ಬುಧವಾರ, ಡಿಸೆಂಬರ್ 31, 2014

"ಧಾತು...."

              "ಧಾತು...."
     
ಚಿಗುರಿದ ಚಂದ್ರನ ತುಟಿಗಳ ತುದಿಯಲಿ
ಹರಡಿದೆ ನಿಬಿಡದಿ ಘಮ್ಮನೆ ಮೊಲ್ಲೆ
ಕರಗುವ ಮೇಘದ ಮಗ್ಗುಲ ಸ್ತರದಲಿ
ತರುವುದು ಸಡಗರ ಬೆಳಕಿನ ಜಲ್ಲೆ...

ಬರಡು ಭೋಗದ ಕರಡು ನೆಲದಲಿ
ಹುಲ್ಲಿಗೆ ಇಬ್ಬನಿಯ ಹೊದೆವಾಸೆ ವಿಸ್ಮಯ
ಮರಳ ತೇಗುವ ಬಿಸಿಯ ಎದೆಯಲಿ
ಬಳ್ಳಿಗೆ ಕಡಲಾಳ ಬೇರುಗಳ ವಿಷಯ

ಎದುರು ಗೋಡೆಯ ಬಸಿರ ಪುಟದಲಿ
ಬರೆದ ಸಾಲಿಗೆ ಹಾಕಬೇಕೇನು ಕನ್ನ!
ಅಕ್ಷರದ ನೆರಳ ನಿಲ್ಲಿಸಲು ಸಾಲಿನಲಿ
ಬೆಂಕಿಕಡ್ಡಿಯ ಕೊನೆಗೆ ಬೆಳಕಿನಾ ಬಣ್ಣ..

ಇಳಿಬಿಟ್ಟ ಜೋಕಾಲಿ ಜೀಕುವಾ ದನಿಗೆ
ಬೇಸರವು ಒಣಗಿರಲು ಮರಕೀಗ ಪ್ರಾಯ..
ಹಸಿದಿದ್ದ ಗಳಿಗೆಯಲಿ ತುತ್ತಿಟ್ಟ ಒಲವಿಗೆ
ಮರಿ ಹೇಗೆ ಮರೆತೀತು ಇನ್ನೀಗ ತಾಯ..

ಋತುಗಳಾ ಸರಪಣಿಗೆ ಹವೆಯಾಯ್ತು ತಂತು
ಅವಕಾಶ ಒದಗಿಹುದೇ ಮಿಲನಕ್ಕೆ ಶೂನ್ಯದಲಿ!
ಮೋಹಗಳ ಮರುದನಿಗೆ ಮನವಾಯ್ತು ಧಾತು
ಜಿನನೆಂತು ಜನಿಸುವನು ಕಟ್ಟಿಟ್ಟ ಗೂಡಿನಲಿ...

                                                             ~`ಶ್ರೀ'
                                                                 ತಲಗೇರಿ

2 ಕಾಮೆಂಟ್‌ಗಳು: