ಶನಿವಾರ, ಫೆಬ್ರವರಿ 12, 2022

ತಂಗಾಳಿಯೊಂದಿಗೊಂದು ಅಸ್ಪಷ್ಟ ಗಂಧ!



ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ‌. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..

ಈ ಪುಸ್ತಕದ ಕುರಿತಾಗಿ ಯಾರ್‍ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ್ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ‌ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!

ಪ್ರೇಮದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ‌ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ‌ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ‌ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ.

ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ‌ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ‌ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'.

ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ.

ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ‌ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು.

ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ!

ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ‌ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ!

- 'ಶ್ರೀ'
   ತಲಗೇರಿ

ಭಾನುವಾರ, ಆಗಸ್ಟ್ 29, 2021

ಒಂದು ಶೃಂಗಾರದ ರಾತ್ರಿ



ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಬೆಳಕಿನ ರಂಗೋಲಿ ಇಡುವ ವಾಹನಗಳ ಸಂಖ್ಯೆ ಚೂರು ಕಡಿಮೆಯಾಗಿತ್ತು. ನಗರಕ್ಕೆ ರಾತ್ರಿಯಾಗುವುದಿಲ್ಲವಾದರೂ ಬಹುತೇಕ ಅಂಗಡಿಗಳು ಮುಸುಕೆಳೆದುಕೊಂಡು ಮಲಗುವ ತಯಾರಿಯಲ್ಲಿದ್ದವು. ಅಲ್ಲಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ನೀಲಿ, ಚಿನ್ನದ ಬಣ್ಣದ ಮಿಣುಕು ಹುಳಗಳಂಥ ಬೆಳಕಿದ್ದರೂ ಅವು ಕಪ್ಪು ಉಡುಪಿಗೆ ಪೋಣಿಸಿದ ಮಣಿಗಳ‌ ಹಾಗೆ ಅಂತ ಅನಿಸಿದ್ದು ಹೌದು ನನಗೆ. ಅದರಲ್ಲೂ ಈಗ ನಾವಿರುವ ಹೊತ್ತಿನಲ್ಲಿ ಇಡೀ ಜಗತ್ತಿಗೆ ಅದ್ಯಾವುದೋ ಬರಿಗಣ್ಣಿಗೆ ಕಾಣದ್ದರ ಭೀತಿ ಬೇರೆ. ಹಾಗಾಗಿಯೇ ಇರಬೇಕು, ನಾವೆಲ್ಲರೂ ಒಂಥರಾ ಮೌನಕ್ಕೆ ಶರಣಾಗಿಬಿಟ್ಟಿದ್ದೇವೆ ಅಂತನ್ನುವ ಭಾವ ಪದೇ ಪದೇ ಒತ್ತರಿಸಿಕೊಂಡು ಬರುತ್ತದೆ ಈಗೀಗ ನನಗೆ. ಇದನ್ನು ಅವನಿಗೆ ಹೇಳಬೇಕು ಅಂದುಕೊಂಡಾಗಲೆಲ್ಲಾ, ಇದೆಂಥಾ ಇದು ರಗಳೆ, ಇದನ್ನೆಲ್ಲಾ ಹೇಳಿ ಅವನ ಮನಸ್ಸನ್ನು ಕದಡುವುದು ಯಾಕೆ? ಮೊದಲೇ, ನನ್ನ ಮನಸ್ಸು ವಿಚಲಿತವಾಗಿದೆ ಅನ್ನುವ ಸೂಚನೆ ಸಿಕ್ಕರೂ ಸಾಕು, ಉಳಿದೆಲ್ಲ ಕೆಲಸ ಬದಿಗಿಟ್ಟು ನನ್ನ ಉಪಚಾರಕ್ಕೆ ನಿಂತುಬಿಡುತ್ತಾನೆ. ಅವನದು ಉಸಿರುಗಟ್ಟಿಸುವ ಪ್ರೀತಿಯಲ್ಲ, ಅದೇ ಸಮಾಧಾನ ಹಾಗೂ ಬಹುಶಃ ಬದುಕು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಅಂತ ಅಂದುಕೊಳ್ಳುತ್ತಿರುವಾಗಲೇ, ಕೈಕಾಲು ಮುಖ ತೊಳೆದುಕೊಂಡು ಮಲಗಬೇಕು ಅಂದುಕೊಳ್ಳುತ್ತ ಅವ ಬಂದ. ಏನೋ ಗುಯ್ ಅಂತಿರೋ ಹಾಗಿದೆ ತಲೇಲಿ, ಚೂರು ಶಬ್ದ ಈ ಕಡೇನೂ ಕೇಳ್ತಿದ್ಯಪಾ ಅಂತ ತಮಾಷೆಯಾಗಿ ಹೇಳಿದ, ಅವನದು ಇದು ಯಾವತ್ತಿನ ವರಸೆ. ಏನಿಲ್ಲ, ಏನೋ ಒಂದು.. ಅಂದೆ ನಾನು. ಅಷ್ಟರಲ್ಲಿ ಮಳೆ ಶುರುವಾಯಿತು ಅನಿಸುತ್ತದೆ. ಈ ನಮ್ಮ ನಗರದ ಮಳೆಗೆ ಇದೊಂದು ಒಳ್ಳೆಯ ಅಭ್ಯಾಸವಿದೆ. ಮಲಗುವಾಗಲಾದರೂ ವಾತಾವರಣ ತಂಪಾಗಿರಲಿ ಅನ್ನುವ ಕಾರಣಕ್ಕೇ ತಾನು ಬಂದು ಲಾಲಿ ಹಾಡುವ ಹಾಗೆ, ಸುಮಾರು ಎಲ್ಲರೂ ಮಲಗುವ ಸಮಯಕ್ಕೇ ಹಾಜರಾಗುತ್ತದೆ ಅಪರೂಪಕ್ಕೆ ಮಳೆ. ಇದನ್ನೂ ಅವನೇ ಹೇಳಿದ.. ನಾನು ಇನ್ನೂ ಹಾಗೆಯೇ ಕುಳಿತಿದ್ದನ್ನು ನೋಡಿ, ನನ್ನ ಭುಜದ ಮೇಲೆ ಕೈಯಿಟ್ಟು, ಬಾ ಒಂದೊಂದ್ ಕಪ್ ಚಾ ಕುಡಿಯುವ ಅಂದ! ಮಲಗೋ ಹೊತ್ತಲ್ಲಿ ಇವಂದೆಂಥಾ ಚಾ ಹುಚ್ಚು ಅಂತ ಕಣ್ಣು ಹುಬ್ಬು ಗಂಟಿಕ್ಕಿಕೊಳ್ಳುತ್ತಾ ಅನುಮಾನದಲ್ಲಿ ಅವನನ್ನು ನೋಡಿದೆ. ಅರೇ, ಹೋಗು ಬಾಲ್ಕನೀಲಿ ಮೇಣದ ಬತ್ತಿ ಹಚ್ಚು, ನಾನು ಚಾ ಮಾಡ್ಕೊಂಡ್ ತಗೊಂಡ್ ಬರ್ತೀನಿ,  ಮಳೆ ಜೋರಾಗೋ ಥರಾನೂ ಕಾಣ್ತಿದೆ, ಈಗ್ ಚಾ ಕುಡ್ದ್ರೆ ಸಖತ್ ಮಜಾ ಇರತ್ತೆ ಅಂದ. 'ಅಪ್ಪಣೆ ಮಹಾಪ್ರಭು' ಅಂತ ಎದ್ದು ನಾನು ನನ್ನ ಪಾಲಿನ ಕೆಲಸ ಮಾಡುವುದಕ್ಕೆ ಹೊರಟೆ, ನನಗೂ ಚೂರು ಬೇರೆ ಯೋಚನೆಗಳು ಇಷ್ಟೇ ಇಷ್ಟು ಹೊತ್ತಾದರೂ ಬರಲಿ ಅನ್ನುವ ಇಂಗಿತ ಇದ್ದಂತಿತ್ತು ಹಾಗೂ 'ಏನ್ ಮಾಡ್ತಾನೆ ಇವ್ನು' ಅನ್ನೋ ಕುತೂಹಲಾನೂ ಇತ್ತು. 


ಗಾಳಿ ಅಷ್ಟೇನು ಇರದೇ ಇದ್ದುದಕ್ಕೆ ಮೇಣದಬತ್ತಿ ಹಚ್ಚುವುದು ಕಷ್ಟ ಆಗಲಿಲ್ಲ. ಆದರೂ ಎಲ್ಲಿ ಮಳೆ ನೀರು ತಾಗಿ ನಂದಿಹೋಗುತ್ತದೋ ಅನ್ನುವ ಅಳುಕಿತ್ತು. ಅಷ್ಟರಲ್ಲಿ ಅವ ಎರಡು ಕಪ್ ಚಹಾದೊಂದಿಗೆ ಬಂದ. ನಮ್ಮ ಮನೆಯ ಬಾಲ್ಕನಿಯಿರುವುದು ರಸ್ತೆಗೆ ಅಭಿಮುಖವಾಗಿ ಅಲ್ಲ. ಬಾಲ್ಕನಿಯ ಎದುರಿಗಿರುವುದು ಒಂದು ಉದ್ಯಾನವನ. ನಾವಿಬ್ಬರೂ ಒಟ್ಟಿಗೆ ಕೂತು ಚಹಾ ಕುಡಿಯುವಾಗಲೆಲ್ಲಾ ಆ ಉದ್ಯಾನವನದ ಕಡೆಗೇ ಮುಖ ಮಾಡಿ ಕೂರುವುದು. ಹಾಗೆ ಕೂತು ಚಹಾದ ಒಂದೊಂದೇ ಗುಟುಕು, ಚಹಾ ಸೊಪ್ಪಿನೊಂದಿಗೆ ಹಾಲು ಸೇರಿ ಉಂಟುಮಾಡುವ ಬಣ್ಣ ತುಟಿಗೆ, ನಾಲಿಗೆಗೆ ತಾಕುವಾಗಿನ ಸ್ಪರ್ಶವನ್ನೂ, ಅದರ ಬಿಸಿಯನ್ನೂ, ಉಗಿಯಲ್ಲಿರುವ ಪರಿಮಳವನ್ನೂ ಅನುಭವಿಸುತ್ತಾ ನಾವು ಚಹಾ ಕುಡಿಯುವ ಸಂಭ್ರಮವನ್ನು ನೋಡಲು ಯಾರಾದರೂ ಎದುರಿಗೆ ಇದ್ದರೆ ಖಂಡಿತಾ ಅವರ ರೋಮ ರೋಮಗಳಲ್ಲೂ ಸುಖದ ಉತ್ತುಂಗದ ಅನುಭವವಾಗುತ್ತಿತ್ತೇನೋ, ಚಹಾ ಕುಡಿಯುವುದೆಂದರೆ ನಮಗೆ ಭವಬಂಧನಗಳಿಂದ ಮುಕ್ತವಾಗುವ ಮಾಯಕದ ಕ್ಷಣ. ಇವತ್ತೂ ಚಹಾ ಕುಡಿಯುವ ಕಾರ್ಯಕ್ರಮ ಹಾಗೆಯೇ ಮುಗಿಯಿತು. ಈಗ ವಂದನಾರ್ಪಣೆ ಅನ್ನುವ ಹಾಗೆ ನನ್ನ ಕಡೆಗೆ ತಿರುಗಿ  ಅವ, "ಈಗ ಹೇಳು, ಏನಾಯಿತು?" ಅಂತ ಮೃದುವಾಗಿ ಕೇಳಿದ. ಅವ ಕೇಳುವುದೇ ಹಾಗೆ! 


ಅವ ಕೇಳಿದ ಮೇಲೆ ಅವನಿಗೆ ಹೇಳದೇ ಯಾವುದನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ. ಒಂದು ಭೋರ್ಗರೆತ ನನ್ನೊಳಗೆ ಹುಟ್ಟಿಕೊಂಡಿದ್ದು ನನ್ನ ಅನುಭವಕ್ಕೆ ಬಂತು. ಆ ಭೋರ್ಗರೆತದ ರೌರವವನ್ನೂ ಕೂತು ಕೇಳುವ ತಾಳ್ಮೆ ಅವನಲ್ಲಿತ್ತು. ಕಡಲ‌ ತಡಿಯಲ್ಲಿ ಕಪ್ಪು ಕಲ್ಲುಗಳ‌ ಮೇಲೆ ಲವಣದ ಪರಿಮಳದ‌ ಗಾಳಿಗೆ ಮೈಯೊಡ್ಡಿ ಯಾವ ಗಡಿಬಿಡಿಯೂ ಇಲ್ಲದೆಯೇ ಕೂರುತ್ತೇವಲ್ಲಾ ಅಂಥ‌ ಶಾಂತತೆ ಅವನದು. ನನ್ನ ಕಣ್ಣಲ್ಲಿ ಅವ ಕಣ್ಣಿಡುವಾಗಲೇ ನನ್ನರ್ಧ ತಳಮಳಗಳನ್ನು ಅಪಹರಿಸಿಬಿಡುತ್ತಿದ್ದ. ನನಗೂ ಮೊದಮೊದಲಿಗೆ ಇಂಥವನೊಬ್ಬ ಇರುವುದಕ್ಕೆ ಸಾಧ್ಯವಾ, ಅಥವಾ ಇವೆಲ್ಲವೂ ನಾನೇ ನನಗಾಗಿ ಕಟ್ಟಿಕೊಂಡ ಭ್ರಮೆಗಳಾ‌ ಅನ್ನುವ ಅನುಮಾನಗಳು ಬಹಳಷ್ಟಿದ್ದವು. ನನ್ನೆಲ್ಲ ಪ್ರಶ್ನೆಗಳಿಗೆ ಪ್ರತೀ ಸಲವೂ ಅವ ಉತ್ತರವಾಗಿ ನಿಲ್ಲುತ್ತಿದ್ದ. ಇವತ್ತೂ ಅಷ್ಟೇ, ಅವ ಕೇಳಿದನಲ್ಲ, ಕೇಳುವುದರಲ್ಲೂ ಹಲವು ಬಗೆಗಳಿರುತ್ತವೆ. ಕೆಲವೊಮ್ಮೆ ಕೇಳಬೇಕು ಅಂತ ಕೇಳುವುದು, ಇನ್ನು ಕೆಲವೊಮ್ಮೆ ಕೇಳಲೇಬೇಕು ಅಂತ ಕೇಳುವುದು. ಇವನದು 'ಹೇಳು, ಕೇಳಿಸಿಕೊಳ್ಳುವುದಕ್ಕೆ ನಾನಿದ್ದೇನೆ' ಅನ್ನುವ ಸಾಂಗತ್ಯದ ಭರವಸೆ. ಅವನ ಎಡತೋಳನ್ನು ನನ್ನ ಬಲತೋಳಿಂದ ಬಳಸಿದೆ. ಅವನ ಬೆರಳುಗಳ ಮಧ್ಯದಲ್ಲಿ ನನ್ನ ಬೆರಳುಗಳನ್ನು ಹೊಸೆದೆ. ಒಂದು ಬಿಸಿಯಾದ ಅನುಭವ ಅವನ ರೋಮಗಳಿಂದ ನನ್ನ ಚರ್ಮಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಪ್ರೀತಿಸುವವರ ಒಂದು ಸ್ಪರ್ಶದಲ್ಲಿ ಎಲ್ಲ ಗಾಯಗಳನ್ನೂ ಹೊಲಿದು, ಮಾಯಿಸುವ ಔಷಧವಿದೆ ಅಂತ ಅವನೇ ಆಗಾಗ ಹೇಳುತ್ತಿರುತ್ತಾನೆ. ನಾನು ಅವನ‌ ಎದೆಗೆ ಒರಗಿಕೊಂಡಾಗಲೆಲ್ಲಾ, ಶತ ಶತಮಾನಗಳಿಂದ ಚೂರು ಬಿಸಿಲು ಕಡಿಮೆಯಾಗಬಹುದೆಂದು ಕಾಯುತ್ತಿರುವವನ ಎದೆಗೇ ಮರವೊಂದು ತನ್ನ ರೆಂಬೆಕೊಂಬೆಗಳ ಚಾಚಿ ನೆರಳ ಹಾಸಿದಂತೆ ಇದು ಅಂತ ನನ್ನ ಕುರಿತು ಯಾವಾಗಲೂ ಅವ ಹೇಳುತ್ತಿರುತ್ತಾನೆ. ಅವನಿಗೆ ಹೇಳಿದೆ, ಎಲ್ಲವೂ ಇದ್ದು ಏನೋ ಕಳೆದುಕೊಂಡಂತೆ; ಎಳೆದುಕೊಂಡ ಉಸಿರು ಮತ್ತೆ ಬಿಡಲಿಕ್ಕೇ ಸಾಧ್ಯವಾಗದಿದ್ದರೆ? ಅನಿಶ್ಚಿತತೆ; ನಾಳೆ‌ ಸೂರ್ಯೋದಯವಾದ ಕೂಡಲೇ ಮತ್ತೆ ಎಲ್ಲವೂ ಹೊಸತಾಗಿ ಶುರುವಾಗುತ್ತದೆ ಬಿಡು ಅಂತಂದುಕೊಂಡರೂ, ಆ ಎಲ್ಲಾ ನಾಳೆಯ ಮುಂಜಾವುಗಳೂ ನಿನ್ನೆಗಳ ಭಾರದೊಂದಿಗೇ ಹುಟ್ಟಿಕೊಂಡಂತೆ ತಳಮಳವಾಗುತ್ತದೆ. ಈ ಹೊತ್ತು ಹೇಗೋ ಕಳೆಯಬಹುದು ಬಿಡು ಅಂತೆಲ್ಲಾ‌ ಅಂದುಕೊಂಡ ಮಾತ್ರಕ್ಕೆ ಹಾಗೆಲ್ಲಾ ಅದು ಕಳೆದುಹೋಗುವುದಿಲ್ಲ. ನಿನಗೆ ಗೊತ್ತಲ್ವಾ, ಮನಸ್ಸು ಭಾರವಾದಷ್ಟೂ ಕಾಲದ‌‌ ಗತಿ ನಿಧಾನವಾಗುತ್ತಾ ಹೋಗುತ್ತದೆ. 


ಅವ ನಿಧಾನವಾಗಿ ನನ್ನ ಕೈಯನ್ನು ಅವನ ಎಡತೋಳಿನಿಂದ ಬಿಡಿಸಿಕೊಂಡ, ಅವನ ಎರಡೂ ತೋಳುಗಳಿಂದ ನನ್ನನ್ನು ಪೂರ್ಣವಾಗಿ ಆವರಿಸಿಕೊಂಡು ಅವನೆದೆಗೆ ಮತ್ತೆ ನನ್ನ ತಲೆ ಒರಗುವಂತೆ ಚಾಚಿಕೊಂಡ. ಒಂದು ಕ್ಷಣ ಅವನ ಕೆನ್ನೆಗಳಲ್ಲಿ ಮಂದಹಾಸದ ಗೆರೆಗಳು ಮೂಡಿ ಅಲ್ಲೇ ನೆಲೆಸಿದಂತೆ ಕಂಡವು, ನಾನು ಒರಗಿದಲ್ಲೇ ತಲೆಯೆತ್ತಿ ಅವನನ್ನೇ ನೋಡುವ ಪ್ರಯತ್ನದಲ್ಲಿದ್ದೆ. ನನ್ನ ತಲೆಗೂದಲ ಬುಡದಲ್ಲಿ ಕೈಯಾಡಿಸುತ್ತಾ ಅವ ಕೇಳಿದ, ಯಾಕೆ ಹೀಗೆ ಅನ್ಸ್ತಿದ್ಯಂತೆ?.. ಗೊತ್ತಿಲ್ಲ ಅಂತನ್ನುವುದು ನನ್ನ ಉತ್ತರವೆಂದು ಅವನಿಗೆ ಗೊತ್ತಿತ್ತು. ನಾನೇ ಮುಂದುವರೆದು ಹೇಳಿದೆ,‌ ಏನಾದರೊಂದು ಹೊಸತು ಶುರುವಾದ ಸಮಯದಲ್ಲಿ ಹೊಸತರ ಕುರಿತಾಗಿ ಹೆಚ್ಚು ಗಮನ ಕೊಡುವಾಗ ಹಳೆಯದರ ಕುರಿತಾಗಿ ಗಮನ ಚೂರು ಕಡಿಮೆಯಾದಂತೆ‌ ತೋರುವುದೇನೋ ಹೌದು; ಆದರೆ, ಅದರರ್ಥ ನಾವು ಹಳತನ್ನು ಮರೆತೆವು ಅಂತೇನೂ ಅಲ್ಲ‌ ಅಲ್ವಾ? ಆದರೆ, ಯಾಕೆ ಕೆಲವೇ ಕೆಲವು ಹಳೆಯ ಸಂಬಂಧಗಳು ಮಾತ್ರವೇ ಎಷ್ಟೋ ಕಾಲಗಳ‌ ನಂತರವೂ ಸಹಜವಾಗೇ ಇರುತ್ತದೆ, ಉಳಿದವುಗಳು ಏನೂ ಇರಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೇರೆಯಾಗಿ ಹೋಗುತ್ತವೆ? ಅಷ್ಟೂ ವರ್ಷಗಳ ಕಾಲದ ಅಷ್ಟೂ ನೆನಪನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಬಹುದಾ? ಕೆಲವೊಮ್ಮೆ ಮಾತು ಅನಗತ್ಯವಾಗುತ್ತದೆ, ಆದರೆ ಅದನ್ನೇ‌ ಅಹಂಕಾರ ಅಂತಂದುಕೊಂಡು ದೂರವಾಗಬಹುದಾ? ಅಸ್ಪಷ್ಟ ಸ್ವಪ್ನಗಳಲ್ಲಿ ಒಂದು ಪರಿಚಿತ ದಾರಿಗಾಗಿ ಪರಿತಪಿಸುತ್ತಾ ಇರೋರಲ್ವಾ ನಾವು? ನೀನೇ ಹೇಳು ಹೀಗೆ ಸಂಬಂಧಗಳು ಸವಕಲಾಗಬಹುದಾ? ಗುಮ್ಮನಂತೆ ಮುಖ ಮಾಡಿಕೊಂಡು ಅವನ ನೋಡಿದೆ. ಮುಟ್ಟುತ್ತಿರುವನೋ ಇಲ್ಲವೋ ಅನ್ನುವಂತೆ ಹಣೆಯ ತುದಿಯಿಂದ ತನ್ನ ಬಲಗೈಯ ತೋರುಬೆರಳನ್ನು ಜಾರಿಸುತ್ತಾ ಜಾರಿಸುತ್ತಾ ಕಣ್ಣು ಹುಬ್ಬುಗಳ ಮಧ್ಯದ ಹಾದಿಯಿಂದ ಕೆಳಗಿಳಿದು ಮೂಗಿನ ತುದಿಯಲ್ಲಿ ನಿಂತ, ಪಕ್ಕದ ಮೂಗುತಿ ಹವಾಮಾನ ವೈಪರೀತ್ಯದ ದಾಳಿಗೆ ತುತ್ತಾಗಿ ಅಸ್ಥಿರ ಚಲನೆಯಲ್ಲಿತ್ತು. ಇದು ಹೊಸತಲ್ಲ, ಆದರೂ ಇದು ಮತ್ತೆ ಮತ್ತೆ ಹೊಸತೆನ್ನುವಂಥದ್ದೇ ಅನುಭವ, ಅವನಿಗೆ ಮಾತ್ರ ಗೊತ್ತಿರುವ ನನ್ನ ಗುಟ್ಟು.. 


ಮುಂದುವರೆದು ಅವ ಹೇಳಿದ, ನಿನಗೆ ಗೊತ್ತಾ, ನಾವು ಅದೆಷ್ಟೋ ನೆನಪುಗಳ ನೆರಳುಗಳಿಂದ ಆಚೆ ನಿಂತು ತಾಜಾ ಬಿಸಿಲನ್ನು ನಿಧಾನವಾಗಿ ಉಸಿರಲ್ಲಿ ತುಂಬಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತೇವೆ, ಆದರೆ ಅದು ಬರೀ ಅಷ್ಟೇ ಅಲ್ಲ; ಆ ನೆರಳುಗಳ ನೆನಪಲ್ಲೇ ಈ ಬಿಸಿಯನ್ನು ಅನುಭವಿಸುತ್ತೇವೆ. ಇವೆರಡೂ ಬೇರೆ ಬೇರೆ ಕ್ರಿಯೆಗಳಾದರೂ ಒಂದರ ಅನುಭವವನ್ನು ಇನ್ನೊಂದು ಸಲಹುತ್ತದೆ. ನೆನಪಿದೆಯಾ ನಿನಗೆ, ಆವತ್ತೊಂದಿನ ನಾವು ಆ ಹಳದಿ ಹೂವಿನ ಕಣಿವೆಗೆ ಹೋಗುವ ಮುನ್ನ ರಾತ್ರಿ ಎತ್ತರದ ಭಾಗದ ಮನೆಯಲ್ಲಿ ತಂಗಿದ್ದು.. ಜೀರುಂಡೆಗಳು ಪೂರಾ ರಾತ್ರಿ ಕಿರ್ರೆನ್ನುತ್ತಾ ಕೂಗಿದ್ದು, ಅದ್ಯಾವುದೋ ವಿಲಕ್ಷಣ ಪರಿಮಳ ಅಲ್ಲಿನ ಇಡೀ ವಾತಾವರಣದಲ್ಲಿ ಹರಡಿಕೊಂಡಿದ್ದು, ಅಲ್ಲಿನ ಆ ರಾತ್ರಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ನಾನು ಒದ್ದಾಡುತ್ತಿರುವಾಗ ನೀನು ಅರ್ಧ ರಾತ್ರಿಯವರೆಗೂ ನನ್ನನ್ನು ಹೀಗೇ ಒರಗಿಸಿಕೊಂಡು ನಿನ್ನ ಬಾಲ್ಯದ ಕತೆಗಳನ್ನು ಹೇಳಿ ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು.. ಆವತ್ತು ಆ ಒದ್ದಾಟವನ್ನು ನಾವಿಬ್ಬರೂ ಕಡಿಮೆ ಮಾಡಲಿಕ್ಕಾಗುವುದಿಲ್ಲವೆಂಬುದು ಇಬ್ಬರಿಗೂ ಅರಿವಿತ್ತು. ನಾವು ಆ ಪ್ರಯತ್ನವನ್ನೂ ಮಾಡಲಿಲ್ಲ, ಬದಲಾಗಿ ಬದುಕನ್ನು ಹಂಚಿಕೊಂಡೆವು, ವರ್ತಮಾನದಲ್ಲಿ ಭೂತಕಾಲವನ್ನೂ ನಿನ್ನ ಬಾಲ್ಯವನ್ನೂ ಜೀವಿಸಿದೆವು, ಆ ನೆನಪುಗಳ ಭಾಗವಾಗಿದ್ದ ಅದೆಷ್ಟೋ ವ್ಯಕ್ತಿಗಳು ಈಗ ಜೊತೆಯಲ್ಲಿ ಇಲ್ಲ ಅಲ್ವಾ.. ನಾವು ಯಾವ ನೆನಪನ್ನು ಉಳಿಸಿಕೊಳ್ಳಬೇಕು ಅಂತ ಬಯಸುತ್ತೇವೋ ಅಂಥವುಗಳನ್ನು ಮಾತ್ರ ಉಳಿಸಿಕೊಳ್ಳುತ್ತೇವೆ; ಅವುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಬಹುದು. ಕೆಲವರು ಹಾಗೆಯೇ, ಆ ಭಾಗದ ಬದುಕಿನಲ್ಲಿ ಮಾತ್ರ ಭೇಟಿಯಾಗುವವರು. ಅದರ ನಂತರ ಅವರ ಅಸ್ತಿತ್ವವೆನ್ನುವುದು ಸ್ವಪ್ನದ ಹಾಗೆ. ಯಾವುದೋ ಅನಪೇಕ್ಷಿತ ಸಮಯದಲ್ಲಿ ಧುತ್ತನೆ ನೆನಪಾಗಬಹುದು; ಅಥವಾ, ಕೆಲವೊಮ್ಮೆ ಮುಗುಳುನಗೆಯೊಂದಿಗೆ ವರ್ತಮಾನವನ್ನು ಉಲ್ಲಸಿತಗೊಳಿಸಬಹುದು. ನಿನ್ನ ಅನಿಶ್ಚಿತತೆ, ನಿನ್ನ ನೆನಪುಗಳು ಹಾಗೆಯೇ ಇರಲಿ ಬಿಡು, ಈಗ ಇರುವ 'ನೀನು' ಆಗಿರುವುದು ಈ ಎಲ್ಲ ಅನುಭವಗಳಿಂದಲೇ.. ಅವುಗಳನ್ನೇ ತಿರಸ್ಕರಿಸಿದರೆ ನಿನ್ನನ್ನೇ ತಿರಸ್ಕರಿಸಿದಂತೆ. ಬದುಕು ಎಲ್ಲದರ ಒಟ್ಟೂ ಮೊತ್ತ, ಬಿಡಿ ಹತ್ತುಗಳ ಲೆಕ್ಕದಲ್ಲಿ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಅಲ್ವಾ..  ಇವತ್ತು ನಾ ನಿನಗೆ ನನ್ನ ಬಾಲ್ಯದ ಕತೆಗಳನ್ನು ಹೇಳ್ತೀನಿ, ನಿನ್ನಷ್ಟು ಚೆಂದ ಅಲ್ಲ, ಆದ್ರೂ, ಏನೋ ಚೂರು ಹಾಂಗೇ.. ಅನ್ನುತ್ತಾ ನನ್ನ ಮೂಗನ್ನು ತನ್ನ ಬೆರಳಿಂದ ಕುಟುಕಿದ. 


ಅವರಿಬ್ಬರೂ ಎರಡು ಗಾಯಗಳು ಒಂದಕ್ಕೊಂದು ಅಂಟಿಕೊಂಡಂತೆ ಕೂತಿದ್ದರು. ಬೇಗ ಮಾಯುವುದಕ್ಕಿಂತ ಆ ನೋವಿನ ಪ್ರತಿ ಕ್ಷಣವನ್ನೂ ಜೀವಿಸುವುದೇ ಮುಖ್ಯ ಎನ್ನುವಂತೆ.. ಬೇಕಂತಲೇ ಒಂದು ಸಣ್ಣ ಕಲೆ ಉಳಿಸಿಕೊಳ್ಳುವಂತೆ.. ಅನಾಥ ಮೌನದ ಕಣಕಣಗಳಲ್ಲೂ ಮಳೆಯ ಹಾಡು ಇನ್ನಷ್ಟು ವಿಲೀನವಾಗಿತ್ತು, ಆ ರಾತ್ರಿ ಮತ್ತಷ್ಟು ಪ್ರೌಢವಾಗಿತ್ತು...


~`ಶ್ರೀ'

   ತಲಗೇರಿ

ಬುಧವಾರ, ಜುಲೈ 14, 2021

ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ ಇತ್ಯಾದಿ...?

 ಯಾವುದು ಕತೆಯಾಗಬಲ್ಲದು: ವಾಸನೆ ಶಬ್ದ ಬಣ್ಣ  ಇತ್ಯಾದಿ...?



ಯಾವುದು ಕತೆಯಾಗಬಹುದು? ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಕತೆಗಳು ಸಿಗದೇ ಹೋಗಬಹುದು. ಆದರೆ, ಕತೆಗಾರನಿಗೆ ಸಿಕ್ಕಿದ್ದೆಲ್ಲವೂ ಕತೆಯೇ. ಮುಂಚೆ ಇದ್ದಂಥ ಕತೆಯ ಸ್ವರೂಪ, ಉದ್ದೇಶ, ರಚನಾ ತಂತ್ರ ಮತ್ತು ಅದರ ವಸ್ತುಗಳು ಕಾಲದ ಸ್ಪಂದನೆಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ ಈಗಿನ ಕತೆಯ ಮಿಡಿತಗಳು ಬೇರೆಯದೇ ಆಗಿ ನಮಗೆ ಸಿಗುತ್ತವೆ. 'ಅಲ್ಲಿಗೆ ಎಲ್ಲ ಮುಗಿದು, ಅಲ್ಲಿ ಎಲ್ಲರೂ ಸುಖವಾಗಿದ್ದರು' ಎನ್ನುವ ಕತೆಗಳಿಂದ ಈಗ ನಾವು ಇನ್ನಷ್ಟು ವಿಸ್ತಾರವನ್ನು ಹುಡುಕಿ ಹೊರಟಿದ್ದೇವೆ. ಒಟ್ಟಾರೆ ಬದುಕಿಗಿಂತ, ಅದರಲ್ಲಿ ಇರುವ ಕ್ಷಣಗಳನ್ನು ಬಿಡಿಸಿಟ್ಟು, ಅವುಗಳ ಮುಖೇನ ಇಡೀ ಬದುಕನ್ನು ನೋಡುವ ಈ ಕ್ರಮವೂ ಒಂಥರಾ ಚೆಂದವೇ. ಬಹಳಷ್ಟು ಸಲ ಅನಿಸುವುದೇನೆಂದರೆ, ನಮ್ಮದೇ ಬದುಕಿನಿಂದ ಕತ್ತರಿಸಿ ತೆಗೆದ ಭಾಗಗಳಿಗೆ ಹಿಡಿದ ಕನ್ನಡಿಯೇ ಕತೆ. ಬಿಂಬಗಳು ನಾವು, ನೀವು ಯಾರೂ ಆಗಿರಬಹುದು. ಅದಕ್ಕಾಗಿಯೇ ಓದುಗ ಆ ಕಥಾ ಪರಿಸರದಲ್ಲಿ ತಾನು ಹೊಕ್ಕದೇ ಓದುತ್ತೇನೆಂದರೆ, ಆ ಕತೆ ಓದುಗನಲ್ಲಿ ಹೊಕ್ಕುವುದು ತುಸು ಕಷ್ಟವೇ! ಓದುಗನಲ್ಲಿ ಅದೆಂಥದ್ದೇ ಜ್ಞಾನವನ್ನು, ತಿಳಿವಳಿಕೆಯನ್ನು ಅದು ಬಿತ್ತಿದರೂ ಆ ಕ್ಷಣಕ್ಕೆ ಉಂಟಾಗುವ ಭಾವತೀವ್ರತೆಯೇ ಈ ಎಲ್ಲಾ ಕಥಾ ಪ್ರಪಂಚದ ಅಸ್ತಿತ್ವದ ಮೂಲ; ಇದು ಕೇವಲ ಕತೆಗಳಿಗೆ ಸೀಮಿತವಲ್ಲ, ಎಲ್ಲಾ ಕಲಾ ಪ್ರಕಾರಗಳಿಗೂ ಇದು ಸಮಂಜಸ ಅಂತನ್ನಬಹುದೇನೋ. ಬಹುತೇಕ ಎಲ್ಲ ಓದುಗರಿಗೂ ತಮ್ಮ ತಮ್ಮ ನಂಬಿಕೆಗಳ ಪ್ರಭಾವಲಯದಿಂದ ಆಚೆ ನಿಂತು ಈ ಹೊಸ ಪ್ರಪಂಚದಲ್ಲಿ ಸಂವಹಿಸುವುದು ಚೂರು ಕಷ್ಟವೇ, ಜೊತೆಗೆ ಅದು ಮನುಷ್ಯ ಸಹಜ ಗುಣ ಕೂಡಾ ಹೌದು. ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆಯೇ ಅಲ್ಲವಾ ನಮ್ಮೆಲ್ಲ ಆಯ್ಕೆಗಳು ನಿಂತಿರುವುದು. ಸರಿ ತಪ್ಪುಗಳ ವಿಚಾರವಾಗಲೀ, ಅಥವಾ ದಕ್ಕುವಿಕೆಯ ಕುರಿತಾಗಿನ ವಿಚಾರಗಳಾಗಲೀ ಇಲ್ಲಿನ‌ ವ್ಯಾಪ್ತಿಯೊಳಗಿಲ್ಲ; ಅವು ಆಮೇಲೆ ಹುಟ್ಟಿಕೊಳ್ಳುವ ಸಂಗತಿಗಳು. 'ಯಾವುದು ಕತೆಯಾಗಬಲ್ಲದು' ಅನ್ನುವುದಕ್ಕೆ 'ಯಾವುದೂ ಕತೆಯಾಗಬಲ್ಲದು' ಅನ್ನುವುದೇ ಅತಿ ಹತ್ತಿರದ ಉತ್ತರವಾಗಬಹುದು ಅನಿಸುತ್ತದೆ; ಕತೆಯಾಗಿಸುವವರು ಬೇಕಷ್ಟೇ! ಹೀಗೆ ಮನುಷ್ಯಲೋಕದ ಸ್ವಭಾವಗಳನ್ನು ತೀರಾ ಹತ್ತಿರದಿಂದ, ಯಾವುದೇ ನಿರ್ಣಯಗಳನ್ನು ಹೇರದೇ ನೋಡುವ ಪ್ರಯತ್ನದ ಕಥಾ ಸಂಕಲನವೇ ಅಶೋಕ ಹೆಗಡೆಯವರ 'ವಾಸನೆ ಶಬ್ದ ಬಣ್ಣ ಇತ್ಯಾದಿ'. 


ಇಲ್ಲಿನ ಕಥಾ ಪಾತ್ರಗಳು ಹೊರಗಿನದಲ್ಲ, ಹಾಗಂತ ತೀರಾ ಒಳಗಿನದೂ ಅಲ್ಲ. ನಗರ, ಹಳ್ಳಿ ಇತ್ಯಾದಿಗಳು ಇದ್ದರೂ ಅವುಗಳಷ್ಟೇ ಅಲ್ಲ. ಇಲ್ಲಿ ಇವೆಲ್ಲವೂ ನಿಮಿತ್ತಗಳು ಹಾಗೂ ಆ ಪರಿಸರದ ಮನುಷ್ಯರು ಮತ್ತವರ ಮನಸ್ಥಿತಿಗಳೇ ಇಲ್ಲಿನ ಮುಖ್ಯ ಅಂಗ. ಇಂದ್ರಿಯಗಳು ವಾಸನೆ, ಶಬ್ದ, ಬಣ್ಣ, ರುಚಿ, ಸ್ಪರ್ಶ ಇತ್ಯಾದಿಗಳನ್ನು ಹೇಗೆ ಗುರುತಿಸುತ್ತವೆಯೋ ಹಾಗೇ ಅವು ಲೋಭ, ಮೋಹ, ಕಾಮ‌ ಇತ್ಯಾದಿಗಳನ್ನೂ ಉದ್ದೀಪಿಸುತ್ತವೆ. ಬಹುತೇಕ‌ ಎಲ್ಲಾ ಕತೆಗಳನ್ನು ಓದುವಾಗಲೂ ಪೂರ್ವಗ್ರಹಗಳಿಲ್ಲದೇ ಓದುವುದೇ ಅವುಗಳಿಗೆ ಕೊಡಬೇಕಾದ ಗೌರವ. ಬರೆಹಗಾರ ಬರೆಯುತ್ತಾ ಬರೆಯುತ್ತಾ ಮನುಷ್ಯನಾಗಬಹುದು, ಓದುಗ ಓದುತ್ತಾ ಓದುತ್ತಾ ಮನುಷ್ಯನಾಗಬಹುದು. ಇಂಥದ್ದೇ ಮನೋಭೂಮಿಕೆ ಈ ಕಥಾ ಸಂಕಲನದ ಕತೆಗಳಿಗೆ ಬೇಕು. ಪ್ರಾಪಂಚಿಕ ಸುಖ, ಮತ್ತದರ ತಲ್ಲಣಗಳನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾ, ನಿಜವಾದ ಮನುಷ್ಯ ಲೋಕದೊಳಗೆ ಲೇಖಕರು ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಸ್ವರೂಪವಿದೆ, ಕುರೂಪವಿದೆ. ಅದೆಂಥದ್ದೇ ಆದರೂ ಅದು ಮನುಷ್ಯನಿಗೇ ಸಂಬಂಧಪಟ್ಟಿದ್ದು ಅನ್ನುವುದು ಗಮನಿಸಬೇಕಾದ ಸಂಗತಿ. ಕಥಾ ಸಂಕಲನದ ಹೆಸರೇ ಹೇಳುವಂತೆ ಇಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ವಾಸನೆಯಿದೆ, ಬಣ್ಣ ಇದೆ ಹಾಗೂ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಶಬ್ದವಿದೆ. ಅದರ ಜೊತೆಗೆ ಈ 'ಇತ್ಯಾದಿ'ಗಳಲ್ಲಿ ಅವ್ಯಕ್ತವಾದ ತಳಮಳ, ಅಸ್ಥಿರತೆ, ನೋವು, ತಲ್ಲಣಗಳೂ ಇವೆ. ಈ ಕಥಾ ಪ್ರಪಂಚದಲ್ಲಿ ಮಡಿವಂತಿಕೆಯಿಲ್ಲ; ಸಹಜವಾದ ವಾತಾವರಣವಿದೆ. ಇಲ್ಲಿನ ಎಲ್ಲ ಮಾತುಗಳೂ ಅಪರಿಚಿತ ಪ್ರಪಂಚದಿಂದ ಕದ್ದು ತಂದವುಗಳಲ್ಲ. ಅದೇ ಪರಿಸರದಲ್ಲಿ ಜೀವಿಸಿದ ಮಾತುಗಳವು. 


ಇಡೀ ಪುಸ್ತಕದ ತುಂಬಾ ಲೇಖಕರು ಭಾಷೆಯನ್ನು ಬಳಸಿಕೊಂಡ ರೀತಿ ಹಾಗೂ ಕೆಲವು ಚಿತ್ರಣಗಳನ್ನು ಕಟ್ಟಿಕೊಟ್ಟ ರೀತಿ ಕತೆಗಾರನ ಸೂಕ್ಷ್ಮಪ್ರಜ್ಞೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಅದನ್ನು ಅನುಭವಿಸುವ ಸುಖಕ್ಕೆ ಮುಖದಲ್ಲೊಂದು ಮಂದಹಾಸ ಸುಳಿಯದೇ ಹೋಗುವುದಿಲ್ಲ! 'ಬೋಳು ತಲೆ ಮೇಲೆ ಹಾದ ರಕ್ತನಾಳಗಳನ್ನು ಇಷ್ಟಿಷ್ಟೆಯಾಗಿ ಉಬ್ಬಿಸುತ್ತಾ' ಅಂತ ಶಿವರಾಮಜ್ಜನ ಪಾತ್ರದ ಕುರಿತಾಗಿ ಹೇಳುತ್ತಾ ಹೋಗುವಾಗ ಹಣೆಯಿಂದ ಹಾದು ಹೋಗುವ ನಮ್ಮದೇ ರಕ್ತನಾಳಗಳು ಉಬ್ಬಿದ ಅನುಭವವಾಗುತ್ತದೆ.   'ನೆಲದ ಕಾಲನ್ನೇ ಬಿಡಿಸುವ' ಲೇಖಕರು, ಒಂದು ಪಾತ್ರವನ್ನು 'ನೆರಳಿನ ಸಹಿತ' ಮನೆಯಿಂದ ಆಚೆ ಹಾಕುತ್ತಾರೆ. ನೆರಳಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ, ಆದರೂ ಹೊರಗೆಲ್ಲೋ ನಿಂತಾಗ ಅಪ್ಪಿ ತಪ್ಪಿ ಬೀಳಬಹುದಾದ ನೆರಳು ಕೂಡಾ ಮನಸ್ಸಿನೊಳಗೆ ಬೀಳದ ಹಾಗೆ ಹೊರಗೆ ಹಾಕುವುದೆಂದರೆ ಅದಕ್ಕೆ ಗಟ್ಟಿ ಮನಸ್ಸೇ ಬೇಕು! 


ಕಾಲ ಇದೆ, ಕಾಲ ಕಳೆಯುತ್ತಾ ಹೋಗುತ್ತದೆ. ಕಾಲ ತನ್ನದೇ ವ್ಯೋಮದಲ್ಲಿ ತನ್ನನ್ನೇ ತಾನು ಖಾಲಿಯಾಗಿಸಿಕೊಳ್ಳುತ್ತಲೋ ಅಥವಾ ಕಬಳಿಸುತ್ತಲೋ ಹೋಗುವ ಒಂದು ಪ್ರಕ್ರಿಯೆಯಂತೂ ಇದೆ. ಕೆಲವೊಮ್ಮೆ ನಮ್ಮ ಇಂದಿನ ದಿನಗಳು ಹಿಂದಿನ ದಿನಗಳ ನೋವಿಗೆ ಚೂರು ಉಪಶಮನ ನೀಡಬಲ್ಲವು. ಬಹುತೇಕ ನೆನಪುಗಳು ಮಾಸುತ್ತವೆ. ಇನ್ನು ಕೆಲವು, ನಮ್ಮ ಮನಸ್ಸಿನ ಸಮತೋಲನವನ್ನು ಆಗಾಗ ಏರುಪೇರಾಗಿಸುತ್ತವೆ ಹಾಗೂ ಅದರಿಂದ 'ಈ ಹೊತ್ತು' ಅನ್ನುವುದು ಕೂಡಾ ಜಾರಿಹೋಗುತ್ತದೆ. ಇದು ಕಾಲವೇ ಕಾಲವನ್ನು ತಿನ್ನುವುದಾ? ಅನ್ನುವ ಒಂದು ಕುತೂಹಲಕಾರಿ ಪ್ರಶ್ನೆಯೊಂದು 'ದಿನಗಳು ದಿನಗಳನ್ನು ತಿನ್ನುತ್ತಾ' ಅನ್ನುವ ವಾಕ್ಯದ ಮೂಲಕ ವ್ಯಕ್ತವಾಗಿದೆ.


ನಮ್ಮಲ್ಲಿ ಇವತ್ತಿಗೂ ಸ್ತ್ರೀಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲ ಮನಸ್ಸುಗಳು ಕಡಿಮೆಯೇ. ಸಾಹಿತ್ಯದಲ್ಲಿ ಕೂಡಾ 'ಹೆಚ್ಚಿಗೆ' ಹೇಳುವುದಕ್ಕೆ ತುಸು ಕಷ್ಟವೇ. ಯಾವಾಗ ಪುರುಷ ತನ್ನ ಕಣ್ಣುಗಳಿಂದ ಸ್ತ್ರೀ ಸಂವೇದನೆಯಿರುವ, ಅವಳ ಭಾವಪ್ರಪಂಚವಿರುವ ಸಾಹಿತ್ಯವನ್ನು ನೋಡುತ್ತಾನೋ ಅಲ್ಲಿಗೆ ಅದನ್ನು ನೋಡುವ ಹಾದಿಯೇ ತಪ್ಪಿದಂತಾಗುತ್ತದಲ್ಲವಾ? ಇದನ್ನು 'ಅವಳ‌ ಕಣ್ಣು'ಗಳಲ್ಲೇ ಅವಳು 'ಹೇಳಿದ ಹಾಗೇ' ನೋಡಬೇಕು. ಆದರೆ ನಮಗೆ ದೃಷ್ಟಿಯೂ ಬೇರೆ, ದೃಷ್ಟಿಕೋನವೂ ಬೇರೆ; ಜಗದ ಸಹಜ ಸ್ವಭಾವ ಅನ್ನೋಣವೇ? ಚೂರಾದರೂ ಬದಲಾಗಬಹುದೇನೋ ತಿಳಿದಿಲ್ಲ.. ಇಲ್ಲಿನ ಕತೆಯಲ್ಲೊಂದು ಮಾತಿದೆ, "ನನ್ನ ಮೊಲೆ ಹಿಡಿದ ನಿನ್ನದೇ ಕೈಯಲ್ಲಿ ಎದೆ‌ ಸ್ವಲ್ಪ ಮುಟ್ಟಿ ನೋಡು ಮಾರಾಯಾ, ನೋವು ಅರ್ಥವಾದರೂ ಆದೀತೇ ನಿನ್ನ ಬೈನರಿ ಮೆದುಳಿಗೆ" 


ಮದುವೆಯಲ್ಲಿ ಗಂಡಿನ ಪಾದ ಸರಿಯಾಗಿ ತೊಳೆಯಲಿಲ್ಲವೆಂದು ಶುರುವಾದ ಜಗಳ ಮದುವೆ ಹೆಣ್ಣಿನ ಕಣ್ಣೀರಿನಲ್ಲೇ ಪಾದ ತೊಳೆಯಬೇಕಾದಲ್ಲಿಗೆ ಹೋಯಿತು ಅನ್ನುವಾಗ ಮುಂಚೆ ಇದ್ದ, ಈಗಲೂ ಬಹುತೇಕ ಕಡೆಗಳಲ್ಲಿ ಇರಬಹುದಾದ ದರ್ಪಕ್ಕೆ ಹಿಡಿದ ಕನ್ನಡಿಯೇ ಅಲ್ಲವಾ ಇದು? ಮುಖದಲ್ಲಿ ನೆರಿಗೆಗಳು ಬಹಳಷ್ಟಿವೆ, ತಿಕ್ಕಿ ತಿಕ್ಕಿ ತೆಗೆಯಲೇಬೇಕು ಬಿಡಿ! 


"ಈ ಸಮುದ್ರದ ನೀರಿನ ಮೇಲೆ ನಡೆಯುತ್ತಾ ಸಾಗಿದರೆ ಗೋಕರ್ಣದ ಕಡಲಿನ ದಂಡೆ ಸಿಗಬಹುದೇ.." ಆಸ್ಟ್ರೇಲಿಯಾದ ಸಮುದ್ರವೊಂದು ಗೋಕರ್ಣದ ಸಮುದ್ರದೊಂದಿಗೆ ಬೆಸೆದುಕೊಳ್ಳುವುದು ಹೀಗೆ. ದೂರದಲ್ಲೇ ಇದ್ದರೂ, ಮೂಲವನ್ನು ದೂರ ಎನ್ನುವ ಮಾಧ್ಯಮದ ಮೂಲಕವೇ ಮುಟ್ಟಬಹುದಾದ, ಅದರಿಂದ ತೆರೆದುಕೊಳ್ಳಬಹುದಾದ ನಾಳೆಗಳಿಗೆ ತೆರೆದುಕೊಳ್ಳುವುದೂ ಒಂದು ಚೆಂದವೇ ಅಲ್ಲವಾ?


ಹೀಗೆ ಇಲ್ಲಿನ‌ ಪ್ರತಿ ಕತೆಯೂ ನಮ್ಮದೇ ಲೋಕದ ಇನ್ನೊಂದು ಭಾಗವನ್ನು, ನಮ್ಮದೇ ಜಗತ್ತಿನ ಇತರ ಪಾತ್ರಗಳನ್ನು, ನಮ್ಮದೇ ಸ್ವಭಾವಗಳ ಇನ್ನಷ್ಟು ಮುಖಗಳನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತದೆ. ಕತೆ ಕಟ್ಟುವುದೂ ಒಂದು ಕಲೆ ಅಂತ ಒಪ್ಪುವುದಾದಲ್ಲಿ ಅದಕ್ಕೆ ಕೌಶಲವೂ ಬೇಕಲ್ಲವಾ? ಅಂಥ ಕೌಶಲ್ಯದ ನಿದರ್ಶನ ಅನ್ನುವಂತಿದೆ ಇಲ್ಲಿನ ಕಥನ ಶೈಲಿ, ಇಲ್ಲಿನ ವಾಕ್ಯಗಳು. ಇಲ್ಲಿನ ಕತೆಗಳನ್ನು ಓದಿದ ನಂತರ, "ಯಾವುದು ಕತೆಯಾಗಬಹುದು' ಅಂತ ಕೇಳಿದರೆ, ಮತ್ತೊಮ್ಮೆ ಸ್ಪಷ್ಟವಾಗಿ ಖಂಡಿತಾ ಹೇಳಬಹುದು " ಯಾವುದೂ ಕತೆಯಾಗಬಲ್ಲದು"


~`ಶ್ರೀ'

   ತಲಗೇರಿ

ಸೋಮವಾರ, ಜೂನ್ 7, 2021

ನೆನಪಿನ ಹಂಗಿಗೆ ನಾಲ್ಕು ಸಾಲು...


 ನೆನಪಿನ ಹಂಗಿಗೆ ನಾಲ್ಕು ಸಾಲು...



ಸಖೀ ರಾಧೆ,


ಅದೆಷ್ಟು ವಸಂತಗಳು ಹೂ ಮುಡಿದು ಕೂತವು, ಅದೆಷ್ಟು ಮೇಘಮಾಲೆ ನಭವನ್ನು ಅಲಂಕರಿಸಿದವು, ಅದೆಷ್ಟು ಮರಗಳು ಎಲೆಯುದುರಿಸಿ ನಿಂತವು ಕೃಷ್ಣನಿಲ್ಲದೇ? ಇದು ನಾನು ಬರೆಯುತ್ತಿರುವ ನಾಲ್ಕನೇ ಪತ್ರ ನಿನಗೆ. ನಮ್ಮ ಬೃಂದಾವನದ ದಿನಗಳನ್ನು ನೆನಪಿಸುವ ಸಲುವಾಗಿಯೇ ಪತ್ರ ಬರೆಯುತ್ತಿದ್ದೇನೆ. ಬೃಂದಾವನದ ಹಾದಿಯ ಇಕ್ಕೆಲಗಳಲ್ಲಿ ದುಂಬಿಯ ಗೀಗೀಪದ ಅದ್ಯಾವ ಹಾಡುಗಾರನಿಗಿಂತ ಕಡಿಮೆಯಿತ್ತು ಹೇಳು, ಎಲ್ಲಾ ಸ್ವರಗಳನೂ ಅವಕೆ ಹೇಳಿಕೊಟ್ಟವರಾರು ಅಂತ ನೀನೊಮ್ಮೆ ವಿಸ್ಮಯದಿಂದ ಕೇಳಿದ್ದು ನೆನಪಿದೆಯಾ? ನಿನ್ನ ಮೂಗಿನ ತುದಿಗೊಂದು ದುಂಬಿ ಬಂದು ಕೂತಿದ್ದು, ನೀನು ಹೆದರಿ ಕಿರುಚಿದ್ದು, ಅದು ನಿನ್ನತ್ತ ಮತ್ತೆ ಮತ್ತೆ ಬಂದಂತೆಲ್ಲಾ ಓಡಿಹೋಗಿ ನನ್ನ ಹಿಂದೆ ನೀ ಅಡಗಿ ನಿಂತಿದ್ದು, ಗಾಳಿಯಲ್ಲೇ ರೆಕ್ಕೆಬಡಿಯುತ್ತಾ ಅದು ಕೊನೆಗೊಮ್ಮೆ ನನ್ನ ಬೆರಳುಗಳ ಸ್ಪರ್ಶಿಸಿ ಓಡಿಹೋಗಿದ್ದು ನೆನಪಿದೆಯಾ ನಿನಗೆ? ನಾನೇನು ಮಾಡಿದೆ ಎಂದು ಬೆನ್ನ ಹಿಂದಿಂದ ನನ್ನ ಹೆಗಲುಗಳನ್ನು ಗಟ್ಟಿ ಹಿಡಿದು ಇಣುಕಿ ನೋಡಿದ್ದೆಯಲ್ಲಾ, ನಿನ್ನ ನುಣುಪು ಕದಪುಗಳು ತಾಕಿ ಬೆಣ್ಣೆ ಕಳ್ಳ ಕೃಷ್ಣನೇ ಕರಗುತ್ತಿದ್ದ. ಸಂಭಾವಿತ ನಾನು, ಸುಳ್ಳೆಲ್ಲಾ ಹೇಳುವುದೇ ಇಲ್ಲ, ನಂಬಲೇಬೇಕು ನೀನು, ಏನಂತೀಯಾ ಹೌದಾ ಅಲ್ಲವಾ! ಯಾವ ಭಯವೂ ಇಲ್ಲದೇ ನನ್ನ ಭುಜಗಳಿಗೆ ತಲೆಯಿಟ್ಟು ಪುಟ್ಟ ಕಂದಮ್ಮನಂತೆ ಮಲಗುವುದನ್ನು ಅದ್ಯಾರು ಕಲಿಸಿದರು ನಿನಗೆ? ಅಷ್ಟು ನಂಬಿಕೆಯೇನು ಈ ಮಾಯಾವಿಯ ಮೇಲೆ! ಬಹುಶಃ ಸ್ನೇಹವೆಂದರೆ ಇದೇ ಇರಬೇಕು, ಪ್ರೇಮಕ್ಕೂ ಮೊದಲು ಸ್ನೇಹವಾಗಬೇಕಲ್ಲವಾ ಸಖೀ.. ಬೃಂದಾವನ ಈ ಎಲ್ಲವುಗಳ ಆರಂಭವಾಗಿತ್ತಾ? ಅಥವಾ ಗೋಕುಲದಲ್ಲೇ ಈ ಸಮಾಗಮಕ್ಕೆ ನಾಂದಿಯಾಗಿತ್ತಾ...

ಕೆಂಪು, ಬಿಳಿ, ಗುಲಾಬಿ ಹೀಗೆ ಥರಥರದ ಹೂಗಳು ಬೃಂದಾವನದ ತುಂಬೆಲ್ಲಾ. ಆದರೆ, ನಮಗೆ ಇಷ್ಟವಾಗುತ್ತಿದ್ದುದು ನೀಲಿ, ಹಳದಿ ಹೂಗಳೇ. ನೀನು ನೀನಿಷ್ಟಪಡುವ ನೀಲಿ ಹೂಗಳನ್ನು ನನ್ನ ರುಮಾಲಿಗೆ ಸಿಕ್ಕಿಸಿ, ಕಣ್ಣುಗಳ ಪಕ್ಕದಲ್ಲಿ ಅದೆಂಥದ್ದೋ ನಿನ್ನಿಷ್ಟದ ಬಳ್ಳಿಗಳ ಬಿಡಿಸಿ, ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದೆಯಲ್ಲಾ, ನಾನು ಹಳದಿ ಹೂಗಳ ಕಿವಿಯೋಲೆ ಮಾಡಿ ನಿನಗೆ ತೊಡಿಸುವ ಅಂತ ಬಂದರೆ ಪೂರ್ತಿ ಕೂದಲು ಕಿವಿಯ ಮೇಲೆ ಹರಡಿಕೊಂಡು ಸತಾಯಿಸುತ್ತಿದ್ದೆಯಲ್ಲಾ, ಅದು ಆಮೇಲೆ ನನ್ನುಸಿರು ನಿನ್ನೆದೆ ಬಡಿತ ಎರಡೂ ಇಬ್ಬರಿಗೂ ಕೇಳಿಸುವಷ್ಟು ಗಾಢ ಮೌನಕ್ಕೆ ಕಾರಣವಾಗುತ್ತಿತ್ತು. ಅದೆಂಥ ಗಾಢ ಮೌನವೆಂದರೆ ಇಡೀ ಜಗತ್ತು ಸ್ತಬ್ಧವಾದಂತೆ. ನಿನ್ನೆದುರು ನನಗೆಂಥ ಲಜ್ಜೆ ಎನ್ನುತ್ತಿದ್ದ ನೀನು ತಕ್ಷಣವೇ ತಲೆ ತಗ್ಗಿಸಿ ಕಿವಿಯ ಮೇಲೆ ಹರಡಿಕೊಂಡಿದ್ದ ಕೂದಲುಗಳನ್ನು ಸರಿಸಿ, ಪ್ರತೀ ಸಲವೂ ಹೊಸದಾಗಿ ಸ್ಪರ್ಶಕ್ಕೆ ಕಾಯುವಂತೆ ಉತ್ಕಟ ಸ್ಥಿತಿಯಲ್ಲಿ ಕೂರುತ್ತಿದ್ದುದನ್ನು ನಾನು ಮರೆತಿಲ್ಲ. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ಕೈ ಬೆರಳುಗಳು ಕೂತ ಕಲ್ಲುಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದವು. ಕಣ್ಣುಗಳು ಅರ್ಧವಷ್ಟೇ ತೆರೆದು ಇಷ್ಟೇ ಇಷ್ಟು ಮಾತ್ರ ನನ್ನೆಡೆಗೆ ನೋಡುತ್ತಿದ್ದವು. ಆಗ ಮಾತ್ರ ನೀನು ಶೃಂಗಾರ ಭಾವದ ಅಪ್ರತಿಮ ರೂಪಕದಂತೆ ಗೋಚರಿಸುತ್ತಿದ್ದೆ. ಕೇಳಬಹುದು, ಹೆಣ್ಣು ಬರೀ ಶೃಂಗಾರಕ್ಕೆ ಮಾತ್ರ ಸೀಮಿತವಾ ಅಂತ. ಸೃಷ್ಟಿಯ ಪ್ರತಿಯೊಂದರ ಅರ್ಧವೂ ಸಂಪೂರ್ಣವಾಗಬೇಕಾದರೆ ಸ್ತ್ರೀ ತತ್ವ ಬೇಕೇ ಬೇಕು. ನೆನಪಿದೆಯಲ್ಲವಾ ನಿನಗೆ, ಹಿಂದೊಮ್ಮೆ ಹೀಗೇ ನಾನು ನಿನ್ನ ತೊಡೆಗಳ ಮೇಲೆ ತಲೆಯಿಟ್ಟು ಮಲಗಿದ್ದಾಗ ಸರ್ಪವೊಂದು ನಿನ್ನ ಪಕ್ಕದಲ್ಲೇ ತಲೆಯಾಡಿಸುತ್ತಾ ಇದ್ದರೂ ನೀನು ನನ್ನ ನಿದ್ದೆಗೆ ಭಂಗವಾಗಬಾರದೆಂದು ಸ್ಥಿರವಾಗಿಯೇ ಕೂತಿದ್ದು, ಎಲ್ಲಿತ್ತು ಆ ಧೈರ್ಯ.. !

ನನಗೆ ಒಮ್ಮೊಮ್ಮೆ, ಈ ವಸಂತದಲ್ಲಿ ಅರಳುವ ಹೂಗಳಿಗೆಲ್ಲಾ ನೀನೇ ನಿನ್ನ ನಗುವನ್ನು ಹಂಚಿ ಬಂದಿರಬಹುದಾ ಅನ್ನುವ ಅನುಮಾನ. ಆ ಕೋಕಿಲಗಳೆಲ್ಲಾ ನೀನು ನಿದ್ದೆಯಲ್ಲಿ ಕನವರಿಸುವುದನ್ನೇ 'ಕುಹೂ ಕುಹೂ' ಎಂದು ಕಲಿತುಕೊಂಡವಾ ಅಂತ. ನೀನೊಮ್ಮೆ ತಲೆಯಾಡಿಸಿ ಕಣ್ಣು ಮಿಟುಕಿಸಿದಾಗಲೆಲ್ಲಾ ಈ ತಂಗಾಳಿ ತಾನಾಗೇ ಹುಟ್ಟಿಕೊಳ್ಳುತ್ತದಾ, ನೀನು ಬಲಗಡೆ ಇಳಿಬಿಟ್ಟ ಕೂದಲು ನಯವಾಗಿ ನಿನ್ನ ತುಟಿಗಳ‌ ಪಕ್ಕ ಚೂರು ಮೇಲೆ ತಾಗಲೋ ಬೇಡವೋ ಎಂಬಂತೆ ನಟಿಸುವ ಸಲುವಾಗಿಯೇ ಏನೋ ಗಾಳಿಗೆ ಅಷ್ಟೊಂದು ತುಂಟತನವಾ ಅಥವಾ ನನ್ನನ್ನು ವಿಚಲಿತನನ್ನಾಗಿಸಲು ನೀನು ತಂಗಾಳಿಯೊಂದಿಗೆ ಮಾಡಿಕೊಂಡ ಒಪ್ಪಂದವಾ, ಸತ್ಯ ಸತ್ಯ ಹೇಳಿಬಿಡಬೇಕು‌ ನೋಡು! ಕೃಷ್ಣನನ್ನು ವಿಚಲಿತಗೊಳಿಸುವುದಾ, ಅಷ್ಟಕ್ಕೆಲ್ಲಾ ನಿಯಂತ್ರಣ ತಪ್ಪುವವನಾ ನೀನು ಅಂತ ಮುಖವೂದಿಸಿಕೊಂಡು ನೋಡಬೇಡ. ಸಮಭಾವ ಸಮಚಿತ್ತ ಸಮಸ್ತ ನೀನು ಅಂತ ಅಂದವಳೇ ನೀನು ! ಈಗ ಹಾಗೆಲ್ಲಾ ನೋಡಿ ಮತ್ತೆ ನಾನು ಹಲ್ಲುಗಿಂಜಿದಾಗ ನಿನ್ನ ಹುಸಿ ಮುನಿಸಿನ ನಸು ನಗುವಿನಲ್ಲಿ ಕೃಷ್ಣ ಕಾಲ ಕಾಲಗಳನ್ನೂ ದಾಟಿ, ಕೇವಲ ಹೊಡೆಯಲು ಓಡಿಸಿಕೊಂಡು ಬರುವ ರಾಧೆಯ ಸಖನಾಗಿ ಅಷ್ಟೇ ಉಳಿದುಕೊಳ್ಳಲು ಸಜ್ಜಾಗಿಬಿಡುತ್ತಾನೆ ನೋಡು ! ಇಂಥ ಸಂದರ್ಭದಲ್ಲೇ ನೋಡು ಮಳೆ ಬರುವುದು...
ನನಗೋ ಮಳೆಗಾಲವೆಂದರೆ ಕೆಸರು ಕಾಲಲ್ಲಿ ಮನೆಯೊಳಗೆ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆ ತುಂಬ ಪಾದದ ಗುರುತು ಮೂಡಿಸುವುದು, ಬರೀ ನನ್ನ ಮನೆಯೊಂದೇ ಅಲ್ಲ ಹ್ಞ! ಯಾರಾದರೂ ಹೊಡೆಯಲು ಓಡಿಸಿಕೊಂಡು ಬಂದು ಕೆಸರು ತಾಗಿ ಜಾರಿ ಬಿದ್ದರೆ ಓಡಿಹೋಗಿ ಅವರಿಗೆ ಕೈಕೊಟ್ಟು ಎಬ್ಬಿಸಿ, ಮತ್ತೆ ಮುಟ್ಟಾಟ ಶುರು ನೋಡು, ನೀನು ಅಯ್ಯೋ ಇವನಾಟವೇ ಅಂತ ಹಣೆ ಚಚ್ಚಿಕೊಂಡು ನಗುತ್ತಿದ್ದೆಯಲ್ಲಾ. ನನ್ನ ಕತೆ ಬಿಡು, ಮಳೆಗಾಲವೆಂದರೆ ರಾಧೆಗೆ ಸಮಸ್ತ ವಿಶ್ವವೇ ರಂಗಮಂಚ ಹಾಗೂ ರಾಧೆ ಅಲ್ಲಿನ ಅಮೋಘ ನರ್ತಕಿ. ನೆಲಕ್ಕೆ ಬಿದ್ದ ಮಳೆಹನಿಗಳೂ ರಾಧೆಯ ಪಾದ ಸ್ಪರ್ಶದಿಂದ ಪುಳಕಿತವಾಗುತ್ತಿದ್ದವು. ಅವಿರತವಾಗಿ ಸುರಿವ ಮಳೆಯಲ್ಲಿ ನೀನು ನರ್ತಿಸುವಾಗ ನಿನ್ನ ಗೆಜ್ಜೆಗಳ ಮೇಲೆ ಕೂತು ಆಮೇಲೆ ಮತ್ತೆ ಆಚೆ ಸಿಡಿಯುವುದಕ್ಕೆ ಹನಿಗಳು ಹಾತೊರೆಯುತ್ತಿದ್ದವು. ಕಾರ್ಮೋಡಗಳಿಗೋ ನಿನ್ನನ್ನು ಪೂರ್ತಿ ಒದ್ದೆಯಾಗಿಸುವ ತವಕ. ಒಂದೇ ಸಮನೆ ತನ್ನೆಲ್ಲಾ ಹನಿಗಳನ್ನು ನಿನ್ನ ಮೇಲೆಯೇ ಸುರಿಯುವಂತೆ ಮಾಡುತ್ತಿವೆಯಾ ಅಂತೆಲ್ಲಾ ಅನ್ನಿಸುವಂಥ ವಾತಾವರಣವಿರುತ್ತಿತ್ತು ನೋಡು‌. ಆ ಮಳೆ ಹನಿಗಳೋ, ಹಣೆಯಿಂದ ಶುರುಮಾಡಿ ರಾಧೆಯ ಅಂಗದ ಸಂಗದಲಿ ಕಚಗುಳಿಯಿಡುತ್ತಾ ರಾಧೆಯನ್ನು ಮೆದುವಾಗಿಸುತ್ತಿದ್ದವು. ಮಳೆಯ ಮಣ್ಣಿನ ಸಮ್ಮೋಹಕ ಪರಿಮಳ ನಿನ್ನ ಮೈಯಿಂದ ಸ್ಫುರಿಸುತ್ತಿತ್ತು. ನನಗೀಗ ತಿಳಿಯಿತು ನೋಡು, ಈ ಮಯೂರಗಳು ಮಳೆ ಬಂದ ಕೂಡಲೇ ಗರಿಬಿಚ್ಚಿ ನರ್ತಿಸುವುದು ಇದೇ ಕಾರಣಕ್ಕೆ; ರಾಧೆಯನ್ನು ಪ್ರಾರ್ಥಿಸುತ್ತವೆ, ರಾಧೆಯನ್ನು ಆಹ್ವಾನಿಸುತ್ತವೆ ಎಂದೂ ಕೂಡ ಹೊಳೆಯದಷ್ಟು ದಡ್ಡನಪ್ಪಾ ಕೃಷ್ಣ! ನಾನಂದು ತೊಡಿಸಿದ ಗೆಜ್ಜೆಯ ಕಳಚಿಲ್ಲ ತಾನೇ? ಹೀಗೆಲ್ಲಾ ಹೇಳಿ ಯಾಕೆ ವಿರಹವನ್ನು ನೆನಪಿಸುತ್ತೀಯಾ ಅಂತ ದೀನಳಾಗಿ ನೋಡಬೇಡ ನೀನು, ಅಪರಾಧಿ ಭಾವ ಕಾಡುತ್ತದೆ.. ಸತಾಯಿಸಿದವರೇ ಸಮಾಧಾನಿಸುವುದು ಈ ಪ್ರೇಮದ ಮುದ್ದು ಮುದ್ದು ಲಕ್ಷಣ ನೋಡು!

ಅದೊಂದು ಋತು ಬರುತ್ತದೆ ರಾಧೆ, ಎಲ್ಲಾ ದೇಶಗಳಲ್ಲೂ ಆಯಾ ಸಮಯಕ್ಕೆ; ವೃಕ್ಷ ಸಂಕುಲ ತನ್ನ ಎಲೆಗಳನ್ನು ಉದುರಿಸಿ ಬೋಳು ಬೋಳಾಗುತ್ತದೆ. ಹಕ್ಕಿಗಳೆಲ್ಲಾ ಇನ್ನೆಲ್ಲೋ ವಲಸೆ ಹೋಗುತ್ತವೆ. ಅದೆಲ್ಲಿಂದಲೋ ಅಮ್ಮ ಹೆಕ್ಕಿ ತಂದ ಕಸ ಕಡ್ಡಿಗಳಿಂದ ಕಟ್ಟಿಕೊಂಡ ಗೂಡಲ್ಲಿ ಅಮ್ಮನದೇ ತುತ್ತು ತಿಂದು ಬೆಳೆದ ಹಕ್ಕಿ ಮರಿಗಳ ಚಿಲಿಪಿಲಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತದೆ. ಕಟ್ಟಿಕೊಂಡ ಗೂಡಿನಲ್ಲಿ ಖಾಲಿತನ ತುಂಬಿಕೊಳ್ಳುತ್ತದೆ. ನೀನೊಮ್ಮೆ ಕೇಳಿದ್ದೆ ನೆನಪಿದೆಯಾ, ನಮ್ಮ ಇಡೀ ಬಾಲ್ಯವನ್ನು ಕಳೆದಂಥ ಮನೆಯನ್ನು ಬಿಟ್ಟುಹೋಗುವುದೆಂದರೆ ಅಷ್ಟು ಸುಲಭವಾ ಕೃಷ್ಣ ಅಂತ. ಅಸ್ತಿತ್ವದ ಹೋರಾಟದಲ್ಲಿ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮೋಹವನ್ನು ಬಿಡುವುದು ಅತೀ ಅಗತ್ಯ ರಾಧೆ. ಏನೂ ಇಲ್ಲದಂತೆ ಬಂದವರು ಏನೂ ಇಲ್ಲದಂತೆ ಹೋಗುವುದನ್ನೂ ಕಲಿಯಬೇಕಲ್ಲವಾ? ಗೂಡು ಇದ್ದಷ್ಟು ಹೊತ್ತು ಮನೆ. ಮುಂದೆ ಇನ್ನ್ಯಾವುದೋ ಮರ ಕಾಯುತ್ತಿರಬಹುದು, ಅದಕ್ಕೂ ಒಂಟಿತನ ಸಾಕಾಗಿ ಈ ಹಕ್ಕಿಗಳ ಬರವು, ಇರುವು ಮುಪ್ಪಿನಲ್ಲಿ ಸಂಭ್ರಮಕ್ಕೆ ಪ್ರಾಯ ಬಂದಂತೆ ಆಗಬಹುದು ಅಲ್ಲವಾ? ಅವತ್ತೊಂದು ದಿನ ರಣ ರಣ ಬಿಸಿಲು, ಕೂರಲು ಎಲ್ಲೂ ನೆರಳಿರದೇ ನಾವಿಬ್ಬರೂ ಚಡಪಡಿಸುತ್ತಿರುವಾಗ, ನಾನೊಮ್ಮೆ ಕೊಳಲು ತೆಗೆದು ಊದಿದಾಗ ಪಾತರಗಿತ್ತಿಗಳ ಗುಂಪೊಂದು ಬಂದು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ‌ ನಿಂತು ನಾವದರ ನೆರಳಿನಲ್ಲಿ ನಿಂತಿದ್ದು ಈಗಲೂ ಅಸಂಭವವೆಂಬಂತೆಯೇ ಭಾಸವಾಗುತ್ತದೆ ನನಗೆ. ನೀನೋ ನನ್ನನ್ನು ಮಾಂತ್ರಿಕನೆಂಬಂತೆ ಅನುಮಾನದ ದೃಷ್ಟಿಯಿಂದ ನೋಡಿದ್ದೆ. ಈಗ ತಿಳಿದಿದೆಯಲ್ಲವಾ ರಾಧೆ...

ಕಾಲವೇ ನಾನು, ಕಾಲದ ಸಮಸ್ತ ಋತುಗಳು ನಾನು, ಆ ಋತುಗಳ ಭಿನ್ನ ಭಿನ್ನ ವಾತಾವರಣ ನಾನು, ಹವಾಮಾನ ನಾನು, ಚಲನೆ ಸಂಚಲನೆ ನಾನು, ಕಣ ನಾನು, ಮಣ್ಣು ನಾನು, ಫಲ ನಾನು, ಉದುರಿಬಿದ್ದ ಹಳದಿ ಎಲೆ ನಾನು, ಸ್ಮೃತಿ ವಿಸ್ಮೃತಿ ನಾನು, ಗತಿ ಮಿತಿ‌ ಪ್ರಗತಿ ನಾನು, ಪ್ರಕೃತಿ ನಾನು, ಅದನ್ನು ಜೀವಿಸುವ ಸಂಸ್ಕೃತಿ ನಾನು, ಗಂಧ ನಾನು, ಜುಳು ಜುಳು ಮಂದ ನಿನಾದ ನಾನು, ಅಂದ ಬಂಧ ಸಂಬಂಧ ನಾನು, ಕಂದನ ಅಳು ನಾನು, ಅಮ್ಮನ ಎದೆ ನಾನು, ಲಾಭ ಲೋಭ ವಿಪ್ರಲಂಭ ನಾನು, ಅರ್ಥ ಕಾಮ‌ ಸಾಮ‌ ನಾನು, ಸಂಗಾತ ನಾನು, ವಿರಹ ನಾನು, ಅಖಂಡ ಅಭಂಗ ಅಶರೀರಿ ನಾನು, ಕಾರಣದ ಕಾರಣ ನಾನು, ಹೂರಣದ ಹೂರಣ ನಾನು, ರಸ ವಿರಸ ಸಮರಸ ನಾನು, ಇದ್ಯಾವುದೂ ಅಲ್ಲದ ತೂತು ಬಿದಿರಿನ ಹುಡುಗ ನಾನು, ಇನ್ನೂ ಒಂದು ಮಾತು; ರಾಧೆಯಿಲ್ಲದೇ ಅಪೂರ್ಣ ನಾನು..

ರಾಧೇ, ಬೃಂದಾವನದ ತೋಪಿನಲ್ಲಿ ಉದುರಿಬಿದ್ದ ನವಿಲುಗರಿಗಳನೆಲ್ಲಾ ತಂದು ಶೇಖರಿಸೆಯಾ? ಕೃಷ್ಣನ ಪತ್ರ ಬರುತ್ತದೆ; ಪತ್ರದ ಎಲ್ಲಾ ಮೂಲೆಗಳಲ್ಲೂ ಗರಿಗಳ‌ನ್ನಿಟ್ಟು ಶೃಂಗರಿಸೆಯಾ? ಮಂಕಾಳಿ ಗೌರಿ ಲಕುಮಿಯರಿಗೆ ನನ್ನ ಪತ್ರವನ್ನು ಓದಿ ಹೇಳೆಯಾ? ಎಲ್ಲೇ ನಿನ್ನ ಕೃಷ್ಣ, ಬರಲೇ ಇಲ್ಲ ಎಂದು ಆಡಿಕೊಂಡು ಕಿಚಾಯಿಸುವ ನಿನ್ನ ಗೆಳತಿಯರೆದುರು ಪತ್ರ ಹಿಡಿದು ನಡೆಯಲಾರೆಯಾ? ಸುಸ್ತಾಗಿದೆ ಕೃಷ್ಣಾ ಅನ್ನದಿರು.. ನಮ್ಮ ನಮ್ಮ ಪಾಲಿನ ಬದುಕನ್ನು ಬದುಕಲೇಬೇಕಲ್ಲವಾ, ಕೃಷ್ಣ ಬರೀ ಅಕ್ಷರಗಳ ಕಳುಹಿಸಿಕೊಡುತ್ತಿಲ್ಲ, ಪ್ರಾಮಾಣಿಕವಾಗಿ ಹುಟ್ಟಿಕೊಂಡ ಭಾವಗಳ ಬಿಂಬಗಳೆಲ್ಲವನ್ನೂ ಕಳುಹಿಸುತ್ತಿದ್ದಾನೆ. ಕೃಷ್ಣ ಬರುತ್ತಾನೆ, ಇಂದಲ್ಲ ನಾಳೆ.. ರಾಧೆ ಕಾಯುತ್ತಾಳೆ ತಪಸ್ವಿನಿಯಂತೆ.. ಕೃಷ್ಣ ಬರುತ್ತಾನೆ ಅನುರಾಗಿಯಾಗಿ, ರಾಧೆ ಕಾಯುತ್ತಾಳೆ ವಿರಾಗಿಯಂತೆ.. ಕೃಷ್ಣ ಬರುತ್ತಾನೆ ಕೊಳಲ ಧೂಳು ಒರೆಸಿಕೊಡು ಎನ್ನುವ ಪುಟ್ಟ ಮಗುವಿನ ಹಟವಾಗಿ, ರಾಧೆ ಕಾಯುತ್ತಾಳೆ ಮಡಿಲು ತುಂಬದ ಹೆಣ್ಣಂತೆ.. ಇಲ್ಲ, ಕೃಷ್ಣ ಬರುತ್ತಾನೆ ಕೃಷ್ಣನಂತೆ, ರಾಧೆ ಕಾಯುತ್ತಾಳೆ ರಾಧೆಯಂತೆ.. ಜಗತ್ತಿನಲ್ಲೀಗ ಪ್ರೇಮದ ಸಂಜೆಗಳು ರಾತ್ರಿಗಾಗಿ ಕಾಯುತ್ತವೆ.. ರಾಸಕ್ಕಾಗಿ ಕಾಯುತ್ತವೆ..


ಇಂತಿ ನಿನ್ನ
ಗೊಲ್ಲ



- 'ಶ್ರೀ'
 ತಲಗೇರಿ

ಸೋಮವಾರ, ಸೆಪ್ಟೆಂಬರ್ 21, 2020

ಆ ಊರು...ಗದ್ದಲದ ನಡುವಣ ತಣ್ಣನೆಯ ಶೋಕ...

 ಆ ಊರು..

      ...ಗದ್ದಲದ ನಡುವಣ ತಣ್ಣನೆಯ ಶೋಕ...



ಎಲ್ಲಿ ನೋಡಿದರಲ್ಲಿ ಕಲ್ಲು, ಹೆಬ್ಬಂಡೆ.. ಉರಿ ಬಿಸಿಲು ಒಂದು ಕಡೆಯಾದರೆ , ಧೂಳಿನ ದಟ್ಟತೆ ಇನ್ನೊಂದು ಕಡೆ.. ಬಣ್ಣ ಕಳೆದುಕೊಂಡ ಗಿಡಮರದ ಎಲೆಗಳು ಹಸಿರಿಗಾಗಿ ಬಹುಶಃ ಮರುಗುತ್ತಿರಬಹುದು.. ಪುಟ್ಟ ಪುಟ್ಟ ಬೀದಿ, ಇಷ್ಟೆಂದರೇ ಇಷ್ಟೇ ಇರುವ ಓಣಿಗಳು.. ಸಗಣಿ‌ ಹಾಕಿ ಸಾರಿಸಲ್ಪಟ್ಟಿವೆ ಕೆಲವು ಕಡೆ, ಪುಟಾಣಿ ಮತ್ತು ಮಧ್ಯಮ ಗಾತ್ರದ ರಂಗೋಲಿಗಳು ಅಲ್ಲೇ ಎಲ್ಲೋ ಕಾಣಲ್ಪಡುತ್ತವೆ.. ಎಲ್ಲಾ ಬೀದಿಯನ್ನ ಹಬ್ಬಿಕೊಂಡಿರುವುದು ಅಂಗಡಿ ಮತ್ತು ಹೋಟೆಲ್ಗಳು.. ಜೊತೆಗೆ ಅತಿಥಿ ಗೃಹಗಳು.. ಎಲ್ಲಾ ವರ್ಗದ ( ಇದ್ದಲ್ಲಿ ) , ಎಲ್ಲಾ ಥರದ ಜನರಿಗೆ ಇಷ್ಟವಾಗುವ ಹಾಗೆ ಮಾಡಿಕೊಂಡ ಹಲವು ಕಸರತ್ತುಗಳ ನಡುವೆಯೂ ಈ ಊರು ಆಪ್ತವಾಗುತ್ತದೆ, ಇರುವಷ್ಟು ದಿನವೂ ಕೌತುಕವಾಗುತ್ತದೆ.. ರಸ್ತೆಯ ಪಕ್ಕ ಎಲ್ಲಿಂದಲೋ ಹಾರಿ ಬಂದು ಬಿದ್ದ ಕಲ್ಲೂ ತನ್ನದೇ ಕತೆಯ ಭಿತ್ತಿಪತ್ರ ಹಿಡಿದು ನಿಂತಿರುತ್ತದೆ.. ಆ ಊರಿನ ಎದೆಯ ಬೀದಿಯ ತಿರುವುಗಳಲ್ಲಿ ಒಮ್ಮೆ ಓಡಾಡೋಣ ಬನ್ನಿ..ಅರೇ, ಆ ಊರಾದ್ರೂ ಯಾವ್ದು ಅಂತಾನಾ?!..ಅದೇ, ಅಂಗಾಂಗ ಮುರಿದರೂ ಸಾವರಿಸಿ ಉಳಿದ ನಮ್ಮ ಹಂಪಿ.. 


ಇಡೀ ಜಗತ್ತಿಗೆ ಹೇಗೆ ಒಂದು ರೂಪ ಇದೆಯೋ ಹಾಗೆಯೇ ಒಂದು ನಗರಕ್ಕೆ ಕೂಡಾ.. ಅಂತೆಯೇ ಒಂದು ಊರಿಗೂ ಕೂಡ ಆಕಾರ ಮತ್ತು ಶ್ವಾಸ ಇದೆ.. ಯಾವುದೇ ಒಂದು ಊರು ಅಥವಾ ಒಂದು ಪ್ರದೇಶ ಅಲ್ಲಿನ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಉಸಿರಾಡುತ್ತದೆ.. ಮನುಷ್ಯನ ಜೀವನಶೈಲಿಯ, ನಾಗರಿಕತೆಯ ಮತ್ತು ವಿಕಾಸದ ಕುರುಹುಗಳು ಇಡೀ ಊರಿನ ಬಾಹ್ಯ ಮತ್ತು ಆಂತರಿಕ ಅಭಿವ್ಯಕ್ತಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತವೆ. ನಮ್ಮ ದೇಹದ ಯಾವುದೋ ಒಂದು ಚಿಕ್ಕ ಭಾಗಕ್ಕೆ ಏಟಾದರೂ ಅಥವಾ ನೋವಾದರೂ ಇಡೀ ದೇಹದ ಸಮತೋಲನದಲ್ಲೇನೋ ಸಣ್ಣ ಏರುಪೇರಾಗುತ್ತದೆ , ಯಾವತ್ತಿನಂತಿರುವುದಿಲ್ಲ ದಿನಚರಿ.. ಅಂತಹುದರಲ್ಲಿ ವಿಸ್ತಾರವಾಗಿ ಹರಡಿದ್ದಂಥ ಒಂದು ಬೃಹತ್ ಸಾಮ್ರಾಜ್ಯದ ಮೇಲೆ ಧಾಳಿ ನಡೆದಾಗ ಅದರ ಪ್ರತಿರೋಧ ಎಂಥದ್ದಿರಬಹುದು.. ಅಥವಾ, ಪ್ರತಿರೋಧವನ್ನೂ ಮೀರಿ, ನಡೆಸಿದ ಅನಾಹುತಗಳ ಪರಾಕ್ರಮದ ಪ್ರಭಾವ ಎಂಥದ್ದಿರಬಹುದು.. ಅಥವಾ ಕ್ರೌರ್ಯದ ಪರಮಾವಧಿಯ ತೀಕ್ಷ್ಣತೆ ಎಂಥದ್ದಿರಬಹುದು.. ಯಾಕೆ ಯಾವಾಗಲೂ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾಗುವುದು ಎಂಬ ಇಂಥದ್ದೊಂದು ವಿಷಯವನ್ನ ಹೀಗೇ ಧನ್ಯಾಳ ಹತ್ತಿರ ಮಾತನಾಡೋವಾಗ ಅವಳು, ಯಾವುದೇ ಸಾಮ್ರಾಜ್ಯ ಇತ್ತು ಅಂತ ಹೇಳುವುದಕ್ಕೆ ಇರುವ ಸಾಕ್ಷಿ ಅಂದರೆ ಅಲ್ಲಿನ ಕಲಾ ಪ್ರಕಾರಗಳು ಅಥವಾ ರಚನಾ ಶೈಲಿ.. ಒಂದು ವೇಳೆ ಅದೇ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾದಲ್ಲಿ , ಅದನ್ನೂ ಕೂಡ ಇದೇ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ದಾಟಿಸುತ್ತವೆ.. ಒಂದು ಸಾಮ್ರಾಜ್ಯದ ಪ್ರತಿಷ್ಠೆಗೂ ಮತ್ತು ಅದೇ ಸಾಮ್ರಾಜ್ಯ ನಲುಗಿದ ಕತೆಗೂ ಅಭಿವ್ಯಕ್ತಿಯ ಮಾಧ್ಯಮವೆಂದರೆ ಕಲೆ ಮಾತ್ರ ಎಂದಳು.. ಬಹುಶಃ ಎಲ್ಲಾ ಸಾಮ್ರಾಜ್ಯದ ಅವನತಿಯ ಹಿಂದೆ, ಕಲೆಯ ಮೇಲೆ ನಡೆದಂಥ ಅತ್ಯಾಚಾರದ ಕಣ್ಣೀರು ಹೆಪ್ಪುಗಟ್ಟಿ ಜಿಡ್ಡಾಗಿ ಅಂಟಿಕೊಂಡಿರಬಹುದು.. ಹಂಪಿಯ ವಿಷಯದಲ್ಲಿಯೂ ಆಗಿದ್ದು ಇದೇ.. ಚದರ ಚದರ ವಿಸ್ತೀರ್ಣದಲ್ಲಿ ಹಬ್ಬಿಕೊಂಡ ಸಾಮ್ರಾಜ್ಯವೊಂದು ವೈಭವ ಕಳೆದುಕೊಳ್ಳುವುದೇ ಊಹಿಸಲು ಕಷ್ಟ ಸಾಧ್ಯ.. ಆದರೆ ಚಾರ್ಲ್ಸ್ ಡಾರ್ವಿನ್ನಿನ ಸಿದ್ಧಾಂತದಂತೆ , ಹೊಂದಿಕೊಳ್ಳುವುದಕ್ಕೆ ಸಮರ್ಥವಾದುದು ಮಾತ್ರವೇ ಬದುಕಲು ಸಾಧ್ಯ ಅನ್ನುವಂತೆ, ಸೃಷ್ಟಿಯಲ್ಲಿ ನಿರ್ಮಾಣ ಮತ್ತು ನಾಶ ನಿರಂತರ ಪ್ರಕ್ರಿಯೆ; ಹುಟ್ಟು ಸಾವು ಅದರ ಇತರ ನಾಮವೋ ಅಥವಾ ಪ್ರಬೇಧವೋ!.. ಒಂದು ತಿಂಗಳ‌ ಮೇಲಾಯಿತು ಹೋಗಿಬಂದು ಮತ್ತು ಈಗಲೂ ಏನೋ ಅತೃಪ್ತಿ ಮತ್ತು ಅಸಮಾಧಾನ ಹಾಗೂ ಇಷ್ಟು ದಿನ ಬೇಕಾಯಿತು ಬರೆಯಬೇಕು ಅಂತನ್ನಿಸುವುದಕ್ಕೆ , ಹಂಪಿ ಇನ್ನೂ ಪೂರ್ಣವಾಗಿ ತೆರೆದುಕೊಳ್ಳುವುದು ಬಾಕಿಯೇ ಉಳಿಯಿತು ಅನ್ನುವ ಸಣ್ಣ ಕೊರಗು.. ಹೊಸಪೇಟೆಯಿಂದ ಹಂಪಿಗೆ ಹೋದಲ್ಲಿ , ವಿರೂಪಾಕ್ಷ ದೇವಸ್ಥಾನದ ಹತ್ತಿರದ ಬಜಾರ್ ನಮ್ಮನ್ನ ಸ್ವಾಗತಿಸುತ್ತದೆ. ಚಿನ್ನವನ್ನ ಬಳ್ಳದಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದನ್ನ ಬಾಲ್ಯದಲ್ಲಿ ಕೇಳಿದ್ದ ನಾವು ಅದೇ ನೆಲದಲ್ಲಿ ನಿಂತಾಗ ಇತಿಹಾಸಕ್ಕೂ ಮತ್ತು ವರ್ತಮಾನಕ್ಕೂ ಅತ್ಯಂತ ಆಪ್ತ ಸಂಬಂಧವೊಂದು ಹುಟ್ಟಿಕೊಂಡುಬಿಡುತ್ತದೆ.. ಹಂಪಿ ಹೀಗೆ ತನ್ನೊಳಗಿನ ಕತೆಯನ್ನ ಹೇಳಲು ಶುರುಮಾಡುತ್ತದೆ ಮತ್ತು ಆ ಕತೆಯನ್ನು ಕೇಳಲು ತಯಾರಾಗಿ ಹೋಗಿದ್ದು ರಾಧಿಕಾ ಅಕ್ಕಾ , ಸುಮುಖಣ್ಣಾ , ಸಹನಕ್ಕಾ , ಶ್ರೀಗೌರಿ , ಅಭಿಜಿತ್.. ನನ್ನ ಬಹುದಿನದ ಕನಸೊಂದಕ್ಕೆ ರೆಕ್ಕೆ ಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನಾನು ಚಿರ ಋಣಿ..  


ಒಂದು ಕಡೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ, ಇನ್ನೊಂದು ಕಡೆ ರಾಮಾಯಣದ ಹೊಳಹು. ಇತಿಹಾಸದ ಎಲ್ಲ ಪಾತ್ರಗಳೂ ಸಾಲಾಗಿ ನಿಂತಂತೆ ಯಾವುದೇ ಕಾಲಾವಧಿಯ ಪ್ರತ್ಯೇಕ ಗುರುತಿಲ್ಲದೇ, ಮತ್ತು ನಾವು ವರ್ತಮಾನದಲ್ಲಿ ಅದಕ್ಕೆ ಮುಖಾಮುಖಿಯಾದಂತೆ.. ಹಲ್ಲು ಕಳೆದುಕೊಂಡ ಅಜ್ಜ ಅಜ್ಜಿಯರ ಕತೆಗಳೇ ಎಷ್ಟು ಆಪ್ತವಾಗುತ್ತಿದ್ದವು , ಇನ್ನು ನಿರಂತರ ಧಾಳಿಯಿಂದ ಸಮಸ್ತವನ್ನೂ ಕಳೆದುಕೊಂಡು ಉಸಿರಾಡುತ್ತಲೇ ಇರುವ ಅಲ್ಲಿನ ಮಡುಗಟ್ಟಿದ ಮೌನದ ಕತೆ ಇನ್ನೆಷ್ಟು ಹತ್ತಿರವಾಗಿರಲಿಕ್ಕಿಲ್ಲ ಹೇಳಿ.. ನಮ್ಮ ಹೆಸರು ಪರಿಚಯ ಇವೆಲ್ಲವುಗಳಿಂದ ಮುಕ್ತವಾಗಿ ಅಲೆಯುವ ಒಂದು ಅನುಭವ ಬಹುಶಃ ವಿಲಕ್ಷಣವೋ ಅಥವಾ ವಿಶೇಷಣವೋ.. 


ಇಡೀ ಸರಹದ್ದಿನ ಒಳಾಂಗಣದಲ್ಲಿ ಅಲ್ಲಲ್ಲಿ ಎಲ್ಲೆಲ್ಲೂ ಹರಡಿಕೊಂಡಿರುವ ದಪ್ಪ ದಪ್ಪ ಕಲ್ಲುಗಳಲ್ಲಿ ಕೆತ್ತಿದ ಬೇರೆ ಬೇರೆ ಶೈಲಿಯಂತೆ ಕಾಣುವ, ಆದರೆ ಯಾವುದೋ ಒಂದು ರೀತಿಯನ್ನ ಅನುಸರಿಸುವ ವಾಸ್ತುಶಿಲ್ಪ , ಬೃಹತ್ ದೇವಸ್ಥಾನಗಳು, ಅದರ ಗೋಡೆಗಳಲ್ಲಿ , ಕಂಬಗಳಲ್ಲಿ ಅದೆಷ್ಟೋ ವರ್ಷಗಳ ಬಿಸಿಲು ಮಳೆ ಚಳಿ ಮತ್ತು ಗಾಳಿ ಧೂಳನ್ನ ನೋಡುತ್ತಾ ಕಳೆದ ಆಯಸ್ಸನ್ನ ಅದರೊಟ್ಟಿಗೇ ಮತ್ತೆ ಮತ್ತೆ ಹೊಸದಾಗಿಸಿಕೊಳ್ಳಲು ಹಂಬಲಿಸುತ್ತಿರುವ ಚಿತ್ರಗಳು ಒಂದು ಕಡೆಯಾದಲ್ಲಿ , ಪ್ರವಾಸಿಗರನ್ನ ಸೆಳೆಯುವುದಕ್ಕೆ ತಮ್ಮದೇ ನಡವಳಿಕೆಗಳನ್ನ ರೂಪಿಸಿಕೊಂಡ ಜನರ ಚಿತ್ರ ಇನ್ನೊಂದು ಕಡೆ.. ಹಿಂಭಾಗ ಕಳೆದುಕೊಂಡ ಕಲ್ಲಿನ ಆನೆ , ಕೈ ಕಳೆದುಕೊಂಡ ನರಸಿಂಹ , ಏನು ಎಂದು ಗುರುತಿಸಲೂ ಆಗದ ಹಾಗೆ ಮುಖವನ್ನೇ ಕಳೆದುಕೊಂಡ ಒಂದಷ್ಟು ವಿಗ್ರಹಗಳು, ಕಲಾ ಚಿತ್ರಗಳು, ಮತ್ತು ಕಲ್ಲಿನ‌ ಕಂಬಗಳನ್ನೇ ಕತ್ತರಿಸಬಲ್ಲ ಕತ್ತಿಯ ಏಟುಗಳನ್ನು ನೋಡಿದಾಗ, ಆ ಕತ್ತಿಗಳ ಬಲಿಷ್ಠತೆ ಮತ್ತು ಹಿಡಿದ ಕೈಗಳ ಕ್ರೌರ್ಯ ಮತ್ತು ವಿಕೃತ ಮನಸ್ಥಿತಿ.. ವಿರೂಪಾಕ್ಷ ದೇವಾಲಯದಲ್ಲಿ ತಲೆಕೆಳಗಾಗುವ ನೆರಳು , ಅದೇ ದೇವಸ್ಥಾನದ ಪ್ರಾಂಗಣದಲ್ಲೇ ಮಲಗಿ ರಾತ್ರಿ ಕಳೆಯುವ ಜನರು , ಕಂಬಗಳ ಸಂಗೀತ , ಅಜೇಯರಾಗಿಯೇ ಉಳಿವ ಆಕಾಂಕ್ಷೆಯಲ್ಲಿ ಕೆತ್ತಿದ ಕಲ್ಲಿನ ರಥ ಇವುಗಳೆಲ್ಲವೂ ಇನ್ನೊಂದಷ್ಟು ವಿಸ್ಮಯದ ಬುತ್ತಿಗಳಾಗಿ ತೋರುತ್ತವೆ.. ಮಾತಂಗ ಎನ್ನುವ ಮಹರ್ಷಿ ತಪಸ್ಸು ಮಾಡಿದ ಎನ್ನಲಾಗುವ ಆ ಬೆಟ್ಟವನ್ನು ಹತ್ತುವಾಗಿನ ಜಾಗರೂಕತೆ ಮತ್ತು ಹತ್ತುವವರೆಗಿನ‌ ಸಂಯಮ ಬದುಕಲ್ಲೂ ಇರಬಹುದಿತ್ತು ಅನಿಸುತ್ತದೆ.. ಬೆಳಗಿನ ಸೂರ್ಯೋದಯವನ್ನ ನೋಡುವಾಗ ಅಲ್ಲೆಲ್ಲೋ ದೂರದ ಹಸಿರು ದಿಬ್ಬದ ಮೇಲೆ ಬಿಸಿ ಬಿಸಿಯ ಚಿನ್ನದ ದ್ರಾವಣವನ್ನ ನಿಧಾನವಾಗಿ ಚೆಲ್ಲುತ್ತಾ ಬಂದಂತೆ.. ಇಡೀ ಹಂಪಿಯ ಸಮಗ್ರ ಚಿತ್ರಣ ಒಮ್ಮೆಲೇ ತೆರೆದಿಟ್ಟಂತೆ.. ಮತ್ತು ಎತ್ತರಕ್ಕೆ ಹೋದಂತೆ ಹೋದಂತೆ ಭೂಮಿಯ ಗಡಿಗಳೆಲ್ಲವೂ ಅದೃಶ್ಯವಾದಂತೆ.. ಅಗಾಧ ವಿಶ್ವದ ಎದುರು ಕ್ಷುದ್ರ ಕೂಸೊಂದು ನಾಳೆಗಾಗಿ ಹಪಹಪಿಸಿ ಕೂತಂತೆ.. ನಾಗರೀಕತೆ, ಆಧುನಿಕತೆ , ಪ್ರಾಚೀನತೆ, ಇತಿಹಾಸ , ಜಗತ್ತು , ಹೋರಾಟ , ಆಸೆ , ಕಾಲ, ವಯಸ್ಸು ಎಲ್ಲವನ್ನೂ ಮರೆತು ಕೇವಲ ಪ್ರಕೃತಿ ಮತ್ತು ನಮ್ಮ ನಡುವಿನ ಸಂಭಾಷಣೆಯನ್ನ ಮತ್ತೆ ಮತ್ತೆ ಅನುಭವಿಸಲೇಬೇಕೆಂಬ ಹಂಬಲ ಮತ್ತೆ ಮತ್ತೆ ಚಿಗುರಿದಲ್ಲಿ ಮಾತಂಗ ಪರ್ವತದ ತಪ್ಪೇನಿಲ್ಲ..ಇನ್ನು ಹೇಮಕೂಟದ ಸೂರ್ಯಾಸ್ತದ ಬಗ್ಗೆ ಹೇಳಲೇಬೇಕು.. ಸಂಜೆ ಆಗ್ತಾ ಇದ್ದಂತೆ ದೇಶಿ, ವಿದೇಶಿ , ಜಾತಿ , ಲಿಂಗ ಯಾವುದರ ನೆನಪೂ ಇಲ್ಲದೇ ಸೃಷ್ಟಿಯೆಂಬ ಕಲಾವಿದ ಆಕಾಶ ಅನ್ನೋ ಕಾಗದದ ಮೇಲೆ ಬಿಡ್ಸೋ ಸೂರ್ಯಾಸ್ತದ ಚಿತ್ರಕ್ಕಾಗಿ ಸೇರುವ ಜನ ಸಮೂಹ, ವಿಸ್ಮಿತವಾಗಿ ನೋಡುತ್ತಾ ಕೂತುಬಿಡುತ್ತದೆ ಒಂದೇ ಸೂರಿನಡಿಯೆಂಬಂತೆ.. ಸಂಜೆಯ ಆ ಕಡುಗೆಂಪು ಇನ್ನೂ ಜಿಡ್ಡಾಗಿಯೇ ಇರುವ ಪ್ರಾಚೀನ‌ ರಕ್ತದ ಕಲೆಯೇ ಅಂತನ್ನಿಸಿದರೆ ಅತಿಶಯೋಕ್ತಿ ಅಲ್ಲವೇನೋ ಬಹುಶಃ.. ಇವೆಲ್ಲವುಗಳ ಮಧ್ಯ , ನಿರಂತರವಾಗಿ ಹೊಸ ಹೊಸ ನೀರು ಹರಿಯುತ್ತಲೇ ಇದೆ ತುಂಗೆಯಲ್ಲಿ ಮೌನವಾಗಿ.. ಪುರಂದರ ಮಂಟಪದ ನೀರವತೆ ಮತ್ತು ತುಂಗೆಯ ಜುಳು ಜುಳು, ಧ್ಯಾನಸ್ಥ ಸ್ಥಿತಿಯನ್ನ ಮತ್ತೆ ಮತ್ತೆ ಪ್ರತಿಷ್ಠಾಪಿಸಲು ಹೆಣಗುತ್ತಿರುವಂತೆ ಗೋಚರಿಸುತ್ತದೆ.. ರಾತ್ರಿ ೮ ಗಂಟೆ ಆಗ್ತಾ ಇದ್ದಂತೆ ಹಂಪಿಯಲ್ಲಿನ ದೀಪಗಳಿಗೆ ವಿಶೇಷ ಬಣ್ಣ ಮತ್ತು ಅರ್ಥ ಬರುತ್ತದೆ ಹಾಗೂ ಇಡೀ ಹಂಪಿ ನಿಧಾನಕ್ಕೆ ಮಲಗುತ್ತದೆ ಮತ್ತು ಇತರ ಊರೊಂದಿಗಿನ ಸಂಪರ್ಕವನ್ನ ಕಡಿದುಕೊಂಡು ಗುಟ್ಟಿನ ಜಾಗವಾಗುತ್ತದೆ.. 


ಮತ್ತೆ ಬೆಳಗಿನ ಜಾವ ಪ್ರವಾಸಿಗರನ್ನ ಸೆಳೆಯಲು "ರೂಮ್ ಚಾಹಿಯೇ ಕ್ಯಾ" ಎನ್ನುತ್ತಾ ಶುರುವಾಗುವ ಗದ್ದಲ "ಕನ್ನಡ ಬರತ್ತೆ ಸಾರ್" ಅನ್ನುತ್ತಾ , ವ್ಯಾಪಾರೀಕರಣದ ಬೇರೆ ಬೇರೆ ಮಜಲುಗಳಿಗೆ ವಿಸ್ತರಿಸಿಕೊಳ್ಳುತ್ತದೆ.. ಅಲ್ಲಿನ ಜನರ ಬಹುತೇಕ‌ ಉದ್ಯೋಗವೇ ಪ್ರವಾಸಿಗರನ್ನ‌ ಸೆಳೆಯುತ್ತಾ ಅವರನ್ನ ಖುಷಿಪಡಿಸುವುದೇ ಆಗಿರುವಾಗ ಭಾಷೆಯ ಬಗೆಗಿನ ಕಾಳಜಿ ಯಾರಿಗಿರಲು ಸಾಧ್ಯ.. ನಿತ್ಯದ ಹೊಟ್ಟೆಯ ಹಾಡು ಮತ್ತು ಅದರ ಮೇಲಿನ ಮೋಜು ಪ್ರವಾಸಿಗರ ತೃಪ್ತಿಯಲ್ಲೇ ಇದೆ ಅನ್ನುವ ಸತ್ಯ ತಿಳಿದಾಗಿನಿಂದ ಹಂಪಿ ಹಾಗೆಯೇ ಉಳಿದುಬಿಟ್ಟಿತು.. ಹಂಪಿ ಹಾಳಾಗಿಯೇ ಇರಬೇಕು, ಆಗಲೇ ಅದು ತನ್ನ ಚರಿತ್ರೆಯನ್ನ ಹೇಳಬಲ್ಲದು.. ಅದಕ್ಕಾಗಿ ಕೆಲವು ಉದುರುತ್ತಿರುವ ದೇವಸ್ಥಾನಗಳನ್ನ ಕೃತಕವಾಗಿ ಮೊದಲಿನಂತೆ ಕಟ್ಟಲು ಪಡುತ್ತಿರುವ ಹರಸಾಹಸಗಳು ಸಾಕ್ಷಿಯಾಗುತ್ತವೆ.. ಹಂಪಿಯಲ್ಲಿ ಇರುವಷ್ಟೂ ದಿನ ನಾವು ಯಾವುದೋ ಒಂದೋ ಅಗೋಚರ ಶಕ್ತಿಯ ಆಜ್ಞೆಯನ್ನ ಪಾಲಿಸಿದಂತೆ ಮತ್ತು ಅಲ್ಲಿನ ಎಲ್ಲವೂ ಪೂರ್ವ ನಿರ್ಧರಿತವಾದಂತೆ ಅನ್ನುವ ಸಣ್ಣ ಸಂಶಯವೊಂದು ಬಂದರೆ ಅದೊಂದು ಸೂಕ್ಷ್ಮದ ವಿಷಯ ಖಂಡಿತಾ.. ಅಲ್ಲಿಗೆ ಅದರದ್ದೇ ಆದ ವ್ಯವಸ್ಥೆಯಿದೆ , ಅದರದ್ದೇ ಆದ ಗುಣ ಲಕ್ಷಣಗಳಿವೆ, ಅದರದ್ದೇ ಆದ ದಿನಚರಿಯಿದೆ, ಸೂರ್ಯ ಚಂದ್ರರೊಂದಿಗೆ ಹಗಲು ರಾತ್ರಿಗಳಾದರೂ ಅದಕ್ಕೆ ಅದರದ್ದೇ ಆದ ಕಾಲಮಾನವಿದೆ.. ಅದಷ್ಟೂ ವ್ಯಾಪಾರೀಕರಣ, ಮನುಷ್ಯನ ಹಪಹಪಿತನದ ನಡುವೆಯೂ ಒಂದು ಪ್ರೀತಿಯ ಸ್ಪರ್ಶಕ್ಕಾಗಿ ಹಂಪಿಯ ದೇವಸ್ಥಾನದ ಕಂಬಗಳು ಕಾಯುತ್ತಿವೆ, ಕಲ್ಲಿನ ನಂದಿ ಕತ್ತಲೆಯಲ್ಲಿ ಮುಲುಗುತ್ತಿದೆ, ಕಿತ್ತುಕೊಂಡು ಹೋದ ದೇವರ ಮೂರ್ತಿಗಳು ಈಗಲೂ ಜನರ ನಂಬಿಕೆಯಲ್ಲಿ ತಮ್ಮ ಅಸ್ತಿತ್ವವನ್ನ ಗಟ್ಟಿಯಾಗಿಸಿಕೊಂಡಿವೆ.. ರಾಣಿಯರ ಸ್ನಾನಗೃಹವಾಗಿತ್ತಂತೆ , ಇಲ್ಲಿ ಆನೆಗಳ ಸಾಲು ಸಾಲನ್ನ ಕಟ್ಟುತ್ತಿದ್ದರಂತೆ ಎಂಬ ಚರಿತ್ರೆಯ ನೆನಪುಗಳೊಂದಿಗೆ , ಇಲ್ಲೇ ಅಕ್ಕತಂಗಿಯರಿಬ್ಬರು ಕಲ್ಲಾಗಿಹೋದರಂತೆ ಎನ್ನುವ ಕತೆಗಳೂ ಪ್ರಚಲಿತದಲ್ಲಿರುವ ಹಂಪಿಯಲ್ಲಿ ಒಂದು ಅಪ್ರಕಟಿತ ಶೋಕವಿದೆ.. ಒಂದು ಅನಾಥ ಮೌನವಿದೆ.. ಇಷ್ಟೆಲ್ಲ ಮಾನವ ಜನಾಂಗದ ಗದ್ದಲದ ನಡುವೆ ಬೇರೆಯಾಗಿಯೇ ಉಳಿದ, ಬೆರೆಯದೇ ಹೋದ ಅಳಲಿದೆ..ಇದಕ್ಕಾಗಿಯೇ ಅದು ಇನ್ನಷ್ಟು ಆಪ್ತವಾಗುತ್ತದೆ.. ಕೇವಲ ಚೌಕಟ್ಟಿನಲ್ಲಿ ಛಾಯಾಚಿತ್ರವಾಗುವ ಎಲ್ಲಾ ಕಲ್ಲಿನ ಚೂರಿಗೂ ಅಲ್ಲಿನ ಬಾನಿಗೂ ಅದರದ್ದೇ ಆದ ಬಣ್ಣವಿದೆ.. ಅಲ್ಲಿನದೇ ಕಲ್ಲಿನ ಕಂಬಕ್ಕೆ ತಲೆಯಾನಿಸಿ ಕೂತಾಗ, ಕಾಮ,ಕ್ರೋಧ,ಲೋಭ,ಮೋಹ,ಮದ, ಮಾತ್ಸರ್ಯ ಇತ್ಯಾದಿಗಳೂ, ಸಿಟ್ಟು , ಪ್ರೀತಿ ,ಗಾಂಭೀರ್ಯ, ಸೇಡು, ನಗು , ದುಃಖ , ರೌದ್ರ , ಭೀಭತ್ಸ , ಭಯ, ಹಾಸ್ಯ , ಅದ್ಭುತ, ಶಾಂತ ಇತ್ಯಾದಿ ಇತ್ಯಾದಿ ರಸಗಳೂ ಅತ್ಯಂತ ಕ್ಷೀಣ ದನಿಯಲ್ಲಿ ಚಡಪಡಿಸುತ್ತಿರುವುದು ಕೇಳಿದರೆ ಹುಚ್ಚನೆನ್ನದಿರಿ.. ಯಾಕೆಂದರೆ , ಹಂಪಿ ಗತ ವೈಭವದ ಗಂಭೀರ ಆತ್ಮ ಚರಿತ್ರೆ.. 


~`ಶ್ರೀ'

    ತಲಗೇರಿ

ಶನಿವಾರ, ಮೇ 2, 2020

ದಿವ್ಯ ಸಾನ್ನಿಧ್ಯದ ಸಾಂಗತ್ಯ ‌ಪತ್ರ...






ಗೆ,
ರಾಧಾ,
ಗೋಕುಲ

ಸಖೀ ರಾಧೆ,

ಇಷ್ಟುದ್ದ ಈ ಹಾಳೆಯ ಮೇಲೆ ಕೃಷ್ಣನ ಕೈಯಚ್ಚಿನ ನೆರಿಗೆ ಮೂಡುವ, ದೇವರೆಂಬ ಧಾತುವಿನೊಳಗೆ ನಡೆವ ಆಗುಹೋಗುಗಳ, ಕಪಟವಿಲ್ಲದ ಅಕ್ಷರಗಳಲ್ಲಿ ಮತ್ತೆ ಹುದುಗಿಸುವ ಸಮಯ ಬಂದಿದೆಯೀಗ. ಬರೆದ ಮೊದಲೆರಡು ಪತ್ರಗಳು ನಿನ್ನ ಮಡಿಲಲ್ಲಿ ನಿತ್ಯ ಸುಖದಲ್ಲಿ ಆಪ್ತ ಹವೆಯಲ್ಲಿ ಬೆಚ್ಚಗಿವೆಯೆಂದುಕೊಳ್ಳುತ್ತೇನೆ. ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುತ್ತದಂತೆ. ಹಳೆಯದಾದಷ್ಟೂ ನೆನಪುಗಳು ಮಾಗುತ್ತವಂತೆ. ಹಳೆಯದಾದಷ್ಟೂ ಉಳಿದ ಪ್ರೀತಿ ಸಲಹುತ್ತದಂತೆ. ಯಾರನ್ನು? ಎಂದು ಮರು ಪ್ರಶ್ನಿಸದಿರು.. 'ಈ ಜಗತ್ತನ್ನು',  ಎಂದು ನಾನು ಉತ್ತರಿಸುವೆನೆಂದು ನಿನಗೂ ತಿಳಿಯದೇ ಏನಲ್ಲ! ಕೃಷ್ಣನಿಗೆ ವೈಯಕ್ತಿಕ ಅನ್ನುವುದು ಉಳಿದದ್ದಾದರೂ ಯಾವುದು ರಾಧೆಯ ಹೊರತಾಗಿ, ರಾಧೆಗಾಗಿ ಬಿಟ್ಟ ಕೊಳಲಿನ ಹೊರತಾಗಿ. ಬಿಡು ಬಿಡು, ನೆನಪು ನಶೆಯಂತೆ. ಕಪಟಿ, ಚತುರ, ಮೋಸಗಾರ, ವ್ಯಾಮೋಹಿ, ಪಕ್ಷಪಾತಿ, ದ್ರೋಹಿ, ಆಪದ್ಬಾಂಧವ, ಮಿತ್ರ, ಕುಟಿಲ ತಂತ್ರಿ , ಮಾಯಾವಿ ಒಂದೇ ಎರಡೇ ಕೃಷ್ಣನು ಪಡೆದ‌ ಹೆಸರುಗಳು. ಆದರೆ ಇವತ್ತು ಕೃಷ್ಣ ಹೇಳಹೊರಟಿರುವುದು ಈ ಅಂಕಿತಗಳಾಚೆಗಿನ ಸಂಗತಿಗಳನ್ನು.. ಧರ್ಮ ಅಧರ್ಮದ ಮರ್ಮದಲಿ ದಾಳವಾದ ಪರಾಕ್ರಮಿಯ ಕಣ್ಣುಗಳಲ್ಲಿ ಕೃಷ್ಣನನ್ನು ನೋಡುವೆಯಂತೆ.. ಹಾಗೇ, ಕಿವಿಯಾಗುವೆಯಂತೆ ಇವೆಲ್ಲವುಗಳಿಗೂ ಜೀವಂತ ಸಾಕ್ಷಿಯಾದ ಸಾರಥಿ, ರಾಯಭಾರಿ, ರಾಜಕಾರಣಿ, ಯುದ್ಧ ನಿಪುಣ ಕೃಷ್ಣನ ಸಂಗತಿಗಳಲ್ಲಿ ಉಳಿದ ಆ ಪರಾಕ್ರಮಿಯ ಪ್ರಾರಬ್ಧಕ್ಕೆ !
ಊಹೆ ನಿಜ ರಾಧೇ, ವಸುಸೇನ‌ನ ಕುರಿತಾಗಿಯೇ ಇವತ್ತು ನಾನು ಹೇಳಹೊರಟಿರುವುದು. ಲೋಕ ನಿಂದಿಸಲಿ ನನ್ನ, ಲೋಕ ದ್ವೇಷಿಸಲಿ ನನ್ನ, ಲೋಕ ಜರೆಯಲಿ ನನ್ನ, ಲೋಕ ಮರುಗಲಿ ಕಂಡು ಅವನ...

ಭೋರ್ಗರೆದು ಬಿಕ್ಕಳಿಸುವ ಡೋಲು,ನಗಾರಿ, ಶಂಖ,ಕಹಳೆ, ಜಾಗಟೆಗಳು. ಅಬ್ಬರಿಸಿ ಅಬ್ಬರಿಸಿ ಸುಸ್ತಾದ ಆನೆ,ಕುದುರೆಗಳು. ತಲೆಯ ಮೇಲೆ ಠೀವಿಯಿಂದ ಕೂತಿದ್ದ‌ ಕಿರೀಟಗಳು ಉದುರಿಬಿದ್ದಿವೆ ಆಧಾರವಿಲ್ಲದೇ. ಬಿಸಿ ಬಿಸಿ ನೆತ್ತರ ಇನ್ನೂ ಸುರಿಸುತ್ತಲೇ ಅಲುಗುತ್ತಿರುವ ಕಡಿದ ಬೆರಳಿನ ಚೂರು. ಕಣ್ಣುಗಳ ಮುಚ್ಚಲೂ ಸಮಯ ಸಿಗದೇ ಉಳಿದ ಕತ್ತರಿಸಿದ ರುಂಡ, ವಸ್ತ್ರದ ಬಣ್ಣವೇ ಬದಲಾದ ಮುಂಡ, ಮಾರ್ದನಿಸುತಿದೆ ಕಾಲಾಳುಗಳ ಆಕ್ರಂದನ.. ಈ ಭೀಭತ್ಸ ರಣರಂಗದಲ್ಲೇ ಬಿದ್ದಿತ್ತು ಇನ್ನೊಂದು ಶರೀರ ರಥಕ್ಕೊರಗಿ. ಅದರಲ್ಲೇನು ವಿಶೇಷ ಕೃಷ್ಣ, ಯುದ್ಧವೆಂದಮೇಲೆ ಹೆಣಗಳ ರಾಶಿ, ರಕ್ತದ ಹೋಳಿ, ಊರಲ್ಲುಳಿದ ಹೆಂಗಸರಿಗೆ ವಿಧವೆಯ ಪಟ್ಟ ಹಾಗೂ ಮಾನಕ್ಕಾಗಿ ಹೋರಾಟ ಸಾಮಾನ್ಯವಲ್ಲವೇ ಮೋಹನ, ಅನ್ನದಿರು. ಪಾಂಡವರ ನಿಷ್ಠೆ, ಧರ್ಮ, ಪರಾಕ್ರಮ, ಸ್ವಾರ್ಥ, ಭಕ್ತಿ ಇವೆಲ್ಲವನ್ನೂ ಮೀರಿ ಎದೆನಡುಗಿಸಿದವನ‌ ಕತೆಯಿದು. 'ಇದಿರಿಲ್ಲ ಎನಗೆ' ಎಂದು ಮೆರೆಯುತ್ತಿದ್ದ ಸವ್ಯಸಾಚಿಯ ಕೈಗಳಿಗೆ ನಡುಕಹುಟ್ಟಿಸಿದವನ ಕತೆ. ಹೌದು, ಇದು ಕ್ಷತ್ರಿಯ ಬ್ರಾಹ್ಮಣ ಸೂತ ಯೋಧ ಕರ್ಣನ ‌ಕತೆ. "ಕೇಳಿದ್ದೇನೆ ಮಾಧವಾ, ನಿನ್ನ ಕುಟಿಲತೆಯಿಂದ ಅವ ಸತ್ತನಂತೆ ಅನ್ನುವುದನ್ನ", ಅಂತನ್ನಬೇಡ. ಲೋಕಕ್ಕೆ ತಿಳಿದ ಗೋಚರಗಳು ಒಂದೆಡೆಯಾದರೆ, ಕರ್ಣ ಮತ್ತು ಕೃಷ್ಣನಲಿ ವಿನಿಮಯವಾದ ಸಾನ್ನಿಧ್ಯವೇ ಬೇರೆ.. "ಭಗವಂತ ನೀನು, ವಿನಿಮಯವಾಗಲೇಬೇಕಲ್ಲವೇ?", ಅಂತನ್ನುವ ಆ ಪ್ರಶ್ನಾರ್ಥಕ ಕಣ್ಣುಗಳನ್ನ ನನ್ನತ್ತ ನೇರವಾಗಿ ಚಾಚಿದಂತೆ ಭಾಸವಾಗುತ್ತಿದೆ ನನಗೆ, ಇವತ್ತಿನ ಈ ಪತ್ರ ಆವತ್ತಿನ ಪ್ರತಿಫಲನ.

ಕೆಸರಲ್ಲಿ ಕುಳಿತು, ರಥಕ್ಕೊರಗಿ ನಿಕೃಷ್ಟ ನೋಟ ಬೀರುತ್ತಿದ್ದ ಕರ್ಣ, " ಕೊನೆಗೂ‌ ಕೊಲ್ಲಿಸಿದೆಯಲ್ಲಾ" ಅನ್ನುವಂತೆ. ಅರ್ಜುನ ಸಾರಥಿ ಕೃಷ್ಣ ರಥದಿಂದ ಇಳಿದು ಬರಲೇಬೇಕಾಯ್ತು ಪರಾಕ್ರಮಿಯ ಬಳಿಗೆ. ಅದೆಷ್ಟು ಪ್ರಶ್ನೆಗಳು ಓಡುತ್ತಿರಬಹುದಲ್ಲಾ, ಉತ್ತರಿಸಬೇಕಾದುದು‌ ಆದ್ಯ ಕರ್ತವ್ಯ. ಸಾಯುವ ಗಳಿಗೆಯಲ್ಲಿ‌ ಮನುಷ್ಯ ಪವಿತ್ರನಾಗುತ್ತಾನೆ. ಇಹದ ಕೊಂಡಿ ಕಳಚಿಬೀಳುವ ಕ್ಷಣದಲ್ಲಿ ಅಹಂ ಚೆಲ್ಲಾಪಿಲ್ಲಿಯಾಗಿ ಚೆದುರಿರುತ್ತದೆ. ರಥದಿಂದ ಇಳಿದವನೇ ಹೋದೆ ಕರ್ಣನ‌ ಬಳಿಗೆ, ಹೀಗೇ ಹೋಗಿದ್ದೆ ಯುದ್ಧದ ಹಿಂದಿನ ದಿನವೂ ಕೂಡಾ.. "ಪಾಂಡವರ ಸೇರು, ರಾಜ್ಯ ಮತ್ತು ಪಟ್ಟ ನಿನ್ನದಾಗುತ್ತದೆ ಅಂತ ಹೇಳುವುದಕ್ಕೆ", ಅಂತ ಮಾತ್ರವೇ ಗ್ರಹಿಸಿತು ಲೋಕ. ಕರ್ಣನ ಮನಸ್ಸನ್ನು ಕದಡಲು ಹೋದೆ, ಅಂತ ಮಾತ್ರವೇ ಮಾತಾಡಿತು ಲೋಕ. ಅದೆಷ್ಟೇ ಆಮಿಷಗಳನ್ನೊಡ್ಡಿದರೂ ಕರ್ಣ ಅದನ್ನ ಕಾಲ್ಬೆರಳ ತುದಿಯಲ್ಲಿ ಕೂಡಾ ಮುಟ್ಟದೇ ತಿರಸ್ಕರಿಸಿದಂಥ ಋಣಬದ್ಧ, ಕೃತಜ್ಞತೆಯ ಮೂರ್ತರೂಪ ಅನ್ನುವುದನ್ನ ಇನ್ನು ಹೇಗೆ ಹೇಳಬಹುದಿತ್ತು ಈ ಲೋಕಕ್ಕೆ ನಾನು? ಕುಲವೆಂಬುದೇ ಯಾವುದೆಂದು ತಿಳಿಯದೇ ಅನುಭವಿಸಿದ ಅವಮಾನಗಳ ನಡುವೆ ಅರಸಿಬಂದ ಸ್ನೇಹಕ್ಕಾಗಿ ಸಮಸ್ತವನ್ನೂ ತ್ಯಜಿಸಲು ಸಿದ್ಧನಾಗಿದ್ದ ಕರ್ಣ ಒಬ್ಬ ಅಪ್ಪಟ ಮಗುವಿನಂಥ ಸ್ನೇಹಿತನೆಂಬುದನ್ನ ಜಗತ್ತಿಗೆ ಅದು ಹೇಗೆ ಹೇಳಬಹುದಿತ್ತು ನಾನು?

ಕರ್ಣನ‌ ಸಾವು ನಿಶ್ಚಯವಾಗಿತ್ತು. ಸಾವಿನ ಎದುರು ಕೂತು ಹುಟ್ಟಿನ ಕತೆ ಕೇಳುವ ವಿಪರ್ಯಾಸ ಅವನದು. ಆವತ್ತೇ ಯಾಕೆ‌ ಹೇಳಬೇಕಿತ್ತು, ಮತ್ತೆ ದಿನವೆಲ್ಲಿತ್ತು? ಸೂತ ಕುಲದ ರಾಧೆಯ ಮಗ ನಾನು ರಾಧೇಯ ಅಂತಂದುಕೊಂಡವಗೆ, ಬಾಲ್ಯದಾಟದ ಕುಂತಿಗೆ ಯೌವನದ‌ ವರ ಸಿಕ್ಕಿ, ನಡೆದ ಅಚಾತುರ್ಯದ, ಸೂರ್ಯ ಅಂಶದ ಗರ್ಭ ನೀನು‌ ಅಂತನ್ನುವುದು ಅದೆಷ್ಟು ಸಮಂಜಸ ಎಂದು ಪ್ರಶ್ನಿಸುವೆಯಾ ರಾಧಾ.. ಹೇಳಿದ್ದಷ್ಟೇ ಅಲ್ಲದೇ, ಪಾಂಡವರೈವರಿಗೆ ಹಾನಿಗೈಯುವುದಿಲ್ಲವೆಂದು ಮಾತು ಕೊಡುವಂತೆ ಇಕ್ಕಟ್ಟಿಗೆ ಸಿಲುಕಿಸಿದೆಯಲ್ಲಾ ಚತುರನೇ ಅನ್ನುತಿಹೆಯಾ? ಯಾಕಿಷ್ಟೊಂದು ಉಪಾಯಗಳು ಹರಿಯೇ ಅಂದ,‌ ಯಾಕೆ ನನ್ನನ್ನು ಚಂಚಲನನ್ನಾಗಿಸುತ್ತಿರುವೆಯೆಂದ. ದ್ರೌಪದಿಯ ಕಣ್ಣಿಂದ ಉದುರಿದ ಆ ಹನಿಯಲ್ಲಿ ಗಹಗಹಿಸಿದ ಕರ್ಣನ‌ ಚಿತ್ರವಿತ್ತೋ ಕೌಂತೇಯ ಅಂದೆ, ತತ್ತರಿಸಿದ. ಅವಮಾನಕ್ಕೆ ಉತ್ತರ ಕೊಡಬೇಕಾದುದು ಕ್ಷತ್ರಿಯ ಧರ್ಮವೇ, ಆದರೆ ಅಂದು ಅದು ಆ ಸ್ತ್ರೀಯ ಮೇಲಾಗಿತ್ತಲ್ಲ; ಅದು ಸಮ್ಮತ ಉತ್ತರವಲ್ಲವಾಗಿತ್ತು. ಅವಳ ಸೀರೆಯ ತುದಿಗೆ ಇನ್ನೂ ಕರ್ಣನ ಬೆರಳಿನ ಕಲೆಯಿತ್ತು. ಅದಿರಲಿ, ಮತ್ತೆ ಕುಂತಿಯನೂ ಕಳುಹಿಸಿದೆಯಲ್ಲಾ ಅವನ ಬಳಿಗೆ, ಇದು ಅವನನ್ನ ಗದ್ಗದಿತನನ್ನಾಗಿಸಲಲ್ಲದೇ ಇನ್ನೇನು ಅಂತ ನೀನೂ ಕೇಳುತ್ತಿರುವೆಯಾ ರಾಧಾ.. ಹೆತ್ತವಳಿದ್ದೂ ಅವಳ ಅಪ್ಪುಗೆಯಿಲ್ಲದೇ ಅವ ಕೊನೆಯುಸಿರೆಳೆಯುವುದು ದುರಂತವಾಗುತ್ತದಲ್ಲವೇ? ಈಗಾಗಿದ್ದೇನು ಅನ್ನಬೇಡ ಮತ್ತೆ.. ತಾಯಿ ಮಗನ‌ ಅಪೂರ್ವ ಮಿಲನಕ್ಕೆ ಬೇರೆ ಘಟಿಗಳು ಇರಲಿಲ್ಲ. ಅದೆಷ್ಟೇ ಸ್ವಾರ್ಥವಿದ್ದರೂ ಮಮತೆ ಉಕ್ಕುವುದು , ಅದೆಷ್ಟೇ ದ್ವೇಷವಿದ್ದರೂ ಹೃದಯ ಬಿಕ್ಕುವುದು, ಅದನ್ನೇ ಅಲ್ಲವೇ ಜಗತ್ತು ನೋಡಿದ್ದು ಈ ಭೇಟಿಯಲ್ಲಿ. ಕುಂತಿ ಎರಡು ವರ ಕೇಳಲು ಅಲ್ಲಿಗೆ ಹೋದಳಷ್ಟೇ ಅಂದುಬಿಡಬಹುದು ಸುಲಭವಾಗಿ, ರಕ್ತ ಸಂಬಂಧದ ಗಾಢತೆಯನ್ನ ಮತ್ತು ವಿಧಿಯ ವಿವರಗಳನ್ನ ಇನ್ನೆಂತು ತೋರಿಸಲಿ ನಾನು? ತನ್ನ ಕೈ ಸೋಲುತ್ತಿದೆ ಎಂದು ಗೊತ್ತಿದ್ದರೂ ಕೇಳಿದ್ದನ್ನು ಕೊಡದೇ ಇರಲಾರ ಕರ್ಣ ಅನ್ನುವುದು ಹೇಗೆ ತಿಳಿದೀತು ಇದರ ಹೊರತಾಗಿ ಅಲ್ಲವೇ?

ಕೈಯಲ್ಲಿ ಧನುರ್ಬಾಣಗಳಿಲ್ಲದೇ, ಶಸ್ತ್ರರಹಿತನಾದ ಕ್ಷತ್ರಿಯನ ಕೊಲ್ಲುವ ತುರ್ತೇನಿತ್ತು ನಿನಗೆ, ನಿನ್ನ‌ ಗಾಂಢೀವಿ ಸೋಲುವನೆಂಬ ಭಯವೇ? ಇರಬಹುದು ಇರಬಹುದು, ಅಡ್ಡದಾರಿ ಹಿಡಿದ ಕೃಷ್ಣ ಎಂದು ಎಷ್ಟೆಲ್ಲಾ ನಿಂದಿಸಿದರಲ್ಲಾ.. ಅಪ್ರತಿಮ ಯುದ್ಧೋನ್ಮಾದದಿಂದ ಚಕ್ರವ್ಯೂಹವನ್ನ ಹೊಕ್ಕಿದ ಅಭಿಮನ್ಯುವಿನ‌ ಅಂತ್ಯಕ್ಕಾಗಿ ಸಕಲ ಶಾಸ್ತ್ರ ಪಾರಂಗತನಾದ ಕರ್ಣ, ಯಾವ ಧರ್ಮವನ್ನ ಮೀರಿದನಲ್ಲಾ, ಪಾಪ ಪುಣ್ಯವೀಗ ದುರ್ಯೋಧನನ ಲೆಕ್ಕವೆಂಬ ಮಾತ ಕೇಳಿ, ಹಿಂದಿನಿಂದ ಕೈ ಕತ್ತರಿಸಿದನಲ್ಲಾ,  ಅದೇ ಧರ್ಮ ಈಗ ಅವನ ಎದೆಗೆ ನಾಟಿತು. ಇದೇನು ಕೃಷ್ಣಾ, ನೀನೂ ಸಾಮಾನ್ಯ ಮನುಷ್ಯರಂತೆ ದ್ವೇಷಕ್ಕೆ ದ್ವೇಷ, ಮೋಸಕ್ಕೆ ಮೋಸ ಎಂದುಬಿಟ್ಟೆಯಲ್ಲಾ ಅಂತಂದುಕೊಳ್ಳದಿರು. ಸತ್ಯದ ಅರಿವಾಗಬೇಕಿತ್ತು ಕರ್ಣನಿಗೆ, ಅವನು ದುರ್ಯೋಧನನ ಸ್ನೇಹದ ಹೆಜ್ಜೆಯ ಅಮಲಿನಲ್ಲಿ ಎಲ್ಲಿ‌ ಎಡವಿದ ಅನ್ನುವುದನ್ನ ಮನದಟ್ಟು ಮಾಡಲೇಬೇಕಿತ್ತು. ಬಾಣ ನೆಟ್ಟ ಮೇಲೂ ದಾನ‌ ಕೇಳಿದನಂತೆ ಅವ ಸಾಯದಿದ್ದರೆ ಅಂತ, ಎಂದೆಲ್ಲಾ ಜನ ನಿನಗೆ ಹೇಳಿದರೇ? ಪರಮಾತ್ಮನೂ ಒಮ್ಮೊಮ್ಮೆ ಶರಣಾಗುತ್ತಾನೆ‌ ಕರ್ಣನಂಥ ದಾನಶೂರನೆದುರು.. ದಾನ ಕೇಳಿದ್ದು ನಿಜ, ಅವನ ಹಿಂದಿನ‌ ಜನ್ಮದ ಲೆಕ್ಕವೊಂದು ಬಾಕಿಯಿತ್ತಲ್ಲಾ.. ಜೊತೆಗೆ, ಭಗವಂತನಿಗೇ ದಾನ‌ಕೊಟ್ಟ ಕರ್ಣ ಅನ್ನುವುದು ಜಗಜ್ಜಾಹೀರಾಗಲಿ, ಸಾಯುವಾಗಲೂ ದಾನಕ್ಕೆ ಹಿಂಜರಿಯಲಿಲ್ಲ ಆತ ಅಂತೆಲ್ಲಾ ಜನ ತಡಬಡಿಸಲಿ, ದಂಗಾಗಲಿ ಅಂತ ಅಂದುಕೊಳ್ಳುವುದು ತಪ್ಪಾ ರಾಧಾ.. ದುರಂತದ ಬದುಕಿಗೊಂದು ಅರ್ಥವತ್ತಾದ ವಿದಾಯ ಬೇಕಿತ್ತಲ್ಲವೇ!

ಮುರಿದು ಬಿದ್ದ ಕರ್ಣನ‌ ರಥದ ಗಾಲಿ, ಅವನ ಜನನ ಮರಣಗಳ ಚಕ್ರ ಮುರಿದು ಬಿದ್ದಂತೆ ನನಗೆ ಕಂಡಿತ್ತು. ಅವನ ಬಳಿ ಹೋಗಿ ಕೂತೆ, ಏನಾಯಿತು ಕೃಷ್ಣಾ, ಕರ್ಣ ಯಾವ ಸುಖಕ್ಕೂ ಯೋಗ್ಯನಾಗದೇ ಹೋದನೇ ಅಂತ ಪ್ರಶ್ನಿಸಿದ ಕೈಹಿಡಿದು. ಎಲ್ಲರ ಹುಟ್ಟಿಗೂ ಎಲ್ಲರ ಸಾವಿಗೂ ಅರ್ಥವಿದೆ ಕೌಂತೇಯ, ಹುಟ್ಟಿನಿಂದ ಸಾವಿನ ತನಕವೂ ನಿನ್ನದು ಅನಿಶ್ಚಿತತೆಯೇ, ನಿನ್ನದು ದೌರ್ಭಾಗ್ಯವೇ, ನಿನ್ನದು ಹೋರಾಟವೇ.. ಆದರೆ, ಅವೆಲ್ಲವುಗಳನ್ನೂ ಮೀರಿ ಬೆಳೆದವ ನೀನು, ಜಗತ್ತಿಗೆ ಮತ್ತೊಬ್ಬ ನಿನ್ನಂಥ ದಾನಿ ಸಿಗಲಾರ ಅದೆಷ್ಟೇ ಸಹಸ್ರ ವರ್ಷಗಳಾದರೂ.. ಅಲ್ಲಿಗೆ ನಿನ್ನ ಬದುಕಿಗೆ ಅರ್ಥ ದಕ್ಕಿತಲ್ಲಾ ರಾಧೇಯ ಎಂದೆ. ಮುಂದುವರೆದು ಕೇಳಿದೆ, ನನಗೂ ನಿನಗೂ ಒಂದು ಸಾಮ್ಯತೆಯಿದೆ ತಿಳಿದಿದೆಯಾ ಕುಂಡಲಧರ? ಬಳಲಿದ ಕಣ್ಣುಗಳಿಂದ ನನ್ನ ನೋಡಿದ. ನಮ್ಮಿಬ್ಬರದೂ ಒಂದೇ ಕತೆ ಕರ್ಣಾ, ಹೆತ್ತಬ್ಬೆಯಿಂದ ದೂರಾಗಿ ಇನ್ಯಾರದೋ ಆಶ್ರಯದಲ್ಲಿ ಬೆಳೆದವರು ನಾವು. ಇಬ್ಬರೂ ಹೆತ್ತಮ್ಮನ ಎದೆಗೆ ಸಹಜವಾಗಿ ಗುದ್ದಿ ಕುಡಿವ ಹಾಲಿಂದ ವಂಚಿತರೇ. ಇಬ್ಬರೂ ಹೆತ್ತಮ್ಮನ ಲಾಲಿಯನ್ನ ಕೇಳದವರೇ. ಇಬ್ಬರೂ ಹೆತ್ತವ್ವನ ಹೊಟ್ಟೆಗೊದ್ದು ಅವಳಿಂದ ಮುದ್ದಿಸಿಕೊಳ್ಳದವರೇ. ಇಬ್ಬರೂ ತೊಟ್ಟಿಲು ತೂಗುವ ಹೆತ್ತವಳ ಕಿರುನಗೆಗೆ ಕಿಲಕಿಲನೆ ಬೊಚ್ಚುಬಾಯಿ ಬಿಟ್ಟು ನಗಲು ಸಿಗದವರೇ.. ಇವಿಷ್ಟನ್ನೂ ಕರ್ಣನ ಕಣ್ಣುಗಳಲ್ಲಿ ಕಣ್ಣಿಟ್ಟು ಅಂದೆ. ಅವನ ಬಳಲಿಕೆ ಕೊಂಚ ತಗ್ಗಿತು, ಅರ್ಥವಾಗಿತ್ತು ಅವನಿಗೆ, ಕಣ್ಣುಗಳಲ್ಲಿ ತೃಪ್ತಿಯ ಮೊಹರುಗಳಿದ್ದವು. ಕಾಲಮೇಲೆ ಮಲಗಿದ, ಹಾಗೇ ಕಾಲದಲ್ಲಿ ಮಲಗಿದ!

ಮಲಗಿದೆಯಾ ರಾಧೆ, ಓದುತ್ತಾ ಓದುತ್ತಾ? ನಿನಗೆಂದೇ ಎರಡು ನವಿಲುಗರಿಗಳ ಇಟ್ಟಿದ್ದೇನೆ ನೋಡು, ಕಪಿಲೆ ಯಮುನೆಯರನು ಕೇಳಿದೆ ಅಂತ ತಿಳಿಸು, ಹುಲ್ಲುಗಾವಲಿನ ಪ್ರವೇಶದಲ್ಲಿ ದೊಡ್ಡ ಮರವಿತ್ತಲ್ಲಾ, ಅಲ್ಲಿದ್ದ ಗಿಳಿಗಳ ಹೊಸ ಸಂತತಿ ಹುಟ್ಟಿರಬಹುದೀಗ, ಅವುಗಳಿಗೆ ನನ್ನ ಮತ್ತು ಅವರ ಪೂರ್ವಜರ ಒಡನಾಟದ ಕತೆ ಹೇಳು, ಕತೆಯಲ್ಲಿ ನಿನ್ನನ್ನೂ ಸೇರಿಸಿಕೊಂಡೇ ಹೇಳಬೇಕು ಮರೆಯಬೇಡ. ಬೃಂದಾವನದ ಸಖಿಯರಿಗೆ ಬೇಕಿದ್ದರೆ ಚೂರು ಹೊಟ್ಟೆಯುರಿಸು ಕೃಷ್ಣ ನನಗೆ ಮಾತ್ರ ಪತ್ರ ಬರೆದನೆಂದು. ಕೊಳಲ ಮೇಲಿನ ಧೂಳೊರೆಸು. ಬಂಡೆಗಳ ಮೇಲೆ ಹಚ್ಚಿಟ್ಟ ಬೆರಣಿಗಳ ಹೆಕ್ಕು. ಗಡಿಗೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ತೆಗೆದು, ನನ್ನ ಗೋಕುಲದ‌ ದಿನಗಳಿಗೆ ಬೆಣ್ಣೆ ಹಚ್ಚು. ಕೃಷ್ಣ ಸಿಗುತ್ತಾನೆ ಒಡೆದ‌ ಮಡಕೆಯ ಚೂರುಗಳಲ್ಲಿ, ಕೃಷ್ಣ ಸಿಗುತ್ತಾನೆ ಕಳ್ಳ ಹೆಜ್ಜೆಗಳ ಪುಟ್ಟ ಮಕ್ಕಳ ಸಲಿಗೆಯಲ್ಲಿ, ಕೃಷ್ಣ ಸಿಗುತ್ತಾನೆ ಕದ್ದು ನೋಡುವ ಕಳ್ಳ ಯೌವನದ ನಾಚಿಕೆಯಲ್ಲಿ, ಕೃಷ್ಣ ಸಿಗುತ್ತಾನೆ ನೀನು ಸವರುವ ಆ ಕೊಳಲಿನ‌ ರಂಧ್ರಗಳಲ್ಲಿ, ಕೃಷ್ಣ ಸಿಗುತ್ತಾನೆ ನಿನ್ನ ಪರವಶದ ನಿದ್ರೆಯಲ್ಲಿ.. ಕೃಷ್ಣ ಸಿಗುತ್ತಾನೆ ನಿನ್ನ ನಿತ್ಯ ದ್ವಂದ್ವಗಳಲ್ಲಿ, ಕೃಷ್ಣ ಸಿಗುತ್ತಾನೆ ನೀನು ಅಂಟಿಕೊಳ್ಳುವ ಕತ್ತಲುಗಳಲ್ಲಿ, ಕೃಷ್ಣ ಸಿಕ್ಕೇ ಸಿಗುತ್ತಾನೆ ನೀನು ಬದುಕುವ ರೀತಿಯಲ್ಲಿ.. ಕೃಷ್ಣ ಸಿಗದೇ ಎಲ್ಲಿ ಹೋಗುತ್ತಾನೆ ರಾಧೆಯ ಪ್ರೀತಿಯ ನೆರಳಿನಲ್ಲಿ...
ಮತ್ತೆ ಪತ್ರ ಬರೆಯುತ್ತೇನೆ ಕೃಷ್ಣ ಕದಡಿದಾಗ, ರಾಧೆ ಮುದುಡಿದಾಗ..

ಇಂತಿ ನಿನ್ನ,
ಗೋಪಾಲ

~`ಶ್ರೀ'
    ತಲಗೇರಿ

ಬುಧವಾರ, ಜನವರಿ 10, 2018

ಮಹಾಮಾಯಿಯ ಸನ್ನಿಧಾನದಲ್ಲಿ...

ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು ಮತ್ತಷ್ಟು ದಿನ ಪಡೆಯಲೇಬೇಕು ಅನ್ನುವುದು ಯಾವತ್ ಕಾಲದ ಆಸೆಯಾದರೆ , ವಯಸ್ಸೆನ್ನುವುದು ಅದೆಲ್ಲಕ್ಕೂ ತೆರೆ ಎಳೆಯುವ ಮಹಾ ಕಲಾವಿದ.. ನಿಯಮಗಳ ಪರೀಕ್ಷೆಯಾದಲ್ಲಿ ಬಹುಶಃ ಒಂದು ವ್ಯವಸ್ಥೆಯಲ್ಲೇ ಏರುಪೇರಾಗುವ ಸಂಭವಗಳೇ ಜಾಸ್ತಿ.. ಹೀಗೆ ಸಾವಿನ ಪರಿಕಲ್ಪನೆಯನ್ನಿಟ್ಟುಕೊಂಡು ಶ್ರೀ ಚಂದ್ರಶೇಖರ ಕಂಬಾರ ಅವರಿಂದ ರಚಿತವಾದ ನಾಟಕ `ಮಹಾಮಾಯಿ'..

     ಮನುಷ್ಯನ ಅಥವಾ ಜೀವಿಯ ಸಾವಿನ ಮುನ್ಸೂಚನೆ ಮೊದಲೇ ತಿಳಿದಿದ್ದಲ್ಲಿ , ಉಳಿಸುವ ಎಲ್ಲಾ ವ್ಯರ್ಥ ಪ್ರಯತ್ನಗಳನ್ನ ಬಹುಶಃ ಬಿಟ್ಟುಬಿಡಬಹುದು.. ಅಥವಾ ಬದುಕಿನ ಮುನ್ಸೂಚನೆ ದೊರೆತಲ್ಲಿ , ಶತಾಯಗತಾಯ ಪ್ರಯತ್ನಿಸಿ ನಾಳೆಗಳನ್ನ ಕಟ್ಟಿಕೊಡಬಹುದು.. ಒಂದು ವೇಳೆ ಸಾವು ಹತ್ತಿರದಲ್ಲಿದೆ ಅಂತ ತಿಳಿದಿದ್ದರೂ , ಅದನ್ನು ಮುಂದೂಡುವ ಎಲ್ಲ ಅರ್ಥಪೂರ್ಣ ಪ್ರಯತ್ನಗಳಿದ್ದರೆ ಫಲಿಸುತ್ತವೆಯೇ? ಅಥವಾ ಸಾವಿನ ಜೊತೆ ನಿರಂತರ ಮಾತುಕತೆಯಲ್ಲಿದ್ದು ದಿನ ಕಳೆಯುವವರ ಮನಃಸ್ಥಿತಿಯಾದರೂ ಹೇಗಿದ್ದೀತು..? ಕೊನೆಯ ಹಂತದಲ್ಲೂ ಬದುಕಿನ ಭರವಸೆಯೊಂದು ಸಿಕ್ಕಾಗ ಮಾರ್ಪಾಡುಗಳೇನಾಗಬಹುದು; ದೈಹಿಕವಾಗಿ ಮತ್ತು ಮಾನಸಿಕವಾಗಿ.. ! ಹೀಗೆ ಸಾವಿನ ಅಧಿದೇವತೆಯಾದಂಥ ಮಹಾಮಾಯಿಯ ಜೊತೆಗಿನ ಸಂಘರ್ಷದ ಕತೆಯೇ ಈ ನಾಟಕ.. ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ೧೦೫ ಪ್ರದರ್ಶನಗಳನ್ನ ಕಂಡು , ಇನ್ನೂ ಹಲವಾರು ಕಡೆ ಪ್ರದರ್ಶನಗೊಳ್ಳಬೇಕಿರುವ ನಾಟಕ ಅಂದರೆ ಉತ್ಪ್ರೇಕ್ಷೆಯೇನಲ್ಲ.. ರಂಗ , ನಾಟಕ , ಬಣ್ಣ ಇವೆಲ್ಲಕ್ಕೂ ಇಂದಿನ ಕಾಲಘಟ್ಟದಲ್ಲಿ ಬೇರೆಯದೇ ಮಾಧ್ಯಮ ದೊರೆತಿದ್ದರೂ , ಒಂದು ನಾಟಕ ಇಷ್ಟು ಪ್ರದರ್ಶನಗಳನ್ನ ಕಾಣುತ್ತದೆ ಅಂತಾದಲ್ಲಿ ಅದರ ಗಟ್ಟಿತನವನ್ನ ಊಹಿಸಲೇಬೇಕು.. ಇನ್ನೂ ಈಗಷ್ಟೇ ರಂಗವನ್ನ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಾ ಇವರು ಅನ್ನುವ ಅಭಿನಯ ಪ್ರತಿಯೊಬ್ಬರಲ್ಲೂ ಕಾಣ್ತಿತ್ತು.. ಪುಷ್ಪಗಂಧಿ ಅನ್ನುವ ಪಾತ್ರ ರಾಜಕುಮಾರಿಯ ಸಖಿಯಾಗಿ , ಛೇಡಿಸುವ ನಮ್ಮೆಲ್ಲ ಗೆಳೆಯ ಗೆಳತಿಯರನ್ನ ನೆನಪಿಸಿದರೆ , ರಾಜಕುಮಾರಿಯ ಪಾತ್ರ ಒಂದೆಡೆ ಅದೆಷ್ಟೇ ವೈಭೋಗವಿದ್ದರೂ ಅದೆಲ್ಲವನ್ನು ಬಿಟ್ಟು ಹೊರಡುವ , ಕೊನೆಗೆ ಪ್ರೇಮದ ತಹತಹಿಕೆಯಲ್ಲಿ ಕನವರಿಸುವ ನಮ್ಮದೇ ಜಗತ್ತಿನ ಒಬ್ಬಳು ಹುಡುಗಿಯಂತೆ ತೋರಿದರೆ , ವಿದೂಷಕ ಮತ್ತು ಅವನ ಹೆಂಡತಿಯ ಪಾತ್ರಧಾರಿಗಳು ನವಿರು ಹಾಸ್ಯದ ಕಚಗುಳಿ ಇಡುತ್ತಾರೆ.. ಇನ್ನು ವೈದ್ಯನ ಪಾತ್ರದಲ್ಲಿ ಮೊದಮೊದಲು ಅಂಜಿಕೆ , ಅಸಹಾಯಕತೆ ನಿಧಾನವಾಗಿ ಹೋಗುತ್ತಾ , ದೃಢ ಮನಸ್ಸು ಆವರಿಸಿಕೊಳ್ಳುವ ಬಗೆ ಮತ್ತು ಕೊನೆಗಿನ ಚಾತುರ್ಯ ಎಲ್ಲಾ ಚೆನ್ನಾಗಿ ಬಿಂಬಿತ.. ಆಗಾಗ ಕರ್ತವ್ಯದ ಸೂಚನೆ ಕೊಡುವ ಕಠೋರ ಮುದುಕಿಯ ಪಾತ್ರ ನಮ್ಮೆಲ್ಲರೊಳಗಿನ ಧ್ವನಿಯಂತೆ ಕಾಣುತ್ತದೆ.. ಹಾಗೇ ಒಂದು ಗುಂಪು ವಿಚಿತ್ರ ಪಾತ್ರಗಳದ್ದು; ಅವು ನಗಿಸ್ತವೆ ಮತ್ತು ಒಟ್ಟುಕುಟುಂಬವನ್ನ ನೆನಪಿಸ್ತವೆ.. ಇನ್ನು ಸಾವಿನ ಅಧಿದೇವತೆಯಾದ ಮಹಾಮಾಯಿಯ ಪಾತ್ರ..ಗಾಂಭೀರ್ಯ,ಕ್ರೌರ್ಯ, ಕಾಠಿಣ್ಯ ಜೊತೆಗೆ ಮಮತೆಯನ್ನೂ ಒಳಗೊಂಡಂಥ ಪಾತ್ರ ಅದು.. ಇಡೀ ಕತೆಯಲ್ಲಿ ಸಾವಿನ ಬಗೆಗೆ ಭಯ ಹುಟ್ಟಿಸುವ, ತನ್ನದೇ ಅಂತಿಮ ಡಿಂಡಿಮ ಧ್ವನಿ ಅಂತ ಎಲ್ಲರ ಎದೆಯಲ್ಲೂ ನರ್ತಿಸುವ ಪಾತ್ರದಲ್ಲಿ ಸ್ನೇಹಾ ಭಯಂಕರವಾಗಿಯೇ ಅಭಿನಯಿಸಿದ್ದಾರೆ.. ಪ್ರವೇಶವೇ ಚೆಂದ.. ಹೊಗೆಯಾಡುವ ಸ್ಮಶಾನದ ಭಾವ.. ಮುಖದಲ್ಲಿ ಕ್ರೌರ್ಯ , ಎದೆಯಲ್ಲಿ ವಾತ್ಸಲ್ಯ.. ಸೃಷ್ಟಿ ನಿಯಮಗಳ ಪರಿಪಾಲನೆಯ ಸೂಚನೆ ಕೊಡೋ ಮಾರ್ಗದರ್ಶಕಿ ಹೀಗೇ ಹೀಗೇ.. ಇವೆಲ್ಲಕ್ಕೂ ಆ ಸಂಪೂರ್ಣ ಸನ್ನಿವೇಶಗಳನ್ನ ಕಟ್ಟಿಕೊಟ್ಟಿದ್ದು ಬೆಳಕಿನ ಸಂಯೋಜನೆ; ಅಬ್ಬಾ !! ಬೆಳಕಿನ ಸಂಯೋಜನೆಯನ್ನ ನೋಡಲಿಕ್ಕಾದರೂ ನಾಟಕಕ್ಕೆ ಬರಲೇಬೇಕು ಅನ್ನುವಷ್ಟು ಚೆಂದ.. ಬೇರೆ ಬೇರೆ ಬಣ್ಣಗಳನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಇಡೀ ರಂಗ ಸ್ಥಳ ಕಲಾಕೃತಿಯಂತೆ ಗೋಚರಿಸುತ್ತಿತ್ತು.. ಇನ್ನು ಹಾಡುಗಾರಿಕೆ ಮತ್ತು ಸಂಗೀತ ಹಿತವಾಗಿತ್ತು.. ಇವೆಲ್ಲವನ್ನ ತೆರೆಯ ಮೇಲೆ ತಂದಂಥವರು ಜೀವನ್ ರಾಂ ಸುಳ್ಯ.. ಇವರ ನಿರ್ದೇಶನದಲ್ಲಿ ಅಚ್ಚುಕಟ್ಟುತನ ಎದ್ದು ಕಾಣ್ತಿತ್ತು.. ಕೊನೆಯಲ್ಲಿ ಅವರ ಮಾತುಗಳಲ್ಲಿ ಅವರ ಹಳೆಯ ದಿನಗಳ ಮೆಲುಕಿತ್ತು..

     ಒಟ್ಟಿನಲ್ಲಿ ಡಿಜಿಟಲ್ ಮಾಧ್ಯಮಗಳಿಂದ ಯಾವತ್ತೂ ಸಿಗದ ಅನುಭವಗಳು ಈ ರಂಗಭೂಮಿಯದ್ದು.. ಒಂದಷ್ಟು ಹೊತ್ತು ನಾವು ಮತ್ತು ರಂಗದಲ್ಲಿ ನಡೆಯುತ್ತಿರುವ ಕತೆ ಇವೆರಡರ ಜೊತೆ ಕಳೆದುಹೋಗಬೇಕಿದ್ದಲ್ಲಿ ಇಂತಹ ನಾಟಕಗಳನ್ನ ಆಗಾಗ ನೋಡಲೇಬೇಕು.. ಮತ್ತೆಲ್ಲಾದರೂ ಮಹಾಮಾಯಿ ನಾಟಕದ ಪ್ರದರ್ಶನವಿದ್ದಲ್ಲಿ ಖಂಡಿತಾ ಹೋಗಿ, ರಂಗದ ಆಸ್ವಾದನೆ ರಂಗದ ಇದಿರಲ್ಲೇ ಚೆಂದ..

~`ಶ್ರೀ'
    ತಲಗೇರಿ

ಮುಂಬೈಯಿಂದ ರಥಬೀದಿಗೆ ಬಂದ `ಬಣ್ಣದ ಕಾಲು'...



ನಾಗರಿಕತೆಯ ವಿಕಾಸವಾದಂತೆ ಹಳ್ಳಿಗಳು ಪಟ್ಟಣಗಳು ಮಹಾನಗರಗಳು ಅನ್ನುತ್ತಾ , ಭೌಗೋಳಿಕ ಭಿನ್ನ ಪ್ರದೇಶಗಳು ಸೃಷ್ಟಿಯಾಗ್ತಾ ಹೋದವು.. ಒಂದೇ ಭೂಮಿ , ಆದರೆ ಅಲ್ಲಿನ ಮನಃಸ್ಥಿತಿ , ಆಹಾರ ಪದ್ಧತಿ , ಜೀವನ ಶೈಲಿ ಮತ್ತು ಪ್ರಾಕೃತಿಕ ಭಿನ್ನತೆಗಳು ಎಲ್ಲಕ್ಕೂ ಅದರದ್ದೇ ಆದ ವಾತಾವರಣವನ್ನ ಕಟ್ಟಿಕೊಟ್ಟವು.. ಮಹಾನಗರದ ರಸ್ತೆಗಳ ನಿಯಾನ್ ದೀಪಗಳಿಗೂ, ಹಳ್ಳಿಯ ಗುಡಿಸಲಿನ ಲಾಟೀನು ಮತ್ತು ಚಿಮಣಿ ಬುರುಡೆಗಳಿಗೂ ಬಹುಶಃ ತಾಳೆ ಮಾಡಲು ಆಗದೇ ಇರುವಷ್ಟು ಅಂತರವೇನೋ! ಎರಡೂ ಬೆಳಕನ್ನು ಕೊಡುತ್ತವೆ ಅನ್ನುವುದು ಮಾತ್ರ ಎರಡಕ್ಕೂ ಇರುವ ಸಾಮ್ಯತೆ.. ಒಂದು ವೈಭೋಗದ ಸಂಕೇತವಾದರೆ ಇನ್ನೊಂದು ಪುರಾತನ ಜೀವನ ಪದ್ಧತಿಯ ಮೂಕ ಸಾಕ್ಷಿ.. ಹೀಗೆ ಮುಂಬೈ ಮಹಾನಗರದ ಪುಟ್ಟ ಪ್ರಪಂಚ ಮತ್ತು ಗೋಕರ್ಣದ ರಥಬೀದಿಯ ದೊಡ್ಡ ಜಗತ್ತಿನ ಸಮೀಕರಣವೇ `ಬಣ್ಣದ ಕಾಲು'

ಜಯಂತ ಕಾಯ್ಕಿಣಿ ಅನ್ನುವ ಈ ಜಾದೂಗಾರ ನನ್ನ ಮಟ್ಟಿಗೆ ಯಾವತ್ತೂ ಒಂದು ಪಿಳಿಪಿಳಿ ಕಂಗಳನ್ನ ಸದಾ ತೆರೆದಿಡುವಂತೆ ಮಾಡಬಲ್ಲ ವಿಸ್ಮಯದ ಮೂಟೆ.. ಅವರ ಪುಸ್ತಕಗಳನ್ನ ಓದುವುದಕ್ಕೆಂದು ಕೈಗೆತ್ತಿಕೊಳ್ಳುವಷ್ಟರಲ್ಲೇ ಪುಟಾಣಿ ನಗೆಯೊಂದು ಪ್ರಶಾಂತವಾಗಿ ತುಟಿಗಳಲ್ಲಿ ಅರಳುತ್ತದೆ.. ಬದುಕಿನ ದಿವ್ಯತೆಯನ್ನ ನಮ್ಮದೇ ಮನೆಯ ಪುಟ್ಟ ಪೋರನೊಬ್ಬ ಹಾಗೆ ಹೀಗೆಲ್ಲ ಓಡಾಡಿ ಹೇಳಿದಷ್ಟು ಮುದ್ದು ಮುದ್ದು.. ಅವರದೇ ಗೆಳೆಯ ಎಸ್ ಮಂಜುನಾಥ್ ಹೇಳಿದಂತೆ ಭಗ್ನ ಬದುಕಿನ ಅದೆಷ್ಟೋ ಜೀವಂತ ವಿವರಗಳು ಇವರಿಗೆ ಗೊತ್ತು ಮತ್ತು ಅವುಗಳಲ್ಲೇ ಈ ಬದುಕು ಒಂದು ದಿವ್ಯ ಎಂದು ಹೊಳೆಸುತ್ತಾರೆ.. ಬದುಕಿನ ಪರಿಶುದ್ಧ ಆವೃತ್ತಿಗಳಾದ ಇವರ ಕತೆಗಳ ಚೆಂದ ಓದುವುದರಿಂದ ಮಾತ್ರವೇ ದಕ್ಕಲಿಕ್ಕೆ ಸಾಧ್ಯ.. ಅಂಥ ಒಂದು ಓದು ನನಗೆ ಸಿಕ್ಕಿದ್ದಕ್ಕೆ ಕೆಲವು ಸಾಲುಗಳಲ್ಲಿ ನನಗೆ ದಕ್ಕಿದ್ದನ್ನ ಹೀಗೆ ತೆರೆದಿಡಲು ಹೊರಟಿದ್ದೇನೆ..

`ಬಣ್ಣದ ಕಾಲು' , ಒಟ್ಟು ೧೩ ಕತೆಗಳ ಸಂಕಲನ..ಒಂದೇ ಪುಸ್ತಕದಲ್ಲಿ ಎರಡು ಭಾಗಗಳಲ್ಲಿ ಕತೆಗಳನ್ನ ಪ್ರಸ್ತುತಪಡಿಸಲಾಗಿದೆ.. ಮೊದಲನೇ ಕತೆ `ಬಣ್ಣದ ಕಾಲು' ,‌ಇದರಲ್ಲಿ ಮುಂಬೈ ನಗರದ ನಿಬಿಡತೆಯ ಬಗ್ಗೆ ಮತ್ತು ಸಣ್ಣ ಸಣ್ಣ‌ ಖೋಲಿಗಳಲ್ಲಿ ಬದುಕು ನೂಕುವವರ ಚಿತ್ರಣವಿದೆ. ಮಹಾನಗರದ ಕನಸು ಕಂಡ ಪುಟ್ಟ ಪೋರನೊಬ್ಬ ಅಲ್ಲಿ ತನ್ನ ಗೆಳೆಯನಿಗಾಗಿ ಬಣ್ಣದ ಕಾಲು ತರುವ ಕನಸು ಕಾಣುತ್ತಾನೆ. ಮಗನ‌ ಕೀಟಲೆಗಳನ್ನು ಸಹಿಸಲಾರದೇ ಅವನನ್ನು ರಿಮಾಂಡ್ ಹೋಮಿಗೆ ಸೇರಿಸುವ ತವಕ ಈ ಪುಟ್ಟ ಹುಡುಗನ ತಂದೆ ತಾಯಿಯರದ್ದು.. ಮಹಾನಗರದ ಗಡಿಬಿಡಿ ತಂದೆ ಮತ್ತು ಮಗ ಇಬ್ಬರನ್ನೂ ಬೆಚ್ಚಿಬೀಳಿಸುತ್ತದೆ.. ಪುಟ್ಟ ಕನಸುಗಳನ್ನ ಬೆನ್ನಟ್ಟಿದವರ ಕತೆ ಇದು. ಇನ್ನು ಎರಡನೇ ಕತೆ ಚೌತಿ ಚಂದ್ರ.. ಬಸ್ಸಿನ ಡ್ರೈವರನೊಬ್ಬ ತನ್ನ ನಿತ್ಯದ ಚಾಕರಿಯಿಂದ ಬೇಸತ್ತು ತನ್ನ ಒಳಮನಸ್ಸಿನ ತುಡಿತದ ಬಾಲ ಹಿಡಿದು ಊರಿಗೆ ಬಂದಾಗ , ಅಲ್ಲಿನ‌ ಅವನ ಪ್ರಶ್ನೆಗಳಿಗೆ ಸಿಗುವಂಥ ಉತ್ತರ ಮತ್ತು ಆ ಉತ್ತರ ಕೊಟ್ಟ ವ್ಯಕ್ತಿಗೂ ವೃತ್ತಿಗೂ ಇರುವಂಥ ಸಂಬಂಧಗಳು, ಮಾನವೀಯ ತುಡಿತಗಳು ಮತ್ತು ಅನಿರೀಕ್ಷಿತ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇನ್ನು ಮುಂದಿನ‌ ಕತೆ ಸೇವಂತಿ‌ ಹೂವಿನ ಟ್ರಕ್ಕು.. ವಯಸ್ಸಾಗಿ ಓಡಾಡಲು ಆಗದೇ ಇರುವವಳೊಬ್ಬಳ ಕತೆ; ಮುದುಕಿ ಮತ್ತು ಆ ಮನೆಯವರು ಇಬ್ಬರೂ ಒಬ್ಬರಿಗೊಬ್ಬರು ಋಣದ ನೆರಳಿನಲ್ಲಿರುವವರು.. ಇಬ್ಬರ ಮನಸ್ಸಿನಲ್ಲಿಯೂ ನಡೆಯುವ ಜವಾಬ್ದಾರಿಯ ಕದನ ಮತ್ತು ಪೀಕಲಾಟದ ವ್ಯಥೆ ಈ ಕತೆ.. ನಾಲ್ಕನೆಯ ಕತೆಯ ಹೆಸರು ಅಪರೂಪ.. ಅಂಗವೈಫಲ್ಯದಿಂದ ಸಮಾಜದ ಕಣ್ಣಿನಿಂದ ದೂರವೇ ಉಳಿಯುತ್ತಿದ್ದ ಹುಡುಗಿಯ ಭಾವಚಿತ್ರ ತೆಗೆಯುವ ಒಂದು ಸಣ್ಣ ಅಂಶವಿಟ್ಟುಕೊಂಡ ಕತೆಯ ಅಂತ್ಯ ಎಂಥವರನ್ನೂ ಒಂದು ಕ್ಷಣ ವಿಚಲಿತರನ್ನಾಗಿಸುತ್ತದೆ. ಆದರೆ ಆ ಹುಡುಗಿ ಒಂದು ಚೆಂದ ಶಿಶುವಿನಂತೆ ಉಳಿದುಬಿಡುತ್ತಾಳೆ ಅದೇ ಮಂದಹಾಸದಲ್ಲಿ!.. ಮತ್ತೊಂದು ಕತೆ `ಹೊಸ್ತಿಲು'.. ಇಲ್ಲಿ ಸಾಂಸಾರಿಕ ಬದುಕನ್ನು ಕಟ್ಟಿಕೊಡುತ್ತಾ , ಸತ್ಯತೆಯ ಹುಡುಕಾಟ ಮತ್ತು ಪ್ರೀತಿಯ ಹಂಬಲ ವ್ಯಕ್ತವಾಗಿದೆ.. ಇನ್ನು ಮೊದಲನೇ ಭಾಗದ ಕೊನೆಯ ಕತೆ ದಿಟ್ಟಿಬೊಟ್ಟು , ಒಬ್ಬ ಕಲಾವಿದನ ಬದುಕನ್ನ ಒಂದು ಕಡೆಯಲ್ಲಿ ಹೇಳ್ತಾ , ಸಮಾಜದ ಚಿಂತಕನೊಬ್ಬ ಆಸ್ಪತ್ರೆಯಲ್ಲಿ ಮರುಗುವ ಕಥಾನಕ ಇದು.. ಖಾಯಿಲೆ ಕೂಪದಲ್ಲೂ ಬದುಕು ಜಡೆ ಹೆಣೆದ ಪುಟ್ಟ ಬಾಲೆಯಂತೆ ಮತ್ತು ಜಡೆ ಹೆಣೆವ ಅಮ್ಮನಂತೆ ಜೀವಂತವಾಗಬಲ್ಲದು ಅನ್ನುತ್ತದೆ ಈ ಕತೆ..

