tag:blogger.com,1999:blog-68725488415891703442024-03-11T23:54:56.411+05:30ಇಬ್ಬನಿ.....ಇಬ್ಬನಿ...ಕರಿಯ ಮುಗಿಲಿನ ಕ೦ಬನಿ...ಸುಡುವ ಬಿಸಿಲ ಬೇಗೆಗೆ,ಎ೦ದೂ ಮುಗಿಯದ ವಿರಹ ವೇದನೆಗೆ..ಮುಗಿಲ ಕೆನ್ನೆಯ ಮೇಲಿ೦ದ ಜಾರಿದ ಹನಿ ಇರಬಹುದೇ?...ಮರಳಿ ಸೇರದ ತನ್ನಿನಿಯೆಗೆ ಬಾನಿನ ಮುತ್ತಿನ ಸ೦ದೇಶವು ಇರಬಹುದೇ?..ಕಾವೇರಿದ ಭೂರಮೆಗೆ ತ೦ಪನು ನೀಡುವ ಪರಿಯಿರಬಹುದೇ?...ಹಸಿರು ಬೊಗಸೆಗೆ ಬೀಳುತ ದಾಹವ ತಣಿಸುವ ಯೋಚನೆ ಇರಬಹುದೇ?...ಧರಣಿಯ ಸಿ೦ಗರಿಸಲು ಅಳುತಿದೆ ಮುಗಿಲು....ಕುಸಿಯಲು ಕೊಡದೇ,ಸಾ೦ತ್ವನ ನೀಡಲು ಬೇಕಿದೆ ಹೆಗಲು...ಮಡಿಲು....!~‘ಶ್ರೀ ತಲಗೇರಿಇಬ್ಬನಿhttp://www.blogger.com/profile/06704117357642373741noreply@blogger.comBlogger228125tag:blogger.com,1999:blog-6872548841589170344.post-24310757661031017192024-03-11T23:53:00.003+05:302024-03-11T23:53:57.496+05:30ಇಂಥದ್ದೊಂದು ಸಿನೆಮಾ ಬೇಕಿತ್ತು!<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh56_I9yVGvYOjWG5wGihjyuqXgEsjgudWjaRAIkDiapLhe_5N2o__fsuUjJoh2n2dU0KjNsTlxuDjIod9Khm3aoYSnBThp917vIgWLC-9B1retzAnRv4fexr_kSm0Hjn3E1_QaFfHvOUDdf3A_ijBMQLvegIo3av8oNRnrq8n622y-0PDJCpkmhzdFeKY/s619/FB_IMG_1710180944316.jpg" imageanchor="1" style="margin-left: 1em; margin-right: 1em;"><img border="0" data-original-height="495" data-original-width="619" height="256" src="https://blogger.googleusercontent.com/img/b/R29vZ2xl/AVvXsEh56_I9yVGvYOjWG5wGihjyuqXgEsjgudWjaRAIkDiapLhe_5N2o__fsuUjJoh2n2dU0KjNsTlxuDjIod9Khm3aoYSnBThp917vIgWLC-9B1retzAnRv4fexr_kSm0Hjn3E1_QaFfHvOUDdf3A_ijBMQLvegIo3av8oNRnrq8n622y-0PDJCpkmhzdFeKY/s320/FB_IMG_1710180944316.jpg" width="320" /></a></div><br /> ಇಂಥದ್ದೊಂದು ಸಿನೆಮಾ ಬೇಕಿತ್ತು! <p></p><p>********</p><p><br /></p><p>ಅಷ್ಟ್ ನಿಧಾನ ಸಿನೆಮಾ, ಅಲ್ಲಾ, ಈಗೆಲ್ಲಾ ಯಾರ್ ಹಾಂಗ್ ಇರ್ತಾರೆ? ಇದು ವಾಸ್ತವಕ್ಕೆ ಹತ್ತಿರಾನೇ ಇಲ್ಲಪಾ, ಕತೇನೂ ಇಲ್ಲ ಸಿನೆಮಾದಲ್ಲಿ, ಚೂರೂ ಇಷ್ಟ ಆಗಿಲ್ಲ, ತುಂಬಾ ಬೇಜಾರ್ ಬಂತು, ಕವಿತೆ ಥರ ಇದ್ಯಪಾ, ಎಲ್ಲಾ ಒಂಥರಾ ಚೆಂದ ಚೆಂದ ಫ್ರೇಮುಗಳು, ನನ್ ಸಮುದ್ರ ನೀನು ಅನ್ನೋ ಹೊಸ ಭಾಷೇನೇ ಹುಟ್ಟಾಕ್ತಪಾ, ಕಣ್ಣಲ್ ನೀರ್ ಬರ್ದೇ ಥಿಯೇಟರ್ ಇಂದ ಆಚೆ ಬರೋದಿಲ್ಲ, ನಾನೆಲ್ಲಿ ಅತ್ತ್ಬಿಡ್ತೀನೋ ಅಂತ ಭಯಕ್ಕೆ ಇನ್ನೂ ಸಿನೆಮಾ ನೋಡಿಲ್ಲ ಅಂತೆಲ್ಲಾ ನೂರಾರು ಅಭಿಪ್ರಾಯಗಳ ಮಧ್ಯ ನನಗೆ ಅನಿಸಿದ್ದು ಇಂಥದ್ದೊಂದು ಸಿನೆಮಾ ಬೇಕಿತ್ತು ನಮ್ಮ ಕನ್ನಡಕ್ಕೆ! ಹೇಗೆ ಕೆಜಿಎಫ್ ಥರದ ಸಿನೆಮಾವೊಂದು ಕನ್ನಡದ ಮಾರುಕಟ್ಟೆಗೆ ಅಗತ್ಯವಿತ್ತೋ, ಹೇಗೆ ಲೂಸಿಯಾ ಥರದ ಸಿನೆಮಾವೊಂದು ಕನ್ನಡದ ಚಿತ್ರರಂಗದ ಏಕತಾನತೆಯನ್ನು ಮುರಿಯುವುದಕ್ಕೆ ಅವಶ್ಯಕವಿತ್ತೋ, ಹೇಗೆ ಉಳಿದವರು ಕಂಡಂತೆ ಥರದ ಸಿನೆಮಾವೊಂದು ಕನ್ನಡದ ಕತೆಯ ಹೇಳುವಿಕೆಗೆ ಅಗತ್ಯವಿತ್ತೋ, ಹಾಗೆಯೇ ಇಂಥದ್ದೊಂದು ಸಿನೆಮಾ ಈ ಹೊತ್ತಿಗೆ ಬಹಳ ಅಗತ್ಯವಿತ್ತು. ಕ್ರೌರ್ಯ, ರಕ್ತ, ಕಾಮ, ಭೋಗ, ಲೋಭ, ಮದ ಇವಿಷ್ಟೇ ಸದ್ಯದ ಚಿತ್ರಗಳ ಕಥಾವಸ್ತುಗಳು. ಬದುಕಿನ ಯಾವುದೋ ಒಂದು ಏಕಾಂತದ ಮಧ್ಯಾಹ್ನದಲ್ಲೋ, ಅಥವಾ ಶನಿವಾರದ ಸಂಜೆಯಲ್ಲೋ ಸುಮ್ಮನೆ ಕೂತು ನೋಡುವಂಥ ಚಿತ್ರಗಳು ಬರದೇ ಅದೆಷ್ಟು ದಿನಗಳಾಗಿದ್ದವು! ಎಲ್ಲರೂ ಕ್ರೌರ್ಯದ ಹಿಂದೆ ಓಡುತ್ತಿರುವಾಗ, ಅರ್ಥವೇ ಇಲ್ಲದ ವಿಜೃಂಭಣೆಗೆ ಒತ್ತು ಕೊಡುತ್ತಿರುವಾಗ, ಒಂದು ಅಪ್ಪಟ ಹಾಗೂ ಶುದ್ಧ ಪ್ರೇಮದ ಕತೆಯನ್ನು ಹೇಳುವುದು ಸುಲಭವಲ್ಲ. ಜೊತೆಗೆ, ನಮ್ಮ ಇಡೀ ಜನಾಂಗವೇ ರೀಲ್ಸ್ ಸ್ಕ್ರಾಲ್ ಮಾಡಿದಷ್ಟು ಸುಲಭವಾಗಿ ಬೇರೆ ಬೇರೆ ಸಂಬಂಧಗಳಿಗೆ ಟಕಟಕಟಕ ಅಂತ ಬದಲಾಗುತ್ತಿರುವಾಗ, ತನಗೆ ಸಿಗದವರು ಇನ್ನ್ಯಾರಿಗೂ ಸಿಗಬಾರದು ಅಂತಲೋ, ಅಥವಾ ತನಗೆ ಸಿಗಲಿಲ್ಲವಲ್ಲ ಅಂತ ನೆನಪುಗಳಲ್ಲೇ ಹಲಬುತ್ತಾ ಬದುಕಿಡೀ ಕೊರಗುವವರ ಮಧ್ಯದಲ್ಲಿ, ಬದುಕನ್ನು ಹೇಗೆ ಚೆಂದವಾಗಿಸಬಹುದು ಅಥವಾ ಬದುಕೇ ಆಗಿದ್ದ ಒಬ್ಬರು ಯಾವುದೋ ಕಾರಣಗಳಿಗಾಗಿ, ಪರಿಸ್ಥಿತಿಗಳಿಂದಾಗಿ ನಮಗೆ ಸಿಕ್ಕದೇ ಹೋದಾಗ, ಅದನ್ನು ಹೇಗೆ ನಿಭಾಯಿಸಬಹುದು, ಪ್ರೀತಿಯ ಅಂತಿಮ ಗುರಿ ಏನು ಇತ್ಯಾದಿಗಳನ್ನೆಲ್ಲವನ್ನೂ ಒಟ್ಟಿಗೆ ನಮ್ಮ ಮುಂದಿಡುವ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ'</p><p><br /></p><p>ನಿರ್ದೇಶಕರು ಹಾಗೂ ನಟ ಇಬ್ಬರೂ ಹೇಳಿದ ಹಾಗೆ ಈ ಚಿತ್ರ ಒಂದು ಕಾವ್ಯ. ಕಾವ್ಯದ ಗುಣವೇ ಅದು. ಎಲ್ಲರಿಗೂ ರುಚಿಸುವುದಿಲ್ಲ. ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಎಲ್ಲರಿಗೂ ಇದು ಅಗತ್ಯ ಅಂತ ಅನ್ನಿಸುವುದೂ ಇಲ್ಲ. ಕಾವ್ಯ ಯಾವತ್ತಿಗೂ ನಮ್ಮ ನಮ್ಮ ಪಾಲಿಗೆ ದಕ್ಕಿದಷ್ಟೇ! ಸಿನೆಮಾದ ಮೊದಲ ಭಾಗದಲ್ಲಿ ನಡೆದಂಥ ಒಂದು ಘಟನೆ ಹಾಗೂ ಅದರಿಂದ ಬಹುದೊಡ್ಡ ಕನಸನ್ನು ಕಟ್ಟಿಕೊಂಡಿರುವ ಹುಡುಗನೊಬ್ಬ ತೆಗೆದುಕೊಂಡ ಸಾಮಾನ್ಯವಾದ ಸಣ್ಣ ನಿರ್ಧಾರವೊಂದು ಆ ಹುಡುಗನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತಲ್ಲಾ ಅಂತ ನೆನೆದಾಗಲೆಲ್ಲಾ ಎದೆ ಬಡಿತ ಜೋರಾಗುತ್ತದೆ. ಇಂಥ ತಪ್ಪುಗಳನ್ನು ಮಾಡಿ ಈ ಹೊತ್ತಿನಲ್ಲಿ ಅದೆಷ್ಟು ಜನ ಜೈಲುಗಳಲ್ಲಿ ಇದ್ದಿರಬಹುದು ಹಾಗೂ ಅವರೆಲ್ಲರ ಅಷ್ಟು ವರ್ಷಗಳ ಆ ಬದುಕು ಕೇವಲ ಒಂದು ನಿರ್ಧಾರದಿಂದ ಅದೆಷ್ಟು ಭಿನ್ನವಾಯಿತಲ್ಲಾ ಅಂತ ನೆನೆಸಿಕೊಂಡರೆ ಉಸಿರು ಭಾರವಾಗುತ್ತದೆ. ಸಿನೆಮಾ ನೋಡುವಾಗಲೂ ಇಂಥದ್ದೇ ಭಾರದ ಉಸಿರು ಬಾರಿ ಬಾರಿ ಎದುರಾಗುತ್ತಿತ್ತು. ಮೊದಲ ಭಾಗ ಮುಗಿದಾಗ ಅದೆಷ್ಟು ಜನರು "ಎರಡನೇ ಭಾಗದಲ್ಲಾದರೂ ಅವರನ್ನು ಒಂದಾಗಿಸಿ ನಿರ್ದೇಶಕರೇ" ಅಂತ ಅಂದವರಿಲ್ಲ! ಅಂಥದ್ದೊಂದು ಮಾತನ್ನು ಇತ್ತೀಚಿನ ಯಾವ ಸಿನೆಮಾಗಳಿಗೆ ನಾವು ಕೇಳಿದ್ದೆವು! ಎರಡು ಭಾಗಗಳಲ್ಲಿ ಬಂದಿದ್ದರೆ ಕೇಳುತ್ತಿದ್ದೆವೇನೋ ಅನ್ನಬಹುದು. ಆದರೆ, ಎರಡು ಭಾಗಗಳಲ್ಲಿ ಹೇಳುವುದಕ್ಕೆ ಕತೆಯೊಂದು ಇರಬೇಕಲ್ಲಾ! ಅಂಥ ಕತೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ. ಪ್ರೇಮಕತೆಗಳನ್ನು ಎಷ್ಟು ಅಂತ ಹೇಳಬಹುದು ಅಂತ ಅಂದುಕೊಳ್ಳುತ್ತಿರುವಾಗಲೇ, ಹೀಗೊಂದು ಪ್ರಾಮಾಣಿಕವಾದ ಕತೆ ಸಿಕ್ಕಿದರೆ ಅದಕ್ಕಿಂತ ಚೆಂದದ ಸಂಗತಿ ಇನ್ನೇನಿದೆ. </p><p><br /></p><p>ಮೊದಲನೇ ಭಾಗದಲ್ಲಿ ಇದ್ದಂಥ ದೃಶ್ಯ ಸೂಕ್ಷ್ಮತೆಗಳು "ಆಹ್ಞಾ, ವ್ಹಾ!" ಅನ್ನಿಸುವಷ್ಟು ಚೆಂದ. ಬಸ್ಸಿನಲ್ಲಿ ನಿತ್ಯವೂ ನಡೆವ ಘಟನೆ ಹೇಗೆ ಕೊನೆಯಲ್ಲಿ ಇಡೀ ಚಿತ್ರದ ಹಾಗೂ ಬದುಕಿನ ದಾರಿಯನ್ನು ಸೂಚಿಸುತ್ತದೋ, ಹಾಗೆಯೇ ಭಾಗ ಎರಡರ ಶುರುವಿನಲ್ಲಿ ನಟ ಗೊಂಬೆಯನ್ನು ಹೇಗೆ ಎತ್ತಿಕೊಂಡು ಹೋಗುತ್ತಾನೆ ಅಂತ ತೋರಿಸುವ ದೃಶ್ಯ ಮುಂದಿನ ಇಡೀ ಕಥಾಹಂದರವನ್ನು ಸೂಚಿಸುತ್ತದೆ. ಇಂಥ ಸೂಚ್ಯ ದೃಶ್ಯಗಳು ಚಿತ್ರದ ಜೀವಾಳ. ಕವಿತೆ ಅಂದರೂ ಅದೇ ಅಲ್ವಾ! ವಾಚ್ಯವಾಗದೇ ಸೂಚ್ಯವಾಗುವುದು. ಖುಷಿಯ ವಿಷಯವೆಂದರೆ ಎಲ್ಲಿಯೂ ಕತೆಯ ಮೂಲ ಆಶಯದಿಂದ ಆಚೆ ಹೋಗದೇ, ಅದೇ ವಿಷಯಕ್ಕೆ ಅಂಟಿಕೊಂಡಿದ್ದು. "ಒಂದು ಕನಸು ಕಂಡೆ. ಆದರೆ, ಮತ್ತೆಂದಿಗೂ ಆ ಕನಸಿಗೆ ವಾಪಸ್ಸು ಹೋಗುವುದಕ್ಕೆ ಸಾಧ್ಯವಾಗಲೇ ಇಲ್ಲ" ಅಂತ ಅಂದಾಗ, ಆ ಕನಸೇ ಬದುಕಿನ ಅಂತಿಮ ಗುರಿ ಹಾಗೂ ಅದಕ್ಕಿಂದ ಭಿನ್ನವಾದ ಆಸೆಗಳೇನೂ ಇಲ್ಲ ಅಂದಾಗ ಅಂಥ ಕನಸಿಗೆ ಹತ್ತಿರವಾದ ವಾಸ್ತವವನ್ನು ಕಟ್ಟಿಕೊಳ್ಳುವುದೇ ಬಹುಶಃ ಅತ್ಯಂತ ಸಮರ್ಪಕವಾದ ಕೆಲಸ ಅಂತನ್ನಿಸದೇ ಹೋಗುವುದಿಲ್ಲ. ಬೇರೆ ಕನಸು ಕಾಣಬಹುದಿತ್ತು. ಬೇರೆ ಬದುಕು ಬಾಳಬಹುದಿತ್ತು. ಆದರೆ, ಕೊನೆಯಲ್ಲಿ ಎಲ್ಲವೂ ನಮ್ಮ ಆಯ್ಕೆಗಳೇ ಅಲ್ಲವಾ! ಆಯ್ಕೆಗಳು ಬದಲಾದರೆ, ಬದುಕಿನ ದಾರಿ ಬದಲಾಗುತ್ತದೆ. ಆದರೆ, ಆಯ್ಕೆಗಳೇ ಬೇಡ ಅಂತಂದುಕೊಂಡಾಗ ದಾರಿಯೂ ಒಂದೇ, ನಡೆಯುವುದು ಹೇಗೆಲ್ಲಾ ಅನ್ನುವುದನ್ನು ಮಾತ್ರವೇ ನೋಡಿಕೊಳ್ಳಬೇಕಷ್ಟೇ! </p><p><br /></p><p>ಈ ಸಿನೆಮಾ ಸುಮ್ಮನೆ 'ನಂದೂ ಒಂದಿರ್ಲಿ' ಅಂತ ಮಾಡಿದ ಸಿನೆಮಾವಲ್ಲ. ಸಿನೆಮಾ ಮಾಡುವಾಗ ಸಿನೆಮಾದ ಕುರಿತಾಗಿನ ಕಾಳಜಿಯಿದೆ. ಸಿನೆಮಾದ ಕತೆಯ ಕುರಿತಾಗಿನ ಕಾಳಜಿಯಿದೆ. ಅಲ್ಲಿ ಬರುವ ಪಾತ್ರಗಳ ಕುರಿತಾಗಿಯೂ, ಆ ಪಾತ್ರಗಳ ವಸ್ತ್ರಗಳ ಕುರಿತಾಗಿಯೂ, ಇಡೀ ಚಿತ್ರದಲ್ಲಿ ಬರುವ ಬಣ್ಣಗಳ ಕುರಿತಾಗಿಯೂ ನಿರ್ದೇಶಕರು ಯೋಚಿಸಿದ್ದಾರೆ. ಅದರಲ್ಲೂ ಕನ್ನಡದ ಪ್ರಸಿದ್ಧ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅದರಲ್ಲೂ ಆಧ್ಯಾತ್ಮಿಕವಾಗಿ ಬಹಳ ಆಳದ ಸಂಗತಿಯೊಂದನ್ನು ಹೇಳುವ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅಷ್ಟೇ ಚೆಂದದ ಪ್ರೇಮದ ಸಿದ್ಧಾಂತವನ್ನು ಹೇಳುವುದು ಸುಲಭವಲ್ಲ. ನೀನೂ ಆ ಕಡಲಿನ ಭಾಗ, ನಾನೂ ಆ ಕಡಲಿನ ಭಾಗ, ನಮ್ಮಿಬ್ಬರ ದಡಗಳು ಮಾತ್ರ ಬೇರೆ ಅನ್ನುವ ಅರಿವಿಟ್ಟುಕೊಂಡು ಕಡಲನ್ನೇ ಸೇರದ ನದಿಯ ಬಳಿಗೆ ಕಡಲೂ ಹೋಗದೇ, ಆದರೆ, ನದಿಯ ಹರಿವು ಮಾತ್ರ ಕಳೆದುಹೋಗದ ಹಾಗೆ ನೋಡಿಕೊಳ್ಳುವ ಕಡಲಿನ ಗುಣ ಬೇಕಲ್ಲವೇ ಈ ಹೊತ್ತಿಗೆ! ಪುಟ್ಟ ಶಂಖವೊಂದನ್ನು ಕಿವಿಗಿಟ್ಟುಕೊಂಡಾಗಲೆಲ್ಲಾ ಕಡಲಿನ ಅಲೆಗಳ ಸದ್ದೇ ಕೇಳುತ್ತದೆ ಅಂತ ನಾಯಕ ಅಂದುಕೊಂಡಾಗಲೆಲ್ಲಾ ನಾನೂ ಒಮ್ಮೆ ಕಿವಿಗಿಟ್ಟು ನೋಡಬೇಕು ಅಂತ ನನಗೆ ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ. ಅದು ಅಂಥ ದೃಶ್ಯಗಳ ತಾಕತ್ತು. ಒಡೆದ ಕನ್ನಡಿಯ ಬಿಂಬ, ವ್ಯಕ್ತಿಗಳ ಇತಿಹಾಸವನ್ನು ಕೆದಕದೇ ಸದ್ಯದ ಬದುಕಿಗೆ ಅಂಟಿಕೊಳ್ಳುವುದು, ಸ್ಥಗಿತವಾದ ರೈಲು ಹೇಗೆ ಅವನ ಬದುಕಿನ ಕತೆಯನ್ನು ಕಟ್ಟಿಕೊಡುತ್ತದೋ, ಭ್ರಮೆಯಲ್ಲಿಯೂ ವಾಸ್ತವದ ನೆರಳು ಇವೆಲ್ಲವೂ ಕತೆಯ ಸೂಕ್ಷ್ಮ ಹೆಣಿಗೆಗಳು. </p><p><br /></p><p>ಹಾಗಂತ ಸಿನೆಮಾದಲ್ಲಿ ಎಲ್ಲವೂ ಸರಿಯಿತ್ತಾ? ಅಂದರೆ, ಒಬ್ಬೊಬ್ಬರಿಗೆ ಒಂದೊಂದು ಅಂಶಗಳು ಸರಿಯಿಲ್ಲ ಅಂತನ್ನಿಸಿರಬಹುದು. ನನಗೆ ಚಿತ್ರದ ಶೀರ್ಷಿಕೆ ಹಾಡೇ ಇಷ್ಟವಾಗಲಿಲ್ಲ; ಅದಕ್ಕೆ ಕಾರಣವೂ ಆ ಶೀರ್ಷಿಕೆಯೂ ಹಾಗೂ ಆ ಶೀರ್ಷಿಕೆಗಿರುವ ಹಿನ್ನೆಲೆಯೂ! ಅದರ ಜೊತೆಗೆ ಚಿತ್ರದ ಕೊನೆ ಭಾವನಾತ್ಮಕವಾಗುವ ಭರದಲ್ಲಿ ಚೂರು ವಾಸ್ತವಕ್ಕಿಂತ ದೂರವಾಯಿತು ಅಂತ ಅನಿಸಿದ್ದು ಹೌದು. ಮನಸ್ಸನ್ನು ಕದಡದ ಕಾವ್ಯ ಬಹುಶಃ ಒಳ್ಳೆಯ ಕಾವ್ಯವಾಗಿರಲಿಕ್ಕಿಲ್ಲ ಅನ್ನುವುದು ಒಂದು ನಂಬಿಕೆ. ಹಾಗಂತ ಎಲ್ಲಾ ಕಾವ್ಯಗಳು ಬರೀ ದುಃಖವನ್ನೇ ತುಂಬಿಕೊಂಡಿದ್ದರೆ ಮಾತ್ರ ಅವು ಒಳ್ಳೆಯ ಕಾವ್ಯ ಅಂತಲ್ಲ. ಈ ಎಲ್ಲಾ ನೋವುಗಳನ್ನು ಮಡುಗಟ್ಟಿಸಿ ಕಾವ್ಯ ಹುಟ್ಟುವುದು. ಹಾಗಾಗಿಯೇ ಕಾವ್ಯದ ಒಂದೊಂದು ಸಾಲೂ ಬಹಳಷ್ಟನ್ನು ಹೇಳುತ್ತದೆ. ಯಾಕೆಂದರೆ, ಅದು ತೆಳುವಾದದ್ದಲ್ಲ. ತೇಲಿಸುವಿಕೆ ಅಲ್ಲ. ಅದು ಭಾರವಾದದ್ದು, ಮುಳುಗಿಸುವಂಥದ್ದು, ಕಡಲಿನಂಥದ್ದು. </p><p><br /></p><p>ಇವತ್ತಿನ ಜನಾಂಗಕ್ಕೆ ಇದು ತಾರ್ಕಿಕತೆ ಮತ್ತು ವಾಸ್ತವವಿಲ್ಲದ ಸಿನೆಮಾದಂತೆ ಕಂಡರೂ, ಈ ಸಿನೆಮಾದಲ್ಲೊಂದು ಕನಸಿದೆ. ಮತ್ತೆ, ನಾವು ಆ ಕನಸಿಗೆ ವಾಪಸ್ಸು ಹೋಗಬಹುದಾ! </p><p><br /></p><p>ನಿಜ, ಈ ಹೊತ್ತಿಗೆ ನಮಗೊಂದು ಇಂಥ ಕಡಲ ಕತೆ ಬೇಕಿತ್ತು!</p><p><br /></p><p>ಧನ್ಯವಾದಗಳು Hemanth M Rao , Hemanth M Rao , Rakshit Shetty ನಿಮ್ಮಿಬ್ಬರಿಗೂ!</p><p><br /></p><p>~`ಶ್ರೀ' </p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-21379876868946598892024-03-11T23:52:00.000+05:302024-03-11T23:52:02.181+05:30ಕಥಾಗತ - ನಮ್ಮ ಮಣ್ಣಿನ ಕಥನ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhb6KesRIvwGWCre2FQr0H-jufykqK_mX0AWPJ5nFTawj5ENaHvSzRfdNTEctDcS0JMiuK9BfvJNz5I1Nzxo9bFnEbcgEbyxnFtLl-XyhlkWD5rYFtYvO-0Zv77pXU-ow67v-fHuM-G0UbcX6wLHFfkxFd-vKduUNXEL5fk_TLjchfFLtr0il3ZsVDAdTs/s1386/FB_IMG_1710181196022.jpg" imageanchor="1" style="margin-left: 1em; margin-right: 1em;"><img border="0" data-original-height="1386" data-original-width="1080" height="320" src="https://blogger.googleusercontent.com/img/b/R29vZ2xl/AVvXsEhb6KesRIvwGWCre2FQr0H-jufykqK_mX0AWPJ5nFTawj5ENaHvSzRfdNTEctDcS0JMiuK9BfvJNz5I1Nzxo9bFnEbcgEbyxnFtLl-XyhlkWD5rYFtYvO-0Zv77pXU-ow67v-fHuM-G0UbcX6wLHFfkxFd-vKduUNXEL5fk_TLjchfFLtr0il3ZsVDAdTs/s320/FB_IMG_1710181196022.jpg" width="249" /></a></div><br /> ಕಥಾಗತ - ನಮ್ಮ ಮಣ್ಣಿನ ಕಥನ<p></p><p><br /></p><p>ನಮ್ಮ ಕತೆಗಳೆಲ್ಲವನ್ನೂ ಕೇವಲ ಕಾಲ್ಪನಿಕವೆಂಬಂತೆಯೋ ಅಥವಾ ಎಲ್ಲರ ಕೈಯಲ್ಲೂ ಸೋತ ಕತೆಗಳಂತೆಯೂ ಬಿಂಬಿಸಿರುವಾಗ, ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಾದರೂ ಹೇಗಿದ್ದೀತು? ಇತಿಹಾಸದ ಬಗ್ಗೆ ಹೆಮ್ಮೆ ಯಾಕೆ ಬೇಕು, ಭೂತಕಾಲವನ್ನು ಕಟ್ಟಿಕೊಂಡು ನಮಗೇನಾಗಬೇಕು ಅನ್ನುವ ಇಂದಿನ ತಲೆಮಾರಿಗೆ ಅರ್ಥವಾಗಬೇಕಾದ ಒಂದು ವಿಷಯ ಏನೆಂದರೆ, ಯಾರಲ್ಲಿ ಹೆಮ್ಮೆಪಡಬಹುದಾದಂಥ ಭೂತಕಾಲವಿರುತ್ತದೆಯೋ ಅವರಲ್ಲಿ ಆತ್ಮವಿಶ್ವಾಸ ಯಾವಾಗಲೂ ಜಾಸ್ತಿ; ಹಾಗೆಯೇ, ಹಿಂದೆ ಆಗಿದ್ದನ್ನು ತಿಳಿದವರು ಅಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡಲಾರರು. ಅದೇ ಕಾರಣಕ್ಕಾಗಿಯೇ ಯಾವ ಜನಾಂಗವನ್ನಾದರೂ ನಾಶ ಮಾಡಬೇಕು ಅಂತಾದರೆ, ಆ ಜನಾಂಗದ ಇತಿಹಾಸವನ್ನು ಹಾಗೂ ಅದರಲ್ಲಿನ ಮಹಾನ್ ಸಂಗತಿಗಳನ್ನು ಮೊದಲು ಅಳಿಸಲಾಗುತ್ತದೆ. ಆತ್ಮವಿಶ್ವಾಸವಿಲ್ಲದ ಮನುಷ್ಯ ಜನಾಂಗ ಮಾಡುವುದಾದರೂ ಏನನ್ನು? ಒಂದು ವಿಷಯವನ್ನು ಮಾತ್ರ ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕು. ಭಾರತದ ಇತಿಹಾಸವೂ ಗಟ್ಟಿಯಾಗಿತ್ತು ಹಾಗೂ ನಮ್ಮ ಕಥನ ಪರಂಪರೆಯೂ. ಅಂತೆಯೇ ಇತಿಹಾಸವೆಂದರೆ ಶುಷ್ಕ, ಅದರಲ್ಲೇನಿದೆ ಅನ್ನುವ ಹೊತ್ತಿನಲ್ಲಿ, ಇತಿಹಾಸದೊಂದಿಗೆ ಕಥನ ಪರಂಪರೆ ಜೊತೆಯಾದರೆ ಹೇಗಿರಬಹುದು ಅನ್ನುವ ಆಲೋಚನೆಯೊಂದಿಗೆ ಡಾ. ನವೀನ್ ಗಂಗೋತ್ರಿ ( Naveen Gangotri ) ಅವರು ಬರೆದಿರುವ, ಸ್ವಸ್ತಿ ಪ್ರಕಾಶನ ( Priya Bhat ) ತನ್ನ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಕಟಿಸಿರುವ ಕೃತಿಯೇ 'ಕಥಾಗತ'. ಅದಕ್ಕೆ ತಕ್ಕದಾದ ಉಪ ಶೀರ್ಷಿಕೆ 'ನೆಲದ ನಿನ್ನೆಯ ಮರೆಯಬಾರದ ಕಥಾನಕ'.</p><p><br /></p><p>ಇಲ್ಲಿ ಎಂಟು ಕತೆಗಳಿವೆ. ಭಾರತದ ಇತಿಹಾಸ ಕೇವಲ ಎಂಟು ಕತೆಗಳಲ್ಲಿ ಹೇಳಬಹುದಾದದ್ದಾ ಅಂದರೆ ಖಂಡಿತಾ ಅಲ್ಲ. ಆದರೆ, ಇಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಹೇಳಲಾಗಿದೆ. ಮುಖ್ಯ ಸಂಗತಿಗಳೂ ಕೇವಲ ೮ ಕತೆಗಳಲ್ಲಿ ಹೇಳಬಹುದಾದದ್ದಲ್ಲ. ನಮ್ಮ ಗತದ ಕೆಲವು ಕಥಾನಕಗಳಿವೆ ಇಲ್ಲಿ ಅಂದರೆ ಹೆಚ್ಚು ಸೂಕ್ತವಾದೀತು. ಇತಿಹಾಸವೆಂದರೆ ಇಸವಿ, ಯುದ್ಧ, ಶಸ್ತ್ರಾಸ್ತ್ರ, ಸೈನ್ಯದ ಲೆಕ್ಕಾಚಾರ, ಕರ ಪದ್ಧತಿ, ಸಮಾಜಕ್ಕೆ ಕೊಡುಗೆ ಇವಿಷ್ಟೇ ಅನ್ನುವಂತೆ ನಾವು ನಮ್ಮ ಪಠ್ಯದಲ್ಲಿ ಓದಿಕೊಂಡು ಬಂದಿದ್ದೇವೆ. ಆದರೆ, ಇದಕ್ಕೂ ಮೀರಿದ ಕತೆಗಳಿವೆಯಾ? ಇದ್ದರೆ ಆ ದಾಖಲಾತಿಗಳ್ಯಾಕೆ ನಮ್ಮ ಪಠ್ಯಗಳಲ್ಲಿ ಇರಲಿಲ್ಲ ಅನ್ನುವುದು ಒಂದು ಕುತೂಹಲದ ಪ್ರಶ್ನೆಯಾಗಬಹುದು. ಒಂದು ಸಾಮ್ರಾಜ್ಯ ಹುಟ್ಟಿದ್ದರ ಹಿನ್ನೆಲೆ ಹಾಗೂ ಅದು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿತ್ತು ಅನ್ನುವುದನ್ನು ಹೇಳಹೊರಟರೆ ಭಾರತದ ಇತಿಹಾಸ ಒಂದು ಮಹಾನ್ ಇತಿಹಾಸವಾಗಿಬಿಡಬಹುದು ಅನ್ನುವ ಚಿಂತನೆಯೇನಾದರೂ ಪಠ್ಯ ತಯಾರಿಸುವವರಿಗೆ ಇತ್ತಾ ಅಂತಲೂ ಪ್ರಶ್ನೆ ಹುಟ್ಟಿಕೊಳ್ಳಬಹುದು. ನಮ್ಮಲ್ಲಿ, ನಮ್ಮ ಸಾಮ್ರಾಜ್ಯಗಳಲ್ಲಿ ಒಡಕುಗಳಿದ್ದುದು ನಿಜ. ಆದರೆ, ನಮ್ಮ ಜೀವನ ಪದ್ಧತಿಯ ಕುರಿತಾದ ನಂಬಿಕೆಗಳು ಛಿದ್ರವಾಗಿರಲಿಲ್ಲ. ಜೊತೆಗೆ, ಯಾವಾಗ ಸಮಾಜದಲ್ಲಿ ಬಿರುಕುಗಳು ಮೂಡಿದವೋ, ಭಯದ ನೆರಳು ಕವಿಯಿತೋ ಆಗೆಲ್ಲಾ ಯಾವುದೋ ಒಬ್ಬ ರಾಜ, ನಮ್ಮ ಸಮಾಜದ ಪುನರುತ್ಥಾನಕ್ಕಾಗಿ ಹುಟ್ಟಿಬಂದಿದ್ದಿದೆ. ಇವೆಲ್ಲವೂ ಓದುವುದಕ್ಕೆ, ಹೇಳುವುದಕ್ಕೆ, ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಚೆಂದ, ನಿಜ ಸ್ಥಿತಿ ಬೇರೆಯೇ ಇತ್ತು ಅಂತ ಹಲವರು ಅಂದುಕೊಳ್ಳಬಹುದು. ಆದರೆ, ನಿಜಕ್ಕೆ ಹಲವು ಮುಖಗಳಿಲ್ಲ; ನಾವು ನೋಡುವ ಕೋನದಿಂದ ಕಂಡಿದ್ದಷ್ಟೇ ನಿಜವಲ್ಲ ಅನ್ನುವ ಅರಿವು ನಮಗಿದ್ದರೆ 'ಎಲ್ಲ ಕಡೆಯಿಂದಲೂ ಜ್ಞಾನ ಹರಿದು ಬರಲಿ' ಅನ್ನುವ ವರ್ಗಕ್ಕೆ ನಾವು ಸೇರುತ್ತೇವೆ. </p><p><br /></p><p>ಈಗ ಭಾರತದ ಅಥವಾ ಒಂದರ್ಥದಲ್ಲಿ ಇಡೀ ಜಗತ್ತಿನ ಬದ್ಧ ವೈರಿಯಾಗಿರುವ ಚೀನಾದ ಜನರಲ್ಲಿ ಒಂದು ಕಾಲದಲ್ಲಿ ಒಂದು ಕೊರಗು ಇತ್ತಂತೆ; ಅದೇನೆಂದರೆ "ಬುದ್ಧ ಹುಟ್ಟಿದ ನಾಡಿನಲ್ಲಿ ತಾವು ಹುಟ್ಟಲಿಲ್ಲವಲ್ಲ" ಅಂತ. ಚೀನಾದ ರಾಜಕಾರಣ ಹಾಗೂ ಅಲ್ಲಿನ ಮನಸ್ಥಿತಿ ಈಗ ಅದೆಷ್ಟು ಬದಲಾಗಿದೆಯೆಂದರೆ, ಅಂಥ ಬದಲಾವಣೆಗೆ ಕೊಡುಗೆಗಳು ಏನೇನಿರಬಹುದು, ಒಮ್ಮೆ ಯೋಚಿಸಿ! ಚೀನಾದ ಯಾತ್ರಿಕನೊಬ್ಬ ಭಾರತಕ್ಕೆ ಬರುತ್ತಾನೆ ಹಾಗೂ ಆತ ಭಾರತದಲ್ಲಿ ಸುಮಾರು ವರ್ಷ ಅಧ್ಯಯನವನ್ನೂ ಕೈಗೊಳ್ಳುತ್ತಾನೆ ಅಂದರೆ, ಆತನಿಗೆ ಭಾರತದ ಕುರಿತಾಗಿ ಇದ್ದ ಪ್ರೀತಿ, ಗೌರವ ಅದೆಷ್ಟು ಗಾಢವಾಗಿದ್ದಿರಬಹುದು. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಯೊಬ್ಬ ಕೇವಲ ಪ್ರವಾಸಿಯಾಗಿರದೇ ಇನ್ನೂ ಏನೇನೆಲ್ಲಾ ಆಗಿದ್ದ, ಹಾಗೂ ಭಾರತ ಆತನನ್ನು ನಡೆಸಿಕೊಂಡ ಪರಿ, ಹಾಗೂ ಅಂಥ ವಿದೇಶಿ ಪ್ರವಾಸಿಗನೊಬ್ಬನ ಬರೆಹಗಳಿಂದ ನಾವೀಗ ನಮ್ಮ ಇತಿಹಾಸವನ್ನು ತಿಳಿಯುತ್ತಿರುವುದು ಇತ್ಯಾದಿಗಳನ್ನು ಬಹಳ ಹೆಮ್ಮೆಯಿಂದ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಗೆ ಸಲ್ಲಲೇಬೇಕಾದ ಗೌರವ ಅದು. </p><p><br /></p><p>ತತ್ವಜ್ಞಾನ ಭಾರವಾಗಬಾರದು, ಬೇರೂರಬೇಕು. ಬೇರೂರಬೇಕು ಅಂದರೆ ಅದು ಸಮಯ ಬೇಡುವ ಪ್ರಕ್ರಿಯೆ. ಹಾಗೆ ಬೇರೂರಿರುವ ತತ್ವಜ್ಞಾನವನ್ನು ಕಿತ್ತೊಗೆಯುವುದು ಕೂಡಾ ಅಷ್ಟು ಸಸಾರದ ಕೆಲಸವಲ್ಲ. ಭಾರತದ ಜೀವನ ಪದ್ಧತಿ ಕೂಡಾ ಅಂಥದ್ದೇ ಒಂದು ತತ್ವಜ್ಞಾನ. ಒಂದು ತತ್ವ ಜನಪ್ರಿಯವಾದಂತೆ ಹೇಗೆ ಕವಲುಗಳನ್ನು ಪಡೆದುಕೊಳ್ಳುತ್ತದೆ ಅನ್ನುವುದನ್ನು ಹಾಗೂ ಅದಕ್ಕಿರುವ ಉದಾಹರಣೆಗಳನ್ನೂ ಲೇಖಕರು ಇಲ್ಲಿ ತಿಳಿಸಿದ್ದಾರೆ. ಸಿದ್ಧಾಂತ ಮತ್ತು ಆರ್ಥಿಕತೆ ಇವೆರಡರಲ್ಲಿ ಯಾವುದು ಜಗತ್ತನ್ನಾಳುತ್ತದೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಎರಡು ಚೆಂದದ ಪ್ರಸ್ತುತಿ ಅಥವಾ ವಾದಗಳಿವೆ. ಅವು ಬಹಳ ಗಹನ ಆಲೋಚನೆಗಳನ್ನು ಸ್ಫುರಿಸುತ್ತವೆ. ಹಾಗೆಯೇ ಈ ಪುಸ್ತಕದಲ್ಲಿ ಅಲ್ಲಲ್ಲಿ ಸಮಾಜಪರವಾದ ಧ್ವನಿಗಳಿವೆ, ಕಿವಿಮಾತುಗಳಿವೆ ಕೂಡಾ. </p><p><br /></p><p>ಭಾರತದಲ್ಲಿ ಉಚಿತವಾಗಿ ಏನನ್ನು ಹಂಚುತ್ತಿದ್ದರು ಹಾಗೂ ಅಂಥ ದೇಶದ ಸ್ಥಿತಿ ಹೇಗಿದ್ದಿರಬಹುದು ಅನ್ನುವುದಕ್ಕೆ ಒಂದು ಮಾತನ್ನು ಲೇಖಕರು ಬಳಸಿದ್ದಾರೆ. ವರ್ತಮಾನದ ಕೆಲವು ಸಂಗತಿಗಳನ್ನು ನೋಡಿದಾಗ, ಅದರಲ್ಲೂ ಕೊರೊನಾದ ಕಾಲಘಟ್ಟದಲ್ಲಿ ಭಾರತ ಜಗತ್ತಿನೊಡನೆ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ತನ್ನಿಂದ ತಾನಾಗಿಯೇ ತಾಳೆಹಾಕಬೇಕು ಅನಿಸುತ್ತದೆ. ಭಾರತವನ್ನಾಶ್ರಯಿಸಿ ಬಂದ ಯಾರೂ ಭಾರತೀಯರಿಂದ ಘಾಸಿಗೊಳಗಾಗಿಲ್ಲ ಅಂದರೆ ಅದು ಭಾರತದ ಹಿರಿಮೆ! ಹಿಂದೆಲ್ಲಾ ಆಶ್ರಯ ಬೇಡಿ ಬಂದ ಜನಾಂಗ, ಬರುವಾಗ ಯಾವ ಧರ್ಮದ್ದಾಗಿತ್ತೋ ಮತ್ತೆ ವಾಪಸ್ ಹೋಗುವಾಗ ಅದೇ ಧರ್ಮಕ್ಕೆ ಸೇರಿದ ಜನಾಂಗವಾಗಿಯೇ ಹೋಗಿದ್ದು ಕೆಲವೇ ದೇಶಗಳಿಂದ. ಅಂಥ ದೇಶಗಳಲ್ಲಿ ಭಾರತವೂ ಒಂದು ಅಂದರೆ ಅದು ಹೆಮ್ಮೆಯ ವಿಷಯವಲ್ವಾ!</p><p><br /></p><p>"ಸಾವಿರ ದೇವರನ್ನು ಪೂಜಿಸುವ ನೆಲದಲ್ಲಿ ಇನ್ನೊಂದು ದೇವರನ್ನು ಸೇರಿಸಿಕೊಳ್ಳುವುದು ದೊಡ್ಡ ಕೆಲಸವೂ ಆಗಿರಲಿಲ್ಲ" ಅನ್ನುವ ಮಾತು ಭಾರತದ ಸಹಿಷ್ಣುತೆಯ ಸಾರಾಂಶವಲ್ಲದೇ ಇನ್ನೇನೂ ಅಲ್ಲ. ಅದಕ್ಕಾಗಿಯೇ ಹೇಳುವುದಲ್ವಾ 'ಭಾರತ ಯಾವತ್ತಿಗೂ ಅನ್ವೇಷಕರ ನಾಡು' ಅಂತ. ಜೊತೆಗೆ, ಇಂಥದ್ದೊಂದು ಸಂಸ್ಕೃತಿಯ ಭಾಗವಾಗಿರುವುದಕ್ಕೆ ನಾವು ಸದಾ ಈ ಬದುಕಿಗೆ, ಇಂಥ ತತ್ವಜ್ಞಾನಗಳನ್ನು ಕೊಟ್ಟ ನಮ್ಮ ಪೂರ್ವಜರಿಗೆ ಕೃತಜ್ಞರಾಗಿರಬೇಕು. ಇಡೀ ಜೀವಕುಲದ ವಿಕಸನಕ್ಕೆ 'ಅನ್ವೇಷಣೆ'ಯ ಮನಸ್ಥಿತಿ ಮಹತ್ವದ ಕೊಡುಗೆ ಕೊಟ್ಟಿದೆಯೆಂದರೆ ತಪ್ಪಲ್ಲವೇನೋ. 'ಮಾಗಧಿಯ ಕಂಗಳಲ್ಲಿ' ಅನ್ನುವ ಲೇಖನದಲ್ಲಿ ಮಣ್ಣಿನ ಕುರಿತಾದ ಅದ್ಭುತವಾದ ಮಾತೊಂದಿದೆ. ಅದನ್ನು ಓದಿಯೇ ಮನಸ್ಸು ತುಂಬಿಕೊಳ್ಳಬೇಕು. </p><p><br /></p><p>ಕಲೆಗಳೆಲ್ಲವೂ ಬೇರೆಬೇರೆಯಲ್ಲ. ಒಂದು ಇನ್ನೊಂದಕ್ಕೆ ಪೂರಕ ಅನ್ನುವ ಅರಿವಿದ್ದವರು ಮಾತ್ರವೇ ಕಲೆಯ ಉಪಾಸನೆಯನ್ನು ಪಕ್ವವಾಗಿಸಿಕೊಳ್ಳುತ್ತಾರೆ ಅನ್ನುವುದು ಅದೆಷ್ಟು ಸತ್ಯದ ಮಾತು. ಚೆನ್ನಕೇಶವ ದೇವಾಲಯದ ಕೆತ್ತನೆಗಳ ವರ್ಣನೆ ಮಾಡುವಾಗ ಚೆನ್ನಕೇಶವನ ಕುರಿತಾಗಿ ಒಂದಷ್ಟು ಪದಗಳು ಬರುತ್ತವೆ, ಅದೊಂಥರಾ ರೋಮಾಂಚನಕಾರಿ ಅನ್ನಿಸಿತು ನನಗೆ. ಆ ಪದಗಳಿಗೆ ಇರುವ ಘನತೆಯೇ ಬೇರೆ. </p><p><br /></p><p>ಭಾರತದ ಕಥಾಪರಂಪರೆ ಹಾಗೂ ಅದರಿಂದ ಒದಗಬಹುದಾದ ಮಹತ್ವದ ಸಂಗತಿಗಳನ್ನು ಲೇಖಕರು ಭಾಗಮತಿಯ ಕುರಿತಾದ ಲೇಖನದಲ್ಲಿ ಹೇಳಿದ್ದಾರೆ. ಇಡೀ ಮನುಕುಲದ ಕಥಾಕೌಶಲಕ್ಕೆ ಕಳಸವಿಡುವ ಮಾತೊಂದು ಇಲ್ಲಿದೆ. ಹಾಗೆಯೇ ಇನ್ನೊಂದು ಲೇಖನದಲ್ಲಿ ಬಂಗಾಲದ ಹೆಣ್ಣುಮಕ್ಕಳ ಕುರಿತಾಗಿ ಒಂದು ಸಿಹಿ ಆರೋಪವಿದೆ; ಲೇಖಕರಿಗೆ ಇಷ್ಟು ಚೆನ್ನಾಗಿ ಹೇಗೆ ಗೊತ್ತು ಅನ್ನುವ ಪ್ರಶ್ನೆ ಎದುರಾದರೆ ನೀವೂ ನನ್ನಂತೆಯೇ !</p><p><br /></p><p>ವಿಜಯನಗರ ಸಾಮ್ರಾಜ್ಯದ ವರ್ಣನೆಗೆ ಬರುವಾಗ ನಮಗೆ ಬೇರೆಯದೇ ಲೇಖಕರು ಸಿಗುತ್ತಾರೆ. ವಿಜಯನಗರದ ಸ್ಥಾಪನೆಯ ಸಮಯದಲ್ಲಿ ಎಂಥ ವಾತಾವರಣವಿತ್ತೋ, ಅಂಥ ಸಮಯದಲ್ಲಿ ಪುನರುತ್ಥಾನದ ಯಾವ ಉದ್ವೇಗವಿತ್ತೋ ಅದು ಲೇಖಕರ ಸಾಲುಗಳಲ್ಲೂ ಉಸಿರಾಡುತ್ತದೆ. ಪುಸ್ತಕದ ಎಲ್ಲಾ ಭಾಗಗಳಿಗಿಂತ ವಿಜಯನಗರದ ಭಾಗ ಬಹುಶಃ ಲೇಖಕರನ್ನು ಹೆಚ್ಚು ತಟ್ಟಿದೆ ಅಂತ ಅಲ್ಲಿನ ಸಾಲುಗಳಿಂದಲೇ ಹೇಳಬಹುದು. ವಿಜಯನಗರದ ಕತೆಯ ಸ್ವರೂಪವೂ ಇಲ್ಲಿ ಹೇಳಿ ಮಾಡಿಸಿದ ಹಾಗಿದೆ. ಅನಾದರಕ್ಕೆ ಒಳಗಾದ ಹಾಳುಹಂಪೆಯಲ್ಲದೇ ಇನ್ನಾರು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವುದು ಸಾಧ್ಯ! ಸ್ವಗತದ ಮಾದರಿಯ ನಿರೂಪಣೆ ಹಂಪೆಯ ಕತೆಗೆ ಅತ್ಯಂತ ಸೂಕ್ತವಾದದ್ದು. ಮುಪ್ಪಿನಲ್ಲಿ ಸ್ವಗತವೊಂದೇ ಸಂಗಾತವಲ್ಲವೇ! </p><p><br /></p><p>"ಶುದ್ಧ ಇತಿಹಾಸ ಅನ್ನುವುದು ಒಂದು ಮಾಯಾಜಿಂಕೆ, ಅದೆಂದಿಗೂ ಇದ್ದಿರಲಿಲ್ಲ" ಅನ್ನುವ ಮಾತು ಒಂದೊಮ್ಮೆ ಇಡೀ ಇತಿಹಾಸದ ಉಲ್ಲೇಖಗಳ ಬುಡವನ್ನೇ ಅಲ್ಲಾಡಿಸುವ ಮಾತಂತೆ ತೋರುತ್ತದೆ. ಜೊತೆಗೆ, ಇತಿಹಾಸ ಅಂದರೆ "ಹೀಗೆ ನಡೆದಿತ್ತು" ಅನ್ನುವುದನ್ನು ಹೇಳುವುದಕ್ಕಿಂತ ಹಾಗೆ ನಡೆದಿದ್ದನ್ನು "ಹೇಗೆಲ್ಲಾ ಹೇಳಬಹುದು" ಅನ್ನುವುದನ್ನೇ ಹೆಚ್ಚು ಧ್ವನಿಸುತ್ತದೆ ಅಂದರೆ ತಪ್ಪಾಗಲಾರದು ಅನ್ನುವ ಸಂಗತಿಯನ್ನು ಮತ್ತೆ ಈ ಸಾಲು ನಮ್ಮೆದುರಿಗೆ ಇಡುತ್ತದೆ.</p><p><br /></p><p>ಹಾಗೆಯೇ ಈ ಪುಸ್ತಕದಲ್ಲಿರುವುದು ಇತಿಹಾಸವಾದರೂ ಕತೆಯ ಮೂಲಕ ಹೇಳಿದ ಕಾರಣಕ್ಕೆ, ಕತೆಯನ್ನು ಹೇಳಲು ಬರುವ ಹಲವು ಪಾತ್ರಗಳು ಕೇವಲ ನೆಪ ಮಾತ್ರಕ್ಕೆ ಬಂದಂತೆಯೂ, ಅದು ಸ್ವಲ್ಪ ಯಾಂತ್ರಿಕವಾಗಿಯೂ ಕೆಲವು ಕಡೆಗಳಲ್ಲಿ ಕಂಡಿತು. ಆದರೆ, ಅಂಥ ಪಾತ್ರಗಳನ್ನು ತರುವುದು ಹಾಗೂ ಅದರ ಸುತ್ತ ವರ್ತಮಾನದ ಕತೆ ಹೆಣೆದು ಅವುಗಳಿಂದ ಇತಿಹಾಸಕ್ಕೆ ವರ್ಗಾವಣೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಅನ್ನುವ ಅರಿವಿದ್ದರೂ, ಕೆಲವು ಪಾತ್ರಗಳು ಇನ್ನಷ್ಟು ಪಳಗಬಹುದಿತ್ತೇನೋ ಅಥವಾ ಇನ್ನಷ್ಟು ಕೊಡುಗೆ ಕೊಡಬಹುದಿತ್ತೇನೋ ಅಂತಲೂ ಅನ್ನಿಸಿತು. ಈ ಸಂಗತಿಯೇ ಕೆಲವೊಂದು ಕಡೆಗಳಲ್ಲಿ ಕೆಲವು ಪಾತ್ರಗಳ ಅಗತ್ಯತೆಯನ್ನು ಹಾಗೂ ಅವು ಕತೆಯಾಗುವಲ್ಲಿ ಸೋಲುವ ಸಾಧ್ಯತೆಗಳನ್ನೂ ಎತ್ತಿಹಿಡಿದಿದೆ.</p><p><br /></p><p>ಒಟ್ಟಿನಲ್ಲಿ ಹೇಳುವುದಾದರೆ, ಇತಿಹಾಸವನ್ನು ಇಷ್ಟಪಡುವ ಹಾಗೂ ನಮ್ಮ ನಾಡನ್ನು ಇನ್ನಷ್ಟು ಮತ್ತಷ್ಟು ಪ್ರೀತಿಸುವ ನಾವೆಲ್ಲರೂ ಓದಲೇಬೇಕಾದ ನಮ್ಮ ಗತದ, ನಮ್ಮ ಸ್ವಂತದ ಕಥಾನಕ 'ಕಥಾಗತ'</p><p><br /></p><p>~`ಶ್ರೀ' </p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-4191470436385818932024-03-11T23:49:00.003+05:302024-03-11T23:49:43.397+05:30ಕುಣಿಗಲ್ ಟು ಕಂದಹಾರ್<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhBBFimAAknhwc7yICkTDVVJoowmzjQHHJwR5G0s0H2GStp4BoyIjo4CUvlIOegBpe2Ce1Rb8a9u8M57K6BDwxWwnOSnmxo7Ym2cAvg9ecI6D41zL1EuyHMphYgP93hHGI6yvJkluqETvXs26_PIFpuPVOPQ6s7-SBWvqmDpm0HRBlDZQPeYQT6sIdaADE/s400/FB_IMG_1710181091533.jpg" imageanchor="1" style="margin-left: 1em; margin-right: 1em;"><img border="0" data-original-height="400" data-original-width="265" height="320" src="https://blogger.googleusercontent.com/img/b/R29vZ2xl/AVvXsEhBBFimAAknhwc7yICkTDVVJoowmzjQHHJwR5G0s0H2GStp4BoyIjo4CUvlIOegBpe2Ce1Rb8a9u8M57K6BDwxWwnOSnmxo7Ym2cAvg9ecI6D41zL1EuyHMphYgP93hHGI6yvJkluqETvXs26_PIFpuPVOPQ6s7-SBWvqmDpm0HRBlDZQPeYQT6sIdaADE/s320/FB_IMG_1710181091533.jpg" width="212" /></a></div><br /> ಕುಣಿಗಲ್ ಟು ಕಂದಹಾರ್<p></p><p><br /></p><p>ಯುದ್ಧಭೂಮಿಗಳ ಕುರಿತಾಗಿ ನಾವು ಅಲ್ಲಲ್ಲಿ ಚೂರು ಚೂರು ಓದಿದ್ದೇವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡಾಗ ವಿಮಾನದ ರೆಕ್ಕೆಗಳ ಮೇಲೆಲ್ಲಾ ಜನರು ಹತ್ತುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ, ಅಂಥದ್ದೇನಿತ್ತು ಹಾಗೆಲ್ಲಾ ದೇಶ ಬಿಟ್ಟು ಓಡುವುದಕ್ಕೆ? ಒಂದಷ್ಟು ವರ್ಷಗಳ ಕಾಲ ನ್ಯಾಟೋ ಸೈನ್ಯದ ಆಡಳಿತಕ್ಕೆ ಅಫ್ಘಾನಿಸ್ತಾನ ಒಳಪಟ್ಟಾಗ ಆದಂಥ ಬದಲಾವಣೆಗಳೇನಾಗಿದ್ದವು? ನಿಜಕ್ಕೂ ಆಗಿದ್ದವಾ? ಯುದ್ಧದ ನೆರಳು ಹೊತ್ತ ನಾಡು ಹೇಗೆಲ್ಲಾ ಇರಬಹುದು. ಯುದ್ಧದ ಕತೆ ಒಂದೆಡೆಯಾದರೆ, ಬೇರೆ ಬೇರೆ ದೇಶದ, ಸಂಸ್ಕೃತಿಯ, ಮತ ಪಂಥಗಳ ಮನುಷ್ಯ ಮನುಷ್ಯರ ನಡುವಣ ಸಂಬಂಧ ಇಂಥ ಸ್ಥಿತಿಗಳಲ್ಲಿ ಹೇಗಿರುತ್ತವೆ? ಅಂಥದ್ದೊಂದು ಜಾಗಕ್ಕೆ ಕೆಲಸಕ್ಕೆ ಕರೆದಾಗ ಅಲ್ಲಿಗೆ ಹೋದವರ ತಳಮಳಗಳೇನು? ಪ್ರವಾಸ ಕಥನವೆಂದರೆ ಅಲ್ಲಿ ಆರಾಮಾಗಿ ಮಜಾ ಮಾಡಬಹುದಾದ ಜಾಗ, ಆಹಾರ, ಚಟುವಟಿಕೆಗಳ ಕುರಿತಾದ ಸಂಗತಿ ಮಾತ್ರವಾ? ಹಾಗಿದ್ದರೆ, ಇಂಥ ಕಡೆಗಳಿಗೆ ಪ್ರವಾಸ ಹೋದಾಗ ಅದರ ಕಥನ ಹೇಗಿದ್ದೀತು? ಇಂಥ ಪ್ರವಾಸದೊಂದಿಗೆ ಅಂಟಿಕೊಂಡ ಪ್ರಯಾಸದ ಜೊತೆಗೆ ಒದಗಬಹುದಾದ ಬದುಕಿನ ಒಳನೋಟಗಳ ದಾಖಲಾತಿ ಏನಿದ್ದೀತು? ಮುಂದಿನ ಕ್ಷಣದ ಭರವಸೆಯಿಲ್ಲದೇ ಬದುಕುವುದಕ್ಕೆ ಸಾಧ್ಯವಾ? ಹಾಗೆ ಬದುಕುವವರ ಮನಸ್ಥಿತಿಗಳೇನು? ಯಾಕೆ ಮನುಷ್ಯ ತನ್ನ ಊರು, ದೇಶ ಬಿಟ್ಟು ಇನ್ನ್ಯಾವುದೋ ದೇಶಕ್ಕೆ ಹೋಗುವುದು? ಹಾಗೆ ಹೋದವರೆಲ್ಲಾ ವೈಭೋಗದ ಬದುಕನ್ನೇ ಪಡೆದಿದ್ದಾರಾ? ಇತ್ಯಾದಿ ಪ್ರಶ್ನೆಗಳಿಗೆ ಅತ್ಯಂತ ಸಂಯಮದಿಂದ ಉತ್ತರಿಸಬಲ್ಲ ಬಹಳ ಬಹಳ ಚೆಂದದ ಪುಸ್ತಕ ಶ್ರೀ ಮಂಜುನಾಥ್ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್' </p><p><br /></p><p>ಇದು ಚೆಂದದ ಪುಸ್ತಕ ಅನ್ನುವುದಕ್ಕೂ ಕಾರಣಗಳಿವೆ. ಎಷ್ಟೆಲ್ಲಾ ನೋವುಗಳ ನಡುವೆಯೂ ಮನುಷ್ಯ ಜನಾಂಗ ಸಂಭ್ರಮವನ್ನು ಹುಡುಕಿಕೊಳ್ಳುತ್ತದೆ. ಭರವಸೆಯ ಆಕಾಶದೀಪದತ್ತ ಕಣ್ಣೋಣವನ್ನು ಸದಾ ನೆಟ್ಟಿರುತ್ತದೆ. ಬಹುಶಃ ಅಂಥ ಆಶಾಭಾವ ಇರದೇ ಹೋದಲ್ಲಿ ಮನುಷ್ಯರ ಸಾಹಸಗಾಥೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಸಿಗುತ್ತಿರಲೇ ಇಲ್ಲ. ಇತಿಹಾಸಗಳಲ್ಲಿ ಇರದಿದ್ದ ಮೇಲೆ ಅದರ ಆಧಾರದ ಮೇಲೆ ಬೆಳೆವ ಮುಂದಿನ ಜನಾಂಗಗಳು ಬಹುಶಃ ದುರ್ಬಲವಾಗುತ್ತಲೇ ಹೋಗಬಹುದು. ಯುದ್ಧಭೂಮಿಯಂಥದ್ದೇ ವಾತಾವರಣವಿರುವ ಜಾಗಗಳಿಗೆ ಪದೇ ಪದೇ ಕೆಲಸಕ್ಕೆ ಹೋಗಬೇಕಾಗಿ ಬಂದಾಗ ಲೇಖಕರು ಹೇಗೆ ಪ್ರತಿಕ್ರಿಯಿಸಿದರು ಅನ್ನುವಲ್ಲಿಂದ ಹಿಡಿದು, ಇಂಥ ಮಾನವೀಯ ಕ್ಷಣಗಳಲ್ಲೂ ಮನುಷ್ಯ ಲೋಕ ತನ್ನ ಲಾಭವನ್ನು ಹೇಗೆಲ್ಲಾ ಹುಡುಕಿಕೊಳ್ಳುತ್ತದೆ ಅನ್ನುವಲ್ಲಿಯ ತನಕ ಹಲವಾರು ಸಂಗತಿಗಳು ಇಲ್ಲಿ ಬಂದು ಹೋಗುತ್ತವೆ. </p><p><br /></p><p>ಪ್ರವಾಸ ಕಥನವೆಂದರೆ ಹೀಗೂ ಇರಬಹುದು ಅನ್ನುವ ಹೊಸ ಪಂಕ್ತಿಯನ್ನು ಹಾಕಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಯಾವತ್ತಿನ ಶೈಲಿಯಲ್ಲಿ ಈ ಪುಸ್ತಕದ ಕುರಿತು ಬರೆಯುವುದು ತುಸು ಕಷ್ಟವೇ ಆಗುತ್ತಿದೆ; ಕಾರಣ ಇಷ್ಟೇ, ಈ ಪುಸ್ತಕವನ್ನು ಸುಮ್ಮನೆ ಹೀಗೆ ಕಾಟಾಚಾರಕ್ಕೆ ನಾಲ್ಕು ಸಾಲುಗಳಲ್ಲಿ ಹೊಗಳಲು ಹೋದರೆ ಅದು ನೀರಸ ಪ್ರಯತ್ನವಷ್ಟೇ ಆದೀತು. ಬೇರೆ ಭಾಷೆಯ ಹಲವರು ಈ ಥರದ ಪುಸ್ತಕಗಳನ್ನು ಬರೆದಿರಬಹುದು. ಆದರೆ, ನಮ್ಮ ಕನ್ನಡದಲ್ಲೇ ನಮ್ಮ ಕನ್ನಡದವರದ್ದೇ ಕಥನವನ್ನು ಓದುವಾಗ ಇರುವ ಆಪ್ತತೆ ಕನ್ನಡಕ್ಕೆ ಇಂಥದ್ದೊಂದು ಪುಸ್ತಕ ಬೇಕಾಗಿತ್ತು ಅಂತ ಅನ್ನಿಸುವ ಹಾಗೆ ಮಾಡಿದರೆ ಅದು ಅತಿಶಯೋಕ್ತಿಯಲ್ಲ ಅಂತಂದುಕೊಳ್ಳುತ್ತೇನೆ. ನಾವೆಲ್ಲರೂ ಅದೆಷ್ಟು ಆರಾಮಾಗಿ ಆ ದೇಶ ಹೀಗೆ ಮಾಡಬೇಕಿತ್ತು, ಈ ದೇಶ ಹಾಗೆ ಮಾಡಬೇಕಿತ್ತು ಅಂತನ್ನುತ್ತಾ ರಾಜಕೀಯದ ನಿಪುಣರಂತೆ ವರ್ತಿಸುವಾಗ ದೇಶ ದೇಶಗಳ ನಡುವಿನ ಆಯಾಮಗಳು ಬೇರೆಯೇ ಅನ್ನುವುದನ್ನು ಈ ಪುಸ್ತಕ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ, ಅಫ್ಘನ್ನರ ಕನಸುಗಳನ್ನು, ಶಾಂತಿಯ ಕುರಿತಾಗಿನ ತಹತಹಗಳನ್ನೂ ಈ ಪುಸ್ತಕ ಸೂಕ್ಷ್ಮವಾಗಿ ಹೇಳುತ್ತದೆ. ಲೇಖಕರು ಅವರ ಹಳೆಯ ಕಂಪನಿಯ ಕುರಿತಾಗಿಯೂ, ಕಾರ್ಪೋರೇಟಿನ ಕುರಿತಾಗಿಯೂ ಕೆಲವು ಸಂಗತಿಗಳನ್ನು ಬರೆದಿದ್ದಾರೆ; ಅದು ಅವರು ಈ ಬರೆಹದಲ್ಲಿ ಅದೆಷ್ಟು ಪ್ರಾಮಾಣಿಕರಾಗಿದ್ದರು ಅನ್ನುವುದನ್ನು ಸೂಚಿಸುತ್ತದೆ. </p><p><br /></p><p>~`ಶ್ರೀ'</p><p> ತಲಗೇರಿ</p><p><br /></p><p>ಒಂದೊಳ್ಳೆಯ ಪುಸ್ತಕಕ್ಕಾಗಿ ತಮಗೆ ಧನ್ಯವಾದಗಳು Manjunath Kunigal ಅವರೇ🙏💐</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-68122342949545653812024-03-11T23:47:00.004+05:302024-03-11T23:47:56.049+05:30ನೀಲಿ ಬಣ್ಣದ ಸ್ಕಾರ್ಫು<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhrzgS7aT7mgNAAOWjKKlW0AiLOP3tskZ2sgxg0PFVIyalpbqwN2rMlEauoolpHvR7gqgOzoOT4sI6e-q5q5BcUzYKy9VUucWJvD_YVJwo1DoTQo4omACfkCl9-9r9OmJ4GNl4CVsQH8MR0vcGVEPzRJ7p1Vg6QH0PawqMGLv79ZbvUtm8-c2b6oT4EkRM/s1080/FB_IMG_1710180957580.jpg" imageanchor="1" style="margin-left: 1em; margin-right: 1em;"><img border="0" data-original-height="808" data-original-width="1080" height="239" src="https://blogger.googleusercontent.com/img/b/R29vZ2xl/AVvXsEhrzgS7aT7mgNAAOWjKKlW0AiLOP3tskZ2sgxg0PFVIyalpbqwN2rMlEauoolpHvR7gqgOzoOT4sI6e-q5q5BcUzYKy9VUucWJvD_YVJwo1DoTQo4omACfkCl9-9r9OmJ4GNl4CVsQH8MR0vcGVEPzRJ7p1Vg6QH0PawqMGLv79ZbvUtm8-c2b6oT4EkRM/s320/FB_IMG_1710180957580.jpg" width="320" /></a></div><br /> ನೀಲಿ ಬಣ್ಣದ ಸ್ಕಾರ್ಫು<p></p><p><br /></p><p>ಈ ಪುಸ್ತಕದ ಹೆಸರು ಕೇಳಿದ ದಿನದಿಂದ ಇದನ್ನು ಓದಬೇಕು ಅನ್ನುವ ಕುತೂಹಲ ಬಹಳ ಇತ್ತು. ಆದರೆ, ಯಾವುದೇ ಪುಸ್ತಕದ ಹಾರ್ಡ್ ಕಾಪಿ ಖರೀದಿ ಮಾಡುವುದನ್ನು ಬಿಟ್ಟು ೩-೪ ವರ್ಷಗಳಾಗಿದ್ದರಿಂದ ಈ ಪುಸ್ತಕವನ್ನು ಓದುವುದಕ್ಕೆ ಸಾಧ್ಯವಾಗಿರಲಿಲ್ಲ.</p><p><br /></p><p>ಅನ್ನಿಸಬಹುದು, ಹೆಸರು ಕೇವಲ ಪದಗಳ ಗುಚ್ಛ ಅಂತ. ಆದರೆ, ಕೆಲವು ಹೆಸರುಗಳಿಗೆ ಆಯಸ್ಕಾಂತೀಯ ಗುಣಗಳಿರುತ್ತವೆ. ಹೆಸರುಗಳೇ ಕುತೂಹಲವನ್ನು ಹುಟ್ಟಿಸುತ್ತವೆ. ಅದರಲ್ಲೂ ಸಿನೆಮಾದ, ಪುಸ್ತಕದ, ಲೇಖನದ ಹೆಸರುಗಳಿಗಾಗಿ ಬಹಳಷ್ಟು ತಲೆಕೆಡಿಸಿಕೊಳ್ಳುವುದು ಸಹಜ ಸಂಗತಿ. ಸ್ಕಾರ್ಫಿಗೆ ಫ್ಯಾಷನ್ ಜಗತ್ತಿನಲ್ಲಿ ವಿಶಿಷ್ಟವಾದ ಜಾಗ ಇದೆ. ಅಂಥ ಸ್ಕಾರ್ಫು ಕನ್ನಡದ ಹಳ್ಳಿಯ ಕತೆಯೊಳಗೆ ಸೇರಿಕೊಂಡಿದ್ದು ಒಂದು ಭಿನ್ನ ಪ್ರಪಂಚವನ್ನು ನಮ್ಮೆದುರು ತೆರೆದಿಡುತ್ತದೆ. ಹಿಂದೊಂದು ಕಾಲದಲ್ಲಿ ನೀಲಿ ಬಣ್ಣ ಹೆಣ್ತನದ ಸಂಕೇತವಾಗಿತ್ತಂತೆ ಹಾಗೂ ಗುಲಾಬಿ ಬಣ್ಣ ಪುರುಷರ ಪ್ರತಿನಿಧಿಯಾಗಿತ್ತಂತೆ. ಆದರೆ, ಬಹುಶಃ ಹಿಟ್ಲರಿನ ಕಾಲದಲ್ಲಿ ಈ ಎರಡೂ ಬಣ್ಣಗಳ ಸ್ಥಾನಪಲ್ಲಟವಾಗಿರಬಹುದು ಅಂತ ಒಂದು ವಾದವಿದೆ. ನೀಲಿ ಅನ್ನುವುದು ಆಕಾಶದ ಬಣ್ಣ, ಹಾಗೆಯೇ ಅದನ್ನು ಪ್ರತಿಫಲಿಸುವ ಸಮುದ್ರದ ಬಣ್ಣ. ಅಂದರೆ ಅಗಾಧತೆಯ, ಪ್ರಶಾಂತತೆಯ, ಸ್ಥಿರತೆಯ ಬಣ್ಣ. ಇಲ್ಲಿನ ಕತೆಗಳಲ್ಲಿ ಹೆಣ್ಣು ಮನಸ್ಸಿನೊಳಗೆ ಅಡಿಯಿಡುವ ಪ್ರವೇಶ ದ್ವಾರವಿದೆ. ಅಲ್ಲಿನ ಪ್ರಪಂಚ ಸ್ಥಿರವೋ ಅಸ್ಥಿರವೋ, ಪ್ರಶಾಂತವೋ ಅಥವಾ ಸದಾ ಪ್ರಕ್ಷುಬ್ಧವೋ ಅನ್ನುವುದು ಬೇರೆಯ ಸಂಗತಿ, ಆದರೆ ಅಗಾಧ ಅನ್ನುವುದಂತೂ ಸತ್ಯ. </p><p><br /></p><p>ಮೀಡಿಯಾ ಚೆರ್ರಿ ಪ್ರಕಾಶನದ ಚೈತ್ರಿಕಾ ಹೆಗಡೆಯವರ ಮೊದಲ ಕಥಾ ಸಂಕಲನವಿದು. ಒಂದು ಕಾರ್ಯಕ್ರಮದಲ್ಲಿ ಚೈತ್ರಿಕಾ ಮತ್ತು ಅವರ ಪತಿ ನಾಗರಾಜ ವೈದ್ಯ ಅವರನ್ನು ಭೇಟಿಯಾಗಿದ್ದಾಗ ಈ ಪುಸ್ತಕದ ಇ-ಬುಕ್ ಆವೃತ್ತಿ ಹೊರತರಬಹುದಾ ನೋಡಿ ಅಂತ ವಿನಂತಿಸಿಕೊಂಡಿದ್ದೆ. ಅದಕ್ಕೆ ಸ್ಪಂದಿಸಿದ ಅವರು ಒಂದೆರಡು ವಾರದಲ್ಲೇ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಇ-ಬುಕ್ ಲಭ್ಯವಾಗುವ ಹಾಗೆ ಮಾಡಿದರು. ಕನ್ನಡದ ಇನ್ನಷ್ಟು ಮತ್ತಷ್ಟು ಪುಸ್ತಕಗಳು ಇ-ಪುಸ್ತಕಗಳಾಗಿ ಬರಬೇಕು ಅನ್ನುವುದು ನನ್ನ ಆಸೆ. </p><p><br /></p><p>೧೨ ಕತೆಗಳಿರುವ ಈ ಸಂಕಲನದಲ್ಲಿ ಚೈತ್ರಿಕಾ ಅವರು ಕಳೆದ ಪರಿಸರದ ಒಡನಾಟದ ಕತೆಗಳಿವೆ. ಬಹುಶಃ ಎಲ್ಲ ಬರಹಗಾರರ ಶಕ್ತಿಯೂ ಇದೇ. ಜಯಂತ ಕಾಯ್ಕಿಣಿಯವರು ಹೇಳ್ತಾರಲ್ಲಾ, ಬದುಕಿನಿಂದ ಬರಹ ಬರಬೇಕು ಅಂತ, ಹಾಗೆಯೇ ಬರಹಗಾರರ ಸುತ್ತಮುತ್ತಲಿನ ಸಂಗತಿಗಳು ಕತೆಗಳಾಗಿ ಬರಬೇಕು. ಆಗಲೇ, ಅಂಥ ಕತೆಗಳಿಗೆ ಸ್ವಂತಿಕೆಯೂ ನೂತನತೆಯೂ ಸಿಕ್ಕುವುದು. ಕಾಂತಾರದ ಸಮಯದಲ್ಲಿ ರಿಷಭ್ ಶೆಟ್ಟಿಯವರು ಒಂದು ಮಾತನ್ನು ಪದೇ ಪದೇ ಉಲ್ಲೇಖಿಸುತ್ತಿದ್ದರು; "ಹೆಚ್ಚು ಹೆಚ್ಚು ಪ್ರಾದೇಶಿಕವಾದಷ್ಟೂ ಅದು ಜಾಗತಿಕ" ಅಂತ. </p><p><br /></p><p>ಇಲ್ಲಿನ ಕತೆಗಳೆಲ್ಲವೂ ಸಹಜವಾದ ಕತೆಗಳು. ಬಹುತೇಕ ಎಲ್ಲಾ ಕತೆಗಳಲ್ಲೂ ಪ್ರೀತಿ, ಮದುವೆ, ಸಂಸಾರ ನನಗೆ ಸಾಮಾನ್ಯ ಅಂಶಗಳಾಗಿ ಕಂಡವು. ಬಹುತೇಕ ಕತೆಗಳಲ್ಲಿ ಬೇರೆ ಬೇರೆ ಪರಿಸರದಲ್ಲಿ ಹುಡುಗ ಮತ್ತು ಹುಡುಗಿಯ ಪ್ರೇಮದ ಬದುಕನ್ನು, ಹೆಣ್ಣಿನ ಸಣ್ಣ ಸಣ್ಣ ಇಚ್ಛೆಗಳನ್ನು ಹುಡುಕುವ, ಆ ಮೂಲಕ ಬದುಕಿನ ಪುಟಗಳನ್ನು ತೆರೆದಿಡುವ ಪ್ರಯತ್ನ ಕಂಡಿತು. ಅದರ ಜೊತೆಗೆ ಉತ್ತರ ಕನ್ನಡದ ನಿತ್ಯದ ಬದುಕಿನ ಶೈಲಿಗಳನ್ನು ಎಲ್ಲಾ ಕತೆಗಳು ಬಹುತೇಕ ತೆರೆದಿಡುತ್ತಾ ಹೋದವು. ಉತ್ತರ ಕನ್ನಡ ಅನ್ನುವ ಜಿಲ್ಲೆಯೊಂದು ಇದೆಯೆಂದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಉತ್ತರ ಕನ್ನಡವೆಂದರೆ ನಾರ್ಥ್ ಕರ್ನಾಟಕಾನಾ ಅಂತಲೋ, ಯಾವಾಗ್ಲೂ ಅಲ್ಲಿ ಬಿಸಿಲು ಜಾಸ್ತಿ ಅಲ್ವಾ ಅಂತಲೋ, ರೊಟ್ಟಿ ಜಾಸ್ತಿ ತಿನ್ನೋದು ಅಲ್ವಾ ಅಂತಲೋ ಕೇಳೋ ಪರಿಸ್ಥಿತಿ ಇರುವಾಗ ಇಂಥ ಉತ್ತರ ಕನ್ನಡಿಗರ ಬದುಕನ್ನು ದಾಖಲಿಸುವ ಕತೆಗಳು, ಅದರ ಮೂಲಕ ಅಲ್ಲಿನ ಜನಜೀವನವನ್ನು ಹೊರ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ ಖುಷಿಯಾಗದೇ ಹೋದೀತಾ! ಇಲ್ಲಿನ ಕತೆಗಳಲ್ಲಿ ಈ ಭಾಗದ ಹೆಣ್ಮನಗಳ ಬದುಕಿನ ನೋಟಗಳಿವೆ. ಹೊಂದಾಣಿಕೆಯೆಂಬುದು ಈ ಭಾಗದ ಜನರ ಬಹುಮುಖ್ಯ ಗುಣ, ಅದರಲ್ಲೂ ಇಲ್ಲಿನ ಹೆಣ್ಣುಮಕ್ಕಳಿಗೆ ಅದು ವಿಶೇಷವಾಗಿ ತುಸು ಹೆಚ್ಚೇ ಇರುವ ಸಂಗತಿ. ಜಗತ್ತಿನ ಬಹುತೇಕ ಎಲ್ಲಾ ಹಳ್ಳಿಗಳ ಹೆಣ್ಣುಮಕ್ಕಳ ಕತೆ ಇದೇ ಇರಬಹುದು. ಹೆಚ್ಚಿನ ಆಸೆಗಳಿಲ್ಲದೇ, ಯಾರ ತಂಟೆಗೂ ಹೋಗದೇ, ಊರಿನ ಸಣ್ಣಪುಟ್ಟ ರಾಜಕೀಯ ತಕರಾರುಗಳಷ್ಟರಲ್ಲೇ ಬದುಕು ಸಾಗಿಸುವವರು ಇಲ್ಲಿನ ಜನರು. ಈ ಎಲ್ಲಾ ಸಂಗತಿಗಳನ್ನು ಈ ಕತೆಗಳಲ್ಲಿ ಸ್ಪರ್ಶಿಸಲಾಗಿದೆ.</p><p><br /></p><p>ಮದುವೆಯೆಂಬುದು ಬಹುದೊಡ್ಡ ಸಂಗತಿ. ಅದರಲ್ಲೂ ಹಳ್ಳಿಗಳಲ್ಲಿ ಮದುವೆಯೆಂಬುದು ಒಂದು ಮಹಾಕನಸು. ಅಂದರೆ, ಮದುವೆಯಾದರೆ, ಬದುಕೊಂದು ಪೂರ್ಣವಾದಂತೆ, ಜವಾಬ್ದಾರಿಗಳು ಮುಗಿದಂತೆ ಅನ್ನುವ ನಂಬಿಕೆಯಿದೆಯಲ್ಲಾ ಅದು ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಈ ಸಂಕಲನದ ಕತೆಗಳಲ್ಲಿನ ಹೆಣ್ಣು ಪಾತ್ರಗಳು ಬಹುತೇಕವಾಗಿ ಮದುವೆಯ ಸುತ್ತಮುತ್ತಲೇ ಕೇಂದ್ರೀಕೃತವಾಗಿರುವುದರಿಂದ ಚೂರು ಭಿನ್ನ ಕತೆಗಳನ್ನು ಕತೆಗಾರ್ತಿಯಿಂದ ಇನ್ನು ಮುಂದೆ ನಿರೀಕ್ಷಿಸಬಹುದು ಅಂದುಕೊಂಡಿದ್ದೇನೆ. ಬೇರೆ ಥರದ ಕತೆಗಳಿದ್ದಿದ್ದರೆ ಹೇಗಿರುತ್ತಿದ್ದವು ಅನ್ನುವ ಕುತೂಹಲವೊಂದು ನನ್ನಲ್ಲಿ ಉಳಿದುಕೊಂಡಿದೆ. ಹೊಸ ಕತೆಗಾರ್ತಿಯ ಈ ಪ್ರವೇಶ ಈ ಭಾಗದ ಇನ್ನಷ್ಟು ಕತೆಗಳಿಗೆ, ಬದುಕಿನ ಮತ್ತಷ್ಟು ನೋಟಗಳಿಗೆ ಪ್ರವೇಶ ಒದಗಿಸಲಿ ಅನ್ನುವ ಆಶಯದೊಂದಿಗೆ... </p><p><br /></p><p>~`ಶ್ರೀ' </p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-5646069873290442342024-03-11T23:45:00.001+05:302024-03-11T23:45:13.698+05:30'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhbhLGd-TQUCkJhe5UidDEDoztYi-C0x1Fe87RwuUc6pzC8alkdmDAe_K4yLlkN7t_ID9LLjFbJhyZsJEGouFHfJpFrTNBLYebOijfbpafpq9mV2d7jyVzyxAxySIECxlCEtxuo8HA6IU7v28rIn8J3I6r0WjEJkdNosZxVtoZC3ylN6KRkyqbtL4EH4kQ/s422/523bc9b9c2e24a45b1ec65f7e8e4c4c8.jpg" imageanchor="1" style="margin-left: 1em; margin-right: 1em;"><img border="0" data-original-height="422" data-original-width="308" height="320" src="https://blogger.googleusercontent.com/img/b/R29vZ2xl/AVvXsEhbhLGd-TQUCkJhe5UidDEDoztYi-C0x1Fe87RwuUc6pzC8alkdmDAe_K4yLlkN7t_ID9LLjFbJhyZsJEGouFHfJpFrTNBLYebOijfbpafpq9mV2d7jyVzyxAxySIECxlCEtxuo8HA6IU7v28rIn8J3I6r0WjEJkdNosZxVtoZC3ylN6KRkyqbtL4EH4kQ/s320/523bc9b9c2e24a45b1ec65f7e8e4c4c8.jpg" width="234" /></a></div><p></p><p>'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'</p><p><br /></p><p>ಕೆಲವು ಸಂಗತಿಗಳು ಬಹಳ ವಿಭಿನ್ನವೂ, ವಿಶೇಷವೂ ಆಗಿರುತ್ತವೆ. ಅದರಲ್ಲಿ ಲೇಖಕರು ಹಾಗೂ ಓದುಗರ ನಡುವಿನ ಸಂಬಂಧ ಕೂಡಾ ಹೌದು. ಲೇಖಕರು ತಮ್ಮ ಅದ್ಯಾವುದೋ ಒಂದಷ್ಟು ಗಳಿಗೆಗಳಲ್ಲಿ ಎದುರಾದ ಭಾವ ತೀವ್ರತೆಯನ್ನು ಪದಗಳಲ್ಲಿ ಇಳಿಸಿ, ಅದರ ಭಾರವನ್ನು, ಅದರ ಆಳವನ್ನು, ಅದರ ಹಗುರವನ್ನು, ಅದರ ವೈಶಾಲ್ಯವನ್ನು, ಅದರ ಹಿಂಜರಿಕೆಗಳನ್ನು ಓದುಗರಿಗೆ ದಾಟಿಸಿಬಿಡುತ್ತಾರೆ. ಓದುಗರು ಇನ್ನ್ಯಾವುದೋ ಗಳಿಗೆಗಳಲ್ಲಿ, ಅವರ ಬದುಕಿನ ಅದೆಂಥದ್ದೋ ಕ್ಷಣಗಳಲ್ಲಿ ಇವುಗಳನ್ನು ಓದುವುದಕ್ಕೆ ಶುರುಮಾಡುತ್ತಾರೆ. ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಆಧಾರದ ಮೇಲೆ ಆ ಬರಹಗಳು ಇಷ್ಟವಾಗಬಹುದು, ಅಥವಾ ಇಷ್ಟವಾಗದೇ ಇರಬಹುದು ಕೂಡಾ. ಆದರೆ, ಇಂಥದ್ದೊಂದು ಪ್ರಕ್ರಿಯೆ ಇದೆಯಲ್ಲಾ, ಇದು ಯಾವತ್ತಿಗೂ ಕೊನೆಯಾಗದಿರಲಿ ಅನ್ನುವುದು ಬಹುಶಃ ಎಲ್ಲ ಕಾಲಕ್ಕೂ ಸಲ್ಲಬಹುದಾದ ಪ್ರಾರ್ಥನೆ ಅನ್ನಿಸುತ್ತದೆ. ನಾನು ಓದುವ ಪುಸ್ತಕಗಳ ಲೇಖಕರಿಂದ ಯಾವತ್ತೂ ದೂರ ಇರುವುದಕ್ಕೆ ಬಯಸುವವನು, ಅದು ಎಷ್ಟು ಸರಿ ಅಥವಾ ತಪ್ಪು, ಅದರಿಂದ ನನಗಾಗುವ ನಷ್ಟಗಳೇನು ಅನ್ನುವುದು ಬೇರೆ ಮಾತು. ಅಜ್ಞಾತ ಓದುಗರ ಕುರಿತಾಗಿ ನನಗಿರುವ ಸೆಳೆತವೂ ಇದಕ್ಕೆ ಕಾರಣವಿರಬಹುದು. ಆದರೂ, ಕೆಲವೊಮ್ಮೆ ಓದುಗರು ಮತ್ತು ಲೇಖಕರು ಒಂದೇ ಹಾದಿಯಲ್ಲಿ ಮತ್ತೆ ಮತ್ತೆ ಭೇಟಿಯಾಗುತ್ತಲೇ ಇರುತ್ತಾರೆ ಅಪರಿಚಿತರಾಗಿಯೂ! ಅಂಥ ಒಂದು ಸಂದರ್ಭ ನನಗೆ ಅಬ್ದುಲ್ ರಶೀದರ ಜೊತೆ ನೆನಪಿದೆ. ಕನ್ನಡದ ಹೆಸರಾಂತ ಲೇಖಕರೊಬ್ಬರು ಇಹಲೋಕ ತ್ಯಜಿಸಿದ ದಿನ ಅವರ ಕುರಿತಾಗಿ ಲೇಖನ ಬರೆದುಕೊಡುವಂತೆ ಒಂದು ಪತ್ರಿಕೆಯಿಂದ ಕರೆಬಂದಿತ್ತು. ಅಬ್ದುಲ್ ರಶೀದರು ನನ್ನನ್ನು ಕೇಳುವಂತೆ ಹೇಳಿದರೆಂದು ಕರೆ ಮಾಡಿದವರು ಹೇಳಿದ್ದರು. ಆ ಕರೆ ಇನ್ನೊಬ್ಬ ಹಿರಿಯ ಲೇಖಕರಿಗೆ ಹೋಗುವ ಬದಲಾಗಿ ನನಗೆ ಬಂದಿತ್ತೆಂದು ಇವತ್ತಿಗೂ ನನ್ನ ನಂಬಿಕೆ. ಯಾಕೆಂದರೆ, ನಾನು ಅಬ್ದುಲ್ ರಶೀದರೊಂದಿಗೆ ಯಾವತ್ತೂ ಮಾತನಾಡಿದ್ದಿಲ್ಲ. ಅವರಿಗೆ ನನ್ನ ಪರಿಚಯವೂ ಇರಲಿಕ್ಕಿಲ್ಲ. ಆದರೆ, ಇಂಥ ಗಳಿಗೆಗಳು ಬಹಳ ವಿಶಿಷ್ಟವಾದವು ಅಂತ ನನಗನಿಸುತ್ತದೆ. ಅಬ್ದುಲ್ ರಶೀದರ ಬಹಳಷ್ಟು ಪುಸ್ತಕಗಳನ್ನು ನಾನು ಓದಿಲ್ಲ. ಕೆಲವೊಂದನ್ನು ಓದಿದ್ದೇನೆ, ಇನ್ನು ಕೆಲವನ್ನು ಓದುತ್ತಲೇ ಇದ್ದೇನೆ, ಅರ್ಧ ಓದಿದ್ದೇನೆ, ಕೆಲವಷ್ಟನ್ನು ಓದುವುದಕ್ಕೆ ನಾನಿನ್ನೂ ತಯಾರಾಗಿಲ್ಲ ಅನ್ನುವ ಕಾರಣಕ್ಕೆ ಮುಂದೂಡಿದ್ದೇನೆ. ಅದರಲ್ಲಿ ಕೆಲವು ಪುಸ್ತಕಗಳು 'ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್' ಅನ್ನುವ ಕಥಾ ಸಂಕಲನ, 'ಹೂವಿನ ಕೊಲ್ಲಿ' ಅನ್ನುವ ಅವರ ಚೊಚ್ಚಲ ಕಾದಂಬರಿ, ಅಂಕಣ ಬರಹಗಳ ಸಂಗ್ರಹವಾದ 'ಕಾಲು ಚಕ್ರ' ಹಾಗೂ ಈಗ ಮಾತನಾಡುತ್ತಿರುವ ಪುಸ್ತಕ 'ಮೈಸೂರ್ ಪೋಸ್ಟ್' ಅನ್ನುವ ಅಂಕಣ ಬರಹಗಳ ಸಂಗ್ರಹ. ಹೀಗೆ ಅವರ ಹತ್ತಿರ ಇಷ್ಟು ಓದಲಿಲ್ಲ ಇನ್ನೂ ಅಂತಂದರೆ, ಒಳ್ಳೇ ಕೆಲಸ ಮಾಡಿದೀಯಾ, ಓದಬೇಡ! ಅಂತ ಅಂದರೂ ಅನ್ನಬಹುದು ಎನ್ನುವ ಎಲ್ಲ ನಂಬಿಕೆಗಳೂ ನನಗಿವೆ! </p><p><br /></p><p>ಅಬ್ದುಲ್ ರಶೀದರ ಕುರಿತಾಗಿ ಚೆಂದದ ಸಂಗತಿಗಳನ್ನು ಕೇಳಿದ್ದು ಬಹಳ, ಹಾಗೆಯೇ ಅವರ ಮಾತುಗಳನ್ನೂ ಕೇಳಿದ್ದೇನೆ ಯುಟ್ಯೂಬ್ ಅಲ್ಲಿ ಬಹಳ ಸಲ. ಅವರದೇ ಒಂದು ಪುಸ್ತಕದ ಹೆಸರು ಹೇಳುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುತ್ತಾರೇನೋ ಅನ್ನಿಸಿದರೆ ಅದು ಅತಿಶಯೋಕ್ತಿ ಅಲ್ಲ ಅಂತಲೂ ಅನ್ನಿಸುತ್ತದೆ. ಅದು ಅವರ ಬರಹಗಳಲ್ಲಿಯೂ, ಅದರ ವೈವಿಧ್ಯತೆಗಳಲ್ಲಿಯೂ ಕಾಣಸಿಗುತ್ತದೆ. ಇಂಥ ತಿರುಗಾಟ ಬಹುಶಃ ಕೆಲವರಿಂದ ಮಾತ್ರ ಸಾಧ್ಯ. ಅಬ್ದುಲ್ ರಶೀದರಂಥವರು, ಡಾ. ಬ್ರೋ (ಗಗನ್ ಶ್ರೀನಿವಾಸ್ ) ಥರದಂಥವರು ಇಂಥ ಬದುಕನ್ನು ಹಾಗೂ ಅಲ್ಲಿನ ಕತೆಗಳನ್ನು ಹೇಳಬಲ್ಲರು. ಮಲೆಯಾಳಂನ ಒಂದು ಚಿತ್ರ 'ಚಾರ್ಲಿ' ಇಂಥದ್ದೇ ಕಾರಣಗಳಿಗಾಗಿ ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ತನ್ನತ್ತ ಕರೆಸಿಕೊಳ್ಳುವ ಚಿತ್ರ. ಸದಾ ಓಡಾಟ, ಒಡನಾಟ, ಜನರಲ್ಲಿ ಬೆರೆಯುವಿಕೆ ಇರುವ ಅಬ್ದುಲ್ ರಶೀದರ ಬರಹಗಳಲ್ಲಿ ಕೂಡಾ ಈ ಎಲ್ಲಾ ಭೇಟಿಗಳ, ಕ್ಷಣಗಳ, ವಿಷಯಗಳ ನೆರಳಿದೆ. ಹೀಗೆ ಅವರು ಭೇಟಿಯಾದ ಅಥವಾ ಯಾವುದೋ ಒಂದು ಹೆಸರಿಲ್ಲದ ಭೇಟಿಗಳಲ್ಲಿ ಸಿಕ್ಕವರ ಕಥನಗಳ ಸಂಗ್ರಹವೇ 'ಮೈಸೂರ್ ಪೋಸ್ಟ್'. ಸ್ವತಃ ಛಾಯಾಗ್ರಾಹಕರೂ ಆಗಿರುವ ಅಬ್ದುಲ್ ರಶೀದರೇ ತೆಗೆದ ಛಾಯಾಚಿತ್ರಗಳೂ ಇಲ್ಲಿವೆ. ಈ ಪುಸ್ತಕದ ಉಪಶೀರ್ಷಿಕೆ 'ಅರಮನೆ ನಗರಿಯ ಉಳಿದ ಚಿತ್ರಗಳು'. ಈ ಪುಸ್ತಕದಲ್ಲಿರುವ ಕಥನಗಳು ಸಾಮಾನ್ಯ ಜನರ, ಯಾರ ಗಮನಕ್ಕೂ ಬಾರದೇ ಬದುಕುವವರ, ಅಥವಾ ಅಸಾಮಾನ್ಯರಾಗಬೇಕಾಗಿಯೂ ಸಾಮಾನ್ಯರಂತಾದವರದ್ದೇ ಆಗಿವೆ. ಬೇರೆ ಬೇರೆ ಬದುಕಿನ ತುಣುಕುಗಳನ್ನು ಇಲ್ಲಿ ಅಬ್ದುಲ್ ರಶೀದರು ತೆರೆದಿಟ್ಟಿದ್ದಾರೆ. ಈ ಎಲ್ಲಾ ತುಣುಕುಗಳನ್ನು ಒಟ್ಟಗೂಡಿಸಿಕೊಂಡು ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಳ್ಳಬೇಕೋ ಅಥವಾ ಎಲ್ಲವನ್ನೂ ಬಿಡಿಬಿಡಿಯಾಗಿಯೇ ಇಟ್ಟು, ಸ್ವತಂತ್ರವಾಗಿಯೇ ನೋಡಿ, ಸುಮ್ಮನೆ ಇದ್ದುಬಿಡಬೇಕಾ ಅನ್ನುವುದು ಓದುಗರಿಗೆ ಬಿಟ್ಟಿದ್ದು ಅನಿಸುತ್ತದೆ. </p><p><br /></p><p>ಲೇಖಕರ ಮಾತಿನಲ್ಲಿ ಲೇಖಕರು ಕೆಲವು ಬಹಳ ಅಗತ್ಯವಾದ ಹಾಗೂ ಹೇಳಲೇಬೇಕಾದ ಸಂಗತಿಗಳನ್ನು ಹೇಳಿದ್ದಾರೆ. "ಕಥೆ ಬರೆಯಲು ನೆನಪುಗಳು ಬೇಕಂತೆ, ಕವಿತೆಗಳಿಗೆ ಪ್ರತಿಮೆಗಳು ಬೇಕಂತೆ" ಇದು ಲೇಖಕರ ಒಂದು ಮಾತು. ನೆನಪುಗಳ ಬಣ್ಣ ವೈವಿಧ್ಯಮಯವಾದಷ್ಟೂ ಕತೆಯ ಸೊಗಡು ಹೆಚ್ಚುತ್ತದೆ ಅನ್ನುವುದು ಬಹುಶಃ ನಮ್ಮೆಲ್ಲಾ ಲೇಖಕರಿಗೆ, ಕತೆಗಾರರಿಗೆ, ಒಟ್ಟಾರೆ ಮನುಷ್ಯ ಕುಲಕ್ಕೆ ಅರಿವಾಗಬೇಕಾದ ವಿಚಾರ. ಹಾಗೆ ನೆನಪುಗಳ ಹರವು ದೊಡ್ಡದಾಗಬೇಕೆಂದರೆ ಬಹುಶಃ ಅಂಥ ಬದುಕನ್ನು ಬದುಕಬೇಕು. ಅಂಥ ಬದುಕಿನ ಒಂದಷ್ಟು ಭೇಟಿಗಳ, ಅದರಲ್ಲಿ ಇದಿರಾದ ವ್ಯಕ್ತಿತ್ವಗಳ, ಸಹಸ್ರ ಸಹಸ್ರ ಕೋಟಿ ಜೀವಾಣುಗಳ ಮಧ್ಯದ ಕೆಲವೇ ಕೆಲವು ಹೋರಾಟಗಳ, ತೊಳಲಾಟಗಳ, ಎಲ್ಲಿಯೂ ಯಾವ ಪತ್ರಿಕೆ,ಮಾಧ್ಯಮಗಳಲ್ಲಿಯೂ ದಿನನಿತ್ಯ ತಲೆಬರಹಗಳಾಗದವರ, ನಮಗ್ಯಾರಿಗೂ ಬಹುಶಃ ಸಂಬಂಧವೇ ಇರದ ಚಿತ್ರಣಗಳು ಇಲ್ಲಿವೆ. ಲೇಖಕರು ತಮ್ಮ ಮಾತಿನಲ್ಲಿ ಮುಂದುವರೆದು ಹೇಳುತ್ತಾರೆ "ನಾನು ಬರೆಯಲೋಸುಗ ಇವರೆಲ್ಲಾ ನೆಪದಂತೆ ಆಗಿಬಿಟ್ಟರಲ್ಲಾ ಅಂತ". ಇಂಥದ್ದೊಂದು ಪ್ರಜ್ಞೆ ಹಾಗೂ ಅವಲೋಕನ ನಿಜವಾದ ಬರಹಗಾರರಿಗೂ, ಛಾಯಾಗ್ರಾಹಕರಿಗೂ ಆಗಾಗ ಕಾಣಿಸಿಕೊಳ್ಳಬೇಕು. ನಮಗೆ ಬರಹಕ್ಕೆ ವಸ್ತು ಸಿಗಬಹುದು, ನಮಗೆ ಒಂದು ಅದ್ಭುತವಾದ ಚಿತ್ರವೊಂದು ಆ ಕ್ಷಣಕ್ಕೆ ಸಿಗಬಹುದು. ಆದರೆ, ನಮ್ಮ ವಸ್ತುವಾದ ಅವರಿಗೆ ಸಿಕ್ಕಿದ್ದಾದರೂ ಏನು? ಅನ್ನುವ ಪ್ರಶ್ನೆ ಒಂದು ಸಲ ಹುಟ್ಟಿಕೊಂಡರೆ ಅದು ಬಹಳಷ್ಟು ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ. ಜೊತೆಗೆ, ನಮ್ಮ ಬರಹಗಳಲ್ಲಿ, ಛಾಯಾಚಿತ್ರಗಳಲ್ಲಿ ಬರುವ ವ್ಯಕ್ತಿತ್ವಗಳ ಕುರಿತಾಗಿ ನಾವು ಸದಾ ಕಾಲ ಜಾಗೃತರೂ, ಜಾಗರೂಕರೂ ಆಗಿರುವ ಹಾಗೆ ನಮ್ಮನ್ನು ಈ ಪ್ರಶ್ನೆ ಎಚ್ಚರಿಸುತ್ತದೆ. ಎಲ್ಲಕ್ಕಿಂತ ಮೊದಲು ಸಹಜವಾದ ಮನುಷ್ಯರಾಗಬೇಕಲ್ಲವಾ! ಆದರೆ, ಇಂಥ ಕತೆಗಳನ್ನು ಬಹಳ ಗೌರವಪೂರ್ಣವಾಗಿಯೂ, ಯಾವ ಕಲ್ಮಶಗಳಿಲ್ಲದೇ, ಅಭಿಪ್ರಾಯಗಳಿಲ್ಲದೇ, ಅಲಂಕಾರಗಳಿಲ್ಲದೇ ಹೇಗಿದೆಯೋ ಹಾಗೆ ಇಡುವುದೂ ಬರಹಗಾರರ, ಛಾಯಾಗ್ರಾಹಕರ ಜವಾಬ್ದಾರಿ. ಅಬ್ದುಲ್ ರಶೀದರ ಈ ಪುಸ್ತಕ ಓದಿದಾಗ ಅಂಥದ್ದೊಂದು ಜವಾಬ್ದಾರಿಯ ಸೂಕ್ಷ್ಮತೆಯೂ, ಅವರು ಅದನ್ನು ನಿರ್ವಹಿಸಿದ ರೀತಿಯೂ ಬಹಳ ಖುಷಿ ಕೊಡುತ್ತದೆ. </p><p><br /></p><p>ಕೆಲವೊಮ್ಮೆ ಇಲ್ಲಿನ ಬರಹಗಳು ಕತೆಯ ಅರ್ಧಕ್ಕೆ ಎದ್ದು ನಡೆದ ಹಾಗೆ ಗೋಚರಿಸುತ್ತವೆ. ಇನ್ನೇನೋ ಗಹನವಾದದ್ದು ಶುರುವಾಗುತ್ತದೆ ಅನ್ನುವಾಗ, ಏನೂ ಇಲ್ಲವೆಂಬಂತೆ ನಿರಾಯಾಸವಾಗಿ ಮುಗಿದುಹೋಗುತ್ತದೆ, ಇಷ್ಟು ಹೊತ್ತು ಹೇಳಿದ್ದು ಏನೂ ಅಲ್ಲ, ಅದು ಇಷ್ಟೇ ಅನ್ನುವಂತೆ ಅಪೂರ್ಣವಾಗಿಬಿಡುತ್ತದೆ. ಮೊದಮೊದಲ ಬರಹಗಳಲ್ಲಿ ಇದು ಚೂರು " ಅರೇ, ಇದೇನಿದು!" ಅಂತ ಅನ್ನಿಸುವ ಹಾಗೆ ಮಾಡಿದರೂ, ಆಮೇಲೆ "ಬಹುಶಃ ಬದುಕು ಕೂಡಾ ಹೀಗೆಯೇ" ಅನ್ನಿಸುವಷ್ಟರ ಮಟ್ಟಿಗೆ ಹೊಂದಿಕೊಂಡೆ. </p><p><br /></p><p>ಖುಷಿಯ ವಿಷಯವೆಂದರೆ, ಬಹಳಷ್ಟು ಬರಹಗಾರರು, ಪ್ರಕಾಶಕರು ಇ-ಪುಸ್ತಕಗಳನ್ನು ಮಾಡಲು ಅದ್ಯಾಕೋ ಇನ್ನೂ ಹಿಂಜರಿಯುತ್ತಲೇ ಇರುವ ಸಂದರ್ಭದಲ್ಲಿ ಅಬ್ದುಲ್ ರಶೀದರ ಈ ಎಲ್ಲಾ ಪುಸ್ತಕಗಳು ಇ-ಪುಸ್ತಕಗಳಾಗಿ ಋತುಮಾನ, ಗೂಗಲ್ ಪ್ಲೇ ಬುಕ್ಸ್ ಗಳಲ್ಲಿ ಲಭ್ಯ. </p><p><br /></p><p>ಯಾವ ನಿರೀಕ್ಷೆಯೂ ಇರದೇ, ಯಾವ ಪೂರ್ವಾಲೋಚನೆಗಳೂ ಇಲ್ಲದೇ, ಬೇರೆ ಬೇರೆ ಬದುಕುಗಳಲ್ಲಿ ನಿರ್ಭಾವುಕರಾಗಿ ಒಂದೊಮ್ಮೆ ಇಣುಕಿ ಅಲ್ಲಿಂದ ನಮ್ಮ ಬದುಕನ್ನು ಇನ್ನಷ್ಟು ಸರಳೀಕರಿಸಿಕೊಳ್ಳಬಹುದು ಅಥವಾ ಇನ್ನಷ್ಟು ಸಂಭ್ರಮಿಸಬಹುದು ಅಂತಾದಲ್ಲಿ 'ಮೈಸೂರ್ ಪೋಸ್ಟ್' ಅನ್ನು ಒಮ್ಮೆ ತೆರೆದು ನೋಡಿ. </p><p><br /></p><p>ಧನ್ಯವಾದಗಳು Abdul Rasheed ಸರ್ ಹಾಗೂ ಋತುಮಾನದ Kuntady Nithesh ಅವ್ರೇ ಈ ಎಲ್ಲಾ ಇ-ಪುಸ್ತಕಗಳಿಗಾಗಿ ✨🙏</p><p><br /></p><p>~`ಶ್ರೀ'</p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-81236410616148077282024-03-11T23:43:00.002+05:302024-03-11T23:43:19.536+05:30ಸ್ವಾತಿ ಮುತ್ತಿನ ಮಳೆಯ ಗಂಧ<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiUk_w-TbxykvRiiFU3526AFVmJbmNB0XCeROWbtV4tQ13iCA0e_1KBe0gJnYJOhytA85nAGIO-PRscgUooeZNGUA_X1gq-njAhoJpbZWzYz4JrrcCt-1YgTjO1rfbY5roJINqRMb7JAH4WaZNb-W8wQaYoxGjK-q307nCElZEBSRS7AQJnM9TqYoB24S0/s2048/FtF0OA3WcAM1ivw.jpeg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1311" height="320" src="https://blogger.googleusercontent.com/img/b/R29vZ2xl/AVvXsEiUk_w-TbxykvRiiFU3526AFVmJbmNB0XCeROWbtV4tQ13iCA0e_1KBe0gJnYJOhytA85nAGIO-PRscgUooeZNGUA_X1gq-njAhoJpbZWzYz4JrrcCt-1YgTjO1rfbY5roJINqRMb7JAH4WaZNb-W8wQaYoxGjK-q307nCElZEBSRS7AQJnM9TqYoB24S0/s320/FtF0OA3WcAM1ivw.jpeg" width="205" /></a></div><p></p><p>ಸ್ವಾತಿ ಮುತ್ತಿನ ಮಳೆಯ ಗಂಧ</p><p><br /></p><p>ನಾನು ನನ್ನ ಹೆಸರಲ್ಲ, ನಾನು ನನ್ನ ದೇಹವಲ್ಲ, ನಾನು ನನ್ನ ಆಸ್ತಿ, ಮನೆ, ಸಂಸಾರವಲ್ಲ. ಹಾಗಾದರೆ ನಾನು ಯಾರು ಅನ್ನುವ ಪ್ರಶ್ನೆಗೆ ಈಗಾಗಲೇ ನಮ್ಮ ಪೂರ್ವಜರು ಉತ್ತರವನ್ನು ಕಂಡುಕೊಂಡು ಅದನ್ನು ನಮಗೂ ಬಿಟ್ಟುಹೋಗಿದ್ದಾರೆ. ತೆಗೆದುಕೊಂಡು ಹೋಗುವುದಾದರೂ ಏನನ್ನು, ಬಿಟ್ಟುಹೋಗದೇ! ಆದರೂ, ಸಹಸ್ರ ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿರುವ 'ನಾನು' ಅನ್ನುವುದರ ಅರಿವು ನಮಗ್ಯಾರಿಗೂ ಇರುವುದಿಲ್ಲ. ಅದು ಮರೆತುಹೋಗುವಂತೆ ಬಹುಶಃ ವರವೋ ಶಾಪವೋ ಏನೋ ಒಂದು ಇರಬೇಕು. ನಶ್ವರದ ಅರಿವು ಮರೆಯಬೇಕು, ನಾವೆಲ್ಲಾ ಮೆರೆಯಬೇಕು, ಕೊನೆಗೊಂದು ದಿನ ಏನಾಯಿತು ಅನ್ನುವುದರ ಅರಿವೂ ನಮಗೆ ಆಗದ ಹಾಗೆ ನಾವು 'ಇನ್ನಿಲ್ಲ'ವಾಗುತ್ತೇವೆ. ಆದರೆ, ಅಲ್ಲಿಯವರೆಗೂ ನಾವು ಹೇಗೆಲ್ಲಾ, ಏನೆಲ್ಲಾ 'ಸಂಪಾದಿಸಬಹುದು' ಅಥವಾ ಏನೇನನ್ನೆಲ್ಲಾ ಅಂಟಿಸಿಕೊಳ್ಳಬಹುದು ಅಂತಂದುಕೊಳ್ಳುತ್ತಾ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಧರ್ಮಾರ್ಥ ಕಾಮಗಳ ಆಚರಣೆಗಳಿಂದಲೇ ಮೋಕ್ಷಕ್ಕೆ ದಾರಿಯಾಗುತ್ತದೆ ಅನ್ನುವುದನ್ನು ಹೇಗೆ ಅರ್ಥೈಸಿಕೊಳ್ಳಬಾರದೋ ಹಾಗೆ ಅದನ್ನು ಅರ್ಥೈಸಿಕೊಂಡು ಶಾಶ್ವತದ ಪರಿಕಲ್ಪನೆಯಲ್ಲಿ ವಿಜೃಂಭಿಸುತ್ತೇವೆ. ಅದೆಷ್ಟೋ ತಲೆಮಾರುಗಳು ಕಳೆದಿವೆ, ಅದೆಷ್ಟೋ ಮನುಷ್ಯ ದೇಹಗಳು ಸುಟ್ಟಿವೆ, ಹೂಳಲ್ಪಟ್ಟಿವೆ, ಇನ್ನು ಕೆಲವಷ್ಟು ಸಂರಕ್ಷಿಸಲ್ಪಟ್ಟಿವೆ. ಆದರೆ, 'ನಾನು' ಅನ್ನಿಸಿಕೊಳ್ಳುತ್ತಿದ್ದ ಜೀವವೊಂದು ಅಲ್ಲಿಲ್ಲವೇ ಇಲ್ಲ. ಆದರೆ, ಒಂದೊಮ್ಮೆ ಸಾವು ಎದುರಿಗೇ ಇದೆ ಅಂತಾದಲ್ಲಿ, ಸಮೀಪಿಸುತ್ತಿರುವ ಆ ಸಾವಿನ ಅರಿವಿದೆ ಅಂತಾದಲ್ಲಿ, ಮನುಷ್ಯರು ಹೇಗೆಲ್ಲಾ ವರ್ತಿಸಬಹುದು, ಅಂಥ ಸಂದರ್ಭಗಳಲ್ಲಿ ಅವರಿಗಿರುವ ಆಲೋಚನೆಗಳೇನು ಅನ್ನುವುದನ್ನು ಹೇಳುತ್ತಾ ಸಾವಿಗೆ ಹೇಗೆ ತಯಾರಾಗಬೇಕು ಅಥವಾ ಹೇಗೆ ತಯಾರಾದರೆ ಚೆಂದ ಅನ್ನುವುದನ್ನು ಹೇಳುವ ಸಿನೆಮಾ ರಾಜ್ ಬಿ ಶೆಟ್ಟಿ ಅವರ 'ಸ್ವಾತಿ ಮುತ್ತಿನ ಮಳೆ ಹನಿಯೇ' </p><p><br /></p><p>"ಮೆಲ್ಲಗೆ ಧ್ಯಾನಿಸು" ಹಾಡಿನಲ್ಲಿ ಒಂದು ಸಾಲು ಬರುತ್ತದೆ; 'ಹಗುರಾದೆ ನಾನು ಈಗ ರೆಕ್ಕೆ ಬಲಿತಂತೆ'. ರೆಕ್ಕೆ ಬಲಿತಾಗ ಹಕ್ಕಿಗೆ ಅದರ ದೇಹ ಭಾರವಲ್ಲ, ಅದು ಆರಾಮಾಗಿ ಗಾಳಿಯಲ್ಲಿ ತೇಲುತ್ತಾ ಹಾರುತ್ತದೆ. ಆದರೆ, ಮನುಷ್ಯರ ವಿಷಯದಲ್ಲಿ, ಆಯಸ್ಸು 'ಬಲಿತಾಗ' ದೇಹ ಭಾರವಾಗುತ್ತದೆ, ಕೆಲವೊಮ್ಮೆ ಸಂಸಾರದ ಮನಸ್ಸು ಭಾರವಾಗುತ್ತದೆ. ಆದರೆ ಇನ್ನೇನೋ ಒಂದು ಗೊತ್ತೂ ಆಗದ ಹಾಗೆ ಹಾರಿಹೋಗುತ್ತದೆ. ಅದನ್ನು ಹಲವರು ಪ್ರಾಣಪಕ್ಷಿಯೆಂದೂ, ಆತ್ಮವೆಂದೂ, ಜೀವವೆಂದೂ ಕರೆಯುತ್ತಾರೆ. ಅದೆಷ್ಟು ಹಗುರ; ಕೆಲವೊಮ್ಮೆ ಭೂಮಿಗೂ! ಈ ಸಿನೆಮಾದಲ್ಲಿ ಮೌನಕ್ಕೆ ಹೇಗೆ ಜಾಗವಿದೆಯೋ, ಹಾಗೆಯೇ ಸದ್ದಿಗೂ ವಿಶೇಷ ಸ್ಥಾನವಿದೆ. ನಿತ್ಯದ ಏಕತಾನತೆಯನ್ನು ಹೇಳಲೆಂದೇ ಒಂದು ಸದ್ದಿದೆ ಹಾಗೂ ಆ ಏಕತಾನತೆಯನ್ನು ಮುರಿಯುವುದಕ್ಕೂ ಒಂದು ಸದ್ದಿದೆ. ಸಾಯುವುದಕ್ಕೆ ಕೆಲವೇ ದಿನ ಇರುವವರು ಬಂದು ಸೇರುವ ಜಾಗದಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿರುವವರಿಗೆ ಎಲ್ಲರ ನೋವನ್ನು ನಿತ್ಯವೂ ನೋಡಿ ಅಭ್ಯಾಸವಾಗಿರುವಾಗ, ಇನ್ನೊಂದು ರೋಗಿ ಬಂದಾಗಲೂ ಅಂಥದ್ದೇ ಒಂದು ನಿರೀಕ್ಷೆಯಿರುತ್ತದೆ ಅಥವಾ ಅಂಥ ಯಾವ ನಿರೀಕ್ಷೆಯೂ ಇರದೇ, ಅದು ಸಹಜವಾಗಿರುತ್ತದೆ. ಆದರೆ, ಮೊದಲ ಭೇಟಿಯಲ್ಲಿ ಏಕತಾನತೆಯನ್ನು ಮುರಿಯುವ ಒಂದು ಸದ್ದಿದೆ. ನಿರೀಕ್ಷೆಗಳ ಹಾಗೂ ಬದುಕಿನ ಅಂದಾಜನ್ನೇ ಪಲ್ಲಟಗೊಳಿಸುವ ಒಂದು ಸದ್ದಿದೆ. ನಿರ್ದೇಶಕರು ಆ ಸನ್ನಿವೇಶವನ್ನು ಹಾಗೂ ಕ್ಷಣದ ಬದಲಾವಣೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. </p><p><br /></p><p>ಸಾವು ಅಂದ ಮೇಲೆ ಹೂವಿರಲೇಬೇಕಲ್ಲ! ಈ ಸಿನೆಮಾದಲ್ಲೂ ಹೂವಿದೆ. ನಂದಿಬಟ್ಟಲು ಹೂವು ಬಹಳ ಮುಖ್ಯವಾದ ಪಾತ್ರವಾಗಿ ಇಡೀ ಸಿನೆಮಾದುದ್ದಕ್ಕೂ ಇರುತ್ತದೆ. ಇಂಥದಕ್ಕೇ ಬಹುಶಃ ನಾವು ಕಾವ್ಯ ಅನ್ನುತ್ತೇವೆ. ಹಾಗೆಯೇ ರಾಜ್ ಅವರು ಬಹಳ ಚೆಂದಕ್ಕೆ ಕವಿತೆ ಓದಬಲ್ಲರು ಅನ್ನುವುದನ್ನು ಒಂದಷ್ಟು ವರ್ಷಗಳ ಹಿಂದೆಯೇ ಕೇಳಿಸಿಕೊಂಡಿದ್ದ ನನಗೆ, ಈ ಸಿನೆಮಾದಲ್ಲಿ ಒಂದು ಬಹಳ ಚೆಂದದ ಕವಿತೆ ಇದ್ದಿದ್ದು ಈ ಸಿನೆಮಾಕ್ಕೊಂದು ಧ್ಯಾನಸ್ಥ ಸ್ಥಿತಿಯನ್ನು ತಂದುಕೊಡುತ್ತದೆ ಅನಿಸಿತು. ಉದುರಿಹೋಗುವುದು ಎಲ್ಲಾ ಹೂವಿನ ಅಥವಾ ಇಡೀ ಜೀವಕುಲದ ಲಕ್ಷಣ. ಉದುರುವ ಕಾಲದ ಮಾಪನ ಬೇರೆ ಬೇರೆಯಷ್ಟೇ. ಈ ಸಿನೆಮಾ ನೋಡಿದ ಬಳಿಕ ನಂದಿಬಟ್ಟಲನ್ನು ನಾವು ಬೇರೆಯದೇ ರೀತಿಯಲ್ಲಿ ಗಮನಿಸುತ್ತೇವೆ ಹಾಗೂ ಗ್ರಹಿಸುತ್ತೇವೆ ಅನ್ನುವ ಸಣ್ಣ ನಂಬಿಕೆ ನನ್ನದು. ಇನ್ನೂ ಒಂದು ಸಂಗತಿಯೆಂದರೆ ನಂದಿಬಟ್ಟಲು ಹೂವಿರುವವರೆಗೂ ಈ ಸಿನೆಮಾ ನೋಡಿದವರಿಗೆ ಈ ಸಿನೆಮಾದ ನೆನಪು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ. ಅದು ಸಿನೆಮಾದ, ನಿರ್ದೇಶಕರ ಜಾಣ್ಮೆ. ನನಗೆ ನಂದಿಬಟ್ಟಲು ಹೂವಿನ ಸಂಗತಿ ಬಂದಾಗ, 'ಅಕ್ಟೋಬರ್' ಸಿನೆಮಾದ ನೆನಪಾಯಿತು. ಎರಡರ ಕತೆಯೂ ಬೇರೆ. ಆದರೆ, ತಳಹದಿ ಒಂದೇ! ರಾಜ್ ಅವರು ಶುದ್ಧ ಮನುಷ್ಯನಾಗುವುದರ ಕುರಿತಾಗಿಯೂ ಆಗಾಗ ಮಾತಾಡುತ್ತಿರುತ್ತಾರೆ, ಅದು ಕೂಡಾ ಈ ಚಿತ್ರದ ಕತೆಗೆ ಜೀವಾಳ. </p><p><br /></p><p>ಈ ಸಿನೆಮಾ ಬೇಗ ಮುಗಿದುಹೋಗುತ್ತದೆ. ಇದನ್ನು ಎರಡು ರೀತಿಯಲ್ಲಿ ಸ್ವೀಕರಿಸಬಹುದು ಅಂತ ನನಗನ್ನಿಸಿತು. ಒಂದು, ಮೊದಲೇ ಸಾವಿನ ಗಾಢತೆ ಬಹಳ ಭಾರ, ಅದು ಅಚ್ಚೊತ್ತುವ ಮೊದಲೇ ಸಿನೆಮಾ ಮುಗಿಯುತ್ತದೆ, ಸಾವಿನಲ್ಲೇ ಕಾಡುತ್ತಾ ಅಲ್ಲಲ್ಲೇ ಸುತ್ತುವುದಿಲ್ಲ. ಇದು ಕತೆ ಅಷ್ಟು ಗಾಢವಾಗಿ ತಟ್ಟದೇ ಹೋಗಬಹುದು ಅನ್ನುವುದು ಒಂದು ಕಡೆಯಾದರೆ, ಇನ್ನೊಂದು ಕೂಡಾ ಅಷ್ಟೇ ವಿಶಿಷ್ಟವಾಗಿ ಕಂಡಿತು. ಸಿನೆಮಾದ ಹಾಗೆಯೇ ನೋಡುನೋಡುತ್ತಿದ್ದಂತೆಯೇ ಬದುಕು ಮುಗಿದುಹೋಗುತ್ತದೆ; ಬಹಳ ಚಿಕ್ಕದು. ನಮ್ಮ ಬದುಕು ಇಲ್ಲಿನ ಮನಸ್ಸುಗಳಲ್ಲಿ ದಾಖಲಾಗುವುದರೊಳಗಾಗಿಯೇ ನಾವು ಹೊರಟಾಗಿರುತ್ತದೆ. ಹಾಗಾಗಿ ಈ ಸಿನೆಮಾದ ಒಟ್ಟು ಅವಧಿಯನ್ನು ಹೇಗೆ ಬೇಕಾದರೂ ಪರಿಗಣಿಸಬಹುದು. ಆದರೆ, ಸಿನೆಮಾ ಸಣ್ಣದು ಅಂದ ಮಾತ್ರಕ್ಕೆ ಸಿನೆಮಾದ ಸಂಗತಿ ಸಣ್ಣದಲ್ಲ. ಸಿನೆಮಾ ಮುಗಿದ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಸಿನೆಮಾವಾಗಿ ಅಷ್ಟು ಮಾಡಿದರೆ ಸಾಕು. ಇನ್ನೇನೋ ಬೇಕಿತ್ತು ಅನಿಸಿತು, ಆದರೆ, ಬಹಳಷ್ಟನ್ನು ಹೇಳಿದ್ದಾರಲ್ಲಾ ಅಂತ ಕೂಡಾ ಅನಿಸಿತು. </p><p><br /></p><p>ಇನ್ನು ಸಿರಿಯವರು ಯಾಕೆ ಹಾಗೆ 'ಕಾಣುತ್ತಾರೆ' ಅಂತ ಯೋಚಿಸುತ್ತಿದ್ದ ನನಗೆ ಉತ್ತರ ಸಿನೆಮಾದಲ್ಲಿ ಸಿಕ್ಕಿತು. ನನ್ನ ಪ್ರಶ್ನೆಯನ್ನೇ ಸಿನೆಮಾದ ಇನ್ನೊಂದು ಪಾತ್ರವೂ ಕೇಳುತ್ತದೆ. ಅದು ಸಿರಿಯವರ ಪಾತ್ರದ ಪ್ರಸ್ತುತಿಗೆ ಕೊಟ್ಟ ಮಹತ್ವ. ಸಾಯುವುದನ್ನು ನೋಡುವುದು, ಅಥವಾ ಸಾಯುವವರನ್ನು ತಯಾರುಮಾಡುವುದೇ ಅಭ್ಯಾಸವಾದರೆ ಏನಾಗಬಹುದು. ಶೋಕ ಯಾರಿಗೆ? ಶೋಕದ ಮಧ್ಯ ಬೇರೆ ಸಂಗತಿಗಳಿಗೆ ಜಾಗವಿದೆಯಾ? ಕೌನ್ಸಿಲರ್ ಹಾಗೂ ರೋಗಿ ಇಬ್ಬರೂ ಮನುಷ್ಯರೇ ಆದರೂ, ಬೇರೆ ಬೇರೆ ರೋಗಿಯ ಜೊತೆಗಿನ ಕೌನ್ಸಿಲರ್ ಅವರ ಭಾವನಾತ್ಮಕ ಬಂಧವೇನು? ನಿತ್ಯವೂ ಸಾವಿನ ಸುತ್ತಲೇ ಬದುಕು ಕಟ್ಟಿಕೊಂಡವರ ಬದುಕಿನ ನಿತ್ಯದ ಸಂಗತಿಗಳೇನು? ಇತ್ಯಾದಿಗಳೆಲ್ಲವನ್ನೂ ನಿರ್ದೇಶಕರು ಬಹಳ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ. ಹಲವಾರು ಸಂಗತಿಗಳನ್ನು ಮುಟ್ಟಿಹೋಗಿದ್ದಾರೆ 'ಅನಿಕೇತ್'. ಯಾಕೆಂದರೆ, ಆ ಸಂಗತಿಗಳಲ್ಲೇ ಬದುಕುವುದಕ್ಕೆ ಅವರು 'ಅನಿಕೇತ್' ಅಲ್ಲವಾ, ಅಲ್ಲಿಯೇ ಇರುವ ಹಾಗಿಲ್ಲ, ಅನಿಕೇತನ ಆಗಲೇಬೇಕು!</p><p><br /></p><p>ಕವಿತೆ ಇಷ್ಟವಾಗುತ್ತದೆ ಅಂತಾದರೆ, ಸಾವು ಕಾಡುತ್ತದೆ ಅಂತಾದರೆ, ಸಾವಿನ ಕುರಿತಾಗಿ ವಿಶೇಷ ಆಸಕ್ತಿ ಇದೆ ಅಂತಾದಲ್ಲಿ, ಬದುಕಿನ ಕ್ಷಣಿಕತೆಯ ಕುರಿತಾಗಿ ಎಂದಾದರೂ ಯೋಚಿಸಿದ್ದೀರಿ ಅಂತಾದಲ್ಲಿ ಈ ಸಿನೆಮಾ ಇಷ್ಟವಾಗುತ್ತದೆ. </p><p><br /></p><p>ಧನ್ಯವಾದಗಳು Raj B Shetty ಅವ್ರೇ, Siri Ravikumar ಅವ್ರೇ, Applebox Studios ನ Divya Spandana/Ramya ಅವ್ರೇ, ಒಂದು ಚೆಂದದ ಸಿನೆಮಾಕ್ಕಾಗಿ ✨✨✨</p><p><br /></p><p>~`ಶ್ರೀ' </p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-4622618024170414062024-03-11T23:38:00.002+05:302024-03-11T23:38:30.558+05:30Days at the Morisaki Bookshop<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjDRG17sBbJhmOIdbvRfljnmtGS9RkRIDimnJiQ_7B1yQhEHOgn5A2Sn-g5NpdrNRGMwhNO6Gdg1tkLPmjCtG8CRA7Oih_XB7zWS0kL9d8ZrIc76m4NRqQObKCnODT0PJwNVY3p8bYiOg1w6KWteLn4WXw8durc3M2iZhsx5b_VVqKsJfYKjLBzzljeC10/s680/images%20(33).jpeg" imageanchor="1" style="margin-left: 1em; margin-right: 1em;"><img border="0" data-original-height="680" data-original-width="451" height="320" src="https://blogger.googleusercontent.com/img/b/R29vZ2xl/AVvXsEjDRG17sBbJhmOIdbvRfljnmtGS9RkRIDimnJiQ_7B1yQhEHOgn5A2Sn-g5NpdrNRGMwhNO6Gdg1tkLPmjCtG8CRA7Oih_XB7zWS0kL9d8ZrIc76m4NRqQObKCnODT0PJwNVY3p8bYiOg1w6KWteLn4WXw8durc3M2iZhsx5b_VVqKsJfYKjLBzzljeC10/s320/images%20(33).jpeg" width="212" /></a></div><p></p><p>Days at the Morisaki Bookshop</p><p><br /></p><p>ಬದುಕಲ್ಲಿ ಸರಳವಾದದ್ದು ಕೊಡುವ ಖುಷಿಯನ್ನು ಬಹುಶಃ ವ್ಯಾಖ್ಯಾನಿಸುವುದು ತುಸು ಕಷ್ಟ. ಆ ಸಂತೃಪ್ತಿಯನ್ನು ವಿವರಿಸುವುದಕ್ಕೆ ನಾವು ಹೊರಟ ತಕ್ಷಣವೇ ಅದು ಪೇಲವವಾಗುತ್ತದೆ. ಯಾವ ಸುಂದರ ಅನುಭೂತಿಯನ್ನೂ ಅಕ್ಷರಕ್ಕಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಭಾವವನ್ನು ಅಕ್ಷರಗಳಿಗೆ ಅನುವಾದಿಸುವುದಕ್ಕೆ ಹೊರಟಾಗ ಅದೆಷ್ಟೋ ಅರ್ಥಗಳು ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಅನುಭವವಷ್ಟೇ ಪರಮ ಸತ್ಯ. ಅಂಥದ್ದೊಂದು ಚೆಂದದ ಅನುಭವವನ್ನು ಕಟ್ಟಿಕೊಟ್ಟಿದ್ದು ಸತೋಶಿ ಯಾಗಿಸಾವಾ ಅವರ ಕಾದಂಬರಿ "Days at the Morisaki Bookshop" </p><p><br /></p><p>ಬಹಳ ಆಳವಾದ ಅಷ್ಟೇ ತೀವ್ರ ಧ್ವನಿಗಳುಳ್ಳ ಸಾಹಿತ್ಯವನ್ನು ಓದಿ ಓದಿ ಭಾರವಾದ ಯೋಚನೆಗಳೊಳಗೆ ಮುಳುಗಿಹೋಗಿರುವಾಗ ಇಂಥದ್ದೊಂದು ಪುಸ್ತಕ ಹೊಸ ಬಿಡುಗಡೆಯನ್ನು ಕೊಡುತ್ತದೆ. ಕತೆಯಲ್ಲೇನೂ ಭಿನ್ನವಾದುದು ಇಲ್ಲ ಅಥವಾ ಭಯಂಕರ ತಿರುವು ಅನ್ನಬಹುದಾದಂಥದ್ದೆಲ್ಲಾ ಏನೂ ಇಲ್ಲ. ಆದರೂ ಈ ಕಾದಂಬರಿ ಓದಿಸಿಕೊಳ್ಳುತ್ತದೆ; ಉದುರಿ ನೆಲಕ್ಕೆ ಬಿದ್ದ ಹೂವ ಮೇಲೆ ತಂಪಾದ ತಾಜಾ ಮಳೆ ಹನಿಗಳು ಬಿದ್ದು ಇಡೀ ವಾತಾವರಣಕ್ಕೊಂದು ಹೊಸ ಆಹ್ಲಾದವನ್ನು ಕೊಡುವ ಹಾಗೆ. ಕೆಸರು, ಕಿರಿಕಿರಿ, ಕಸಕಡ್ಡಿಗಳ ನಡುವೆಯೂ ಮಳೆಗೊಂದು ಚಿಕಿತ್ಸಕ ಗುಣವಿದೆ. ಅರ್ಥವೇ ಆಗದ ಸಮ್ಮೋಹಕತೆಯೂ ಮಳೆಗಿದೆ. ಅಂಥ ಗುಣ ಈ ಕಾದಂಬರಿಗೂ ಇದೆ. ಒಂದು ಊರಿನ ತುಂಬಾ ಪುಸ್ತಕದ ಅಂಗಡಿಗಳೇ ತುಂಬಿದ್ದರೆ ಹಾಗೂ ಆ ಪುಸ್ತಕದ ಸುತ್ತಮುತ್ತಲೇ ಇಡೀ ಕತೆ ನಡೆದರೆ, ಪುಸ್ತಕದ ಕುರಿತಾಗಿ ಚೂರು ವಿಶೇಷವೇ ಅನ್ನಬಹುದಾದ ಆಸಕ್ತಿ ಇರುವವರಿಗೆ ಈ ಕಾದಂಬರಿ ಇಷ್ಟವಾಗದೇ ಇರಲಿಕ್ಕೆ ಹೇಗೆ ಸಾಧ್ಯ! </p><p><br /></p><p>ಈ ಕಾದಂಬರಿ ಒಂದರ್ಥದಲ್ಲಿ ಬಿರುಬೇಸಿಗೆಯ ಮಧ್ಯಾಹ್ನದಲ್ಲಿ ತಂಪಾದ ನಿದಿರೆ ಹೊತ್ತು ತರುವ ಆತ್ಮೀಯ ಗಾಳಿ. ಜಪಾನಿನ ಟೋಕಿಯೋದಲ್ಲಿ ಜಿಂಬೋಚೋ ( Jimbocho ) ಅನ್ನುವ ಜಾಗವೊಂದಿದೆ. ಅದನ್ನು 'ಪುಸ್ತಕಗಳ ಪಟ್ಟಣ'ವೆಂದೇ ಕರೆಯುತ್ತಾರೆ. ಅಂಥದ್ದೊಂದು ನಿಜ ಜಾಗದ ಹಿನ್ನೆಲೆಯಿಟ್ಟುಕೊಂಡು ಹೆಣೆದ ಕಾಲ್ಪನಿಕ ಕತೆಯೇ ಈ ಕಾದಂಬರಿ. ಬಹಳಷ್ಟು ಸ್ಥಳೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವವರೇ ಇಲ್ಲ ಅನ್ನುವ ಕೊರಗು ಕೇಳುತ್ತಲೇ ಇರುವಾಗ ಪುಸ್ತಕ, ಅದರ ಓದಿನ ಕುರಿತಾದ ಅಪ್ಪಟ ಪ್ರೇಮ, ಓದಿನಿಂದಾಗಿಯೇ ಹುಟ್ಟಿಕೊಳ್ಳುವ ಒಂದಷ್ಟು ಮನುಷ್ಯ ಸಂಬಂಧಗಳು, ಈ ಪರಿಧಿಯಿಂದಾಚೆ ದೂರ ಹೋಗುವ ಒಂದಷ್ಟು ವ್ಯಕ್ತಿಗಳು, ಮಧ್ಯದಲ್ಲೆಲ್ಲಾ ಬದಲಾಗುತ್ತಲೇ ಇರುವ ಬದುಕು, ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುವ ಒಂದರ್ಥದಲ್ಲಿ ಪ್ರಮುಖ ಪಾತ್ರವೇ ಆಗುವ ಪುಸ್ತಕದಂಗಡಿ ಇವಿಷ್ಟನ್ನೂ ಈ ಕಾದಂಬರಿ ಹದವಾಗಿ ಬೆರೆಸಿಕೊಂಡು ನಮ್ಮೆದುರು ತೆರೆದುಕೊಳ್ಳುತ್ತದೆ. ಈ ಪುಸ್ತಕದ ಮೂಲಭಾಷೆ ಜಪಾನೀಸ್ ಆಗಿರಬಹುದು, ಈ ಪುಸ್ತಕದ ಕತೆ ನಡೆಯುವ ಮೂಲ ಜಾಗ ಜಪಾನಿನ ಜಿಂಬೋಚೋ ಆಗಿರಬಹುದು, ಇಲ್ಲಿನ ಪಾತ್ರಗಳ ಹೆಸರೆಲ್ಲವೂ ಜಪಾನಿನ ಹೆಸರುಗಳಾಗಿರಬಹುದು, ಆದರೆ ಇಲ್ಲಿ ಬರುವ ಪಾತ್ರಗಳ್ಯಾವವೂ ನಮಗೆ ಅಪರಿಚಿತವಲ್ಲ. ಒಂದು ಕತೆ ಸಾರ್ವತ್ರಿಕವಾಗಬೇಕಾದರೆ ಅದರೊಳಗಿರುವ ಪಾತ್ರದ ಪೋಷಣೆಯು ಒಂದೇ ಸಮಯಕ್ಕೆ ಸ್ಥಳೀಯವೂ, ಜೊತೆಗೆ ಜಾಗತಿಕವೂ ಆಗಿರಬೇಕು. ಇಲ್ಲಿನ ಪಾತ್ರಗಳ್ಯಾವವೂ ನಮಗೆ ಹೊರಗಿನದು ಅಂತ ಅನ್ನಿಸುವುದೇ ಇಲ್ಲ. ಹಾಗಾಗಿಯೇ ಇನ್ನಷ್ಟು ಆಪ್ತವಾಗುತ್ತವೆ. ಕನ್ನಡದಲ್ಲಿ ಇಂಥ ಪ್ರಕಾರದ ಕಾದಂಬರಿಗಳು ಬಹಳ ಕಡಿಮೆ. </p><p><br /></p><p>ಹಿಂದೊಮ್ಮೆ Nagaraj Ramaswamy Vastarey ಸರ್ ಅವರ 'ಪ್ರಿಯೇ ಚಾರುಶೀಲೆ' ಓದಿದಾಗಲೂ ಇಂಥದ್ದೇ ಅನುಭವವಾಗಿತ್ತು. ಈಗ ಈ ಕಾದಂಬರಿ ಓದಿದಾಗ ಕೂಡಾ ಹೆಚ್ಚೂ ಕಡಿಮೆ ಅಂಥದ್ದೇ ಅನುಭವ. ಏಕತಾನತೆಯ ಬದುಕಿನಲ್ಲೊಂದು ಎಳೇ ಸ್ವಪ್ನ ರೂಪುಗೊಳ್ಳುವ ಹಾಗೆ, ಆ ಸ್ವಪ್ನದಿಂದಾಗಿಯೇ ನಮ್ಮ ಬದುಕಿನ ತಂತುಗಳು ಹೊಸ ಸ್ವರವನ್ನು ಮೀಟುವುದಕ್ಕೆ ಅಣಿಯಾಗುವ ಹಾಗೆ. ಕನ್ನಡಕ್ಕೆ ಬಹುಶಃ ಇದನ್ನು ಯಾರಾದರೂ ಅನುವಾದಿಸಿದರೆ ಅದನ್ನು ಕನ್ನಡೀಕರಿಸುವಾಗ ಎಷ್ಟೆಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಹಾಗೂ ಕನ್ನಡದಂಥ ಭಾಷೆಯಲ್ಲಿ ಅದು ಅರಳಿಕೊಳ್ಳುವ ಬಗೆಯೇ ಒಂದು ಸಂಭ್ರಮವಾಗಬಹುದು ಅನ್ನುವ ಯೋಚನೆಗಳೇ ರೋಮಾಂಚಕ ಅಂತ ಅನಿಸಿದ್ದು ಹೌದು. ಸಂಸಾರದ ತಾಪತ್ರಯಗಳು, ಹುಡುಗ ಹುಡುಗಿಯರ ಹರೆಯದ ತುಮುಲಗಳು, ನೆರೆಹೊರೆಯ ಚೇಷ್ಟೆಗಳು, ಅಪ್ಪಟ ಮಾನವೀಯ ಸಂಬಂಧಗಳು ಇವೆಲ್ಲಾ ಇದ್ದರೂ ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಪುಸ್ತಕ. ಭಾರತದ ಸಂಸ್ಕೃತಿ ಕಥನ ಪರಂಪರೆಯದ್ದು. ಜನಪದದ ಮೂಲಕ ಕತೆಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತ ಬಂದರೂ, ಪುಸ್ತಕದ ಕುರಿತಾಗಿ ಅದೇನೋ ವಿಶೇಷ ಭಾವ ನಮ್ಮಲ್ಲಿ. ಜ್ಞಾನದ ಪರಂಪರೆಯನ್ನು ಆರಾಧಿಸುತ್ತಾ ಬಂದ ನಮಗೆ ಪುಸ್ತಕಗಳು ಯಾವಾಗಲೂ ಮಾರ್ಗದರ್ಶನದ ಮೂಲಬಿಂದುಗಳು. ನಮ್ಮಲ್ಲಿಯೂ ಇಂಥ ಕತೆಗಳು ಬರಲಿ ಅನ್ನುವುದೊಂದು ಬಿನ್ನಹವಷ್ಟೇ. </p><p><br /></p><p>"The rainy season had completely given way to summer while i was asleep." ನಮ್ಮಲ್ಲಿ ಬಹುತೇಕರು ಇಂಥ ಗಾಢ ನಿದ್ರೆಗಳಲ್ಲೇ ಇದ್ದೇವೆ. ನಮಗೆ ತಿಳಿದಿದೆ ಕಾಲ ಯಾರಿಗೂ ಕಾಯುವುದಿಲ್ಲ, ಜಗತ್ತು ಯಾರಿಗೂ ಕಾಯುವುದಿಲ್ಲ, ಹಾಗೂ ಮತ್ತೆ ನಾವಿಲ್ಲಿಗೆ ಬರುತ್ತೇವೋ ಇಲ್ಲವೋ ಅನ್ನುವ ಯಾವ ಖಾತ್ರಿಯೂ ಇಲ್ಲ. ಆದರೂ, ಏನೇನೋ ಕಾರಣಗಳಿಗಾಗಿ ಅದೊಂದು ವಿಚಿತ್ರವಾದ ಗಾಢ ನಿದ್ರೆಯಲ್ಲಿ ನಾವಿದ್ದೇವೆ, ಏಳಬಹುದು, ಏಳುವುದಕ್ಕೆ ಮನಸ್ಸು ಮಾಡಬೇಕಷ್ಟೇ. </p><p><br /></p><p>"Maybe it takes a long time to figure out what you’re truly searching for. Maybe you spend your whole life just to figure out a small part of it". ನಮ್ಮಿಡೀ ಬದುಕಿನ ಪೂರಾ ನಾವು ಬದುಕಿನ ಅರ್ಥಕ್ಕಾಗಿ ಹುಡುಕುತ್ತೇವೆ. ಶಬರಿಯ ಬದುಕು ಪೂರ್ಣವಾಗುವುದು, ಬದುಕಿನ ಉದ್ದೇಶ ಪೂರ್ಣವಾಗುವುದು ರಾಮನನ್ನಪ್ಪಿ ತನ್ನ ಸುಕ್ಕು ಸುಕ್ಕಾದ ಕೈಗಳಿಂದ ಅವನಿಗೆ ಹಣ್ಣುಗಳನ್ನು ತಿನ್ನಿಸಿದಾಗಲೇ. ಒಂದಿಡೀ ಬದುಕಿನ ಪೂರ್ಣತೆ ದಕ್ಕುವುದು ಕೇವಲ ಕೆಲವೇ ಕೆಲವು ಗಳಿಗೆಯ ಭಾಗದಲ್ಲಿ; ಕೇವಲ ಕೆಲವೇ ಕೆಲವು ಗಳಿಗೆಯ ಭಾಗ್ಯದಲ್ಲಿ. </p><p><br /></p><p>"Human beings are full of contradictions". ಸಂಕೀರ್ಣ ಬೌದ್ಧಿಕ ವ್ಯವಸ್ಥೆಯಿರುವ ಮನುಷ್ಯರಲ್ಲಿ ದ್ವಂದ್ವಗಳು ಸಹಜವೇ ಅಲ್ಲವಾ? ವಾಲ್ಟ್ ವಿಟ್ಮನ್ ತಮ್ಮ Song of Myself ಕವಿತೆಯಲ್ಲಿ ಹೇಳುವುದೂ ಬಹುಶಃ ಇಂಥದ್ದೇ ಒಂದು ಧ್ವನಿ :</p><p><br /></p><p>"Do I contradict myself?</p><p>Very well then I contradict myself,</p><p>(I am large, I contain multitudes.)"</p><p><br /></p><p>ಮನುಷ್ಯನಲ್ಲಿ ಯಾವಾಗ ಆಳದ ಚಿಂತನೆಗಳು ಶುರುವಾಗುತ್ತವೆಯೋ ಆಗಲೇ ಇಂಥ ದ್ವಂದ್ವಗಳೂ ಶುರುವಾಗುತ್ತವೆ. ದ್ವಂದ್ವಗಳು ಬಲಹೀನತೆಯಲ್ಲ, ಅಥವಾ ಸ್ಪಷ್ಟತೆಯಿಲ್ಲದೇ ಇರುವುದರ ಸಂಕೇತಗಳೂ ಅಲ್ಲ. ದ್ವಂದ್ವಗಳು ಹಲವು ಸಾಧ್ಯತೆಗಳ ಅಭಿವ್ಯಕ್ತಿ. ಒಂದು ಸಂಗತಿಯನ್ನು ಹಲವು ಮಜಲುಗಳಲ್ಲಿ ನೋಡುವುದರ ಭೂಮಿಕೆ. </p><p><br /></p><p>ಓದಿನ ಸುಖ ನಿಮ್ಮದೂ ಆಗಲಿ.</p><p><br /></p><p>~`ಶ್ರೀ'</p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-64837525903079992862023-06-29T22:46:00.002+05:302023-06-29T23:19:52.031+05:30ವಾತ್ಸಲ್ಯದ ವಿಳಾಸಕ್ಕೊಂದು ಪತ್ರ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgbHDAGP0LYFOws8XBXulKPHzqX4rRi37odRhrghUGHr5-Lnvb_ojQu5PCMBOlYa3UnzTSl8h5X4m7mf6VLKemOaLNQ4ldGEfFRnHqezOhkle4TL758uTpUbvzT2K_ecFbxoWa3KRA0MsNbDW-UfqtR0WUcHpljlEHF-f1knWItKKtnZArFIi3ei14G-Ro/s600/depositphotos_394933380-stock-illustration-lovely-happy-janmashtami-festival-banner.jpg" style="margin-left: 1em; margin-right: 1em;"><img border="0" data-original-height="214" data-original-width="600" height="114" src="https://blogger.googleusercontent.com/img/b/R29vZ2xl/AVvXsEgbHDAGP0LYFOws8XBXulKPHzqX4rRi37odRhrghUGHr5-Lnvb_ojQu5PCMBOlYa3UnzTSl8h5X4m7mf6VLKemOaLNQ4ldGEfFRnHqezOhkle4TL758uTpUbvzT2K_ecFbxoWa3KRA0MsNbDW-UfqtR0WUcHpljlEHF-f1knWItKKtnZArFIi3ei14G-Ro/s320/depositphotos_394933380-stock-illustration-lovely-happy-janmashtami-festival-banner.jpg" width="320" /></a></div><br /> <div>ವಾತ್ಸಲ್ಯದ ವಿಳಾಸಕ್ಕೊಂದು ಪತ್ರ<p></p><p><br /></p><p>ಸಖೀ ರಾಧೆ,</p><p><br /></p><p>ಹಿಂದೊಮ್ಮೆ ಹೀಗೇ ದಟ್ಟ ಕತ್ತಲೆಯ ಮೋಡಗಳು ಆಕಾಶದಲ್ಲಿ ಆವರಿಸಿ, ಇಡೀ ವಾತಾವರಣ ಒಂದು ಗಾಢವಾದ ಆತ್ಮೀಯತೆಯನ್ನೂ, ನಿರೀಕ್ಷೆಯನ್ನೂ, ಆಹ್ಲಾದಕತೆಯನ್ನೂ, ತಲ್ಲಣವನ್ನೂ ಕಟ್ಟಿಕೊಟ್ಟಂಥ ಸಮಯದಲ್ಲಿ, ಕೊನೆಗೆ ಕಪ್ಪೆಲ್ಲವೂ ನೀರಾಗಿ, ಭೂದೇವಿಯ ಎದೆಯೊಳಗಿಳಿದಂಥ ಸಂದರ್ಭದಲ್ಲಿ ನಿನಗೆ ಪತ್ರ ಬರೆದಿದ್ದೆ. ವರ್ಷಗಳೆರಡಾದವೀಗ, ಪತ್ರ ಬರೆಯದೇ. ಕೃಷ್ಣ ಮರೆತಿರುವನು ಅಂತ ಅಂದುಕೊಂಡಿರುತ್ತೀಯೇನೋ ಅಥವಾ ಇವನನ್ನು ನಂಬಿ ಕೂತರೆ ಕಾಯುವುದಷ್ಟೇ 'ಕಾಯ'ದ ಕೆಲಸ ಅಂತಲೂ ನಸುನಗುತ್ತೀಯೇನೋ, ಅಥವಾ ಆಗಿನ್ನೂ ಮಳೆಗಾಲ ಶುರುವಾಗಿರಲಿಲ್ಲ, ಕಪ್ಪು ಮೋಡ ಅಂತೆಲ್ಲಾ ಸುಳ್ಳು ಸುಳ್ಳೇ ಹೇಳಬೇಡ, ಬರೀ ಹೀಗೆಲ್ಲಾ ಏನೇನೋ ಹೇಳುತ್ತಲೇ ನನ್ನ ಕೋಪವನ್ನು ಬೇರೆಡೆ ಸೆಳೆಯುವುದಕ್ಕೆ ಯತ್ನಿಸಬೇಡ ಅಂತ ನೀನು ಸಿಟ್ಟಾಗುತ್ತಿಯೇನೋ ಅಂತೆಲ್ಲಾ ನಾನು ಕಲ್ಪಿಸಿಕೊಳ್ಳುವುದರಲ್ಲೇ ಎಷ್ಟು ಚೆಂದದ ಸುಖವಿದೆ ತಿಳಿದಿದೆಯಾ ನಿನಗೆ? ಹಾಗೆಯೇ, ಒಂದು ವೇಳೆ ನೀನು ಕೋಪಿಸಿಕೊಂಡರೂ, ಅದೆಷ್ಟು ಹೊತ್ತು? ಪಾಪದವನಲ್ಲವಾ ನಾನು? ಏನೋ ಹೆಚ್ಚು ಕಡಿಮೆ ಆಗುತ್ತದಲ್ಲವಾ, ಏನೋ ಸೈರಿಸಿಕೊಳ್ಳಬೇಕಪ್ಪಾ ಅಂತೆಲ್ಲಾ ಹೇಳಿ ಕಿವಿ ಹಿಡಿದುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ನಿನ್ನೆಡೆಗೆ ನೋಡುತ್ತಾ ನಿಲ್ಲುವುದು ನನಗೆ ಹೊಸದಲ್ಲ ಬಿಡು. ಕೃಷ್ಣ ಹಾಗೆ ನೋಡಿದಾಗಲೆಲ್ಲಾ ವಾತ್ಸಲ್ಯದ ತೊಟ್ಟಿಲೇ ನೀನಾಗುವುದೂ ಹೊಸದಲ್ಲ ಬಿಡು! ವಾತ್ಸಲ್ಯ ಅಂದಾಗಲೆಲ್ಲಾ ಮಮತೆ ತುಂಬಿದ ಅಮ್ಮ ಯಶೋದೆಯ ಕಣ್ಣುಗಳು ಕಣ್ಣ ಮುಂದೆ ಬರುತ್ತವೆ. ಅರಿವಿಲ್ಲದೆಯೇ ತುಟಿ ಬಿರಿಯುತ್ತದೆ, ಸಂಭ್ರಮದ ನಗೆ ಹೂವು ತಾನಾಗೇ ಅರಳುತ್ತದೆ. ಎದೆಯಲ್ಲೊಂದು ಅಲೌಕಿಕ ಸಂಭ್ರಮ ಮೊದಲಾಗುತ್ತದೆ. ಅಮ್ಮನೆಂದರೆ ಹಾಗೆಯೇ ಅಲ್ಲವಾ ರಾಧಾ.. </p><p><br /></p><p>ನನ್ನದು ಬಹಳ ಭಿನ್ನವಾದ ಪರಿಸ್ಥಿತಿಯಾಗಿತ್ತು ನೋಡು. ಕಾರಾಗೃಹದಲ್ಲಿ ಹುಟ್ಟಿ, ಹುಟ್ಟಿದ ಕೆಲವೇ ಕ್ಷಣಕ್ಕೆ ಹೆತ್ತಮ್ಮನಿಂದ ದೂರವೇ ಉಳಿಯಬೇಕಾದ ಸ್ಥಿತಿ. ಹುಟ್ಟಿದ ಮಗುವಿಗೆ ಅಮ್ಮನ ಎದೆ ಹಾಲೇ ತಾನೇ ಈ ಜಗತ್ತನ್ನು ನೋಡುವ ಶಕ್ತಿ ಕೊಡುವುದು, ಎದ್ದು ನಿಲ್ಲುವ, ನಿಲ್ಲುತ್ತಲೇ ನಡೆಯುವ, ನಡೆಯುತ್ತಲೇ ಓಡುವ, ಕುಣಿಯುವ, ನರ್ತಿಸುವ, ಸಂಭ್ರಮಿಸುವ ಚೈತನ್ಯ ಕೊಡುವುದು. ಹಸಿ ಮೈಯ ತಾಯಿ ಕಾರಾಗೃಹದಲ್ಲೇ ಉಳಿದಳು. ಬೇರ್ಪಟ್ಟ ನಾನು ಬದುಕಿಗಾಗಿ ಇನ್ನೊಬ್ಬರ ಮನೆಯನ್ನು ಆಶ್ರಯಿಸಿದೆ. ವಿಚಿತ್ರ ಅನ್ನಿಸುತ್ತದಲ್ಲವಾ? ಈ ಜಗತ್ತು ಅದನ್ನು ಮಾಯೆ ಅನ್ನುವುದೋ, ಲೀಲೆ ಅನ್ನುವುದೋ ಅದು ಜಗತ್ತಿಗೆ ಬಿಟ್ಟಿದ್ದು. ಹಾಲುಣಿಸುವುದೆಂದರೆ ಅಮ್ಮ ಯಶೋದೆಗೆ ಅದೆಂಥ ಸಂಭ್ರಮ. ನಾನು ಇಂಥ ಸಮಯ ಅಂಥ ಸಮಯ ಅಂತೆಲ್ಲಾ ಇಲ್ಲದೇ ಕೂಗುತ್ತಿದ್ದೆ. ಅಮ್ಮ ಯಶೋದೆ ಕೆಲವೊಮ್ಮೆ ಹಾಲುಣಿಸುತ್ತ ಊಟ ನಿದ್ದೆ ಮನೆಗೆಲಸ ಮರೆಯುತ್ತಿದ್ದಳು. ಕೆಲವೊಮ್ಮೆ ನನ್ನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತಲ್ಲೇ ಗೋಡೆಗೆ ಆತು ನಿದ್ದೆಹೋಗುತ್ತಿದ್ದಳು. ಆದರೆ, ನನ್ನ ಒಂದು ಮುಲುಕಾಟ ಅವಳನ್ನು ಎಚ್ಚರಾಗಿಸುತ್ತಿತ್ತು. ಕರುಳಬಂಧ ಅಮ್ಮ ದೇವಕಿಯದ್ದಾದರೂ ಆತ್ಮಬಂಧ ಅಮ್ಮ ಯಶೋದೆಯದ್ದು. ಜಗತ್ತಿನ ಹೆಣ್ಣು ಮಕ್ಕಳಿಗೆಲ್ಲಾ ಈ ತಾಯ್ತನವೆನ್ನುವುದು ತಾನಾಗಿಯೇ ಬಂದುಬಿಡುತ್ತದೆ ನೋಡು. ಯಾರೋ ಹೆತ್ತ ಮಗುವಾದರೂ ತನ್ನದೇ ಇದು ಅನ್ನುವಂತೆ ಕಾಪಿಡುವ ಹೃದಯವೇನಿದ್ದರೂ ಅದು ತಾಯಿಯದು ಮಾತ್ರ. ಹೇಳಬಹುದು ನೀನು, ಅಲ್ಲಾ ಕೃಷ್ಣ, ಅಮ್ಮ ಯಶೋದೆಗೆ ನೀನು ಅವಳ ಮಗ ಅಲ್ಲವೆಂದು ತಿಳಿದಿರಲಿಲ್ಲವಲ್ಲಾ ಅಂತ. ಅದು ನಿಜವೇ ಅದರೂ, ಗೋಕುಲದ ಗೋಪಿಕೆಯರ್ಯಾರಿಗೂ ನಾನು ಅವರ ಮಗನಾಗಿರಲಿಲ್ಲವಲ್ಲ. ಆದರೆ, ಕೃಷ್ಣನಿಗೆ ಹಸಿವಾದಾಗಲೆಲ್ಲಾ ಗೋಕುಲದ ಎಲ್ಲಾ ಗೋಪಿಕೆಯರಲ್ಲಿ ಎದೆಹಾಲು ಒಸರುತ್ತಿತ್ತು. ಬಹುಶಃ ಕಾರಾಗೃಹದಲ್ಲಿ ಅಮ್ಮ ದೇವಕಿಯ ಎದೆಯಲ್ಲೂ ಹೀಗೆ ಹಾಲು ಒಸರುತ್ತಿತ್ತೇನೋ, ಅವಳು ಪರಿತಪಿಸುತ್ತಲೇ ಸಮಸ್ತ ಸೃಷ್ಟಿಯಲ್ಲಿ ಬೇಡಿಕೊಳ್ಳುತ್ತಿದ್ದಳೇನೋ, ನನ್ನ ಕಂದನಿಗೆ ಹಾಲುಣಿಸಿ ದೈವಗಳೇ ಅಂತ ಕೈಮುಗಿದು..</p><p><br /></p><p>ಜಗದೋದ್ಧಾರಕ್ಕಾಗಿ ಅವತಾರವೆತ್ತಿದವ ನಾನಾದರೂ ಅಮ್ಮ ದೇವಕಿ ಆ ಅವತಾರಕ್ಕೊಂದು ರೂಪ ಕೊಟ್ಟಳು. ಇಂದು ಅದೇ ರೂಪವನ್ನಲ್ಲವಾ ಸೃಷ್ಟಿ ಕೊಂಡಾಡುವುದು, ಮೋಹಕವೆಂದು ಬಗೆಬಗೆಯಲ್ಲಿ ವರ್ಣಿಸುವುದು. ಮೋಹಗಳ ತೊರೆಯಿರಿ ಅಂತ ಹೇಳುವವ ನಾನಾದರೂ ಈ ವಾತ್ಸಲ್ಯವನ್ನು ತಿರಸ್ಕರಿಸಲಾರೆ. ನಾನ್ಯಾರೆಂದು ತಿಳಿಯದೆಯೇ ಅಮ್ಮ ಯಶೋದೆ ನನ್ನ ಬಾಲ್ಯವನ್ನು ನನಗೆ ಕಟ್ಟಿಕೊಟ್ಟಳು. ಮೊಸರ ಮಡಕೆಯಲ್ಲಿ ನಾನು ಕೈಹಾಕಿ ಬೆಣ್ಣೆ ಕದ್ದು ತಿಂದಾಗಲೆಲ್ಲಾ ಕಿವಿ ಹಿಂಡುತ್ತಿದ್ದಳು. ಆಮೇಲೆ, ಅವಳೇ ಬರಸೆಳೆದು ಅಪ್ಪಿ ಮುತ್ತಿಟ್ಟು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ನನ್ನ ಕಿವಿ ಹಿಂಡುವಾಗಲೆಲ್ಲಾ ಅವಳ ಕಂಗಳನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರುತ್ತಿರಲಿಲ್ಲ. ಒಮ್ಮೆ ಮಾತ್ರ ನೋಡಿದ್ದೆ, ದೊಡ್ಡ ಕಣ್ಣು ಮಾಡಿದ್ದಳು, ಆದರೆ ಕಣ್ಣೀರಿನಿಂದ ತುಂಬಿಹೋಗಿತ್ತು. ಲಾಲಿ ಹಾಡುವಾಗ ಕೂಡಾ, ಅವಳ ಮಡಿಲಲ್ಲಿ ಮಲಗಿದ್ದ ನನ್ನ ಕೆನ್ನೆಯ ಮೇಲೆ ಒಂದೆರಡು ಬಾರಿ ಬಿಸಿ ಹನಿಗಳು ಬಿದ್ದ ನೆನಪಿದೆ ನನಗೆ. ಅವಳ ಧ್ವನಿ ಕಂಪಿಸುತ್ತಿರಲಿಲ್ಲ, ಆದರೆ, ನಾನು ಮಲಗಿದೆ ಅಂತ ತಿಳಿದ ಮೇಲೆ, ಕಿವಿ ಹಿಂಡಿದ್ದಕ್ಕಾಗಿ ಬೇಸರಿಸಿಕೊಂಡು ಅಳುತ್ತಿದ್ದಳು. ನಾನು ಬೇಕಂತಲೇ ನನ್ನ ಕಣ್ಣು ತಿಕ್ಕುತ್ತಿದ್ದೆ. ತಕ್ಷಣ ಏನೂ ಆಗಿಲ್ಲವೆಂಬಂತೆ ಸಾವರಿಸಿಕೊಂಡು ನಿಧಾನಕ್ಕೆ ತಲೆತಟ್ಟುತ್ತಿದ್ದಳು. ಮಣ್ಣು ತಿಂದ ನನ್ನ ಬಾಯ್ತೆರೆಸಿದಾಗ ಬ್ರಹ್ಮಾಂಡ ಕಂಡ ಮೇಲೂ ಆಕೆ ನನ್ನ ಕಿವಿ ಹಿಂಡುವುದ ಬಿಡಲಿಲ್ಲ, ಬೆತ್ತ ಹಿಡಿದ ಅವಳನ್ನು ಗೋಕುಲದ ತುಂಬಾ ಓಡುವಂತೆ ಮಾಡುವುದನ್ನು ನಾನೂ ಬಿಡಲಿಲ್ಲ. ಆಡಿದಳು, ಹಾಡಿದಳು ಅಮ್ಮ ಯಶೋದೆ ನನ್ನ ಜೊತೆ. ಗೋಪಿಕೆಯರೂ ಕಡಿಮೆ ಇರಲಿಲ್ಲ. ಅಮ್ಮ ಯಶೋದೆಗೆ ನಾನೆಂದರೆ ಬಹಳ ಪ್ರೀತಿ. ಯಾರಾದರೂ ಪದೇ ಪದೇ ನನ್ನನ್ನು ನೋಡಿದರೆ ದೃಷ್ಟಿ ಆಗಿಬಿಡುತ್ತದೆ ಅನ್ನುವ ಆತಂಕ ಅವಳಿಗೆ. ಅದರಲ್ಲೂ ಗೋಪಿಕೆಯರು ನನ್ನನ್ನು ಎವೆಯಿಕ್ಕದೇ ನೋಡುವುದನ್ನು ಅವಳು ನೋಡಿದ್ದಳು. ಹಾಗಾಗಿ ಗೋಪಿಕೆಯರೆಲ್ಲರಿಗೂ ತಾಕೀತು ಮಾಡಿದ್ದಳು, ಯಾರೂ ಕೃಷ್ಣನನ್ನು ನೋಡುತ್ತ ನಿಲ್ಲಬಾರದು. ಅವನೇನಾದರೂ ದಾರಿಯಲ್ಲಿ ಸಿಕ್ಕರೆ ತಲೆಬಗ್ಗಿಸಿಕೊಂಡು ನಡೆಯಬೇಕು ಇತ್ಯಾದಿ ಇತ್ಯಾದಿ. ಆದರೆ, ಗೋಪಿಕೆಯರು ಅವೆಲ್ಲವನ್ನೂ ಕೇಳುವರೇ! ಬೇಕು ಬೇಕಂತಲೇ ನಾನು ಬರಲಿ ಅಂತಲೇ ಬೆಣ್ಣೆ ಮಡಕೆಗಳನ್ನು ಮೇಲೆ ಕಟ್ಟದೇ ನೆಲದ ಮೇಲೇ ಇಡುತ್ತಿದ್ದರು. ತಮ್ಮ ಗಂಡ ಮಕ್ಕಳು ಕೇಳಿದರೆ ಖಾಲಿಯಾಗಿದೆ ಅನ್ನುತ್ತಿದ್ದ ಇವರು ನನಗಂತಲೇ ಬೇರೆ ಮಡಕೆಯನ್ನು ಅಡಗಿಸಿಡುತ್ತಿದ್ದುದೂ ಉಂಟು. ಆಮೇಲೆ, ನಾನು ಬೆಣ್ಣೆ ತೆಗೆಯುವಾಗಲೆಲ್ಲಾ ಅಲ್ಲಿಯೇ ಇದ್ದರೂ ನೋಡದವರಂತೆ ಇದ್ದು, ಆಮೇಲೆ ಅಮ್ಮ ಯಶೋದೆಯ ಬಳಿಗೆ ಬಂದು ದೂರುತ್ತಿದ್ದರು. ಆಗ, ಅಮ್ಮ ಯಶೋದೆ ನನ್ನ ಕರೆದು ಎದುರಲ್ಲಿ ನಿಲ್ಲಿಸಿ ಕೇಳುವಾಗಲೆಲ್ಲಾ ತಮ್ಮ ದೂರುಗಳನ್ನು ಮರೆತು ನಗುತ್ತಾ ನಿಂತುಬಿಡುತ್ತಿದ್ದರು. ಅಮ್ಮ ಯಶೋದೆಗೆ ಗೊಂದಲ. ಕೊನೆಕೊನೆಗೆ ಅಮ್ಮ ನೀವುಂಟು ನಿಮ್ಮ ಕೃಷ್ಣನುಂಟು, ನನ್ನ ಹತ್ತಿರ ಅವನ ದೂರು ತರಬೇಡಿ ಅಂತನ್ನುವುದಕ್ಕೆ ಶುರು ಮಾಡಿದ್ದಳು. ನಿನಗಿದೆಲ್ಲಾ ಗೊತ್ತಿದೆಯಲ್ಲವಾ ರಾಧಾ? ಆತ್ಮೀಯರೊಂದಿಗೆ ಹೀಗೆ ನೆನಪುಗಳನ್ನು ಹಂಚಿಕೊಳ್ಳುವ ಸುಖಕ್ಕೆ ಬೇರೆ ಯಾವ ವ್ಯಾಖ್ಯಾನಗಳೂ ಬೇಕಿಲ್ಲ ಅಲ್ಲವಾ. ಅದರಲ್ಲೂ, ನನ್ನೆಲ್ಲಾ ನೆನಪಿನ ಪಾಲುದಾರಳು ನೀನು. ರಾಧೆಯಿಲ್ಲದ ಕೃಷ್ಣನ ನೆನಪುಗಳು ಅಪೂರ್ಣ. ಬರೀ ನೆನಪುಗಳಲ್ಲೇ ನಾವಿರುವುದು ಈಗ ಕೃಷ್ಣಾ ಅನ್ನದಿರು. ಸಮಯದ ಹಂಗು ತೊರೆದ ನದಿಗಳ ಹಾಗೆ ಈ ನೆನಪುಗಳು. ನದಿಗಳು ಬತ್ತುತ್ತವೆ, ಉಕ್ಕುತ್ತವೆ, ಕಾಣೆಯಾಗುತ್ತವೆ ಅಂತನ್ನಬೇಡ. ನದಿ ತನ್ನ ಹರಿವನ್ನು ನೆನಪಿಟ್ಟುಕೊಳ್ಳುತ್ತದೆ. ಯಾವತ್ತೋ ಒಂದು ದಿನ ಸಮಯ ಕೂಡಿಬಂದಾಗ ಮತ್ತದೇ ಹಾದಿಯಲ್ಲಿ ಅದೆಂಥದ್ದೇ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿಕೊಂಡು ಹರಿಯುತ್ತದೆ. ನನ್ನೀ ನೆನಪಿನ ನದಿಯ ಹರಿವನ್ನು ನಿರಂತರವಾಗಿಸುತ್ತಿರುವವಳು ನೀನು. ಋತು ನಾನಾದರೂ ಸ್ಪಂದಿಸುವ ಪ್ರಕೃತಿ ನೀನು. ಆತ್ಮ ನಾನಾದರೂ ಸ್ಮೃತಿ ನೀನು.. </p><p><br /></p><p>ನೆನಪು ಅಂದಾಗ ಮತ್ತೆರಡು ಘಟನೆಗಳು ಮುನ್ನೆಲೆಗೆ ಬಂದವು ನೋಡು. ನೆನಪಿದೆಯಾ ನಿನಗೆ ಪೂತನಿ ನನಗೆ ಹಾಲುಣಿಸಿದ್ದು. ಯಾವ ಅಪರಿಚಿತರಿಗೂ ನನ್ನ ಹತ್ತಿರವೂ ಹೋಗಗೊಡದ ಅಮ್ಮ ಯಶೋದೆ ಅಂದು ದಿಗ್ಭ್ರಮೆಯಿಂದ ನಿಂತುಬಿಟ್ಟಿದ್ದಳು ಪೂತನಿಯನ್ನು ನೋಡಿ. ಸೌಂದರ್ಯದ ಉಪಮೆಯೇ ಗೋಕುಲಕ್ಕೆ ಬಂದಂತೆ ಬಂದಿದ್ದಳು ಪೂತನಿ. ಬಂದವಳೇ ನಡೆದಿದ್ದು ನನ್ನ ತೊಟ್ಟಿಲ ಬಳಿಗೆ. ನಾನು ಅಂದು ಕಣ್ಣು ಪಿಳಕಿಸುತ್ತಾ ಮಲಗಿದ್ದೆ. ಎರಡೂ ಕೈಗಳಲ್ಲಿ ಎತ್ತಿಕೊಂಡಳು. ಒಮ್ಮೆ ನನ್ನ ಮುಖ ನೋಡಿದಳು; ದೊಡ್ದದಾಗಿ ನಿಟ್ಟುಸಿರು ಬಿಟ್ಟಳು. ವಿಷದ ಹಾಲಿಂದ ಕೊಲ್ಲಬೇಕೆಂದು ಅವಳಿಗೆ ಆಜ್ಞೆಯಾಗಿತ್ತು. ಸ್ತನಪಾನಕ್ಕಾಗಿ ಅವಳ ಸ್ತನಗಳನ್ನು ನನ್ನ ಬಾಯಿಯಲ್ಲಿಟ್ಟಳು. ನಾನು ಅವಳ ಪ್ರಾಣವನ್ನೂ ಹೀರಿದ್ದೆ. ಆ ಭಯಂಕರ ನೋವಿಗೆ ಅವಳ ಸೌಂದರ್ಯದ ಮಾರುವೇಷ ಬದಲಾಗಿ ರಾಕ್ಷಸಿಯ ನಿಜರೂಪದ ದೇಹ ಬಿದ್ದಿತ್ತು. ನಾನು ಅದರ ಮೇಲೆ ಆಟವಾಡುತ್ತಿದ್ದೆ. ಅಂದು ಆ ದೇಹವನ್ನು ಗೋಕುಲದಲ್ಲಿ ಬೆಂಕಿ ಹಾಕಿ ಸುಟ್ಟಾಗ ಸುಗಂಧವೊಂದು ಇಡೀ ವಾತಾವರಣವನ್ನು ವ್ಯಾಪಿಸಿತ್ತು. ಪೂತನಿ ಭವದ ಬದುಕಿಂದ ಮುಕ್ತಳಾಗಿದ್ದಳು. ಯಾಕೆ ಕೃಷ್ಣಾ, ಕೊಲ್ಲಲು ಬಂದವಳಿಗೆ ಮುಕ್ತಿ ಅಂತ ನೀನು ಪ್ರಶ್ನಿಸಬಹುದು. ನಿನಗೆ ಗೊತ್ತಾ ರಾಧಾ, ರಕ್ಕಸಿಯಾಗಿದ್ದರೂ, ಕೊಲ್ಲುವುದೇ ಉದ್ದೇಶವಾಗಿದ್ದರೂ ನನಗೆ ಎದೆ ಹಾಲು ಉಣಿಸುವ ಆ ಸಂದರ್ಭದಲ್ಲವಳು ಯಾವ ಕಲ್ಮಶಗಳೂ ಇಲ್ಲದ ತಾಯಾಗಿದ್ದಳು. ಕೊಲ್ಲುವುದ ಮರೆತಿದ್ದಳು. ತಾಯ್ತನದ ಪೂರ್ಣಭಾವವನ್ನು ಅನುಭವಿಸಿದಳು. ನಿಜವಾಗಿಯೂ ಹಾಲುಣಿಸಿದವಳು ಕೊಲ್ಲಲಾರಳು ಅನ್ನುವ ಸಂದೇಶ ಜಗತ್ತಿಗೆ ಮುಟ್ಟಬೇಕಿತ್ತಲ್ಲವಾ, ಹಾಗಾಗಿಯೇ ಅಂದು ಪೂತನಿ ತಾಯ್ತನದ ಪದವಿ ಪಡೆದಳು ಹಾಗೂ ಅದರಿಂದಾಗಿಯೇ ಅವಳ ಅಷ್ಟೂ ದಿನದ ಕ್ಲೇಶಗಳಿಂದ ಮುಕ್ತಳಾದಳು. </p><p><br /></p><p>ಅಶ್ವತ್ಥಾಮನು ಅಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುವುದಕ್ಕೆ ಹವಣಿಸಿದ್ದು ನೆನಪಿದೆಯಾ ನಿನಗೆ? ಜಗತ್ತನ್ನೇ ನೋಡಿರದ ಭ್ರೂಣವೊಂದಕ್ಕೆ ಅಸ್ತ್ರ ಪ್ರಯೋಗ ಮಾಡಬಾರದಿತ್ತು ಅಶ್ವತ್ಥಾಮ. ಆದರೆ, ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವ ದ್ವೇಷದಲ್ಲಿ ಮಹಾಗುರು ದ್ರೋಣರ ಮಗ ಅಶ್ವತ್ಥಾಮ ಧರ್ಮದ ಕಟ್ಟಳೆಗಳನ್ನು ಮೀರಿ ನಿಂತಿದ್ದ. ಒಂದು ವೇಳೆ ಆ ದಿನ ಉತ್ತರೆಯ ಗರ್ಭವೇನಾದರೂ ಬಲಿಯಾಗಿದ್ದರೆ ಇತಿಹಾಸದಲ್ಲೊಂದು ಘೋರ ಕೃತ್ಯ ದಾಖಲಾಗುತ್ತಿತ್ತು. ಹಾಗಾಗಿಯೇ ನಾನು ಆ ದಿನ ಆ ಗರ್ಭಕ್ಕೆ ರಕ್ಷಣಾಕವಚವಾಗಿ ನಿಲ್ಲಬೇಕಾಯಿತು. ಆ ದಿನ ಧರ್ಮಕ್ಕಿಂತಲೂ ಮುಖ್ಯವಾದ ಇನ್ನೇನೋ ಒಂದು ಸಂದೇಶ ಇಡೀ ಸೃಷ್ಟಿಗೆ ತಲುಪಬೇಕಿತ್ತು. ತಾಯಿಯ ಗರ್ಭವೂ ಸುರಕ್ಷಿತವಲ್ಲ ಅಂತ ತಿಳಿದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಯುಗಗಳ ತನಕ ಜೀವ ಸೃಜನೆ ಆಗುವುದಾದರೂ ಹೇಗೆ ಅಲ್ಲವಾ ರಾಧೆ? </p><p><br /></p><p>ಮಾತೃತ್ವದ ನೆನಪುಗಳನ್ನು ಮೆಲುಕು ಹಾಕುತ್ತಾ, ನೀನು ಹೇಗಿದ್ದೀಯಾ ಅಂತ ಕೇಳುವುದನ್ನೇ ಮರೆತೆ ನೋಡು ನಾನು. ಕಾಯುತ್ತಿದ್ದೀಯಾ ಅಂತ ತಿಳಿದಿದೆ. ಕಾಯುವುದು ಹೆಣ್ಣು ಜೀವಕ್ಕೆ ಹುಟ್ಟಿನಿಂದಲೇ ಬಂದ ಸಾಮರ್ಥ್ಯ ಅಂತ ನಾನು ಅಂದರೆ, ಹೌದಪ್ಪಾ, ನಿಮಗೇನು ಗಂಡಸರಿಗೆ, ಹೇಳಿಬಿಡುತ್ತೀರಿ, ಕಾಯುವುದರಲ್ಲೂ ಒಂಥರಾ ಸುಖವಿದೆ, ವಿರಹ ಹೆಚ್ಚಾದಷ್ಟೂ ಮಿಲನದ ತೀವ್ರತೆ ಹೆಚ್ಚು, ಸಂಬಂಧಗಳು ಗಟ್ಟಿಯಾಗುವುದೇ ಕಾಯುವುದರಿಂದ ಇತ್ಯಾದಿ ಇತ್ಯಾದಿ, ಅಂತೆಲ್ಲಾ ನನ್ನ ಮೇಲೆ ಹರಿಹಾಯಬೇಡ. ಜೀವವೊಂದು ಕರುಳ ಬಳ್ಳಿಗೆ ಅಂಟಿಕೊಂಡಿರುವಾಗ ಒಂಬತ್ತು ತಿಂಗಳುಗಳ ಕಾಲ ಪೊರೆದು, ಕ್ಷಣಕ್ಷಣವೂ ತನ್ನ ದೇಹದಿಂದ ಸೃಜಿಸುವ ಇನ್ನೊಂದು ಜೀವವನ್ನು ಕೈಯಲ್ಲಿ ಹಿಡಿಯುವ ಪುಳಕದಲ್ಲಿ ಕಾಯುತ್ತಾಳಲ್ಲವಾ ತಾಯಿ ಅನ್ನುವ ಕಾರಣಕ್ಕೆ ನಾನು ಹಾಗೆ ಹೇಳಿದೆನಷ್ಟೇ. ಕಾಯುವುದೂ ಸಂಭ್ರಮವಾಗಬಲ್ಲದು, ಮಗು ಒದೆಯುವುದೂ ನಗೆ ಚೆಲ್ಲಬಲ್ಲದು ಅನ್ನುವುದನ್ನು ತಾಯಲ್ಲದೇ ಇನ್ನಾರು ತೋರಿಸಲು ಸಾಧ್ಯ! </p><p><br /></p><p>ರಾಧೇ, ಬೃಂದಾವನದ ಗೋಮಾತೆಯರು ಹೇಗಿದ್ದಾರೆ ಈಗ? ನನಗೆ ಬಿರುಬಿಸಿಲಲ್ಲಿ ನೆರಳನ್ನಿತ್ತ ವೃಕ್ಷಗಳು ಹೇಗಿದ್ದಾವೆ? ನಾವು ಕಾಲುಬಿಟ್ಟು ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದ ಹಳ್ಳಕೊಳ್ಳಗಳು ಹೇಗಿದ್ದಾವೆ? ನನಗೆ ಮತ್ತೆ ನಿನ್ನ ಜೊತೆ ಕೂತು ಮಡಕೆಗಳ ಮೇಲೆಲ್ಲಾ ಚಿತ್ತಾರ ಬರೆಯಬೇಕು. ಕಪಿಲೆ ಗಂಗೆಯರ ಮೈಮೇಲೆ ವೃತ್ತಾಕಾರದ ಚಿತ್ರಗಳನ್ನು ಬಿಡಿಸಬೇಕು, ಝರಿಯ ಹತ್ತಿರ ಅವುಗಳ ಮೈತೊಳೆಸಬೇಕು, ಕೋಗಿಲೆ, ನವಿಲುಗಳ ಜೊತೆ ಕೊಳಲೂದುತ್ತಾ ಸ್ಪರ್ಧಿಸಬೇಕು, ಆಗಷ್ಟೇ ಮಿಂದುಬಂದ ನಿನ್ನ ಹೆರಳ ಒದ್ದೆ ಪರಿಮಳವನ್ನು ಆಘ್ರಾಣಿಸಬೇಕು, ಧೂಪದ ಗಂಧದ ಗಾಳಿಯಲ್ಲಿ ಸಂಜೆಯ ಉದ್ಯಾನದ ತುಂಬಾ ನಿನ್ನ ಜೊತೆ ಸೇರಿ ಹಣತೆಗಳನ್ನಿಡಬೇಕು. ಗಾಳಿಗೆ ಆರಿ ಹೋಗದ ಹಾಗೆ, ನಿನ್ನ ಹಿಂದಿನಿಂದ ನಿನ್ನ ಕೈಗಳೊಂದಿಗೆ ನನ್ನ ಕೈಗಳನ್ನು ಕೂಡಿಸಬೇಕು, ನಿನ್ನ ಸೊಂಟದಿಂದ ತುಸು ದೂರದಲ್ಲಿಯೇ ನನ್ನ ಕೈಗಳು ಹಾದುಹೋಗುವಾಗ ನಿನ್ನ ಕಿಬ್ಬೊಟ್ಟೆಯ ಪಕ್ಕ ಕಂಪಿಸುವುದ ನೋಡಬೇಕು, ಬಿದಿಗೆ ಚಂದ್ರನ ಬೆಳಕಲ್ಲಿ ನಿನ್ನ ನಾಚಿಕೆಯನ್ನು ಅಳೆಯಬೇಕು, ಮತ್ತೆ ಬೆಳಿಗ್ಗೆ ನದಿ ದಡದಲ್ಲಿ ನೀನು ಒಗೆದುಕೊಟ್ಟ ಬಟ್ಟೆಯನ್ನೆಲ್ಲಾ ಹಿಂಡುತ್ತಾ ಒಣಗಿಸುವುದಕ್ಕೆ ಅಣಿಯಾಗಬೇಕು, ಯಮುನೆಯ ದಡದಗುಂಟ ನಡೆದರೆ ಒಂದು ಕಾಡಿದೆಯಲ್ಲಾ, ಅಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ನಾವಿಬ್ಬರೇ ಕೂತು ತೂಗಬೇಕು, ಅದೆಷ್ಟೋ ಮಧ್ಯಾಹ್ನಗಳ ನೀರವತೆಯಲ್ಲಿ ನಿನ್ನ ಮುಂಗುರುಳುಗಳ ಜೊತೆ ಆಟವಾಡಬೇಕು, ಕಣ್ಣುಮುಚ್ಚಾಲೆಯಾಡುವಾಗಲೆಲ್ಲಾ ನೀನೆಲ್ಲಿದ್ದೀಯ ಅಂತ ಗೊತ್ತಿದ್ದರೂ ಗೊತ್ತಿಲ್ಲದವರ ಹಾಗೆ ಊರ ತುಂಬಾ ಹುಡುಕಾಡಬೇಕು, ಅಶ್ವತ್ಥ ಎಲೆಗಳ ಮೇಲೆ ನಿನ್ನ ಹೆಸರನ್ನು ಬರೆದು ನದಿಯಲ್ಲಿ ತೇಲಿಬಿಡಬೇಕು, ರಾಧೇ.. ಅಂಥ ದಿನಗಳಿಗಾಗಿ ಕೃಷ್ಣನೂ ಕಾಯುತ್ತಿದ್ದಾನೆ ಅನ್ನುವುದು ತಿಳಿದಿದೆಯಲ್ಲವಾ ನಿನಗೆ?</p><p><br /></p><p>ನೀನು ಬೆಳಿಗ್ಗೆಯೇ ಎದ್ದು ಹಾಕುವ ರಂಗೋಲಿಯಲ್ಲಿ ಪ್ರತಿದಿನವೂ ಎರಡು ಚುಕ್ಕಿಗಳನ್ನು ಹಾಗೆಯೇ ಬಿಟ್ಟಿರು, ಒಂದು ಮುಂಜಾನೆ ಹಿಮದ ದಪ್ಪ ಪದರಗಳು ತುಂಬಿಕೊಂಡ ಹಾದಿಯಲ್ಲಿ ಕೋಮಲ ಪಾದಗಳು ನಡೆದುಬರುತ್ತವೆ. ಅಪೂರ್ಣ ಕತೆಗಳನ್ನು ಇನ್ನಷ್ಟು ಮುಂದುವರೆಸುವ ನನ್ನ ಇಂಗಿತವನ್ನು ಇನ್ನಷ್ಟು ವರುಷಗಳ ಕಾಲ ನಾವು ಒಯ್ಯಲೇಬೇಕು. ಕೃಷ್ಣ ಬರುತ್ತಾನೆ, ಅಂದು ಬೃಂದಾವನದ ಆಕಳ ಕೊರಳ ಗಂಟೆಗಳು ತಾವಾಗಿಯೇ ತೂಗುತ್ತವೆ, ಕೊಟ್ಟಿಗೆಯಿಂದಾಚೆ ಬಂದು ಅವೆಲ್ಲವೂ ಗುಂಪುಗಟ್ಟಿ ನಿಲ್ಲುತ್ತವೆ. ಕಡೆದಂತೆಲ್ಲಾ ತುಂಬಿಸಲಿಕ್ಕೆ ಮಡಕೆಗಳು ಸಾಕಾಗದಷ್ಟು ಬೆಣ್ಣೆ ಬೆಳೆಯುತ್ತದೆ, ಹಿಂದಿನ ದಿನ ಸಂಜೆ ನೀ ಮಲಗುವ ಕೋಣೆಗೆ ಎಲ್ಲಿಂದಲೋ ನವಿಲುಗರಿಯೊಂದು ಹಾರಿ ಬಂದು ಬೀಳುತ್ತದೆ, ರಾತ್ರಿ ಪೂರ ಚಕ್ರವಾಕ ಕೂಗುತ್ತದೆ, ಬೆಳದಿಂಗಳ ಮೃದು ಕಿರಣಗಳು ಕಿಟಕಿಗಳನ್ನು ದಾಟಿ ನಿನ್ನ ಹೊಕ್ಕುಳನ್ನು ಹೊಕ್ಕುತ್ತವೆ. ನಾ ಬರುವ ದಿನ ನೀ ಹೊದ್ದ ಸೆರಗು ಪದೇ ಪದೇ ಜಾರುತ್ತದೆ, ನಿನಗೆ ಇದ್ದಕ್ಕಿದ್ದ ಹಾಗೆ ಕಾಲ್ಗೆಜ್ಜೆಯ ನೆನಪಾಗುತ್ತದೆ.. ಅದೆಷ್ಟೋ ವರುಷಗಳ ಧೂಳನ್ನು ಕೊಡವುವ ಹಾಗೆ ಗಾಳಿ ಬೀಸಿ ಆಮೇಲೆ ತಂಗಾಳಿಯು ಊರ ತುಂಬಾ ಹಬ್ಬುತ್ತದೆ, ಕೊಳಲು ಹಿಡಿದು ಊರ ಹೊಸಲಲ್ಲಿ ಇದಿರುಗೊಳ್ಳುತ್ತೀಯಲ್ಲವಾ ರಾಧೆ?</p><p><br /></p><p>ಇಂತಿ ನಿನ್ನ </p><p>ಗೊಲ್ಲ</p><p><br /></p><p>~`ಶ್ರೀ'</p><p> ತಲಗೇರಿ</p></div>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-17116468852013673302023-02-11T18:40:00.000+05:302023-02-11T18:40:11.243+05:30ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... <p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjtpi5Eu9T8o6AdD3lpNfsrrHExdVS6OwJzQ1D6keexr6UProCnue2oOyrQ_5qzAKVylJDyg_jUdPbGTjeVKit41jR-JIhyhzu0S3cUiw7ajRH28G_wQZugSwlTAhT5Y-9c0GT49VFW6vFgkAn43IsbMyDWfDbUKtbwmIr-YDDZKEs2M5q8ocdtGmn8/s615/8664.jpg" imageanchor="1" style="margin-left: 1em; margin-right: 1em;"><img border="0" data-original-height="615" data-original-width="415" height="320" src="https://blogger.googleusercontent.com/img/b/R29vZ2xl/AVvXsEjtpi5Eu9T8o6AdD3lpNfsrrHExdVS6OwJzQ1D6keexr6UProCnue2oOyrQ_5qzAKVylJDyg_jUdPbGTjeVKit41jR-JIhyhzu0S3cUiw7ajRH28G_wQZugSwlTAhT5Y-9c0GT49VFW6vFgkAn43IsbMyDWfDbUKtbwmIr-YDDZKEs2M5q8ocdtGmn8/s320/8664.jpg" width="216" /></a></div><div class="separator" style="clear: both; text-align: center;"><br /></div><p></p><div class="separator" style="clear: both; text-align: center;"><div class="separator" style="clear: both;">ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... </div><div class="separator" style="clear: both;"><br /></div><div class="separator" style="clear: both; text-align: justify;">ಅಲೆಮಾರಿ ಮನುಷ್ಯ ಒಂದು ಕಡೆ ನೆಲೆ ನಿಂತ ಅನ್ನುವುದು ನಾಗರಿಕತೆಯ ಶುರುವಾದರೂ, ನೆಲೆ ನಿಂತ ಮನುಷ್ಯ ಮತ್ತೆ ಅಲೆಮಾರಿತನದ ಕನಸಿನೊಂದಿಗೆ ಬದುಕತೊಡಗಿದ. ಒಂದು ಊರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊನೆಗೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವುದೂ ಮನುಷ್ಯನ ಅಲೆಮಾರಿತನದ ಭಾಗವೇ ಆಗಿಹೋಗಿದೆ. ಉದ್ಯೋಗ, ಬದುಕಿನ ಗುಣಮಟ್ಟದ ಉನ್ನತಿಗಾಗಿ, ಬೇರೆ ಬೇರೆ ಜಾಗ, ಜನ ಜೀವನ, ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ, ಓದಿಗಾಗಿ, ನೆಮ್ಮದಿಗಾಗಿ ಹೀಗೆ ಹತ್ತು ಹಲವು ಕಾರಣಗಳೇ ನೆಪವಾಗಿ ಅಲೆದಾಟ ನಾಗರಿಕತೆಯ ಭಾಗವೂ ಆಯಿತು. ಕೆಲವೊಮ್ಮೆ ತಾವಿರುವ ಜಾಗದಲ್ಲಿ ತಮಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂದು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ತಾವಿರುವ ಕಡೆಯಲ್ಲಿ ಮನ್ನಣೆ ದೊರೆತು, ಮನ್ನಣೆಯ ಮುಂದುವರಿದ ಭಾಗವಾಗಿಯೇ ವಿದೇಶಕ್ಕೆ ಹೋಗುವವರು. ಇನ್ನು ಕೆಲವರು, ನೀರ ಹರಿವಿಗೆ ಅನುಗುಣವಾಗಿ ನೀರಲ್ಲಿ ಉದುರಿದ ಎಲೆಗಳು ಸಾಗುವ ಹಾಗೆ. ಅವಕಾಶಗಳು ಎಲ್ಲೆಲ್ಲಿ ಕರೆದೊಯ್ಯುತ್ತವೆಯೋ ಅಲ್ಲೆಲ್ಲಾ ಹೋಗುತ್ತಾರೆ. ಈ ಪಾತ್ರದಲ್ಲಿ ಬರುವ ದಂಪತಿಗಳ ಕತೆಯೂ ಹೆಚ್ಚೂ ಕಡಿಮೆ ನೀರ ಹರಿವಿನೊಂದಿಗೆ ಸಾಗುವ ಎಲೆಗಳ ಹಾಗೆಯೇ. ಆದರೆ, ಇದು ಬರೀ ಅಸಹಾಯಕತೆಯಲ್ಲ, ಹರಿವಿನೊಂದಿಗೆ ಈಜು ಕಲಿತು, ಆಮೇಲೆ ಅದರ ವಿರುದ್ಧ ಈಜುವ ಪ್ರಕ್ರಿಯೆಯ ಭಾಗವೂ ಆಗಿರಬಹುದೇನೋ ಅನ್ನುವ ಹಾಗೆ! ಅಂದ ಹಾಗೆ, ಕಾದಂಬರಿಯ ಹೆಸರು 'ದ್ವೀಪವ ಬಯಸಿ', ಬರೆದವರು ಎಂ ಆರ್ ದತ್ತಾತ್ರಿ ಅವರು.</div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಕಾರ್ಪೊರೇಟ್ ಜಗತ್ತು ಅಂದ ತಕ್ಷಣ ಒಂದಷ್ಟು ಅದೇ ಹಳಸಲು ರೂಪಕಗಳು, ಈಗಾಗಲೇ ತಿಕ್ಕಿ ತಿಕ್ಕಿ ಬರೆದು ಬರೆದು ತೆಳುವಾದ ಅಭಿವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ, ಈ ಕಾದಂಬರಿ ಭಿನ್ನವಾಗುವುದೇ ಇಲ್ಲಿ. ಇದು ಕಾರ್ಪೊರೇಟಿನ ಕತೆಯಾದರೂ, ಅದೊಂದು ದ್ವೀಪವಷ್ಟೇ; ಅಂಥದ್ದೇ ಇನ್ನೂ ಹಲವು ದ್ವೀಪಗಳಿವೆ ಇಲ್ಲಿ! ಕಾರ್ಪೊರೇಟಿನ ಯಾವತ್ತಿನ ಸಂಗತಿಗಳ ಜೊತೆಜೊತೆಗೆ ಇಲ್ಲಿ ಮನುಷ್ಯರ ಕತೆಗಳಿವೆ. ಮನುಷ್ಯರ ಸಂಬಂಧಗಳ, ಮನೋವ್ಯಾಪಾರಗಳ ಕತೆಗಳಿವೆ. ವೀಕೆಂಡು, ಬಾಸಿಗೆ ಬೈಗುಳ ಇಷ್ಟಕ್ಕೇ ಸೀಮಿತವಾಗದೇ, ಕಾರ್ಪೊರೇಟಿನ ಒಳಸುಳಿಗಳೂ ಕೆಲವಷ್ಟಿವೆ. ಒಂದು ಸಂಗತಿಯನ್ನು ಕಾರ್ಪೊರೇಟ್ ಅಥವಾ ರಾಜಕೀಯ ಹೇಗೆ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಮುಂದಿಡುತ್ತದೆ ಹಾಗೂ ಅದನ್ನು ನಂಬಿಸುವಲ್ಲಿ ಸಫಲವಾಗುತ್ತದೆ ಅನ್ನುವುದನ್ನು ಹೇಳುವುದರ ಜೊತೆಜೊತೆಗೆ, ಇಲ್ಲಿ ಹುಡುಕಾಟದ ಕತೆಯಿದೆ. ಜಗತ್ತು ಒಂದೇ ಆದರೂ, ಅಲ್ಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಪ್ರತಿ ದ್ವೀಪವನ್ನು ತಲುಪುವುದಕ್ಕೂ ಬೇರೆ ಬೇರೆಯದೇ ದಾರಿ. ಪ್ರತಿ ದ್ವೀಪದ ಒಳ ಪ್ರಪಂಚ ಬೇರೆ ಬೇರೆ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ನಮಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಒಂದು ಹಂತದವರೆಗೆ ದೇಹ ಸೌಂದರ್ಯವನ್ನೂ ನೋಡಿ ಮದುವೆಯಾದವರಿಗೆ ವರುಷಗಳು ಉರುಳಿದ ಹಾಗೆ, ಅದು ದೇಹಕ್ಕಿಂತಲೂ ಮನಸ್ಸುಗಳ ಬೆಸುಗೆಯಾಗಿ ಸಂಬಂಧ ಗಟ್ಟಿಯಾಗುತ್ತ ಹೋಗುತ್ತದೆ. ದೇಹ ಒಂದು ಸಾಧನವಷ್ಟೇ, ಬಂಧ ಇರುವುದು ಮನಸ್ಸುಗಳ ಸಂಬಂಧದಲ್ಲಿ. ಬಹುಶಃ ಈ ಮಾತು ಮತ್ತು ಮೌನಗಳ ಸಂಗತಿಯೂ ಹೀಗೇ ಇರಬಹುದು ಅನಿಸುತ್ತದೆ. ಮಾತು, ಸಂವಹನದ ಮಾಧ್ಯಮವೇ ಆದರೂ ಮೌನದ ಸಾನ್ನಿಧ್ಯವನ್ನು ಹಾಗೂ ಅದರ ಅಗತ್ಯವನ್ನು ಗುರುತಿಸಲಾರದವರು ಮಾತಿನ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರೇನೋ ಅನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಸಾಲಿದೆ; "ನಮ್ಮ ನಮ್ಮ ಮೌನ ಭಾಷೆಯನ್ನು ಕೇಳಬಲ್ಲ ಮತ್ತೊಂದು ಜೀವವನ್ನು ಗುರುತಿಸಿಕೊಟ್ಟಿತ್ತು". ಸಂಗಾತಿಯಾಗುವುದೆಂದರೆ ಮಾತುಗಳನ್ನು ಕೇಳುವುದಷ್ಟೇ ಅಲ್ಲ, ಮೌನವನ್ನು ಆಲಿಸುವುದು ಕೂಡಾ ಬಹುಮುಖ್ಯ, ಮುಂದೊಂದು ದಿನ ಬದುಕಿನ ಮಹತ್ವದ ನಿರ್ಧಾರಗಳಿಗೆ ಬೆನ್ನೆಲುಬಾಗುವುದು ಈ ಮೌನ ಭಾಷೆಗಳ ನಡುವಿನ ಸಂವಹನ ಅನ್ನುವುದು ಒಂದು ವಿಸ್ಮಯಕಾರಿ ವಿಷಯ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಫೋಟೋಗಳ ಪ್ರಪಂಚ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಪಂಚ. ಒಂದೊಂದು ಥರದ ಫೋಟೋಗಳು ಒಬ್ಬೊಬ್ಬರಿಗೆ ಇಷ್ಟವಾಗುತ್ತವೆ. ಆದರೆ, ಎಲ್ಲದರಲ್ಲೂ ಒಂದು ಸಾಮಾನ್ಯ ಸಂಗತಿಯೆಂದರೆ, ಆ ಫೋಟೋ ಇಷ್ಟವಾಗುವುದರ ಅಥವಾ ಅದು ಆತ್ಮೀಯವಾಗುವುದರ ಹಿಂದೆ ಯಾವುದೋ ಒಂದು ಕತೆಯಿರುತ್ತದೆ. ಅದು ನಮ್ಮ ಹಿನ್ನೆಲೆಯೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ನಾವು ಬದುಕಿದ ಪರಿಸರ ಅಥವಾ ನಮ್ಮ ಕನಸಿನ ಪರಿಸರ, ನಮ್ಮ ಜೀವನದ ಎಷ್ಟೋ ಘಟನೆಗಳು ಹಾಗೂ ಅದರ ಸುತ್ತಲೂ ಹಬ್ಬಿಕೊಂಡ ನಮ್ಮ ಭಾವಗಳು, ನಾವು ಇಷ್ಟಪಡುವ ಅಥವಾ ಹೆಚ್ಚಾಗಿ ಹಚ್ಚಿಕೊಂಡ ವ್ಯಕ್ತಿಗಳು ಹೀಗೆ ಹಲವು ಕಾರಣಗಳು ಒಂದು ಫೋಟೋವನ್ನು ನಮಗೆ ಹತ್ತಿರವಾಗಿಸುತ್ತವೆ. ಕೆಲವೊಮ್ಮೆ 'ಇಷ್ಟ'ದ ಫೋಟೋ ಅನ್ನುವುದಕ್ಕಿಂತ ಅದನ್ನು 'ಕಾಡಿದಂಥ' ಫೋಟೋ ಅಂತಲೂ ಅನ್ನಬಹುದು. ಒಂದು ಫೋಟೋ ಅದ್ಯಾಕೆ ನಮ್ಮೊಂದಿಗೆ ತಳುಕು ಹಾಕಿಕೊಳ್ಳುತ್ತದೆ ಅನ್ನುವುದಕ್ಕೆ ಒಂದು ಸಂದರ್ಭ ಇದೆ ಈ ಕಾದಂಬರಿಯಲ್ಲಿ. ಅಲ್ಲಿ ಬರುವ ಮಾತುಗಳು ಹೆಚ್ಚೂ ಕಡಿಮೆ ಸ್ಟೀಫನ್ ಶೋರ್ (stephen shore) ಅವರ ಮಾತುಗಳನ್ನು ನೆನಪಿಸಿತು. ಮಜದ ಸಂಗತಿಯೆಂದರೆ ಈ ಕಾದಂಬರಿಯಲ್ಲಿ ಬರುವ ಈ ಸಂದರ್ಭವನ್ನು ಓದಿದ್ದು ಮತ್ತು ಸ್ಟೀಫನ್ ಅವರ ಸಾಲುಗಳನ್ನು ಓದಿದ್ದು ಒಂದೇ ದಿನ! ಸ್ಟೀಫನ್ ಅವರ ಸಾಲುಗಳು ಹೀಗಿವೆ: "The context in which a photograph is seen affects the meaning the viewer draws from it" - ಯಾವ ಸಂದರ್ಭದಲ್ಲಿ ಒಂದು ಫೋಟೋ ನೋಡಲ್ಪಟ್ಟಿತು ಅನ್ನುವುದು, ಅದನ್ನು ಅರ್ಥೈಸಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಮನುಷ್ಯ ಲೋಕವೇ ಒಂದು ವಿಸ್ಮಯದ ಲೋಕ. ಇಲ್ಲಿ ಯಾವ ವ್ಯಕ್ತಿಯನ್ನಾದರೂ ನಾವು ಎಷ್ಟು ಅರ್ಥೈಸಿಕೊಂಡಿದ್ದೇವೆ ಅಂದುಕೊಂಡರೂ, ಯಾವತ್ತೋ ನಮಗೆ ಗೊತ್ತಿಲ್ಲದ ಯಾವುದೋ ಹೊಸ ಗುಣದೊಂದಿಗೆ, ಹೊಸ ಅಂಶದೊಂದಿಗೆ ನಮ್ಮೆದುರು ಬರುತ್ತಾರೆ. ವ್ಯಕ್ತಿಯನ್ನು ಅರಿತುಕೊಂಡಷ್ಟೂ, ಅರಿಯದೇ ಹೋದದ್ದು ಬಹಳಷ್ಟಿದೆ ಅನ್ನುವುದರ ಅರಿವಾದರೆ, ಬಹುಶಃ ಬದುಕು ಇನ್ನಷ್ಟು ಸಲೀಸಾದೀತೇನೋ. ಮೊದಮೊದಲಿಗೆ ಇಬ್ಬರು ವ್ಯಕ್ತಿಗಳು ಪರಿಚಿತರಾದಾಗ, ಇಬ್ಬರಿಗೂ ಮಾತಾಡುವುದಕ್ಕೆ ಬಹಳಷ್ಟಿರುತ್ತದೆ. ಕಾರಣ, ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕುತೂಹಲ. ಆದರೆ, ಒಂದೆರಡು ವರ್ಷಗಳ ನಂತರವೂ ಆ ಬಾಂಧವ್ಯ, ಆ ಮಾತುಕತೆಗಳು ಹಾಗೆಯೇ ಇದ್ದರೆ, ಅದನ್ನು ಖಂಡಿತವಾಗಿಯೂ ವಿಶೇಷ ಸಂಬಂಧವೆಂದೇ ಪರಿಗಣಿಸಬಹುದೇನೋ. ಕುತೂಹಲ ತಣಿದ ಮೇಲೆ ಮನುಷ್ಯರಿಗೆ ಆಸಕ್ತಿ ಕಡಿಮೆಯಾಗುವುದು ಸಹಜ ಗುಣ. ಹಾಗಾಗಿಯೇ ಹಲವು ಸಂಬಂಧಗಳು ಒಂದೆರಡು ವರ್ಷಗಳ ನಂತರ ಸಡಿಲವಾಗುತ್ತವೆ. ಮಾತುಕತೆಗಳು ನಿಲ್ಲುತ್ತವೆ. "ಪ್ರತಿ ವ್ಯಕ್ತಿಯೊಂದಿಗೂ ನಾವು ಗುರುತಿಸಿ ಪದಗಳಿಗೆ ರೂಪಾಂತರಿಸಬಲ್ಲ ಚಹರೆಗಳು ಒಂದಿಷ್ಟಿದ್ದರೆ ಅವ್ಯಕ್ತವಾಗಿ ಹೊರಹೊಮ್ಮುವ ಚಹರೆಗಳು ಸಾವಿರವಿರುತ್ತವೆ" ಅಂತ ಲೇಖಕರು ಒಂದು ಕಡೆ ಹೇಳಿದ್ದಾರೆ.</div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಜಾಗತಿಕವಾದ ಅಥವಾ ವಿಶ್ವಾತ್ಮಕವಾದ ಸತ್ಯ ಒಂದೇ ಇರುವುದು ಅನ್ನುವುದು ನಿಜವಾದರೂ, ಆ ಕ್ಷಣದ ಸತ್ಯಗಳು ಹಲವು. ಯಾವ ಪರಿಸರದಲ್ಲಿ, ಯಾವ ಸಂದರ್ಭದಲ್ಲಿ ನಾವು ಒಂದು ಸಂಗತಿಯನ್ನು ನೋಡುತ್ತೇವೆಯೋ ಅದಕ್ಕೆ ಅನುಗುಣವಾಗಿ ನಾವು ಅರ್ಥಗಳನ್ನು ಹುಡುಕಿಕೊಳ್ಳುತ್ತೇವೆ. ಎಲ್ಲವೂ ಸತ್ಯದ ಒಂದೊಂದು ಭಾಗವಾಗಿರುತ್ತವೆಯೇ ಹೊರತೂ 'ಪೂರ್ಣ ಸತ್ಯ'ವಾಗಿರುವುದಿಲ್ಲ. ಹಾಗೆ, ಪೂರ್ಣ ಸತ್ಯ ಅರಿವಾಗಬೇಕಾದರೆ, ಎಲ್ಲಾ ಕೋನಗಳಿಂದಲೂ ಆ ಸತ್ಯದ ನೋಟ ಸಿಗಬೇಕು. ಹಾಗಾಗಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಸತ್ಯ ಬದಲಾಗುತ್ತದೆ. ನಿಜ ಹೇಳಬೇಕೆಂದರೆ, ಅದು ಸತ್ಯ ಬದಲಾಗುವುದಲ್ಲ. ಆದರೆ, ಸತ್ಯದ ತುಣುಕುಗಳಷ್ಟೇ ದಕ್ಕುವುದು. ಅದೇ ಅವರವರ ಪಾಲಿನ ಸತ್ಯ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಲೈಫ್ ಆಫ್ ಪೈ' ( Life of Pi ) ಪುಸ್ತಕ ಹಾಗೂ ಸಿನೆಮಾದಲ್ಲಿ ಒಂದು ಮಾತಿದೆ. "I suppose in the end, the whole of life becomes an act of letting go, but what always hurts the most is not taking a moment to say goodbye" - ಕೊನೆಯಲ್ಲಿ, ಇಡೀ ಬದುಕು ಬೀಳ್ಕೊಡುಗೆಯ ಒಂದು ಪ್ರಕ್ರಿಯೆಯೇ ಆಗಿಹೋಗುತ್ತದೆ. ಆದರೆ, ನೋವು ಕೊಡುವ ಸಂಗತಿಯೆಂದರೆ, ಹಾಗೆ ಬೀಳ್ಕೊಡುವಾಗ, ಒಂದು ಸರಿಯಾದ ವಿದಾಯವನ್ನು ಹೇಳಲಿಕ್ಕೆ ಒಂದು ಕ್ಷಣವನ್ನು ಕೂಡಾ ತೆಗೆದುಕೊಳ್ಳದೇ ಹೋಗುವುದು. ಬಹುಶಃ ಎಲ್ಲ ನಿರ್ಗಮನಗಳೂ ಹಾಗೆಯೇ. ಎಲ್ಲಿಯೇ ಹೋದರೂ, ನಿರ್ಗಮನದ ದಿನ ಭಾವುಕತೆ ಜಾಸ್ತಿ. ಅದರಲ್ಲೂ ಅಲ್ಲಿನ ಜಾಗ, ಮನುಷ್ಯರು, ಸಂಸ್ಕೃತಿ ಇತ್ಯಾದಿಗಳು ಇಷ್ಟವಾದರಂತೂ ಮುಗಿಯಿತು. ತುಸು ಹೆಚ್ಚೇ ಮನಸ್ಸು ಚಡಪಡಿಸುತ್ತದೆ. ಹಾಗಿರುವಾಗ, ಈ 'ಕೊನೆಯ ದಿನ' ಅನ್ನುವುದು ಬಹಳಷ್ಟನ್ನು ಹೇಳುತ್ತದೆ ಕೂಡಾ. ಜಪಾನಿನಲ್ಲಿ ಒಂದು ಸಂಸ್ಕೃತಿಯಿದೆ. ಸತ್ತಮೇಲೆ ದೇಹವನ್ನು ಶುಚಿಯಾಗಿಸಿ, ಅಲಂಕರಿಸಿ ತಯಾರು ಮಾಡಲಾಗುತ್ತದೆ. ನಮ್ಮಲ್ಲಿನ ಭಾರತೀಯ ಸಂಸ್ಕೃತಿಯಲ್ಲೂ ಹೀಗೆಯೇ ದೇಹವನ್ನು ಶುದ್ಧೀಕರಿಸುವ ಆಚರಣೆಯಿದೆ. ಯಾಕೆಂದರೆ, ಯಾವತ್ತಿಗೂ "ಒಂದು ಗೌರವಯುತವಾದ ಬೀಳ್ಕೊಡುಗೆ ಬೇಕು". </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ನಮಗೆಲ್ಲಾ ಅದೆಷ್ಟೋ ಸಲ ಅನಿಸಿದ್ದಿದೆ. ಬಹುಶಃ ಪ್ರತಿದಿನವೂ ಅನಿಸುತ್ತದೆ. ನಮ್ಮೆಲ್ಲರ ಬದುಕು ಯಾಕಿಷ್ಟು ವಿಚಿತ್ರ. ಪ್ರತಿಯೊಬ್ಬರೂ ಅವರವರ ಆರ್ಥಿಕ ಮಟ್ಟಕ್ಕಿಂತ ಮೇಲಿನವರನ್ನು ನೋಡಿ, " ಅವರಿಗೇನು, ಸುಖದ ಸುಪ್ಪೊತ್ತಿಗೆ" ಅಂತಲೇ ಅನ್ನುವುದು. ಆದರೆ, ಪ್ರತಿಯೊಬ್ಬರಿಗೂ ಅವರವರ ಕಷ್ಟಗಳು ಇರುವಂಥದ್ದೇ. "ಜೀವನ ಯಾಕಿಷ್ಟು ಸಂಕೀರ್ಣವಾಗಬೇಕು. ನೂರು ಕಷ್ಟಗಳನ್ನು ಅನುಭವಿಸಿಯೂ ಒಂದು ಸುಖ ಕಾಣದಿದ್ದರೆ, ಅಂತಹ ಜೀವನವನ್ನು ಮುಂದುವರೆಸುವುದರಲ್ಲಿ ಯಾವ ಅರ್ಥವಿದೆ" ಅನ್ನುವ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮೆಲ್ಲರಲ್ಲಿಯೂ ಹುಟ್ಟಿರುವಂಥದ್ದೇ. ಹಾಗೆಯೇ, ಅದಕ್ಕೆ ಬೇಕಾದ ಸಮಜಾಯಿಷಿಗಳನ್ನೂ ನಮ್ಮ ಬದುಕೇ ಒದಗಿಸಿಕೊಡುತ್ತದೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಪ್ರಶ್ನೆಗೆ ಸರಿಯಾದ 'ತಿಳಿವಳಿಕೆ'ಯನ್ನು ನಮ್ಮ ಬದುಕೇ ನಮ್ಮಲ್ಲಿ ಬಿತ್ತುತ್ತದೆ. ಪ್ರತೀ ಬದುಕಿಗೂ ಅದರದ್ದೇ ಆದ ಮಹತ್ವವಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕು, ಜಗತ್ತಿನ ಇನ್ನೊಂದು ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕಿನ ಮೇಲೆ ಹೇಗೆ ಪರಿಣಾಮ ಬೀರೋದಕ್ಕೆ ಸಾಧ್ಯ ಅಂತನ್ನುವುದು ವಿಚಿತ್ರ ಕುತೂಹಲವಾದರೂ, ಒಂದು ಮನೆಯಲ್ಲಿರುವ ಪ್ರತಿ ವ್ಯಕ್ತಿಯ ನಡೆಯೂ, ಅದೇ ಕುಟುಂಬದ ಇನ್ನೊಂದು ವ್ಯಕ್ತಿಯ ನಡೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಂತ ಹೇಳಲಾದೀತೇ, ಇಲ್ಲ ತಾನೇ? ಜಗತ್ತೇ ಒಂದು ಕುಟುಂಬ ಕಾಲದ ಸೂರಿನ ಕೆಳಗೆ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಈ ಕಾದಂಬರಿಯಲ್ಲಿ, ಒಂದು ಬಹುಮುಖ್ಯವಾದ ಹಾಗೂ ಬಹುತೇಕರು ಗುರುತಿಸುವ ಸಂಗತಿಯೆಂದರೆ ನಮ್ಮಲ್ಲಿನ ಒಳ ಹೊರ ಎರಡು ವೃತ್ತಗಳ ಕುರಿತಾಗಿ ಮತ್ತು ಭಿನ್ನ ವ್ಯಕ್ತಿತ್ವಗಳ ಕುರಿತಾಗಿ ಇರುವಂಥ ಸಾಲುಗಳನ್ನು. ನಮ್ಮೆಲ್ಲರಲ್ಲಿಯೂ ಎರಡು ಪ್ರಪಂಚಗಳು. ಒಂದು ಹೊರ ಪ್ರಪಂಚ, ಇನ್ನೊಂದು ಒಳ ಪ್ರಪಂಚ. ಎಷ್ಟೋ ಸಂಗತಿಗಳಲ್ಲಿ ಹೊರಗಡೆ ನಾವು 'ತೋರಿಸಿಕೊಳ್ಳುವ' ರೀತಿಯೇ ಬೇರೆ, ಒಳಗಡೆ ಇರುವ ರೀತಿಯೇ ಬೇರೆ. ಇದು ಕಪಟತೆಯ ಪ್ರಶ್ನೆ ಅಲ್ಲ, ಅದಕ್ಕಿಂತ ಮಿಗಿಲಾದ ಒಂದು ಸಹಜ ಮಾನವ ಲೋಕದ ಪ್ರತಿಫಲನ ಅಷ್ಟೇ. ಆ ಒಳಗಿನ ವೃತ್ತಕ್ಕೆ ಕೆಲವರಿಗಷ್ಟೇ, ಇಷ್ಟೇ ಇಷ್ಟು ಮಾತ್ರವೇ ಪ್ರವೇಶವಿರುವುದು, ಆ ಒಳಗಿನ ವೃತ್ತದಲ್ಲಿ ಮನುಷ್ಯ ಬಹುತೇಕ ಒಂಟಿಯೇ! ಇದು ಒಂದು ಕಡೆಯಾದಲ್ಲಿ, ಇನ್ನೊಂದು ಕಡೆ, ಈ ಜಗತ್ತಿನ ಸಂಗತಿಗಳಂತೂ ಬಲು ಸೋಜಿಗ. "ಎಡಮನೆಯಲ್ಲೊಬ್ಬ ಪ್ರೇಮಿಯಿದ್ದರೆ ಬಲಮನೆಯಲ್ಲೊಬ್ಬನಿಗೆ ವೈರಾಗ್ಯ ಅಂಕುರಿಸಿರುತ್ತದೆ" ಅನ್ನುತ್ತಾರೆ ಲೇಖಕರು. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಮನುಷ್ಯಲೋಕದ ವಿಸ್ಮಯಗಳು ಮುಗಿಯುವಂಥದ್ದಲ್ಲ. ಹೂವಿಗೆ ಗಂಧ ಹೇಗೋ ಹಾಗೆಯೇ, ಮನುಷ್ಯರಿಗೆ ನೆನಪುಗಳು. ಈ ನೆನಪುಗಳೇ ಮನುಷ್ಯರ ನಾಳೆಗಳನ್ನು ರೂಪಿಸುತ್ತವೆ. ಈ ನೆನಪುಗಳೇ ಮನುಷ್ಯರ ಬದುಕುಗಳನ್ನು ಕಟ್ಟಿಕೊಡುತ್ತವೆ. ಈ ನೆನಪಿನ ಪ್ರಪಂಚದಲ್ಲಿ ಏನೆಲ್ಲಾ ಆಗಿರಬಹುದು, ಆದರೆ ಅದರಲ್ಲಿ ಎಲ್ಲವೂ ನೆನಪಿರುವುದಿಲ್ಲ. ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದು ಮನುಷ್ಯರೊಳಗಿನ ಒಳವೃತ್ತವನ್ನು ಸೋಕದ ಹೊರತು, ನೆನಪಿನ ಪ್ರಪಂಚದಲ್ಲಿ ಅಚ್ಚಾಗುವುದಿಲ್ಲವೇನೋ ಅಥವಾ ಕಾಲಕ್ರಮೇಣ ಅಳಿಸಿಯೂ ಹೋಗಬಹುದು. ಆದರೆ, ಅಂಥ ನೆನಪುಗಳಿರುವುದರಿಂದಲೇ ಮನುಷ್ಯರು ಬರೆಯಬಲ್ಲರು. ವಾಸ್ತವಗಳನ್ನೂ ಮೀರಿದ ಹಲವು ಪ್ರಪಂಚಗಳನ್ನು ತೆರೆದಿಡಬಲ್ಲರು. ಕಲೆ ಮತ್ತು ಕಲಾವಿದ ಇರುವುದೇ ನೆನಪುಗಳಿಂದಾಗಿ ಅಂದರೆ ಜಾಸ್ತಿಯೇನೂ ಆಗುವುದಿಲ್ಲ ಅನಿಸುತ್ತದೆ. ನೆನಪುಗಳು ವಸ್ತುಗಳೊಂದಿಗೆ, ಕ್ಷಣಗಳೊಂದಿಗೆ ಅಂಟಿಕೊಂಡಿರುವುದರಿಂದಲೇ ಮನುಷ್ಯರ ಭಾವಪ್ರಪಂಚ ಅಷ್ಟು ಚೆಂದ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">ನಾವು ನೈತಿಕತೆಗಳ ಬಗ್ಗೆ ಬಹಳಷ್ಟು ಭಾಷಣ ಮಾಡುತ್ತೇವೆ. ಆದರೆ, ಯುದ್ಧದ ಮಧ್ಯ ನಿಂತು ಫೋಟೋ ತೆಗೆಯುವ ಛಾಯಾಗ್ರಾಹಕರನ್ನು ಅಥವಾ ಅದನ್ನು ವಿವಿಧ ಸುದ್ದಿ ಮಾಧ್ಯಮಗಳಿಗೆ ದಾಟಿಸುವ ವರದಿಗಾರರನ್ನು ಕೇಳಿ, ನೈತಿಕತೆ ಅಂದರೇನು? ಅಂತ. ಕಣ್ಣೆದುರಿಗೇ ಹೆಣಗಳು ಉದುರುತ್ತಿರುತ್ತವೆ. ಆದರೆ, ಆ ಪರಿಸರದಲ್ಲಿ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದು ವಿಚಿತ್ರ ಅನ್ನಿಸಬಹುದು, ಜೊತೆಗೆ ಮನುಷ್ಯರಿಗೆ ನೆರವಾಗದ ಇನ್ನೊಬ್ಬ ಮನುಷ್ಯ ಇದ್ದು ಏನು ಪ್ರಯೋಜನ ಅಂತಲೂ ಅನ್ನಿಸಬಹುದು. ಆದರೆ, ಇದು ಇರುವುದೇ ಹಾಗೆ. ವನ್ಯಜೀವಿ ಛಾಯಾಗ್ರಾಹಕರ ಕಣ್ಣೆದುರೇ ಬೇಟೆ ನಡೆಯುತ್ತದೆ. ಆದರೆ, ತಪ್ಪಿಸುವ ಹಾಗಿಲ್ಲ. ಬೇಟೆ ತಪ್ಪಿಸಿದರೆ, ಜೀವ ಉಳಿಸಿದ್ದು ಹೌದು, ಆದರೆ ಇನ್ನೊಂದು ಪ್ರಾಣಿ ಉಪವಾಸವಿರುವುದೂ ಹೌದು. ವನ್ಯಜೀವಿ ಲೋಕದ ಕತೆಯಲ್ಲಿ ಬದುಕಿಗಾಗಿ ಮಾತ್ರವೇ ಬೇಟೆ. ಆದರೆ, ಮನುಷ್ಯಲೋಕದಲ್ಲಿ ಆಸೆಗಳಿಗಾಗಿ. ಆ ಆಸೆಗಳಿಗೆ ಭಿನ್ನ ಭಿನ್ನ ಕಾರಣಗಳು. ಯುದ್ಧದ ಭೀಕರತೆ ಮತ್ತು ಯುದ್ಧವನ್ನು ಸೆರೆಹಿಡಿಯುವ ಫೋಟೋಗ್ರಾಫರ್ರುಗಳ, ವರದಿಗಾರರ ಮನಸ್ಸಿನಲ್ಲಾಗುವ ಅಲ್ಲೋಲ ಕಲ್ಲೋಲವನ್ನು ಈ ಕಾದಂಬರಿ ಆರ್ದ್ರವಾಗಿ ಹೇಳುತ್ತದೆ. ಇದನ್ನು ಓದುವಾಗ, ಸ್ಯೂಡಾನಿನ ಫೋಟೋ 'ರಣಹದ್ದು ಮತ್ತು ಪುಟ್ಟ ಹುಡುಗಿ' ( the vulture and the little girl ) ಹಾಗೂ ಅದನ್ನು ಸೆರೆಹಿಡಿದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಗುತ್ತದೆ. ಯಾವುದು ನೈತಿಕತೆ ಅನ್ನುವ ಪ್ರಶ್ನೆಯೇ ಹೆಚ್ಚು ಕಾಡುತ್ತದೆ. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">'ದ್ವೀಪವ ಬಯಸಿ' ಕಾದಂಬರಿ ನಮ್ಮನ್ನು ಹಲವು ದ್ವೀಪಗಳಿಗೆ ಕರೆದೊಯ್ಯುತ್ತದೆ ಹಾಗೂ ಅಗಾಧವಾದ ಕಾರ್ಪೋರೇಟ್ ಕರಾಳತೆಯ ಚೂರೇ ಚೂರು ರುಚಿ ತೋರಿಸುತ್ತದೆ. ಭರವಸೆಯ ನಾಳೆಗಳನ್ನು ಮಾತಿನಲ್ಲಿಯೇ ತೋರಿಸುವ ಎಲ್ಲರೂ ನಿಜವಾಗಿಯೂ ಅಂಥ ನಿಮ್ಮ ನಾಳೆಗಳಲ್ಲಿ ಆಸಕ್ತರಾಗಿರುವುದಿಲ್ಲ ಅನ್ನುವ ಸತ್ಯವನ್ನೂ ತೆರೆದಿಡುತ್ತಾ ಹೋಗುತ್ತದೆ. ಬರೀ ಅಷ್ಟಕ್ಕೇ ನಿಲ್ಲದೇ, ನಮ್ಮೊಳಗಣ ವೃತ್ತವನ್ನೂ, ಅದರ ತಲ್ಲಣಗಳನ್ನೂ ಆತ್ಮೀಯವಾಗಿ ಅಪ್ಪಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಬರೀ ಕತೆಯನ್ನಷ್ಟೇ ಹೇಳದೇ, ಕತೆಯೊಂದಿಗೆ ಇನ್ನೂ ಏನನ್ನೋ ಹುಡುಕಿಹೊರಡುವ ಇಂಥ ಪುಸ್ತಕಗಳು ಇಷ್ಟವಾಗದೇ ಇರುವುದಾದರೂ ಹೇಗೆ!</div><div class="separator" style="clear: both; text-align: justify;"><br /></div><div class="separator" style="clear: both; text-align: justify;">ಗೂಗಲ್ ಪ್ಲೇ ಬುಕ್ಸಲ್ಲಿ ,ಇಂಗ್ಲೀಷ್ ಅಕ್ಷರದ ಒಂದಷ್ಟು ವಾಕ್ಯಗಳು ಸರಿಯಾದ ಫಾರ್ಮ್ಯಾಟಲ್ಲಿ ಇಲ್ಲ ಅಂದ ತಕ್ಷಣವೇ ಅವೆಲ್ಲವನ್ನೂ ಸರಿಪಡಿಸಿದ ವಸುಧೇಂದ್ರ ಸರ್-ಗೆ ವಿಶೇಷ ಧನ್ಯವಾದಗಳು. </div><div class="separator" style="clear: both; text-align: justify;"><br /></div><div class="separator" style="clear: both; text-align: justify;">- 'ಶ್ರೀ'</div><div class="separator" style="clear: both; text-align: justify;"> ತಲಗೇರಿ</div></div><p></p><div class="separator" style="clear: both; text-align: justify;"><br /></div><div style="text-align: justify;"><br /></div><p></p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-62406767781691949732023-01-01T00:16:00.002+05:302023-01-01T00:17:18.547+05:30ಬಯಲ ಹೂವಿನ ಗಂಧ<p style="text-align: center;">ಬಯಲ ಹೂವಿನ ಗಂಧ</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgNwMeEh0IC0cHfOzftzTqh5WROPP8e-RVqRBhtkTPM0qiLZ1pgM74MP7MAglXPcNDG_wGrAa1XxuuoQsAUtxVI-_ikfQR8z-V3-opAF85TpS99xU3dryrzyKIeOzjgCBuKG0TYp7awZutNiYZwOoRv9FpZV9ZNYgi84rDvQ1oP8XDd636KDxVWhjR8/s864/BayalarasiHoratavaluCover_540x.jpg" style="margin-left: 1em; margin-right: 1em;"><img border="0" data-original-height="864" data-original-width="540" height="320" src="https://blogger.googleusercontent.com/img/b/R29vZ2xl/AVvXsEgNwMeEh0IC0cHfOzftzTqh5WROPP8e-RVqRBhtkTPM0qiLZ1pgM74MP7MAglXPcNDG_wGrAa1XxuuoQsAUtxVI-_ikfQR8z-V3-opAF85TpS99xU3dryrzyKIeOzjgCBuKG0TYp7awZutNiYZwOoRv9FpZV9ZNYgi84rDvQ1oP8XDd636KDxVWhjR8/s320/BayalarasiHoratavaluCover_540x.jpg" width="200" /></a></div><br /><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;"><div class="separator" style="clear: both;"><br /></div><div class="separator" style="clear: both; text-align: left;">ಈ ಪುಸ್ತಕದ ಕುರಿತಾಗಿ ಬರೆಯಬೇಕು ಅಂತ ಅಂದುಕೊಂಡಿದ್ದು ಬಹಳ ಸಲ. ಸುಮಾರು ಒಂದು ವರ್ಷವಾಯಿತು ಇದನ್ನು ಓದಿ. ಕೆಲವೊಮ್ಮೆ ಕೆಲವು ಸಂಗತಿಗಳು ಕಟ್ಟಿಕೊಡುವ ಅನುಭವಗಳು ಗಾಢವಾಗಿರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವುದಕ್ಕೆ ನಾವು ಸೋಲಬಹುದು ಅನ್ನುವ ಹಿಂಜರಿಕೆಯೇ ಹೀಗೆ ಬರೆಯದೇ ದಿನ ದೂಡುವುದಕ್ಕೆ ನೆಪವಾಗುತ್ತದೆ. ಈ ಸಲ ಬರೆಯಲೇಬೇಕೆಂದು ಮರುಓದಿಗೆ ತೊಡಗಿದೆ. ಬಹುಶಃ ಒಂದು ಸಲ ಓದಿದ ಮೇಲೆ ಮತ್ತೆ ಓದಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದು. ಹಾಗಂತ ಇದು ಸಿಕ್ಕಾಪಟ್ಟೆ ಅದ್ಭುತವಾದ, ಎಲ್ಲಿಯೂ ಸಿಗದ ಕತೆಗಳಿರುವ ಪುಸ್ತಕ ಅಂತೆಲ್ಲಾ ಹೊಗಳುವುದಿಲ್ಲ! ಆದರೆ, ಈ ಪುಸ್ತಕ ಒಂದು ಗಾಢವಾದ ಅನುಭವದ ಜಗತ್ತನ್ನು ಕಟ್ಟಿಕೊಡುತ್ತದೆ. ಸಣ್ಣ ಸಣ್ಣ ಸಂಗತಿಗಳೇ ಕತೆಗಾರರ ಶಕ್ತಿ. ಅಂಥದ್ದೊಂದು ಭಂಡಾರವೇ ಇಲ್ಲಿದೆ. ಅವುಗಳಲ್ಲಿ ಕೆಲವನ್ನು ಈ ಬರೆಹದ ಕೊನೆಯಲ್ಲಿ ಹಂಚಿಕೊಳ್ಳುತ್ತೇನೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಅಂದರೆ ಅದೊಂದು ಥರದ ನಂಬಿಕೆ; ಅದು ಒಂದೊಳ್ಳೆಯ ಓದನ್ನು ಕೊಡುತ್ತದೆ ಅನ್ನುವ ಗಟ್ಟಿ ನಂಬಿಕೆ. ಅದರಲ್ಲೂ ಸಶಕ್ತ ಕತೆಗಾರ್ತಿಯರು ಕತೆ ಹೇಳಿದಾಗ ಪುರುಷ ಕತೆಗಾರರಿಗೆ ದಕ್ಕದ ಇನ್ನೊಂದು ಲೋಕ ಮತ್ತು ಆ ಲೋಕದ ಸೂಕ್ಷ್ಮತೆ ಆ ಕತೆಗಳಲ್ಲಿರುತ್ತವೆ ಅನ್ನುವುದನ್ನು ನಾನು ಓದಿದ ಕೆಲವೇ ಕೆಲವು ಕತೆಗಾರ್ತಿಯರ ಕತೆಗಳಿಂದ ಗಮನಿಸಿದ್ದೇನೆ. ಇಲ್ಲಿಯೂ ನನಗೆ ಅಂಥದ್ದೊಂದು ಜಗತ್ತು ಸಿಕ್ಕಿತು. ಮಹತ್ತರವಾದ ಅಥವಾ ಗಹನವಾದ ಸಂಗತಿಗಳನ್ನು ತೀವ್ರವಾಗಿ ತುಂಬಿಕೊಂಡಿರುವ ಕತೆಗಳೇನಲ್ಲ ಇವು. ಆದರೆ, ಈ ಜಗತ್ತಿನ ಪುಟ್ಟ ಪುಟ್ಟ ಸಂಗತಿಗಳನ್ನು ಗಮನಿಸಿ ಅದನ್ನು ಕತೆಯ ಭಾಗವಾಗಿಸುವುದಿದೆಯಲ್ಲಾ; ಅದನ್ನೇ ಬಹುಶಃ 'ಘಟಿಸುವುದು' ಅನ್ನಬಹುದೇನೋ! ಅಂಥದ್ದೇ ಒಂದು ಸಂಕಲನ ಛಾಯಾ ಭಟ್ ಅವರ 'ಬಯಲರಸಿ ಹೊರಟವಳು' </div><div class="separator" style="clear: both; text-align: left;"><br /></div><div class="separator" style="clear: both; text-align: left;">ನಮ್ಮೆಲ್ಲರ ಬದುಕಿನಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಹೇಗಾದರೂ ಮಾಡಿ ನಮ್ಮನ್ನು ಕೆಣಕುವವರೂ ಅವರೇ, ಸಹಾಯಕ್ಕೆ ಬರುವವರೂ ಅವರೇ. ಈ ನಡುವಿನ ಬದುಕಿನಲ್ಲಿ ಅದೊಂದು ತೆರನಾದ ಸಂಬಂಧ ಅವರ ಜೊತೆ ಬೆಳೆದುಹೋಗಿರುತ್ತದೆ. ಅದನ್ನು ಆತ್ಮೀಯತೆ ಅಂತಲಾದರೂ ಕರೆಯಿರಿ ಅಥವಾ ಅನಿವಾರ್ಯತೆ ಅಂತಲಾದರೂ! ದೇವಳದ ಸೂರಿನಲ್ಲಿ , ಪ್ರಕೃತಿಯ ಕೋಪದಲ್ಲಿ ಎಲ್ಲರೂ ಒಂದೇ ಅನ್ನುವ ಮಾತು ಎಷ್ಟು ವಾಸ್ತವಿಕ. ಪ್ರಕೃತಿ ವಿಕೋಪಗಳಾದಾಗ, ಊರ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಚರ್ಚು, ಮಸೀದಿಗಳಲ್ಲೋ ಗಂಜಿಕೇಂದ್ರಗಳನ್ನು ತೆರೆಯುವುದು ನಮಗೆ ತಿಳಿದ ಸಂಗತಿಯೇ. ಮತ್ತೆ ಮತ್ತೆ ಇಂಥ ವಿಕೋಪಗಳಾದಾಗ ಮಾತ್ರ ಮನುಷ್ಯನಿಗೆ ಮನುಷ್ಯನಾಗುವುದಕ್ಕೆ ಸಾಧ್ಯವಾಗುತ್ತದೆಯೇನೋ ಬಹುಶಃ! ಮನುಷ್ಯ ನಾಗರಿಕತೆಗಳ ಏಳುಬೀಳುಗಳನ್ನು ಕಂಡು ಪೊರೆವ ನದಿಯೇ ಒಮ್ಮೊಮ್ಮೆ ಉಕ್ಕುತ್ತದೆ ಅನ್ನುವ ಲೇಖಕಿ, ಪ್ರಕೃತಿಗೆ ತನ್ನ ಸಮತೋಲನವನ್ನು ತಾನೇ ಕಾಯ್ದುಕೊಳ್ಳುವುದು ಗೊತ್ತಿದೆ ಅನ್ನುವ ಮೂಲಕ ಮನುಷ್ಯ ತಾನು ಮಾಡಿಕೊಳ್ಳುವ ಅನರ್ಥಗಳಿಗೆ ಏನೇನೋ ಉದ್ಧಾರದ ಸಮಜಾಯಿಷಿ ಕೊಡುವುದನ್ನು ಸೂಕ್ಷ್ಮವಾಗಿ ಟೀಕಿಸಿಸುತ್ತಾರೆ. ಒಮ್ಮೊಮ್ಮೆ ಅನಿಸುತ್ತದೆ, ನಾವು ಮಾತಾಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ, ಮನುಷ್ಯ ಮನುಷ್ಯರ ನಡುವಿನ ವೈಮನಸ್ಯಗಳು ತಿಳಿಯಾಗುತ್ತಿದ್ದವೇನೋ ಅಂತೆಲ್ಲಾ. ಬಹಳ ಸಲ ಮಾತು ಒಂದು ಮಟ್ಟಿಗೆ ಕೆಲಸ ಮಾಡುವುದು ಹೌದಾದರೂ, ಮಾತಿನಿಂದಲೇ ಎಲ್ಲವೂ ಅರ್ಥವಾಗುವುದೇ? ಸಂವಹನ ನಡೆಯುವುದು ಕೇವಲ ಮಾತಿನ ಅರ್ಥದಿಂದಲೇ? ಅನ್ನುವ ಪ್ರಶ್ನೆ ಮೌನದ ಸಂವಹನಕ್ಕೆ ಇನ್ನಷ್ಟು ಬಲ ತುಂಬುತ್ತದೆ. ಮನುಷ್ಯನಿಗೆ ಇಂದ್ರಿಯಗಳು ಮತ್ತದಕ್ಕೆ ಅಂಟಿಕೊಂಡ ಸಂವೇದನೆಗಳೇ ಎಲ್ಲಾ ನೆನಪುಗಳಿಗೂ ಕಾರಣ. ಹಾಗೂ ಬದುಕಿನ ಭರವಸೆಗಳಿಗೂ ಕಾರಣ. ಇನ್ನೂ ಏನೋ ಉಳಿದಿದೆ ಅನ್ನುವುದೇ ನಾಳೆಗಳನ್ನು ಅನಿವಾರ್ಯವಾಗಿಸುತ್ತದೆ. 'ನೆರೆ' ಅನ್ನುವ ಈ ಕತೆ ಈ ಪುಸ್ತಕದ ಮೊದಲ ಕತೆ. ಇದರಲ್ಲಿ ಒಂದು ಸಾಲಿದೆ "ನೆಟ್ಟವರಿಗಷ್ಟೇ ಕೀಳುವ ಹಕ್ಕಿರುವುದು"</div><div class="separator" style="clear: both; text-align: left;"><br /></div><div class="separator" style="clear: both; text-align: left;">ಕೆಲವರಿಗೆ ಊರಿಗೆ ಹೋಗುವುದೆಂದರೆ ನೆಮ್ಮದಿಯ ಆತ್ಮೀಯತೆ. ಇನ್ನು ಕೆಲವರಿಗೆ ಊರೆಂದರೆ ಅದು ತಳಮಳಗಳನ್ನು ಹುಟ್ಟುಹಾಕುವ, ಮನಸ್ಸೊಳಗಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಹಾಗೂ ಕೌಟುಂಬಿಕ ಸುಖಕ್ಕೆ ವಿರುದ್ಧವಾದ ಕಿರಿಕಿರಿಯನ್ನು ದಾಟಿಸುವ ಜಾಗ. ಯಾಕೆ ಹಾಗಾಗುತ್ತದೆ ಅಂತ ಕೇಳಿದರೆ ಬದುಕಿನೊಂದಿಗೆ ಹೆಣೆಯಲ್ಪಟ್ಟ ನೆನಪುಗಳು, ಭಿನ್ನ ಘಟನೆಗಳು, ಅವುಗಳ ಅನುಭವಗಳು ಇತ್ಯಾದಿ. ಬಹುಶಃ ನಮ್ಮದು ಅಂತ ಅನ್ನಿಸುವವರೆಗೂ ಅದರೊಂದಿಗೆ ನಾವು ಸುಖಿಸಲು ಸಾಧ್ಯವೇ ಇಲ್ಲವೇನೋ! ಬದುಕಿನ ಪ್ರತೀ ಹಂತದಲ್ಲೂ ಭಯ ಉಂಟಾಗುತ್ತಲೇ ಇರುತ್ತದೆ. ಒಂದು ಸಂಗತಿಯಿಂದ ಆಚೆ ಬಂದು ತೆಗೆದುಕೊಳ್ಳುವ ನಿರ್ಧಾರದಿಂದ ಹುಟ್ಟುವ ಧೈರ್ಯ ಇನ್ನಷ್ಟು ಹುರುಪಿಗೆ ನಾಂದಿ ಅನ್ನುವುದನ್ನು 'ಕೋಲ್ಮಿಂಚು' ಕತೆ ನಮಗೆ ದಾಟಿಸುತ್ತದೆ. </div><div class="separator" style="clear: both; text-align: left;"><br /></div><div class="separator" style="clear: both; text-align: left;">ಪ್ರತಿ ಜನಾಂಗವೂ ತನ್ನ ಹಿಂದಿನ ಜನಾಂಗದ ನಂಬಿಕೆಗಳ ಆಧಾರದ ಮೇಲೆಯೇ ಬದುಕು ಕಟ್ಟಿಕೊಳ್ಳುವುದು. ಕೆಲವೊಮ್ಮೆ ಆ ನಂಬಿಕೆಗಳು ಹಳತಾದವೆಂದು ನವೀಕರಿಸುತ್ತಲೇ, ಇನ್ನು ಕೆಲವೊಮ್ಮೆ ಆ ನಂಬಿಕೆಯೇ ಅಂತಿಮ ಸತ್ಯವೆಂದು ಆದರಿಸುತ್ತಲೇ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಗಳು ವರ್ಗಾವಣೆಯಾಗುತ್ತವೆ. ತಲೆಮಾರುಗಳ ನಡುವಿನ ನಂಬಿಕೆಗಳು ಹಾಗೂ ಅವುಗಳ ಒಳ ಪದರಗಳು ತಂದೊಡ್ಡುವ ವಿಪರೀತಗಳು ನೋಡುವುದಕ್ಕೆ ಸರಳವಾಗಿದ್ದರೂ, ಕೆಲವೊಮ್ಮೆ ಒಂಥರದ ಕಗ್ಗಂಟು. ಒಮ್ಮೆ ಮನಸ್ತಾಪ ಶುರುವಾದರೆ, ಪದೇ ಪದೇ ವಿಷಯವೇ ಇಲ್ಲದೇ ಮನಸ್ತಾಪಗಳಾಗುತ್ತವೆ. ಕುಟುಂಬದ ಹೆಣಿಗೆಗಳಿಗೆ ಪರಿಹಾರ ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಅಲ್ಲವಾ ಸಂಸಾರ ಸಾಗರ ಅಂತನ್ನುವುದು. ಅಲೆಗಳು ಒಂದಾದ ಮೇಲೊಂದರಂತೆ ಬರದೇ ಸಾಗರ ಇರುವುದಾದರೂ ಹೇಗೆ! 'ತೊಟ್ಟು ಕಳಚಿದ ಹೂವು' ಎನ್ನುವ ಈ ಕತೆಯಲ್ಲಿ ಅಬ್ಬೆ, ಮಗ, ಮಗನ ಹೆಂಡತಿಯ ನಡುವಿನ ತಾಕಲಾಟಗಳು, ಸಂಬಂಧಗಳ ನಡುವಣ ಸಂಘರ್ಷಗಳಿವೆ. </div><div class="separator" style="clear: both; text-align: left;"><br /></div><div class="separator" style="clear: both; text-align: left;">ಮುಂದಿನ ಕತೆ ಪಾತಿಚಿಕ್ಕಿಯದ್ದು. ಜೀವನದಲ್ಲಿ ಎದುರಾಗುವ ಸಾವಿರ ಕಷ್ಟ ಕಾರ್ಪಣ್ಯಗಳಿಗೆ ಮಾತನಾಡದ ದೇವರುಗಳಿಗಿಂತ ಒರಟೊರಟಾಗಿ ಮಾತಾಡಿ, ಎಲ್ಲರ ನಂಬಿಕೆಯನ್ನೇ ಅಲ್ಲಾಡಿಸುವಂತೆ ಬದುಕುವುದು ಪಾತಿಚಿಕ್ಕಿಯ ಪಾತ್ರ. ಮುಗ್ಧರ ಹಾಗೂ ನಿತ್ಯದ ಅಗತ್ಯಕ್ಕಾಗಿ ಹೆಣಗುವವರ ಮನುಷ್ಯ ಸಹಜ ಆಸೆಗಳನ್ನು ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ ಅನ್ನುವುದನ್ನೂ ಈ ಕತೆ ತೆರೆದಿಡುತ್ತದೆ. ಒಂದು ಗಂಭೀರ ಸನ್ನಿವೇಶದಲ್ಲೂ ಮಕ್ಕಳ ಮನಸ್ಸಿನಲ್ಲಿ ಮೂಡಬಹುದಾದ ಮುಗ್ಧ ಹಾಗೂ ಮಜವಾದ ಸಂಗತಿಯೊಂದು ಪಾತಿಚಿಕ್ಕಿಯ ಗಂಡ ಮನೆಬಿಟ್ಟು ಹೋದಾಗಿನ ಸಂದರ್ಭದಲ್ಲಿದೆ. ಹೆಣ್ಣು ತಾನು ಸೇರಿದ ಮನೆಯನ್ನು, ಹೊಸ ಸಂಬಂಧವನ್ನು ಅಪ್ಪಿಕೊಂಡಷ್ಟು ಸುಲಭವಾಗಿ ಗಂಡಸಿಗೆ ಅದು ಸಾಧ್ಯವಾಗುವುದು ಬಹಳ ಅಪರೂಪ ಅನ್ನುತ್ತಾರೆ ಕತೆಗಾರ್ತಿ. ಮುರಿದು ಮತ್ತಷ್ಟು ಚೆಂದಕ್ಕೆ ಕಟ್ಟುವುದು ಹೆಣ್ಣಿಗೊಲಿದ ವಿಶೇಷ ಕಲೆಯೇ ಇರಬೇಕು. ಅಲ್ಲದೇ ಇದ್ದರೆ ಹಳಬರು ಸುಮ್ಮನೆ ಹೇಳುತ್ತಿದ್ದರೇ; "ಮದುವೆ ಅಂತ ಒಂದ್ ಮಾಡಿ, ಹುಡುಗ ಸರಿ ಹೋಗ್ತಾನೆ" ಅಂತ! ಒಂದು ವಸತಿಗೃಹವನ್ನು ಮನೆಯಾಗಿಸುವವಳು ಹೆಣ್ಣು. ಒಂಟಿತನ ಎನ್ನುವುದು ಪೂರಾ ಮಾನಸಿಕ ಅವಸ್ಥೆ , ಯಾವಾಗ ಬೇಕಾದರೂ ಬರಬಹುದು, ತುಂಬು ಸಂಸಾರದಲ್ಲಿಯೂ ಮನುಷ್ಯ ತನಗ್ಯಾರಿಲ್ಲವೆಂದು ನೋಯಬಹುದು ಅನ್ನುವ ಸಂಗತಿಯನ್ನು ಲೇಖಕಿ ಹೇಳುತ್ತಾರೆ. ಬಹುಶಃ ಇದು ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗಬಹುದಾದ ಹೇಳಿಕೆ ಅಂತ ನನಗನಿಸುತ್ತದೆ. ಜನರ ಕಷ್ಟ ಎಷ್ಟಿದೆಯೆಂದರೆ ಎಷ್ಟೇ ಗುಡಿ ಕಟ್ಟಿ ಕೈಮುಗಿದರೂ ಬೇಡಿ ಮುಗಿಯಲಾರದಷ್ಟು ಕೋರಿಕೆಗಳಿರುತ್ತವೆ ಅವರಿಗೆ! ತನಗಿಂತ ಹೆಚ್ಚು ಶಕ್ತಿಶಾಲಿಯಾದವರಲ್ಲಿ ನಂಬಿಕೆ ಹುಟ್ಟಿಕೊಳ್ಳುವುದೇ ಹೀಗೆ. ಅದಕ್ಕೆಂದೇ ಮನುಷ್ಯ ದೇವರನ್ನು ನಂಬತೊಡಗಿದ ಅಂತ ಭಗತ್ ಸಿಂಗ್ ತಮ್ಮ 'ನಾನೇಕೆ ನಾಸ್ತಿಕ' ಪುಸ್ತಕದಲ್ಲಿ ಬರೆದಿರುವ ಮಾತಿಗೆ ಇದು ಹೆಚ್ಚು ಹತ್ತಿರದ ಸಾಲು ಅನಿಸಿತು. ನಾವೆಲ್ಲರೂ ಪ್ರತಿ ದಿನ ಬಯಲರಸಿ ಹೊರಡುವುದಕ್ಕೆ ಹಲುಬುತ್ತಲೇ ಇರುತ್ತೇವೆ ಅಲ್ಲವಾ! ಸಂಕಲನದ ಶೀರ್ಷಿಕೆ ಕತೆ ಇದು; 'ಬಯಲರಸಿ ಹೊರಟವಳು' </div><div class="separator" style="clear: both; text-align: left;"><br /></div><div class="separator" style="clear: both; text-align: left;">ಮುಂದಿನ ಕತೆಯ ಶುರುವಿನಲ್ಲಿ ಬರುವ ಕೊಂಕಣ ರೈಲಿನ ವರ್ಣನೆ, ಅಲ್ಲಿ ಹೊರಟಿದ್ದು ಮುಂಬಯಿಯಿಂದಾದರೂ, 'ಹಾಯ್, ಹೋಯ್, ಇಶ್ಶೀ' ಎನ್ನುವ ಉದ್ಗಾರಗಳು ಪಕ್ಕಾ ಉತ್ತರ ಕನ್ನಡದವು! ಹಲವು ಸಲ ಅನಿಸಿದ್ದಿದೆ, ನಾವು ಮತ್ತೆ ಮತ್ತೆ ಅದದೇ ಕತೆಗಳನ್ನು, ಅದದೇ ಪರಿಸರವನ್ನು, ಅದದೇ ಸಾಹಿತ್ಯವನ್ನು ತಿರುಗಾಮುರುಗಾ ಮಾಡಿ ಹೇಳುತ್ತಿದ್ದೇವಾ ಅಂತ. ಆದರೆ, ಇನ್ನೂ ಕೆಲವೊಮ್ಮೆ ಅನಿಸಿದ್ದಿದೆ. ನಮಗೆ ಗೊತ್ತಿಲ್ಲದ ಇನ್ನ್ಯಾವುದೋ ಪರಿಸರವನ್ನು ನಾವು ನಮ್ಮ ಕತೆಯಲ್ಲಿ ತರುವುದಾದರೂ ಹೇಗೆ ಸಾಧ್ಯ? ತಂದರೂ, ಅದು ಅಷ್ಟು ನೈಜವಾಗಿ ಇರುವುದಕ್ಕೆ ಸಾಧ್ಯವಾ? ಅಂತ. ಹಾಗಾಗಿ ಕೊನೆಗೆ ನಾನು ಕಂಡುಕೊಂಡ ಉತ್ತರ; ನಮ್ಮದೇ ಪರಿಸರದಲ್ಲಿ, ನಮ್ಮದೇ ಬಾಲ್ಯದಲ್ಲಿ, ನಮ್ಮದೇ ಊರಿನಲ್ಲಿ, ನಮ್ಮದೇ ನಗರಗಳಲ್ಲಿ ಹೇಳದೇ ಉಳಿದ ಅದೆಷ್ಟೋ ಕತೆಗಳಿವೆ. ಅವುಗಳನ್ನು ಹೇಳದೇ ಹೋದರೆ, ಆ ಕತೆಗಳಿಗೂ ದನಿ ಬೇಕಲ್ಲವಾ ಎಂಬುದಾಗಿ. ಹಾಗಾಗಿ, ಈಗ ಊರ ಕತೆಗಳು 'ಮತ್ತದೇ ಹಾಡು' ಎಂಬಂತಾಗುವುದಿಲ್ಲ. ಈ ಕತೆಯ ಶುರುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಗಂಡಸಿನ ಲೋಕ ಏನು ಅನ್ನುವುದನ್ನು ಕತೆಗಾರ್ತಿ ಹೇಳುತ್ತಾರೆ. ಅದಾದ ನಂತರ ಇಡೀ ಕತೆಯಲ್ಲಿರುವುದು ಒಂದು ಘಟನೆ ನಮ್ಮ ಜೀವನ ಪೂರ್ತಿ ಬೆನ್ನು ಹತ್ತಿ ಕೂತು ಕಾಡುತ್ತದೆ ಅನ್ನುವುದು ಹಾಗೂ ಅದರಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು. ಕತೆಯ ಹೆಸರು 'ಆ ಕಡುಗಪ್ಪು ಕಣ್ಣುಗಳು'</div><div class="separator" style="clear: both; text-align: left;"><br /></div><div class="separator" style="clear: both; text-align: left;">ಒಂದು ಸಣ್ಣ ಮನಸ್ತಾಪ ಯಾವ್ಯಾವುದೋ ಅಮಲಿನಲ್ಲಿ ಇನ್ನೇನೋ ಆಗುವುದರಿಂದಲೇ ಮನುಷ್ಯ ಜಾತಿಯನ್ನು ಇನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಿರುವುದು. ಎಲ್ಲ ಸಲ ಗಲಾಟೆಯಾದಾಗಲೂ, ಯಾವ ಕಾರಣಕ್ಕಾಗಿ ಗಲಾಟೆ ನಿಗದಿಯಾಗಿತ್ತೋ ಅದಕ್ಕಿಂತಲೂ ಕೊನೆಯಲ್ಲಿ ಅದು ಉಳಿಯುವುದು ಇನ್ನೇನೋ ಆಗಿಯೇ! ಇದು ಇಂದಿನ ಸ್ಥಿತಿ. ಮನುಷ್ಯನ ಭಾವಲೋಕ ವಿಚಿತ್ರವಾದದ್ದು. ಕೃತಜ್ಞತೆ ಮತ್ತು ಕೃತಘ್ನತೆಗೆ ಕೇವಲ ಒಂದು ಅಕ್ಷರದ ವ್ಯತ್ಯಾಸವಷ್ಟೇ. ಹಿಂಸಿಸುವುದೂ ಒಂದು ಉನ್ಮಾದವಿದ್ದಂತೆ, ಮಾಡಿದಂತೆ ಏರುತ್ತಲೇ ಹೋಗುತ್ತದೆ, ನಿಲ್ಲಿಸಬೇಕೆಂದು ಅನಿಸುವುದೇ ಇಲ್ಲ ಅನ್ನುವ ಸಾಲು ಎಲ್ಲಾ ಕಾಲದಲ್ಲಿಯೂ ಮನುಷ್ಯ ಯಾಕೆ ಕ್ರೌರ್ಯವನ್ನು ವಿಜೃಂಭಿಸುತ್ತಾನೆ ಅನ್ನುವುದಕ್ಕೆ ಉತ್ತರದಂತಿದೆ. ಈ ಕತೆಯ ಹೆಸರು 'ಸುಳಿ'</div><div class="separator" style="clear: both; text-align: left;"><br /></div><div class="separator" style="clear: both; text-align: left;">ನಂತರದ ಕತೆ ಬಾಡಿಗೆ ತಾಯ್ತನ, ಕಲಾಶಾಲೆಗೆ ಮಾಡೆಲ್ ಆಗುವ ಹೆಣ್ಣೊಬ್ಬಳ ಕುರಿತಾಗಿದ್ದು, ಜೊತೆಗೆ, ಯಾರ ಚಿತ್ರವನ್ನು ಬಿಡಿಸಿದ್ದೆನೋ, ಆ ಚಿತ್ರ ಹೆಚ್ಚಿನ ಬೆಲೆಗೆ ಮಾರಾಟವಾದಾಗ, ಆ ಹಣ ಅವರಿಗೂ ಸಲ್ಲಬೇಕು ಎಂದು ಮತ್ತೆ ಅವರನ್ನು ಹುಡುಕಿ ಹೋಗುವ ಒಬ್ಬ ಕಲಾವಿದನ ಕುರಿತಾಗಿಯೂ ಇದೆ. ಇದು ಒಬ್ಬ ಕಲಾವಿದನಿಗೆ ಅಥವಾ ಛಾಯಾಗ್ರಾಹಕನಿಗೆ (ಛಾಯಾಗ್ರಾಹಕನೂ ಕಲಾವಿದನೇ, ಅದರಲ್ಲಿ ಅನುಮಾನವಿಲ್ಲ!) ಇರಬೇಕಾದ ನೈತಿಕ ಪ್ರಜ್ಞೆ ಅನಿಸುತ್ತದೆ ನನಗೆ. ಇದು ನನಗೆ ಪಾಕಿಸ್ತಾನದ ಕ್ಯಾಂಪಿನಲ್ಲಿ ತೆಗೆದ 'ಅಪ್ಘನ್ ಗರ್ಲ್' ಫೋಟೋದಲ್ಲಿದ್ದ ಶರ್ಬತ್ ಗುಲಾಳನ್ನು ಫೋಟೋ ತೆಗೆದ ಸುಮಾರು ಇಪ್ಪತ್ತು ವರ್ಷಗಳ ನಂತರ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು ಹುಡುಕಿಹೋದದ್ದನ್ನು ನೆನಪಿಸಿತು. ಈ ಕತೆಯ ಹೆಸರು 'ಶುಭ್ರಜ್ಯೋತ್ಸ್ನೆ'</div><div class="separator" style="clear: both; text-align: left;"><br /></div><div class="separator" style="clear: both; text-align: left;">ಖಾಲಿ ಜಾಗವನ್ನು ಹದ ಮಾಡಿ ಮನೆ ಕಟ್ಟುವುದು ಕಷ್ಟವೇನಲ್ಲ, ಆದರೆ ನೆನಪುಗಳೇ ತುಂಬಿಕೊಂಡಿರುವ ಹಳೆ ಮನೆಯನ್ನು ಉದುರಿಸಿ ಹೊಸ ಮನೆ ಕಟ್ಟಿದರೂ ನೆನಪುಗಳು ಕಾಡದೇ ಇರುತ್ತವೆಯಾ? ಅನ್ನುವುದನ್ನು ಹೇಳುವ ಕತೆ 'ಹುಲ್ಲಾಗು ಬೆಟ್ಟದಡಿ'. ಕೊನೆಗೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯಾ ಅಥವಾ ದೊಡ್ಡ ದೊಡ್ಡ ನಗರದ ಜೀವನವಾ ಅನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತದೆ. </div><div class="separator" style="clear: both; text-align: left;"><br /></div><div class="separator" style="clear: both; text-align: left;">ಎಂಥದ್ದೇ ಘಟನೆಯಾದರೂ ಮನೆಯಲ್ಲಿ ಮರುದಿನ ದೋಸೆ ಬಂಡಿಯ ಮೇಲೆ ದೋಸೆ ಹೊಯ್ಯಲೇಬೇಕು; ಅದೇ ಬದುಕು. ಹೊಯ್ಯುವವರಷ್ಟೇ ಬದಲಾಗಬಹುದು. ಆದರೆ, ಬೆಳಗಾಗುತ್ತದೆ, ಸಂಜೆಯಾಗುತ್ತದೆ, ಕಾಲ ಜಾರುತ್ತದೆ, ಯಾರದೋ ಯೌವನಕ್ಕೆ ಮುಪ್ಪು ಬರುತ್ತದೆ. ಇನ್ನ್ಯಾರದೋ ಗರ್ಭದೊಳಗಿಂದಿಳಿದು ಪುಟ್ಟ ಅಳು ನಗು ಮೊದಲ ಬಾರಿಗೆ ಗಾಳಿಗೆ ಮೈಯೊಡ್ಡುತ್ತದೆ. ಇದು ಕಾಲದ ಪ್ರವಾಹ ಅನ್ನುವುದನ್ನು ಹೇಳುವ ಈ ಕತೆಯಲ್ಲಿ ನನ್ನನ್ನು ಕಾಡಿದ ರೂಪಕ ದೂರ್ವೆಯದ್ದು. ಈ ರೂಪಕ ವರ್ಷಗಟ್ಟಲೆ ನನ್ನನ್ನು ಕಾಡಿದೆ ಅಂದರೆ ಸುಳ್ಳಲ್ಲ. ಬಹುಶಃ ಇನ್ನಷ್ಟು ವರ್ಷಗಳ ಕಾಲ ಇದು ನೆನಪಿನಲ್ಲಿ ಉಳಿಯುತ್ತದೆ. "ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಗೂನುಬೆನ್ನಿನವರಂತೆ ಬಾಗಿ ನಿಲ್ಲುವ ದೂರ್ವೆ ಕಾವೇರಿ ಕೊಯ್ದು ತೊಳೆದರೆ ಸಾಕು ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತಿತ್ತು. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ!". ಕತೆಯ ಹೆಸರು 'ಮಾಕಬ್ಬೆ'</div><div class="separator" style="clear: both; text-align: left;"><br /></div><div class="separator" style="clear: both; text-align: left;">ಬರೆಹದ ಮೊದಲಿಗೆ ಹೇಳಿದ್ದೆ; ಕೆಲವು ಸಣ್ಣ ಸಣ್ಣ ರೂಪಕಗಳು ಈ ಕಥಾಸಂಕಲನದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತವೆ ಅಂತ. ಜೊತೆಗೆ, ಕಥೆಗಾರರಿಗೆ ಇರಬೇಕಾದದ್ದು ಮೈಯೆಲ್ಲಾ ಕಣ್ಣು ಅನ್ನುವುದು ಈ ಕತೆಗಾರ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿ ಕಾಣಸಿಕ್ಕಿದ್ದು ಬಹಳ ಹೊಸದಾದ ರೂಪಕಗಳು. ಒಂದೆರಡು ನಿಮ್ಮ ಓದಿಗೆ..</div><div class="separator" style="clear: both; text-align: left;"><br /></div><div class="separator" style="clear: both; text-align: left;">"ಡಬ್ಬದಲ್ಲಿರುವ ಮದುವೆಯ ಬೂಂದಿಲಾಡಿಗೆ ಗಡ್ಡ ಮೀಸೆ ಆಗ ತಾನೇ ಮೂಡುತ್ತಿತ್ತು"</div><div class="separator" style="clear: both; text-align: left;"><br /></div><div class="separator" style="clear: both; text-align: left;">"ಭರಣಿಯಲ್ಲಿ ಹತ್ತತ್ತಿಟ್ಟ ಉಪ್ಪಿನಕಾಯಿಯ ಮುಖ"</div><div class="separator" style="clear: both; text-align: left;"><br /></div><div class="separator" style="clear: both; text-align: left;">"ಹಾಲೇ ಕಾಣದ ಚಹದಂತೆ , ಹೆಚ್ಚು ಕಮ್ಮಿ ಛಾ ಕಣ್ಣು ಬಣ್ಣದ ಅರಲು ನೀರು"</div><div class="separator" style="clear: both; text-align: left;"><br /></div><div class="separator" style="clear: both; text-align: left;">"ಅಲ್ಲೇ ಮೂಲೆಯಲ್ಲಿದ್ದ ಪುಟ್ಟ ಗಿಡವೆರಡು ಮನೆಯೊಳಗೆ ತಂಪಗೆ ಹಬ್ಬಿದ್ದರೂ ಕಿಡಕಿಯತ್ತಲೇ ಮುಖಮಾಡಿ ಸೂರ್ಯನಿಗಾಗಿ ತಪಿಸುತ್ತಿದ್ದವು. ಬಹುಶಃ ಚಿಕ್ಕಿಯ ಅವಸ್ಥೆಯೂ ಈಗ ಹೀಗೆಯೇ ಇದ್ದಿರಬಹುದು"</div><div class="separator" style="clear: both; text-align: left;"><br /></div><div class="separator" style="clear: both; text-align: left;">ಒಮ್ಮೊಮ್ಮೆ ಗೋಡೆಗಳಾಚೆಯೂ, ಕೆಲವೊಮ್ಮೆ ಗೋಡೆಗಳ ನಡುವೆಯೂ ನಿಂತು ಸಂಬಂಧಗಳ ಕತೆಯನ್ನು ಹೇಳಿ ಕತೆಗಾರ್ತಿ ಬಯಲರಸಿ ಹೊರಟಿದ್ದಾರೆ. ಅರಸಿ ಹೊರಟ ಬಯಲು ಕೂಡಾ ಇನ್ನಷ್ಟು ಕತೆಗಳಾಗಿ ಅವರನ್ನೇ 'ಹರಸಿ' ಬರಲಿ ಅನ್ನುವ ಆಶಯಗಳೊಂದಿಗೆ ಹಾಗೂ ಸಂಕಲನಕ್ಕಾಗಿ ಕತೆಗಾರ್ತಿಗೆ ಧನ್ಯವಾದಗಳೊಂದಿಗೆ,</div><div class="separator" style="clear: both; text-align: left;"><br /></div><div class="separator" style="clear: both; text-align: left;">~'ಶ್ರೀ'</div><div class="separator" style="clear: both; text-align: left;"> ತಲಗೇರಿ</div></div><div class="separator" style="clear: both; text-align: left;"><br /></div><br /><p><br /></p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-39958887316460822692022-10-05T19:48:00.002+05:302022-10-05T19:48:22.612+05:30ವರಾಹ ರೂಪಂ...<p style="text-align: center;"> ವರಾಹರೂಪಂ... </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiCJKCm47b366XrPX0pzPYIIsnmFODhflC66QQYQWNNzp0ywpCwsGLYKEFuMMGkd-DDVfUD7eFTPtkPPo9GLQAURduBgADU-PD0GWgZs5ZnD5Y60h3wSIZFGLuU2wDbYxhSfyO6evcYSae23dG9fgukzVvaQjvU0-yicgtzOXwAkLCAAHTVMgOYadfl/s1080/FB_IMG_1664970973440.jpg" imageanchor="1" style="margin-left: 1em; margin-right: 1em;"><img border="0" data-original-height="608" data-original-width="1080" height="180" src="https://blogger.googleusercontent.com/img/b/R29vZ2xl/AVvXsEiCJKCm47b366XrPX0pzPYIIsnmFODhflC66QQYQWNNzp0ywpCwsGLYKEFuMMGkd-DDVfUD7eFTPtkPPo9GLQAURduBgADU-PD0GWgZs5ZnD5Y60h3wSIZFGLuU2wDbYxhSfyO6evcYSae23dG9fgukzVvaQjvU0-yicgtzOXwAkLCAAHTVMgOYadfl/s320/FB_IMG_1664970973440.jpg" width="320" /></a></div><br /><p><br /></p><p>ಬಹುಶಃ ಮನುಷ್ಯ ಹುಟ್ಟಿದಾಗಿನಿಂದ ನಂಬಿಕೆಗಳೂ ಹುಟ್ಟಿರಬಹುದು. ನಂಬಿಕೆ ಅಂದ್ರೆ ಕೆಲವೊಮ್ಮೆ ಪ್ರಶ್ನಿಸುವಂಥದ್ದು, ಇನ್ನು ಕೆಲವೊಮ್ಮೆ ಪ್ರಶ್ನಿಸಲು ಹೆದರುವಂಥದ್ದು. ಆದರೆ, ಇನ್ನು ಕೆಲವು ಸಂಗತಿಗಳನ್ನು ಪ್ರಶ್ನಿಸುವುದಕ್ಕೂ ಮನುಷ್ಯನ ಹತ್ತಿರ ಸಾಧ್ಯವಾಗುವುದಿಲ್ಲ. ಮನುಷ್ಯ ಸಂಕುಲ ಸೃಷ್ಟಿಯಾದ ನಂತರ 'ದೇವರು' ಅಂತ ಏನನ್ನೋ ಮೊದಲ ಬಾರಿಗೆ ಕಂಡುಕೊಂಡಾಗ, ಅದನ್ನು ಗುರುತಿಸಿದಾಗ ಮನುಷ್ಯನಿಗೆ ತನಗಿಂತ ಭಿನ್ನವಾದ ಅಸ್ತಿತ್ವವೊಂದರ ಅನುಭವ ಆಗಿರಲೇಬೇಕಲ್ಲ! ತನ್ನನ್ನು ಮೀರಿದ ಶಕ್ತಿಯೊಂದನ್ನು ಮನುಷ್ಯನೇ ಬೆಳೆಸಿಕೊಂಡ, ಅದಕ್ಕೆ ದೇವರು ಅಂತ ಕರೆದ. ತಾನು ಕಂಡುಕೊಂಡ ಆ ಶಕ್ತಿಯೇ ಇಡೀ ಜಗತ್ತಿನ ಸೃಷ್ಟಿಗೆ ಕಾರಣವೆಂದೂ ಹಾಗೂ ಅದರ ನಾದ ಮಾತ್ರದಿಂದಲೇ ಜಗತ್ತು ತನ್ನ ಲಯವನ್ನು ಕಂಡುಕೊಳ್ಳುತ್ತದೆಂದು ನಂಬಿದ. ಹಾಗೆ ಜಗತ್ತು ನಡೆಯುವಾಗ, ಅದರೊಳಗೆ ನಡೆಯುವ ಎಲ್ಲ ಕಾರ್ಯಗಳನ್ನೂ ಆ ಶಕ್ತಿ ಈ ಜಗತ್ತಿನ ಸ್ಥಿತಿಯನ್ನು ಕಾಪಾಡುವುದಕ್ಕೆ ನಡೆಸುವ ಕೆಲಸವೆಂದೂ ಕರೆದ. ನಂಬುವುದಷ್ಟೇ ಅಲ್ಲದೇ, ತನ್ನ ನಂಬಿಕೆಗಳನ್ನೂ ಆರಾಧಿಸತೊಡಗಿದ. ದೇವರ ಜೊತೆ ಜೊತೆಗೆ ಗಣಗಳೂ ಹುಟ್ಟಿಕೊಂಡವು. ಎಲ್ಲವೂ ಒಂದು ಸಮತೋಲನದ ಪ್ರಕ್ರಿಯೆಯ ಭಾಗವೇ ಆದವು. ಜಗತ್ತಿನ ವಾಸ್ತುಶಿಲ್ಪಕ್ಕೆ ದೇವರು ಮತ್ತು ನಂಬಿಕೆಗಳು ಕೊಟ್ಟಷ್ಟು ಕೊಡುಗೆಯನ್ನು ಮತ್ತ್ಯಾವುದೂ ಕೊಟ್ಟಿಲ್ಲ. ಬೇರೆ ಬೇರೆ ಕಲಾಪ್ರಕಾರಗಳು ಈ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಕ್ಕೂ ಈ ಎಲ್ಲಾ ನಂಬಿಕೆಗಳೇ ಮುಖ್ಯ ಕಾರಣ. ಇಂಥ ನಂಬಿಕೆಗಳೇ ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಹುಟ್ಟುಹಾಕಿದವು. ಈ ಸಂಸ್ಕೃತಿಗಳೇ ಮನುಷ್ಯನ ಬದುಕನ್ನು ಕಲಾತ್ಮಕವಾಗಿಸಿದವು. ನಂಬಿಕೆಗಳು ಬದುಕಿಗೆ ನೆಮ್ಮದಿ, ಧೈರ್ಯ, ಸಂಸ್ಕಾರ, ಆತ್ಮ ಸಂತೃಪ್ತಿಯನ್ನು ಕೊಟ್ಟವು. ನಂಬಿಕೆಗಳನ್ನು ಪ್ರಶ್ನಿಸುವುದನ್ನೂ ಇದೇ ಸಂಸ್ಕೃತಿ ಹೇಳಿಕೊಟ್ಟಿತು. ಪ್ರಶ್ನಿಸುವುದಕ್ಕೂ ಹೀಗಳೆಯುವುದಕ್ಕೂ ವ್ಯತ್ಯಾಸವಿದೆ. ಭಾರತ ಯಾವತ್ತಿಗೂ ಅನ್ವೇಷಕರ ನಾಡು. ಇದಮಿತ್ಥಂ ಅನ್ನುವ ನಂಬಿಕೆಯಿಂದ ಶುರುವಾಗಿ ಆ ನಂಬಿಕೆಗಳ ಪರಿಧಿಯನ್ನು ಮೀರಿ ಉತ್ತರ ಹುಡುಕುವ ಸಂಸ್ಕೃತಿ ಭಾರತದ್ದು. ಹೀಗೆ ಹುಡುಕುವ ಪ್ರಕ್ರಿಯೆಯಲ್ಲಿ ಒಂದಷ್ಟು ಆಚರಣೆಗಳು, ಪದ್ಧತಿಗಳೂ ರೂಪುಗೊಳ್ಳುತ್ತವೆ. ಅವೇ ಪರಂಪರೆಯಾಗಿ ಮುಂದುವರೆಯುತ್ತವೆ. "ಅರೇ, ಮನುಷ್ಯ ಹುಟ್ಟಿದ ಮೇಲಲ್ಲವಾ ಇವೆಲ್ಲಾ ಆಗಿದ್ದು?" ಅಂತ ಪ್ರಶ್ನಿಸಬಹುದಷ್ಟೇ, ಆದರೆ ಮನುಷ್ಯ ಪ್ರಪಂಚ ಹುಟ್ಟುವುದಕ್ಕೂ ಮೊದಲು ಏನಿತ್ತು? ಮನುಷ್ಯ ಪ್ರಪಂಚವೇ ಪೂರ್ತಿ ಕಣ್ಮರೆಯಾದ ಮೇಲೆ ಏನು ಉಳಿಯಬಹುದು? ಇವೆಲ್ಲಕ್ಕೂ ಏನೇನೋ ಊಹಿಸಿಕೊಂಡು ಉತ್ತರಿಸಬಹುದು ಬಿಟ್ಟರೆ, ನಿಖರವಾದ ಉತ್ತರ ಹೇಳುವುದಾದರೂ ಹೇಗೆ ಸಾಧ್ಯ? ಇಂದ್ರಿಯಗಳ ಅನುಭವದ ಪರಿಧಿಗೆ ನಿಲುಕದೇ ಇರುವುದನ್ನು ವ್ಯಂಗ್ಯ ಮಾಡುವ ಬದಲು, ಆ ಅನುಭವ ನಮಗಿನ್ನೂ ಆಗಿಲ್ಲ ಅಂತ ಒಪ್ಪಿಕೊಳ್ಳುವುದೇ ಹೆಚ್ಚು ಪ್ರಾಮಾಣಿಕತೆ. ತನಗಿಂತ ಹೆಚ್ಚು ಬಲಾಢ್ಯವಾದ ಯಾವುದೋ ಶಕ್ತಿ ತನ್ನನ್ನು ಕಾಯುತ್ತದೆ ಅನ್ನುವ ನಂಬಿಕೆಯಿಂದ ಮನುಷ್ಯ ಅಸಾಧ್ಯಗಳನ್ನು ಸಾಧ್ಯವಾಗಿಸಬಲ್ಲ. ಅದು ನಂಬಿಕೆಗೆ ಇರಬಹುದಾದ ಹರವು. </p><p><br /></p><p>ಜಗತ್ತಿನೆಲ್ಲೆಡೆಯೂ ಮನುಷ್ಯರ ಕತೆಗಳು ಒಂದೇ ಥರವೇ. ಆದರೆ, ಯಾವಾಗ ಆ ನೆಲದ, ಆ ಪರಿಸರದ ಭಿನ್ನತೆಗಳು ಕತೆಯಾಗುತ್ತವೆಯೋ ಆಗ ಅವು ಹೊಸ ಆಯಾಮವನ್ನು ಕತೆಗೆ ಒದಗಿಸುತ್ತವೆ. ಹಾಗೆ ಹುಟ್ಟಿಕೊಂಡ ಕತೆಗಳು ಒಟ್ಟೊಟ್ಟಿಗೆ ಜಾಗತಿಕವೂ, ಪ್ರಾದೇಶಿಕವೂ ಆಗುತ್ತವೆ. ಒಂದು ಕತೆ ಏಕತಾನತೆಯ ಹಾದಿಯಲ್ಲಿ ಸಾಗುವುದನ್ನು ತಪ್ಪಿಸುವುದೂ ಇದೇ ಪ್ರಾದೇಶಿಕತೆ. ಒಂದೇ ತೆರನಾದ ಕತೆಗಳು ಸಾಹಿತ್ಯದಲ್ಲಿ ಕಾಣುತ್ತಿವೆ, ಸಾಹಿತ್ಯ ನಿಂತ ನೀರಾಗಿದೆ, ಅದೇ ಊರು ಅದೇ ಕೇರಿ, ಅದೇ ನಗರ ಅದೇ ಉದ್ಯೋಗ, ಇವಿಷ್ಟರ ಸುತ್ತಲೇ ಕತೆಗಳು ಮತ್ತು ಕಥಾ ಪಾತ್ರಗಳು ಸುತ್ತು ಹೊಡೆಯುತ್ತಿವೆ ಅನ್ನುವ ಆರೋಪಗಳ ಮಧ್ಯ, ನಾವು ನಿಜವಾಗಿಯೂ ಈ ನೆಲದ ಕತೆಗಳನ್ನು ಪೂರ್ತಿಯಾಗಿ ಹೇಳಿದೆವಾ ಅಂತ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಬಹುಶಃ ಇಲ್ಲ ಅಂತಲೇ ಅನ್ನಿಸದಿದ್ದರೆ ನಾವಿನ್ನೂ ಕತೆಗಳನ್ನು ಗುರುತಿಸಬಲ್ಲವರಾಗಿಲ್ಲವೆಂದೇ ಅರ್ಥ. ಸಮೃದ್ಧ ಜೀವ ಸಂಕುಲವಿದ್ದಲ್ಲಿ ಕತೆಗಳಿಗೆ ಬರವೇ! ಪ್ರಕೃತಿಯೊಂದಿಗೆ ಬದುಕು ಆರಂಭಿಸಿದ ಮನುಷ್ಯ ತಾನು ಮಾಡಿಕೊಂಡ ವ್ಯವಸ್ಥೆಗಳಲ್ಲಿ ಮನುಷ್ಯನೊಂದಿಗೇ ಬಿಕ್ಕಟ್ಟು ಸೃಷ್ಟಿಸಿಕೊಂಡ. ತಾನು ಶಕ್ತಿಶಾಲಿ ಅಂತ ನಿರೂಪಿಸುವ ಭರದಲ್ಲಿ ಪ್ರಕೃತಿಗೂ ಎದುರಾಗಿ ನಿಂತ. ಆದರೆ, ದಾಹವಾದಾಗ ಕುಡಿಯಲು ಬೇಕಾಗುವ ನೀರು, ಹಸಿವಾದಾಗ ಬೇಕಾಗುವ ಆಹಾರವನ್ನು ಕೊಡುವ ಮಣ್ಣು, ಇವೆರಡಕ್ಕಿಂತಲೂ ಪ್ರತಿ ಕ್ಷಣ ಉಸಿರಾಡಲು ಅಗತ್ಯವಿರುವ ಗಾಳಿ ಇವುಗಳಲ್ಲಿ ಯಾವುದು ಕಲುಷಿತವಾದರೂ ಅದರಿಂದ ತನಗೇ ತೊಂದರೆ ಅನ್ನುವುದು ಮಾತ್ರ 'ತಾನೇ ಬುದ್ಧಿವಂತ' ಅಂದುಕೊಂಡ ಪ್ರಾಣಿಗೆ ತಿಳಿಯದೇ ಇರುವುದು ವಿಪರ್ಯಾಸ ಹಾಗೂ ಅದೇ ಸೋಜಿಗ. ಕೃತಕವಾಗಿ ಆಮ್ಲಜನಕ ತಯಾರಿಸಿ ಮಾರಾಟ ಮಾಡಿ ಅದೆಷ್ಟು ಹಣ ಮಾಡಬಹುದು ಅನ್ನುವ ಯೋಚನೆಯೇ ಹೆಚ್ಚು ಪ್ರಯೋಜನಕಾರಿ ಅಂತ ಅನಿಸದೇ ಹೋದರೆ ಅವ ಇಂದಿನ ಮನುಷ್ಯನೇ ಅಲ್ಲ;ಅವನಿಗೆ 'ಬದುಕುವ ಕಲೆ'ಯೇ ಗೊತ್ತಿಲ್ಲ! ಆದರೆ, ನಮ್ಮ ಪೂರ್ವಿಕರಿಗೆ ಮನುಷ್ಯನ ಅಗತ್ಯತೆಗಳ ಅರಿವಿತ್ತು. ಹಾಗಾಗಿಯೇ ಅದೆಷ್ಟೋ ವಿಷಯಗಳನ್ನು ದೇವರ ಹೆಸರಿನಲ್ಲಿ ಕಾಪಾಡತೊಡಗಿದರು. ಉದಾಹರಣೆಗೆ 'ದೇವರ ಕಾಡು'. ಈ ಥರದ ಕಾಡುಗಳು ಇರುವುದರ ಮಹತ್ವದ ಅರಿವಿರದೇ ಹೋದರೆ, ಅದು ಮೂಢನಂಬಿಕೆಯಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಅಂಥ ಕಾಡುಗಳೇ ಇಂದಿಗೂ ನಮ್ಮನ್ನೆಲ್ಲಾ ಪೊರೆಯುತ್ತಿರುವುದು. ನದಿ ಕೇವಲ ನಾಗರಿಕತೆಗಳ ತೊಟ್ಟಿಲು ಅಂತ ಓದಿ ಬಿಟ್ಟುಬಿಡದೇ, ದೇವರ ಸ್ಥಾನದಲ್ಲಿಟ್ಟು ಪೂಜಿಸುವ ನಾಡು ನಮ್ಮದು. ಮನುಷ್ಯನ ಬದುಕು ಸುಲಲಿತವಾಗಿ ನಡೆಯುವುದಕ್ಕೆ ಅನುವು ಮಾಡಿಕೊಡುವ ಪ್ರಕೃತಿಯ ಎಲ್ಲ ಸಂಗತಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವ ಹಾಗೂ ಆ ಸ್ಮರಣೆಗಾಗಿ ಒಂದೊಂದು ಆಚರಣೆಯನ್ನು ಪೋಷಿಸಿಕೊಂಡು, ತಲೆಮಾರುಗಳಿಂದ ನಡೆಸಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಕತೆಗಳು ಖಾಲಿಯಾದಾವೇ! </p><p><br /></p><p>ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣ ಕಾಂತಾರ ಸಿನೆಮಾ. ಈ ಬರವಣಿಗೆಯ ಯಾವ ಅಗತ್ಯವೂ ಇಲ್ಲದಷ್ಟು ಸಿನೆಮಾ ಈಗಾಗಲೇ ಜನಸಮೂಹವನ್ನು ತಲುಪಿಯಾಗಿದೆ. ಈ ಬರವಣಿಗೆಯಿಂದ ಆ ಸಿನೆಮಾಕ್ಕೆ ಯಾವ ಲಾಭವೂ ಇಲ್ಲ. ಆದರೆ, ಸಿನೆಮಾ ನೋಡಿ ಅದರಿಂದ ಉಂಟಾದ ರಸಾನುಭೂತಿಯನ್ನು ಪದಕ್ಕಿಳಿಸುವ ಪ್ರಯತ್ನ ಮಾಡದೇ ಹೋದರೆ, ಬಹುಶಃ ಆ ಸಿನೆಮಾದ ಗುಂಗಿನಿಂದ ಹೊರಬರುವುದು ತುಸು ಕಷ್ಟವೇ ಆದೀತೇನೋ.. "ವರಾಹ ರೂಪಂ ದೈವ ವರಿಷ್ಠಮ್" ಅನ್ನುವ ಆ ಧ್ವನಿ ಈಗಲೂ ಕಿವಿಯಲ್ಲಿ, ಮನಸ್ಸಿನಲ್ಲಿ ಅನುರಣಿಸುತ್ತಲೇ ಇದೆ. ಸಿನೆಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ವಾ ಅಂತ ಪ್ರಶ್ನಿಸಿಕೊಂಡರೆ ಬೇಕಾದಷ್ಟು ಸಿಗುತ್ತವೆ. ಕೆಲವು ಪಾತ್ರಗಳು ಮತ್ತು ಆ ಪಾತ್ರಗಳಿಗೆ ಇರಬಹುದಾದ ಸಾಧ್ಯತೆಗಳು ಅಥವಾ ಸಂದರ್ಭದ ತೀವ್ರತೆ ಅಷ್ಟು ಸಮರ್ಥವಾಗಿ ಕಟ್ಟಲ್ಪಟ್ಟಿಲ್ಲ. ಉದಾಹರಣೆಗೆ ಲೀಲಾಳ ತುಮುಲಗಳು. ಆದರೂ, ಯಾಕೆ ಸಿನೆಮಾ ಅಷ್ಟು ಇಷ್ಟವಾಯಿತು ಅಂತ ಕೇಳಿದರೆ ಅದಕ್ಕೆ ಬಹಳಷ್ಟು ಕಾರಣಗಳು ದೊರೆತವು. ಸುಮ್ಮನೆ ನೆಪಕ್ಕಾಗಿ ಯಾವುದನ್ನೂ ಇಲ್ಲಿ ತುರುಕಿಲ್ಲ. ಈ ಥರದ ಸಿನೆಮಾಗಳಾಗಲೀ, ಸಿನೆಮಾದ ಅಂತ್ಯಗಳಾಗಲೀ ಬಂದೇ ಇಲ್ವಾ ಅಂತ ಕೇಳಿದರೆ, ಬಂದಿವೆ; ಸುಖಾಂತ್ಯದ ಭಾಗವಾಗಿ ಬಂದವುಗಳೇ ಹೆಚ್ಚು. ಆದರೆ, ಇಲ್ಲಿ ಅದು ಇಡೀ ಕತೆಯ ಭಾಗವಾಗಿ, ಇಡೀ ಕತೆಯೇ ಅಂಥದ್ದೊಂದು ಹಂದರದಲ್ಲಿ ಸಹಜವಾಗಿ ಬಂದಿದೆ. ಜೊತೆಗೆ, ಅದರ ತೀವ್ರತೆಯೂ ಪ್ರೇಕ್ಷಕರಲ್ಲಿ ಒಂದು ತೆರನಾದ ಭಾವೋತ್ಕರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲಿನವರೇ ಆ ಕತೆಯನ್ನು ಹೇಳಿದಾಗ ಅದಕ್ಕೊಂದು ಸ್ವಂತಿಕೆ ಸಿಗುತ್ತದೆ. ಅದರಲ್ಲೂ ಇದು ಸಂಪೂರ್ಣವಾಗಿ ಜನಪದದ ಹಿನ್ನೆಲೆಯಲ್ಲಿ ಮೂಡಿಬಂದಿದ್ದರಿಂದ ಜನರಿಗೆ ಹತ್ತಿರವಾಗುವ ಗುಣ ಹೆಚ್ಚು. ಜನಪದ ತನ್ನ ಸೊಗಡು ಹಾಗೂ ನೈಜತೆಯಿಂದಾಗಿ ಯಾವತ್ತೂ ಜನಮಾನಸದಲ್ಲಿ ಔನ್ನತ್ಯವನ್ನು ತಲುಪುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಮಾಯಣ. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವುದಕ್ಕೂ ಮೊದಲಿಗೆ ರಾಮಾಯಣವನ್ನು ನಾರದರಿಂದ ಕೇಳಿದ್ದು ಜನಪದದ ಭಾಗವಾಗಿಯೇ. ಜನಪದದಲ್ಲಿ ಮುಗ್ಧತೆ, ಭಕ್ತಿ, ಧರ್ಮಪ್ರಜ್ಞೆ, ನಂಬಿಕೆ, ಗೌರವ, ಸಂಭ್ರಮ, ಸಂಸ್ಕಾರ, ದರ್ಶನ, ಮೌಲ್ಯ, ಪರಂಪರೆ, ಸಂಪ್ರದಾಯಗಳಿವೆ. ಹಾಗಾಗಿ ಜನಪದ ಗಟ್ಟಿಯಾಗಿ ಬೇರೂರುತ್ತದೆ. ಮನಸ್ಸುಗಳನ್ನು ಕಟ್ಟುತ್ತದೆ. </p><p><br /></p><p>ದಕ್ಷಿಣ ಕನ್ನಡದ ಕುರಿತು ಹೇಳುವಾಗ ಹೇಳಲಾಗುವ ಒಂದು ಮಾತನ್ನು ಗಮನಿಸಿದ್ದೇನೆ; 'ಅವಿಭಜಿತ ದಕ್ಷಿಣ ಕನ್ನಡ'. ಅಲ್ಲಿನ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಅವೆಲ್ಲಕ್ಕೂ ಮೂಲವಾಗಿರುವ ದೈವಗಳು ಇಡೀ ದಕ್ಷಿಣ ಕನ್ನಡವನ್ನು ಒಂದಾಗಿ ಹಿಡಿದಿಟ್ಟಿವೆ ಅಂದರೆ ತಪ್ಪಾಗಲಾರದೇನೋ. ಹಾಗೆಯೇ, ದಕ್ಷಿಣ ಕನ್ನಡಕ್ಕೆ ಒಂದು ನಿಗೂಢತೆಯಿದೆ. ಆ ನಿಗೂಢತೆಯೇ ಅಲ್ಲಿನ ಆಚರಣೆಗಳಿಗೂ ಅಂಥದ್ದೊಂದು ಗುಣವನ್ನು ತಂದುಕೊಟ್ಟಿದೆ. ಅಲ್ಲಿನ ನಂಬಿಕೆಗಳೆಲ್ಲಾ ಕತೆ ಅಂದುಕೊಂಡವರಿಗೆ ಕತೆಯೂ ಹೌದು, ಸತ್ಯ ಅಂದುಕೊಂಡವರಿಗೆ ಸತ್ಯವೂ ಹೌದು. ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳಿಗೆ ಈ ನಾಡು ಸಾಕ್ಷಿಯಾಗಿದೆ. ನನ್ನನ್ನು ಯಾವುದೋ ಶಕ್ತಿ ನಿರಂತರವಾಗಿ ಕಾಯುತ್ತಿದೆ ಹಾಗೂ ಅದು ನಾನು ಅಧರ್ಮದ ದಾರಿ ಹಿಡಿಯದಂತೆ ಸದಾ ಎಚ್ಚರಿಸುತ್ತಲೂ ಇರುತ್ತದೆ ಅನ್ನುವ ಭಾವವೇ ಬದುಕಿಗೆ ಅದೆಷ್ಟು ನೆಮ್ಮದಿ ತರಬಲ್ಲದು. ಅದಕ್ಕಾಗಿಯೇ ಇಲ್ಲಿನ ದೈವಗಳು ದೇವಸಮಾನವಾಗಿ ಪೂಜಿಸಲ್ಪಡುತ್ತವೆ. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವುಗಳು ಇವು ಅನ್ನುವ ನಂಬಿಕೆಯೂ ಇದರ ಭಾಗವೇ. ಇಲ್ಲಿ ಮನುಷ್ಯರೂ ದೈವದ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಭಾರತ ಧರ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. </p><p><br /></p><p>ಈ ಚಿತ್ರ ಘೋಷಣೆಯಾದ ದಿನದಿಂದ ಕಾದು, ಸುಮಾರು ನಾಲ್ಕು ವರ್ಷಗಳ ನಂತರ ಚಿತ್ರಮಂದಿರಕ್ಕೆ ಹೋಗಿ, ಇಂಥದ್ದೊಂದು ಸಿನೆಮಾ ನೋಡುವ ಸಂಭ್ರಮವೇ ಬೇರೆ. ಸಿನೆಮಾ ನೋಡಿ ಆದ ಮೇಲೂ ಅದರ ಕುರಿತಾಗಿ ನಾನು ಬರೆಯಬೇಕು ಅಂದುಕೊಂಡಿದ್ದೆಲ್ಲವೂ ಸಪ್ಪೆಯೆನಿಸಿ, ಕಾದು ಕಾದು ಬರೆಯುವ, ಪದೇ ಪದೇ ಸಿನೆಮಾವನ್ನು ಕಣ್ಣೆದುರಿಗೆ ತಂದುಕೊಳ್ಳುವ ಈ ಅನುಭವ ಇದೆಯಲ್ಲಾ ಅದಕ್ಕಾಗಿ ಕಾಂತಾರ ಹತ್ತಿರವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಅನಿರ್ವಚನೀಯ ಅನುಭೂತಿಯನ್ನು ಹುಟ್ಟುಹಾಕುವುದು ಸುಲಭದ ಸಂಗತಿಯಲ್ಲ. ಕಾಂತಾರ ಒಂದು ಪರಿಪೂರ್ಣ ಕಲಾಕೃತಿಯಲ್ಲ. ಆದರೆ, ಚೆಂದದ ಹಾಗೂ ಸ್ವಂತಿಕೆಯ ಕಲಾಕೃತಿ. ತನ್ನ ಅಪೂರ್ಣತೆಯನ್ನು ತಾನೇ ಮೀರುವ ಸಾಧ್ಯತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡ ಕಲಾಕೃತಿ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿಯೇ ಹೇಳಿದ ಸಿನೆಮಾ. ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳ ಭಿನ್ನತೆಗಳು ಹಾಗೂ ಪರಿ'ಶುದ್ಧ'ವಾದಾಗ ಉಂಟಾಗುವ ಸಮಾನತೆ ಇತ್ಯಾದಿಗಳನ್ನು ವಾಚ್ಯವಾಗಿಸದೇ ಹೇಳಿದೆ. ಸಿಂಗಾರ ಸಿರಿಯೇ ಹಾಡಲ್ಲಿ Manasi Sudhir ಅವ್ರು ಶಿವ ಮತ್ತು ಲೀಲಾಳನ್ನು ನೋಡಿ ಒಳಗೊಳಗೇ ಖುಷಿಪಡುವ ದೃಶ್ಯ ಇದೆ. ಅದು ಬಹುಶಃ ಎಲ್ಲ ಅಮ್ಮಂದಿರ ಅಂತಃಕರಣದ ಪ್ರತೀಕ ಅಂತಲೇ ಅನಿಸಿತು. ಒಂದು ಊರಿನ, ಒಂದು ಭಾಗದ ಸಾಮಾಜಿಕ ಜೀವನವನ್ನು ಯಾವ ಪೂರ್ವಗ್ರಹದಲ್ಲಾಗಲೀ ಅಥವಾ ಸಿದ್ಧಾಂತದ ಪರಿಧಿಯಲ್ಲಾಗಲೀ ತೆರೆದಿಟ್ಟಿಲ್ಲ. 