ಬುಧವಾರ, ಜುಲೈ 17, 2013

   "ತಿಳಿಸಂಜೆಯಾ ನವಿಲು"...

ನೀನೇ ಪಂಚಮ ನೀನೇ ಸಂಭ್ರಮ
ನೀ ತಾನೇ ತಿಳಿಮುಗಿಲ ಚಂದ್ರಮ..
ನೀನೇ ಮುಂಗಾರು ನೀನೇ ಆ ತೇರು
ನೀನೇನೇ ಎದೆತುಂಬಿದಾ ಪನ್ನೀರು..

ನೆರಳಿನಾ ಬಿಂದುಗಳ ಛಾಯೆ
ಬಿರಿದ ಮಲ್ಲಿಗೆಯ ಮೃದು ಬಾಲೆ
ನೂರಾರು ಭಾವಗಳ ಖನಿಯೆ
ತಂಪು ಕೊಳಲಿನಾ ರಾಗಮಾಲೆ..
ನೀ ತಾನೇ ತಿಳಿಸಂಜೆಯಾ ನವಿಲು
ನೀನೇನೇ ಮುಂಜಾನೆಯಾ ಹೊಂಬಿಸಿಲು..

ಬೆಳ್ಳಕ್ಕಿಗಳ ದಿಬ್ಬಣದ ಬೆಡಗು
ತನಿಗಂಪು ತಾರುಣ್ಯದ ತಳಿರು
ಸ್ವಪ್ನಗಳ ಕಂತುಗಳ ಸಿಹಿಗುಂಗು
ತಂತಾನೇ ಪುಳಕಿತವು ನವಿರು..
ನೀ ತಾನೇ ತಿಳಿಸಂಜೆಯಾ ನವಿಲು
ನೀನೇನೇ ಮುಂಜಾನೆಯಾ ಹೊಂಬಿಸಿಲು..

ನೀನೇ ಬಿಗಿಮೌನ ನೀನೇ ರತಿಧ್ಯಾನ
ನೀ ತಾನೇ ನನ್ನೆದೆಯ ಆಲಾಪನ..
ನೀನೇ ಮಂದಾರ ನೀನೇ ಶೃಂಗಾರ
ನೀ ತಾನೇ ಕಣಕಣದ ರಹ ಝೇಂಕಾರ...

                              ~‘ಶ್ರೀ’
                                ತಲಗೇರಿ

ಮಂಗಳವಾರ, ಜುಲೈ 16, 2013

        "ಸೆಳೆತ"..

ಜಾರದಿರಿ ನೆನಪುಗಳೇ ಇಂದು
ಕೆನ್ನೆಯಲಿ ಹಾಗೇ ಬಿಸಿ ಹನಿಗಳಾಗಿ
ಸುಡುವ ನಿನ್ನೆಗಳೇ ಸವೆಯದಿರಿ
ಮೌನದಲಿ ಹಾಗೇ ಸದ್ದಿಲ್ಲದಾ ಸದ್ದಾಗಿ..

ಮಳಲಿನಲ್ಲಿ ಬರೆವ ಹೆಸರು
ಬಂದುಸೋಕುವ ಅಲೆಗೆ ಸ್ವಂತ
ಕೊರಳಿನಲ್ಲಿ ಬೆಸೆದ ಉಸಿರು
ಉಸುರಲೇನೋ ಬಿಡದ ತುಡಿತ..

ಆರದಿಹ ದೀಪದಲಿ ಬೆಳಕು
ಛಾಯೆ ತೋರುವ ಮಾಯಾವಿ
ತಂತಿಗಳ ಮಿಡಿತದಲಿ ಪಲುಕು
ಕಲ್ಲೆದೆಯ ಕರಗಿಸುವ ಪಲ್ಲವಿ

ಕನಸಿನಲಿ ಕನಸಾಗಿ ಕನಸು
ಕನವರಿಸುವಾಗ ಬಿಡದ ಸೆಳೆತ
ಬಾರದಿಹ ನಿಜದ ಜೀವಕೆ
ಕವಿತೆಯಲಿ ಯಾಕೋ ಹುಚ್ಚು ಎಳೆತ..

ಸರಿದುಬಿಡು ಪದರಗಳ ಬುಡಕೆ
ಎದೆಯ ತೀರದ ಆಚೆ ದಡಕೆ..
ಸೋಕಬೇಕು ತಾಜಾ ಅಲೆಗಳು
ಗಾಳಿಯೊಡನೆ ಬೆರೆತು ಅಮಲು..


                      ~‘ಶ್ರೀ’
                        ತಲಗೇರಿ

ಸೋಮವಾರ, ಜುಲೈ 8, 2013

"ಋತು ಸರಿದು"...

        "ಋತು ಸರಿದು"...

ಸೃಜಿಸುತಿದೆ ಎದೆ ಹೂವ
ಪಕಳೆಗಳಲಿ ತನಿಗಂಪ ಪರಾಗ
ನಾಚುತಿದೆ ಮೃದುವಾದ
ಗಾಳಿಯಲೆಗಳಿಗೆ ತಂತಾನೇ ಅಂತರಂಗ..

ಮೆತ್ತನೆಯ ಆ ಸ್ಪರ್ಶ ಮತ್ತೇರಿಸುವಾಗ
ಮಾತಿಲ್ಲ ಮತ್ತೆಲ್ಲ ಕಂಪಿಸುವ ಮೌನ
ಬಿಸಿಯುಸಿರು ಕೊರಳೊಳಗೆ ಹರಿದಾಡುವಾಗ
ಮುಂದೆಲ್ಲ ಕ್ಷಣಗಳಲೂ ಬೆಚ್ಚನೆಯ ಧ್ಯಾನ..

ಅರೆಕ್ಷಣದ ಬಳಿಯಲ್ಲೇ ತುಸು ತಲ್ಲಣ
ಮರಳುತಿದೆ ಮತ್ತೆ ಭ್ರಮರದಾ ಝೇಂಕಾರ!
ನನ್ನೆದೆಯ ಮಧುವಲ್ಲೇ ಇಡೀ ಜೀವನ
ಅರಳುವುದು ಅಲ್ಲಿ ಸೃಷ್ಟಿ ಫಲ ಮಂದಾರ..

ಯಾಕಿಟ್ಟನೀ ಜಗದಲ್ಲಿ ಪರಬ್ರಹ್ಮ
ಹೂವೊಂದಕೆ ಯುಗದಲ್ಲಿ ಒಂದೇ ಜನುಮ  
ಋತು ಸರಿದು ಸುಕ್ಕಾಗುವಾಗ ಮೃದು ಚರ್ಮ
ಉದುರುವುದು ಬಿಡಿಬಿಡಿಯಾಗಿ ದಳಸಂಗಮ..

ಮಧುವೊಂದೇ ‘ಸಾವಿರದ’ ನಿಜ ಸಂಭ್ರಮ
ಮತ್ತೊಂದು ಜೀವದೆದೆಯಲ್ಲಿ ಮರುಮಿಲನ
ಎದೆತಂತು ಮಿಡಿವಾಗ ಮತ್ತೆ ಸಂವಾದ
ಕೊನೆಯಿರದ ಸ್ವಪ್ನಗಳ ಸಾಲಿನಲಿ ದಿನಗಮನ..

                                  ~‘ಶ್ರೀ’
                                    ತಲಗೇರಿ 

"ಕರಗಲಿದೆ ಛಾಯೆ"...

      "ಕರಗಲಿದೆ ಛಾಯೆ"...

ಬಿಸಿಯುಸಿರು ಕೊಸರುತಿದೆ ಒಳಗೆ
ಮಥಿಸುತಿವೆ ತುಮುಲಗಳು ಮೆಲ್ಲಗೆ..
ಸವರುತಿದೆ ಏಕಾಂತದ ಬಿಸಿಗಾಳಿ
ತುಂಬುತಿದೆ ಎಲ್ಲೆಲ್ಲೂ ಖಾಲಿ ಖಾಲಿ..

ಅರಳುವಾಗ ಹೂವಲ್ಲೂ ದಿವ್ಯ ಮೌನ
ಮುದುರುವಾಗ ಕೂಡ ಮತ್ತದೇ ಧ್ಯಾನ..
ಸೃಷ್ಟಿಕ್ರಿಯೆ ಸಂಗೀತ ಮೌನಮಿಳಿತ..
ಅಂತ್ಯ ಆದಿಗಳ ನಡುವೆ ಚೆಂದ ಏರಿಳಿತ..

ಬಿಂದುಗಳ ಸಂಧಿಯಲಿ ತುಂಬುಮೌನ
ತಂತಾನೇ ಜಾರೋ ಹನಿಗಳಿಗೂ ಮೌನಗಮನ..
ಕನ್ನಡಿಯಲಿ ಬಂಧಿಯಾದ ಬಿಂಬಗಳ ಒಳಗೂ
ಕಾಡುವುದು ನಾಳೆಗಳು ಉರುಳುವಾ ಕೊರಗು..

ಹುಟ್ಟಲಿದೆ ಮನಸಿನಲಿ ಮತ್ತೆ ತನನನ
ನೆನಪಿಸುತ ಬೆಳ್ಳಿಬಟ್ಟಲ ಚಂದ್ರಮನ..
ಕಡು ಮೌನ ಛಾಯೆ ಕರಗಲಿದೆಯಿನ್ನ..
ತುಂಬಲಿದೆ ಬೆಳಕ ಬೆತ್ತಲೆ ತುಂಡುಮೇಣ..

                              ~‘ಶ್ರೀ’
                                ತಲಗೇರಿ

"ಕರಗಬಲ್ಲದು ಮೇಣ"..

        "ಕರಗಬಲ್ಲದು ಮೇಣ"..

ಮನಸೇ..
ನಿನ್ನ ನಿರ್ದಿಗಂತ ಪ್ರಾಂಗಣದಿ
ಮೊಳಗುತಿದೆ ರಣದುಂದುಭಿ..
ಮತ್ತೆ ಕಹಳೆ..
ಸಾಲುಗಟ್ಟಿ ಸುತ್ತುವರೆಯುತಿವೆ
ಎತ್ತೆತ್ತ ಸೈನ್ಯಗಳು..
ಝೇಂಕಾರದ ನಡುವೆ
ರಣಧೀರ ನಾನಾ ಪಾರ್ಥ..!
ಬದಲಾಗುತ್ತಿವೆ ಅವೆಷ್ಟೋ ಸೈನ್ಯಗಳು..
ಮೊದಲಾಗುತ್ತಿವೆ ಇನ್ನೆಷ್ಟೋ ನೆನಪುಗಳು..
ಹೋರಾಟ ಶುರುವಾಗುವ ಮುನ್ನವೇ
ಶರಣಾಗುವ ಅನುಮಾನ,ಅವಮಾನ..!
ಧರ್ಮಯುದ್ಧವೇ ಇದು!
ಈ ಭೂಮಿಗ್ಯಾಕೆ ರಕ್ತ ಹೀರುವ ಬಯಕೆ!
ನನ್ನದೇ ಭಾವಗಳು..ಒಳ ಸಂಬಂಧಗಳು..
ಗಹಗಹಿಸುತಿವೆ..ನಿಂತಿಹೆ ನಾ ಹೇಡಿಯಂತೆ..
ಅಬ್ಬರಿಸಿ ಸಾಮ್ರಾಟನಾಗುವ
ಆ ಉನ್ಮಾದ ಅನುವಾಗಲಿಲ್ಲವೇಕೆ!
ನನ್ನೆಲ್ಲ ಕ್ಷಣದಿ ಜೊತೆಗಿದ್ದ
ಆ ಮೋಹ ವ್ಯಾಮೋಹ..
ಮತ್ತ ಪ್ರಮತ್ತ ಮದ..
ಮಧುಮಂಚದಮಲ ಲೋಭ..
ಹಾಸಿಗೆಯ ಮಡಿಕೆಯೊಳಗೆ
ಕೊಸರಿದ್ದ ಕಾಮ..
ಬಿಡುವಿನಾ ಕ್ಷಣಗಳಲಿ
ಹುಚ್ಚಂತೆ ಹಚ್ಚಿಕೊಂಡಿದ್ದ ಕ್ರೋಧ..
ಮತ್ತೆ ಸಿಗದ ಸೌಂದರ್ಯಕ್ಕುಕ್ಕಿದ ಮಾತ್ಸರ್ಯ..
ನನ್ನವೇ ಅಲ್ಲವೇ ಈ ಎಲ್ಲ ತಪ್ತ ಭಾವ!!..
ಇಲ್ಲಿಲ್ಲ ಯಾವ ಮಾಯಾವಿ,ಗೀತಾಚಾರ್ಯ..
ನಾನೇ ಸಾರಥಿ,ನಾನೇ ರಥಿಕ,ಆಂತರ್ಯದಿ ಒಳಪಾಕ..
ನಾನೇ ಆಚರಿಸಬೇಕೇ ಸೂತಕ!!
ಧರ್ಮನೆತ್ತರು ಬಸಿಯುವ ಬದಲು
ಬಿಸಿಯುಸಿರ ಕಣ್ಣೀರು ಜಾರುತಿದೆ ಮೊದಲು..
ನಿಲ್ಲಬಲ್ಲೆನೇ ನಾನು ನನ್ನವರ ಮುಂದೆ..?
ಗೆಲ್ಲಬೇಕಿದೆಯೇ ನಾನು ಈ ಸಂಬಂಧಗಳನ್ನೇ?
ಅರಿಗಳೋ,ಮೈತ್ರಿಯ ಸಿರಿಗಳೋ
ಅರಿಯದಾಗಿದೆ ಈ ಭಾರ ಮನಕೆ..
ಆಂತರ್ಯವಿದು ತಟ್ಟಿ ಪಿಸುಗುಡುತಿದೆ,
ವಿಜ್ರಂಭಿಸಿಬಿಡು ಸಮರದಿ..
ಪಲ್ಲವಿಸಲಿ ಜೀವೋನ್ಮಾದ,
ಪಾರ್ಥನಾ ಪಾತ್ರ ಬದಲಾಗುವ ಮೊದಲು!..
ಸಮರದೊಳು ಸರಿಯಲ್ಲ ನೀರಸ ಮೌನ..
ಪ್ರೀತಿಯಿದೆ ಸ್ನೇಹವಿದೆ ಅಲ್ಲೊಂದು ಧ್ಯಾನ!
ನಿನ್ನನ್ನೇ ನೀ ಗೆದ್ದುಬಿಡು..
ಕರಗಬಲ್ಲದು ತಂತಾನೇ ಮೇಣ..!!
ಮತ್ತೆಲ್ಲಿಯ ಚೈತ್ಯಯಾತ್ರೆ..ಅರ್ಥವಿಲ್ಲದ ಪಯಣ..
ನಿರ್ದಿಗಂತ ಪ್ರಾಂಗಣ,ಆಗ ತಾಜಾ ಹೂ ಬನ..


