ಶನಿವಾರ, ಜುಲೈ 5, 2014

"ಭ್ರಮೆಗೆ ಮರಳಿ..."

      "ಭ್ರಮೆಗೆ ಮರಳಿ..."

ಸಂಶಯದ ಸುಳಿಮಿಂಚ ಬಣ್ಣವದು
ಉದ್ರೇಕದಾ ಪ್ರತಿಫಲನ ಚಲನೆಯಲಿ
ಪರಿಚಯದ ಪರಿಸರಣ ಸಾರವದು
ಆಂತರ್ಯದಾ ಸಮ್ಮಿಲನ ನಳಿಗೆಯಲಿ..

ಜೀವಲೋಕದ ಕಾವು ಸುಡುತಿದೆ
ಚಂದ್ರನೆದೆಯ ಭಾವ ಹಂದರ..
ಸಾವ ಕಾಣದ ಗಾಯ ನರಳಿದೆ
ರಂಧ್ರ ಬರೆದ ಕಲೆಯು ಭೀಕರ..

ಇತಿಹಾಸದೊಡಲಲಿ ಒಬ್ಬ ಗಾಂಧಾರಿ
ಕುರುಡಿಯಾದಳು ತಾನೇ ಬಯಸಿ
ಮಂದಹಾಸದ ನಿತ್ಯ ಮುಸುಕುಧಾರಿ
ನಡೆಯುತಿಹನೇ ಬೆಳಕ ಅರಸಿ...

ಮುಗಿಲ ಬಗಲಿನ ತೇಲು ತಾರೆ
ಉದುರುವುದೋ ಯಾವ ಗಳಿಗೆ..
ಹಸಿರ ಸೆರಗಿನ ನೀಲ ನೀರೆ
ಶಿಶಿರ ಬರುವನು ಮತ್ತೆ ಬಳಿಗೆ...

ಮುಗಿಲ ರಾಗದಿ ಕರಗೋ ರವಿಯು
ಮತ್ತೆ ಎದೆಯಲಿ ಚಂದ್ರ ಬಿಳಿಯು...
ಬಿಸಿಲ ಕುದುರೆ ಅರಳಿ ಹೊರಳಿ
ಕರೆಯುತಿಹುದು ಭ್ರಮೆಗೆ ಮರಳಿ...


                       ~‘ಶ್ರೀ’
                         ತಲಗೇರಿ

2 ಕಾಮೆಂಟ್‌ಗಳು: