ಭಾನುವಾರ, ಏಪ್ರಿಲ್ 19, 2015

"ಅರ್ಥ"...

           "ಅರ್ಥ"...

ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ
ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ..
ಬರೆದ ಪದಗಳಾ ಅಂತರದ ನಿಲುವಿಗೆ
ಕಾರಣದ ಲೇಪವಿಹುದೇ ಲೇಖನಿಯ ತುದಿಗೆ..

ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ
ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ..
ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ
ತುಂಬಿಬಂದೀತು ಬಾನು,ಬೆಳಕ ನೆರಳಿನಲಿ..

ಅಂಕುಡೊಂಕಿನ ಪಥದ ಕೊನೆಗೆ
ಚಾಚಿಕೊಂಡಿದೆಯೇನು ನಿಟ್ಟುಸಿರ ಗಮ್ಯ..
ಬಿಂಕ ಸೋಕಿದ ಹೆಜ್ಜೆ ದನಿಗೆ
ಹೇಳಿಕೊಟ್ಟಿತೇ ಹವೆಯು ಹರಿತದಾ ರಮ್ಯ..

ಸುಮದ ಜೇನ ಸತತ ಹೀರಿಯೂ
ಪತಂಗದಾ ರೆಕ್ಕೆಗಿಲ್ಲ,ಎಸಳ ಬಣ್ಣ..
ಅಮಲು ಸ್ಪರ್ಶದ ಪ್ರವರ ಭೇಟಿಯು
ಹಂಗಿನಾಚೆಗೂ ಮೀರಿದೆ ಗರ್ಭದಾ ತನನ..

ಹನಿಯುದುರಿ ಹಸನಾಯ್ತು ಹರೆಯದಾ ಸ್ವಾರ್ಥ
ಮಣ್ಣಿನಲಿ ಚಿಗುರಿತ್ತು ನೂರು ಆಗಸ..
ವಿನಿಮಯದ ಕೊನೆಯಲ್ಲಿ ಉಳಿದಿದ್ದು ಅರ್ಥ
ಬರೆದಾಯ್ತು ಸೋಜಿಗದ ತಾಜಾ ವಿನ್ಯಾಸ..

                                           ~‘ಶ್ರೀ’
                                              ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