ಗುರುವಾರ, ಜನವರಿ 1, 2015

"ಋಣ"....

          "ಋಣ"....

ನೀಲರಾಶಿಯ ಉಲಕ ರಾಗದಿ
ಹಾಯಿದೋಣಿಯ ಹಗುರ ಚಲನ
ಮರಳ ಮೌನದಿ ಬೆರೆವ ತವಕದಿ
ಬೀರಿ ಸೋಕಿದೆ ಅಲೆಯ ಗಮನ..

ದೂರ ಯಾನವ ನೆನೆದು ಸಾಗಿದೆ
ಅಂತರದ ಹಳಿಗಳ ಅಂತರಂಗದ ಪ್ರೀತಿ..
ಭ್ರಮರ ನೇಹದ ನೆಪದಿ ಅರಳಿದೆ
ಮಂದಾರ ಮಧುವಿನ ಚೆಂದಚಾಮರ ವಿತತಿ..

ಕೊರಳ ಗಾಳಿಗೆ ಶ್ರುತಿಯ ಹಿಡಿಯಲು
ಬಿದಿರ ಕೊಳವೆಯ ನುಡಿಸಬೇಕು ಬೆರಳು..
ವಿರಳ ದಾರಿಗೆ ಸೆಳೆತ ಕೊಡಲು
ಎದೆಯ ಕೊಳದಲಿ ಕರೆಯಬೇಕು ಅಮಲು..

ಮಳೆಯ ಉಲಿಯ ಲಹರಿ ಸುಳಿಯಲು
ನವಿಲು ಸಲುಗೆಗೆ ನೆಲದ ತೀರ ಕಾತರ..
ಉಳಿದ ಎಲೆಯ ಜೊತೆಗೆ ಕೂಡಲು
ತಳಿರ ತವಕಕೆ ಉರುಳಬೇಕು ಶಿಶಿರ..

ಮನೆಗೆ ಬೇಲಿಯು ಮಿತಿಯ ಪರಿಧಿ
ಬಂಧಿಯಲ್ಲ ಬಿಂದುವಲ್ಲಿ ಹವೆಯ ಋಣವು..
ನನಗೆ ಸೇರಿಯೂ ಬೇರೆ ತರದಿಂದಲೂ
ಬೆಳಕಿನಲ್ಲಿ ಆಚೆ ನಿಲದೇ ನೆರಳ ಹರವು..!!

                                                   ~`ಶ್ರೀ'
                                                       ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