ಶನಿವಾರ, ಜನವರಿ 7, 2017

"ಅಂದು.. ಬಂದಿದ್ದೆ ನಾನು..."

ದ್ರವ್ಯವೊಮ್ಮೆ ಬೆರೆವಾಗ
ನಾಚಿ ಕರಗಿತ್ತು ಲವಣ
ಆಯಸ್ಸುಗಳ ಪೇರಿಸುತ್ತ
ಆಕಾರ ಪಡೆಯಿತು ಮೌನ..
ರಕ್ತ ಸೋರುವ ಬಳ್ಳಿಗರಳಿದ
ಹೂವಿಗೆ ಶಿಶುವೆಂದು ನಾಮಕರಣ..
ಅಂದು.. ಬಂದಿದ್ದೆ ನಾನು..

ತುಂಬಿಟ್ಟುಕೊಂಡ ಚೀಲದಲ್ಲಿ
ತೂರಿಬರುತ್ತಿದ್ದ ಆಹಾರ..
ತುರುಬಿಗೆ ಸಿಕ್ಕಿಸಿದ ಬಣ್ಣಗಳ
ಆಗಾಗ ಹೇಳುತ್ತಿದ್ದಳು ಅವಳು..
ಕಥನದಂತಿದ್ದ ನಾನು
ವಾಸ್ತವದ ಚಿಹ್ನೆಯಾಗಿದ್ದು
ನರಳುವಿಕೆಯ ತುದಿಯಲ್ಲಿ..
ಖಾಯಂ ವರ್ಗಾವಣೆಗೊಂಡು
ಅಂದು.. ಬಂದಿದ್ದೆ ನಾನು..

ಮೊದಲ ಅಳುವಿಗೆ
ಹಬ್ಬವೆಂದರು ಅವರು..
ಬೆಳೆಯುತ್ತಿದ್ದ ಭಾಗಗಳ
ಕಡಿದಾದ ನೆರಳುಗಳಲ್ಲಿ
ಜಾರುತ್ತಿತ್ತು ಎದೆಯಿಂದಲೇನೋ..
ಅಂದು ಬಂದಿದ್ದ ನಾನು
ಮತ್ತೆ ಹೋಗಲೇ ಇಲ್ಲ..
ಓಡತೊಡಗಿದ್ದೇನೆ, ಸಿಗಲೂ ಇಲ್ಲ..
ಮತ್ತೆ ಬರಬೇಕೆಂದಿದೆ ಹೊಸದಾಗಿ;
ಕಿಂಡಿಯಿದೆಯಾ?!...

~‘ಶ್ರೀ’
  ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