೀವ ಸಂಕುಲವಿದ್ದಲ್ಲಿ ಕತೆಗಳಿಗೆ ಬರವೇ! ಪ್ರಕೃತಿಯೊಂದಿಗೆ ಬದುಕು ಆರಂಭಿಸಿದ ಮನುಷ್ಯ ತಾನು ಮಾಡಿಕೊಂಡ ವ್ಯವಸ್ಥೆಗಳಲ್ಲಿ ಮನುಷ್ಯನೊಂದಿಗೇ ಬಿಕ್ಕಟ್ಟು ಸೃಷ್ಟಿಸಿಕೊಂಡ. ತಾನು ಶಕ್ತಿಶಾಲಿ ಅಂತ‌ ನಿರೂಪಿಸುವ ಭರದಲ್ಲಿ ಪ್ರಕೃತಿಗೂ ಎದುರಾಗಿ ನಿಂತ. ಆದರೆ, ದಾಹವಾದಾಗ ಕುಡಿಯಲು ಬೇಕಾಗುವ ನೀರು, ಹಸಿವಾದಾಗ ಬೇಕಾಗುವ ಆಹಾರವನ್ನು ಕೊಡುವ ಮಣ್ಣು, ಇವೆರಡಕ್ಕಿಂತಲೂ ಪ್ರತಿ ಕ್ಷಣ ಉಸಿರಾಡಲು ಅಗತ್ಯವಿರುವ ಗಾಳಿ ಇವುಗಳಲ್ಲಿ ಯಾವುದು ಕಲುಷಿತವಾದರೂ ಅದರಿಂದ ತನಗೇ ತೊಂದರೆ ಅನ್ನುವುದು ಮಾತ್ರ 'ತಾನೇ ಬುದ್ಧಿವಂತ' ಅಂದುಕೊಂಡ ಪ್ರಾಣಿಗೆ ತಿಳಿಯದೇ ಇರುವುದು ವಿಪರ್ಯಾಸ ಹಾಗೂ ಅದೇ ಸೋಜಿಗ. ಕೃತಕವಾಗಿ ಆಮ್ಲಜನಕ ತಯಾರಿಸಿ ಮಾರಾಟ ಮಾಡಿ ಅದೆಷ್ಟು ಹಣ ಮಾಡಬಹುದು ಅನ್ನುವ ಯೋಚನೆಯೇ ಹೆಚ್ಚು ಪ್ರಯೋಜನಕಾರಿ ಅಂತ ಅನಿಸದೇ ಹೋದರೆ ಅವ ಇಂದಿನ ಮನುಷ್ಯನೇ ಅಲ್ಲ;ಅವನಿಗೆ 'ಬದುಕುವ‌ ಕಲೆ'ಯೇ ಗೊತ್ತಿಲ್ಲ! ಆದರೆ, ನಮ್ಮ ಪೂರ್ವಿಕರಿಗೆ ಮನುಷ್ಯನ ಅಗತ್ಯತೆಗಳ ಅರಿವಿತ್ತು. ಹಾಗಾಗಿಯೇ ಅದೆಷ್ಟೋ ವಿಷಯಗಳನ್ನು ದೇವರ ಹೆಸರಿನಲ್ಲಿ ಕಾಪಾಡತೊಡಗಿದರು. ಉದಾಹರಣೆಗೆ 'ದೇವರ ಕಾಡು'. ಈ ಥರದ ಕಾಡುಗಳು ಇರುವುದರ ಮಹತ್ವದ ಅರಿವಿರದೇ ಹೋದರೆ, ಅದು ಮೂಢನಂಬಿಕೆಯಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಅಂಥ ಕಾಡುಗಳೇ ಇಂದಿಗೂ ನಮ್ಮನ್ನೆಲ್ಲಾ ಪೊರೆಯುತ್ತಿರುವುದು. ನದಿ ಕೇವಲ ನಾಗರಿಕತೆಗಳ ತೊಟ್ಟಿಲು ಅಂತ ಓದಿ ಬಿಟ್ಟುಬಿಡದೇ, ದೇವರ ಸ್ಥಾನದಲ್ಲಿಟ್ಟು ಪೂಜಿಸುವ ನಾಡು ನಮ್ಮದು. ಮನುಷ್ಯನ ಬದುಕು ಸುಲಲಿತವಾಗಿ ನಡೆಯುವುದಕ್ಕೆ‌ ಅನುವು ಮಾಡಿಕೊಡುವ ಪ್ರಕೃತಿಯ ಎಲ್ಲ ಸಂಗತಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವ ಹಾಗೂ ಆ ಸ್ಮರಣೆಗಾಗಿ ಒಂದೊಂದು ಆಚರಣೆಯನ್ನು ಪೋಷಿಸಿಕೊಂಡು, ತಲೆಮಾರುಗಳಿಂದ ನಡೆಸಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಕತೆಗಳು ಖಾಲಿಯಾದಾವೇ! 


ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣ ಕಾಂತಾರ ಸಿನೆಮಾ. ಈ ಬರವಣಿಗೆಯ ಯಾವ ಅಗತ್ಯವೂ ಇಲ್ಲದಷ್ಟು ಸಿನೆಮಾ ಈಗಾಗಲೇ ಜನಸಮೂಹವನ್ನು ತಲುಪಿಯಾಗಿದೆ. ಈ ಬರವಣಿಗೆಯಿಂದ ಆ ಸಿನೆಮಾಕ್ಕೆ ಯಾವ ಲಾಭವೂ ಇಲ್ಲ. ಆದರೆ, ಸಿನೆಮಾ ನೋಡಿ ಅದರಿಂದ ಉಂಟಾದ ರಸಾನುಭೂತಿಯನ್ನು ಪದಕ್ಕಿಳಿಸುವ ಪ್ರಯತ್ನ ಮಾಡದೇ ಹೋದರೆ, ಬಹುಶಃ ಆ ಸಿನೆಮಾದ ಗುಂಗಿನಿಂದ ಹೊರಬರುವುದು ತುಸು ಕಷ್ಟವೇ ಆದೀತೇನೋ.. "ವರಾಹ ರೂಪಂ ದೈವ ವರಿಷ್ಠಮ್" ಅನ್ನುವ ಆ ಧ್ವನಿ ಈಗಲೂ ಕಿವಿಯಲ್ಲಿ, ಮನಸ್ಸಿನಲ್ಲಿ ಅನುರಣಿಸುತ್ತಲೇ ಇದೆ. ಸಿನೆಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ವಾ ಅಂತ‌ ಪ್ರಶ್ನಿಸಿಕೊಂಡರೆ ಬೇಕಾದಷ್ಟು ಸಿಗುತ್ತವೆ. ಕೆಲವು ಪಾತ್ರಗಳು ಮತ್ತು ಆ ಪಾತ್ರಗಳಿಗೆ ಇರಬಹುದಾದ ಸಾಧ್ಯತೆಗಳು ಅಥವಾ ಸಂದರ್ಭದ ತೀವ್ರತೆ ಅಷ್ಟು ಸಮರ್ಥವಾಗಿ ಕಟ್ಟಲ್ಪಟ್ಟಿಲ್ಲ. ಉದಾಹರಣೆಗೆ ಲೀಲಾಳ ತುಮುಲಗಳು. ಆದರೂ, ಯಾಕೆ ಸಿನೆಮಾ ಅಷ್ಟು ಇಷ್ಟವಾಯಿತು ಅಂತ‌ ಕೇಳಿದರೆ ಅದಕ್ಕೆ ಬಹಳಷ್ಟು ಕಾರಣಗಳು ದೊರೆತವು. ಸುಮ್ಮನೆ ನೆಪಕ್ಕಾಗಿ ಯಾವುದನ್ನೂ ಇಲ್ಲಿ ತುರುಕಿಲ್ಲ. ಈ ಥರದ ಸಿನೆಮಾಗಳಾಗಲೀ, ಸಿನೆಮಾದ ಅಂತ್ಯಗಳಾಗಲೀ ಬಂದೇ ಇಲ್ವಾ ಅಂತ ಕೇಳಿದರೆ, ಬಂದಿವೆ; ಸುಖಾಂತ್ಯದ ಭಾಗವಾಗಿ ಬಂದವುಗಳೇ ಹೆಚ್ಚು. ಆದರೆ, ಇಲ್ಲಿ ಅದು ಇಡೀ ಕತೆಯ ಭಾಗವಾಗಿ, ಇಡೀ ಕತೆಯೇ ಅಂಥದ್ದೊಂದು ಹಂದರದಲ್ಲಿ ಸಹಜವಾಗಿ ಬಂದಿದೆ‌. ಜೊತೆಗೆ, ಅದರ ತೀವ್ರತೆಯೂ ಪ್ರೇಕ್ಷಕರಲ್ಲಿ ಒಂದು ತೆರನಾದ ಭಾವೋತ್ಕರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲಿನವರೇ ಆ ಕತೆಯನ್ನು ಹೇಳಿದಾಗ ಅದಕ್ಕೊಂದು ಸ್ವಂತಿಕೆ ಸಿಗುತ್ತದೆ. ಅದರಲ್ಲೂ ಇದು ಸಂಪೂರ್ಣವಾಗಿ ಜನಪದದ ಹಿನ್ನೆಲೆಯಲ್ಲಿ ಮೂಡಿಬಂದಿದ್ದರಿಂದ ಜನರಿಗೆ ಹತ್ತಿರವಾಗುವ ಗುಣ ಹೆಚ್ಚು. ಜನಪದ ತನ್ನ ಸೊಗಡು ಹಾಗೂ ನೈಜತೆಯಿಂದಾಗಿ ಯಾವತ್ತೂ ಜನಮಾನಸದಲ್ಲಿ ಔನ್ನತ್ಯವನ್ನು ತಲುಪುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಮಾಯಣ. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವುದಕ್ಕೂ  ಮೊದಲಿಗೆ ರಾಮಾಯಣವನ್ನು ನಾರದರಿಂದ ಕೇಳಿದ್ದು ಜ‌ನಪದದ ಭಾಗವಾಗಿಯೇ. ಜನಪದದಲ್ಲಿ ಮುಗ್ಧತೆ, ಭಕ್ತಿ, ಧರ್ಮಪ್ರಜ್ಞೆ, ನಂಬಿಕೆ, ಗೌರವ, ಸಂಭ್ರಮ, ಸಂಸ್ಕಾರ, ದರ್ಶನ, ಮೌಲ್ಯ, ಪರಂಪರೆ, ಸಂಪ್ರದಾಯಗಳಿವೆ. ಹಾಗಾಗಿ ಜನಪದ ಗಟ್ಟಿಯಾಗಿ ಬೇರೂರುತ್ತದೆ. ಮನಸ್ಸುಗಳನ್ನು ಕಟ್ಟುತ್ತದೆ. 


ದಕ್ಷಿಣ ಕನ್ನಡದ ಕುರಿತು ಹೇಳುವಾಗ ಹೇಳಲಾಗುವ ಒಂದು ಮಾತನ್ನು ಗಮನಿಸಿದ್ದೇನೆ; 'ಅವಿಭಜಿತ ದಕ್ಷಿಣ ಕನ್ನಡ'. ಅಲ್ಲಿನ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಅವೆಲ್ಲಕ್ಕೂ ಮೂಲವಾಗಿರುವ ದೈವಗಳು ಇಡೀ ದಕ್ಷಿಣ ಕನ್ನಡವನ್ನು ಒಂದಾಗಿ ಹಿಡಿದಿಟ್ಟಿವೆ ಅಂದರೆ ತಪ್ಪಾಗಲಾರದೇನೋ. ಹಾಗೆಯೇ, ದಕ್ಷಿಣ ಕನ್ನಡಕ್ಕೆ ಒಂದು ನಿಗೂಢತೆಯಿದೆ. ಆ ನಿಗೂಢತೆಯೇ ಅಲ್ಲಿನ ಆಚರಣೆಗಳಿಗೂ ಅಂಥದ್ದೊಂದು ಗುಣವನ್ನು ತಂದುಕೊಟ್ಟಿದೆ. ಅಲ್ಲಿನ ನಂಬಿಕೆಗಳೆಲ್ಲಾ ಕತೆ ಅಂದುಕೊಂಡವರಿಗೆ ಕತೆಯೂ ಹೌದು, ಸತ್ಯ ಅಂದುಕೊಂಡವರಿಗೆ ಸತ್ಯವೂ ಹೌದು. ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳಿಗೆ ಈ ನಾಡು ಸಾಕ್ಷಿಯಾಗಿದೆ. ನನ್ನನ್ನು ಯಾವುದೋ ಶಕ್ತಿ ನಿರಂತರವಾಗಿ ಕಾಯುತ್ತಿದೆ ಹಾಗೂ ಅದು ನಾನು ಅಧರ್ಮದ ದಾರಿ ಹಿಡಿಯದಂತೆ ಸದಾ ಎಚ್ಚರಿಸುತ್ತಲೂ ಇರುತ್ತದೆ ಅನ್ನುವ ಭಾವವೇ ಬದುಕಿಗೆ ಅದೆಷ್ಟು ನೆಮ್ಮದಿ ತರಬಲ್ಲದು. ಅದಕ್ಕಾಗಿಯೇ ಇಲ್ಲಿನ ದೈವಗಳು ದೇವಸಮಾನವಾಗಿ ಪೂಜಿಸಲ್ಪಡುತ್ತವೆ. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವುಗಳು ಇವು ಅನ್ನುವ ನಂಬಿಕೆಯೂ ಇದರ ಭಾಗವೇ. ಇಲ್ಲಿ ಮನುಷ್ಯರೂ ದೈವದ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಭಾರತ ಧರ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. 


ಈ ಚಿತ್ರ ಘೋಷಣೆಯಾದ ದಿನದಿಂದ ಕಾದು, ಸುಮಾರು ನಾಲ್ಕು ವರ್ಷಗಳ ನಂತರ ಚಿತ್ರಮಂದಿರಕ್ಕೆ ಹೋಗಿ, ಇಂಥದ್ದೊಂದು ಸಿನೆಮಾ ನೋಡುವ ಸಂಭ್ರಮವೇ ಬೇರೆ. ಸಿನೆಮಾ ನೋಡಿ ಆದ ಮೇಲೂ ಅದರ ಕುರಿತಾಗಿ ನಾನು ಬರೆಯಬೇಕು ಅಂದುಕೊಂಡಿದ್ದೆಲ್ಲವೂ ಸಪ್ಪೆಯೆನಿಸಿ, ಕಾದು ಕಾದು ಬರೆಯುವ, ಪದೇ ಪದೇ ಸಿನೆಮಾವನ್ನು ಕಣ್ಣೆದುರಿಗೆ ತಂದುಕೊಳ್ಳುವ ಈ ಅನುಭವ ಇದೆಯಲ್ಲಾ ಅದಕ್ಕಾಗಿ ಕಾಂತಾರ ಹತ್ತಿರವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಅನಿರ್ವಚನೀಯ ಅನುಭೂತಿಯನ್ನು ಹುಟ್ಟುಹಾಕುವುದು ಸುಲಭದ ಸಂಗತಿಯಲ್ಲ.  ಕಾಂತಾರ ಒಂದು ಪರಿಪೂರ್ಣ ಕಲಾಕೃತಿಯಲ್ಲ. ಆದರೆ, ಚೆಂದದ ಹಾಗೂ ಸ್ವಂತಿಕೆಯ ಕಲಾಕೃತಿ. ತನ್ನ ಅಪೂರ್ಣತೆಯನ್ನು ತಾನೇ ಮೀರುವ ಸಾಧ್ಯತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡ ಕಲಾಕೃತಿ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿಯೇ ಹೇಳಿದ ಸಿನೆಮಾ. ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳ ಭಿನ್ನತೆಗಳು ಹಾಗೂ ಪರಿ'ಶುದ್ಧ'ವಾದಾಗ ಉಂಟಾಗುವ ಸಮಾನತೆ ಇತ್ಯಾದಿಗಳನ್ನು ವಾಚ್ಯವಾಗಿಸದೇ ಹೇಳಿದೆ. ಸಿಂಗಾರ ಸಿರಿಯೇ ಹಾಡಲ್ಲಿ Manasi Sudhir  ಅವ್ರು ಶಿವ ಮತ್ತು ಲೀಲಾಳನ್ನು ನೋಡಿ ಒಳಗೊಳಗೇ ಖುಷಿಪಡುವ ದೃಶ್ಯ ಇದೆ. ಅದು ಬಹುಶಃ ಎಲ್ಲ ಅಮ್ಮಂದಿರ ಅಂತಃಕರಣದ ಪ್ರತೀಕ ಅಂತಲೇ ಅನಿಸಿತು. ಒಂದು ಊರಿನ, ಒಂದು ಭಾಗದ ಸಾಮಾಜಿಕ ಜೀವನವನ್ನು ಯಾವ ಪೂರ್ವಗ್ರಹದಲ್ಲಾಗಲೀ ಅಥವಾ ಸಿದ್ಧಾಂತದ ಪರಿಧಿಯಲ್ಲಾಗಲೀ ತೆರೆದಿಟ್ಟಿಲ್ಲ. 'ಆ‌ ಕಾಲಘಟ್ಟದಲ್ಲಿ ಹೀಗಿತ್ತು ಮತ್ತು ಇದು ಹೀಗಿದೆ' ಅನ್ನುವುದಷ್ಟೇ ಇಲ್ಲಿನ ಪ್ರಸ್ತುತಿ. ಚಿತ್ರದ ಕೊನೆಯಲ್ಲಿ ಇರುವ ಆಶಯವೂ ಅಷ್ಟೇ ಹೃದ್ಯವಾದದ್ದು. ಧರ್ಮ ಮತ್ತು ದೈವ ಇರುವುದು ಇದೇ ಕಾರಣಕ್ಕಾಗಿ ಹಾಗೂ ಇದೇ ಅವುಗಳ ಕೆಲಸ ಅನ್ನುವುದನ್ನು ಅದೆಷ್ಟು ಕಾವ್ಯಾತ್ಮಕವಾಗಿ ಹೇಳಲಾಗಿದೆ ಅಂದರೆ, ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗುತ್ತದೆ ಹಾಗೂ ಮನಸ್ಸು ಆಹ್ಲಾದಕ್ಕೊಳಗಾಗುತ್ತದೆ. ಕತೆ, ಕವಿತೆ, ಸಿನೆಮಾ ಯಾವುದರಲ್ಲೇ ಆದರೂ, ಅಷ್ಟೂ ಹೊತ್ತಿನ ಸಂಗತಿಗಳನ್ನು ಒಗ್ಗೂಡಿಸಿ, ಅದಕ್ಕೊಂದು ಸೂಕ್ತವಾದ ಅರ್ಥ ಕೊಡುವುದು ಅಂತ್ಯದ ಕೆಲಸ. ಹಾಗಾಗಿಯೇ ಅಂತ್ಯ‌, ಇಡೀ ಸಿನೆಮಾವನ್ನು ಕಟ್ಟಬಹುದು ಅಥವಾ ಕೆಡವಬಹುದು. ಕಾಂತಾರದಲ್ಲಿ ಅಂತ್ಯ ಇಡೀ ಸಿನೆಮಾಕ್ಕೆ ಬೇರೆ ನೆಲೆಯನ್ನೇ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬಂದ ಸಿನಿಮಾಗಳು ಧರ್ಮ, ಆಚರಣೆ, ಸಂಪ್ರದಾಯಗಳ ಕುರಿತಾಗಿ ಇರಬೇಕಾದ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದೇ ಹೆಚ್ಚು. ಆದರೆ, ಈ ಸಿನೆಮಾದಲ್ಲಿ ನಮ್ಮ ನೆಲದ ಕತೆಯನ್ನು ಒಂದು ಆತ್ಮೀಯ ಕತೆಯಾಗಿಯೇ ಹೇಳುವ ಹಾಗೂ ಅದನ್ನು ಅಷ್ಟೇ ಗೌರವದಿಂದ, ಜತನದಿಂದ ಮುಂದಿಡುವ ಪ್ರಯತ್ನಕ್ಕೆ ಮನಸ್ಸು ತುಂಬಿಕೊಳ್ಳದೇ, ಪುಳಕಗೊಳ್ಳದೇ ಇರುವುದಾದರೂ ಹೇಗೆ ಸಾಧ್ಯ! 


"ವರಾಹ ರೂಪಂ ದೈವ ವರಿಷ್ಠಮ್..."

ಶನಿವಾರ, ಜುಲೈ 23, 2022

'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...

 



'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... 

ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ‌ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ‌ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ,‌ ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. 

ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ‌‌ ಕೇಳಿದ್ದೇನಲ್ಲಾ ಅಂತ‌ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ‌ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ‌ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ‌ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ‌ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. 

ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ‌ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ,‌ ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ‌ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ‌ ಮೇಲೆ‌ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ‌ ನೋಡಿ ಬಂದೆ ಒಮ್ಮೆ! 

ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ‌ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ‌ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ‌ ತಂದುಕೊಡುವ ಹೆಣ್ಣಿನ ಸ್ಥಿತಿ. 

ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು‌ ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.

ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ‌ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" 

- 'ಶ್ರೀ'
   ತಲಗೇರಿ

ಭಾನುವಾರ, ಜುಲೈ 17, 2022

'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ'


 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ಇದೆಂಥದು? ಈ ಥರದ್ದೊಂದು ಪುಸ್ತಕದ ಕುರಿತಾಗಿ ಇವ ಯಾಕಾದ್ರೂ ಹೇಳ್ಬೇಕು ಅಂತ ಹಲವರಿಗೆ ಅನ್ನಿಸಬಹುದು,‌ ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಇನ್ನು ಕೆಲವರಿಗೆ 'ಇವರೆಲ್ಲಾ ಇಷ್ಟೇ' ಅಂತಲೂ ಅಥವಾ ಇನ್ನೂ ಏನೇನೋ ಅನ್ನಿಸಬಹುದು. ಆದರೂ, ಬಹಳಷ್ಟು ದಿನಗಳ ನಂತರ ಒಂದು ಗಹನವಾದ ಹಾಗೂ ಗಾಢವಾದ ಕ್ಷಣಗಳನ್ನು ಒಂದು ಪುಸ್ತಕ ಓದುವುದರಿಂದ ಅನುಭವಿಸಿದ್ದಕ್ಕಾದರೂ ಈ ಪುಸ್ತಕದ ಬಗ್ಗೆ ಬರೆಯಲೇಬೇಕು. ನಿಜ ಹೇಳಬೇಕೆಂದರೆ, ಈ ಪುಸ್ತಕದ ಅಡಿಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿಂದ ಈ ಪುಸ್ತಕದೊಂದಿಗಿನ ಪ್ರಯಾಣ ಶುರುವಾಗಿದ್ದು. ಆಮೇಲೆ ಪುಸ್ತಕ ಶುರುಮಾಡಿದ‌ ಮೇಲೆ ತಿಳಿಯಿತು ನಾನಂದುಕೊಂಡಿದ್ದು ಬೇರೆ ಅಂತ. ಆದರೆ, ಪುಸ್ತಕದ ಮೊದಲ‌ ಅಧ್ಯಾಯದಲ್ಲೇ ಒಂದು ವಿನಮ್ರ ವಿಜ್ಞಾಪನೆಯಿದೆ. ಆ ವಿಜ್ಞಾಪನೆಯೇ ಈ ಪುಸ್ತಕಕ್ಕೆ ಒಂದು ಗಟ್ಟಿ ದನಿಯನ್ನು ಕೊಟ್ಟಿದೆ. ಕೆಲವೊಮ್ಮೆ ನಾವು ಏನನ್ನು ಓದಲು ಬಯಸುತ್ತೇವೆಯೋ ಅದನ್ನು ಯಾರೂ ಬರೆಯದಿದ್ದಾಗ ನಾವೇ ಬರೆಯಲು ಮುಂದಾಗಬೇಕಾಗುತ್ತದೆ. ಇದು ಅಂಥದ್ದೇ ಪ್ರಯತ್ನ ಅಂತ ಲೇಖಕರು ಹೇಳಿದ್ದಾರೆ. ನನಗೆ ಈ ಸಂದರ್ಭದಲ್ಲಿ ಚಿತ್ರನಟ, ನಿರ್ದೇಶಕ‌ ರಕ್ಷಿತ್ ಶೆಟ್ಟಿಯವರು ಒಂದು ಸಂದರ್ಶನದಲ್ಲಿ ಹೇಳಿದ ಒಂದು ಮಾತು ಕೂಡಾ ನೆನಪಿಗೆ ಬಂತು; "ನನ್ ಸಿನೆಮಾ ಯಾರೂ ಮಾಡೋದಿಲ್ಲ, ನಾನೇ ಮಾಡ್ಕೋಬೇಕು"! ನಾನು ಯಾವ ಥರದ ಕತೆಯನ್ನು, ಸಂಗತಿಯನ್ನು ಕೇಳಲು ಬಯಸುತ್ತೇನೋ ಆ ಥರದ್ದನ್ನು ಯಾರೂ ಹೇಳದಿದ್ದಾಗ, ನಾನೇ ಆ ಪ್ರಾರಂಭಕ್ಕೆ ಒಂದು ಆರಂಭ ಕೊಡಬೇಕು. ಇದು ಕೇವಲ ಯಾವುದೋ ಒಂದು ಸಿದ್ಧಾಂತದ ಪ್ರಚಾರಕ್ಕಾಗಿಯೋ, ಇದೊಂದೇ ಶ್ರೇಷ್ಠ ಅನ್ನುವುದನ್ನು ಸಾರುವುದಕ್ಕಾಗಿಯೋ ಬರೆದ ಪುಸ್ತಕವಿರಬಹುದು ಅಂತ ಅಂದುಕೊಂಡಲ್ಲಿ ಅದು ತೀರಾ ಬಾಲಿಶವಾದೀತು. ಭಾರತದ ಹಲವು ದರ್ಶನಗಳನ್ನು ಒಟ್ಟಿಗೆ ಇಟ್ಟು, ಅವುಗಳನ್ನು ಸರಳವಾಗಿ ನೋಡುವ ಹಾಗೂ ಅವುಗಳ ಸಾಮ್ಯತೆಗಳನ್ನು ಗುರುತಿಸುವುದರ ಜೊತೆಗೆ ಅದ್ವೈತ ಎಷ್ಟರ ಮಟ್ಟಿಗೆ ಹೆಚ್ಚು ಪ್ರಸ್ತುತವಾಗಬಲ್ಲದು ಅನ್ನುವುದನ್ನೂ ಹೇಳುವ ಸಂಕಲ್ಪದ ಭಾಗವೇ ಶ್ರೀ ಅಕ್ಷರ ಕೆ ವಿ ಅವರ 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ನಾವು ಅದೆಷ್ಟೇ ಜಾಗಗಳಿಗೆ ಹೋಗಲಿ, ಅದೆಷ್ಟೇ ದೇಶಗಳನ್ನು ಸುತ್ತಲಿ, ಕೊನೆಗೆ ಎಲ್ಲವನ್ನೂ ಸಮೀಕರಿಸಿಕೊಳ್ಳುವುದು ನಮ್ಮೂರಿನ ಯಾವುದೋ ಒಂದು ಜಾಗಕ್ಕೆ; ಇದು ಅದರ ಹಾಗಿಲ್ಲ, ಅದಕ್ಕಿಂತ‌ ಚೂರು‌‌ ಜಾಸ್ತಿ ಅಥವಾ ಕಡಿಮೆ ಅಂತಲೋ, ಎಷ್ಟೇ ವ್ಯಕ್ತಿಗಳನ್ನು ಭೇಟಿ ಮಾಡಲಿ; ಇವ ಅವರ ಥರವೇ ಅಲ್ವಾ ಅಂತಲೋ, ಇನ್ನೂ ಏನೇನೋ ಹೀಗೆ. ಅಂದರೆ, 'ಮನುಷ್ಯ ಎಲ್ಲಿ ಹೋದರೂ ತನ್ನ ಪರಿಚಿತ ನೆನಪುಗಳೊಂದಿಗೆ ಮಾತ್ರವೇ ಎಲ್ಲವನ್ನೂ ನೋಡುತ್ತ ಹೋಗುತ್ತಾನೆ'. ಸ್ವತಂತ್ರವಾದಂಥ ಚಿತ್ರಣವೊಂದು ತಾನಾಗೇ ಮೂಡುವುದಕ್ಕೆ ಬಹುತೇಕವಾಗಿ ಕಷ್ಟಸಾಧ್ಯವೇ ಆಗಿರಬಹುದು.


ಇನ್ನು, ಬಹುತೇಕರು ಆಧುನಿಕತೆಯೆಂದರೆ ಸಂಪ್ರದಾಯಕ್ಕೆ ವಿರುದ್ಧ ಅಂತಲೇ ಅಥವಾ ಸಂಪ್ರದಾಯದ ವಿರುದ್ಧವಾಗಿದ್ದರೆ ಮಾತ್ರ ತಾವು ಆಧುನಿಕರು ಅಂತ ಭಾವಿಸಿದ್ದಾರೆ. ಆಧುನಿಕತೆಯೆಂದರೆ ನಂಬಿಕೆಗಳ ನವೀಕರಣ; ಅದು ಸಂಪ್ರದಾಯದಿಂದ ವಿಮುಖವಾಗಬೇಕಿಲ್ಲ. ಒಂದು ಸಂಕುಚಿತ ಅರ್ಥದಲ್ಲಿ ನೋಡಿದರೆ ಬಹುಶಃ ಎರಡೂ ಪರಸ್ಪರ ತಾಳೆಯಾಗದ ಪದಗಳಾಗಿ ಕಂಡರೆ ಅದು ಅವರವರ ಮಿತಿ ಅಷ್ಟೇ. ಯಾಕೆಂದರೆ ಸತ್ಯಕ್ಕೆ ಕೇವಲ ಎರಡು ಮುಖಗಳೇ ಇರಬೇಕು ಅಂತೇನೂ ಇಲ್ಲವಲ್ಲ ! ಈ ಎರಡು ಮುಖಗಳ  ನಂಬಿಕೆಯಾಚೆಗಿನ ಇನ್ನೊಂದು ಸಾಧ್ಯತೆಯೂ ಇರಬಹುದು. ಅಂಥ ಒಂದು ಸಾಧ್ಯತೆಯನ್ನು ಪರಿಕಲ್ಪನೆಯಲ್ಲಿಯೂ ಸಹ ನಿರೀಕ್ಷಿಸಿರದೇ ಇದ್ದವರಿಗೆ ಮಾತ್ರ ಅದು ಕೇವಲ ಎರಡು ರೂಪಗಳಿಗೆ ಸೀಮಿತ. ಜೊತೆಗೆ, ನಮ್ಮಲ್ಲೊಂದು ಪರಿಪಾಠವಿದೆ. ಆಧುನಿಕವೆಂಬಂತೆ ತೋರಿಸಿಕೊಳ್ಳಬೇಕೆಂದರೆ ಸಂಪ್ರದಾಯವನ್ನು ಹೀಯಾಳಿಸಬೇಕು. ಅದನ್ನು ಕಂಡಕಂಡ ಪದಗಳಲ್ಲಿ ಲೇವಡಿ ಮಾಡಬೇಕು. ಸಂಪ್ರದಾಯವಾದಿಗಳೆಂದವರನ್ನು‌ 'ಹೋ' ಎಂಬ ಕಿರುಚಾಟದ ನಡುವೆ ಅವಮಾನಿಸಬೇಕು. ವೈಚಾರಿಕತೆಯ ಗಂಧವೂ ಇರದ ಇಂಥ ಮನಸುಗಳು ಹೆಚ್ಚಾಗುತ್ತಿರುವುದು ಹಾಗೂ ಅದನ್ನು ಪೋಷಿಸುತ್ತಿರುವುದು‌ ಈ ಕಾಲದ ದುರಂತಗಳಲ್ಲಿ ಒಂದು. 


ಇತ್ತೀಚೆಗೆ ವಿಶ್ವವಿದ್ಯಾಲಯಗಳನ್ನು ದೊಡ್ಡ ದೊಡ್ಡ ಕಂಪೌಂಡುಗಳು ಸುತ್ತುವರೆದಿರುತ್ತಾವಲ್ಲಾ, ಅದನ್ನಿಲ್ಲಿ ಒಂದು ಆಳವಾದ ವ್ಯಂಗ್ಯದೊಂದಿಗೆ ಹೇಳಲಾಗಿದೆ. ವಿಶ್ವವಿದ್ಯಾಲಯಗಳು ಹಾಕುವ ಎತ್ತರದ ಬೇಲಿಗಳು ಕೇವಲ ಭೌತಿಕ ಬೇಲಿಯಲ್ಲ, ಅದು ಅಲ್ಲಿ ಬೋಧಿಸುವ ಸಂಗತಿಗಳ ಕುರಿತಾಗಿಯೂ ಇರುವ ಬೇಲಿ. ಅದೆಷ್ಟು ವಿಶ್ವವಿದ್ಯಾಲಯಗಳು ಕೇವಲ ತಮ್ಮದೇ ರಾಜಕೀಯ ಸಿದ್ಧಾಂತಗಳ‌ ಬೇಲಿ ಹಾಕಿಕೊಂಡು ಕುಳಿತಿಲ್ಲ ಹೇಳಿ! ವಿಶ್ವದ ಎಲ್ಲ ಕಡೆಯಿಂದಲೂ ಜ್ಞಾನದ ಬೆಳಕು ಹರಿದುಬರಲಿ ಅನ್ನುವುದು ಭಾರತೀಯತೆಯ ಪ್ರಾರ್ಥನೆ. ಆದರೆ, ಈಗ ಕೇವಲ ಕೆಲವರು ಆರಿಸಿಕೊಟ್ಟ ಆ‌ ಕೆಲವು ವಿಷಯಗಳ ಕುರಿತಾಗಿ ಮಾತನಾಡಿದರಷ್ಟೇ ನಮ್ಮನ್ನು ವೈಚಾರಿಕ ವ್ಯಕ್ತಿಯೆಂದು ಗುರುತಿಸಲಾಗುತ್ತದೆ; ಇಲ್ಲದಿದ್ದಲ್ಲಿ ಗೊಡ್ಡು ಸಂಪ್ರದಾಯವಾದಿ! 


ವೇದವಾಕ್ಯಗಳು ಎಂದಿಗೂ ಯಾವ ಕೆಲಸವನ್ನೂ ಮಾಡಿ ಯಾ ಮಾಡಬೇಡಿರೆಂದು ವಿಧಿಸುವುದಿಲ್ಲ. ಅವು ಕೇವಲ‌ ಅಭಿವ್ಯಕ್ತಿಯಾಗಿ ಮಾತ್ರವೇ ಇವೆ. ಅಂದರೆ, ಒಂದು ಕೆಲಸವನ್ನು ಹೀಗೆ ಮಾಡಿದರೆ‌ ಹೀಗಾಗಬಹುದು ಅನ್ನುವ ದಾರಿಯ ಪರಿಕಲ್ಪನೆಯನ್ನು ಸೂಚಿಸುತ್ತವೆಯೇ ಹೊರತೂ ಅಲ್ಲಿ ವಿಧಿಸುವಿಕೆ ಇಲ್ಲ. ಇದು ಮಾತ್ರವೇ ನಿನಗಿರುವ ದಾರಿ ಅನ್ನುವ ಕಟ್ಟಪ್ಪಣೆ ಇಲ್ಲ. ಭಾರತ ಯಾವತ್ತಿಗೂ ಅನ್ವೇಷಕರ ಭೂಮಿ ( land of seekers ). ಇದು ಹೀಗೆಯೇ ಅಂತಂದು ಷರಾ ಬರೆದ ಮರುಕ್ಷಣವೇ ಅನ್ವೇಷಣೆಗೆ ಅವಕಾಶವಾದರೂ ಎಲ್ಲಿ? ಭಾರತದಲ್ಲಿ ಇದ್ದಿದ್ದು ಇದು ಹೀಗೆ; ಬೇಕಾದರೆ ಹುಡುಕಿಕೋ ಅನ್ನುವ ಸಂಜ್ಞೆ. ಜೊತೆಗೆ ಹುಡುಕದೇ‌ ಯಾವುದರ ಸಾಕ್ಷಾತ್ಕಾರವೂ ಆಗುವುದಿಲ್ಲ. ಕಾರಣ, ಪ್ರತೀ ವ್ಯಕ್ತಿಯ ಅನುಭವವೂ ಭಿನ್ನ. ಹಾಗೆಯೇ, ಪ್ರತಿ ವ್ಯಕ್ತಿಯ ಅಂತರಂಗವೂ ಭಿನ್ನ. ಅದೇ ಅಧ್ಯಾತ್ಮ; ಆತ್ಮದ ಕುರಿತಾಗಿದ್ದು! ಅಪಾರದರ್ಶಕ ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಬೆಳಕು ಬೀಳುತ್ತಿರುವ ಕೋನದಿಂದ ನೋಡಿದವನಿಗೆ ಅಪಾರದರ್ಶಕದ ನೆರಳು ಗೋಚರಿಸದೇ‌ ಹೋಗಬಹುದು. ಆಗ, ನೆರಳೇ ಇಲ್ಲ ಅಂತ ವಾದಿಸುವುದು ಮತ್ತು ನಂಬುವುದು ಪೂರ್ಣ ದರ್ಶನದ ಭಾಗವಲ್ಲ. ಅದಕ್ಕಾಗಿಯೇ ಭಾರತದಲ್ಲಿ ಕೇವಲ ಯಾವುದೋ ಒಂದು ದರ್ಶನವಿರಲಿಲ್ಲ. ಎಲ್ಲ ದರ್ಶನಗಳ ಒಟ್ಟೂ ಸತ್ಯ‌ ಮತ್ತೆ ಸತ್ಯದ‌ ಮೂಲ ರೂಪಕ್ಕೇ ಹೋಗಿ ನಿಲ್ಲುತ್ತದೆ. ಯಾವಾಗಲೂ ಒಂದು ಮಾತಿದೆ; ಮೀನು ಹಿಡಿಯುವುದನ್ನು ಕಲಿಸು ಆದರೆ ನೀನೇ ಮೀನು ಹಿಡಿದುಕೊಡಬೇಡ ಅಂತ. ಹೀಗೂ ಇರಬಹುದು ಅನ್ನುವ ಹಲವು ದಾರಿಗಳನ್ನು ತೆರೆದಿಡು, ಆದರೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ನಿರ್ಧಾರವನ್ನು ಆ ವ್ಯಕ್ತಿಗೆ ಬಿಡು, ಇದನ್ನೇ ವೇದವಾಗಲೀ ಭಗವದ್ಗೀತೆಯಾಗಲೀ ಮಾಡುವುದು - ಯಥೇಚ್ಛಸಿ ತಥಾ ಕುರು. 


ಇನ್ನೊಂದು ಮಜದ ಸಂಗತಿಯೆಂದರೆ, ನಮ್ಮಲ್ಲಿ ಹಲವರು ಮೂಲಗ್ರಂಥಗಳನ್ನು ಓದದೆಯೇ ಅಲ್ಲ್ಯಾರೋ ಇನ್ನು ಹೇಗೋ ಅಸಂಬದ್ಧವಾಗಿ ಅರ್ಥೈಸಿಕೊಂಡಿರುವುದನ್ನು ಬರೆದಿದ್ದನ್ನೇ ಓದಿ ಇನ್ನೇನೋ ಅರ್ಥೈಸಿಕೊಳ್ಳುತ್ತೇವೆ. ಆ ಗ್ರಂಥದಲ್ಲಿ ಆ ಸಾಲಿನ ಮೂಲ ಉದ್ದೇಶ ಇನ್ನೇನೋ ಆಗಿರಬಹುದು. ಒಂದು ಸಂಗತಿಯ ಹಿಂದೆ ಮುಂದೆ ಬೇರೆ ಏನಾದರೂ ಇದ್ದರೆ, ಆ ಇಡೀ ಸಂಗತಿ ಅರ್ಥವಾಗುವ ರೀತಿಯೇ ಬೇರೆ!‌ ಕೇವಲ ಒಂದು ಸಾಲನ್ನು ಮಾತ್ರವೇ ತೆಗೆದುಕೊಂಡು ಅದರ ಅರ್ಥವನ್ನು ವಿಶ್ಲೇಷಿಸಿ ಮಹಾನ್ ವೈಚಾರಿಕರೆನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಉದಾಹರಣೆಗೆ, 'ಅವನು ಊಟ ಮಾಡಿದನು' ಇದೊಂದು ಸರಳವಾದ ವಾಕ್ಯ ಸ್ವತಂತ್ರವಾಗಿ;ಅರ್ಥವೂ ಅಷ್ಟೇ ಸರಳ. ಆ ವಾಕ್ಯದ ಹಿಂದೆ ಈಗ ಈ ವಾಕ್ಯವನ್ನು ಸೇರಿಸುವ; "ಯಾರ ಹತ್ತಿರವೋ ಬೇಡಿ ಅವರು ಊಟ ಪಡೆದಿದ್ದರು, ಅವರ ಕೈಯಿಂದ ಅದನ್ನು ಕಸಿದುಕೊಂಡು ಅವನು ಊಟ ಮಾಡಿದನು". ಇನ್ನೂ ಒಂದು ವಾಕ್ಯ " ನಡುಗುವ ಕೈಗಳ ಅಮ್ಮನ ಕೈಯಿಂದ ಅವನು ಊಟ ಮಾಡಿದನು". ಅವನು ಊಟ ಮಾಡಿದ್ದು ಸತ್ಯವೇ ಆದರೂ, ವಾಕ್ಯದ ನಿಜ ಅರ್ಥ ಹಾಗೂ ಧ್ವನಿ ಮೂರೂ ಸಂಗತಿಗಳಲ್ಲಿ ಬೇರೆಬೇರೆಯೇ ಅಲ್ವಾ! ಈಗ ನಮ್ಮ ವೇದ, ಉಪನಿಷತ್ತು, ಪುರಾಣ,‌ ಮಹಾಕಾವ್ಯದ ವಿಷಯಗಳಲ್ಲಿ ಆಗುತ್ತಿರುವುದು ಇದೇ. 


ಹೇಗೆ ತತ್ವಗಳಿಗೆ ದೇವರ ರೂಪ ಕೊಡಲಾಗುತ್ತದೋ ಹಾಗೆಯೇ, ಅವತಾರಗಳ ಮೂಲಕ ದೇವರಿಗೆ ಮನುಷ್ಯ ರೂಪ ಕೊಡಲಾಗುತ್ತದೆ. ಈ ಸಂಗತಿ ಅದೆಷ್ಟು ಆಪ್ತವೆಂದರೆ, ದೇವರು ಅಂದ ಮಾತ್ರಕ್ಕೆ ಮನುಷ್ಯ ನಿಯಮಗಳನ್ನು ಮೀರುವ ಹಾಗಿಲ್ಲ. ಮನುಷ್ಯ ದೇಹವನ್ನು ಪ್ರವೇಶಿಸಿದ ಮೇಲೆ ಮನುಷ್ಯ ಅನುಭವಿಸಬೇಕಾದ ಎಲ್ಲ‌ ಕ್ಲೇಶಗಳನ್ನು ದೇವರೆಂಬ ದೇವರೂ ಅನುಭವಿಸಬೇಕು! ಯುದ್ಧ ಮುಗಿದ ಮೇಲೆ‌ ರಾಮ ಹೇಳುತ್ತಾನಲ್ಲಾ; "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ". ಇವೆಲ್ಲವೂ ಒಂಥರಾ ಫ್ಯಾನ್ಸಿ ಅಥವಾ ಅತಿರೇಕದ ಹೇಳಿಕೆಗಳಂತೆ ಭಾಸವಾಗಬಹುದು. ಆದರೆ, ನಾನೂ ನೀನೂ ಬೇರೆಯಲ್ಲ ಅನ್ನುವುದನ್ನು ಇದಕ್ಕಿಂತ ಇನ್ನೊಂದು ದೃಷ್ಟಾಂತದ‌ ಮೂಲಕ ಹೇಳುವುದಕ್ಕೆ ಸಾಧ್ಯವಾ! 


~'ಶ್ರೀ' 

   ತಲಗೇರಿ