                                     ~‘ಶ್ರೀ’
                                       ತಲಗೇರಿ 

ಶುಕ್ರವಾರ, ಜುಲೈ 5, 2013

"ಗಗನ"....

          "ಗಗನ"....
ಮೋಡದ ಮನೆಯ ಚೆಂದದ ಮಹಲು
ಕಾಡುವ ಹನಿಗಳ ಸಾಲಿನ ಬಯಲು..
ಸುಳಿಮಿಂಚಿನ ಮೆರಗಂಚಿನ ಬಯಕೆ..
ಸತ್ಯ ಮಿಥ್ಯಗಳ ನಿತ್ಯ ಬೆತ್ತಲೆ ಭೂಮಿಕೆ..

ಕರಿಬಿಳಿ ಕನಸ ಮಿಲನದ ಜಾಗ
ಹಸಿಬಿಸಿ ಮನಸ ಪ್ರಣಯದ ಸೋಜಿಗ
ತಿಳಿಯದ ಅಗಲ,ಮುಗಿಯದ ಹಾದಿಯ ಬಂಧ
ಹೊಸ ಹೊಸ ಬೆಸುಗೆಗೂ ಸೋಕುವ ಸೃಷ್ಟಿಯ ಗಂಧ..

ಸಾವಿರ ಹೊಳಪಿನ ಸುಂದರ ಪರ್ವ
ಈ ಜಗಜೀವಕೆ ತುಸುಬೆಚ್ಚನೆ ಗರ್ವ
ಅರಳುವ ಮೇಘ,ಕರಗುವ ಭಾವದ ಸಮರ
ಕೊನೆಯಲಿ ಮತ್ತದೇ ಕಣ್ಣೀರಿನ ಹಸಿ ಪ್ರವರ..

ಆಸೆಗಳು ಒಂದೊಂದೇ
ತಾ ಮುಂದೆ ಎನುತಿರಲು
ಹಚ್ಚಿರುವೆ ಅವಕೂ ಸಾಲಿನಾ ಗೀಳು
ಉಸಿರಿಗೆಲ್ಲ ತುಸು ತುಡಿತವಿಟ್ಟು
ಎದೆಯ ತೆರೆದಿಹೆ ಗಗನ..
ಕಲೆಗಾರ ಸೋಕಿಸಿಹ ಅಲ್ಲೂ
ತನ್ನದೇ ಕುಂಚವನ್ನ,ಎದೆಯಂಚ ಪ್ರೀತಿಯನ್ನ..


                                    ~‘ಶ್ರೀ’
                                      ತಲಗೇರಿ