ಸೋಮವಾರ, ಜುಲೈ 14, 2014

"ಅನುಮಾನ ಬೇಡ..."

"ಅನುಮಾನ ಬೇಡ..."

ಕಾಗದವು ಹಸಿದಿಹುದು
ನೀಡಬೇಕಿದೆ ನಾನು
ಶಾಯಿ ಕಲಸಿದ ಕೈತುತ್ತು
ಒಣಗಿದಾ ಮಣ್ಣಿಗೆ
ತುಸು ತಂಪೀಯಬಹುದೇ
ಬರೆವ ನನ್ನ ಬೆರಳ ನೆರಳು....

ಏನು ಬರೆದರೂ ನಿನಗೆ
ಹಸಿವು ನೀಗಿದ
ಸಂತೃಪ್ತ ಭಾವ..
ಮತ್ತೆ ನನಗೆ
ಜೀವತಂತು ಮೀಟಿ
ತಾಯಾದ ಅನುಭವ..

ಈತನಕ ನನ್ನೊಳಗೆ
ಹೋರಾಡಿದಾ ಎಲ್ಲ
ತುಮುಲಗಳ ಭಾರವ
ಇಳಿಸಬೇಕು ನಿನ್ನೆದೆಗೆ
ತಿಳಿಯಬೇಕು ನೀನೂ
ಈ ಜಗದ ಸೋಜಿಗವ...

ಕೆದಕಬೇಕು ಈಗ
ನನ್ನೆದೆಯ ಸೂಕ್ಷ್ಮಗಳ
ಅಂತರಂಗದ ಸಾಕ್ಷ್ಯಗಳ...
ಅನುಮಾನ ಬೇಡ;
ನಿನ್ನೊಡಲ ಹಸಿವ
ತಣಿಸುವಾ ಸೆಲೆಯು..
ನಾನು ಕವಿಯು...

                     ~'ಶ್ರೀ'
                         ತಲಗೇರಿ

1 ಕಾಮೆಂಟ್‌: