ಭಾನುವಾರ, ಆಗಸ್ಟ್ 29, 2021

ಒಂದು ಶೃಂಗಾರದ ರಾತ್ರಿ



ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಬೆಳಕಿನ ರಂಗೋಲಿ ಇಡುವ ವಾಹನಗಳ ಸಂಖ್ಯೆ ಚೂರು ಕಡಿಮೆಯಾಗಿತ್ತು. ನಗರಕ್ಕೆ ರಾತ್ರಿಯಾಗುವುದಿಲ್ಲವಾದರೂ ಬಹುತೇಕ ಅಂಗಡಿಗಳು ಮುಸುಕೆಳೆದುಕೊಂಡು ಮಲಗುವ ತಯಾರಿಯಲ್ಲಿದ್ದವು. ಅಲ್ಲಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ನೀಲಿ, ಚಿನ್ನದ ಬಣ್ಣದ ಮಿಣುಕು ಹುಳಗಳಂಥ ಬೆಳಕಿದ್ದರೂ ಅವು ಕಪ್ಪು ಉಡುಪಿಗೆ ಪೋಣಿಸಿದ ಮಣಿಗಳ‌ ಹಾಗೆ ಅಂತ ಅನಿಸಿದ್ದು ಹೌದು ನನಗೆ. ಅದರಲ್ಲೂ ಈಗ ನಾವಿರುವ ಹೊತ್ತಿನಲ್ಲಿ ಇಡೀ ಜಗತ್ತಿಗೆ ಅದ್ಯಾವುದೋ ಬರಿಗಣ್ಣಿಗೆ ಕಾಣದ್ದರ ಭೀತಿ ಬೇರೆ. ಹಾಗಾಗಿಯೇ ಇರಬೇಕು, ನಾವೆಲ್ಲರೂ ಒಂಥರಾ ಮೌನಕ್ಕೆ ಶರಣಾಗಿಬಿಟ್ಟಿದ್ದೇವೆ ಅಂತನ್ನುವ ಭಾವ ಪದೇ ಪದೇ ಒತ್ತರಿಸಿಕೊಂಡು ಬರುತ್ತದೆ ಈಗೀಗ ನನಗೆ. ಇದನ್ನು ಅವನಿಗೆ ಹೇಳಬೇಕು ಅಂದುಕೊಂಡಾಗಲೆಲ್ಲಾ, ಇದೆಂಥಾ ಇದು ರಗಳೆ, ಇದನ್ನೆಲ್ಲಾ ಹೇಳಿ ಅವನ ಮನಸ್ಸನ್ನು ಕದಡುವುದು ಯಾಕೆ? ಮೊದಲೇ, ನನ್ನ ಮನಸ್ಸು ವಿಚಲಿತವಾಗಿದೆ ಅನ್ನುವ ಸೂಚನೆ ಸಿಕ್ಕರೂ ಸಾಕು, ಉಳಿದೆಲ್ಲ ಕೆಲಸ ಬದಿಗಿಟ್ಟು ನನ್ನ ಉಪಚಾರಕ್ಕೆ ನಿಂತುಬಿಡುತ್ತಾನೆ. ಅವನದು ಉಸಿರುಗಟ್ಟಿಸುವ ಪ್ರೀತಿಯಲ್ಲ, ಅದೇ ಸಮಾಧಾನ ಹಾಗೂ ಬಹುಶಃ ಬದುಕು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಅಂತ ಅಂದುಕೊಳ್ಳುತ್ತಿರುವಾಗಲೇ, ಕೈಕಾಲು ಮುಖ ತೊಳೆದುಕೊಂಡು ಮಲಗಬೇಕು ಅಂದುಕೊಳ್ಳುತ್ತ ಅವ ಬಂದ. ಏನೋ ಗುಯ್ ಅಂತಿರೋ ಹಾಗಿದೆ ತಲೇಲಿ, ಚೂರು ಶಬ್ದ ಈ ಕಡೇನೂ ಕೇಳ್ತಿದ್ಯಪಾ ಅಂತ ತಮಾಷೆಯಾಗಿ ಹೇಳಿದ, ಅವನದು ಇದು ಯಾವತ್ತಿನ ವರಸೆ. ಏನಿಲ್ಲ, ಏನೋ ಒಂದು.. ಅಂದೆ ನಾನು. ಅಷ್ಟರಲ್ಲಿ ಮಳೆ ಶುರುವಾಯಿತು ಅನಿಸುತ್ತದೆ. ಈ ನಮ್ಮ ನಗರದ ಮಳೆಗೆ ಇದೊಂದು ಒಳ್ಳೆಯ ಅಭ್ಯಾಸವಿದೆ. ಮಲಗುವಾಗಲಾದರೂ ವಾತಾವರಣ ತಂಪಾಗಿರಲಿ ಅನ್ನುವ ಕಾರಣಕ್ಕೇ ತಾನು ಬಂದು ಲಾಲಿ ಹಾಡುವ ಹಾಗೆ, ಸುಮಾರು ಎಲ್ಲರೂ ಮಲಗುವ ಸಮಯಕ್ಕೇ ಹಾಜರಾಗುತ್ತದೆ ಅಪರೂಪಕ್ಕೆ ಮಳೆ. ಇದನ್ನೂ ಅವನೇ ಹೇಳಿದ.. ನಾನು ಇನ್ನೂ ಹಾಗೆಯೇ ಕುಳಿತಿದ್ದನ್ನು ನೋಡಿ, ನನ್ನ ಭುಜದ ಮೇಲೆ ಕೈಯಿಟ್ಟು, ಬಾ ಒಂದೊಂದ್ ಕಪ್ ಚಾ ಕುಡಿಯುವ ಅಂದ! ಮಲಗೋ ಹೊತ್ತಲ್ಲಿ ಇವಂದೆಂಥಾ ಚಾ ಹುಚ್ಚು ಅಂತ ಕಣ್ಣು ಹುಬ್ಬು ಗಂಟಿಕ್ಕಿಕೊಳ್ಳುತ್ತಾ ಅನುಮಾನದಲ್ಲಿ ಅವನನ್ನು ನೋಡಿದೆ. ಅರೇ, ಹೋಗು ಬಾಲ್ಕನೀಲಿ ಮೇಣದ ಬತ್ತಿ ಹಚ್ಚು, ನಾನು ಚಾ ಮಾಡ್ಕೊಂಡ್ ತಗೊಂಡ್ ಬರ್ತೀನಿ,  ಮಳೆ ಜೋರಾಗೋ ಥರಾನೂ ಕಾಣ್ತಿದೆ, ಈಗ್ ಚಾ ಕುಡ್ದ್ರೆ ಸಖತ್ ಮಜಾ ಇರತ್ತೆ ಅಂದ. 'ಅಪ್ಪಣೆ ಮಹಾಪ್ರಭು' ಅಂತ ಎದ್ದು ನಾನು ನನ್ನ ಪಾಲಿನ ಕೆಲಸ ಮಾಡುವುದಕ್ಕೆ ಹೊರಟೆ, ನನಗೂ ಚೂರು ಬೇರೆ ಯೋಚನೆಗಳು ಇಷ್ಟೇ ಇಷ್ಟು ಹೊತ್ತಾದರೂ ಬರಲಿ ಅನ್ನುವ ಇಂಗಿತ ಇದ್ದಂತಿತ್ತು ಹಾಗೂ 'ಏನ್ ಮಾಡ್ತಾನೆ ಇವ್ನು' ಅನ್ನೋ ಕುತೂಹಲಾನೂ ಇತ್ತು. 


ಗಾಳಿ ಅಷ್ಟೇನು ಇರದೇ ಇದ್ದುದಕ್ಕೆ ಮೇಣದಬತ್ತಿ ಹಚ್ಚುವುದು ಕಷ್ಟ ಆಗಲಿಲ್ಲ. ಆದರೂ ಎಲ್ಲಿ ಮಳೆ ನೀರು ತಾಗಿ ನಂದಿಹೋಗುತ್ತದೋ ಅನ್ನುವ ಅಳುಕಿತ್ತು. ಅಷ್ಟರಲ್ಲಿ ಅವ ಎರಡು ಕಪ್ ಚಹಾದೊಂದಿಗೆ ಬಂದ. ನಮ್ಮ ಮನೆಯ ಬಾಲ್ಕನಿಯಿರುವುದು ರಸ್ತೆಗೆ ಅಭಿಮುಖವಾಗಿ ಅಲ್ಲ. ಬಾಲ್ಕನಿಯ ಎದುರಿಗಿರುವುದು ಒಂದು ಉದ್ಯಾನವನ. ನಾವಿಬ್ಬರೂ ಒಟ್ಟಿಗೆ ಕೂತು ಚಹಾ ಕುಡಿಯುವಾಗಲೆಲ್ಲಾ ಆ ಉದ್ಯಾನವನದ ಕಡೆಗೇ ಮುಖ ಮಾಡಿ ಕೂರುವುದು. ಹಾಗೆ ಕೂತು ಚಹಾದ ಒಂದೊಂದೇ ಗುಟುಕು, ಚಹಾ ಸೊಪ್ಪಿನೊಂದಿಗೆ ಹಾಲು ಸೇರಿ ಉಂಟುಮಾಡುವ ಬಣ್ಣ ತುಟಿಗೆ, ನಾಲಿಗೆಗೆ ತಾಕುವಾಗಿನ ಸ್ಪರ್ಶವನ್ನೂ, ಅದರ ಬಿಸಿಯನ್ನೂ, ಉಗಿಯಲ್ಲಿರುವ ಪರಿಮಳವನ್ನೂ ಅನುಭವಿಸುತ್ತಾ ನಾವು ಚಹಾ ಕುಡಿಯುವ ಸಂಭ್ರಮವನ್ನು ನೋಡಲು ಯಾರಾದರೂ ಎದುರಿಗೆ ಇದ್ದರೆ ಖಂಡಿತಾ ಅವರ ರೋಮ ರೋಮಗಳಲ್ಲೂ ಸುಖದ ಉತ್ತುಂಗದ ಅನುಭವವಾಗುತ್ತಿತ್ತೇನೋ, ಚಹಾ ಕುಡಿಯುವುದೆಂದರೆ ನಮಗೆ ಭವಬಂಧನಗಳಿಂದ ಮುಕ್ತವಾಗುವ ಮಾಯಕದ ಕ್ಷಣ. ಇವತ್ತೂ ಚಹಾ ಕುಡಿಯುವ ಕಾರ್ಯಕ್ರಮ ಹಾಗೆಯೇ ಮುಗಿಯಿತು. ಈಗ ವಂದನಾರ್ಪಣೆ ಅನ್ನುವ ಹಾಗೆ ನನ್ನ ಕಡೆಗೆ ತಿರುಗಿ  ಅವ, "ಈಗ ಹೇಳು, ಏನಾಯಿತು?" ಅಂತ ಮೃದುವಾಗಿ ಕೇಳಿದ. ಅವ ಕೇಳುವುದೇ ಹಾಗೆ! 


ಅವ ಕೇಳಿದ ಮೇಲೆ ಅವನಿಗೆ ಹೇಳದೇ ಯಾವುದನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ. ಒಂದು ಭೋರ್ಗರೆತ ನನ್ನೊಳಗೆ ಹುಟ್ಟಿಕೊಂಡಿದ್ದು ನನ್ನ ಅನುಭವಕ್ಕೆ ಬಂತು. ಆ ಭೋರ್ಗರೆತದ ರೌರವವನ್ನೂ ಕೂತು ಕೇಳುವ ತಾಳ್ಮೆ ಅವನಲ್ಲಿತ್ತು. ಕಡಲ‌ ತಡಿಯಲ್ಲಿ ಕಪ್ಪು ಕಲ್ಲುಗಳ‌ ಮೇಲೆ ಲವಣದ ಪರಿಮಳದ‌ ಗಾಳಿಗೆ ಮೈಯೊಡ್ಡಿ ಯಾವ ಗಡಿಬಿಡಿಯೂ ಇಲ್ಲದೆಯೇ ಕೂರುತ್ತೇವಲ್ಲಾ ಅಂಥ‌ ಶಾಂತತೆ ಅವನದು. ನನ್ನ ಕಣ್ಣಲ್ಲಿ ಅವ ಕಣ್ಣಿಡುವಾಗಲೇ ನನ್ನರ್ಧ ತಳಮಳಗಳನ್ನು ಅಪಹರಿಸಿಬಿಡುತ್ತಿದ್ದ. ನನಗೂ ಮೊದಮೊದಲಿಗೆ ಇಂಥವನೊಬ್ಬ ಇರುವುದಕ್ಕೆ ಸಾಧ್ಯವಾ, ಅಥವಾ ಇವೆಲ್ಲವೂ ನಾನೇ ನನಗಾಗಿ ಕಟ್ಟಿಕೊಂಡ ಭ್ರಮೆಗಳಾ‌ ಅನ್ನುವ ಅನುಮಾನಗಳು ಬಹಳಷ್ಟಿದ್ದವು. ನನ್ನೆಲ್ಲ ಪ್ರಶ್ನೆಗಳಿಗೆ ಪ್ರತೀ ಸಲವೂ ಅವ ಉತ್ತರವಾಗಿ ನಿಲ್ಲುತ್ತಿದ್ದ. ಇವತ್ತೂ ಅಷ್ಟೇ, ಅವ ಕೇಳಿದನಲ್ಲ, ಕೇಳುವುದರಲ್ಲೂ ಹಲವು ಬಗೆಗಳಿರುತ್ತವೆ. ಕೆಲವೊಮ್ಮೆ ಕೇಳಬೇಕು ಅಂತ ಕೇಳುವುದು, ಇನ್ನು ಕೆಲವೊಮ್ಮೆ ಕೇಳಲೇಬೇಕು ಅಂತ ಕೇಳುವುದು. ಇವನದು 'ಹೇಳು, ಕೇಳಿಸಿಕೊಳ್ಳುವುದಕ್ಕೆ ನಾನಿದ್ದೇನೆ' ಅನ್ನುವ ಸಾಂಗತ್ಯದ ಭರವಸೆ. ಅವನ ಎಡತೋಳನ್ನು ನನ್ನ ಬಲತೋಳಿಂದ ಬಳಸಿದೆ. ಅವನ ಬೆರಳುಗಳ ಮಧ್ಯದಲ್ಲಿ ನನ್ನ ಬೆರಳುಗಳನ್ನು ಹೊಸೆದೆ. ಒಂದು ಬಿಸಿಯಾದ ಅನುಭವ ಅವನ ರೋಮಗಳಿಂದ ನನ್ನ ಚರ್ಮಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಪ್ರೀತಿಸುವವರ ಒಂದು ಸ್ಪರ್ಶದಲ್ಲಿ ಎಲ್ಲ ಗಾಯಗಳನ್ನೂ ಹೊಲಿದು, ಮಾಯಿಸುವ ಔಷಧವಿದೆ ಅಂತ ಅವನೇ ಆಗಾಗ ಹೇಳುತ್ತಿರುತ್ತಾನೆ. ನಾನು ಅವನ‌ ಎದೆಗೆ ಒರಗಿಕೊಂಡಾಗಲೆಲ್ಲಾ, ಶತ ಶತಮಾನಗಳಿಂದ ಚೂರು ಬಿಸಿಲು ಕಡಿಮೆಯಾಗಬಹುದೆಂದು ಕಾಯುತ್ತಿರುವವನ ಎದೆಗೇ ಮರವೊಂದು ತನ್ನ ರೆಂಬೆಕೊಂಬೆಗಳ ಚಾಚಿ ನೆರಳ ಹಾಸಿದಂತೆ ಇದು ಅಂತ ನನ್ನ ಕುರಿತು ಯಾವಾಗಲೂ ಅವ ಹೇಳುತ್ತಿರುತ್ತಾನೆ. ಅವನಿಗೆ ಹೇಳಿದೆ, ಎಲ್ಲವೂ ಇದ್ದು ಏನೋ ಕಳೆದುಕೊಂಡಂತೆ; ಎಳೆದುಕೊಂಡ ಉಸಿರು ಮತ್ತೆ ಬಿಡಲಿಕ್ಕೇ ಸಾಧ್ಯವಾಗದಿದ್ದರೆ? ಅನಿಶ್ಚಿತತೆ; ನಾಳೆ‌ ಸೂರ್ಯೋದಯವಾದ ಕೂಡಲೇ ಮತ್ತೆ ಎಲ್ಲವೂ ಹೊಸತಾಗಿ ಶುರುವಾಗುತ್ತದೆ ಬಿಡು ಅಂತಂದುಕೊಂಡರೂ, ಆ ಎಲ್ಲಾ ನಾಳೆಯ ಮುಂಜಾವುಗಳೂ ನಿನ್ನೆಗಳ ಭಾರದೊಂದಿಗೇ ಹುಟ್ಟಿಕೊಂಡಂತೆ ತಳಮಳವಾಗುತ್ತದೆ. ಈ ಹೊತ್ತು ಹೇಗೋ ಕಳೆಯಬಹುದು ಬಿಡು ಅಂತೆಲ್ಲಾ‌ ಅಂದುಕೊಂಡ ಮಾತ್ರಕ್ಕೆ ಹಾಗೆಲ್ಲಾ ಅದು ಕಳೆದುಹೋಗುವುದಿಲ್ಲ. ನಿನಗೆ ಗೊತ್ತಲ್ವಾ, ಮನಸ್ಸು ಭಾರವಾದಷ್ಟೂ ಕಾಲದ‌‌ ಗತಿ ನಿಧಾನವಾಗುತ್ತಾ ಹೋಗುತ್ತದೆ. 


ಅವ ನಿಧಾನವಾಗಿ ನನ್ನ ಕೈಯನ್ನು ಅವನ ಎಡತೋಳಿನಿಂದ ಬಿಡಿಸಿಕೊಂಡ, ಅವನ ಎರಡೂ ತೋಳುಗಳಿಂದ ನನ್ನನ್ನು ಪೂರ್ಣವಾಗಿ ಆವರಿಸಿಕೊಂಡು ಅವನೆದೆಗೆ ಮತ್ತೆ ನನ್ನ ತಲೆ ಒರಗುವಂತೆ ಚಾಚಿಕೊಂಡ. ಒಂದು ಕ್ಷಣ ಅವನ ಕೆನ್ನೆಗಳಲ್ಲಿ ಮಂದಹಾಸದ ಗೆರೆಗಳು ಮೂಡಿ ಅಲ್ಲೇ ನೆಲೆಸಿದಂತೆ ಕಂಡವು, ನಾನು ಒರಗಿದಲ್ಲೇ ತಲೆಯೆತ್ತಿ ಅವನನ್ನೇ ನೋಡುವ ಪ್ರಯತ್ನದಲ್ಲಿದ್ದೆ. ನನ್ನ ತಲೆಗೂದಲ ಬುಡದಲ್ಲಿ ಕೈಯಾಡಿಸುತ್ತಾ ಅವ ಕೇಳಿದ, ಯಾಕೆ ಹೀಗೆ ಅನ್ಸ್ತಿದ್ಯಂತೆ?.. ಗೊತ್ತಿಲ್ಲ ಅಂತನ್ನುವುದು ನನ್ನ ಉತ್ತರವೆಂದು ಅವನಿಗೆ ಗೊತ್ತಿತ್ತು. ನಾನೇ ಮುಂದುವರೆದು ಹೇಳಿದೆ,‌ ಏನಾದರೊಂದು ಹೊಸತು ಶುರುವಾದ ಸಮಯದಲ್ಲಿ ಹೊಸತರ ಕುರಿತಾಗಿ ಹೆಚ್ಚು ಗಮನ ಕೊಡುವಾಗ ಹಳೆಯದರ ಕುರಿತಾಗಿ ಗಮನ ಚೂರು ಕಡಿಮೆಯಾದಂತೆ‌ ತೋರುವುದೇನೋ ಹೌದು; ಆದರೆ, ಅದರರ್ಥ ನಾವು ಹಳತನ್ನು ಮರೆತೆವು ಅಂತೇನೂ ಅಲ್ಲ‌ ಅಲ್ವಾ? ಆದರೆ, ಯಾಕೆ ಕೆಲವೇ ಕೆಲವು ಹಳೆಯ ಸಂಬಂಧಗಳು ಮಾತ್ರವೇ ಎಷ್ಟೋ ಕಾಲಗಳ‌ ನಂತರವೂ ಸಹಜವಾಗೇ ಇರುತ್ತದೆ, ಉಳಿದವುಗಳು ಏನೂ ಇರಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೇರೆಯಾಗಿ ಹೋಗುತ್ತವೆ? ಅಷ್ಟೂ ವರ್ಷಗಳ ಕಾಲದ ಅಷ್ಟೂ ನೆನಪನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಬಹುದಾ? ಕೆಲವೊಮ್ಮೆ ಮಾತು ಅನಗತ್ಯವಾಗುತ್ತದೆ, ಆದರೆ ಅದನ್ನೇ‌ ಅಹಂಕಾರ ಅಂತಂದುಕೊಂಡು ದೂರವಾಗಬಹುದಾ? ಅಸ್ಪಷ್ಟ ಸ್ವಪ್ನಗಳಲ್ಲಿ ಒಂದು ಪರಿಚಿತ ದಾರಿಗಾಗಿ ಪರಿತಪಿಸುತ್ತಾ ಇರೋರಲ್ವಾ ನಾವು? ನೀನೇ ಹೇಳು ಹೀಗೆ ಸಂಬಂಧಗಳು ಸವಕಲಾಗಬಹುದಾ? ಗುಮ್ಮನಂತೆ ಮುಖ ಮಾಡಿಕೊಂಡು ಅವನ ನೋಡಿದೆ. ಮುಟ್ಟುತ್ತಿರುವನೋ ಇಲ್ಲವೋ ಅನ್ನುವಂತೆ ಹಣೆಯ ತುದಿಯಿಂದ ತನ್ನ ಬಲಗೈಯ ತೋರುಬೆರಳನ್ನು ಜಾರಿಸುತ್ತಾ ಜಾರಿಸುತ್ತಾ ಕಣ್ಣು ಹುಬ್ಬುಗಳ ಮಧ್ಯದ ಹಾದಿಯಿಂದ ಕೆಳಗಿಳಿದು ಮೂಗಿನ ತುದಿಯಲ್ಲಿ ನಿಂತ, ಪಕ್ಕದ ಮೂಗುತಿ ಹವಾಮಾನ ವೈಪರೀತ್ಯದ ದಾಳಿಗೆ ತುತ್ತಾಗಿ ಅಸ್ಥಿರ ಚಲನೆಯಲ್ಲಿತ್ತು. ಇದು ಹೊಸತಲ್ಲ, ಆದರೂ ಇದು ಮತ್ತೆ ಮತ್ತೆ ಹೊಸತೆನ್ನುವಂಥದ್ದೇ ಅನುಭವ, ಅವನಿಗೆ ಮಾತ್ರ ಗೊತ್ತಿರುವ ನನ್ನ ಗುಟ್ಟು.. 


ಮುಂದುವರೆದು ಅವ ಹೇಳಿದ, ನಿನಗೆ ಗೊತ್ತಾ, ನಾವು ಅದೆಷ್ಟೋ ನೆನಪುಗಳ ನೆರಳುಗಳಿಂದ ಆಚೆ ನಿಂತು ತಾಜಾ ಬಿಸಿಲನ್ನು ನಿಧಾನವಾಗಿ ಉಸಿರಲ್ಲಿ ತುಂಬಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತೇವೆ, ಆದರೆ ಅದು ಬರೀ ಅಷ್ಟೇ ಅಲ್ಲ; ಆ ನೆರಳುಗಳ ನೆನಪಲ್ಲೇ ಈ ಬಿಸಿಯನ್ನು ಅನುಭವಿಸುತ್ತೇವೆ. ಇವೆರಡೂ ಬೇರೆ ಬೇರೆ ಕ್ರಿಯೆಗಳಾದರೂ ಒಂದರ ಅನುಭವವನ್ನು ಇನ್ನೊಂದು ಸಲಹುತ್ತದೆ. ನೆನಪಿದೆಯಾ ನಿನಗೆ, ಆವತ್ತೊಂದಿನ ನಾವು ಆ ಹಳದಿ ಹೂವಿನ ಕಣಿವೆಗೆ ಹೋಗುವ ಮುನ್ನ ರಾತ್ರಿ ಎತ್ತರದ ಭಾಗದ ಮನೆಯಲ್ಲಿ ತಂಗಿದ್ದು.. ಜೀರುಂಡೆಗಳು ಪೂರಾ ರಾತ್ರಿ ಕಿರ್ರೆನ್ನುತ್ತಾ ಕೂಗಿದ್ದು, ಅದ್ಯಾವುದೋ ವಿಲಕ್ಷಣ ಪರಿಮಳ ಅಲ್ಲಿನ ಇಡೀ ವಾತಾವರಣದಲ್ಲಿ ಹರಡಿಕೊಂಡಿದ್ದು, ಅಲ್ಲಿನ ಆ ರಾತ್ರಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ನಾನು ಒದ್ದಾಡುತ್ತಿರುವಾಗ ನೀನು ಅರ್ಧ ರಾತ್ರಿಯವರೆಗೂ ನನ್ನನ್ನು ಹೀಗೇ ಒರಗಿಸಿಕೊಂಡು ನಿನ್ನ ಬಾಲ್ಯದ ಕತೆಗಳನ್ನು ಹೇಳಿ ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು.. ಆವತ್ತು ಆ ಒದ್ದಾಟವನ್ನು ನಾವಿಬ್ಬರೂ ಕಡಿಮೆ ಮಾಡಲಿಕ್ಕಾಗುವುದಿಲ್ಲವೆಂಬುದು ಇಬ್ಬರಿಗೂ ಅರಿವಿತ್ತು. ನಾವು ಆ ಪ್ರಯತ್ನವನ್ನೂ ಮಾಡಲಿಲ್ಲ, ಬದಲಾಗಿ ಬದುಕನ್ನು ಹಂಚಿಕೊಂಡೆವು, ವರ್ತಮಾನದಲ್ಲಿ ಭೂತಕಾಲವನ್ನೂ ನಿನ್ನ ಬಾಲ್ಯವನ್ನೂ ಜೀವಿಸಿದೆವು, ಆ ನೆನಪುಗಳ ಭಾಗವಾಗಿದ್ದ ಅದೆಷ್ಟೋ ವ್ಯಕ್ತಿಗಳು ಈಗ ಜೊತೆಯಲ್ಲಿ ಇಲ್ಲ ಅಲ್ವಾ.. ನಾವು ಯಾವ ನೆನಪನ್ನು ಉಳಿಸಿಕೊಳ್ಳಬೇಕು ಅಂತ ಬಯಸುತ್ತೇವೋ ಅಂಥವುಗಳನ್ನು ಮಾತ್ರ ಉಳಿಸಿಕೊಳ್ಳುತ್ತೇವೆ; ಅವುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಬಹುದು. ಕೆಲವರು ಹಾಗೆಯೇ, ಆ ಭಾಗದ ಬದುಕಿನಲ್ಲಿ ಮಾತ್ರ ಭೇಟಿಯಾಗುವವರು. ಅದರ ನಂತರ ಅವರ ಅಸ್ತಿತ್ವವೆನ್ನುವುದು ಸ್ವಪ್ನದ ಹಾಗೆ. ಯಾವುದೋ ಅನಪೇಕ್ಷಿತ ಸಮಯದಲ್ಲಿ ಧುತ್ತನೆ ನೆನಪಾಗಬಹುದು; ಅಥವಾ, ಕೆಲವೊಮ್ಮೆ ಮುಗುಳುನಗೆಯೊಂದಿಗೆ ವರ್ತಮಾನವನ್ನು ಉಲ್ಲಸಿತಗೊಳಿಸಬಹುದು. ನಿನ್ನ ಅನಿಶ್ಚಿತತೆ, ನಿನ್ನ ನೆನಪುಗಳು ಹಾಗೆಯೇ ಇರಲಿ ಬಿಡು, ಈಗ ಇರುವ 'ನೀನು' ಆಗಿರುವುದು ಈ ಎಲ್ಲ ಅನುಭವಗಳಿಂದಲೇ.. ಅವುಗಳನ್ನೇ ತಿರಸ್ಕರಿಸಿದರೆ ನಿನ್ನನ್ನೇ ತಿರಸ್ಕರಿಸಿದಂತೆ. ಬದುಕು ಎಲ್ಲದರ ಒಟ್ಟೂ ಮೊತ್ತ, ಬಿಡಿ ಹತ್ತುಗಳ ಲೆಕ್ಕದಲ್ಲಿ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಅಲ್ವಾ..  ಇವತ್ತು ನಾ ನಿನಗೆ ನನ್ನ ಬಾಲ್ಯದ ಕತೆಗಳನ್ನು ಹೇಳ್ತೀನಿ, ನಿನ್ನಷ್ಟು ಚೆಂದ ಅಲ್ಲ, ಆದ್ರೂ, ಏನೋ ಚೂರು ಹಾಂಗೇ.. ಅನ್ನುತ್ತಾ ನನ್ನ ಮೂಗನ್ನು ತನ್ನ ಬೆರಳಿಂದ ಕುಟುಕಿದ. 


ಅವರಿಬ್ಬರೂ ಎರಡು ಗಾಯಗಳು ಒಂದಕ್ಕೊಂದು ಅಂಟಿಕೊಂಡಂತೆ ಕೂತಿದ್ದರು. ಬೇಗ ಮಾಯುವುದಕ್ಕಿಂತ ಆ ನೋವಿನ ಪ್ರತಿ ಕ್ಷಣವನ್ನೂ ಜೀವಿಸುವುದೇ ಮುಖ್ಯ ಎನ್ನುವಂತೆ.. ಬೇಕಂತಲೇ ಒಂದು ಸಣ್ಣ ಕಲೆ ಉಳಿಸಿಕೊಳ್ಳುವಂತೆ.. ಅನಾಥ ಮೌನದ ಕಣಕಣಗಳಲ್ಲೂ ಮಳೆಯ ಹಾಡು ಇನ್ನಷ್ಟು ವಿಲೀನವಾಗಿತ್ತು, ಆ ರಾತ್ರಿ ಮತ್ತಷ್ಟು ಪ್ರೌಢವಾಗಿತ್ತು...


