ಬುಧವಾರ, ಜುಲೈ 30, 2014

"ಅಭಿಸಾರಿಕೆ..."

"ಅಭಿಸಾರಿಕೆ..."

ಕಾಲುದಾರಿಯಲಿ ಕಾದಿದ್ದ
ನವಿಲುಗರಿಯೊಂದು
ಗೊಲ್ಲನಾ ಕೊಳಲ ದನಿಯ
ಕತೆ ಹೇಳಿತ್ತು..
ತನ್ನ ನಲ್ಲನ ನೆನೆದು ಆಕೆ
ಬಿರಬಿರನೆ ನಡೆವಾಗ
ಕಾಲುಂಗುರದ ಮಿಡಿತಕ್ಕೆ
ತರಗೆಲೆಯೂ ತಾಳ ಹಾಕಿತ್ತು..

ಮುಂಗುರುಳನು ಮೆಲ್ಲನೆ
ತೂಗುವ ತಂಗಾಳಿಗೆ
ಬಿಸಿಯಾಯಿತು ಯೌವನ;
ಇದು ಚಳಿ ಸಂಜೆಯ ಚಾಳಿ..
ಅವಳೆದೆ ಪುಟದಾ
ಸಲಿಗೆಯ ಮೇಲೆ
ನಡೆದಿದೆ ಈಗ
ಬಣ್ಣ ಬಣ್ಣದಾ ಕುಂಚದ ಹಾವಳಿ..

ಚಂದಿರ ಎರವಲು ಪಡೆದ
ಅವಳಾ ಹೊಳಪನು
ನಾಚುತ ತಾನು...
ಮುಗಿಲದು ಮಂಟಪ ಕಟ್ಟಿತು,
ಹಬ್ಬಕೆ ಅಣಿಯಾಯಿತು
ಬೆರಗು ಮೌನದಿ ಬಾನು..

ಬೆಳದಿಂಗಳ ಲೀಲೆಗೆ
ಅವಳಾದಳು ನೈದಿಲೆ;
ಹೇಳದೆ ಕೇಳದೆ ಹಾಗೇ..
ಭ್ರಮರದ ಸ್ಪರ್ಶಕೆ
ಎರೆದಳು ತನ್ನಯ ಮಧುವ..
ಹವೆಯಲಿ ಈಗ
ಮಿಲನದಾ ಮೆರವಣಿಗೆ...

                               ~`ಶ್ರೀ'
                                   ತಲಗೇರಿ

1 ಕಾಮೆಂಟ್‌: