ಸೋಮವಾರ, ಜನವರಿ 12, 2015

"ಬುದ್ಧನಾಗಿಲ್ಲ..."

 "ಬುದ್ಧನಾಗಿಲ್ಲ..."

ಕಾಷಾಯದಾಶ್ರಯದಲ್ಲಿ
ಧರ್ಮ ಕರ್ಮಗಳ ಕಡೆದು
ನವನೀತ ಪಡೆವ
ತಾಳ್ಮೆ ನನಗಿಲ್ಲ...
ನನ್ನೆದೆಯರಮನೆಯ
ಮೂಲೆ ಮೂಲೆಯಲೂ ಅನುರಣಿಸುತಿದೆ
ನಾನಿನ್ನೂ ಬುದ್ಧನಾಗಿಲ್ಲ...

ಸ್ಖಲಿತ
ಬೆಳಕ ಚೂರಿನ ಸ್ವಪ್ನ
ಎಡೆಬಿಡದೇ
ಕದಡುತಿದೆ ಬಿಂಬ...
ಭ್ರಮೆಯ ತೊಲಗಿಪ ರವಿಯು
ಬಾಂದಳದಿ ಹುಟ್ಟಿಲ್ಲ...
ನಾನಿನ್ನೂ ಬುದ್ಧನಾಗಿಲ್ಲ...

ಕಲ್ಲೆದೆಯ ರಾಗ
ಕುಸುರಿಯಲಿ ಸೃಜಿಸಿಲ್ಲ...
ಉಳಿಪೆಟ್ಟು ಬಿದ್ದಿಲ್ಲ..
ಕರಗಬೇಕಿದೆ ದಾಹ..
ನಾನಿನ್ನೂ ಬುದ್ಧನಾಗಿಲ್ಲ...

ಅವಸರದ ಕರೆಗೆ
ಪ್ರತಿ ಗಳಿಗೆ ಮೆರವಣಿಗೆ..
ಕಮಲದಾ ಎಲೆಯ
ಹನಿ ಜಾರಿ ಬೆರೆತೀತು...
ಬೇರುಗಳಲಿ
ಹರಡಿಹುದೇ ಮೋಹ...
ನಾನಿನ್ನೂ ಬುದ್ಧನಾಗಿಲ್ಲ...

                        ~‘ಶ್ರೀ’
                           ತಲಗೇರಿ


2 ಕಾಮೆಂಟ್‌ಗಳು:

  1. ಸಾವಿರ ಚಪಾಳೆಗಳಿಗೆ ಭಾಜನವಾಗಬೇಕಾದ ಬಹು ಅರ್ಥದ ಈ ಸಾಲುಗಳು ಮನಗೆದ್ದವು:
    "ಕಲ್ಲೆದೆಯ ರಾಗ ಕುಸುರಿಯಲಿ ಸೃಜಿಸಿಲ್ಲ... ಉಳಿಪೆಟ್ಟು ಬಿದ್ದಿಲ್ಲ.. ಕರಗಬೇಕಿದೆ ದಾಹ.. ನಾನಿನ್ನೂ ಬುದ್ಧನಾಗಿಲ್ಲ..."

    ಪ್ರತ್ಯುತ್ತರಅಳಿಸಿ