ಭಾನುವಾರ, ಅಕ್ಟೋಬರ್ 27, 2013

"ಪನ್ನೀರು"...

           "ಪನ್ನೀರು"...

ದೂರದಂಚ ದಿಗಂತದಿ ಬೆಳ್ಳಕ್ಕಿಗಳ ಸಾಲು
ತೋರುತಿದೆ ತೇಲುತಿರುವಂತೆ ರೇಷ್ಮೆಯ ಕೋಲು..
ತೆರೆಯುತಿದೆ ಬಾನು ತನ್ನೆಲ್ಲ ಆಂತರ್ಯ
ಹಂಚಿದೆ ಈ ಸಂಜೆಗೂ ಕೊಂಚ ಸೌಂದರ್ಯ..

ನಿನ್ನ ಹೆಜ್ಜೆ ಸುಳಿವು ನನ್ನೆದೆಗೆ ಸಿಕ್ಕಾಗ
ಬರಿದಾಯಿತು ಮೆಲ್ಲ ಎಲ್ಲ ಪರಿತಾಪ..
ನಿನ್ನ ಮುಂಗುರುಳು ನನ್ನ ನೋಡಿ ಸರಿದಾಗ
ಕರಗಿತೆಲ್ಲ ಕಾರ್ಮುಗಿಲ ಕಡು ಶಾಪ..

ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ
ನನ್ನೆದೆಯೆ ಅಂಗಳದಿ ನಡೆದಾಡು ಗೆಳತಿ
ಅದಕಿರಲಿ ತಂಪು ಜಡಿಮಳೆಯ ಸಂಗೀತ..

ನನ್ನೆಲ್ಲ ಕನವರಿಕೆಗಳ ಸೇರು ಬಾ ಗೆಳತಿ
ಬಚ್ಚಿಟ್ಟ ಭಾವಗಳಿಗೆ ಕೊಡುತ ವಾಗ್ದಾನ..
ಇನ್ನೆಲ್ಲ ತಂಗಾಳಿಯು ನನದೇ ಗೆಳತಿ
ಅತ್ತಿತ್ತ ಸುಳಿಯುತಿರೆ ನೀ ಮೆಲ್ಲ ಪ್ರತಿಕ್ಷಣ..

ನಾನಿನ್ನು ಜೊತೆಗಿರುವೆ ಬಿರಿದ ಮಲ್ಲಿಗೆಯೆ
ಒರೆಸುವೆನು ಏನೇ ಇರಲಿ ನಿನ್ನ ಕಣ್ಣೀರು..
ಸಾವಿನ್ನು ನನಗಿಲ್ಲ ನೀ ಜೀವಸೆಲೆಯೇ
ಬೆರೆತಿರುವೆ ನೀನೇ,ಅಮೃತದ ಪನ್ನೀರು...

                                 ~‘ಶ್ರೀ’
                                   ತಲಗೇರಿ

"ಜೀವಗಂಗೆ"...

      "ಜೀವಗಂಗೆ"...

ಎದೆಯ ಪದರಿನಲ್ಲಿ ಸ್ವಪ್ನ ಚಿಗುರಿದ ಹಾಗೆ
ಮೊದಲ ಸಂಜೆಯಲ್ಲೇ ಬೆಳ್ಳಕ್ಕಿಗಳ ದಿಬ್ಬಣದ ಬೆಡಗು
ಸರಳವಾಗಿ ಬಿದಿರಿನಲ್ಲಿ ಸ್ವರವು ಸೃಜಿಸಿದ ಹಾಗೆ
ನನ್ನುಸಿರ ಕಂಪಿನಲೂ ನಿನ್ನ ಹೆಸರ ಇಂಪು ಕೂಗು

ಮಳೆಬಿಲ್ಲಿಗೆಲ್ಲ ಸೊಬಗು ಕೊಟ್ಟ ಬಣ್ಣ ನೀನು
ಆಗಲೇ ನಾ,ನಿನ್ನ ತುಂಬಿಕೊಂಡ ಆ ಚೂರು ಬಾನು
ಗಾಳಿಗೆಲ್ಲ ಬಾಗಿ ನುಲಿವ ಚಿಗುರು ಹುಲ್ಲು ನೀನು
ಒರಗು ಬಾ,ಎದೆಯ ಕೊಡಲೇ ಭೂಮಿಯಂತೆ ನಾನು..

ಹರಡಿಕೊಳುವೆ ಹೂವಿನಂತೆ ನಿನ್ನ ಹಾದಿಯುದ್ದ
ಸೋಕಿಹೋಗು ಕೊಂಚಕೊಂಚವೇ ಮೃದುಲ ಪಾದ..
ಹಾಗೇ ಮೆಲ್ಲ ಹಂಚಿಹೋಗು ನನಗೂ ಸ್ವಲ್ಪ ರಂಗು
ಮತ್ತೆ ಮತ್ತೆ ತುಂಬಿಕೊಳಲಿ ಕ್ಷಣವೂ ನಿನದೇ ಗುಂಗು..

ಸರಣಿ ಸ್ವಪ್ನಗಳ ಬೇಲಿಯುದ್ದ ಸಾಲುದೀಪ
ಪರಿಚಯಿಸು ಅವಕೂ ನಾನು ತುಂಬ ಪ್ರಾಮಾಣಿಕ..
ನಾನಿಡಲೇ ಒಂದೆರಡು ನಾಜೂಕು ಚುಕ್ಕಿಗಳ
ಸಣ್ಣ ಜೋಳಿಗೆಯ ಹೊತ್ತ ನಾನೊಬ್ಬ ಪ್ರಯಾಣಿಕ..

ಕಾಡದಿರು ನೀನು ಬಿಸಿಲುಗುದುರೆಯ ಹಾಗೆ
ಮರಳುಗಾಡಲು ನೀನೇ ಭರವಸೆಯ ಜೀವಗಂಗೆ!..
ಕ್ಷಣವೆಷ್ಟೇ ಕಳೆದರೂ ತೆರೆದಿಹುದು ಬಾಗಿಲು
ಸುಪ್ತವಾಗಿ ಸೇರು ಬಾ ನಿನಗೆಂದೇ ಕಾದಿರುವ ಒಡಲು..


                                 ~‘ಶ್ರೀ’
                                   ತಲಗೇರಿ

ಭಾನುವಾರ, ಅಕ್ಟೋಬರ್ 6, 2013

"ಗೆಲುವು"....

          "ಗೆಲುವು"....

ಈ ತೀರದ ಒಂಟಿ ದೋಣಿಯೊಡೆಯ
ಎತ್ತಹೋಗಿಹೆ ನೀ ಬಿಟ್ಟು ದೋಣಿಯ
ಆ ತುದಿಯ ದಂಡೆ ತಲುಪಬೇಕಿದೆಯೀಗ
ಮರಳುವೆಯಾ ನೀ ನಾವಿಕನೇ ಬೇಗ..

ಮೌನವಿದೆಯೇಕೋ ಹೊರ ಪದರದಲಿ..
ಬೆಳ್ಳಕ್ಕಿಗಳ ಬಿಂಬ ತುಂಬುತಿದೆ ಕಣ್ಣಲ್ಲಿ..
ಅಲೆಗಳೇಳುವ ಮುನ್ನ ಮತ್ತೆ ಆಳದಲಿ
ಕೂಡಿಬಿಡು ನನ್ನ ಇನ್ನೆರಡು ಕ್ಷಣಗಳಲಿ..

ಸುಪ್ತ ತೆರೆಗಳನೆಲ್ಲ ಸಂಬಾಳಿಸುವೆ ನೀನು
ಹುಟ್ಟುವಲೆಗಳಿಗೆಲ್ಲ ಮೂಲ ನಾನೇನು?!
ತಪ್ತ ಮನಕೆ ಒಮ್ಮೆ ಶಾಂತನಾಗಿ ಬಂದುಸೇರು
ಅಲೆಯದಿರು ನೀನು ಅಲೆಯಂತೆ ಜೋರು!!..

ಸೆಳೆತ ಎಲ್ಲಿಹುದೋ ತಿಳಿಯೆ‘ನಲ್ಲ’!
ಬರಿಯ ಮಿಡಿತವದು ಮೆಲ್ಲ ಮೆಲ್ಲ..
ಹುಟ್ಟು ಹಾಕಲಿ ಎಲ್ಲಿ ನಾ ಪ್ರತಿಸಲ
ತಲುಪಲಿ ಹೇಗೆ ಹಿಡಿದು ಒಂದೇ ಕವಲ..

ಕಾಯಲ್ಲವಿನ್ನು ನೀನೊಂದು ಭ್ರಮೆಯು
ವಾಸ್ತವದಿ ನನ್ನ ನಾ ನಂಬುವುದೇ ಗೆಲುವು..
ನನ್ನೆದೆಯ ಸುಳಿಯೊಳಗೆ ನಾನೇ ಪಯಣಿಗನು
ನಾವೆ ನನ್ನದು,ಇನ್ನು ನನ್ನಾತ್ಮ ನಾವಿಕನು

                               ~‘ಶ್ರೀ’
                                 ತಲಗೇರಿ