ಗುರುವಾರ, ಜೂನ್ 29, 2023

ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


 
ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


ಸಖೀ ರಾಧೆ,


ಹಿಂದೊಮ್ಮೆ ಹೀಗೇ ದಟ್ಟ ಕತ್ತಲೆಯ ಮೋಡಗಳು ಆಕಾಶದಲ್ಲಿ ಆವರಿಸಿ, ಇಡೀ ವಾತಾವರಣ ಒಂದು ಗಾಢವಾದ ಆತ್ಮೀಯತೆಯನ್ನೂ, ನಿರೀಕ್ಷೆಯನ್ನೂ, ಆಹ್ಲಾದಕತೆಯನ್ನೂ, ತಲ್ಲಣವನ್ನೂ ಕಟ್ಟಿಕೊಟ್ಟಂಥ ಸಮಯದಲ್ಲಿ, ಕೊನೆಗೆ ಕಪ್ಪೆಲ್ಲವೂ ನೀರಾಗಿ, ಭೂದೇವಿಯ ಎದೆಯೊಳಗಿಳಿದಂಥ ಸಂದರ್ಭದಲ್ಲಿ ನಿನಗೆ ಪತ್ರ ಬರೆದಿದ್ದೆ. ವರ್ಷಗಳೆರಡಾದವೀಗ, ಪತ್ರ ಬರೆಯದೇ. ಕೃಷ್ಣ ಮರೆತಿರುವನು ಅಂತ ಅಂದುಕೊಂಡಿರುತ್ತೀಯೇನೋ ಅಥವಾ ಇವನನ್ನು ನಂಬಿ‌ ಕೂತರೆ ಕಾಯುವುದಷ್ಟೇ 'ಕಾಯ'ದ ಕೆಲಸ‌ ಅಂತಲೂ ನಸುನಗುತ್ತೀಯೇನೋ, ಅಥವಾ ಆಗಿನ್ನೂ ಮಳೆಗಾಲ‌ ಶುರುವಾಗಿರಲಿಲ್ಲ, ಕಪ್ಪು ಮೋಡ ಅಂತೆಲ್ಲಾ ಸುಳ್ಳು ಸುಳ್ಳೇ ಹೇಳಬೇಡ, ಬರೀ ಹೀಗೆಲ್ಲಾ ಏನೇನೋ ಹೇಳುತ್ತಲೇ ನನ್ನ ಕೋಪವನ್ನು ಬೇರೆಡೆ ಸೆಳೆಯುವುದಕ್ಕೆ ಯತ್ನಿಸಬೇಡ ಅಂತ ನೀನು ಸಿಟ್ಟಾಗುತ್ತಿಯೇನೋ ಅಂತೆಲ್ಲಾ ನಾನು ಕಲ್ಪಿಸಿಕೊಳ್ಳುವುದರಲ್ಲೇ ಎಷ್ಟು ಚೆಂದದ ಸುಖವಿದೆ ತಿಳಿದಿದೆಯಾ ನಿನಗೆ? ಹಾಗೆಯೇ, ಒಂದು ವೇಳೆ ನೀನು ಕೋಪಿಸಿಕೊಂಡರೂ,‌ ಅದೆಷ್ಟು ಹೊತ್ತು? ಪಾಪದವನಲ್ಲವಾ ನಾನು? ಏನೋ ಹೆಚ್ಚು ಕಡಿಮೆ ಆಗುತ್ತದಲ್ಲವಾ, ಏನೋ ಸೈರಿಸಿಕೊಳ್ಳಬೇಕಪ್ಪಾ ಅಂತೆಲ್ಲಾ ಹೇಳಿ ಕಿವಿ ಹಿಡಿದುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ನಿನ್ನೆಡೆಗೆ ನೋಡುತ್ತಾ ನಿಲ್ಲುವುದು ನನಗೆ ಹೊಸದಲ್ಲ ಬಿಡು. ಕೃಷ್ಣ ಹಾಗೆ ನೋಡಿದಾಗಲೆಲ್ಲಾ ವಾತ್ಸಲ್ಯದ ತೊಟ್ಟಿಲೇ ನೀನಾಗುವುದೂ ಹೊಸದಲ್ಲ ಬಿಡು! ವಾತ್ಸಲ್ಯ ಅಂದಾಗಲೆಲ್ಲಾ ಮಮತೆ ತುಂಬಿದ ಅಮ್ಮ ಯಶೋದೆಯ ಕಣ್ಣುಗಳು ಕಣ್ಣ ಮುಂದೆ ಬರುತ್ತವೆ. ಅರಿವಿಲ್ಲದೆಯೇ ತುಟಿ ಬಿರಿಯುತ್ತದೆ, ಸಂಭ್ರಮದ ನಗೆ ಹೂವು ತಾನಾಗೇ ಅರಳುತ್ತದೆ. ಎದೆಯಲ್ಲೊಂದು ಅಲೌಕಿಕ ಸಂಭ್ರಮ ಮೊದಲಾಗುತ್ತದೆ. ಅಮ್ಮನೆಂದರೆ ಹಾಗೆಯೇ ಅಲ್ಲವಾ ರಾಧಾ.. 


ನನ್ನದು ಬಹಳ ಭಿನ್ನವಾದ ಪರಿಸ್ಥಿತಿಯಾಗಿತ್ತು ನೋಡು. ಕಾರಾಗೃಹದಲ್ಲಿ ಹುಟ್ಟಿ, ಹುಟ್ಟಿದ ಕೆಲವೇ ಕ್ಷಣಕ್ಕೆ ಹೆತ್ತಮ್ಮನಿಂದ ದೂರವೇ ಉಳಿಯಬೇಕಾದ ಸ್ಥಿತಿ. ಹುಟ್ಟಿದ ಮಗುವಿಗೆ ಅಮ್ಮನ ಎದೆ ಹಾಲೇ ತಾನೇ ಈ ಜಗತ್ತನ್ನು ನೋಡುವ ಶಕ್ತಿ ಕೊಡುವುದು, ಎದ್ದು ನಿಲ್ಲುವ, ನಿಲ್ಲುತ್ತಲೇ ನಡೆಯುವ, ನಡೆಯುತ್ತಲೇ ಓಡುವ,‌ ಕುಣಿಯುವ, ನರ್ತಿಸುವ, ಸಂಭ್ರಮಿಸುವ ಚೈತನ್ಯ ಕೊಡುವುದು. ಹಸಿ ಮೈಯ ತಾಯಿ ಕಾರಾಗೃಹದಲ್ಲೇ ಉಳಿದಳು. ಬೇರ್ಪಟ್ಟ ನಾನು ಬದುಕಿಗಾಗಿ ಇನ್ನೊಬ್ಬರ ಮನೆಯನ್ನು ಆಶ್ರಯಿಸಿದೆ. ವಿಚಿತ್ರ ಅನ್ನಿಸುತ್ತದಲ್ಲವಾ? ಈ ಜಗತ್ತು ಅದನ್ನು ಮಾಯೆ ಅನ್ನುವುದೋ, ಲೀಲೆ ಅನ್ನುವುದೋ ಅದು ಜಗತ್ತಿಗೆ ಬಿಟ್ಟಿದ್ದು. ಹಾಲುಣಿಸುವುದೆಂದರೆ ಅಮ್ಮ ಯಶೋದೆಗೆ ಅದೆಂಥ ಸಂಭ್ರಮ. ನಾನು ಇಂಥ ಸಮಯ ಅಂಥ ಸಮಯ ಅಂತೆಲ್ಲಾ ಇಲ್ಲದೇ ಕೂಗುತ್ತಿದ್ದೆ. ಅಮ್ಮ ಯಶೋದೆ ಕೆಲವೊಮ್ಮೆ ಹಾಲುಣಿಸುತ್ತ ಊಟ ನಿದ್ದೆ ಮನೆಗೆಲಸ ಮರೆಯುತ್ತಿದ್ದಳು. ಕೆಲವೊಮ್ಮೆ ನನ್ನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತಲ್ಲೇ ಗೋಡೆಗೆ ಆತು‌ ನಿದ್ದೆಹೋಗುತ್ತಿದ್ದಳು. ಆದರೆ, ನನ್ನ ಒಂದು ಮುಲುಕಾಟ ಅವಳನ್ನು ಎಚ್ಚರಾಗಿಸುತ್ತಿತ್ತು. ಕರುಳಬಂಧ ಅಮ್ಮ ದೇವಕಿಯದ್ದಾದರೂ ಆತ್ಮಬಂಧ ಅಮ್ಮ ಯಶೋದೆಯದ್ದು. ಜಗತ್ತಿನ‌ ಹೆಣ್ಣು ಮಕ್ಕಳಿಗೆಲ್ಲಾ ಈ ತಾಯ್ತನವೆನ್ನುವುದು ತಾನಾಗಿಯೇ ಬಂದುಬಿಡುತ್ತದೆ ನೋಡು. ಯಾರೋ ಹೆತ್ತ ಮಗುವಾದರೂ ತನ್ನದೇ ಇದು ಅನ್ನುವಂತೆ ಕಾಪಿಡುವ ಹೃದಯವೇನಿದ್ದರೂ ಅದು ತಾಯಿಯದು ಮಾತ್ರ. ಹೇಳಬಹುದು ನೀನು, ಅಲ್ಲಾ ಕೃಷ್ಣ, ಅಮ್ಮ ಯಶೋದೆಗೆ ನೀನು ಅವಳ ಮಗ ಅಲ್ಲವೆಂದು ತಿಳಿದಿರಲಿಲ್ಲ‌ವಲ್ಲಾ ಅಂತ. ಅದು ನಿಜವೇ ಅದರೂ, ಗೋಕುಲದ ಗೋಪಿಕೆಯರ್ಯಾರಿಗೂ ನಾನು ಅವರ ಮಗನಾಗಿರಲಿಲ್ಲವಲ್ಲ. ಆದರೆ, ಕೃಷ್ಣನಿಗೆ ಹಸಿವಾದಾಗಲೆಲ್ಲಾ‌ ಗೋಕುಲದ ಎಲ್ಲಾ ಗೋಪಿಕೆಯರಲ್ಲಿ ಎದೆಹಾಲು ಒಸರುತ್ತಿತ್ತು. ಬಹುಶಃ ಕಾರಾಗೃಹದಲ್ಲಿ ಅಮ್ಮ ದೇವಕಿಯ ಎದೆಯಲ್ಲೂ ಹೀಗೆ ಹಾಲು ಒಸರುತ್ತಿತ್ತೇನೋ, ಅವಳು ಪರಿತಪಿಸುತ್ತಲೇ ಸಮಸ್ತ ಸೃಷ್ಟಿಯಲ್ಲಿ ಬೇಡಿಕೊಳ್ಳುತ್ತಿದ್ದಳೇನೋ, ನನ್ನ ಕಂದನಿಗೆ ಹಾಲುಣಿಸಿ ದೈವಗಳೇ ಅಂತ ಕೈಮುಗಿದು..


ಜಗದೋದ್ಧಾರಕ್ಕಾಗಿ ಅವತಾರವೆತ್ತಿದವ ನಾನಾದರೂ ಅಮ್ಮ ದೇವಕಿ ಆ ಅವತಾರಕ್ಕೊಂದು ರೂಪ‌ ಕೊಟ್ಟಳು. ಇಂದು ಅದೇ ರೂಪವನ್ನಲ್ಲವಾ ಸೃಷ್ಟಿ ಕೊಂಡಾಡುವುದು, ಮೋಹಕವೆಂದು ಬಗೆಬಗೆಯಲ್ಲಿ ವರ್ಣಿಸುವುದು. ಮೋಹಗಳ ತೊರೆಯಿರಿ ಅಂತ ಹೇಳುವವ ನಾನಾದರೂ ಈ ವಾತ್ಸಲ್ಯವನ್ನು ತಿರಸ್ಕರಿಸಲಾರೆ. ನಾನ್ಯಾರೆಂದು ತಿಳಿಯದೆಯೇ ಅಮ್ಮ ಯಶೋದೆ ನನ್ನ ಬಾಲ್ಯವನ್ನು ನನಗೆ ಕಟ್ಟಿಕೊಟ್ಟಳು. ಮೊಸರ ಮಡಕೆಯಲ್ಲಿ ನಾನು ಕೈಹಾಕಿ ಬೆಣ್ಣೆ ಕದ್ದು ತಿಂದಾಗಲೆಲ್ಲಾ ಕಿವಿ ಹಿಂಡುತ್ತಿದ್ದಳು. ಆಮೇಲೆ, ಅವಳೇ ಬರಸೆಳೆದು ಅಪ್ಪಿ ಮುತ್ತಿಟ್ಟು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ನನ್ನ ಕಿವಿ ಹಿಂಡುವಾಗಲೆಲ್ಲಾ ಅವಳ ಕಂಗಳನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರುತ್ತಿರಲಿಲ್ಲ. ಒಮ್ಮೆ ಮಾತ್ರ ನೋಡಿದ್ದೆ, ದೊಡ್ಡ ಕಣ್ಣು ಮಾಡಿದ್ದಳು, ಆದರೆ ಕಣ್ಣೀರಿನಿಂದ ತುಂಬಿಹೋಗಿತ್ತು. ಲಾಲಿ ಹಾಡುವಾಗ ಕೂಡಾ, ಅವಳ ಮಡಿಲಲ್ಲಿ ಮಲಗಿದ್ದ ನನ್ನ ಕೆನ್ನೆಯ ಮೇಲೆ‌ ಒಂದೆರಡು ಬಾರಿ ಬಿಸಿ ಹನಿಗಳು ಬಿದ್ದ ನೆನಪಿದೆ ನನಗೆ. ಅವಳ ಧ್ವನಿ ಕಂಪಿಸುತ್ತಿರಲಿಲ್ಲ, ಆದರೆ, ನಾನು ಮಲಗಿದೆ ಅಂತ ತಿಳಿದ ಮೇಲೆ, ಕಿವಿ ಹಿಂಡಿದ್ದಕ್ಕಾಗಿ ಬೇಸರಿಸಿಕೊಂಡು ಅಳುತ್ತಿದ್ದಳು. ನಾನು ಬೇಕಂತಲೇ‌ ನನ್ನ ಕಣ್ಣು ತಿಕ್ಕುತ್ತಿದ್ದೆ. ತಕ್ಷಣ ಏನೂ ಆಗಿಲ್ಲವೆಂಬಂತೆ ಸಾವರಿಸಿಕೊಂಡು ನಿಧಾನಕ್ಕೆ ತಲೆತಟ್ಟುತ್ತಿದ್ದಳು. ಮಣ್ಣು ತಿಂದ ನನ್ನ ಬಾಯ್ತೆರೆಸಿದಾಗ ಬ್ರಹ್ಮಾಂಡ ಕಂಡ ಮೇಲೂ ಆಕೆ ನನ್ನ ಕಿವಿ ಹಿಂಡುವುದ ಬಿಡಲಿಲ್ಲ, ಬೆತ್ತ ಹಿಡಿದ ಅವಳನ್ನು ಗೋಕುಲದ ತುಂಬಾ ಓಡುವಂತೆ ಮಾಡುವುದನ್ನು ನಾನೂ ಬಿಡಲಿಲ್ಲ. ಆಡಿದಳು, ಹಾಡಿದಳು ಅಮ್ಮ ಯಶೋದೆ ನನ್ನ ಜೊತೆ. ಗೋಪಿಕೆಯರೂ ಕಡಿಮೆ ಇರಲಿಲ್ಲ. ಅಮ್ಮ ಯಶೋದೆಗೆ ನಾನೆಂದರೆ ಬಹಳ ಪ್ರೀತಿ. ಯಾರಾದರೂ ಪದೇ ಪದೇ ನನ್ನನ್ನು ನೋಡಿದರೆ ದೃಷ್ಟಿ ಆಗಿಬಿಡುತ್ತದೆ ಅನ್ನುವ ಆತಂಕ ಅವಳಿಗೆ. ಅದರಲ್ಲೂ ಗೋಪಿಕೆಯರು ನನ್ನನ್ನು ಎವೆಯಿಕ್ಕದೇ ನೋಡುವುದನ್ನು ಅವಳು ನೋಡಿದ್ದಳು. ಹಾಗಾಗಿ ಗೋಪಿಕೆಯರೆಲ್ಲರಿಗೂ ತಾಕೀತು ಮಾಡಿದ್ದಳು, ಯಾರೂ ಕೃಷ್ಣನನ್ನು ನೋಡುತ್ತ ನಿಲ್ಲಬಾರದು. ಅವನೇನಾದರೂ ದಾರಿಯಲ್ಲಿ ಸಿಕ್ಕರೆ ತಲೆಬಗ್ಗಿಸಿಕೊಂಡು ನಡೆಯಬೇಕು ಇತ್ಯಾದಿ ಇತ್ಯಾದಿ.‌‌ ಆದರೆ, ಗೋಪಿಕೆಯರು ಅವೆಲ್ಲವನ್ನೂ ಕೇಳುವರೇ! ಬೇಕು ಬೇಕಂತಲೇ ನಾನು ಬರಲಿ ಅಂತಲೇ ಬೆಣ್ಣೆ ಮಡಕೆಗಳನ್ನು ಮೇಲೆ ಕಟ್ಟದೇ ನೆಲದ‌‌ ಮೇಲೇ ಇಡುತ್ತಿದ್ದರು. ತಮ್ಮ ಗಂಡ ಮಕ್ಕಳು ಕೇಳಿದರೆ ಖಾಲಿಯಾಗಿದೆ ಅನ್ನುತ್ತಿದ್ದ ಇವರು ನನಗಂತಲೇ ಬೇರೆ ಮಡಕೆಯನ್ನು ಅಡಗಿಸಿಡುತ್ತಿದ್ದುದೂ ಉಂಟು. ಆಮೇಲೆ, ನಾನು ಬೆಣ್ಣೆ ತೆಗೆಯುವಾಗಲೆಲ್ಲಾ‌ ಅಲ್ಲಿಯೇ ಇದ್ದರೂ ನೋಡದವರಂತೆ ಇದ್ದು, ಆಮೇಲೆ ಅಮ್ಮ ಯಶೋದೆಯ ಬಳಿಗೆ ಬಂದು ದೂರುತ್ತಿದ್ದರು. ಆಗ, ಅಮ್ಮ ಯಶೋದೆ ನನ್ನ ಕರೆದು ಎದುರಲ್ಲಿ ನಿಲ್ಲಿಸಿ ಕೇಳುವಾಗಲೆಲ್ಲಾ ತಮ್ಮ ದೂರುಗಳನ್ನು ಮರೆತು ನಗುತ್ತಾ ನಿಂತುಬಿಡುತ್ತಿದ್ದರು. ಅಮ್ಮ ಯಶೋದೆಗೆ ಗೊಂದಲ. ಕೊನೆಕೊನೆಗೆ ಅಮ್ಮ ನೀವುಂಟು ನಿಮ್ಮ ಕೃಷ್ಣನುಂಟು, ನನ್ನ ಹತ್ತಿರ ಅವನ ದೂರು ತರಬೇಡಿ ಅಂತನ್ನುವುದಕ್ಕೆ ಶುರು ಮಾಡಿದ್ದಳು. ನಿನಗಿದೆಲ್ಲಾ ಗೊತ್ತಿದೆಯಲ್ಲವಾ ರಾಧಾ? ಆತ್ಮೀಯರೊಂದಿಗೆ ಹೀಗೆ ನೆನಪುಗಳನ್ನು ಹಂಚಿಕೊಳ್ಳುವ ಸುಖಕ್ಕೆ ಬೇರೆ ಯಾವ ವ್ಯಾಖ್ಯಾನಗಳೂ ಬೇಕಿಲ್ಲ ಅಲ್ಲವಾ. ಅದರಲ್ಲೂ, ನನ್ನೆಲ್ಲಾ‌‌ ನೆನಪಿನ ಪಾಲುದಾರಳು ನೀನು. ರಾಧೆಯಿಲ್ಲದ ಕೃಷ್ಣನ ನೆನಪುಗಳು ಅಪೂರ್ಣ. ಬರೀ ನೆನಪುಗಳಲ್ಲೇ ನಾವಿರುವುದು ಈಗ ಕೃಷ್ಣಾ ಅನ್ನದಿರು. ಸಮಯದ ಹಂಗು ತೊರೆದ ನದಿಗಳ ಹಾಗೆ ಈ ನೆನಪುಗಳು. ನದಿಗಳು ಬತ್ತುತ್ತವೆ, ಉಕ್ಕುತ್ತವೆ, ಕಾಣೆಯಾಗುತ್ತವೆ ಅಂತನ್ನಬೇಡ. ನದಿ ತನ್ನ ಹರಿವನ್ನು ನೆನಪಿಟ್ಟುಕೊಳ್ಳುತ್ತದೆ. ಯಾವತ್ತೋ ಒಂದು ದಿನ ಸಮಯ ಕೂಡಿಬಂದಾಗ ಮತ್ತದೇ ಹಾದಿಯಲ್ಲಿ ಅದೆಂಥದ್ದೇ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿಕೊಂಡು ಹರಿಯುತ್ತದೆ. ನನ್ನೀ ನೆನಪಿನ ನದಿಯ ಹರಿವನ್ನು ನಿರಂತರವಾಗಿಸುತ್ತಿರುವವಳು ನೀನು. ಋತು ನಾನಾದರೂ ಸ್ಪಂದಿಸುವ‌ ಪ್ರಕೃತಿ ನೀನು. ಆತ್ಮ‌ ನಾನಾದರೂ ಸ್ಮೃತಿ ನೀನು.. 


ನೆನಪು ಅಂದಾಗ ಮತ್ತೆರಡು ಘಟನೆಗಳು ಮುನ್ನೆಲೆಗೆ ಬಂದವು ನೋಡು. ನೆನಪಿದೆಯಾ ನಿನಗೆ ಪೂತನಿ ನನಗೆ ಹಾಲುಣಿಸಿದ್ದು. ಯಾವ ಅಪರಿಚಿತರಿಗೂ ನನ್ನ ಹತ್ತಿರವೂ ಹೋಗಗೊಡದ ಅಮ್ಮ ಯಶೋದೆ ಅಂದು ದಿಗ್ಭ್ರಮೆಯಿಂದ ನಿಂತುಬಿಟ್ಟಿದ್ದಳು ಪೂತನಿಯನ್ನು ನೋಡಿ. ಸೌಂದರ್ಯದ ಉಪಮೆಯೇ ಗೋಕುಲಕ್ಕೆ ಬಂದಂತೆ ಬಂದಿದ್ದಳು ಪೂತನಿ. ಬಂದವಳೇ ನಡೆದಿದ್ದು ನನ್ನ ತೊಟ್ಟಿಲ‌ ಬಳಿಗೆ. ನಾನು ಅಂದು ಕಣ್ಣು ಪಿಳಕಿಸುತ್ತಾ ಮಲಗಿದ್ದೆ. ಎರಡೂ ಕೈಗಳಲ್ಲಿ ಎತ್ತಿಕೊಂಡಳು.‌ ಒಮ್ಮೆ ನನ್ನ ಮುಖ ನೋಡಿದಳು; ದೊಡ್ದದಾಗಿ ನಿಟ್ಟುಸಿರು ಬಿಟ್ಟಳು. ವಿಷದ ಹಾಲಿಂದ ಕೊಲ್ಲಬೇಕೆಂದು ಅವಳಿಗೆ ಆಜ್ಞೆಯಾಗಿತ್ತು. ಸ್ತನಪಾನಕ್ಕಾಗಿ ಅವಳ ಸ್ತನಗಳನ್ನು ನನ್ನ ಬಾಯಿಯಲ್ಲಿಟ್ಟಳು. ನಾನು ಅವಳ ಪ್ರಾಣವನ್ನೂ ಹೀರಿದ್ದೆ. ಆ ಭಯಂಕರ ನೋವಿಗೆ ಅವಳ ಸೌಂದರ್ಯದ ಮಾರುವೇಷ ಬದಲಾಗಿ ರಾಕ್ಷಸಿಯ ನಿಜರೂಪದ ದೇಹ ಬಿದ್ದಿತ್ತು. ನಾನು ಅದರ ಮೇಲೆ ಆಟವಾಡುತ್ತಿದ್ದೆ. ಅಂದು ಆ ದೇಹವನ್ನು ಗೋಕುಲದಲ್ಲಿ ಬೆಂಕಿ ಹಾಕಿ ಸುಟ್ಟಾಗ ಸುಗಂಧವೊಂದು ಇಡೀ ವಾತಾವರಣವನ್ನು ವ್ಯಾಪಿಸಿತ್ತು. ಪೂತನಿ ಭವದ ಬದುಕಿಂದ ಮುಕ್ತಳಾಗಿದ್ದಳು. ಯಾಕೆ ಕೃಷ್ಣಾ, ಕೊಲ್ಲಲು ಬಂದವಳಿಗೆ ಮುಕ್ತಿ ಅಂತ ನೀನು ಪ್ರಶ್ನಿಸಬಹುದು. ನಿನಗೆ ಗೊತ್ತಾ ರಾಧಾ, ರಕ್ಕಸಿಯಾಗಿದ್ದರೂ, ಕೊಲ್ಲುವುದೇ ಉದ್ದೇಶವಾಗಿದ್ದರೂ ನನಗೆ ಎದೆ ಹಾಲು ಉಣಿಸುವ ಆ ಸಂದರ್ಭದಲ್ಲವಳು ಯಾವ ಕಲ್ಮಶಗಳೂ ಇಲ್ಲದ ತಾಯಾಗಿದ್ದಳು. ಕೊಲ್ಲುವುದ ಮರೆತಿದ್ದಳು. ತಾಯ್ತನದ ಪೂರ್ಣಭಾವವನ್ನು ಅನುಭವಿಸಿದಳು. ನಿಜವಾಗಿಯೂ ಹಾಲುಣಿಸಿದವಳು ಕೊಲ್ಲಲಾರಳು ಅನ್ನುವ ಸಂದೇಶ ಜಗತ್ತಿಗೆ ಮುಟ್ಟಬೇಕಿತ್ತಲ್ಲವಾ, ಹಾಗಾಗಿಯೇ ಅಂದು ಪೂತನಿ ತಾಯ್ತನದ ಪದವಿ ಪಡೆದಳು ಹಾಗೂ ಅದರಿಂದಾಗಿಯೇ ಅವಳ ಅಷ್ಟೂ ದಿನದ ಕ್ಲೇಶಗಳಿಂದ ಮುಕ್ತಳಾದಳು. 


ಅಶ್ವತ್ಥಾಮನು ಅಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುವುದಕ್ಕೆ ಹವಣಿಸಿದ್ದು ನೆನಪಿದೆಯಾ ನಿನಗೆ? ಜಗತ್ತನ್ನೇ ‌ನೋಡಿರದ ಭ್ರೂಣವೊಂದಕ್ಕೆ ಅಸ್ತ್ರ ಪ್ರಯೋಗ ಮಾಡಬಾರದಿತ್ತು ಅಶ್ವತ್ಥಾಮ. ಆದರೆ, ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವ ದ್ವೇಷದಲ್ಲಿ ಮಹಾಗುರು ದ್ರೋಣರ ಮಗ ಅಶ್ವತ್ಥಾಮ ಧರ್ಮದ ಕಟ್ಟಳೆಗಳನ್ನು ಮೀರಿ ನಿಂತಿದ್ದ. ಒಂದು ವೇಳೆ ಆ ದಿನ ಉತ್ತರೆಯ ಗರ್ಭವೇನಾದರೂ ಬಲಿಯಾಗಿದ್ದರೆ ಇತಿಹಾಸದಲ್ಲೊಂದು ಘೋರ ಕೃತ್ಯ ದಾಖಲಾಗುತ್ತಿತ್ತು. ಹಾಗಾಗಿಯೇ ನಾನು ಆ ದಿನ ಆ ಗರ್ಭಕ್ಕೆ ರಕ್ಷಣಾಕವಚವಾಗಿ ನಿಲ್ಲಬೇಕಾಯಿತು. ಆ ದಿನ ಧರ್ಮಕ್ಕಿಂತಲೂ ಮುಖ್ಯವಾದ ಇನ್ನೇನೋ ಒಂದು ಸಂದೇಶ ಇಡೀ ಸೃಷ್ಟಿಗೆ ತಲುಪಬೇಕಿತ್ತು. ತಾಯಿಯ ಗರ್ಭವೂ ಸುರಕ್ಷಿತವಲ್ಲ ಅಂತ ತಿಳಿದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಯುಗಗಳ ತನಕ ಜೀವ ಸೃಜನೆ ಆಗುವುದಾದರೂ ಹೇಗೆ ಅಲ್ಲವಾ ರಾಧೆ? 


ಮಾತೃತ್ವದ ನೆನಪುಗಳನ್ನು ಮೆಲುಕು ಹಾಕುತ್ತಾ, ನೀನು ಹೇಗಿದ್ದೀಯಾ ಅಂತ ಕೇಳುವುದನ್ನೇ ಮರೆತೆ ನೋಡು ನಾನು. ಕಾಯುತ್ತಿದ್ದೀಯಾ ಅಂತ ತಿಳಿದಿದೆ. ಕಾಯುವುದು ಹೆಣ್ಣು ಜೀವಕ್ಕೆ ಹುಟ್ಟಿನಿಂದಲೇ‌ ಬಂದ ಸಾಮರ್ಥ್ಯ ಅಂತ ನಾನು ಅಂದರೆ, ಹೌದಪ್ಪಾ, ನಿಮಗೇನು ಗಂಡಸರಿಗೆ, ಹೇಳಿಬಿಡುತ್ತೀರಿ, ಕಾಯುವುದರಲ್ಲೂ ಒಂಥರಾ ಸುಖವಿದೆ, ವಿರಹ ಹೆಚ್ಚಾದಷ್ಟೂ ಮಿಲನದ ತೀವ್ರತೆ ಹೆಚ್ಚು, ಸಂಬಂಧಗಳು ಗಟ್ಟಿಯಾಗುವುದೇ ಕಾಯುವುದರಿಂದ ಇತ್ಯಾದಿ ಇತ್ಯಾದಿ, ಅಂತೆಲ್ಲಾ ನನ್ನ ಮೇಲೆ ಹರಿಹಾಯಬೇಡ. ಜೀವವೊಂದು ಕರುಳ ಬಳ್ಳಿಗೆ ಅಂಟಿಕೊಂಡಿರುವಾಗ ಒಂಬತ್ತು ತಿಂಗಳುಗಳ ಕಾಲ ಪೊರೆದು, ಕ್ಷಣಕ್ಷಣವೂ ತನ್ನ ದೇಹದಿಂದ ಸೃಜಿಸುವ ಇನ್ನೊಂದು ಜೀವವನ್ನು ಕೈಯಲ್ಲಿ ಹಿಡಿಯುವ ಪುಳಕದಲ್ಲಿ ಕಾಯುತ್ತಾಳಲ್ಲವಾ ತಾಯಿ ಅನ್ನುವ ಕಾರಣಕ್ಕೆ ನಾನು ಹಾಗೆ ಹೇಳಿದೆನಷ್ಟೇ. ಕಾಯುವುದೂ ಸಂಭ್ರಮವಾಗಬಲ್ಲದು, ಮಗು ಒದೆಯುವುದೂ ನಗೆ ಚೆಲ್ಲಬಲ್ಲದು ಅನ್ನುವುದನ್ನು ತಾಯಲ್ಲದೇ ಇನ್ನಾರು ತೋರಿಸಲು ಸಾಧ್ಯ! 


ರಾಧೇ, ಬೃಂದಾವನದ ಗೋಮಾತೆಯರು ಹೇಗಿದ್ದಾರೆ ಈಗ? ನನಗೆ ಬಿರುಬಿಸಿಲಲ್ಲಿ ನೆರಳನ್ನಿತ್ತ ವೃಕ್ಷಗಳು ಹೇಗಿದ್ದಾವೆ? ನಾವು ಕಾಲುಬಿಟ್ಟು ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದ ಹಳ್ಳ‌ಕೊಳ್ಳಗಳು ಹೇಗಿದ್ದಾವೆ? ನನಗೆ ಮತ್ತೆ ನಿನ್ನ ಜೊತೆ ಕೂತು ಮಡಕೆಗಳ ಮೇಲೆಲ್ಲಾ ಚಿತ್ತಾರ ಬರೆಯಬೇಕು. ಕಪಿಲೆ ಗಂಗೆಯರ ಮೈಮೇಲೆ ವೃತ್ತಾಕಾರದ‌ ಚಿತ್ರಗಳನ್ನು ಬಿಡಿಸಬೇಕು, ಝರಿಯ ಹತ್ತಿರ ಅವುಗಳ ಮೈತೊಳೆಸಬೇಕು, ಕೋಗಿಲೆ, ನವಿಲುಗಳ ಜೊತೆ ಕೊಳಲೂದುತ್ತಾ ಸ್ಪರ್ಧಿಸಬೇಕು, ಆಗಷ್ಟೇ‌ ಮಿಂದುಬಂದ ನಿನ್ನ ಹೆರಳ ಒದ್ದೆ ಪರಿಮಳವನ್ನು ಆಘ್ರಾಣಿಸಬೇಕು, ಧೂಪದ ಗಂಧದ ಗಾಳಿಯಲ್ಲಿ ಸಂಜೆಯ ಉದ್ಯಾನದ ತುಂಬಾ ನಿನ್ನ ಜೊತೆ ಸೇರಿ ಹಣತೆಗಳನ್ನಿಡಬೇಕು. ಗಾಳಿಗೆ ಆರಿ ಹೋಗದ ಹಾಗೆ, ನಿನ್ನ ಹಿಂದಿನಿಂದ ನಿನ್ನ ಕೈಗಳೊಂದಿಗೆ ನನ್ನ ಕೈಗಳನ್ನು ಕೂಡಿಸಬೇಕು, ನಿನ್ನ ಸೊಂಟದಿಂದ ತುಸು ದೂರದಲ್ಲಿಯೇ ನನ್ನ ಕೈಗಳು ಹಾದುಹೋಗುವಾಗ ನಿನ್ನ ಕಿಬ್ಬೊಟ್ಟೆಯ ಪಕ್ಕ ಕಂಪಿಸುವುದ ನೋಡಬೇಕು, ಬಿದಿಗೆ ಚಂದ್ರನ ಬೆಳಕಲ್ಲಿ ನಿನ್ನ ನಾಚಿಕೆಯನ್ನು ಅಳೆಯಬೇಕು, ಮತ್ತೆ ಬೆಳಿಗ್ಗೆ ನದಿ ದಡದಲ್ಲಿ ನೀನು ಒಗೆದುಕೊಟ್ಟ ಬಟ್ಟೆಯನ್ನೆಲ್ಲಾ ಹಿಂಡುತ್ತಾ ಒಣಗಿಸುವುದಕ್ಕೆ ಅಣಿಯಾಗಬೇಕು, ಯಮುನೆಯ ದಡದಗುಂಟ ನಡೆದರೆ ಒಂದು ಕಾಡಿದೆಯಲ್ಲಾ, ಅಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ನಾವಿಬ್ಬರೇ ಕೂತು ತೂಗಬೇಕು, ಅದೆಷ್ಟೋ ಮಧ್ಯಾಹ್ನಗಳ ನೀರವತೆಯಲ್ಲಿ ನಿನ್ನ ಮುಂಗುರುಳುಗಳ ಜೊತೆ ಆಟವಾಡಬೇಕು, ಕಣ್ಣುಮುಚ್ಚಾಲೆಯಾಡುವಾಗಲೆಲ್ಲಾ ನೀನೆಲ್ಲಿದ್ದೀಯ ಅಂತ ಗೊತ್ತಿದ್ದರೂ ಗೊತ್ತಿಲ್ಲದವರ ಹಾಗೆ ಊರ ತುಂಬಾ ಹುಡುಕಾಡಬೇಕು, ಅಶ್ವತ್ಥ ಎಲೆಗಳ ಮೇಲೆ ನಿನ್ನ ಹೆಸರನ್ನು ಬರೆದು ನದಿಯಲ್ಲಿ ತೇಲಿಬಿಡಬೇಕು, ರಾಧೇ.. ಅಂಥ ದಿನಗಳಿಗಾಗಿ ಕೃಷ್ಣನೂ ಕಾಯುತ್ತಿದ್ದಾನೆ ಅನ್ನುವುದು ತಿಳಿದಿದೆಯಲ್ಲವಾ ನಿನಗೆ?


ನೀನು ಬೆಳಿಗ್ಗೆಯೇ ಎದ್ದು ಹಾಕುವ ರಂಗೋಲಿಯಲ್ಲಿ ಪ್ರತಿದಿನವೂ ಎರಡು ಚುಕ್ಕಿಗಳನ್ನು ಹಾಗೆಯೇ ಬಿಟ್ಟಿರು, ಒಂದು ಮುಂಜಾನೆ ಹಿಮದ ದಪ್ಪ ಪದರಗಳು ತುಂಬಿಕೊಂಡ ಹಾದಿಯಲ್ಲಿ ಕೋಮಲ‌ ಪಾದಗಳು ನಡೆದುಬರುತ್ತವೆ. ಅಪೂರ್ಣ ಕತೆಗಳನ್ನು ಇನ್ನಷ್ಟು ಮುಂದುವರೆಸುವ ನನ್ನ ಇಂಗಿತವನ್ನು ಇನ್ನಷ್ಟು ವರುಷಗಳ ಕಾಲ‌ ನಾವು ಒಯ್ಯಲೇಬೇಕು. ಕೃಷ್ಣ ಬರುತ್ತಾನೆ, ಅಂದು ಬೃಂದಾವನದ ಆಕಳ ಕೊರಳ ಗಂಟೆಗಳು ತಾವಾಗಿಯೇ ತೂಗುತ್ತವೆ, ಕೊಟ್ಟಿಗೆಯಿಂದಾಚೆ ಬಂದು ಅವೆಲ್ಲವೂ ಗುಂಪುಗಟ್ಟಿ ನಿಲ್ಲುತ್ತವೆ. ಕಡೆದಂತೆಲ್ಲಾ ತುಂಬಿಸಲಿಕ್ಕೆ ಮಡಕೆಗಳು ಸಾಕಾಗದಷ್ಟು ಬೆಣ್ಣೆ ಬೆಳೆಯುತ್ತದೆ,  ಹಿಂದಿನ ದಿನ ಸಂಜೆ ನೀ ಮಲಗುವ ಕೋಣೆಗೆ ಎಲ್ಲಿಂದಲೋ ನವಿಲುಗರಿಯೊಂದು ಹಾರಿ ಬಂದು ಬೀಳುತ್ತದೆ, ರಾತ್ರಿ ಪೂರ ಚಕ್ರವಾಕ ಕೂಗುತ್ತದೆ, ಬೆಳದಿಂಗಳ ಮೃದು ಕಿರಣಗಳು ಕಿಟಕಿಗಳನ್ನು ದಾಟಿ ನಿನ್ನ ಹೊಕ್ಕುಳನ್ನು ಹೊಕ್ಕುತ್ತವೆ. ನಾ‌ ಬರುವ ದಿನ ನೀ ಹೊದ್ದ ಸೆರಗು ಪದೇ ಪದೇ ಜಾರುತ್ತದೆ, ನಿನಗೆ ಇದ್ದಕ್ಕಿದ್ದ ಹಾಗೆ ಕಾಲ್ಗೆಜ್ಜೆಯ ನೆನಪಾಗುತ್ತದೆ.. ಅದೆಷ್ಟೋ ವರುಷಗಳ ಧೂಳನ್ನು ಕೊಡವುವ ಹಾಗೆ ಗಾಳಿ ಬೀಸಿ ಆಮೇಲೆ ತಂಗಾಳಿಯು ಊರ ತುಂಬಾ ಹಬ್ಬುತ್ತದೆ, ಕೊಳಲು ಹಿಡಿದು ಊರ ಹೊಸಲಲ್ಲಿ ಇದಿರುಗೊಳ್ಳುತ್ತೀಯಲ್ಲವಾ ರಾಧೆ?


ಇಂತಿ ನಿನ್ನ 

ಗೊಲ್ಲ


~`ಶ್ರೀ'

    ತಲಗೇರಿ

ಶನಿವಾರ, ಫೆಬ್ರವರಿ 11, 2023

ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ...

 


ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... 

ಅಲೆಮಾರಿ ಮನುಷ್ಯ ಒಂದು ಕಡೆ ನೆಲೆ ನಿಂತ ಅನ್ನುವುದು ನಾಗರಿಕತೆಯ ಶುರುವಾದರೂ, ನೆಲೆ‌ ನಿಂತ ಮನುಷ್ಯ ಮತ್ತೆ ಅಲೆಮಾರಿತನದ ಕನಸಿನೊಂದಿಗೆ ಬದುಕತೊಡಗಿದ. ಒಂದು ಊರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ‌ ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊನೆಗೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವುದೂ ಮನುಷ್ಯನ ಅಲೆಮಾರಿತನದ ಭಾಗವೇ ಆಗಿಹೋಗಿದೆ. ಉದ್ಯೋಗ, ಬದುಕಿನ ಗುಣಮಟ್ಟದ ಉನ್ನತಿಗಾಗಿ, ಬೇರೆ ಬೇರೆ ಜಾಗ, ಜನ ಜೀವನ, ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ, ಓದಿಗಾಗಿ, ನೆಮ್ಮದಿಗಾಗಿ ಹೀಗೆ ಹತ್ತು ಹಲವು ಕಾರಣಗಳೇ ನೆಪವಾಗಿ ಅಲೆದಾಟ ನಾಗರಿಕತೆಯ ಭಾಗವೂ ಆಯಿತು. ಕೆಲವೊಮ್ಮೆ ತಾವಿರುವ ಜಾಗದಲ್ಲಿ ತಮಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂದು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ತಾವಿರುವ ಕಡೆಯಲ್ಲಿ ಮನ್ನಣೆ ದೊರೆತು, ಮನ್ನಣೆಯ ಮುಂದುವರಿದ ಭಾಗವಾಗಿಯೇ ವಿದೇಶಕ್ಕೆ ಹೋಗುವವರು. ಇನ್ನು ಕೆಲವರು, ನೀರ ಹರಿವಿಗೆ ಅನುಗುಣವಾಗಿ ನೀರಲ್ಲಿ ಉದುರಿದ ಎಲೆಗಳು ಸಾಗುವ ಹಾಗೆ. ಅವಕಾಶಗಳು ಎಲ್ಲೆಲ್ಲಿ ಕರೆದೊಯ್ಯುತ್ತವೆಯೋ ಅಲ್ಲೆಲ್ಲಾ ಹೋಗುತ್ತಾರೆ. ಈ ಪಾತ್ರದಲ್ಲಿ ಬರುವ ದಂಪತಿಗಳ ಕತೆಯೂ ಹೆಚ್ಚೂ ಕಡಿಮೆ ನೀರ ಹರಿವಿನೊಂದಿಗೆ ಸಾಗುವ ಎಲೆಗಳ ಹಾಗೆಯೇ. ಆದರೆ, ಇದು ಬರೀ ಅಸಹಾಯಕತೆಯಲ್ಲ, ಹರಿವಿನೊಂದಿಗೆ ಈಜು ಕಲಿತು, ಆಮೇಲೆ ಅದರ ವಿರುದ್ಧ ಈಜುವ ಪ್ರಕ್ರಿಯೆಯ ಭಾಗವೂ ಆಗಿರಬಹುದೇನೋ ಅನ್ನುವ ಹಾಗೆ! ಅಂದ ಹಾಗೆ, ಕಾದಂಬರಿಯ ಹೆಸರು 'ದ್ವೀಪವ ಬಯಸಿ', ಬರೆದವರು ಎಂ ಆರ್ ದತ್ತಾತ್ರಿ ಅವರು.

ಕಾರ್ಪೊರೇಟ್ ಜಗತ್ತು ಅಂದ ತಕ್ಷಣ ಒಂದಷ್ಟು ಅದೇ ಹಳಸಲು ರೂಪಕಗಳು, ಈಗಾಗಲೇ ತಿಕ್ಕಿ ತಿಕ್ಕಿ ಬರೆದು ಬರೆದು ತೆಳುವಾದ ಅಭಿವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಕಣ್ಣ‌ಮುಂದೆ ಬರುತ್ತವೆ. ಆದರೆ, ಈ ಕಾದಂಬರಿ ಭಿನ್ನವಾಗುವುದೇ ಇಲ್ಲಿ. ಇದು ಕಾರ್ಪೊರೇಟಿನ ಕತೆಯಾದರೂ, ಅದೊಂದು ದ್ವೀಪವಷ್ಟೇ; ಅಂಥದ್ದೇ ಇನ್ನೂ ಹಲವು ದ್ವೀಪಗಳಿವೆ ಇಲ್ಲಿ! ಕಾರ್ಪೊರೇಟಿನ ಯಾವತ್ತಿನ ಸಂಗತಿಗಳ ಜೊತೆಜೊತೆಗೆ ಇಲ್ಲಿ ಮನುಷ್ಯರ ಕತೆಗಳಿವೆ. ಮನುಷ್ಯರ ಸಂಬಂಧಗಳ, ಮನೋವ್ಯಾಪಾರಗಳ ಕತೆಗಳಿವೆ. ವೀಕೆಂಡು, ಬಾಸಿಗೆ ಬೈಗುಳ ಇಷ್ಟಕ್ಕೇ ಸೀಮಿತವಾಗದೇ, ಕಾರ್ಪೊರೇಟಿನ ಒಳಸುಳಿಗಳೂ ಕೆಲವಷ್ಟಿವೆ. ಒಂದು ಸಂಗತಿಯನ್ನು ಕಾರ್ಪೊರೇಟ್ ಅಥವಾ ರಾಜಕೀಯ ಹೇಗೆ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಮುಂದಿಡುತ್ತದೆ ಹಾಗೂ ಅದನ್ನು ನಂಬಿಸುವಲ್ಲಿ ಸಫಲವಾಗುತ್ತದೆ ಅನ್ನುವುದನ್ನು ಹೇಳುವುದರ ಜೊತೆಜೊತೆಗೆ, ಇಲ್ಲಿ ಹುಡುಕಾಟದ ಕತೆಯಿದೆ. ಜಗತ್ತು ಒಂದೇ ಆದರೂ, ಅಲ್ಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಪ್ರತಿ ದ್ವೀಪವನ್ನು ತಲುಪುವುದಕ್ಕೂ ಬೇರೆ ಬೇರೆಯದೇ ದಾರಿ. ಪ್ರತಿ ದ್ವೀಪದ ಒಳ ಪ್ರಪಂಚ ಬೇರೆ ಬೇರೆ. 

ನಮಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಒಂದು ಹಂತದವರೆಗೆ ದೇಹ ಸೌಂದರ್ಯವನ್ನೂ ನೋಡಿ ಮದುವೆಯಾದವರಿಗೆ ವರುಷಗಳು ಉರುಳಿದ ಹಾಗೆ, ಅದು ದೇಹಕ್ಕಿಂತಲೂ ಮನಸ್ಸುಗಳ ಬೆಸುಗೆಯಾಗಿ ಸಂಬಂಧ ಗಟ್ಟಿಯಾಗುತ್ತ ಹೋಗುತ್ತದೆ.‌ ದೇಹ ಒಂದು ಸಾಧನವಷ್ಟೇ, ಬಂಧ ಇರುವುದು ಮನಸ್ಸುಗಳ‌ ಸಂಬಂಧದಲ್ಲಿ. ಬಹುಶಃ ಈ ಮಾತು ಮತ್ತು ಮೌನಗಳ ಸಂಗತಿಯೂ ಹೀಗೇ ಇರಬಹುದು ಅನಿಸುತ್ತದೆ. ಮಾತು, ಸಂವಹನದ ಮಾಧ್ಯಮವೇ ಆದರೂ ಮೌನದ ಸಾನ್ನಿಧ್ಯವನ್ನು ಹಾಗೂ ಅದರ ಅಗತ್ಯವನ್ನು ಗುರುತಿಸಲಾರದವರು ಮಾತಿನ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರೇನೋ ಅನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಸಾಲಿದೆ; "ನಮ್ಮ ನಮ್ಮ ಮೌನ ಭಾಷೆಯನ್ನು ಕೇಳಬಲ್ಲ ಮತ್ತೊಂದು ಜೀವವನ್ನು ಗುರುತಿಸಿಕೊಟ್ಟಿತ್ತು". ಸಂಗಾತಿಯಾಗುವುದೆಂದರೆ ಮಾತುಗಳನ್ನು ಕೇಳುವುದಷ್ಟೇ ಅಲ್ಲ, ಮೌನವನ್ನು ಆಲಿಸುವುದು ಕೂಡಾ ಬಹುಮುಖ್ಯ, ಮುಂದೊಂದು ದಿನ ಬದುಕಿನ ಮಹತ್ವದ ನಿರ್ಧಾರಗಳಿಗೆ ಬೆನ್ನೆಲುಬಾಗುವುದು ಈ ಮೌನ ಭಾಷೆಗಳ ನಡುವಿನ ಸಂವಹನ ಅನ್ನುವುದು ಒಂದು ವಿಸ್ಮಯಕಾರಿ ವಿಷಯ. 

ಫೋಟೋಗಳ ಪ್ರಪಂಚ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಪಂಚ. ಒಂದೊಂದು ಥರದ ಫೋಟೋಗಳು ಒಬ್ಬೊಬ್ಬರಿಗೆ ಇಷ್ಟವಾಗುತ್ತವೆ. ಆದರೆ, ಎಲ್ಲದರಲ್ಲೂ ಒಂದು ಸಾಮಾನ್ಯ ಸಂಗತಿಯೆಂದರೆ, ಆ ಫೋಟೋ ಇಷ್ಟವಾಗುವುದರ ಅಥವಾ ಅದು ಆತ್ಮೀಯವಾಗುವುದರ ಹಿಂದೆ ಯಾವುದೋ ಒಂದು ಕತೆಯಿರುತ್ತದೆ. ಅದು ನಮ್ಮ ಹಿನ್ನೆಲೆಯೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ನಾವು ಬದುಕಿದ ಪರಿಸರ ಅಥವಾ ನಮ್ಮ ಕನಸಿನ ಪರಿಸರ, ನಮ್ಮ ಜೀವನದ ಎಷ್ಟೋ ಘಟನೆಗಳು ಹಾಗೂ ಅದರ ಸುತ್ತಲೂ ಹಬ್ಬಿಕೊಂಡ ನಮ್ಮ ಭಾವಗಳು, ನಾವು ಇಷ್ಟಪಡುವ ಅಥವಾ ಹೆಚ್ಚಾಗಿ ಹಚ್ಚಿಕೊಂಡ ವ್ಯಕ್ತಿಗಳು ಹೀಗೆ ಹಲವು ಕಾರಣಗಳು ಒಂದು ಫೋಟೋವನ್ನು ನಮಗೆ ಹತ್ತಿರವಾಗಿಸುತ್ತವೆ. ಕೆಲವೊಮ್ಮೆ 'ಇಷ್ಟ'ದ ಫೋಟೋ ಅನ್ನುವುದಕ್ಕಿಂತ ಅದನ್ನು 'ಕಾಡಿದಂಥ' ಫೋಟೋ ಅಂತಲೂ ಅನ್ನಬಹುದು. ಒಂದು ಫೋಟೋ ಅದ್ಯಾಕೆ‌ ನಮ್ಮೊಂದಿಗೆ ತಳುಕು ಹಾಕಿಕೊಳ್ಳುತ್ತದೆ ಅನ್ನುವುದಕ್ಕೆ ಒಂದು ಸಂದರ್ಭ ಇದೆ ಈ ಕಾದಂಬರಿಯಲ್ಲಿ. ಅಲ್ಲಿ ಬರುವ ಮಾತುಗಳು ಹೆಚ್ಚೂ ಕಡಿಮೆ ಸ್ಟೀಫನ್ ಶೋರ್ (stephen shore)  ಅವರ ಮಾತುಗಳನ್ನು ನೆನಪಿಸಿತು. ಮಜದ ಸಂಗತಿಯೆಂದರೆ ಈ ಕಾದಂಬರಿಯಲ್ಲಿ ಬರುವ ಈ ಸಂದರ್ಭವನ್ನು ಓದಿದ್ದು ಮತ್ತು ಸ್ಟೀಫನ್ ಅವರ ಸಾಲುಗಳನ್ನು ಓದಿದ್ದು ಒಂದೇ ದಿ‌ನ! ಸ್ಟೀಫನ್ ಅವರ ಸಾಲುಗಳು ಹೀಗಿವೆ: "The context in which a photograph is seen affects the meaning the viewer draws from it" - ಯಾವ ಸಂದರ್ಭದಲ್ಲಿ ಒಂದು ಫೋಟೋ ನೋಡಲ್ಪಟ್ಟಿತು ಅನ್ನುವುದು, ಅದನ್ನು ಅರ್ಥೈಸಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. 

ಮನುಷ್ಯ ಲೋಕವೇ ಒಂದು ವಿಸ್ಮಯದ ಲೋಕ. ಇಲ್ಲಿ ಯಾವ ವ್ಯಕ್ತಿಯನ್ನಾದರೂ ನಾವು ಎಷ್ಟು ಅರ್ಥೈಸಿಕೊಂಡಿದ್ದೇವೆ ಅಂದುಕೊಂಡರೂ, ಯಾವತ್ತೋ ನಮಗೆ ಗೊತ್ತಿಲ್ಲದ ಯಾವುದೋ ಹೊಸ ಗುಣದೊಂದಿಗೆ, ಹೊಸ ಅಂಶದೊಂದಿಗೆ ನಮ್ಮೆದುರು ಬರುತ್ತಾರೆ. ವ್ಯಕ್ತಿಯನ್ನು ಅರಿತುಕೊಂಡಷ್ಟೂ, ಅರಿಯದೇ ಹೋದದ್ದು ಬಹಳಷ್ಟಿದೆ ಅನ್ನುವುದರ ಅರಿವಾದರೆ, ಬಹುಶಃ ಬದುಕು ಇನ್ನಷ್ಟು ಸಲೀಸಾದೀತೇನೋ. ಮೊದಮೊದಲಿಗೆ ಇಬ್ಬರು ವ್ಯಕ್ತಿಗಳು ಪರಿಚಿತರಾದಾಗ, ಇಬ್ಬರಿಗೂ ಮಾತಾಡುವುದಕ್ಕೆ ಬಹಳಷ್ಟಿರುತ್ತದೆ. ಕಾರಣ, ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕುತೂಹಲ. ಆದರೆ, ಒಂದೆರಡು ವರ್ಷಗಳ ನಂತರವೂ ಆ ಬಾಂಧವ್ಯ, ಆ ಮಾತುಕತೆಗಳು ಹಾಗೆಯೇ ಇದ್ದರೆ, ಅದನ್ನು ಖಂಡಿತವಾಗಿಯೂ ವಿಶೇಷ ಸಂಬಂಧವೆಂದೇ ಪರಿಗಣಿಸಬಹುದೇನೋ. ಕುತೂಹಲ ತಣಿದ ಮೇಲೆ ಮನುಷ್ಯರಿಗೆ ಆಸಕ್ತಿ ಕಡಿಮೆಯಾಗುವುದು ಸಹಜ ಗುಣ. ಹಾಗಾಗಿಯೇ ಹಲವು ಸಂಬಂಧಗಳು ಒಂದೆರಡು ವರ್ಷಗಳ ನಂತರ ಸಡಿಲವಾಗುತ್ತವೆ. ಮಾತುಕತೆಗಳು ನಿಲ್ಲುತ್ತವೆ. "ಪ್ರತಿ ವ್ಯಕ್ತಿಯೊಂದಿಗೂ ನಾವು ಗುರುತಿಸಿ ಪದಗಳಿಗೆ ರೂಪಾಂತರಿಸಬಲ್ಲ ಚಹರೆಗಳು ಒಂದಿಷ್ಟಿದ್ದರೆ ಅವ್ಯಕ್ತವಾಗಿ ಹೊರಹೊಮ್ಮುವ ಚಹರೆಗಳು ಸಾವಿರವಿರುತ್ತವೆ" ಅಂತ ಲೇಖಕರು ಒಂದು ಕಡೆ ಹೇಳಿದ್ದಾರೆ.

ಜಾಗತಿಕವಾದ ಅಥವಾ ವಿಶ್ವಾತ್ಮಕವಾದ ಸತ್ಯ ಒಂದೇ ಇರುವುದು ಅನ್ನುವುದು ನಿಜವಾದರೂ, ಆ ಕ್ಷಣದ ಸತ್ಯಗಳು ಹಲವು. ಯಾವ ಪರಿಸರದಲ್ಲಿ, ಯಾವ ಸಂದರ್ಭದಲ್ಲಿ ನಾವು ಒಂದು ಸಂಗತಿಯನ್ನು ನೋಡುತ್ತೇವೆಯೋ ಅದಕ್ಕೆ ಅನುಗುಣವಾಗಿ ನಾವು ಅರ್ಥಗಳನ್ನು ಹುಡುಕಿಕೊಳ್ಳುತ್ತೇವೆ. ಎಲ್ಲವೂ ಸತ್ಯದ ಒಂದೊಂದು ಭಾಗವಾಗಿರುತ್ತವೆಯೇ ಹೊರತೂ 'ಪೂರ್ಣ ಸತ್ಯ'ವಾಗಿರುವುದಿಲ್ಲ. ಹಾಗೆ, ಪೂರ್ಣ ಸತ್ಯ ಅರಿವಾಗಬೇಕಾದರೆ, ಎಲ್ಲಾ ಕೋನಗಳಿಂದಲೂ ಆ ಸತ್ಯದ ನೋಟ ಸಿಗಬೇಕು. ಹಾಗಾಗಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಸತ್ಯ ಬದಲಾಗುತ್ತದೆ. ನಿಜ ಹೇಳಬೇಕೆಂದರೆ, ಅದು ಸತ್ಯ ಬದಲಾಗುವುದಲ್ಲ. ಆದರೆ, ಸತ್ಯದ ತುಣುಕುಗಳಷ್ಟೇ ದಕ್ಕುವುದು. ಅದೇ ಅವರವರ ಪಾಲಿನ ಸತ್ಯ. 

ಲೈಫ್ ಆಫ್ ಪೈ' ( Life of Pi ) ಪುಸ್ತಕ ಹಾಗೂ ಸಿನೆಮಾದಲ್ಲಿ ಒಂದು ಮಾತಿದೆ. "I suppose in the end, the whole of life becomes an act of letting go, but what always hurts the most is not taking a moment to say goodbye" - ಕೊನೆಯಲ್ಲಿ, ಇಡೀ ಬದುಕು ಬೀಳ್ಕೊಡುಗೆಯ ಒಂದು ಪ್ರಕ್ರಿಯೆಯೇ ಆಗಿಹೋಗುತ್ತದೆ. ಆದರೆ, ನೋವು ಕೊಡುವ ಸಂಗತಿಯೆಂದರೆ, ಹಾಗೆ ಬೀಳ್ಕೊಡುವಾಗ, ಒಂದು ಸರಿಯಾದ ವಿದಾಯವನ್ನು ಹೇಳಲಿಕ್ಕೆ ಒಂದು ಕ್ಷಣವನ್ನು ಕೂಡಾ ತೆಗೆದುಕೊಳ್ಳದೇ‌ ಹೋಗುವುದು. ಬಹುಶಃ ಎಲ್ಲ ನಿರ್ಗಮನಗಳೂ ಹಾಗೆಯೇ. ಎಲ್ಲಿಯೇ ಹೋದರೂ, ನಿರ್ಗಮನದ ದಿನ ಭಾವುಕತೆ ಜಾಸ್ತಿ. ಅದರಲ್ಲೂ ಅಲ್ಲಿನ ಜಾಗ, ಮನುಷ್ಯರು, ಸಂಸ್ಕೃತಿ ಇತ್ಯಾದಿಗಳು ಇಷ್ಟವಾದರಂತೂ ಮುಗಿಯಿತು. ತುಸು ಹೆಚ್ಚೇ ಮನಸ್ಸು ಚಡಪಡಿಸುತ್ತದೆ. ಹಾಗಿರುವಾಗ, ಈ 'ಕೊನೆಯ ದಿನ' ಅನ್ನುವುದು ಬಹಳಷ್ಟನ್ನು ಹೇಳುತ್ತದೆ ಕೂಡಾ. ಜಪಾನಿನಲ್ಲಿ ಒಂದು ಸಂಸ್ಕೃತಿಯಿದೆ. ಸತ್ತಮೇಲೆ ದೇಹವನ್ನು ಶುಚಿಯಾಗಿಸಿ,‌ ಅಲಂಕರಿಸಿ ತಯಾರು ಮಾಡಲಾಗುತ್ತದೆ. ನಮ್ಮಲ್ಲಿನ ಭಾರತೀಯ ಸಂಸ್ಕೃತಿಯಲ್ಲೂ ಹೀಗೆಯೇ ದೇಹವನ್ನು ಶುದ್ಧೀಕರಿಸುವ ಆಚರಣೆಯಿದೆ. ಯಾಕೆಂದರೆ, ಯಾವತ್ತಿಗೂ "ಒಂದು ಗೌರವಯುತವಾದ ಬೀಳ್ಕೊಡುಗೆ ಬೇಕು". 

ನಮಗೆಲ್ಲಾ ಅದೆಷ್ಟೋ ಸಲ ಅನಿಸಿದ್ದಿದೆ. ಬಹುಶಃ ಪ್ರತಿದಿನವೂ ಅನಿಸುತ್ತದೆ. ನಮ್ಮೆಲ್ಲರ ಬದುಕು ಯಾಕಿಷ್ಟು ವಿಚಿತ್ರ. ಪ್ರತಿಯೊಬ್ಬರೂ ಅವರವರ ಆರ್ಥಿಕ ಮಟ್ಟಕ್ಕಿಂತ ಮೇಲಿನವರನ್ನು ನೋಡಿ, " ಅವರಿಗೇನು, ಸುಖದ ಸುಪ್ಪೊತ್ತಿಗೆ" ಅಂತಲೇ ಅನ್ನುವುದು. ಆದರೆ, ಪ್ರತಿಯೊಬ್ಬರಿಗೂ ಅವರವರ ಕಷ್ಟಗಳು ಇರುವಂಥದ್ದೇ. "ಜೀವನ ಯಾಕಿಷ್ಟು ಸಂಕೀರ್ಣವಾಗಬೇಕು. ನೂರು ಕಷ್ಟಗಳನ್ನು ಅನುಭವಿಸಿಯೂ ಒಂದು ಸುಖ ಕಾಣದಿದ್ದರೆ, ಅಂತಹ ಜೀವನವನ್ನು ಮುಂದುವರೆಸುವುದರಲ್ಲಿ ಯಾವ ಅರ್ಥವಿದೆ" ಅನ್ನುವ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮೆಲ್ಲರಲ್ಲಿಯೂ ಹುಟ್ಟಿರುವಂಥದ್ದೇ. ಹಾಗೆಯೇ, ಅದಕ್ಕೆ ಬೇಕಾದ ಸಮಜಾಯಿಷಿಗಳನ್ನೂ ನಮ್ಮ ಬದುಕೇ ಒದಗಿಸಿಕೊಡುತ್ತದೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಪ್ರಶ್ನೆಗೆ ಸರಿಯಾದ 'ತಿಳಿವಳಿಕೆ'ಯನ್ನು ನಮ್ಮ ಬದುಕೇ ನಮ್ಮಲ್ಲಿ ಬಿತ್ತುತ್ತದೆ. ಪ್ರತೀ ಬದುಕಿಗೂ ಅದರದ್ದೇ ಆದ ಮಹತ್ವವಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕು, ಜಗತ್ತಿನ ಇನ್ನೊಂದು ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕಿನ ಮೇಲೆ ಹೇಗೆ ಪರಿಣಾಮ ಬೀರೋದಕ್ಕೆ ಸಾಧ್ಯ ಅಂತನ್ನುವುದು ವಿಚಿತ್ರ ಕುತೂಹಲವಾದರೂ, ಒಂದು ಮನೆಯಲ್ಲಿರುವ ಪ್ರತಿ ವ್ಯಕ್ತಿಯ ನಡೆಯೂ, ಅದೇ ಕುಟುಂಬದ ಇನ್ನೊಂದು ವ್ಯಕ್ತಿಯ ನಡೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಂತ ಹೇಳಲಾದೀತೇ, ಇಲ್ಲ ತಾನೇ? ಜಗತ್ತೇ ಒಂದು ಕುಟುಂಬ ಕಾಲದ ಸೂರಿನ ಕೆಳಗೆ. 

ಈ ಕಾದಂಬರಿಯಲ್ಲಿ, ಒಂದು ಬಹುಮುಖ್ಯವಾದ ಹಾಗೂ ಬಹುತೇಕರು ಗುರುತಿಸುವ ಸಂಗತಿಯೆಂದರೆ ನಮ್ಮಲ್ಲಿನ ಒಳ ಹೊರ ಎರಡು ವೃತ್ತಗಳ‌ ಕುರಿತಾಗಿ ಮತ್ತು ಭಿನ್ನ ವ್ಯಕ್ತಿತ್ವಗಳ ಕುರಿತಾಗಿ ಇರುವಂಥ ಸಾಲುಗಳನ್ನು. ನಮ್ಮೆಲ್ಲರಲ್ಲಿಯೂ ಎರಡು ಪ್ರಪಂಚಗಳು. ಒಂದು ಹೊರ ಪ್ರಪಂಚ, ಇನ್ನೊಂದು ಒಳ ಪ್ರಪಂಚ. ಎಷ್ಟೋ ಸಂಗತಿಗಳಲ್ಲಿ ಹೊರಗಡೆ ನಾವು 'ತೋರಿಸಿಕೊಳ್ಳುವ' ರೀತಿಯೇ ಬೇರೆ, ಒಳಗಡೆ ಇರುವ ರೀತಿಯೇ ಬೇರೆ. ಇದು ಕಪಟತೆಯ ಪ್ರಶ್ನೆ ಅಲ್ಲ, ಅದಕ್ಕಿಂತ ಮಿಗಿಲಾದ ಒಂದು ಸಹಜ ಮಾನವ ಲೋಕದ ಪ್ರತಿಫಲನ ಅಷ್ಟೇ. ಆ ಒಳಗಿನ ವೃತ್ತಕ್ಕೆ ಕೆಲವರಿಗಷ್ಟೇ, ಇಷ್ಟೇ ಇಷ್ಟು ಮಾತ್ರವೇ ಪ್ರವೇಶವಿರುವುದು, ಆ ಒಳಗಿನ ವೃತ್ತದಲ್ಲಿ ಮನುಷ್ಯ ಬಹುತೇಕ ಒಂಟಿಯೇ! ಇದು ಒಂದು ಕಡೆಯಾದಲ್ಲಿ, ಇನ್ನೊಂದು ಕಡೆ, ಈ ಜಗತ್ತಿನ ಸಂಗತಿಗಳಂತೂ ಬಲು ಸೋಜಿಗ. "ಎಡಮನೆಯಲ್ಲೊಬ್ಬ ಪ್ರೇಮಿಯಿದ್ದರೆ ಬಲಮನೆಯಲ್ಲೊಬ್ಬನಿಗೆ ವೈರಾಗ್ಯ ಅಂಕುರಿಸಿರುತ್ತದೆ" ಅನ್ನುತ್ತಾರೆ ಲೇಖಕರು. 

ಮನುಷ್ಯಲೋಕದ ವಿಸ್ಮಯಗಳು ಮುಗಿಯುವಂಥದ್ದಲ್ಲ. ಹೂವಿಗೆ ಗಂಧ ಹೇಗೋ ಹಾಗೆಯೇ, ಮನುಷ್ಯರಿಗೆ ನೆನಪುಗಳು. ಈ ನೆನಪುಗಳೇ ಮನುಷ್ಯರ ನಾಳೆಗಳನ್ನು ರೂಪಿಸುತ್ತವೆ. ಈ ನೆನಪುಗಳೇ ಮನುಷ್ಯರ ಬದುಕುಗಳನ್ನು ಕಟ್ಟಿಕೊಡುತ್ತವೆ. ಈ ನೆನಪಿನ ಪ್ರಪಂಚದಲ್ಲಿ ಏನೆಲ್ಲಾ ಆಗಿರಬಹುದು, ಆದರೆ ಅದರಲ್ಲಿ ಎಲ್ಲವೂ ನೆನಪಿರುವುದಿಲ್ಲ. ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದು ಮನುಷ್ಯರೊಳಗಿನ ಒಳವೃತ್ತವನ್ನು ಸೋಕದ ಹೊರತು, ನೆನಪಿನ ಪ್ರಪಂಚದಲ್ಲಿ ಅಚ್ಚಾಗುವುದಿಲ್ಲವೇನೋ ಅಥವಾ ಕಾಲಕ್ರಮೇಣ ಅಳಿಸಿಯೂ ಹೋಗಬಹುದು. ಆದರೆ, ಅಂಥ‌ ನೆನಪುಗಳಿರುವುದರಿಂದಲೇ ಮನುಷ್ಯರು ಬರೆಯಬಲ್ಲರು. ವಾಸ್ತವಗಳನ್ನೂ ಮೀರಿದ ಹಲವು ಪ್ರಪಂಚಗಳನ್ನು ತೆರೆದಿಡಬಲ್ಲರು. ಕಲೆ ಮತ್ತು ಕಲಾವಿದ ಇರುವುದೇ ನೆನಪುಗಳಿಂದಾಗಿ ಅಂದರೆ ಜಾಸ್ತಿಯೇನೂ ಆಗುವುದಿಲ್ಲ ಅನಿಸುತ್ತದೆ. ನೆನಪುಗಳು ವಸ್ತುಗಳೊಂದಿಗೆ, ಕ್ಷಣಗಳೊಂದಿಗೆ ಅಂಟಿಕೊಂಡಿರುವುದರಿಂದಲೇ ಮನುಷ್ಯರ ಭಾವಪ್ರಪಂಚ ಅಷ್ಟು ಚೆಂದ. 

ನಾವು ನೈತಿಕತೆಗಳ ಬಗ್ಗೆ ಬಹಳಷ್ಟು ಭಾಷಣ ಮಾಡುತ್ತೇವೆ. ಆದರೆ, ಯುದ್ಧದ ಮಧ್ಯ ನಿಂತು ಫೋಟೋ ತೆಗೆಯುವ ಛಾಯಾಗ್ರಾಹಕರನ್ನು ಅಥವಾ ಅದನ್ನು ವಿವಿಧ ಸುದ್ದಿ ಮಾಧ್ಯಮಗಳಿಗೆ ದಾಟಿಸುವ ವರದಿಗಾರರನ್ನು ಕೇಳಿ, ನೈತಿಕತೆ ಅಂದರೇನು? ಅಂತ. ಕಣ್ಣೆದುರಿಗೇ ಹೆಣಗಳು ಉದುರುತ್ತಿರುತ್ತವೆ. ಆದರೆ, ಆ ಪರಿಸರದಲ್ಲಿ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದು ವಿಚಿತ್ರ ಅನ್ನಿಸಬಹುದು, ಜೊತೆಗೆ ಮನುಷ್ಯರಿಗೆ ನೆರವಾಗದ ಇನ್ನೊಬ್ಬ ಮನುಷ್ಯ ಇದ್ದು ಏನು ಪ್ರಯೋಜನ ಅಂತಲೂ ಅನ್ನಿಸಬಹುದು. ಆದರೆ, ಇದು ಇರುವುದೇ ಹಾಗೆ. ವನ್ಯಜೀವಿ ಛಾಯಾಗ್ರಾಹಕರ ಕಣ್ಣೆದುರೇ ಬೇಟೆ ನಡೆಯುತ್ತದೆ. ಆದರೆ, ತಪ್ಪಿಸುವ ಹಾಗಿಲ್ಲ. ಬೇಟೆ ತಪ್ಪಿಸಿದರೆ, ಜೀವ ಉಳಿಸಿದ್ದು ಹೌದು, ಆದರೆ ಇನ್ನೊಂದು ಪ್ರಾಣಿ ಉಪವಾಸವಿರುವುದೂ ಹೌದು. ವನ್ಯಜೀವಿ ಲೋಕದ ಕತೆಯಲ್ಲಿ ಬದುಕಿಗಾಗಿ ಮಾತ್ರವೇ ಬೇಟೆ. ಆದರೆ, ಮನುಷ್ಯಲೋಕದಲ್ಲಿ ಆಸೆಗಳಿಗಾಗಿ. ಆ ಆಸೆಗಳಿಗೆ ಭಿನ್ನ ಭಿನ್ನ ಕಾರಣಗಳು. ಯುದ್ಧದ ಭೀಕರತೆ ಮತ್ತು ಯುದ್ಧವನ್ನು ಸೆರೆಹಿಡಿಯುವ ಫೋಟೋಗ್ರಾಫರ್ರುಗಳ, ವರದಿಗಾರರ ಮನಸ್ಸಿನಲ್ಲಾಗುವ ಅಲ್ಲೋಲ‌ ಕಲ್ಲೋಲವನ್ನು ಈ ಕಾದಂಬರಿ ಆರ್ದ್ರವಾಗಿ ಹೇಳುತ್ತದೆ. ಇದನ್ನು ಓದುವಾಗ, ಸ್ಯೂಡಾನಿನ ಫೋಟೋ 'ರಣಹದ್ದು ಮತ್ತು ಪುಟ್ಟ ಹುಡುಗಿ' ( the vulture and the little girl ) ಹಾಗೂ ಅದನ್ನು ಸೆರೆಹಿಡಿದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಗುತ್ತದೆ. ಯಾವುದು ನೈತಿಕತೆ ಅನ್ನುವ ಪ್ರಶ್ನೆಯೇ ಹೆಚ್ಚು ಕಾಡುತ್ತದೆ. 

'ದ್ವೀಪವ ಬಯಸಿ' ಕಾದಂಬರಿ ನಮ್ಮನ್ನು ಹಲವು ದ್ವೀಪಗಳಿಗೆ ಕರೆದೊಯ್ಯುತ್ತದೆ ಹಾಗೂ ಅಗಾಧವಾದ ಕಾರ್ಪೋರೇಟ್ ಕರಾಳತೆಯ ಚೂರೇ ಚೂರು ರುಚಿ ತೋರಿಸುತ್ತದೆ. ಭರವಸೆಯ ನಾಳೆಗಳನ್ನು ಮಾತಿನಲ್ಲಿಯೇ ತೋರಿಸುವ ಎಲ್ಲರೂ ನಿಜವಾಗಿಯೂ ಅಂಥ ನಿಮ್ಮ ನಾಳೆಗಳಲ್ಲಿ ಆಸಕ್ತರಾಗಿರುವುದಿಲ್ಲ ಅನ್ನುವ ಸತ್ಯವನ್ನೂ ತೆರೆದಿಡುತ್ತಾ ಹೋಗುತ್ತದೆ. ಬರೀ ಅಷ್ಟಕ್ಕೇ ನಿಲ್ಲದೇ, ನಮ್ಮೊಳಗಣ ವೃತ್ತವನ್ನೂ, ಅದರ ತಲ್ಲಣಗಳನ್ನೂ ಆತ್ಮೀಯವಾಗಿ ಅಪ್ಪಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಬರೀ ಕತೆಯನ್ನಷ್ಟೇ ಹೇಳದೇ,‌ ಕತೆಯೊಂದಿಗೆ ಇನ್ನೂ ಏನನ್ನೋ ಹುಡುಕಿಹೊರಡುವ ಇಂಥ ಪುಸ್ತಕಗಳು ಇಷ್ಟವಾಗದೇ ಇರುವುದಾದರೂ ಹೇಗೆ!

ಗೂಗಲ್ ಪ್ಲೇ ಬುಕ್ಸಲ್ಲಿ ,ಇಂಗ್ಲೀಷ್ ಅಕ್ಷರದ ಒಂದಷ್ಟು ವಾಕ್ಯಗಳು ಸರಿಯಾದ ಫಾರ್ಮ್ಯಾಟಲ್ಲಿ ಇಲ್ಲ ಅಂದ ತಕ್ಷಣವೇ ಅವೆಲ್ಲವನ್ನೂ ಸರಿಪಡಿಸಿದ ವಸುಧೇಂದ್ರ ಸರ್-ಗೆ ವಿಶೇಷ ಧನ್ಯವಾದಗಳು. 

- 'ಶ್ರೀ'
   ‌ತಲಗೇರಿ



ಭಾನುವಾರ, ಜನವರಿ 1, 2023

ಬಯಲ ಹೂವಿನ ಗಂಧ

ಬಯಲ ಹೂವಿನ ಗಂಧ





ಈ ಪುಸ್ತಕದ ಕುರಿತಾಗಿ ಬರೆಯಬೇಕು ಅಂತ ಅಂದುಕೊಂಡಿದ್ದು ಬಹಳ ಸಲ. ಸುಮಾರು ಒಂದು ವರ್ಷವಾಯಿತು‌ ಇದನ್ನು ಓದಿ. ಕೆಲವೊಮ್ಮೆ ಕೆಲವು ಸಂಗತಿಗಳು ಕಟ್ಟಿಕೊಡುವ ಅನುಭವಗಳು ಗಾಢವಾಗಿರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವುದಕ್ಕೆ ನಾವು ಸೋಲಬಹುದು ಅನ್ನುವ ಹಿಂಜರಿಕೆಯೇ ಹೀಗೆ ಬರೆಯದೇ ದಿನ ದೂಡುವುದಕ್ಕೆ ನೆಪವಾಗುತ್ತದೆ. ಈ ಸಲ ಬರೆಯಲೇಬೇಕೆಂದು ಮರುಓದಿಗೆ ತೊಡಗಿದೆ. ಬಹುಶಃ ಒಂದು ಸಲ ಓದಿದ ಮೇಲೆ ಮತ್ತೆ ಓದಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದು. ಹಾಗಂತ ಇದು ಸಿಕ್ಕಾಪಟ್ಟೆ ಅದ್ಭುತವಾದ, ಎಲ್ಲಿಯೂ ಸಿಗದ ಕತೆಗಳಿರುವ ಪುಸ್ತಕ ಅಂತೆಲ್ಲಾ ಹೊಗಳುವುದಿಲ್ಲ! ಆದರೆ, ಈ ಪುಸ್ತಕ ಒಂದು ಗಾಢವಾದ ಅನುಭವದ ಜಗತ್ತನ್ನು ಕಟ್ಟಿಕೊಡುತ್ತದೆ. ಸಣ್ಣ ಸಣ್ಣ ಸಂಗತಿಗಳೇ ಕತೆಗಾರರ ಶಕ್ತಿ. ಅಂಥದ್ದೊಂದು ಭಂಡಾರವೇ ಇಲ್ಲಿದೆ. ಅವುಗಳಲ್ಲಿ ಕೆಲವನ್ನು ಈ ಬರೆಹದ ಕೊನೆಯಲ್ಲಿ ಹಂಚಿಕೊಳ್ಳುತ್ತೇನೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಅಂದರೆ ಅದೊಂದು ಥರದ ನಂಬಿಕೆ; ಅದು ಒಂದೊಳ್ಳೆಯ ಓದನ್ನು ಕೊಡುತ್ತದೆ ಅನ್ನುವ ಗಟ್ಟಿ ನಂಬಿಕೆ. ಅದರಲ್ಲೂ ಸಶಕ್ತ ಕತೆಗಾರ್ತಿಯರು ಕತೆ ಹೇಳಿದಾಗ ಪುರುಷ ಕತೆಗಾರರಿಗೆ ದಕ್ಕದ ಇನ್ನೊಂದು ಲೋಕ ಮತ್ತು ಆ ಲೋಕದ ಸೂಕ್ಷ್ಮತೆ ಆ ಕತೆಗಳಲ್ಲಿರುತ್ತವೆ ಅನ್ನುವುದನ್ನು ನಾನು ಓದಿದ ಕೆಲವೇ ಕೆಲವು ಕತೆಗಾರ್ತಿಯರ ಕತೆಗಳಿಂದ ಗಮನಿಸಿದ್ದೇನೆ. ಇಲ್ಲಿಯೂ ನನಗೆ ಅಂಥದ್ದೊಂದು ಜಗತ್ತು ಸಿಕ್ಕಿತು. ಮಹತ್ತರವಾದ ಅಥವಾ ಗಹನವಾದ ಸಂಗತಿಗಳನ್ನು ತೀವ್ರವಾಗಿ ತುಂಬಿಕೊಂಡಿರುವ ಕತೆಗಳೇನಲ್ಲ ಇವು. ಆದರೆ, ಈ ಜಗತ್ತಿನ ಪುಟ್ಟ ಪುಟ್ಟ ಸಂಗತಿಗಳನ್ನು ಗಮನಿಸಿ ಅದನ್ನು ಕತೆಯ ಭಾಗವಾಗಿಸುವುದಿದೆಯಲ್ಲಾ; ಅದನ್ನೇ ಬಹುಶಃ 'ಘಟಿಸುವುದು' ಅನ್ನಬಹುದೇನೋ!  ಅಂಥದ್ದೇ ಒಂದು ಸಂಕಲನ ಛಾಯಾ ಭಟ್ ಅವರ 'ಬಯಲರಸಿ ಹೊರಟವಳು' 

ನಮ್ಮೆಲ್ಲರ ಬದುಕಿನಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಹೇಗಾದರೂ ಮಾಡಿ ನಮ್ಮನ್ನು ಕೆಣಕುವವರೂ ಅವರೇ, ಸಹಾಯಕ್ಕೆ ಬರುವವರೂ ಅವರೇ. ಈ ನಡುವಿನ ಬದುಕಿನಲ್ಲಿ ಅದೊಂದು ತೆರನಾದ ಸಂಬಂಧ ಅವರ ಜೊತೆ ಬೆಳೆದುಹೋಗಿರುತ್ತದೆ. ಅದನ್ನು ಆತ್ಮೀಯತೆ ಅಂತಲಾದರೂ ಕರೆಯಿರಿ ಅಥವಾ ಅನಿವಾರ್ಯತೆ ಅಂತಲಾದರೂ! ದೇವಳದ ಸೂರಿನಲ್ಲಿ , ಪ್ರಕೃತಿಯ ಕೋಪದಲ್ಲಿ ಎಲ್ಲರೂ ಒಂದೇ ಅನ್ನುವ ಮಾತು ಎಷ್ಟು ವಾಸ್ತವಿಕ. ಪ್ರಕೃತಿ ವಿಕೋಪಗಳಾದಾಗ, ಊರ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಚರ್ಚು, ಮಸೀದಿಗಳಲ್ಲೋ ಗಂಜಿಕೇಂದ್ರಗಳನ್ನು ತೆರೆಯುವುದು ನಮಗೆ ತಿಳಿದ ಸಂಗತಿಯೇ. ಮತ್ತೆ ಮತ್ತೆ ಇಂಥ ವಿಕೋಪಗಳಾದಾಗ ಮಾತ್ರ ಮನುಷ್ಯನಿಗೆ ಮನುಷ್ಯನಾಗುವುದಕ್ಕೆ ಸಾಧ್ಯವಾಗುತ್ತದೆಯೇನೋ ಬಹುಶಃ! ಮನುಷ್ಯ ನಾಗರಿಕತೆಗಳ ಏಳುಬೀಳುಗಳನ್ನು ಕಂಡು ಪೊರೆವ ನದಿಯೇ ಒಮ್ಮೊಮ್ಮೆ ಉಕ್ಕುತ್ತದೆ ಅನ್ನುವ ಲೇಖಕಿ, ಪ್ರಕೃತಿಗೆ ತನ್ನ ಸಮತೋಲನವನ್ನು ತಾನೇ ಕಾಯ್ದುಕೊಳ್ಳುವುದು ಗೊತ್ತಿದೆ ಅನ್ನುವ ಮೂಲಕ ಮನುಷ್ಯ ತಾನು ಮಾಡಿಕೊಳ್ಳುವ ಅನರ್ಥಗಳಿಗೆ ಏನೇನೋ ಉದ್ಧಾರದ ಸಮಜಾಯಿಷಿ ಕೊಡುವುದನ್ನು ಸೂಕ್ಷ್ಮವಾಗಿ ಟೀಕಿಸಿಸುತ್ತಾರೆ. ಒಮ್ಮೊಮ್ಮೆ ಅನಿಸುತ್ತದೆ, ನಾವು ಮಾತಾಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ, ಮನುಷ್ಯ ಮನುಷ್ಯರ‌ ನಡುವಿನ ವೈಮನಸ್ಯಗಳು ತಿಳಿಯಾಗುತ್ತಿದ್ದವೇನೋ ಅಂತೆಲ್ಲಾ. ಬಹಳ ಸಲ ಮಾತು ಒಂದು ಮಟ್ಟಿಗೆ ಕೆಲಸ ಮಾಡುವುದು ಹೌದಾದರೂ, ಮಾತಿನಿಂದಲೇ ಎಲ್ಲವೂ ಅರ್ಥವಾಗುವುದೇ? ಸಂವಹನ ನಡೆಯುವುದು ಕೇವಲ ಮಾತಿನ ಅರ್ಥದಿಂದಲೇ? ಅನ್ನುವ ಪ್ರಶ್ನೆ ಮೌನದ ಸಂವಹನಕ್ಕೆ ಇನ್ನಷ್ಟು ಬಲ ತುಂಬುತ್ತದೆ. ಮನುಷ್ಯನಿಗೆ ಇಂದ್ರಿಯಗಳು ಮತ್ತದಕ್ಕೆ ಅಂಟಿಕೊಂಡ ಸಂವೇದನೆಗಳೇ ಎಲ್ಲಾ ನೆನಪುಗಳಿಗೂ ಕಾರಣ. ಹಾಗೂ ಬದುಕಿನ ಭರವಸೆಗಳಿಗೂ ಕಾರಣ. ಇನ್ನೂ ಏನೋ ಉಳಿದಿದೆ ಅನ್ನುವುದೇ ನಾಳೆಗಳನ್ನು ಅನಿವಾರ್ಯವಾಗಿಸುತ್ತದೆ. 'ನೆರೆ' ಅನ್ನುವ ಈ ಕತೆ ಈ ಪುಸ್ತಕದ ಮೊದಲ‌ ಕತೆ. ಇದರಲ್ಲಿ ಒಂದು ಸಾಲಿದೆ "ನೆಟ್ಟವರಿಗಷ್ಟೇ ಕೀಳುವ ಹಕ್ಕಿರುವುದು"

ಕೆಲವರಿಗೆ ಊರಿಗೆ ಹೋಗುವುದೆಂದರೆ ನೆಮ್ಮದಿಯ ಆತ್ಮೀಯತೆ. ಇನ್ನು ಕೆಲವರಿಗೆ ಊರೆಂದರೆ ಅದು ತಳಮಳಗಳನ್ನು ಹುಟ್ಟುಹಾಕುವ, ಮನಸ್ಸೊಳಗಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಹಾಗೂ ಕೌಟುಂಬಿಕ ಸುಖಕ್ಕೆ ವಿರುದ್ಧವಾದ ಕಿರಿಕಿರಿಯನ್ನು ದಾಟಿಸುವ ಜಾಗ. ಯಾಕೆ ಹಾಗಾಗುತ್ತದೆ ಅಂತ ಕೇಳಿದರೆ ಬದುಕಿನೊಂದಿಗೆ ಹೆಣೆಯಲ್ಪಟ್ಟ ನೆನಪುಗಳು, ಭಿನ್ನ ಘಟನೆಗಳು, ಅವುಗಳ ಅನುಭವಗಳು ಇತ್ಯಾದಿ. ಬಹುಶಃ ನಮ್ಮದು ಅಂತ ಅನ್ನಿಸುವವರೆಗೂ ಅದರೊಂದಿಗೆ ನಾವು ಸುಖಿಸಲು ಸಾಧ್ಯವೇ ಇಲ್ಲವೇನೋ! ಬದುಕಿನ ಪ್ರತೀ ಹಂತದಲ್ಲೂ ಭಯ ಉಂಟಾಗುತ್ತಲೇ ಇರುತ್ತದೆ. ಒಂದು ಸಂಗತಿಯಿಂದ ಆಚೆ ಬಂದು ತೆಗೆದುಕೊಳ್ಳುವ ನಿರ್ಧಾರದಿಂದ ಹುಟ್ಟುವ ಧೈರ್ಯ ಇನ್ನಷ್ಟು ಹುರುಪಿಗೆ ನಾಂದಿ ಅನ್ನುವುದನ್ನು 'ಕೋಲ್ಮಿಂಚು' ಕತೆ ನಮಗೆ ದಾಟಿಸುತ್ತದೆ. 

ಪ್ರತಿ ಜನಾಂಗವೂ ತನ್ನ ಹಿಂದಿನ ಜನಾಂಗದ ನಂಬಿಕೆಗಳ ಆಧಾರದ ಮೇಲೆಯೇ ಬದುಕು ಕಟ್ಟಿಕೊಳ್ಳುವುದು.‌ ಕೆಲವೊಮ್ಮೆ ಆ ನಂಬಿಕೆಗಳು ಹಳತಾದವೆಂದು ನವೀಕರಿಸುತ್ತಲೇ, ಇನ್ನು ಕೆಲವೊಮ್ಮೆ ಆ ನಂಬಿಕೆಯೇ ಅಂತಿಮ ಸತ್ಯವೆಂದು ಆದರಿಸುತ್ತಲೇ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಗಳು ವರ್ಗಾವಣೆಯಾಗುತ್ತವೆ. ತಲೆಮಾರುಗಳ ನಡುವಿನ ನಂಬಿಕೆಗಳು ಹಾಗೂ ಅವುಗಳ ಒಳ ಪದರಗಳು ತಂದೊಡ್ಡುವ ವಿಪರೀತಗಳು ನೋಡುವುದಕ್ಕೆ ಸರಳವಾಗಿದ್ದರೂ, ಕೆಲವೊಮ್ಮೆ ಒಂಥರದ ಕಗ್ಗಂಟು. ಒಮ್ಮೆ ಮನಸ್ತಾಪ ಶುರುವಾದರೆ, ಪದೇ ಪದೇ ವಿಷಯವೇ ಇಲ್ಲದೇ ಮನಸ್ತಾಪಗಳಾಗುತ್ತವೆ. ಕುಟುಂಬದ ಹೆಣಿಗೆಗಳಿಗೆ ಪರಿಹಾರ ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಅಲ್ಲವಾ ಸಂಸಾರ ಸಾಗರ ಅಂತನ್ನುವುದು. ಅಲೆಗಳು ಒಂದಾದ ಮೇಲೊಂದರಂತೆ ಬರದೇ ಸಾಗರ ಇರುವುದಾದರೂ ಹೇಗೆ! 'ತೊಟ್ಟು ಕಳಚಿದ ಹೂವು' ಎನ್ನುವ ಈ ಕತೆಯಲ್ಲಿ ಅಬ್ಬೆ, ಮಗ, ಮಗನ ಹೆಂಡತಿಯ ನಡುವಿನ ತಾಕಲಾಟಗಳು, ಸಂಬಂಧಗಳ ನಡುವಣ ಸಂಘರ್ಷಗಳಿವೆ. 

ಮುಂದಿನ ಕತೆ ಪಾತಿಚಿಕ್ಕಿಯದ್ದು. ಜೀವನದಲ್ಲಿ ಎದುರಾಗುವ ಸಾವಿರ‌ ಕಷ್ಟ ಕಾರ್ಪಣ್ಯಗಳಿಗೆ ಮಾತನಾಡದ ದೇವರುಗಳಿಗಿಂತ ಒರಟೊರಟಾಗಿ ಮಾತಾಡಿ, ಎಲ್ಲರ‌ ನಂಬಿಕೆಯನ್ನೇ ಅಲ್ಲಾಡಿಸುವಂತೆ ಬದುಕುವುದು ಪಾತಿಚಿಕ್ಕಿಯ ಪಾತ್ರ. ಮುಗ್ಧರ ಹಾಗೂ ನಿತ್ಯದ ಅಗತ್ಯಕ್ಕಾಗಿ ಹೆಣಗುವವರ ಮನುಷ್ಯ ಸಹಜ ಆಸೆಗಳನ್ನು  ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ ಅನ್ನುವುದನ್ನೂ ಈ ಕತೆ ತೆರೆದಿಡುತ್ತದೆ. ಒಂದು ಗಂಭೀರ ಸನ್ನಿವೇಶದಲ್ಲೂ ಮಕ್ಕಳ ಮನಸ್ಸಿನಲ್ಲಿ ಮೂಡಬಹುದಾದ ಮುಗ್ಧ ಹಾಗೂ ಮಜವಾದ ಸಂಗತಿಯೊಂದು ಪಾತಿಚಿಕ್ಕಿಯ ಗಂಡ ಮನೆಬಿಟ್ಟು ಹೋದಾಗಿನ ಸಂದರ್ಭದಲ್ಲಿದೆ. ಹೆಣ್ಣು ತಾನು ಸೇರಿದ ಮನೆಯನ್ನು, ಹೊಸ ಸಂಬಂಧವನ್ನು ಅಪ್ಪಿಕೊಂಡಷ್ಟು ಸುಲಭವಾಗಿ ಗಂಡಸಿಗೆ ಅದು ಸಾಧ್ಯವಾಗುವುದು ಬಹಳ ಅಪರೂಪ ಅನ್ನುತ್ತಾರೆ ಕತೆಗಾರ್ತಿ. ಮುರಿದು ಮತ್ತಷ್ಟು ಚೆಂದಕ್ಕೆ ಕಟ್ಟುವುದು ಹೆಣ್ಣಿಗೊಲಿದ ವಿಶೇಷ ಕಲೆಯೇ ಇರಬೇಕು. ಅಲ್ಲದೇ ಇದ್ದರೆ ಹಳಬರು ಸುಮ್ಮನೆ ಹೇಳುತ್ತಿದ್ದರೇ; "ಮದುವೆ ಅಂತ ಒಂದ್ ಮಾಡಿ, ಹುಡುಗ ಸರಿ ಹೋಗ್ತಾನೆ" ಅಂತ! ಒಂದು ವಸತಿಗೃಹವನ್ನು ಮನೆಯಾಗಿಸುವವಳು ಹೆಣ್ಣು. ಒಂಟಿತನ ಎನ್ನುವುದು ಪೂರಾ ಮಾನಸಿಕ ಅವಸ್ಥೆ , ಯಾವಾಗ ಬೇಕಾದರೂ ಬರಬಹುದು, ತುಂಬು ಸಂಸಾರದಲ್ಲಿಯೂ ಮನುಷ್ಯ ತನಗ್ಯಾರಿಲ್ಲವೆಂದು ನೋಯಬಹುದು ಅನ್ನುವ ಸಂಗತಿಯನ್ನು ಲೇಖಕಿ ಹೇಳುತ್ತಾರೆ. ಬಹುಶಃ ಇದು ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗಬಹುದಾದ ಹೇಳಿಕೆ ಅಂತ ನನಗನಿಸುತ್ತದೆ. ಜನರ ಕಷ್ಟ ಎಷ್ಟಿದೆಯೆಂದರೆ ಎಷ್ಟೇ ಗುಡಿ ಕಟ್ಟಿ ಕೈಮುಗಿದರೂ ಬೇಡಿ ಮುಗಿಯಲಾರದಷ್ಟು ಕೋರಿಕೆಗಳಿರುತ್ತವೆ ಅವರಿಗೆ! ತನಗಿಂತ ಹೆಚ್ಚು ಶಕ್ತಿಶಾಲಿಯಾದವರಲ್ಲಿ ನಂಬಿಕೆ ಹುಟ್ಟಿಕೊಳ್ಳುವುದೇ ಹೀಗೆ. ಅದಕ್ಕೆಂದೇ ಮನುಷ್ಯ ದೇವರನ್ನು ನಂಬತೊಡಗಿದ ಅಂತ ಭಗತ್ ಸಿಂಗ್ ತಮ್ಮ 'ನಾನೇಕೆ ನಾಸ್ತಿಕ' ಪುಸ್ತಕದಲ್ಲಿ ಬರೆದಿರುವ ಮಾತಿಗೆ ಇದು ಹೆಚ್ಚು ಹತ್ತಿರದ ಸಾಲು ಅನಿಸಿತು. ನಾವೆಲ್ಲರೂ ಪ್ರತಿ ದಿನ ಬಯಲರಸಿ ಹೊರಡುವುದಕ್ಕೆ ಹಲುಬುತ್ತಲೇ ಇರುತ್ತೇವೆ ಅಲ್ಲವಾ! ಸಂಕಲನದ ಶೀರ್ಷಿಕೆ ಕತೆ ಇದು; 'ಬಯಲರಸಿ ಹೊರಟವಳು' 

ಮುಂದಿನ ಕತೆಯ ಶುರುವಿನಲ್ಲಿ ಬರುವ ಕೊಂಕಣ ರೈಲಿನ ವರ್ಣನೆ, ಅಲ್ಲಿ ಹೊರಟಿದ್ದು ಮುಂಬಯಿಯಿಂದಾದರೂ, 'ಹಾಯ್, ಹೋಯ್, ಇಶ್ಶೀ' ಎನ್ನುವ ಉದ್ಗಾರಗಳು ಪಕ್ಕಾ ಉತ್ತರ ಕನ್ನಡದವು! ಹಲವು ಸಲ ಅನಿಸಿದ್ದಿದೆ, ನಾವು ಮತ್ತೆ ಮತ್ತೆ ಅದದೇ ಕತೆಗಳನ್ನು, ಅದದೇ ಪರಿಸರವನ್ನು, ಅದದೇ ಸಾಹಿತ್ಯವನ್ನು ತಿರುಗಾಮುರುಗಾ ಮಾಡಿ ಹೇಳುತ್ತಿದ್ದೇವಾ ಅಂತ. ಆದರೆ, ಇನ್ನೂ ಕೆಲವೊಮ್ಮೆ ಅನಿಸಿದ್ದಿದೆ. ನಮಗೆ ಗೊತ್ತಿಲ್ಲದ ಇನ್ನ್ಯಾವುದೋ ಪರಿಸರವನ್ನು ನಾವು ನಮ್ಮ ಕತೆಯಲ್ಲಿ ತರುವುದಾದರೂ ಹೇಗೆ ಸಾಧ್ಯ? ತಂದರೂ, ಅದು ಅಷ್ಟು ನೈಜವಾಗಿ ಇರುವುದಕ್ಕೆ ಸಾಧ್ಯವಾ? ಅಂತ. ಹಾಗಾಗಿ ಕೊನೆಗೆ ನಾನು ಕಂಡುಕೊಂಡ ಉತ್ತರ; ನಮ್ಮದೇ ಪರಿಸರದಲ್ಲಿ, ನಮ್ಮದೇ ಬಾಲ್ಯದಲ್ಲಿ, ನಮ್ಮದೇ ಊರಿನಲ್ಲಿ, ನಮ್ಮದೇ ನಗರಗಳಲ್ಲಿ ಹೇಳದೇ ಉಳಿದ ಅದೆಷ್ಟೋ ಕತೆಗಳಿವೆ. ಅವುಗಳನ್ನು ಹೇಳದೇ ಹೋದರೆ, ಆ ಕತೆಗಳಿಗೂ ದನಿ ಬೇಕಲ್ಲವಾ ಎಂಬುದಾಗಿ. ಹಾಗಾಗಿ, ಈಗ ಊರ ಕತೆಗಳು 'ಮತ್ತದೇ ಹಾಡು' ಎಂಬಂತಾಗುವುದಿಲ್ಲ. ಈ ಕತೆಯ ಶುರುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಗಂಡಸಿನ ಲೋಕ ಏನು ಅನ್ನುವುದನ್ನು ಕತೆಗಾರ್ತಿ ಹೇಳುತ್ತಾರೆ. ಅದಾದ ನಂತರ ಇಡೀ ಕತೆಯಲ್ಲಿರುವುದು ಒಂದು ಘಟನೆ ನಮ್ಮ ಜೀವನ ಪೂರ್ತಿ ಬೆನ್ನು ಹತ್ತಿ ಕೂತು ಕಾಡುತ್ತದೆ ಅನ್ನುವುದು ಹಾಗೂ ಅದರಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು. ಕತೆಯ ಹೆಸರು 'ಆ ಕಡುಗಪ್ಪು ಕಣ್ಣುಗಳು'

ಒಂದು ಸಣ್ಣ ಮನಸ್ತಾಪ ಯಾವ್ಯಾವುದೋ ಅಮಲಿನಲ್ಲಿ ಇನ್ನೇನೋ ಆಗುವುದರಿಂದಲೇ‌ ಮನುಷ್ಯ ಜಾತಿಯನ್ನು ಇನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಿರುವುದು. ಎಲ್ಲ ಸಲ ಗಲಾಟೆಯಾದಾಗಲೂ, ಯಾವ ಕಾರಣಕ್ಕಾಗಿ ಗಲಾಟೆ ನಿಗದಿಯಾಗಿತ್ತೋ ಅದಕ್ಕಿಂತಲೂ ಕೊನೆಯಲ್ಲಿ ಅದು ಉಳಿಯುವುದು ಇನ್ನೇನೋ ಆಗಿಯೇ! ಇದು ಇಂದಿನ ಸ್ಥಿತಿ.‌ ಮನುಷ್ಯನ ಭಾವಲೋಕ ವಿಚಿತ್ರವಾದದ್ದು. ಕೃತಜ್ಞತೆ ಮತ್ತು ಕೃತಘ್ನತೆಗೆ ಕೇವಲ ಒಂದು ಅಕ್ಷರದ ವ್ಯತ್ಯಾಸವಷ್ಟೇ. ಹಿಂಸಿಸುವುದೂ ಒಂದು ಉನ್ಮಾದವಿದ್ದಂತೆ, ಮಾಡಿದಂತೆ ಏರುತ್ತಲೇ ಹೋಗುತ್ತದೆ, ನಿಲ್ಲಿಸಬೇಕೆಂದು ಅನಿಸುವುದೇ ಇಲ್ಲ ಅನ್ನುವ ಸಾಲು ಎಲ್ಲಾ ಕಾಲದಲ್ಲಿಯೂ ಮನುಷ್ಯ ಯಾಕೆ ಕ್ರೌರ್ಯವನ್ನು ವಿಜೃಂಭಿಸುತ್ತಾನೆ ಅನ್ನುವುದಕ್ಕೆ ಉತ್ತರದಂತಿದೆ. ಈ ಕತೆಯ ಹೆಸರು 'ಸುಳಿ'

ನಂತರದ ಕತೆ ಬಾಡಿಗೆ ತಾಯ್ತನ, ಕಲಾಶಾಲೆಗೆ ಮಾಡೆಲ್ ಆಗುವ ಹೆಣ್ಣೊಬ್ಬಳ ಕುರಿತಾಗಿದ್ದು, ಜೊತೆಗೆ, ಯಾರ ಚಿತ್ರವನ್ನು ಬಿಡಿಸಿದ್ದೆನೋ, ಆ ಚಿತ್ರ ಹೆಚ್ಚಿನ ಬೆಲೆಗೆ ಮಾರಾಟವಾದಾಗ, ಆ ಹಣ ಅವರಿಗೂ ಸಲ್ಲಬೇಕು ಎಂದು ಮತ್ತೆ ಅವರನ್ನು ಹುಡುಕಿ ಹೋಗುವ ಒಬ್ಬ ಕಲಾವಿದನ ಕುರಿತಾಗಿಯೂ ಇದೆ. ಇದು ಒಬ್ಬ ಕಲಾವಿದನಿಗೆ ಅಥವಾ ಛಾಯಾಗ್ರಾಹಕನಿಗೆ (ಛಾಯಾಗ್ರಾಹಕನೂ ಕಲಾವಿದನೇ, ಅದರಲ್ಲಿ ಅನುಮಾನವಿಲ್ಲ!) ಇರಬೇಕಾದ ನೈತಿಕ ಪ್ರಜ್ಞೆ ಅನಿಸುತ್ತದೆ ನನಗೆ. ಇದು ನನಗೆ ಪಾಕಿಸ್ತಾನದ ಕ್ಯಾಂಪಿನಲ್ಲಿ ತೆಗೆದ 'ಅಪ್ಘನ್ ಗರ್ಲ್' ಫೋಟೋದಲ್ಲಿದ್ದ ಶರ್ಬತ್ ಗುಲಾಳನ್ನು ಫೋಟೋ ತೆಗೆದ ಸುಮಾರು ಇಪ್ಪತ್ತು ವರ್ಷಗಳ ನಂತರ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು ಹುಡುಕಿಹೋದದ್ದನ್ನು ನೆನಪಿಸಿತು. ಈ ಕತೆಯ ಹೆಸರು 'ಶುಭ್ರಜ್ಯೋತ್ಸ್ನೆ'

ಖಾಲಿ ಜಾಗವನ್ನು ಹದ ಮಾಡಿ ಮನೆ ಕಟ್ಟುವುದು ಕಷ್ಟವೇನಲ್ಲ, ಆದರೆ ನೆನಪುಗಳೇ‌ ತುಂಬಿಕೊಂಡಿರುವ ಹಳೆ ಮನೆಯನ್ನು ಉದುರಿಸಿ ಹೊಸ ಮನೆ ಕಟ್ಟಿದರೂ ನೆನಪುಗಳು ಕಾಡದೇ ಇರುತ್ತವೆಯಾ? ಅನ್ನುವುದನ್ನು ಹೇಳುವ ಕತೆ 'ಹುಲ್ಲಾಗು ಬೆಟ್ಟದಡಿ'. ಕೊನೆಗೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯಾ ಅಥವಾ ದೊಡ್ಡ ದೊಡ್ಡ ನಗರದ ಜೀವನವಾ ಅನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತದೆ. 

ಎಂಥದ್ದೇ ಘಟನೆಯಾದರೂ ಮನೆಯಲ್ಲಿ ಮರುದಿನ ದೋಸೆ ಬಂಡಿಯ ಮೇಲೆ ದೋಸೆ ಹೊಯ್ಯಲೇಬೇಕು; ಅದೇ ಬದುಕು. ಹೊಯ್ಯುವವರಷ್ಟೇ ಬದಲಾಗಬಹುದು. ಆದರೆ, ಬೆಳಗಾಗುತ್ತದೆ, ಸಂಜೆಯಾಗುತ್ತದೆ,‌ ಕಾಲ ಜಾರುತ್ತದೆ, ಯಾರದೋ ಯೌವನಕ್ಕೆ ಮುಪ್ಪು ಬರುತ್ತದೆ. ಇನ್ನ್ಯಾರದೋ ಗರ್ಭದೊಳಗಿಂದಿಳಿದು ಪುಟ್ಟ ಅಳು ನಗು ಮೊದಲ ಬಾರಿಗೆ ಗಾಳಿಗೆ ಮೈಯೊಡ್ಡುತ್ತದೆ. ಇದು ಕಾಲದ ಪ್ರವಾಹ ಅನ್ನುವುದನ್ನು ಹೇಳುವ ಈ ಕತೆಯಲ್ಲಿ ನನ್ನನ್ನು ಕಾಡಿದ ರೂಪಕ ದೂರ್ವೆಯದ್ದು. ಈ ರೂಪಕ ವರ್ಷಗಟ್ಟಲೆ ನನ್ನನ್ನು ಕಾಡಿದೆ ಅಂದರೆ ಸುಳ್ಳಲ್ಲ. ಬಹುಶಃ ಇನ್ನಷ್ಟು ವರ್ಷಗಳ ಕಾಲ ಇದು ನೆನಪಿನಲ್ಲಿ ಉಳಿಯುತ್ತದೆ. "ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಗೂನುಬೆನ್ನಿನವರಂತೆ ಬಾಗಿ ನಿಲ್ಲುವ ದೂರ್ವೆ ಕಾವೇರಿ ಕೊಯ್ದು ತೊಳೆದರೆ ಸಾಕು ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತಿತ್ತು. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ!". ಕತೆಯ ಹೆಸರು 'ಮಾಕಬ್ಬೆ'

ಬರೆಹದ ಮೊದಲಿಗೆ ಹೇಳಿದ್ದೆ; ಕೆಲವು ಸಣ್ಣ ಸಣ್ಣ ರೂಪಕಗಳು ಈ ಕಥಾಸಂಕಲನದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತವೆ ಅಂತ. ಜೊತೆಗೆ, ಕಥೆಗಾರರಿಗೆ ಇರಬೇಕಾದದ್ದು ಮೈಯೆಲ್ಲಾ ಕಣ್ಣು ಅನ್ನುವುದು ಈ ಕತೆಗಾರ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿ ಕಾಣಸಿಕ್ಕಿದ್ದು ಬಹಳ ಹೊಸದಾದ ರೂಪಕಗಳು. ಒಂದೆರಡು ನಿಮ್ಮ ಓದಿಗೆ..

"ಡಬ್ಬದಲ್ಲಿರುವ ಮದುವೆಯ ಬೂಂದಿಲಾಡಿಗೆ ಗಡ್ಡ ಮೀಸೆ ಆಗ ತಾನೇ ಮೂಡುತ್ತಿತ್ತು"

"ಭರಣಿಯಲ್ಲಿ ಹತ್ತತ್ತಿಟ್ಟ ಉಪ್ಪಿನಕಾಯಿಯ ಮುಖ"

"ಹಾಲೇ‌ ಕಾಣದ ಚಹದಂತೆ , ಹೆಚ್ಚು ಕಮ್ಮಿ ಛಾ ಕಣ್ಣು ಬಣ್ಣದ ಅರಲು ನೀರು"

"ಅಲ್ಲೇ ಮೂಲೆಯಲ್ಲಿದ್ದ ಪುಟ್ಟ ಗಿಡವೆರಡು ಮನೆಯೊಳಗೆ ತಂಪಗೆ ಹಬ್ಬಿದ್ದರೂ ಕಿಡಕಿಯತ್ತಲೇ ಮುಖಮಾಡಿ ಸೂರ್ಯನಿಗಾಗಿ ತಪಿಸುತ್ತಿದ್ದವು. ಬಹುಶಃ ಚಿಕ್ಕಿಯ ಅವಸ್ಥೆಯೂ ಈಗ ಹೀಗೆಯೇ ಇದ್ದಿರಬಹುದು"

ಒಮ್ಮೊಮ್ಮೆ ಗೋಡೆಗಳಾಚೆಯೂ, ಕೆಲವೊಮ್ಮೆ ಗೋಡೆಗಳ ನಡುವೆಯೂ ನಿಂತು ಸಂಬಂಧಗಳ ಕತೆಯನ್ನು ಹೇಳಿ ಕತೆಗಾರ್ತಿ ಬಯಲರಸಿ ಹೊರಟಿದ್ದಾರೆ. ಅರಸಿ ಹೊರಟ ಬಯಲು ಕೂಡಾ ಇನ್ನಷ್ಟು ಕತೆಗಳಾಗಿ ಅವರನ್ನೇ 'ಹರಸಿ' ಬರಲಿ ಅನ್ನುವ ಆಶಯಗಳೊಂದಿಗೆ ಹಾಗೂ ಸಂಕಲನಕ್ಕಾಗಿ ಕತೆಗಾರ್ತಿಗೆ ಧನ್ಯವಾದಗಳೊಂದಿಗೆ,

~'ಶ್ರೀ'
   ತಲಗೇರಿ



ಬುಧವಾರ, ಅಕ್ಟೋಬರ್ 5, 2022

ವರಾಹ ರೂಪಂ...

 ವರಾಹರೂಪಂ... 



ಬಹುಶಃ ಮನುಷ್ಯ ಹುಟ್ಟಿದಾಗಿನಿಂದ‌ ನಂಬಿಕೆಗಳೂ ಹುಟ್ಟಿರಬಹುದು. ನಂಬಿಕೆ ಅಂದ್ರೆ ಕೆಲವೊಮ್ಮೆ ಪ್ರಶ್ನಿಸುವಂಥದ್ದು, ಇನ್ನು ಕೆಲವೊಮ್ಮೆ ಪ್ರಶ್ನಿಸಲು ಹೆದರುವಂಥದ್ದು. ಆದರೆ, ಇನ್ನು ಕೆಲವು ಸಂಗತಿಗಳನ್ನು ಪ್ರಶ್ನಿಸುವುದಕ್ಕೂ ಮನುಷ್ಯನ ಹತ್ತಿರ ಸಾಧ್ಯವಾಗುವುದಿಲ್ಲ. ಮನುಷ್ಯ ಸಂಕುಲ‌ ಸೃಷ್ಟಿಯಾದ ನಂತರ 'ದೇವರು' ಅಂತ ಏನನ್ನೋ ಮೊದಲ ಬಾರಿಗೆ ಕಂಡುಕೊಂಡಾಗ, ಅದನ್ನು ಗುರುತಿಸಿದಾಗ ಮನುಷ್ಯನಿಗೆ ತನಗಿಂತ ಭಿನ್ನವಾದ ಅಸ್ತಿತ್ವವೊಂದರ ಅನುಭವ ಆಗಿರಲೇಬೇಕಲ್ಲ! ತನ್ನನ್ನು ಮೀರಿದ ಶಕ್ತಿಯೊಂದನ್ನು ಮನುಷ್ಯನೇ ಬೆಳೆಸಿಕೊಂಡ, ಅದಕ್ಕೆ ದೇವರು ಅಂತ ಕರೆದ. ತಾನು ಕಂಡುಕೊಂಡ ಆ ಶಕ್ತಿಯೇ ಇಡೀ ಜಗತ್ತಿನ ಸೃಷ್ಟಿಗೆ ಕಾರಣವೆಂದೂ ಹಾಗೂ ಅದರ ನಾದ ಮಾತ್ರದಿಂದಲೇ ಜಗತ್ತು ತನ್ನ ಲಯವನ್ನು ಕಂಡುಕೊಳ್ಳುತ್ತದೆಂದು ನಂಬಿದ. ಹಾಗೆ ಜಗತ್ತು ‌ನಡೆಯುವಾಗ, ಅದರೊಳಗೆ ನಡೆಯುವ ಎಲ್ಲ ಕಾರ್ಯಗಳನ್ನೂ ಆ ಶಕ್ತಿ ಈ ಜಗತ್ತಿನ ಸ್ಥಿತಿಯನ್ನು ಕಾಪಾಡುವುದಕ್ಕೆ ನಡೆಸುವ ಕೆಲಸವೆಂದೂ ಕರೆದ. ನಂಬುವುದಷ್ಟೇ ಅಲ್ಲದೇ, ತನ್ನ ನಂಬಿಕೆಗಳನ್ನೂ ಆರಾಧಿಸತೊಡಗಿದ. ದೇವರ ಜೊತೆ ಜೊತೆಗೆ ಗಣಗಳೂ ಹುಟ್ಟಿಕೊಂಡವು. ಎಲ್ಲವೂ ಒಂದು ಸಮತೋಲನದ ಪ್ರಕ್ರಿಯೆಯ ಭಾಗವೇ ಆದವು. ಜಗತ್ತಿನ ವಾಸ್ತುಶಿಲ್ಪಕ್ಕೆ ದೇವರು ಮತ್ತು ನಂಬಿಕೆಗಳು ಕೊಟ್ಟಷ್ಟು ಕೊಡುಗೆಯನ್ನು ಮತ್ತ್ಯಾವುದೂ ಕೊಟ್ಟಿಲ್ಲ.‌ ಬೇರೆ ಬೇರೆ ಕಲಾಪ್ರಕಾರಗಳು ಈ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಕ್ಕೂ ಈ ಎಲ್ಲಾ ನಂಬಿಕೆಗಳೇ ಮುಖ್ಯ ಕಾರಣ. ಇಂಥ ನಂಬಿಕೆಗಳೇ ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಹುಟ್ಟುಹಾಕಿದವು. ಈ ಸಂಸ್ಕೃತಿಗಳೇ ಮನುಷ್ಯನ ಬದುಕನ್ನು ಕಲಾತ್ಮಕವಾಗಿಸಿದವು. ನಂಬಿಕೆಗಳು ಬದುಕಿಗೆ ನೆಮ್ಮದಿ, ಧೈರ್ಯ, ಸಂಸ್ಕಾರ, ಆತ್ಮ ಸಂತೃಪ್ತಿಯನ್ನು ಕೊಟ್ಟವು. ನಂಬಿಕೆಗಳನ್ನು ಪ್ರಶ್ನಿಸುವುದನ್ನೂ ಇದೇ ಸಂಸ್ಕೃತಿ ಹೇಳಿಕೊಟ್ಟಿತು. ಪ್ರಶ್ನಿಸುವುದಕ್ಕೂ ಹೀಗಳೆಯುವುದಕ್ಕೂ ವ್ಯತ್ಯಾಸವಿದೆ. ಭಾರತ ಯಾವತ್ತಿಗೂ ಅನ್ವೇಷಕರ ನಾಡು. ಇದಮಿತ್ಥಂ ಅನ್ನುವ ನಂಬಿಕೆಯಿಂದ ಶುರುವಾಗಿ ಆ ನಂಬಿಕೆಗಳ ಪರಿಧಿಯನ್ನು ಮೀರಿ ಉತ್ತರ ಹುಡುಕುವ ಸಂಸ್ಕೃತಿ ಭಾರತದ್ದು. ಹೀಗೆ ಹುಡುಕುವ ಪ್ರಕ್ರಿಯೆಯಲ್ಲಿ ಒಂದಷ್ಟು ಆಚರಣೆಗಳು, ಪದ್ಧತಿಗಳೂ ರೂಪುಗೊಳ್ಳುತ್ತವೆ. ಅವೇ ಪರಂಪರೆಯಾಗಿ ಮುಂದುವರೆಯುತ್ತವೆ. "ಅರೇ, ಮನುಷ್ಯ ಹುಟ್ಟಿದ ಮೇಲಲ್ಲವಾ ಇವೆಲ್ಲಾ ಆಗಿದ್ದು?" ಅಂತ ಪ್ರಶ್ನಿಸಬಹುದಷ್ಟೇ, ಆದರೆ ಮನುಷ್ಯ ಪ್ರಪಂಚ ಹುಟ್ಟುವುದಕ್ಕೂ ಮೊದಲು ಏನಿತ್ತು? ಮನುಷ್ಯ ಪ್ರಪಂಚವೇ ಪೂರ್ತಿ ಕಣ್ಮರೆಯಾದ ಮೇಲೆ ಏನು ಉಳಿಯಬಹುದು? ಇವೆಲ್ಲಕ್ಕೂ ಏನೇನೋ ಊಹಿಸಿಕೊಂಡು ಉತ್ತರಿಸಬಹುದು ಬಿಟ್ಟರೆ, ನಿಖರವಾದ ಉತ್ತರ ಹೇಳುವುದಾದರೂ ಹೇಗೆ ಸಾಧ್ಯ? ಇಂದ್ರಿಯಗಳ ಅನುಭವದ ಪರಿಧಿಗೆ ನಿಲುಕದೇ ಇರುವುದನ್ನು ವ್ಯಂಗ್ಯ ಮಾಡುವ ಬದಲು, ಆ ಅನುಭವ ನಮಗಿನ್ನೂ ಆಗಿಲ್ಲ ಅಂತ ಒಪ್ಪಿಕೊಳ್ಳುವುದೇ ಹೆಚ್ಚು ಪ್ರಾಮಾಣಿಕತೆ. ತನಗಿಂತ ಹೆಚ್ಚು ಬಲಾಢ್ಯವಾದ ಯಾವುದೋ ಶಕ್ತಿ ತನ್ನನ್ನು ಕಾಯುತ್ತದೆ ಅನ್ನುವ ನಂಬಿಕೆಯಿಂದ ಮನುಷ್ಯ ಅಸಾಧ್ಯಗಳನ್ನು ಸಾಧ್ಯವಾಗಿಸಬಲ್ಲ‌. ಅದು ನಂಬಿಕೆಗೆ ಇರಬಹುದಾದ ಹರವು. 


ಜಗತ್ತಿನೆಲ್ಲೆಡೆಯೂ ಮನುಷ್ಯರ ಕತೆಗಳು ಒಂದೇ ಥರವೇ. ಆದರೆ, ಯಾವಾಗ ಆ ನೆಲದ, ಆ ಪರಿಸರದ ಭಿನ್ನತೆಗಳು ಕತೆಯಾಗುತ್ತವೆಯೋ ಆಗ ಅವು ಹೊಸ ಆಯಾಮವನ್ನು ಕತೆಗೆ ಒದಗಿಸುತ್ತವೆ. ಹಾಗೆ ಹುಟ್ಟಿಕೊಂಡ ಕತೆಗಳು ಒಟ್ಟೊಟ್ಟಿಗೆ ಜಾಗತಿಕವೂ, ಪ್ರಾದೇಶಿಕವೂ ಆಗುತ್ತವೆ‌. ಒಂದು ಕತೆ ಏಕತಾನತೆಯ ಹಾದಿಯಲ್ಲಿ ಸಾಗುವುದನ್ನು ತಪ್ಪಿಸುವುದೂ ಇದೇ ಪ್ರಾದೇಶಿಕತೆ. ಒಂದೇ ತೆರನಾದ ಕತೆಗಳು ಸಾಹಿತ್ಯದಲ್ಲಿ ಕಾಣುತ್ತಿವೆ, ಸಾಹಿತ್ಯ ನಿಂತ‌ ನೀರಾಗಿದೆ, ಅದೇ ಊರು ಅದೇ ಕೇರಿ, ಅದೇ ನಗರ ಅದೇ ಉದ್ಯೋಗ, ಇವಿಷ್ಟರ ಸುತ್ತಲೇ ಕತೆಗಳು ಮತ್ತು ಕಥಾ ಪಾತ್ರಗಳು ಸುತ್ತು ಹೊಡೆಯುತ್ತಿವೆ ಅನ್ನುವ ಆರೋಪಗಳ ಮಧ್ಯ, ನಾವು ನಿಜವಾಗಿಯೂ ಈ ನೆಲದ ಕತೆಗಳನ್ನು ಪೂರ್ತಿಯಾಗಿ ಹೇಳಿದೆವಾ ಅಂತ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಬಹುಶಃ ಇಲ್ಲ‌ ಅಂತಲೇ ಅನ್ನಿಸದಿದ್ದರೆ ನಾವಿನ್ನೂ ಕತೆಗಳನ್ನು ಗುರುತಿಸಬಲ್ಲವರಾಗಿಲ್ಲವೆಂದೇ ಅರ್ಥ. ಸಮೃದ್ಧ ಜೀವ ಸಂಕುಲವಿದ್ದಲ್ಲಿ ಕತೆಗಳಿಗೆ ಬರವೇ! ಪ್ರಕೃತಿಯೊಂದಿಗೆ ಬದುಕು ಆರಂಭಿಸಿದ ಮನುಷ್ಯ ತಾನು ಮಾಡಿಕೊಂಡ ವ್ಯವಸ್ಥೆಗಳಲ್ಲಿ ಮನುಷ್ಯನೊಂದಿಗೇ ಬಿಕ್ಕಟ್ಟು ಸೃಷ್ಟಿಸಿಕೊಂಡ. ತಾನು ಶಕ್ತಿಶಾಲಿ ಅಂತ‌ ನಿರೂಪಿಸುವ ಭರದಲ್ಲಿ ಪ್ರಕೃತಿಗೂ ಎದುರಾಗಿ ನಿಂತ. ಆದರೆ, ದಾಹವಾದಾಗ ಕುಡಿಯಲು ಬೇಕಾಗುವ ನೀರು, ಹಸಿವಾದಾಗ ಬೇಕಾಗುವ ಆಹಾರವನ್ನು ಕೊಡುವ ಮಣ್ಣು, ಇವೆರಡಕ್ಕಿಂತಲೂ ಪ್ರತಿ ಕ್ಷಣ ಉಸಿರಾಡಲು ಅಗತ್ಯವಿರುವ ಗಾಳಿ ಇವುಗಳಲ್ಲಿ ಯಾವುದು ಕಲುಷಿತವಾದರೂ ಅದರಿಂದ ತನಗೇ ತೊಂದರೆ ಅನ್ನುವುದು ಮಾತ್ರ 'ತಾನೇ ಬುದ್ಧಿವಂತ' ಅಂದುಕೊಂಡ ಪ್ರಾಣಿಗೆ ತಿಳಿಯದೇ ಇರುವುದು ವಿಪರ್ಯಾಸ ಹಾಗೂ ಅದೇ ಸೋಜಿಗ. ಕೃತಕವಾಗಿ ಆಮ್ಲಜನಕ ತಯಾರಿಸಿ ಮಾರಾಟ ಮಾಡಿ ಅದೆಷ್ಟು ಹಣ ಮಾಡಬಹುದು ಅನ್ನುವ ಯೋಚನೆಯೇ ಹೆಚ್ಚು ಪ್ರಯೋಜನಕಾರಿ ಅಂತ ಅನಿಸದೇ ಹೋದರೆ ಅವ ಇಂದಿನ ಮನುಷ್ಯನೇ ಅಲ್ಲ;ಅವನಿಗೆ 'ಬದುಕುವ‌ ಕಲೆ'ಯೇ ಗೊತ್ತಿಲ್ಲ! ಆದರೆ, ನಮ್ಮ ಪೂರ್ವಿಕರಿಗೆ ಮನುಷ್ಯನ ಅಗತ್ಯತೆಗಳ ಅರಿವಿತ್ತು. ಹಾಗಾಗಿಯೇ ಅದೆಷ್ಟೋ ವಿಷಯಗಳನ್ನು ದೇವರ ಹೆಸರಿನಲ್ಲಿ ಕಾಪಾಡತೊಡಗಿದರು. ಉದಾಹರಣೆಗೆ 'ದೇವರ ಕಾಡು'. ಈ ಥರದ ಕಾಡುಗಳು ಇರುವುದರ ಮಹತ್ವದ ಅರಿವಿರದೇ ಹೋದರೆ, ಅದು ಮೂಢನಂಬಿಕೆಯಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಅಂಥ ಕಾಡುಗಳೇ ಇಂದಿಗೂ ನಮ್ಮನ್ನೆಲ್ಲಾ ಪೊರೆಯುತ್ತಿರುವುದು. ನದಿ ಕೇವಲ ನಾಗರಿಕತೆಗಳ ತೊಟ್ಟಿಲು ಅಂತ ಓದಿ ಬಿಟ್ಟುಬಿಡದೇ, ದೇವರ ಸ್ಥಾನದಲ್ಲಿಟ್ಟು ಪೂಜಿಸುವ ನಾಡು ನಮ್ಮದು. ಮನುಷ್ಯನ ಬದುಕು ಸುಲಲಿತವಾಗಿ ನಡೆಯುವುದಕ್ಕೆ‌ ಅನುವು ಮಾಡಿಕೊಡುವ ಪ್ರಕೃತಿಯ ಎಲ್ಲ ಸಂಗತಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವ ಹಾಗೂ ಆ ಸ್ಮರಣೆಗಾಗಿ ಒಂದೊಂದು ಆಚರಣೆಯನ್ನು ಪೋಷಿಸಿಕೊಂಡು, ತಲೆಮಾರುಗಳಿಂದ ನಡೆಸಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಕತೆಗಳು ಖಾಲಿಯಾದಾವೇ! 


ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣ ಕಾಂತಾರ ಸಿನೆಮಾ. ಈ ಬರವಣಿಗೆಯ ಯಾವ ಅಗತ್ಯವೂ ಇಲ್ಲದಷ್ಟು ಸಿನೆಮಾ ಈಗಾಗಲೇ ಜನಸಮೂಹವನ್ನು ತಲುಪಿಯಾಗಿದೆ. ಈ ಬರವಣಿಗೆಯಿಂದ ಆ ಸಿನೆಮಾಕ್ಕೆ ಯಾವ ಲಾಭವೂ ಇಲ್ಲ. ಆದರೆ, ಸಿನೆಮಾ ನೋಡಿ ಅದರಿಂದ ಉಂಟಾದ ರಸಾನುಭೂತಿಯನ್ನು ಪದಕ್ಕಿಳಿಸುವ ಪ್ರಯತ್ನ ಮಾಡದೇ ಹೋದರೆ, ಬಹುಶಃ ಆ ಸಿನೆಮಾದ ಗುಂಗಿನಿಂದ ಹೊರಬರುವುದು ತುಸು ಕಷ್ಟವೇ ಆದೀತೇನೋ.. "ವರಾಹ ರೂಪಂ ದೈವ ವರಿಷ್ಠಮ್" ಅನ್ನುವ ಆ ಧ್ವನಿ ಈಗಲೂ ಕಿವಿಯಲ್ಲಿ, ಮನಸ್ಸಿನಲ್ಲಿ ಅನುರಣಿಸುತ್ತಲೇ ಇದೆ. ಸಿನೆಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ವಾ ಅಂತ‌ ಪ್ರಶ್ನಿಸಿಕೊಂಡರೆ ಬೇಕಾದಷ್ಟು ಸಿಗುತ್ತವೆ. ಕೆಲವು ಪಾತ್ರಗಳು ಮತ್ತು ಆ ಪಾತ್ರಗಳಿಗೆ ಇರಬಹುದಾದ ಸಾಧ್ಯತೆಗಳು ಅಥವಾ ಸಂದರ್ಭದ ತೀವ್ರತೆ ಅಷ್ಟು ಸಮರ್ಥವಾಗಿ ಕಟ್ಟಲ್ಪಟ್ಟಿಲ್ಲ. ಉದಾಹರಣೆಗೆ ಲೀಲಾಳ ತುಮುಲಗಳು. ಆದರೂ, ಯಾಕೆ ಸಿನೆಮಾ ಅಷ್ಟು ಇಷ್ಟವಾಯಿತು ಅಂತ‌ ಕೇಳಿದರೆ ಅದಕ್ಕೆ ಬಹಳಷ್ಟು ಕಾರಣಗಳು ದೊರೆತವು. ಸುಮ್ಮನೆ ನೆಪಕ್ಕಾಗಿ ಯಾವುದನ್ನೂ ಇಲ್ಲಿ ತುರುಕಿಲ್ಲ. ಈ ಥರದ ಸಿನೆಮಾಗಳಾಗಲೀ, ಸಿನೆಮಾದ ಅಂತ್ಯಗಳಾಗಲೀ ಬಂದೇ ಇಲ್ವಾ ಅಂತ ಕೇಳಿದರೆ, ಬಂದಿವೆ; ಸುಖಾಂತ್ಯದ ಭಾಗವಾಗಿ ಬಂದವುಗಳೇ ಹೆಚ್ಚು. ಆದರೆ, ಇಲ್ಲಿ ಅದು ಇಡೀ ಕತೆಯ ಭಾಗವಾಗಿ, ಇಡೀ ಕತೆಯೇ ಅಂಥದ್ದೊಂದು ಹಂದರದಲ್ಲಿ ಸಹಜವಾಗಿ ಬಂದಿದೆ‌. ಜೊತೆಗೆ, ಅದರ ತೀವ್ರತೆಯೂ ಪ್ರೇಕ್ಷಕರಲ್ಲಿ ಒಂದು ತೆರನಾದ ಭಾವೋತ್ಕರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲಿನವರೇ ಆ ಕತೆಯನ್ನು ಹೇಳಿದಾಗ ಅದಕ್ಕೊಂದು ಸ್ವಂತಿಕೆ ಸಿಗುತ್ತದೆ. ಅದರಲ್ಲೂ ಇದು ಸಂಪೂರ್ಣವಾಗಿ ಜನಪದದ ಹಿನ್ನೆಲೆಯಲ್ಲಿ ಮೂಡಿಬಂದಿದ್ದರಿಂದ ಜನರಿಗೆ ಹತ್ತಿರವಾಗುವ ಗುಣ ಹೆಚ್ಚು. ಜನಪದ ತನ್ನ ಸೊಗಡು ಹಾಗೂ ನೈಜತೆಯಿಂದಾಗಿ ಯಾವತ್ತೂ ಜನಮಾನಸದಲ್ಲಿ ಔನ್ನತ್ಯವನ್ನು ತಲುಪುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಮಾಯಣ. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವುದಕ್ಕೂ  ಮೊದಲಿಗೆ ರಾಮಾಯಣವನ್ನು ನಾರದರಿಂದ ಕೇಳಿದ್ದು ಜ‌ನಪದದ ಭಾಗವಾಗಿಯೇ. ಜನಪದದಲ್ಲಿ ಮುಗ್ಧತೆ, ಭಕ್ತಿ, ಧರ್ಮಪ್ರಜ್ಞೆ, ನಂಬಿಕೆ, ಗೌರವ, ಸಂಭ್ರಮ, ಸಂಸ್ಕಾರ, ದರ್ಶನ, ಮೌಲ್ಯ, ಪರಂಪರೆ, ಸಂಪ್ರದಾಯಗಳಿವೆ. ಹಾಗಾಗಿ ಜನಪದ ಗಟ್ಟಿಯಾಗಿ ಬೇರೂರುತ್ತದೆ. ಮನಸ್ಸುಗಳನ್ನು ಕಟ್ಟುತ್ತದೆ. 


ದಕ್ಷಿಣ ಕನ್ನಡದ ಕುರಿತು ಹೇಳುವಾಗ ಹೇಳಲಾಗುವ ಒಂದು ಮಾತನ್ನು ಗಮನಿಸಿದ್ದೇನೆ; 'ಅವಿಭಜಿತ ದಕ್ಷಿಣ ಕನ್ನಡ'. ಅಲ್ಲಿನ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಅವೆಲ್ಲಕ್ಕೂ ಮೂಲವಾಗಿರುವ ದೈವಗಳು ಇಡೀ ದಕ್ಷಿಣ ಕನ್ನಡವನ್ನು ಒಂದಾಗಿ ಹಿಡಿದಿಟ್ಟಿವೆ ಅಂದರೆ ತಪ್ಪಾಗಲಾರದೇನೋ. ಹಾಗೆಯೇ, ದಕ್ಷಿಣ ಕನ್ನಡಕ್ಕೆ ಒಂದು ನಿಗೂಢತೆಯಿದೆ. ಆ ನಿಗೂಢತೆಯೇ ಅಲ್ಲಿನ ಆಚರಣೆಗಳಿಗೂ ಅಂಥದ್ದೊಂದು ಗುಣವನ್ನು ತಂದುಕೊಟ್ಟಿದೆ. ಅಲ್ಲಿನ ನಂಬಿಕೆಗಳೆಲ್ಲಾ ಕತೆ ಅಂದುಕೊಂಡವರಿಗೆ ಕತೆಯೂ ಹೌದು, ಸತ್ಯ ಅಂದುಕೊಂಡವರಿಗೆ ಸತ್ಯವೂ ಹೌದು. ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳಿಗೆ ಈ ನಾಡು ಸಾಕ್ಷಿಯಾಗಿದೆ. ನನ್ನನ್ನು ಯಾವುದೋ ಶಕ್ತಿ ನಿರಂತರವಾಗಿ ಕಾಯುತ್ತಿದೆ ಹಾಗೂ ಅದು ನಾನು ಅಧರ್ಮದ ದಾರಿ ಹಿಡಿಯದಂತೆ ಸದಾ ಎಚ್ಚರಿಸುತ್ತಲೂ ಇರುತ್ತದೆ ಅನ್ನುವ ಭಾವವೇ ಬದುಕಿಗೆ ಅದೆಷ್ಟು ನೆಮ್ಮದಿ ತರಬಲ್ಲದು. ಅದಕ್ಕಾಗಿಯೇ ಇಲ್ಲಿನ ದೈವಗಳು ದೇವಸಮಾನವಾಗಿ ಪೂಜಿಸಲ್ಪಡುತ್ತವೆ. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವುಗಳು ಇವು ಅನ್ನುವ ನಂಬಿಕೆಯೂ ಇದರ ಭಾಗವೇ. ಇಲ್ಲಿ ಮನುಷ್ಯರೂ ದೈವದ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಭಾರತ ಧರ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. 


ಈ ಚಿತ್ರ ಘೋಷಣೆಯಾದ ದಿನದಿಂದ ಕಾದು, ಸುಮಾರು ನಾಲ್ಕು ವರ್ಷಗಳ ನಂತರ ಚಿತ್ರಮಂದಿರಕ್ಕೆ ಹೋಗಿ, ಇಂಥದ್ದೊಂದು ಸಿನೆಮಾ ನೋಡುವ ಸಂಭ್ರಮವೇ ಬೇರೆ. ಸಿನೆಮಾ ನೋಡಿ ಆದ ಮೇಲೂ ಅದರ ಕುರಿತಾಗಿ ನಾನು ಬರೆಯಬೇಕು ಅಂದುಕೊಂಡಿದ್ದೆಲ್ಲವೂ ಸಪ್ಪೆಯೆನಿಸಿ, ಕಾದು ಕಾದು ಬರೆಯುವ, ಪದೇ ಪದೇ ಸಿನೆಮಾವನ್ನು ಕಣ್ಣೆದುರಿಗೆ ತಂದುಕೊಳ್ಳುವ ಈ ಅನುಭವ ಇದೆಯಲ್ಲಾ ಅದಕ್ಕಾಗಿ ಕಾಂತಾರ ಹತ್ತಿರವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಅನಿರ್ವಚನೀಯ ಅನುಭೂತಿಯನ್ನು ಹುಟ್ಟುಹಾಕುವುದು ಸುಲಭದ ಸಂಗತಿಯಲ್ಲ.  ಕಾಂತಾರ ಒಂದು ಪರಿಪೂರ್ಣ ಕಲಾಕೃತಿಯಲ್ಲ. ಆದರೆ, ಚೆಂದದ ಹಾಗೂ ಸ್ವಂತಿಕೆಯ ಕಲಾಕೃತಿ. ತನ್ನ ಅಪೂರ್ಣತೆಯನ್ನು ತಾನೇ ಮೀರುವ ಸಾಧ್ಯತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡ ಕಲಾಕೃತಿ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿಯೇ ಹೇಳಿದ ಸಿನೆಮಾ. ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳ ಭಿನ್ನತೆಗಳು ಹಾಗೂ ಪರಿ'ಶುದ್ಧ'ವಾದಾಗ ಉಂಟಾಗುವ ಸಮಾನತೆ ಇತ್ಯಾದಿಗಳನ್ನು ವಾಚ್ಯವಾಗಿಸದೇ ಹೇಳಿದೆ. ಸಿಂಗಾರ ಸಿರಿಯೇ ಹಾಡಲ್ಲಿ Manasi Sudhir  ಅವ್ರು ಶಿವ ಮತ್ತು ಲೀಲಾಳನ್ನು ನೋಡಿ ಒಳಗೊಳಗೇ ಖುಷಿಪಡುವ ದೃಶ್ಯ ಇದೆ. ಅದು ಬಹುಶಃ ಎಲ್ಲ ಅಮ್ಮಂದಿರ ಅಂತಃಕರಣದ ಪ್ರತೀಕ ಅಂತಲೇ ಅನಿಸಿತು. ಒಂದು ಊರಿನ, ಒಂದು ಭಾಗದ ಸಾಮಾಜಿಕ ಜೀವನವನ್ನು ಯಾವ ಪೂರ್ವಗ್ರಹದಲ್ಲಾಗಲೀ ಅಥವಾ ಸಿದ್ಧಾಂತದ ಪರಿಧಿಯಲ್ಲಾಗಲೀ ತೆರೆದಿಟ್ಟಿಲ್ಲ. 'ಆ‌ ಕಾಲಘಟ್ಟದಲ್ಲಿ ಹೀಗಿತ್ತು ಮತ್ತು ಇದು ಹೀಗಿದೆ' ಅನ್ನುವುದಷ್ಟೇ ಇಲ್ಲಿನ ಪ್ರಸ್ತುತಿ. ಚಿತ್ರದ ಕೊನೆಯಲ್ಲಿ ಇರುವ ಆಶಯವೂ ಅಷ್ಟೇ ಹೃದ್ಯವಾದದ್ದು. ಧರ್ಮ ಮತ್ತು ದೈವ ಇರುವುದು ಇದೇ ಕಾರಣಕ್ಕಾಗಿ ಹಾಗೂ ಇದೇ ಅವುಗಳ ಕೆಲಸ ಅನ್ನುವುದನ್ನು ಅದೆಷ್ಟು ಕಾವ್ಯಾತ್ಮಕವಾಗಿ ಹೇಳಲಾಗಿದೆ ಅಂದರೆ, ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗುತ್ತದೆ ಹಾಗೂ ಮನಸ್ಸು ಆಹ್ಲಾದಕ್ಕೊಳಗಾಗುತ್ತದೆ. ಕತೆ, ಕವಿತೆ, ಸಿನೆಮಾ ಯಾವುದರಲ್ಲೇ ಆದರೂ, ಅಷ್ಟೂ ಹೊತ್ತಿನ ಸಂಗತಿಗಳನ್ನು ಒಗ್ಗೂಡಿಸಿ, ಅದಕ್ಕೊಂದು ಸೂಕ್ತವಾದ ಅರ್ಥ ಕೊಡುವುದು ಅಂತ್ಯದ ಕೆಲಸ. ಹಾಗಾಗಿಯೇ ಅಂತ್ಯ‌, ಇಡೀ ಸಿನೆಮಾವನ್ನು ಕಟ್ಟಬಹುದು ಅಥವಾ ಕೆಡವಬಹುದು. ಕಾಂತಾರದಲ್ಲಿ ಅಂತ್ಯ ಇಡೀ ಸಿನೆಮಾಕ್ಕೆ ಬೇರೆ ನೆಲೆಯನ್ನೇ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬಂದ ಸಿನಿಮಾಗಳು ಧರ್ಮ, ಆಚರಣೆ, ಸಂಪ್ರದಾಯಗಳ ಕುರಿತಾಗಿ ಇರಬೇಕಾದ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದೇ ಹೆಚ್ಚು. ಆದರೆ, ಈ ಸಿನೆಮಾದಲ್ಲಿ ನಮ್ಮ ನೆಲದ ಕತೆಯನ್ನು ಒಂದು ಆತ್ಮೀಯ ಕತೆಯಾಗಿಯೇ ಹೇಳುವ ಹಾಗೂ ಅದನ್ನು ಅಷ್ಟೇ ಗೌರವದಿಂದ, ಜತನದಿಂದ ಮುಂದಿಡುವ ಪ್ರಯತ್ನಕ್ಕೆ ಮನಸ್ಸು ತುಂಬಿಕೊಳ್ಳದೇ, ಪುಳಕಗೊಳ್ಳದೇ ಇರುವುದಾದರೂ ಹೇಗೆ ಸಾಧ್ಯ! 


"ವರಾಹ ರೂಪಂ ದೈವ ವರಿಷ್ಠಮ್..."

ಶನಿವಾರ, ಜುಲೈ 23, 2022

'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...

 



'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... 

ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ‌ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ‌ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ,‌ ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. 

ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ‌‌ ಕೇಳಿದ್ದೇನಲ್ಲಾ ಅಂತ‌ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ‌ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ‌ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ‌ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ‌ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. 

ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ‌ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ,‌ ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ‌ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ‌ ಮೇಲೆ‌ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ‌ ನೋಡಿ ಬಂದೆ ಒಮ್ಮೆ! 

ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ‌ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ‌ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ‌ ತಂದುಕೊಡುವ ಹೆಣ್ಣಿನ ಸ್ಥಿತಿ. 

ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು‌ ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.

ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ‌ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" 

- 'ಶ್ರೀ'
   ತಲಗೇರಿ

ಭಾನುವಾರ, ಜುಲೈ 17, 2022

'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ'


 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ಇದೆಂಥದು? ಈ ಥರದ್ದೊಂದು ಪುಸ್ತಕದ ಕುರಿತಾಗಿ ಇವ ಯಾಕಾದ್ರೂ ಹೇಳ್ಬೇಕು ಅಂತ ಹಲವರಿಗೆ ಅನ್ನಿಸಬಹುದು,‌ ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಇನ್ನು ಕೆಲವರಿಗೆ 'ಇವರೆಲ್ಲಾ ಇಷ್ಟೇ' ಅಂತಲೂ ಅಥವಾ ಇನ್ನೂ ಏನೇನೋ ಅನ್ನಿಸಬಹುದು. ಆದರೂ, ಬಹಳಷ್ಟು ದಿನಗಳ ನಂತರ ಒಂದು ಗಹನವಾದ ಹಾಗೂ ಗಾಢವಾದ ಕ್ಷಣಗಳನ್ನು ಒಂದು ಪುಸ್ತಕ ಓದುವುದರಿಂದ ಅನುಭವಿಸಿದ್ದಕ್ಕಾದರೂ ಈ ಪುಸ್ತಕದ ಬಗ್ಗೆ ಬರೆಯಲೇಬೇಕು. ನಿಜ ಹೇಳಬೇಕೆಂದರೆ, ಈ ಪುಸ್ತಕದ ಅಡಿಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿಂದ ಈ ಪುಸ್ತಕದೊಂದಿಗಿನ ಪ್ರಯಾಣ ಶುರುವಾಗಿದ್ದು. ಆಮೇಲೆ ಪುಸ್ತಕ ಶುರುಮಾಡಿದ‌ ಮೇಲೆ ತಿಳಿಯಿತು ನಾನಂದುಕೊಂಡಿದ್ದು ಬೇರೆ ಅಂತ. ಆದರೆ, ಪುಸ್ತಕದ ಮೊದಲ‌ ಅಧ್ಯಾಯದಲ್ಲೇ ಒಂದು ವಿನಮ್ರ ವಿಜ್ಞಾಪನೆಯಿದೆ. ಆ ವಿಜ್ಞಾಪನೆಯೇ ಈ ಪುಸ್ತಕಕ್ಕೆ ಒಂದು ಗಟ್ಟಿ ದನಿಯನ್ನು ಕೊಟ್ಟಿದೆ. ಕೆಲವೊಮ್ಮೆ ನಾವು ಏನನ್ನು ಓದಲು ಬಯಸುತ್ತೇವೆಯೋ ಅದನ್ನು ಯಾರೂ ಬರೆಯದಿದ್ದಾಗ ನಾವೇ ಬರೆಯಲು ಮುಂದಾಗಬೇಕಾಗುತ್ತದೆ. ಇದು ಅಂಥದ್ದೇ ಪ್ರಯತ್ನ ಅಂತ ಲೇಖಕರು ಹೇಳಿದ್ದಾರೆ. ನನಗೆ ಈ ಸಂದರ್ಭದಲ್ಲಿ ಚಿತ್ರನಟ, ನಿರ್ದೇಶಕ‌ ರಕ್ಷಿತ್ ಶೆಟ್ಟಿಯವರು ಒಂದು ಸಂದರ್ಶನದಲ್ಲಿ ಹೇಳಿದ ಒಂದು ಮಾತು ಕೂಡಾ ನೆನಪಿಗೆ ಬಂತು; "ನನ್ ಸಿನೆಮಾ ಯಾರೂ ಮಾಡೋದಿಲ್ಲ, ನಾನೇ ಮಾಡ್ಕೋಬೇಕು"! ನಾನು ಯಾವ ಥರದ ಕತೆಯನ್ನು, ಸಂಗತಿಯನ್ನು ಕೇಳಲು ಬಯಸುತ್ತೇನೋ ಆ ಥರದ್ದನ್ನು ಯಾರೂ ಹೇಳದಿದ್ದಾಗ, ನಾನೇ ಆ ಪ್ರಾರಂಭಕ್ಕೆ ಒಂದು ಆರಂಭ ಕೊಡಬೇಕು. ಇದು ಕೇವಲ ಯಾವುದೋ ಒಂದು ಸಿದ್ಧಾಂತದ ಪ್ರಚಾರಕ್ಕಾಗಿಯೋ, ಇದೊಂದೇ ಶ್ರೇಷ್ಠ ಅನ್ನುವುದನ್ನು ಸಾರುವುದಕ್ಕಾಗಿಯೋ ಬರೆದ ಪುಸ್ತಕವಿರಬಹುದು ಅಂತ ಅಂದುಕೊಂಡಲ್ಲಿ ಅದು ತೀರಾ ಬಾಲಿಶವಾದೀತು. ಭಾರತದ ಹಲವು ದರ್ಶನಗಳನ್ನು ಒಟ್ಟಿಗೆ ಇಟ್ಟು, ಅವುಗಳನ್ನು ಸರಳವಾಗಿ ನೋಡುವ ಹಾಗೂ ಅವುಗಳ ಸಾಮ್ಯತೆಗಳನ್ನು ಗುರುತಿಸುವುದರ ಜೊತೆಗೆ ಅದ್ವೈತ ಎಷ್ಟರ ಮಟ್ಟಿಗೆ ಹೆಚ್ಚು ಪ್ರಸ್ತುತವಾಗಬಲ್ಲದು ಅನ್ನುವುದನ್ನೂ ಹೇಳುವ ಸಂಕಲ್ಪದ ಭಾಗವೇ ಶ್ರೀ ಅಕ್ಷರ ಕೆ ವಿ ಅವರ 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ನಾವು ಅದೆಷ್ಟೇ ಜಾಗಗಳಿಗೆ ಹೋಗಲಿ, ಅದೆಷ್ಟೇ ದೇಶಗಳನ್ನು ಸುತ್ತಲಿ, ಕೊನೆಗೆ ಎಲ್ಲವನ್ನೂ ಸಮೀಕರಿಸಿಕೊಳ್ಳುವುದು ನಮ್ಮೂರಿನ ಯಾವುದೋ ಒಂದು ಜಾಗಕ್ಕೆ; ಇದು ಅದರ ಹಾಗಿಲ್ಲ, ಅದಕ್ಕಿಂತ‌ ಚೂರು‌‌ ಜಾಸ್ತಿ ಅಥವಾ ಕಡಿಮೆ ಅಂತಲೋ, ಎಷ್ಟೇ ವ್ಯಕ್ತಿಗಳನ್ನು ಭೇಟಿ ಮಾಡಲಿ; ಇವ ಅವರ ಥರವೇ ಅಲ್ವಾ ಅಂತಲೋ, ಇನ್ನೂ ಏನೇನೋ ಹೀಗೆ. ಅಂದರೆ, 'ಮನುಷ್ಯ ಎಲ್ಲಿ ಹೋದರೂ ತನ್ನ ಪರಿಚಿತ ನೆನಪುಗಳೊಂದಿಗೆ ಮಾತ್ರವೇ ಎಲ್ಲವನ್ನೂ ನೋಡುತ್ತ ಹೋಗುತ್ತಾನೆ'. ಸ್ವತಂತ್ರವಾದಂಥ ಚಿತ್ರಣವೊಂದು ತಾನಾಗೇ ಮೂಡುವುದಕ್ಕೆ ಬಹುತೇಕವಾಗಿ ಕಷ್ಟಸಾಧ್ಯವೇ ಆಗಿರಬಹುದು.


ಇನ್ನು, ಬಹುತೇಕರು ಆಧುನಿಕತೆಯೆಂದರೆ ಸಂಪ್ರದಾಯಕ್ಕೆ ವಿರುದ್ಧ ಅಂತಲೇ ಅಥವಾ ಸಂಪ್ರದಾಯದ ವಿರುದ್ಧವಾಗಿದ್ದರೆ ಮಾತ್ರ ತಾವು ಆಧುನಿಕರು ಅಂತ ಭಾವಿಸಿದ್ದಾರೆ. ಆಧುನಿಕತೆಯೆಂದರೆ ನಂಬಿಕೆಗಳ ನವೀಕರಣ; ಅದು ಸಂಪ್ರದಾಯದಿಂದ ವಿಮುಖವಾಗಬೇಕಿಲ್ಲ. ಒಂದು ಸಂಕುಚಿತ ಅರ್ಥದಲ್ಲಿ ನೋಡಿದರೆ ಬಹುಶಃ ಎರಡೂ ಪರಸ್ಪರ ತಾಳೆಯಾಗದ ಪದಗಳಾಗಿ ಕಂಡರೆ ಅದು ಅವರವರ ಮಿತಿ ಅಷ್ಟೇ. ಯಾಕೆಂದರೆ ಸತ್ಯಕ್ಕೆ ಕೇವಲ ಎರಡು ಮುಖಗಳೇ ಇರಬೇಕು ಅಂತೇನೂ ಇಲ್ಲವಲ್ಲ ! ಈ ಎರಡು ಮುಖಗಳ  ನಂಬಿಕೆಯಾಚೆಗಿನ ಇನ್ನೊಂದು ಸಾಧ್ಯತೆಯೂ ಇರಬಹುದು. ಅಂಥ ಒಂದು ಸಾಧ್ಯತೆಯನ್ನು ಪರಿಕಲ್ಪನೆಯಲ್ಲಿಯೂ ಸಹ ನಿರೀಕ್ಷಿಸಿರದೇ ಇದ್ದವರಿಗೆ ಮಾತ್ರ ಅದು ಕೇವಲ ಎರಡು ರೂಪಗಳಿಗೆ ಸೀಮಿತ. ಜೊತೆಗೆ, ನಮ್ಮಲ್ಲೊಂದು ಪರಿಪಾಠವಿದೆ. ಆಧುನಿಕವೆಂಬಂತೆ ತೋರಿಸಿಕೊಳ್ಳಬೇಕೆಂದರೆ ಸಂಪ್ರದಾಯವನ್ನು ಹೀಯಾಳಿಸಬೇಕು. ಅದನ್ನು ಕಂಡಕಂಡ ಪದಗಳಲ್ಲಿ ಲೇವಡಿ ಮಾಡಬೇಕು. ಸಂಪ್ರದಾಯವಾದಿಗಳೆಂದವರನ್ನು‌ 'ಹೋ' ಎಂಬ ಕಿರುಚಾಟದ ನಡುವೆ ಅವಮಾನಿಸಬೇಕು. ವೈಚಾರಿಕತೆಯ ಗಂಧವೂ ಇರದ ಇಂಥ ಮನಸುಗಳು ಹೆಚ್ಚಾಗುತ್ತಿರುವುದು ಹಾಗೂ ಅದನ್ನು ಪೋಷಿಸುತ್ತಿರುವುದು‌ ಈ ಕಾಲದ ದುರಂತಗಳಲ್ಲಿ ಒಂದು. 


ಇತ್ತೀಚೆಗೆ ವಿಶ್ವವಿದ್ಯಾಲಯಗಳನ್ನು ದೊಡ್ಡ ದೊಡ್ಡ ಕಂಪೌಂಡುಗಳು ಸುತ್ತುವರೆದಿರುತ್ತಾವಲ್ಲಾ, ಅದನ್ನಿಲ್ಲಿ ಒಂದು ಆಳವಾದ ವ್ಯಂಗ್ಯದೊಂದಿಗೆ ಹೇಳಲಾಗಿದೆ. ವಿಶ್ವವಿದ್ಯಾಲಯಗಳು ಹಾಕುವ ಎತ್ತರದ ಬೇಲಿಗಳು ಕೇವಲ ಭೌತಿಕ ಬೇಲಿಯಲ್ಲ, ಅದು ಅಲ್ಲಿ ಬೋಧಿಸುವ ಸಂಗತಿಗಳ ಕುರಿತಾಗಿಯೂ ಇರುವ ಬೇಲಿ. ಅದೆಷ್ಟು ವಿಶ್ವವಿದ್ಯಾಲಯಗಳು ಕೇವಲ ತಮ್ಮದೇ ರಾಜಕೀಯ ಸಿದ್ಧಾಂತಗಳ‌ ಬೇಲಿ ಹಾಕಿಕೊಂಡು ಕುಳಿತಿಲ್ಲ ಹೇಳಿ! ವಿಶ್ವದ ಎಲ್ಲ ಕಡೆಯಿಂದಲೂ ಜ್ಞಾನದ ಬೆಳಕು ಹರಿದುಬರಲಿ ಅನ್ನುವುದು ಭಾರತೀಯತೆಯ ಪ್ರಾರ್ಥನೆ. ಆದರೆ, ಈಗ ಕೇವಲ ಕೆಲವರು ಆರಿಸಿಕೊಟ್ಟ ಆ‌ ಕೆಲವು ವಿಷಯಗಳ ಕುರಿತಾಗಿ ಮಾತನಾಡಿದರಷ್ಟೇ ನಮ್ಮನ್ನು ವೈಚಾರಿಕ ವ್ಯಕ್ತಿಯೆಂದು ಗುರುತಿಸಲಾಗುತ್ತದೆ; ಇಲ್ಲದಿದ್ದಲ್ಲಿ ಗೊಡ್ಡು ಸಂಪ್ರದಾಯವಾದಿ! 


ವೇದವಾಕ್ಯಗಳು ಎಂದಿಗೂ ಯಾವ ಕೆಲಸವನ್ನೂ ಮಾಡಿ ಯಾ ಮಾಡಬೇಡಿರೆಂದು ವಿಧಿಸುವುದಿಲ್ಲ. ಅವು ಕೇವಲ‌ ಅಭಿವ್ಯಕ್ತಿಯಾಗಿ ಮಾತ್ರವೇ ಇವೆ. ಅಂದರೆ, ಒಂದು ಕೆಲಸವನ್ನು ಹೀಗೆ ಮಾಡಿದರೆ‌ ಹೀಗಾಗಬಹುದು ಅನ್ನುವ ದಾರಿಯ ಪರಿಕಲ್ಪನೆಯನ್ನು ಸೂಚಿಸುತ್ತವೆಯೇ ಹೊರತೂ ಅಲ್ಲಿ ವಿಧಿಸುವಿಕೆ ಇಲ್ಲ. ಇದು ಮಾತ್ರವೇ ನಿನಗಿರುವ ದಾರಿ ಅನ್ನುವ ಕಟ್ಟಪ್ಪಣೆ ಇಲ್ಲ. ಭಾರತ ಯಾವತ್ತಿಗೂ ಅನ್ವೇಷಕರ ಭೂಮಿ ( land of seekers ). ಇದು ಹೀಗೆಯೇ ಅಂತಂದು ಷರಾ ಬರೆದ ಮರುಕ್ಷಣವೇ ಅನ್ವೇಷಣೆಗೆ ಅವಕಾಶವಾದರೂ ಎಲ್ಲಿ? ಭಾರತದಲ್ಲಿ ಇದ್ದಿದ್ದು ಇದು ಹೀಗೆ; ಬೇಕಾದರೆ ಹುಡುಕಿಕೋ ಅನ್ನುವ ಸಂಜ್ಞೆ. ಜೊತೆಗೆ ಹುಡುಕದೇ‌ ಯಾವುದರ ಸಾಕ್ಷಾತ್ಕಾರವೂ ಆಗುವುದಿಲ್ಲ. ಕಾರಣ, ಪ್ರತೀ ವ್ಯಕ್ತಿಯ ಅನುಭವವೂ ಭಿನ್ನ. ಹಾಗೆಯೇ, ಪ್ರತಿ ವ್ಯಕ್ತಿಯ ಅಂತರಂಗವೂ ಭಿನ್ನ. ಅದೇ ಅಧ್ಯಾತ್ಮ; ಆತ್ಮದ ಕುರಿತಾಗಿದ್ದು! ಅಪಾರದರ್ಶಕ ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಬೆಳಕು ಬೀಳುತ್ತಿರುವ ಕೋನದಿಂದ ನೋಡಿದವನಿಗೆ ಅಪಾರದರ್ಶಕದ ನೆರಳು ಗೋಚರಿಸದೇ‌ ಹೋಗಬಹುದು. ಆಗ, ನೆರಳೇ ಇಲ್ಲ ಅಂತ ವಾದಿಸುವುದು ಮತ್ತು ನಂಬುವುದು ಪೂರ್ಣ ದರ್ಶನದ ಭಾಗವಲ್ಲ. ಅದಕ್ಕಾಗಿಯೇ ಭಾರತದಲ್ಲಿ ಕೇವಲ ಯಾವುದೋ ಒಂದು ದರ್ಶನವಿರಲಿಲ್ಲ. ಎಲ್ಲ ದರ್ಶನಗಳ ಒಟ್ಟೂ ಸತ್ಯ‌ ಮತ್ತೆ ಸತ್ಯದ‌ ಮೂಲ ರೂಪಕ್ಕೇ ಹೋಗಿ ನಿಲ್ಲುತ್ತದೆ. ಯಾವಾಗಲೂ ಒಂದು ಮಾತಿದೆ; ಮೀನು ಹಿಡಿಯುವುದನ್ನು ಕಲಿಸು ಆದರೆ ನೀನೇ ಮೀನು ಹಿಡಿದುಕೊಡಬೇಡ ಅಂತ. ಹೀಗೂ ಇರಬಹುದು ಅನ್ನುವ ಹಲವು ದಾರಿಗಳನ್ನು ತೆರೆದಿಡು, ಆದರೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ನಿರ್ಧಾರವನ್ನು ಆ ವ್ಯಕ್ತಿಗೆ ಬಿಡು, ಇದನ್ನೇ ವೇದವಾಗಲೀ ಭಗವದ್ಗೀತೆಯಾಗಲೀ ಮಾಡುವುದು - ಯಥೇಚ್ಛಸಿ ತಥಾ ಕುರು. 


ಇನ್ನೊಂದು ಮಜದ ಸಂಗತಿಯೆಂದರೆ, ನಮ್ಮಲ್ಲಿ ಹಲವರು ಮೂಲಗ್ರಂಥಗಳನ್ನು ಓದದೆಯೇ ಅಲ್ಲ್ಯಾರೋ ಇನ್ನು ಹೇಗೋ ಅಸಂಬದ್ಧವಾಗಿ ಅರ್ಥೈಸಿಕೊಂಡಿರುವುದನ್ನು ಬರೆದಿದ್ದನ್ನೇ ಓದಿ ಇನ್ನೇನೋ ಅರ್ಥೈಸಿಕೊಳ್ಳುತ್ತೇವೆ. ಆ ಗ್ರಂಥದಲ್ಲಿ ಆ ಸಾಲಿನ ಮೂಲ ಉದ್ದೇಶ ಇನ್ನೇನೋ ಆಗಿರಬಹುದು. ಒಂದು ಸಂಗತಿಯ ಹಿಂದೆ ಮುಂದೆ ಬೇರೆ ಏನಾದರೂ ಇದ್ದರೆ, ಆ ಇಡೀ ಸಂಗತಿ ಅರ್ಥವಾಗುವ ರೀತಿಯೇ ಬೇರೆ!‌ ಕೇವಲ ಒಂದು ಸಾಲನ್ನು ಮಾತ್ರವೇ ತೆಗೆದುಕೊಂಡು ಅದರ ಅರ್ಥವನ್ನು ವಿಶ್ಲೇಷಿಸಿ ಮಹಾನ್ ವೈಚಾರಿಕರೆನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಉದಾಹರಣೆಗೆ, 'ಅವನು ಊಟ ಮಾಡಿದನು' ಇದೊಂದು ಸರಳವಾದ ವಾಕ್ಯ ಸ್ವತಂತ್ರವಾಗಿ;ಅರ್ಥವೂ ಅಷ್ಟೇ ಸರಳ. ಆ ವಾಕ್ಯದ ಹಿಂದೆ ಈಗ ಈ ವಾಕ್ಯವನ್ನು ಸೇರಿಸುವ; "ಯಾರ ಹತ್ತಿರವೋ ಬೇಡಿ ಅವರು ಊಟ ಪಡೆದಿದ್ದರು, ಅವರ ಕೈಯಿಂದ ಅದನ್ನು ಕಸಿದುಕೊಂಡು ಅವನು ಊಟ ಮಾಡಿದನು". ಇನ್ನೂ ಒಂದು ವಾಕ್ಯ " ನಡುಗುವ ಕೈಗಳ ಅಮ್ಮನ ಕೈಯಿಂದ ಅವನು ಊಟ ಮಾಡಿದನು". ಅವನು ಊಟ ಮಾಡಿದ್ದು ಸತ್ಯವೇ ಆದರೂ, ವಾಕ್ಯದ ನಿಜ ಅರ್ಥ ಹಾಗೂ ಧ್ವನಿ ಮೂರೂ ಸಂಗತಿಗಳಲ್ಲಿ ಬೇರೆಬೇರೆಯೇ ಅಲ್ವಾ! ಈಗ ನಮ್ಮ ವೇದ, ಉಪನಿಷತ್ತು, ಪುರಾಣ,‌ ಮಹಾಕಾವ್ಯದ ವಿಷಯಗಳಲ್ಲಿ ಆಗುತ್ತಿರುವುದು ಇದೇ. 


ಹೇಗೆ ತತ್ವಗಳಿಗೆ ದೇವರ ರೂಪ ಕೊಡಲಾಗುತ್ತದೋ ಹಾಗೆಯೇ, ಅವತಾರಗಳ ಮೂಲಕ ದೇವರಿಗೆ ಮನುಷ್ಯ ರೂಪ ಕೊಡಲಾಗುತ್ತದೆ. ಈ ಸಂಗತಿ ಅದೆಷ್ಟು ಆಪ್ತವೆಂದರೆ, ದೇವರು ಅಂದ ಮಾತ್ರಕ್ಕೆ ಮನುಷ್ಯ ನಿಯಮಗಳನ್ನು ಮೀರುವ ಹಾಗಿಲ್ಲ. ಮನುಷ್ಯ ದೇಹವನ್ನು ಪ್ರವೇಶಿಸಿದ ಮೇಲೆ ಮನುಷ್ಯ ಅನುಭವಿಸಬೇಕಾದ ಎಲ್ಲ‌ ಕ್ಲೇಶಗಳನ್ನು ದೇವರೆಂಬ ದೇವರೂ ಅನುಭವಿಸಬೇಕು! ಯುದ್ಧ ಮುಗಿದ ಮೇಲೆ‌ ರಾಮ ಹೇಳುತ್ತಾನಲ್ಲಾ; "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ". ಇವೆಲ್ಲವೂ ಒಂಥರಾ ಫ್ಯಾನ್ಸಿ ಅಥವಾ ಅತಿರೇಕದ ಹೇಳಿಕೆಗಳಂತೆ ಭಾಸವಾಗಬಹುದು. ಆದರೆ, ನಾನೂ ನೀನೂ ಬೇರೆಯಲ್ಲ ಅನ್ನುವುದನ್ನು ಇದಕ್ಕಿಂತ ಇನ್ನೊಂದು ದೃಷ್ಟಾಂತದ‌ ಮೂಲಕ ಹೇಳುವುದಕ್ಕೆ ಸಾಧ್ಯವಾ! 


~'ಶ್ರೀ' 

   ತಲಗೇರಿ

ಭಾನುವಾರ, ಜೂನ್ 5, 2022

ಹಿಮಶ್ರೇಣಿಗಳ ಮಡಿಲಲ್ಲಿ ಬದುಕಿನ ಹಾಡು


ಹೋರಾಟ ಎನ್ನುವುದು ಯಾವತ್ತಿಗೂ ರೋಚಕವಾದದ್ದು ಅದರಾಚೆ ನಿಂತು ನೋಡುವವರಿಗೆ. ಆದರೆ, ಆ ಹೋರಾಟದ ಭಾಗವಾಗಿರುವವರಿಗೆ ಅದು 'ಉಸಿರು ನಿಲ್ಲುವ ಅಥವಾ 'ನಿಟ್ಟುಸಿರು ಬಿಡುವ' ಈ ಎರಡರಲ್ಲಿ ಯಾವುದಾದರೂ ಒಂದು ಆಗಿಹೋಗುವ ಭಯಾನಕ ಅವಧಿ. ಹೋರಾಟವೆಂದರೆ ಹೊಡೆದಾಟ, ಯುದ್ಧ, ಚಳುವಳಿ ಇತ್ಯಾದಿಗಳೇ ಆಗಬೇಕಿಲ್ಲ. ಮನುಷ್ಯ ಸಂಕುಲದಲ್ಲಷ್ಟೇ ಅಲ್ಲ, ಎಲ್ಲ ಜೀವಕೋಟಿಗಳಲ್ಲೂ ಇರುವ ಒಂದು ಸಾಮ್ಯತೆ ಇದು. ಕೋಟ್ಯಂತರ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮುನ್ನುಗ್ಗುವಿಕೆಯಿಂದ ಶುರುವಾಗಿ, ಪ್ರತಿ ನಿತ್ಯ ಪ್ರತಿ ಕ್ಷಣ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುವುದರಿಂದ ಹಿಡಿದು, ಶಿಶುವಾಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಗೋಡೆ ಹಿಡಿದು ನಿಲ್ಲುವ ಪ್ರಯತ್ನಗಳಾದಿಯಾಗಿ ಮರಣಕ್ಕೂ ಮುನ್ನ ಯಾರನ್ನೋ ನೋಡುವ ಸಲುವಾಗಿ ಯಾರದೋ ಸ್ಪರ್ಶ, ಧ್ವನಿ ತರಂಗಗಳ ಅನುಭವದ ಸಲುವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಾಯುವವರೆಗೆ ಇಡೀ ಒಂದು ಪ್ರಯಾಣ ಅಷ್ಟು ಸರಳವೂ ಅಲ್ಲ, ಸಾಮಾನ್ಯವೂ ಅಲ್ಲ. ಪ್ರಾಣಿ ಜಗತ್ತಿನಲ್ಲಿಯೂ ಅಷ್ಟೇ; ಆ ಕ್ಷಣಕ್ಕೆ ಸಿಕ್ಕ ಆಹಾರವನ್ನು ಉಳಿಸಿಕೊಳ್ಳುವ, ಸಂಗಾತಿಯನ್ನು ಆಕರ್ಷಿಸುವ, ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ, ಪ್ರಕೃತಿಯಲ್ಲಾಗುವ ಸಹಜ, ಅಸಹಜ ಬದಲಾವಣೆಗೆ ನಿರಂತರವಾಗಿ ಗ್ರಾಹಿಯಾಗಿರುವ ಸಂಗತಿ ಸಣ್ಣದಲ್ಲ. ಆದರೆ, ಎಲ್ಲವೂ ಮುಖ್ಯವಾಹಿನಿಯಲ್ಲಿ ಚರ್ಚಿಸಲ್ಪಡುವುದಿಲ್ಲ. ಅವೆಲ್ಲವೂ ಈ ಲೋಕದ ಪಾಡು ಎನ್ನುವ ಹಾಗೆ ಸಹಜವಾಗಿ ನಡೆದುಹೋಗುತ್ತವೆ ಮತ್ತು ಅವು ಯಾರನ್ನೂ ತಮ್ಮತ್ತ ಸೆಳೆಯುವಂಥವುಗಳಲ್ಲ. ನಮಗೆಲ್ಲಾ ಒಮ್ಮೊಮ್ಮೆ ಜಡತೆ ಆವರಿಸುತ್ತದೆ. ಎಲ್ಲವುಗಳಲ್ಲಿಯೂ ನಿರಾಸಕ್ತಿ ಅಥವಾ ಯಾವುದೋ ಒಂದನ್ನು ಮಾಡಿಮುಗಿಸಬಹುದಾದ ಇಚ್ಛಾಶಕ್ತಿಯ ಕೊರತೆ ಕಾಡತೊಡಗುತ್ತದೆ. ಆಗ ಹೊಸತೇನನ್ನೋ ಹುಡುಕಿ ಹೊರಡುತ್ತೇವೆ, ಮತ್ತೆ ಬದುಕನ್ನು ನವೀಕರಿಸಿಕೊಳ್ಳುವ ಉತ್ತೇಜನಕ್ಕಾಗಿ ಹಂಬಲಿಸುತ್ತೇವೆ. ಹಲವಾರು ಬಾರಿ ಯಾವ್ಯಾವುದೋ ಕೃತಕ ವ್ಯಕ್ತಿತ್ವ ವಿಕಸನ ಭಾಷಣ, ಬರಹ, ಸಿನಿಮಾ ಇತ್ಯಾದಿಗಳ ಮೊರೆಹೋಗುತ್ತೇವೆ. ಕೆಲವೊಮ್ಮೆ ಅವು ಧನಾತ್ಮಕವಾಗಿಯೂ ಕೆಲಸ ಮಾಡಬಲ್ಲವು. ಆದರೆ, ಅವೆಲ್ಲವೂ ಬೇರೂರಿ ಕೊನೆಗೆ ಫಲ ಕೊಡಬೇಕಾಗಿರುವುದು ನಮ್ಮಲ್ಲಿಯೇ, ಆ ಆಳಕ್ಕಿಳಿಯುವ ಕಾರ್ಯ ಆಗದೇ ಇದ್ದಲ್ಲಿ ಎಲ್ಲವೂ ತಾತ್ಕಾಲಿಕ. ಇದು ಒಂದು ಕಡೆಯಾದಲ್ಲಿ, ಕೆಲವರ ಬದುಕೇ ಈ ಎಲ್ಲಾ ವ್ಯಕ್ತಿತ್ವ ವಿಕಸನ ತರಗತಿಗಳ ವಿಶ್ವವಿದ್ಯಾಲಯದಂತಿರುತ್ತದೆ. ಅದರಲ್ಲಿ ಪ್ರತ್ಯೇಕವಾಗಿ ಹೇರಿಕೊಂಡ ಸಂಗತಿಗಳಿರುವುದಿಲ್ಲ, ಯಾವುದೋ ಒಂದು ಸಮಯ, ಘಟನೆ, ವಿಷಯ ಅವರನ್ನು ಸಾಮಾನ್ಯ ಬದುಕಿನಿಂದ ಭಿನ್ನವಾದ ಮತ್ತು ಎತ್ತರದ ನೆಲೆಗೆ ಕೊಂಡೊಯ್ಯುತ್ತದೆ. ಆಗ ಆ ಇಡೀ ಬದುಕೇ ಸಹಜವಾದ ಸ್ಫೂರ್ತಿಯ ಆಕರವಾಗುತ್ತದೆ. ಅಂಥದ್ದೇ ಒಂದು ಮೈನವಿರೇಳಿಸುವ, ಕ್ಷಣಕ್ಷಣಕ್ಕೂ ಕೈ ಜಾರುತ್ತಿರುವ ಬದುಕನ್ನು ಮತ್ತೆ ಮತ್ತೆ ಗಟ್ಟಿಯಾಗಿ ಅಪ್ಪಿಕೊಳ್ಳುವ, ನಕ್ಷೆಯಲ್ಲಿ ಎಲ್ಲಿದ್ದೇವೆ ಎಂದು ಗೊತ್ತೂ ಆಗದ ಜಾಗದಿಂದ ಮತ್ತೆ ಹೊರಜಗತ್ತಿನೊಂದಿಗೆ ಬೆರೆಯುವ ದಾರಿಯನ್ನು ಹುಡುಕುವ, ಎಲ್ಲವೂ ಮುಗಿಯಿತು ಅನ್ನುವಾಗಲೇ ಮತ್ತೆ ಹೊಸತಾಗಿ ಶುರುವಾಗುವ, ನಂಬಿಕೆಗಳ ಜೊತೆ ನಿರಂತರವಾಗಿ ಸಂಘರ್ಷವೇರ್ಪಟ್ಟು ಸಮಯದ ಜೊತೆ ರಾಜಿಯಾಗದೇ ನಿಂತು, ಪ್ರಕೃತಿಯ ಅಗಾಧತೆಯನ್ನು ಪೂಜಿಸುತ್ತಾ ಪ್ರಕೃತಿಯೊಂದಿಗೇ ಹೋರಾಡಿ ಗೆಲ್ಲುವ, ಆಂಡೀಸ್ ಪರ್ವತ ಶ್ರೇಣಿಯ ಮಡಿಲಲ್ಲಿ ನಡೆದ ಮನುಕುಲದ ದಾರುಣ ಸ್ಥಿತಿಯಲ್ಲೂ ಜೀವನಪ್ರೀತಿಯನ್ನು ಸ್ಫುರಿಸುವ ಕಥಾನಕವೇ ಸಂಯುಕ್ತಾ ಪುಲಿಗಲ್ ( Samyuktha Puligal ) ಅವರು ಅನುವಾದಿಸಿದ ಪರ್ವತದಲ್ಲಿ ಪವಾಡ. 


ನ್ಯಾಂಡೋ ಪರಾಡೊ ಬರೆದ, ಜೊತೆಗೆ ಜೀವಿಸಿದ ೭೨ ದಿನಗಳ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್ ( Miracle in the andes ) ಕೃತಿಯ ಕನ್ನಡ ಅನುವಾದ ಇದು. ಮಾನವೀಯ ತುಡಿತಗಳು ಮತ್ತು ಸಂಬಂಧಗಳ ಆರ್ದ್ರತೆಯನ್ನು ಕೊರೋನಾ ಸಮಯದಲ್ಲಿ ಬಹಳಷ್ಟನ್ನು ನೋಡಿದ್ದೇವೆ. ಅದೆಂಥದ್ದೇ ಗಟ್ಟಿಮನಸ್ಸಿನವರಾದರೂ ಒಮ್ಮೆ ಭಾವುಕರಾಗಬಹುದಾದ ಹಲವು ಸಂಗತಿಗಳನ್ನು ಕೇಳಿದ್ದೇವೆ, ಕಂಡಿದ್ದೇವೆ; ಅಲ್ಲ್ಯಾರೋ ವಯಸ್ಸಾದವರು ತನಗಾಗಿ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಇನ್ನ್ಯಾರೋ ಯುವಕನಿಗೆ ಬಿಟ್ಟುಕೊಟ್ಟು ತಾವು ಮೃತರಾದರಂತೆ, ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ವೈದ್ಯರು ತಮ್ಮ ಕುಟುಂಬದಿಂದ ದೂರಾದರಂತೆ, ಯಾರೋ ಒಂದಷ್ಟು ಜನ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದರಂತೆ, ನಿತ್ಯದ ಮುಗಿಯದ ಕೆಲಸಗಳ ಮಧ್ಯವೂ ಆಸ್ಪತ್ರೆಯ ಹಾಸಿಗೆ, ಔಷಧ, ಆಮ್ಲಜನಕ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ನಿದ್ದೆಗೆಟ್ಟು, ಊಟ ತಿಂಡಿಗಳನ್ನು ಬಿಟ್ಟು ಪ್ರಯತ್ನಿಸಿದರಂತೆ, ಯಾರೋ ಇನ್ನ್ಯಾರದೋ ಅನಾಥ ಮೃತಶರೀರಕ್ಕೆ ಸಿಗಬೇಕಾದ ಅಂತಿಮ ವಿಧಿಗಳನ್ನು ಪೂರೈಸಿದರಂತೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಮನುಷ್ಯ ಮನುಷ್ಯನೊಳಗಿನ ಬಾಂಧವ್ಯವನ್ನು, ಭರವಸೆಯನ್ನು ದಟ್ಟವಾಗಿ ಹೆಣೆಯುವ ಘಟನೆಗಳು. ಅಸಂಖ್ಯಾತ ಅಪನಂಬಿಕೆಗಳ, ಮೋಸದ, ಭ್ರಷ್ಟ ವ್ಯವಸ್ಥೆಗಳ, ಸ್ವಾರ್ಥ ಹಪಹಪಿಗಳ ನಡುವೆ ಇವೆಲ್ಲವೂ ಮಾನವ ಸಂಕುಲಕ್ಕೆ ಮನುಷ್ಯ ಪದದ ಅರ್ಥವನ್ನು ಮತ್ತೆ ಕಟ್ಟಿಕೊಡುವ ಸಂದರ್ಭಗಳು. ಅಂಥ ಸಂದರ್ಭಗಳು ದಿನಂಪ್ರತಿಯೂ ಒಂದಲ್ಲಾ ಒಂದು ಕಡೆ ಆಗುತ್ತಲೇ ಇರುತ್ತದೆ. ಆದರೆ, ಕೊರೋನಾ ಸಮಯದಲ್ಲಿ ನೋಡಿದ್ದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮನುಷ್ಯರು ಒಂದೇ ಸಮಯದಲ್ಲಿ ಈ ಅನುಭವಕ್ಕೆ ಸಾಕ್ಷಿಯಾಗಿದ್ದರು. ಇಡೀ ಜಗತ್ತನ್ನು ಅಂತರ್ಜಾಲ ಬೆಸೆಯುವ ಪ್ರಯತ್ನ ಮಾಡಿತು. ಮನೆಯಲ್ಲಿ ವಯಸ್ಸಾದವರಿದ್ದಾರೆ ಅಂತ ಮನೆಗೆ ಹೋಗದೇ ಉಳಿದ ಮಗ ಮಗಳು, ನಾನು ಊರಿಗೆ ಹೋಗಿ ತನ್ನೂರಿಗೆ ಏನಾದರೂ ಆದರೆ ಅಂತಂದುಕೊಂಡ ಉದ್ಯೊಗಕ್ಕಾಗಿ ಊರು ಬಿಟ್ಟು ಬಂದವ, ಯಾರೋ ನಗರ ಪ್ರದೇಶದಿಂದ ಬಂದಾಗ ಅವರು ಬಂದರು ಅನ್ನುವ ಕಾರಣಕ್ಕೇ‌ ಇಬ್ಭಾಗವಾದ ಒಂದೇ ಊರಿನ ಜನರು, ದಣಿವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯಲೋಕ, ಭಯಗ್ರಸ್ತ ಮನಸುಗಳಿಗೆ ಧೈರ್ಯ ತುಂಬಿದ ಅದೆಷ್ಟೋ ಮಂದಿ, ಅದರ ಜೊತೆಜೊತೆಗೆ ದಂಧೆ ಎನ್ನುವ ಕರಾಳ ಜಗತ್ತು ಕೂಡ. ಇವಿಷ್ಟನ್ನೂ, ಅಥವಾ ಇದಕ್ಕಿಂತಲೂ ಹೆಚ್ಚಿನದನ್ನು ಜಗತ್ತು ನೋಡಿದೆ. ೧೯೭೨ರಲ್ಲಾದ ಒಂದು ವಿಮಾನ‌ ಅಪಘಾತ ಹಾಗೂ ಇಡೀ ಜಗತ್ತಿನ‌ ಸಂಪರ್ಕವೇ ಕಡಿದುಹೋದ ಆ ಕ್ಷಣದಲ್ಲಿ, ರಕ್ಷಣಾ ಸೇನೆ ಇವರಿರುವ ಜಾಗವನ್ನು ಪತ್ತೆಹಚ್ಚಬಹುದಾ ಇಲ್ಲವಾ ಅನ್ನುವುದರ ಕುರಿತಾಗಿಯೂ ಅನುಮಾನ ಇರುವಾಗ, ಸುತ್ತಲೂ ಎತ್ತರೆತ್ತರದ ಹಿಮಾವೃತ ಪರ್ವತಗಳ ಬುಡದಲ್ಲಿ ಬಿದ್ದ‌ ಗಾಯಾಳುಗಳು ಮತ್ತೆ ವಾಪಸ್ ತಮ್ಮ ತಮ್ಮ ಮನೆಯ ಗೋಡೆಗಳಿಗೆ ಒರಗಿ ಕೂರುವ ಕ್ಷಣಗಳನ್ನು ನೆನೆಸಿಕೊಂಡು ಅದೆಷ್ಟು ಹಂಬಲಿಸಿರಬಹುದು. ಬಹುಶಃ ಬದುಕಿಗಿಂತ ಬೇರೆ ಸ್ಫೂರ್ತಿ ಇರಲಾರದೇನೋ, ಹೇಗಾದರೂ ಬದುಕಲೇಬೇಕು ಹಾಗೂ ಮತ್ತೊಮ್ಮೆ ಈ ಬದುಕನ್ನು ತೃಪ್ತಿಯಿಂದ ಅನುಭವಿಸಬೇಕು ಅನ್ನುವ ಕನಸು ಮತ್ತು ಆ‌ ಕನಸಿನ ಬೆನ್ನುಹತ್ತಿ ಹೋಗುವ ಕತೆ ರೋಚಕವಾಗದೇ ಇದ್ದೀತಾದರೂ ಹೇಗೆ! ಮೂಲ ಕಾದಂಬರಿಯನ್ನು ನಾನಿನ್ನೂ ಓದಿಲ್ಲ, ಕೇವಲ‌ ಅನುವಾದವನ್ನಷ್ಟೇ ಓದಿದೆ. ಕಾದಂಬರಿಯ ಮೊದಲ ಮಾತಿನಲ್ಲಿ ಲೇಖಕಿ ಹೇಳಿದ ಹಾಗೆ ಇದು ಬದುಕನ್ನು ದ್ವೇಷಿಸಿದ ವ್ಯಕ್ತಿಯೊಬ್ಬ ಬದುಕಿನ ಅಗಾಧ ಪ್ರೇಮವನ್ನು ಹುಡುಕಿ ಹೋಗುವ ಕಥನ. ಎಲ್ಲವೂ ಸರಿಯಾಗಿದ್ದಾಗಲೇ ನಮ್ಮ ಹತ್ತಿರ ಬದುಕಿನ ಕುರಿತಾಗಿ ಹಲವು ದೂರುಗಳಿರುತ್ತವೆ. ಏನೂ ಇಲ್ಲದಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬಹುದು‌ ಅಥವಾ ಆ ಕ್ಷಣದ ನಮ್ಮ‌ ದೃಷ್ಟಿಕೋನ ಹೇಗಿರಬಹುದು ಅನ್ನೋ ಪ್ರಶ್ನೆಗಳೆಲ್ಲಾ ಓದುವುದಕ್ಕೆ ಅಷ್ಟೇನು ಆಸಕ್ತಿದಾಯಕವಾಗದೇ ಹೋಗಬಹುದು, ಆದರೆ ಅದರ ಉತ್ತರಗಳು ಮಾತ್ರ ನಾವು ಪಯಣಿಸಿಯೇ ಇರದ ದಾರಿಗಳನ್ನು ತೆರೆದಿಡುತ್ತವೆ. 