ಇನ್ನು ಭಾಗ ಎರಡರಲ್ಲಿನ ಮೊದಲ ಕತೆ ಸ್ವಪ್ನದೋಷ.. ಸಂಸಾರವಿದ್ದೂ ಕೆಲಸದ ನಿಮಿತ್ತ ದೂರ ಇರುವವನೊಬ್ಬ ಮತ್ತು ಚಿನ್ನದ ಬಳೆಯ ಕನಸು ಕಾಣುವ ಅವನ ಹೆಂಡತಿ.. ಇಲ್ಲಿ ಹೆಣ್ಣು ಇರಬಹುದಾದ ವಿವಿಧ ಪಾತ್ರಗಳಲ್ಲಿ ಆಕೆ ಅವನಿಗೆ ಎದುರಾಗುತ್ತಾಳೆ.. ಸ್ವಾವಲಂಬನೆಯ ಪ್ರತಿಜ್ಞೆಯಾಗಿ ಕತೆ ಉಳಿದುಹೋಗುತ್ತದೆ.. ಮುಂದಿನ ಕತೆ ಟ್ರೈಸಿಕಲ್.. ಬಾಲ್ಯವನ್ನ ಕೆದಕುವ ಮತ್ತು ನೆರೆಹೊರೆಗಳ ಆತ್ಮೀಯತೆಯನ್ನ ವರ್ಷಾನುವರ್ಷಗಳವರೆಗೂ ಕಾಪಿಡುವ ಕತೆ..ಮುಗ್ಧತೆಯೆದುರು ಸ್ವಾರ್ಥ ಕರಗಬೇಕು ಅನ್ನುವುದನ್ನ ಸೂಕ್ಷ್ಮವಾಗಿ ಕಟ್ಟಿಕೊಡುವ ಕತೆಯಿದು.. ಗಾಳಿಮರದ ನೆಳಲು ಅನ್ನುವ ಕತೆಯಲ್ಲಿ ಜೈಲಿಗೆ ಹೋದ ಗಂಡನನ್ನ ಕಾಣಲು ಹಾತೊರೆಯುವ ಮತ್ತು ಅವನ ಬರುವಿಕೆಯಲ್ಲಿ ಮಾಯವಾಗುವ ಅಸೂಯೆ ಮತ್ತು ಅವನೆಡೆಗಿನ ತಹತಹಿಕೆ, ಚಡಪಡಿಕೆಗಳ ಕತೆಯಲ್ಲಿ ಅವ ಒಂದು ಕ್ಷಣದ ಗಾಳಿಯಂತೆ ಬಂದುಹೋಗುತ್ತಾನೆ.. ಇನ್ನು ತೀರ ಎನ್ನುವ ಕತೆಯಲ್ಲಿ ಸಾವು ಅಪರಿಚಿತರನ್ನೂ ಬಂಧುಗಳನ್ನಾಗಿಸುತ್ತದೆ; ಸತ್ತುಬಿದ್ದ ಮೀನಿಗೆ ಜೀವ ಬರಲಿ ಎಂದು ಗೋಳಾಡುವವರ ಕತೆ, ಆದರೆ ಕೊನೆಗೆ ಎಲ್ಲರೂ ಅವರವರ ದಾರಿ ಹಿಡಿಯಲೇಬೇಕು, ಬದುಕು ಎಂದಿನಂತೆ ಮಾಮೂಲಿಯಾಗಿಬಿಡುತ್ತದೆ ಅನ್ನುತ್ತದೆ ಈ ಕತೆ.. ಚುಕ್ಕಾಣಿ ಅನ್ನೋ ಕತೆಯಲ್ಲಿ ಯಾರದೋ ಆಗಮನದಲ್ಲಿದ್ದವರಿಗೆ ಇನ್ನ್ಯಾರದ್ದೋ ಆಗಮನವಾಗಿ, ಸಮುದ್ರದಲ್ಲಿನ ಅಲೆಗಳು ಇನ್ಯಾವುದರದ್ದೋ ಮುನ್ಸೂಚನೆಯಂತೆಲ್ಲಾ ಭಾಸವಾಗಿ ಕೊನೆಗೆ ಆಸೆಯ ಲಾಂಚು ಮರಳಿ ಬಂದು ನಿಟ್ಟುಸಿರುಬಿಡುತ್ತದೆ.. ಮತ್ತೊಂದು ಕತೆ `ಬಿಡು ಬಿಡು ನಿನ್ನಯ..' , ಇದು ಮಾಸ್ತರರಿಬ್ಬರ ಕತೆ.. ಪ್ರಕೃತಿಯನ್ನ ಉಳಿಸಿಕೊಳ್ಳಬೇಕು ಅನ್ನುವವರೊಬ್ಬರಾದರೆ, ಅವರನ್ನ ಕಂಡರೆ ಭುಸುಗುಡುವ ಇನ್ನೊಬ್ಬರು.. ಇಬ್ಬರ ಬದುಕೂ ಬದಲಾದಾಗ ಇಬ್ಬರಲ್ಲೂ ಚಡಪಡಿಕೆ.. ಕೊನೆಗೆ ವೃದ್ಧಾಪ್ಯದಲ್ಲೂ ದ್ವೇಷದ ಕಿಚ್ಚಿದ್ದವನಲ್ಲಿ ನಿಸ್ತೇಜ ಬೂದಿ ಮಾತ್ರ ಇದ್ದಂತೆನಿಸತೊಡಗುತ್ತದೆ.. ಆಕ್ರೋಶವೆಲ್ಲ , ದೈನ್ಯತೆಯ ದನಿಯಾಗಿ ಬದಲಾದಂತನಿಸುತ್ತದೆ.. ವಿಕೃತ ಗೆಲುವಿನ ಆನಂದದಲ್ಲಿದ್ದವನೊಬ್ಬ ಕಳೆದುಕೊಂಡ ಬದುಕಿಗಾಗಿ ಹಲುಬುವ ಒಳದನಿಯಲ್ಲಿ ಸೋತುಹೊಗುತ್ತಾನೆ.. ಇನ್ನು ಕೊನೆಯ ಕತೆ ಚಂದ್ರಶಾಲೆ..  ಜಾತ್ರೆಯ ಸಂದರ್ಭವೊಂದನ್ನ ತೆಗೆದುಕೊಂಡು ಅಲ್ಲಿನ ಮೂರು ಭಿನ್ನ ವ್ಯಕ್ತಿಗಳ ಕುರಿತಾಗಿ ಕತೆಯಿದೆ.. ರಥಬೀದಿಯೇ ಈ ಎಲ್ಲಾ ಕತೆಗಳು ಸಂಧಿಸುವ ಜಾಗ..  ತೇರೊಂದು ಕಡೆ ಕದಲದೇ ನಿಂತಿದ್ದರೆ ತೇರನ್ನೇ ತನ್ನ ಗಂಡ ಎನ್ನುವವಳೊಂದು ಕಡೆ , ತೇರನ್ನ ನೋಡಲು ಬರುವಳೇನೋ ಎಂದು ಇಷ್ಟದ ಹುಡುಗಿಗೆ ಕಾದು ಕೂತಂಥವನೊಬ್ಬ , ಇನ್ನು ಕುಂಕುಮದ ಅಂಗಡಿಯಲ್ಲಿ ಕೂತಿರಬೇಕಾದವನೊಬ್ಬ ಬೆಟ್ಟದಲ್ಲಿ ಬಳೆಯೊಂದಿಗೆ ಪಾಳು ಗೋಡೆಗಳ ನಡುವೆ ಉಬ್ಬಸ ಬಂದಂತೆ ಆಡುತ್ತಿದ್ದ .. ಹೀಗೆ ಬೇರೆ ಬೇರೆ ಬಣ್ಣ ಆ ಜಾತ್ರೆಗೆ.. !

ಇವಿಷ್ಟು ಕತೆಗಳ ಸಾರಾಂಶಗಳಾದರೆ , ವಿವರಗಳನ್ನ ಓದಿಯೇ ಅನುಭವಿಸಬೇಕು.. ಅದರಲ್ಲೂ ನನ್ನಂಥವನಿಗೆ ನನ್ನ ಊರಿನಲ್ಲಿ ನಡೆದಿರಬಹುದಾದ ಸಾಧ್ಯತೆಗಳನ್ನ ಹೀಗೆಲ್ಲಾ ಕಾಣಬಹುದಾ ಅನ್ನುವ ಅಚ್ಚರಿಯನ್ನ ಉಳಿಸಿಕೊಳ್ಳುವ ಸಂಕಲನ ಇದು..ಸಣ್ಣ ಸಣ್ಣ ಸಂಗತಿಗಳನ್ನ ನಾವು ಗಮನಿಸುವುದು ತುಂಬಾನೇ ಕಡಿಮೆ, ಅದಕ್ಕೆಂದೇ ಬಹುಶಃ ಹತಾಶರಾಗಿ ನರಳುತ್ತೇವೆ ಬದುಕಿನ ಪುಟ್ಟ ಖುಷಿಗಾಗಿ.. ಕಾಯ್ಕಿಣಿಯವರ ಕತೆಗಳಲ್ಲಿ ಎಲ್ಲಕ್ಕೂ ಜೀವವಿದೆ, ಕೈಮುರಿದ ಕುರ್ಚಿ, ರಾತ್ರಿ ಪಾಳಿಯ ಬಸ್ಸು , ಇಂಜೆಕ್ಷನ್ನಿನ ವಾಸನೆ ಸೂಸುವ ಅಸ್ಪತ್ರೆ , ಉಪ್ಪುಗಾಳಿ , ಕಂಕುಳ ಬೆವರು , ರಸ್ತೆ ಬದಿಯ ಅಂಗಡಿ, ಕದ್ದುತಂದ ಸೀಯಾಳ, ರಾತ್ರಿ ಕಳ್ಳ ಚಂದ್ರ.. ಹೀಗೇ ಹೀಗೇ.. ಯಾಂತ್ರಿಕತೆಯ ಈ ಹೊಸ್ತಿಲಲ್ಲಿ ಮತ್ತು ಹೊತ್ತಿನಲ್ಲಿ ಬರಮಾಡಿಕೊಳ್ಳಬಹುದಾದ ಬರಹಗಳು ಶ್ರೀ ಜಯಂತ ಕಾಯ್ಕಿಣಿ ಅವರದ್ದು..

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೪

ಶಹರದ ಹೊಕ್ಕುಳೊಳಗೆ-೪
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮುಗಿಲು ತಲುಪುವ ಹುರುಪಿನ ಎತ್ತರೆತ್ತರದ ಕಟ್ಟಡದ ಕೋಣೆಗಳಿಗೆ ಒಂದೆರಡು ಚಿಕ್ಕ ಕಿಟಕಿ , ಒಂದು ಬಾಗಿಲು..ಅಂತಸ್ತಿನ ಮೇಲೊಂದು ಅಂತಸ್ತು ಜೊತೆಗೆ ತಾರಸಿ.. ನಾಲ್ಕು ಗೋಡೆಗಳ ಮೈಗೆ ಬಿಸಿಲ‌‌ ನಾಚಿಸುವ ಬಣ್ಣ.. ಅಲ್ಲೇ ಒಂದಷ್ಟು ತೇಪೆ.. ಅಲ್ಲಿ ನಡೆದಾಡಿಕೊಂಡ ಕೈಕಾಲುಗಳ ಕತೆಗಳಲ್ಲಿ ನಗೆಯೆಂಬುದೊಂದು ಮರೀಚಿಕೆ.. ಹಣೆಯ ಮೇಲಿನ‌ ನೆರಿಗೆಗಳು ಒತ್ತೊತ್ತಾಗಿ ನಿಲ್ಲುತ್ತವೆ; ಕೆನ್ನೆಯೆಂಬುದಕ್ಕೆ ಇಲ್ಲಿ ವ್ಯಾಯಾಮವಿಲ್ಲ.. ಕಂಗಳು ಗಣಕಯಂತ್ರ ಮತ್ತು ಜಂಗಮವಾಣಿಯ ಪರದೆಗಳ ಪಿಕ್ಸೆಲ್ಗಳ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಬಹುತೇಕ ಆಯಸ್ಸು ಕಳೆಯುತ್ತವೆ.. ರಾತ್ರಿಯೂಟಕ್ಕೆ ಬೆಳಗಿನ ತಿಂಡಿ, ಮಧ್ಯಾಹ್ನಕ್ಕೆ ಊಟದಂತಿರದ ಊಟ.. ಇನ್ನು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಮೂಡ್ ಇದ್ದರೆ ಚಹಾ, ಕಾಫೀ ಹಾಗೇ ಒಂದಷ್ಟು ಚುರುಮುರಿ.. ಇಲ್ಲಾ , ತಳ್ಳುಗಾಡಿಯ ಮುಂದೆ ತನ್ನ ಅವಧಿಗಾಗಿ ಪೆಚ್ಚಾಗಿ ಕಾಯುವಿಕೆ.. ಚಪ್ಪರಿಸಿ ತಿನ್ನುವ ನಾಲಿಗೆಗೆ ಎಂದೂ ತೀರದ ರುಚಿ.. ಶಹರದ ಎಲ್ಲ ಕಟ್ಟಡದ ಗೋಡೆಗಳಿಗೂ ವಿಚಿತ್ರ ವಿಚಿತ್ರ ಕತೆಗಳ ಸೋಂಕು ತಗುಲಿರುತ್ತದೆ..
    
     ದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುಖದಲ್ಲಿ ಅದೆಷ್ಟೋ ನೆನಪುಗಳು ಸತ್ತ ಸೂತಕದ ಛಾಯೆ ಅಥವಾ ಭವಿಷ್ಯದ ಬೀಗದ ಕೈ ಹುಡುಕುವ ಚಿಂತೆ.. ದಪ್ಪ ದಪ್ಪ‌ ‌ಕನ್ನಡಕ ಹೊತ್ತ ಚಿಕ್ಕ ಮಕ್ಕಳ ಮೂಗಿನ ಅಳಲಿಗಿಲ್ಲಿ ನಾವು ಜಾಣ ಕಿವುಡರು.. ಕೇಜಿಗಟ್ಟಲೆ ಪುಸ್ತಕ ಹೊತ್ತ ಎರಡು ಕಾಲಿನ ಗಾಡಿಯೊಂದು ವಾಲುತ್ತಾ ವಾಲುತ್ತಾ ಶಾಲೆ ಸೇರಿಕೊಳ್ಳುತ್ತದೆ.. ( ಈ ಶಾಲೆ ಅನ್ನೋ ಶಬ್ದ ಸ್ವಲ್ಪವೇ ದಿನದಲ್ಲಿ ಶಬ್ದಕೋಶದಲ್ಲಿ ಮಾತ್ರ ಅಸ್ತಿತ್ವ ಪಡೆದು ವಿಷಾದದ ನಗೆಯೊಂದ ಬೀರುತ್ತದೆ ) ದೂರದರ್ಶನದ ಮುಂದೆ ಕುಳಿತ ಆತ್ಮವೊಂದು ಅಲ್ಲಿನ ಧಾರಾವಾಹಿಗಳ ಪಾತ್ರದ ವಿಮರ್ಶೆ ಮಾಡುತ್ತಾ ಅವುಗಳ ಕಣ್ಣೀರಿಗೆ ಇಲ್ಲಿ ಬೊಬ್ಬೆ ಹೊಡೆಯುತ್ತದೆ.. ಹೊರಗೆ ಹೋದಂಥ ಆಕೃತಿಗಳು ಟ್ರಾಫಿಕ್ಕಿನಲ್ಲಿ ಜೊತೆಗೆ ಸಿಕ್ಕಸಿಕ್ಕಲ್ಲಿ , ತಮ್ಮ‌ ಭಾಷಾಪಾಂಡಿತ್ಯ ಮೆರೆಯುವ ಎಲ್ಲ ಕಸರತ್ತು ನಡೆಸುತ್ತದೆ.. ಊರಿನ ನೆನಪಾದಾಗ ಭಾವುಕವಾಗುವ ಜೀವಗಳು ಇಲ್ಲಿ ಬಹುಶಃ ಬಹಳಷ್ಟಿವೆ.. ಅನಿವಾರ್ಯತೆ ಎಂಬ ನಾಟಕದಲ್ಲಿ ಕೈಗೆ ಸಿಕ್ಕ ಬಣ್ಣ ಮೆತ್ತಿಕೊಂಡು ರಂಗಸ್ಥಳಕ್ಕೆ ಧುಮುಕಿದವರು ನಾವುಗಳು.. ಇಂದಿಗೂ ನಮ್ಮ ನಮ್ಮ ಪಾತ್ರದ ಸ್ಪಷ್ಟ ಚಿತ್ರಣ ನಮ್ಮ ಕಣ್ಣ ರೆಪ್ಪೆಗಳ ಅಡಿಯಲ್ಲೇ ನಜ್ಜುಗುಜ್ಜಾಗಿ ನರಳುತ್ತಿದೆ.. ಸಮಾಜದ ವ್ಯವಸ್ಥಿತ ಫಿತೂರಿಯೊಳಗೆ ಸಸಾರಕ್ಕೆ ನಮ್ಮನ್ನ ನಾವು ತಳ್ಳಿಕೊಂಡು ಸಂಸಾರ ನಡೆಸುತ್ತಿರುವಂಥ ಅಕ್ಷರಸ್ಥ ಸಾಮಾನ್ಯ ಪ್ರಜೆಗಳು..
     ಇನ್ನು ಕೆಲಸ ಸಿಗದೇ ಬೇರೆ ಬೇರೆ ಊರಿನಿಂದ ಸಣ್ಣ ಸಣ್ಣ ಕೋರ್ಸ್ಗಳನ್ನ ಮಾಡಲಿಕ್ಕೆಂದು ಬರುವವರ ಅನುಭವಗಳು ಬದುಕಿನ ಇನ್ನೊಂದು ಮಗ್ಗುಲನ್ನೇ ಪರಿಚಯಿಸಿಬಿಡುತ್ತವೆ..ಈ ಎಲ್ಲಾ ಹೋರಾಟಗಳು ಮೂರು ಹೊತ್ತಿನ ಊಟ ಮತ್ತು ಕಣ್ತುಂಬ ನೆಮ್ಮದಿಯ ನಿದ್ರೆಗಾಗಿ.. ಬಹುಶಃ ಇವೆಲ್ಲವನ್ನೂ ದಕ್ಕಿಸಿಕೊಳ್ಳುವ ಓಟದಲ್ಲಿ ಎಲ್ಲರೊಂದಿಗೆ ಓಡುತ್ತಾ ಓಡುತ್ತಾ ಓಟದ ಮುಕ್ತಾಯದ ಗೆರೆ ಕಾಣಲಾಗದೇ ಕಕ್ಕಾಬಿಕ್ಕಿಯಾಗುತ್ತೇವಲ್ಲಾ ; ಅಲ್ಲಿಗೆ ಕೂದಲಿಗೆ ಬಣ್ಣ ಹಚ್ಚುವ ಸಮಯ ಬಂದಿರುತ್ತದೆ.. ಓಟದ ಮಧ್ಯ , ರಸ್ತೆಯ ಪಕ್ಕ ನಮ್ಮ ಹಳೆಯ ಸ್ನೇಹವೊಂದು ನಮ್ಮ ಕುಟುಂಬದ ಜೊತೆ ನಿಂತು ಕೈಬೀಸಿತ್ತೇನೋ ; ಗಮನಿಸಲೇ ಇಲ್ಲ.. ಒಂದು ಕಿರುನಗೆ ನಮ್ಮ‌‌ ಜೊತೆಯೇ ಓಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನ ಪರಿಚಯಿಸುತ್ತಿತ್ತೇನೋ ; ಆ ಕಡೆ ತಿರುಗುವುದನ್ನೇ ಮರೆತುಬಿಟ್ಟೆವಲ್ಲಾ... ನಾವೇ ಚಿಕ್ಕವರಿದ್ದಾಗ ನೆಟ್ಟಿದ್ದ ಗಿಡವೊಂದು ಈಗ ಹಣ್ಣು ಕೊಡಲು ಹಂಬಲಿಸುತ್ತಿತ್ತೇನೋ, ಗುರುತೇ ಹತ್ತಲಿಲ್ಲ.. ಈಗ ಮೈಲಿಗಲ್ಲುಗಳು ದಾಟಿಹೋದವು ; ಎಲ್ಲೂ ನಮ್ಮ ಹೆಸರಿಲ್ಲ.. ಬರೀ ದೂರದ ಅಳತೆಗಷ್ಟೇ ಅದನ್ನ ಬಳಸಿಕೊಂಡೆವು.. ದೂರ ಮುಗಿಯಲೇ ಇಲ್ಲ.. ಹತಾಶ ಸಂಜೆಯಲ್ಲಿ ಹಪಹಪಿಸುತ್ತೇವೆ, ಕಾಲು ಸೋತಿದ್ದು ಅರಿವಾಗುತ್ತದೆ.. ಕೈಕೊಟ್ಟು ನಿಲ್ಲೋಣವೆಂದರೆ ಯಾರೊಬ್ಬರ ಹೆಗಲಿಗೂ ನಮ್ಮ ಬೆವರಿನ ಕಲೆಯಿಲ್ಲ..
     ಮಹಾನಗರಕ್ಕೆ ಬಹಳಷ್ಟು ಬಣ್ಣದ ನೆರಳುಗಳಿವೆ..ಗಡಿಬಿಡಿಯನ್ನ ಬಗಲಿಗೇ ಜೋತುಹಾಕಿಕೊಂಡು ಏಳುವ ನಗರ, ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಗಿಷ್ಟು ಬೀಳಲೆಂದು ಹಾತೊರೆಯುತ್ತದೆ.. ಸಂಜೆಯಾಗುತ್ತಿದ್ದಂತೆ ಎಣ್ಣೆಯ ಕಮಟು ವಾಸನೆಯನ್ನ ಸೂಸುತ್ತ ನಿಯಾನ್ ದೀಪಗಳ ಮಾದಕತೆಗೆ ಮೈಮುರಿಯುತ್ತದೆ.. ಬೀದಿಗಳಲ್ಲಿ ಬೆಳಕು ಮಾರಾಟಕ್ಕೆ ಸಿಗುತ್ತದೆ; ಕತ್ತಲೆಯಲ್ಲಿ ಯಾರಿಗೂ ಗೊತ್ತಿರದೇ ಸಣ್ಣ ಸಣ್ಣ ನರಳುವಿಕೆಯ ಹಂಚಿಕೊಂಡಂತೆ.. ರಾತ್ರಿ ಬೆಳಗಾಗುತ್ತದೆ, ಕೀಲುಗಳು ಎಂದಿನಂತೆ ಸಹಕರಿಸುತ್ತವೆ; ಒಮ್ಮೊಮ್ಮೆ ಶಪಿಸಿಕೊಳ್ಳುತ್ತ.. ಮಹಾನಗರ ಎಂದಿನಂತೆ ಎಲ್ಲವನ್ನೂ ಬಚ್ಚಿಟ್ಟುಕೊಂಡ ತಟಸ್ಥ ಗುಟ್ಟಂತೆ ಉಳಿದುಬಿಡುತ್ತದೆ.. ಶಹರದ ಹೊಕ್ಕುಳೊಳಗೆ ನಗೆಯ ಬಿಂಬಗಳ ಹುಡುಕಾಟ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ; ಅಷ್ಟಿಷ್ಟು ವಿರಾಮದ ಆಚೆಗೂ..

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೩

ಶಹರದ ಹೊಕ್ಕುಳೊಳಗೆ-೩
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮಹಾಪಟ್ಟಣವೊಂದಕ್ಕೆ ಮುಖಾಮುಖಿಯಾಗುವುದೆಂದರೆ ಬಹುಶಃ ನಮ್ಮೊಳಗಿನ ಹಲವು ಪಾತ್ರಗಳಿಗೆ ನಾವೇ ಪ್ರಶ್ನೆ ಕೇಳಿ, ಮತ್ತೆ ನಾವೇ ಉತ್ತರ ಕಂಡುಕೊಳ್ಳಲು ಹೆಣಗುವ ಒಂದು ಚಿಕ್ಕ ಪ್ರಕ್ರಿಯೆಯಷ್ಟೇ! ಒಂದಷ್ಟು ವರ್ಷಗಳ ಕಾಲ ಊರಿನ ಮನೆಗಳಲ್ಲಿ ವಾರಸ್ದಾರಿಕೆ ನಡೆಸುತ್ತಾ , ಊರಿನ ಹಾದಿಗಳಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಮಾತನಾಡಿಸುತ್ತಾ, ಕೈಲೊಂದು ಚಿಕ್ಕ ಕೋಲು ಹಿಡಿದು , ಅದ್ಯಾವುದೋ ಸರಿಯಾಗಿ ರಾಗ ಬರದ ಹಾಡೊಂದ ಗುನುಗುತ್ತಾ ಹೊರಟ ನಾವು ಈ ಪಟ್ಟಣದ ಹಾದಿಗಳಲ್ಲಿ ಮೂಕರಾಗುತ್ತೇವೆ.. ರಸ್ತೆಯ ಎರಡೂ ಕಡೆಗಳಲ್ಲಿನ ವಾಹನಗಳು ಅವುಗಳದೇ ಭಾಷೆಯಲ್ಲಿ ಮಾತನಾಡಿಸುತ್ತವೆ; ನಾವು ಯಂತ್ರಗಳಲ್ಲವಲ್ಲ!.. ಮಹಾನಗರದ ಬೀದಿಗಳು ಅದೆಷ್ಟೇ ಪರಿಚಿತವಾಗಿದ್ದರೂ ಅಪರಿಚಿತವೇ..ಊರ ದಿಬ್ಬಗಳ ಏರಿಳಿಯುತ್ತಿದ್ದ ಅದೇ ಮುಖಗಳು, ಇಲ್ಲಿನ ಯಾವ ಸಮತಟ್ಟು ರಸ್ತೆಗಳಲ್ಲೂ ಕಾಣಸಿಗುವುದಿಲ್ಲ.. ನಮ್ಮೆಲ್ಲ ನೆನಪುಗಳು ಎಂದಿಗೂ ನಮ್ಮಮೊದಲ ಊರಿನ ವ್ಯಕ್ತಿಗಳ ಮೇಲೆಯೇ ಕಟ್ಟಲ್ಪಡುತ್ತದೆ.. `ಇವರು ಅವರಂತೆ' ಅನ್ನುವ ಆ ವಾಕ್ಯವೊಂದು ಸದಾ ಅಚ್ಚು ತೆಗೆದಿಟ್ಟಂತೆ !.. ಹೀಗೆ ಕಟ್ಟಲ್ಪಟ್ಟ ನೆನಪುಗಳು ಅದೆಷ್ಟು ಆವೃತ್ತಿಗಳಲ್ಲಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತವೆಯೋ..
     ಬದುಕಿನ ಹೋರಾಟಕ್ಕೆ ಅಣಿಯಾದವರಂತೆ, ಯುದ್ಧಭೂಮಿಯೆಂಬಂತೆ ನಾವೀ ಮಹಾನಗರವನ್ನ ಪ್ರವೇಶಿಸುತ್ತೇವೆ. ದಿನನಿತ್ಯದ ಶಸ್ತ್ರಾಭ್ಯಾಸದಲ್ಲೇ ಸೋಲಿನ ನೆರಳನ್ನ ಇದಿರುಗೊಳ್ಳುತ್ತ ಪರಿತಪಿಸುತ್ತೇವೆ.. ಯಾಕೆ?.. ಬಹುಶಃ, ಆತುಕೊಳ್ಳುವ ಹೆಗಲುಗಳ, ಅಥವಾ ಸುತ್ತಲೂ ನಿಂತು ಧೈರ್ಯತುಂಬುವ ಕೌಟುಂಬಿಕತೆಯ ಕೊರತೆಯೇ?!.. ಮನುಷ್ಯ ಸಂಬಂಧಗಳ ನಿಜವಾದ ವಿಶ್ಲೇಷಣೆಗೆ ನಗರದಂತಹ ಪುಟವೊಂದು ಬಿಟ್ಟರೆ ಬೇರೆ ದೊರಕಲಾರದೇನೋ!..ಅದೆಷ್ಟೋ ಜಗತ್ತುಗಳು ಒಂದು ಪುಟ್ಟ ಪ್ರದೇಶದಲ್ಲಿ ಸೇರುತ್ತವೆ.. ಇಡೀ ಜಗತ್ತು ಏಕೀರ್ಭವಿಸುತ್ತದೆ.. ಇಲ್ಲಿನ ಬಹುತೇಕ ಸಂಬಂಧಗಳಿಗೆ ಒಂದು ನಿರ್ದಿಷ್ಟ ಮೇರೆಯಿರುತ್ತದೆ.. ನಮ್ಮವರು ಅನ್ನಿಸುವ ಜೀವಗಳು ಎಲ್ಲೋ ಬೆರಳೆಣಿಕೆಯಷ್ಟು; ಜಗತ್ತಿನ ಸುಗಂಧ ದ್ರವ್ಯಗಳ ಪ್ರಚಾರಕ್ಕಾಗಿ ಆಚೆ ಈಚೆ ಓಡಾಡುವ ದೇಹಗಳೇ ಹಲವು ಎನಿಸಿಬಿಡುತ್ತವೆ.. ಇಂಥ ಒಂದು ಪರಿಸರದಲ್ಲಿಯೇ ಅಮ್ಮನ ಕೈತುತ್ತು, ಅಪ್ಪನ ಸವೆದ ಚಪ್ಪಲಿ, ಮನೆಯ ಮೂಲೆಯಲ್ಲಿ ಚಳಿಯಲ್ಲಿ ಕುಯ್ ಗುಡುತ್ತಿದ್ದ ನಾಯಿ, ಈಗ ಭೂಮಿಯ ಇನ್ಯಾವುದೋ ಭಾಗದಲ್ಲಿ ಇರುವ ಅಕ್ಕ ಅಣ್ಣ ತಮ್ಮ ತಂಗಿ‌ಯರ ತರಹೇವಾರಿ ಜಗಳಗಳು, ಗದ್ದೆಯ ಅಂಚಿನ ವಿಹಾರ, ಕೊಕ್ಕರೆಗಳ ಒಂಟಿ ಕಾಲು, ಅರ್ಧ ಮುರಿದ ಸೇತುವೆ, ಯಾವುದೇ ನಿರ್ದಿಷ್ಟ ಆಕಾರವಿಲ್ಲದ ದೇವರ ಮೂರ್ತಿ, ಕೆಸರಿನಲ್ಲಿ ಕಲ್ಲು ಹೊಡೆಯುವ ಚೇಷ್ಟೆ, ಗಾಳಕ್ಕೆ ಸಿಕ್ಕಿಸುವ ನಂಜುಳ, ಫಟಕ್ಕನೆ ಎಳೆದಾಗ ಸಿಕ್ಕಿಕೊಂಡ ಮೀನು, ಕಲ್ಲು ಪೊಟರೆಗಳಲ್ಲಿ ಪುಟುಪುಟು ಅನ್ನುತ್ತಾ ಮರೆಯಾಗೋ ಏಡಿಗಳು, ಹುಣಸೇಮರ, ಜೊತೇಲ್ ಪಾಟಿಚೀಲ ಹಿಡ್ದು ಬರ್ತಿದ್ ಗೆಳೆಯರ ತಂಡ ಎಲ್ಲವೂ ಎಲ್ಲವೂ ಬಹುವಾಗಿ ಆವರಿಸಿಕೊಂಡುಬಿಡುತ್ತವೆ..
     ಹೀಗೇ ಮನಸ್ಸಿನ ಅದ್ಯಾವ್ದೋ ಅಡ್ಡಾದಿಡ್ಡಿ ಮೂಲೆಯಲ್ಲಿ ಅಜ್ಞಾತವಾಗಿ ಹುದುಗಿದ್ದ ಈ ನೆನಪುಗಳಿಗೆ ಹೊಸ ಜಾತ್ರೆ ಶುರುವಾಗೋದು ಈ ಮಳೆಯಲ್ಲಿ.. ! ರೋಮಗಳ ತುದಿಗೋ ಇಲ್ಲಾ ತೆಳು ಧೂಳಿನ ರಸ್ತೆಯ ಬೊಗಸೆಗೋ ಹನಿಯೊಂದು ಬಿದ್ದಾಗ ಕತ್ತೆತ್ತಿ ನೋಡುವ ನಾವು ಸೇರುವುದು ಯಾವುದೋ ಸೂರನ್ನಾದರೂ, ಈ ನೆನಪುಗಳು ಒಮ್ಮೊಮ್ಮೆಇರುವೆಗಳಂತೆ ಸಾಲಲ್ಲಿ , ಕೆಲವೊಮ್ಮೆ ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ನುಗ್ಗಿಬಿಡುತ್ತವೆ ಹೃದಯದ ಮುಖ್ಯ ಬೀದಿಗೆ.. ಸಂಜೆ ಸಮಯಕ್ಕೆ ಶುರುವಾಗುವ ಮಳೆಗಂತೂ ಅದೇನು ಖಯಾಲಿಯೋ..! ನಾಲ್ಕು ಪುಟಾಣಿ ಗೋಡೆಗಳ ಯಾವುದೋ ಮೂಲೆ ಅಥವಾ ಮಧ್ಯದಲ್ಲಿ , ಬೆಳದಿಂಗಳಂಥ ದೀಪಗಳಿದ್ದರೂ ಕತ್ತಲೆಯನ್ನೇ ಹಚ್ಚಿಕೊಂಡು ಕೂತು ಒಂದು ಕಪ್ ಚಹಾ ಅಥವಾ ಕಾಫಿಯನ್ನ ನೆನೆನೆನೆದು ಕೊರಗುವ ಪರದೇಶಿ ಬದುಕು ಬಹುಶಃ ಬ್ಯಾಚುಲರ್ ಎನಿಸಿಕೊಂಡವರ ಕರ್ಮ‌ಸಿದ್ಧಾಂತ ಅಥವಾ ನಿಧಾನಕ್ಕೆ ಸಂಪಾದಿಸಿಕೊಂಡ ಹಕ್ಕು ಎನ್ನಬಹುದೇನೋ!..
     ನಗರದ ಮನೆಗಳ ತಾರಸಿಯಲ್ಲಿ ಮನುಷ್ಯನ ಅದೆಷ್ಟು ಕತೆಗಳು ಓದಲಾಗದಂತೆ ಬಿದ್ದಿವೆಯೋ.. ಏಕಾಂತ ಮತ್ತು ಏಕಾಂಗಿತನದ, ಹರೆಯ ಮತ್ತು ಪ್ರಣಯದ ಅದೆಷ್ಟು ಸಂಚಿಕೆಗಳು ನಿರಂತರವಾಗಿ ಪ್ರಸಾರವಾಗಿವೆಯೋ, ತಾರಸಿ ಕೇವಲ ತಟಸ್ಥ ಮಾಧ್ಯಮ.. ಈ ನಗರವೋ ಧೀಮಂತ ಮೌನಿ..ಹೆಣ್ಣಿನಂತೆ! ಆಳಕ್ಕೆ ಇಳಿದಂತೆ ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸಿ, ತನ್ನ ತೆಕ್ಕೆಗೆ ಎಳೆದುಕೊಳ್ಳುವ ಚಾಲಾಕಿ.. ಒಮ್ಮೊಮ್ಮೆ ಕಾಲೆಳೆಯುತ್ತ , ಇನ್ನೊಮ್ಮೆ ಕುಪ್ಪಳಿಸುತ್ತ ಸಾಗಿದಾಗಲೆಲ್ಲ‌ ಸಲವೂ ವಿಸ್ಮಯಗಳು ಎದುರಾಗುತ್ತಲೇ ಇರುತ್ತವೆ.. ನಗರ ಪೂರ್ತಿ ಸ್ವಾತಂತ್ರ್ಯದ ಬಂಧೀಖಾನೆ, ಅಂದುಕೊಳ್ಳುವವರಿಗೆ; ಗಡಿಗಳಿಲ್ಲದ ನಕ್ಷೆ, ಅಪ್ಪಿಕೊಳ್ಳುವವರಿಗೆ..ಇನ್ನು ಕೆಲವರಿಗೆ ಬೆರಳು ತಾಕದ ಆಕಾಶ..!!

