ಶನಿವಾರ, ಮಾರ್ಚ್ 21, 2015

"ಗತಿ..."

     "ಗತಿ..."

ಕಾಲನಾ ಕವಿತೆಯಲಿ
ಅಕ್ಷರವ ಬಿತ್ತು
ಕನಸು ತುಂಬಿದ ಲೇಖನಿಯೇ..
ಆಲದಾ ಮೂಲವನು
ನನಗೆ ತೋರಿಸಿಯೇನು
ಕಾಡು ಮಣ್ಣಿನಾ ವಾಸನೆಯೇ..

ಹಸ್ತರೇಖೆಯು ಯಾಕೋ
ಹರಡುತ್ತ ಹುಡುಕುತಿಹುದೇ,
ಆದಿಯನು,ಅಂತ್ಯವನು
ಇಲ್ಲಾ ಮಧ್ಯಂತರದ ಸ್ಥಿತಿಯನು..
ಮತ್ತೆ ಮಾಗುವ ಗತಿಯನು..

ಹದ ಬೇಕೇ ನಿಲುವಿಗೆ,
ಮುಗಿವ ಚಂದ್ರನ ಬೆಳಕು
ಕರಗಿಸೀತೇ ಇಷ್ಟುದ್ದ ನೆಳಲನು..
ಹಗಲು ಬಂದರೆ ಸಾಕೇ,
ಶೂನ್ಯವೆಲ್ಲವೂ ತುಂಬಿಕೊಳಲು ಇನ್ನು..
ಪರಿಧಿ ಹೇಗೆ ಇದ್ದೀತು ಹೊರಗೆ
ಮೀರಿ
ಕೇಂದ್ರ ಬಿಂದುವಿನ ಸೆಳೆತವನ್ನು..

ವಕ್ರದೇಹದ ಅವಧಿ ಮುಗಿಸಲು
ಲೆಕ್ಕವಿಟ್ಟಿದೆ ಋತುವು..
ಸೊಕ್ಕುವಾಗಿನ ಬಡಿತ
ಮುಟ್ಟಬಲ್ಲದೇ ಕೊನೆಯ ಪಲುಕು..
ಆರುವಾ ಮುನ್ನ ಎಂದೋ ಹಚ್ಚಿಟ್ಟ ಮಿಣುಕು..

                                              ~‘ಶ್ರೀ’
                                                  ತಲಗೇರಿ

2 ಕಾಮೆಂಟ್‌ಗಳು: