ಬುಧವಾರ, ಆಗಸ್ಟ್ 9, 2017

ಅಕ್ಕು : ಬಯಲು, ಗೋಡೆಯೊಳಗಣ ಹೂವಿನ ದಂತಕಥೆ..



     ಅದೊಂದು ಕಾಲಘಟ್ಟ.. ಪುರುಷ ಪ್ರಧಾನ ಸಮಾಜ.. ಹೆಣ್ಣು , ಅದೊಂದು ಚೌಕಟ್ಟಿನ ಚಿತ್ರ ಮಾತ್ರವೇ ಆಗಬೇಕು ಅನ್ನುವ ಅಲಿಖಿತ ನಿಶ್ಚಿತ ಕೌಟುಂಬಿಕ ಸಂವಿಧಾನ.. ಎಲ್ಲಾ ವ್ಯವಸ್ಥಿತ ಕಾಲದ ಸಮಾಜದಲ್ಲಿ ಬಹುಶಃ ಇದೊಂದು ತುಂಬಾನೇ ಚರ್ಚಿತ ವಿಷಯ.. ಅಬಲೆ ಅನ್ನುವಂಥ ಒಂದಷ್ಟು ನೆಪಗಳ ಪೊಳ್ಳು ಪೊರೆಯೊಳಗೆ ಹುದುಗಿಕೊಂಡ ವ್ಯವಸ್ಥೆಯಲ್ಲಿ ಪದೇ ಪದೇ ಒಂದು ಧ್ವನಿ ಯಾರಿಗೂ ಕೇಳುವುದೇ ಇಲ್ಲ‌... ಅದೆಷ್ಟೋ ತಲೆಮಾರುಗಳ ಕೂಗು; ಕ್ಷೀಣ ತೀಕ್ಷ್ಣ ಎಲ್ಲಾ ಹಂತಗಳಲ್ಲಿ ಜಾಲಾಡಲ್ಪಟ್ಟ ಗಂಟಲಿನ ಮೊರೆತ.. ಒತ್ತಾಯದ ಬದುಕು ಹೆಣ್ಣು ಗಂಡೆಂಬುದ ನೋಡದೇ ಎಲ್ಲರನ್ನೂ ಹಿಂಸಿಸುವಂಥದ್ದು.. ಆದರೂ ಕೆಲವೊಮ್ಮೆ ಒಂದು ವರ್ಗ ಮಾತ್ರವೇ ಅದರ ಹಿಡಿತಕ್ಕೆ ಸಿಲುಕುವುದು ಬಹುಶಃ ಎಲ್ಲಾ ಕಾಲಘಟ್ಟದ ದುರಂತವೇನೋ ! ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ತೆಳು ಗೆರೆಯನ್ನ ಗಮನಿಸುವ ಸೂಕ್ಷ್ಮಮತಿ, ಕೂರದ ಕಾಲದ ಬಗಲಿಗೆ ಜೋತುಬಿದ್ದ ನಮ್ಮ‌ಕಣ್ಣುಗಳಿಗಿಲ್ಲ.. ಹೀಗೆ , ಬಾಡಿದ ಹೂಗಳ ಅರೆಗಂದು ಬಣ್ಣದ ನೆರಿಗೆಗಳ ಕಥಾನಕವೇ ಅಕ್ಕು ...

     ಇದೆಲ್ಲಿಯದೋ ದೂರದ ಕತೆಯಲ್ಲ , ಈಗಲೂ ಅದೆಷ್ಟೋ ಹಳ್ಳಿಗಳ ನಿತ್ಯ ಅಜ್ಞಾತ ಸಂಘರ್ಷ.. ಹರೆಯಕ್ಕೆ ರೆಕ್ಕೆ ಬಹಳ; ಅದರಲ್ಲೂ ಹೆಣ್ಣಿನ ಬಯಕೆಗಳಲ್ಲಿ ಸಣ್ಣಪುಟ್ಟ ಸಂಗತಿಗಳೇ ಅಧಿಕ.. ಕನ್ನಡಿಯೊಂದು ಆಪ್ತಮಿತ್ರ.. ಎಲ್ಲ ಕಾಲಕ್ಕೂ ಜೊತೆಯಾಗಬಲ್ಲ ಗೆಳತಿ.. ಶೀರ್ಷಿಕೆಯಿರದ ಒಂದಷ್ಟು ಆಸೆಗಳ ಪಟ್ಟಿಮಾಡುವಾಗಲೆಲ್ಲಾ ಕೈಬೆಸೆದ ನೆರಳು ಹ್ಞೂಂ ಅಂತಿರಬೇಕು.. ಮತ್ತು ಹಟವೊಂದು ಹೆಣ್ಣಿಗೆ ಹುಟ್ಟು ಕೊಟ್ಟ ಬಳುವಳಿಯೇನೋ ಅನ್ನುವಂತಿರುತ್ತದೆ.. ಈ ಗುಣಗಳ ಮೂರ್ತರೂಪವೇ ಈ ಕಥಾನಕದ ಅಮ್ಮಚ್ಚಿ... ಲಹರಿ ತಂತ್ರಿ ಅನ್ನುವವರ ಮಾಗಿದ ಅಭಿನಯ ಅವರೆಲ್ಲೋ ನಮ್ಮದೇ ಮನೆಯ ಹುಡುಗಿಯೆನ್ನುವಷ್ಟು ಆಪ್ತವಾಗಿಸುತ್ತದೆ.. ಅಮ್ಮಚ್ಚಿ ಬಯಲ ಹೂವು.. ತನ್ನದೇ ಲೋಕದಲ್ಲಿ ತಂಗಾಳಿಯಂಥ ಕನಸಿನಲ್ಲಿ ಚಿಟ್ಟೆಯ ರೆಕ್ಕೆಯ ಮೆದುವಾದ ಸ್ಪರ್ಶದ ಕುರಿತಾಗಿ ಹಾತೊರೆಯುತ್ತಿದ್ದಂಥವಳು.. ಮಿಡತೆಯ ಕಾಲಿಗೆ ಸಿಕ್ಕಿ ಮನೆಯೊಳಗೆ ಬಂದು ಬಿದ್ದಂಥದು.. ಇನ್ನು , ಅದೆಷ್ಟೋ ವಸಂತಗಳನ್ನ ಒಂಟಿಯಾಗಿ ಕಳೆದ ಸುಕ್ಕು ಚರ್ಮವೊಂದಿದೆ.. `ಪುಟ್ಟಮ್ಮತ್ತೆ' ; ನಿರ್ಭಾವ ಜಾಗೃತಿಯ ಕಲಿಸುವಂಥವಳು.. ಎದೆ, ಕಲ್ಲಾದಲ್ಲಿ ಪ್ರಾಯದ ಹಸಿವನ್ನೂ ಮೀರಿ ನಿಲ್ಲಬಹುದೆನ್ನೋ ಗಟ್ಟಿಗಿತ್ತಿ.. ಸಾವಿಗಿಂತ ಬದುಕಿನ ಪ್ರೀತಿ , ಮಾತೃತ್ವದ ರೀತಿಯನ್ನ ನೆಚ್ಚಿ ಉಳಿದಂಥವಳು.. ಎಲ್ಲಾ ಏರಿಳಿತಗಳ, ಅದೆಷ್ಟೋ ಹಗಲಿರುಳುಗಳ ಮೂಕಸಾಕ್ಷಿಯಾಗಿಯೇ ಉಳಿದುಹೋದಂಥವಳು.. ಋಣಕ್ಕೆ ಬಿದ್ದ , ಮತ್ತು ತಿಳಿಯದೆಯೇ ಮಿಡತೆಗೆ ಬಾಗಿಲು ತೆಗೆದವಳು; ಕಾಲನ ಕ್ರೂರ ಹವೆಗೆ ಜರ್ಝರಿತಳು.. ರಾಧಾಕೃಷ್ಣ ಉರಾಳರಲ್ಲಿ ಪುಟ್ಟಮ್ಮತ್ತೆ ಬಹುಶಃ ಪರಕಾಯ ಪ್ರವೇಶ ಮಾಡಿರಲೇಬೇಕು ಅನ್ನುವಷ್ಟು ಏಕೀಭೂತರು.. ಇನ್ನು , ಮಾನಸಿಕ ಸ್ತಿಮಿತ ಕಳೆದುಕೊಂಡಂಥವಳು.. ಪುರುಷ ಡಾಂಭಿಕತೆಯನ್ನ ಮತ್ತು ಸಮಾಜದ ಕಾಠಿಣ್ಯತೆಯನ್ನ ಸವಿಸ್ತಾರವಾಗಿ ತೆರೆದಿಡಬಲ್ಲಂಥವಳು; ಅವಳೇ `ಅಕ್ಕು' .. ಸೋಗು ಹಾಕುತ್ತಲೇ ಸಾಗ ಹಾಕುತ್ತ , ಮದದ ಜಾತ್ರೆಯಲ್ಲಿ ದಿಗಿಲನ್ನೇ ಆಮದು ಮಾಡಿಕೊಂಡು ಭ್ರಮರಗಳ ರೆಕ್ಕೆ ಮುರಿದವಳು, ಹಾರದೇ ಉಳಿದವಳು.. ಮತ್ತೆ , ಇದ್ದೂ ಇಲ್ಲದವಳು.. ಇವಳು ಗೋಡೆಗಿಷ್ಟು ಹಬ್ಬಿ ಮುಗುಳು ಹಡೆವ ಹಸಿ ಹಂಬಲದವಳು..ಬರೀ ಹಂಬಲದವಳಾಗೇ ಉಳಿದವಳು.. ಅಕ್ಕುವಾಗಿ ಮತ್ತು ನಿರ್ದೇಶಕಿಯಾಗಿ ಚಂಪಾಶೆಟ್ಟಿಯವರು ಕಾಡುತ್ತಲೇ ಉಳಿದುಹೋಗುತ್ತಾರೆ.. ಕ್ಷಣ ಕ್ಷಣದ ಮುಖಭಾವದಲ್ಲೂ ಕಟ್ಟಿಕೊಟ್ಟ ರೀತಿ ತುಂಬಾ ತುಂಬಾ ಚೆಂದ... ಎಲ್ಲಾ ಸಹಕಲಾವಿದರೂ ಇಡೀ ಕತೆಯ ಓಘಕ್ಕೆ ಮತ್ತು ಪಾತ್ರಕ್ಕೆ ಬೆನ್ನೆಲುಬಾಗಿ ನಿಂತವರು... ನೆರಳು ಬೆಳಕಿನ ಸಂಯೋಜನೆ, ಒಂದಷ್ಟು ಅದ್ಭುತ ಕಲಾಕೃತಿಗಳನ್ನು ಕಟ್ಟಿಕೊಟ್ಟಿಕೊಡುತ್ತದೆ.. ಕಾಶಿನಾಥ್ ಪತ್ತಾರ್ ಅವರ ಹಿನ್ನೆಲೆ ಸಂಗೀತ ಮಾನವೀಯ ನೆಲೆಯನ್ನ ಜಾಗೃತಗೊಳಿಸುತ್ತ ಸಾಗುತ್ತದೆ..

