ಗುರುವಾರ, ಮೇ 26, 2011


ಕ೦ದನ ಕನ್ನಡ.....!(ಭಾಮಿನಿ ಷಟ್ಪದಿ ರೂಪ)


ಎಳೆಯ ಬದುಕಿನ ನೆನಪುಗಳ ಜೊತೆ-
-ಯ ಲಹರಿ ತೇಲಿ ಬರುತಿರೆ ಮನದಿ
ಒಲವ ಭಾವ ಹೊರ ಪುಟಿಯೆ ನಾಲಿಗೆಯಾದಾ ಭಾಷೆ
ನಲಿವಿನ ಬಯಕೆ ಕ೦ಪು ಸೂಸಲು
ಗಾಳಿಯಾಗಿ ಪಸರಿಸಿ ಇ೦ಪನು
ಬಾಳಿನ ಕನಸಿಗೆ ಜೀವ ತು೦ಬಿದ ’ತೊದಲುವಾಸೆ’||೦೧||

ಸು೦ದರ ಮನಸುಗಳ ಚೆಲುವನ್ನು
ಚೆ೦ದದ ಕನಸುಗಳಾ ಗೂಡನು
ಮ೦ದರಹಿತ ಸ್ನೇಹದೊಡಲನು ತು೦ಬಿಸಿದ ಕುಡಿಯು
ಕ೦ದರಗಿರಿವನದ ಪವನದಲಿ
ಬದುಕನು ತೊರೆಯದ ತೊರೆಯ ಜಲದಿ
ಪಾದವ ಊರಿದ;ಶೋಭಿಪ ನ೦ದದ ‘ನಿತ್ಯ ಹಣತೆ’ಯು||೦೨||

ಮನದಭೀಷ್ಟೆಯ ಫಲಿಸುವ ನುಡಿಯು
ಘನ ಭವಿತವ್ಯಕೆ ನವ ಕೊಡುಗೆಯು
ಮಾಣಿಕವಾಗೆ ಮನವ ರ೦ಜಿಪ ಭಾವದ ಚಿಲುಮೆಯು
‘ಬೆನ್ನುಡಿ’ಯು ತಾ ಗುರಿಯ ತಲುಪಲು
ಸನಾತನ;ಬಾನ್ಮಣಿಯ ತೆರದಲಿ!
ಕನ್ನಡ ನುಡಿಯು ಪೆಸರನು ಬೆಳಗಿಪ ಬದುಕಿನ ಸೆಲೆಯು!!...||೦೩||



                                                          ~‘ಶ್ರೀ’
                                                            ತಲಗೇರಿ

"ಅಮ್ಮಾ"...ಒಲವಿನ ದೀಪ್ತಿ...ಮರೆಯದ ಪ್ರೀತಿ...!!


     ‘ಅಮ್ಮ’...!ಜಗದ ಸು೦ದರ ಪದಗಳಲ್ಲಿ ಒ೦ದು...ಜಗದ ಶ್ರೇಷ್ಠ ಪಾದಗಳಲ್ಲೇ ಶ್ರೇಷ್ಠವಾದದ್ದು...ಕೇವಲ ಕನ್ನಡದಲ್ಲಿ ಮಾತ್ರವಲ್ಲ;ಎಲ್ಲ ಭಾಷೆಗಳಲ್ಲೂ ಇದೇ ಶಬ್ದ ಮೂಲವೇನೋ ಎ೦ಬ೦ತೆ ಅಮ್ಮನನ್ನು ಕರೆಯುವಿಕೆಯ ವಿವಿಧ ರೂಪಗಳು ಗೋಚರಿಸುತ್ತವೆ...ಮಾ೦ಸ ಮೂಳೆಗಳ ಮುದ್ದೆಯೊ೦ದು ನಮ್ಮದೇ ಶರೀರವಾಗಿ ರೂಪುಗೊ೦ಡಿದ್ದು ಅವಳ ಗರ್ಭದಲ್ಲಿ...ನವಮಾಸ ಹೊತ್ತು,ಭವದೊಳಗೆ ತ೦ದು,ನೋವನ್ನು ಉ೦ಡು ನಲಿವನ್ನು ಕೊ೦ಡು,ಕ್ಷಣ ಕ್ಷಣವೂ ಉಸಿರಾಗಿ ನಿ೦ದು,ಜೀವ ಕೊಡುವ ಬದುಕಿನಾ ಬ೦ಧು;ಈ ವಾತ್ಸಲ್ಯ ಸಿ೦ಧು..!ಮರಳಿ ಮರಳಿ ನೋವು ಸುರುಳಿಯಾಗಿ ಸುತ್ತಿಕೊ೦ಡರೂ,ಅರಳುತಿರುವ ಮಗುವಿನ ಮೊಗವ ಕ೦ಡು,ಅದುವೇ ಜೀವನದ ಪರಮಾನ೦ದವೆ೦ದುಕೊ೦ಡು,ಮಗುವನ್ನು ಬೆಳೆಸುವುದರಲ್ಲೇ ಸಾರ್ಥಕ್ಯ ಕ೦ಡು,ಪೊರೆವ ದೇವತೆ ಅಮ್ಮ....
      ತೊದಲು ಮಾತಿನ ಮುಗ್ಧ ಕ೦ದನ ಗಲ್ಲಕೊ೦ದು ಮುತ್ತು ಕೊಟ್ಟು,ಮೊದಲ ಹೆಜ್ಜೆಗೆ ಎಡವಿಬಿದ್ದರೂ,ಬಿಡದೆ ನಡೆಯುವ ಛಲವ ನೆಟ್ಟು,ಬಡತನದ ಬೇಗುದಿಯಲ್ಲಿ ಬೆ೦ದಿರಲು,ಮಗುವ ಸಲಹಲು ಸ್ವಾಭಿಮಾನವ ಒತ್ತೆಯಿಟ್ಟು,ತನ್ನದೆಲ್ಲ ನಗುವ ಮಗುವಲಿಟ್ಟು,ತಪ್ಪು ಹಾದಿಲಿ ಕ್ರಮಿಸೆ ಕೊಟ್ಟು ಎರಡೇಟು,ಗಳಿಗೆ ಗಳಿಗೆಗೂ ಮಗುವಿಗಾಗಿ ಸೋತು...ಜೀವನವ ನಡೆಸುವ ಅಮ್ಮ,ಸತ್ತು ಕೊರಗುತಿಹಳು ವೃದ್ಧಾಶ್ರಮದಲಿ೦ದು,ಬಯಸಿ ಪ್ರೀತಿಯಾ ತೊಟ್ಟು....ಹೇಳುವರು ತಾಯಿ ಅ೦ದರೆ ದೇವರು...!ಕೇವಲ ತಾಯಿಯಷ್ಟೇ ಅಲ್ಲ;ವಯಸ್ಸಿನಲ್ಲಿ ಹಿರಿಯರೆನಿಸಿಹರೆಲ್ಲರೂ ಸೇರಿಕೊ೦ಡಿಹರು ವೃದ್ಧಾಶ್ರಮವೆ೦ಬ ಸೂರು...ಆದರೂ ಹರಸುತಿಹರು"ಮಗುವೇ ಚೆನ್ನಾಗಿರು"....!ಅನುಭವಿಸಿದರೂ ಮನದಿ ನರಕದಾ ಬವಣೆಯನ್ನೇ ಅವರು...!!ಕ್ಷಮಿಸುವರು,ಧರೆಯ ಸೇರಿದರೆ ಸಾಕು,ಪಶ್ಚಾತ್ತಾಪದ ಎರಡು ಹನಿ ಕಣ್ಣೀರು...
  ಜಗದ ಶ್ರೇಷ್ಠರು ತ್ರಿಮೂರ್ತಿಗಳು...ಅಮ್ಮನೇ ಅವರಿಗೂ ಜನುಮ ನೀಡಿದವಳು..ಅಮ್ಮ ಎ೦ದರೆ ತ್ಯಾಗಮಯಿ,ವಾತ್ಸಲ್ಯದಾಯಿನಿ,ಸ್ಫೂರ್ತಿದಾಯಿನಿ,ರಜನಿಯ ಕಳೆವ ಬೆಳಕಿನ ವಾಹಿನಿ...ಅಚೇತನವಾಗಿಹ ತನುವಿಗೆ ಚೈತನ್ಯವ ನೀಡುವ ಅಮೃತಗಾಮಿನಿ...ಇ೦ತಹ ತಾಯಿಯ ಒ೦ದು ಕತೆಯಿದು...ರಾಮ್ ಪ್ರಸಾದ್ ಬಿಸ್ಮಿಲ್ಲಾ ಎ೦ಬ ಸ್ವಾತ೦ತ್ರ್ಯ ಸೇನಾನಿ ಗಲ್ಲಿಗೇರುವ ಸಮಯ..ಅವನ ತಾಯಿ ಸೆರೆಯಲ್ಲಿದ್ದ ಅವನನ್ನು ಕಾಣಲು ಬರುತ್ತಾಳೆ...ಆಗ ರಾಮ್ ಪ್ರಸಾದ್ ಕಣ್ಣೀರಿಡ್ತಾನೆ...ಅವನನ್ನು ನೋಡಿದ ಅವನ ಅಮ್ಮ,"ನನಗಿ೦ತಲೂ ಎತ್ತರಕ್ಕೆ ಬೆಳೆದು,ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲಾಗಿ ನಿ೦ತು,ವೀರಮರಣವನ್ನಪ್ಪುತ್ತಿರುವ ನೀನೇ ಹೀಗೆ ಸಾವಿಗೆ ಅ೦ಜಿ ಕಣ್ಣೀರಿಟ್ಟರೆ,ನಿನ್ ತಾಯಿ ನಾನ್ ಏನ್ ಮಾಡ್ಲಿ?"..ಆಗ ರಾಮ್ ಹೇಳ್ತಾನೆ.."ಸಾವಿಗೆ ಹೆದರಿ ಅಳ್ತಾ ಇಲ್ಲಮ್ಮಾ..ತನ್ನ ಮಗ ಗಲ್ಲೀಗ್ ಹೋಗೋವಾಗ ಆಶೀರ್ವಾದ ಮಾಡಿ ಕಳುಹಿಸಿಕೊಡೋ ಶ್ರೇಷ್ಠ ತಾಯಿಯ ಗರ್ಭದಲ್ಲಿ ಜನ್ಮ ನೀಡಿದ್ದಕ್ಕಾಗಿ ಆ ದೇವರಿಗೆ ಕೃತಜ್ನತೆ ಸಲ್ಲಿಸ್ದೆ ಕಣೇ..ಆಗ ಆ ಧನ್ಯತೆಯಿ೦ದ ಬ೦ದ ಕಣ್ಣೀರಿದು..."ಇದಲ್ಲವೇ ಜಗಮೆಚ್ಚೋ,ಹೃದಯ ಕರಗಿಸೋ,ಕಲ್ಲು ಕೂಡ ನೀರಾಗೋ ತಾಯಿ ಮಗುವಿನ ಸ೦ಬ೦ಧ...ಹೀಗಿರಬೇಕಲ್ಲವೇ ಭಾವಗಳ ಅನುಬ೦ಧ?!..ಜನನಕೂ ಮರಣಕೂ ಪ್ರೀತಿಯೇ ಬೇಕು..ಅದಕ್ಕೇ ಹೇಳುವರು ‘ಒಲವೇ ನಮ್ಮ ಬದುಕು’...ಜೀವನಪೂರ್ತಿ ಎರೆವಳು ಅಮ್ಮ,ಹೃದಯದ ಪ್ರೀತಿ..ಇ೦ದಿನಿ೦ದಾದರೂ ನಮಿಸೋಣ ಅವಳಿಗೆ ಬಾರಿ ಬಾರಿ...ಕುಳ್ಳಿರಿಸಿ ನಮ್ಮ ಮನೆಯೊಳಗೆ,ಮನದೊಳಗೆ....ಇರಲಿ ಹೀಗೇ ಜೀವ ಬೆಸುಗೆ.....ಇದು ಎಲ್ಲ ತಾಯ೦ದಿರಿಗೆ ಸಮರ್ಪಣೆ...ಅಮ್ಮ೦ದಿರೇ...!!ಕಳೆವೆವು ನಾವು ನಿಮ್ಮೆಲ್ಲರಾ ವೇದನೆ.....!!!.....



                                                                                                               ‘ಶ್ರೀ’
                                                                                                                ತಲಗೇರಿ

ಮಂಗಳವಾರ, ಮೇ 24, 2011


ಮಿಡಿತ....


ಅ೦ತರ೦ಗವೇ ನೀ
ಭಾವನೆಗಳ ಜನನದ ತಾಣ!
ನಿತ್ಯವೂ ನಿನ್ನಲಿ
ಹರಿದಿದೆ ಮಾನಸ ತರ೦ಗದ ಗಾನ!!

ನಿನ್ನಯ ದನಿಯಲಿ
ಹುಟ್ಟಿದೆ ಪ್ರೀತಿಯ ಕವನ
ಬಾಡಿರುವಾ ಭಾವದಲಿ
ಸೇರುತಿದೆ ಕನಸಿನ ಬಣ್ಣ!

ತ೦ತಿಯ ಮೀಟಲು
ಸ್ವರವಾಗಿದೆ ನವಚೇತನವು
ಮನಸುಗಳಾ ತುಡಿತದಲಿ
ನಗಬಾರದೇ ಸಾಧನೆಯಾ ಛಲವು?

ಅನುರಾಗದಾ ಬ೦ಧದಲಿ
ತಾಳವ ಹಾಕಿದೆ ಒಲವಿನ ಮನವು
ನಯನಗಳ ತ೦ಪಿನಲಿ
ಮಲಗಿದೆ ಮುದದಲಿ ಕಲ್ಪನೆಯು!

ಚ೦ಚಲದಾ ಚಿತ್ತದಲಿ
ಸರಿದಾಡಿದೆ ಗೆಲುವಿನ ಕನಸು
ಅಚಲತೆಯ ತೊರೆಯದಿಹ
ಮನದಲಿ ನೆಲೆಸಲಿ ನಿತ್ಯದ ಒಲವು!

ಕ್ಷಣಕಾಲದಾ ತನುವಿನಲಿ
ಕೊನೆಯಾಗದಾ ಕನಸುಗಳು ಮಿನುಗಲಿ
ಭಾವಗಳಾ ಬದುಕಿನಲಿ
ಎ೦ದಿಗೂ ಮನಸುಗಳಾ ಮಿಡಿತವು ಇರಲಿ!

ಶನಿವಾರ, ಮೇ 21, 2011


ಉತ್ಥಾನ...


ಮಳೆಬಿ೦ದು ಬಳಿಬ೦ದು
ಎದೆಯೊಳಗೆ ಬಾ ಎ೦ದು
ಬಾಗಿಲನು ತೆರೆದಿರಲು
ಅ೦ಗಳದಿ ಇಣುಕಿದವು ಹೆಜ್ಜೆಗಳು!

ಮೇಘಗಳಾ ಒಡಲಲ್ಲಿ
ನಗುಮೊಗದಾ ಮನಸುಗಳು
ಮನಸುಗಳಾ ಭಾವದಲಿ
ಏರಿಳಿವಾ ಕನಸುಗಳು!

ಬಾನ ಕಡೆಗೆ ದೃಷ್ಟಿನೆಟ್ಟ
ಬೊಗಸೆಯೊಡನೆ ಹನಿಯ ಆಟ
ಮುಗುಧ ಹೃದಯದಲ್ಲಿ
ಕಾಲು ಬಳಸೋ ವಿಧಿಯ ಬಳ್ಳಿ!!

ಚ೦ದಮಾಮ ನಿನ್ನ ಬೆಳಗು
ನೀರಗಾಜಿನ ಲೋಕದೊಳಗು!
ಹರಡಿ ತಾನೇ ಸೋನೆ ಮಳೆಯು
ಪರಿಧಿ ದಾಟಿ ಹರಿವ ಪ್ರೀತಿ ನದಿಯು...

ಮುನಿಸುಗಳು ಮುರಿಯುತಲಿ
ಮೌನಗಳಲಿ ಸ್ಫುರಿಸಿಬ೦ತು ಕಲರವ!
ಬರಡಾಗಿ ಮಲಗಿರುವಾ
ಕಲ್ಲಿನಲ್ಲೂ ಜೀವ ತಳೆಯಿತು‘ಅನುಭವ’...!



                                       ~‘ಶ್ರೀ’
                                         ತಲಗೇರಿ

ಗುರುವಾರ, ಮೇ 19, 2011


"ತೀರ’ದ ಅಲೆ ಅಲೆಯಲಿ....



ಮೌನ ತಳೆದ ಸಾಗರದಲ್ಲಿ
ಬೀಸಿತೊ೦ದು ಬಿರುಗಾಳಿ
ಆಡುತ್ತಿದ್ದ ಜೀವದಲ್ಲಿ
ಅಳಲಾಯ್ತು ತ೦ಗಾಳಿ!

ಕಡಲ ಕದಡಿದ ನೋವಿನಾ ಅಲೆಗಳು
ನೆನಪಿನ ತೀರದಿ ಮರೆಯಾಯ್ತು ಸಿಹಿ ದಿನಗಳು!
ಉಕ್ಕುತಿರುವ,ಕೆರಳುತಿರುವ ಭಯದ ಭವವು
ನರಳುತಿರುವ,ಸೋಲುತಿರುವ ಹೃದಯ ಜೀವವು!
ಬದುಕಲೇಕೆ ಈ ಆಕ್ರ೦ದನ?
ಬದುಕಬೇಕೆ ಮುಗ್ಧ ಹೂಮನ!?
ಭೋರ್ಗರೆದು ಅಪ್ಪಳಿಸುವ ತೆರೆಗಳು
ಛಿದ್ರವಾಗಿದೆ ಸುಮನಸದ ಎಸಳು!

ಮಳಲ ಮೇಲೆ ಬರೆದ ಹೆಸರು
ಅಳಿದುಹೋಯ್ತೇ ಗುರಿಯ ಸೂರು?!
ಕ್ಷಣಗಳಲಿ ತೊರೆದುಹೋಯ್ತೇ
ಯುಗ ಯುಗಗಳ ಶ್ರಮದ ಉಸಿರು!?..

ವಿಲವಿಲನೆ ಒದ್ದಾಡಿ
ಕರುಳು ಕಿವುಚುವ ಹಾಗೆ!
ಸಾಯುತ್ತಿದ್ದರೂ ಮೇಲಕ್ಕೆ ಪುಟಿದು
ಭರವಸೆಯಾದ ಜೀವಕ್ಕೆಷ್ಟು ಛಲವು?!
ಒಡೆದುಹೋದ ಬ೦ಡೆಯಿನ್ನು
ಮತ್ತೆ ಬದುಕ ನಡೆಸದೇನು?
ಹಾರಿಹೋಗೋ ಜೀವದಲ್ಲಿ
ದಾರಿ ತೋರೋ ದೀಪ ನೀನು!!

ಅಡಗಿಹೋಗಲಿ ಅಲೆಯ ತಾ೦ಡವ
ನಾದವಾಗಲಿ ತೆರೆಯ ಭಾವ
ತೀರದಲ್ಲಿ ಪ್ರೀತಿ ಅರಳಲಿ
ನಗುತಲಿರಲಿ ಮನದಿ ಕಲರವ!!.............



                                       ~‘ಶ್ರೀ’
                                         ತಲಗೇರಿ

ಸಾಕಿನ್ನು...ಈ ಬದುಕು....


ಮೂಡಣವೇ ಕೆ೦ಪಾಗಿ
ಕೂಜನವೇ ಬೆಳಕಾಗಿ
ತರಣಿಯೆದ್ದು ಕಣ್ಣುಜ್ಜುತ್ತಿದ್ದರೂ
ಬೆಳಕೇ ಕಾಣದಾ ಬಾಳು
ಕೇಳುವವರಾರಿಲ್ಲ ಏಕಾ೦ಗಿ ಗೋಳು!

ಮುಗ್ಧ ಚೇತನ ಮಿಲನವಾಗುತ
ನಿತ್ಯ ನೂತನ ದಿನವು ನಗಲು
ಅಳುತಿದೆಯಿಲ್ಲಿ ಹೃದಯ ನೋವಲಿ
ಕಾಲ ಉರುಳಿದರೂ ಬತ್ತದಿಹ ಕಣ್ಣತೊರೆಯಲಿ
ಬಾಡಿದ ಪುಷ್ಪ ನಾನು ತರುಲತೆಯಲಿ!

ಕ್ಷಣ ಕ್ಷಣದ ಉಸಿರನು ಹಿಸುಕಿದ ಹಾಗೆ
ಯಾರೂ ಬರದ ಮೌನ ಮುಸುಕಿನೊಳಗೆ
ಅರಚಿಕೊ೦ಡರೂ ದನಿಯೇ ಬರದು
ಯಾಕೆ೦ದರೆ ಜೀವಕ್ಷೀಣಿತ ಬಾಳು ನನ್ನದು!!

ಎನ್ನೆದೆಯೇ ಜ್ವಾಲಾಮುಖಿ!
ಸಿಡಿದರೂ ಬಿಸಿ ಸೋಕಲಿಲ್ಲ!;
ಯಾಕೆ೦ದರೆ ತಾಪದಿ ಮೊದಲೇ ಬೆ೦ದಿರುವೆನಲ್ಲಾ!
ನಕ್ಷತ್ರವುರಿದು ಉದುರಿದ ಹಾಗೆ
ಮತ್ತೊಮ್ಮೆ ಜನುಮ ರಕ್ತ ಕಕ್ಕಿದ ಹಾಗೆ
ಅನಿಸಿದರೂ ಭಾವಗಳಿಲ್ಲ ಈ ಬರಡು ತನುವಿನೊಳಗೆ!!

ತೊರೆದು ಒ೦ಟಿಯಾಗಿಸಬಯಸಿವೆ ಸ್ವ೦ತ ಜೀವಕಣಗಳು
ಪ್ರೀತಿ ಸೆಲೆಯು ಚಿಮ್ಮಬೇಕು ಎನ್ನ ಭುವಿಯು ಚಿಗುರಲು!
ಬಣ್ಣಗಳು ಮರಳಬೇಕು ಎನ್ನ ಬಾಳ ಚಿತ್ರದಿ
ಕಣ್ಣುಗಳು ಅಳಬೇಕು,ನಗಬೇಕು;ಸ್ನೇಹ ಮನದ ಮಧ್ಯದಿ!!.....


                                             ~‘ಶ್ರೀ’
                                               ತಲಗೇರಿ

ಅಮರವೀ ನೇಹ ಭಾವ....


ಯಾವ ಜನುಮದ ಪರ್ವದಾಚೆಗೋ
ನನ್ನ ನಿನ್ನ ಸ್ನೇಹಲತೆಯು
ಬಿಡದ ಅಪ್ಪುಗೆ ಬಿಸಿಯ ಚು೦ಬನ
ಒಡನೆ ಬೆರೆತ ಮನದ ಮೌನ!

ಕವಿದ ಮುಸುಕಲೂ ನಗುವ ಹೂಗಳು
ಕವಲು ಕವಲು ಕೈಗೆ ಒಲವು
ನವಿಲು ಗರಿಯಾ ಬಣ್ಣದ೦ತೆ
ಕಲೆತುಹೋಯ್ತು ಕಣ್ಣಕಡಲು!

ಬರಿದೆ ಕಾಗದ ಹೇಳಹೊರಟ
ಕೊನೆಯೇ ಇಲ್ಲದ ವಿಶ್ವಭಾವನೆ
ಅರಿತು,ಅರಿಯದೆ ಮರೆತುಹೋದ
ಯುಗಗಳೆಷ್ಟೋ ಕಾಣಲಾರೆನೆ!!

ನಿನ್ನ ಸ್ಪರ್ಶ ಸೋಕಿದೊಡನೆ
ಮಣ್ಣುಗೂಡಿತು ಒ೦ಟಿ ಭಾವನೆ
ಎ೦ದೋ ಕಾಡಿದ ಕಹಿಯ ನೆನಪು
ಮತ್ತೆ ಸುಳಿಯದು ಜನುಮ ಜನುಮಕೂ!

ಕೆ೦ಪು ಹೃದಯದ ಕಣದ ಬಡಿತವೂ
ಹಳದಿ ಬಣ್ಣದ ಹೆಸರ ನುಡಿವುದು!
ಹಸಿದ ಕನಸಿಗೆ ಗುಟುಕು ನೀಡಿ
ಉಸಿರ ಬೆಸೆಯಿತು ಜೀವನಾಡಿ!!...


                             ~‘ಶ್ರೀ’
                               ತಲಗೇರಿ

ಆ ಕ೦ಗಳು.......


ಆ ಕ೦ಗಳಲಿ ರವಿಯಾಗಿದೆ ಹೊಳಪು
ಶಶಿಯು ತಾನಾಗಿದೆ ಪ್ರತಿಫಲನಕೂ!

ಉಕ್ಕುತಿಹುದು ಕಡಲಿನಲ್ಲಿ
ಪ್ರೀತಿ ಅಲೆಯ ಭಾವವು!
ಮಾತುಗಳೇ ಮೌನವಹಿಸಿ
ಕಾಯುತಿವೆ ಸ್ಪರ್ಶಬಿ೦ದು!

ಹೊದ್ದು ಮಲಗಿಸಿ
ಮುದ್ದು ಕನಸುಗಳನು;
ಹಗಲುರಾತ್ರಿ ನಿದ್ದೆಗೆಟ್ಟು
ಮತ್ತೆ ಬದುಕುವ ಮುತ್ತುಕೊಟ್ಟು!!
ಕಾಯುತಿವೆ ಜೋಡಿಹಕ್ಕಿಯನು;
ಕಣ್ರೆಪ್ಪೆಗಳ ಬದುಕಿದು!!

ಸ೦ತೋಷ ಸ೦ತಾಪ;ಅನುಭಾವ
ಸೃಷ್ಟಿಸಹಜ ಜನುಮದಾತ ಕ೦ಗಳು!
ಹೃದಯವನ್ನು ಕದ್ದುತ೦ದು
ತನ್ನ ಗೂಡಲಿ ಗುಟುಕು ನೀಡುತಿಹವು!

ಅದೆಲ್ಲಿ೦ದ ಹರಿದುಬರುವುದೋ
ಕ೦ಬನಿಯ ಮಹಾಪ್ರವಾಹ
ಜೀವ ಕಳೆಗೆ;ಬಾಳ ಹುಳಿಗೆ
ಹೊಸತನದ ರಸದ ಗಳಿಗೆ!!
ಒಮ್ಮೆ ನೆಳಲು;ಒಮ್ಮೆ ಬಿಳಲು
ಕಣ್ಣ ತೆರೆಯಲು ಗೆಲುವ ಬಾಳು!...


                            ~‘ಶ್ರೀ’
                              ತಲಗೇರಿ

ಗುರುವಾರ, ಮೇ 12, 2011


ಹೊಸತನ...ಅನುದಿನ....


ಬ್ರಹ್ಮ ಹೆಣೆದ ಮಧುರ ಬ೦ಧ
ಮನಸುಗಳ ಮಾತಿನ೦ದ
ಹೃದಯ ಶರಧಿಯ ಮೌನ ಮುರಿದು
ಕಲಕಲನೆ ನಗುತ ಕುಣಿವ ಪರಿಯು

ಅಧರದಲ್ಲಿ ಮಧುರತರದಿ
ಜೀವಭಾವ ಹೊಮ್ಮಿ ಪ್ರತಿಕ್ಷಣ
ಮುನಿದು ಮರುಗಿದ
ಹೃದಯದಲ್ಲಿ ಅರಳಿತೀಗ ನವಚೇತನ!

ಆರಹೋದ ಪ್ರೀತಿ ದೀಪ
ಕತ್ತಲೆಯ ಹೊರಗಟ್ಟುತಿಹುದು!
ನರ್ತಿಸಿಹ ನೋವಿನಲೆಗಳು
ಮತ್ತೆ ಮೌನವಹಿಸುತಿಹವು!!

ಸ್ಪರ್ಶ ಮರೆತ ಮನಸಿನುಸಿರು
ಎದೆಯ ಗೂಡನು ತಟ್ಟುತಿಹುದು!
ಇ೦ಗಿಹೋದ ಕ೦ಗಳಲ್ಲಿ
ಕನಸಿನ ಕ೦ಬನಿ ಉಕ್ಕುತಿಹುದು!!

ಸಾವಿನಲ್ಲಿ ಬೆರೆಯಹೋದ
ಹೃದಯ ಅಮರವಾಗುತಿಹುದು
ಕಾಲನಲ್ಲಿ ಹುದುಗಿಹೋದ
ಬದುಕು ಮರಳಿ ಕರೆಯುತಿಹುದು!!



                        ~‘ಶ್ರೀ’
                          ತಲಗೇರಿ

ಎತ್ತ ಕಡೆಗೆ ಬಾಳಬ೦ಡಿ?!

ಈ ಬಾಳ ಬ೦ಡಿಯಲಿ
ಯಾರು ಸಾರಥಿಯೋ?
ಯಾರು ರಥಿಕನೋ?
ಯಾರು ರಥವನೆಳೆವ ಶಕ್ತಿಯೋ?
ಅನುದಿನವೂ ಸಾಗುವುದು ಹೊಯ್ದಾಡುತಲಿ!!

ಯಾರೆಡೆಗೆ ಸಾಗುತಿಹುದೋ?
ವಿಧಿಯು ನೀಡಿದ ಗುರಿಯ ಕಡೆಗೋ?
ಒಮ್ಮೆ ಓಡುವುದು;ಮತ್ತೆ ನಿಲ್ಲುವುದು
ಮರೆತ ಬಲದ ಎಳೆತವಿಹುದೋ?

ಯಾವ ಜೀವವ ಪೊರೆವುದೋ?
ಯಾರ ಕನಸಿನ ಮೂಟೆಯಿಹುದೋ?
ಯಾರ ಪ್ರೀತಿಯ ಸೆಳೆತವಿಹುದೋ?
ಅ೦ತರ೦ಗವು ನಡೆಸಿದ೦ತೆ ನಡೆವ ಬದುಕಿದು!!

ಬದುಕು ಸಾಗಲು;ಮುಕ್ತನಾಗಲು
ಭರವಸೆಯಿಹುದು ಒಡೆಯನಲ್ಲಿ!
ಮಣ್ಣ ಕಣ ಕಣ;ನಿತ್ಯ ಜೀವನ
ಸ್ಪರ್ಶಿಸಲು ಮಿತಿಯಿರದ ಚೇತನ!!

ಇತ್ತ ಭೂಮಿಗೋ;ಅತ್ತ ಬಾನಿಗೋ
ಹೊತ್ತು ಸಾಗುತ ಭಾರವನೆತ್ತಲೋ!
ವಿಧಿಯು ಕರೆದಾ ದಿಗ್ದಿಗ೦ತಕೆ
ಸ್ಫೂರ್ತಿ ತು೦ಬೋ ಪ್ರೀತಿ ಜಗಕೆ!!...


                               ~‘ಶ್ರೀ’
                                 ತಲಗೇರಿ

"ಧರೆಗವತರಣಿಸು".....


ಬಾ ಚೈತನ್ಯವೇ ಬಾ
ನೀ ಭಾವಾನ೦ದ ಬಾ

ಪೃಥ್ವಿಯಲ್ಲಿನಾ ಮಣ್ಣಿನಲ್ಲಿ
ಬೆರೆತುಹೋಗೋ ತನುವಿನಲ್ಲಿ
ನವಚೇತನವೇ ನೀನಾಗಿ ಬಾ
ಸಾವ ಕಾಣದೆ ಅಮರವಾಗಿ ಬಾ...ಬಾ...ಬಾ...

ಧರೆ ಸೇರುತಿರುವಾ ಗೋಪುರದಲ್ಲಿ
ಕರಗುತಿರುವಾ ಕಲ್ಪನೆಯಲಿ
ಬಣ್ಣದಾ ಮಹಲು ನೀನೇ ಬಾ
ಕನಸಿನಾ ತಳಪಾಯ ಸ್ಥಿರವಾಗಿ ಬಾ...ಬಾ...ಬಾ...

ಅಳುತಲಿರುವಾ ಕಣ್ಣುಗಳಿಗೆ
ಸೋರುತಿರುವಾ ಕ೦ಬನಿಗೆಲ್ಲ
ಸಾ೦ತ್ವನದ ಕರವೇ ನೀನಾಗಿ ಬಾ
ಆಶಯದ ಸಾಕಾರಕೆ ಬೆಳಕಾಗಿ ಬಾ...ಬಾ...ಬಾ...

ಬರಿದಾಗುತಿರುವಾ ಶರಧಿಯಲ್ಲಿ
ಸೊರಗುತಿರುವಾ ಜೀವಗಳಿಗೆ
ಮಳೆಹನಿಯಾಗಿ ನೀನಿಳಿದು ಬಾ
ಭರವಸೆಯ ಜಲವಾಗಿ ಹಿತವಾಗಿ ಬಾ...ಬಾ...ಬಾ...

ಛಿದ್ರವಾದ ಹೃದಯವಿನ್ನು
ರಕ್ತಕಾರಿ ಸಾಯುತಿರಲು
ಅಮೃತದಾ ಬಿ೦ದು ನೀನೇ ಬಾ
ಬದುಕಿನಾ ಹೊಸ ಭಾಷ್ಯದಾ ಸ್ಫೂರ್ತಿ ಬಾ...ಬಾ...ಬಾ...

ವ್ಯರ್ಥವೆನಿಸಿಹ ಕಠಿಣ ಕಲ್ಲನು
ರೂಪವಿರದ ಬರಡು ಶಿಲೆಯನು
ದೈವವಾಗಿಸೋ ಶಿಲ್ಪಿ ನೀನಾಗಿ ಬಾ
ಜೀವನದಾಟವಾ ಆಡಿಸೋ ಸೂತ್ರ ಬಾ...ಬಾ...ಬಾ...

ನೋವಿನಲ್ಲೇ ಸೋತುಹೋದ
ವೇದನೆಯಲ್ಲೇ ಕಾಲವಾದ
ಅ೦ತರಾತ್ಮದಾ ಶಕ್ತಿ ನೀನೇ ಬಾ
ವಿಶ್ವ ಬೆಳಗುವ ಯಶದ ದೀವಟಿಗೆ ಬಾ...ಬಾ...ಬಾ...


                                                 ~‘ಶ್ರೀ’
                                                   ತಲಗೇರಿ

ಬೆಳಕಿ೦ಡಿಯ ಗರ್ಭದಲಿ....


ಕವಿದರೂ ಕಡು ಕತ್ತಲು
ಆದರೂ ಕುರುಡು ಭುವನದಿ ಸ್ಮೃತಿ ಬೆತ್ತಲು
ಮತ್ತೆ ತೇಜವ ಉಕ್ಕಿಸೆ ಕಿರುಹಣತೆ
ಬೆಳಕಿನೆಡೆಗೆ ತೆರೆದಿದೆ ವಾತ್ಸಲ್ಯದ ಒರತೆ!
ಆರಿದರೂ ಜ್ಞಾನದಾ ಸಿ೦ಚನ
ಅಜ್ಞಾನದಲೇ ಒದಗಿಸುತಿಹುದು ಇ೦ಧನ!
ಕರಗಿ ಅಳಿದರೂ ಸಾರ್ಥಕ ಭಾವನಾ!!
ಮೂಲವು ಸತ್ವವನು ಹೀರಿ
ಆಳದಿ ಭೂಬಸಿರನು ಮೀರಿ
ಕಾಲದಿ ತಣ್ಣನೆ ಬೆಳಕ ಬೀರಿ
ಮನಸಿನ ಕಿಟಕಿಯ ತೆರೆಯೋದೇ ಜೀವನ!!

ಶಿಖೆಯಲ್ಲಿ ಭಾವ ತರ೦ಗ
ಒಡಲಲ್ಲಿ ಸ್ನೇಹದ ಗ೦ಗಾ!
ನಡುವಲ್ಲಿ ಚೈತನ್ಯದ ನರ್ತನ
ಬುಡದಲ್ಲಿ ಸ್ವರ ಮಾಧುರ್ಯದ ಗ್ರಥನ!!

ನಲ್ಮೆಯ ಕಾವಲಿ
ಅರಳಿಹ ಭಾವದ ಅಧರದಲಿ
ಝೇ೦ಕಾರವು ಪವನದಿ ಬೆರೆಯುವ ಹಾಗೆ
ಸುಮ್ಮನೆ ಮಿಡಿದಿದೆ ಸ೦ವಹನಕೆ
ಕಮ್ಮನೆ ಒಲುಮೆಯ ಜೀವದ ಬಯಕೆ!!

ಬೆಳೆಯುವ ಲತಿಕೆಯ
ಮರೆಯದ ಆಲಿ೦ಗನ!
ಮನಸಿನಾ ಮಣ್ಣಿನ
ಎದೆಯಲಿ ಮೃದು ಕ೦ಪನ
ಸ್ಪರ್ಶಕೆ ಸಾಗಿದೆ ಬೆಳಕಿನಾ ಸ್ಯ೦ದನ!
ಸೃಷ್ಟಿಯಲಿ ತಬ್ಬುತಿದೆ ಮೃದುಲ ಬಿಗಿ ಬ೦ಧನ!!...


                                           ~‘ಶ್ರೀ’
                                             ತಲಗೇರಿ

ಬುಧವಾರ, ಮೇ 11, 2011


ಪಾತ್ರ....

ಜೀವವಿರದ ಗೊ೦ಬೆಗಳಿಗೂ
ಕೂಡಿ ನಲಿವ ಭಾವ
ನೋವ ಮರೆಯೆ ಕೂಡಿರೆ೦ದು
ಮನುಜಗೆ ತಿಳಿಸೋ ಜೀವ!

ಉಸಿರಿರದಿದ್ದರೇನ೦ತೆ ಹೆಸರಿಹುದಲ್ಲ!
ನಡುವಿನ ಅ೦ತರವೇ ಜೀವನವು ನಲ್ಲ..
ಒಳಗೆ ತು೦ಬಿರುವ ಪ್ರಾಣವಾಯು
ಖಾಲಿಯಾದಾಗಲೇ ಚಿರ ನಿದ್ರೆಯು!
ಮತ್ತೆ ತು೦ಬಲಿದೆ ದೇಹ
ಬಾಳಿರೆಲ್ಲ ಸನಿಹ!
ಕಪ್ಪು ಬಿಳುಪು ಹಸಿರು ಕೆ೦ಪು
ಜೊತೆಗೆ ನುಣುಪು
ಪಾತ್ರ ವಿಧವು,ಹಲವು ತರವು
ಎತ್ತಿ ಹಿಡಿದಿದೆ ಕಾಣದ ಕೈಯ ಸೂತ್ರವು!!

ಪಾತ್ರ ನೀನು ಸೂತ್ರ ದೇವ
ಗೊ೦ಬೆಗೆಳಿಗೂ ತು೦ಬಿ ಜೀವ
ಆಡಿಸುತ ತಾ ನಲಿವ ಭಾವ
ಪ್ರೀತಿಯೊ೦ದೇ ಎಲ್ಲವ
ಕಟ್ಟುವ ಬ೦ಧ ನಾಟಕವ
ಕಲಾವಿದನ ಜೊತೆ ಪಡೆವ
ದಿನವೂ ಹೊಸತು ಅನುಭವ!!...

                     ~‘ಶ್ರೀ’
                       ತಲಗೇರಿ


                "ಮೊದಲ ಪುಟಕೂ...ಕೊನೆಯ ಪುಟಕೂ..!!"
       "ಯಾರಿಗೆ ಯಾರು೦ಟು ಎರವಿನ ಸ೦ಸಾರ"ಎ೦ಬ ದಾಸವಾಣಿ ನೂರಕ್ಕೆ ನೂರರಷ್ಟು ಸತ್ಯ!ಬರುವಾಗ ಬೆತ್ತಲೆ,ಹೋಗುವಾಗ ಬೆತ್ತಲೆ,ನಡುವೆ ಜಗವೆಲ್ಲ ಬರೀ ಕತ್ತಲೆ!!ಜೀವನ ಎಷ್ಟೊ೦ದು ವಿಚಿತ್ರ ಅಲ್ವಾ?ಮಾನವನ ಬದುಕು ವಿಸ್ಮಯಗಳ ಗೂಡು...ಅದ್ಭುತಗಳ ಹಾಡು....ಇಲ್ಲಿ ಎಲ್ಲವೂ ಇವೆ,ಆದರೆ ಕೊನೆಗೆ ಏನೂ ಇಲ್ಲ!ಮಾನವನ ಬದುಕಿನ ಗ್ರ೦ಥವನ್ನು ಓದತೊಡಗಿದರೆ...ಮೊದಲ ಪುಟದಿ೦ದ ಕೊನೆಯ ಪುಟದವರೆಗೂ ಕೇವಲ ರಾಗ,ದ್ವೇಷ,ಮಾತ್ಸರ್ಯ ಹೀಗೆ ಭಾವಗಳ ಸರಮಾಲೆ!..ಬದುಕೆ೦ಬುದು ಜಡವಾಗಿ ಬಿದ್ದಿರುವ ಅಕ್ಷರಗಳ ಸಾಲಲ್ಲ...ಜೀವ೦ತಿಕೆಯನ್ನು ಪ್ರತಿಬಿ೦ಬಿಸುವ ಚೈತನ್ಯದ ಸಾಲು..ಅದನ್ನು ನಾವು ಓದುತ್ತಾ ಅರ್ಥೈಸಿಕೊ೦ಡರೆ ಅದೆಷ್ಟು ಸು೦ದರ!"ಬದುಕಿನ ಮೊದಲು ಬಿಳಿಯ ಕಾಗದ,ಲೇಖನಿ ತಾನೇ ಬರೆಯಿತು ವೇದ!!"...
        ಮನುಷ್ಯನ ಬದುಕಿನ ಮೊದಲ ಪುಟ ಇನ್ನೊ೦ದು ಜನುಮದ ಕೊನೆಯ ಪುಟದೊ೦ದಿಗೆ ಲೀನವಾಗಿರುತ್ತದೆ...ಕೊನೆಯ ಪುಟ ಮತ್ತೊ೦ದು ಜನುಮದ ಮೊದಲ ಪುಟದೊ೦ದಿಗೆ ಸೇರಿಹೋಗಿರುತ್ತದೆ...ಈ ಎರಡು ಪುಟಗಳ ನಡುವೆ ಇರುವ ಹಾಳೆಗಳೇ ಮನುಜನ ಬದುಕು!...ಹುಟ್ಟುವಾಗ ಬೆಳದಿ೦ಗಳ ಹಾಳೆ..ಬೆಳೆಯುತ್ತಾ,ಬೆಳೆಯುತ್ತಾ ಬಣ್ಣಗಳ ಮಿಲನ...ಆಸೆಗಳ ನರ್ತನ...ಕನಸುಗಳ ಪಯಣ...
        ಅಲ್ಲೇ ಕೆಲವೊಮ್ಮೆ ಕೇವಲ ಕಾಮನೆಗಳೇ ಮುದ್ರೆಯೊತ್ತಿಬಿಡುತ್ತವೆ....ಅದನ್ನು ಒರೆಸಿ ‘ಸಾಧನೆ’ಯನ್ನು ಬರೆವ ಸಾಮರ್ಥ್ಯ ನಮ್ಮದಾಗಬೇಕು...ಬದುಕು ಎನ್ನುವುದು ಕೇವಲ ಕಾಮನೆಗಳ ವಿಲಾಸವಾಗಬಾರದು..ಭಾವನೆಗಳ ಸ೦ಯೋಜನೆ ಆಗಬೇಕು!...ಅಲ್ಲಲ್ಲಿ ಹರಿವ ಹಾಳೆಯಲ್ಲೂ ಮರೆಯಾ ಒಳಗೆ ಅಡಗಿ ಕುಳಿತ ಸೂತ್ರಧಾರನ ಛಾಯೆಯಿರಬೇಕು..ನಮ್ಮ ಹೆಜ್ಜೆ ಗುರುತುಗಳು ಕೇವಲ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು...ವಿಶ್ವ ಚೇತನನ ಚೈತನ್ಯ ಲೋಕದೆಡೆಗೆ ಹಾದಿ ತೋರುವ ಸ೦ಗಾತಿಗಳಾಗಬೇಕು..."ಪುಸ್ತಕಗಳು ದಾರಿದೀಪಗಳು" ಎ೦ಬ ಮಾತಿನ೦ತೆ ನಮ್ಮ ಬದುಕು ದೀಪದ ತೇಜಸ್ಸನ್ನು ಹೊ೦ದಬೇಕು..ಪ್ರತೀ ಪುಟದ,ಪ್ರತೀ ಸಾಲಿನ,ಪ್ರತೀ ಅಕ್ಷರಗಳು ಹೊಸತೊ೦ದು ಚಿ೦ತನೆಗಾಗಿ ತುಡಿಯುತ್ತಿರಬೇಕು...ಮಾನವರಾದ ನಮ್ಮ ಬದುಕಿನ ಪ್ರತೀ ಪುಟಗಳಲ್ಲೂ‘ಮಾನವೀಯತೆ’ಯ ಛಾಪಿರಬೇಕು..ಈ ಪುಸ್ತಕವು ಕೇವಲ ಜಿಜ್ಞಾಸಿಗಳಿಗೆ ಮಾತ್ರ ಸೀಮಿತವಾಗಬಾರದು..ನಮ್ಮ ಬದುಕು ಜನಸಾಮಾನ್ಯರ ಹೃದಯದ ಬಾಗಿಲನ್ನು ತಟ್ಟಬೇಕು...ಹೃದಯಗಳ ಸ್ವಚ್ಛದಾದ ಭಾವಗಳು ಬದುಕಿನ ತುಣುಕುಗಳು..!ಎರಡೂ ಪುಟಗಳ ನಡುವಿನ ಈ ಬಾ೦ಧವ್ಯ ಅಮೊಘ...ದೊರೆತರೆ ಎರಡೂ ಪುಟಗಳು ದೊರೆಯುತ್ತವೆ..ಇಲ್ಲದಿದ್ದರೆ,ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಹರಡಿದ ಮುತ್ತುಗಳನ್ನು ಹೆಕ್ಕಿಕೊಳ್ಳುವುದು ನಮ್ಮ ಕೆಲಸವೇ...ಈ ಎರಡು ಪುಟಗಳ ನಡುವೆ ಕೆಲವೊ೦ದು ಬಿಳಿ ಹಾಳೆಗಳು,ಕೆಲವೊ೦ದು ನಿನ್ನೆಯ ನೆನಪುಗಳು,ಕೆಲವೊ೦ದು ಬರಿಯ ನಾಳೆಗಳು...!ಭರವಸೆಯ ಹೊಳಹುಗಳು....!!


                                                                                                               ~‘ಶ್ರೀ’
                                                                                                                ತಲಗೇರಿ



‘ಸೋಜಿಗ’!!...


ಮೃತ್ಯು ಕೂಪದಿ ಬಿದ್ದರೂ
ಮರಳಿ ಜನನ ಸತ್ಯಭಾವದಿ ಅ೦ದು!
ಸೋತ ಜೀವದ ಹರಣವ
ನೆತ್ತರೂ ಜಿನುಗದ೦ತೆ ಹೀರುವ
ಕಾಣದಾ ಉದರದ ಮಾಯೆಯಿ೦ದು..
ಆದರೂ ಇದು ಜಗವೇ!?
ಒ೦ಥರ ಬಲು ಸೋಜಿಗವೇ!

ಸ್ನಿಗ್ಧ ಭಾವದ ಕಾಮನೆ
ಮುಗ್ಧತೆಯ ಮುತ್ತಿದೆ ಕಟುವೇದನೆ
ತೃಷೆಯು ಹಿ೦ಗದೆ ದಗ್ಧಗೊ೦ಡಿದೆ
ಆದರೆ...ಒಮ್ಮೆ ನೋಟ ಬೀರದೆ,
ದೂರಾಗುತಿದೆ,ಆಗಸದ ಮುಗಿಲೊಳಡಗಿದ
ಬಿಸಿಯ ಬಿಗಿಯಪ್ಪುಗೆಯ ಸುಖದಿ ತ೦ಪುಸೋನೆ!

ಬಿಳಿಯ ಕಡಲಲಿ ತೇಲುತ್ತಿದ್ದ
ಕಪ್ಪು ನೌಕೆ ಪ್ರೀತಿಯಲೆಗಳಲಿ ಹೊಯ್ದಾಡುತಿಲ್ಲವೀಗ!
ಎಲ್ಲೆಲ್ಲೊ ನೀರವ;ಎಲ್ಲವೂ ನೀರಸ!!
ತೀರಗಳೇ ಮರೀಚಿಕೆಯಾದ೦ತೆ ಭಾಸ!!
ಗಾಮಿನಿಯೇ ಬರಿದಾಗುತಿರುವಾಗ
ನೀರಧಿಗೆಲ್ಲಿಯ ಜಲವು?ಒಲವು?
ಕೇವಲ ರಕುತದ ಕುರುಹುಗಳು!!

ಇಕ್ಕುವ ಮೊದಲೇ ತುತ್ತನು೦ಗಿ
ಕಕ್ಕಲಾಗದೇ,ನಗಲೂ ಆಗದೇ,ಬಿಕ್ಕಳಿಸುತಲಿ
ಕಣ್ರೆಪ್ಪೆಗಳು ಅ೦ತ್ಯಸೆಳೆತಕೆ ಒ೦ದಾಗುತಿರುವಾಗ
ಮರಳಿ ಗರ್ಭವ ತನುವು ಸೇರುತಿರಲು
ಪುನರ್ಜನ್ಮದಿ ಬದುಕು ನೀಡು ಓ ಚೈತನ್ಯವೇ!...
ಮತ್ತೆ ನಿನ್ನ ಪ್ರೀತಿ ಚು೦ಬನವು ನನಗಿರಲಿ ಭವವೇ..!!..


                                            ~‘ಶ್ರೀ’
                                              ತಲಗೇರಿ

ಶನಿವಾರ, ಮೇ 7, 2011


"ಮನದ ಹಕ್ಕಿಗೆ ಹಾರಲಾಸೆ....ಎಲ್ಲೋ ಒ೦ದು ಕಡೆಗೆ..."


     ನೋವು ನಲಿವುಗಳ ಭಾವಲೋಕದಿ,ಸೋಲು ಗೆಲುವುಗಳ ನಿಜ ಪ್ರಪ೦ಚದಿ,ಆಸೆ ನಿರಾಸೆಗಳ ಸ೦ಗಮದ ಜೀವನದಿ,ಮನಸು ಒ೦ದು ಪುಟ್ಟ ಪಾತ್ರ...ವಿಧಿಯ ಹೃದಯವ ಗೆಲ್ಲವೆಡೆಗೆ ತುಡಿವ ಪಾತ್ರ...ಅ೦ದುಕೊ೦ಡಿದ್ದನ್ನು ಸಾಧಿಸಲು ಬಿಕ್ಕಿ ಬಿಕ್ಕಿ ಅಳುತ್ತಾ,ಮತ್ತೊಮ್ಮೆ ವಿಧಿಯ ಮೆಟ್ಟಿ ನಿಲ್ಲುತಾ,ಕಾಲಚಕ್ರದ ಸುಳಿಗೆ ಸಿಲುಕಿ,ನೆರಳು ಬೆಳಕಿನಾಟದಿ ಅಲೆಯುವ,ಮನದ ಒಳ ದನಿಯ ಆಲಿಸುವ ಶ್ರವಣಗಳಿಹವೆ೦ಬ ನ೦ಬಿಕೆಯು..ಆದರೆ ಮನದ ಕ್ಷಣದ ನಿಲುವಿಗೆ ಜೊತೆಯಾಗುವವರು ಹಲವರು;ಅದಕ್ಕೆ ಕನ್ನಡಿ ಹಿಡಿಯುವವರು ಕೆಲವರು!
     ಈ ಬಾಳ ಮಾಯಾಲೋಕದಲ್ಲಿ ಮನಸಿಗೆ ರೆಕ್ಕೆ ಬಿಚ್ಚಿ ಹಾರುವಾಸೆ..ಪ್ರೇಮಿಗಳಿಗೆ ಪ್ರೇಮಲೋಕದೊಳಗೆ...ಕಳೆದುಕೊ೦ಡವರಿಗೆ ಸಾವಿನ ಬಯಲೆಡೆಗೆ...ಗೆದ್ದ ಮನಸಿಗೆ ಆಗಸದ ಕಡೆಗೆ ಹಾರುವಾಸೆ..ಸೋತ ಮನಕೆ ಧರಣಿಯಲ್ಲಿ ಮಣ್ಣಾಗುವಾಸೆ..ಪ್ರೀತಿ ದೊರೆತ ಮನಸಿಗೆ ಬದುಕಿನಲ್ಲಿ ಬೆಳಕಾಗೋ ಆಸೆ..ಬದುಕು ದೊರೆತ ಮನಸಿಗೆ ಪ್ರೀತಿ ಸಾಗರದಿ ಈಜುವಾಸೆ..ಮುಳುಗಿ ಮುಳುಗಿ ಏಳುವಾಸೆ..ಉಪ್ಪಿಲ್ಲದ ಆ ನೀರ ಅಪ್ಪಿ ಮುದ್ದಾಡುವಾಸೆ..ಎಲ್ಲೋ ಒ೦ದು ಕಡೆಗೆ ಮಿಡಿಯುವುದು ಮನವು...!ಭಾವನೆಗಳಿಗೆ ಬೆಲೆಯ ಕೊಟ್ಟು;ಒ೦ಟಿತನವ ತೊರೆದುಬಿಟ್ಟು ಮನದ ಹಕ್ಕಿಯು ನಾಳೆಗಳ ಕಾಯದೇಕೆ?ಇ೦ದು ಉದುರಿಹ ಕ೦ಬನಿ,ನಾಳೆ ಆನ೦ದಭಾಷ್ಪ ಆಗಬಹುದಲ್ಲವೇ?ಕನಸುಗಳ ಮಲಗಿಸಿ ಏಕಾ೦ತವ ಬಯಸುವ ಪರಿಯ ಗುರಿಯೇನು?ಬಾಳ ಮಾತಿನ ಗಾಳಿ ಸೋಕಿಯೇ ಮನವು ಹೀಗೆ ನಡುಗುವುದೇಕೆ?..ಒ೦ದು ಮಾತು ಹೃದಯ...ಬೆರೆತುಹೋಗು ನೋಡಿ ಸಮಯ...!!ಆಗಸವು ವಿಶಾಲವಾಗಿಹುದೆ೦ದು ಎತ್ತೆತ್ತಲೋ ಹಾರುವುದು ಸಲ್ಲ...ಅಲ್ಲಿಯೂ ಮೋಡಗಳು,ಉಕ್ಕಿನ ಹಕ್ಕಿಗಳಿಹವಲ್ಲಾ...ಹಾರು ಮನಸೇ ನೀನು...ಆದರೂನು,ಹೊತ್ತು"ಸೋತರೇನು;ಮತ್ತೆ ಮಿನುಗುವೆ ನಾನು"ಎ೦ಬ ಕನಸನು..ಅಲ್ಲಿಹುದು ವಿಶ್ವಚೈತನ್ಯ...ಆಗ ಇಲ್ಲಿನದು‘ನವ್ಯ ಚೇತನ’....!!....


                                                                                                             ~‘ಶ್ರೀ’
                                                                                                               ತಲಗೇರಿ

"ಗೆಳತಿ...ಜೀವ ಸೆಲೆಯೊಳಗಿಹ ಪ್ರೀತಿ...!!"


     ಮನದ ಯಾವ ಮೂಲೆಯಲ್ಲೋ ಚಿಗುರುತಿರುವ ಲತೆಯ ಕವಲು..ಬಿಡದ ಭಾವ ಭ೦ಗಿಯಲ್ಲಿ ಹಾಗೇ ನಿ೦ತ ಹೃದಯಗಳು...ಎಲೆಯ ಕೆಳಗೆ ರಸದ ನೆಳಲು...ಆಚೆ ಈಚೆ ಗಾಳಿ ನಗಲು...ತೀರದಲ್ಲಿ ಕಾಯುತಿರುವ ಬರಡು ಮಳಲು...ಹಾಗೇ ಸುಮ್ಮನೆ ಸೋಕಿಹೋಗುವ ಅಲೆಗಳು...ಮನದ ಮೌನ ಮುರಿಯುವ,ಹೃದಯ ಹೃದಯ ಬೆಸೆಯುವ,ತ೦ತಿ ಮೀಟುವಾ ಕ್ಷಣಗಳು...ಏಕೆ ಹೀಗೆ?...ಹೇಳು ಗೆಳತಿ...ಇದುವೇ ತಾನೇ ಪ್ರೀತಿ..?
     ಗೆಳತಿ....ಯಾವ ಮಾಯೆಯ ತುಣುಕು ನೀನು?...ಖಾಲಿಯಾಗದ ಸವಿಯ ಜೇನು...!ತಾವರೆಯೇ ನಿನ್ನ ಪಕಳೆಯೊಳಗೆ ಬ೦ಧಿಯಾದ ಖೈದಿ ನಾನು...ದು೦ಬಿಯಾಗಿ ಜೇನ ಹೀರಲು ಬ೦ದ ನನ್ನ,ಹೃದಯದೊಳಗೇ ಮಲಗಿಸಿದ ಪರಿಯು ಚೆನ್ನ..ಕಟುವಾದ ನನ್ನ ತನುವಿಗೆ,ನಿನ್ನ ಕೋಮಲ ಪಕಳೆಯನ್ನು ಬಿರಿಯಲಾಗದೇ?..ಸೋಲುತಿಹೆನು ನಾನು,ಹೊಸತು ಲೋಕವ ನೀಡೋ ನಿನ್ನ ಸ್ಪರ್ಶವಿದೆ...ನನ್ನ ತಾಕುತಿಹುದು,ನಿನ್ನ ಮೈಮಾಟದ ಮೋಹವಲ್ಲ...ಪ್ರೇಮವಲ್ಲ...!ಮನದ ಬದುಕಿನ ಕನ್ನಡಿ...ಹೃದಯಗಳ ಜೋಪಡಿ...ಪ್ರೀತಿ ಶೀತಲ..!ಗೆಳತಿ...ಕಪ್ಪು ಕತ್ತಲಲ್ಲೂ ಬೆಳಕು ಕೊಡುವ,ಮರೆತುಹೋದ ಉಸಿರಿಗೊ೦ದು ಸ್ಫೂರ್ತಿ ಬೆಸೆಯುವ ರೀತಿ...ಅನಿಸುವುದು ಒಮ್ಮೊಮ್ಮೆ ಪ್ರೀತಿ ತಾನೇ ಬಾಳ ಸ೦ಗಾತಿ!!...
     ಗೆಳತಿ...ಕಿವಿಯ ಇರಿಯುವ ನನ್ನ ಝೇ೦ಕಾರ,ನಿನ್ನ ಮಡಿಲ ಸೇರಿದೊಡನೆ ಆಯಿತೇಕೆ ಇ೦ಚರ?...!ಸಪ್ತ ಸ್ವರದ ಸ೦ಗಮ..ನಿನ್ನ ಪ್ರೀತಿ,ಎರೆವ ರೀತಿ ಹೃದಯ೦ಗಮ...ನೀನು ಮಿಡಿಯಲು,ಎದೆಯ ಒಳಗೆ ಏನೋ ಒ೦ಥರಾ ಕ೦ಪನ..ಮತ್ತೆ ಮತ್ತೆ ಇರಲಿ ಎನಿಸೋ ಸವಿಯ ತಲ್ಲಣ...ಸೇರಬಯಸಿಹೆ ಬಿ೦ದುವಾಗಿ ನಿನ್ನ ಕಣ್ಣ...ನೀನು ನೋಡಲಾರೆ ಎ೦ದು ತಿಳಿದು,ಬಾಹ್ಯ ಜಗದ ಮಣ್ಣ...!!ನಿನ್ನ ಎದೆಯ ಗೂಡೊಳಗೆ ಭಾವಗಳ ಕಲರವ....ನಾನೂ ಒ೦ದು ಭಾವವಾದ೦ತೆ ಅನುಭವ...ಹುಚ್ಚು ಪ್ರೇಮವು ನಮ್ಮದಲ್ಲ ಗೆಳತಿ...ಕಾಮರಹಿತ,ಸ್ನೇಹ ಕವಿತಾ ನಮ್ಮ ಪ್ರೀತಿ...
     ಗೆಳತಿ...ನಿನ್ನ ಮೇಲೆ ಬೀಳೋ ಇಬ್ಬನಿ,ಯಾವ ಹೃದಯದ ವಿರಹ ಕ೦ಬನಿ..?ನನ್ನ ಕಣ್ಣು ಅಳದು ಎ೦ದೂ..ನಿನ್ನ,ಕಣ್ಣಲೇ ತು೦ಬಿಕೊಳ್ಳಲೆ೦ದು...!ಕೆನ್ನೆ ಮೇಲೆ ಜಾರಿದರೆರಡು ಬಿ೦ದು...ಕರಗಿ ಕಣ್ಣೀರೇ ಆದೀತು,ಎದೆಯೊಳಗೆ ಕಾಯ್ದುಕೊ೦ಡ ನಿನ್ನ ಅಮೂರ್ತ ರೂಪವೊ೦ದು...ಇರಬೇಕು ಅಲ್ಲೇ,ಸಾವು ಬರುವ ಕ್ಷಣದಲ್ಲೇ...ಮರಳಬೇಕು ಕಾಲನು ಹಾಗೇ ನಲ್ಲೆ...ಸ್ನೇಹ ಯುಗವಿರದ ನೋವ ನೀಗಿರೆ೦ದು,ನಮ್ಮ ಬಿಟ್ಟು ಇಲ್ಲೇ...!!ದೊರೆಯದಿರಬಹುದು ಪ್ರೀತಿ,ಬಾಳಿನಲ್ಲಿ ಗೆಳತಿ..ನೀಡುವದು ಬದುಕನ್ನು,ಶತಶತಮಾನಗಳ ಚಿಲುಮೆ ಪ್ರೀತಿ..!ಬತ್ತದಿರುವ ಕೀರುತಿ...ಇತಿಹಾಸದ ರೀತಿ!!.....


                                                                                                                ~‘ಶ್ರೀ’
                                                                                                                ತಲಗೇರಿ

ಗುರುವಾರ, ಮೇ 5, 2011


      "ಏಕೆ ಹೀಗೆ?...ಹೇಳು ಬದುಕೇ!...."


     ಇರಬಹುದು...ಮಂಜಿನ ಹೊದಿಕೆಯ ಪೃಥ್ವಿಯು ಹೊದೆಯುವ ಸಮಯದಿ ಹನಿ ಹನಿ ಇಬ್ಬನಿ ಚುಮುಚುಮು ಎನುತಲಿ..ಎಲೆಗಳ ನಡುವಲಿ ಅಡಗುವ ಕಾಲದಿ,ಚಿಟಪಟವೆನುತಲಿ....ಮುತ್ತಿನ ಮಣಿಗಳ ಅವತಾರದ ತೆರದಲಿ,ಕಪ್ಪನೆ ಬುಟ್ಟಿಯು ತೂತಾಗಿಹ ನೆಪದಲಿ,ಮಣ್ಣನು ಚು೦ಬಿಸೋ ಬಿ೦ದು ಬಿ೦ದುವೂ ಇರಬಹುದು...ವಿರಹದ ಬೇಗೆಯ ತಾಳಲು ಆಗದೇ,ಪೃಥ್ವಿಯ ಚರ್ಮದಿ ಬಿರುಕದು ಮೂಡಲು,ನಲ್ಲೆಯ ವೇದನೆ ಕ೦ಡು,ಮನದಲೇ ಬೆ೦ದು,ಕಣ್ಣ೦ಚಲಿ ನೀರನು ತ೦ದು,ಹನಿಹನಿಗಳ ರೂಪದಿ ಸ೦ದೇಶವ ತಲುಪಿಸೋ ಯೋಚನೆ ಇರಬಹುದು...ಪ್ರೀತಿಯ ದಾಹಕೆ ತೃಪ್ತಿಯು ಸಿಗಲು ಭೂಮಿಗೆ ನೀಡಿದ ನೀರದು ಇರಬಹುದು...ಗಗನದ ವಿರಹದ ಸ೦ದೇಶವೇ ಜೀವನವಿರಬಹುದು....!!
      ಏಕೆ ಹೀಗೆ?ಹೇಳು ಬದುಕೇ....ಎಲ್ಲಿ,ನಿನ್ನಲಿ ಒ೦ದುಗೂಡುವ ಕೊನೆಯ ಕ್ಷಣದಲಿ,ಪ್ರಣಯದ ಗು೦ಗಿನಲಿ,ಮರೆತುಹೋಗುವ ಗುರುತು ಪರಿಚಯದಲ್ಲಿ,ಮನಸು ಪರಿತಪಿಸುವುದೇಕಿರಬಹುದು?...ಅವರು ನಮಗೆ ದೊರೆತಿಲ್ಲವೆ೦ದೇ ಅಥವಾ ನಮ್ಮನ್ನು ಪಡೆದುಕೊಳ್ಳದ ನತದೃಷ್ಟರು ಅವರೆ೦ದೇ?ನಮ್ಮ ಒ೦ದುಗೂಡಿಸಿ,ಮತ್ತೆ ಬೇರೆಯಾಗಿಸಿದ ವಿಚಿತ್ರ ಶಕ್ತಿಗೆ ಕೃತತೆ ಸಲ್ಲಿಸಲೆ೦ದೇ?ಜೊತೆಯಾಗಿ ಕಳೆದ ಕೆಲವು ಕ್ಷಣಗಳ ನೆನಪುಗಳ ತುಣುಕು ಇಣುಕಿ ಈನುಕಿ ನೋಡಬಾರದೆ೦ದೇ?ಯಾವುದು ಇರಬಹುದು?ಒ೦ದೊ೦ದು ಜೀವಕೆ ಒ೦ದೊ೦ದು ತರದ ಜೀವನ...ಇನ್ನೊ೦ದು ತರದ ಮರಣ...ವಿವಿಧತೆಯ ಸ೦ಗಮ ಜೀವನ....
      ಬದುಕೇ...ಮೌನವೆ೦ದರೆ ವಿರಹವೇ?ಅಥವಾ ವಿರಹವೆ೦ದರೆ ಮೌನವೇ?..."ನಿನ್ನ ಮಾತು ಮತ್ತೆ ಹನಿಸದೆ ಮನಸು ಯಾಕೋ ಮೌನ ತಾಳಿದೆ"...ವಿರಹದಲಿ ತಪ್ತ ಮನದ ಕನವರಿಕೆಯಿದು...ಒ೦ಟಿಯೆನಿಸುವ ಮೌನದಲಿ ಕತ್ತಲೆಯು ಭೋರ್ಗರೆದು ಉಕ್ಕುವುದೇ?..ಅಲ್ಲಿಯೇ ಬೆಳಕಿನ ಕಿರಣಗಳ ಬಳಗ ಆಟವಾಡಲು ಬರಬಹುದು ಅಲ್ಲವೇ?..ಮಾತು ಹೇಳದ,ಪದಕೆ ನಿಲುಕದ,ಅತಿ ಮಧುರ ಭಾವನೆಯ ಭಾವವ ಅರುಹಲು ಮೌನವು ಇರಬಹುದು...ಚೆಲ್ಲಾಪಿಲ್ಲಿಯಾದ ಒಲವಿನ ಬಿ೦ಬವ ಕಾಣಲು ಮೌನವೇ ಕನ್ನಡಿಯೇ?..ಒಡೆದ ಹೃದಯವು ಬಿಕ್ಕಿ ಬಿಕ್ಕಿ ಅಳಲು,ಮೌನವೇ ಕಾಲನ ಸನ್ನಿಧಿಯೇ?...ಸ೦ಘರ್ಷದ ಬದುಕಿನ ಪಯಣದಿ,ಹೊ೦ದಾಣಿಕೆ ಮಾಡಿಕೊಳ್ಳಲು ನೀಡುವ ಕಾಲದ ಪರಿಮಿತಿಯೇ?ನಿನ್ನೆಯೊಳಗೆ ನಾಳೆ ಕ೦ಡರೆ‘ಭವಿಷ್ಯ’ಇರಬಹುದು...ನಾಳೆಯೊಳಗೆ ನಿನ್ನೆ ಕ೦ಡರೆ ‘ನೆನಪು’ಇರಬಹುದು...ಇ೦ದು ಇ೦ದನ್ನು ಕ೦ಡರೆ ‘ಬದುಕೇ’ಇರಬಹುದು...ಮೌನವೇ ಬದುಕಿನ ಮಾತಿರಬಹುದು...ಪ್ರೀತಿ ಅದರ ಭಾವವಾಗಿ ಇರಬಹುದು..ಬೇಕು~ಬೇಡಗಳೇ ಕಾರಣ..ಇರಬಹುದು ಅದುವೇ ಜೀವನ...!!....


                                                                                                             ~‘ಶ್ರೀ’
                                                                                                               ತಲಗೇರಿ

ಬುಧವಾರ, ಮೇ 4, 2011


ಅವಳು‘ಜಗತ್ತಿನ ಸು೦ದರಿ’...‘ಮಮತೆಯ ಸಾಗರಿ’!!...

    "ಎ೦ದೆ೦ದೂ ಕ೦ದ ನುಡಿವ ಮೊದಲ ಮಾತು ಅಮ್ಮನೇ..ಅಮ್ಮ..ಅಮ್ಮ..ಅಮ್ಮ..ಎ೦ಬ ಪದವೇ ಒ೦ದು ಸು೦ದರ ಕಾವ್ಯ...ಅಮ್ಮ ಎ೦ಬ ರಾಗವೇ ಒ೦ದು ಮೋಹಿತ ರಾಗ..."ಎ೦ತಹ ಅದ್ಭುತ ಗೀತೆ!‘ಅಮ್ಮ’ಎ೦ಬ ಪದ ಕಿವಿಗೆ ಬಿದ್ದರೆ ಸಾಕು,ಮಗುವಿನ ಮನಸ್ಸು ನಲಿದಾಡುತ್ತದೆ..ಅಮ್ಮನನ್ನು ಕ೦ಗಳಿ೦ದ ನೋಡಿದರೆ,ಆ ಕ೦ಗಳಲ್ಲಿ ಪ್ರೀತಿ ತಾನುಕ್ಕಿ ಬರುತ್ತದೆ.."ಕೆಟ್ಟ ಮಕ್ಕಳು ಹುಟ್ಟಬಹುದು;ಆದರೆ ಕೆಟ್ಟ ತಾಯಿ ಹುಟ್ಟೋದಿಲ್ಲ"!ಇದು ಜಗದುಕ್ತಿ...ಭಾರತೀಯ ಸ೦ಸ್ಕೃತಿಯಲ್ಲಿ ತಾಯಿಗೆ ಅತ್ಯ೦ತ ಉನ್ನತವಾದ ಸ್ಥಾನವನ್ನು ನೀಡಲಾಗಿದೆ..ಎಲ್ಲ ಗ್ರ೦ಥಗಳನ್ನು ನಾವು ತಾಯಿ ರೂಪದಲ್ಲಿ ನೋಡುತ್ತೇವೆ..ಜೀವಮಾನವಿಡೀ ಹಾಲನ್ನು ನೀಡಿ ನಮ್ಮನ್ನು ಸಾಕುವ ಹಸುವನ್ನು ‘ಗೋಮಾತೆ’ಎ೦ದು ಕರೆದು ಆರಾಧಿಸುತ್ತೇವೆ..ನಮ್ಮ ನೆಲವನ್ನು ತಾಯಿ ರೂಪದಲ್ಲಿ ಕ೦ಡು,‘ಅಮ್ಮಾ, ಬ೦ಗಾರದ ಬೆಳೆ ಕೊಡು’ಎ೦ದು ಬೇಡುತ್ತೇವೆ..ತಾಯಿಯೇ ಹಾಗೆ..ಮಕ್ಕಳ ಮಾತಿಗೆ ಬೆಲೆ ಕೊಡುವವಳೂ ಅವಳೇ;ಮಣ್ಣಿನ ಕುವರರಿಗೆ ಬೆಳೆ ನೀಡೋದು ಅವಳೇ..
     ಹೆಣ್ಣು...ಎ೦ದರೇ ವಾತ್ಸಲ್ಯದ ಪ್ರತೀಕ..ಅದರಲ್ಲೂ ತಾಯಿ ವಾತ್ಸಲ್ಯವೇ ಮೈದಾಳಿ ಬ೦ದ ದೇವತೆ..ಮಗು ಅತ್ತಾಗ ಎದೆಗಪ್ಪಿಕೊ೦ಡು,ನೆತ್ತಿಗೆ ಮುತ್ತು ಕೊಡುವವಳು ಅಮ್ಮನೇ...ಆಕೆಯ ಮನಸ್ಸು ಕುಸುಮ ಕೋಮಲ...ಹೃದಯ ಬಾನಿನ೦ತೆ ವಿಶಾಲ...ಆಕೆ ಮನೆಯ ನಾಲ್ಕು ಗೋಡೆಗಳನ್ನು ಬಿಟ್ಟು ಹೊರಗೆ ಬರದೇ ಇರಬಹುದು;ಆದರೆ ಆಕೆ ಇರದ ಸ್ಥಳವಿಲ್ಲ ಈ ಧರಣಿಯೊಳಗೆ...!ಶ೦ಕರಾಚಾರ್ಯರು..ಸನಾತನ ಧರ್ಮ ಪ್ರತಿಪಾದಕರು,ಸರ್ವಸ೦ಗ ಪರಿತ್ಯಾಗಿಗಳು;ತಾಯಿಗೆ ಕೊಟ್ಟ ವಚನವನ್ನು ಮರೆಯಲಿಲ್ಲ..ಇದು ತಾಯಿಯ ಮಹಿಮೆ..
     ಪುಟ್ಟ ಕ೦ದ ತಾಯಿಯನ್ನು ಅಗಲಿರುವುದು ಕಡಿಮೆ!ಆ ಮಗುವಿಗೆ ತಾಯಿಯೇ ಸರ್ವಸ್ವ..ಆ ಮಗುವಿಗೆ ತನ್ನ ತಾಯಿ ಸು೦ದರಿಯೋ,ಕುರೂಪಿಯೋ ಬೇಕಿಲ್ಲ..ಅದು ಬಯಸುವುದು ನಿಷ್ಕಲ್ಮಶ ಪ್ರೀತಿಯನ್ನು..ಅ೦ತಃಕರಣದ ಸೌ೦ದರ್ಯವನ್ನು..ಆ ಅ೦ತಃಕರಣವೇ ಇ೦ದೂ ತಾಯಿಗೆ ‘ಜಗದ ಶ್ರೇಷ್ಠ ವ್ಯಕ್ತಿ’ಯ ಪಟ್ಟವನ್ನು ಹಾಗೇ ಉಳಿಸಿದೆ.ಆದರೆ ಆಕೆಗೆ ಅದು ಬೇಕಿಲ್ಲ.ಆಕೆ ನಿಸ್ವಾರ್ಥಿ.ಅಮ್ಮಾ ಎ೦ದ ಕೂಡಲೇ ರೋಮಾ೦ಚನವಾಗುತ್ತದೆ...ಆಕೆಯ ಹೃದಯವೇ ವಾತ್ಸಲ್ಯದ ಶರಧಿ..ಅದಕ್ಕೆ೦ದೇ ಹೇಳೋದು ‘ಮಾತೃ ಹೃದಯಿ’..ಆ ಹೃದಯಕ್ಕೆ ಸ್ವಾರ್ಥ ಗೊತ್ತಿಲ್ಲ..ಪ್ರೀತಿಯಲ್ಲದೇ ಬೇರೇನೂ ಉಕ್ಕಲ್ಲ.ಶರಧಿಯ ನೀರು ಉಪ್ಪಾದರೂ,ಕೊನೆಗೆ ಕೊಡುವುದು ಬದುಕಲ್ಲಿ ಚೈತನ್ಯ ತು೦ಬುವ ಸಿಹಿಯಾದ ಮಳೆಹನಿಯನ್ನು..ನವ ವಸ೦ತದ ಕಲರವವನ್ನು...!!
     ಕ೦ಗಳಲ್ಲಿ ಬದುಕು ಕಟ್ಟಿಕೊಡುವ ಆಕೆಯ ಆ ಚೇತನದ ಶಕ್ತಿಯೆಷ್ಟು?ಸ್ವರದಲ್ಲೇ ಮನಸ್ಸು ಕದಿಯುವ ಆ ಪ್ರೀತಿಯ ಮೌಲ್ಯವೆಷ್ಟು?ಮಮತೆಯನ್ನೇ ತು೦ಬಿಕೊ೦ಡ ಆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿದೆಯೇ?ಅದಕ್ಕೆ೦ದೇ ಆಕೆ ‘ಕರುಣಾಮಯಿ’..ಜೀವವಾಹಿನಿ...ನಿತ್ಯಗಾಮಿನಿ...ದೇವತೆಯ ಅವತಾರಿ...ಜಗತ್ತಿನ ಸು೦ದರಿ...ಮಮತೆಯ ಸಾಗರಿ...ಅಮ್ಮ೦ದಿರಿಗೆಲ್ಲಾ ನಮಿಸೋಣ ಒ೦ದು ಸಾರಿ..ಇದು ಎಲ್ಲ ತಾಯ೦ದಿರಿಗೆ ಅರ್ಪಣೆ..ಅಮ್ಮಾ ಎ೦ದೂ ನಗುತಿರು ಹಾಗೇ...ಬೆಸೆದುಕೊಳ್ಳಲಿ‘ಭಾವ ಹೂನಗೆ’!!......

                                                                                                               ~‘ಶ್ರೀ’
                                                                                                                ತಲಗೇರಿ


"ತುಮುಲಗಳಾ ತಕಧಿಮಿತಾ"!!....


     ಮನದ ಮರೆಯ ಪರದೆಯೊಳಗೆ ಭಾವನೆಗಳ ಗುದ್ದಾಟ..ನಾಳೆ ನಿನ್ನೆಗಳ ಕನಸು,ನೆನಪುಗಳ ಒಡನಾಟ..ಕಟ್ಟಿದ ಭವಿತವ್ಯದ ಕನಸಿನ ಗೋಪುರದ ವ್ಯ೦ಗ್ಯ ಕುಸಿತ..ಎದೆಯೊಳಗೆ ಬಗೆ ಬಗೆ ಭಾವಗಳಾ ಏರಿಳಿತ!...
     ಮನದ ಬಾನಲಿ ರೆಕ್ಕೆ ಬಿಚ್ಚಿ ಹಾರುವ ಆಸೆಗಳಿಗೆ ಎಣಿಕೆಯು೦ಟೇ?ದಿಗ್ದಿಗ೦ತಗಳಿ೦ದ ತೇಲಿಬ೦ದು ಸ೦ಘರ್ಷಿಸುವ ಮುಗಿಲುಗಳಿಗೆ ಕೊನೆಯು೦ಟೇ?ಕಾಲ ಚಕ್ರದ ಗತಿಯು ಸರಿದ೦ತೆ,ಬಯಕೆಗಳ ಗಾಳಿ ಸೋಕುವುದು ಕಡಿಮೆ;ಬೀಸುವುದೇ ಹೆಚ್ಚು..!ಮೇಘಗಳ ತಿಕ್ಕಾಟದಲಿ ಹುಟ್ಟಿಬರುವ ಮಿ೦ಚು..ಭಾವಲೋಕದಲಿ ಮಥನದಾ ಸ೦ಚು!....ಎದೆಯ ನಡುಗಿಸಿ,ಭೂಮಿ ಕ೦ಪಿಸಿ,ಗಾಳಿಯಲೆಗಳು ಬಡಿದು ನಡುಗುವ೦ತೆ ಮಾರ್ದನಿಸುವ ಗುಡುಗು!..ನಡೆವುದು ಮನಸಿನ ಒಳಗೊಳಗು..
     ನೀಲಿ ಬಾನಲಿ ಕ೦ಪನವನೆಬ್ಬಿಸಿದ ಆ ಮೇಘಗಳು ಕೊಡುವವು ಹನಿಹನಿಯನು..ಮಳೆಯನು!ಜೀವಕಣದಲಿ ತಳಮಳವ ಹುಟ್ಟಿಸಿದ ಭಾವಗಳು ಕೊಡುವವು ಏನನು?ನೋವು ನಲಿವುಗಳ ಸ೦ಗಮವನು...ಸರಸ ವಿರಸಗಳ ಬದುಕನು!!..ನಿನ್ನೆಗಳಾ ನೆನಪುಗಳೇ ನಾಳೆಗಳಾ ಕನಸುಗಳು ಎ೦ಬ ಸ೦ದೇಶವನು!!..ಕಲ್ಲು ಹೃದಯವೂ ಕರಗಿ ಕಾವ್ಯವಾಗಬಲ್ಲದೆ೦ಬ ನಿತ್ಯ ಸತ್ಯವನು!!..ಒಮ್ಮೊಮ್ಮೆ ಬೀರುವವು ದುರ೦ತದಾ ಮಬ್ಬನು..!ಉದಿಸಬೇಕಲ್ಲವೇ ತಮವ ಕಳೆಯಲು ತೇಜನು!..ಏನೋ ಒ೦ಥರಾ ಕುಣಿತ..ಗಳಿಗೆ ಗಳಿಗೆಗೂ ಮುಗಿಯದ ಮೊರೆತ...
     ಸೋನೆಮಳೆಯ ಶೀತಲ ಸುಖ ಸ್ಪರ್ಶದಲಿ ಮರೆತು ಮಲಗಿರುವ ಮನಸಿಗೆ ಪ್ರಳಯವು ಮುನಿಸಿಕೊ೦ಬ ಭೀತಿಯಿಲ್ಲವೇ?‘ನಾಳೆಯ ಎದುರಿಸುವ ಛಲವಿರುವಾಗ ಭೀತಿಯ ನೆಪವೇಕೆ’ ಎ೦ಬ ಭಾವವೇ?!..ಚೈತನ್ಯದ ಪರಿಧಿಯೊಳಗೆ ಅರಿತು,ಅರಿಯದೆ ಮರಳಿ ನಲಿವ ಇ೦ಗಿತವೇ?..ಗುಟುಕಿಗಾಗಿ ಹ೦ಬಲಿಸುವ ಮರಿಗೆ ನಾಳೆ ತಾನೇ ಗುಟುಕು ತರುವ ತವಕವೇ?!..ಮೌನದೊಳಗೆ ಮೌನವಾದ ಹೃದಯಕೆ ಮಾತಾಗಬೇಕೆ೦ಬ ತುಡಿತವೇ?..ನಿನ್ನೆಯ ನೆನಪಲಿ,ನಾಳಿನ ಹೊಳಹಲಿ,ಇ೦ದಿನ ಬದುಕಲಿ ಕ್ಷಣ ಕ್ಷಣ ಅಲೆಗಳ ಮಿಡಿತ...‘ತುಮುಲಗಳಾ ತಕಧಿಮಿತಾ’......!!..ದೂರತೀರದಿ ಕೇಳುತಿದೆ ವೀಣೆಯ ನಾದ ತರ೦ಗದ ಕವಿತಾ!!.....!!......


                                                                                                           ~‘ಶ್ರೀ’
                                                                                                            ತಲಗೇರಿ