ನಾವು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಂಗತಿಯೆಂದರೆ ಪ್ರಕೃತಿಯ ಇದಿರು ನಾವ್ಯಾರೂ ಒಂದು ಲೆಕ್ಕವೇ ಅಲ್ಲ ಅನ್ನುವುದು. ಆದರೆ ಮನುಷ್ಯನಿಗೊಂದು ಚಾಳಿಯಿದೆ. ಇದ್ದುದನ್ನು ಇದ್ದ ಸ್ಥಿತಿಯಲ್ಲಿಯೇ ಇರುವುದಕ್ಕೆ ಬಿಡದೇ ಇರುವುದು. ವಿಕೃತ ಆನಂದವೊಂದು ದೊರೆಯುತ್ತದೆ ಅಂತಾದಲ್ಲಿ ಮೆದುಳು ಅದಕ್ಕಾಗಿ ಸಜ್ಜಾಗಿಯೇ ಬಿಡುತ್ತದೆ, ಆ ಕ್ಷಣಕ್ಕೆ ತಾನೇ ಸರ್ವರಲ್ಲಿಯೂ ಶಕ್ತಿಶಾಲಿ ಎಂದು ಬೀಗುತ್ತದೆ ಕೂಡಾ. ಆದರೆ, ಸಮತೋಲನ ಎನ್ನುವುದು ಪ್ರಕೃತಿಯ ಅವಿಭಾಜ್ಯ ಅಂಗ. ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಗೊತ್ತೇ ಆಗದ ಹಾಗೆ ಪ್ರಕೃತಿ ಪ್ರತಿರೋಧ ಒಡ್ಡುತ್ತದೆ. ಪ್ರತಿ ಬಾರಿಯೂ ಬೇರೆ ಬೇರೆಯದೇ ರೀತಿಯಲ್ಲಿ. ಮನುಷ್ಯ ಅಲ್ಲಿಯೂ ಹೋರಾಡುತ್ತಾನೆ. ಯಾರು ಗೆಲ್ಲುತ್ತಾರೆ ನೋಡೇಬಿಡೋಣ ಅನ್ನುವ ಜಿದ್ದಿಗಿಂತ ಅದರ ಅಗಾಧತೆಯನ್ನು ಪೂಜಿಸಿ ಅದರ ಹತ್ತಿರವೇ ರಕ್ಷಿಸು ಅಂತ ದೈನ್ಯವಾಗಿ ಬೇಡಿಕೊಂಡು ನಂತರ ಪ್ರಯತ್ನ ಮುಂದುವರೆಸಿದರೆ ಆ ಹೋರಾಟಕ್ಕೆ ಸಿಗುವ ಆಯಾಮವೇ ಬೇರೆ. ಪೊರೆವವಳು ಮಡಿಲಲ್ಲಿಟ್ಟು ತೂಗದೇ ಇರುವಳೇ? ಎಷ್ಟೆಂದರೂ ಪರಾವಲಂಬಿಗಳಲ್ಲವೇ ನಾವು! 


ಸೂಕ್ಷ್ಮ ಮನಸಿನವರಾದರೆ, ಮನಸ್ಸನ್ನು ಗಟ್ಟಿಮಾಡಿಕೊಂಡು ಓದಿ ನೋಡಿ. ಗಟ್ಟಿ ಮನಸ್ಸಿನವರಾಗಿದ್ದರೆ, ಅಂಥ ಗಟ್ಟಿತನವನ್ನು ಚೂರಾದರೂ ಅಲ್ಲಾಡಿಸಲಿಕ್ಕೆಂದೇ ಒಂದಷ್ಟು ಘಟನೆಗಳು ಪುಸ್ತಕದ ಒಳಗೆ ಕಾಯುತ್ತಿವೆ, ಅಗಾಧ ಹಿಮಶ್ರೇಣಿಗಳ ನಡುವೆ ಬದಲಾಗುತ್ತಲೇ ಇರುವ ಪ್ರತಿಕೂಲ ಹವಾಮಾನದ ಥರ! ಈ ಮುಖಾಮುಖಿ ಕೇವಲ ಕಾದಂಬರಿ ಹಾಗೂ ಓದುಗರದ್ದಲ್ಲ; ಈ ಬಾರಿ, ಬದುಕು ಮತ್ತು ಬದುಕಿನದ್ದು ಮಾತ್ರ... 


~`ಶ್ರೀ'

    ತಲಗೇರಿ

ಪುಟ್ಟ ಪಾದದ ಗುರುತಿಗೆ ಬರೀ ಎರಡು ರೆಕ್ಕೆ!


 


ಒಂದು ಬರೆಹ ಅಥವಾ ಸಿನೆಮಾ ಇಷ್ಟವಾಗುವುದಕ್ಕೆ ಹಲವು ಕಾರಣಗಳಿರಬಹುದು. ಯಾವುದೋ ಥರದ ಹೊಸ ಪ್ರಯತ್ನ ಮಾಡುವುದಕ್ಕೆ ಹೊರಟಿದ್ದಾರೆ, ಸಣ್ಣ ಪುಟ್ಟ ಹಿನ್ನೆಡೆಗಳಿದ್ದರೆ ಅವುಗಳನ್ನು ಮುನ್ನೆಲೆಗೆ ತರುವದು ಬೇಡ ಅಂದುಕೊಳ್ಳುತ್ತಲೇ ಇಷ್ಟವಾಗಬಹುದು ಅಥವಾ ಇದು ನನ್ನ ಪರಿಸರ, ನನ್ನ ಬದುಕಿಗೆ, ದೈನಂದಿನ ಸಂಗತಿಗಳಿಗೆ ಹೊಂದುತ್ತದೆ ಅನ್ನುವ ಕಾರಣದಿಂದ ಇಷ್ಟವಾಗಬಹುದು. ಅದರಲ್ಲಿ ಭಾವನಾತ್ಮಕವಾದ ಸನ್ನಿವೇಶಗಳಿವೆ, ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತದೆ, ನಮ್ಮೊಳಗಿನ ಹುಳುಕುಗಳನ್ನು ಎತ್ತಿ ಹೇಳುತ್ತದೆ, ದಮನಿತರ ದನಿಯಂತೆ ಕಾಣುತ್ತದೆ, ಅದನ್ನು ಕಟ್ಟಿಕೊಟ್ಟ ರೀತಿ ಬೇರೆಯದೇ ಆಗಿದೆ ಇತ್ಯಾದಿ ಇತ್ಯಾದಿ ಅನೇಕಾನೇಕ ಕಾರಣಗಳು. ಆದರೆ ಇವೆಲ್ಲವುಗಳ ಜೊತೆಗೆ, ಸಿನೆಮಾ ನೋಡುವಾಗಲೋ ಪುಸ್ತಕ ಓದುವಾಗಲೋ ಇರುವ ಮನಸ್ಥಿತಿಯ ಆಧಾರದ ಮೇಲೂ ಅದು ನೀಡುವ ಅನುಭವ ಪ್ರತ್ಯೇಕತೆಯನ್ನು ಪಡೆದುಕೊಳ್ಳುತ್ತದೆ. ಅದೇನೇ ಇದ್ದರೂ ಮನುಷ್ಯನಿಗೆ ನಂಬಿಕೆಗಳು ಬೇಕು, ತನ್ನ ತತ್ವಗಳನ್ನು ಉದ್ದೀಪಿಸುವ ಸಂಗತಿಗಳು ಬೇಕು, ತನ್ನ ಯೋಚನಾ ಧಾರೆಗಳನ್ನು ಬೆಂಬಲಿಸುವ ಹಾಗೂ ಸಮರ್ಥಿಸುವ ದಾಖಲೆಗಳು ಬೇಕು. ಇದರಿಂದಾಗಿ ತಾನು ಇತರರ ನಂಬಿಕೆಗಳನ್ನು ತಿರಸ್ಕರಿಸುವಂತಾದರೆ ಅದು ಬೋನಸ್ ಇದ್ದ ಹಾಗೆ! "ಇವೆಲ್ಲವೂ ಸಹಜ ತುಡಿತಗಳು, ಇವುಗಳಿಂದ ಮುಕ್ತವಾಗಿದ್ದಲ್ಲಿ ನೀವು ಈ ಸಮಾಜದ ಭಾಗವೇ ಅಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಿಮ್ಮಿಂದ ಸಾಸಿವೆಯಷ್ಟೂ ಉಪಯೋಗವಿಲ್ಲ" (ಎಳ್ಳನ್ನು ಖಾಲಿಮಾಡಿ ಸಾಸಿವೆ ಬಳಸಲಾಗಿದೆ!). ಇಂಥ ಒಂದು ಪರಿಸ್ಥಿತಿ ಇರುವಾಗ ಕೆಲವು ಕೃತಿಗಳು ಈ ಸಂಗತಿಗಳ‌ನ್ನಿಟ್ಟುಕೊಂಡೂ ಬೇರೆಯದಾಗಿ ನಿಲ್ಲುತ್ತವೆ. ಶ್ರೀಮತಿ ಸುನಂದಾ ಪ್ರಕಾಶ ಕಡಮೆಯವರ ಎರಡು ಕೃತಿಗಳ ಕುರಿತಾಗಿ ನಾನು ಇವತ್ತು ಹೇಳಹೊರಟಿದ್ದೇನೆ. ಒಂದು ಅವರ ಚೊಚ್ಚಲ‌ ಕಥಾ ಸಂಕಲನ 'ಪುಟ್ಟ ಪಾದದ ಗುರುತು' ಇನ್ನೊಂದು ಇವರ ಚೊಚ್ಚಲ ಕಾದಂಬರಿ 'ಬರೀ ಎರಡು ರೆಕ್ಕೆ' 


ಪುಟ್ಟ ಪಾದದ ಗುರುತು ಅನ್ನೋ ಕತೆಯನ್ನೇ ಪುಸ್ತಕದ ಶೀರ್ಷಿಕೆಯಾಗಿ ಮಾಡಿರುವ ಶ್ರೀಮತಿ ಸುನಂದಾ ಕಡಮೆಯವರ ಕೃತ್ಯಕ್ಕೆ ಆ ಶೀರ್ಷಿಕೆ ನ್ಯಾಯ ಒದಗಿಸುತ್ತದೆ. ಬಹುತೇಕ ಕಥೆಗಳು ಬಾಲ್ಯ, ಮಾತೃತ್ವ ಹಾಗೂ ಮಕ್ಕಳ ಕುರಿತಾದ ವಸ್ತುಗಳನ್ನು ಹೊಂದಿವೆ. ಆದರೆ ಬರೀ ಅಷ್ಟೇ ಇಲ್ಲ, ಅದರಾಚೆಗೂ ಬೇರೆ ಕತೆಗಳಿವೆ ಹಾಗೂ ಆ ಕತೆಗಳು ಅಷ್ಟೇ ಸೊಗಸಾಗಿವೆ ಕೂಡಾ. ಬದುಕಿನ ಬಹುತೇಕ ಸಂಗತಿಗಳು ವರ್ತಮಾನದಲ್ಲಿ 'ಎಲ್ಲವೂ' ಅಥವಾ 'ನಗಣ್ಯ' ಅಷ್ಟೇ ಆಗಿ ಕಾಣಬಹುದು. ಆದರೆ ಕಾಲಾಂತರದಲ್ಲಿ ಆ ಸಂಗತಿಗಳ ನೆನಪುಗಳು ಈ ಅಳತೆಗಳ ಮಿತಿಗಳಿಂದಾಚೆ ನಿಲ್ಲುತ್ತವೆ. ಗಣ್ಯ ನಗಣ್ಯಗಳ ಹಂಗು ತೊರೆದು ಬದುಕಿನ 'ಬದುಕಿದ ಕ್ಷಣ'ಗಳಾಗುತ್ತವೆ. ಅದರಲ್ಲೂ ಮೊದಲ ಸಂಕಲನವೆಂದಾಕ್ಷಣ ಅದನ್ನು 'ಜನ' ನೋಡುವ ರೀತಿ ಬೇರೆ. ( ಓದುಗರು ನೋಡುವ ರೀತಿ ಬೇರೆ ಅಂತ ಬಳಸಿಲ್ಲ!) ಆ ಲೇಖಕನಿಗೆ ಅಥವಾ ಆ ಲೇಖಕಿಗೆ ಹೀಗೆ ಬರೆಯಬಹುದಿತ್ತು ಅಥವಾ ಹಾಗೆ ಬರೆಯಬಹುದಿತ್ತು ಅನ್ನುವವರ ಬಳಗವೂ ದೊಡ್ಡದೇ ಆಗಿರುತ್ತದೆ ( ಅದು ತಪ್ಪು ಅಂತಲ್ಲ !). ಜೊತೆಗೆ ಇನ್ನ್ಯಾವುದೋ ಲೇಖಕ ಲೇಖಕಿಯರೊಂದಿಗೆ ಈ ಕೃತಿಯನ್ನಿಟ್ಟು ತುಲನೆ ಮಾಡುವುದು, ಇದು ಅವರ ಬರೆಹವನ್ನು ಹೋಲುತ್ತದೆ ಅನ್ನುವುದು ಇವೆಲ್ಲವೂ ಸಹಜವೇ; ಹಾಗೂ, ಈ 'ಹೋಲುವಿಕೆ'ಯನ್ನು ಮೀರುವುದಕ್ಕೇ ಕೆಲವೊಮ್ಮೆ ಬಹಳ ಕಷ್ಟಪಡಬೇಕಾಗುತ್ತದೆ. ಅದೆಷ್ಟೇ ಆದರೂ ಎಲ್ಲೋ ಒಂದು ಕಡೆ ಯಾವುದೋ ಸಾಲಿಂದಲೋ, ಯಾವುದೋ ಪುಸ್ತಕದಿಂದಲೋ, ಕಥಾ ವಸ್ತುವಿನಿಂದಲೋ, ಬರೆಹದ ಶೈಲಿಯಿಂದಲೋ ಪ್ರಭಾವಿತರಾಗುವುದು ತಪ್ಪುವುದಿಲ್ಲ ಹಾಗೂ ಅದು ತಪ್ಪಲ್ಲ ಕೂಡಾ! ಬದುಕಿನಿಂದ ಬರೆಹ ಹುಟ್ಟಬೇಕೆನ್ನುವುದು ಸತ್ಯವಾದರೂ ಆ ಬರೆಹದ ಹುಟ್ಟಿಗೆ ಕಾರಣವಾಗುವ ವಿಷಯಗಳು ಹಲವಾರು ಇರಬಹುದಲ್ಲಾ! ಹಾಗೂ ಪ್ರತಿ ಲೇಖಕರಿಗೂ ಅವರದ್ದೇ ಆದ ಮಿತಿಗಳಿವೆ; ಲೇಖಕಿಯರಿಗೆ ಮಿತಿಗಳ ಮೇಲೆ ಮಿತಿಗಳಿವೆ! ಈಗ ಇವೆಲ್ಲವುಗಳನ್ನು ಆಚೆಗಿಟ್ಟು ಒಂದು ಕೃತಿಯಾಗಿ ನೋಡಿದರೂ ಈ ಪುಸ್ತಕದ ಕತೆಗಳಲ್ಲಿ ಕಾಣುವುದು ಅಪ್ಪಟ ಮುಗ್ಧತೆ, ಕರುಣೆ, ಆರ್ದ್ರತೆ. ಕತೆಯ ಪಾತ್ರ ಪ್ರಾರ್ಥಿಸಿದಾಗ ನಾವು ಪ್ರಾರ್ಥಿಸುತ್ತಾ, ಕತೆಯ ಪಾತ್ರ ಉಪ್ಪಿನ ಕಾಯಿಯ ಬಾಟಲಿಯನ್ನು ತೆಗೆಯಲು ಪ್ರಯತ್ನಿಸುವಾಗ ನಾನೂ ಒಂದು ಕೈ ನೋಡೇಬಿಡೋಣ ಅಂತ ಓದುಗ ನೆನೆಯುವುದು, ಖಾಯಂ ಗಿರಾಕಿಗಳ ಹತ್ರ ಕೆಲವೊಂದಕ್ಕೆ ದುಡ್ಡು ತೆಗೆದುಕೊಳ್ಳದೇ 'ಎಕ್ಸ್ಟ್ರಾ' ಕೊಡುವ ವ್ಯಾಪಾರಸ್ಥರು, ಸರ್ಕಾರದ ಯಾವುದೋ ಯೋಜನೆ ಬಂತೆಂದು ಮನೆ ಜಮೀನನ್ನು ಬಿಟ್ಟುಕೊಡಲೇಬೇಕಾದ ಸ್ಥಿತಿ ತಲುಪುವ ನಾಗರಿಕರು, ಅಥವಾ ಹೇಳಿಕೊಳ್ಳದ ಹಳೆಯ ಪ್ರೇಮದ ನವಿರು ನೆನಪು ಹೀಗೆ ಇಂಥ ಸಂಗತಿಗಳು ನಿತ್ಯವೂ ಕಾಣುವ ಕೇಳುವ ಅನುಭವಿಸುವಂಥವುಗಳು. ಚಾದರ ಹಾಗೂ ಹುಲಿಯನ್ನು ಒಳಗೊಂಡ ಒಂದು ಸನ್ನಿವೇಶವಂತೂ 'ಆಹ್ಞ್, ಅದೆಷ್ಟ್ ಚೆಂದ' ಅಂತನ್ನಿಸದೇ ಹೋಗುವುದಿಲ್ಲ. ಕೆಲವೊಂದು ಕತೆಗಳ ಅಂತ್ಯ ಒಂದಷ್ಟು ಫ್ಯಾಂಟಸಿ ಶೈಲಿಯಲ್ಲಿರುವುದು ನನಗೆ ಅಷ್ಟೇನು ಹಿಡಿಸದಿದ್ದರೂ ಕತೆಗಳ‌ ಉದ್ದೇಶಕ್ಕೆ ಅವು ಜಾಸ್ತಿ‌ ಮೋಸ ಮಾಡಿದ ಹಾಗೇನೂ ಆಗಿಲ್ಲ. 


ಹೆಣ್ಣಿನ ಲೋಕವನ್ನು ಲೇಖಕಿ ಕಟ್ಟಿಕೊಡುವ ರೀತಿ ಚೆಂದ. ಗಂಡು ಬರೆವ ಸಾಹಿತ್ಯದಲ್ಲಿ ಹೆಣ್ತನದ ಸೂಕ್ಷ್ಮಗಳು ಬರುವುದಾದರೂ ಹೇಗೆ? ಅದಕ್ಕೆ ಲೇಖಕಿಯರೇ ಆಗಬೇಕು! ಇದಕ್ಕೊಂದು ಚೆಂದದ ಉದಾಹರಣೆಯೆಂದರೆ 'ಬರೀ ಎರಡು ರೆಕ್ಕೆ'ಯಲ್ಲಿ ಪೊಲಕಿನ(ಬ್ಲೌಸ್) ಕುರಿತಾಗಿ‌ ಒಂದು ಸಣ್ಣ ಮಾತುಕತೆ ಬರುತ್ತದೆ; ಅದರಲ್ಲಿನ ಸಹಜತೆ ಮತ್ತು ಕಚಗುಳಿಯಂಥ ತುಂಟತನ. ಅದಕ್ಕಾಗಿಯೇ ಹೆಣ್ಣು ಕಟ್ಟಿಕೊಡುವ ಹೆಣ್ತನದ ನವಿರು ಭಾವಗಳು ಮುಖ್ಯ ವೇದಿಕೆಗೆ ಬರಬೇಕು. ಅದಕ್ಕಾಗಿಯಾದರೂ ಲೇಖಕಿಯರು ಗಂಡು ಹಾಕಿಟ್ಟ ಸಾಹಿತ್ಯದ ಚೌಕಟ್ಟುಗಳಾಚೆ ಇಣುಕಬೇಕಾಗಿರುವುದು ತುರ್ತು ಕೂಡಾ ಹೌದು. ಶ್ರೀಮತಿ ಸುನಂದಾ ಕಡಮೆಯವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ; ಲೇಖಕಿಯರಿಗೆ ಎಷ್ಟೆಲ್ಲಾ ಕಟ್ಟುಪಾಡುಗಳಿದ್ದವು ಅವರು ಬರೆವಣಿಗೆ ಶುರುಮಾಡಿದ ಸಮಯದಲ್ಲಿ, ಮುಂದೊಂದು ದಿನ ಮುಕ್ತವಾಗಿ ಬರೆಯುವಂಥ ವಾತಾವರಣ ಸೃಷ್ಟಿಯಾದೀತೇನೋ ಎಂದು. ನಾವಿನ್ನೂ ಆ ಮುಕ್ತತೆಯ ಹಾಗೂ ಬದಲಾವಣೆಯ ಹೊಸ್ತಿಲಲ್ಲೇ ಇದ್ದೇವಾ; ಗೊತ್ತಿಲ್ಲ! ಆದರೆ, ಕೆಲವು ಲೇಖಕಿಯರು ಇಂಥ ಪ್ರಯತ್ನಗಳನ್ನು ಮಾಡ್ತಿರೋದು ಸಂಭ್ರಮದ ಸಂಗತಿಗಿಂತ ಚೂರೇ ಚೂರು ಕೂಡಾ ಕಡಿಮೆಯಲ್ಲ. 


ಶ್ರೀಮತಿ ಸುನಂದಾ ಅವರ ಊರು ಉತ್ತರ ಕನ್ನಡದ ಅಲಗೇರಿ, ನನ್ನ ಊರು ಅದೇ ಉತ್ತರ ಕನ್ನಡದ ತಲಗೇರಿ. ಅವರ 'ಬರೀ ಎರಡು ರೆಕ್ಕೆ'ಯಲ್ಲಿ ಬರುವ ಒಂದು ಊರಿನ ಹೆಸರು ಹಟ್ಟಿಕೇರಿ; ನನ್ನೂರಿನ ಪಕ್ಕದ ಊರ ಹೆಸರೂ ಹಟ್ಟಿಕೇರಿ. ಅವರ ಈ ಕಾದಂಬರಿಯಲ್ಲಿ ಇರುವ ಸಂಭಾಷಣೆಗಳಲ್ಲಿ ಆಗಾಗ ಹಾಲಕ್ಕಿ ಒಕ್ಕಲಿಗರ ಮಾತುಗಳು ಬರುತ್ತವೆ. ನಮ್ಮ ಮನೆ ಇರೋದು ಕೂಡಾ ಈ ಹಾಲಕ್ಕಿ ಸಮಾಜದ ಕೊಪ್ಪದಲ್ಲಿ. ಹಾಗಾಗಿ ಈ ಕತೆಯಂತೂ ನನಗೆ ನನ್ನೂರನ್ನು ತಂದು ಎದುರಿಗಿಟ್ಟಂತೆ ಕಂಡಿದ್ದರಲ್ಲಿ ಯಾವ ಅನುಮಾನವೂ ಇಲ್ಲ. ಹಾಲಕ್ಕಿ ಹೆಂಗಸರು ಯಾವತ್ತೂ ಗಟ್ಟಿಗರು. ಗಂಡಸಿಗೆ ಸರಿಸಮನಾಗಿ ಕೆಲಸ ಮಾಡುವವರು. ಹಾಗಿದ್ದರೂ ಸಂಜೆ ಗಂಡ ಕುಡಿದು ಬಂದಾಗ ಅವನಿಂದ ಹೊಡೆತ ತಿನ್ನುತ್ತಿದ್ದರು. ಕುಡಿದ ವ್ಯಕ್ತಿ ತಾನಾಗಿ ನಿಂತುಕೊಳ್ಳೋದಕ್ಕೇ ಆಗೋದಿಲ್ಲ, ಅಂಥವನ ಕೈಲಿ ಇಷ್ಟು ಗಟ್ಟಿಗಿತ್ತಿಯರು ಯಾಕೆ ಒದೆ ತಿನ್ನುತ್ತಾರೆ; ಯಾಕೆ ತಿರುಗಿ ನಾಲ್ಕು ಬಾರಿಸೋದಿಲ್ಲ ಅನ್ನುವ ಪ್ರಶ್ನೆ ನನ್ನನ್ನು ಮುಂಚೆಯೂ ಕಾಡಿತ್ತು; ಈಗಲೂ ಪ್ರಶ್ನೆ ಇದೆ ಅಲ್ಪ ಸ್ವಲ್ಪ ಸಮಾಧಾನಕರ ಉತ್ತರಗಳೊಂದಿಗೆ. ಮೊದಲನೆಯದಾಗಿ ಗಂಡನೇ ದೇವರು, ಎಷ್ಟಿದ್ದರೂ ಗಂಡ ಅನ್ನುವ ಒಂದು ಗೌರವ ಭಾವ, ಇನ್ನೊಂದು ರಾತ್ರಿ ಗಂಡ ಕುಡಿದಿದ್ದಾಗ ಹೊಡೆದುಬಿಡಬಹುದು, ಆಮೇಲೆ ಬೆಳಿಗ್ಗೆ ಕುಡಿತದ ನಶೆ ಇಳಿದಾಗ ಗಂಡಸು ಏನಿದ್ದರೂ ಗಂಡಸೇ ಅಲ್ಲವೇ ಅನ್ನುವ ಭಯವೂ ಇರಬಹುದು. ಆದರೂ, ಅವರು ಮನಸ್ಸು ಮಾಡಿದರೆ ಏನೆಲ್ಲವನ್ನು ಮಾಡಬಹುದು. 


ಮೊದಲೇ ಹೇಳಿದ ಹಾಗೆ, ಎಲ್ಲಾ ವ್ಯಕ್ತಿಗಳಿಗೂ ಅವರವರದ್ದೇ ಆದ ತತ್ವ ಸಿದ್ಧಾಂತಗಳಿರುತ್ತವೆ. ಕತೆ ಹೇಳುವವರು ತಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಕತೆಯಲ್ಲಿಡದೆಯೇ ಕತೆಯ ಅಗತ್ಯವನ್ನಷ್ಟೇ ಪೂರೈಸಬೇಕು ಅನ್ನುವುದು ಒಂದು ನಿಯಮ. ಬರೆಹಗಾರ ಎಲ್ಲ ಸಲವೂ ಸಮಾಜವನ್ನು ತಿದ್ದುವುದಕ್ಕೆ ಹೋಗಬೇಕು ಅಂತೇನಿಲ್ಲ ಅನ್ನುವುದು ಕೆಲವು ಸಾಹಿತಿಗಳ ಮಾತಾದರೆ, ಸಮಾಜದ ದನಿಯಾಗದ ಸಾಹಿತ್ಯ ಇದ್ದೇನು ಪ್ರಯೋಜನ ಅನ್ನುವುದು ಹಲವರ ಅಭಿಪ್ರಾಯ. ಅದೇನೇ ಇದ್ದರೂ, ವಾಚ್ಯವಾಗದೇ ಸೂಚ್ಯವಾದರೆ ಮಾತ್ರ ಬರೆಹಕ್ಕೊಂದು ನಾಜೂಕುತನ ಬರುವುದಕ್ಕೆ ಸಾಧ್ಯ. ಬರೆಹ ಯಾಕೆ ನಾಜೂಕಾಗಬೇಕು ಅನ್ನುವ ಪ್ರಶ್ನೆ ಇದಿರಾದರೆ, ನಾಜೂಕಿಗೆ ಒಂದು ಸೂಕ್ಷ್ಮತೆಯಿದೆ; ಆ ಸೂಕ್ಷ್ಮತೆ ಸಾಹಿತ್ಯಕ್ಕೆ ಬೇಕು ಅಂದರೆ ತಪ್ಪಲ್ಲ‌ ಅಲ್ಲವಾ? 'ಬರೀ ಎರಡು ರೆಕ್ಕೆ'ಯಲ್ಲಿರುವುದು ಇಂಥ ನಾಜೂಕುತನ. ಇಲ್ಲಿ ಉತ್ತರ ಕನ್ನಡದ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಅತ್ಯಂತ ಪ್ರಾಮಾಣಿಕವಾಗಿ, ಯಾವ ಪೂರ್ವಗ್ರಹವೂ ಇಲ್ಲದೇ ಕಟ್ಟಿಕೊಡಲಾಗಿದೆ. ಹಾಗಂತ ಇದು ಯಾರ ದನಿಯೂ ಆಗಿಲ್ಲವಾ ಅಂದರೆ, ಅತಿರೇಕಗಳಿಲ್ಲದೇ ನಾಟಕೀಯ ಪ್ರಲೋಭಗಳಿಲ್ಲದೆಯೂ ದನಿಯಾಗಬಹುದು ಅನ್ನುವುದು ಈ ಕಾದಂಬರಿಯ ಮೂಲಕ ಕಣ್ಣ ಮುಂದಿದೆಯಲ್ಲಾ! ಮದುವೆ ಬೇಡ ಬೇಡ ಅನ್ನುತ್ತ ದಿಟ್ಟವಾಗಿ ಮಾತನಾಡಿ ಕೊನೆಗೆ ಆ ಕಾಲಕ್ಕೆ ಅತ್ಯಂತ ಆಧುನಿಕ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಹುಡುಗಿಯೂ, ಮೌನವನ್ನೇ ತನ್ನ ಪ್ರತಿಭಟನೆಯ ದನಿಯಾಗಿಸಿಕೊಂಡು ಅಸಹಾಯಕತೆಯಿಂದಲೇ ಸಂಸಾರದ ಸಮತೋಲನ ಕಾಯ್ದುಕೊಳ್ಳಲು ಹೆಣಗುವ ಪಾತ್ರವೂ ಒಂದೇ ಮುಖದ ಎರಡು ಪ್ರತಿಬಿಂಬಗಳಂತೆ ಕಂಡರೆ ಅದು ಅಸಹಜವೇನಲ್ಲ ಅಂತನಿಸುತ್ತದೆ ನನಗೆ. ಈ ಕಾದಂಬರಿಯಲ್ಲಿ ಬಹುತೇಕ ಎಲ್ಲರಿಗೂ ತಮ್ಮ‌‌ ದೈನಿಕ ತೊಳಲಾಟಗಳಿಂದ ಬಿಡುಗಡೆ ಸಿಗುತ್ತದೆ. ನಿತ್ಯದ ನೆಲ ಬಿಟ್ಟು ಹಾರಲು ರೆಕ್ಕೆ ಸಿಗುತ್ತದೆ. 


ಈ ಕಾದಂಬರಿಯಲ್ಲಿ ಬಳಸಿದ ಭಾಷೆಯ ಕುರಿತಾಗಿ ಲೇಖಕಿ‌ ಒಂದು ಕಡೆ ಹೇಳಿಕೊಂಡಿದ್ದಾರೆ;"ಭಾಷೆಯು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಭಾಷೆಗೆ ಆ ನೆಲದ ಸೊಗಡು ಇರುತ್ತದೆ". ಉತ್ತರ ಕನ್ನಡದ ಸ್ಥಳೀಯ ಪದಗಳನ್ನು, ಗ್ರಾಮ್ಯ ಪದಗಳನ್ನು ಕಾದಂಬರಿಯಲ್ಲಿ ಬೇಕಾದಷ್ಟು ಬಳಸಲಾಗಿದೆ. ಒಂದು ಜಾಗದ ಸಂಸ್ಕೃತಿಯ ಸೊಗಡನ್ನು ಮನಸಾರೆ ಅನುಭವಿಸಬೇಕಾದರೆ ಅಲ್ಲಿನ ಭಾಷೆಯನ್ನು ಅರಿತುಕೊಳ್ಳುವುದು ಕೂಡಾ ಬಹಳ ಮುಖ್ಯ ಅಲ್ಲವಾ? ಹಾಗೂ ಒಂದು ಪ್ರಾದೇಶಿಕ ಭಾಷೆ ಪುಸ್ತಕದಲ್ಲಿ ದಾಖಲಾಗುವುದು ಕೂಡಾ ಅಷ್ಟೇ ಮುಖ್ಯ. ಪ್ರತಿ ಸಂಭಾಷಣೆಗೂ ಆ ಪ್ರದೇಶದ ಸಾಮಾಜಿಕ ಸಂಗತಿಯನ್ನು ಬಿಚ್ಚಿಡುವ ಸಾಮರ್ಥ್ಯ ಸಿಗೋದು ಸ್ಥಳೀಯ ಪದಗಳನ್ನು ಬಳಸಿಕೊಂಡಾಗಲೇ. ಅದಕ್ಕಾಗಿಯೇ ಕೆಲವೊಮ್ಮೆ ಸಾಹಿತ್ಯ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಂಡಾಗ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುವುದು. 


ಪುಸ್ತಕದ‌ ಕುರಿತಾಗಿ, ಕತೆಯ ಕುರಿತಾಗಿ ಹೇಳಬಹುದು ಅಂತ ಅಂದುಕೊಂಡು ನೀವಿದನ್ನು ಓದಲು ಶುರು ಮಾಡಿ, ಈಗ ಅದನ್ನು ಬಿಟ್ಟು ಉಳಿದೆಲ್ಲವೂ ಇದೆ ಅಂತನ್ನಿಸಿದರೆ ಅದು ಪ್ರಜ್ಞಾಪೂರ್ವಕ ಕೃತ್ಯ ಅಂತಲೇ ಅಂದುಕೊಳ್ಳಬೇಕಾಗಿ ವಿನಂತಿ. ಈ ಎರಡೂ ಪುಸ್ತಕಗಳನ್ನು ತಪ್ಪದೇ ಓದಿ ಅನ್ನುವುದು ಸ್ಪಷ್ಟ‌ ಹಾಗೂ ನೇರ ಕೋರಿಕೆ. 


- 'ಶ್ರೀ' 

   ತಲಗೇರಿ

ಶನಿವಾರ, ಫೆಬ್ರವರಿ 12, 2022

ತಂಗಾಳಿಯೊಂದಿಗೊಂದು ಅಸ್ಪಷ್ಟ ಗಂಧ!



ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ‌. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..

ಈ ಪುಸ್ತಕದ ಕುರಿತಾಗಿ ಯಾರ್‍ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ್ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ‌ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!

ಪ್ರೇಮದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ‌ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ‌ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ‌ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ.

ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ‌ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ‌ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'.

ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ.

ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ‌ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು.

ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ!

ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ‌ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ!

- 'ಶ್ರೀ'
   ತಲಗೇರಿ

ಭಾನುವಾರ, ಆಗಸ್ಟ್ 29, 2021

ಒಂದು ಶೃಂಗಾರದ ರಾತ್ರಿ



ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಬೆಳಕಿನ ರಂಗೋಲಿ ಇಡುವ ವಾಹನಗಳ ಸಂಖ್ಯೆ ಚೂರು ಕಡಿಮೆಯಾಗಿತ್ತು. ನಗರಕ್ಕೆ ರಾತ್ರಿಯಾಗುವುದಿಲ್ಲವಾದರೂ ಬಹುತೇಕ ಅಂಗಡಿಗಳು ಮುಸುಕೆಳೆದುಕೊಂಡು ಮಲಗುವ ತಯಾರಿಯಲ್ಲಿದ್ದವು. ಅಲ್ಲಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ನೀಲಿ, ಚಿನ್ನದ ಬಣ್ಣದ ಮಿಣುಕು ಹುಳಗಳಂಥ ಬೆಳಕಿದ್ದರೂ ಅವು ಕಪ್ಪು ಉಡುಪಿಗೆ ಪೋಣಿಸಿದ ಮಣಿಗಳ‌ ಹಾಗೆ ಅಂತ ಅನಿಸಿದ್ದು ಹೌದು ನನಗೆ. ಅದರಲ್ಲೂ ಈಗ ನಾವಿರುವ ಹೊತ್ತಿನಲ್ಲಿ ಇಡೀ ಜಗತ್ತಿಗೆ ಅದ್ಯಾವುದೋ ಬರಿಗಣ್ಣಿಗೆ ಕಾಣದ್ದರ ಭೀತಿ ಬೇರೆ. ಹಾಗಾಗಿಯೇ ಇರಬೇಕು, ನಾವೆಲ್ಲರೂ ಒಂಥರಾ ಮೌನಕ್ಕೆ ಶರಣಾಗಿಬಿಟ್ಟಿದ್ದೇವೆ ಅಂತನ್ನುವ ಭಾವ ಪದೇ ಪದೇ ಒತ್ತರಿಸಿಕೊಂಡು ಬರುತ್ತದೆ ಈಗೀಗ ನನಗೆ. ಇದನ್ನು ಅವನಿಗೆ ಹೇಳಬೇಕು ಅಂದುಕೊಂಡಾಗಲೆಲ್ಲಾ, ಇದೆಂಥಾ ಇದು ರಗಳೆ, ಇದನ್ನೆಲ್ಲಾ ಹೇಳಿ ಅವನ ಮನಸ್ಸನ್ನು ಕದಡುವುದು ಯಾಕೆ? ಮೊದಲೇ, ನನ್ನ ಮನಸ್ಸು ವಿಚಲಿತವಾಗಿದೆ ಅನ್ನುವ ಸೂಚನೆ ಸಿಕ್ಕರೂ ಸಾಕು, ಉಳಿದೆಲ್ಲ ಕೆಲಸ ಬದಿಗಿಟ್ಟು ನನ್ನ ಉಪಚಾರಕ್ಕೆ ನಿಂತುಬಿಡುತ್ತಾನೆ. ಅವನದು ಉಸಿರುಗಟ್ಟಿಸುವ ಪ್ರೀತಿಯಲ್ಲ, ಅದೇ ಸಮಾಧಾನ ಹಾಗೂ ಬಹುಶಃ ಬದುಕು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಅಂತ ಅಂದುಕೊಳ್ಳುತ್ತಿರುವಾಗಲೇ, ಕೈಕಾಲು ಮುಖ ತೊಳೆದುಕೊಂಡು ಮಲಗಬೇಕು ಅಂದುಕೊಳ್ಳುತ್ತ ಅವ ಬಂದ. ಏನೋ ಗುಯ್ ಅಂತಿರೋ ಹಾಗಿದೆ ತಲೇಲಿ, ಚೂರು ಶಬ್ದ ಈ ಕಡೇನೂ ಕೇಳ್ತಿದ್ಯಪಾ ಅಂತ ತಮಾಷೆಯಾಗಿ ಹೇಳಿದ, ಅವನದು ಇದು ಯಾವತ್ತಿನ ವರಸೆ. ಏನಿಲ್ಲ, ಏನೋ ಒಂದು.. ಅಂದೆ ನಾನು. ಅಷ್ಟರಲ್ಲಿ ಮಳೆ ಶುರುವಾಯಿತು ಅನಿಸುತ್ತದೆ. ಈ ನಮ್ಮ ನಗರದ ಮಳೆಗೆ ಇದೊಂದು ಒಳ್ಳೆಯ ಅಭ್ಯಾಸವಿದೆ. ಮಲಗುವಾಗಲಾದರೂ ವಾತಾವರಣ ತಂಪಾಗಿರಲಿ ಅನ್ನುವ ಕಾರಣಕ್ಕೇ ತಾನು ಬಂದು ಲಾಲಿ ಹಾಡುವ ಹಾಗೆ, ಸುಮಾರು ಎಲ್ಲರೂ ಮಲಗುವ ಸಮಯಕ್ಕೇ ಹಾಜರಾಗುತ್ತದೆ ಅಪರೂಪಕ್ಕೆ ಮಳೆ. ಇದನ್ನೂ ಅವನೇ ಹೇಳಿದ.. ನಾನು ಇನ್ನೂ ಹಾಗೆಯೇ ಕುಳಿತಿದ್ದನ್ನು ನೋಡಿ, ನನ್ನ ಭುಜದ ಮೇಲೆ ಕೈಯಿಟ್ಟು, ಬಾ ಒಂದೊಂದ್ ಕಪ್ ಚಾ ಕುಡಿಯುವ ಅಂದ! ಮಲಗೋ ಹೊತ್ತಲ್ಲಿ ಇವಂದೆಂಥಾ ಚಾ ಹುಚ್ಚು ಅಂತ ಕಣ್ಣು ಹುಬ್ಬು ಗಂಟಿಕ್ಕಿಕೊಳ್ಳುತ್ತಾ ಅನುಮಾನದಲ್ಲಿ ಅವನನ್ನು ನೋಡಿದೆ. ಅರೇ, ಹೋಗು ಬಾಲ್ಕನೀಲಿ ಮೇಣದ ಬತ್ತಿ ಹಚ್ಚು, ನಾನು ಚಾ ಮಾಡ್ಕೊಂಡ್ ತಗೊಂಡ್ ಬರ್ತೀನಿ,  ಮಳೆ ಜೋರಾಗೋ ಥರಾನೂ ಕಾಣ್ತಿದೆ, ಈಗ್ ಚಾ ಕುಡ್ದ್ರೆ ಸಖತ್ ಮಜಾ ಇರತ್ತೆ ಅಂದ. 'ಅಪ್ಪಣೆ ಮಹಾಪ್ರಭು' ಅಂತ ಎದ್ದು ನಾನು ನನ್ನ ಪಾಲಿನ ಕೆಲಸ ಮಾಡುವುದಕ್ಕೆ ಹೊರಟೆ, ನನಗೂ ಚೂರು ಬೇರೆ ಯೋಚನೆಗಳು ಇಷ್ಟೇ ಇಷ್ಟು ಹೊತ್ತಾದರೂ ಬರಲಿ ಅನ್ನುವ ಇಂಗಿತ ಇದ್ದಂತಿತ್ತು ಹಾಗೂ 'ಏನ್ ಮಾಡ್ತಾನೆ ಇವ್ನು' ಅನ್ನೋ ಕುತೂಹಲಾನೂ ಇತ್ತು. 


ಗಾಳಿ ಅಷ್ಟೇನು ಇರದೇ ಇದ್ದುದಕ್ಕೆ ಮೇಣದಬತ್ತಿ ಹಚ್ಚುವುದು ಕಷ್ಟ ಆಗಲಿಲ್ಲ. ಆದರೂ ಎಲ್ಲಿ ಮಳೆ ನೀರು ತಾಗಿ ನಂದಿಹೋಗುತ್ತದೋ ಅನ್ನುವ ಅಳುಕಿತ್ತು. ಅಷ್ಟರಲ್ಲಿ ಅವ ಎರಡು ಕಪ್ ಚಹಾದೊಂದಿಗೆ ಬಂದ. ನಮ್ಮ ಮನೆಯ ಬಾಲ್ಕನಿಯಿರುವುದು ರಸ್ತೆಗೆ ಅಭಿಮುಖವಾಗಿ ಅಲ್ಲ. ಬಾಲ್ಕನಿಯ ಎದುರಿಗಿರುವುದು ಒಂದು ಉದ್ಯಾನವನ. ನಾವಿಬ್ಬರೂ ಒಟ್ಟಿಗೆ ಕೂತು ಚಹಾ ಕುಡಿಯುವಾಗಲೆಲ್ಲಾ ಆ ಉದ್ಯಾನವನದ ಕಡೆಗೇ ಮುಖ ಮಾಡಿ ಕೂರುವುದು. ಹಾಗೆ ಕೂತು ಚಹಾದ ಒಂದೊಂದೇ ಗುಟುಕು, ಚಹಾ ಸೊಪ್ಪಿನೊಂದಿಗೆ ಹಾಲು ಸೇರಿ ಉಂಟುಮಾಡುವ ಬಣ್ಣ ತುಟಿಗೆ, ನಾಲಿಗೆಗೆ ತಾಕುವಾಗಿನ ಸ್ಪರ್ಶವನ್ನೂ, ಅದರ ಬಿಸಿಯನ್ನೂ, ಉಗಿಯಲ್ಲಿರುವ ಪರಿಮಳವನ್ನೂ ಅನುಭವಿಸುತ್ತಾ ನಾವು ಚಹಾ ಕುಡಿಯುವ ಸಂಭ್ರಮವನ್ನು ನೋಡಲು ಯಾರಾದರೂ ಎದುರಿಗೆ ಇದ್ದರೆ ಖಂಡಿತಾ ಅವರ ರೋಮ ರೋಮಗಳಲ್ಲೂ ಸುಖದ ಉತ್ತುಂಗದ ಅನುಭವವಾಗುತ್ತಿತ್ತೇನೋ, ಚಹಾ ಕುಡಿಯುವುದೆಂದರೆ ನಮಗೆ ಭವಬಂಧನಗಳಿಂದ ಮುಕ್ತವಾಗುವ ಮಾಯಕದ ಕ್ಷಣ. ಇವತ್ತೂ ಚಹಾ ಕುಡಿಯುವ ಕಾರ್ಯಕ್ರಮ ಹಾಗೆಯೇ ಮುಗಿಯಿತು. ಈಗ ವಂದನಾರ್ಪಣೆ ಅನ್ನುವ ಹಾಗೆ ನನ್ನ ಕಡೆಗೆ ತಿರುಗಿ  ಅವ, "ಈಗ ಹೇಳು, ಏನಾಯಿತು?" ಅಂತ ಮೃದುವಾಗಿ ಕೇಳಿದ. ಅವ ಕೇಳುವುದೇ ಹಾಗೆ! 


ಅವ ಕೇಳಿದ ಮೇಲೆ ಅವನಿಗೆ ಹೇಳದೇ ಯಾವುದನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ. ಒಂದು ಭೋರ್ಗರೆತ ನನ್ನೊಳಗೆ ಹುಟ್ಟಿಕೊಂಡಿದ್ದು ನನ್ನ ಅನುಭವಕ್ಕೆ ಬಂತು. ಆ ಭೋರ್ಗರೆತದ ರೌರವವನ್ನೂ ಕೂತು ಕೇಳುವ ತಾಳ್ಮೆ ಅವನಲ್ಲಿತ್ತು. ಕಡಲ‌ ತಡಿಯಲ್ಲಿ ಕಪ್ಪು ಕಲ್ಲುಗಳ‌ ಮೇಲೆ ಲವಣದ ಪರಿಮಳದ‌ ಗಾಳಿಗೆ ಮೈಯೊಡ್ಡಿ ಯಾವ ಗಡಿಬಿಡಿಯೂ ಇಲ್ಲದೆಯೇ ಕೂರುತ್ತೇವಲ್ಲಾ ಅಂಥ‌ ಶಾಂತತೆ ಅವನದು. ನನ್ನ ಕಣ್ಣಲ್ಲಿ ಅವ ಕಣ್ಣಿಡುವಾಗಲೇ ನನ್ನರ್ಧ ತಳಮಳಗಳನ್ನು ಅಪಹರಿಸಿಬಿಡುತ್ತಿದ್ದ. ನನಗೂ ಮೊದಮೊದಲಿಗೆ ಇಂಥವನೊಬ್ಬ ಇರುವುದಕ್ಕೆ ಸಾಧ್ಯವಾ, ಅಥವಾ ಇವೆಲ್ಲವೂ ನಾನೇ ನನಗಾಗಿ ಕಟ್ಟಿಕೊಂಡ ಭ್ರಮೆಗಳಾ‌ ಅನ್ನುವ ಅನುಮಾನಗಳು ಬಹಳಷ್ಟಿದ್ದವು. ನನ್ನೆಲ್ಲ ಪ್ರಶ್ನೆಗಳಿಗೆ ಪ್ರತೀ ಸಲವೂ ಅವ ಉತ್ತರವಾಗಿ ನಿಲ್ಲುತ್ತಿದ್ದ. ಇವತ್ತೂ ಅಷ್ಟೇ, ಅವ ಕೇಳಿದನಲ್ಲ, ಕೇಳುವುದರಲ್ಲೂ ಹಲವು ಬಗೆಗಳಿರುತ್ತವೆ. ಕೆಲವೊಮ್ಮೆ ಕೇಳಬೇಕು ಅಂತ ಕೇಳುವುದು, ಇನ್ನು ಕೆಲವೊಮ್ಮೆ ಕೇಳಲೇಬೇಕು ಅಂತ ಕೇಳುವುದು. ಇವನದು 'ಹೇಳು, ಕೇಳಿಸಿಕೊಳ್ಳುವುದಕ್ಕೆ ನಾನಿದ್ದೇನೆ' ಅನ್ನುವ ಸಾಂಗತ್ಯದ ಭರವಸೆ. ಅವನ ಎಡತೋಳನ್ನು ನನ್ನ ಬಲತೋಳಿಂದ ಬಳಸಿದೆ. ಅವನ ಬೆರಳುಗಳ ಮಧ್ಯದಲ್ಲಿ ನನ್ನ ಬೆರಳುಗಳನ್ನು ಹೊಸೆದೆ. ಒಂದು ಬಿಸಿಯಾದ ಅನುಭವ ಅವನ ರೋಮಗಳಿಂದ ನನ್ನ ಚರ್ಮಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಪ್ರೀತಿಸುವವರ ಒಂದು ಸ್ಪರ್ಶದಲ್ಲಿ ಎಲ್ಲ ಗಾಯಗಳನ್ನೂ ಹೊಲಿದು, ಮಾಯಿಸುವ ಔಷಧವಿದೆ ಅಂತ ಅವನೇ ಆಗಾಗ ಹೇಳುತ್ತಿರುತ್ತಾನೆ. ನಾನು ಅವನ‌ ಎದೆಗೆ ಒರಗಿಕೊಂಡಾಗಲೆಲ್ಲಾ, ಶತ ಶತಮಾನಗಳಿಂದ ಚೂರು ಬಿಸಿಲು ಕಡಿಮೆಯಾಗಬಹುದೆಂದು ಕಾಯುತ್ತಿರುವವನ ಎದೆಗೇ ಮರವೊಂದು ತನ್ನ ರೆಂಬೆಕೊಂಬೆಗಳ ಚಾಚಿ ನೆರಳ ಹಾಸಿದಂತೆ ಇದು ಅಂತ ನನ್ನ ಕುರಿತು ಯಾವಾಗಲೂ ಅವ ಹೇಳುತ್ತಿರುತ್ತಾನೆ. ಅವನಿಗೆ ಹೇಳಿದೆ, ಎಲ್ಲವೂ ಇದ್ದು ಏನೋ ಕಳೆದುಕೊಂಡಂತೆ; ಎಳೆದುಕೊಂಡ ಉಸಿರು ಮತ್ತೆ ಬಿಡಲಿಕ್ಕೇ ಸಾಧ್ಯವಾಗದಿದ್ದರೆ? ಅನಿಶ್ಚಿತತೆ; ನಾಳೆ‌ ಸೂರ್ಯೋದಯವಾದ ಕೂಡಲೇ ಮತ್ತೆ ಎಲ್ಲವೂ ಹೊಸತಾಗಿ ಶುರುವಾಗುತ್ತದೆ ಬಿಡು ಅಂತಂದುಕೊಂಡರೂ, ಆ ಎಲ್ಲಾ ನಾಳೆಯ ಮುಂಜಾವುಗಳೂ ನಿನ್ನೆಗಳ ಭಾರದೊಂದಿಗೇ ಹುಟ್ಟಿಕೊಂಡಂತೆ ತಳಮಳವಾಗುತ್ತದೆ. ಈ ಹೊತ್ತು ಹೇಗೋ ಕಳೆಯಬಹುದು ಬಿಡು ಅಂತೆಲ್ಲಾ‌ ಅಂದುಕೊಂಡ ಮಾತ್ರಕ್ಕೆ ಹಾಗೆಲ್ಲಾ ಅದು ಕಳೆದುಹೋಗುವುದಿಲ್ಲ. ನಿನಗೆ ಗೊತ್ತಲ್ವಾ, ಮನಸ್ಸು ಭಾರವಾದಷ್ಟೂ ಕಾಲದ‌‌ ಗತಿ ನಿಧಾನವಾಗುತ್ತಾ ಹೋಗುತ್ತದೆ. 


ಅವ ನಿಧಾನವಾಗಿ ನನ್ನ ಕೈಯನ್ನು ಅವನ ಎಡತೋಳಿನಿಂದ ಬಿಡಿಸಿಕೊಂಡ, ಅವನ ಎರಡೂ ತೋಳುಗಳಿಂದ ನನ್ನನ್ನು ಪೂರ್ಣವಾಗಿ ಆವರಿಸಿಕೊಂಡು ಅವನೆದೆಗೆ ಮತ್ತೆ ನನ್ನ ತಲೆ ಒರಗುವಂತೆ ಚಾಚಿಕೊಂಡ. ಒಂದು ಕ್ಷಣ ಅವನ ಕೆನ್ನೆಗಳಲ್ಲಿ ಮಂದಹಾಸದ ಗೆರೆಗಳು ಮೂಡಿ ಅಲ್ಲೇ ನೆಲೆಸಿದಂತೆ ಕಂಡವು, ನಾನು ಒರಗಿದಲ್ಲೇ ತಲೆಯೆತ್ತಿ ಅವನನ್ನೇ ನೋಡುವ ಪ್ರಯತ್ನದಲ್ಲಿದ್ದೆ. ನನ್ನ ತಲೆಗೂದಲ ಬುಡದಲ್ಲಿ ಕೈಯಾಡಿಸುತ್ತಾ ಅವ ಕೇಳಿದ, ಯಾಕೆ ಹೀಗೆ ಅನ್ಸ್ತಿದ್ಯಂತೆ?.. ಗೊತ್ತಿಲ್ಲ ಅಂತನ್ನುವುದು ನನ್ನ ಉತ್ತರವೆಂದು ಅವನಿಗೆ ಗೊತ್ತಿತ್ತು. ನಾನೇ ಮುಂದುವರೆದು ಹೇಳಿದೆ,‌ ಏನಾದರೊಂದು ಹೊಸತು ಶುರುವಾದ ಸಮಯದಲ್ಲಿ ಹೊಸತರ ಕುರಿತಾಗಿ ಹೆಚ್ಚು ಗಮನ ಕೊಡುವಾಗ ಹಳೆಯದರ ಕುರಿತಾಗಿ ಗಮನ ಚೂರು ಕಡಿಮೆಯಾದಂತೆ‌ ತೋರುವುದೇನೋ ಹೌದು; ಆದರೆ, ಅದರರ್ಥ ನಾವು ಹಳತನ್ನು ಮರೆತೆವು ಅಂತೇನೂ ಅಲ್ಲ‌ ಅಲ್ವಾ? ಆದರೆ, ಯಾಕೆ ಕೆಲವೇ ಕೆಲವು ಹಳೆಯ ಸಂಬಂಧಗಳು ಮಾತ್ರವೇ ಎಷ್ಟೋ ಕಾಲಗಳ‌ ನಂತರವೂ ಸಹಜವಾಗೇ ಇರುತ್ತದೆ, ಉಳಿದವುಗಳು ಏನೂ ಇರಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೇರೆಯಾಗಿ ಹೋಗುತ್ತವೆ? ಅಷ್ಟೂ ವರ್ಷಗಳ ಕಾಲದ ಅಷ್ಟೂ ನೆನಪನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಬಹುದಾ? ಕೆಲವೊಮ್ಮೆ ಮಾತು ಅನಗತ್ಯವಾಗುತ್ತದೆ, ಆದರೆ ಅದನ್ನೇ‌ ಅಹಂಕಾರ ಅಂತಂದುಕೊಂಡು ದೂರವಾಗಬಹುದಾ? ಅಸ್ಪಷ್ಟ ಸ್ವಪ್ನಗಳಲ್ಲಿ ಒಂದು ಪರಿಚಿತ ದಾರಿಗಾಗಿ ಪರಿತಪಿಸುತ್ತಾ ಇರೋರಲ್ವಾ ನಾವು? ನೀನೇ ಹೇಳು ಹೀಗೆ ಸಂಬಂಧಗಳು ಸವಕಲಾಗಬಹುದಾ? ಗುಮ್ಮನಂತೆ ಮುಖ ಮಾಡಿಕೊಂಡು ಅವನ ನೋಡಿದೆ. ಮುಟ್ಟುತ್ತಿರುವನೋ ಇಲ್ಲವೋ ಅನ್ನುವಂತೆ ಹಣೆಯ ತುದಿಯಿಂದ ತನ್ನ ಬಲಗೈಯ ತೋರುಬೆರಳನ್ನು ಜಾರಿಸುತ್ತಾ ಜಾರಿಸುತ್ತಾ ಕಣ್ಣು ಹುಬ್ಬುಗಳ ಮಧ್ಯದ ಹಾದಿಯಿಂದ ಕೆಳಗಿಳಿದು ಮೂಗಿನ ತುದಿಯಲ್ಲಿ ನಿಂತ, ಪಕ್ಕದ ಮೂಗುತಿ ಹವಾಮಾನ ವೈಪರೀತ್ಯದ ದಾಳಿಗೆ ತುತ್ತಾಗಿ ಅಸ್ಥಿರ ಚಲನೆಯಲ್ಲಿತ್ತು. ಇದು ಹೊಸತಲ್ಲ, ಆದರೂ ಇದು ಮತ್ತೆ ಮತ್ತೆ ಹೊಸತೆನ್ನುವಂಥದ್ದೇ ಅನುಭವ, ಅವನಿಗೆ ಮಾತ್ರ ಗೊತ್ತಿರುವ ನನ್ನ ಗುಟ್ಟು.. 


ಮುಂದುವರೆದು ಅವ ಹೇಳಿದ, ನಿನಗೆ ಗೊತ್ತಾ, ನಾವು ಅದೆಷ್ಟೋ ನೆನಪುಗಳ ನೆರಳುಗಳಿಂದ ಆಚೆ ನಿಂತು ತಾಜಾ ಬಿಸಿಲನ್ನು ನಿಧಾನವಾಗಿ ಉಸಿರಲ್ಲಿ ತುಂಬಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತೇವೆ, ಆದರೆ ಅದು ಬರೀ ಅಷ್ಟೇ ಅಲ್ಲ; ಆ ನೆರಳುಗಳ ನೆನಪಲ್ಲೇ ಈ ಬಿಸಿಯನ್ನು ಅನುಭವಿಸುತ್ತೇವೆ. ಇವೆರಡೂ ಬೇರೆ ಬೇರೆ ಕ್ರಿಯೆಗಳಾದರೂ ಒಂದರ ಅನುಭವವನ್ನು ಇನ್ನೊಂದು ಸಲಹುತ್ತದೆ. ನೆನಪಿದೆಯಾ ನಿನಗೆ, ಆವತ್ತೊಂದಿನ ನಾವು ಆ ಹಳದಿ ಹೂವಿನ ಕಣಿವೆಗೆ ಹೋಗುವ ಮುನ್ನ ರಾತ್ರಿ ಎತ್ತರದ ಭಾಗದ ಮನೆಯಲ್ಲಿ ತಂಗಿದ್ದು.. ಜೀರುಂಡೆಗಳು ಪೂರಾ ರಾತ್ರಿ ಕಿರ್ರೆನ್ನುತ್ತಾ ಕೂಗಿದ್ದು, ಅದ್ಯಾವುದೋ ವಿಲಕ್ಷಣ ಪರಿಮಳ ಅಲ್ಲಿನ ಇಡೀ ವಾತಾವರಣದಲ್ಲಿ ಹರಡಿಕೊಂಡಿದ್ದು, ಅಲ್ಲಿನ ಆ ರಾತ್ರಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ನಾನು ಒದ್ದಾಡುತ್ತಿರುವಾಗ ನೀನು ಅರ್ಧ ರಾತ್ರಿಯವರೆಗೂ ನನ್ನನ್ನು ಹೀಗೇ ಒರಗಿಸಿಕೊಂಡು ನಿನ್ನ ಬಾಲ್ಯದ ಕತೆಗಳನ್ನು ಹೇಳಿ ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು.. ಆವತ್ತು ಆ ಒದ್ದಾಟವನ್ನು ನಾವಿಬ್ಬರೂ ಕಡಿಮೆ ಮಾಡಲಿಕ್ಕಾಗುವುದಿಲ್ಲವೆಂಬುದು ಇಬ್ಬರಿಗೂ ಅರಿವಿತ್ತು. ನಾವು ಆ ಪ್ರಯತ್ನವನ್ನೂ ಮಾಡಲಿಲ್ಲ, ಬದಲಾಗಿ ಬದುಕನ್ನು ಹಂಚಿಕೊಂಡೆವು, ವರ್ತಮಾನದಲ್ಲಿ ಭೂತಕಾಲವನ್ನೂ ನಿನ್ನ ಬಾಲ್ಯವನ್ನೂ ಜೀವಿಸಿದೆವು, ಆ ನೆನಪುಗಳ ಭಾಗವಾಗಿದ್ದ ಅದೆಷ್ಟೋ ವ್ಯಕ್ತಿಗಳು ಈಗ ಜೊತೆಯಲ್ಲಿ ಇಲ್ಲ ಅಲ್ವಾ.. ನಾವು ಯಾವ ನೆನಪನ್ನು ಉಳಿಸಿಕೊಳ್ಳಬೇಕು ಅಂತ ಬಯಸುತ್ತೇವೋ ಅಂಥವುಗಳನ್ನು ಮಾತ್ರ ಉಳಿಸಿಕೊಳ್ಳುತ್ತೇವೆ; ಅವುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಬಹುದು. ಕೆಲವರು ಹಾಗೆಯೇ, ಆ ಭಾಗದ ಬದುಕಿನಲ್ಲಿ ಮಾತ್ರ ಭೇಟಿಯಾಗುವವರು. ಅದರ ನಂತರ ಅವರ ಅಸ್ತಿತ್ವವೆನ್ನುವುದು ಸ್ವಪ್ನದ ಹಾಗೆ. ಯಾವುದೋ ಅನಪೇಕ್ಷಿತ ಸಮಯದಲ್ಲಿ ಧುತ್ತನೆ ನೆನಪಾಗಬಹುದು; ಅಥವಾ, ಕೆಲವೊಮ್ಮೆ ಮುಗುಳುನಗೆಯೊಂದಿಗೆ ವರ್ತಮಾನವನ್ನು ಉಲ್ಲಸಿತಗೊಳಿಸಬಹುದು. ನಿನ್ನ ಅನಿಶ್ಚಿತತೆ, ನಿನ್ನ ನೆನಪುಗಳು ಹಾಗೆಯೇ ಇರಲಿ ಬಿಡು, ಈಗ ಇರುವ 'ನೀನು' ಆಗಿರುವುದು ಈ ಎಲ್ಲ ಅನುಭವಗಳಿಂದಲೇ.. ಅವುಗಳನ್ನೇ ತಿರಸ್ಕರಿಸಿದರೆ ನಿನ್ನನ್ನೇ ತಿರಸ್ಕರಿಸಿದಂತೆ. ಬದುಕು ಎಲ್ಲದರ ಒಟ್ಟೂ ಮೊತ್ತ, ಬಿಡಿ ಹತ್ತುಗಳ ಲೆಕ್ಕದಲ್ಲಿ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಅಲ್ವಾ..  ಇವತ್ತು ನಾ ನಿನಗೆ ನನ್ನ ಬಾಲ್ಯದ ಕತೆಗಳನ್ನು ಹೇಳ್ತೀನಿ, ನಿನ್ನಷ್ಟು ಚೆಂದ ಅಲ್ಲ, ಆದ್ರೂ, ಏನೋ ಚೂರು ಹಾಂಗೇ.. ಅನ್ನುತ್ತಾ ನನ್ನ ಮೂಗನ್ನು ತನ್ನ ಬೆರಳಿಂದ ಕುಟುಕಿದ. 


ಅವರಿಬ್ಬರೂ ಎರಡು ಗಾಯಗಳು ಒಂದಕ್ಕೊಂದು ಅಂಟಿಕೊಂಡಂತೆ ಕೂತಿದ್ದರು. ಬೇಗ ಮಾಯುವುದಕ್ಕಿಂತ ಆ ನೋವಿನ ಪ್ರತಿ ಕ್ಷಣವನ್ನೂ ಜೀವಿಸುವುದೇ ಮುಖ್ಯ ಎನ್ನುವಂತೆ.. ಬೇಕಂತಲೇ ಒಂದು ಸಣ್ಣ ಕಲೆ ಉಳಿಸಿಕೊಳ್ಳುವಂತೆ.. ಅನಾಥ ಮೌನದ ಕಣಕಣಗಳಲ್ಲೂ ಮಳೆಯ ಹಾಡು ಇನ್ನಷ್ಟು ವಿಲೀನವಾಗಿತ್ತು, ಆ ರಾತ್ರಿ ಮತ್ತಷ್ಟು ಪ್ರೌಢವಾಗಿತ್ತು...


~`ಶ್ರೀ'

   ತಲಗೇರಿ

ಬುಧವಾರ, ಜುಲೈ 14, 2021

ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?

 ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ  ಇತ್ಯಾದಿ...?



ಯಾವುದು ಕತೆಯಾಗಬಹುದು? ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಕತೆಗಳು ಸಿಗದೇ ಹೋಗಬಹುದು. ಆದರೆ, ಕತೆಗಾರನಿಗೆ ಸಿಕ್ಕಿದ್ದೆಲ್ಲವೂ ಕತೆಯೇ. ಮುಂಚೆ ಇದ್ದಂಥ ಕತೆಯ ಸ್ವರೂಪ, ಉದ್ದೇಶ, ರಚನಾ ತಂತ್ರ ಮತ್ತು ಅದರ ವಸ್ತುಗಳು ಕಾಲದ ಸ್ಪಂದನೆಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ ಈಗಿನ ಕತೆಯ ಮಿಡಿತಗಳು ಬೇರೆಯದೇ ಆಗಿ ನಮಗೆ ಸಿಗುತ್ತವೆ. 'ಅಲ್ಲಿಗೆ ಎಲ್ಲ ಮುಗಿದು, ಅಲ್ಲಿ ಎಲ್ಲರೂ ಸುಖವಾಗಿದ್ದರು' ಎನ್ನುವ ಕತೆಗಳಿಂದ ಈಗ ನಾವು ಇನ್ನಷ್ಟು ವಿಸ್ತಾರವನ್ನು ಹುಡುಕಿ ಹೊರಟಿದ್ದೇವೆ. ಒಟ್ಟಾರೆ ಬದುಕಿಗಿಂತ, ಅದರಲ್ಲಿ ಇರುವ ಕ್ಷಣಗಳನ್ನು ಬಿಡಿಸಿಟ್ಟು, ಅವುಗಳ ಮುಖೇನ ಇಡೀ ಬದುಕನ್ನು ನೋಡುವ ಈ ಕ್ರಮವೂ ಒಂಥರಾ ಚೆಂದವೇ. ಬಹಳಷ್ಟು ಸಲ ಅನಿಸುವುದೇನೆಂದರೆ, ನಮ್ಮದೇ ಬದುಕಿನಿಂದ ಕತ್ತರಿಸಿ ತೆಗೆದ ಭಾಗಗಳಿಗೆ ಹಿಡಿದ ಕನ್ನಡಿಯೇ ಕತೆ. ಬಿಂಬಗಳು ನಾವು, ನೀವು ಯಾರೂ ಆಗಿರಬಹುದು. ಅದಕ್ಕಾಗಿಯೇ ಓದುಗ ಆ ಕಥಾ ಪರಿಸರದಲ್ಲಿ ತಾನು ಹೊಕ್ಕದೇ ಓದುತ್ತೇನೆಂದರೆ, ಆ ಕತೆ ಓದುಗನಲ್ಲಿ ಹೊಕ್ಕುವುದು ತುಸು ಕಷ್ಟವೇ! ಓದುಗನಲ್ಲಿ ಅದೆಂಥದ್ದೇ ಜ್ಞಾನವನ್ನು, ತಿಳಿವಳಿಕೆಯನ್ನು ಅದು ಬಿತ್ತಿದರೂ ಆ ಕ್ಷಣಕ್ಕೆ ಉಂಟಾಗುವ ಭಾವತೀವ್ರತೆಯೇ ಈ ಎಲ್ಲಾ ಕಥಾ ಪ್ರಪಂಚದ ಅಸ್ತಿತ್ವದ ಮೂಲ; ಇದು ಕೇವಲ ಕತೆಗಳಿಗೆ ಸೀಮಿತವಲ್ಲ, ಎಲ್ಲಾ ಕಲಾ ಪ್ರಕಾರಗಳಿಗೂ ಇದು ಸಮಂಜಸ ಅಂತನ್ನಬಹುದೇನೋ. ಬಹುತೇಕ ಎಲ್ಲ ಓದುಗರಿಗೂ ತಮ್ಮ ತಮ್ಮ ನಂಬಿಕೆಗಳ ಪ್ರಭಾವಲಯದಿಂದ ಆಚೆ ನಿಂತು ಈ ಹೊಸ ಪ್ರಪಂಚದಲ್ಲಿ ಸಂವಹಿಸುವುದು ಚೂರು ಕಷ್ಟವೇ, ಜೊತೆಗೆ ಅದು ಮನುಷ್ಯ ಸಹಜ ಗುಣ ಕೂಡಾ ಹೌದು. ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆಯೇ ಅಲ್ಲವಾ ನಮ್ಮೆಲ್ಲ ಆಯ್ಕೆಗಳು ನಿಂತಿರುವುದು. ಸರಿ ತಪ್ಪುಗಳ ವಿಚಾರವಾಗಲೀ, ಅಥವಾ ದಕ್ಕುವಿಕೆಯ ಕುರಿತಾಗಿನ ವಿಚಾರಗಳಾಗಲೀ ಇಲ್ಲಿನ‌ ವ್ಯಾಪ್ತಿಯೊಳಗಿಲ್ಲ; ಅವು ಆಮೇಲೆ ಹುಟ್ಟಿಕೊಳ್ಳುವ ಸಂಗತಿಗಳು. 'ಯಾವುದು ಕತೆಯಾಗಬಲ್ಲದು' ಅನ್ನುವುದಕ್ಕೆ 'ಯಾವುದೂ ಕತೆಯಾಗಬಲ್ಲದು' ಅನ್ನುವುದೇ ಅತಿ ಹತ್ತಿರದ ಉತ್ತರವಾಗಬಹುದು ಅನಿಸುತ್ತದೆ; ಕತೆಯಾಗಿಸುವವರು ಬೇಕಷ್ಟೇ! ಹೀಗೆ ಮನುಷ್ಯಲೋಕದ ಸ್ವಭಾವಗಳನ್ನು ತೀರಾ ಹತ್ತಿರದಿಂದ, ಯಾವುದೇ ನಿರ್ಣಯಗಳನ್ನು ಹೇರದೇ ನೋಡುವ ಪ್ರಯತ್ನದ ಕಥಾ ಸಂಕಲನವೇ ಅಶೋಕ ಹೆಗಡೆಯವರ 'ವಾಸನೆ ಶಬ್ದ ಬಣ್ಣ ಇತ್ಯಾದಿ'. 


ಇಲ್ಲಿನ ಕಥಾ ಪಾತ್ರಗಳು ಹೊರಗಿನದಲ್ಲ, ಹಾಗಂತ ತೀರಾ ಒಳಗಿನದೂ ಅಲ್ಲ. ನಗರ, ಹಳ್ಳಿ ಇತ್ಯಾದಿಗಳು ಇದ್ದರೂ ಅವುಗಳಷ್ಟೇ ಅಲ್ಲ. ಇಲ್ಲಿ ಇವೆಲ್ಲವೂ ನಿಮಿತ್ತಗಳು ಹಾಗೂ ಆ ಪರಿಸರದ ಮನುಷ್ಯರು ಮತ್ತವರ ಮನಸ್ಥಿತಿಗಳೇ ಇಲ್ಲಿನ ಮುಖ್ಯ ಅಂಗ. ಇಂದ್ರಿಯಗಳು ವಾಸನೆ, ಶಬ್ದ, ಬಣ್ಣ, ರುಚಿ, ಸ್ಪರ್ಶ ಇತ್ಯಾದಿಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೇ ಅವು ಲೋಭ, ಮೋಹ, ಕಾಮ‌ ಇತ್ಯಾದಿಗಳನ್ನೂ ಉದ್ದೀಪಿಸುತ್ತವೆ. ಬಹುತೇಕ‌ ಎಲ್ಲಾ ಕತೆಗಳನ್ನು ಓದುವಾಗಲೂ ಪೂರ್ವಗ್ರಹಗಳಿಲ್ಲದೇ ಓದುವುದೇ ಅವುಗಳಿಗೆ ಕೊಡಬೇಕಾದ ಗೌರವ. ಬರೆಹಗಾರ ಬರೆಯುತ್ತಾ ಬರೆಯುತ್ತಾ ಮನುಷ್ಯನಾಗಬಹುದು, ಓದುಗ ಓದುತ್ತಾ ಓದುತ್ತಾ ಮನುಷ್ಯನಾಗಬಹುದು. ಇಂಥದ್ದೇ ಮನೋಭೂಮಿಕೆ ಈ ಕಥಾ ಸಂಕಲನದ ಕತೆಗಳಿಗೆ ಬೇಕು. ಪ್ರಾಪಂಚಿಕ ಸುಖ, ಮತ್ತದರ ತಲ್ಲಣಗಳನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾ, ನಿಜವಾದ ಮನುಷ್ಯ ಲೋಕದೊಳಗೆ ಲೇಖಕರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ವರೂಪವಿದೆ, ಕುರೂಪವಿದೆ. ಅದೆಂಥದ್ದೇ ಆದರೂ ಅದು ಮನುಷ್ಯನಿಗೇ ಸಂಬಂಧಪಟ್ಟಿದ್ದು ಅನ್ನುವುದು ಗಮನಿಸಬೇಕಾದ ಸಂಗತಿ. ಕಥಾ ಸಂಕಲನದ ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಾಸನೆಯಿದೆ, ಬಣ್ಣ ಇದೆ ಹಾಗೂ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಶಬ್ದವಿದೆ. ಅದರ ಜೊತೆಗೆ ಈ 'ಇತ್ಯಾದಿ'ಗಳಲ್ಲಿ ಅವ್ಯಕ್ತವಾದ ತಳಮಳ, ಅಸ್ಥಿರತೆ, ನೋವು, ತಲ್ಲಣಗಳೂ ಇವೆ. ಈ ಕಥಾ ಪ್ರಪಂಚದಲ್ಲಿ ಮಡಿವಂತಿಕೆಯಿಲ್ಲ; ಸಹಜವಾದ ವಾತಾವರಣವಿದೆ. ಇಲ್ಲಿನ ಎಲ್ಲ ಮಾತುಗಳೂ ಅಪರಿಚಿತ ಪ್ರಪಂಚದಿಂದ ಕದ್ದು ತಂದವುಗಳಲ್ಲ. ಅದೇ ಪರಿಸರದಲ್ಲಿ ಜೀವಿಸಿದ ಮಾತುಗಳವು. 


ಇಡೀ ಪುಸ್ತಕದ ತುಂಬಾ ಲೇಖಕರು ಭಾಷೆಯನ್ನು ಬಳಸಿಕೊಂಡ ರೀತಿ ಹಾಗೂ ಕೆಲವು ಚಿತ್ರಣಗಳನ್ನು ಕಟ್ಟಿಕೊಟ್ಟ ರೀತಿ ಕತೆಗಾರನ ಸೂಕ್ಷ್ಮಪ್ರಜ್ಞೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಅದನ್ನು ಅನುಭವಿಸುವ ಸುಖಕ್ಕೆ ಮುಖದಲ್ಲೊಂದು ಮಂದಹಾಸ ಸುಳಿಯದೇ ಹೋಗುವುದಿಲ್ಲ! 'ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ' ಅಂತ ಶಿವರಾಮಜ್ಜನ ಪಾತ್ರದ ಕುರಿತಾಗಿ ಹೇಳುತ್ತಾ ಹೋಗುವಾಗ ಹಣೆಯಿಂದ ಹಾದು ಹೋಗುವ ನಮ್ಮದೇ ರಕ್ತನಾಳಗಳು ಉಬ್ಬಿದ ಅನುಭವವಾಗುತ್ತದೆ.   'ನೆಲದ ಕಾಲನ್ನೇ ಬಿಡಿಸುವ' ಲೇಖಕರು, ಒಂದು ಪಾತ್ರವನ್ನು 'ನೆರಳಿನ ಸಹಿತ' ಮನೆಯಿಂದ ಆಚೆ ಹಾಕುತ್ತಾರೆ. ನೆರಳಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ, ಆದರೂ ಹೊರಗೆಲ್ಲೋ ನಿಂತಾಗ ಅಪ್ಪಿ ತಪ್ಪಿ ಬೀಳಬಹುದಾದ ನೆರಳು ಕೂಡಾ ಮನಸ್ಸಿನೊಳಗೆ ಬೀಳದ ಹಾಗೆ ಹೊರಗೆ ಹಾಕುವುದೆಂದರೆ ಅದಕ್ಕೆ ಗಟ್ಟಿ ಮನಸ್ಸೇ ಬೇಕು! 


ಕಾಲ ಇದೆ, ಕಾಲ ಕಳೆಯುತ್ತಾ ಹೋಗುತ್ತದೆ. ಕಾಲ ತನ್ನದೇ ವ್ಯೋಮದಲ್ಲಿ ತನ್ನನ್ನೇ ತಾನು ಖಾಲಿಯಾಗಿಸಿಕೊಳ್ಳುತ್ತಲೋ ಅಥವಾ ಕಬಳಿಸುತ್ತಲೋ ಹೋಗುವ ಒಂದು ಪ್ರಕ್ರಿಯೆಯಂತೂ ಇದೆ. ಕೆಲವೊಮ್ಮೆ ನಮ್ಮ ಇಂದಿನ ದಿನಗಳು ಹಿಂದಿನ ದಿನಗಳ ನೋವಿಗೆ ಚೂರು ಉಪಶಮನ ನೀಡಬಲ್ಲವು. ಬಹುತೇಕ ನೆನಪುಗಳು ಮಾಸುತ್ತವೆ. ಇನ್ನು ಕೆಲವು, ನಮ್ಮ ಮನಸ್ಸಿನ ಸಮತೋಲನವನ್ನು ಆಗಾಗ ಏರುಪೇರಾಗಿಸುತ್ತವೆ ಹಾಗೂ ಅದರಿಂದ 'ಈ ಹೊತ್ತು' ಅನ್ನುವುದು ಕೂಡಾ ಜಾರಿಹೋಗುತ್ತದೆ. ಇದು ಕಾಲವೇ ಕಾಲವನ್ನು ತಿನ್ನುವುದಾ? ಅನ್ನುವ ಒಂದು ಕುತೂಹಲಕಾರಿ ಪ್ರಶ್ನೆಯೊಂದು 'ದಿನಗಳು ದಿನಗಳನ್ನು ತಿನ್ನುತ್ತಾ' ಅನ್ನುವ ವಾಕ್ಯದ ಮೂಲಕ ವ್ಯಕ್ತವಾಗಿದೆ.


ನಮ್ಮಲ್ಲಿ ಇವತ್ತಿಗೂ ಸ್ತ್ರೀಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲ ಮನಸ್ಸುಗಳು ಕಡಿಮೆಯೇ. ಸಾಹಿತ್ಯದಲ್ಲಿ ಕೂಡಾ 'ಹೆಚ್ಚಿಗೆ' ಹೇಳುವುದಕ್ಕೆ ತುಸು ಕಷ್ಟವೇ. ಯಾವಾಗ ಪುರುಷ ತನ್ನ ಕಣ್ಣುಗಳಿಂದ ಸ್ತ್ರೀ ಸಂವೇದನೆಯಿರುವ, ಅವಳ ಭಾವಪ್ರಪಂಚವಿರುವ ಸಾಹಿತ್ಯವನ್ನು ನೋಡುತ್ತಾನೋ ಅಲ್ಲಿಗೆ ಅದನ್ನು ನೋಡುವ ಹಾದಿಯೇ ತಪ್ಪಿದಂತಾಗುತ್ತದಲ್ಲವಾ? ಇದನ್ನು 'ಅವಳ‌ ಕಣ್ಣು'ಗಳಲ್ಲೇ ಅವಳು 'ಹೇಳಿದ ಹಾಗೇ' ನೋಡಬೇಕು. ಆದರೆ ನಮಗೆ ದೃಷ್ಟಿಯೂ ಬೇರೆ, ದೃಷ್ಟಿಕೋನವೂ ಬೇರೆ; ಜಗದ ಸಹಜ ಸ್ವಭಾವ ಅನ್ನೋಣವೇ? ಚೂರಾದರೂ ಬದಲಾಗಬಹುದೇನೋ ತಿಳಿದಿಲ್ಲ.. ಇಲ್ಲಿನ ಕತೆಯಲ್ಲೊಂದು ಮಾತಿದೆ, "ನನ್ನ ಮೊಲೆ ಹಿಡಿದ ನಿನ್ನದೇ ಕೈಯಲ್ಲಿ ಎದೆ‌ ಸ್ವಲ್ಪ ಮುಟ್ಟಿ ನೋಡು ಮಾರಾಯಾ, ನೋವು ಅರ್ಥವಾದರೂ ಆದೀತೇ ನಿನ್ನ ಬೈನರಿ ಮೆದುಳಿಗೆ" 


ಮದುವೆಯಲ್ಲಿ ಗಂಡಿನ ಪಾದ ಸರಿಯಾಗಿ ತೊಳೆಯಲಿಲ್ಲವೆಂದು ಶುರುವಾದ ಜಗಳ ಮದುವೆ ಹೆಣ್ಣಿನ ಕಣ್ಣೀರಿನಲ್ಲೇ ಪಾದ ತೊಳೆಯಬೇಕಾದಲ್ಲಿಗೆ ಹೋಯಿತು ಅನ್ನುವಾಗ ಮುಂಚೆ ಇದ್ದ, ಈಗಲೂ ಬಹುತೇಕ ಕಡೆಗಳಲ್ಲಿ ಇರಬಹುದಾದ ದರ್ಪಕ್ಕೆ ಹಿಡಿದ ಕನ್ನಡಿಯೇ ಅಲ್ಲವಾ ಇದು? ಮುಖದಲ್ಲಿ ನೆರಿಗೆಗಳು ಬಹಳಷ್ಟಿವೆ, ತಿಕ್ಕಿ ತಿಕ್ಕಿ ತೆಗೆಯಲೇಬೇಕು ಬಿಡಿ! 


"ಈ ಸಮುದ್ರದ ನೀರಿನ ಮೇಲೆ ನಡೆಯುತ್ತಾ ಸಾಗಿದರೆ ಗೋಕರ್ಣದ ಕಡಲಿನ ದಂಡೆ ಸಿಗಬಹುದೇ.." ಆಸ್ಟ್ರೇಲಿಯಾದ ಸಮುದ್ರವೊಂದು ಗೋಕರ್ಣದ ಸಮುದ್ರದೊಂದಿಗೆ ಬೆಸೆದುಕೊಳ್ಳುವುದು ಹೀಗೆ. ದೂರದಲ್ಲೇ ಇದ್ದರೂ, ಮೂಲವನ್ನು ದೂರ ಎನ್ನುವ ಮಾಧ್ಯಮದ ಮೂಲಕವೇ ಮುಟ್ಟಬಹುದಾದ, ಅದರಿಂದ ತೆರೆದುಕೊಳ್ಳಬಹುದಾದ ನಾಳೆಗಳಿಗೆ ತೆರೆದುಕೊಳ್ಳುವುದೂ ಒಂದು ಚೆಂದವೇ ಅಲ್ಲವಾ?


ಹೀಗೆ ಇಲ್ಲಿನ‌ ಪ್ರತಿ ಕತೆಯೂ ನಮ್ಮದೇ ಲೋಕದ ಇನ್ನೊಂದು ಭಾಗವನ್ನು, ನಮ್ಮದೇ ಜಗತ್ತಿನ ಇತರ ಪಾತ್ರಗಳನ್ನು, ನಮ್ಮದೇ ಸ್ವಭಾವಗಳ ಇನ್ನಷ್ಟು ಮುಖಗಳನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತದೆ. ಕತೆ ಕಟ್ಟುವುದೂ ಒಂದು ಕಲೆ ಅಂತ ಒಪ್ಪುವುದಾದಲ್ಲಿ ಅದಕ್ಕೆ ಕೌಶಲವೂ ಬೇಕಲ್ಲವಾ? ಅಂಥ ಕೌಶಲ್ಯದ ನಿದರ್ಶನ ಅನ್ನುವಂತಿದೆ ಇಲ್ಲಿನ ಕಥನ ಶೈಲಿ, ಇಲ್ಲಿನ ವಾಕ್ಯಗಳು. ಇಲ್ಲಿನ ಕತೆಗಳನ್ನು ಓದಿದ ನಂತರ, "ಯಾವುದು ಕತೆಯಾಗಬಹುದು' ಅಂತ ಕೇಳಿದರೆ, ಮತ್ತೊಮ್ಮೆ ಸ್ಪಷ್ಟವಾಗಿ ಖಂಡಿತಾ ಹೇಳಬಹುದು " ಯಾವುದೂ ಕತೆಯಾಗಬಲ್ಲದು"


~`ಶ್ರೀ'

   ತಲಗೇರಿ

ಸೋಮವಾರ, ಜೂನ್ 7, 2021

ನೆನಪಿನ ಹಂಗಿಗೆ ನಾಲ್ಕು ಸಾಲು...


 ನೆನಪಿನ ಹಂಗಿಗೆ ನಾಲ್ಕು ಸಾಲು...



ಸಖೀ ರಾಧೆ,


ಅದೆಷ್ಟು ವಸಂತಗಳು ಹೂ ಮುಡಿದು ಕೂತವು, ಅದೆಷ್ಟು ಮೇಘಮಾಲೆ ನಭವನ್ನು ಅಲಂಕರಿಸಿದವು, ಅದೆಷ್ಟು ಮರಗಳು ಎಲೆಯುದುರಿಸಿ ನಿಂತವು ಕೃಷ್ಣನಿಲ್ಲದೇ? ಇದು ನಾನು ಬರೆಯುತ್ತಿರುವ ನಾಲ್ಕನೇ ಪತ್ರ ನಿನಗೆ. ನಮ್ಮ ಬೃಂದಾವನದ ದಿನಗಳನ್ನು ನೆನಪಿಸುವ ಸಲುವಾಗಿಯೇ ಪತ್ರ ಬರೆಯುತ್ತಿದ್ದೇನೆ. ಬೃಂದಾವನದ ಹಾದಿಯ ಇಕ್ಕೆಲಗಳಲ್ಲಿ ದುಂಬಿಯ ಗೀಗೀಪದ ಅದ್ಯಾವ ಹಾಡುಗಾರನಿಗಿಂತ ಕಡಿಮೆಯಿತ್ತು ಹೇಳು, ಎಲ್ಲಾ ಸ್ವರಗಳನೂ ಅವಕೆ ಹೇಳಿಕೊಟ್ಟವರಾರು ಅಂತ ನೀನೊಮ್ಮೆ ವಿಸ್ಮಯದಿಂದ ಕೇಳಿದ್ದು ನೆನಪಿದೆಯಾ? ನಿನ್ನ ಮೂಗಿನ ತುದಿಗೊಂದು ದುಂಬಿ ಬಂದು ಕೂತಿದ್ದು, ನೀನು ಹೆದರಿ ಕಿರುಚಿದ್ದು, ಅದು ನಿನ್ನತ್ತ ಮತ್ತೆ ಮತ್ತೆ ಬಂದಂತೆಲ್ಲಾ ಓಡಿಹೋಗಿ ನನ್ನ ಹಿಂದೆ ನೀ ಅಡಗಿ ನಿಂತಿದ್ದು, ಗಾಳಿಯಲ್ಲೇ ರೆಕ್ಕೆಬಡಿಯುತ್ತಾ ಅದು ಕೊನೆಗೊಮ್ಮೆ ನನ್ನ ಬೆರಳುಗಳ ಸ್ಪರ್ಶಿಸಿ ಓಡಿಹೋಗಿದ್ದು ನೆನಪಿದೆಯಾ ನಿನಗೆ? ನಾನೇನು ಮಾಡಿದೆ ಎಂದು ಬೆನ್ನ ಹಿಂದಿಂದ ನನ್ನ ಹೆಗಲುಗಳನ್ನು ಗಟ್ಟಿ ಹಿಡಿದು ಇಣುಕಿ ನೋಡಿದ್ದೆಯಲ್ಲಾ, ನಿನ್ನ ನುಣುಪು ಕದಪುಗಳು ತಾಕಿ ಬೆಣ್ಣೆ ಕಳ್ಳ ಕೃಷ್ಣನೇ ಕರಗುತ್ತಿದ್ದ. ಸಂಭಾವಿತ ನಾನು, ಸುಳ್ಳೆಲ್ಲಾ ಹೇಳುವುದೇ ಇಲ್ಲ, ನಂಬಲೇಬೇಕು ನೀನು, ಏನಂತೀಯಾ ಹೌದಾ ಅಲ್ಲವಾ! ಯಾವ ಭಯವೂ ಇಲ್ಲದೇ ನನ್ನ ಭುಜಗಳಿಗೆ ತಲೆಯಿಟ್ಟು ಪುಟ್ಟ ಕಂದಮ್ಮನಂತೆ ಮಲಗುವುದನ್ನು ಅದ್ಯಾರು ಕಲಿಸಿದರು ನಿನಗೆ? ಅಷ್ಟು ನಂಬಿಕೆಯೇನು ಈ ಮಾಯಾವಿಯ ಮೇಲೆ! ಬಹುಶಃ ಸ್ನೇಹವೆಂದರೆ ಇದೇ ಇರಬೇಕು, ಪ್ರೇಮಕ್ಕೂ ಮೊದಲು ಸ್ನೇಹವಾಗಬೇಕಲ್ಲವಾ ಸಖೀ.. ಬೃಂದಾವನ ಈ ಎಲ್ಲವುಗಳ ಆರಂಭವಾಗಿತ್ತಾ? ಅಥವಾ ಗೋಕುಲದಲ್ಲೇ ಈ ಸಮಾಗಮಕ್ಕೆ ನಾಂದಿಯಾಗಿತ್ತಾ...

ಕೆಂಪು, ಬಿಳಿ, ಗುಲಾಬಿ ಹೀಗೆ ಥರಥರದ ಹೂಗಳು ಬೃಂದಾವನದ ತುಂಬೆಲ್ಲಾ. ಆದರೆ, ನಮಗೆ ಇಷ್ಟವಾಗುತ್ತಿದ್ದುದು ನೀಲಿ, ಹಳದಿ ಹೂಗಳೇ. ನೀನು ನೀನಿಷ್ಟಪಡುವ ನೀಲಿ ಹೂಗಳನ್ನು ನನ್ನ ರುಮಾಲಿಗೆ ಸಿಕ್ಕಿಸಿ, ಕಣ್ಣುಗಳ ಪಕ್ಕದಲ್ಲಿ ಅದೆಂಥದ್ದೋ ನಿನ್ನಿಷ್ಟದ ಬಳ್ಳಿಗಳ ಬಿಡಿಸಿ, ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದೆಯಲ್ಲಾ, ನಾನು ಹಳದಿ ಹೂಗಳ ಕಿವಿಯೋಲೆ ಮಾಡಿ ನಿನಗೆ ತೊಡಿಸುವ ಅಂತ ಬಂದರೆ ಪೂರ್ತಿ ಕೂದಲು ಕಿವಿಯ ಮೇಲೆ ಹರಡಿಕೊಂಡು ಸತಾಯಿಸುತ್ತಿದ್ದೆಯಲ್ಲಾ, ಅದು ಆಮೇಲೆ ನನ್ನುಸಿರು ನಿನ್ನೆದೆ ಬಡಿತ ಎರಡೂ ಇಬ್ಬರಿಗೂ ಕೇಳಿಸುವಷ್ಟು ಗಾಢ ಮೌನಕ್ಕೆ ಕಾರಣವಾಗುತ್ತಿತ್ತು. ಅದೆಂಥ ಗಾಢ ಮೌನವೆಂದರೆ ಇಡೀ ಜಗತ್ತು ಸ್ತಬ್ಧವಾದಂತೆ. ನಿನ್ನೆದುರು ನನಗೆಂಥ ಲಜ್ಜೆ ಎನ್ನುತ್ತಿದ್ದ ನೀನು ತಕ್ಷಣವೇ ತಲೆ ತಗ್ಗಿಸಿ ಕಿವಿಯ ಮೇಲೆ ಹರಡಿಕೊಂಡಿದ್ದ ಕೂದಲುಗಳನ್ನು ಸರಿಸಿ, ಪ್ರತೀ ಸಲವೂ ಹೊಸದಾಗಿ ಸ್ಪರ್ಶಕ್ಕೆ ಕಾಯುವಂತೆ ಉತ್ಕಟ ಸ್ಥಿತಿಯಲ್ಲಿ ಕೂರುತ್ತಿದ್ದುದನ್ನು ನಾನು ಮರೆತಿಲ್ಲ. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ಕೈ ಬೆರಳುಗಳು ಕೂತ ಕಲ್ಲುಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದವು. ಕಣ್ಣುಗಳು ಅರ್ಧವಷ್ಟೇ ತೆರೆದು ಇಷ್ಟೇ ಇಷ್ಟು ಮಾತ್ರ ನನ್ನೆಡೆಗೆ ನೋಡುತ್ತಿದ್ದವು. ಆಗ ಮಾತ್ರ ನೀನು ಶೃಂಗಾರ ಭಾವದ ಅಪ್ರತಿಮ ರೂಪಕದಂತೆ ಗೋಚರಿಸುತ್ತಿದ್ದೆ. ಕೇಳಬಹುದು, ಹೆಣ್ಣು ಬರೀ ಶೃಂಗಾರಕ್ಕೆ ಮಾತ್ರ ಸೀಮಿತವಾ ಅಂತ. ಸೃಷ್ಟಿಯ ಪ್ರತಿಯೊಂದರ ಅರ್ಧವೂ ಸಂಪೂರ್ಣವಾಗಬೇಕಾದರೆ ಸ್ತ್ರೀ ತತ್ವ ಬೇಕೇ ಬೇಕು. ನೆನಪಿದೆಯಲ್ಲವಾ ನಿನಗೆ, ಹಿಂದೊಮ್ಮೆ ಹೀಗೇ ನಾನು ನಿನ್ನ ತೊಡೆಗಳ ಮೇಲೆ ತಲೆಯಿಟ್ಟು ಮಲಗಿದ್ದಾಗ ಸರ್ಪವೊಂದು ನಿನ್ನ ಪಕ್ಕದಲ್ಲೇ ತಲೆಯಾಡಿಸುತ್ತಾ ಇದ್ದರೂ ನೀನು ನನ್ನ ನಿದ್ದೆಗೆ ಭಂಗವಾಗಬಾರದೆಂದು ಸ್ಥಿರವಾಗಿಯೇ ಕೂತಿದ್ದು, ಎಲ್ಲಿತ್ತು ಆ ಧೈರ್ಯ.. !

ನನಗೆ ಒಮ್ಮೊಮ್ಮೆ, ಈ ವಸಂತದಲ್ಲಿ ಅರಳುವ ಹೂಗಳಿಗೆಲ್ಲಾ ನೀನೇ ನಿನ್ನ ನಗುವನ್ನು ಹಂಚಿ ಬಂದಿರಬಹುದಾ ಅನ್ನುವ ಅನುಮಾನ. ಆ ಕೋಕಿಲಗಳೆಲ್ಲಾ ನೀನು ನಿದ್ದೆಯಲ್ಲಿ ಕನವರಿಸುವುದನ್ನೇ 'ಕುಹೂ ಕುಹೂ' ಎಂದು ಕಲಿತುಕೊಂಡವಾ ಅಂತ. ನೀನೊಮ್ಮೆ ತಲೆಯಾಡಿಸಿ ಕಣ್ಣು ಮಿಟುಕಿಸಿದಾಗಲೆಲ್ಲಾ ಈ ತಂಗಾಳಿ ತಾನಾಗೇ ಹುಟ್ಟಿಕೊಳ್ಳುತ್ತದಾ, ನೀನು ಬಲಗಡೆ ಇಳಿಬಿಟ್ಟ ಕೂದಲು ನಯವಾಗಿ ನಿನ್ನ ತುಟಿಗಳ‌ ಪಕ್ಕ ಚೂರು ಮೇಲೆ ತಾಗಲೋ ಬೇಡವೋ ಎಂಬಂತೆ ನಟಿಸುವ ಸಲುವಾಗಿಯೇ ಏನೋ ಗಾಳಿಗೆ ಅಷ್ಟೊಂದು ತುಂಟತನವಾ ಅಥವಾ ನನ್ನನ್ನು ವಿಚಲಿತನನ್ನಾಗಿಸಲು ನೀನು ತಂಗಾಳಿಯೊಂದಿಗೆ ಮಾಡಿಕೊಂಡ ಒಪ್ಪಂದವಾ, ಸತ್ಯ ಸತ್ಯ ಹೇಳಿಬಿಡಬೇಕು‌ ನೋಡು! ಕೃಷ್ಣನನ್ನು ವಿಚಲಿತಗೊಳಿಸುವುದಾ, ಅಷ್ಟಕ್ಕೆಲ್ಲಾ ನಿಯಂತ್ರಣ ತಪ್ಪುವವನಾ ನೀನು ಅಂತ ಮುಖವೂದಿಸಿಕೊಂಡು ನೋಡಬೇಡ. ಸಮಭಾವ ಸಮಚಿತ್ತ ಸಮಸ್ತ ನೀನು ಅಂತ ಅಂದವಳೇ ನೀನು ! ಈಗ ಹಾಗೆಲ್ಲಾ ನೋಡಿ ಮತ್ತೆ ನಾನು ಹಲ್ಲುಗಿಂಜಿದಾಗ ನಿನ್ನ ಹುಸಿ ಮುನಿಸಿನ ನಸು ನಗುವಿನಲ್ಲಿ ಕೃಷ್ಣ ಕಾಲ ಕಾಲಗಳನ್ನೂ ದಾಟಿ, ಕೇವಲ ಹೊಡೆಯಲು ಓಡಿಸಿಕೊಂಡು ಬರುವ ರಾಧೆಯ ಸಖನಾಗಿ ಅಷ್ಟೇ ಉಳಿದುಕೊಳ್ಳಲು ಸಜ್ಜಾಗಿಬಿಡುತ್ತಾನೆ ನೋಡು ! ಇಂಥ ಸಂದರ್ಭದಲ್ಲೇ ನೋಡು ಮಳೆ ಬರುವುದು...
ನನಗೋ ಮಳೆಗಾಲವೆಂದರೆ ಕೆಸರು ಕಾಲಲ್ಲಿ ಮನೆಯೊಳಗೆ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆ ತುಂಬ ಪಾದದ ಗುರುತು ಮೂಡಿಸುವುದು, ಬರೀ ನನ್ನ ಮನೆಯೊಂದೇ ಅಲ್ಲ ಹ್ಞ! ಯಾರಾದರೂ ಹೊಡೆಯಲು ಓಡಿಸಿಕೊಂಡು ಬಂದು ಕೆಸರು ತಾಗಿ ಜಾರಿ ಬಿದ್ದರೆ ಓಡಿಹೋಗಿ ಅವರಿಗೆ ಕೈಕೊಟ್ಟು ಎಬ್ಬಿಸಿ, ಮತ್ತೆ ಮುಟ್ಟಾಟ ಶುರು ನೋಡು, ನೀನು ಅಯ್ಯೋ ಇವನಾಟವೇ ಅಂತ ಹಣೆ ಚಚ್ಚಿಕೊಂಡು ನಗುತ್ತಿದ್ದೆಯಲ್ಲಾ. ನನ್ನ ಕತೆ ಬಿಡು, ಮಳೆಗಾಲವೆಂದರೆ ರಾಧೆಗೆ ಸಮಸ್ತ ವಿಶ್ವವೇ ರಂಗಮಂಚ ಹಾಗೂ ರಾಧೆ ಅಲ್ಲಿನ ಅಮೋಘ ನರ್ತಕಿ. ನೆಲಕ್ಕೆ ಬಿದ್ದ ಮಳೆಹನಿಗಳೂ ರಾಧೆಯ ಪಾದ ಸ್ಪರ್ಶದಿಂದ ಪುಳಕಿತವಾಗುತ್ತಿದ್ದವು. ಅವಿರತವಾಗಿ ಸುರಿವ ಮಳೆಯಲ್ಲಿ ನೀನು ನರ್ತಿಸುವಾಗ ನಿನ್ನ ಗೆಜ್ಜೆಗಳ ಮೇಲೆ ಕೂತು ಆಮೇಲೆ ಮತ್ತೆ ಆಚೆ ಸಿಡಿಯುವುದಕ್ಕೆ ಹನಿಗಳು ಹಾತೊರೆಯುತ್ತಿದ್ದವು. ಕಾರ್ಮೋಡಗಳಿಗೋ ನಿನ್ನನ್ನು ಪೂರ್ತಿ ಒದ್ದೆಯಾಗಿಸುವ ತವಕ. ಒಂದೇ ಸಮನೆ ತನ್ನೆಲ್ಲಾ ಹನಿಗಳನ್ನು ನಿನ್ನ ಮೇಲೆಯೇ ಸುರಿಯುವಂತೆ ಮಾಡುತ್ತಿವೆಯಾ ಅಂತೆಲ್ಲಾ ಅನ್ನಿಸುವಂಥ ವಾತಾವರಣವಿರುತ್ತಿತ್ತು ನೋಡು‌. ಆ ಮಳೆ ಹನಿಗಳೋ, ಹಣೆಯಿಂದ ಶುರುಮಾಡಿ ರಾಧೆಯ ಅಂಗದ ಸಂಗದಲಿ ಕಚಗುಳಿಯಿಡುತ್ತಾ ರಾಧೆಯನ್ನು ಮೆದುವಾಗಿಸುತ್ತಿದ್ದವು. ಮಳೆಯ ಮಣ್ಣಿನ ಸಮ್ಮೋಹಕ ಪರಿಮಳ ನಿನ್ನ ಮೈಯಿಂದ ಸ್ಫುರಿಸುತ್ತಿತ್ತು. ನನಗೀಗ ತಿಳಿಯಿತು ನೋಡು, ಈ ಮಯೂರಗಳು ಮಳೆ ಬಂದ ಕೂಡಲೇ ಗರಿಬಿಚ್ಚಿ ನರ್ತಿಸುವುದು ಇದೇ ಕಾರಣಕ್ಕೆ; ರಾಧೆಯನ್ನು ಪ್ರಾರ್ಥಿಸುತ್ತವೆ, ರಾಧೆಯನ್ನು ಆಹ್ವಾನಿಸುತ್ತವೆ ಎಂದೂ ಕೂಡ ಹೊಳೆಯದಷ್ಟು ದಡ್ಡನಪ್ಪಾ ಕೃಷ್ಣ! ನಾನಂದು ತೊಡಿಸಿದ ಗೆಜ್ಜೆಯ ಕಳಚಿಲ್ಲ ತಾನೇ? ಹೀಗೆಲ್ಲಾ ಹೇಳಿ ಯಾಕೆ ವಿರಹವನ್ನು ನೆನಪಿಸುತ್ತೀಯಾ ಅಂತ ದೀನಳಾಗಿ ನೋಡಬೇಡ ನೀನು, ಅಪರಾಧಿ ಭಾವ ಕಾಡುತ್ತದೆ.. ಸತಾಯಿಸಿದವರೇ ಸಮಾಧಾನಿಸುವುದು ಈ ಪ್ರೇಮದ ಮುದ್ದು ಮುದ್ದು ಲಕ್ಷಣ ನೋಡು!

ಅದೊಂದು ಋತು ಬರುತ್ತದೆ ರಾಧೆ, ಎಲ್ಲಾ ದೇಶಗಳಲ್ಲೂ ಆಯಾ ಸಮಯಕ್ಕೆ; ವೃಕ್ಷ ಸಂಕುಲ ತನ್ನ ಎಲೆಗಳನ್ನು ಉದುರಿಸಿ ಬೋಳು ಬೋಳಾಗುತ್ತದೆ. ಹಕ್ಕಿಗಳೆಲ್ಲಾ ಇನ್ನೆಲ್ಲೋ ವಲಸೆ ಹೋಗುತ್ತವೆ. ಅದೆಲ್ಲಿಂದಲೋ ಅಮ್ಮ ಹೆಕ್ಕಿ ತಂದ ಕಸ ಕಡ್ಡಿಗಳಿಂದ ಕಟ್ಟಿಕೊಂಡ ಗೂಡಲ್ಲಿ ಅಮ್ಮನದೇ ತುತ್ತು ತಿಂದು ಬೆಳೆದ ಹಕ್ಕಿ ಮರಿಗಳ ಚಿಲಿಪಿಲಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತದೆ. ಕಟ್ಟಿಕೊಂಡ ಗೂಡಿನಲ್ಲಿ ಖಾಲಿತನ ತುಂಬಿಕೊಳ್ಳುತ್ತದೆ. ನೀನೊಮ್ಮೆ ಕೇಳಿದ್ದೆ ನೆನಪಿದೆಯಾ, ನಮ್ಮ ಇಡೀ ಬಾಲ್ಯವನ್ನು ಕಳೆದಂಥ ಮನೆಯನ್ನು ಬಿಟ್ಟುಹೋಗುವುದೆಂದರೆ ಅಷ್ಟು ಸುಲಭವಾ ಕೃಷ್ಣ ಅಂತ. ಅಸ್ತಿತ್ವದ ಹೋರಾಟದಲ್ಲಿ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮೋಹವನ್ನು ಬಿಡುವುದು ಅತೀ ಅಗತ್ಯ ರಾಧೆ. ಏನೂ ಇಲ್ಲದಂತೆ ಬಂದವರು ಏನೂ ಇಲ್ಲದಂತೆ ಹೋಗುವುದನ್ನೂ ಕಲಿಯಬೇಕಲ್ಲವಾ? ಗೂಡು ಇದ್ದಷ್ಟು ಹೊತ್ತು ಮನೆ. ಮುಂದೆ ಇನ್ನ್ಯಾವುದೋ ಮರ ಕಾಯುತ್ತಿರಬಹುದು, ಅದಕ್ಕೂ ಒಂಟಿತನ ಸಾಕಾಗಿ ಈ ಹಕ್ಕಿಗಳ ಬರವು, ಇರುವು ಮುಪ್ಪಿನಲ್ಲಿ ಸಂಭ್ರಮಕ್ಕೆ ಪ್ರಾಯ ಬಂದಂತೆ ಆಗಬಹುದು ಅಲ್ಲವಾ? ಅವತ್ತೊಂದು ದಿನ ರಣ ರಣ ಬಿಸಿಲು, ಕೂರಲು ಎಲ್ಲೂ ನೆರಳಿರದೇ ನಾವಿಬ್ಬರೂ ಚಡಪಡಿಸುತ್ತಿರುವಾಗ, ನಾನೊಮ್ಮೆ ಕೊಳಲು ತೆಗೆದು ಊದಿದಾಗ ಪಾತರಗಿತ್ತಿಗಳ ಗುಂಪೊಂದು ಬಂದು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ‌ ನಿಂತು ನಾವದರ ನೆರಳಿನಲ್ಲಿ ನಿಂತಿದ್ದು ಈಗಲೂ ಅಸಂಭವವೆಂಬಂತೆಯೇ ಭಾಸವಾಗುತ್ತದೆ ನನಗೆ. ನೀನೋ ನನ್ನನ್ನು ಮಾಂತ್ರಿಕನೆಂಬಂತೆ ಅನುಮಾನದ ದೃಷ್ಟಿಯಿಂದ ನೋಡಿದ್ದೆ. ಈಗ ತಿಳಿದಿದೆಯಲ್ಲವಾ ರಾಧೆ...

ಕಾಲವೇ ನಾನು, ಕಾಲದ ಸಮಸ್ತ ಋತುಗಳು ನಾನು, ಆ ಋತುಗಳ ಭಿನ್ನ ಭಿನ್ನ ವಾತಾವರಣ ನಾನು, ಹವಾಮಾನ ನಾನು, ಚಲನೆ ಸಂಚಲನೆ ನಾನು, ಕಣ ನಾನು, ಮಣ್ಣು ನಾನು, ಫಲ ನಾನು, ಉದುರಿಬಿದ್ದ ಹಳದಿ ಎಲೆ ನಾನು, ಸ್ಮೃತಿ ವಿಸ್ಮೃತಿ ನಾನು, ಗತಿ ಮಿತಿ‌ ಪ್ರಗತಿ ನಾನು, ಪ್ರಕೃತಿ ನಾನು, ಅದನ್ನು ಜೀವಿಸುವ ಸಂಸ್ಕೃತಿ ನಾನು, ಗಂಧ ನಾನು, ಜುಳು ಜುಳು ಮಂದ ನಿನಾದ ನಾನು, ಅಂದ ಬಂಧ ಸಂಬಂಧ ನಾನು, ಕಂದನ ಅಳು ನಾನು, ಅಮ್ಮನ ಎದೆ ನಾನು, ಲಾಭ ಲೋಭ ವಿಪ್ರಲಂಭ ನಾನು, ಅರ್ಥ ಕಾಮ‌ ಸಾಮ‌ ನಾನು, ಸಂಗಾತ ನಾನು, ವಿರಹ ನಾನು, ಅಖಂಡ ಅಭಂಗ ಅಶರೀರಿ ನಾನು, ಕಾರಣದ ಕಾರಣ ನಾನು, ಹೂರಣದ ಹೂರಣ ನಾನು, ರಸ ವಿರಸ ಸಮರಸ ನಾನು, ಇದ್ಯಾವುದೂ ಅಲ್ಲದ ತೂತು ಬಿದಿರಿನ ಹುಡುಗ ನಾನು, ಇನ್ನೂ ಒಂದು ಮಾತು; ರಾಧೆಯಿಲ್ಲದೇ ಅಪೂರ್ಣ ನಾನು..

ರಾಧೇ, ಬೃಂದಾವನದ ತೋಪಿನಲ್ಲಿ ಉದುರಿಬಿದ್ದ ನವಿಲುಗರಿಗಳನೆಲ್ಲಾ ತಂದು ಶೇಖರಿಸೆಯಾ? ಕೃಷ್ಣನ ಪತ್ರ ಬರುತ್ತದೆ; ಪತ್ರದ ಎಲ್ಲಾ ಮೂಲೆಗಳಲ್ಲೂ ಗರಿಗಳ‌ನ್ನಿಟ್ಟು ಶೃಂಗರಿಸೆಯಾ? ಮಂಕಾಳಿ ಗೌರಿ ಲಕುಮಿಯರಿಗೆ ನನ್ನ ಪತ್ರವನ್ನು ಓದಿ ಹೇಳೆಯಾ? ಎಲ್ಲೇ ನಿನ್ನ ಕೃಷ್ಣ, ಬರಲೇ ಇಲ್ಲ ಎಂದು ಆಡಿಕೊಂಡು ಕಿಚಾಯಿಸುವ ನಿನ್ನ ಗೆಳತಿಯರೆದುರು ಪತ್ರ ಹಿಡಿದು ನಡೆಯಲಾರೆಯಾ? ಸುಸ್ತಾಗಿದೆ ಕೃಷ್ಣಾ ಅನ್ನದಿರು.. ನಮ್ಮ ನಮ್ಮ ಪಾಲಿನ ಬದುಕನ್ನು ಬದುಕಲೇಬೇಕಲ್ಲವಾ, ಕೃಷ್ಣ ಬರೀ ಅಕ್ಷರಗಳ ಕಳುಹಿಸಿಕೊಡುತ್ತಿಲ್ಲ, ಪ್ರಾಮಾಣಿಕವಾಗಿ ಹುಟ್ಟಿಕೊಂಡ ಭಾವಗಳ ಬಿಂಬಗಳೆಲ್ಲವನ್ನೂ ಕಳುಹಿಸುತ್ತಿದ್ದಾನೆ. ಕೃಷ್ಣ ಬರುತ್ತಾನೆ, ಇಂದಲ್ಲ ನಾಳೆ.. ರಾಧೆ ಕಾಯುತ್ತಾಳೆ ತಪಸ್ವಿನಿಯಂತೆ.. ಕೃಷ್ಣ ಬರುತ್ತಾನೆ ಅನುರಾಗಿಯಾಗಿ, ರಾಧೆ ಕಾಯುತ್ತಾಳೆ ವಿರಾಗಿಯಂತೆ.. ಕೃಷ್ಣ ಬರುತ್ತಾನೆ ಕೊಳಲ ಧೂಳು ಒರೆಸಿಕೊಡು ಎನ್ನುವ ಪುಟ್ಟ ಮಗುವಿನ ಹಟವಾಗಿ, ರಾಧೆ ಕಾಯುತ್ತಾಳೆ ಮಡಿಲು ತುಂಬದ ಹೆಣ್ಣಂತೆ.. ಇಲ್ಲ, ಕೃಷ್ಣ ಬರುತ್ತಾನೆ ಕೃಷ್ಣನಂತೆ, ರಾಧೆ ಕಾಯುತ್ತಾಳೆ ರಾಧೆಯಂತೆ.. ಜಗತ್ತಿನಲ್ಲೀಗ ಪ್ರೇಮದ ಸಂಜೆಗಳು ರಾತ್ರಿಗಾಗಿ ಕಾಯುತ್ತವೆ.. ರಾಸಕ್ಕಾಗಿ ಕಾಯುತ್ತವೆ..


ಇಂತಿ ನಿನ್ನ
ಗೊಲ್ಲ



- 'ಶ್ರೀ'
 ತಲಗೇರಿ