ಶನಿವಾರ, ಮಾರ್ಚ್ 21, 2015

"ಗಮ್ಯ"...

        "ಗಮ್ಯ"...

ಮುಗಿಲ ತೂಕಕೆ ಮೂಲ
ಒಳಹನಿಯ ಕೂಟವೋ...
ಮೈ ತುಂಬ ಹರಿವ
ಗಾಳಿಯಲೆಗಳ ಮಾಟವೋ...
ಬೊಗಸೆ ಚಾಚುವ ಇಳೆಯ
ಕೈ ಗೆರೆಗಳಾ ಸೆಳೆತವೋ...
ಕರಗುವುದು ಘನತಿಮಿರ
ಕಳೆಯುತ್ತ ಎದೆಭಾರ...

ಶಶಿಯ ತೊಗಲಿಂದ ಬಸಿವ
ತಂಗದಿರು ಯಾವ ಮಾಪನ..
ಉಬ್ಬು ತಗ್ಗುಗಳ ಇದಿರು
ಪ್ರತಿಫಲಿಸಿಹ ತನಗೊದಗಿದ ಬಿಸಿಲನ್ನ..
ನೆರೆಮನೆಯ ಒಳಮನೆಯು
ಕನಸುಗಳ ಹೆಕ್ಕಿ ಇಡಲೆಂದು..
ಅದುಮಿಟ್ಟ ಒಳದನಿಯು
ನವಿರಾಗಿ ನಗಲೆಂದು...

ಕೂಡದಿರು ಕಡಲನ್ನ
ಹೆಸರಿರದ ತೊರೆಯಂತೆ..
ಎದೆಯೊಳಗೆ ಬದು ಕಟ್ಟಿ
ಬದಲಿಸು ಹರಿವನ್ನ..
ಚಿಗಿತು ಬೀಗಲಿ ದಡವು
ತುತ್ತು ಕಾಣಲಿ ಮಗುವು..
ಚಾಚಿಕೊಳಲಿ ಕವಲು ಕವಲಲಿ
ದೂರ ದೂರದ ಊರಲಿ...

                          ~‘ಶ್ರೀ’
                             ತಲಗೇರಿ

"ಗತಿ..."

     "ಗತಿ..."

ಕಾಲನಾ ಕವಿತೆಯಲಿ
ಅಕ್ಷರವ ಬಿತ್ತು
ಕನಸು ತುಂಬಿದ ಲೇಖನಿಯೇ..
ಆಲದಾ ಮೂಲವನು
ನನಗೆ ತೋರಿಸಿಯೇನು
ಕಾಡು ಮಣ್ಣಿನಾ ವಾಸನೆಯೇ..

ಹಸ್ತರೇಖೆಯು ಯಾಕೋ
ಹರಡುತ್ತ ಹುಡುಕುತಿಹುದೇ,
ಆದಿಯನು,ಅಂತ್ಯವನು
ಇಲ್ಲಾ ಮಧ್ಯಂತರದ ಸ್ಥಿತಿಯನು..
ಮತ್ತೆ ಮಾಗುವ ಗತಿಯನು..

ಹದ ಬೇಕೇ ನಿಲುವಿಗೆ,
ಮುಗಿವ ಚಂದ್ರನ ಬೆಳಕು
ಕರಗಿಸೀತೇ ಇಷ್ಟುದ್ದ ನೆಳಲನು..
ಹಗಲು ಬಂದರೆ ಸಾಕೇ,
ಶೂನ್ಯವೆಲ್ಲವೂ ತುಂಬಿಕೊಳಲು ಇನ್ನು..
ಪರಿಧಿ ಹೇಗೆ ಇದ್ದೀತು ಹೊರಗೆ
ಮೀರಿ
ಕೇಂದ್ರ ಬಿಂದುವಿನ ಸೆಳೆತವನ್ನು..

ವಕ್ರದೇಹದ ಅವಧಿ ಮುಗಿಸಲು
ಲೆಕ್ಕವಿಟ್ಟಿದೆ ಋತುವು..
ಸೊಕ್ಕುವಾಗಿನ ಬಡಿತ
ಮುಟ್ಟಬಲ್ಲದೇ ಕೊನೆಯ ಪಲುಕು..
ಆರುವಾ ಮುನ್ನ ಎಂದೋ ಹಚ್ಚಿಟ್ಟ ಮಿಣುಕು..

                                              ~‘ಶ್ರೀ’
                                                  ತಲಗೇರಿ