~`ಶ್ರೀ'

   ತಲಗೇರಿ

ಬುಧವಾರ, ಜುಲೈ 14, 2021

ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?

 ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ  ಇತ್ಯಾದಿ...?



ಯಾವುದು ಕತೆಯಾಗಬಹುದು? ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಕತೆಗಳು ಸಿಗದೇ ಹೋಗಬಹುದು. ಆದರೆ, ಕತೆಗಾರನಿಗೆ ಸಿಕ್ಕಿದ್ದೆಲ್ಲವೂ ಕತೆಯೇ. ಮುಂಚೆ ಇದ್ದಂಥ ಕತೆಯ ಸ್ವರೂಪ, ಉದ್ದೇಶ, ರಚನಾ ತಂತ್ರ ಮತ್ತು ಅದರ ವಸ್ತುಗಳು ಕಾಲದ ಸ್ಪಂದನೆಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ ಈಗಿನ ಕತೆಯ ಮಿಡಿತಗಳು ಬೇರೆಯದೇ ಆಗಿ ನಮಗೆ ಸಿಗುತ್ತವೆ. 'ಅಲ್ಲಿಗೆ ಎಲ್ಲ ಮುಗಿದು, ಅಲ್ಲಿ ಎಲ್ಲರೂ ಸುಖವಾಗಿದ್ದರು' ಎನ್ನುವ ಕತೆಗಳಿಂದ ಈಗ ನಾವು ಇನ್ನಷ್ಟು ವಿಸ್ತಾರವನ್ನು ಹುಡುಕಿ ಹೊರಟಿದ್ದೇವೆ. ಒಟ್ಟಾರೆ ಬದುಕಿಗಿಂತ, ಅದರಲ್ಲಿ ಇರುವ ಕ್ಷಣಗಳನ್ನು ಬಿಡಿಸಿಟ್ಟು, ಅವುಗಳ ಮುಖೇನ ಇಡೀ ಬದುಕನ್ನು ನೋಡುವ ಈ ಕ್ರಮವೂ ಒಂಥರಾ ಚೆಂದವೇ. ಬಹಳಷ್ಟು ಸಲ ಅನಿಸುವುದೇನೆಂದರೆ, ನಮ್ಮದೇ ಬದುಕಿನಿಂದ ಕತ್ತರಿಸಿ ತೆಗೆದ ಭಾಗಗಳಿಗೆ ಹಿಡಿದ ಕನ್ನಡಿಯೇ ಕತೆ. ಬಿಂಬಗಳು ನಾವು, ನೀವು ಯಾರೂ ಆಗಿರಬಹುದು. ಅದಕ್ಕಾಗಿಯೇ ಓದುಗ ಆ ಕಥಾ ಪರಿಸರದಲ್ಲಿ ತಾನು ಹೊಕ್ಕದೇ ಓದುತ್ತೇನೆಂದರೆ, ಆ ಕತೆ ಓದುಗನಲ್ಲಿ ಹೊಕ್ಕುವುದು ತುಸು ಕಷ್ಟವೇ! ಓದುಗನಲ್ಲಿ ಅದೆಂಥದ್ದೇ ಜ್ಞಾನವನ್ನು, ತಿಳಿವಳಿಕೆಯನ್ನು ಅದು ಬಿತ್ತಿದರೂ ಆ ಕ್ಷಣಕ್ಕೆ ಉಂಟಾಗುವ ಭಾವತೀವ್ರತೆಯೇ ಈ ಎಲ್ಲಾ ಕಥಾ ಪ್ರಪಂಚದ ಅಸ್ತಿತ್ವದ ಮೂಲ; ಇದು ಕೇವಲ ಕತೆಗಳಿಗೆ ಸೀಮಿತವಲ್ಲ, ಎಲ್ಲಾ ಕಲಾ ಪ್ರಕಾರಗಳಿಗೂ ಇದು ಸಮಂಜಸ ಅಂತನ್ನಬಹುದೇನೋ. ಬಹುತೇಕ ಎಲ್ಲ ಓದುಗರಿಗೂ ತಮ್ಮ ತಮ್ಮ ನಂಬಿಕೆಗಳ ಪ್ರಭಾವಲಯದಿಂದ ಆಚೆ ನಿಂತು ಈ ಹೊಸ ಪ್ರಪಂಚದಲ್ಲಿ ಸಂವಹಿಸುವುದು ಚೂರು ಕಷ್ಟವೇ, ಜೊತೆಗೆ ಅದು ಮನುಷ್ಯ ಸಹಜ ಗುಣ ಕೂಡಾ ಹೌದು. ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆಯೇ ಅಲ್ಲವಾ ನಮ್ಮೆಲ್ಲ ಆಯ್ಕೆಗಳು ನಿಂತಿರುವುದು. ಸರಿ ತಪ್ಪುಗಳ ವಿಚಾರವಾಗಲೀ, ಅಥವಾ ದಕ್ಕುವಿಕೆಯ ಕುರಿತಾಗಿನ ವಿಚಾರಗಳಾಗಲೀ ಇಲ್ಲಿನ‌ ವ್ಯಾಪ್ತಿಯೊಳಗಿಲ್ಲ; ಅವು ಆಮೇಲೆ ಹುಟ್ಟಿಕೊಳ್ಳುವ ಸಂಗತಿಗಳು. 'ಯಾವುದು ಕತೆಯಾಗಬಲ್ಲದು' ಅನ್ನುವುದಕ್ಕೆ 'ಯಾವುದೂ ಕತೆಯಾಗಬಲ್ಲದು' ಅನ್ನುವುದೇ ಅತಿ ಹತ್ತಿರದ ಉತ್ತರವಾಗಬಹುದು ಅನಿಸುತ್ತದೆ; ಕತೆಯಾಗಿಸುವವರು ಬೇಕಷ್ಟೇ! ಹೀಗೆ ಮನುಷ್ಯಲೋಕದ ಸ್ವಭಾವಗಳನ್ನು ತೀರಾ ಹತ್ತಿರದಿಂದ, ಯಾವುದೇ ನಿರ್ಣಯಗಳನ್ನು ಹೇರದೇ ನೋಡುವ ಪ್ರಯತ್ನದ ಕಥಾ ಸಂಕಲನವೇ ಅಶೋಕ ಹೆಗಡೆಯವರ 'ವಾಸನೆ ಶಬ್ದ ಬಣ್ಣ ಇತ್ಯಾದಿ'. 


ಇಲ್ಲಿನ ಕಥಾ ಪಾತ್ರಗಳು ಹೊರಗಿನದಲ್ಲ, ಹಾಗಂತ ತೀರಾ ಒಳಗಿನದೂ ಅಲ್ಲ. ನಗರ, ಹಳ್ಳಿ ಇತ್ಯಾದಿಗಳು ಇದ್ದರೂ ಅವುಗಳಷ್ಟೇ ಅಲ್ಲ. ಇಲ್ಲಿ ಇವೆಲ್ಲವೂ ನಿಮಿತ್ತಗಳು ಹಾಗೂ ಆ ಪರಿಸರದ ಮನುಷ್ಯರು ಮತ್ತವರ ಮನಸ್ಥಿತಿಗಳೇ ಇಲ್ಲಿನ ಮುಖ್ಯ ಅಂಗ. ಇಂದ್ರಿಯಗಳು ವಾಸನೆ, ಶಬ್ದ, ಬಣ್ಣ, ರುಚಿ, ಸ್ಪರ್ಶ ಇತ್ಯಾದಿಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೇ ಅವು ಲೋಭ, ಮೋಹ, ಕಾಮ‌ ಇತ್ಯಾದಿಗಳನ್ನೂ ಉದ್ದೀಪಿಸುತ್ತವೆ. ಬಹುತೇಕ‌ ಎಲ್ಲಾ ಕತೆಗಳನ್ನು ಓದುವಾಗಲೂ ಪೂರ್ವಗ್ರಹಗಳಿಲ್ಲದೇ ಓದುವುದೇ ಅವುಗಳಿಗೆ ಕೊಡಬೇಕಾದ ಗೌರವ. ಬರೆಹಗಾರ ಬರೆಯುತ್ತಾ ಬರೆಯುತ್ತಾ ಮನುಷ್ಯನಾಗಬಹುದು, ಓದುಗ ಓದುತ್ತಾ ಓದುತ್ತಾ ಮನುಷ್ಯನಾಗಬಹುದು. ಇಂಥದ್ದೇ ಮನೋಭೂಮಿಕೆ ಈ ಕಥಾ ಸಂಕಲನದ ಕತೆಗಳಿಗೆ ಬೇಕು. ಪ್ರಾಪಂಚಿಕ ಸುಖ, ಮತ್ತದರ ತಲ್ಲಣಗಳನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾ, ನಿಜವಾದ ಮನುಷ್ಯ ಲೋಕದೊಳಗೆ ಲೇಖಕರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ವರೂಪವಿದೆ, ಕುರೂಪವಿದೆ. ಅದೆಂಥದ್ದೇ ಆದರೂ ಅದು ಮನುಷ್ಯನಿಗೇ ಸಂಬಂಧಪಟ್ಟಿದ್ದು ಅನ್ನುವುದು ಗಮನಿಸಬೇಕಾದ ಸಂಗತಿ. ಕಥಾ ಸಂಕಲನದ ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಾಸನೆಯಿದೆ, ಬಣ್ಣ ಇದೆ ಹಾಗೂ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಶಬ್ದವಿದೆ. ಅದರ ಜೊತೆಗೆ ಈ 'ಇತ್ಯಾದಿ'ಗಳಲ್ಲಿ ಅವ್ಯಕ್ತವಾದ ತಳಮಳ, ಅಸ್ಥಿರತೆ, ನೋವು, ತಲ್ಲಣಗಳೂ ಇವೆ. ಈ ಕಥಾ ಪ್ರಪಂಚದಲ್ಲಿ ಮಡಿವಂತಿಕೆಯಿಲ್ಲ; ಸಹಜವಾದ ವಾತಾವರಣವಿದೆ. ಇಲ್ಲಿನ ಎಲ್ಲ ಮಾತುಗಳೂ ಅಪರಿಚಿತ ಪ್ರಪಂಚದಿಂದ ಕದ್ದು ತಂದವುಗಳಲ್ಲ. ಅದೇ ಪರಿಸರದಲ್ಲಿ ಜೀವಿಸಿದ ಮಾತುಗಳವು. 


ಇಡೀ ಪುಸ್ತಕದ ತುಂಬಾ ಲೇಖಕರು ಭಾಷೆಯನ್ನು ಬಳಸಿಕೊಂಡ ರೀತಿ ಹಾಗೂ ಕೆಲವು ಚಿತ್ರಣಗಳನ್ನು ಕಟ್ಟಿಕೊಟ್ಟ ರೀತಿ ಕತೆಗಾರನ ಸೂಕ್ಷ್ಮಪ್ರಜ್ಞೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಅದನ್ನು ಅನುಭವಿಸುವ ಸುಖಕ್ಕೆ ಮುಖದಲ್ಲೊಂದು ಮಂದಹಾಸ ಸುಳಿಯದೇ ಹೋಗುವುದಿಲ್ಲ! 'ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ' ಅಂತ ಶಿವರಾಮಜ್ಜನ ಪಾತ್ರದ ಕುರಿತಾಗಿ ಹೇಳುತ್ತಾ ಹೋಗುವಾಗ ಹಣೆಯಿಂದ ಹಾದು ಹೋಗುವ ನಮ್ಮದೇ ರಕ್ತನಾಳಗಳು ಉಬ್ಬಿದ ಅನುಭವವಾಗುತ್ತದೆ.   'ನೆಲದ ಕಾಲನ್ನೇ ಬಿಡಿಸುವ' ಲೇಖಕರು, ಒಂದು ಪಾತ್ರವನ್ನು 'ನೆರಳಿನ ಸಹಿತ' ಮನೆಯಿಂದ ಆಚೆ ಹಾಕುತ್ತಾರೆ. ನೆರಳಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ, ಆದರೂ ಹೊರಗೆಲ್ಲೋ ನಿಂತಾಗ ಅಪ್ಪಿ ತಪ್ಪಿ ಬೀಳಬಹುದಾದ ನೆರಳು ಕೂಡಾ ಮನಸ್ಸಿನೊಳಗೆ ಬೀಳದ ಹಾಗೆ ಹೊರಗೆ ಹಾಕುವುದೆಂದರೆ ಅದಕ್ಕೆ ಗಟ್ಟಿ ಮನಸ್ಸೇ ಬೇಕು! 


ಕಾಲ ಇದೆ, ಕಾಲ ಕಳೆಯುತ್ತಾ ಹೋಗುತ್ತದೆ. ಕಾಲ ತನ್ನದೇ ವ್ಯೋಮದಲ್ಲಿ ತನ್ನನ್ನೇ ತಾನು ಖಾಲಿಯಾಗಿಸಿಕೊಳ್ಳುತ್ತಲೋ ಅಥವಾ ಕಬಳಿಸುತ್ತಲೋ ಹೋಗುವ ಒಂದು ಪ್ರಕ್ರಿಯೆಯಂತೂ ಇದೆ. ಕೆಲವೊಮ್ಮೆ ನಮ್ಮ ಇಂದಿನ ದಿನಗಳು ಹಿಂದಿನ ದಿನಗಳ ನೋವಿಗೆ ಚೂರು ಉಪಶಮನ ನೀಡಬಲ್ಲವು. ಬಹುತೇಕ ನೆನಪುಗಳು ಮಾಸುತ್ತವೆ. ಇನ್ನು ಕೆಲವು, ನಮ್ಮ ಮನಸ್ಸಿನ ಸಮತೋಲನವನ್ನು ಆಗಾಗ ಏರುಪೇರಾಗಿಸುತ್ತವೆ ಹಾಗೂ ಅದರಿಂದ 'ಈ ಹೊತ್ತು' ಅನ್ನುವುದು ಕೂಡಾ ಜಾರಿಹೋಗುತ್ತದೆ. ಇದು ಕಾಲವೇ ಕಾಲವನ್ನು ತಿನ್ನುವುದಾ? ಅನ್ನುವ ಒಂದು ಕುತೂಹಲಕಾರಿ ಪ್ರಶ್ನೆಯೊಂದು 'ದಿನಗಳು ದಿನಗಳನ್ನು ತಿನ್ನುತ್ತಾ' ಅನ್ನುವ ವಾಕ್ಯದ ಮೂಲಕ ವ್ಯಕ್ತವಾಗಿದೆ.


ನಮ್ಮಲ್ಲಿ ಇವತ್ತಿಗೂ ಸ್ತ್ರೀಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲ ಮನಸ್ಸುಗಳು ಕಡಿಮೆಯೇ. ಸಾಹಿತ್ಯದಲ್ಲಿ ಕೂಡಾ 'ಹೆಚ್ಚಿಗೆ' ಹೇಳುವುದಕ್ಕೆ ತುಸು ಕಷ್ಟವೇ. ಯಾವಾಗ ಪುರುಷ ತನ್ನ ಕಣ್ಣುಗಳಿಂದ ಸ್ತ್ರೀ ಸಂವೇದನೆಯಿರುವ, ಅವಳ ಭಾವಪ್ರಪಂಚವಿರುವ ಸಾಹಿತ್ಯವನ್ನು ನೋಡುತ್ತಾನೋ ಅಲ್ಲಿಗೆ ಅದನ್ನು ನೋಡುವ ಹಾದಿಯೇ ತಪ್ಪಿದಂತಾಗುತ್ತದಲ್ಲವಾ? ಇದನ್ನು 'ಅವಳ‌ ಕಣ್ಣು'ಗಳಲ್ಲೇ ಅವಳು 'ಹೇಳಿದ ಹಾಗೇ' ನೋಡಬೇಕು. ಆದರೆ ನಮಗೆ ದೃಷ್ಟಿಯೂ ಬೇರೆ, ದೃಷ್ಟಿಕೋನವೂ ಬೇರೆ; ಜಗದ ಸಹಜ ಸ್ವಭಾವ ಅನ್ನೋಣವೇ? ಚೂರಾದರೂ ಬದಲಾಗಬಹುದೇನೋ ತಿಳಿದಿಲ್ಲ.. ಇಲ್ಲಿನ ಕತೆಯಲ್ಲೊಂದು ಮಾತಿದೆ, "ನನ್ನ ಮೊಲೆ ಹಿಡಿದ ನಿನ್ನದೇ ಕೈಯಲ್ಲಿ ಎದೆ‌ ಸ್ವಲ್ಪ ಮುಟ್ಟಿ ನೋಡು ಮಾರಾಯಾ, ನೋವು ಅರ್ಥವಾದರೂ ಆದೀತೇ ನಿನ್ನ ಬೈನರಿ ಮೆದುಳಿಗೆ" 


ಮದುವೆಯಲ್ಲಿ ಗಂಡಿನ ಪಾದ ಸರಿಯಾಗಿ ತೊಳೆಯಲಿಲ್ಲವೆಂದು ಶುರುವಾದ ಜಗಳ ಮದುವೆ ಹೆಣ್ಣಿನ ಕಣ್ಣೀರಿನಲ್ಲೇ ಪಾದ ತೊಳೆಯಬೇಕಾದಲ್ಲಿಗೆ ಹೋಯಿತು ಅನ್ನುವಾಗ ಮುಂಚೆ ಇದ್ದ, ಈಗಲೂ ಬಹುತೇಕ ಕಡೆಗಳಲ್ಲಿ ಇರಬಹುದಾದ ದರ್ಪಕ್ಕೆ ಹಿಡಿದ ಕನ್ನಡಿಯೇ ಅಲ್ಲವಾ ಇದು? ಮುಖದಲ್ಲಿ ನೆರಿಗೆಗಳು ಬಹಳಷ್ಟಿವೆ, ತಿಕ್ಕಿ ತಿಕ್ಕಿ ತೆಗೆಯಲೇಬೇಕು ಬಿಡಿ! 


"ಈ ಸಮುದ್ರದ ನೀರಿನ ಮೇಲೆ ನಡೆಯುತ್ತಾ ಸಾಗಿದರೆ ಗೋಕರ್ಣದ ಕಡಲಿನ ದಂಡೆ ಸಿಗಬಹುದೇ.." ಆಸ್ಟ್ರೇಲಿಯಾದ ಸಮುದ್ರವೊಂದು ಗೋಕರ್ಣದ ಸಮುದ್ರದೊಂದಿಗೆ ಬೆಸೆದುಕೊಳ್ಳುವುದು ಹೀಗೆ. ದೂರದಲ್ಲೇ ಇದ್ದರೂ, ಮೂಲವನ್ನು ದೂರ ಎನ್ನುವ ಮಾಧ್ಯಮದ ಮೂಲಕವೇ ಮುಟ್ಟಬಹುದಾದ, ಅದರಿಂದ ತೆರೆದುಕೊಳ್ಳಬಹುದಾದ ನಾಳೆಗಳಿಗೆ ತೆರೆದುಕೊಳ್ಳುವುದೂ ಒಂದು ಚೆಂದವೇ ಅಲ್ಲವಾ?


ಹೀಗೆ ಇಲ್ಲಿನ‌ ಪ್ರತಿ ಕತೆಯೂ ನಮ್ಮದೇ ಲೋಕದ ಇನ್ನೊಂದು ಭಾಗವನ್ನು, ನಮ್ಮದೇ ಜಗತ್ತಿನ ಇತರ ಪಾತ್ರಗಳನ್ನು, ನಮ್ಮದೇ ಸ್ವಭಾವಗಳ ಇನ್ನಷ್ಟು ಮುಖಗಳನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತದೆ. ಕತೆ ಕಟ್ಟುವುದೂ ಒಂದು ಕಲೆ ಅಂತ ಒಪ್ಪುವುದಾದಲ್ಲಿ ಅದಕ್ಕೆ ಕೌಶಲವೂ ಬೇಕಲ್ಲವಾ? ಅಂಥ ಕೌಶಲ್ಯದ ನಿದರ್ಶನ ಅನ್ನುವಂತಿದೆ ಇಲ್ಲಿನ ಕಥನ ಶೈಲಿ, ಇಲ್ಲಿನ ವಾಕ್ಯಗಳು. ಇಲ್ಲಿನ ಕತೆಗಳನ್ನು ಓದಿದ ನಂತರ, "ಯಾವುದು ಕತೆಯಾಗಬಹುದು' ಅಂತ ಕೇಳಿದರೆ, ಮತ್ತೊಮ್ಮೆ ಸ್ಪಷ್ಟವಾಗಿ ಖಂಡಿತಾ ಹೇಳಬಹುದು " ಯಾವುದೂ ಕತೆಯಾಗಬಲ್ಲದು"


~`ಶ್ರೀ'

   ತಲಗೇರಿ

ಸೋಮವಾರ, ಜೂನ್ 7, 2021

ನೆನಪಿನ ಹಂಗಿಗೆ ನಾಲ್ಕು ಸಾಲು...


 ನೆನಪಿನ ಹಂಗಿಗೆ ನಾಲ್ಕು ಸಾಲು...



ಸಖೀ ರಾಧೆ,


ಅದೆಷ್ಟು ವಸಂತಗಳು ಹೂ ಮುಡಿದು ಕೂತವು, ಅದೆಷ್ಟು ಮೇಘಮಾಲೆ ನಭವನ್ನು ಅಲಂಕರಿಸಿದವು, ಅದೆಷ್ಟು ಮರಗಳು ಎಲೆಯುದುರಿಸಿ ನಿಂತವು ಕೃಷ್ಣನಿಲ್ಲದೇ? ಇದು ನಾನು ಬರೆಯುತ್ತಿರುವ ನಾಲ್ಕನೇ ಪತ್ರ ನಿನಗೆ. ನಮ್ಮ ಬೃಂದಾವನದ ದಿನಗಳನ್ನು ನೆನಪಿಸುವ ಸಲುವಾಗಿಯೇ ಪತ್ರ ಬರೆಯುತ್ತಿದ್ದೇನೆ. ಬೃಂದಾವನದ ಹಾದಿಯ ಇಕ್ಕೆಲಗಳಲ್ಲಿ ದುಂಬಿಯ ಗೀಗೀಪದ ಅದ್ಯಾವ ಹಾಡುಗಾರನಿಗಿಂತ ಕಡಿಮೆಯಿತ್ತು ಹೇಳು, ಎಲ್ಲಾ ಸ್ವರಗಳನೂ ಅವಕೆ ಹೇಳಿಕೊಟ್ಟವರಾರು ಅಂತ ನೀನೊಮ್ಮೆ ವಿಸ್ಮಯದಿಂದ ಕೇಳಿದ್ದು ನೆನಪಿದೆಯಾ? ನಿನ್ನ ಮೂಗಿನ ತುದಿಗೊಂದು ದುಂಬಿ ಬಂದು ಕೂತಿದ್ದು, ನೀನು ಹೆದರಿ ಕಿರುಚಿದ್ದು, ಅದು ನಿನ್ನತ್ತ ಮತ್ತೆ ಮತ್ತೆ ಬಂದಂತೆಲ್ಲಾ ಓಡಿಹೋಗಿ ನನ್ನ ಹಿಂದೆ ನೀ ಅಡಗಿ ನಿಂತಿದ್ದು, ಗಾಳಿಯಲ್ಲೇ ರೆಕ್ಕೆಬಡಿಯುತ್ತಾ ಅದು ಕೊನೆಗೊಮ್ಮೆ ನನ್ನ ಬೆರಳುಗಳ ಸ್ಪರ್ಶಿಸಿ ಓಡಿಹೋಗಿದ್ದು ನೆನಪಿದೆಯಾ ನಿನಗೆ? ನಾನೇನು ಮಾಡಿದೆ ಎಂದು ಬೆನ್ನ ಹಿಂದಿಂದ ನನ್ನ ಹೆಗಲುಗಳನ್ನು ಗಟ್ಟಿ ಹಿಡಿದು ಇಣುಕಿ ನೋಡಿದ್ದೆಯಲ್ಲಾ, ನಿನ್ನ ನುಣುಪು ಕದಪುಗಳು ತಾಕಿ ಬೆಣ್ಣೆ ಕಳ್ಳ ಕೃಷ್ಣನೇ ಕರಗುತ್ತಿದ್ದ. ಸಂಭಾವಿತ ನಾನು, ಸುಳ್ಳೆಲ್ಲಾ ಹೇಳುವುದೇ ಇಲ್ಲ, ನಂಬಲೇಬೇಕು ನೀನು, ಏನಂತೀಯಾ ಹೌದಾ ಅಲ್ಲವಾ! ಯಾವ ಭಯವೂ ಇಲ್ಲದೇ ನನ್ನ ಭುಜಗಳಿಗೆ ತಲೆಯಿಟ್ಟು ಪುಟ್ಟ ಕಂದಮ್ಮನಂತೆ ಮಲಗುವುದನ್ನು ಅದ್ಯಾರು ಕಲಿಸಿದರು ನಿನಗೆ? ಅಷ್ಟು ನಂಬಿಕೆಯೇನು ಈ ಮಾಯಾವಿಯ ಮೇಲೆ! ಬಹುಶಃ ಸ್ನೇಹವೆಂದರೆ ಇದೇ ಇರಬೇಕು, ಪ್ರೇಮಕ್ಕೂ ಮೊದಲು ಸ್ನೇಹವಾಗಬೇಕಲ್ಲವಾ ಸಖೀ.. ಬೃಂದಾವನ ಈ ಎಲ್ಲವುಗಳ ಆರಂಭವಾಗಿತ್ತಾ? ಅಥವಾ ಗೋಕುಲದಲ್ಲೇ ಈ ಸಮಾಗಮಕ್ಕೆ ನಾಂದಿಯಾಗಿತ್ತಾ...

ಕೆಂಪು, ಬಿಳಿ, ಗುಲಾಬಿ ಹೀಗೆ ಥರಥರದ ಹೂಗಳು ಬೃಂದಾವನದ ತುಂಬೆಲ್ಲಾ. ಆದರೆ, ನಮಗೆ ಇಷ್ಟವಾಗುತ್ತಿದ್ದುದು ನೀಲಿ, ಹಳದಿ ಹೂಗಳೇ. ನೀನು ನೀನಿಷ್ಟಪಡುವ ನೀಲಿ ಹೂಗಳನ್ನು ನನ್ನ ರುಮಾಲಿಗೆ ಸಿಕ್ಕಿಸಿ, ಕಣ್ಣುಗಳ ಪಕ್ಕದಲ್ಲಿ ಅದೆಂಥದ್ದೋ ನಿನ್ನಿಷ್ಟದ ಬಳ್ಳಿಗಳ ಬಿಡಿಸಿ, ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದೆಯಲ್ಲಾ, ನಾನು ಹಳದಿ ಹೂಗಳ ಕಿವಿಯೋಲೆ ಮಾಡಿ ನಿನಗೆ ತೊಡಿಸುವ ಅಂತ ಬಂದರೆ ಪೂರ್ತಿ ಕೂದಲು ಕಿವಿಯ ಮೇಲೆ ಹರಡಿಕೊಂಡು ಸತಾಯಿಸುತ್ತಿದ್ದೆಯಲ್ಲಾ, ಅದು ಆಮೇಲೆ ನನ್ನುಸಿರು ನಿನ್ನೆದೆ ಬಡಿತ ಎರಡೂ ಇಬ್ಬರಿಗೂ ಕೇಳಿಸುವಷ್ಟು ಗಾಢ ಮೌನಕ್ಕೆ ಕಾರಣವಾಗುತ್ತಿತ್ತು. ಅದೆಂಥ ಗಾಢ ಮೌನವೆಂದರೆ ಇಡೀ ಜಗತ್ತು ಸ್ತಬ್ಧವಾದಂತೆ. ನಿನ್ನೆದುರು ನನಗೆಂಥ ಲಜ್ಜೆ ಎನ್ನುತ್ತಿದ್ದ ನೀನು ತಕ್ಷಣವೇ ತಲೆ ತಗ್ಗಿಸಿ ಕಿವಿಯ ಮೇಲೆ ಹರಡಿಕೊಂಡಿದ್ದ ಕೂದಲುಗಳನ್ನು ಸರಿಸಿ, ಪ್ರತೀ ಸಲವೂ ಹೊಸದಾಗಿ ಸ್ಪರ್ಶಕ್ಕೆ ಕಾಯುವಂತೆ ಉತ್ಕಟ ಸ್ಥಿತಿಯಲ್ಲಿ ಕೂರುತ್ತಿದ್ದುದನ್ನು ನಾನು ಮರೆತಿಲ್ಲ. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ಕೈ ಬೆರಳುಗಳು ಕೂತ ಕಲ್ಲುಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದವು. ಕಣ್ಣುಗಳು ಅರ್ಧವಷ್ಟೇ ತೆರೆದು ಇಷ್ಟೇ ಇಷ್ಟು ಮಾತ್ರ ನನ್ನೆಡೆಗೆ ನೋಡುತ್ತಿದ್ದವು. ಆಗ ಮಾತ್ರ ನೀನು ಶೃಂಗಾರ ಭಾವದ ಅಪ್ರತಿಮ ರೂಪಕದಂತೆ ಗೋಚರಿಸುತ್ತಿದ್ದೆ. ಕೇಳಬಹುದು, ಹೆಣ್ಣು ಬರೀ ಶೃಂಗಾರಕ್ಕೆ ಮಾತ್ರ ಸೀಮಿತವಾ ಅಂತ. ಸೃಷ್ಟಿಯ ಪ್ರತಿಯೊಂದರ ಅರ್ಧವೂ ಸಂಪೂರ್ಣವಾಗಬೇಕಾದರೆ ಸ್ತ್ರೀ ತತ್ವ ಬೇಕೇ ಬೇಕು. ನೆನಪಿದೆಯಲ್ಲವಾ ನಿನಗೆ, ಹಿಂದೊಮ್ಮೆ ಹೀಗೇ ನಾನು ನಿನ್ನ ತೊಡೆಗಳ ಮೇಲೆ ತಲೆಯಿಟ್ಟು ಮಲಗಿದ್ದಾಗ ಸರ್ಪವೊಂದು ನಿನ್ನ ಪಕ್ಕದಲ್ಲೇ ತಲೆಯಾಡಿಸುತ್ತಾ ಇದ್ದರೂ ನೀನು ನನ್ನ ನಿದ್ದೆಗೆ ಭಂಗವಾಗಬಾರದೆಂದು ಸ್ಥಿರವಾಗಿಯೇ ಕೂತಿದ್ದು, ಎಲ್ಲಿತ್ತು ಆ ಧೈರ್ಯ.. !

ನನಗೆ ಒಮ್ಮೊಮ್ಮೆ, ಈ ವಸಂತದಲ್ಲಿ ಅರಳುವ ಹೂಗಳಿಗೆಲ್ಲಾ ನೀನೇ ನಿನ್ನ ನಗುವನ್ನು ಹಂಚಿ ಬಂದಿರಬಹುದಾ ಅನ್ನುವ ಅನುಮಾನ. ಆ ಕೋಕಿಲಗಳೆಲ್ಲಾ ನೀನು ನಿದ್ದೆಯಲ್ಲಿ ಕನವರಿಸುವುದನ್ನೇ 'ಕುಹೂ ಕುಹೂ' ಎಂದು ಕಲಿತುಕೊಂಡವಾ ಅಂತ. ನೀನೊಮ್ಮೆ ತಲೆಯಾಡಿಸಿ ಕಣ್ಣು ಮಿಟುಕಿಸಿದಾಗಲೆಲ್ಲಾ ಈ ತಂಗಾಳಿ ತಾನಾಗೇ ಹುಟ್ಟಿಕೊಳ್ಳುತ್ತದಾ, ನೀನು ಬಲಗಡೆ ಇಳಿಬಿಟ್ಟ ಕೂದಲು ನಯವಾಗಿ ನಿನ್ನ ತುಟಿಗಳ‌ ಪಕ್ಕ ಚೂರು ಮೇಲೆ ತಾಗಲೋ ಬೇಡವೋ ಎಂಬಂತೆ ನಟಿಸುವ ಸಲುವಾಗಿಯೇ ಏನೋ ಗಾಳಿಗೆ ಅಷ್ಟೊಂದು ತುಂಟತನವಾ ಅಥವಾ ನನ್ನನ್ನು ವಿಚಲಿತನನ್ನಾಗಿಸಲು ನೀನು ತಂಗಾಳಿಯೊಂದಿಗೆ ಮಾಡಿಕೊಂಡ ಒಪ್ಪಂದವಾ, ಸತ್ಯ ಸತ್ಯ ಹೇಳಿಬಿಡಬೇಕು‌ ನೋಡು! ಕೃಷ್ಣನನ್ನು ವಿಚಲಿತಗೊಳಿಸುವುದಾ, ಅಷ್ಟಕ್ಕೆಲ್ಲಾ ನಿಯಂತ್ರಣ ತಪ್ಪುವವನಾ ನೀನು ಅಂತ ಮುಖವೂದಿಸಿಕೊಂಡು ನೋಡಬೇಡ. ಸಮಭಾವ ಸಮಚಿತ್ತ ಸಮಸ್ತ ನೀನು ಅಂತ ಅಂದವಳೇ ನೀನು ! ಈಗ ಹಾಗೆಲ್ಲಾ ನೋಡಿ ಮತ್ತೆ ನಾನು ಹಲ್ಲುಗಿಂಜಿದಾಗ ನಿನ್ನ ಹುಸಿ ಮುನಿಸಿನ ನಸು ನಗುವಿನಲ್ಲಿ ಕೃಷ್ಣ ಕಾಲ ಕಾಲಗಳನ್ನೂ ದಾಟಿ, ಕೇವಲ ಹೊಡೆಯಲು ಓಡಿಸಿಕೊಂಡು ಬರುವ ರಾಧೆಯ ಸಖನಾಗಿ ಅಷ್ಟೇ ಉಳಿದುಕೊಳ್ಳಲು ಸಜ್ಜಾಗಿಬಿಡುತ್ತಾನೆ ನೋಡು ! ಇಂಥ ಸಂದರ್ಭದಲ್ಲೇ ನೋಡು ಮಳೆ ಬರುವುದು...
ನನಗೋ ಮಳೆಗಾಲವೆಂದರೆ ಕೆಸರು ಕಾಲಲ್ಲಿ ಮನೆಯೊಳಗೆ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆ ತುಂಬ ಪಾದದ ಗುರುತು ಮೂಡಿಸುವುದು, ಬರೀ ನನ್ನ ಮನೆಯೊಂದೇ ಅಲ್ಲ ಹ್ಞ! ಯಾರಾದರೂ ಹೊಡೆಯಲು ಓಡಿಸಿಕೊಂಡು ಬಂದು ಕೆಸರು ತಾಗಿ ಜಾರಿ ಬಿದ್ದರೆ ಓಡಿಹೋಗಿ ಅವರಿಗೆ ಕೈಕೊಟ್ಟು ಎಬ್ಬಿಸಿ, ಮತ್ತೆ ಮುಟ್ಟಾಟ ಶುರು ನೋಡು, ನೀನು ಅಯ್ಯೋ ಇವನಾಟವೇ ಅಂತ ಹಣೆ ಚಚ್ಚಿಕೊಂಡು ನಗುತ್ತಿದ್ದೆಯಲ್ಲಾ. ನನ್ನ ಕತೆ ಬಿಡು, ಮಳೆಗಾಲವೆಂದರೆ ರಾಧೆಗೆ ಸಮಸ್ತ ವಿಶ್ವವೇ ರಂಗಮಂಚ ಹಾಗೂ ರಾಧೆ ಅಲ್ಲಿನ ಅಮೋಘ ನರ್ತಕಿ. ನೆಲಕ್ಕೆ ಬಿದ್ದ ಮಳೆಹನಿಗಳೂ ರಾಧೆಯ ಪಾದ ಸ್ಪರ್ಶದಿಂದ ಪುಳಕಿತವಾಗುತ್ತಿದ್ದವು. ಅವಿರತವಾಗಿ ಸುರಿವ ಮಳೆಯಲ್ಲಿ ನೀನು ನರ್ತಿಸುವಾಗ ನಿನ್ನ ಗೆಜ್ಜೆಗಳ ಮೇಲೆ ಕೂತು ಆಮೇಲೆ ಮತ್ತೆ ಆಚೆ ಸಿಡಿಯುವುದಕ್ಕೆ ಹನಿಗಳು ಹಾತೊರೆಯುತ್ತಿದ್ದವು. ಕಾರ್ಮೋಡಗಳಿಗೋ ನಿನ್ನನ್ನು ಪೂರ್ತಿ ಒದ್ದೆಯಾಗಿಸುವ ತವಕ. ಒಂದೇ ಸಮನೆ ತನ್ನೆಲ್ಲಾ ಹನಿಗಳನ್ನು ನಿನ್ನ ಮೇಲೆಯೇ ಸುರಿಯುವಂತೆ ಮಾಡುತ್ತಿವೆಯಾ ಅಂತೆಲ್ಲಾ ಅನ್ನಿಸುವಂಥ ವಾತಾವರಣವಿರುತ್ತಿತ್ತು ನೋಡು‌. ಆ ಮಳೆ ಹನಿಗಳೋ, ಹಣೆಯಿಂದ ಶುರುಮಾಡಿ ರಾಧೆಯ ಅಂಗದ ಸಂಗದಲಿ ಕಚಗುಳಿಯಿಡುತ್ತಾ ರಾಧೆಯನ್ನು ಮೆದುವಾಗಿಸುತ್ತಿದ್ದವು. ಮಳೆಯ ಮಣ್ಣಿನ ಸಮ್ಮೋಹಕ ಪರಿಮಳ ನಿನ್ನ ಮೈಯಿಂದ ಸ್ಫುರಿಸುತ್ತಿತ್ತು. ನನಗೀಗ ತಿಳಿಯಿತು ನೋಡು, ಈ ಮಯೂರಗಳು ಮಳೆ ಬಂದ ಕೂಡಲೇ ಗರಿಬಿಚ್ಚಿ ನರ್ತಿಸುವುದು ಇದೇ ಕಾರಣಕ್ಕೆ; ರಾಧೆಯನ್ನು ಪ್ರಾರ್ಥಿಸುತ್ತವೆ, ರಾಧೆಯನ್ನು ಆಹ್ವಾನಿಸುತ್ತವೆ ಎಂದೂ ಕೂಡ ಹೊಳೆಯದಷ್ಟು ದಡ್ಡನಪ್ಪಾ ಕೃಷ್ಣ! ನಾನಂದು ತೊಡಿಸಿದ ಗೆಜ್ಜೆಯ ಕಳಚಿಲ್ಲ ತಾನೇ? ಹೀಗೆಲ್ಲಾ ಹೇಳಿ ಯಾಕೆ ವಿರಹವನ್ನು ನೆನಪಿಸುತ್ತೀಯಾ ಅಂತ ದೀನಳಾಗಿ ನೋಡಬೇಡ ನೀನು, ಅಪರಾಧಿ ಭಾವ ಕಾಡುತ್ತದೆ.. ಸತಾಯಿಸಿದವರೇ ಸಮಾಧಾನಿಸುವುದು ಈ ಪ್ರೇಮದ ಮುದ್ದು ಮುದ್ದು ಲಕ್ಷಣ ನೋಡು!

