ಬುಧವಾರ, ಜನವರಿ 10, 2018

ಮಹಾಮಾಯಿಯ ಸನ್ನಿಧಾನದಲ್ಲಿ...

ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು ಮತ್ತಷ್ಟು ದಿನ ಪಡೆಯಲೇಬೇಕು ಅನ್ನುವುದು ಯಾವತ್ ಕಾಲದ ಆಸೆಯಾದರೆ , ವಯಸ್ಸೆನ್ನುವುದು ಅದೆಲ್ಲಕ್ಕೂ ತೆರೆ ಎಳೆಯುವ ಮಹಾ ಕಲಾವಿದ.. ನಿಯಮಗಳ ಪರೀಕ್ಷೆಯಾದಲ್ಲಿ ಬಹುಶಃ ಒಂದು ವ್ಯವಸ್ಥೆಯಲ್ಲೇ ಏರುಪೇರಾಗುವ ಸಂಭವಗಳೇ ಜಾಸ್ತಿ.. ಹೀಗೆ ಸಾವಿನ ಪರಿಕಲ್ಪನೆಯನ್ನಿಟ್ಟುಕೊಂಡು ಶ್ರೀ ಚಂದ್ರಶೇಖರ ಕಂಬಾರ ಅವರಿಂದ ರಚಿತವಾದ ನಾಟಕ `ಮಹಾಮಾಯಿ'..

     ಮನುಷ್ಯನ ಅಥವಾ ಜೀವಿಯ ಸಾವಿನ ಮುನ್ಸೂಚನೆ ಮೊದಲೇ ತಿಳಿದಿದ್ದಲ್ಲಿ , ಉಳಿಸುವ ಎಲ್ಲಾ ವ್ಯರ್ಥ ಪ್ರಯತ್ನಗಳನ್ನ ಬಹುಶಃ ಬಿಟ್ಟುಬಿಡಬಹುದು.. ಅಥವಾ ಬದುಕಿನ ಮುನ್ಸೂಚನೆ ದೊರೆತಲ್ಲಿ , ಶತಾಯಗತಾಯ ಪ್ರಯತ್ನಿಸಿ ನಾಳೆಗಳನ್ನ ಕಟ್ಟಿಕೊಡಬಹುದು.. ಒಂದು ವೇಳೆ ಸಾವು ಹತ್ತಿರದಲ್ಲಿದೆ ಅಂತ ತಿಳಿದಿದ್ದರೂ , ಅದನ್ನು ಮುಂದೂಡುವ ಎಲ್ಲ ಅರ್ಥಪೂರ್ಣ ಪ್ರಯತ್ನಗಳಿದ್ದರೆ ಫಲಿಸುತ್ತವೆಯೇ? ಅಥವಾ ಸಾವಿನ ಜೊತೆ ನಿರಂತರ ಮಾತುಕತೆಯಲ್ಲಿದ್ದು ದಿನ ಕಳೆಯುವವರ ಮನಃಸ್ಥಿತಿಯಾದರೂ ಹೇಗಿದ್ದೀತು..? ಕೊನೆಯ ಹಂತದಲ್ಲೂ ಬದುಕಿನ ಭರವಸೆಯೊಂದು ಸಿಕ್ಕಾಗ ಮಾರ್ಪಾಡುಗಳೇನಾಗಬಹುದು; ದೈಹಿಕವಾಗಿ ಮತ್ತು ಮಾನಸಿಕವಾಗಿ.. ! ಹೀಗೆ ಸಾವಿನ ಅಧಿದೇವತೆಯಾದಂಥ ಮಹಾಮಾಯಿಯ ಜೊತೆಗಿನ ಸಂಘರ್ಷದ ಕತೆಯೇ ಈ ನಾಟಕ.. ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ೧೦೫ ಪ್ರದರ್ಶನಗಳನ್ನ ಕಂಡು , ಇನ್ನೂ ಹಲವಾರು ಕಡೆ ಪ್ರದರ್ಶನಗೊಳ್ಳಬೇಕಿರುವ ನಾಟಕ ಅಂದರೆ ಉತ್ಪ್ರೇಕ್ಷೆಯೇನಲ್ಲ.. ರಂಗ , ನಾಟಕ , ಬಣ್ಣ ಇವೆಲ್ಲಕ್ಕೂ ಇಂದಿನ ಕಾಲಘಟ್ಟದಲ್ಲಿ ಬೇರೆಯದೇ ಮಾಧ್ಯಮ ದೊರೆತಿದ್ದರೂ , ಒಂದು ನಾಟಕ ಇಷ್ಟು ಪ್ರದರ್ಶನಗಳನ್ನ ಕಾಣುತ್ತದೆ ಅಂತಾದಲ್ಲಿ ಅದರ ಗಟ್ಟಿತನವನ್ನ ಊಹಿಸಲೇಬೇಕು.. ಇನ್ನೂ ಈಗಷ್ಟೇ ರಂಗವನ್ನ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಾ ಇವರು ಅನ್ನುವ ಅಭಿನಯ ಪ್ರತಿಯೊಬ್ಬರಲ್ಲೂ ಕಾಣ್ತಿತ್ತು.. ಪುಷ್ಪಗಂಧಿ ಅನ್ನುವ ಪಾತ್ರ ರಾಜಕುಮಾರಿಯ ಸಖಿಯಾಗಿ , ಛೇಡಿಸುವ ನಮ್ಮೆಲ್ಲ ಗೆಳೆಯ ಗೆಳತಿಯರನ್ನ ನೆನಪಿಸಿದರೆ , ರಾಜಕುಮಾರಿಯ ಪಾತ್ರ ಒಂದೆಡೆ ಅದೆಷ್ಟೇ ವೈಭೋಗವಿದ್ದರೂ ಅದೆಲ್ಲವನ್ನು ಬಿಟ್ಟು ಹೊರಡುವ , ಕೊನೆಗೆ ಪ್ರೇಮದ ತಹತಹಿಕೆಯಲ್ಲಿ ಕನವರಿಸುವ ನಮ್ಮದೇ ಜಗತ್ತಿನ ಒಬ್ಬಳು ಹುಡುಗಿಯಂತೆ ತೋರಿದರೆ , ವಿದೂಷಕ ಮತ್ತು ಅವನ ಹೆಂಡತಿಯ ಪಾತ್ರಧಾರಿಗಳು ನವಿರು ಹಾಸ್ಯದ ಕಚಗುಳಿ ಇಡುತ್ತಾರೆ.. ಇನ್ನು ವೈದ್ಯನ ಪಾತ್ರದಲ್ಲಿ ಮೊದಮೊದಲು ಅಂಜಿಕೆ , ಅಸಹಾಯಕತೆ ನಿಧಾನವಾಗಿ ಹೋಗುತ್ತಾ , ದೃಢ ಮನಸ್ಸು ಆವರಿಸಿಕೊಳ್ಳುವ ಬಗೆ ಮತ್ತು ಕೊನೆಗಿನ ಚಾತುರ್ಯ ಎಲ್ಲಾ ಚೆನ್ನಾಗಿ ಬಿಂಬಿತ.. ಆಗಾಗ ಕರ್ತವ್ಯದ ಸೂಚನೆ ಕೊಡುವ ಕಠೋರ ಮುದುಕಿಯ ಪಾತ್ರ ನಮ್ಮೆಲ್ಲರೊಳಗಿನ ಧ್ವನಿಯಂತೆ ಕಾಣುತ್ತದೆ.. ಹಾಗೇ ಒಂದು ಗುಂಪು ವಿಚಿತ್ರ ಪಾತ್ರಗಳದ್ದು; ಅವು ನಗಿಸ್ತವೆ ಮತ್ತು ಒಟ್ಟುಕುಟುಂಬವನ್ನ ನೆನಪಿಸ್ತವೆ.. ಇನ್ನು ಸಾವಿನ ಅಧಿದೇವತೆಯಾದ ಮಹಾಮಾಯಿಯ ಪಾತ್ರ..ಗಾಂಭೀರ್ಯ,ಕ್ರೌರ್ಯ, ಕಾಠಿಣ್ಯ ಜೊತೆಗೆ ಮಮತೆಯನ್ನೂ ಒಳಗೊಂಡಂಥ ಪಾತ್ರ ಅದು.. ಇಡೀ ಕತೆಯಲ್ಲಿ ಸಾವಿನ ಬಗೆಗೆ ಭಯ ಹುಟ್ಟಿಸುವ, ತನ್ನದೇ ಅಂತಿಮ ಡಿಂಡಿಮ ಧ್ವನಿ ಅಂತ ಎಲ್ಲರ ಎದೆಯಲ್ಲೂ ನರ್ತಿಸುವ ಪಾತ್ರದಲ್ಲಿ ಸ್ನೇಹಾ ಭಯಂಕರವಾಗಿಯೇ ಅಭಿನಯಿಸಿದ್ದಾರೆ.. ಪ್ರವೇಶವೇ ಚೆಂದ.. ಹೊಗೆಯಾಡುವ ಸ್ಮಶಾನದ ಭಾವ.. ಮುಖದಲ್ಲಿ ಕ್ರೌರ್ಯ , ಎದೆಯಲ್ಲಿ ವಾತ್ಸಲ್ಯ.. ಸೃಷ್ಟಿ ನಿಯಮಗಳ ಪರಿಪಾಲನೆಯ ಸೂಚನೆ ಕೊಡೋ ಮಾರ್ಗದರ್ಶಕಿ ಹೀಗೇ ಹೀಗೇ.. ಇವೆಲ್ಲಕ್ಕೂ ಆ ಸಂಪೂರ್ಣ ಸನ್ನಿವೇಶಗಳನ್ನ ಕಟ್ಟಿಕೊಟ್ಟಿದ್ದು ಬೆಳಕಿನ ಸಂಯೋಜನೆ; ಅಬ್ಬಾ !! ಬೆಳಕಿನ ಸಂಯೋಜನೆಯನ್ನ ನೋಡಲಿಕ್ಕಾದರೂ ನಾಟಕಕ್ಕೆ ಬರಲೇಬೇಕು ಅನ್ನುವಷ್ಟು ಚೆಂದ.. ಬೇರೆ ಬೇರೆ ಬಣ್ಣಗಳನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಇಡೀ ರಂಗ ಸ್ಥಳ ಕಲಾಕೃತಿಯಂತೆ ಗೋಚರಿಸುತ್ತಿತ್ತು.. ಇನ್ನು ಹಾಡುಗಾರಿಕೆ ಮತ್ತು ಸಂಗೀತ ಹಿತವಾಗಿತ್ತು.. ಇವೆಲ್ಲವನ್ನ ತೆರೆಯ ಮೇಲೆ ತಂದಂಥವರು ಜೀವನ್ ರಾಂ ಸುಳ್ಯ.. ಇವರ ನಿರ್ದೇಶನದಲ್ಲಿ ಅಚ್ಚುಕಟ್ಟುತನ ಎದ್ದು ಕಾಣ್ತಿತ್ತು.. ಕೊನೆಯಲ್ಲಿ ಅವರ ಮಾತುಗಳಲ್ಲಿ ಅವರ ಹಳೆಯ ದಿನಗಳ ಮೆಲುಕಿತ್ತು..

     ಒಟ್ಟಿನಲ್ಲಿ ಡಿಜಿಟಲ್ ಮಾಧ್ಯಮಗಳಿಂದ ಯಾವತ್ತೂ ಸಿಗದ ಅನುಭವಗಳು ಈ ರಂಗಭೂಮಿಯದ್ದು.. ಒಂದಷ್ಟು ಹೊತ್ತು ನಾವು ಮತ್ತು ರಂಗದಲ್ಲಿ ನಡೆಯುತ್ತಿರುವ ಕತೆ ಇವೆರಡರ ಜೊತೆ ಕಳೆದುಹೋಗಬೇಕಿದ್ದಲ್ಲಿ ಇಂತಹ ನಾಟಕಗಳನ್ನ ಆಗಾಗ ನೋಡಲೇಬೇಕು.. ಮತ್ತೆಲ್ಲಾದರೂ ಮಹಾಮಾಯಿ ನಾಟಕದ ಪ್ರದರ್ಶನವಿದ್ದಲ್ಲಿ ಖಂಡಿತಾ ಹೋಗಿ, ರಂಗದ ಆಸ್ವಾದನೆ ರಂಗದ ಇದಿರಲ್ಲೇ ಚೆಂದ..

~`ಶ್ರೀ'
    ತಲಗೇರಿ

1 ಕಾಮೆಂಟ್‌: