ಶನಿವಾರ, ಸೆಪ್ಟೆಂಬರ್ 20, 2014

"ಕಾಲುದಾರಿಯ ಕವಿತೆ.."

  "ಕಾಲುದಾರಿಯ ಕವಿತೆ.."

ಕಾಲುದಾರಿಯ ಆದಿಯಲಿ
ಕಾದಿಹೆನು ನೆನಪುಗಳ ಡೇರೆಯಲಿ..
ಬೇಲಿದಾಟದ ಮಾತುಗಳ
ಕೂಡುತಿದೆ ಬಿಡಾರ ತನ್ನೆದೆಯ ಗೂಡಿನಲಿ..

ಮಳೆ ಮುಗಿದ ಎಲೆ ಹನಿಯ ಸದ್ದು
ನನ್ನೆದೆಯ ಗದ್ದಲಕೆ ವಿರಾಮವೆಂಬಂತೆ..
ಬಲು ಮಾಗಿದ ಮೃದು ಚಿಟ್ಟೆಯಾ ಮುದ್ದು
ಮುನ್ನುಡಿಯ ಮುನ್ನೋಟಕೆ ಮೊದಲ ಪದದಂತೆ..

ಚಂದಿರನ ಚಟಗಳಿಗೆ ನಾಚದಂತೆ
ಕಪ್ಪು ಮುಗಿಲಿಗೂ ಹರಡಿದೆ ನೀಲಿ ಅಮಲು
ಮಂದಗಾಳಿ ಮನಸುಗಳಿಗೆ ಸೋಕಿದಂತೆ
ಮಧುವುಕ್ಕಿ ನಗುತಿಹವು ಕಾಮನೆಯ ಹೂಗಳು..

ಬಣ್ಣ ಬಾಗಿನ ಕೊಟ್ಟು ಕನಸುಗಳಿಗೆ
ಕಾಣಿಸಲೇ ತೀರದಲೆಗಳ ಸಂಜೆ ಸವಾರಿ..
ನಾಳೆಗಳ ದಿವ್ಯಧ್ಯಾನದಲಿ ಹಾಗೇ
ಆಗಮಕೆ ಅಣಿಯಾಯ್ತು ಏಕಾಂತ ಲಹರಿ..

ಕಾಲುದಾರಿಯೇಕೋ ಇನ್ನೂ ಖಾಲಿ ಖಾಲಿ
ಮರಳಲಾರೆಯಾ ನೀ,ಮತ್ತೆ ಆಗಂತುಕಳಂತೆ..
ನೆರಳ ಸಲಿಗೆಯ ಬಯಸಿ ಕಾದಿಹುದು ಬೇಲಿ
ಕತ್ತಲಲಿ ಕಳೆದೊಲವು ಬೆಳಕಲ್ಲಿ ಸಿಕ್ಕೀತೇ?..

                               ~‘ಶ್ರೀ’
                                 ತಲಗೇರಿ

5 ಕಾಮೆಂಟ್‌ಗಳು:

  1. ಎರಡು ಉಲ್ಲೇಖಗಳ ಜೊತೆಗೆ ಈ ಕವಿತೆಯ ಉತ್ಕೃಷ್ಟತೆ ವ್ಯಕ್ತಪಡಿಸುವ ಇಚ್ಛೆ ಎನದು:

    'ಮಂದಗಾಳಿ ಮನಸುಗಳಿಗೆ ಸೋಕಿದಂತೆ
    ಮಧುವುಕ್ಕಿ ನಗುತಿಹವು ಕಾಮನೆಯ ಹೂಗಳು..'

    'ನೆರಳ ಸಲಿಗೆಯ ಬಯಸಿ ಕಾದಿಹುದು ಬೇಲಿ'

    ಕವಿತೆ ನಿಮ್ಮ ಬೆರಳಾಟದ ಸೂತ್ರದ ಗೊಂಬೆ. ಪದಗಳನ್ನು ತಮ್ಮ ಬಯಕೆಗೆ ತಕ್ಕಂತೆ ಮೈದಳೆಸುವ ಅಪರಿಮಿತ ಪ್ರತಿಭೆ ನಿಮಗೆ ಒಗ್ಗಿದೆ.

    ಪ್ರತ್ಯುತ್ತರಅಳಿಸಿ
  2. dhanyavaadagaLu badari sir.. :) tamma Odugana preetige,vimarshakana dhaaTige,vimarshisuva reetige tumbu hrudayada abhivandanegaLu :)

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