ಅದೊಂದು ಋತು ಬರುತ್ತದೆ ರಾಧೆ, ಎಲ್ಲಾ ದೇಶಗಳಲ್ಲೂ ಆಯಾ ಸಮಯಕ್ಕೆ; ವೃಕ್ಷ ಸಂಕುಲ ತನ್ನ ಎಲೆಗಳನ್ನು ಉದುರಿಸಿ ಬೋಳು ಬೋಳಾಗುತ್ತದೆ. ಹಕ್ಕಿಗಳೆಲ್ಲಾ ಇನ್ನೆಲ್ಲೋ ವಲಸೆ ಹೋಗುತ್ತವೆ. ಅದೆಲ್ಲಿಂದಲೋ ಅಮ್ಮ ಹೆಕ್ಕಿ ತಂದ ಕಸ ಕಡ್ಡಿಗಳಿಂದ ಕಟ್ಟಿಕೊಂಡ ಗೂಡಲ್ಲಿ ಅಮ್ಮನದೇ ತುತ್ತು ತಿಂದು ಬೆಳೆದ ಹಕ್ಕಿ ಮರಿಗಳ ಚಿಲಿಪಿಲಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತದೆ. ಕಟ್ಟಿಕೊಂಡ ಗೂಡಿನಲ್ಲಿ ಖಾಲಿತನ ತುಂಬಿಕೊಳ್ಳುತ್ತದೆ. ನೀನೊಮ್ಮೆ ಕೇಳಿದ್ದೆ ನೆನಪಿದೆಯಾ, ನಮ್ಮ ಇಡೀ ಬಾಲ್ಯವನ್ನು ಕಳೆದಂಥ ಮನೆಯನ್ನು ಬಿಟ್ಟುಹೋಗುವುದೆಂದರೆ ಅಷ್ಟು ಸುಲಭವಾ ಕೃಷ್ಣ ಅಂತ. ಅಸ್ತಿತ್ವದ ಹೋರಾಟದಲ್ಲಿ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮೋಹವನ್ನು ಬಿಡುವುದು ಅತೀ ಅಗತ್ಯ ರಾಧೆ. ಏನೂ ಇಲ್ಲದಂತೆ ಬಂದವರು ಏನೂ ಇಲ್ಲದಂತೆ ಹೋಗುವುದನ್ನೂ ಕಲಿಯಬೇಕಲ್ಲವಾ? ಗೂಡು ಇದ್ದಷ್ಟು ಹೊತ್ತು ಮನೆ. ಮುಂದೆ ಇನ್ನ್ಯಾವುದೋ ಮರ ಕಾಯುತ್ತಿರಬಹುದು, ಅದಕ್ಕೂ ಒಂಟಿತನ ಸಾಕಾಗಿ ಈ ಹಕ್ಕಿಗಳ ಬರವು, ಇರುವು ಮುಪ್ಪಿನಲ್ಲಿ ಸಂಭ್ರಮಕ್ಕೆ ಪ್ರಾಯ ಬಂದಂತೆ ಆಗಬಹುದು ಅಲ್ಲವಾ? ಅವತ್ತೊಂದು ದಿನ ರಣ ರಣ ಬಿಸಿಲು, ಕೂರಲು ಎಲ್ಲೂ ನೆರಳಿರದೇ ನಾವಿಬ್ಬರೂ ಚಡಪಡಿಸುತ್ತಿರುವಾಗ, ನಾನೊಮ್ಮೆ ಕೊಳಲು ತೆಗೆದು ಊದಿದಾಗ ಪಾತರಗಿತ್ತಿಗಳ ಗುಂಪೊಂದು ಬಂದು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ‌ ನಿಂತು ನಾವದರ ನೆರಳಿನಲ್ಲಿ ನಿಂತಿದ್ದು ಈಗಲೂ ಅಸಂಭವವೆಂಬಂತೆಯೇ ಭಾಸವಾಗುತ್ತದೆ ನನಗೆ. ನೀನೋ ನನ್ನನ್ನು ಮಾಂತ್ರಿಕನೆಂಬಂತೆ ಅನುಮಾನದ ದೃಷ್ಟಿಯಿಂದ ನೋಡಿದ್ದೆ. ಈಗ ತಿಳಿದಿದೆಯಲ್ಲವಾ ರಾಧೆ...

ಕಾಲವೇ ನಾನು, ಕಾಲದ ಸಮಸ್ತ ಋತುಗಳು ನಾನು, ಆ ಋತುಗಳ ಭಿನ್ನ ಭಿನ್ನ ವಾತಾವರಣ ನಾನು, ಹವಾಮಾನ ನಾನು, ಚಲನೆ ಸಂಚಲನೆ ನಾನು, ಕಣ ನಾನು, ಮಣ್ಣು ನಾನು, ಫಲ ನಾನು, ಉದುರಿಬಿದ್ದ ಹಳದಿ ಎಲೆ ನಾನು, ಸ್ಮೃತಿ ವಿಸ್ಮೃತಿ ನಾನು, ಗತಿ ಮಿತಿ‌ ಪ್ರಗತಿ ನಾನು, ಪ್ರಕೃತಿ ನಾನು, ಅದನ್ನು ಜೀವಿಸುವ ಸಂಸ್ಕೃತಿ ನಾನು, ಗಂಧ ನಾನು, ಜುಳು ಜುಳು ಮಂದ ನಿನಾದ ನಾನು, ಅಂದ ಬಂಧ ಸಂಬಂಧ ನಾನು, ಕಂದನ ಅಳು ನಾನು, ಅಮ್ಮನ ಎದೆ ನಾನು, ಲಾಭ ಲೋಭ ವಿಪ್ರಲಂಭ ನಾನು, ಅರ್ಥ ಕಾಮ‌ ಸಾಮ‌ ನಾನು, ಸಂಗಾತ ನಾನು, ವಿರಹ ನಾನು, ಅಖಂಡ ಅಭಂಗ ಅಶರೀರಿ ನಾನು, ಕಾರಣದ ಕಾರಣ ನಾನು, ಹೂರಣದ ಹೂರಣ ನಾನು, ರಸ ವಿರಸ ಸಮರಸ ನಾನು, ಇದ್ಯಾವುದೂ ಅಲ್ಲದ ತೂತು ಬಿದಿರಿನ ಹುಡುಗ ನಾನು, ಇನ್ನೂ ಒಂದು ಮಾತು; ರಾಧೆಯಿಲ್ಲದೇ ಅಪೂರ್ಣ ನಾನು..

ರಾಧೇ, ಬೃಂದಾವನದ ತೋಪಿನಲ್ಲಿ ಉದುರಿಬಿದ್ದ ನವಿಲುಗರಿಗಳನೆಲ್ಲಾ ತಂದು ಶೇಖರಿಸೆಯಾ? ಕೃಷ್ಣನ ಪತ್ರ ಬರುತ್ತದೆ; ಪತ್ರದ ಎಲ್ಲಾ ಮೂಲೆಗಳಲ್ಲೂ ಗರಿಗಳ‌ನ್ನಿಟ್ಟು ಶೃಂಗರಿಸೆಯಾ? ಮಂಕಾಳಿ ಗೌರಿ ಲಕುಮಿಯರಿಗೆ ನನ್ನ ಪತ್ರವನ್ನು ಓದಿ ಹೇಳೆಯಾ? ಎಲ್ಲೇ ನಿನ್ನ ಕೃಷ್ಣ, ಬರಲೇ ಇಲ್ಲ ಎಂದು ಆಡಿಕೊಂಡು ಕಿಚಾಯಿಸುವ ನಿನ್ನ ಗೆಳತಿಯರೆದುರು ಪತ್ರ ಹಿಡಿದು ನಡೆಯಲಾರೆಯಾ? ಸುಸ್ತಾಗಿದೆ ಕೃಷ್ಣಾ ಅನ್ನದಿರು.. ನಮ್ಮ ನಮ್ಮ ಪಾಲಿನ ಬದುಕನ್ನು ಬದುಕಲೇಬೇಕಲ್ಲವಾ, ಕೃಷ್ಣ ಬರೀ ಅಕ್ಷರಗಳ ಕಳುಹಿಸಿಕೊಡುತ್ತಿಲ್ಲ, ಪ್ರಾಮಾಣಿಕವಾಗಿ ಹುಟ್ಟಿಕೊಂಡ ಭಾವಗಳ ಬಿಂಬಗಳೆಲ್ಲವನ್ನೂ ಕಳುಹಿಸುತ್ತಿದ್ದಾನೆ. ಕೃಷ್ಣ ಬರುತ್ತಾನೆ, ಇಂದಲ್ಲ ನಾಳೆ.. ರಾಧೆ ಕಾಯುತ್ತಾಳೆ ತಪಸ್ವಿನಿಯಂತೆ.. ಕೃಷ್ಣ ಬರುತ್ತಾನೆ ಅನುರಾಗಿಯಾಗಿ, ರಾಧೆ ಕಾಯುತ್ತಾಳೆ ವಿರಾಗಿಯಂತೆ.. ಕೃಷ್ಣ ಬರುತ್ತಾನೆ ಕೊಳಲ ಧೂಳು ಒರೆಸಿಕೊಡು ಎನ್ನುವ ಪುಟ್ಟ ಮಗುವಿನ ಹಟವಾಗಿ, ರಾಧೆ ಕಾಯುತ್ತಾಳೆ ಮಡಿಲು ತುಂಬದ ಹೆಣ್ಣಂತೆ.. ಇಲ್ಲ, ಕೃಷ್ಣ ಬರುತ್ತಾನೆ ಕೃಷ್ಣನಂತೆ, ರಾಧೆ ಕಾಯುತ್ತಾಳೆ ರಾಧೆಯಂತೆ.. ಜಗತ್ತಿನಲ್ಲೀಗ ಪ್ರೇಮದ ಸಂಜೆಗಳು ರಾತ್ರಿಗಾಗಿ ಕಾಯುತ್ತವೆ.. ರಾಸಕ್ಕಾಗಿ ಕಾಯುತ್ತವೆ..


ಇಂತಿ ನಿನ್ನ
ಗೊಲ್ಲ



- 'ಶ್ರೀ'
 ತಲಗೇರಿ