ಮಂಗಳವಾರ, ಡಿಸೆಂಬರ್ 25, 2012


    "ಕಾಡುವುದು ಮಳೆಬಿಲ್ಲು"...

 ತುಡಿಯುತಿದೆ ಲಹರಿ ಎದೆಯೊಳಗೆ
 ಸುಪ್ತಸ್ವರಗಳು ಹೊರಳಿವೆ ನಿನ್ನೆಡೆಗೆ..
 ಓ ನೆನಪುಗಳ ಮೌನದೇಕಾಂತವೇ
 ಮಾತಾದೆಯಾ ಹಾಗೇ ಮೆಲ್ಲಗೆ..

 ಅರ್ಥವಿಲ್ಲದ ಬಿಂದುಗಳ
 ಹಾಗೇ ಕೂಡಿಸಿಟ್ಟ ರಂಗೋಲಿ
 ನಿನ್ನೆಯಾ ಮನೆಯಲ್ಲಿ!
 ಮಿತಿಯಿರದ ಭಾವಗಳ
 ಮೆಲ್ಲ ಜೀಕುತ್ತಿದ್ದ ಜೋಕಾಲಿ
 ಒಲವಿನಾ ಕತೆಯಲ್ಲಿ!..

 ಇಣುಕುತಿದೆ ಅವಶೇಷ
 ಮಣ್ಣ ಹಣತೆಯಿಟ್ಟ ಕ್ಷಣದಲ್ಲೂ
 ಗೋರಿಯಾ ಸಂದಿಯಲ್ಲಿ..
 ಕೆಣಕುತಿದೆ ಆ ಸ್ಪರ್ಶ
 ಮತ್ತೆ ಸೋಕಿತೇ ಎನುವಂತೆ
 ಹೆಸರಿನಾ ಛಾಯೆಯಲ್ಲಿ!..

 ಶಿಶಿರದಾ ತರುವ
 ಚೈತ್ರ ಋತು ಸೆಳೆವಂತೆ
 ಕನಸುಗಳು ಸುಳಿವಂಥ ತೊದಲು!..
 ಆಗಾಗ ಕಾಡುವುದು
 ನನ್ನೇ ನಾ ಪ್ರೀತಿಸುವಂತೆ
 ಅವಳು ಕಟ್ಟಿದಾ ಮಳೆಬಿಲ್ಲು...!..

                            ~‘ಶ್ರೀ’
                              ತಲಗೇರಿ


       "ಸಾಯುವನು ಚಂದ್ರಮ"...

  ಪೌರ್ಣಿಮೆಯ ರಾತ್ರಿಯಲಿ
  ಆಚೆ ಬರದಿರು ಸಖಿಯೆ
  ನಾಚುವನು ಅಲ್ಲೇ ಚಂದ್ರಮನು
  ಉರುಳಿ ಮೋಡದ ಮರೆಯಲ್ಲಿ..

  ಮೃದು ತಂಗಾಳಿ ನಿನ್ನ ಸೋಕಿದಾಗ
  ಉಯ್ಯಾಲೆಯಾಡುವವು ಮುಂಗುರುಳು
  ನೆನಪಾಗಬಹುದೇ ನಾನು ನಿನಗಾಗ..
  ಎದೆಗೊರಗೆ,ಸ್ಪರ್ಶ ಹಿತವೆನಲು..

  ಆಗಾಗ ಇಣುಕುವನು ಚಂದ್ರಮನು
  ನಿನ್ನ ಸೆರಗು ಜಾರುವುದೆಂದು...
  ಮತ್ತಲ್ಲೇ ನಾಚುವನು ನೆನೆದು
  ನನ್ನ ನೆನಪಲ್ಲೇ ನೀ ನುಲಿಯುತಿರಲು..

  ಬೆಳದಿಂಗಳ ರಾತ್ರಿಯಲಿ
  ಮತ್ತೇರಿಸದಿರು ಸಖಿಯೆ
  ಮತ್ತೆಂದೂ ಬರಲಾರ ಚಂದ್ರಮ..
  ಸ್ನಿಗ್ಧ ಸೌಂದರ್ಯದುನ್ಮಾದದಿ ಸಾಯುವನು..
  ಸಖಿ...ಚಂದ್ರಮ ಬರನು...ಸಾಯುವನು...
  ಅಳುವುದು ಮುಗಿಲೊಂದಿಗೆ ಬಾನು....


                                 ~‘ಶ್ರೀ’
                                   ತಲಗೇರಿ

  "ನಾನು,ನೀನು...ಆ ಬಾನು.."

ಈ ಸಂಜೆ ಹೊತ್ತಲ್ಲಿ ಗೆಳತಿ
ನಾನು ನೀನು ಆ ಕೆಂಪಾದ ಬಾನು..
ಹೊರಟಿಹನು ಸೂರಿ ವಿದಾಯ ಹೇಳುತ್ತ
ಅಲೆಅಲೆಯ ರಾಗ ಅನುರಾಗ ಜೇನು..

ನಿನ್ನ ಬಿಸಿಯುಸಿರು ಎದೆ ಸೋಕಿದಾಗ
ಹುಚ್ಚಲ್ಲವಿದು ಬೆಚ್ಚನೆಯ ಅನುಭವ
ನೀ ಜೊತೆಯಿರುವೆ ಎನುವಾಗ
ಸೋಲಿಲ್ಲವೀಗ ಕೈಹಿಡಿದು ನಡೆವಾಗ..

ಕೆನ್ನೆಗೆ ನೀನಿಟ್ಟ ಸಿಹಿಗುರುತು
ಹೆಚ್ಚಲ್ಲವದು ಮುದ್ದಾದ ಮೃದು ಸಂಭ್ರಮ
ಸುಮ್ಮನೆ ನಸು ಮುನಿಸು ಬಂದಾಗ
ಸಮಾಧಾನ ಈ ಪ್ರೀತಿಯಾ ಆಲಿಂಗನ..

ಹಣೆಯಲ್ಲಿ ಮುಂಗುರುಳು ನುಲಿವಾಗ
ತುಂಟನಗೆ ಸುಳಿಯುವುದು ತುಟಿಯಲ್ಲಿ
ಎದೆಯೊಳಗೆ ನಿನ್ನ ಹೆಸರ ಬರೆದಾಗ
ಅಳಿಸಲಾಗದು ಮತ್ತೆ,ಇದು ಸುಖ ಮಿಲನ..

ನಾನು ನೀನು ಆ ಬಾನು ಗೆಳತಿ..
ನೀ ಭೂಮಿ ನಾ ಬಾನು ಮಳೆಬಿಲ್ಲು ಪ್ರೀತಿ...

                                     ~‘ಶ್ರೀ’
                                       ತಲಗೇರಿ

ಶನಿವಾರ, ಡಿಸೆಂಬರ್ 1, 2012


     "ಈ ಕ್ಷಣದ ಸಲಿಗೆಯಲ್ಲಿ"...


  ಬರೆಯಬೇಕು ಕವಿತೆಗಳ,ಗೆಳತಿ
  ಮರುಭೂಮಿಯಲಿ ಒಂಟಿಯಾಗಿ
  ನಿಂತ ಆ ಒಣಮರದ ಬಗೆಗೆ
  ಕ್ಷಣಗಳರಿವಿರದೆ ಬರೆವ
  ಕರಿಯ ರೇಖಾಚಿತ್ರಗಳ
  ತುಂಬು ಒಲವಿನ ಧ್ಯಾನಲಹರಿಗೆ...


  ಯಾವ ಅವಸರಗಳಿವೆ ಈ ಒಂಟಿ ಬದುಕಿಗೆ?
  ಯಾರ ಆಸರೆಯಿದೆ ಈ ಹೆಗಲ ಗಂಟಿಗೆ?
  ಮುರಿಯಬಹುದು ನಾಳೆಯ ಬಿರುಗಾಳಿಗೆ!
  ಹಕ್ಕಿ ಗೂಡು ಕಟ್ಟಲಿದೆ ಎಂಬಾಸೆಯಿಲ್ಲ..
  ಹಾರಿಹೋಗುವ ಹಕ್ಕಿ ಕ್ಷಣಕಾಲ ಕೂರುವುದಲ್ಲ!
  ದಾರಿಹೋಕರು ದಣಿಯೆ ಕೈಸವರಿ ಹೋಗುವರಲ್ಲ!
  ಆ ಪ್ರೀತಿ ಸ್ಪರ್ಶವೇ ಭರವಸೆಯ ಬೀಜ...
  ಹಣ್ಣಿಲ್ಲ,ಎಲೆಯಿಲ್ಲ,ದಟ್ಟ ನೆರಳಿಲ್ಲ
  ಉಸಿರೊಂದೇ ನಿಜ...


  ಆಗಾಗ ಸುಳಿಗಾಳಿ ಬಳಿ ಸುಳಿಯೆ
  ಮರಳ ಕಣಕೂ ಎಂಥದೋ ಸೆಳವು..
  ಇನ್ನೂ ಹಚ್ಚಿಕೊಂಡಿದೆ ಇಂಥ ಮುಪ್ಪಿನಲ್ಲೂ
  ಈ ಭೂಮಿಗೂ,ಅರ್ಥವಾಗದ ಚೆಂದ ಒಲವು!..
  ಭ್ರಮೆಯಲ್ಲ ಪ್ರೀತಿ ಈ ಕ್ಷಣದ ಸಲಿಗೆಯಲ್ಲಿ..
  ಈಗೀಗ ಅನಿಸುತ್ತಿದೆ ಗೆಳತಿ
  ಆ ಮರವೂ ಒಂಟಿಯಲ್ಲ!!
  ಕವಲುದಾರಿಗಳ ಜಂಟಿಯಾಗಿಪ ಗಟ್ಟಿಗುರುತು..
  ಸಾಲು ನೆರಳ ಸಂಗೀತ,ಮತ್ತೆ ಮೃದು ಗಾಳಿಯೊಡನೆ ಕಲೆತು...


                                                        ~‘ಶ್ರೀ’
                                                          ತಲಗೇರಿ