    ವೈದೇಹಿ ಅವರ ಸಣ್ಣ ಕತೆಗಳನ್ನ ಆಧರಿಸಿ ಹುಟ್ಟಿಕೊಂಡ ಕಥಾನಕ ಈ ಅಕ್ಕು ; ಅಲ್ಲೇ ಹೇಳಿದಂತೆ‌ ಶವಕೆ ಇಡಲೆಂದೇ ಕೆಲ ಹೂಗಳು ಅರಳುತ್ತವೆ.. ! ಕೊನೆಯದಾಗಿ ಒಂದು ಮಾತು; ರಂಗಶಂಕರ ತುಂಬಿತ್ತು... ರಂಗಭೂಮಿಯ ಘಮಲಿಗೆ ಬದುಕಿನ  ಆ ಪುಟ್ಟ ಭಾಗವೊಂದು ತುಂಬಾನೇ ಆಪ್ತವಾಗಿತ್ತು...

~`ಶ್ರೀ'
    ತಲಗೇರಿ

ಶನಿವಾರ, ಜನವರಿ 7, 2017

"ಅಂದು.. ಬಂದಿದ್ದೆ ನಾನು..."

ದ್ರವ್ಯವೊಮ್ಮೆ ಬೆರೆವಾಗ
ನಾಚಿ ಕರಗಿತ್ತು ಲವಣ
ಆಯಸ್ಸುಗಳ ಪೇರಿಸುತ್ತ
ಆಕಾರ ಪಡೆಯಿತು ಮೌನ..
ರಕ್ತ ಸೋರುವ ಬಳ್ಳಿಗರಳಿದ
ಹೂವಿಗೆ ಶಿಶುವೆಂದು ನಾಮಕರಣ..
ಅಂದು.. ಬಂದಿದ್ದೆ ನಾನು..

ತುಂಬಿಟ್ಟುಕೊಂಡ ಚೀಲದಲ್ಲಿ
ತೂರಿಬರುತ್ತಿದ್ದ ಆಹಾರ..
ತುರುಬಿಗೆ ಸಿಕ್ಕಿಸಿದ ಬಣ್ಣಗಳ
ಆಗಾಗ ಹೇಳುತ್ತಿದ್ದಳು ಅವಳು..
ಕಥನದಂತಿದ್ದ ನಾನು
ವಾಸ್ತವದ ಚಿಹ್ನೆಯಾಗಿದ್ದು
ನರಳುವಿಕೆಯ ತುದಿಯಲ್ಲಿ..
ಖಾಯಂ ವರ್ಗಾವಣೆಗೊಂಡು
ಅಂದು.. ಬಂದಿದ್ದೆ ನಾನು..

ಮೊದಲ ಅಳುವಿಗೆ
ಹಬ್ಬವೆಂದರು ಅವರು..
ಬೆಳೆಯುತ್ತಿದ್ದ ಭಾಗಗಳ
ಕಡಿದಾದ ನೆರಳುಗಳಲ್ಲಿ
ಜಾರುತ್ತಿತ್ತು ಎದೆಯಿಂದಲೇನೋ..
ಅಂದು ಬಂದಿದ್ದ ನಾನು
ಮತ್ತೆ ಹೋಗಲೇ ಇಲ್ಲ..
ಓಡತೊಡಗಿದ್ದೇನೆ, ಸಿಗಲೂ ಇಲ್ಲ..
ಮತ್ತೆ ಬರಬೇಕೆಂದಿದೆ ಹೊಸದಾಗಿ;
ಕಿಂಡಿಯಿದೆಯಾ?!...

~‘ಶ್ರೀ’
  ತಲಗೇರಿ

"ಪ್ರಪಂಚ"...

ಇಣುಕಬೇಕು ಕತ್ತೆತ್ತಿ
ತೆರೆದುಕೊಳ್ಳುತ್ತದೆ ಪ್ರಪಂಚವೊಂದು
ಕತ್ತಲೆಯ ನೆರಿಗೆಗಳು ಹಾಸಿಕೊಂಡಿದ್ದರೂ..
ಪುಟ್ಟ ಪುಟ್ಟ ಗೋಡೆಗಳಿಗಿಲ್ಲಿ
ಹಸಿರು ಚರ್ಮ
ತಿಳಿ ಹಳದಿಯಾಗಿ ಅರಳುತ್ತದೆ
ಬಿಸಿಲು ಬಿದ್ದಾಗ..
ಅರ್ಧ ಬಿಳುಪು ತುಸು ಕಪ್ಪು
ಗೆರೆಗಳು ಅಂಗಿ ತುಂಬಾ..
ಹೊದ್ದುಕೊಂಡ ನಿನ್ನೆಗಳಿಗೆ
ತೇಪೆ ಹಚ್ಚಲೇಬೇಕೆ?!..

ಹೊರಗೆಷ್ಟೇ ಬಿಸಿಲು ಸುರಿದರೂ
ಪ್ರತಿಫಲನವೆಂಬುದು ಹಸಿ ಸುಳ್ಳು..
ಅಂಟಿಕೊಂಡ ಜಾಳಿಗೆಗಳಿಗೆ
ಯಾರ ಮುಖಸ್ತುತಿಯೋ..
ತೂಗಿಬಿಟ್ಟ ಪೊಟ್ಟಣಗಳು
ಕಟ್ಟಬಲ್ಲವೇ ಬೆಲೆಯ
ಹಸಿವು ಉಕ್ಕಿಸಿದ ಬೆವರ ಕಲೆಗಳು
ಬೀಡುಬಿಟ್ಟ ಚಿಲ್ಲರೆಗಳಿಗೆ..

ಎಲ್ಲ ಜಾತಿಯ ತಿಂಡಿಯೂ
ಅದರದ್ದೇ ಆದ ಶೀಷೆಗಳಲ್ಲಿ..
ಅದೊಂದು ಅಂಗಡಿ..!
ಒಳಸರಿದಂತೆ ಇಲ್ಲ ಯಾವ ಕುರುಹೂ..
ಮಾರಾಟಕ್ಕಿಡಬಹುದಿತ್ತು ಮಿಂಚುಹುಳುಗಳ
ಅಲ್ಲಲ್ಲಿ ಮೂಲೆಯಲಿ ಹುಟ್ಟಿದ್ದರೆ;
ಜೊತೆಗೆ ಒಂದಷ್ಟು ಕೆ.ಜಿ. ಪ್ರೀತಿಯನ್ನೂ..

ಇಣುಕಬೇಕು ಮತ್ತೆ ಮತ್ತೆ..
ನಾನು ತೊಟ್ಟಿರುವ ಬಣ್ಣಕ್ಕೂ
ಅಲ್ಲಲ್ಲಿ ಚೆಲ್ಲಿರುವುದಕ್ಕೂ
ಹೆಸರುಗಳ ಕೊಡಬೇಕು..
ಕೇಳಬೇಕು ಮೂಲ ಯಾವುದೆಂದು
ಉತ್ತರಿಸಲು ಬರಬಹುದು ಮಾಲೀಕ..

~‘ಶ್ರೀ’
  ತಲಗೇರಿ

"ಗುಬ್ಬಚ್ಚಿಗಳಿಗೆ ಬಿಡಾರ ಇರಬೇಕಿತ್ತು"...

            

    ಈ ನೆನಪು ಅನ್ನೋದು ಒಂಥರಾ ಪಾತರಗಿತ್ತಿ ಇದ್ದಂತೆ.. ಯಾವಾಗ್ ಬರತ್ತೆ, ಯಾವಾಗ್ ಹೋಗತ್ತೆ ಅನ್ನೋದೇ ವಿಸ್ಮಯ.. ಒಮ್ಮೊಮ್ಮೆ ಜಗತ್ತಿನೆಲ್ಲ ಬಣ್ಣಗಳ ಮೈಗಂಟಿಸಿಕೊಂಡು ಬಂದು ಸಾವಿರಾರು ಹೂಗಳ ಕತೆ ಹೇಳಿದರೆ, ಇನ್ನು ಕೆಲವೊಮ್ಮೆ, ರೆಕ್ಕೆ ಹರಿದುಕೊಂಡು, ಕುಂಟುತ್ತಾ, ತೆವಳುತ್ತಾ ಬಂದು ವಾಸ್ತವಕ್ಕೆ ಇನ್ನೊಂದಿಷ್ಟು ಮುಖಗಳನ್ನ ಕೊಡುತ್ತದೆ.. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ; ಈ ಅವಳೆನ್ನೋ ಅವಳ ನೆನಪುಗಳೂ ಹಾಗೇ !.. ಮರೀಚಿಕೆ ಅನ್ನೋದಕ್ಕೆ ಪಕ್ಕಾ ಉದಾಹರಣೆಯಾಗಿದ್ದವಳು ಅವಳು.. ಸಿಕ್ಕಾಗ ಕಣ್ತುಂಬಿಕೊಂಡ ಅವಳನ್ನು ಎದೆಯೊಳಗೆ ಅಷ್ಟಷ್ಟಾಗಿ ಇಳಿಸಿಕೊಂಬುದೇ ಉತ್ಸವದಂತಿತ್ತು.. ಅವಳೊಂಥರ ಪುಟಾಣಿ ಕೃಷ್ಣನ ಥರ; ಕಳ್ಳ ಹೆಜ್ಜೆ ಹಾಕ್ತಾ ಕಿಲಕಿಲ ಅನ್ನೋಳು.. ಸಮೃದ್ಧವಾಗಿ ಬೀಳೋ ಮೊದಲ ಮಳೆಗೆ ಹಿತವಾಗಿ ಹೃದಯವನ್ನ ತಲ್ಲಣಿಸೋ ಒಂಥರಾ ಮಣ್ಣಿನ ಪರಿಮಳ ಹುಟ್ಟಿಕೊಳ್ಳುತ್ತಲ್ವಾ, ಹಾಗೆ; ಅವಳ ಗೆಜ್ಜೆ ಸದ್ದು ಅಂದ್ರೆ.. ! ಮತ್ತೊಂದಿಷ್ಟು ಕಾಲ ಕೊನೇ ಕೊನೇ ಹನಿಗಳನ್ನ ಗುಟುಕುಗಳಂತೆ ಮೆಲುಕು ಹಾಕೋದು ನನ್ನ ಜಾಯಮಾನ..

   ಈಗಲೂ ಅಷ್ಟೇ.. ಅವಳಿಲ್ಲದ ಸಂಜೆಗಳಲ್ಲಿ ಹಲುಬುತ್ತೇನೆ.. ಆ ಎತ್ತರದ ಗುಡ್ಡವಿದೆಯಲ್ಲಾ, ಅದರ ತುತ್ತತುದಿಗೆ ಒಂದು ಬಿಡಾರ ಮಾಡಬೇಕಿತ್ತು.. ಎರಡು ಗುಬ್ಬಚ್ಚಿಗಳಿಗೆ ಪುಟ್ಟ ಗೂಡೊಂದು ಇರಬೇಕಿತ್ತು.. ಅವಳುಸಿರ ಏರಿಳಿತದ ಜೋಗುಳಕ್ಕೆ ನೀಲಿ ಹಾಸಿಗೆಯಲ್ಲಿ ಮುದುರಿದ್ದ ಚಂದ್ರಮ  ರಾತ್ರಿಪೂರ್ತಿ ತಲೆದೂಗುತ್ತಿದ್ದ. ನಾನು ಅವನನ್ನು ತೋರಿಸೆಂದು ಹಟ ಮಾಡೋ ಮಗುವಾಗುತ್ತಿದ್ದೆ!.. ಅವಳು ಮರೀಚಿಕೆಯಾಗುತ್ತಿರಲಿಲ್ಲ.. ನಾಚಿಕೆ ಹೊತ್ತ ಬಿಂಕವಾಗಿ ಶೀತಲ ರಾತ್ರಿಗಳಲ್ಲಿ ಸುದ್ದಿ ಹೇಳಬರುವ ಬೆವರ ಹನಿಗಳಿಗೆ ನಾ ಕಟ್ಟೋ ಸುಂಕಕ್ಕೆ ಸಾಕ್ಷಿಯಾಗುತ್ತಿದ್ದಳು... ! ನಿಜ, ಗುಬ್ಬಚ್ಚಿಗಳಿಗೊಂದು ಬಿಡಾರ ಇರಬೇಕಿತ್ತು...

~‘ಶ್ರೀ’
  ತಲಗೇರಿ