'ಆ ಕಾಲಘಟ್ಟದಲ್ಲಿ ಹೀಗಿತ್ತು ಮತ್ತು ಇದು ಹೀಗಿದೆ' ಅನ್ನುವುದಷ್ಟೇ ಇಲ್ಲಿನ ಪ್ರಸ್ತುತಿ. ಚಿತ್ರದ ಕೊನೆಯಲ್ಲಿ ಇರುವ ಆಶಯವೂ ಅಷ್ಟೇ ಹೃದ್ಯವಾದದ್ದು. ಧರ್ಮ ಮತ್ತು ದೈವ ಇರುವುದು ಇದೇ ಕಾರಣಕ್ಕಾಗಿ ಹಾಗೂ ಇದೇ ಅವುಗಳ ಕೆಲಸ ಅನ್ನುವುದನ್ನು ಅದೆಷ್ಟು ಕಾವ್ಯಾತ್ಮಕವಾಗಿ ಹೇಳಲಾಗಿದೆ ಅಂದರೆ, ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗುತ್ತದೆ ಹಾಗೂ ಮನಸ್ಸು ಆಹ್ಲಾದಕ್ಕೊಳಗಾಗುತ್ತದೆ. ಕತೆ, ಕವಿತೆ, ಸಿನೆಮಾ ಯಾವುದರಲ್ಲೇ ಆದರೂ, ಅಷ್ಟೂ ಹೊತ್ತಿನ ಸಂಗತಿಗಳನ್ನು ಒಗ್ಗೂಡಿಸಿ, ಅದಕ್ಕೊಂದು ಸೂಕ್ತವಾದ ಅರ್ಥ ಕೊಡುವುದು ಅಂತ್ಯದ ಕೆಲಸ. ಹಾಗಾಗಿಯೇ ಅಂತ್ಯ, ಇಡೀ ಸಿನೆಮಾವನ್ನು ಕಟ್ಟಬಹುದು ಅಥವಾ ಕೆಡವಬಹುದು. ಕಾಂತಾರದಲ್ಲಿ ಅಂತ್ಯ ಇಡೀ ಸಿನೆಮಾಕ್ಕೆ ಬೇರೆ ನೆಲೆಯನ್ನೇ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬಂದ ಸಿನಿಮಾಗಳು ಧರ್ಮ, ಆಚರಣೆ, ಸಂಪ್ರದಾಯಗಳ ಕುರಿತಾಗಿ ಇರಬೇಕಾದ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದೇ ಹೆಚ್ಚು. ಆದರೆ, ಈ ಸಿನೆಮಾದಲ್ಲಿ ನಮ್ಮ ನೆಲದ ಕತೆಯನ್ನು ಒಂದು ಆತ್ಮೀಯ ಕತೆಯಾಗಿಯೇ ಹೇಳುವ ಹಾಗೂ ಅದನ್ನು ಅಷ್ಟೇ ಗೌರವದಿಂದ, ಜತನದಿಂದ ಮುಂದಿಡುವ ಪ್ರಯತ್ನಕ್ಕೆ ಮನಸ್ಸು ತುಂಬಿಕೊಳ್ಳದೇ, ಪುಳಕಗೊಳ್ಳದೇ ಇರುವುದಾದರೂ ಹೇಗೆ ಸಾಧ್ಯ! </p><p><br /></p><p>"ವರಾಹ ರೂಪಂ ದೈವ ವರಿಷ್ಠಮ್..."</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-43911990016726768682022-07-23T17:16:00.003+05:302022-07-23T17:16:29.031+05:30 'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... <p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi5GQYStOJ73A_yWKDkfJJ-CFFstiNaMyNeqem2ZC8x0BiaQoDpxaoYtXPsrDe1t-OzysMyyBbIDBfrmUnJ0CQLAWkKuhjn0w3_cw6vQIHDsvWEA2Er34oRHiNEbliC0KNNMxiBts74ytE/s4624/20220723_165830.jpg" style="margin-left: 1em; margin-right: 1em;"><img border="0" data-original-height="4624" data-original-width="3468" height="320" src="https://blogger.googleusercontent.com/img/b/R29vZ2xl/AVvXsEi5GQYStOJ73A_yWKDkfJJ-CFFstiNaMyNeqem2ZC8x0BiaQoDpxaoYtXPsrDe1t-OzysMyyBbIDBfrmUnJ0CQLAWkKuhjn0w3_cw6vQIHDsvWEA2Er34oRHiNEbliC0KNNMxiBts74ytE/s320/20220723_165830.jpg" width="240" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><b><br /></b></div><div style="text-align: center;"><b>'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...</b> </div><div><br /></div><div>ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ, ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. </div><div><br /></div><div>ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ ಕೇಳಿದ್ದೇನಲ್ಲಾ ಅಂತ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. </div><div><br /></div><div>ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ, ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ ಮೇಲೆ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ ನೋಡಿ ಬಂದೆ ಒಮ್ಮೆ! </div><div><br /></div><div>ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ ತಂದುಕೊಡುವ ಹೆಣ್ಣಿನ ಸ್ಥಿತಿ. </div><div><br /></div><div>ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.</div><div><br /></div><div>ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" </div><div><br /></div><div>- 'ಶ್ರೀ'</div><div> ತಲಗೇರಿ</div><p></p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-7703237179856254072022-07-17T17:22:00.003+05:302022-07-17T19:16:20.861+05:30'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' <p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjrTsQdAxOrccIzgms4zrdKVASWSCsKoGYy_VhAFdV1VGAr66M0SOz596DQ5V_TI67n85vlSttJk01cd3ZVdTfC9hPHP9huKozOkNjeu4FpvNZEP7J1JvMEHbvDbTWxASWYA5c4CAvZ865LSYMEgfWaOg9uaEiNvdLmopkSayZIrEA0h2LOKBJAuRuG/s960/ShankaraVihaaraCover_900x.jpg" style="margin-left: 1em; margin-right: 1em;"><img border="0" data-original-height="960" data-original-width="600" height="320" src="https://blogger.googleusercontent.com/img/b/R29vZ2xl/AVvXsEjrTsQdAxOrccIzgms4zrdKVASWSCsKoGYy_VhAFdV1VGAr66M0SOz596DQ5V_TI67n85vlSttJk01cd3ZVdTfC9hPHP9huKozOkNjeu4FpvNZEP7J1JvMEHbvDbTWxASWYA5c4CAvZ865LSYMEgfWaOg9uaEiNvdLmopkSayZIrEA0h2LOKBJAuRuG/s320/ShankaraVihaaraCover_900x.jpg" width="200" /></a></div><br /> 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' <p></p><p><br /></p><p>ಇದೆಂಥದು? ಈ ಥರದ್ದೊಂದು ಪುಸ್ತಕದ ಕುರಿತಾಗಿ ಇವ ಯಾಕಾದ್ರೂ ಹೇಳ್ಬೇಕು ಅಂತ ಹಲವರಿಗೆ ಅನ್ನಿಸಬಹುದು, ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಇನ್ನು ಕೆಲವರಿಗೆ 'ಇವರೆಲ್ಲಾ ಇಷ್ಟೇ' ಅಂತಲೂ ಅಥವಾ ಇನ್ನೂ ಏನೇನೋ ಅನ್ನಿಸಬಹುದು. ಆದರೂ, ಬಹಳಷ್ಟು ದಿನಗಳ ನಂತರ ಒಂದು ಗಹನವಾದ ಹಾಗೂ ಗಾಢವಾದ ಕ್ಷಣಗಳನ್ನು ಒಂದು ಪುಸ್ತಕ ಓದುವುದರಿಂದ ಅನುಭವಿಸಿದ್ದಕ್ಕಾದರೂ ಈ ಪುಸ್ತಕದ ಬಗ್ಗೆ ಬರೆಯಲೇಬೇಕು. ನಿಜ ಹೇಳಬೇಕೆಂದರೆ, ಈ ಪುಸ್ತಕದ ಅಡಿಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿಂದ ಈ ಪುಸ್ತಕದೊಂದಿಗಿನ ಪ್ರಯಾಣ ಶುರುವಾಗಿದ್ದು. ಆಮೇಲೆ ಪುಸ್ತಕ ಶುರುಮಾಡಿದ ಮೇಲೆ ತಿಳಿಯಿತು ನಾನಂದುಕೊಂಡಿದ್ದು ಬೇರೆ ಅಂತ. ಆದರೆ, ಪುಸ್ತಕದ ಮೊದಲ ಅಧ್ಯಾಯದಲ್ಲೇ ಒಂದು ವಿನಮ್ರ ವಿಜ್ಞಾಪನೆಯಿದೆ. ಆ ವಿಜ್ಞಾಪನೆಯೇ ಈ ಪುಸ್ತಕಕ್ಕೆ ಒಂದು ಗಟ್ಟಿ ದನಿಯನ್ನು ಕೊಟ್ಟಿದೆ. ಕೆಲವೊಮ್ಮೆ ನಾವು ಏನನ್ನು ಓದಲು ಬಯಸುತ್ತೇವೆಯೋ ಅದನ್ನು ಯಾರೂ ಬರೆಯದಿದ್ದಾಗ ನಾವೇ ಬರೆಯಲು ಮುಂದಾಗಬೇಕಾಗುತ್ತದೆ. ಇದು ಅಂಥದ್ದೇ ಪ್ರಯತ್ನ ಅಂತ ಲೇಖಕರು ಹೇಳಿದ್ದಾರೆ. ನನಗೆ ಈ ಸಂದರ್ಭದಲ್ಲಿ ಚಿತ್ರನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರು ಒಂದು ಸಂದರ್ಶನದಲ್ಲಿ ಹೇಳಿದ ಒಂದು ಮಾತು ಕೂಡಾ ನೆನಪಿಗೆ ಬಂತು; "ನನ್ ಸಿನೆಮಾ ಯಾರೂ ಮಾಡೋದಿಲ್ಲ, ನಾನೇ ಮಾಡ್ಕೋಬೇಕು"! ನಾನು ಯಾವ ಥರದ ಕತೆಯನ್ನು, ಸಂಗತಿಯನ್ನು ಕೇಳಲು ಬಯಸುತ್ತೇನೋ ಆ ಥರದ್ದನ್ನು ಯಾರೂ ಹೇಳದಿದ್ದಾಗ, ನಾನೇ ಆ ಪ್ರಾರಂಭಕ್ಕೆ ಒಂದು ಆರಂಭ ಕೊಡಬೇಕು. ಇದು ಕೇವಲ ಯಾವುದೋ ಒಂದು ಸಿದ್ಧಾಂತದ ಪ್ರಚಾರಕ್ಕಾಗಿಯೋ, ಇದೊಂದೇ ಶ್ರೇಷ್ಠ ಅನ್ನುವುದನ್ನು ಸಾರುವುದಕ್ಕಾಗಿಯೋ ಬರೆದ ಪುಸ್ತಕವಿರಬಹುದು ಅಂತ ಅಂದುಕೊಂಡಲ್ಲಿ ಅದು ತೀರಾ ಬಾಲಿಶವಾದೀತು. ಭಾರತದ ಹಲವು ದರ್ಶನಗಳನ್ನು ಒಟ್ಟಿಗೆ ಇಟ್ಟು, ಅವುಗಳನ್ನು ಸರಳವಾಗಿ ನೋಡುವ ಹಾಗೂ ಅವುಗಳ ಸಾಮ್ಯತೆಗಳನ್ನು ಗುರುತಿಸುವುದರ ಜೊತೆಗೆ ಅದ್ವೈತ ಎಷ್ಟರ ಮಟ್ಟಿಗೆ ಹೆಚ್ಚು ಪ್ರಸ್ತುತವಾಗಬಲ್ಲದು ಅನ್ನುವುದನ್ನೂ ಹೇಳುವ ಸಂಕಲ್ಪದ ಭಾಗವೇ ಶ್ರೀ ಅಕ್ಷರ ಕೆ ವಿ ಅವರ 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' </p><p><br /></p><p>ನಾವು ಅದೆಷ್ಟೇ ಜಾಗಗಳಿಗೆ ಹೋಗಲಿ, ಅದೆಷ್ಟೇ ದೇಶಗಳನ್ನು ಸುತ್ತಲಿ, ಕೊನೆಗೆ ಎಲ್ಲವನ್ನೂ ಸಮೀಕರಿಸಿಕೊಳ್ಳುವುದು ನಮ್ಮೂರಿನ ಯಾವುದೋ ಒಂದು ಜಾಗಕ್ಕೆ; ಇದು ಅದರ ಹಾಗಿಲ್ಲ, ಅದಕ್ಕಿಂತ ಚೂರು ಜಾಸ್ತಿ ಅಥವಾ ಕಡಿಮೆ ಅಂತಲೋ, ಎಷ್ಟೇ ವ್ಯಕ್ತಿಗಳನ್ನು ಭೇಟಿ ಮಾಡಲಿ; ಇವ ಅವರ ಥರವೇ ಅಲ್ವಾ ಅಂತಲೋ, ಇನ್ನೂ ಏನೇನೋ ಹೀಗೆ. ಅಂದರೆ, 'ಮನುಷ್ಯ ಎಲ್ಲಿ ಹೋದರೂ ತನ್ನ ಪರಿಚಿತ ನೆನಪುಗಳೊಂದಿಗೆ ಮಾತ್ರವೇ ಎಲ್ಲವನ್ನೂ ನೋಡುತ್ತ ಹೋಗುತ್ತಾನೆ'. ಸ್ವತಂತ್ರವಾದಂಥ ಚಿತ್ರಣವೊಂದು ತಾನಾಗೇ ಮೂಡುವುದಕ್ಕೆ ಬಹುತೇಕವಾಗಿ ಕಷ್ಟಸಾಧ್ಯವೇ ಆಗಿರಬಹುದು.</p><p><br /></p><p>ಇನ್ನು, ಬಹುತೇಕರು ಆಧುನಿಕತೆಯೆಂದರೆ ಸಂಪ್ರದಾಯಕ್ಕೆ ವಿರುದ್ಧ ಅಂತಲೇ ಅಥವಾ ಸಂಪ್ರದಾಯದ ವಿರುದ್ಧವಾಗಿದ್ದರೆ ಮಾತ್ರ ತಾವು ಆಧುನಿಕರು ಅಂತ ಭಾವಿಸಿದ್ದಾರೆ. ಆಧುನಿಕತೆಯೆಂದರೆ ನಂಬಿಕೆಗಳ ನವೀಕರಣ; ಅದು ಸಂಪ್ರದಾಯದಿಂದ ವಿಮುಖವಾಗಬೇಕಿಲ್ಲ. ಒಂದು ಸಂಕುಚಿತ ಅರ್ಥದಲ್ಲಿ ನೋಡಿದರೆ ಬಹುಶಃ ಎರಡೂ ಪರಸ್ಪರ ತಾಳೆಯಾಗದ ಪದಗಳಾಗಿ ಕಂಡರೆ ಅದು ಅವರವರ ಮಿತಿ ಅಷ್ಟೇ. ಯಾಕೆಂದರೆ ಸತ್ಯಕ್ಕೆ ಕೇವಲ ಎರಡು ಮುಖಗಳೇ ಇರಬೇಕು ಅಂತೇನೂ ಇಲ್ಲವಲ್ಲ ! ಈ ಎರಡು ಮುಖಗಳ ನಂಬಿಕೆಯಾಚೆಗಿನ ಇನ್ನೊಂದು ಸಾಧ್ಯತೆಯೂ ಇರಬಹುದು. ಅಂಥ ಒಂದು ಸಾಧ್ಯತೆಯನ್ನು ಪರಿಕಲ್ಪನೆಯಲ್ಲಿಯೂ ಸಹ ನಿರೀಕ್ಷಿಸಿರದೇ ಇದ್ದವರಿಗೆ ಮಾತ್ರ ಅದು ಕೇವಲ ಎರಡು ರೂಪಗಳಿಗೆ ಸೀಮಿತ. ಜೊತೆಗೆ, ನಮ್ಮಲ್ಲೊಂದು ಪರಿಪಾಠವಿದೆ. ಆಧುನಿಕವೆಂಬಂತೆ ತೋರಿಸಿಕೊಳ್ಳಬೇಕೆಂದರೆ ಸಂಪ್ರದಾಯವನ್ನು ಹೀಯಾಳಿಸಬೇಕು. ಅದನ್ನು ಕಂಡಕಂಡ ಪದಗಳಲ್ಲಿ ಲೇವಡಿ ಮಾಡಬೇಕು. ಸಂಪ್ರದಾಯವಾದಿಗಳೆಂದವರನ್ನು 'ಹೋ' ಎಂಬ ಕಿರುಚಾಟದ ನಡುವೆ ಅವಮಾನಿಸಬೇಕು. ವೈಚಾರಿಕತೆಯ ಗಂಧವೂ ಇರದ ಇಂಥ ಮನಸುಗಳು ಹೆಚ್ಚಾಗುತ್ತಿರುವುದು ಹಾಗೂ ಅದನ್ನು ಪೋಷಿಸುತ್ತಿರುವುದು ಈ ಕಾಲದ ದುರಂತಗಳಲ್ಲಿ ಒಂದು. </p><p><br /></p><p>ಇತ್ತೀಚೆಗೆ ವಿಶ್ವವಿದ್ಯಾಲಯಗಳನ್ನು ದೊಡ್ಡ ದೊಡ್ಡ ಕಂಪೌಂಡುಗಳು ಸುತ್ತುವರೆದಿರುತ್ತಾವಲ್ಲಾ, ಅದನ್ನಿಲ್ಲಿ ಒಂದು ಆಳವಾದ ವ್ಯಂಗ್ಯದೊಂದಿಗೆ ಹೇಳಲಾಗಿದೆ. ವಿಶ್ವವಿದ್ಯಾಲಯಗಳು ಹಾಕುವ ಎತ್ತರದ ಬೇಲಿಗಳು ಕೇವಲ ಭೌತಿಕ ಬೇಲಿಯಲ್ಲ, ಅದು ಅಲ್ಲಿ ಬೋಧಿಸುವ ಸಂಗತಿಗಳ ಕುರಿತಾಗಿಯೂ ಇರುವ ಬೇಲಿ. ಅದೆಷ್ಟು ವಿಶ್ವವಿದ್ಯಾಲಯಗಳು ಕೇವಲ ತಮ್ಮದೇ ರಾಜಕೀಯ ಸಿದ್ಧಾಂತಗಳ ಬೇಲಿ ಹಾಕಿಕೊಂಡು ಕುಳಿತಿಲ್ಲ ಹೇಳಿ! ವಿಶ್ವದ ಎಲ್ಲ ಕಡೆಯಿಂದಲೂ ಜ್ಞಾನದ ಬೆಳಕು ಹರಿದುಬರಲಿ ಅನ್ನುವುದು ಭಾರತೀಯತೆಯ ಪ್ರಾರ್ಥನೆ. ಆದರೆ, ಈಗ ಕೇವಲ ಕೆಲವರು ಆರಿಸಿಕೊಟ್ಟ ಆ ಕೆಲವು ವಿಷಯಗಳ ಕುರಿತಾಗಿ ಮಾತನಾಡಿದರಷ್ಟೇ ನಮ್ಮನ್ನು ವೈಚಾರಿಕ ವ್ಯಕ್ತಿಯೆಂದು ಗುರುತಿಸಲಾಗುತ್ತದೆ; ಇಲ್ಲದಿದ್ದಲ್ಲಿ ಗೊಡ್ಡು ಸಂಪ್ರದಾಯವಾದಿ! </p><p><br /></p><p>ವೇದವಾಕ್ಯಗಳು ಎಂದಿಗೂ ಯಾವ ಕೆಲಸವನ್ನೂ ಮಾಡಿ ಯಾ ಮಾಡಬೇಡಿರೆಂದು ವಿಧಿಸುವುದಿಲ್ಲ. ಅವು ಕೇವಲ ಅಭಿವ್ಯಕ್ತಿಯಾಗಿ ಮಾತ್ರವೇ ಇವೆ. ಅಂದರೆ, ಒಂದು ಕೆಲಸವನ್ನು ಹೀಗೆ ಮಾಡಿದರೆ ಹೀಗಾಗಬಹುದು ಅನ್ನುವ ದಾರಿಯ ಪರಿಕಲ್ಪನೆಯನ್ನು ಸೂಚಿಸುತ್ತವೆಯೇ ಹೊರತೂ ಅಲ್ಲಿ ವಿಧಿಸುವಿಕೆ ಇಲ್ಲ. ಇದು ಮಾತ್ರವೇ ನಿನಗಿರುವ ದಾರಿ ಅನ್ನುವ ಕಟ್ಟಪ್ಪಣೆ ಇಲ್ಲ. ಭಾರತ ಯಾವತ್ತಿಗೂ ಅನ್ವೇಷಕರ ಭೂಮಿ ( land of seekers ). ಇದು ಹೀಗೆಯೇ ಅಂತಂದು ಷರಾ ಬರೆದ ಮರುಕ್ಷಣವೇ ಅನ್ವೇಷಣೆಗೆ ಅವಕಾಶವಾದರೂ ಎಲ್ಲಿ? ಭಾರತದಲ್ಲಿ ಇದ್ದಿದ್ದು ಇದು ಹೀಗೆ; ಬೇಕಾದರೆ ಹುಡುಕಿಕೋ ಅನ್ನುವ ಸಂಜ್ಞೆ. ಜೊತೆಗೆ ಹುಡುಕದೇ ಯಾವುದರ ಸಾಕ್ಷಾತ್ಕಾರವೂ ಆಗುವುದಿಲ್ಲ. ಕಾರಣ, ಪ್ರತೀ ವ್ಯಕ್ತಿಯ ಅನುಭವವೂ ಭಿನ್ನ. ಹಾಗೆಯೇ, ಪ್ರತಿ ವ್ಯಕ್ತಿಯ ಅಂತರಂಗವೂ ಭಿನ್ನ. ಅದೇ ಅಧ್ಯಾತ್ಮ; ಆತ್ಮದ ಕುರಿತಾಗಿದ್ದು! ಅಪಾರದರ್ಶಕ ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಬೆಳಕು ಬೀಳುತ್ತಿರುವ ಕೋನದಿಂದ ನೋಡಿದವನಿಗೆ ಅಪಾರದರ್ಶಕದ ನೆರಳು ಗೋಚರಿಸದೇ ಹೋಗಬಹುದು. ಆಗ, ನೆರಳೇ ಇಲ್ಲ ಅಂತ ವಾದಿಸುವುದು ಮತ್ತು ನಂಬುವುದು ಪೂರ್ಣ ದರ್ಶನದ ಭಾಗವಲ್ಲ. ಅದಕ್ಕಾಗಿಯೇ ಭಾರತದಲ್ಲಿ ಕೇವಲ ಯಾವುದೋ ಒಂದು ದರ್ಶನವಿರಲಿಲ್ಲ. ಎಲ್ಲ ದರ್ಶನಗಳ ಒಟ್ಟೂ ಸತ್ಯ ಮತ್ತೆ ಸತ್ಯದ ಮೂಲ ರೂಪಕ್ಕೇ ಹೋಗಿ ನಿಲ್ಲುತ್ತದೆ. ಯಾವಾಗಲೂ ಒಂದು ಮಾತಿದೆ; ಮೀನು ಹಿಡಿಯುವುದನ್ನು ಕಲಿಸು ಆದರೆ ನೀನೇ ಮೀನು ಹಿಡಿದುಕೊಡಬೇಡ ಅಂತ. ಹೀಗೂ ಇರಬಹುದು ಅನ್ನುವ ಹಲವು ದಾರಿಗಳನ್ನು ತೆರೆದಿಡು, ಆದರೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ನಿರ್ಧಾರವನ್ನು ಆ ವ್ಯಕ್ತಿಗೆ ಬಿಡು, ಇದನ್ನೇ ವೇದವಾಗಲೀ ಭಗವದ್ಗೀತೆಯಾಗಲೀ ಮಾಡುವುದು - ಯಥೇಚ್ಛಸಿ ತಥಾ ಕುರು. </p><p><br /></p><p>ಇನ್ನೊಂದು ಮಜದ ಸಂಗತಿಯೆಂದರೆ, ನಮ್ಮಲ್ಲಿ ಹಲವರು ಮೂಲಗ್ರಂಥಗಳನ್ನು ಓದದೆಯೇ ಅಲ್ಲ್ಯಾರೋ ಇನ್ನು ಹೇಗೋ ಅಸಂಬದ್ಧವಾಗಿ ಅರ್ಥೈಸಿಕೊಂಡಿರುವುದನ್ನು ಬರೆದಿದ್ದನ್ನೇ ಓದಿ ಇನ್ನೇನೋ ಅರ್ಥೈಸಿಕೊಳ್ಳುತ್ತೇವೆ. ಆ ಗ್ರಂಥದಲ್ಲಿ ಆ ಸಾಲಿನ ಮೂಲ ಉದ್ದೇಶ ಇನ್ನೇನೋ ಆಗಿರಬಹುದು. ಒಂದು ಸಂಗತಿಯ ಹಿಂದೆ ಮುಂದೆ ಬೇರೆ ಏನಾದರೂ ಇದ್ದರೆ, ಆ ಇಡೀ ಸಂಗತಿ ಅರ್ಥವಾಗುವ ರೀತಿಯೇ ಬೇರೆ! ಕೇವಲ ಒಂದು ಸಾಲನ್ನು ಮಾತ್ರವೇ ತೆಗೆದುಕೊಂಡು ಅದರ ಅರ್ಥವನ್ನು ವಿಶ್ಲೇಷಿಸಿ ಮಹಾನ್ ವೈಚಾರಿಕರೆನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಉದಾಹರಣೆಗೆ, 'ಅವನು ಊಟ ಮಾಡಿದನು' ಇದೊಂದು ಸರಳವಾದ ವಾಕ್ಯ ಸ್ವತಂತ್ರವಾಗಿ;ಅರ್ಥವೂ ಅಷ್ಟೇ ಸರಳ. ಆ ವಾಕ್ಯದ ಹಿಂದೆ ಈಗ ಈ ವಾಕ್ಯವನ್ನು ಸೇರಿಸುವ; "ಯಾರ ಹತ್ತಿರವೋ ಬೇಡಿ ಅವರು ಊಟ ಪಡೆದಿದ್ದರು, ಅವರ ಕೈಯಿಂದ ಅದನ್ನು ಕಸಿದುಕೊಂಡು ಅವನು ಊಟ ಮಾಡಿದನು". ಇನ್ನೂ ಒಂದು ವಾಕ್ಯ " ನಡುಗುವ ಕೈಗಳ ಅಮ್ಮನ ಕೈಯಿಂದ ಅವನು ಊಟ ಮಾಡಿದನು". ಅವನು ಊಟ ಮಾಡಿದ್ದು ಸತ್ಯವೇ ಆದರೂ, ವಾಕ್ಯದ ನಿಜ ಅರ್ಥ ಹಾಗೂ ಧ್ವನಿ ಮೂರೂ ಸಂಗತಿಗಳಲ್ಲಿ ಬೇರೆಬೇರೆಯೇ ಅಲ್ವಾ! ಈಗ ನಮ್ಮ ವೇದ, ಉಪನಿಷತ್ತು, ಪುರಾಣ, ಮಹಾಕಾವ್ಯದ ವಿಷಯಗಳಲ್ಲಿ ಆಗುತ್ತಿರುವುದು ಇದೇ. </p><p><br /></p><p>ಹೇಗೆ ತತ್ವಗಳಿಗೆ ದೇವರ ರೂಪ ಕೊಡಲಾಗುತ್ತದೋ ಹಾಗೆಯೇ, ಅವತಾರಗಳ ಮೂಲಕ ದೇವರಿಗೆ ಮನುಷ್ಯ ರೂಪ ಕೊಡಲಾಗುತ್ತದೆ. ಈ ಸಂಗತಿ ಅದೆಷ್ಟು ಆಪ್ತವೆಂದರೆ, ದೇವರು ಅಂದ ಮಾತ್ರಕ್ಕೆ ಮನುಷ್ಯ ನಿಯಮಗಳನ್ನು ಮೀರುವ ಹಾಗಿಲ್ಲ. ಮನುಷ್ಯ ದೇಹವನ್ನು ಪ್ರವೇಶಿಸಿದ ಮೇಲೆ ಮನುಷ್ಯ ಅನುಭವಿಸಬೇಕಾದ ಎಲ್ಲ ಕ್ಲೇಶಗಳನ್ನು ದೇವರೆಂಬ ದೇವರೂ ಅನುಭವಿಸಬೇಕು! ಯುದ್ಧ ಮುಗಿದ ಮೇಲೆ ರಾಮ ಹೇಳುತ್ತಾನಲ್ಲಾ; "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ". ಇವೆಲ್ಲವೂ ಒಂಥರಾ ಫ್ಯಾನ್ಸಿ ಅಥವಾ ಅತಿರೇಕದ ಹೇಳಿಕೆಗಳಂತೆ ಭಾಸವಾಗಬಹುದು. ಆದರೆ, ನಾನೂ ನೀನೂ ಬೇರೆಯಲ್ಲ ಅನ್ನುವುದನ್ನು ಇದಕ್ಕಿಂತ ಇನ್ನೊಂದು ದೃಷ್ಟಾಂತದ ಮೂಲಕ ಹೇಳುವುದಕ್ಕೆ ಸಾಧ್ಯವಾ! </p><p><br /></p><p>~'ಶ್ರೀ' </p><p> ತಲಗೇರಿ</p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-17125217638245049282022-06-05T23:09:00.003+05:302022-06-05T23:09:57.131+05:30ಹಿಮಶ್ರೇಣಿಗಳ ಮಡಿಲಲ್ಲಿ ಬದುಕಿನ ಹಾಡು<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhPKIpo_SMBKbb31SbI4PZPsjy08be7CR9rb3CXQTlEbWj0zAuCX64jQl_lL7uJnLMJ0XxYHQQqdC9Wn5Qd84yUNVBbwvhus4vUhVQ4LXI4vJRSmyN4BKUfk7dGoGufEejJEXk9I3ew4Y1c0aEn2W7VoFqRrXiju5a5gkK94RxGvUhlS8KM-tAYlRId/s1054/Screenshot_20220605-083624_MyLang.jpg" imageanchor="1" style="margin-left: 1em; margin-right: 1em;"><img border="0" data-original-height="1054" data-original-width="914" height="320" src="https://blogger.googleusercontent.com/img/b/R29vZ2xl/AVvXsEhPKIpo_SMBKbb31SbI4PZPsjy08be7CR9rb3CXQTlEbWj0zAuCX64jQl_lL7uJnLMJ0XxYHQQqdC9Wn5Qd84yUNVBbwvhus4vUhVQ4LXI4vJRSmyN4BKUfk7dGoGufEejJEXk9I3ew4Y1c0aEn2W7VoFqRrXiju5a5gkK94RxGvUhlS8KM-tAYlRId/s320/Screenshot_20220605-083624_MyLang.jpg" width="277" /></a></div><p><br /></p><p>ಹೋರಾಟ ಎನ್ನುವುದು ಯಾವತ್ತಿಗೂ ರೋಚಕವಾದದ್ದು ಅದರಾಚೆ ನಿಂತು ನೋಡುವವರಿಗೆ. ಆದರೆ, ಆ ಹೋರಾಟದ ಭಾಗವಾಗಿರುವವರಿಗೆ ಅದು 'ಉಸಿರು ನಿಲ್ಲುವ ಅಥವಾ 'ನಿಟ್ಟುಸಿರು ಬಿಡುವ' ಈ ಎರಡರಲ್ಲಿ ಯಾವುದಾದರೂ ಒಂದು ಆಗಿಹೋಗುವ ಭಯಾನಕ ಅವಧಿ. ಹೋರಾಟವೆಂದರೆ ಹೊಡೆದಾಟ, ಯುದ್ಧ, ಚಳುವಳಿ ಇತ್ಯಾದಿಗಳೇ ಆಗಬೇಕಿಲ್ಲ. ಮನುಷ್ಯ ಸಂಕುಲದಲ್ಲಷ್ಟೇ ಅಲ್ಲ, ಎಲ್ಲ ಜೀವಕೋಟಿಗಳಲ್ಲೂ ಇರುವ ಒಂದು ಸಾಮ್ಯತೆ ಇದು. ಕೋಟ್ಯಂತರ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮುನ್ನುಗ್ಗುವಿಕೆಯಿಂದ ಶುರುವಾಗಿ, ಪ್ರತಿ ನಿತ್ಯ ಪ್ರತಿ ಕ್ಷಣ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುವುದರಿಂದ ಹಿಡಿದು, ಶಿಶುವಾಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಗೋಡೆ ಹಿಡಿದು ನಿಲ್ಲುವ ಪ್ರಯತ್ನಗಳಾದಿಯಾಗಿ ಮರಣಕ್ಕೂ ಮುನ್ನ ಯಾರನ್ನೋ ನೋಡುವ ಸಲುವಾಗಿ ಯಾರದೋ ಸ್ಪರ್ಶ, ಧ್ವನಿ ತರಂಗಗಳ ಅನುಭವದ ಸಲುವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಾಯುವವರೆಗೆ ಇಡೀ ಒಂದು ಪ್ರಯಾಣ ಅಷ್ಟು ಸರಳವೂ ಅಲ್ಲ, ಸಾಮಾನ್ಯವೂ ಅಲ್ಲ. ಪ್ರಾಣಿ ಜಗತ್ತಿನಲ್ಲಿಯೂ ಅಷ್ಟೇ; ಆ ಕ್ಷಣಕ್ಕೆ ಸಿಕ್ಕ ಆಹಾರವನ್ನು ಉಳಿಸಿಕೊಳ್ಳುವ, ಸಂಗಾತಿಯನ್ನು ಆಕರ್ಷಿಸುವ, ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ, ಪ್ರಕೃತಿಯಲ್ಲಾಗುವ ಸಹಜ, ಅಸಹಜ ಬದಲಾವಣೆಗೆ ನಿರಂತರವಾಗಿ ಗ್ರಾಹಿಯಾಗಿರುವ ಸಂಗತಿ ಸಣ್ಣದಲ್ಲ. ಆದರೆ, ಎಲ್ಲವೂ ಮುಖ್ಯವಾಹಿನಿಯಲ್ಲಿ ಚರ್ಚಿಸಲ್ಪಡುವುದಿಲ್ಲ. ಅವೆಲ್ಲವೂ ಈ ಲೋಕದ ಪಾಡು ಎನ್ನುವ ಹಾಗೆ ಸಹಜವಾಗಿ ನಡೆದುಹೋಗುತ್ತವೆ ಮತ್ತು ಅವು ಯಾರನ್ನೂ ತಮ್ಮತ್ತ ಸೆಳೆಯುವಂಥವುಗಳಲ್ಲ. ನಮಗೆಲ್ಲಾ ಒಮ್ಮೊಮ್ಮೆ ಜಡತೆ ಆವರಿಸುತ್ತದೆ. ಎಲ್ಲವುಗಳಲ್ಲಿಯೂ ನಿರಾಸಕ್ತಿ ಅಥವಾ ಯಾವುದೋ ಒಂದನ್ನು ಮಾಡಿಮುಗಿಸಬಹುದಾದ ಇಚ್ಛಾಶಕ್ತಿಯ ಕೊರತೆ ಕಾಡತೊಡಗುತ್ತದೆ. ಆಗ ಹೊಸತೇನನ್ನೋ ಹುಡುಕಿ ಹೊರಡುತ್ತೇವೆ, ಮತ್ತೆ ಬದುಕನ್ನು ನವೀಕರಿಸಿಕೊಳ್ಳುವ ಉತ್ತೇಜನಕ್ಕಾಗಿ ಹಂಬಲಿಸುತ್ತೇವೆ. ಹಲವಾರು ಬಾರಿ ಯಾವ್ಯಾವುದೋ ಕೃತಕ ವ್ಯಕ್ತಿತ್ವ ವಿಕಸನ ಭಾಷಣ, ಬರಹ, ಸಿನಿಮಾ ಇತ್ಯಾದಿಗಳ ಮೊರೆಹೋಗುತ್ತೇವೆ. ಕೆಲವೊಮ್ಮೆ ಅವು ಧನಾತ್ಮಕವಾಗಿಯೂ ಕೆಲಸ ಮಾಡಬಲ್ಲವು. ಆದರೆ, ಅವೆಲ್ಲವೂ ಬೇರೂರಿ ಕೊನೆಗೆ ಫಲ ಕೊಡಬೇಕಾಗಿರುವುದು ನಮ್ಮಲ್ಲಿಯೇ, ಆ ಆಳಕ್ಕಿಳಿಯುವ ಕಾರ್ಯ ಆಗದೇ ಇದ್ದಲ್ಲಿ ಎಲ್ಲವೂ ತಾತ್ಕಾಲಿಕ. ಇದು ಒಂದು ಕಡೆಯಾದಲ್ಲಿ, ಕೆಲವರ ಬದುಕೇ ಈ ಎಲ್ಲಾ ವ್ಯಕ್ತಿತ್ವ ವಿಕಸನ ತರಗತಿಗಳ ವಿಶ್ವವಿದ್ಯಾಲಯದಂತಿರುತ್ತದೆ. ಅದರಲ್ಲಿ ಪ್ರತ್ಯೇಕವಾಗಿ ಹೇರಿಕೊಂಡ ಸಂಗತಿಗಳಿರುವುದಿಲ್ಲ, ಯಾವುದೋ ಒಂದು ಸಮಯ, ಘಟನೆ, ವಿಷಯ ಅವರನ್ನು ಸಾಮಾನ್ಯ ಬದುಕಿನಿಂದ ಭಿನ್ನವಾದ ಮತ್ತು ಎತ್ತರದ ನೆಲೆಗೆ ಕೊಂಡೊಯ್ಯುತ್ತದೆ. ಆಗ ಆ ಇಡೀ ಬದುಕೇ ಸಹಜವಾದ ಸ್ಫೂರ್ತಿಯ ಆಕರವಾಗುತ್ತದೆ. ಅಂಥದ್ದೇ ಒಂದು ಮೈನವಿರೇಳಿಸುವ, ಕ್ಷಣಕ್ಷಣಕ್ಕೂ ಕೈ ಜಾರುತ್ತಿರುವ ಬದುಕನ್ನು ಮತ್ತೆ ಮತ್ತೆ ಗಟ್ಟಿಯಾಗಿ ಅಪ್ಪಿಕೊಳ್ಳುವ, ನಕ್ಷೆಯಲ್ಲಿ ಎಲ್ಲಿದ್ದೇವೆ ಎಂದು ಗೊತ್ತೂ ಆಗದ ಜಾಗದಿಂದ ಮತ್ತೆ ಹೊರಜಗತ್ತಿನೊಂದಿಗೆ ಬೆರೆಯುವ ದಾರಿಯನ್ನು ಹುಡುಕುವ, ಎಲ್ಲವೂ ಮುಗಿಯಿತು ಅನ್ನುವಾಗಲೇ ಮತ್ತೆ ಹೊಸತಾಗಿ ಶುರುವಾಗುವ, ನಂಬಿಕೆಗಳ ಜೊತೆ ನಿರಂತರವಾಗಿ ಸಂಘರ್ಷವೇರ್ಪಟ್ಟು ಸಮಯದ ಜೊತೆ ರಾಜಿಯಾಗದೇ ನಿಂತು, ಪ್ರಕೃತಿಯ ಅಗಾಧತೆಯನ್ನು ಪೂಜಿಸುತ್ತಾ ಪ್ರಕೃತಿಯೊಂದಿಗೇ ಹೋರಾಡಿ ಗೆಲ್ಲುವ, ಆಂಡೀಸ್ ಪರ್ವತ ಶ್ರೇಣಿಯ ಮಡಿಲಲ್ಲಿ ನಡೆದ ಮನುಕುಲದ ದಾರುಣ ಸ್ಥಿತಿಯಲ್ಲೂ ಜೀವನಪ್ರೀತಿಯನ್ನು ಸ್ಫುರಿಸುವ ಕಥಾನಕವೇ ಸಂಯುಕ್ತಾ ಪುಲಿಗಲ್ ( Samyuktha Puligal ) ಅವರು ಅನುವಾದಿಸಿದ ಪರ್ವತದಲ್ಲಿ ಪವಾಡ. </p><p><br /></p><p>ನ್ಯಾಂಡೋ ಪರಾಡೊ ಬರೆದ, ಜೊತೆಗೆ ಜೀವಿಸಿದ ೭೨ ದಿನಗಳ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್ ( Miracle in the andes ) ಕೃತಿಯ ಕನ್ನಡ ಅನುವಾದ ಇದು. ಮಾನವೀಯ ತುಡಿತಗಳು ಮತ್ತು ಸಂಬಂಧಗಳ ಆರ್ದ್ರತೆಯನ್ನು ಕೊರೋನಾ ಸಮಯದಲ್ಲಿ ಬಹಳಷ್ಟನ್ನು ನೋಡಿದ್ದೇವೆ. ಅದೆಂಥದ್ದೇ ಗಟ್ಟಿಮನಸ್ಸಿನವರಾದರೂ ಒಮ್ಮೆ ಭಾವುಕರಾಗಬಹುದಾದ ಹಲವು ಸಂಗತಿಗಳನ್ನು ಕೇಳಿದ್ದೇವೆ, ಕಂಡಿದ್ದೇವೆ; ಅಲ್ಲ್ಯಾರೋ ವಯಸ್ಸಾದವರು ತನಗಾಗಿ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಇನ್ನ್ಯಾರೋ ಯುವಕನಿಗೆ ಬಿಟ್ಟುಕೊಟ್ಟು ತಾವು ಮೃತರಾದರಂತೆ, ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ವೈದ್ಯರು ತಮ್ಮ ಕುಟುಂಬದಿಂದ ದೂರಾದರಂತೆ, ಯಾರೋ ಒಂದಷ್ಟು ಜನ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದರಂತೆ, ನಿತ್ಯದ ಮುಗಿಯದ ಕೆಲಸಗಳ ಮಧ್ಯವೂ ಆಸ್ಪತ್ರೆಯ ಹಾಸಿಗೆ, ಔಷಧ, ಆಮ್ಲಜನಕ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ನಿದ್ದೆಗೆಟ್ಟು, ಊಟ ತಿಂಡಿಗಳನ್ನು ಬಿಟ್ಟು ಪ್ರಯತ್ನಿಸಿದರಂತೆ, ಯಾರೋ ಇನ್ನ್ಯಾರದೋ ಅನಾಥ ಮೃತಶರೀರಕ್ಕೆ ಸಿಗಬೇಕಾದ ಅಂತಿಮ ವಿಧಿಗಳನ್ನು ಪೂರೈಸಿದರಂತೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಮನುಷ್ಯ ಮನುಷ್ಯನೊಳಗಿನ ಬಾಂಧವ್ಯವನ್ನು, ಭರವಸೆಯನ್ನು ದಟ್ಟವಾಗಿ ಹೆಣೆಯುವ ಘಟನೆಗಳು. ಅಸಂಖ್ಯಾತ ಅಪನಂಬಿಕೆಗಳ, ಮೋಸದ, ಭ್ರಷ್ಟ ವ್ಯವಸ್ಥೆಗಳ, ಸ್ವಾರ್ಥ ಹಪಹಪಿಗಳ ನಡುವೆ ಇವೆಲ್ಲವೂ ಮಾನವ ಸಂಕುಲಕ್ಕೆ ಮನುಷ್ಯ ಪದದ ಅರ್ಥವನ್ನು ಮತ್ತೆ ಕಟ್ಟಿಕೊಡುವ ಸಂದರ್ಭಗಳು. ಅಂಥ ಸಂದರ್ಭಗಳು ದಿನಂಪ್ರತಿಯೂ ಒಂದಲ್ಲಾ ಒಂದು ಕಡೆ ಆಗುತ್ತಲೇ ಇರುತ್ತದೆ. ಆದರೆ, ಕೊರೋನಾ ಸಮಯದಲ್ಲಿ ನೋಡಿದ್ದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮನುಷ್ಯರು ಒಂದೇ ಸಮಯದಲ್ಲಿ ಈ ಅನುಭವಕ್ಕೆ ಸಾಕ್ಷಿಯಾಗಿದ್ದರು. ಇಡೀ ಜಗತ್ತನ್ನು ಅಂತರ್ಜಾಲ ಬೆಸೆಯುವ ಪ್ರಯತ್ನ ಮಾಡಿತು. ಮನೆಯಲ್ಲಿ ವಯಸ್ಸಾದವರಿದ್ದಾರೆ ಅಂತ ಮನೆಗೆ ಹೋಗದೇ ಉಳಿದ ಮಗ ಮಗಳು, ನಾನು ಊರಿಗೆ ಹೋಗಿ ತನ್ನೂರಿಗೆ ಏನಾದರೂ ಆದರೆ ಅಂತಂದುಕೊಂಡ ಉದ್ಯೊಗಕ್ಕಾಗಿ ಊರು ಬಿಟ್ಟು ಬಂದವ, ಯಾರೋ ನಗರ ಪ್ರದೇಶದಿಂದ ಬಂದಾಗ ಅವರು ಬಂದರು ಅನ್ನುವ ಕಾರಣಕ್ಕೇ ಇಬ್ಭಾಗವಾದ ಒಂದೇ ಊರಿನ ಜನರು, ದಣಿವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯಲೋಕ, ಭಯಗ್ರಸ್ತ ಮನಸುಗಳಿಗೆ ಧೈರ್ಯ ತುಂಬಿದ ಅದೆಷ್ಟೋ ಮಂದಿ, ಅದರ ಜೊತೆಜೊತೆಗೆ ದಂಧೆ ಎನ್ನುವ ಕರಾಳ ಜಗತ್ತು ಕೂಡ. ಇವಿಷ್ಟನ್ನೂ, ಅಥವಾ ಇದಕ್ಕಿಂತಲೂ ಹೆಚ್ಚಿನದನ್ನು ಜಗತ್ತು ನೋಡಿದೆ. ೧೯೭೨ರಲ್ಲಾದ ಒಂದು ವಿಮಾನ ಅಪಘಾತ ಹಾಗೂ ಇಡೀ ಜಗತ್ತಿನ ಸಂಪರ್ಕವೇ ಕಡಿದುಹೋದ ಆ ಕ್ಷಣದಲ್ಲಿ, ರಕ್ಷಣಾ ಸೇನೆ ಇವರಿರುವ ಜಾಗವನ್ನು ಪತ್ತೆಹಚ್ಚಬಹುದಾ ಇಲ್ಲವಾ ಅನ್ನುವುದರ ಕುರಿತಾಗಿಯೂ ಅನುಮಾನ ಇರುವಾಗ, ಸುತ್ತಲೂ ಎತ್ತರೆತ್ತರದ ಹಿಮಾವೃತ ಪರ್ವತಗಳ ಬುಡದಲ್ಲಿ ಬಿದ್ದ ಗಾಯಾಳುಗಳು ಮತ್ತೆ ವಾಪಸ್ ತಮ್ಮ ತಮ್ಮ ಮನೆಯ ಗೋಡೆಗಳಿಗೆ ಒರಗಿ ಕೂರುವ ಕ್ಷಣಗಳನ್ನು ನೆನೆಸಿಕೊಂಡು ಅದೆಷ್ಟು ಹಂಬಲಿಸಿರಬಹುದು. ಬಹುಶಃ ಬದುಕಿಗಿಂತ ಬೇರೆ ಸ್ಫೂರ್ತಿ ಇರಲಾರದೇನೋ, ಹೇಗಾದರೂ ಬದುಕಲೇಬೇಕು ಹಾಗೂ ಮತ್ತೊಮ್ಮೆ ಈ ಬದುಕನ್ನು ತೃಪ್ತಿಯಿಂದ ಅನುಭವಿಸಬೇಕು ಅನ್ನುವ ಕನಸು ಮತ್ತು ಆ ಕನಸಿನ ಬೆನ್ನುಹತ್ತಿ ಹೋಗುವ ಕತೆ ರೋಚಕವಾಗದೇ ಇದ್ದೀತಾದರೂ ಹೇಗೆ! ಮೂಲ ಕಾದಂಬರಿಯನ್ನು ನಾನಿನ್ನೂ ಓದಿಲ್ಲ, ಕೇವಲ ಅನುವಾದವನ್ನಷ್ಟೇ ಓದಿದೆ. ಕಾದಂಬರಿಯ ಮೊದಲ ಮಾತಿನಲ್ಲಿ ಲೇಖಕಿ ಹೇಳಿದ ಹಾಗೆ ಇದು ಬದುಕನ್ನು ದ್ವೇಷಿಸಿದ ವ್ಯಕ್ತಿಯೊಬ್ಬ ಬದುಕಿನ ಅಗಾಧ ಪ್ರೇಮವನ್ನು ಹುಡುಕಿ ಹೋಗುವ ಕಥನ. ಎಲ್ಲವೂ ಸರಿಯಾಗಿದ್ದಾಗಲೇ ನಮ್ಮ ಹತ್ತಿರ ಬದುಕಿನ ಕುರಿತಾಗಿ ಹಲವು ದೂರುಗಳಿರುತ್ತವೆ. ಏನೂ ಇಲ್ಲದಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬಹುದು ಅಥವಾ ಆ ಕ್ಷಣದ ನಮ್ಮ ದೃಷ್ಟಿಕೋನ ಹೇಗಿರಬಹುದು ಅನ್ನೋ ಪ್ರಶ್ನೆಗಳೆಲ್ಲಾ ಓದುವುದಕ್ಕೆ ಅಷ್ಟೇನು ಆಸಕ್ತಿದಾಯಕವಾಗದೇ ಹೋಗಬಹುದು, ಆದರೆ ಅದರ ಉತ್ತರಗಳು ಮಾತ್ರ ನಾವು ಪಯಣಿಸಿಯೇ ಇರದ ದಾರಿಗಳನ್ನು ತೆರೆದಿಡುತ್ತವೆ. </p><p><br /></p><p>ನಾವು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಂಗತಿಯೆಂದರೆ ಪ್ರಕೃತಿಯ ಇದಿರು ನಾವ್ಯಾರೂ ಒಂದು ಲೆಕ್ಕವೇ ಅಲ್ಲ ಅನ್ನುವುದು. ಆದರೆ ಮನುಷ್ಯನಿಗೊಂದು ಚಾಳಿಯಿದೆ. ಇದ್ದುದನ್ನು ಇದ್ದ ಸ್ಥಿತಿಯಲ್ಲಿಯೇ ಇರುವುದಕ್ಕೆ ಬಿಡದೇ ಇರುವುದು. ವಿಕೃತ ಆನಂದವೊಂದು ದೊರೆಯುತ್ತದೆ ಅಂತಾದಲ್ಲಿ ಮೆದುಳು ಅದಕ್ಕಾಗಿ ಸಜ್ಜಾಗಿಯೇ ಬಿಡುತ್ತದೆ, ಆ ಕ್ಷಣಕ್ಕೆ ತಾನೇ ಸರ್ವರಲ್ಲಿಯೂ ಶಕ್ತಿಶಾಲಿ ಎಂದು ಬೀಗುತ್ತದೆ ಕೂಡಾ. ಆದರೆ, ಸಮತೋಲನ ಎನ್ನುವುದು ಪ್ರಕೃತಿಯ ಅವಿಭಾಜ್ಯ ಅಂಗ. ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಗೊತ್ತೇ ಆಗದ ಹಾಗೆ ಪ್ರಕೃತಿ ಪ್ರತಿರೋಧ ಒಡ್ಡುತ್ತದೆ. ಪ್ರತಿ ಬಾರಿಯೂ ಬೇರೆ ಬೇರೆಯದೇ ರೀತಿಯಲ್ಲಿ. ಮನುಷ್ಯ ಅಲ್ಲಿಯೂ ಹೋರಾಡುತ್ತಾನೆ. ಯಾರು ಗೆಲ್ಲುತ್ತಾರೆ ನೋಡೇಬಿಡೋಣ ಅನ್ನುವ ಜಿದ್ದಿಗಿಂತ ಅದರ ಅಗಾಧತೆಯನ್ನು ಪೂಜಿಸಿ ಅದರ ಹತ್ತಿರವೇ ರಕ್ಷಿಸು ಅಂತ ದೈನ್ಯವಾಗಿ ಬೇಡಿಕೊಂಡು ನಂತರ ಪ್ರಯತ್ನ ಮುಂದುವರೆಸಿದರೆ ಆ ಹೋರಾಟಕ್ಕೆ ಸಿಗುವ ಆಯಾಮವೇ ಬೇರೆ. ಪೊರೆವವಳು ಮಡಿಲಲ್ಲಿಟ್ಟು ತೂಗದೇ ಇರುವಳೇ? ಎಷ್ಟೆಂದರೂ ಪರಾವಲಂಬಿಗಳಲ್ಲವೇ ನಾವು! </p><p><br /></p><p>ಸೂಕ್ಷ್ಮ ಮನಸಿನವರಾದರೆ, ಮನಸ್ಸನ್ನು ಗಟ್ಟಿಮಾಡಿಕೊಂಡು ಓದಿ ನೋಡಿ. ಗಟ್ಟಿ ಮನಸ್ಸಿನವರಾಗಿದ್ದರೆ, ಅಂಥ ಗಟ್ಟಿತನವನ್ನು ಚೂರಾದರೂ ಅಲ್ಲಾಡಿಸಲಿಕ್ಕೆಂದೇ ಒಂದಷ್ಟು ಘಟನೆಗಳು ಪುಸ್ತಕದ ಒಳಗೆ ಕಾಯುತ್ತಿವೆ, ಅಗಾಧ ಹಿಮಶ್ರೇಣಿಗಳ ನಡುವೆ ಬದಲಾಗುತ್ತಲೇ ಇರುವ ಪ್ರತಿಕೂಲ ಹವಾಮಾನದ ಥರ! ಈ ಮುಖಾಮುಖಿ ಕೇವಲ ಕಾದಂಬರಿ ಹಾಗೂ ಓದುಗರದ್ದಲ್ಲ; ಈ ಬಾರಿ, ಬದುಕು ಮತ್ತು ಬದುಕಿನದ್ದು ಮಾತ್ರ... </p><p><br /></p><p>~`ಶ್ರೀ'</p><p> ತಲಗೇರಿ</p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-9995806313313847422022-06-05T23:07:00.002+05:302022-06-05T23:07:37.292+05:30ಪುಟ್ಟ ಪಾದದ ಗುರುತಿಗೆ ಬರೀ ಎರಡು ರೆಕ್ಕೆ! <p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg3aUFczIi6wkoivThvx8_dmzqG4s4Cexj7q4d_4GvCH7fsFJ5uGR1O-s2dUICjN94XFpEY2dO-RfWw6ogaEpQJFo149Fn8NIoyBRtQ9kGyDHiZPhOo8tTuhRGaax0aZL_tZyBEvZVac1jeRSk-eabGTR_zDJnuq0-wA5QlGt4dyvqtQZVUtjjj8BzI/s1080/FB_IMG_1654450294828.jpg" imageanchor="1" style="margin-left: 1em; margin-right: 1em;"><img border="0" data-original-height="810" data-original-width="1080" height="240" src="https://blogger.googleusercontent.com/img/b/R29vZ2xl/AVvXsEg3aUFczIi6wkoivThvx8_dmzqG4s4Cexj7q4d_4GvCH7fsFJ5uGR1O-s2dUICjN94XFpEY2dO-RfWw6ogaEpQJFo149Fn8NIoyBRtQ9kGyDHiZPhOo8tTuhRGaax0aZL_tZyBEvZVac1jeRSk-eabGTR_zDJnuq0-wA5QlGt4dyvqtQZVUtjjj8BzI/s320/FB_IMG_1654450294828.jpg" width="320" /></a></div><br /> <p></p><p><br /></p><p>ಒಂದು ಬರೆಹ ಅಥವಾ ಸಿನೆಮಾ ಇಷ್ಟವಾಗುವುದಕ್ಕೆ ಹಲವು ಕಾರಣಗಳಿರಬಹುದು. ಯಾವುದೋ ಥರದ ಹೊಸ ಪ್ರಯತ್ನ ಮಾಡುವುದಕ್ಕೆ ಹೊರಟಿದ್ದಾರೆ, ಸಣ್ಣ ಪುಟ್ಟ ಹಿನ್ನೆಡೆಗಳಿದ್ದರೆ ಅವುಗಳನ್ನು ಮುನ್ನೆಲೆಗೆ ತರುವದು ಬೇಡ ಅಂದುಕೊಳ್ಳುತ್ತಲೇ ಇಷ್ಟವಾಗಬಹುದು ಅಥವಾ ಇದು ನನ್ನ ಪರಿಸರ, ನನ್ನ ಬದುಕಿಗೆ, ದೈನಂದಿನ ಸಂಗತಿಗಳಿಗೆ ಹೊಂದುತ್ತದೆ ಅನ್ನುವ ಕಾರಣದಿಂದ ಇಷ್ಟವಾಗಬಹುದು. ಅದರಲ್ಲಿ ಭಾವನಾತ್ಮಕವಾದ ಸನ್ನಿವೇಶಗಳಿವೆ, ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತದೆ, ನಮ್ಮೊಳಗಿನ ಹುಳುಕುಗಳನ್ನು ಎತ್ತಿ ಹೇಳುತ್ತದೆ, ದಮನಿತರ ದನಿಯಂತೆ ಕಾಣುತ್ತದೆ, ಅದನ್ನು ಕಟ್ಟಿಕೊಟ್ಟ ರೀತಿ ಬೇರೆಯದೇ ಆಗಿದೆ ಇತ್ಯಾದಿ ಇತ್ಯಾದಿ ಅನೇಕಾನೇಕ ಕಾರಣಗಳು. ಆದರೆ ಇವೆಲ್ಲವುಗಳ ಜೊತೆಗೆ, ಸಿನೆಮಾ ನೋಡುವಾಗಲೋ ಪುಸ್ತಕ ಓದುವಾಗಲೋ ಇರುವ ಮನಸ್ಥಿತಿಯ ಆಧಾರದ ಮೇಲೂ ಅದು ನೀಡುವ ಅನುಭವ ಪ್ರತ್ಯೇಕತೆಯನ್ನು ಪಡೆದುಕೊಳ್ಳುತ್ತದೆ. ಅದೇನೇ ಇದ್ದರೂ ಮನುಷ್ಯನಿಗೆ ನಂಬಿಕೆಗಳು ಬೇಕು, ತನ್ನ ತತ್ವಗಳನ್ನು ಉದ್ದೀಪಿಸುವ ಸಂಗತಿಗಳು ಬೇಕು, ತನ್ನ ಯೋಚನಾ ಧಾರೆಗಳನ್ನು ಬೆಂಬಲಿಸುವ ಹಾಗೂ ಸಮರ್ಥಿಸುವ ದಾಖಲೆಗಳು ಬೇಕು. ಇದರಿಂದಾಗಿ ತಾನು ಇತರರ ನಂಬಿಕೆಗಳನ್ನು ತಿರಸ್ಕರಿಸುವಂತಾದರೆ ಅದು ಬೋನಸ್ ಇದ್ದ ಹಾಗೆ! "ಇವೆಲ್ಲವೂ ಸಹಜ ತುಡಿತಗಳು, ಇವುಗಳಿಂದ ಮುಕ್ತವಾಗಿದ್ದಲ್ಲಿ ನೀವು ಈ ಸಮಾಜದ ಭಾಗವೇ ಅಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಿಮ್ಮಿಂದ ಸಾಸಿವೆಯಷ್ಟೂ ಉಪಯೋಗವಿಲ್ಲ" (ಎಳ್ಳನ್ನು ಖಾಲಿಮಾಡಿ ಸಾಸಿವೆ ಬಳಸಲಾಗಿದೆ!). ಇಂಥ ಒಂದು ಪರಿಸ್ಥಿತಿ ಇರುವಾಗ ಕೆಲವು ಕೃತಿಗಳು ಈ ಸಂಗತಿಗಳನ್ನಿಟ್ಟುಕೊಂಡೂ ಬೇರೆಯದಾಗಿ ನಿಲ್ಲುತ್ತವೆ. ಶ್ರೀಮತಿ ಸುನಂದಾ ಪ್ರಕಾಶ ಕಡಮೆಯವರ ಎರಡು ಕೃತಿಗಳ ಕುರಿತಾಗಿ ನಾನು ಇವತ್ತು ಹೇಳಹೊರಟಿದ್ದೇನೆ. ಒಂದು ಅವರ ಚೊಚ್ಚಲ ಕಥಾ ಸಂಕಲನ 'ಪುಟ್ಟ ಪಾದದ ಗುರುತು' ಇನ್ನೊಂದು ಇವರ ಚೊಚ್ಚಲ ಕಾದಂಬರಿ 'ಬರೀ ಎರಡು ರೆಕ್ಕೆ' </p><p><br /></p><p>ಪುಟ್ಟ ಪಾದದ ಗುರುತು ಅನ್ನೋ ಕತೆಯನ್ನೇ ಪುಸ್ತಕದ ಶೀರ್ಷಿಕೆಯಾಗಿ ಮಾಡಿರುವ ಶ್ರೀಮತಿ ಸುನಂದಾ ಕಡಮೆಯವರ ಕೃತ್ಯಕ್ಕೆ ಆ ಶೀರ್ಷಿಕೆ ನ್ಯಾಯ ಒದಗಿಸುತ್ತದೆ. ಬಹುತೇಕ ಕಥೆಗಳು ಬಾಲ್ಯ, ಮಾತೃತ್ವ ಹಾಗೂ ಮಕ್ಕಳ ಕುರಿತಾದ ವಸ್ತುಗಳನ್ನು ಹೊಂದಿವೆ. ಆದರೆ ಬರೀ ಅಷ್ಟೇ ಇಲ್ಲ, ಅದರಾಚೆಗೂ ಬೇರೆ ಕತೆಗಳಿವೆ ಹಾಗೂ ಆ ಕತೆಗಳು ಅಷ್ಟೇ ಸೊಗಸಾಗಿವೆ ಕೂಡಾ. ಬದುಕಿನ ಬಹುತೇಕ ಸಂಗತಿಗಳು ವರ್ತಮಾನದಲ್ಲಿ 'ಎಲ್ಲವೂ' ಅಥವಾ 'ನಗಣ್ಯ' ಅಷ್ಟೇ ಆಗಿ ಕಾಣಬಹುದು. ಆದರೆ ಕಾಲಾಂತರದಲ್ಲಿ ಆ ಸಂಗತಿಗಳ ನೆನಪುಗಳು ಈ ಅಳತೆಗಳ ಮಿತಿಗಳಿಂದಾಚೆ ನಿಲ್ಲುತ್ತವೆ. ಗಣ್ಯ ನಗಣ್ಯಗಳ ಹಂಗು ತೊರೆದು ಬದುಕಿನ 'ಬದುಕಿದ ಕ್ಷಣ'ಗಳಾಗುತ್ತವೆ. ಅದರಲ್ಲೂ ಮೊದಲ ಸಂಕಲನವೆಂದಾಕ್ಷಣ ಅದನ್ನು 'ಜನ' ನೋಡುವ ರೀತಿ ಬೇರೆ. ( ಓದುಗರು ನೋಡುವ ರೀತಿ ಬೇರೆ ಅಂತ ಬಳಸಿಲ್ಲ!) ಆ ಲೇಖಕನಿಗೆ ಅಥವಾ ಆ ಲೇಖಕಿಗೆ ಹೀಗೆ ಬರೆಯಬಹುದಿತ್ತು ಅಥವಾ ಹಾಗೆ ಬರೆಯಬಹುದಿತ್ತು ಅನ್ನುವವರ ಬಳಗವೂ ದೊಡ್ಡದೇ ಆಗಿರುತ್ತದೆ ( ಅದು ತಪ್ಪು ಅಂತಲ್ಲ !). ಜೊತೆಗೆ ಇನ್ನ್ಯಾವುದೋ ಲೇಖಕ ಲೇಖಕಿಯರೊಂದಿಗೆ ಈ ಕೃತಿಯನ್ನಿಟ್ಟು ತುಲನೆ ಮಾಡುವುದು, ಇದು ಅವರ ಬರೆಹವನ್ನು ಹೋಲುತ್ತದೆ ಅನ್ನುವುದು ಇವೆಲ್ಲವೂ ಸಹಜವೇ; ಹಾಗೂ, ಈ 'ಹೋಲುವಿಕೆ'ಯನ್ನು ಮೀರುವುದಕ್ಕೇ ಕೆಲವೊಮ್ಮೆ ಬಹಳ ಕಷ್ಟಪಡಬೇಕಾಗುತ್ತದೆ. ಅದೆಷ್ಟೇ ಆದರೂ ಎಲ್ಲೋ ಒಂದು ಕಡೆ ಯಾವುದೋ ಸಾಲಿಂದಲೋ, ಯಾವುದೋ ಪುಸ್ತಕದಿಂದಲೋ, ಕಥಾ ವಸ್ತುವಿನಿಂದಲೋ, ಬರೆಹದ ಶೈಲಿಯಿಂದಲೋ ಪ್ರಭಾವಿತರಾಗುವುದು ತಪ್ಪುವುದಿಲ್ಲ ಹಾಗೂ ಅದು ತಪ್ಪಲ್ಲ ಕೂಡಾ! ಬದುಕಿನಿಂದ ಬರೆಹ ಹುಟ್ಟಬೇಕೆನ್ನುವುದು ಸತ್ಯವಾದರೂ ಆ ಬರೆಹದ ಹುಟ್ಟಿಗೆ ಕಾರಣವಾಗುವ ವಿಷಯಗಳು ಹಲವಾರು ಇರಬಹುದಲ್ಲಾ! ಹಾಗೂ ಪ್ರತಿ ಲೇಖಕರಿಗೂ ಅವರದ್ದೇ ಆದ ಮಿತಿಗಳಿವೆ; ಲೇಖಕಿಯರಿಗೆ ಮಿತಿಗಳ ಮೇಲೆ ಮಿತಿಗಳಿವೆ! ಈಗ ಇವೆಲ್ಲವುಗಳನ್ನು ಆಚೆಗಿಟ್ಟು ಒಂದು ಕೃತಿಯಾಗಿ ನೋಡಿದರೂ ಈ ಪುಸ್ತಕದ ಕತೆಗಳಲ್ಲಿ ಕಾಣುವುದು ಅಪ್ಪಟ ಮುಗ್ಧತೆ, ಕರುಣೆ, ಆರ್ದ್ರತೆ. ಕತೆಯ ಪಾತ್ರ ಪ್ರಾರ್ಥಿಸಿದಾಗ ನಾವು ಪ್ರಾರ್ಥಿಸುತ್ತಾ, ಕತೆಯ ಪಾತ್ರ ಉಪ್ಪಿನ ಕಾಯಿಯ ಬಾಟಲಿಯನ್ನು ತೆಗೆಯಲು ಪ್ರಯತ್ನಿಸುವಾಗ ನಾನೂ ಒಂದು ಕೈ ನೋಡೇಬಿಡೋಣ ಅಂತ ಓದುಗ ನೆನೆಯುವುದು, ಖಾಯಂ ಗಿರಾಕಿಗಳ ಹತ್ರ ಕೆಲವೊಂದಕ್ಕೆ ದುಡ್ಡು ತೆಗೆದುಕೊಳ್ಳದೇ 'ಎಕ್ಸ್ಟ್ರಾ' ಕೊಡುವ ವ್ಯಾಪಾರಸ್ಥರು, ಸರ್ಕಾರದ ಯಾವುದೋ ಯೋಜನೆ ಬಂತೆಂದು ಮನೆ ಜಮೀನನ್ನು ಬಿಟ್ಟುಕೊಡಲೇಬೇಕಾದ ಸ್ಥಿತಿ ತಲುಪುವ ನಾಗರಿಕರು, ಅಥವಾ ಹೇಳಿಕೊಳ್ಳದ ಹಳೆಯ ಪ್ರೇಮದ ನವಿರು ನೆನಪು ಹೀಗೆ ಇಂಥ ಸಂಗತಿಗಳು ನಿತ್ಯವೂ ಕಾಣುವ ಕೇಳುವ ಅನುಭವಿಸುವಂಥವುಗಳು. ಚಾದರ ಹಾಗೂ ಹುಲಿಯನ್ನು ಒಳಗೊಂಡ ಒಂದು ಸನ್ನಿವೇಶವಂತೂ 'ಆಹ್ಞ್, ಅದೆಷ್ಟ್ ಚೆಂದ' ಅಂತನ್ನಿಸದೇ ಹೋಗುವುದಿಲ್ಲ. ಕೆಲವೊಂದು ಕತೆಗಳ ಅಂತ್ಯ ಒಂದಷ್ಟು ಫ್ಯಾಂಟಸಿ ಶೈಲಿಯಲ್ಲಿರುವುದು ನನಗೆ ಅಷ್ಟೇನು ಹಿಡಿಸದಿದ್ದರೂ ಕತೆಗಳ ಉದ್ದೇಶಕ್ಕೆ ಅವು ಜಾಸ್ತಿ ಮೋಸ ಮಾಡಿದ ಹಾಗೇನೂ ಆಗಿಲ್ಲ. </p><p><br /></p><p>ಹೆಣ್ಣಿನ ಲೋಕವನ್ನು ಲೇಖಕಿ ಕಟ್ಟಿಕೊಡುವ ರೀತಿ ಚೆಂದ. ಗಂಡು ಬರೆವ ಸಾಹಿತ್ಯದಲ್ಲಿ ಹೆಣ್ತನದ ಸೂಕ್ಷ್ಮಗಳು ಬರುವುದಾದರೂ ಹೇಗೆ? ಅದಕ್ಕೆ ಲೇಖಕಿಯರೇ ಆಗಬೇಕು! ಇದಕ್ಕೊಂದು ಚೆಂದದ ಉದಾಹರಣೆಯೆಂದರೆ 'ಬರೀ ಎರಡು ರೆಕ್ಕೆ'ಯಲ್ಲಿ ಪೊಲಕಿನ(ಬ್ಲೌಸ್) ಕುರಿತಾಗಿ ಒಂದು ಸಣ್ಣ ಮಾತುಕತೆ ಬರುತ್ತದೆ; ಅದರಲ್ಲಿನ ಸಹಜತೆ ಮತ್ತು ಕಚಗುಳಿಯಂಥ ತುಂಟತನ. ಅದಕ್ಕಾಗಿಯೇ ಹೆಣ್ಣು ಕಟ್ಟಿಕೊಡುವ ಹೆಣ್ತನದ ನವಿರು ಭಾವಗಳು ಮುಖ್ಯ ವೇದಿಕೆಗೆ ಬರಬೇಕು. ಅದಕ್ಕಾಗಿಯಾದರೂ ಲೇಖಕಿಯರು ಗಂಡು ಹಾಕಿಟ್ಟ ಸಾಹಿತ್ಯದ ಚೌಕಟ್ಟುಗಳಾಚೆ ಇಣುಕಬೇಕಾಗಿರುವುದು ತುರ್ತು ಕೂಡಾ ಹೌದು. ಶ್ರೀಮತಿ ಸುನಂದಾ ಕಡಮೆಯವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ; ಲೇಖಕಿಯರಿಗೆ ಎಷ್ಟೆಲ್ಲಾ ಕಟ್ಟುಪಾಡುಗಳಿದ್ದವು ಅವರು ಬರೆವಣಿಗೆ ಶುರುಮಾಡಿದ ಸಮಯದಲ್ಲಿ, ಮುಂದೊಂದು ದಿನ ಮುಕ್ತವಾಗಿ ಬರೆಯುವಂಥ ವಾತಾವರಣ ಸೃಷ್ಟಿಯಾದೀತೇನೋ ಎಂದು. ನಾವಿನ್ನೂ ಆ ಮುಕ್ತತೆಯ ಹಾಗೂ ಬದಲಾವಣೆಯ ಹೊಸ್ತಿಲಲ್ಲೇ ಇದ್ದೇವಾ; ಗೊತ್ತಿಲ್ಲ! ಆದರೆ, ಕೆಲವು ಲೇಖಕಿಯರು ಇಂಥ ಪ್ರಯತ್ನಗಳನ್ನು ಮಾಡ್ತಿರೋದು ಸಂಭ್ರಮದ ಸಂಗತಿಗಿಂತ ಚೂರೇ ಚೂರು ಕೂಡಾ ಕಡಿಮೆಯಲ್ಲ. </p><p><br /></p><p>ಶ್ರೀಮತಿ ಸುನಂದಾ ಅವರ ಊರು ಉತ್ತರ ಕನ್ನಡದ ಅಲಗೇರಿ, ನನ್ನ ಊರು ಅದೇ ಉತ್ತರ ಕನ್ನಡದ ತಲಗೇರಿ. ಅವರ 'ಬರೀ ಎರಡು ರೆಕ್ಕೆ'ಯಲ್ಲಿ ಬರುವ ಒಂದು ಊರಿನ ಹೆಸರು ಹಟ್ಟಿಕೇರಿ; ನನ್ನೂರಿನ ಪಕ್ಕದ ಊರ ಹೆಸರೂ ಹಟ್ಟಿಕೇರಿ. ಅವರ ಈ ಕಾದಂಬರಿಯಲ್ಲಿ ಇರುವ ಸಂಭಾಷಣೆಗಳಲ್ಲಿ ಆಗಾಗ ಹಾಲಕ್ಕಿ ಒಕ್ಕಲಿಗರ ಮಾತುಗಳು ಬರುತ್ತವೆ. ನಮ್ಮ ಮನೆ ಇರೋದು ಕೂಡಾ ಈ ಹಾಲಕ್ಕಿ ಸಮಾಜದ ಕೊಪ್ಪದಲ್ಲಿ. ಹಾಗಾಗಿ ಈ ಕತೆಯಂತೂ ನನಗೆ ನನ್ನೂರನ್ನು ತಂದು ಎದುರಿಗಿಟ್ಟಂತೆ ಕಂಡಿದ್ದರಲ್ಲಿ ಯಾವ ಅನುಮಾನವೂ ಇಲ್ಲ. ಹಾಲಕ್ಕಿ ಹೆಂಗಸರು ಯಾವತ್ತೂ ಗಟ್ಟಿಗರು. ಗಂಡಸಿಗೆ ಸರಿಸಮನಾಗಿ ಕೆಲಸ ಮಾಡುವವರು. ಹಾಗಿದ್ದರೂ ಸಂಜೆ ಗಂಡ ಕುಡಿದು ಬಂದಾಗ ಅವನಿಂದ ಹೊಡೆತ ತಿನ್ನುತ್ತಿದ್ದರು. ಕುಡಿದ ವ್ಯಕ್ತಿ ತಾನಾಗಿ ನಿಂತುಕೊಳ್ಳೋದಕ್ಕೇ ಆಗೋದಿಲ್ಲ, ಅಂಥವನ ಕೈಲಿ ಇಷ್ಟು ಗಟ್ಟಿಗಿತ್ತಿಯರು ಯಾಕೆ ಒದೆ ತಿನ್ನುತ್ತಾರೆ; ಯಾಕೆ ತಿರುಗಿ ನಾಲ್ಕು ಬಾರಿಸೋದಿಲ್ಲ ಅನ್ನುವ ಪ್ರಶ್ನೆ ನನ್ನನ್ನು ಮುಂಚೆಯೂ ಕಾಡಿತ್ತು; ಈಗಲೂ ಪ್ರಶ್ನೆ ಇದೆ ಅಲ್ಪ ಸ್ವಲ್ಪ ಸಮಾಧಾನಕರ ಉತ್ತರಗಳೊಂದಿಗೆ. ಮೊದಲನೆಯದಾಗಿ ಗಂಡನೇ ದೇವರು, ಎಷ್ಟಿದ್ದರೂ ಗಂಡ ಅನ್ನುವ ಒಂದು ಗೌರವ ಭಾವ, ಇನ್ನೊಂದು ರಾತ್ರಿ ಗಂಡ ಕುಡಿದಿದ್ದಾಗ ಹೊಡೆದುಬಿಡಬಹುದು, ಆಮೇಲೆ ಬೆಳಿಗ್ಗೆ ಕುಡಿತದ ನಶೆ ಇಳಿದಾಗ ಗಂಡಸು ಏನಿದ್ದರೂ ಗಂಡಸೇ ಅಲ್ಲವೇ ಅನ್ನುವ ಭಯವೂ ಇರಬಹುದು. ಆದರೂ, ಅವರು ಮನಸ್ಸು ಮಾಡಿದರೆ ಏನೆಲ್ಲವನ್ನು ಮಾಡಬಹುದು. </p><p><br /></p><p>ಮೊದಲೇ ಹೇಳಿದ ಹಾಗೆ, ಎಲ್ಲಾ ವ್ಯಕ್ತಿಗಳಿಗೂ ಅವರವರದ್ದೇ ಆದ ತತ್ವ ಸಿದ್ಧಾಂತಗಳಿರುತ್ತವೆ. ಕತೆ ಹೇಳುವವರು ತಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಕತೆಯಲ್ಲಿಡದೆಯೇ ಕತೆಯ ಅಗತ್ಯವನ್ನಷ್ಟೇ ಪೂರೈಸಬೇಕು ಅನ್ನುವುದು ಒಂದು ನಿಯಮ. ಬರೆಹಗಾರ ಎಲ್ಲ ಸಲವೂ ಸಮಾಜವನ್ನು ತಿದ್ದುವುದಕ್ಕೆ ಹೋಗಬೇಕು ಅಂತೇನಿಲ್ಲ ಅನ್ನುವುದು ಕೆಲವು ಸಾಹಿತಿಗಳ ಮಾತಾದರೆ, ಸಮಾಜದ ದನಿಯಾಗದ ಸಾಹಿತ್ಯ ಇದ್ದೇನು ಪ್ರಯೋಜನ ಅನ್ನುವುದು ಹಲವರ ಅಭಿಪ್ರಾಯ. ಅದೇನೇ ಇದ್ದರೂ, ವಾಚ್ಯವಾಗದೇ ಸೂಚ್ಯವಾದರೆ ಮಾತ್ರ ಬರೆಹಕ್ಕೊಂದು ನಾಜೂಕುತನ ಬರುವುದಕ್ಕೆ ಸಾಧ್ಯ. ಬರೆಹ ಯಾಕೆ ನಾಜೂಕಾಗಬೇಕು ಅನ್ನುವ ಪ್ರಶ್ನೆ ಇದಿರಾದರೆ, ನಾಜೂಕಿಗೆ ಒಂದು ಸೂಕ್ಷ್ಮತೆಯಿದೆ; ಆ ಸೂಕ್ಷ್ಮತೆ ಸಾಹಿತ್ಯಕ್ಕೆ ಬೇಕು ಅಂದರೆ ತಪ್ಪಲ್ಲ ಅಲ್ಲವಾ? 'ಬರೀ ಎರಡು ರೆಕ್ಕೆ'ಯಲ್ಲಿರುವುದು ಇಂಥ ನಾಜೂಕುತನ. ಇಲ್ಲಿ ಉತ್ತರ ಕನ್ನಡದ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಅತ್ಯಂತ ಪ್ರಾಮಾಣಿಕವಾಗಿ, ಯಾವ ಪೂರ್ವಗ್ರಹವೂ ಇಲ್ಲದೇ ಕಟ್ಟಿಕೊಡಲಾಗಿದೆ. ಹಾಗಂತ ಇದು ಯಾರ ದನಿಯೂ ಆಗಿಲ್ಲವಾ ಅಂದರೆ, ಅತಿರೇಕಗಳಿಲ್ಲದೇ ನಾಟಕೀಯ ಪ್ರಲೋಭಗಳಿಲ್ಲದೆಯೂ ದನಿಯಾಗಬಹುದು ಅನ್ನುವುದು ಈ ಕಾದಂಬರಿಯ ಮೂಲಕ ಕಣ್ಣ ಮುಂದಿದೆಯಲ್ಲಾ! ಮದುವೆ ಬೇಡ ಬೇಡ ಅನ್ನುತ್ತ ದಿಟ್ಟವಾಗಿ ಮಾತನಾಡಿ ಕೊನೆಗೆ ಆ ಕಾಲಕ್ಕೆ ಅತ್ಯಂತ ಆಧುನಿಕ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಹುಡುಗಿಯೂ, ಮೌನವನ್ನೇ ತನ್ನ ಪ್ರತಿಭಟನೆಯ ದನಿಯಾಗಿಸಿಕೊಂಡು ಅಸಹಾಯಕತೆಯಿಂದಲೇ ಸಂಸಾರದ ಸಮತೋಲನ ಕಾಯ್ದುಕೊಳ್ಳಲು ಹೆಣಗುವ ಪಾತ್ರವೂ ಒಂದೇ ಮುಖದ ಎರಡು ಪ್ರತಿಬಿಂಬಗಳಂತೆ ಕಂಡರೆ ಅದು ಅಸಹಜವೇನಲ್ಲ ಅಂತನಿಸುತ್ತದೆ ನನಗೆ. ಈ ಕಾದಂಬರಿಯಲ್ಲಿ ಬಹುತೇಕ ಎಲ್ಲರಿಗೂ ತಮ್ಮ ದೈನಿಕ ತೊಳಲಾಟಗಳಿಂದ ಬಿಡುಗಡೆ ಸಿಗುತ್ತದೆ. ನಿತ್ಯದ ನೆಲ ಬಿಟ್ಟು ಹಾರಲು ರೆಕ್ಕೆ ಸಿಗುತ್ತದೆ. </p><p><br /></p><p>ಈ ಕಾದಂಬರಿಯಲ್ಲಿ ಬಳಸಿದ ಭಾಷೆಯ ಕುರಿತಾಗಿ ಲೇಖಕಿ ಒಂದು ಕಡೆ ಹೇಳಿಕೊಂಡಿದ್ದಾರೆ;"ಭಾಷೆಯು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಭಾಷೆಗೆ ಆ ನೆಲದ ಸೊಗಡು ಇರುತ್ತದೆ". ಉತ್ತರ ಕನ್ನಡದ ಸ್ಥಳೀಯ ಪದಗಳನ್ನು, ಗ್ರಾಮ್ಯ ಪದಗಳನ್ನು ಕಾದಂಬರಿಯಲ್ಲಿ ಬೇಕಾದಷ್ಟು ಬಳಸಲಾಗಿದೆ. ಒಂದು ಜಾಗದ ಸಂಸ್ಕೃತಿಯ ಸೊಗಡನ್ನು ಮನಸಾರೆ ಅನುಭವಿಸಬೇಕಾದರೆ ಅಲ್ಲಿನ ಭಾಷೆಯನ್ನು ಅರಿತುಕೊಳ್ಳುವುದು ಕೂಡಾ ಬಹಳ ಮುಖ್ಯ ಅಲ್ಲವಾ? ಹಾಗೂ ಒಂದು ಪ್ರಾದೇಶಿಕ ಭಾಷೆ ಪುಸ್ತಕದಲ್ಲಿ ದಾಖಲಾಗುವುದು ಕೂಡಾ ಅಷ್ಟೇ ಮುಖ್ಯ. ಪ್ರತಿ ಸಂಭಾಷಣೆಗೂ ಆ ಪ್ರದೇಶದ ಸಾಮಾಜಿಕ ಸಂಗತಿಯನ್ನು ಬಿಚ್ಚಿಡುವ ಸಾಮರ್ಥ್ಯ ಸಿಗೋದು ಸ್ಥಳೀಯ ಪದಗಳನ್ನು ಬಳಸಿಕೊಂಡಾಗಲೇ. ಅದಕ್ಕಾಗಿಯೇ ಕೆಲವೊಮ್ಮೆ ಸಾಹಿತ್ಯ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಂಡಾಗ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುವುದು. </p><p><br /></p><p>ಪುಸ್ತಕದ ಕುರಿತಾಗಿ, ಕತೆಯ ಕುರಿತಾಗಿ ಹೇಳಬಹುದು ಅಂತ ಅಂದುಕೊಂಡು ನೀವಿದನ್ನು ಓದಲು ಶುರು ಮಾಡಿ, ಈಗ ಅದನ್ನು ಬಿಟ್ಟು ಉಳಿದೆಲ್ಲವೂ ಇದೆ ಅಂತನ್ನಿಸಿದರೆ ಅದು ಪ್ರಜ್ಞಾಪೂರ್ವಕ ಕೃತ್ಯ ಅಂತಲೇ ಅಂದುಕೊಳ್ಳಬೇಕಾಗಿ ವಿನಂತಿ. ಈ ಎರಡೂ ಪುಸ್ತಕಗಳನ್ನು ತಪ್ಪದೇ ಓದಿ ಅನ್ನುವುದು ಸ್ಪಷ್ಟ ಹಾಗೂ ನೇರ ಕೋರಿಕೆ. </p><p><br /></p><p>- 'ಶ್ರೀ' </p><p> ತಲಗೇರಿ</p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-13155096872015433262022-02-12T18:18:00.001+05:302022-02-12T18:18:33.740+05:30ತಂಗಾಳಿಯೊಂದಿಗೊಂದು ಅಸ್ಪಷ್ಟ ಗಂಧ!<div class="separator" style="clear: both; text-align: center;"><a href="https://blogger.googleusercontent.com/img/a/AVvXsEhajVG8RUT2CEojUQ-xn2PEecDiRZ6M1_OC39nRB2PP1-ASPYZ7iMAsJn_YGq6Y707FtXFGUihbsBRirGiZJ-WOsf6Edo7gAHVl-j2M71Ti4TczL51i9T5X9CWdC8jyLKasS3SrIfO7bLZC4pB_HOr349RxZLtlWSRrlmAq3ZHOJn63PpuyuIOWvEZs=s864" imageanchor="1" style="margin-left: 1em; margin-right: 1em;"><img border="0" data-original-height="864" data-original-width="540" height="320" src="https://blogger.googleusercontent.com/img/a/AVvXsEhajVG8RUT2CEojUQ-xn2PEecDiRZ6M1_OC39nRB2PP1-ASPYZ7iMAsJn_YGq6Y707FtXFGUihbsBRirGiZJ-WOsf6Edo7gAHVl-j2M71Ti4TczL51i9T5X9CWdC8jyLKasS3SrIfO7bLZC4pB_HOr349RxZLtlWSRrlmAq3ZHOJn63PpuyuIOWvEZs=s320" width="200" /></a></div><br /><p><br /></p><p>ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..</p>
<p dir="ltr">ಈ ಪುಸ್ತಕದ ಕುರಿತಾಗಿ ಯಾರ್ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ್ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!</p>
<p dir="ltr">ಪ್ರೇಮದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ. </p>
<p dir="ltr">ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'. </p>
<p dir="ltr">ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ. </p>
<p dir="ltr">ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು. </p>
<p dir="ltr">ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ! </p>
<p dir="ltr">ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ! </p>
<p dir="ltr">- 'ಶ್ರೀ'<br />
ತಲಗೇರಿ</p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-86313100437198865592021-08-29T18:14:00.000+05:302021-08-29T18:14:07.466+05:30 ಒಂದು ಶೃಂಗಾರದ ರಾತ್ರಿ<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjj8u0rBrukiWJPm8IKtbFIP1nSJCwwTpoSdWdXxi33hwTfkq024MQaIeB2QXrOalfcvX0N7JnRUC7jg3xSfUM9CW8zRHTyegF5Rzhs70FW8XYkTBbMofr0fWIng7bnOhmfHX6MWkBVj4c/s2048/IMG_20210829_180127.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1561" height="320" src="https://blogger.googleusercontent.com/img/b/R29vZ2xl/AVvXsEjj8u0rBrukiWJPm8IKtbFIP1nSJCwwTpoSdWdXxi33hwTfkq024MQaIeB2QXrOalfcvX0N7JnRUC7jg3xSfUM9CW8zRHTyegF5Rzhs70FW8XYkTBbMofr0fWIng7bnOhmfHX6MWkBVj4c/s320/IMG_20210829_180127.jpg" width="244" /></a></div><br /><p><br /></p><p>ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಬೆಳಕಿನ ರಂಗೋಲಿ ಇಡುವ ವಾಹನಗಳ ಸಂಖ್ಯೆ ಚೂರು ಕಡಿಮೆಯಾಗಿತ್ತು. ನಗರಕ್ಕೆ ರಾತ್ರಿಯಾಗುವುದಿಲ್ಲವಾದರೂ ಬಹುತೇಕ ಅಂಗಡಿಗಳು ಮುಸುಕೆಳೆದುಕೊಂಡು ಮಲಗುವ ತಯಾರಿಯಲ್ಲಿದ್ದವು. ಅಲ್ಲಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ನೀಲಿ, ಚಿನ್ನದ ಬಣ್ಣದ ಮಿಣುಕು ಹುಳಗಳಂಥ ಬೆಳಕಿದ್ದರೂ ಅವು ಕಪ್ಪು ಉಡುಪಿಗೆ ಪೋಣಿಸಿದ ಮಣಿಗಳ ಹಾಗೆ ಅಂತ ಅನಿಸಿದ್ದು ಹೌದು ನನಗೆ. ಅದರಲ್ಲೂ ಈಗ ನಾವಿರುವ ಹೊತ್ತಿನಲ್ಲಿ ಇಡೀ ಜಗತ್ತಿಗೆ ಅದ್ಯಾವುದೋ ಬರಿಗಣ್ಣಿಗೆ ಕಾಣದ್ದರ ಭೀತಿ ಬೇರೆ. ಹಾಗಾಗಿಯೇ ಇರಬೇಕು, ನಾವೆಲ್ಲರೂ ಒಂಥರಾ ಮೌನಕ್ಕೆ ಶರಣಾಗಿಬಿಟ್ಟಿದ್ದೇವೆ ಅಂತನ್ನುವ ಭಾವ ಪದೇ ಪದೇ ಒತ್ತರಿಸಿಕೊಂಡು ಬರುತ್ತದೆ ಈಗೀಗ ನನಗೆ. ಇದನ್ನು ಅವನಿಗೆ ಹೇಳಬೇಕು ಅಂದುಕೊಂಡಾಗಲೆಲ್ಲಾ, ಇದೆಂಥಾ ಇದು ರಗಳೆ, ಇದನ್ನೆಲ್ಲಾ ಹೇಳಿ ಅವನ ಮನಸ್ಸನ್ನು ಕದಡುವುದು ಯಾಕೆ? ಮೊದಲೇ, ನನ್ನ ಮನಸ್ಸು ವಿಚಲಿತವಾಗಿದೆ ಅನ್ನುವ ಸೂಚನೆ ಸಿಕ್ಕರೂ ಸಾಕು, ಉಳಿದೆಲ್ಲ ಕೆಲಸ ಬದಿಗಿಟ್ಟು ನನ್ನ ಉಪಚಾರಕ್ಕೆ ನಿಂತುಬಿಡುತ್ತಾನೆ. ಅವನದು ಉಸಿರುಗಟ್ಟಿಸುವ ಪ್ರೀತಿಯಲ್ಲ, ಅದೇ ಸಮಾಧಾನ ಹಾಗೂ ಬಹುಶಃ ಬದುಕು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಅಂತ ಅಂದುಕೊಳ್ಳುತ್ತಿರುವಾಗಲೇ, ಕೈಕಾಲು ಮುಖ ತೊಳೆದುಕೊಂಡು ಮಲಗಬೇಕು ಅಂದುಕೊಳ್ಳುತ್ತ ಅವ ಬಂದ. ಏನೋ ಗುಯ್ ಅಂತಿರೋ ಹಾಗಿದೆ ತಲೇಲಿ, ಚೂರು ಶಬ್ದ ಈ ಕಡೇನೂ ಕೇಳ್ತಿದ್ಯಪಾ ಅಂತ ತಮಾಷೆಯಾಗಿ ಹೇಳಿದ, ಅವನದು ಇದು ಯಾವತ್ತಿನ ವರಸೆ. ಏನಿಲ್ಲ, ಏನೋ ಒಂದು.. ಅಂದೆ ನಾನು. ಅಷ್ಟರಲ್ಲಿ ಮಳೆ ಶುರುವಾಯಿತು ಅನಿಸುತ್ತದೆ. ಈ ನಮ್ಮ ನಗರದ ಮಳೆಗೆ ಇದೊಂದು ಒಳ್ಳೆಯ ಅಭ್ಯಾಸವಿದೆ. ಮಲಗುವಾಗಲಾದರೂ ವಾತಾವರಣ ತಂಪಾಗಿರಲಿ ಅನ್ನುವ ಕಾರಣಕ್ಕೇ ತಾನು ಬಂದು ಲಾಲಿ ಹಾಡುವ ಹಾಗೆ, ಸುಮಾರು ಎಲ್ಲರೂ ಮಲಗುವ ಸಮಯಕ್ಕೇ ಹಾಜರಾಗುತ್ತದೆ ಅಪರೂಪಕ್ಕೆ ಮಳೆ. ಇದನ್ನೂ ಅವನೇ ಹೇಳಿದ.. ನಾನು ಇನ್ನೂ ಹಾಗೆಯೇ ಕುಳಿತಿದ್ದನ್ನು ನೋಡಿ, ನನ್ನ ಭುಜದ ಮೇಲೆ ಕೈಯಿಟ್ಟು, ಬಾ ಒಂದೊಂದ್ ಕಪ್ ಚಾ ಕುಡಿಯುವ ಅಂದ! ಮಲಗೋ ಹೊತ್ತಲ್ಲಿ ಇವಂದೆಂಥಾ ಚಾ ಹುಚ್ಚು ಅಂತ ಕಣ್ಣು ಹುಬ್ಬು ಗಂಟಿಕ್ಕಿಕೊಳ್ಳುತ್ತಾ ಅನುಮಾನದಲ್ಲಿ ಅವನನ್ನು ನೋಡಿದೆ. ಅರೇ, ಹೋಗು ಬಾಲ್ಕನೀಲಿ ಮೇಣದ ಬತ್ತಿ ಹಚ್ಚು, ನಾನು ಚಾ ಮಾಡ್ಕೊಂಡ್ ತಗೊಂಡ್ ಬರ್ತೀನಿ, ಮಳೆ ಜೋರಾಗೋ ಥರಾನೂ ಕಾಣ್ತಿದೆ, ಈಗ್ ಚಾ ಕುಡ್ದ್ರೆ ಸಖತ್ ಮಜಾ ಇರತ್ತೆ ಅಂದ. 'ಅಪ್ಪಣೆ ಮಹಾಪ್ರಭು' ಅಂತ ಎದ್ದು ನಾನು ನನ್ನ ಪಾಲಿನ ಕೆಲಸ ಮಾಡುವುದಕ್ಕೆ ಹೊರಟೆ, ನನಗೂ ಚೂರು ಬೇರೆ ಯೋಚನೆಗಳು ಇಷ್ಟೇ ಇಷ್ಟು ಹೊತ್ತಾದರೂ ಬರಲಿ ಅನ್ನುವ ಇಂಗಿತ ಇದ್ದಂತಿತ್ತು ಹಾಗೂ 'ಏನ್ ಮಾಡ್ತಾನೆ ಇವ್ನು' ಅನ್ನೋ ಕುತೂಹಲಾನೂ ಇತ್ತು. </p><p><br /></p><p>ಗಾಳಿ ಅಷ್ಟೇನು ಇರದೇ ಇದ್ದುದಕ್ಕೆ ಮೇಣದಬತ್ತಿ ಹಚ್ಚುವುದು ಕಷ್ಟ ಆಗಲಿಲ್ಲ. ಆದರೂ ಎಲ್ಲಿ ಮಳೆ ನೀರು ತಾಗಿ ನಂದಿಹೋಗುತ್ತದೋ ಅನ್ನುವ ಅಳುಕಿತ್ತು. ಅಷ್ಟರಲ್ಲಿ ಅವ ಎರಡು ಕಪ್ ಚಹಾದೊಂದಿಗೆ ಬಂದ. ನಮ್ಮ ಮನೆಯ ಬಾಲ್ಕನಿಯಿರುವುದು ರಸ್ತೆಗೆ ಅಭಿಮುಖವಾಗಿ ಅಲ್ಲ. ಬಾಲ್ಕನಿಯ ಎದುರಿಗಿರುವುದು ಒಂದು ಉದ್ಯಾನವನ. ನಾವಿಬ್ಬರೂ ಒಟ್ಟಿಗೆ ಕೂತು ಚಹಾ ಕುಡಿಯುವಾಗಲೆಲ್ಲಾ ಆ ಉದ್ಯಾನವನದ ಕಡೆಗೇ ಮುಖ ಮಾಡಿ ಕೂರುವುದು. ಹಾಗೆ ಕೂತು ಚಹಾದ ಒಂದೊಂದೇ ಗುಟುಕು, ಚಹಾ ಸೊಪ್ಪಿನೊಂದಿಗೆ ಹಾಲು ಸೇರಿ ಉಂಟುಮಾಡುವ ಬಣ್ಣ ತುಟಿಗೆ, ನಾಲಿಗೆಗೆ ತಾಕುವಾಗಿನ ಸ್ಪರ್ಶವನ್ನೂ, ಅದರ ಬಿಸಿಯನ್ನೂ, ಉಗಿಯಲ್ಲಿರುವ ಪರಿಮಳವನ್ನೂ ಅನುಭವಿಸುತ್ತಾ ನಾವು ಚಹಾ ಕುಡಿಯುವ ಸಂಭ್ರಮವನ್ನು ನೋಡಲು ಯಾರಾದರೂ ಎದುರಿಗೆ ಇದ್ದರೆ ಖಂಡಿತಾ ಅವರ ರೋಮ ರೋಮಗಳಲ್ಲೂ ಸುಖದ ಉತ್ತುಂಗದ ಅನುಭವವಾಗುತ್ತಿತ್ತೇನೋ, ಚಹಾ ಕುಡಿಯುವುದೆಂದರೆ ನಮಗೆ ಭವಬಂಧನಗಳಿಂದ ಮುಕ್ತವಾಗುವ ಮಾಯಕದ ಕ್ಷಣ. ಇವತ್ತೂ ಚಹಾ ಕುಡಿಯುವ ಕಾರ್ಯಕ್ರಮ ಹಾಗೆಯೇ ಮುಗಿಯಿತು. ಈಗ ವಂದನಾರ್ಪಣೆ ಅನ್ನುವ ಹಾಗೆ ನನ್ನ ಕಡೆಗೆ ತಿರುಗಿ ಅವ, "ಈಗ ಹೇಳು, ಏನಾಯಿತು?" ಅಂತ ಮೃದುವಾಗಿ ಕೇಳಿದ. ಅವ ಕೇಳುವುದೇ ಹಾಗೆ! </p><p><br /></p><p>ಅವ ಕೇಳಿದ ಮೇಲೆ ಅವನಿಗೆ ಹೇಳದೇ ಯಾವುದನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ. ಒಂದು ಭೋರ್ಗರೆತ ನನ್ನೊಳಗೆ ಹುಟ್ಟಿಕೊಂಡಿದ್ದು ನನ್ನ ಅನುಭವಕ್ಕೆ ಬಂತು. ಆ ಭೋರ್ಗರೆತದ ರೌರವವನ್ನೂ ಕೂತು ಕೇಳುವ ತಾಳ್ಮೆ ಅವನಲ್ಲಿತ್ತು. ಕಡಲ ತಡಿಯಲ್ಲಿ ಕಪ್ಪು ಕಲ್ಲುಗಳ ಮೇಲೆ ಲವಣದ ಪರಿಮಳದ ಗಾಳಿಗೆ ಮೈಯೊಡ್ಡಿ ಯಾವ ಗಡಿಬಿಡಿಯೂ ಇಲ್ಲದೆಯೇ ಕೂರುತ್ತೇವಲ್ಲಾ ಅಂಥ ಶಾಂತತೆ ಅವನದು. ನನ್ನ ಕಣ್ಣಲ್ಲಿ ಅವ ಕಣ್ಣಿಡುವಾಗಲೇ ನನ್ನರ್ಧ ತಳಮಳಗಳನ್ನು ಅಪಹರಿಸಿಬಿಡುತ್ತಿದ್ದ. ನನಗೂ ಮೊದಮೊದಲಿಗೆ ಇಂಥವನೊಬ್ಬ ಇರುವುದಕ್ಕೆ ಸಾಧ್ಯವಾ, ಅಥವಾ ಇವೆಲ್ಲವೂ ನಾನೇ ನನಗಾಗಿ ಕಟ್ಟಿಕೊಂಡ ಭ್ರಮೆಗಳಾ ಅನ್ನುವ ಅನುಮಾನಗಳು ಬಹಳಷ್ಟಿದ್ದವು. ನನ್ನೆಲ್ಲ ಪ್ರಶ್ನೆಗಳಿಗೆ ಪ್ರತೀ ಸಲವೂ ಅವ ಉತ್ತರವಾಗಿ ನಿಲ್ಲುತ್ತಿದ್ದ. ಇವತ್ತೂ ಅಷ್ಟೇ, ಅವ ಕೇಳಿದನಲ್ಲ, ಕೇಳುವುದರಲ್ಲೂ ಹಲವು ಬಗೆಗಳಿರುತ್ತವೆ. ಕೆಲವೊಮ್ಮೆ ಕೇಳಬೇಕು ಅಂತ ಕೇಳುವುದು, ಇನ್ನು ಕೆಲವೊಮ್ಮೆ ಕೇಳಲೇಬೇಕು ಅಂತ ಕೇಳುವುದು. ಇವನದು 'ಹೇಳು, ಕೇಳಿಸಿಕೊಳ್ಳುವುದಕ್ಕೆ ನಾನಿದ್ದೇನೆ' ಅನ್ನುವ ಸಾಂಗತ್ಯದ ಭರವಸೆ. ಅವನ ಎಡತೋಳನ್ನು ನನ್ನ ಬಲತೋಳಿಂದ ಬಳಸಿದೆ. ಅವನ ಬೆರಳುಗಳ ಮಧ್ಯದಲ್ಲಿ ನನ್ನ ಬೆರಳುಗಳನ್ನು ಹೊಸೆದೆ. ಒಂದು ಬಿಸಿಯಾದ ಅನುಭವ ಅವನ ರೋಮಗಳಿಂದ ನನ್ನ ಚರ್ಮಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಪ್ರೀತಿಸುವವರ ಒಂದು ಸ್ಪರ್ಶದಲ್ಲಿ ಎಲ್ಲ ಗಾಯಗಳನ್ನೂ ಹೊಲಿದು, ಮಾಯಿಸುವ ಔಷಧವಿದೆ ಅಂತ ಅವನೇ ಆಗಾಗ ಹೇಳುತ್ತಿರುತ್ತಾನೆ. ನಾನು ಅವನ ಎದೆಗೆ ಒರಗಿಕೊಂಡಾಗಲೆಲ್ಲಾ, ಶತ ಶತಮಾನಗಳಿಂದ ಚೂರು ಬಿಸಿಲು ಕಡಿಮೆಯಾಗಬಹುದೆಂದು ಕಾಯುತ್ತಿರುವವನ ಎದೆಗೇ ಮರವೊಂದು ತನ್ನ ರೆಂಬೆಕೊಂಬೆಗಳ ಚಾಚಿ ನೆರಳ ಹಾಸಿದಂತೆ ಇದು ಅಂತ ನನ್ನ ಕುರಿತು ಯಾವಾಗಲೂ ಅವ ಹೇಳುತ್ತಿರುತ್ತಾನೆ. ಅವನಿಗೆ ಹೇಳಿದೆ, ಎಲ್ಲವೂ ಇದ್ದು ಏನೋ ಕಳೆದುಕೊಂಡಂತೆ; ಎಳೆದುಕೊಂಡ ಉಸಿರು ಮತ್ತೆ ಬಿಡಲಿಕ್ಕೇ ಸಾಧ್ಯವಾಗದಿದ್ದರೆ? ಅನಿಶ್ಚಿತತೆ; ನಾಳೆ ಸೂರ್ಯೋದಯವಾದ ಕೂಡಲೇ ಮತ್ತೆ ಎಲ್ಲವೂ ಹೊಸತಾಗಿ ಶುರುವಾಗುತ್ತದೆ ಬಿಡು ಅಂತಂದುಕೊಂಡರೂ, ಆ ಎಲ್ಲಾ ನಾಳೆಯ ಮುಂಜಾವುಗಳೂ ನಿನ್ನೆಗಳ ಭಾರದೊಂದಿಗೇ ಹುಟ್ಟಿಕೊಂಡಂತೆ ತಳಮಳವಾಗುತ್ತದೆ. ಈ ಹೊತ್ತು ಹೇಗೋ ಕಳೆಯಬಹುದು ಬಿಡು ಅಂತೆಲ್ಲಾ ಅಂದುಕೊಂಡ ಮಾತ್ರಕ್ಕೆ ಹಾಗೆಲ್ಲಾ ಅದು ಕಳೆದುಹೋಗುವುದಿಲ್ಲ. ನಿನಗೆ ಗೊತ್ತಲ್ವಾ, ಮನಸ್ಸು ಭಾರವಾದಷ್ಟೂ ಕಾಲದ ಗತಿ ನಿಧಾನವಾಗುತ್ತಾ ಹೋಗುತ್ತದೆ. </p><p><br /></p><p>ಅವ ನಿಧಾನವಾಗಿ ನನ್ನ ಕೈಯನ್ನು ಅವನ ಎಡತೋಳಿನಿಂದ ಬಿಡಿಸಿಕೊಂಡ, ಅವನ ಎರಡೂ ತೋಳುಗಳಿಂದ ನನ್ನನ್ನು ಪೂರ್ಣವಾಗಿ ಆವರಿಸಿಕೊಂಡು ಅವನೆದೆಗೆ ಮತ್ತೆ ನನ್ನ ತಲೆ ಒರಗುವಂತೆ ಚಾಚಿಕೊಂಡ. ಒಂದು ಕ್ಷಣ ಅವನ ಕೆನ್ನೆಗಳಲ್ಲಿ ಮಂದಹಾಸದ ಗೆರೆಗಳು ಮೂಡಿ ಅಲ್ಲೇ ನೆಲೆಸಿದಂತೆ ಕಂಡವು, ನಾನು ಒರಗಿದಲ್ಲೇ ತಲೆಯೆತ್ತಿ ಅವನನ್ನೇ ನೋಡುವ ಪ್ರಯತ್ನದಲ್ಲಿದ್ದೆ. ನನ್ನ ತಲೆಗೂದಲ ಬುಡದಲ್ಲಿ ಕೈಯಾಡಿಸುತ್ತಾ ಅವ ಕೇಳಿದ, ಯಾಕೆ ಹೀಗೆ ಅನ್ಸ್ತಿದ್ಯಂತೆ?.. ಗೊತ್ತಿಲ್ಲ ಅಂತನ್ನುವುದು ನನ್ನ ಉತ್ತರವೆಂದು ಅವನಿಗೆ ಗೊತ್ತಿತ್ತು. ನಾನೇ ಮುಂದುವರೆದು ಹೇಳಿದೆ, ಏನಾದರೊಂದು ಹೊಸತು ಶುರುವಾದ ಸಮಯದಲ್ಲಿ ಹೊಸತರ ಕುರಿತಾಗಿ ಹೆಚ್ಚು ಗಮನ ಕೊಡುವಾಗ ಹಳೆಯದರ ಕುರಿತಾಗಿ ಗಮನ ಚೂರು ಕಡಿಮೆಯಾದಂತೆ ತೋರುವುದೇನೋ ಹೌದು; ಆದರೆ, ಅದರರ್ಥ ನಾವು ಹಳತನ್ನು ಮರೆತೆವು ಅಂತೇನೂ ಅಲ್ಲ ಅಲ್ವಾ? ಆದರೆ, ಯಾಕೆ ಕೆಲವೇ ಕೆಲವು ಹಳೆಯ ಸಂಬಂಧಗಳು ಮಾತ್ರವೇ ಎಷ್ಟೋ ಕಾಲಗಳ ನಂತರವೂ ಸಹಜವಾಗೇ ಇರುತ್ತದೆ, ಉಳಿದವುಗಳು ಏನೂ ಇರಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೇರೆಯಾಗಿ ಹೋಗುತ್ತವೆ? ಅಷ್ಟೂ ವರ್ಷಗಳ ಕಾಲದ ಅಷ್ಟೂ ನೆನಪನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಬಹುದಾ? ಕೆಲವೊಮ್ಮೆ ಮಾತು ಅನಗತ್ಯವಾಗುತ್ತದೆ, ಆದರೆ ಅದನ್ನೇ ಅಹಂಕಾರ ಅಂತಂದುಕೊಂಡು ದೂರವಾಗಬಹುದಾ? ಅಸ್ಪಷ್ಟ ಸ್ವಪ್ನಗಳಲ್ಲಿ ಒಂದು ಪರಿಚಿತ ದಾರಿಗಾಗಿ ಪರಿತಪಿಸುತ್ತಾ ಇರೋರಲ್ವಾ ನಾವು? ನೀನೇ ಹೇಳು ಹೀಗೆ ಸಂಬಂಧಗಳು ಸವಕಲಾಗಬಹುದಾ? ಗುಮ್ಮನಂತೆ ಮುಖ ಮಾಡಿಕೊಂಡು ಅವನ ನೋಡಿದೆ. ಮುಟ್ಟುತ್ತಿರುವನೋ ಇಲ್ಲವೋ ಅನ್ನುವಂತೆ ಹಣೆಯ ತುದಿಯಿಂದ ತನ್ನ ಬಲಗೈಯ ತೋರುಬೆರಳನ್ನು ಜಾರಿಸುತ್ತಾ ಜಾರಿಸುತ್ತಾ ಕಣ್ಣು ಹುಬ್ಬುಗಳ ಮಧ್ಯದ ಹಾದಿಯಿಂದ ಕೆಳಗಿಳಿದು ಮೂಗಿನ ತುದಿಯಲ್ಲಿ ನಿಂತ, ಪಕ್ಕದ ಮೂಗುತಿ ಹವಾಮಾನ ವೈಪರೀತ್ಯದ ದಾಳಿಗೆ ತುತ್ತಾಗಿ ಅಸ್ಥಿರ ಚಲನೆಯಲ್ಲಿತ್ತು. ಇದು ಹೊಸತಲ್ಲ, ಆದರೂ ಇದು ಮತ್ತೆ ಮತ್ತೆ ಹೊಸತೆನ್ನುವಂಥದ್ದೇ ಅನುಭವ, ಅವನಿಗೆ ಮಾತ್ರ ಗೊತ್ತಿರುವ ನನ್ನ ಗುಟ್ಟು.. </p><p><br /></p><p>ಮುಂದುವರೆದು ಅವ ಹೇಳಿದ, ನಿನಗೆ ಗೊತ್ತಾ, ನಾವು ಅದೆಷ್ಟೋ ನೆನಪುಗಳ ನೆರಳುಗಳಿಂದ ಆಚೆ ನಿಂತು ತಾಜಾ ಬಿಸಿಲನ್ನು ನಿಧಾನವಾಗಿ ಉಸಿರಲ್ಲಿ ತುಂಬಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತೇವೆ, ಆದರೆ ಅದು ಬರೀ ಅಷ್ಟೇ ಅಲ್ಲ; ಆ ನೆರಳುಗಳ ನೆನಪಲ್ಲೇ ಈ ಬಿಸಿಯನ್ನು ಅನುಭವಿಸುತ್ತೇವೆ. ಇವೆರಡೂ ಬೇರೆ ಬೇರೆ ಕ್ರಿಯೆಗಳಾದರೂ ಒಂದರ ಅನುಭವವನ್ನು ಇನ್ನೊಂದು ಸಲಹುತ್ತದೆ. ನೆನಪಿದೆಯಾ ನಿನಗೆ, ಆವತ್ತೊಂದಿನ ನಾವು ಆ ಹಳದಿ ಹೂವಿನ ಕಣಿವೆಗೆ ಹೋಗುವ ಮುನ್ನ ರಾತ್ರಿ ಎತ್ತರದ ಭಾಗದ ಮನೆಯಲ್ಲಿ ತಂಗಿದ್ದು.. ಜೀರುಂಡೆಗಳು ಪೂರಾ ರಾತ್ರಿ ಕಿರ್ರೆನ್ನುತ್ತಾ ಕೂಗಿದ್ದು, ಅದ್ಯಾವುದೋ ವಿಲಕ್ಷಣ ಪರಿಮಳ ಅಲ್ಲಿನ ಇಡೀ ವಾತಾವರಣದಲ್ಲಿ ಹರಡಿಕೊಂಡಿದ್ದು, ಅಲ್ಲಿನ ಆ ರಾತ್ರಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ನಾನು ಒದ್ದಾಡುತ್ತಿರುವಾಗ ನೀನು ಅರ್ಧ ರಾತ್ರಿಯವರೆಗೂ ನನ್ನನ್ನು ಹೀಗೇ ಒರಗಿಸಿಕೊಂಡು ನಿನ್ನ ಬಾಲ್ಯದ ಕತೆಗಳನ್ನು ಹೇಳಿ ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು.. ಆವತ್ತು ಆ ಒದ್ದಾಟವನ್ನು ನಾವಿಬ್ಬರೂ ಕಡಿಮೆ ಮಾಡಲಿಕ್ಕಾಗುವುದಿಲ್ಲವೆಂಬುದು ಇಬ್ಬರಿಗೂ ಅರಿವಿತ್ತು. ನಾವು ಆ ಪ್ರಯತ್ನವನ್ನೂ ಮಾಡಲಿಲ್ಲ, ಬದಲಾಗಿ ಬದುಕನ್ನು ಹಂಚಿಕೊಂಡೆವು, ವರ್ತಮಾನದಲ್ಲಿ ಭೂತಕಾಲವನ್ನೂ ನಿನ್ನ ಬಾಲ್ಯವನ್ನೂ ಜೀವಿಸಿದೆವು, ಆ ನೆನಪುಗಳ ಭಾಗವಾಗಿದ್ದ ಅದೆಷ್ಟೋ ವ್ಯಕ್ತಿಗಳು ಈಗ ಜೊತೆಯಲ್ಲಿ ಇಲ್ಲ ಅಲ್ವಾ.. ನಾವು ಯಾವ ನೆನಪನ್ನು ಉಳಿಸಿಕೊಳ್ಳಬೇಕು ಅಂತ ಬಯಸುತ್ತೇವೋ ಅಂಥವುಗಳನ್ನು ಮಾತ್ರ ಉಳಿಸಿಕೊಳ್ಳುತ್ತೇವೆ; ಅವುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಬಹುದು. ಕೆಲವರು ಹಾಗೆಯೇ, ಆ ಭಾಗದ ಬದುಕಿನಲ್ಲಿ ಮಾತ್ರ ಭೇಟಿಯಾಗುವವರು. ಅದರ ನಂತರ ಅವರ ಅಸ್ತಿತ್ವವೆನ್ನುವುದು ಸ್ವಪ್ನದ ಹಾಗೆ. ಯಾವುದೋ ಅನಪೇಕ್ಷಿತ ಸಮಯದಲ್ಲಿ ಧುತ್ತನೆ ನೆನಪಾಗಬಹುದು; ಅಥವಾ, ಕೆಲವೊಮ್ಮೆ ಮುಗುಳುನಗೆಯೊಂದಿಗೆ ವರ್ತಮಾನವನ್ನು ಉಲ್ಲಸಿತಗೊಳಿಸಬಹುದು. ನಿನ್ನ ಅನಿಶ್ಚಿತತೆ, ನಿನ್ನ ನೆನಪುಗಳು ಹಾಗೆಯೇ ಇರಲಿ ಬಿಡು, ಈಗ ಇರುವ 'ನೀನು' ಆಗಿರುವುದು ಈ ಎಲ್ಲ ಅನುಭವಗಳಿಂದಲೇ.. ಅವುಗಳನ್ನೇ ತಿರಸ್ಕರಿಸಿದರೆ ನಿನ್ನನ್ನೇ ತಿರಸ್ಕರಿಸಿದಂತೆ. ಬದುಕು ಎಲ್ಲದರ ಒಟ್ಟೂ ಮೊತ್ತ, ಬಿಡಿ ಹತ್ತುಗಳ ಲೆಕ್ಕದಲ್ಲಿ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಅಲ್ವಾ.. ಇವತ್ತು ನಾ ನಿನಗೆ ನನ್ನ ಬಾಲ್ಯದ ಕತೆಗಳನ್ನು ಹೇಳ್ತೀನಿ, ನಿನ್ನಷ್ಟು ಚೆಂದ ಅಲ್ಲ, ಆದ್ರೂ, ಏನೋ ಚೂರು ಹಾಂಗೇ.. ಅನ್ನುತ್ತಾ ನನ್ನ ಮೂಗನ್ನು ತನ್ನ ಬೆರಳಿಂದ ಕುಟುಕಿದ. </p><p><br /></p><p>ಅವರಿಬ್ಬರೂ ಎರಡು ಗಾಯಗಳು ಒಂದಕ್ಕೊಂದು ಅಂಟಿಕೊಂಡಂತೆ ಕೂತಿದ್ದರು. ಬೇಗ ಮಾಯುವುದಕ್ಕಿಂತ ಆ ನೋವಿನ ಪ್ರತಿ ಕ್ಷಣವನ್ನೂ ಜೀವಿಸುವುದೇ ಮುಖ್ಯ ಎನ್ನುವಂತೆ.. ಬೇಕಂತಲೇ ಒಂದು ಸಣ್ಣ ಕಲೆ ಉಳಿಸಿಕೊಳ್ಳುವಂತೆ.. ಅನಾಥ ಮೌನದ ಕಣಕಣಗಳಲ್ಲೂ ಮಳೆಯ ಹಾಡು ಇನ್ನಷ್ಟು ವಿಲೀನವಾಗಿತ್ತು, ಆ ರಾತ್ರಿ ಮತ್ತಷ್ಟು ಪ್ರೌಢವಾಗಿತ್ತು...</p><p><br /></p><p>~`ಶ್ರೀ'</p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com4tag:blogger.com,1999:blog-6872548841589170344.post-48452316514433879902021-07-14T18:33:00.000+05:302021-07-14T18:33:10.048+05:30ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?<p> ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhkSIlldq-NyJalurFYOlnFvNdQoQH-BE_ABOsZCRWwO0ph3kjIeDFfKopaEVCPEk_3epmskcFvgPcSL4ZUAL7JY71pNBx0amImmeQX-bYQ_eGOcVZf0nxMVIz-GE8lllZqyGa41boxw50/s1044/IMG_20210714_181000.jpg" imageanchor="1" style="margin-left: 1em; margin-right: 1em;"><img border="0" data-original-height="1044" data-original-width="880" height="320" src="https://blogger.googleusercontent.com/img/b/R29vZ2xl/AVvXsEhkSIlldq-NyJalurFYOlnFvNdQoQH-BE_ABOsZCRWwO0ph3kjIeDFfKopaEVCPEk_3epmskcFvgPcSL4ZUAL7JY71pNBx0amImmeQX-bYQ_eGOcVZf0nxMVIz-GE8lllZqyGa41boxw50/s320/IMG_20210714_181000.jpg" /></a></div><br /><p><br /></p><p>ಯಾವುದು ಕತೆಯಾಗಬಹುದು? ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಕತೆಗಳು ಸಿಗದೇ ಹೋಗಬಹುದು. ಆದರೆ, ಕತೆಗಾರನಿಗೆ ಸಿಕ್ಕಿದ್ದೆಲ್ಲವೂ ಕತೆಯೇ. ಮುಂಚೆ ಇದ್ದಂಥ ಕತೆಯ ಸ್ವರೂಪ, ಉದ್ದೇಶ, ರಚನಾ ತಂತ್ರ ಮತ್ತು ಅದರ ವಸ್ತುಗಳು ಕಾಲದ ಸ್ಪಂದನೆಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ ಈಗಿನ ಕತೆಯ ಮಿಡಿತಗಳು ಬೇರೆಯದೇ ಆಗಿ ನಮಗೆ ಸಿಗುತ್ತವೆ. 'ಅಲ್ಲಿಗೆ ಎಲ್ಲ ಮುಗಿದು, ಅಲ್ಲಿ ಎಲ್ಲರೂ ಸುಖವಾಗಿದ್ದರು' ಎನ್ನುವ ಕತೆಗಳಿಂದ ಈಗ ನಾವು ಇನ್ನಷ್ಟು ವಿಸ್ತಾರವನ್ನು ಹುಡುಕಿ ಹೊರಟಿದ್ದೇವೆ. ಒಟ್ಟಾರೆ ಬದುಕಿಗಿಂತ, ಅದರಲ್ಲಿ ಇರುವ ಕ್ಷಣಗಳನ್ನು ಬಿಡಿಸಿಟ್ಟು, ಅವುಗಳ ಮುಖೇನ ಇಡೀ ಬದುಕನ್ನು ನೋಡುವ ಈ ಕ್ರಮವೂ ಒಂಥರಾ ಚೆಂದವೇ. ಬಹಳಷ್ಟು ಸಲ ಅನಿಸುವುದೇನೆಂದರೆ, ನಮ್ಮದೇ ಬದುಕಿನಿಂದ ಕತ್ತರಿಸಿ ತೆಗೆದ ಭಾಗಗಳಿಗೆ ಹಿಡಿದ ಕನ್ನಡಿಯೇ ಕತೆ. ಬಿಂಬಗಳು ನಾವು, ನೀವು ಯಾರೂ ಆಗಿರಬಹುದು. ಅದಕ್ಕಾಗಿಯೇ ಓದುಗ ಆ ಕಥಾ ಪರಿಸರದಲ್ಲಿ ತಾನು ಹೊಕ್ಕದೇ ಓದುತ್ತೇನೆಂದರೆ, ಆ ಕತೆ ಓದುಗನಲ್ಲಿ ಹೊಕ್ಕುವುದು ತುಸು ಕಷ್ಟವೇ! ಓದುಗನಲ್ಲಿ ಅದೆಂಥದ್ದೇ ಜ್ಞಾನವನ್ನು, ತಿಳಿವಳಿಕೆಯನ್ನು ಅದು ಬಿತ್ತಿದರೂ ಆ ಕ್ಷಣಕ್ಕೆ ಉಂಟಾಗುವ ಭಾವತೀವ್ರತೆಯೇ ಈ ಎಲ್ಲಾ ಕಥಾ ಪ್ರಪಂಚದ ಅಸ್ತಿತ್ವದ ಮೂಲ; ಇದು ಕೇವಲ ಕತೆಗಳಿಗೆ ಸೀಮಿತವಲ್ಲ, ಎಲ್ಲಾ ಕಲಾ ಪ್ರಕಾರಗಳಿಗೂ ಇದು ಸಮಂಜಸ ಅಂತನ್ನಬಹುದೇನೋ. ಬಹುತೇಕ ಎಲ್ಲ ಓದುಗರಿಗೂ ತಮ್ಮ ತಮ್ಮ ನಂಬಿಕೆಗಳ ಪ್ರಭಾವಲಯದಿಂದ ಆಚೆ ನಿಂತು ಈ ಹೊಸ ಪ್ರಪಂಚದಲ್ಲಿ ಸಂವಹಿಸುವುದು ಚೂರು ಕಷ್ಟವೇ, ಜೊತೆಗೆ ಅದು ಮನುಷ್ಯ ಸಹಜ ಗುಣ ಕೂಡಾ ಹೌದು. ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆಯೇ ಅಲ್ಲವಾ ನಮ್ಮೆಲ್ಲ ಆಯ್ಕೆಗಳು ನಿಂತಿರುವುದು. ಸರಿ ತಪ್ಪುಗಳ ವಿಚಾರವಾಗಲೀ, ಅಥವಾ ದಕ್ಕುವಿಕೆಯ ಕುರಿತಾಗಿನ ವಿಚಾರಗಳಾಗಲೀ ಇಲ್ಲಿನ ವ್ಯಾಪ್ತಿಯೊಳಗಿಲ್ಲ; ಅವು ಆಮೇಲೆ ಹುಟ್ಟಿಕೊಳ್ಳುವ ಸಂಗತಿಗಳು. 'ಯಾವುದು ಕತೆಯಾಗಬಲ್ಲದು' ಅನ್ನುವುದಕ್ಕೆ 'ಯಾವುದೂ ಕತೆಯಾಗಬಲ್ಲದು' ಅನ್ನುವುದೇ ಅತಿ ಹತ್ತಿರದ ಉತ್ತರವಾಗಬಹುದು ಅನಿಸುತ್ತದೆ; ಕತೆಯಾಗಿಸುವವರು ಬೇಕಷ್ಟೇ! ಹೀಗೆ ಮನುಷ್ಯಲೋಕದ ಸ್ವಭಾವಗಳನ್ನು ತೀರಾ ಹತ್ತಿರದಿಂದ, ಯಾವುದೇ ನಿರ್ಣಯಗಳನ್ನು ಹೇರದೇ ನೋಡುವ ಪ್ರಯತ್ನದ ಕಥಾ ಸಂಕಲನವೇ ಅಶೋಕ ಹೆಗಡೆಯವರ 'ವಾಸನೆ ಶಬ್ದ ಬಣ್ಣ ಇತ್ಯಾದಿ'. </p><p><br /></p><p>ಇಲ್ಲಿನ ಕಥಾ ಪಾತ್ರಗಳು ಹೊರಗಿನದಲ್ಲ, ಹಾಗಂತ ತೀರಾ ಒಳಗಿನದೂ ಅಲ್ಲ. ನಗರ, ಹಳ್ಳಿ ಇತ್ಯಾದಿಗಳು ಇದ್ದರೂ ಅವುಗಳಷ್ಟೇ ಅಲ್ಲ. ಇಲ್ಲಿ ಇವೆಲ್ಲವೂ ನಿಮಿತ್ತಗಳು ಹಾಗೂ ಆ ಪರಿಸರದ ಮನುಷ್ಯರು ಮತ್ತವರ ಮನಸ್ಥಿತಿಗಳೇ ಇಲ್ಲಿನ ಮುಖ್ಯ ಅಂಗ. ಇಂದ್ರಿಯಗಳು ವಾಸನೆ, ಶಬ್ದ, ಬಣ್ಣ, ರುಚಿ, ಸ್ಪರ್ಶ ಇತ್ಯಾದಿಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೇ ಅವು ಲೋಭ, ಮೋಹ, ಕಾಮ ಇತ್ಯಾದಿಗಳನ್ನೂ ಉದ್ದೀಪಿಸುತ್ತವೆ. ಬಹುತೇಕ ಎಲ್ಲಾ ಕತೆಗಳನ್ನು ಓದುವಾಗಲೂ ಪೂರ್ವಗ್ರಹಗಳಿಲ್ಲದೇ ಓದುವುದೇ ಅವುಗಳಿಗೆ ಕೊಡಬೇಕಾದ ಗೌರವ. ಬರೆಹಗಾರ ಬರೆಯುತ್ತಾ ಬರೆಯುತ್ತಾ ಮನುಷ್ಯನಾಗಬಹುದು, ಓದುಗ ಓದುತ್ತಾ ಓದುತ್ತಾ ಮನುಷ್ಯನಾಗಬಹುದು. ಇಂಥದ್ದೇ ಮನೋಭೂಮಿಕೆ ಈ ಕಥಾ ಸಂಕಲನದ ಕತೆಗಳಿಗೆ ಬೇಕು. ಪ್ರಾಪಂಚಿಕ ಸುಖ, ಮತ್ತದರ ತಲ್ಲಣಗಳನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾ, ನಿಜವಾದ ಮನುಷ್ಯ ಲೋಕದೊಳಗೆ ಲೇಖಕರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ವರೂಪವಿದೆ, ಕುರೂಪವಿದೆ. ಅದೆಂಥದ್ದೇ ಆದರೂ ಅದು ಮನುಷ್ಯನಿಗೇ ಸಂಬಂಧಪಟ್ಟಿದ್ದು ಅನ್ನುವುದು ಗಮನಿಸಬೇಕಾದ ಸಂಗತಿ. ಕಥಾ ಸಂಕಲನದ ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಾಸನೆಯಿದೆ, ಬಣ್ಣ ಇದೆ ಹಾಗೂ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಶಬ್ದವಿದೆ. ಅದರ ಜೊತೆಗೆ ಈ 'ಇತ್ಯಾದಿ'ಗಳಲ್ಲಿ ಅವ್ಯಕ್ತವಾದ ತಳಮಳ, ಅಸ್ಥಿರತೆ, ನೋವು, ತಲ್ಲಣಗಳೂ ಇವೆ. ಈ ಕಥಾ ಪ್ರಪಂಚದಲ್ಲಿ ಮಡಿವಂತಿಕೆಯಿಲ್ಲ; ಸಹಜವಾದ ವಾತಾವರಣವಿದೆ. ಇಲ್ಲಿನ ಎಲ್ಲ ಮಾತುಗಳೂ ಅಪರಿಚಿತ ಪ್ರಪಂಚದಿಂದ ಕದ್ದು ತಂದವುಗಳಲ್ಲ. ಅದೇ ಪರಿಸರದಲ್ಲಿ ಜೀವಿಸಿದ ಮಾತುಗಳವು. </p><p><br /></p><p>ಇಡೀ ಪುಸ್ತಕದ ತುಂಬಾ ಲೇಖಕರು ಭಾಷೆಯನ್ನು ಬಳಸಿಕೊಂಡ ರೀತಿ ಹಾಗೂ ಕೆಲವು ಚಿತ್ರಣಗಳನ್ನು ಕಟ್ಟಿಕೊಟ್ಟ ರೀತಿ ಕತೆಗಾರನ ಸೂಕ್ಷ್ಮಪ್ರಜ್ಞೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಅದನ್ನು ಅನುಭವಿಸುವ ಸುಖಕ್ಕೆ ಮುಖದಲ್ಲೊಂದು ಮಂದಹಾಸ ಸುಳಿಯದೇ ಹೋಗುವುದಿಲ್ಲ! 'ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ' ಅಂತ ಶಿವರಾಮಜ್ಜನ ಪಾತ್ರದ ಕುರಿತಾಗಿ ಹೇಳುತ್ತಾ ಹೋಗುವಾಗ ಹಣೆಯಿಂದ ಹಾದು ಹೋಗುವ ನಮ್ಮದೇ ರಕ್ತನಾಳಗಳು ಉಬ್ಬಿದ ಅನುಭವವಾಗುತ್ತದೆ. 'ನೆಲದ ಕಾಲನ್ನೇ ಬಿಡಿಸುವ' ಲೇಖಕರು, ಒಂದು ಪಾತ್ರವನ್ನು 'ನೆರಳಿನ ಸಹಿತ' ಮನೆಯಿಂದ ಆಚೆ ಹಾಕುತ್ತಾರೆ. ನೆರಳಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ, ಆದರೂ ಹೊರಗೆಲ್ಲೋ ನಿಂತಾಗ ಅಪ್ಪಿ ತಪ್ಪಿ ಬೀಳಬಹುದಾದ ನೆರಳು ಕೂಡಾ ಮನಸ್ಸಿನೊಳಗೆ ಬೀಳದ ಹಾಗೆ ಹೊರಗೆ ಹಾಕುವುದೆಂದರೆ ಅದಕ್ಕೆ ಗಟ್ಟಿ ಮನಸ್ಸೇ ಬೇಕು! </p><p><br /></p><p>ಕಾಲ ಇದೆ, ಕಾಲ ಕಳೆಯುತ್ತಾ ಹೋಗುತ್ತದೆ. ಕಾಲ ತನ್ನದೇ ವ್ಯೋಮದಲ್ಲಿ ತನ್ನನ್ನೇ ತಾನು ಖಾಲಿಯಾಗಿಸಿಕೊಳ್ಳುತ್ತಲೋ ಅಥವಾ ಕಬಳಿಸುತ್ತಲೋ ಹೋಗುವ ಒಂದು ಪ್ರಕ್ರಿಯೆಯಂತೂ ಇದೆ. ಕೆಲವೊಮ್ಮೆ ನಮ್ಮ ಇಂದಿನ ದಿನಗಳು ಹಿಂದಿನ ದಿನಗಳ ನೋವಿಗೆ ಚೂರು ಉಪಶಮನ ನೀಡಬಲ್ಲವು. ಬಹುತೇಕ ನೆನಪುಗಳು ಮಾಸುತ್ತವೆ. ಇನ್ನು ಕೆಲವು, ನಮ್ಮ ಮನಸ್ಸಿನ ಸಮತೋಲನವನ್ನು ಆಗಾಗ ಏರುಪೇರಾಗಿಸುತ್ತವೆ ಹಾಗೂ ಅದರಿಂದ 'ಈ ಹೊತ್ತು' ಅನ್ನುವುದು ಕೂಡಾ ಜಾರಿಹೋಗುತ್ತದೆ. ಇದು ಕಾಲವೇ ಕಾಲವನ್ನು ತಿನ್ನುವುದಾ? ಅನ್ನುವ ಒಂದು ಕುತೂಹಲಕಾರಿ ಪ್ರಶ್ನೆಯೊಂದು 'ದಿನಗಳು ದಿನಗಳನ್ನು ತಿನ್ನುತ್ತಾ' ಅನ್ನುವ ವಾಕ್ಯದ ಮೂಲಕ ವ್ಯಕ್ತವಾಗಿದೆ.</p><p><br /></p><p>ನಮ್ಮಲ್ಲಿ ಇವತ್ತಿಗೂ ಸ್ತ್ರೀಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲ ಮನಸ್ಸುಗಳು ಕಡಿಮೆಯೇ. ಸಾಹಿತ್ಯದಲ್ಲಿ ಕೂಡಾ 'ಹೆಚ್ಚಿಗೆ' ಹೇಳುವುದಕ್ಕೆ ತುಸು ಕಷ್ಟವೇ. ಯಾವಾಗ ಪುರುಷ ತನ್ನ ಕಣ್ಣುಗಳಿಂದ ಸ್ತ್ರೀ ಸಂವೇದನೆಯಿರುವ, ಅವಳ ಭಾವಪ್ರಪಂಚವಿರುವ ಸಾಹಿತ್ಯವನ್ನು ನೋಡುತ್ತಾನೋ ಅಲ್ಲಿಗೆ ಅದನ್ನು ನೋಡುವ ಹಾದಿಯೇ ತಪ್ಪಿದಂತಾಗುತ್ತದಲ್ಲವಾ? ಇದನ್ನು 'ಅವಳ ಕಣ್ಣು'ಗಳಲ್ಲೇ ಅವಳು 'ಹೇಳಿದ ಹಾಗೇ' ನೋಡಬೇಕು. ಆದರೆ ನಮಗೆ ದೃಷ್ಟಿಯೂ ಬೇರೆ, ದೃಷ್ಟಿಕೋನವೂ ಬೇರೆ; ಜಗದ ಸಹಜ ಸ್ವಭಾವ ಅನ್ನೋಣವೇ? ಚೂರಾದರೂ ಬದಲಾಗಬಹುದೇನೋ ತಿಳಿದಿಲ್ಲ.. ಇಲ್ಲಿನ ಕತೆಯಲ್ಲೊಂದು ಮಾತಿದೆ, "ನನ್ನ ಮೊಲೆ ಹಿಡಿದ ನಿನ್ನದೇ ಕೈಯಲ್ಲಿ ಎದೆ ಸ್ವಲ್ಪ ಮುಟ್ಟಿ ನೋಡು ಮಾರಾಯಾ, ನೋವು ಅರ್ಥವಾದರೂ ಆದೀತೇ ನಿನ್ನ ಬೈನರಿ ಮೆದುಳಿಗೆ" </p><p><br /></p><p>ಮದುವೆಯಲ್ಲಿ ಗಂಡಿನ ಪಾದ ಸರಿಯಾಗಿ ತೊಳೆಯಲಿಲ್ಲವೆಂದು ಶುರುವಾದ ಜಗಳ ಮದುವೆ ಹೆಣ್ಣಿನ ಕಣ್ಣೀರಿನಲ್ಲೇ ಪಾದ ತೊಳೆಯಬೇಕಾದಲ್ಲಿಗೆ ಹೋಯಿತು ಅನ್ನುವಾಗ ಮುಂಚೆ ಇದ್ದ, ಈಗಲೂ ಬಹುತೇಕ ಕಡೆಗಳಲ್ಲಿ ಇರಬಹುದಾದ ದರ್ಪಕ್ಕೆ ಹಿಡಿದ ಕನ್ನಡಿಯೇ ಅಲ್ಲವಾ ಇದು? ಮುಖದಲ್ಲಿ ನೆರಿಗೆಗಳು ಬಹಳಷ್ಟಿವೆ, ತಿಕ್ಕಿ ತಿಕ್ಕಿ ತೆಗೆಯಲೇಬೇಕು ಬಿಡಿ! </p><p><br /></p><p>"ಈ ಸಮುದ್ರದ ನೀರಿನ ಮೇಲೆ ನಡೆಯುತ್ತಾ ಸಾಗಿದರೆ ಗೋಕರ್ಣದ ಕಡಲಿನ ದಂಡೆ ಸಿಗಬಹುದೇ.." ಆಸ್ಟ್ರೇಲಿಯಾದ ಸಮುದ್ರವೊಂದು ಗೋಕರ್ಣದ ಸಮುದ್ರದೊಂದಿಗೆ ಬೆಸೆದುಕೊಳ್ಳುವುದು ಹೀಗೆ. ದೂರದಲ್ಲೇ ಇದ್ದರೂ, ಮೂಲವನ್ನು ದೂರ ಎನ್ನುವ ಮಾಧ್ಯಮದ ಮೂಲಕವೇ ಮುಟ್ಟಬಹುದಾದ, ಅದರಿಂದ ತೆರೆದುಕೊಳ್ಳಬಹುದಾದ ನಾಳೆಗಳಿಗೆ ತೆರೆದುಕೊಳ್ಳುವುದೂ ಒಂದು ಚೆಂದವೇ ಅಲ್ಲವಾ?</p><p><br /></p><p>ಹೀಗೆ ಇಲ್ಲಿನ ಪ್ರತಿ ಕತೆಯೂ ನಮ್ಮದೇ ಲೋಕದ ಇನ್ನೊಂದು ಭಾಗವನ್ನು, ನಮ್ಮದೇ ಜಗತ್ತಿನ ಇತರ ಪಾತ್ರಗಳನ್ನು, ನಮ್ಮದೇ ಸ್ವಭಾವಗಳ ಇನ್ನಷ್ಟು ಮುಖಗಳನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತದೆ. ಕತೆ ಕಟ್ಟುವುದೂ ಒಂದು ಕಲೆ ಅಂತ ಒಪ್ಪುವುದಾದಲ್ಲಿ ಅದಕ್ಕೆ ಕೌಶಲವೂ ಬೇಕಲ್ಲವಾ? ಅಂಥ ಕೌಶಲ್ಯದ ನಿದರ್ಶನ ಅನ್ನುವಂತಿದೆ ಇಲ್ಲಿನ ಕಥನ ಶೈಲಿ, ಇಲ್ಲಿನ ವಾಕ್ಯಗಳು. ಇಲ್ಲಿನ ಕತೆಗಳನ್ನು ಓದಿದ ನಂತರ, "ಯಾವುದು ಕತೆಯಾಗಬಹುದು' ಅಂತ ಕೇಳಿದರೆ, ಮತ್ತೊಮ್ಮೆ ಸ್ಪಷ್ಟವಾಗಿ ಖಂಡಿತಾ ಹೇಳಬಹುದು " ಯಾವುದೂ ಕತೆಯಾಗಬಲ್ಲದು"</p><p><br /></p><p>~`ಶ್ರೀ'</p><p> ತಲಗೇರಿ</p>E§â¤http://www.blogger.com/profile/07258292189958641405noreply@blogger.com0tag:blogger.com,1999:blog-6872548841589170344.post-70105453852071412792021-06-07T19:02:00.005+05:302021-06-07T19:13:30.114+05:30 ನೆನಪಿನ ಹಂಗಿಗೆ ನಾಲ್ಕು ಸಾಲು...<p style="text-align: left;"><span style="background-color: white; color: #050505; font-family: inherit; font-size: 15px; white-space: pre-wrap;"></span></p><div class="separator" style="clear: both; text-align: center;"><br /></div><h2 style="clear: both; text-align: center;"><span style="background-color: black; color: #04ff00;"> ನೆನಪಿನ ಹಂಗಿಗೆ ನಾಲ್ಕು ಸಾಲು...</span></h2><div class="separator" style="clear: both; text-align: center;"><br /></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhs3Rc7h5VS1nz8tKgx3D6uo_gy4qJpUVETy1keaJEUS93-PKcTLIgu7vNh6cHzm9y98ufo7cFYzfGEQmXSQkAEEIz33b2UqhlXubD3P1aEsmf9tVRdWMdl8pSg9Tw4ZxroUrEkrVbBaEE/s625/195142391_4235484683185425_8655439251215078503_n.jpg" style="margin-left: 1em; margin-right: 1em;"><img border="0" data-original-height="625" data-original-width="415" height="320" src="https://blogger.googleusercontent.com/img/b/R29vZ2xl/AVvXsEhs3Rc7h5VS1nz8tKgx3D6uo_gy4qJpUVETy1keaJEUS93-PKcTLIgu7vNh6cHzm9y98ufo7cFYzfGEQmXSQkAEEIz33b2UqhlXubD3P1aEsmf9tVRdWMdl8pSg9Tw4ZxroUrEkrVbBaEE/s320/195142391_4235484683185425_8655439251215078503_n.jpg" /></a></div><br /><p style="font-family: inherit; text-align: left;"><span style="background-color: black; color: #04ff00;">ಸಖೀ ರಾಧೆ,</span></p><p style="font-family: inherit; text-align: left;"><span style="background-color: black; color: #04ff00;"><br /> </span><span style="background-color: black; color: #04ff00;">ಅದೆಷ್ಟು ವಸಂತಗಳು ಹೂ ಮುಡಿದು ಕೂತವು, ಅದೆಷ್ಟು ಮೇಘಮಾಲೆ ನಭವನ್ನು ಅಲಂಕರಿಸಿದವು, ಅದೆಷ್ಟು ಮರಗಳು ಎಲೆಯುದುರಿಸಿ ನಿಂತವು ಕೃಷ್ಣನಿಲ್ಲದೇ? ಇದು ನಾನು ಬರೆಯುತ್ತಿರುವ ನಾಲ್ಕನೇ ಪತ್ರ ನಿನಗೆ. ನಮ್ಮ ಬೃಂದಾವನದ ದಿನಗಳನ್ನು ನೆನಪಿಸುವ ಸಲುವಾಗಿಯೇ ಪತ್ರ ಬರೆಯುತ್ತಿದ್ದೇನೆ. ಬೃಂದಾವನದ ಹಾದಿಯ ಇಕ್ಕೆಲಗಳಲ್ಲಿ ದುಂಬಿಯ ಗೀಗೀಪದ ಅದ್ಯಾವ ಹಾಡುಗಾರನಿಗಿಂತ ಕಡಿಮೆಯಿತ್ತು ಹೇಳು, ಎಲ್ಲಾ ಸ್ವರಗಳನೂ ಅವಕೆ ಹೇಳಿಕೊಟ್ಟವರಾರು ಅಂತ ನೀನೊಮ್ಮೆ ವಿಸ್ಮಯದಿಂದ ಕೇಳಿದ್ದು ನೆನಪಿದೆಯಾ? ನಿನ್ನ ಮೂಗಿನ ತುದಿಗೊಂದು ದುಂಬಿ ಬಂದು ಕೂತಿದ್ದು, ನೀನು ಹೆದರಿ ಕಿರುಚಿದ್ದು, ಅದು ನಿನ್ನತ್ತ ಮತ್ತೆ ಮತ್ತೆ ಬಂದಂತೆಲ್ಲಾ ಓಡಿಹೋಗಿ ನನ್ನ ಹಿಂದೆ ನೀ ಅಡಗಿ ನಿಂತಿದ್ದು, ಗಾಳಿಯಲ್ಲೇ ರೆಕ್ಕೆಬಡಿಯುತ್ತಾ ಅದು ಕೊನೆಗೊಮ್ಮೆ ನನ್ನ ಬೆರಳುಗಳ ಸ್ಪರ್ಶಿಸಿ ಓಡಿಹೋಗಿದ್ದು ನೆನಪಿದೆಯಾ ನಿನಗೆ? ನಾನೇನು ಮಾಡಿದೆ ಎಂದು ಬೆನ್ನ ಹಿಂದಿಂದ ನನ್ನ ಹೆಗಲುಗಳನ್ನು ಗಟ್ಟಿ ಹಿಡಿದು ಇಣುಕಿ ನೋಡಿದ್ದೆಯಲ್ಲಾ, ನಿನ್ನ ನುಣುಪು ಕದಪುಗಳು ತಾಕಿ ಬೆಣ್ಣೆ ಕಳ್ಳ ಕೃಷ್ಣನೇ ಕರಗುತ್ತಿದ್ದ. ಸಂಭಾವಿತ ನಾನು, ಸುಳ್ಳೆಲ್ಲಾ ಹೇಳುವುದೇ ಇಲ್ಲ, ನಂಬಲೇಬೇಕು ನೀನು, ಏನಂತೀಯಾ ಹೌದಾ ಅಲ್ಲವಾ! ಯಾವ ಭಯವೂ ಇಲ್ಲದೇ ನನ್ನ ಭುಜಗಳಿಗೆ ತಲೆಯಿಟ್ಟು ಪುಟ್ಟ ಕಂದಮ್ಮನಂತೆ ಮಲಗುವುದನ್ನು ಅದ್ಯಾರು ಕಲಿಸಿದರು ನಿನಗೆ? ಅಷ್ಟು ನಂಬಿಕೆಯೇನು ಈ ಮಾಯಾವಿಯ ಮೇಲೆ! ಬಹುಶಃ ಸ್ನೇಹವೆಂದರೆ ಇದೇ ಇರಬೇಕು, ಪ್ರೇಮಕ್ಕೂ ಮೊದಲು ಸ್ನೇಹವಾಗಬೇಕಲ್ಲವಾ ಸಖೀ.. ಬೃಂದಾವನ ಈ ಎಲ್ಲವುಗಳ ಆರಂಭವಾಗಿತ್ತಾ? ಅಥವಾ ಗೋಕುಲದಲ್ಲೇ ಈ ಸಮಾಗಮಕ್ಕೆ ನಾಂದಿಯಾಗಿತ್ತಾ...</span></p><p style="font-family: inherit; text-align: left;"><span style="background-color: black; color: #04ff00;">ಕೆಂಪು, ಬಿಳಿ, ಗುಲಾಬಿ ಹೀಗೆ ಥರಥರದ ಹೂಗಳು ಬೃಂದಾವನದ ತುಂಬೆಲ್ಲಾ. ಆದರೆ, ನಮಗೆ ಇಷ್ಟವಾಗುತ್ತಿದ್ದುದು ನೀಲಿ, ಹಳದಿ ಹೂಗಳೇ. ನೀನು ನೀನಿಷ್ಟಪಡುವ ನೀಲಿ ಹೂಗಳನ್ನು ನನ್ನ ರುಮಾಲಿಗೆ ಸಿಕ್ಕಿಸಿ, ಕಣ್ಣುಗಳ ಪಕ್ಕದಲ್ಲಿ ಅದೆಂಥದ್ದೋ ನಿನ್ನಿಷ್ಟದ ಬಳ್ಳಿಗಳ ಬಿಡಿಸಿ, ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದೆಯಲ್ಲಾ, ನಾನು ಹಳದಿ ಹೂಗಳ ಕಿವಿಯೋಲೆ ಮಾಡಿ ನಿನಗೆ ತೊಡಿಸುವ ಅಂತ ಬಂದರೆ ಪೂರ್ತಿ ಕೂದಲು ಕಿವಿಯ ಮೇಲೆ ಹರಡಿಕೊಂಡು ಸತಾಯಿಸುತ್ತಿದ್ದೆಯಲ್ಲಾ, ಅದು ಆಮೇಲೆ ನನ್ನುಸಿರು ನಿನ್ನೆದೆ ಬಡಿತ ಎರಡೂ ಇಬ್ಬರಿಗೂ ಕೇಳಿಸುವಷ್ಟು ಗಾಢ ಮೌನಕ್ಕೆ ಕಾರಣವಾಗುತ್ತಿತ್ತು. ಅದೆಂಥ ಗಾಢ ಮೌನವೆಂದರೆ ಇಡೀ ಜಗತ್ತು ಸ್ತಬ್ಧವಾದಂತೆ. ನಿನ್ನೆದುರು ನನಗೆಂಥ ಲಜ್ಜೆ ಎನ್ನುತ್ತಿದ್ದ ನೀನು ತಕ್ಷಣವೇ ತಲೆ ತಗ್ಗಿಸಿ ಕಿವಿಯ ಮೇಲೆ ಹರಡಿಕೊಂಡಿದ್ದ ಕೂದಲುಗಳನ್ನು ಸರಿಸಿ, ಪ್ರತೀ ಸಲವೂ ಹೊಸದಾಗಿ ಸ್ಪರ್ಶಕ್ಕೆ ಕಾಯುವಂತೆ ಉತ್ಕಟ ಸ್ಥಿತಿಯಲ್ಲಿ ಕೂರುತ್ತಿದ್ದುದನ್ನು ನಾನು ಮರೆತಿಲ್ಲ. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ಕೈ ಬೆರಳುಗಳು ಕೂತ ಕಲ್ಲುಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದವು. ಕಣ್ಣುಗಳು ಅರ್ಧವಷ್ಟೇ ತೆರೆದು ಇಷ್ಟೇ ಇಷ್ಟು ಮಾತ್ರ ನನ್ನೆಡೆಗೆ ನೋಡುತ್ತಿದ್ದವು. ಆಗ ಮಾತ್ರ ನೀನು ಶೃಂಗಾರ ಭಾವದ ಅಪ್ರತಿಮ ರೂಪಕದಂತೆ ಗೋಚರಿಸುತ್ತಿದ್ದೆ. ಕೇಳಬಹುದು, ಹೆಣ್ಣು ಬರೀ ಶೃಂಗಾರಕ್ಕೆ ಮಾತ್ರ ಸೀಮಿತವಾ ಅಂತ. ಸೃಷ್ಟಿಯ ಪ್ರತಿಯೊಂದರ ಅರ್ಧವೂ ಸಂಪೂರ್ಣವಾಗಬೇಕಾದರೆ ಸ್ತ್ರೀ ತತ್ವ ಬೇಕೇ ಬೇಕು. ನೆನಪಿದೆಯಲ್ಲವಾ ನಿನಗೆ, ಹಿಂದೊಮ್ಮೆ ಹೀಗೇ ನಾನು ನಿನ್ನ ತೊಡೆಗಳ ಮೇಲೆ ತಲೆಯಿಟ್ಟು ಮಲಗಿದ್ದಾಗ ಸರ್ಪವೊಂದು ನಿನ್ನ ಪಕ್ಕದಲ್ಲೇ ತಲೆಯಾಡಿಸುತ್ತಾ ಇದ್ದರೂ ನೀನು ನನ್ನ ನಿದ್ದೆಗೆ ಭಂಗವಾಗಬಾರದೆಂದು ಸ್ಥಿರವಾಗಿಯೇ ಕೂತಿದ್ದು, ಎಲ್ಲಿತ್ತು ಆ ಧೈರ್ಯ.. !</span></p><p style="font-family: inherit; text-align: left;"><span style="background-color: black; color: #04ff00;">ನನಗೆ ಒಮ್ಮೊಮ್ಮೆ, ಈ ವಸಂತದಲ್ಲಿ ಅರಳುವ ಹೂಗಳಿಗೆಲ್ಲಾ ನೀನೇ ನಿನ್ನ ನಗುವನ್ನು ಹಂಚಿ ಬಂದಿರಬಹುದಾ ಅನ್ನುವ ಅನುಮಾನ. ಆ ಕೋಕಿಲಗಳೆಲ್ಲಾ ನೀನು ನಿದ್ದೆಯಲ್ಲಿ ಕನವರಿಸುವುದನ್ನೇ 'ಕುಹೂ ಕುಹೂ' ಎಂದು ಕಲಿತುಕೊಂಡವಾ ಅಂತ. ನೀನೊಮ್ಮೆ ತಲೆಯಾಡಿಸಿ ಕಣ್ಣು ಮಿಟುಕಿಸಿದಾಗಲೆಲ್ಲಾ ಈ ತಂಗಾಳಿ ತಾನಾಗೇ ಹುಟ್ಟಿಕೊಳ್ಳುತ್ತದಾ, ನೀನು ಬಲಗಡೆ ಇಳಿಬಿಟ್ಟ ಕೂದಲು ನಯವಾಗಿ ನಿನ್ನ ತುಟಿಗಳ ಪಕ್ಕ ಚೂರು ಮೇಲೆ ತಾಗಲೋ ಬೇಡವೋ ಎಂಬಂತೆ ನಟಿಸುವ ಸಲುವಾಗಿಯೇ ಏನೋ ಗಾಳಿಗೆ ಅಷ್ಟೊಂದು ತುಂಟತನವಾ ಅಥವಾ ನನ್ನನ್ನು ವಿಚಲಿತನನ್ನಾಗಿಸಲು ನೀನು ತಂಗಾಳಿಯೊಂದಿಗೆ ಮಾಡಿಕೊಂಡ ಒಪ್ಪಂದವಾ, ಸತ್ಯ ಸತ್ಯ ಹೇಳಿಬಿಡಬೇಕು ನೋಡು! ಕೃಷ್ಣನನ್ನು ವಿಚಲಿತಗೊಳಿಸುವುದಾ, ಅಷ್ಟಕ್ಕೆಲ್ಲಾ ನಿಯಂತ್ರಣ ತಪ್ಪುವವನಾ ನೀನು ಅಂತ ಮುಖವೂದಿಸಿಕೊಂಡು ನೋಡಬೇಡ. ಸಮಭಾವ ಸಮಚಿತ್ತ ಸಮಸ್ತ ನೀನು ಅಂತ ಅಂದವಳೇ ನೀನು ! ಈಗ ಹಾಗೆಲ್ಲಾ ನೋಡಿ ಮತ್ತೆ ನಾನು ಹಲ್ಲುಗಿಂಜಿದಾಗ ನಿನ್ನ ಹುಸಿ ಮುನಿಸಿನ ನಸು ನಗುವಿನಲ್ಲಿ ಕೃಷ್ಣ ಕಾಲ ಕಾಲಗಳನ್ನೂ ದಾಟಿ, ಕೇವಲ ಹೊಡೆಯಲು ಓಡಿಸಿಕೊಂಡು ಬರುವ ರಾಧೆಯ ಸಖನಾಗಿ ಅಷ್ಟೇ ಉಳಿದುಕೊಳ್ಳಲು ಸಜ್ಜಾಗಿಬಿಡುತ್ತಾನೆ ನೋಡು ! ಇಂಥ ಸಂದರ್ಭದಲ್ಲೇ ನೋಡು ಮಳೆ ಬರುವುದು...<br /></span><span style="background-color: black; color: #04ff00;">ನನಗೋ ಮಳೆಗಾಲವೆಂದರೆ ಕೆಸರು ಕಾಲಲ್ಲಿ ಮನೆಯೊಳಗೆ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆ ತುಂಬ ಪಾದದ ಗುರುತು ಮೂಡಿಸುವುದು, ಬರೀ ನನ್ನ ಮನೆಯೊಂದೇ ಅಲ್ಲ ಹ್ಞ! ಯಾರಾದರೂ ಹೊಡೆಯಲು ಓಡಿಸಿಕೊಂಡು ಬಂದು ಕೆಸರು ತಾಗಿ ಜಾರಿ ಬಿದ್ದರೆ ಓಡಿಹೋಗಿ ಅವರಿಗೆ ಕೈಕೊಟ್ಟು ಎಬ್ಬಿಸಿ, ಮತ್ತೆ ಮುಟ್ಟಾಟ ಶುರು ನೋಡು, ನೀನು ಅಯ್ಯೋ ಇವನಾಟವೇ ಅಂತ ಹಣೆ ಚಚ್ಚಿಕೊಂಡು ನಗುತ್ತಿದ್ದೆಯಲ್ಲಾ. ನನ್ನ ಕತೆ ಬಿಡು, ಮಳೆಗಾಲವೆಂದರೆ ರಾಧೆಗೆ ಸಮಸ್ತ ವಿಶ್ವವೇ ರಂಗಮಂಚ ಹಾಗೂ ರಾಧೆ ಅಲ್ಲಿನ ಅಮೋಘ ನರ್ತಕಿ. ನೆಲಕ್ಕೆ ಬಿದ್ದ ಮಳೆಹನಿಗಳೂ ರಾಧೆಯ ಪಾದ ಸ್ಪರ್ಶದಿಂದ ಪುಳಕಿತವಾಗುತ್ತಿದ್ದವು. ಅವಿರತವಾಗಿ ಸುರಿವ ಮಳೆಯಲ್ಲಿ ನೀನು ನರ್ತಿಸುವಾಗ ನಿನ್ನ ಗೆಜ್ಜೆಗಳ ಮೇಲೆ ಕೂತು ಆಮೇಲೆ ಮತ್ತೆ ಆಚೆ ಸಿಡಿಯುವುದಕ್ಕೆ ಹನಿಗಳು ಹಾತೊರೆಯುತ್ತಿದ್ದವು. ಕಾರ್ಮೋಡಗಳಿಗೋ ನಿನ್ನನ್ನು ಪೂರ್ತಿ ಒದ್ದೆಯಾಗಿಸುವ ತವಕ. ಒಂದೇ ಸಮನೆ ತನ್ನೆಲ್ಲಾ ಹನಿಗಳನ್ನು ನಿನ್ನ ಮೇಲೆಯೇ ಸುರಿಯುವಂತೆ ಮಾಡುತ್ತಿವೆಯಾ ಅಂತೆಲ್ಲಾ ಅನ್ನಿಸುವಂಥ ವಾತಾವರಣವಿರುತ್ತಿತ್ತು ನೋಡು. ಆ ಮಳೆ ಹನಿಗಳೋ, ಹಣೆಯಿಂದ ಶುರುಮಾಡಿ ರಾಧೆಯ ಅಂಗದ ಸಂಗದಲಿ ಕಚಗುಳಿಯಿಡುತ್ತಾ ರಾಧೆಯನ್ನು ಮೆದುವಾಗಿಸುತ್ತಿದ್ದವು. ಮಳೆಯ ಮಣ್ಣಿನ ಸಮ್ಮೋಹಕ ಪರಿಮಳ ನಿನ್ನ ಮೈಯಿಂದ ಸ್ಫುರಿಸುತ್ತಿತ್ತು. ನನಗೀಗ ತಿಳಿಯಿತು ನೋಡು, ಈ ಮಯೂರಗಳು ಮಳೆ ಬಂದ ಕೂಡಲೇ ಗರಿಬಿಚ್ಚಿ ನರ್ತಿಸುವುದು ಇದೇ ಕಾರಣಕ್ಕೆ; ರಾಧೆಯನ್ನು ಪ್ರಾರ್ಥಿಸುತ್ತವೆ, ರಾಧೆಯನ್ನು ಆಹ್ವಾನಿಸುತ್ತವೆ ಎಂದೂ ಕೂಡ ಹೊಳೆಯದಷ್ಟು ದಡ್ಡನಪ್ಪಾ ಕೃಷ್ಣ! ನಾನಂದು ತೊಡಿಸಿದ ಗೆಜ್ಜೆಯ ಕಳಚಿಲ್ಲ ತಾನೇ? ಹೀಗೆಲ್ಲಾ ಹೇಳಿ ಯಾಕೆ ವಿರಹವನ್ನು ನೆನಪಿಸುತ್ತೀಯಾ ಅಂತ ದೀನಳಾಗಿ ನೋಡಬೇಡ ನೀನು, ಅಪರಾಧಿ ಭಾವ ಕಾಡುತ್ತದೆ.. ಸತಾಯಿಸಿದವರೇ ಸಮಾಧಾನಿಸುವುದು ಈ ಪ್ರೇಮದ ಮುದ್ದು ಮುದ್ದು ಲಕ್ಷಣ ನೋಡು!</span></p><p style="font-family: inherit; text-align: left;"><span style="background-color: black; color: #04ff00;">ಅದೊಂದು ಋತು ಬರುತ್ತದೆ ರಾಧೆ, ಎಲ್ಲಾ ದೇಶಗಳಲ್ಲೂ ಆಯಾ ಸಮಯಕ್ಕೆ; ವೃಕ್ಷ ಸಂಕುಲ ತನ್ನ ಎಲೆಗಳನ್ನು ಉದುರಿಸಿ ಬೋಳು ಬೋಳಾಗುತ್ತದೆ. ಹಕ್ಕಿಗಳೆಲ್ಲಾ ಇನ್ನೆಲ್ಲೋ ವಲಸೆ ಹೋಗುತ್ತವೆ. ಅದೆಲ್ಲಿಂದಲೋ ಅಮ್ಮ ಹೆಕ್ಕಿ ತಂದ ಕಸ ಕಡ್ಡಿಗಳಿಂದ ಕಟ್ಟಿಕೊಂಡ ಗೂಡಲ್ಲಿ ಅಮ್ಮನದೇ ತುತ್ತು ತಿಂದು ಬೆಳೆದ ಹಕ್ಕಿ ಮರಿಗಳ ಚಿಲಿಪಿಲಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತದೆ. ಕಟ್ಟಿಕೊಂಡ ಗೂಡಿನಲ್ಲಿ ಖಾಲಿತನ ತುಂಬಿಕೊಳ್ಳುತ್ತದೆ. ನೀನೊಮ್ಮೆ ಕೇಳಿದ್ದೆ ನೆನಪಿದೆಯಾ, ನಮ್ಮ ಇಡೀ ಬಾಲ್ಯವನ್ನು ಕಳೆದಂಥ ಮನೆಯನ್ನು ಬಿಟ್ಟುಹೋಗುವುದೆಂದರೆ ಅಷ್ಟು ಸುಲಭವಾ ಕೃಷ್ಣ ಅಂತ. ಅಸ್ತಿತ್ವದ ಹೋರಾಟದಲ್ಲಿ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮೋಹವನ್ನು ಬಿಡುವುದು ಅತೀ ಅಗತ್ಯ ರಾಧೆ. ಏನೂ ಇಲ್ಲದಂತೆ ಬಂದವರು ಏನೂ ಇಲ್ಲದಂತೆ ಹೋಗುವುದನ್ನೂ ಕಲಿಯಬೇಕಲ್ಲವಾ? ಗೂಡು ಇದ್ದಷ್ಟು ಹೊತ್ತು ಮನೆ. ಮುಂದೆ ಇನ್ನ್ಯಾವುದೋ ಮರ ಕಾಯುತ್ತಿರಬಹುದು, ಅದಕ್ಕೂ ಒಂಟಿತನ ಸಾಕಾಗಿ ಈ ಹಕ್ಕಿಗಳ ಬರವು, ಇರುವು ಮುಪ್ಪಿನಲ್ಲಿ ಸಂಭ್ರಮಕ್ಕೆ ಪ್ರಾಯ ಬಂದಂತೆ ಆಗಬಹುದು ಅಲ್ಲವಾ? ಅವತ್ತೊಂದು ದಿನ ರಣ ರಣ ಬಿಸಿಲು, ಕೂರಲು ಎಲ್ಲೂ ನೆರಳಿರದೇ ನಾವಿಬ್ಬರೂ ಚಡಪಡಿಸುತ್ತಿರುವಾಗ, ನಾನೊಮ್ಮೆ ಕೊಳಲು ತೆಗೆದು ಊದಿದಾಗ ಪಾತರಗಿತ್ತಿಗಳ ಗುಂಪೊಂದು ಬಂದು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ ನಿಂತು ನಾವದರ ನೆರಳಿನಲ್ಲಿ ನಿಂತಿದ್ದು ಈಗಲೂ ಅಸಂಭವವೆಂಬಂತೆಯೇ ಭಾಸವಾಗುತ್ತದೆ ನನಗೆ. ನೀನೋ ನನ್ನನ್ನು ಮಾಂತ್ರಿಕನೆಂಬಂತೆ ಅನುಮಾನದ ದೃಷ್ಟಿಯಿಂದ ನೋಡಿದ್ದೆ. ಈಗ ತಿಳಿದಿದೆಯಲ್ಲವಾ ರಾಧೆ...</span></p><p style="font-family: inherit; text-align: left;"><span style="background-color: black; color: #04ff00;">ಕಾಲವೇ ನಾನು, ಕಾಲದ ಸಮಸ್ತ ಋತುಗಳು ನಾನು, ಆ ಋತುಗಳ ಭಿನ್ನ ಭಿನ್ನ ವಾತಾವರಣ ನಾನು, ಹವಾಮಾನ ನಾನು, ಚಲನೆ ಸಂಚಲನೆ ನಾನು, ಕಣ ನಾನು, ಮಣ್ಣು ನಾನು, ಫಲ ನಾನು, ಉದುರಿಬಿದ್ದ ಹಳದಿ ಎಲೆ ನಾನು, ಸ್ಮೃತಿ ವಿಸ್ಮೃತಿ ನಾನು, ಗತಿ ಮಿತಿ ಪ್ರಗತಿ ನಾನು, ಪ್ರಕೃತಿ ನಾನು, ಅದನ್ನು ಜೀವಿಸುವ ಸಂಸ್ಕೃತಿ ನಾನು, ಗಂಧ ನಾನು, ಜುಳು ಜುಳು ಮಂದ ನಿನಾದ ನಾನು, ಅಂದ ಬಂಧ ಸಂಬಂಧ ನಾನು, ಕಂದನ ಅಳು ನಾನು, ಅಮ್ಮನ ಎದೆ ನಾನು, ಲಾಭ ಲೋಭ ವಿಪ್ರಲಂಭ ನಾನು, ಅರ್ಥ ಕಾಮ ಸಾಮ ನಾನು, ಸಂಗಾತ ನಾನು, ವಿರಹ ನಾನು, ಅಖಂಡ ಅಭಂಗ ಅಶರೀರಿ ನಾನು, ಕಾರಣದ ಕಾರಣ ನಾನು, ಹೂರಣದ ಹೂರಣ ನಾನು, ರಸ ವಿರಸ ಸಮರಸ ನಾನು, ಇದ್ಯಾವುದೂ ಅಲ್ಲದ ತೂತು ಬಿದಿರಿನ ಹುಡುಗ ನಾನು, ಇನ್ನೂ ಒಂದು ಮಾತು; ರಾಧೆಯಿಲ್ಲದೇ ಅಪೂರ್ಣ ನಾನು..</span></p><p style="font-family: inherit; text-align: left;"><span style="background-color: black; color: #04ff00;">ರಾಧೇ, ಬೃಂದಾವನದ ತೋಪಿನಲ್ಲಿ ಉದುರಿಬಿದ್ದ ನವಿಲುಗರಿಗಳನೆಲ್ಲಾ ತಂದು ಶೇಖರಿಸೆಯಾ? ಕೃಷ್ಣನ ಪತ್ರ ಬರುತ್ತದೆ; ಪತ್ರದ ಎಲ್ಲಾ ಮೂಲೆಗಳಲ್ಲೂ ಗರಿಗಳನ್ನಿಟ್ಟು ಶೃಂಗರಿಸೆಯಾ? ಮಂಕಾಳಿ ಗೌರಿ ಲಕುಮಿಯರಿಗೆ ನನ್ನ ಪತ್ರವನ್ನು ಓದಿ ಹೇಳೆಯಾ? ಎಲ್ಲೇ ನಿನ್ನ ಕೃಷ್ಣ, ಬರಲೇ ಇಲ್ಲ ಎಂದು ಆಡಿಕೊಂಡು ಕಿಚಾಯಿಸುವ ನಿನ್ನ ಗೆಳತಿಯರೆದುರು ಪತ್ರ ಹಿಡಿದು ನಡೆಯಲಾರೆಯಾ? ಸುಸ್ತಾಗಿದೆ ಕೃಷ್ಣಾ ಅನ್ನದಿರು.. ನಮ್ಮ ನಮ್ಮ ಪಾಲಿನ ಬದುಕನ್ನು ಬದುಕಲೇಬೇಕಲ್ಲವಾ, ಕೃಷ್ಣ ಬರೀ ಅಕ್ಷರಗಳ ಕಳುಹಿಸಿಕೊಡುತ್ತಿಲ್ಲ, ಪ್ರಾಮಾಣಿಕವಾಗಿ ಹುಟ್ಟಿಕೊಂಡ ಭಾವಗಳ ಬಿಂಬಗಳೆಲ್ಲವನ್ನೂ ಕಳುಹಿಸುತ್ತಿದ್ದಾನೆ. ಕೃಷ್ಣ ಬರುತ್ತಾನೆ, ಇಂದಲ್ಲ ನಾಳೆ.. ರಾಧೆ ಕಾಯುತ್ತಾಳೆ ತಪಸ್ವಿನಿಯಂತೆ.. ಕೃಷ್ಣ ಬರುತ್ತಾನೆ ಅನುರಾಗಿಯಾಗಿ, ರಾಧೆ ಕಾಯುತ್ತಾಳೆ ವಿರಾಗಿಯಂತೆ.. ಕೃಷ್ಣ ಬರುತ್ತಾನೆ ಕೊಳಲ ಧೂಳು ಒರೆಸಿಕೊಡು ಎನ್ನುವ ಪುಟ್ಟ ಮಗುವಿನ ಹಟವಾಗಿ, ರಾಧೆ ಕಾಯುತ್ತಾಳೆ ಮಡಿಲು ತುಂಬದ ಹೆಣ್ಣಂತೆ.. ಇಲ್ಲ, ಕೃಷ್ಣ ಬರುತ್ತಾನೆ ಕೃಷ್ಣನಂತೆ, ರಾಧೆ ಕಾಯುತ್ತಾಳೆ ರಾಧೆಯಂತೆ.. ಜಗತ್ತಿನಲ್ಲೀಗ ಪ್ರೇಮದ ಸಂಜೆಗಳು ರಾತ್ರಿಗಾಗಿ ಕಾಯುತ್ತವೆ.. ರಾಸಕ್ಕಾಗಿ ಕಾಯುತ್ತವೆ..</span></p><p style="font-family: inherit; text-align: left;"><span style="background-color: black; color: #04ff00;"><br /></span><span style="background-color: black; color: #04ff00;">ಇಂತಿ ನಿನ್ನ<br /> </span><span style="background-color: black; color: #04ff00;">ಗೊಲ್ಲ</span></p><p style="font-family: inherit; text-align: left;"><span style="background-color: black; color: #04ff00;"><br /></span></p><p style="font-family: inherit; text-align: left;"><span style="background-color: black; color: #04ff00;"><br /></span><span style="background-color: black; color: #04ff00;">- 'ಶ್ರೀ'<br /></span><span style="background-color: black; color: #04ff00;"> ತಲಗೇರಿ</span></p><p style="text-align: left;"></p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-6144105096546178382020-09-21T22:24:00.002+05:302022-06-19T12:30:42.359+05:30ಆ ಊರು...ಗದ್ದಲದ ನಡುವಣ ತಣ್ಣನೆಯ ಶೋಕ...<p> ಆ ಊರು..</p><p> ...ಗದ್ದಲದ ನಡುವಣ ತಣ್ಣನೆಯ ಶೋಕ...</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgSaHO32MaBdi8pF1I8GJHKiKWo697RBy9Ng98KK-mCYcywtb1tDKErtoAmO7W1H-J1So3KO0wG4a1HlLX6nQE4blq7cFTzwigQvcw_vqiHl1oFFWPkp1YAYK5jq04W4TtxS0iXVKvDxuM/s673/41666971_2199675913651704_2716421621984997830_n.jpg" style="margin-left: 1em; margin-right: 1em;"><img border="0" data-original-height="480" data-original-width="673" src="https://blogger.googleusercontent.com/img/b/R29vZ2xl/AVvXsEgSaHO32MaBdi8pF1I8GJHKiKWo697RBy9Ng98KK-mCYcywtb1tDKErtoAmO7W1H-J1So3KO0wG4a1HlLX6nQE4blq7cFTzwigQvcw_vqiHl1oFFWPkp1YAYK5jq04W4TtxS0iXVKvDxuM/s320/41666971_2199675913651704_2716421621984997830_n.jpg" width="320" /></a></div><br /><p><br /></p><p>ಎಲ್ಲಿ ನೋಡಿದರಲ್ಲಿ ಕಲ್ಲು, ಹೆಬ್ಬಂಡೆ.. ಉರಿ ಬಿಸಿಲು ಒಂದು ಕಡೆಯಾದರೆ , ಧೂಳಿನ ದಟ್ಟತೆ ಇನ್ನೊಂದು ಕಡೆ.. ಬಣ್ಣ ಕಳೆದುಕೊಂಡ ಗಿಡಮರದ ಎಲೆಗಳು ಹಸಿರಿಗಾಗಿ ಬಹುಶಃ ಮರುಗುತ್ತಿರಬಹುದು.. ಪುಟ್ಟ ಪುಟ್ಟ ಬೀದಿ, ಇಷ್ಟೆಂದರೇ ಇಷ್ಟೇ ಇರುವ ಓಣಿಗಳು.. ಸಗಣಿ ಹಾಕಿ ಸಾರಿಸಲ್ಪಟ್ಟಿವೆ ಕೆಲವು ಕಡೆ, ಪುಟಾಣಿ ಮತ್ತು ಮಧ್ಯಮ ಗಾತ್ರದ ರಂಗೋಲಿಗಳು ಅಲ್ಲೇ ಎಲ್ಲೋ ಕಾಣಲ್ಪಡುತ್ತವೆ.. ಎಲ್ಲಾ ಬೀದಿಯನ್ನ ಹಬ್ಬಿಕೊಂಡಿರುವುದು ಅಂಗಡಿ ಮತ್ತು ಹೋಟೆಲ್ಗಳು.. ಜೊತೆಗೆ ಅತಿಥಿ ಗೃಹಗಳು.. ಎಲ್ಲಾ ವರ್ಗದ ( ಇದ್ದಲ್ಲಿ ) , ಎಲ್ಲಾ ಥರದ ಜನರಿಗೆ ಇಷ್ಟವಾಗುವ ಹಾಗೆ ಮಾಡಿಕೊಂಡ ಹಲವು ಕಸರತ್ತುಗಳ ನಡುವೆಯೂ ಈ ಊರು ಆಪ್ತವಾಗುತ್ತದೆ, ಇರುವಷ್ಟು ದಿನವೂ ಕೌತುಕವಾಗುತ್ತದೆ.. ರಸ್ತೆಯ ಪಕ್ಕ ಎಲ್ಲಿಂದಲೋ ಹಾರಿ ಬಂದು ಬಿದ್ದ ಕಲ್ಲೂ ತನ್ನದೇ ಕತೆಯ ಭಿತ್ತಿಪತ್ರ ಹಿಡಿದು ನಿಂತಿರುತ್ತದೆ.. ಆ ಊರಿನ ಎದೆಯ ಬೀದಿಯ ತಿರುವುಗಳಲ್ಲಿ ಒಮ್ಮೆ ಓಡಾಡೋಣ ಬನ್ನಿ..ಅರೇ, ಆ ಊರಾದ್ರೂ ಯಾವ್ದು ಅಂತಾನಾ?!..ಅದೇ, ಅಂಗಾಂಗ ಮುರಿದರೂ ಸಾವರಿಸಿ ಉಳಿದ ನಮ್ಮ ಹಂಪಿ.. </p><p><br /></p><p>ಇಡೀ ಜಗತ್ತಿಗೆ ಹೇಗೆ ಒಂದು ರೂಪ ಇದೆಯೋ ಹಾಗೆಯೇ ಒಂದು ನಗರಕ್ಕೆ ಕೂಡಾ.. ಅಂತೆಯೇ ಒಂದು ಊರಿಗೂ ಕೂಡ ಆಕಾರ ಮತ್ತು ಶ್ವಾಸ ಇದೆ.. ಯಾವುದೇ ಒಂದು ಊರು ಅಥವಾ ಒಂದು ಪ್ರದೇಶ ಅಲ್ಲಿನ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಉಸಿರಾಡುತ್ತದೆ.. ಮನುಷ್ಯನ ಜೀವನಶೈಲಿಯ, ನಾಗರಿಕತೆಯ ಮತ್ತು ವಿಕಾಸದ ಕುರುಹುಗಳು ಇಡೀ ಊರಿನ ಬಾಹ್ಯ ಮತ್ತು ಆಂತರಿಕ ಅಭಿವ್ಯಕ್ತಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತವೆ. ನಮ್ಮ ದೇಹದ ಯಾವುದೋ ಒಂದು ಚಿಕ್ಕ ಭಾಗಕ್ಕೆ ಏಟಾದರೂ ಅಥವಾ ನೋವಾದರೂ ಇಡೀ ದೇಹದ ಸಮತೋಲನದಲ್ಲೇನೋ ಸಣ್ಣ ಏರುಪೇರಾಗುತ್ತದೆ , ಯಾವತ್ತಿನಂತಿರುವುದಿಲ್ಲ ದಿನಚರಿ.. ಅಂತಹುದರಲ್ಲಿ ವಿಸ್ತಾರವಾಗಿ ಹರಡಿದ್ದಂಥ ಒಂದು ಬೃಹತ್ ಸಾಮ್ರಾಜ್ಯದ ಮೇಲೆ ಧಾಳಿ ನಡೆದಾಗ ಅದರ ಪ್ರತಿರೋಧ ಎಂಥದ್ದಿರಬಹುದು.. ಅಥವಾ, ಪ್ರತಿರೋಧವನ್ನೂ ಮೀರಿ, ನಡೆಸಿದ ಅನಾಹುತಗಳ ಪರಾಕ್ರಮದ ಪ್ರಭಾವ ಎಂಥದ್ದಿರಬಹುದು.. ಅಥವಾ ಕ್ರೌರ್ಯದ ಪರಮಾವಧಿಯ ತೀಕ್ಷ್ಣತೆ ಎಂಥದ್ದಿರಬಹುದು.. ಯಾಕೆ ಯಾವಾಗಲೂ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾಗುವುದು ಎಂಬ ಇಂಥದ್ದೊಂದು ವಿಷಯವನ್ನ ಹೀಗೇ ಧನ್ಯಾಳ ಹತ್ತಿರ ಮಾತನಾಡೋವಾಗ ಅವಳು, ಯಾವುದೇ ಸಾಮ್ರಾಜ್ಯ ಇತ್ತು ಅಂತ ಹೇಳುವುದಕ್ಕೆ ಇರುವ ಸಾಕ್ಷಿ ಅಂದರೆ ಅಲ್ಲಿನ ಕಲಾ ಪ್ರಕಾರಗಳು ಅಥವಾ ರಚನಾ ಶೈಲಿ.. ಒಂದು ವೇಳೆ ಅದೇ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾದಲ್ಲಿ , ಅದನ್ನೂ ಕೂಡ ಇದೇ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ದಾಟಿಸುತ್ತವೆ.. ಒಂದು ಸಾಮ್ರಾಜ್ಯದ ಪ್ರತಿಷ್ಠೆಗೂ ಮತ್ತು ಅದೇ ಸಾಮ್ರಾಜ್ಯ ನಲುಗಿದ ಕತೆಗೂ ಅಭಿವ್ಯಕ್ತಿಯ ಮಾಧ್ಯಮವೆಂದರೆ ಕಲೆ ಮಾತ್ರ ಎಂದಳು.. ಬಹುಶಃ ಎಲ್ಲಾ ಸಾಮ್ರಾಜ್ಯದ ಅವನತಿಯ ಹಿಂದೆ, ಕಲೆಯ ಮೇಲೆ ನಡೆದಂಥ ಅತ್ಯಾಚಾರದ ಕಣ್ಣೀರು ಹೆಪ್ಪುಗಟ್ಟಿ ಜಿಡ್ಡಾಗಿ ಅಂಟಿಕೊಂಡಿರಬಹುದು.. ಹಂಪಿಯ ವಿಷಯದಲ್ಲಿಯೂ ಆಗಿದ್ದು ಇದೇ.. ಚದರ ಚದರ ವಿಸ್ತೀರ್ಣದಲ್ಲಿ ಹಬ್ಬಿಕೊಂಡ ಸಾಮ್ರಾಜ್ಯವೊಂದು ವೈಭವ ಕಳೆದುಕೊಳ್ಳುವುದೇ ಊಹಿಸಲು ಕಷ್ಟ ಸಾಧ್ಯ.. ಆದರೆ ಚಾರ್ಲ್ಸ್ ಡಾರ್ವಿನ್ನಿನ ಸಿದ್ಧಾಂತದಂತೆ , ಹೊಂದಿಕೊಳ್ಳುವುದಕ್ಕೆ ಸಮರ್ಥವಾದುದು ಮಾತ್ರವೇ ಬದುಕಲು ಸಾಧ್ಯ ಅನ್ನುವಂತೆ, ಸೃಷ್ಟಿಯಲ್ಲಿ ನಿರ್ಮಾಣ ಮತ್ತು ನಾಶ ನಿರಂತರ ಪ್ರಕ್ರಿಯೆ; ಹುಟ್ಟು ಸಾವು ಅದರ ಇತರ ನಾಮವೋ ಅಥವಾ ಪ್ರಬೇಧವೋ!.. ಒಂದು ತಿಂಗಳ ಮೇಲಾಯಿತು ಹೋಗಿಬಂದು ಮತ್ತು ಈಗಲೂ ಏನೋ ಅತೃಪ್ತಿ ಮತ್ತು ಅಸಮಾಧಾನ ಹಾಗೂ ಇಷ್ಟು ದಿನ ಬೇಕಾಯಿತು ಬರೆಯಬೇಕು ಅಂತನ್ನಿಸುವುದಕ್ಕೆ , ಹಂಪಿ ಇನ್ನೂ ಪೂರ್ಣವಾಗಿ ತೆರೆದುಕೊಳ್ಳುವುದು ಬಾಕಿಯೇ ಉಳಿಯಿತು ಅನ್ನುವ ಸಣ್ಣ ಕೊರಗು.. ಹೊಸಪೇಟೆಯಿಂದ ಹಂಪಿಗೆ ಹೋದಲ್ಲಿ , ವಿರೂಪಾಕ್ಷ ದೇವಸ್ಥಾನದ ಹತ್ತಿರದ ಬಜಾರ್ ನಮ್ಮನ್ನ ಸ್ವಾಗತಿಸುತ್ತದೆ. ಚಿನ್ನವನ್ನ ಬಳ್ಳದಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದನ್ನ ಬಾಲ್ಯದಲ್ಲಿ ಕೇಳಿದ್ದ ನಾವು ಅದೇ ನೆಲದಲ್ಲಿ ನಿಂತಾಗ ಇತಿಹಾಸಕ್ಕೂ ಮತ್ತು ವರ್ತಮಾನಕ್ಕೂ ಅತ್ಯಂತ ಆಪ್ತ ಸಂಬಂಧವೊಂದು ಹುಟ್ಟಿಕೊಂಡುಬಿಡುತ್ತದೆ.. ಹಂಪಿ ಹೀಗೆ ತನ್ನೊಳಗಿನ ಕತೆಯನ್ನ ಹೇಳಲು ಶುರುಮಾಡುತ್ತದೆ ಮತ್ತು ಆ ಕತೆಯನ್ನು ಕೇಳಲು ತಯಾರಾಗಿ ಹೋಗಿದ್ದು ರಾಧಿಕಾ ಅಕ್ಕಾ , ಸುಮುಖಣ್ಣಾ , ಸಹನಕ್ಕಾ , ಶ್ರೀಗೌರಿ , ಅಭಿಜಿತ್.. ನನ್ನ ಬಹುದಿನದ ಕನಸೊಂದಕ್ಕೆ ರೆಕ್ಕೆ ಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನಾನು ಚಿರ ಋಣಿ.. </p><p><br /></p><p>ಒಂದು ಕಡೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ, ಇನ್ನೊಂದು ಕಡೆ ರಾಮಾಯಣದ ಹೊಳಹು. ಇತಿಹಾಸದ ಎಲ್ಲ ಪಾತ್ರಗಳೂ ಸಾಲಾಗಿ ನಿಂತಂತೆ ಯಾವುದೇ ಕಾಲಾವಧಿಯ ಪ್ರತ್ಯೇಕ ಗುರುತಿಲ್ಲದೇ, ಮತ್ತು ನಾವು ವರ್ತಮಾನದಲ್ಲಿ ಅದಕ್ಕೆ ಮುಖಾಮುಖಿಯಾದಂತೆ.. ಹಲ್ಲು ಕಳೆದುಕೊಂಡ ಅಜ್ಜ ಅಜ್ಜಿಯರ ಕತೆಗಳೇ ಎಷ್ಟು ಆಪ್ತವಾಗುತ್ತಿದ್ದವು , ಇನ್ನು ನಿರಂತರ ಧಾಳಿಯಿಂದ ಸಮಸ್ತವನ್ನೂ ಕಳೆದುಕೊಂಡು ಉಸಿರಾಡುತ್ತಲೇ ಇರುವ ಅಲ್ಲಿನ ಮಡುಗಟ್ಟಿದ ಮೌನದ ಕತೆ ಇನ್ನೆಷ್ಟು ಹತ್ತಿರವಾಗಿರಲಿಕ್ಕಿಲ್ಲ ಹೇಳಿ.. ನಮ್ಮ ಹೆಸರು ಪರಿಚಯ ಇವೆಲ್ಲವುಗಳಿಂದ ಮುಕ್ತವಾಗಿ ಅಲೆಯುವ ಒಂದು ಅನುಭವ ಬಹುಶಃ ವಿಲಕ್ಷಣವೋ ಅಥವಾ ವಿಶೇಷಣವೋ.. </p><p><br /></p><p>ಇಡೀ ಸರಹದ್ದಿನ ಒಳಾಂಗಣದಲ್ಲಿ ಅಲ್ಲಲ್ಲಿ ಎಲ್ಲೆಲ್ಲೂ ಹರಡಿಕೊಂಡಿರುವ ದಪ್ಪ ದಪ್ಪ ಕಲ್ಲುಗಳಲ್ಲಿ ಕೆತ್ತಿದ ಬೇರೆ ಬೇರೆ ಶೈಲಿಯಂತೆ ಕಾಣುವ, ಆದರೆ ಯಾವುದೋ ಒಂದು ರೀತಿಯನ್ನ ಅನುಸರಿಸುವ ವಾಸ್ತುಶಿಲ್ಪ , ಬೃಹತ್ ದೇವಸ್ಥಾನಗಳು, ಅದರ ಗೋಡೆಗಳಲ್ಲಿ , ಕಂಬಗಳಲ್ಲಿ ಅದೆಷ್ಟೋ ವರ್ಷಗಳ ಬಿಸಿಲು ಮಳೆ ಚಳಿ ಮತ್ತು ಗಾಳಿ ಧೂಳನ್ನ ನೋಡುತ್ತಾ ಕಳೆದ ಆಯಸ್ಸನ್ನ ಅದರೊಟ್ಟಿಗೇ ಮತ್ತೆ ಮತ್ತೆ ಹೊಸದಾಗಿಸಿಕೊಳ್ಳಲು ಹಂಬಲಿಸುತ್ತಿರುವ ಚಿತ್ರಗಳು ಒಂದು ಕಡೆಯಾದಲ್ಲಿ , ಪ್ರವಾಸಿಗರನ್ನ ಸೆಳೆಯುವುದಕ್ಕೆ ತಮ್ಮದೇ ನಡವಳಿಕೆಗಳನ್ನ ರೂಪಿಸಿಕೊಂಡ ಜನರ ಚಿತ್ರ ಇನ್ನೊಂದು ಕಡೆ.. ಹಿಂಭಾಗ ಕಳೆದುಕೊಂಡ ಕಲ್ಲಿನ ಆನೆ , ಕೈ ಕಳೆದುಕೊಂಡ ನರಸಿಂಹ , ಏನು ಎಂದು ಗುರುತಿಸಲೂ ಆಗದ ಹಾಗೆ ಮುಖವನ್ನೇ ಕಳೆದುಕೊಂಡ ಒಂದಷ್ಟು ವಿಗ್ರಹಗಳು, ಕಲಾ ಚಿತ್ರಗಳು, ಮತ್ತು ಕಲ್ಲಿನ ಕಂಬಗಳನ್ನೇ ಕತ್ತರಿಸಬಲ್ಲ ಕತ್ತಿಯ ಏಟುಗಳನ್ನು ನೋಡಿದಾಗ, ಆ ಕತ್ತಿಗಳ ಬಲಿಷ್ಠತೆ ಮತ್ತು ಹಿಡಿದ ಕೈಗಳ ಕ್ರೌರ್ಯ ಮತ್ತು ವಿಕೃತ ಮನಸ್ಥಿತಿ.. ವಿರೂಪಾಕ್ಷ ದೇವಾಲಯದಲ್ಲಿ ತಲೆಕೆಳಗಾಗುವ ನೆರಳು , ಅದೇ ದೇವಸ್ಥಾನದ ಪ್ರಾಂಗಣದಲ್ಲೇ ಮಲಗಿ ರಾತ್ರಿ ಕಳೆಯುವ ಜನರು , ಕಂಬಗಳ ಸಂಗೀತ , ಅಜೇಯರಾಗಿಯೇ ಉಳಿವ ಆಕಾಂಕ್ಷೆಯಲ್ಲಿ ಕೆತ್ತಿದ ಕಲ್ಲಿನ ರಥ ಇವುಗಳೆಲ್ಲವೂ ಇನ್ನೊಂದಷ್ಟು ವಿಸ್ಮಯದ ಬುತ್ತಿಗಳಾಗಿ ತೋರುತ್ತವೆ.. ಮಾತಂಗ ಎನ್ನುವ ಮಹರ್ಷಿ ತಪಸ್ಸು ಮಾಡಿದ ಎನ್ನಲಾಗುವ ಆ ಬೆಟ್ಟವನ್ನು ಹತ್ತುವಾಗಿನ ಜಾಗರೂಕತೆ ಮತ್ತು ಹತ್ತುವವರೆಗಿನ ಸಂಯಮ ಬದುಕಲ್ಲೂ ಇರಬಹುದಿತ್ತು ಅನಿಸುತ್ತದೆ.. ಬೆಳಗಿನ ಸೂರ್ಯೋದಯವನ್ನ ನೋಡುವಾಗ ಅಲ್ಲೆಲ್ಲೋ ದೂರದ ಹಸಿರು ದಿಬ್ಬದ ಮೇಲೆ ಬಿಸಿ ಬಿಸಿಯ ಚಿನ್ನದ ದ್ರಾವಣವನ್ನ ನಿಧಾನವಾಗಿ ಚೆಲ್ಲುತ್ತಾ ಬಂದಂತೆ.. ಇಡೀ ಹಂಪಿಯ ಸಮಗ್ರ ಚಿತ್ರಣ ಒಮ್ಮೆಲೇ ತೆರೆದಿಟ್ಟಂತೆ.. ಮತ್ತು ಎತ್ತರಕ್ಕೆ ಹೋದಂತೆ ಹೋದಂತೆ ಭೂಮಿಯ ಗಡಿಗಳೆಲ್ಲವೂ ಅದೃಶ್ಯವಾದಂತೆ.. ಅಗಾಧ ವಿಶ್ವದ ಎದುರು ಕ್ಷುದ್ರ ಕೂಸೊಂದು ನಾಳೆಗಾಗಿ ಹಪಹಪಿಸಿ ಕೂತಂತೆ.. ನಾಗರೀಕತೆ, ಆಧುನಿಕತೆ , ಪ್ರಾಚೀನತೆ, ಇತಿಹಾಸ , ಜಗತ್ತು , ಹೋರಾಟ , ಆಸೆ , ಕಾಲ, ವಯಸ್ಸು ಎಲ್ಲವನ್ನೂ ಮರೆತು ಕೇವಲ ಪ್ರಕೃತಿ ಮತ್ತು ನಮ್ಮ ನಡುವಿನ ಸಂಭಾಷಣೆಯನ್ನ ಮತ್ತೆ ಮತ್ತೆ ಅನುಭವಿಸಲೇಬೇಕೆಂಬ ಹಂಬಲ ಮತ್ತೆ ಮತ್ತೆ ಚಿಗುರಿದಲ್ಲಿ ಮಾತಂಗ ಪರ್ವತದ ತಪ್ಪೇನಿಲ್ಲ..ಇನ್ನು ಹೇಮಕೂಟದ ಸೂರ್ಯಾಸ್ತದ ಬಗ್ಗೆ ಹೇಳಲೇಬೇಕು.. ಸಂಜೆ ಆಗ್ತಾ ಇದ್ದಂತೆ ದೇಶಿ, ವಿದೇಶಿ , ಜಾತಿ , ಲಿಂಗ ಯಾವುದರ ನೆನಪೂ ಇಲ್ಲದೇ ಸೃಷ್ಟಿಯೆಂಬ ಕಲಾವಿದ ಆಕಾಶ ಅನ್ನೋ ಕಾಗದದ ಮೇಲೆ ಬಿಡ್ಸೋ ಸೂರ್ಯಾಸ್ತದ ಚಿತ್ರಕ್ಕಾಗಿ ಸೇರುವ ಜನ ಸಮೂಹ, ವಿಸ್ಮಿತವಾಗಿ ನೋಡುತ್ತಾ ಕೂತುಬಿಡುತ್ತದೆ ಒಂದೇ ಸೂರಿನಡಿಯೆಂಬಂತೆ.. ಸಂಜೆಯ ಆ ಕಡುಗೆಂಪು ಇನ್ನೂ ಜಿಡ್ಡಾಗಿಯೇ ಇರುವ ಪ್ರಾಚೀನ ರಕ್ತದ ಕಲೆಯೇ ಅಂತನ್ನಿಸಿದರೆ ಅತಿಶಯೋಕ್ತಿ ಅಲ್ಲವೇನೋ ಬಹುಶಃ.. ಇವೆಲ್ಲವುಗಳ ಮಧ್ಯ , ನಿರಂತರವಾಗಿ ಹೊಸ ಹೊಸ ನೀರು ಹರಿಯುತ್ತಲೇ ಇದೆ ತುಂಗೆಯಲ್ಲಿ ಮೌನವಾಗಿ.. ಪುರಂದರ ಮಂಟಪದ ನೀರವತೆ ಮತ್ತು ತುಂಗೆಯ ಜುಳು ಜುಳು, ಧ್ಯಾನಸ್ಥ ಸ್ಥಿತಿಯನ್ನ ಮತ್ತೆ ಮತ್ತೆ ಪ್ರತಿಷ್ಠಾಪಿಸಲು ಹೆಣಗುತ್ತಿರುವಂತೆ ಗೋಚರಿಸುತ್ತದೆ.. ರಾತ್ರಿ ೮ ಗಂಟೆ ಆಗ್ತಾ ಇದ್ದಂತೆ ಹಂಪಿಯಲ್ಲಿನ ದೀಪಗಳಿಗೆ ವಿಶೇಷ ಬಣ್ಣ ಮತ್ತು ಅರ್ಥ ಬರುತ್ತದೆ ಹಾಗೂ ಇಡೀ ಹಂಪಿ ನಿಧಾನಕ್ಕೆ ಮಲಗುತ್ತದೆ ಮತ್ತು ಇತರ ಊರೊಂದಿಗಿನ ಸಂಪರ್ಕವನ್ನ ಕಡಿದುಕೊಂಡು ಗುಟ್ಟಿನ ಜಾಗವಾಗುತ್ತದೆ.. </p><p><br /></p><p>ಮತ್ತೆ ಬೆಳಗಿನ ಜಾವ ಪ್ರವಾಸಿಗರನ್ನ ಸೆಳೆಯಲು "ರೂಮ್ ಚಾಹಿಯೇ ಕ್ಯಾ" ಎನ್ನುತ್ತಾ ಶುರುವಾಗುವ ಗದ್ದಲ "ಕನ್ನಡ ಬರತ್ತೆ ಸಾರ್" ಅನ್ನುತ್ತಾ , ವ್ಯಾಪಾರೀಕರಣದ ಬೇರೆ ಬೇರೆ ಮಜಲುಗಳಿಗೆ ವಿಸ್ತರಿಸಿಕೊಳ್ಳುತ್ತದೆ.. ಅಲ್ಲಿನ ಜನರ ಬಹುತೇಕ ಉದ್ಯೋಗವೇ ಪ್ರವಾಸಿಗರನ್ನ ಸೆಳೆಯುತ್ತಾ ಅವರನ್ನ ಖುಷಿಪಡಿಸುವುದೇ ಆಗಿರುವಾಗ ಭಾಷೆಯ ಬಗೆಗಿನ ಕಾಳಜಿ ಯಾರಿಗಿರಲು ಸಾಧ್ಯ.. ನಿತ್ಯದ ಹೊಟ್ಟೆಯ ಹಾಡು ಮತ್ತು ಅದರ ಮೇಲಿನ ಮೋಜು ಪ್ರವಾಸಿಗರ ತೃಪ್ತಿಯಲ್ಲೇ ಇದೆ ಅನ್ನುವ ಸತ್ಯ ತಿಳಿದಾಗಿನಿಂದ ಹಂಪಿ ಹಾಗೆಯೇ ಉಳಿದುಬಿಟ್ಟಿತು.. ಹಂಪಿ ಹಾಳಾಗಿಯೇ ಇರಬೇಕು, ಆಗಲೇ ಅದು ತನ್ನ ಚರಿತ್ರೆಯನ್ನ ಹೇಳಬಲ್ಲದು.. ಅದಕ್ಕಾಗಿ ಕೆಲವು ಉದುರುತ್ತಿರುವ ದೇವಸ್ಥಾನಗಳನ್ನ ಕೃತಕವಾಗಿ ಮೊದಲಿನಂತೆ ಕಟ್ಟಲು ಪಡುತ್ತಿರುವ ಹರಸಾಹಸಗಳು ಸಾಕ್ಷಿಯಾಗುತ್ತವೆ.. ಹಂಪಿಯಲ್ಲಿ ಇರುವಷ್ಟೂ ದಿನ ನಾವು ಯಾವುದೋ ಒಂದೋ ಅಗೋಚರ ಶಕ್ತಿಯ ಆಜ್ಞೆಯನ್ನ ಪಾಲಿಸಿದಂತೆ ಮತ್ತು ಅಲ್ಲಿನ ಎಲ್ಲವೂ ಪೂರ್ವ ನಿರ್ಧರಿತವಾದಂತೆ ಅನ್ನುವ ಸಣ್ಣ ಸಂಶಯವೊಂದು ಬಂದರೆ ಅದೊಂದು ಸೂಕ್ಷ್ಮದ ವಿಷಯ ಖಂಡಿತಾ.. ಅಲ್ಲಿಗೆ ಅದರದ್ದೇ ಆದ ವ್ಯವಸ್ಥೆಯಿದೆ , ಅದರದ್ದೇ ಆದ ಗುಣ ಲಕ್ಷಣಗಳಿವೆ, ಅದರದ್ದೇ ಆದ ದಿನಚರಿಯಿದೆ, ಸೂರ್ಯ ಚಂದ್ರರೊಂದಿಗೆ ಹಗಲು ರಾತ್ರಿಗಳಾದರೂ ಅದಕ್ಕೆ ಅದರದ್ದೇ ಆದ ಕಾಲಮಾನವಿದೆ.. ಅದಷ್ಟೂ ವ್ಯಾಪಾರೀಕರಣ, ಮನುಷ್ಯನ ಹಪಹಪಿತನದ ನಡುವೆಯೂ ಒಂದು ಪ್ರೀತಿಯ ಸ್ಪರ್ಶಕ್ಕಾಗಿ ಹಂಪಿಯ ದೇವಸ್ಥಾನದ ಕಂಬಗಳು ಕಾಯುತ್ತಿವೆ, ಕಲ್ಲಿನ ನಂದಿ ಕತ್ತಲೆಯಲ್ಲಿ ಮುಲುಗುತ್ತಿದೆ, ಕಿತ್ತುಕೊಂಡು ಹೋದ ದೇವರ ಮೂರ್ತಿಗಳು ಈಗಲೂ ಜನರ ನಂಬಿಕೆಯಲ್ಲಿ ತಮ್ಮ ಅಸ್ತಿತ್ವವನ್ನ ಗಟ್ಟಿಯಾಗಿಸಿಕೊಂಡಿವೆ.. ರಾಣಿಯರ ಸ್ನಾನಗೃಹವಾಗಿತ್ತಂತೆ , ಇಲ್ಲಿ ಆನೆಗಳ ಸಾಲು ಸಾಲನ್ನ ಕಟ್ಟುತ್ತಿದ್ದರಂತೆ ಎಂಬ ಚರಿತ್ರೆಯ ನೆನಪುಗಳೊಂದಿಗೆ , ಇಲ್ಲೇ ಅಕ್ಕತಂಗಿಯರಿಬ್ಬರು ಕಲ್ಲಾಗಿಹೋದರಂತೆ ಎನ್ನುವ ಕತೆಗಳೂ ಪ್ರಚಲಿತದಲ್ಲಿರುವ ಹಂಪಿಯಲ್ಲಿ ಒಂದು ಅಪ್ರಕಟಿತ ಶೋಕವಿದೆ.. ಒಂದು ಅನಾಥ ಮೌನವಿದೆ.. ಇಷ್ಟೆಲ್ಲ ಮಾನವ ಜನಾಂಗದ ಗದ್ದಲದ ನಡುವೆ ಬೇರೆಯಾಗಿಯೇ ಉಳಿದ, ಬೆರೆಯದೇ ಹೋದ ಅಳಲಿದೆ..ಇದಕ್ಕಾಗಿಯೇ ಅದು ಇನ್ನಷ್ಟು ಆಪ್ತವಾಗುತ್ತದೆ.. ಕೇವಲ ಚೌಕಟ್ಟಿನಲ್ಲಿ ಛಾಯಾಚಿತ್ರವಾಗುವ ಎಲ್ಲಾ ಕಲ್ಲಿನ ಚೂರಿಗೂ ಅಲ್ಲಿನ ಬಾನಿಗೂ ಅದರದ್ದೇ ಆದ ಬಣ್ಣವಿದೆ.. ಅಲ್ಲಿನದೇ ಕಲ್ಲಿನ ಕಂಬಕ್ಕೆ ತಲೆಯಾನಿಸಿ ಕೂತಾಗ, ಕಾಮ,ಕ್ರೋಧ,ಲೋಭ,ಮೋಹ,ಮದ, ಮಾತ್ಸರ್ಯ ಇತ್ಯಾದಿಗಳೂ, ಸಿಟ್ಟು , ಪ್ರೀತಿ ,ಗಾಂಭೀರ್ಯ, ಸೇಡು, ನಗು , ದುಃಖ , ರೌದ್ರ , ಭೀಭತ್ಸ , ಭಯ, ಹಾಸ್ಯ , ಅದ್ಭುತ, ಶಾಂತ ಇತ್ಯಾದಿ ಇತ್ಯಾದಿ ರಸಗಳೂ ಅತ್ಯಂತ ಕ್ಷೀಣ ದನಿಯಲ್ಲಿ ಚಡಪಡಿಸುತ್ತಿರುವುದು ಕೇಳಿದರೆ ಹುಚ್ಚನೆನ್ನದಿರಿ.. ಯಾಕೆಂದರೆ , ಹಂಪಿ ಗತ ವೈಭವದ ಗಂಭೀರ ಆತ್ಮ ಚರಿತ್ರೆ.. </p><p><br /></p><p>~`ಶ್ರೀ'</p><p> ತಲಗೇರಿ</p>ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-56935899014358853292020-05-02T16:55:00.000+05:302020-05-02T16:55:06.620+05:30ದಿವ್ಯ ಸಾನ್ನಿಧ್ಯದ ಸಾಂಗತ್ಯ ಪತ್ರ...<div dir="ltr" style="text-align: left;" trbidi="on">
<br />
<div dir="ltr">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEijes7Edxoe4-jZCbGuiU0RgS6Gov4_TM9WFeHR6qgKB0wXQHt2auSmHzFEsxOxV7hyphenhyphendPqwc5-X5mv1x7Ebq8yHy-d_uFjWSbDyTpjA_XJPHn4ZpNm8brcpiERQFNs-TwunjqxvlLoKqPM/s1600/images+%25281%2529.jpeg" imageanchor="1" style="margin-left: 1em; margin-right: 1em;"><img border="0" data-original-height="375" data-original-width="626" height="191" src="https://blogger.googleusercontent.com/img/b/R29vZ2xl/AVvXsEijes7Edxoe4-jZCbGuiU0RgS6Gov4_TM9WFeHR6qgKB0wXQHt2auSmHzFEsxOxV7hyphenhyphendPqwc5-X5mv1x7Ebq8yHy-d_uFjWSbDyTpjA_XJPHn4ZpNm8brcpiERQFNs-TwunjqxvlLoKqPM/s320/images+%25281%2529.jpeg" width="320" /></a></div>
<div dir="ltr">
<br /></div>
<div dir="ltr">
<br /></div>
<div dir="ltr">
<br />
ಗೆ,<br />
ರಾಧಾ,<br />
ಗೋಕುಲ</div>
<div dir="ltr">
<br /></div>
<div dir="ltr">
ಸಖೀ ರಾಧೆ,</div>
<div dir="ltr">
<br /></div>
<div dir="ltr">
ಇಷ್ಟುದ್ದ ಈ ಹಾಳೆಯ ಮೇಲೆ ಕೃಷ್ಣನ ಕೈಯಚ್ಚಿನ ನೆರಿಗೆ ಮೂಡುವ, ದೇವರೆಂಬ ಧಾತುವಿನೊಳಗೆ ನಡೆವ ಆಗುಹೋಗುಗಳ, ಕಪಟವಿಲ್ಲದ ಅಕ್ಷರಗಳಲ್ಲಿ ಮತ್ತೆ ಹುದುಗಿಸುವ ಸಮಯ ಬಂದಿದೆಯೀಗ. ಬರೆದ ಮೊದಲೆರಡು ಪತ್ರಗಳು ನಿನ್ನ ಮಡಿಲಲ್ಲಿ ನಿತ್ಯ ಸುಖದಲ್ಲಿ ಆಪ್ತ ಹವೆಯಲ್ಲಿ ಬೆಚ್ಚಗಿವೆಯೆಂದುಕೊಳ್ಳುತ್ತೇನೆ. ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುತ್ತದಂತೆ. ಹಳೆಯದಾದಷ್ಟೂ ನೆನಪುಗಳು ಮಾಗುತ್ತವಂತೆ. ಹಳೆಯದಾದಷ್ಟೂ ಉಳಿದ ಪ್ರೀತಿ ಸಲಹುತ್ತದಂತೆ. ಯಾರನ್ನು? ಎಂದು ಮರು ಪ್ರಶ್ನಿಸದಿರು.. 'ಈ ಜಗತ್ತನ್ನು', ಎಂದು ನಾನು ಉತ್ತರಿಸುವೆನೆಂದು ನಿನಗೂ ತಿಳಿಯದೇ ಏನಲ್ಲ! ಕೃಷ್ಣನಿಗೆ ವೈಯಕ್ತಿಕ ಅನ್ನುವುದು ಉಳಿದದ್ದಾದರೂ ಯಾವುದು ರಾಧೆಯ ಹೊರತಾಗಿ, ರಾಧೆಗಾಗಿ ಬಿಟ್ಟ ಕೊಳಲಿನ ಹೊರತಾಗಿ. ಬಿಡು ಬಿಡು, ನೆನಪು ನಶೆಯಂತೆ. ಕಪಟಿ, ಚತುರ, ಮೋಸಗಾರ, ವ್ಯಾಮೋಹಿ, ಪಕ್ಷಪಾತಿ, ದ್ರೋಹಿ, ಆಪದ್ಬಾಂಧವ, ಮಿತ್ರ, ಕುಟಿಲ ತಂತ್ರಿ , ಮಾಯಾವಿ ಒಂದೇ ಎರಡೇ ಕೃಷ್ಣನು ಪಡೆದ ಹೆಸರುಗಳು. ಆದರೆ ಇವತ್ತು ಕೃಷ್ಣ ಹೇಳಹೊರಟಿರುವುದು ಈ ಅಂಕಿತಗಳಾಚೆಗಿನ ಸಂಗತಿಗಳನ್ನು.. ಧರ್ಮ ಅಧರ್ಮದ ಮರ್ಮದಲಿ ದಾಳವಾದ ಪರಾಕ್ರಮಿಯ ಕಣ್ಣುಗಳಲ್ಲಿ ಕೃಷ್ಣನನ್ನು ನೋಡುವೆಯಂತೆ.. ಹಾಗೇ, ಕಿವಿಯಾಗುವೆಯಂತೆ ಇವೆಲ್ಲವುಗಳಿಗೂ ಜೀವಂತ ಸಾಕ್ಷಿಯಾದ ಸಾರಥಿ, ರಾಯಭಾರಿ, ರಾಜಕಾರಣಿ, ಯುದ್ಧ ನಿಪುಣ ಕೃಷ್ಣನ ಸಂಗತಿಗಳಲ್ಲಿ ಉಳಿದ ಆ ಪರಾಕ್ರಮಿಯ ಪ್ರಾರಬ್ಧಕ್ಕೆ !<br />
ಊಹೆ ನಿಜ ರಾಧೇ, ವಸುಸೇನನ ಕುರಿತಾಗಿಯೇ ಇವತ್ತು ನಾನು ಹೇಳಹೊರಟಿರುವುದು. ಲೋಕ ನಿಂದಿಸಲಿ ನನ್ನ, ಲೋಕ ದ್ವೇಷಿಸಲಿ ನನ್ನ, ಲೋಕ ಜರೆಯಲಿ ನನ್ನ, ಲೋಕ ಮರುಗಲಿ ಕಂಡು ಅವನ... </div>
<div dir="ltr">
<br /></div>
<div dir="ltr">
ಭೋರ್ಗರೆದು ಬಿಕ್ಕಳಿಸುವ ಡೋಲು,ನಗಾರಿ, ಶಂಖ,ಕಹಳೆ, ಜಾಗಟೆಗಳು. ಅಬ್ಬರಿಸಿ ಅಬ್ಬರಿಸಿ ಸುಸ್ತಾದ ಆನೆ,ಕುದುರೆಗಳು. ತಲೆಯ ಮೇಲೆ ಠೀವಿಯಿಂದ ಕೂತಿದ್ದ ಕಿರೀಟಗಳು ಉದುರಿಬಿದ್ದಿವೆ ಆಧಾರವಿಲ್ಲದೇ. ಬಿಸಿ ಬಿಸಿ ನೆತ್ತರ ಇನ್ನೂ ಸುರಿಸುತ್ತಲೇ ಅಲುಗುತ್ತಿರುವ ಕಡಿದ ಬೆರಳಿನ ಚೂರು. ಕಣ್ಣುಗಳ ಮುಚ್ಚಲೂ ಸಮಯ ಸಿಗದೇ ಉಳಿದ ಕತ್ತರಿಸಿದ ರುಂಡ, ವಸ್ತ್ರದ ಬಣ್ಣವೇ ಬದಲಾದ ಮುಂಡ, ಮಾರ್ದನಿಸುತಿದೆ ಕಾಲಾಳುಗಳ ಆಕ್ರಂದನ.. ಈ ಭೀಭತ್ಸ ರಣರಂಗದಲ್ಲೇ ಬಿದ್ದಿತ್ತು ಇನ್ನೊಂದು ಶರೀರ ರಥಕ್ಕೊರಗಿ. ಅದರಲ್ಲೇನು ವಿಶೇಷ ಕೃಷ್ಣ, ಯುದ್ಧವೆಂದಮೇಲೆ ಹೆಣಗಳ ರಾಶಿ, ರಕ್ತದ ಹೋಳಿ, ಊರಲ್ಲುಳಿದ ಹೆಂಗಸರಿಗೆ ವಿಧವೆಯ ಪಟ್ಟ ಹಾಗೂ ಮಾನಕ್ಕಾಗಿ ಹೋರಾಟ ಸಾಮಾನ್ಯವಲ್ಲವೇ ಮೋಹನ, ಅನ್ನದಿರು. ಪಾಂಡವರ ನಿಷ್ಠೆ, ಧರ್ಮ, ಪರಾಕ್ರಮ, ಸ್ವಾರ್ಥ, ಭಕ್ತಿ ಇವೆಲ್ಲವನ್ನೂ ಮೀರಿ ಎದೆನಡುಗಿಸಿದವನ<u> </u>ಕತೆಯಿದು. 'ಇದಿರಿಲ್ಲ ಎನಗೆ' ಎಂದು ಮೆರೆಯುತ್ತಿದ್ದ ಸವ್ಯಸಾಚಿಯ ಕೈಗಳಿಗೆ ನಡುಕಹುಟ್ಟಿಸಿದವನ ಕತೆ. ಹೌದು, ಇದು ಕ್ಷತ್ರಿಯ ಬ್ರಾಹ್ಮಣ ಸೂತ ಯೋಧ ಕರ್ಣನ ಕತೆ. "ಕೇಳಿದ್ದೇನೆ ಮಾಧವಾ, ನಿನ್ನ ಕುಟಿಲತೆಯಿಂದ ಅವ ಸತ್ತನಂತೆ ಅನ್ನುವುದನ್ನ", ಅಂತನ್ನಬೇಡ. ಲೋಕಕ್ಕೆ ತಿಳಿದ ಗೋಚರಗಳು ಒಂದೆಡೆಯಾದರೆ, ಕರ್ಣ ಮತ್ತು ಕೃಷ್ಣನಲಿ ವಿನಿಮಯವಾದ ಸಾನ್ನಿಧ್ಯವೇ ಬೇರೆ.. "ಭಗವಂತ ನೀನು, ವಿನಿಮಯವಾಗಲೇಬೇಕಲ್ಲವೇ?", ಅಂತನ್ನುವ ಆ ಪ್ರಶ್ನಾರ್ಥಕ ಕಣ್ಣುಗಳನ್ನ ನನ್ನತ್ತ ನೇರವಾಗಿ ಚಾಚಿದಂತೆ ಭಾಸವಾಗುತ್ತಿದೆ ನನಗೆ, ಇವತ್ತಿನ ಈ ಪತ್ರ ಆವತ್ತಿನ ಪ್ರತಿಫಲನ. </div>
<div dir="ltr">
<br /></div>
<div dir="ltr">
ಕೆಸರಲ್ಲಿ ಕುಳಿತು, ರಥಕ್ಕೊರಗಿ ನಿಕೃಷ್ಟ ನೋಟ ಬೀರುತ್ತಿದ್ದ ಕರ್ಣ, " ಕೊನೆಗೂ ಕೊಲ್ಲಿಸಿದೆಯಲ್ಲಾ" ಅನ್ನುವಂತೆ. ಅರ್ಜುನ ಸಾರಥಿ ಕೃಷ್ಣ ರಥದಿಂದ ಇಳಿದು ಬರಲೇಬೇಕಾಯ್ತು ಪರಾಕ್ರಮಿಯ ಬಳಿಗೆ. ಅದೆಷ್ಟು ಪ್ರಶ್ನೆಗಳು ಓಡುತ್ತಿರಬಹುದಲ್ಲಾ, ಉತ್ತರಿಸಬೇಕಾದುದು ಆದ್ಯ ಕರ್ತವ್ಯ. ಸಾಯುವ ಗಳಿಗೆಯಲ್ಲಿ ಮನುಷ್ಯ ಪವಿತ್ರನಾಗುತ್ತಾನೆ. ಇಹದ ಕೊಂಡಿ ಕಳಚಿಬೀಳುವ ಕ್ಷಣದಲ್ಲಿ ಅಹಂ ಚೆಲ್ಲಾಪಿಲ್ಲಿಯಾಗಿ ಚೆದುರಿರುತ್ತದೆ. ರಥದಿಂದ ಇಳಿದವನೇ ಹೋದೆ ಕರ್ಣನ ಬಳಿಗೆ, ಹೀಗೇ ಹೋಗಿದ್ದೆ ಯುದ್ಧದ ಹಿಂದಿನ ದಿನವೂ ಕೂಡಾ.. "ಪಾಂಡವರ ಸೇರು, ರಾಜ್ಯ ಮತ್ತು ಪಟ್ಟ ನಿನ್ನದಾಗುತ್ತದೆ ಅಂತ ಹೇಳುವುದಕ್ಕೆ", ಅಂತ ಮಾತ್ರವೇ ಗ್ರಹಿಸಿತು ಲೋಕ. ಕರ್ಣನ ಮನಸ್ಸನ್ನು ಕದಡಲು ಹೋದೆ, ಅಂತ ಮಾತ್ರವೇ ಮಾತಾಡಿತು ಲೋಕ. ಅದೆಷ್ಟೇ ಆಮಿಷಗಳನ್ನೊಡ್ಡಿದರೂ ಕರ್ಣ ಅದನ್ನ ಕಾಲ್ಬೆರಳ ತುದಿಯಲ್ಲಿ ಕೂಡಾ ಮುಟ್ಟದೇ ತಿರಸ್ಕರಿಸಿದಂಥ ಋಣಬದ್ಧ, ಕೃತಜ್ಞತೆಯ ಮೂರ್ತರೂಪ ಅನ್ನುವುದನ್ನ ಇನ್ನು ಹೇಗೆ ಹೇಳಬಹುದಿತ್ತು ಈ ಲೋಕಕ್ಕೆ ನಾನು? ಕುಲವೆಂಬುದೇ ಯಾವುದೆಂದು ತಿಳಿಯದೇ ಅನುಭವಿಸಿದ ಅವಮಾನಗಳ ನಡುವೆ ಅರಸಿಬಂದ ಸ್ನೇಹಕ್ಕಾಗಿ ಸಮಸ್ತವನ್ನೂ ತ್ಯಜಿಸಲು ಸಿದ್ಧನಾಗಿದ್ದ ಕರ್ಣ ಒಬ್ಬ ಅಪ್ಪಟ ಮಗುವಿನಂಥ ಸ್ನೇಹಿತನೆಂಬುದನ್ನ ಜಗತ್ತಿಗೆ ಅದು ಹೇಗೆ ಹೇಳಬಹುದಿತ್ತು ನಾನು? </div>
<div dir="ltr">
<br /></div>
<div dir="ltr">
ಕರ್ಣನ ಸಾವು ನಿಶ್ಚಯವಾಗಿತ್ತು. ಸಾವಿನ ಎದುರು ಕೂತು ಹುಟ್ಟಿನ ಕತೆ ಕೇಳುವ ವಿಪರ್ಯಾಸ ಅವನದು. ಆವತ್ತೇ ಯಾಕೆ ಹೇಳಬೇಕಿತ್ತು, ಮತ್ತೆ ದಿನವೆಲ್ಲಿತ್ತು? ಸೂತ ಕುಲದ ರಾಧೆಯ ಮಗ ನಾನು ರಾಧೇಯ ಅಂತಂದುಕೊಂಡವಗೆ, ಬಾಲ್ಯದಾಟದ ಕುಂತಿಗೆ ಯೌವನದ ವರ ಸಿಕ್ಕಿ, ನಡೆದ ಅಚಾತುರ್ಯದ, ಸೂರ್ಯ ಅಂಶದ ಗರ್ಭ ನೀನು ಅಂತನ್ನುವುದು ಅದೆಷ್ಟು ಸಮಂಜಸ ಎಂದು ಪ್ರಶ್ನಿಸುವೆಯಾ ರಾಧಾ.. ಹೇಳಿದ್ದಷ್ಟೇ ಅಲ್ಲದೇ, ಪಾಂಡವರೈವರಿಗೆ ಹಾನಿಗೈಯುವುದಿಲ್ಲವೆಂದು ಮಾತು ಕೊಡುವಂತೆ ಇಕ್ಕಟ್ಟಿಗೆ ಸಿಲುಕಿಸಿದೆಯಲ್ಲಾ ಚತುರನೇ ಅನ್ನುತಿಹೆಯಾ? ಯಾಕಿಷ್ಟೊಂದು ಉಪಾಯಗಳು ಹರಿಯೇ ಅಂದ, ಯಾಕೆ ನನ್ನನ್ನು ಚಂಚಲನನ್ನಾಗಿಸುತ್ತಿರುವೆಯೆಂದ. ದ್ರೌಪದಿಯ ಕಣ್ಣಿಂದ ಉದುರಿದ ಆ ಹನಿಯಲ್ಲಿ ಗಹಗಹಿಸಿದ ಕರ್ಣನ ಚಿತ್ರವಿತ್ತೋ ಕೌಂತೇಯ ಅಂದೆ, ತತ್ತರಿಸಿದ. ಅವಮಾನಕ್ಕೆ ಉತ್ತರ ಕೊಡಬೇಕಾದುದು ಕ್ಷತ್ರಿಯ ಧರ್ಮವೇ, ಆದರೆ ಅಂದು ಅದು ಆ ಸ್ತ್ರೀಯ ಮೇಲಾಗಿತ್ತಲ್ಲ; ಅದು ಸಮ್ಮತ ಉತ್ತರವಲ್ಲವಾಗಿತ್ತು. ಅವಳ ಸೀರೆಯ ತುದಿಗೆ ಇನ್ನೂ ಕರ್ಣನ ಬೆರಳಿನ ಕಲೆಯಿತ್ತು. ಅದಿರಲಿ, ಮತ್ತೆ ಕುಂತಿಯನೂ ಕಳುಹಿಸಿದೆಯಲ್ಲಾ ಅವನ ಬಳಿಗೆ, ಇದು ಅವನನ್ನ ಗದ್ಗದಿತನನ್ನಾಗಿಸಲಲ್ಲದೇ ಇನ್ನೇನು ಅಂತ ನೀನೂ ಕೇಳುತ್ತಿರುವೆಯಾ ರಾಧಾ.. ಹೆತ್ತವಳಿದ್ದೂ ಅವಳ ಅಪ್ಪುಗೆಯಿಲ್ಲದೇ ಅವ ಕೊನೆಯುಸಿರೆಳೆಯುವುದು ದುರಂತವಾಗುತ್ತದಲ್ಲವೇ? ಈಗಾಗಿದ್ದೇನು ಅನ್ನಬೇಡ ಮತ್ತೆ.. ತಾಯಿ ಮಗನ ಅಪೂರ್ವ ಮಿಲನಕ್ಕೆ ಬೇರೆ ಘಟಿಗಳು ಇರಲಿಲ್ಲ. ಅದೆಷ್ಟೇ ಸ್ವಾರ್ಥವಿದ್ದರೂ ಮಮತೆ ಉಕ್ಕುವುದು , ಅದೆಷ್ಟೇ ದ್ವೇಷವಿದ್ದರೂ ಹೃದಯ ಬಿಕ್ಕುವುದು, ಅದನ್ನೇ ಅಲ್ಲವೇ ಜಗತ್ತು ನೋಡಿದ್ದು ಈ ಭೇಟಿಯಲ್ಲಿ. ಕುಂತಿ ಎರಡು ವರ ಕೇಳಲು ಅಲ್ಲಿಗೆ ಹೋದಳಷ್ಟೇ ಅಂದುಬಿಡಬಹುದು ಸುಲಭವಾಗಿ, ರಕ್ತ ಸಂಬಂಧದ ಗಾಢತೆಯನ್ನ ಮತ್ತು ವಿಧಿಯ ವಿವರಗಳನ್ನ ಇನ್ನೆಂತು ತೋರಿಸಲಿ ನಾನು? ತನ್ನ ಕೈ ಸೋಲುತ್ತಿದೆ ಎಂದು ಗೊತ್ತಿದ್ದರೂ ಕೇಳಿದ್ದನ್ನು ಕೊಡದೇ ಇರಲಾರ ಕರ್ಣ ಅನ್ನುವುದು ಹೇಗೆ ತಿಳಿದೀತು ಇದರ ಹೊರತಾಗಿ ಅಲ್ಲವೇ? </div>
<div dir="ltr">
<br /></div>
<div dir="ltr">
ಕೈಯಲ್ಲಿ ಧನುರ್ಬಾಣಗಳಿಲ್ಲದೇ, ಶಸ್ತ್ರರಹಿತನಾದ ಕ್ಷತ್ರಿಯನ ಕೊಲ್ಲುವ ತುರ್ತೇನಿತ್ತು ನಿನಗೆ, ನಿನ್ನ ಗಾಂಢೀವಿ ಸೋಲುವನೆಂಬ ಭಯವೇ? ಇರಬಹುದು ಇರಬಹುದು, ಅಡ್ಡದಾರಿ ಹಿಡಿದ ಕೃಷ್ಣ ಎಂದು ಎಷ್ಟೆಲ್ಲಾ ನಿಂದಿಸಿದರಲ್ಲಾ.. ಅಪ್ರತಿಮ ಯುದ್ಧೋನ್ಮಾದದಿಂದ ಚಕ್ರವ್ಯೂಹವನ್ನ ಹೊಕ್ಕಿದ ಅಭಿಮನ್ಯುವಿನ ಅಂತ್ಯಕ್ಕಾಗಿ ಸಕಲ ಶಾಸ್ತ್ರ ಪಾರಂಗತನಾದ ಕರ್ಣ, ಯಾವ ಧರ್ಮವನ್ನ ಮೀರಿದನಲ್ಲಾ, ಪಾಪ ಪುಣ್ಯವೀಗ ದುರ್ಯೋಧನನ ಲೆಕ್ಕವೆಂಬ ಮಾತ ಕೇಳಿ, ಹಿಂದಿನಿಂದ ಕೈ ಕತ್ತರಿಸಿದನಲ್ಲಾ, ಅದೇ ಧರ್ಮ ಈಗ ಅವನ ಎದೆಗೆ ನಾಟಿತು. ಇದೇನು ಕೃಷ್ಣಾ, ನೀನೂ ಸಾಮಾನ್ಯ ಮನುಷ್ಯರಂತೆ ದ್ವೇಷಕ್ಕೆ ದ್ವೇಷ, ಮೋಸಕ್ಕೆ ಮೋಸ ಎಂದುಬಿಟ್ಟೆಯಲ್ಲಾ ಅಂತಂದುಕೊಳ್ಳದಿರು. ಸತ್ಯದ ಅರಿವಾಗಬೇಕಿತ್ತು ಕರ್ಣನಿಗೆ, ಅವನು ದುರ್ಯೋಧನನ ಸ್ನೇಹದ ಹೆಜ್ಜೆಯ ಅಮಲಿನಲ್ಲಿ ಎಲ್ಲಿ ಎಡವಿದ ಅನ್ನುವುದನ್ನ ಮನದಟ್ಟು ಮಾಡಲೇಬೇಕಿತ್ತು. ಬಾಣ ನೆಟ್ಟ ಮೇಲೂ ದಾನ ಕೇಳಿದನಂತೆ ಅವ ಸಾಯದಿದ್ದರೆ ಅಂತ, ಎಂದೆಲ್ಲಾ ಜನ ನಿನಗೆ ಹೇಳಿದರೇ? ಪರಮಾತ್ಮನೂ ಒಮ್ಮೊಮ್ಮೆ ಶರಣಾಗುತ್ತಾನೆ ಕರ್ಣನಂಥ ದಾನಶೂರನೆದುರು.. ದಾನ ಕೇಳಿದ್ದು ನಿಜ, ಅವನ ಹಿಂದಿನ ಜನ್ಮದ ಲೆಕ್ಕವೊಂದು ಬಾಕಿಯಿತ್ತಲ್ಲಾ.. ಜೊತೆಗೆ, ಭಗವಂತನಿಗೇ ದಾನಕೊಟ್ಟ ಕರ್ಣ ಅನ್ನುವುದು ಜಗಜ್ಜಾಹೀರಾಗಲಿ, ಸಾಯುವಾಗಲೂ ದಾನಕ್ಕೆ ಹಿಂಜರಿಯಲಿಲ್ಲ ಆತ ಅಂತೆಲ್ಲಾ ಜನ ತಡಬಡಿಸಲಿ, ದಂಗಾಗಲಿ ಅಂತ ಅಂದುಕೊಳ್ಳುವುದು ತಪ್ಪಾ ರಾಧಾ.. ದುರಂತದ ಬದುಕಿಗೊಂದು ಅರ್ಥವತ್ತಾದ ವಿದಾಯ ಬೇಕಿತ್ತಲ್ಲವೇ!</div>
<div dir="ltr">
<br /></div>
<div dir="ltr">
ಮುರಿದು ಬಿದ್ದ ಕರ್ಣನ ರಥದ ಗಾಲಿ, ಅವನ ಜನನ ಮರಣಗಳ ಚಕ್ರ ಮುರಿದು ಬಿದ್ದಂತೆ ನನಗೆ ಕಂಡಿತ್ತು. ಅವನ ಬಳಿ ಹೋಗಿ ಕೂತೆ, ಏನಾಯಿತು ಕೃಷ್ಣಾ, ಕರ್ಣ ಯಾವ ಸುಖಕ್ಕೂ ಯೋಗ್ಯನಾಗದೇ ಹೋದನೇ ಅಂತ ಪ್ರಶ್ನಿಸಿದ ಕೈಹಿಡಿದು. ಎಲ್ಲರ ಹುಟ್ಟಿಗೂ ಎಲ್ಲರ ಸಾವಿಗೂ ಅರ್ಥವಿದೆ ಕೌಂತೇಯ, ಹುಟ್ಟಿನಿಂದ ಸಾವಿನ ತನಕವೂ ನಿನ್ನದು ಅನಿಶ್ಚಿತತೆಯೇ, ನಿನ್ನದು ದೌರ್ಭಾಗ್ಯವೇ, ನಿನ್ನದು ಹೋರಾಟವೇ.. ಆದರೆ, ಅವೆಲ್ಲವುಗಳನ್ನೂ ಮೀರಿ ಬೆಳೆದವ ನೀನು, ಜಗತ್ತಿಗೆ ಮತ್ತೊಬ್ಬ ನಿನ್ನಂಥ ದಾನಿ ಸಿಗಲಾರ ಅದೆಷ್ಟೇ ಸಹಸ್ರ ವರ್ಷಗಳಾದರೂ.. ಅಲ್ಲಿಗೆ ನಿನ್ನ ಬದುಕಿಗೆ ಅರ್ಥ ದಕ್ಕಿತಲ್ಲಾ ರಾಧೇಯ ಎಂದೆ. ಮುಂದುವರೆದು ಕೇಳಿದೆ, ನನಗೂ ನಿನಗೂ ಒಂದು ಸಾಮ್ಯತೆಯಿದೆ ತಿಳಿದಿದೆಯಾ ಕುಂಡಲಧರ? ಬಳಲಿದ ಕಣ್ಣುಗಳಿಂದ ನನ್ನ ನೋಡಿದ. ನಮ್ಮಿಬ್ಬರದೂ ಒಂದೇ ಕತೆ ಕರ್ಣಾ, ಹೆತ್ತಬ್ಬೆಯಿಂದ ದೂರಾಗಿ ಇನ್ಯಾರದೋ ಆಶ್ರಯದಲ್ಲಿ ಬೆಳೆದವರು ನಾವು. ಇಬ್ಬರೂ ಹೆತ್ತಮ್ಮನ ಎದೆಗೆ ಸಹಜವಾಗಿ ಗುದ್ದಿ ಕುಡಿವ ಹಾಲಿಂದ ವಂಚಿತರೇ. ಇಬ್ಬರೂ ಹೆತ್ತಮ್ಮನ ಲಾಲಿಯನ್ನ ಕೇಳದವರೇ. ಇಬ್ಬರೂ ಹೆತ್ತವ್ವನ ಹೊಟ್ಟೆಗೊದ್ದು ಅವಳಿಂದ ಮುದ್ದಿಸಿಕೊಳ್ಳದವರೇ. ಇಬ್ಬರೂ ತೊಟ್ಟಿಲು ತೂಗುವ ಹೆತ್ತವಳ ಕಿರುನಗೆಗೆ ಕಿಲಕಿಲನೆ ಬೊಚ್ಚುಬಾಯಿ ಬಿಟ್ಟು ನಗಲು ಸಿಗದವರೇ.. ಇವಿಷ್ಟನ್ನೂ ಕರ್ಣನ ಕಣ್ಣುಗಳಲ್ಲಿ ಕಣ್ಣಿಟ್ಟು ಅಂದೆ. ಅವನ ಬಳಲಿಕೆ ಕೊಂಚ ತಗ್ಗಿತು, ಅರ್ಥವಾಗಿತ್ತು ಅವನಿಗೆ, ಕಣ್ಣುಗಳಲ್ಲಿ ತೃಪ್ತಿಯ ಮೊಹರುಗಳಿದ್ದವು. ಕಾಲಮೇಲೆ ಮಲಗಿದ, ಹಾಗೇ ಕಾಲದಲ್ಲಿ ಮಲಗಿದ!</div>
<div class="separator" style="clear: both; text-align: center;">
<br /></div>
<div dir="ltr">
ಮಲಗಿದೆಯಾ ರಾಧೆ, ಓದುತ್ತಾ ಓದುತ್ತಾ? ನಿನಗೆಂದೇ ಎರಡು ನವಿಲುಗರಿಗಳ ಇಟ್ಟಿದ್ದೇನೆ ನೋಡು, ಕಪಿಲೆ ಯಮುನೆಯರನು ಕೇಳಿದೆ ಅಂತ ತಿಳಿಸು, ಹುಲ್ಲುಗಾವಲಿನ ಪ್ರವೇಶದಲ್ಲಿ ದೊಡ್ಡ ಮರವಿತ್ತಲ್ಲಾ, ಅಲ್ಲಿದ್ದ ಗಿಳಿಗಳ ಹೊಸ ಸಂತತಿ ಹುಟ್ಟಿರಬಹುದೀಗ, ಅವುಗಳಿಗೆ ನನ್ನ ಮತ್ತು ಅವರ ಪೂರ್ವಜರ ಒಡನಾಟದ ಕತೆ ಹೇಳು, ಕತೆಯಲ್ಲಿ ನಿನ್ನನ್ನೂ ಸೇರಿಸಿಕೊಂಡೇ ಹೇಳಬೇಕು ಮರೆಯಬೇಡ. ಬೃಂದಾವನದ ಸಖಿಯರಿಗೆ ಬೇಕಿದ್ದರೆ ಚೂರು ಹೊಟ್ಟೆಯುರಿಸು ಕೃಷ್ಣ ನನಗೆ ಮಾತ್ರ ಪತ್ರ ಬರೆದನೆಂದು. ಕೊಳಲ ಮೇಲಿನ ಧೂಳೊರೆಸು. ಬಂಡೆಗಳ ಮೇಲೆ ಹಚ್ಚಿಟ್ಟ ಬೆರಣಿಗಳ ಹೆಕ್ಕು. ಗಡಿಗೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ತೆಗೆದು, ನನ್ನ ಗೋಕುಲದ ದಿನಗಳಿಗೆ ಬೆಣ್ಣೆ ಹಚ್ಚು. ಕೃಷ್ಣ ಸಿಗುತ್ತಾನೆ ಒಡೆದ ಮಡಕೆಯ ಚೂರುಗಳಲ್ಲಿ, ಕೃಷ್ಣ ಸಿಗುತ್ತಾನೆ ಕಳ್ಳ ಹೆಜ್ಜೆಗಳ ಪುಟ್ಟ ಮಕ್ಕಳ ಸಲಿಗೆಯಲ್ಲಿ, ಕೃಷ್ಣ ಸಿಗುತ್ತಾನೆ ಕದ್ದು ನೋಡುವ ಕಳ್ಳ ಯೌವನದ ನಾಚಿಕೆಯಲ್ಲಿ, ಕೃಷ್ಣ ಸಿಗುತ್ತಾನೆ ನೀನು ಸವರುವ ಆ ಕೊಳಲಿನ ರಂಧ್ರಗಳಲ್ಲಿ, ಕೃಷ್ಣ ಸಿಗುತ್ತಾನೆ ನಿನ್ನ ಪರವಶದ ನಿದ್ರೆಯಲ್ಲಿ.. ಕೃಷ್ಣ ಸಿಗುತ್ತಾನೆ ನಿನ್ನ ನಿತ್ಯ ದ್ವಂದ್ವಗಳಲ್ಲಿ, ಕೃಷ್ಣ ಸಿಗುತ್ತಾನೆ ನೀನು ಅಂಟಿಕೊಳ್ಳುವ ಕತ್ತಲುಗಳಲ್ಲಿ, ಕೃಷ್ಣ ಸಿಕ್ಕೇ ಸಿಗುತ್ತಾನೆ ನೀನು ಬದುಕುವ ರೀತಿಯಲ್ಲಿ.. ಕೃಷ್ಣ ಸಿಗದೇ ಎಲ್ಲಿ ಹೋಗುತ್ತಾನೆ ರಾಧೆಯ ಪ್ರೀತಿಯ ನೆರಳಿನಲ್ಲಿ...</div>
<div dir="ltr">
ಮತ್ತೆ ಪತ್ರ ಬರೆಯುತ್ತೇನೆ ಕೃಷ್ಣ ಕದಡಿದಾಗ, ರಾಧೆ ಮುದುಡಿದಾಗ.. </div>
<div dir="ltr">
<br /></div>
<div dir="ltr">
ಇಂತಿ ನಿನ್ನ,<br />
ಗೋಪಾಲ</div>
<div dir="ltr">
<br /></div>
<div dir="ltr">
~`ಶ್ರೀ'<br />
ತಲಗೇರಿ<br />
</div>
<br /></div>
ಇಬ್ಬನಿhttp://www.blogger.com/profile/06704117357642373741noreply@blogger.com3tag:blogger.com,1999:blog-6872548841589170344.post-37507618551651140132018-01-10T22:50:00.000+05:302018-01-10T22:50:25.198+05:30ಮಹಾಮಾಯಿಯ ಸನ್ನಿಧಾನದಲ್ಲಿ... <div dir="ltr" style="text-align: left;" trbidi="on">
ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು ಮತ್ತಷ್ಟು ದಿನ ಪಡೆಯಲೇಬೇಕು ಅನ್ನುವುದು ಯಾವತ್ ಕಾಲದ ಆಸೆಯಾದರೆ , ವಯಸ್ಸೆನ್ನುವುದು ಅದೆಲ್ಲಕ್ಕೂ ತೆರೆ ಎಳೆಯುವ ಮಹಾ ಕಲಾವಿದ.. ನಿಯಮಗಳ ಪರೀಕ್ಷೆಯಾದಲ್ಲಿ ಬಹುಶಃ ಒಂದು ವ್ಯವಸ್ಥೆಯಲ್ಲೇ ಏರುಪೇರಾಗುವ ಸಂಭವಗಳೇ ಜಾಸ್ತಿ.. ಹೀಗೆ ಸಾವಿನ ಪರಿಕಲ್ಪನೆಯನ್ನಿಟ್ಟುಕೊಂಡು ಶ್ರೀ ಚಂದ್ರಶೇಖರ ಕಂಬಾರ ಅವರಿಂದ ರಚಿತವಾದ ನಾಟಕ `ಮಹಾಮಾಯಿ'..<br />
<br />
ಮನುಷ್ಯನ ಅಥವಾ ಜೀವಿಯ ಸಾವಿನ ಮುನ್ಸೂಚನೆ ಮೊದಲೇ ತಿಳಿದಿದ್ದಲ್ಲಿ , ಉಳಿಸುವ ಎಲ್ಲಾ ವ್ಯರ್ಥ ಪ್ರಯತ್ನಗಳನ್ನ ಬಹುಶಃ ಬಿಟ್ಟುಬಿಡಬಹುದು.. ಅಥವಾ ಬದುಕಿನ ಮುನ್ಸೂಚನೆ ದೊರೆತಲ್ಲಿ , ಶತಾಯಗತಾಯ ಪ್ರಯತ್ನಿಸಿ ನಾಳೆಗಳನ್ನ ಕಟ್ಟಿಕೊಡಬಹುದು.. ಒಂದು ವೇಳೆ ಸಾವು ಹತ್ತಿರದಲ್ಲಿದೆ ಅಂತ ತಿಳಿದಿದ್ದರೂ , ಅದನ್ನು ಮುಂದೂಡುವ ಎಲ್ಲ ಅರ್ಥಪೂರ್ಣ ಪ್ರಯತ್ನಗಳಿದ್ದರೆ ಫಲಿಸುತ್ತವೆಯೇ? ಅಥವಾ ಸಾವಿನ ಜೊತೆ ನಿರಂತರ ಮಾತುಕತೆಯಲ್ಲಿದ್ದು ದಿನ ಕಳೆಯುವವರ ಮನಃಸ್ಥಿತಿಯಾದರೂ ಹೇಗಿದ್ದೀತು..? ಕೊನೆಯ ಹಂತದಲ್ಲೂ ಬದುಕಿನ ಭರವಸೆಯೊಂದು ಸಿಕ್ಕಾಗ ಮಾರ್ಪಾಡುಗಳೇನಾಗಬಹುದು; ದೈಹಿಕವಾಗಿ ಮತ್ತು ಮಾನಸಿಕವಾಗಿ.. ! ಹೀಗೆ ಸಾವಿನ ಅಧಿದೇವತೆಯಾದಂಥ ಮಹಾಮಾಯಿಯ ಜೊತೆಗಿನ ಸಂಘರ್ಷದ ಕತೆಯೇ ಈ ನಾಟಕ.. ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ೧೦೫ ಪ್ರದರ್ಶನಗಳನ್ನ ಕಂಡು , ಇನ್ನೂ ಹಲವಾರು ಕಡೆ ಪ್ರದರ್ಶನಗೊಳ್ಳಬೇಕಿರುವ ನಾಟಕ ಅಂದರೆ ಉತ್ಪ್ರೇಕ್ಷೆಯೇನಲ್ಲ.. ರಂಗ , ನಾಟಕ , ಬಣ್ಣ ಇವೆಲ್ಲಕ್ಕೂ ಇಂದಿನ ಕಾಲಘಟ್ಟದಲ್ಲಿ ಬೇರೆಯದೇ ಮಾಧ್ಯಮ ದೊರೆತಿದ್ದರೂ , ಒಂದು ನಾಟಕ ಇಷ್ಟು ಪ್ರದರ್ಶನಗಳನ್ನ ಕಾಣುತ್ತದೆ ಅಂತಾದಲ್ಲಿ ಅದರ ಗಟ್ಟಿತನವನ್ನ ಊಹಿಸಲೇಬೇಕು.. ಇನ್ನೂ ಈಗಷ್ಟೇ ರಂಗವನ್ನ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಾ ಇವರು ಅನ್ನುವ ಅಭಿನಯ ಪ್ರತಿಯೊಬ್ಬರಲ್ಲೂ ಕಾಣ್ತಿತ್ತು.. ಪುಷ್ಪಗಂಧಿ ಅನ್ನುವ ಪಾತ್ರ ರಾಜಕುಮಾರಿಯ ಸಖಿಯಾಗಿ , ಛೇಡಿಸುವ ನಮ್ಮೆಲ್ಲ ಗೆಳೆಯ ಗೆಳತಿಯರನ್ನ ನೆನಪಿಸಿದರೆ , ರಾಜಕುಮಾರಿಯ ಪಾತ್ರ ಒಂದೆಡೆ ಅದೆಷ್ಟೇ ವೈಭೋಗವಿದ್ದರೂ ಅದೆಲ್ಲವನ್ನು ಬಿಟ್ಟು ಹೊರಡುವ , ಕೊನೆಗೆ ಪ್ರೇಮದ ತಹತಹಿಕೆಯಲ್ಲಿ ಕನವರಿಸುವ ನಮ್ಮದೇ ಜಗತ್ತಿನ ಒಬ್ಬಳು ಹುಡುಗಿಯಂತೆ ತೋರಿದರೆ , ವಿದೂಷಕ ಮತ್ತು ಅವನ ಹೆಂಡತಿಯ ಪಾತ್ರಧಾರಿಗಳು ನವಿರು ಹಾಸ್ಯದ ಕಚಗುಳಿ ಇಡುತ್ತಾರೆ.. ಇನ್ನು ವೈದ್ಯನ ಪಾತ್ರದಲ್ಲಿ ಮೊದಮೊದಲು ಅಂಜಿಕೆ , ಅಸಹಾಯಕತೆ ನಿಧಾನವಾಗಿ ಹೋಗುತ್ತಾ , ದೃಢ ಮನಸ್ಸು ಆವರಿಸಿಕೊಳ್ಳುವ ಬಗೆ ಮತ್ತು ಕೊನೆಗಿನ ಚಾತುರ್ಯ ಎಲ್ಲಾ ಚೆನ್ನಾಗಿ ಬಿಂಬಿತ.. ಆಗಾಗ ಕರ್ತವ್ಯದ ಸೂಚನೆ ಕೊಡುವ ಕಠೋರ ಮುದುಕಿಯ ಪಾತ್ರ ನಮ್ಮೆಲ್ಲರೊಳಗಿನ ಧ್ವನಿಯಂತೆ ಕಾಣುತ್ತದೆ.. ಹಾಗೇ ಒಂದು ಗುಂಪು ವಿಚಿತ್ರ ಪಾತ್ರಗಳದ್ದು; ಅವು ನಗಿಸ್ತವೆ ಮತ್ತು ಒಟ್ಟುಕುಟುಂಬವನ್ನ ನೆನಪಿಸ್ತವೆ.. ಇನ್ನು ಸಾವಿನ ಅಧಿದೇವತೆಯಾದ ಮಹಾಮಾಯಿಯ ಪಾತ್ರ..ಗಾಂಭೀರ್ಯ,ಕ್ರೌರ್ಯ, ಕಾಠಿಣ್ಯ ಜೊತೆಗೆ ಮಮತೆಯನ್ನೂ ಒಳಗೊಂಡಂಥ ಪಾತ್ರ ಅದು.. ಇಡೀ ಕತೆಯಲ್ಲಿ ಸಾವಿನ ಬಗೆಗೆ ಭಯ ಹುಟ್ಟಿಸುವ, ತನ್ನದೇ ಅಂತಿಮ ಡಿಂಡಿಮ ಧ್ವನಿ ಅಂತ ಎಲ್ಲರ ಎದೆಯಲ್ಲೂ ನರ್ತಿಸುವ ಪಾತ್ರದಲ್ಲಿ ಸ್ನೇಹಾ ಭಯಂಕರವಾಗಿಯೇ ಅಭಿನಯಿಸಿದ್ದಾರೆ.. ಪ್ರವೇಶವೇ ಚೆಂದ.. ಹೊಗೆಯಾಡುವ ಸ್ಮಶಾನದ ಭಾವ.. ಮುಖದಲ್ಲಿ ಕ್ರೌರ್ಯ , ಎದೆಯಲ್ಲಿ ವಾತ್ಸಲ್ಯ.. ಸೃಷ್ಟಿ ನಿಯಮಗಳ ಪರಿಪಾಲನೆಯ ಸೂಚನೆ ಕೊಡೋ ಮಾರ್ಗದರ್ಶಕಿ ಹೀಗೇ ಹೀಗೇ.. ಇವೆಲ್ಲಕ್ಕೂ ಆ ಸಂಪೂರ್ಣ ಸನ್ನಿವೇಶಗಳನ್ನ ಕಟ್ಟಿಕೊಟ್ಟಿದ್ದು ಬೆಳಕಿನ ಸಂಯೋಜನೆ; ಅಬ್ಬಾ !! ಬೆಳಕಿನ ಸಂಯೋಜನೆಯನ್ನ ನೋಡಲಿಕ್ಕಾದರೂ ನಾಟಕಕ್ಕೆ ಬರಲೇಬೇಕು ಅನ್ನುವಷ್ಟು ಚೆಂದ.. ಬೇರೆ ಬೇರೆ ಬಣ್ಣಗಳನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಇಡೀ ರಂಗ ಸ್ಥಳ ಕಲಾಕೃತಿಯಂತೆ ಗೋಚರಿಸುತ್ತಿತ್ತು.. ಇನ್ನು ಹಾಡುಗಾರಿಕೆ ಮತ್ತು ಸಂಗೀತ ಹಿತವಾಗಿತ್ತು.. ಇವೆಲ್ಲವನ್ನ ತೆರೆಯ ಮೇಲೆ ತಂದಂಥವರು ಜೀವನ್ ರಾಂ ಸುಳ್ಯ.. ಇವರ ನಿರ್ದೇಶನದಲ್ಲಿ ಅಚ್ಚುಕಟ್ಟುತನ ಎದ್ದು ಕಾಣ್ತಿತ್ತು.. ಕೊನೆಯಲ್ಲಿ ಅವರ ಮಾತುಗಳಲ್ಲಿ ಅವರ ಹಳೆಯ ದಿನಗಳ ಮೆಲುಕಿತ್ತು..<br />
<br />
ಒಟ್ಟಿನಲ್ಲಿ ಡಿಜಿಟಲ್ ಮಾಧ್ಯಮಗಳಿಂದ ಯಾವತ್ತೂ ಸಿಗದ ಅನುಭವಗಳು ಈ ರಂಗಭೂಮಿಯದ್ದು.. ಒಂದಷ್ಟು ಹೊತ್ತು ನಾವು ಮತ್ತು ರಂಗದಲ್ಲಿ ನಡೆಯುತ್ತಿರುವ ಕತೆ ಇವೆರಡರ ಜೊತೆ ಕಳೆದುಹೋಗಬೇಕಿದ್ದಲ್ಲಿ ಇಂತಹ ನಾಟಕಗಳನ್ನ ಆಗಾಗ ನೋಡಲೇಬೇಕು.. ಮತ್ತೆಲ್ಲಾದರೂ ಮಹಾಮಾಯಿ ನಾಟಕದ ಪ್ರದರ್ಶನವಿದ್ದಲ್ಲಿ ಖಂಡಿತಾ ಹೋಗಿ, ರಂಗದ ಆಸ್ವಾದನೆ ರಂಗದ ಇದಿರಲ್ಲೇ ಚೆಂದ..<br />
<br />
~`ಶ್ರೀ'<br />
ತಲಗೇರಿ<br />
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj0ubTAlXG_0WkZfhblAKmZpqYWUTTPGQ_4N7d0TvnwpzWQxNseyXtveYNeQHWznCn_-ptSo6ZgdJ4D4iEjENF10xzw4u_FSequX7yoFWDwmgYkAOsUmjCg-qt_2F0Y6ITBJE7R1LuOgMQ/s1600/FB_IMG_1515604701778.jpg" imageanchor="1" style="margin-left: 1em; margin-right: 1em;"><img border="0" data-original-height="722" data-original-width="720" height="320" src="https://blogger.googleusercontent.com/img/b/R29vZ2xl/AVvXsEj0ubTAlXG_0WkZfhblAKmZpqYWUTTPGQ_4N7d0TvnwpzWQxNseyXtveYNeQHWznCn_-ptSo6ZgdJ4D4iEjENF10xzw4u_FSequX7yoFWDwmgYkAOsUmjCg-qt_2F0Y6ITBJE7R1LuOgMQ/s320/FB_IMG_1515604701778.jpg" width="319" /></a></div>
</div>
ಇಬ್ಬನಿhttp://www.blogger.com/profile/06704117357642373741noreply@blogger.com1tag:blogger.com,1999:blog-6872548841589170344.post-44151686382812468812018-01-10T22:46:00.000+05:302018-01-10T22:46:43.705+05:30ಮುಂಬೈಯಿಂದ ರಥಬೀದಿಗೆ ಬಂದ `ಬಣ್ಣದ ಕಾಲು'...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiioMZ8vx2fz64nV1C2pcaWxQk0dAfRcalpIdaE6irUuqVRwvxVhjrJ8yJacStFNyEPI-ci-4ARUzG2gHkg5bCjpWxfltmOuxtY6o67IeDw0NVED7xNSqAsgGlo5o87VBc-kEErhPI5t98/s1600/FB_IMG_1515604531139.jpg" imageanchor="1" style="margin-left: 1em; margin-right: 1em;"><img border="0" data-original-height="1131" data-original-width="720" height="320" src="https://blogger.googleusercontent.com/img/b/R29vZ2xl/AVvXsEiioMZ8vx2fz64nV1C2pcaWxQk0dAfRcalpIdaE6irUuqVRwvxVhjrJ8yJacStFNyEPI-ci-4ARUzG2gHkg5bCjpWxfltmOuxtY6o67IeDw0NVED7xNSqAsgGlo5o87VBc-kEErhPI5t98/s320/FB_IMG_1515604531139.jpg" width="203" /></a></div>
<br />
<br />
ನಾಗರಿಕತೆಯ ವಿಕಾಸವಾದಂತೆ ಹಳ್ಳಿಗಳು ಪಟ್ಟಣಗಳು ಮಹಾನಗರಗಳು ಅನ್ನುತ್ತಾ , ಭೌಗೋಳಿಕ ಭಿನ್ನ ಪ್ರದೇಶಗಳು ಸೃಷ್ಟಿಯಾಗ್ತಾ ಹೋದವು.. ಒಂದೇ ಭೂಮಿ , ಆದರೆ ಅಲ್ಲಿನ ಮನಃಸ್ಥಿತಿ , ಆಹಾರ ಪದ್ಧತಿ , ಜೀವನ ಶೈಲಿ ಮತ್ತು ಪ್ರಾಕೃತಿಕ ಭಿನ್ನತೆಗಳು ಎಲ್ಲಕ್ಕೂ ಅದರದ್ದೇ ಆದ ವಾತಾವರಣವನ್ನ ಕಟ್ಟಿಕೊಟ್ಟವು.. ಮಹಾನಗರದ ರಸ್ತೆಗಳ ನಿಯಾನ್ ದೀಪಗಳಿಗೂ, ಹಳ್ಳಿಯ ಗುಡಿಸಲಿನ ಲಾಟೀನು ಮತ್ತು ಚಿಮಣಿ ಬುರುಡೆಗಳಿಗೂ ಬಹುಶಃ ತಾಳೆ ಮಾಡಲು ಆಗದೇ ಇರುವಷ್ಟು ಅಂತರವೇನೋ! ಎರಡೂ ಬೆಳಕನ್ನು ಕೊಡುತ್ತವೆ ಅನ್ನುವುದು ಮಾತ್ರ ಎರಡಕ್ಕೂ ಇರುವ ಸಾಮ್ಯತೆ.. ಒಂದು ವೈಭೋಗದ ಸಂಕೇತವಾದರೆ ಇನ್ನೊಂದು ಪುರಾತನ ಜೀವನ ಪದ್ಧತಿಯ ಮೂಕ ಸಾಕ್ಷಿ.. ಹೀಗೆ ಮುಂಬೈ ಮಹಾನಗರದ ಪುಟ್ಟ ಪ್ರಪಂಚ ಮತ್ತು ಗೋಕರ್ಣದ ರಥಬೀದಿಯ ದೊಡ್ಡ ಜಗತ್ತಿನ ಸಮೀಕರಣವೇ `ಬಣ್ಣದ ಕಾಲು'<br />
<br />
ಜಯಂತ ಕಾಯ್ಕಿಣಿ ಅನ್ನುವ ಈ ಜಾದೂಗಾರ ನನ್ನ ಮಟ್ಟಿಗೆ ಯಾವತ್ತೂ ಒಂದು ಪಿಳಿಪಿಳಿ ಕಂಗಳನ್ನ ಸದಾ ತೆರೆದಿಡುವಂತೆ ಮಾಡಬಲ್ಲ ವಿಸ್ಮಯದ ಮೂಟೆ.. ಅವರ ಪುಸ್ತಕಗಳನ್ನ ಓದುವುದಕ್ಕೆಂದು ಕೈಗೆತ್ತಿಕೊಳ್ಳುವಷ್ಟರಲ್ಲೇ ಪುಟಾಣಿ ನಗೆಯೊಂದು ಪ್ರಶಾಂತವಾಗಿ ತುಟಿಗಳಲ್ಲಿ ಅರಳುತ್ತದೆ.. ಬದುಕಿನ ದಿವ್ಯತೆಯನ್ನ ನಮ್ಮದೇ ಮನೆಯ ಪುಟ್ಟ ಪೋರನೊಬ್ಬ ಹಾಗೆ ಹೀಗೆಲ್ಲ ಓಡಾಡಿ ಹೇಳಿದಷ್ಟು ಮುದ್ದು ಮುದ್ದು.. ಅವರದೇ ಗೆಳೆಯ ಎಸ್ ಮಂಜುನಾಥ್ ಹೇಳಿದಂತೆ ಭಗ್ನ ಬದುಕಿನ ಅದೆಷ್ಟೋ ಜೀವಂತ ವಿವರಗಳು ಇವರಿಗೆ ಗೊತ್ತು ಮತ್ತು ಅವುಗಳಲ್ಲೇ ಈ ಬದುಕು ಒಂದು ದಿವ್ಯ ಎಂದು ಹೊಳೆಸುತ್ತಾರೆ.. ಬದುಕಿನ ಪರಿಶುದ್ಧ ಆವೃತ್ತಿಗಳಾದ ಇವರ ಕತೆಗಳ ಚೆಂದ ಓದುವುದರಿಂದ ಮಾತ್ರವೇ ದಕ್ಕಲಿಕ್ಕೆ ಸಾಧ್ಯ.. ಅಂಥ ಒಂದು ಓದು ನನಗೆ ಸಿಕ್ಕಿದ್ದಕ್ಕೆ ಕೆಲವು ಸಾಲುಗಳಲ್ಲಿ ನನಗೆ ದಕ್ಕಿದ್ದನ್ನ ಹೀಗೆ ತೆರೆದಿಡಲು ಹೊರಟಿದ್ದೇನೆ..<br />
<br />
`ಬಣ್ಣದ ಕಾಲು' , ಒಟ್ಟು ೧೩ ಕತೆಗಳ ಸಂಕಲನ..ಒಂದೇ ಪುಸ್ತಕದಲ್ಲಿ ಎರಡು ಭಾಗಗಳಲ್ಲಿ ಕತೆಗಳನ್ನ ಪ್ರಸ್ತುತಪಡಿಸಲಾಗಿದೆ.. ಮೊದಲನೇ ಕತೆ `ಬಣ್ಣದ ಕಾಲು' ,ಇದರಲ್ಲಿ ಮುಂಬೈ ನಗರದ ನಿಬಿಡತೆಯ ಬಗ್ಗೆ ಮತ್ತು ಸಣ್ಣ ಸಣ್ಣ ಖೋಲಿಗಳಲ್ಲಿ ಬದುಕು ನೂಕುವವರ ಚಿತ್ರಣವಿದೆ. ಮಹಾನಗರದ ಕನಸು ಕಂಡ ಪುಟ್ಟ ಪೋರನೊಬ್ಬ ಅಲ್ಲಿ ತನ್ನ ಗೆಳೆಯನಿಗಾಗಿ ಬಣ್ಣದ ಕಾಲು ತರುವ ಕನಸು ಕಾಣುತ್ತಾನೆ. ಮಗನ ಕೀಟಲೆಗಳನ್ನು ಸಹಿಸಲಾರದೇ ಅವನನ್ನು ರಿಮಾಂಡ್ ಹೋಮಿಗೆ ಸೇರಿಸುವ ತವಕ ಈ ಪುಟ್ಟ ಹುಡುಗನ ತಂದೆ ತಾಯಿಯರದ್ದು.. ಮಹಾನಗರದ ಗಡಿಬಿಡಿ ತಂದೆ ಮತ್ತು ಮಗ ಇಬ್ಬರನ್ನೂ ಬೆಚ್ಚಿಬೀಳಿಸುತ್ತದೆ.. ಪುಟ್ಟ ಕನಸುಗಳನ್ನ ಬೆನ್ನಟ್ಟಿದವರ ಕತೆ ಇದು. ಇನ್ನು ಎರಡನೇ ಕತೆ ಚೌತಿ ಚಂದ್ರ.. ಬಸ್ಸಿನ ಡ್ರೈವರನೊಬ್ಬ ತನ್ನ ನಿತ್ಯದ ಚಾಕರಿಯಿಂದ ಬೇಸತ್ತು ತನ್ನ ಒಳಮನಸ್ಸಿನ ತುಡಿತದ ಬಾಲ ಹಿಡಿದು ಊರಿಗೆ ಬಂದಾಗ , ಅಲ್ಲಿನ ಅವನ ಪ್ರಶ್ನೆಗಳಿಗೆ ಸಿಗುವಂಥ ಉತ್ತರ ಮತ್ತು ಆ ಉತ್ತರ ಕೊಟ್ಟ ವ್ಯಕ್ತಿಗೂ ವೃತ್ತಿಗೂ ಇರುವಂಥ ಸಂಬಂಧಗಳು, ಮಾನವೀಯ ತುಡಿತಗಳು ಮತ್ತು ಅನಿರೀಕ್ಷಿತ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇನ್ನು ಮುಂದಿನ ಕತೆ ಸೇವಂತಿ ಹೂವಿನ ಟ್ರಕ್ಕು.. ವಯಸ್ಸಾಗಿ ಓಡಾಡಲು ಆಗದೇ ಇರುವವಳೊಬ್ಬಳ ಕತೆ; ಮುದುಕಿ ಮತ್ತು ಆ ಮನೆಯವರು ಇಬ್ಬರೂ ಒಬ್ಬರಿಗೊಬ್ಬರು ಋಣದ ನೆರಳಿನಲ್ಲಿರುವವರು.. ಇಬ್ಬರ ಮನಸ್ಸಿನಲ್ಲಿಯೂ ನಡೆಯುವ ಜವಾಬ್ದಾರಿಯ ಕದನ ಮತ್ತು ಪೀಕಲಾಟದ ವ್ಯಥೆ ಈ ಕತೆ.. ನಾಲ್ಕನೆಯ ಕತೆಯ ಹೆಸರು ಅಪರೂಪ.. ಅಂಗವೈಫಲ್ಯದಿಂದ ಸಮಾಜದ ಕಣ್ಣಿನಿಂದ ದೂರವೇ ಉಳಿಯುತ್ತಿದ್ದ ಹುಡುಗಿಯ ಭಾವಚಿತ್ರ ತೆಗೆಯುವ ಒಂದು ಸಣ್ಣ ಅಂಶವಿಟ್ಟುಕೊಂಡ ಕತೆಯ ಅಂತ್ಯ ಎಂಥವರನ್ನೂ ಒಂದು ಕ್ಷಣ ವಿಚಲಿತರನ್ನಾಗಿಸುತ್ತದೆ. ಆದರೆ ಆ ಹುಡುಗಿ ಒಂದು ಚೆಂದ ಶಿಶುವಿನಂತೆ ಉಳಿದುಬಿಡುತ್ತಾಳೆ ಅದೇ ಮಂದಹಾಸದಲ್ಲಿ!.. ಮತ್ತೊಂದು ಕತೆ `ಹೊಸ್ತಿಲು'.. ಇಲ್ಲಿ ಸಾಂಸಾರಿಕ ಬದುಕನ್ನು ಕಟ್ಟಿಕೊಡುತ್ತಾ , ಸತ್ಯತೆಯ ಹುಡುಕಾಟ ಮತ್ತು ಪ್ರೀತಿಯ ಹಂಬಲ ವ್ಯಕ್ತವಾಗಿದೆ.. ಇನ್ನು ಮೊದಲನೇ ಭಾಗದ ಕೊನೆಯ ಕತೆ ದಿಟ್ಟಿಬೊಟ್ಟು , ಒಬ್ಬ ಕಲಾವಿದನ ಬದುಕನ್ನ ಒಂದು ಕಡೆಯಲ್ಲಿ ಹೇಳ್ತಾ , ಸಮಾಜದ ಚಿಂತಕನೊಬ್ಬ ಆಸ್ಪತ್ರೆಯಲ್ಲಿ ಮರುಗುವ ಕಥಾನಕ ಇದು.. ಖಾಯಿಲೆ ಕೂಪದಲ್ಲೂ ಬದುಕು ಜಡೆ ಹೆಣೆದ ಪುಟ್ಟ ಬಾಲೆಯಂತೆ ಮತ್ತು ಜಡೆ ಹೆಣೆವ ಅಮ್ಮನಂತೆ ಜೀವಂತವಾಗಬಲ್ಲದು ಅನ್ನುತ್ತದೆ ಈ ಕತೆ..<br />
<br />
ಇನ್ನು ಭಾಗ ಎರಡರಲ್ಲಿನ ಮೊದಲ ಕತೆ ಸ್ವಪ್ನದೋಷ.. ಸಂಸಾರವಿದ್ದೂ ಕೆಲಸದ ನಿಮಿತ್ತ ದೂರ ಇರುವವನೊಬ್ಬ ಮತ್ತು ಚಿನ್ನದ ಬಳೆಯ ಕನಸು ಕಾಣುವ ಅವನ ಹೆಂಡತಿ.. ಇಲ್ಲಿ ಹೆಣ್ಣು ಇರಬಹುದಾದ ವಿವಿಧ ಪಾತ್ರಗಳಲ್ಲಿ ಆಕೆ ಅವನಿಗೆ ಎದುರಾಗುತ್ತಾಳೆ.. ಸ್ವಾವಲಂಬನೆಯ ಪ್ರತಿಜ್ಞೆಯಾಗಿ ಕತೆ ಉಳಿದುಹೋಗುತ್ತದೆ.. ಮುಂದಿನ ಕತೆ ಟ್ರೈಸಿಕಲ್.. ಬಾಲ್ಯವನ್ನ ಕೆದಕುವ ಮತ್ತು ನೆರೆಹೊರೆಗಳ ಆತ್ಮೀಯತೆಯನ್ನ ವರ್ಷಾನುವರ್ಷಗಳವರೆಗೂ ಕಾಪಿಡುವ ಕತೆ..ಮುಗ್ಧತೆಯೆದುರು ಸ್ವಾರ್ಥ ಕರಗಬೇಕು ಅನ್ನುವುದನ್ನ ಸೂಕ್ಷ್ಮವಾಗಿ ಕಟ್ಟಿಕೊಡುವ ಕತೆಯಿದು.. ಗಾಳಿಮರದ ನೆಳಲು ಅನ್ನುವ ಕತೆಯಲ್ಲಿ ಜೈಲಿಗೆ ಹೋದ ಗಂಡನನ್ನ ಕಾಣಲು ಹಾತೊರೆಯುವ ಮತ್ತು ಅವನ ಬರುವಿಕೆಯಲ್ಲಿ ಮಾಯವಾಗುವ ಅಸೂಯೆ ಮತ್ತು ಅವನೆಡೆಗಿನ ತಹತಹಿಕೆ, ಚಡಪಡಿಕೆಗಳ ಕತೆಯಲ್ಲಿ ಅವ ಒಂದು ಕ್ಷಣದ ಗಾಳಿಯಂತೆ ಬಂದುಹೋಗುತ್ತಾನೆ.. ಇನ್ನು ತೀರ ಎನ್ನುವ ಕತೆಯಲ್ಲಿ ಸಾವು ಅಪರಿಚಿತರನ್ನೂ ಬಂಧುಗಳನ್ನಾಗಿಸುತ್ತದೆ; ಸತ್ತುಬಿದ್ದ ಮೀನಿಗೆ ಜೀವ ಬರಲಿ ಎಂದು ಗೋಳಾಡುವವರ ಕತೆ, ಆದರೆ ಕೊನೆಗೆ ಎಲ್ಲರೂ ಅವರವರ ದಾರಿ ಹಿಡಿಯಲೇಬೇಕು, ಬದುಕು ಎಂದಿನಂತೆ ಮಾಮೂಲಿಯಾಗಿಬಿಡುತ್ತದೆ ಅನ್ನುತ್ತದೆ ಈ ಕತೆ.. ಚುಕ್ಕಾಣಿ ಅನ್ನೋ ಕತೆಯಲ್ಲಿ ಯಾರದೋ ಆಗಮನದಲ್ಲಿದ್ದವರಿಗೆ ಇನ್ನ್ಯಾರದ್ದೋ ಆಗಮನವಾಗಿ, ಸಮುದ್ರದಲ್ಲಿನ ಅಲೆಗಳು ಇನ್ಯಾವುದರದ್ದೋ ಮುನ್ಸೂಚನೆಯಂತೆಲ್ಲಾ ಭಾಸವಾಗಿ ಕೊನೆಗೆ ಆಸೆಯ ಲಾಂಚು ಮರಳಿ ಬಂದು ನಿಟ್ಟುಸಿರುಬಿಡುತ್ತದೆ.. ಮತ್ತೊಂದು ಕತೆ `ಬಿಡು ಬಿಡು ನಿನ್ನಯ..' , ಇದು ಮಾಸ್ತರರಿಬ್ಬರ ಕತೆ.. ಪ್ರಕೃತಿಯನ್ನ ಉಳಿಸಿಕೊಳ್ಳಬೇಕು ಅನ್ನುವವರೊಬ್ಬರಾದರೆ, ಅವರನ್ನ ಕಂಡರೆ ಭುಸುಗುಡುವ ಇನ್ನೊಬ್ಬರು.. ಇಬ್ಬರ ಬದುಕೂ ಬದಲಾದಾಗ ಇಬ್ಬರಲ್ಲೂ ಚಡಪಡಿಕೆ.. ಕೊನೆಗೆ ವೃದ್ಧಾಪ್ಯದಲ್ಲೂ ದ್ವೇಷದ ಕಿಚ್ಚಿದ್ದವನಲ್ಲಿ ನಿಸ್ತೇಜ ಬೂದಿ ಮಾತ್ರ ಇದ್ದಂತೆನಿಸತೊಡಗುತ್ತದೆ.. ಆಕ್ರೋಶವೆಲ್ಲ , ದೈನ್ಯತೆಯ ದನಿಯಾಗಿ ಬದಲಾದಂತನಿಸುತ್ತದೆ.. ವಿಕೃತ ಗೆಲುವಿನ ಆನಂದದಲ್ಲಿದ್ದವನೊಬ್ಬ ಕಳೆದುಕೊಂಡ ಬದುಕಿಗಾಗಿ ಹಲುಬುವ ಒಳದನಿಯಲ್ಲಿ ಸೋತುಹೊಗುತ್ತಾನೆ.. ಇನ್ನು ಕೊನೆಯ ಕತೆ ಚಂದ್ರಶಾಲೆ.. ಜಾತ್ರೆಯ ಸಂದರ್ಭವೊಂದನ್ನ ತೆಗೆದುಕೊಂಡು ಅಲ್ಲಿನ ಮೂರು ಭಿನ್ನ ವ್ಯಕ್ತಿಗಳ ಕುರಿತಾಗಿ ಕತೆಯಿದೆ.. ರಥಬೀದಿಯೇ ಈ ಎಲ್ಲಾ ಕತೆಗಳು ಸಂಧಿಸುವ ಜಾಗ.. ತೇರೊಂದು ಕಡೆ ಕದಲದೇ ನಿಂತಿದ್ದರೆ ತೇರನ್ನೇ ತನ್ನ ಗಂಡ ಎನ್ನುವವಳೊಂದು ಕಡೆ , ತೇರನ್ನ ನೋಡಲು ಬರುವಳೇನೋ ಎಂದು ಇಷ್ಟದ ಹುಡುಗಿಗೆ ಕಾದು ಕೂತಂಥವನೊಬ್ಬ , ಇನ್ನು ಕುಂಕುಮದ ಅಂಗಡಿಯಲ್ಲಿ ಕೂತಿರಬೇಕಾದವನೊಬ್ಬ ಬೆಟ್ಟದಲ್ಲಿ ಬಳೆಯೊಂದಿಗೆ ಪಾಳು ಗೋಡೆಗಳ ನಡುವೆ ಉಬ್ಬಸ ಬಂದಂತೆ ಆಡುತ್ತಿದ್ದ .. ಹೀಗೆ ಬೇರೆ ಬೇರೆ ಬಣ್ಣ ಆ ಜಾತ್ರೆಗೆ.. !<br />
<br />
ಇವಿಷ್ಟು ಕತೆಗಳ ಸಾರಾಂಶಗಳಾದರೆ , ವಿವರಗಳನ್ನ ಓದಿಯೇ ಅನುಭವಿಸಬೇಕು.. ಅದರಲ್ಲೂ ನನ್ನಂಥವನಿಗೆ ನನ್ನ ಊರಿನಲ್ಲಿ ನಡೆದಿರಬಹುದಾದ ಸಾಧ್ಯತೆಗಳನ್ನ ಹೀಗೆಲ್ಲಾ ಕಾಣಬಹುದಾ ಅನ್ನುವ ಅಚ್ಚರಿಯನ್ನ ಉಳಿಸಿಕೊಳ್ಳುವ ಸಂಕಲನ ಇದು..ಸಣ್ಣ ಸಣ್ಣ ಸಂಗತಿಗಳನ್ನ ನಾವು ಗಮನಿಸುವುದು ತುಂಬಾನೇ ಕಡಿಮೆ, ಅದಕ್ಕೆಂದೇ ಬಹುಶಃ ಹತಾಶರಾಗಿ ನರಳುತ್ತೇವೆ ಬದುಕಿನ ಪುಟ್ಟ ಖುಷಿಗಾಗಿ.. ಕಾಯ್ಕಿಣಿಯವರ ಕತೆಗಳಲ್ಲಿ ಎಲ್ಲಕ್ಕೂ ಜೀವವಿದೆ, ಕೈಮುರಿದ ಕುರ್ಚಿ, ರಾತ್ರಿ ಪಾಳಿಯ ಬಸ್ಸು , ಇಂಜೆಕ್ಷನ್ನಿನ ವಾಸನೆ ಸೂಸುವ ಅಸ್ಪತ್ರೆ , ಉಪ್ಪುಗಾಳಿ , ಕಂಕುಳ ಬೆವರು , ರಸ್ತೆ ಬದಿಯ ಅಂಗಡಿ, ಕದ್ದುತಂದ ಸೀಯಾಳ, ರಾತ್ರಿ ಕಳ್ಳ ಚಂದ್ರ.. ಹೀಗೇ ಹೀಗೇ.. ಯಾಂತ್ರಿಕತೆಯ ಈ ಹೊಸ್ತಿಲಲ್ಲಿ ಮತ್ತು ಹೊತ್ತಿನಲ್ಲಿ ಬರಮಾಡಿಕೊಳ್ಳಬಹುದಾದ ಬರಹಗಳು ಶ್ರೀ ಜಯಂತ ಕಾಯ್ಕಿಣಿ ಅವರದ್ದು..<br />
<br />
~`ಶ್ರೀ'<br />
ತಲಗೇರಿ</div>
ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-60397480173947311972018-01-10T22:36:00.001+05:302018-01-10T22:36:30.354+05:30ಶಹರದ ಹೊಕ್ಕುಳೊಳಗೆ.. -೪<div dir="ltr" style="text-align: left;" trbidi="on">
<div dir="ltr">
ಶಹರದ ಹೊಕ್ಕುಳೊಳಗೆ-೪<br />
... ಕದಡಿದ ನಗೆಯ ಬಿಂಬಗಳ ಹುಡುಕಾಟ...</div>
<div dir="ltr">
ಮುಗಿಲು ತಲುಪುವ ಹುರುಪಿನ ಎತ್ತರೆತ್ತರದ ಕಟ್ಟಡದ ಕೋಣೆಗಳಿಗೆ ಒಂದೆರಡು ಚಿಕ್ಕ ಕಿಟಕಿ , ಒಂದು ಬಾಗಿಲು..ಅಂತಸ್ತಿನ ಮೇಲೊಂದು ಅಂತಸ್ತು ಜೊತೆಗೆ ತಾರಸಿ.. ನಾಲ್ಕು ಗೋಡೆಗಳ ಮೈಗೆ ಬಿಸಿಲ ನಾಚಿಸುವ ಬಣ್ಣ.. ಅಲ್ಲೇ ಒಂದಷ್ಟು ತೇಪೆ.. ಅಲ್ಲಿ ನಡೆದಾಡಿಕೊಂಡ ಕೈಕಾಲುಗಳ ಕತೆಗಳಲ್ಲಿ ನಗೆಯೆಂಬುದೊಂದು ಮರೀಚಿಕೆ.. ಹಣೆಯ ಮೇಲಿನ ನೆರಿಗೆಗಳು ಒತ್ತೊತ್ತಾಗಿ ನಿಲ್ಲುತ್ತವೆ; ಕೆನ್ನೆಯೆಂಬುದಕ್ಕೆ ಇಲ್ಲಿ ವ್ಯಾಯಾಮವಿಲ್ಲ.. ಕಂಗಳು ಗಣಕಯಂತ್ರ ಮತ್ತು ಜಂಗಮವಾಣಿಯ ಪರದೆಗಳ ಪಿಕ್ಸೆಲ್ಗಳ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಬಹುತೇಕ ಆಯಸ್ಸು ಕಳೆಯುತ್ತವೆ.. ರಾತ್ರಿಯೂಟಕ್ಕೆ ಬೆಳಗಿನ ತಿಂಡಿ, ಮಧ್ಯಾಹ್ನಕ್ಕೆ ಊಟದಂತಿರದ ಊಟ.. ಇನ್ನು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಮೂಡ್ ಇದ್ದರೆ ಚಹಾ, ಕಾಫೀ ಹಾಗೇ ಒಂದಷ್ಟು ಚುರುಮುರಿ.. ಇಲ್ಲಾ , ತಳ್ಳುಗಾಡಿಯ ಮುಂದೆ ತನ್ನ ಅವಧಿಗಾಗಿ ಪೆಚ್ಚಾಗಿ ಕಾಯುವಿಕೆ.. ಚಪ್ಪರಿಸಿ ತಿನ್ನುವ ನಾಲಿಗೆಗೆ ಎಂದೂ ತೀರದ ರುಚಿ.. ಶಹರದ ಎಲ್ಲ ಕಟ್ಟಡದ ಗೋಡೆಗಳಿಗೂ ವಿಚಿತ್ರ ವಿಚಿತ್ರ ಕತೆಗಳ ಸೋಂಕು ತಗುಲಿರುತ್ತದೆ.. <br />
<br />
ದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುಖದಲ್ಲಿ ಅದೆಷ್ಟೋ ನೆನಪುಗಳು ಸತ್ತ ಸೂತಕದ ಛಾಯೆ ಅಥವಾ ಭವಿಷ್ಯದ ಬೀಗದ ಕೈ ಹುಡುಕುವ ಚಿಂತೆ.. ದಪ್ಪ ದಪ್ಪ ಕನ್ನಡಕ ಹೊತ್ತ ಚಿಕ್ಕ ಮಕ್ಕಳ ಮೂಗಿನ ಅಳಲಿಗಿಲ್ಲಿ ನಾವು ಜಾಣ ಕಿವುಡರು.. ಕೇಜಿಗಟ್ಟಲೆ ಪುಸ್ತಕ ಹೊತ್ತ ಎರಡು ಕಾಲಿನ ಗಾಡಿಯೊಂದು ವಾಲುತ್ತಾ ವಾಲುತ್ತಾ ಶಾಲೆ ಸೇರಿಕೊಳ್ಳುತ್ತದೆ.. ( ಈ ಶಾಲೆ ಅನ್ನೋ ಶಬ್ದ ಸ್ವಲ್ಪವೇ ದಿನದಲ್ಲಿ ಶಬ್ದಕೋಶದಲ್ಲಿ ಮಾತ್ರ ಅಸ್ತಿತ್ವ ಪಡೆದು ವಿಷಾದದ ನಗೆಯೊಂದ ಬೀರುತ್ತದೆ ) ದೂರದರ್ಶನದ ಮುಂದೆ ಕುಳಿತ ಆತ್ಮವೊಂದು ಅಲ್ಲಿನ ಧಾರಾವಾಹಿಗಳ ಪಾತ್ರದ ವಿಮರ್ಶೆ ಮಾಡುತ್ತಾ ಅವುಗಳ ಕಣ್ಣೀರಿಗೆ ಇಲ್ಲಿ ಬೊಬ್ಬೆ ಹೊಡೆಯುತ್ತದೆ.. ಹೊರಗೆ ಹೋದಂಥ ಆಕೃತಿಗಳು ಟ್ರಾಫಿಕ್ಕಿನಲ್ಲಿ ಜೊತೆಗೆ ಸಿಕ್ಕಸಿಕ್ಕಲ್ಲಿ , ತಮ್ಮ ಭಾಷಾಪಾಂಡಿತ್ಯ ಮೆರೆಯುವ ಎಲ್ಲ ಕಸರತ್ತು ನಡೆಸುತ್ತದೆ.. ಊರಿನ ನೆನಪಾದಾಗ ಭಾವುಕವಾಗುವ ಜೀವಗಳು ಇಲ್ಲಿ ಬಹುಶಃ ಬಹಳಷ್ಟಿವೆ.. ಅನಿವಾರ್ಯತೆ ಎಂಬ ನಾಟಕದಲ್ಲಿ ಕೈಗೆ ಸಿಕ್ಕ ಬಣ್ಣ ಮೆತ್ತಿಕೊಂಡು ರಂಗಸ್ಥಳಕ್ಕೆ ಧುಮುಕಿದವರು ನಾವುಗಳು.. ಇಂದಿಗೂ ನಮ್ಮ ನಮ್ಮ ಪಾತ್ರದ ಸ್ಪಷ್ಟ ಚಿತ್ರಣ ನಮ್ಮ ಕಣ್ಣ ರೆಪ್ಪೆಗಳ ಅಡಿಯಲ್ಲೇ ನಜ್ಜುಗುಜ್ಜಾಗಿ ನರಳುತ್ತಿದೆ.. ಸಮಾಜದ ವ್ಯವಸ್ಥಿತ ಫಿತೂರಿಯೊಳಗೆ ಸಸಾರಕ್ಕೆ ನಮ್ಮನ್ನ ನಾವು ತಳ್ಳಿಕೊಂಡು ಸಂಸಾರ ನಡೆಸುತ್ತಿರುವಂಥ ಅಕ್ಷರಸ್ಥ ಸಾಮಾನ್ಯ ಪ್ರಜೆಗಳು..</div>
<div dir="ltr">
ಇನ್ನು ಕೆಲಸ ಸಿಗದೇ ಬೇರೆ ಬೇರೆ ಊರಿನಿಂದ ಸಣ್ಣ ಸಣ್ಣ ಕೋರ್ಸ್ಗಳನ್ನ ಮಾಡಲಿಕ್ಕೆಂದು ಬರುವವರ ಅನುಭವಗಳು ಬದುಕಿನ ಇನ್ನೊಂದು ಮಗ್ಗುಲನ್ನೇ ಪರಿಚಯಿಸಿಬಿಡುತ್ತವೆ..ಈ ಎಲ್ಲಾ ಹೋರಾಟಗಳು ಮೂರು ಹೊತ್ತಿನ ಊಟ ಮತ್ತು ಕಣ್ತುಂಬ ನೆಮ್ಮದಿಯ ನಿದ್ರೆಗಾಗಿ.. ಬಹುಶಃ ಇವೆಲ್ಲವನ್ನೂ ದಕ್ಕಿಸಿಕೊಳ್ಳುವ ಓಟದಲ್ಲಿ ಎಲ್ಲರೊಂದಿಗೆ ಓಡುತ್ತಾ ಓಡುತ್ತಾ ಓಟದ ಮುಕ್ತಾಯದ ಗೆರೆ ಕಾಣಲಾಗದೇ ಕಕ್ಕಾಬಿಕ್ಕಿಯಾಗುತ್ತೇವಲ್ಲಾ ; ಅಲ್ಲಿಗೆ ಕೂದಲಿಗೆ ಬಣ್ಣ ಹಚ್ಚುವ ಸಮಯ ಬಂದಿರುತ್ತದೆ.. ಓಟದ ಮಧ್ಯ , ರಸ್ತೆಯ ಪಕ್ಕ ನಮ್ಮ ಹಳೆಯ ಸ್ನೇಹವೊಂದು ನಮ್ಮ ಕುಟುಂಬದ ಜೊತೆ ನಿಂತು ಕೈಬೀಸಿತ್ತೇನೋ ; ಗಮನಿಸಲೇ ಇಲ್ಲ.. ಒಂದು ಕಿರುನಗೆ ನಮ್ಮ ಜೊತೆಯೇ ಓಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನ ಪರಿಚಯಿಸುತ್ತಿತ್ತೇನೋ ; ಆ ಕಡೆ ತಿರುಗುವುದನ್ನೇ ಮರೆತುಬಿಟ್ಟೆವಲ್ಲಾ... ನಾವೇ ಚಿಕ್ಕವರಿದ್ದಾಗ ನೆಟ್ಟಿದ್ದ ಗಿಡವೊಂದು ಈಗ ಹಣ್ಣು ಕೊಡಲು ಹಂಬಲಿಸುತ್ತಿತ್ತೇನೋ, ಗುರುತೇ ಹತ್ತಲಿಲ್ಲ.. ಈಗ ಮೈಲಿಗಲ್ಲುಗಳು ದಾಟಿಹೋದವು ; ಎಲ್ಲೂ ನಮ್ಮ ಹೆಸರಿಲ್ಲ.. ಬರೀ ದೂರದ ಅಳತೆಗಷ್ಟೇ ಅದನ್ನ ಬಳಸಿಕೊಂಡೆವು.. ದೂರ ಮುಗಿಯಲೇ ಇಲ್ಲ.. ಹತಾಶ ಸಂಜೆಯಲ್ಲಿ ಹಪಹಪಿಸುತ್ತೇವೆ, ಕಾಲು ಸೋತಿದ್ದು ಅರಿವಾಗುತ್ತದೆ.. ಕೈಕೊಟ್ಟು ನಿಲ್ಲೋಣವೆಂದರೆ ಯಾರೊಬ್ಬರ ಹೆಗಲಿಗೂ ನಮ್ಮ ಬೆವರಿನ ಕಲೆಯಿಲ್ಲ..</div>
<div dir="ltr">
ಮಹಾನಗರಕ್ಕೆ ಬಹಳಷ್ಟು ಬಣ್ಣದ ನೆರಳುಗಳಿವೆ..ಗಡಿಬಿಡಿಯನ್ನ ಬಗಲಿಗೇ ಜೋತುಹಾಕಿಕೊಂಡು ಏಳುವ ನಗರ, ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಗಿಷ್ಟು ಬೀಳಲೆಂದು ಹಾತೊರೆಯುತ್ತದೆ.. ಸಂಜೆಯಾಗುತ್ತಿದ್ದಂತೆ ಎಣ್ಣೆಯ ಕಮಟು ವಾಸನೆಯನ್ನ ಸೂಸುತ್ತ ನಿಯಾನ್ ದೀಪಗಳ ಮಾದಕತೆಗೆ ಮೈಮುರಿಯುತ್ತದೆ.. ಬೀದಿಗಳಲ್ಲಿ ಬೆಳಕು ಮಾರಾಟಕ್ಕೆ ಸಿಗುತ್ತದೆ; ಕತ್ತಲೆಯಲ್ಲಿ ಯಾರಿಗೂ ಗೊತ್ತಿರದೇ ಸಣ್ಣ ಸಣ್ಣ ನರಳುವಿಕೆಯ ಹಂಚಿಕೊಂಡಂತೆ.. ರಾತ್ರಿ ಬೆಳಗಾಗುತ್ತದೆ, ಕೀಲುಗಳು ಎಂದಿನಂತೆ ಸಹಕರಿಸುತ್ತವೆ; ಒಮ್ಮೊಮ್ಮೆ ಶಪಿಸಿಕೊಳ್ಳುತ್ತ.. ಮಹಾನಗರ ಎಂದಿನಂತೆ ಎಲ್ಲವನ್ನೂ ಬಚ್ಚಿಟ್ಟುಕೊಂಡ ತಟಸ್ಥ ಗುಟ್ಟಂತೆ ಉಳಿದುಬಿಡುತ್ತದೆ.. ಶಹರದ ಹೊಕ್ಕುಳೊಳಗೆ ನಗೆಯ ಬಿಂಬಗಳ ಹುಡುಕಾಟ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ; ಅಷ್ಟಿಷ್ಟು ವಿರಾಮದ ಆಚೆಗೂ.. </div>
<br />
<div dir="ltr">
~`ಶ್ರೀ'<br />
<u>ತಲಗೇರಿ</u></div>
</div>
ಇಬ್ಬನಿhttp://www.blogger.com/profile/06704117357642373741noreply@blogger.com0tag:blogger.com,1999:blog-6872548841589170344.post-42702692883874124552018-01-10T22:35:00.001+05:302018-01-10T22:35:49.519+05:30ಶಹರದ ಹೊಕ್ಕುಳೊಳಗೆ.. -೩<div dir="ltr" style="text-align: left;" trbidi="on">
<div dir="ltr">
ಶಹರದ ಹೊಕ್ಕುಳೊಳಗೆ-೩<br />
... ಕದಡಿದ ನಗೆಯ ಬಿಂಬಗಳ ಹುಡುಕಾಟ...</div>
<div dir="ltr">
ಮಹಾಪಟ್ಟಣವೊಂದಕ್ಕೆ ಮುಖಾಮುಖಿಯಾಗುವುದೆಂದರೆ ಬಹುಶಃ ನಮ್ಮೊಳಗಿನ ಹಲವು ಪಾತ್ರಗಳಿಗೆ ನಾವೇ ಪ್ರಶ್ನೆ ಕೇಳಿ, ಮತ್ತೆ ನಾವೇ ಉತ್ತರ ಕಂಡುಕೊಳ್ಳಲು ಹೆಣಗುವ ಒಂದು ಚಿಕ್ಕ ಪ್ರಕ್ರಿಯೆಯಷ್ಟೇ! ಒಂದಷ್ಟು ವರ್ಷಗಳ ಕಾಲ ಊರಿನ ಮನೆಗಳಲ್ಲಿ ವಾರಸ್ದಾರಿಕೆ ನಡೆಸುತ್ತಾ , ಊರಿನ ಹಾದಿಗಳಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಮಾತನಾಡಿಸುತ್ತಾ, ಕೈಲೊಂದು ಚಿಕ್ಕ ಕೋಲು ಹಿಡಿದು , ಅದ್ಯಾವುದೋ ಸರಿಯಾಗಿ ರಾಗ ಬರದ ಹಾಡೊಂದ ಗುನುಗುತ್ತಾ ಹೊರಟ ನಾವು ಈ ಪಟ್ಟಣದ ಹಾದಿಗಳಲ್ಲಿ ಮೂಕರಾಗುತ್ತೇವೆ.. ರಸ್ತೆಯ ಎರಡೂ ಕಡೆಗಳಲ್ಲಿನ ವಾಹನಗಳು ಅವುಗಳದೇ ಭಾಷೆಯಲ್ಲಿ ಮಾತನಾಡಿಸುತ್ತವೆ; ನಾವು ಯಂತ್ರಗಳಲ್ಲವಲ್ಲ!.. ಮಹಾನಗರದ ಬೀದಿಗಳು ಅದೆಷ್ಟೇ ಪರಿಚಿತವಾಗಿದ್ದರೂ ಅಪರಿಚಿತವೇ..ಊರ ದಿಬ್ಬಗಳ ಏರಿಳಿಯುತ್ತಿದ್ದ ಅದೇ ಮುಖಗಳು, ಇಲ್ಲಿನ ಯಾವ ಸಮತಟ್ಟು ರಸ್ತೆಗಳಲ್ಲೂ ಕಾಣಸಿಗುವುದಿಲ್ಲ.. ನಮ್ಮೆಲ್ಲ ನೆನಪುಗಳು ಎಂದಿಗೂ ನಮ್ಮಮೊದಲ ಊರಿನ ವ್ಯಕ್ತಿಗಳ ಮೇಲೆಯೇ ಕಟ್ಟಲ್ಪಡುತ್ತದೆ.. `ಇವರು ಅವರಂತೆ' ಅನ್ನುವ ಆ ವಾಕ್ಯವೊಂದು ಸದಾ ಅಚ್ಚು ತೆಗೆದಿಟ್ಟಂತೆ !.. ಹೀಗೆ ಕಟ್ಟಲ್ಪಟ್ಟ ನೆನಪುಗಳು ಅದೆಷ್ಟು ಆವೃತ್ತಿಗಳಲ್ಲಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತವೆಯೋ..</div>
<div dir="ltr">
ಬದುಕಿನ ಹೋರಾಟಕ್ಕೆ ಅಣಿಯಾದವರಂತೆ, ಯುದ್ಧಭೂಮಿಯೆಂಬಂತೆ ನಾವೀ ಮಹಾನಗರವನ್ನ ಪ್ರವೇಶಿಸುತ್ತೇವೆ. ದಿನನಿತ್ಯದ ಶಸ್ತ್ರಾಭ್ಯಾಸದಲ್ಲೇ ಸೋಲಿನ ನೆರಳನ್ನ ಇದಿರುಗೊಳ್ಳುತ್ತ ಪರಿತಪಿಸುತ್ತೇವೆ.. ಯಾಕೆ?.. ಬಹುಶಃ, ಆತುಕೊಳ್ಳುವ ಹೆಗಲುಗಳ, ಅಥವಾ ಸುತ್ತಲೂ ನಿಂತು ಧೈರ್ಯತುಂಬುವ ಕೌಟುಂಬಿಕತೆಯ ಕೊರತೆಯೇ?!.. ಮನುಷ್ಯ ಸಂಬಂಧಗಳ ನಿಜವಾದ ವಿಶ್ಲೇಷಣೆಗೆ ನಗರದಂತಹ ಪುಟವೊಂದು ಬಿಟ್ಟರೆ ಬೇರೆ ದೊರಕಲಾರದೇನೋ!..ಅದೆಷ್ಟೋ ಜಗತ್ತುಗಳು ಒಂದು ಪುಟ್ಟ ಪ್ರದೇಶದಲ್ಲಿ ಸೇರುತ್ತವೆ.. ಇಡೀ ಜಗತ್ತು ಏಕೀರ್ಭವಿಸುತ್ತದೆ.. ಇಲ್ಲಿನ ಬಹುತೇಕ ಸಂಬಂಧಗಳಿಗೆ ಒಂದು ನಿರ್ದಿಷ್ಟ ಮೇರೆಯಿರುತ್ತದೆ.. ನಮ್ಮವರು ಅನ್ನಿಸುವ ಜೀವಗಳು ಎಲ್ಲೋ ಬೆರಳೆಣಿಕೆಯಷ್ಟು; ಜಗತ್ತಿನ ಸುಗಂಧ ದ್ರವ್ಯಗಳ ಪ್ರಚಾರಕ್ಕಾಗಿ ಆಚೆ ಈಚೆ ಓಡಾಡುವ ದೇಹಗಳೇ ಹಲವು ಎನಿಸಿಬಿಡುತ್ತವೆ.. ಇಂಥ ಒಂದು ಪರಿಸರದಲ್ಲಿಯೇ ಅಮ್ಮನ ಕೈತುತ್ತು, ಅಪ್ಪನ ಸವೆದ ಚಪ್ಪಲಿ, ಮನೆಯ ಮೂಲೆಯಲ್ಲಿ ಚಳಿಯಲ್ಲಿ ಕುಯ್ ಗುಡುತ್ತಿದ್ದ ನಾಯಿ, ಈಗ ಭೂಮಿಯ ಇನ್ಯಾವುದೋ ಭಾಗದಲ್ಲಿ ಇರುವ ಅಕ್ಕ ಅಣ್ಣ ತಮ್ಮ ತಂಗಿಯರ ತರಹೇವಾರಿ ಜಗಳಗಳು, ಗದ್ದೆಯ ಅಂಚಿನ ವಿಹಾರ, ಕೊಕ್ಕರೆಗಳ ಒಂಟಿ ಕಾಲು, ಅರ್ಧ ಮುರಿದ ಸೇತುವೆ, ಯಾವುದೇ ನಿರ್ದಿಷ್ಟ ಆಕಾರವಿಲ್ಲದ ದೇವರ ಮೂರ್ತಿ, ಕೆಸರಿನಲ್ಲಿ ಕಲ್ಲು ಹೊಡೆಯುವ ಚೇಷ್ಟೆ, ಗಾಳಕ್ಕೆ ಸಿಕ್ಕಿಸುವ ನಂಜುಳ, ಫಟಕ್ಕನೆ ಎಳೆದಾಗ ಸಿಕ್ಕಿಕೊಂಡ ಮೀನು, ಕಲ್ಲು ಪೊಟರೆಗಳಲ್ಲಿ ಪುಟುಪುಟು ಅನ್ನುತ್ತಾ ಮರೆಯಾಗೋ ಏಡಿಗಳು, ಹುಣಸೇಮರ, ಜೊತೇಲ್ ಪಾಟಿಚೀಲ ಹಿಡ್ದು ಬರ್ತಿದ್ ಗೆಳೆಯರ ತಂಡ ಎಲ್ಲವೂ ಎಲ್ಲವೂ ಬಹುವಾಗಿ ಆವರಿಸಿಕೊಂಡುಬಿಡುತ್ತವೆ..</div>
<div dir="ltr">
ಹೀಗೇ ಮನಸ್ಸಿನ ಅದ್ಯಾವ್ದೋ ಅಡ್ಡಾದಿಡ್ಡಿ ಮೂಲೆಯಲ್ಲಿ ಅಜ್ಞಾತವಾಗಿ ಹುದುಗಿದ್ದ ಈ ನೆನಪುಗಳಿಗೆ ಹೊಸ ಜಾತ್ರೆ ಶುರುವಾಗೋದು ಈ ಮಳೆಯಲ್ಲಿ.. ! ರೋಮಗಳ ತುದಿಗೋ ಇಲ್ಲಾ ತೆಳು ಧೂಳಿನ ರಸ್ತೆಯ ಬೊಗಸೆಗೋ ಹನಿಯೊಂದು ಬಿದ್ದಾಗ ಕತ್ತೆತ್ತಿ ನೋಡುವ ನಾವು ಸೇರುವುದು ಯಾವುದೋ ಸೂರನ್ನಾದರೂ, ಈ ನೆನಪುಗಳು ಒಮ್ಮೊಮ್ಮೆಇರುವೆಗಳಂತೆ ಸಾಲಲ್ಲಿ , ಕೆಲವೊಮ್ಮೆ ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ನುಗ್ಗಿಬಿಡುತ್ತವೆ ಹೃದಯದ ಮುಖ್ಯ ಬೀದಿಗೆ.. ಸಂಜೆ ಸಮಯಕ್ಕೆ ಶುರುವಾಗುವ ಮಳೆಗಂತೂ ಅದೇನು ಖಯಾಲಿಯೋ..! ನಾಲ್ಕು ಪುಟಾಣಿ ಗೋಡೆಗಳ ಯಾವುದೋ ಮೂಲೆ ಅಥವಾ ಮಧ್ಯದಲ್ಲಿ , ಬೆಳದಿಂಗಳಂಥ ದೀಪಗಳಿದ್ದರೂ ಕತ್ತಲೆಯನ್ನೇ ಹಚ್ಚಿಕೊಂಡು ಕೂತು ಒಂದು ಕಪ್ ಚಹಾ ಅಥವಾ ಕಾಫಿಯನ್ನ ನೆನೆನೆನೆದು ಕೊರಗುವ ಪರದೇಶಿ ಬದುಕು ಬಹುಶಃ ಬ್ಯಾಚುಲರ್ ಎನಿಸಿಕೊಂಡವರ ಕರ್ಮಸಿದ್ಧಾಂತ ಅಥವಾ ನಿಧಾನಕ್ಕೆ ಸಂಪಾದಿಸಿಕೊಂಡ ಹಕ್ಕು ಎನ್ನಬಹುದೇನೋ!..</div>
<div dir="ltr">
ನಗರದ ಮನೆಗಳ ತಾರಸಿಯಲ್ಲಿ ಮನುಷ್ಯನ ಅದೆಷ್ಟು ಕತೆಗಳು ಓದಲಾಗದಂತೆ ಬಿದ್ದಿವೆಯೋ.. ಏಕಾಂತ ಮತ್ತು ಏಕಾಂಗಿತನದ, ಹರೆಯ ಮತ್ತು ಪ್ರಣಯದ ಅದೆಷ್ಟು ಸಂಚಿಕೆಗಳು ನಿರಂತರವಾಗಿ ಪ್ರಸಾರವಾಗಿವೆಯೋ, ತಾರಸಿ ಕೇವಲ ತಟಸ್ಥ ಮಾಧ್ಯಮ.. ಈ ನಗರವೋ ಧೀಮಂತ ಮೌನಿ..ಹೆಣ್ಣಿನಂತೆ! ಆಳಕ್ಕೆ ಇಳಿದಂತೆ ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸಿ, ತನ್ನ ತೆಕ್ಕೆಗೆ ಎಳೆದುಕೊಳ್ಳುವ ಚಾಲಾಕಿ.. ಒಮ್ಮೊಮ್ಮೆ ಕಾಲೆಳೆಯುತ್ತ , ಇನ್ನೊಮ್ಮೆ ಕುಪ್ಪಳಿಸುತ್ತ ಸಾಗಿದಾಗಲೆಲ್ಲ ಸಲವೂ ವಿಸ್ಮಯಗಳು ಎದುರಾಗುತ್ತಲೇ ಇರುತ್ತವೆ.. ನಗರ ಪೂರ್ತಿ ಸ್ವಾತಂತ್ರ್ಯದ ಬಂಧೀಖಾನೆ, ಅಂದುಕೊಳ್ಳುವವರಿಗೆ; ಗಡಿಗಳಿಲ್ಲದ ನಕ್ಷೆ, ಅಪ್ಪಿಕೊಳ್ಳುವವರಿಗೆ..ಇನ್ನು ಕೆಲವರಿಗೆ ಬೆರಳು ತಾಕದ ಆಕಾಶ..!!</div>
<br />
<div dir="ltr">
~`ಶ್ರೀ'<br />
ತಲಗೇರಿ</div>
</div>
ಇಬ್ಬನಿhttp://www.blogger.com/profile/06704117357642373741noreply@blogger.com0