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೨

ಶಹರದ ಹೊಕ್ಕುಳೊಳಗೆ-೨
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಬೆಳಿಗ್ಗೆ ಮಧ್ಯಾಹ್ನ ಅಥವಾ ಸಂಜೆಗಳ ವ್ಯತ್ಯಾಸವಿಲ್ಲದೇ ತಳ್ಳುಗಾಡಿಯ ಮೇಲೊಂದಿಷ್ಟು ಆಗಷ್ಟೇ ನೀರು ಚಿಮುಕಿಸಿದ ಹಸಿಸೊಪ್ಪು , ತರಕಾರಿಗಳ ಮಳಿಗೆ ಸಿದ್ಧಪಡಿಸಿ, ಯಾವುದೋ ಹೊಚ್ಚ ಹೊಸ ರಾಗದಲ್ಲಿ ಅರ್ಥವೂ ಆಗದಂತೆ ಅರಚುವ ಆತನೊಬ್ಬನು ಶಹರದ ಬೀದಿಗಳಲ್ಲಿ ಓಡಾಡುತ್ತಾನೆ.. ಅರೆ ಮುರಿದ ತಕ್ಕಡಿಯಲ್ಲಿ ಅರ್ಧರ್ಧ ಕೇಜಿಯ ವ್ಯಾಪಾರ ನಡೆಯುತ್ತದೆ ಚೌಕಾಸಿಯ ಸಮಕ್ಷಮದಲ್ಲಿ... ಇನ್ನೊಂದಷ್ಟು ಕಡೆ ತರಕಾರಿ ಹಣ್ಣುಗಳು ಬೈಯುತ್ತಲೇ ಸ್ನಾನಮಾಡಿ ಪಾರದರ್ಶಕ ವಸ್ತ್ರ ತೊಟ್ಟು ವ್ಯಾಪಾರಕ್ಕಿಳಿಯುತ್ತವೆ ! ಮೊಣಕಾಲು ಅಥವಾ ಅದಕ್ಕಿಂತ ಇನ್ನೂ ಒಂಚೂರು ಉದ್ದದ ಬಟ್ಟೆಯ ಹೆಣ್ಣು ಗಂಡುಗಳು ತಾವೇ ತಳ್ಳುಗಾಡಿಗಳಲ್ಲಿ ತುಂಬಿಕೊಂಡು ತಂಪುಕೋಣೆಗಳಲ್ಲಿ ವಾಯುವಿಹಾರದ ನೆಪ ಹೇಳುತ್ತಾ ಅಲೆಯುತ್ತಾರೆ.. ಸೂರ್ಯನ ಬೆಳಕಿನಲ್ಲಿ ತಿರುಗುವ ವಸ್ತುಗಳಿಗಿಂತ, ಮಂದ ಹಳದಿ ಬೆಳಕಿನ ಇಲ್ಲಾ ಗಾಜಿನ ಉಪಸ್ಥಿತಿ ಇದ್ದಲ್ಲಿ ಬೆಲೆ ಜಾಸ್ತಿ!..ಇನ್ನು ಅವನೊಬ್ಬನಿದ್ದಾನೆ ಹಳದಿ ಮತ್ತು ಹಸಿರು ಅಥವಾ ಕಪ್ಪು ಮೈಯ ರಥದ ಸಾರಥಿ.. ಗಲ್ಲಿಗಲ್ಲಿಗಳಲ್ಲಿ ಮೂರು ಚಕ್ರದ ಗಾಡಿ ಹಿಡಿದು ನುಗ್ಗುತ್ತಾನೆ.. ಅವನಿಗೆ ತಾನಾಗಿ ಮಾತಿಗಿಳಿವ ಹಂಬಲವಿಲ್ಲ.. ಆದರೆ ನಾವೇ ಅವನ ಮಾತನಾಡಿಸಿದರೆ, ಅವನ ಕತೆಗಳಿಗೆ ಬರವಿಲ್ಲ.. ಬಹುಶಃ ಅವನಿಗೂ ನಿತ್ಯ ರಸ್ತೆಯ ಜೊತೆ ಸವೆಸುವ ಸಮಯದ ಜಿಡ್ಡು ಹಿಡಿದಿರಬೇಕು.. ಸಿಕ್ಕಸಿಕ್ಕಲ್ಲಿ ತಾತ್ಸಾರದ ಜಿಗುಪ್ಸೆಯ ಒಂಟಿತನದ ಹಾರನ್ ಒತ್ತುತ್ತಾನೆ.. ಆದರೆ ಅವನೂ ನಗುತ್ತಾನೆ; ನಮ್ಮ ಒಂದು ಸಣ್ಣ ನಗೆಗೆ..!
     ಈ ನಗರದ ಬೀದಿಗಳಲ್ಲಿ ಅದೆಷ್ಟೋ ಜನ ಓಡಾಡುತ್ತಾರೆ. ದಪ್ಪ ಸಪೂರ ಉದ್ದ ಗಿಡ್ಡ ಮತ್ತು ಹಲವು ಚರ್ಮದವರು.. ಯಾರು ಯಾರಿಗೂ ಪರಿಚಿತರಲ್ಲ ; ಆದರೂ ಸಂಬಂಧಿಗಳೇ ಅನ್ನೋದು ಈ ನಗರಕ್ಕೆ ಮಾತ್ರವೇ ಗೊತ್ತು.. ನಂದಿನಿ ಹಾಲಿನ  ಬಸಪ್ಪ , ಪೇಪರ್ ತರುವ ರಮೇಶ, ಕುಡಿಯುವ ನೀರಿನ ಕ್ಯಾನಿನ ನಾಗೇಶ, ಮನೆಗೆಲಸದ ವೆಂಕ್ಟಮ್ಮ ಹೀಗೇ ಹೀಗೇ.. ಎಲ್ಲರೂ ಒಂದೇ ಮನೆಗೆ ಬೇರೆ ಬೇರೆ ಸಮಯಕ್ಕೆ ಬರುತ್ತಾರೆ, ತಂತಮ್ಮ ಕೆಲಸ ಮುಗಿಸಿ ಹೊರಡುತ್ತಾರೆ.. ಇನ್ನು 20 ರೂಪಾಯಿಗೆ 3 ಅಥವಾ 4 ತಟ್ಟೆ ಇಡ್ಲಿ ಕೊಡುವ ಗೂಡು ಹೋಟೆಲ್ಲಿನ ಅಂಕಲ್,
ದಿನಸಿ ಸಾಮಾನಿನ ಅಂಗಡಿಯ ಶೆಟ್ರು , ಚಪ್ಪಲಿ ಅಂಗಡಿಯ ರಹೀಂ ಸಾಬ್, ದರ್ಜಿ ಗಜಾನನ, ಬೇಕರಿಯ ಸತೀಶಣ್ಣ ಎಲ್ಲರೂ ಒಂದೇ ನಗರದ ಬೇರೆ ಬೇರೆ ಬೀದಿಯ ಪಾಲುದಾರರು..
    ಬಹುಶಃ ನಮಗೇ ತಿಳಿಯದೆಯೇ, ಸಾವಿರಾರು ಗ್ರಾಹಕರಲ್ಲಿ ನಾವೊಬ್ಬರಾಗಿದ್ದರೂ, ಈ ಎಲ್ಲ ವ್ಯಾಪಾರಿಗಳ ತಲೆಯಲ್ಲಿ ನಮ್ಮ ಹೆಸರು ಉಳಿದಿರುತ್ತವೆ.. ಯಾರೂ ಗೊಡವೆಗೇ ಹೋಗದ ಆತ್ಮೀಯತೆಯೊಂದು ಸೇತುವಾಗಿರುತ್ತದೆ.. ಕೆಲವಷ್ಟು ಪರಿಚಯಗಳು ಹಾಗೆಯೇ, ಆಕಾಶದಲ್ಲಿ ತಾನಾಗೇ ಪ್ರತ್ಯಕ್ಷವಾಗುವ ಗಾಳಿಪಟದ ಹಾಗೆ.. ಯಾರು ಇದರ ರೂವಾರಿ, ಯಾಕಾಗಿ ಅದರ ಉಸ್ತುವಾರಿ ಅನ್ನುವುದರ ಕಿಂಚಿತ್ತೂ ಯೋಚನೆಯಿಲ್ಲದೆ ಗಾಳಿ ಇರುವ ತನಕ ಗಾಳಿಪಟ ಹಾರುತ್ತಿರುತ್ತದೆ.. ಯಾವುದೋ ಒಂದು ಕ್ಷಣದಲ್ಲಿ ಕಣ್ಮರೆಯಾಗುತ್ತದೆ ; ಆದರೂ ಮನಸ್ಸಲ್ಲೊಂದು ಪುಟ್ಟ ಜಾಗವನ್ನ ತನ್ನ ಹೆಸರಿಗೆ ಬರೆಸಿಕೊಳ್ಳುವ ಜಾಣ್ಮೆಯೇ ವಿಸ್ಮಯ.. ಇಲ್ಲಿ ನಗರದ ಯಾವ ಸಂಬಂಧಗಳಿಗೂ ಹೆಸರಿಲ್ಲ ; ಅವುಗಳ ಅವಧಿ ಮನೆ ಬದಲಾಗುವ ತನಕ ಅಥವಾ ಮನಸ್ಸು..!
     ಇನ್ನು ಪಾರ್ಕಿನ ಗೆಳೆಯರ ಬಗ್ಗೆ ಹೇಳದಿದ್ದರೆ ಹೇಗೆ, ಅಲ್ವಾ? ಉದ್ಯಾನವನದಲ್ಲಿ ಕೆಲವೊಮ್ಮೆ ಸಮಾನ ಮನಃಸ್ಥಿತಿಯ ದೇಹಗಳು ಭೇಟಿಯಾಗುತ್ತವೆ.. ಸೊಕ್ಕಿನಿಂದ ಹಿಡಿದು ಸುಕ್ಕುಗಟ್ಟಿದವರಿಗೂ ಉದ್ಯಾನವನ ಒಂಥರಾ ಸಮಾಧಾನದ ಸ್ಥಳ.. ಎತ್ತರೆತ್ತರದ ಕಾಂಕ್ರೀಟ್ ಕಟ್ಟಡದ ಮಧ್ಯೆ ಮತ್ತೆ ಮತ್ತೆ ಊರಿನ ಒಂದು ಭಾಗವನ್ನ ಮರುಕಳಿಸುವ ವ್ಯವಸ್ಥಿತ ಹಸಿರು ಜಾಗಕ್ಕೆ ಒಂದೈದತ್ತು ನಿಮಿಷದಿಂದ ಹಿಡಿದು ಒಂದೂವರೆ ಎರಡು ತಾಸುಗಳ ತನಕವೂ ಇದ್ದು ಆರೋಗ್ಯ ಪಡೆದುಕೊಳ್ಳುವ ಬಳಗವಿದೆ.. ಸುದ್ದಿ ಚಾವಡಿಯೆಂದೇ ಹೇಳಬಹುದೇನೋ ಕೆಲವೊಮ್ಮೆ; ಹಳೆ ತಲೆಮಾರುಗಳು ತಮ್ಮ ಯೌವನದ ದಿನದಿಂದ ಶುರುಮಾಡಿ ಇಂದಿನ ಯುವಪೀಳಿಗೆಯ ಕುರಿತು ನಿಟ್ಟುಸಿರು ಬಿಟ್ಟಾಗ ಒಂದು ಸಣ್ಣ ವಿರಾಮ.. ಹೊಸತಲೆಮಾರಿಗೆ ಪಾರ್ಕುಗಳ ಉಪಯೋಗ ಪಿಸುಮಾತುಗಳ ವಿಲೇವಾರಿ ಮತ್ತು ಇನ್ನೊಂದಿಷ್ಟು ಸರಕುಗಳ ಆಮದಿಗೆ ಮಾತ್ರವೇ! ಇನ್ನು ಕೆಲವರಿಗೆ ಲೇಖನಿಯ ತುದಿಗೆ ಅಕ್ಷರಗಳ ಇಳಿಸಲು ಸ್ಫೂರ್ತಿ ಕೊಡುವ ಜಾಗ.. ಇಲ್ಲಿ ನಾಳೆಯ ನೀರಸ ಯೋಚನೆಗಳಿವೆ, ಪ್ರಸ್ತುತ ವಿದ್ಯಮಾನದ ಚಿಂತನೆಗಳಿವೆ, ನಿನ್ನೆಯ ಊಹಾಪೋಹಗಳೂ ಇವೆ.. ಇಲ್ಲಿನ ಬೆಂಚುಗಳು ಬಹುಶಃ ಎಲ್ಲಕ್ಕೂ ಸಾಕ್ಷಿಯಾಗುತ್ತವೆ; ಆದರೂ ಕರಗುವುದಿಲ್ಲ..

~`ಶ್ರೀ'
    ತಲಗೇರಿ
    

ಶಹರದ ಹೊಕ್ಕುಳೊಳಗೆ.. -೧

ಶಹರದ ಹೊಕ್ಕುಳೊಳಗೆ.. -೧
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಕಾಂಕ್ರೀಟ್ ಕಾಡು..ಕಪ್ಪು ಬಣ್ಣವನ್ನು ಉಗಿ ಮಾಡಿ‌ ದಪ್ಪದಪ್ಪಗೆ ಹರಡಿದಂಥ ಹೊಗೆಯ ಪದರ..ಟ್ರಾಫಿಕ್ ಲೈಟಿನ ಎದುರುಗಡೆ ಒಂದೇ ಸಮನೆ ಬೊಬ್ಬಿರಿವ ಹಾರನ್ ಗಳು..ಆ ಭಾಷೆ ಈ ಭಾಷೆಯ ಅಚ್ಚ ಬೈಗುಳಗಳು..ಇಷ್ಟೇ ಇಷ್ಟೇ ಈ ಶಹರವೆಂಬ ದೊಡ್ಡಹೊಟ್ಟೆಯ ಹಣೆಬರಹ.. ಹೊಟ್ಟೆಪಾಡಿಗಾಗಿ ಇಲ್ಲಿ ಜೋತುಬೀಳಬೇಕಷ್ಟೇ, ಇಲ್ಲದಿದ್ದಲ್ಲಿ ಇಲ್ಲ್ಯಾಕೆ ಬರುತ್ತಿದ್ದೆ.. ಇಂತಹ ಅದೆಷ್ಟೋ ಮಾತುಗಳನ್ನ ದಿನನಿತ್ಯ ಕೇಳ್ತೀವಿ; ಅಷ್ಟೇ ಅಲ್ಲ , ಆಡ್ತೀವಿ.. ಶಹರ ಅಂದ್ರೆ ಇಷ್ಟೇನಾ? ಜರ್ಝರಿತ ರೋಗಿಷ್ಟ ದರಿದ್ರ ಅಶುದ್ಧ ವಾಂಛೆಗಳ ಅಸಹ್ಯ ಅನಾತ್ಮ ಕಸದ ತೊಟ್ಟಿ ಅನ್ನುವಷ್ಟರ ಮಟ್ಟಿಗೆ ಮೂಗುಮುರಿಯುತ್ತಲೇ ಕಾಲಚಕ್ರದ ನಿಟ್ಟುಸಿರಿನ ಇದಿರು ಕೈಕಟ್ಟಿ ನಿಲ್ಲುತ್ತೀವಲ್ಲಾ! ಇಷ್ಟೇನಾ ಶಹರ ಅಂದ್ರೆ?! ಅಲ್ಲ....
     ಒರಟು ತೊಗಟೆಯಷ್ಟನ್ನೇ ಕೆಕ್ಕರಿಸಿ ನೋಡುತ್ತಾ, ಒಳಗಿನ ರುಚಿಯ ಬಗೆಗೆ ದಾಖಲೆಯಿಲ್ಲದೇ ಮಾತನಾಡುವ ಖಯಾಲಿ ಇಂದಿನದಲ್ಲ.. ಪ್ರಕೃತಿಯ ಪರಿಭಾಷೆಯ ಉಕ್ತಿಗಳಲ್ಲಿ ಈ ಶಹರವೂ ಒಂದು..ವಾಸದ ಕೋಣೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಮುಖಕ್ಕೆ ರಾಚುವ ಸೂರ್ಯನ ಶ್ವಾಸಕ್ಕೆ ಬೈಯುತ್ತಲೇ ಬೀದಿಗಿಳಿಯುವ ನಾವು, ಎಳೆಬಿಸಿಲ ಮೆಲುದನಿಗೆ ಕಿವಿಗೊಟ್ಟಿದ್ದು ಎಂದು?! ಟ್ರಾಫಿಕ್ಕಿನ ರಗಳೆಯಲ್ಲಿ ಸುತ್ತಮುತ್ತಲು ಒಮ್ಮೆಯಾದರೂ ಕಣ್ಣು ಹರಿಸಿದ್ದೀವಾ..ಪಕ್ಕದ ಆಟೋದಲ್ಲಿ ಪಿಳಿಪಿಳಿ ಕಂಗಳ ಪುಟಾಣಿ, ಬೊಚ್ಚುಬಾಯಿಯಲ್ಲಿ ಆಗಷ್ಟೇ ಹುಟ್ಟುತ್ತಿರುವ ಮೊಗ್ಗು ಹಲ್ಲುಗಳನ್ನ ತೋರಿಸುತ್ತಿರಬಹುದು.. ದಿನಪತ್ರಿಕೆ ಮಾರುತ್ತ ,ಅರ್ಧ ಹರಿದ ಅಂಗಿಯ ಗುಂಡಿಗಳಲ್ಲಿ ಕನಸುಗಳ ಭದ್ರಪಡಿಸುತ್ತಿರುವ ಆ ಗಾಢ ಬಣ್ಣದ ಚರ್ಮದ ಹುಡುಗನ ಹೆಸರನ್ನೆಂದಾದರೂ ಕೇಳಿದ್ದೀವಾ.. ಧೂಮಪಾನ ಶ್ವಾಸಕೋಶದ ಕೋಣೆಗಳನ್ನ ಬಿಂಜಲು ಕಟ್ಟುವಂತೆ ಆವರಿಸುತ್ತದೆಂದು ಅರಿವಿದ್ದರೂ ಟ್ರಾಫಿಕ್ಕಿನ ಹೊಗೆಯಲ್ಲೇ ಬಿಳಿವಸ್ತ್ರ ತೊಟ್ಟು ,ಸಂಬಾಳಿಸುವ ಆ ಮನುಷ್ಯನೊಬ್ಬನಿಗೆ ಒಂದು ಧನ್ಯವಾದದ ನೋಟ ತಲುಪಿದೆಯಾ..
     ದಾರಿಯಂಚಲ್ಲಿ ನಡೆವಾಗ ಮೆತ್ತನೆಯ ಒಂದು ಸ್ಪರ್ಶಕ್ಕಾಗಿ ಹಾತೊರೆದ ಪುಟಾಣಿ ನಾಯಿಮರಿಯ ಹೆಜ್ಹೆ ಸದ್ದು ನಮ್ಮ ಬಿರುಸಿನ ಹೆಜ್ಜೆಗಳಲ್ಲಿ ಕರಗಿಹೋಯಿತೇನೋ.. ಆಗಷ್ಟೇ ಮೈದಳೆದ ಬೇಲಿಬದಿಯ ಹೂವ ಗೆಳೆತನಕ್ಕೆ ಹಾತೊರೆಯುತ್ತಿರುವ ಚಿಟ್ಟೆಯ ಗೋಗರೆತ ನಮ್ಮ ಅಟ್ಟಹಾಸದ ತರಂಗಗಳಲ್ಲಿ ಉಸಿರುಗಟ್ಟಿ ಸತ್ತಿರಬಹುದು..ಅಪರೂಪಕ್ಕೆ ಕಾಣಸಿಗುವ ಮರದ ಟೊಂಗೆಯ ಎಲೆಗೊಂಚಲುಗಳಲ್ಲಿ ಕುಳಿತು ವೀಕ್ಷಕರ ಹಂಗಿಲ್ಲದೇ ಹಾಡಿದ ಹಕ್ಕಿಯ ದನಿಯನ್ನ ಗಮನಿಸಲೇ ಇಲ್ಲವಲ್ಲ... ನಮ್ಮ ಪ್ರೀತಿಯ ನಿವೇದನೆಗೆ ಇಷ್ಟುದ್ದ ಮಲ್ಲಿಗೆ ದಂಡೆಯನಿತ್ತು , ಚಂದ್ರನ ರಾತ್ರಿಗಳಿಗೆ ಬೆಳದಿಂಗಳ ಪನ್ನೀರ ಘಮ ತುಂಬಿದವನ ಹಗಲುಗಳು ಬೆವರ ಹನಿಗಳ ಬಿಕ್ಕಳಿಗೆ ಹಾಗೇ ಇಂಗಿಹೋಗುತ್ತದೆ...
     ಬದುಕು ಹೋರಾಟ ಎಂಬುದರ ನಿಜವಾದ ಅಭಿವ್ಯಕ್ತಿ ಬಹುಶಃ ಶಹರಗಳಲ್ಲಿ ಮಾತ್ರವೇ ನ್ಯಾಯಯುತವಾಗಿ ದಕ್ಕುತ್ತದೆಂದು ಅನಿಸುತ್ತದೆ! ತೇಪೆ ಹಚ್ಚಿದರೂ ಹರಿದು ಗಾಢ ಚರ್ಮ‌ ಕಿಸಕ್ಕನೆ ನಗುವ ದಂಟುಕೋಲಿನ ಅವಳು , ಅರ್ಧ ಉರಿದ ಸಿಗರೇಟಿಗೆ ಇನ್ನಷ್ಟು ಪ್ರಾಯ ಕೊಡಲು ತನ್ನುಸಿರ ಸವೆಸುತಿರುವ ಸಾಲು ಎಲುಬಿನ ಅವನು.. ದಪ್ಪ ದಪ್ಪ ಅಂಗೈಗಳಲ್ಲಿ ಚಿಲ್ಲರೆಗಳ ಬೆವರ ವಾಸನೆಗೆ ಒಂದೊತ್ತಿನ‌ ತುತ್ತು ನುಂಗುತ್ತಾರೆ.. ಅದರಲ್ಲೂ ಕೆಲವೊಮ್ಮೆ ನಾಯಿಗಳಿಗೆ ಹಂಚುತ್ತಾರೆ.. ! ಅರೆ ಬರೆ ನೆರಳ ಮರದಡಿಯಲ್ಲಿ ಅವನೊಬ್ಬ ನಿಂತಿರುತ್ತಾನೆ ಚಿಕ್ಕ ಕೈಗಾಡಿ ಅಥವಾ ಸೈಕಲ್ಲಿನ ಮೇಲೆ ಒಂದಷ್ಟು ಎಳನೀರು ಹೇರಿಕೊಂಡು.. ಪರಮಜ್ಞಾನಿಯಂತೆ ಆತ ನೀರು ಗಂಜಿಗಳ ಎಳನೀರು ತೆಗೆದುಕೊಡುವಾಗ ಕೆಕ್ಕರಿಸಿ ನೋಡುತ್ತೇವೆ ; ಅವನ ಗಂಟಲಲಿ ಬತ್ತಿದ ನೀರ ಬಗ್ಗೆ ಕೇಳುವುದೇ ಇಲ್ಲ !.. ಅವ ಮೆತ್ತನೆಯ ದನಿಯಲ್ಲಿ ಅಲ್ಲಿ‌ ನಿಂತಷ್ಟು ಹೊತ್ತಿನ ಬಿಸಿಲ ಬಾಡಿಗೆಗೆ ಗೋಗರೆವಾಗ ನಮ್ಮ ಧ್ವನಿಗೆ ಎತ್ತರದ ಅಲಂಕಾರ! ನೆಲದ ಮೇಲೆ ಒಂಚೂರು ದಪ್ಪನೆಯ ಹೊದಿಕೆ ಹಾಸಿ ಅದರ ಮೇಲೊಂದಿಷ್ಟು ತರಕಾರಿ ಹಣ್ಣುಗಳ ಕೂಡಿಟ್ಟು ಅದನ್ನು ಮುಟ್ಟುವ ಕೈಗಳಿಗಾಗಿ ಇದಿರು ನೋಡುತ್ತಿರುವ ಆಕೆಯ ಮನಸ್ಸಿನಲ್ಲಿ ಯಾರಿರಬಹುದು..?! ತನ್ನ‌ ನಾಳೆಗಳ ರೂಪಿಸಲು ಈಗ ತೊಟ್ಟಿಲಲ್ಲಿ ಮಲಗಿರುವ ಕಂದ ಅಥವಾ ಜಾರುವ ಚಡ್ಡಿಯ ಎಳೆದೆಳೆದು ಮೂಗಿನ‌ ಸಿಂಬಳ ಒರೆಸುತ್ತ ಹರಿದ ಚಪ್ಪಲಿಗೆ ಬಳ್ಳಿ ಕಟ್ಟಿ ಕಾಲು ತೂರುತ್ತ ನಡೆವ ಸರ್ಕಾರಿ ಶಾಲೆಯ ಸಮವಸ್ತ್ರಧಾರಿ ಕುರುಚಲು ತಲೆಗೂದಲ ಪುಟಾಣಿ ತಮ್ಮ‌..?! ಬೇಲಿ ತುದಿಗೆಲ್ಲಾ ರಾತ್ರಿ ಯಾರೋ ಅಂಟಿಸಿದ್ದ ಮೊಗ್ಗುಗಳ ಕಿತ್ತು, ಈಗ ಕನಸುಗಳ ಹೆಣೆಯುತ್ತಾ ಒಂದೊಂದೇ ಮೊಗ್ಗುಗಳ ಪೋಣಿಸುವ ತಂಗಿಯೋ ಇಲ್ಲಾ ಹೆಸರಿಸದ ನೆಂಟರೋ!.. ಇನ್ನು , ಟೀ ಅಂಗಡಿಗಳಲ್ಲಿ ಅಕ್ಕಪಕ್ಕದ ದೇಹಗಳಿಗೆ ಚಹಾ ವಿತರಿಸುವ ಆತನೊಬ್ಬನಿದ್ದಾನೆ ಅಲ್ವಾ! ಒಂದು ಕೈಯಲ್ಲಿ ೪ ಅಥವಾ ೫ ಬಿಸಿ ಚಹಾ ಲೋಟಗಳ ಹಿಡಿದು ರಸ್ತೆಗಳ‌ ಪಟಪಟನೆ ದಾಟುತ್ತ ಯಾವ್ಯಾವಾಗಲೋ ಒಬ್ಬೊಬ್ಬನೇ ನಗುವ ಆತನ ಹೆಸರು ಕೇಳಿದ ನೆನಪೇ ಇಲ್ಲ‌ ನಂಗೆ.. ಕೇವಲ‌ ಚಹಾ ಖಾಲಿಯಾದ ಆ ಲೋಟ ಮಾತ್ರವೇ ಉಳಿದುದು.. ಅಲ್ಲಿ ಅವನೂ ಮತ್ತು ಅಕ್ಕಪಕ್ಕದಲ್ಲಿದ್ದವರಲ್ಲಿ ಇದ್ದ ನಾನೂ ರಸ್ತೆಯ ವಿರುದ್ಧ ತುದಿಗಳಿಗೆ ಮುಖಮಾಡುತ್ತೇವೆ.. ಚಹಾದ ಬಿಸಿ ನನ್ನ ಎದೆಗೂಡುಗಳ ಬೆಚ್ಚಗಾಗಿಸುತ್ತದೆ.. ಅವನ ನಿಟ್ಟುಸಿರ ಬಿಸಿಗೆ ಚಹಾದ ಬೀಜಗಳು ಮಾತ್ರವೇ ಬಲ್ಲವೇನೋ ಇಲ್ಲಾ ಲೋಟ ತೊಳೆವಾಗ ಚೂರೇ ಚೂರು ಉಳಿದ ಎಂಜಲು ಚಹಾದೊಂದಿಗೆ ಅರಬ್ಬೀ ಸಮುದ್ರ ಸೇರುತ್ತವೇನೋ !!

~`ಶ್ರೀ'
    ತಲಗೇರಿ

ಬುಧವಾರ, ಆಗಸ್ಟ್ 9, 2017

ಅಕ್ಕು : ಬಯಲು, ಗೋಡೆಯೊಳಗಣ ಹೂವಿನ ದಂತಕಥೆ..



     ಅದೊಂದು ಕಾಲಘಟ್ಟ.. ಪುರುಷ ಪ್ರಧಾನ ಸಮಾಜ.. ಹೆಣ್ಣು , ಅದೊಂದು ಚೌಕಟ್ಟಿನ ಚಿತ್ರ ಮಾತ್ರವೇ ಆಗಬೇಕು ಅನ್ನುವ ಅಲಿಖಿತ ನಿಶ್ಚಿತ ಕೌಟುಂಬಿಕ ಸಂವಿಧಾನ.. ಎಲ್ಲಾ ವ್ಯವಸ್ಥಿತ ಕಾಲದ ಸಮಾಜದಲ್ಲಿ ಬಹುಶಃ ಇದೊಂದು ತುಂಬಾನೇ ಚರ್ಚಿತ ವಿಷಯ.. ಅಬಲೆ ಅನ್ನುವಂಥ ಒಂದಷ್ಟು ನೆಪಗಳ ಪೊಳ್ಳು ಪೊರೆಯೊಳಗೆ ಹುದುಗಿಕೊಂಡ ವ್ಯವಸ್ಥೆಯಲ್ಲಿ ಪದೇ ಪದೇ ಒಂದು ಧ್ವನಿ ಯಾರಿಗೂ ಕೇಳುವುದೇ ಇಲ್ಲ‌... ಅದೆಷ್ಟೋ ತಲೆಮಾರುಗಳ ಕೂಗು; ಕ್ಷೀಣ ತೀಕ್ಷ್ಣ ಎಲ್ಲಾ ಹಂತಗಳಲ್ಲಿ ಜಾಲಾಡಲ್ಪಟ್ಟ ಗಂಟಲಿನ ಮೊರೆತ.. ಒತ್ತಾಯದ ಬದುಕು ಹೆಣ್ಣು ಗಂಡೆಂಬುದ ನೋಡದೇ ಎಲ್ಲರನ್ನೂ ಹಿಂಸಿಸುವಂಥದ್ದು.. ಆದರೂ ಕೆಲವೊಮ್ಮೆ ಒಂದು ವರ್ಗ ಮಾತ್ರವೇ ಅದರ ಹಿಡಿತಕ್ಕೆ ಸಿಲುಕುವುದು ಬಹುಶಃ ಎಲ್ಲಾ ಕಾಲಘಟ್ಟದ ದುರಂತವೇನೋ ! ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ತೆಳು ಗೆರೆಯನ್ನ ಗಮನಿಸುವ ಸೂಕ್ಷ್ಮಮತಿ, ಕೂರದ ಕಾಲದ ಬಗಲಿಗೆ ಜೋತುಬಿದ್ದ ನಮ್ಮ‌ಕಣ್ಣುಗಳಿಗಿಲ್ಲ.. ಹೀಗೆ , ಬಾಡಿದ ಹೂಗಳ ಅರೆಗಂದು ಬಣ್ಣದ ನೆರಿಗೆಗಳ ಕಥಾನಕವೇ ಅಕ್ಕು ...

     ಇದೆಲ್ಲಿಯದೋ ದೂರದ ಕತೆಯಲ್ಲ , ಈಗಲೂ ಅದೆಷ್ಟೋ ಹಳ್ಳಿಗಳ ನಿತ್ಯ ಅಜ್ಞಾತ ಸಂಘರ್ಷ.. ಹರೆಯಕ್ಕೆ ರೆಕ್ಕೆ ಬಹಳ; ಅದರಲ್ಲೂ ಹೆಣ್ಣಿನ ಬಯಕೆಗಳಲ್ಲಿ ಸಣ್ಣಪುಟ್ಟ ಸಂಗತಿಗಳೇ ಅಧಿಕ.. ಕನ್ನಡಿಯೊಂದು ಆಪ್ತಮಿತ್ರ.. ಎಲ್ಲ ಕಾಲಕ್ಕೂ ಜೊತೆಯಾಗಬಲ್ಲ ಗೆಳತಿ.. ಶೀರ್ಷಿಕೆಯಿರದ ಒಂದಷ್ಟು ಆಸೆಗಳ ಪಟ್ಟಿಮಾಡುವಾಗಲೆಲ್ಲಾ ಕೈಬೆಸೆದ ನೆರಳು ಹ್ಞೂಂ ಅಂತಿರಬೇಕು.. ಮತ್ತು ಹಟವೊಂದು ಹೆಣ್ಣಿಗೆ ಹುಟ್ಟು ಕೊಟ್ಟ ಬಳುವಳಿಯೇನೋ ಅನ್ನುವಂತಿರುತ್ತದೆ.. ಈ ಗುಣಗಳ ಮೂರ್ತರೂಪವೇ ಈ ಕಥಾನಕದ ಅಮ್ಮಚ್ಚಿ... ಲಹರಿ ತಂತ್ರಿ ಅನ್ನುವವರ ಮಾಗಿದ ಅಭಿನಯ ಅವರೆಲ್ಲೋ ನಮ್ಮದೇ ಮನೆಯ ಹುಡುಗಿಯೆನ್ನುವಷ್ಟು ಆಪ್ತವಾಗಿಸುತ್ತದೆ.. ಅಮ್ಮಚ್ಚಿ ಬಯಲ ಹೂವು.. ತನ್ನದೇ ಲೋಕದಲ್ಲಿ ತಂಗಾಳಿಯಂಥ ಕನಸಿನಲ್ಲಿ ಚಿಟ್ಟೆಯ ರೆಕ್ಕೆಯ ಮೆದುವಾದ ಸ್ಪರ್ಶದ ಕುರಿತಾಗಿ ಹಾತೊರೆಯುತ್ತಿದ್ದಂಥವಳು.. ಮಿಡತೆಯ ಕಾಲಿಗೆ ಸಿಕ್ಕಿ ಮನೆಯೊಳಗೆ ಬಂದು ಬಿದ್ದಂಥದು.. ಇನ್ನು , ಅದೆಷ್ಟೋ ವಸಂತಗಳನ್ನ ಒಂಟಿಯಾಗಿ ಕಳೆದ ಸುಕ್ಕು ಚರ್ಮವೊಂದಿದೆ.. `ಪುಟ್ಟಮ್ಮತ್ತೆ' ; ನಿರ್ಭಾವ ಜಾಗೃತಿಯ ಕಲಿಸುವಂಥವಳು.. ಎದೆ, ಕಲ್ಲಾದಲ್ಲಿ ಪ್ರಾಯದ ಹಸಿವನ್ನೂ ಮೀರಿ ನಿಲ್ಲಬಹುದೆನ್ನೋ ಗಟ್ಟಿಗಿತ್ತಿ.. ಸಾವಿಗಿಂತ ಬದುಕಿನ ಪ್ರೀತಿ , ಮಾತೃತ್ವದ ರೀತಿಯನ್ನ ನೆಚ್ಚಿ ಉಳಿದಂಥವಳು.. ಎಲ್ಲಾ ಏರಿಳಿತಗಳ, ಅದೆಷ್ಟೋ ಹಗಲಿರುಳುಗಳ ಮೂಕಸಾಕ್ಷಿಯಾಗಿಯೇ ಉಳಿದುಹೋದಂಥವಳು.. ಋಣಕ್ಕೆ ಬಿದ್ದ , ಮತ್ತು ತಿಳಿಯದೆಯೇ ಮಿಡತೆಗೆ ಬಾಗಿಲು ತೆಗೆದವಳು; ಕಾಲನ ಕ್ರೂರ ಹವೆಗೆ ಜರ್ಝರಿತಳು.. ರಾಧಾಕೃಷ್ಣ ಉರಾಳರಲ್ಲಿ ಪುಟ್ಟಮ್ಮತ್ತೆ ಬಹುಶಃ ಪರಕಾಯ ಪ್ರವೇಶ ಮಾಡಿರಲೇಬೇಕು ಅನ್ನುವಷ್ಟು ಏಕೀಭೂತರು.. ಇನ್ನು , ಮಾನಸಿಕ ಸ್ತಿಮಿತ ಕಳೆದುಕೊಂಡಂಥವಳು.. ಪುರುಷ ಡಾಂಭಿಕತೆಯನ್ನ ಮತ್ತು ಸಮಾಜದ ಕಾಠಿಣ್ಯತೆಯನ್ನ ಸವಿಸ್ತಾರವಾಗಿ ತೆರೆದಿಡಬಲ್ಲಂಥವಳು; ಅವಳೇ `ಅಕ್ಕು' .. ಸೋಗು ಹಾಕುತ್ತಲೇ ಸಾಗ ಹಾಕುತ್ತ , ಮದದ ಜಾತ್ರೆಯಲ್ಲಿ ದಿಗಿಲನ್ನೇ ಆಮದು ಮಾಡಿಕೊಂಡು ಭ್ರಮರಗಳ ರೆಕ್ಕೆ ಮುರಿದವಳು, ಹಾರದೇ ಉಳಿದವಳು.. ಮತ್ತೆ , ಇದ್ದೂ ಇಲ್ಲದವಳು.. ಇವಳು ಗೋಡೆಗಿಷ್ಟು ಹಬ್ಬಿ ಮುಗುಳು ಹಡೆವ ಹಸಿ ಹಂಬಲದವಳು..ಬರೀ ಹಂಬಲದವಳಾಗೇ ಉಳಿದವಳು.. ಅಕ್ಕುವಾಗಿ ಮತ್ತು ನಿರ್ದೇಶಕಿಯಾಗಿ ಚಂಪಾಶೆಟ್ಟಿಯವರು ಕಾಡುತ್ತಲೇ ಉಳಿದುಹೋಗುತ್ತಾರೆ.. ಕ್ಷಣ ಕ್ಷಣದ ಮುಖಭಾವದಲ್ಲೂ ಕಟ್ಟಿಕೊಟ್ಟ ರೀತಿ ತುಂಬಾ ತುಂಬಾ ಚೆಂದ... ಎಲ್ಲಾ ಸಹಕಲಾವಿದರೂ ಇಡೀ ಕತೆಯ ಓಘಕ್ಕೆ ಮತ್ತು ಪಾತ್ರಕ್ಕೆ ಬೆನ್ನೆಲುಬಾಗಿ ನಿಂತವರು... ನೆರಳು ಬೆಳಕಿನ ಸಂಯೋಜನೆ, ಒಂದಷ್ಟು ಅದ್ಭುತ ಕಲಾಕೃತಿಗಳನ್ನು ಕಟ್ಟಿಕೊಟ್ಟಿಕೊಡುತ್ತದೆ.. ಕಾಶಿನಾಥ್ ಪತ್ತಾರ್ ಅವರ ಹಿನ್ನೆಲೆ ಸಂಗೀತ ಮಾನವೀಯ ನೆಲೆಯನ್ನ ಜಾಗೃತಗೊಳಿಸುತ್ತ ಸಾಗುತ್ತದೆ..

    ವೈದೇಹಿ ಅವರ ಸಣ್ಣ ಕತೆಗಳನ್ನ ಆಧರಿಸಿ ಹುಟ್ಟಿಕೊಂಡ ಕಥಾನಕ ಈ ಅಕ್ಕು ; ಅಲ್ಲೇ ಹೇಳಿದಂತೆ‌ ಶವಕೆ ಇಡಲೆಂದೇ ಕೆಲ ಹೂಗಳು ಅರಳುತ್ತವೆ.. ! ಕೊನೆಯದಾಗಿ ಒಂದು ಮಾತು; ರಂಗಶಂಕರ ತುಂಬಿತ್ತು... ರಂಗಭೂಮಿಯ ಘಮಲಿಗೆ ಬದುಕಿನ  ಆ ಪುಟ್ಟ ಭಾಗವೊಂದು ತುಂಬಾನೇ ಆಪ್ತವಾಗಿತ್ತು...

~`ಶ್ರೀ'
    ತಲಗೇರಿ

ಶನಿವಾರ, ಜನವರಿ 7, 2017

"ಅಂದು.. ಬಂದಿದ್ದೆ ನಾನು..."

ದ್ರವ್ಯವೊಮ್ಮೆ ಬೆರೆವಾಗ
ನಾಚಿ ಕರಗಿತ್ತು ಲವಣ
ಆಯಸ್ಸುಗಳ ಪೇರಿಸುತ್ತ
ಆಕಾರ ಪಡೆಯಿತು ಮೌನ..
ರಕ್ತ ಸೋರುವ ಬಳ್ಳಿಗರಳಿದ
ಹೂವಿಗೆ ಶಿಶುವೆಂದು ನಾಮಕರಣ..
ಅಂದು.. ಬಂದಿದ್ದೆ ನಾನು..

ತುಂಬಿಟ್ಟುಕೊಂಡ ಚೀಲದಲ್ಲಿ
ತೂರಿಬರುತ್ತಿದ್ದ ಆಹಾರ..
ತುರುಬಿಗೆ ಸಿಕ್ಕಿಸಿದ ಬಣ್ಣಗಳ
ಆಗಾಗ ಹೇಳುತ್ತಿದ್ದಳು ಅವಳು..
ಕಥನದಂತಿದ್ದ ನಾನು
ವಾಸ್ತವದ ಚಿಹ್ನೆಯಾಗಿದ್ದು
ನರಳುವಿಕೆಯ ತುದಿಯಲ್ಲಿ..
ಖಾಯಂ ವರ್ಗಾವಣೆಗೊಂಡು
ಅಂದು.. ಬಂದಿದ್ದೆ ನಾನು..

ಮೊದಲ ಅಳುವಿಗೆ
ಹಬ್ಬವೆಂದರು ಅವರು..
ಬೆಳೆಯುತ್ತಿದ್ದ ಭಾಗಗಳ
ಕಡಿದಾದ ನೆರಳುಗಳಲ್ಲಿ
ಜಾರುತ್ತಿತ್ತು ಎದೆಯಿಂದಲೇನೋ..
ಅಂದು ಬಂದಿದ್ದ ನಾನು
ಮತ್ತೆ ಹೋಗಲೇ ಇಲ್ಲ..
ಓಡತೊಡಗಿದ್ದೇನೆ, ಸಿಗಲೂ ಇಲ್ಲ..
ಮತ್ತೆ ಬರಬೇಕೆಂದಿದೆ ಹೊಸದಾಗಿ;
ಕಿಂಡಿಯಿದೆಯಾ?!...

~‘ಶ್ರೀ’
  ತಲಗೇರಿ

"ಪ್ರಪಂಚ"...

ಇಣುಕಬೇಕು ಕತ್ತೆತ್ತಿ
ತೆರೆದುಕೊಳ್ಳುತ್ತದೆ ಪ್ರಪಂಚವೊಂದು
ಕತ್ತಲೆಯ ನೆರಿಗೆಗಳು ಹಾಸಿಕೊಂಡಿದ್ದರೂ..
ಪುಟ್ಟ ಪುಟ್ಟ ಗೋಡೆಗಳಿಗಿಲ್ಲಿ
ಹಸಿರು ಚರ್ಮ
ತಿಳಿ ಹಳದಿಯಾಗಿ ಅರಳುತ್ತದೆ
ಬಿಸಿಲು ಬಿದ್ದಾಗ..
ಅರ್ಧ ಬಿಳುಪು ತುಸು ಕಪ್ಪು
ಗೆರೆಗಳು ಅಂಗಿ ತುಂಬಾ..
ಹೊದ್ದುಕೊಂಡ ನಿನ್ನೆಗಳಿಗೆ
ತೇಪೆ ಹಚ್ಚಲೇಬೇಕೆ?!..

ಹೊರಗೆಷ್ಟೇ ಬಿಸಿಲು ಸುರಿದರೂ
ಪ್ರತಿಫಲನವೆಂಬುದು ಹಸಿ ಸುಳ್ಳು..
ಅಂಟಿಕೊಂಡ ಜಾಳಿಗೆಗಳಿಗೆ
ಯಾರ ಮುಖಸ್ತುತಿಯೋ..
ತೂಗಿಬಿಟ್ಟ ಪೊಟ್ಟಣಗಳು
ಕಟ್ಟಬಲ್ಲವೇ ಬೆಲೆಯ
ಹಸಿವು ಉಕ್ಕಿಸಿದ ಬೆವರ ಕಲೆಗಳು
ಬೀಡುಬಿಟ್ಟ ಚಿಲ್ಲರೆಗಳಿಗೆ..

ಎಲ್ಲ ಜಾತಿಯ ತಿಂಡಿಯೂ
ಅದರದ್ದೇ ಆದ ಶೀಷೆಗಳಲ್ಲಿ..
ಅದೊಂದು ಅಂಗಡಿ..!
ಒಳಸರಿದಂತೆ ಇಲ್ಲ ಯಾವ ಕುರುಹೂ..
ಮಾರಾಟಕ್ಕಿಡಬಹುದಿತ್ತು ಮಿಂಚುಹುಳುಗಳ
ಅಲ್ಲಲ್ಲಿ ಮೂಲೆಯಲಿ ಹುಟ್ಟಿದ್ದರೆ;
ಜೊತೆಗೆ ಒಂದಷ್ಟು ಕೆ.ಜಿ. ಪ್ರೀತಿಯನ್ನೂ..

ಇಣುಕಬೇಕು ಮತ್ತೆ ಮತ್ತೆ..
ನಾನು ತೊಟ್ಟಿರುವ ಬಣ್ಣಕ್ಕೂ
ಅಲ್ಲಲ್ಲಿ ಚೆಲ್ಲಿರುವುದಕ್ಕೂ
ಹೆಸರುಗಳ ಕೊಡಬೇಕು..
ಕೇಳಬೇಕು ಮೂಲ ಯಾವುದೆಂದು
ಉತ್ತರಿಸಲು ಬರಬಹುದು ಮಾಲೀಕ..

~‘ಶ್ರೀ’
  ತಲಗೇರಿ

"ಗುಬ್ಬಚ್ಚಿಗಳಿಗೆ ಬಿಡಾರ ಇರಬೇಕಿತ್ತು"...

            

    ಈ ನೆನಪು ಅನ್ನೋದು ಒಂಥರಾ ಪಾತರಗಿತ್ತಿ ಇದ್ದಂತೆ.. ಯಾವಾಗ್ ಬರತ್ತೆ, ಯಾವಾಗ್ ಹೋಗತ್ತೆ ಅನ್ನೋದೇ ವಿಸ್ಮಯ.. ಒಮ್ಮೊಮ್ಮೆ ಜಗತ್ತಿನೆಲ್ಲ ಬಣ್ಣಗಳ ಮೈಗಂಟಿಸಿಕೊಂಡು ಬಂದು ಸಾವಿರಾರು ಹೂಗಳ ಕತೆ ಹೇಳಿದರೆ, ಇನ್ನು ಕೆಲವೊಮ್ಮೆ, ರೆಕ್ಕೆ ಹರಿದುಕೊಂಡು, ಕುಂಟುತ್ತಾ, ತೆವಳುತ್ತಾ ಬಂದು ವಾಸ್ತವಕ್ಕೆ ಇನ್ನೊಂದಿಷ್ಟು ಮುಖಗಳನ್ನ ಕೊಡುತ್ತದೆ.. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ; ಈ ಅವಳೆನ್ನೋ ಅವಳ ನೆನಪುಗಳೂ ಹಾಗೇ !.. ಮರೀಚಿಕೆ ಅನ್ನೋದಕ್ಕೆ ಪಕ್ಕಾ ಉದಾಹರಣೆಯಾಗಿದ್ದವಳು ಅವಳು.. ಸಿಕ್ಕಾಗ ಕಣ್ತುಂಬಿಕೊಂಡ ಅವಳನ್ನು ಎದೆಯೊಳಗೆ ಅಷ್ಟಷ್ಟಾಗಿ ಇಳಿಸಿಕೊಂಬುದೇ ಉತ್ಸವದಂತಿತ್ತು.. ಅವಳೊಂಥರ ಪುಟಾಣಿ ಕೃಷ್ಣನ ಥರ; ಕಳ್ಳ ಹೆಜ್ಜೆ ಹಾಕ್ತಾ ಕಿಲಕಿಲ ಅನ್ನೋಳು.. ಸಮೃದ್ಧವಾಗಿ ಬೀಳೋ ಮೊದಲ ಮಳೆಗೆ ಹಿತವಾಗಿ ಹೃದಯವನ್ನ ತಲ್ಲಣಿಸೋ ಒಂಥರಾ ಮಣ್ಣಿನ ಪರಿಮಳ ಹುಟ್ಟಿಕೊಳ್ಳುತ್ತಲ್ವಾ, ಹಾಗೆ; ಅವಳ ಗೆಜ್ಜೆ ಸದ್ದು ಅಂದ್ರೆ.. ! ಮತ್ತೊಂದಿಷ್ಟು ಕಾಲ ಕೊನೇ ಕೊನೇ ಹನಿಗಳನ್ನ ಗುಟುಕುಗಳಂತೆ ಮೆಲುಕು ಹಾಕೋದು ನನ್ನ ಜಾಯಮಾನ..

   ಈಗಲೂ ಅಷ್ಟೇ.. ಅವಳಿಲ್ಲದ ಸಂಜೆಗಳಲ್ಲಿ ಹಲುಬುತ್ತೇನೆ.. ಆ ಎತ್ತರದ ಗುಡ್ಡವಿದೆಯಲ್ಲಾ, ಅದರ ತುತ್ತತುದಿಗೆ ಒಂದು ಬಿಡಾರ ಮಾಡಬೇಕಿತ್ತು.. ಎರಡು ಗುಬ್ಬಚ್ಚಿಗಳಿಗೆ ಪುಟ್ಟ ಗೂಡೊಂದು ಇರಬೇಕಿತ್ತು.. ಅವಳುಸಿರ ಏರಿಳಿತದ ಜೋಗುಳಕ್ಕೆ ನೀಲಿ ಹಾಸಿಗೆಯಲ್ಲಿ ಮುದುರಿದ್ದ ಚಂದ್ರಮ  ರಾತ್ರಿಪೂರ್ತಿ ತಲೆದೂಗುತ್ತಿದ್ದ. ನಾನು ಅವನನ್ನು ತೋರಿಸೆಂದು ಹಟ ಮಾಡೋ ಮಗುವಾಗುತ್ತಿದ್ದೆ!.. ಅವಳು ಮರೀಚಿಕೆಯಾಗುತ್ತಿರಲಿಲ್ಲ.. ನಾಚಿಕೆ ಹೊತ್ತ ಬಿಂಕವಾಗಿ ಶೀತಲ ರಾತ್ರಿಗಳಲ್ಲಿ ಸುದ್ದಿ ಹೇಳಬರುವ ಬೆವರ ಹನಿಗಳಿಗೆ ನಾ ಕಟ್ಟೋ ಸುಂಕಕ್ಕೆ ಸಾಕ್ಷಿಯಾಗುತ್ತಿದ್ದಳು... ! ನಿಜ, ಗುಬ್ಬಚ್ಚಿಗಳಿಗೊಂದು ಬಿಡಾರ ಇರಬೇಕಿತ್ತು...

~‘ಶ್ರೀ’
  ತಲಗೇರಿ

ಶನಿವಾರ, ಅಕ್ಟೋಬರ್ 8, 2016

"ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ"...

                         

    ಹೌದು, ಕಡಲೇ.. ಚಿಕ್ಕವರಿದ್ದಾಗ ಜಾತ್ರೆ ಸಂತೆಗಳು ಬಂತೆಂದರೆ ಸಾಕು, ಅದೆಷ್ಟೋ ದಿನಗಳಿಂದಲೇ ಕನಸುಗಳ ಹೆಣೆಯುವಿಕೆ ಶುರುವಾಗಿಬಿಡುತ್ತಿತ್ತು. ತೆಗೆದುಕೊಂಡ ವಿಮಾನದ ರೆಕ್ಕೆ ಮುರಿದಿದೆ, ಕೀಲಿ ಕೊಡುವ ಹಕ್ಕಿ ಯಾಕೋ ಚೀಂವ್ ಚೀಂವ್ ಗುಡುತ್ತಿಲ್ಲ, ಬಡಿಯುವ ತಮಟೆಯ ಚರ್ಮ ಹರಿದುಹೋಗಿದೆ, ದುಡ್ಡಿಟ್ಟಾಗ ಬರುತ್ತಿದ್ದ ನಾಯಿಮರಿ ಬಾಗಿಲು ತೆಗೆಯುತ್ತಲೇ ಇಲ್ಲ.. ಈ ಸಲದ ಜಾತ್ರೆಯಲ್ಲಿ ಇವೆಲ್ಲವನ್ನೂ ಹೊಸದಾಗಿ ತೆಗೆದುಕೊಳ್ಳಬೇಕು ಅನ್ನೋ ಆಸೆಯ ಜೊತೆ, ಹಿಂದಿನ ಸಲ ಪಿಳಿ ಪಿಳಿ ಕಣ್ಣಿನ ಚಿಗುರು ಮೀಸೆಯ ಅಚ್ಚುಕಪ್ಪಿನ ಕಣ್ಣು ಹುಬ್ಬಿನ ಮುಖವಾಡ ತೆಗೆದುಕೊಂಡಿದ್ದೆ, ಈ ಸಲ ಒಂದೆರಡು ರಾಕ್ಷಸನ ಮುಖವಾಡ ಕೊಂಡುಕೊಳ್ಳಬೇಕು ಅಂತಂದುಕೊಳ್ಳುವಾಗ ಮುಖ ಮತ್ತು ಕಣ್ಣು ಇಷ್ಟಗಲ ಆಗುತ್ತಿತ್ತಲ್ಲಾ! ಆ ಮುಖವಾಡ ತೊಟ್ಟುಕೊಂಡು ಗೆಳೆಯನನ್ನೋ ಗೆಳತಿಯನ್ನೋ ಬೆಚ್ಚಿಬೀಳಿಸಿ ಹುಚ್ಚುಹುಚ್ಚಾಗಿ ಕುಣಿವಾಗ ಅದೆಷ್ಟು ಸಂಭ್ರಮವಿರುತ್ತಿತ್ತು. ಅಪ್ಪನ ಧ್ವನಿಯಲ್ಲಿ ಅಮ್ಮನ ಸೆರಗಿನಲ್ಲಿ ಹೊಕ್ಕಿಕೊಳ್ಳುತ್ತಿದ್ದ ಪ್ರೀತಿಯನ್ನು ಹೆಕ್ಕಿ ಹೆಕ್ಕಿ ಎತ್ತಿ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವಿಕೆಯಿತ್ತಲ್ವಾ, ಅದೆಷ್ಟು ಮಧುರವಾಗಿತ್ತು! ಹಟ ಹಿಡಿದು ದಕ್ಕಿಸಿಕೊಂಡ ಮುಖವಾಡದ ಬಣ್ಣ ಮಾಸುವವರೆಗೆ ಮತ್ತೆ ಜಾತ್ರೆ ಬರುತ್ತದೆ, ಆಗ ಇನ್ನೊಂದು ಮುಖವಾಡ ಎಂಬ ಮುಗ್ಧತೆಯಲ್ಲಿ ಎಷ್ಟೊಂದು ಜೀವವಿತ್ತು.. ಬಹುಶಃ ಆಗ ಗೊತ್ತಿರಲಿಲ್ಲ ಕಡಲೇ, ದೊಡ್ಡವರಾಗುತ್ತ ಆಗುತ್ತ ಶಾಶ್ವತವಾಗಿ ಮುಖವಾಡ ತೊಟ್ಟುಕೊಂಡು ಅದರ ದಾಸರೇ ಆಗಿಬಿಡುತ್ತೇವೆಂದು.. ಕನ್ನಡಿಯೆದುರು ತಲೆಯೆತ್ತುವುದಕ್ಕೂ ಹೆದರುತ್ತೇವೆಂದು...

     ಕಿತ್ತಿಟ್ಟು ಬಂದಿದ್ದೇನೀಗ ಎಲ್ಲವನ್ನೂ.. ಇಷ್ಟು ದಿನಗಳ ಕಾಲ ಬಾಚಿ ಬಾಚಿ ಹಚ್ಚಿಕೊಂಡ ಮುಖವಾಡಗಳಲ್ಲಿ ಒಂದೂ ನನ್ನದಾಗಲೇ ಇಲ್ಲ, ಯಾವ ಮುಖವಾಡದ ಬಣ್ಣವೂ ನನ್ನ ಕೆನ್ನೆ ಮೇಲೆ ಆಪ್ತವಾಗಿ ಕೂರಲೇ ಇಲ್ಲ. ಚರ್ಮವನ್ನು ಸುಡುತ್ತ ಒಳಗೊಳಗೇ ಬೇಯುತ್ತಾ, ನನ್ನನ್ನು ನಾನು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನನ್ನನ್ನು ಇಟ್ಟುಬಿಟ್ಟಿತ್ತು.. ನಾನು, ನನ್ನವರು ಎನ್ನುತ್ತಲೇ ಹೋದೆ; ಒಂದಷ್ಟು ಜನರ ಗುಂಪು ಅದನ್ನು ಸ್ವಾಭಿಮಾನ, ಪ್ರೀತಿ ಎಂದಿತು. ಎದುರು ಗುಂಪು ಅದನ್ನೇ ಸ್ವಾರ್ಥ ಎಂದಿತು. ಸಂಬಂಧಗಳ ಗೋಜಲನ್ನು ಬಿಡಿಸುತ್ತಾ ಹೋಗಬೇಕೆಂದುಕೊಂಡೆ ತತ್ವಜ್ಞಾನಿ ಎಂದರು. ನಿರ್ಲಿಪ್ತಳಾಗಿರಬೇಕೆಂದುಕೊಂಡೆ, ಕಲ್ಲುಬಂಡೆ ಅಂದರು.. ಚರ್ಮದ ಬಿಗಿತಕ್ಕೆ ಸ್ಪಂದಿಸುತ್ತಾ ಕತ್ತಲೆಯಲ್ಲಿ ದಿನನಿತ್ಯ ಚಿತ್ರಬಿಡಿಸಬೇಕೆಂದುಕೊಂಡೆ, ವೇಶ್ಯೆ ಅಂದರು. ಸಣ್ಣ ಸಣ್ಣ ವಯೋಸಹಜ ಬಯಕೆಗಳನ್ನು ಎದೆಯುಬ್ಬಿಸಿ ಈಡೇರಿಸಿಕೊಳ್ಳಹೋದೆ, ಗಂಡುಭೀರಿ ಎಂದರು. ಅನಿಸಿದ್ದನ್ನು ಎಲ್ಲರಲ್ಲೂ ಮನಬಿಚ್ಚಿ ಹೇಳಿಕೊಂಡೆ, ವಾಚಾಳಿ ಅಂದರು. ಮಾತುಗಳಿಗೆ ಲಗಾಮಿಟ್ಟು, ಎಲ್ಲ ಮೆಟ್ಟಿ ನಿಂತೆ; ವಿರಾಗಿಯೆಂದರು. ಎಲ್ಲರಂತೆ ಮನೆ ಜಮೀನು ಆಸ್ತಿಯೆಂದೆ, ಮೋಹಿಯೆಂದರು.. ಬೀದಿಗಳಲ್ಲಿ ಒಂದಷ್ಟು ದಿನ ಭಿಕ್ಷೆ ಬೇಡೋಣವೆಂದುಕೊಂಡೆ, ಮೈಬಗ್ಗಿಸಿ ದುಡಿಯೆಂದರು.. ಬಿಸಿಲಲ್ಲಿ ಚರ್ಮ ಸುಟ್ಟುಕೊಂಡರೆ, ಚಂದಿರನ ಬೆಳಕಲ್ಲಿ ಹವಾಮಾನದ ಬಿಸಿಯೇರಿಸುತ್ತೀಯಾ ಅಂತ ಕೇಳಿದರು.. ಹಸಿದಿದ್ದೇನೆ ಊಟ ಹಾಕೆಂದರೆ, ದುಡ್ಡು ಬೇಕೆಂದರು. ದುಡ್ಡಿನ ನೆರಳನ್ನಾದರೂ ಹಿಡಿಯಬೇಕೆಂದುಕೊಂಡೆ, ಲೋಭಿಯೆಂದರು. ಮೇಘಗಳೆಲ್ಲಾ ಒಟ್ಟುಗೂಡಿ ಹಬ್ಬ ಮಾಡುತ್ತಿದ್ದಾಗ, ಆಗ ತಾನೇ ಅರಳಿಕೊಂಡ ಘಮಲಿಗೆ ನಾಸಿಕದ ಸೊಗವಿಕ್ಕಿ, ಬೊಗಸೆಯಲಿ ಮುಗಿಲರಸ ಹಿಡಿಹಿಡಿದು ನಡುವಲ್ಲಿ ನವಿಲಾಗಬೇಕೆಂದುಕೊಂಡೆ, ಹುಚ್ಚುಚ್ಚಾಗಿ ಕುಣಿಯದಿರು; ನೀನು ಹುಡುಗಿಯೆಂದರು. ಅಮಾವಾಸ್ಯೆಯ ರಾತ್ರಿಯಲ್ಲಿ ಕಂದೀಲು ಹಿಡಿದು ಚಂದ್ರನನ್ನರಸುತ್ತಾ, ಅರಚುವ ಕಾಡುಜಿರಳೆಗಳ ಕತೆಗೆ ಕಿವಿಯಾಗಬೇಕೆಂದರೆ, ಹೊಕ್ಕುಳಿಗೆ ಹೂ ಬಿಡುವ ಸಮಯ, ಸಿಕ್ಕ ಸಿಕ್ಕ ಬೆರಳುಗಳಿಗಂಟಿ ಬಣ್ಣ ಕದಡೀತು ಪಕ್ಕಾ ಮಾಗುವ ಮುನ್ನವೇ ಎಂದು ಹೆದರಿಸಿದರು.. ಹೇಳು, ಕಡಲೇ.. ಹತ್ತೆಂಟು ಹುಚ್ಚು ಕಲ್ಪನೆಗಳಿದ್ದಿದ್ದರಿಂದಲೇ ನಾನು ಹೆಣ್ಣಲ್ಲವೇ!.. ರಾತ್ರಿ ನಕ್ಷತ್ರಗಳ ಕೊಯ್ದು ನನ್ನ ಹೆರಳಲ್ಲಿ ಸಿಕ್ಕಿಸಿ, ಮಧು ಬಟ್ಟಲ ಮಾಲೆ ಕಟ್ಟುವವನ ಎದೆಯ ರೋಮದ ಬೆವರಲ್ಲಿ ಕೈಯದ್ದಿ ಹೆಣ್ತನದ ಕ್ಯಾನ್ವಾಸಿಗಿಷ್ಟು ಕೈಯಚ್ಚು ಬರೆದುಕೊಳ್ಳುತ್ತೇನೆ ಅಂತ ಅಂದುಕೊಳ್ಳುವುದೂ ತಪ್ಪಾ ಕಡಲೇ.. ಇಷ್ಟೇ ಅಲ್ಲ ಕಡಲೇ, ಇನ್ನೂ ಏನೇನೋ.. ಇಷ್ಟೆಲ್ಲಾ ಮಾಡಿಯೂ ಯಾವ ಮುಖವಾಡವೂ ನನ್ನ ಸ್ವಂತದ್ದಾಗಲೇ ಇಲ್ಲ, ಇದೇ ನಾನೆಂದು ಹೇಳಿಕೊಳ್ಳುವಷ್ಟು ಆಪ್ತವಾಗಲೇ ಇಲ್ಲ.. ನಾನಾಗಲೇ ಇಲ್ಲ.. ಅಸಹ್ಯವಾಯಿತು. ಅದಕ್ಕೆಂದೇ ಇಂದು ಎಲ್ಲ ಮುಖವಾಡಗಳನ್ನು ಕಳಚಿಟ್ಟು ಬಂದಿದ್ದೇನೆ ಕಡಲೇ ನಿನ್ನಲ್ಲಿಗೆ. ನಾನು ಕೂತ ಈ ಕಲ್ಲಿನ ಮೇಲೆ ಅದೆಷ್ಟೋ ಪಾಚಿ  ಹಸಿರು ಹಸಿರಾಗಿ ಮೆರೆಯುತ್ತಿದೆ. ಒಂದಷ್ಟು ದಿನ.. ಅರೆಗಂದು ಬಣ್ಣದ ಹುಡಿಯಾಗಿ ಉದುರಿಹೋಗುತ್ತದೆ. ಈ ನೆನಪುಗಳೂ ಹೀಗೇ ಆಗಿದ್ದರೆ?!.. ಋತುಮಾನಗಳಿಗೆ ತಕ್ಕ ಫಸಲು ಯಾವತ್ತೂ ಬರುವಂತಿದ್ದರೆ!.. ಊಹ್ಞೂ.. ಕಳೆಗಳೇ ಜಾಸ್ತಿಯಾದಾಗ ಇಳುವರಿ ಎಲ್ಲಿಯದು.. ಹೀಗೇ ಎಷ್ಟೋ ವರ್ಷಗಳ ಬೆತ್ತಲೆ ಕಲ್ಲು ಮುಂದೊಂದು ದಿನ ಇನ್ನ್ಯಾರದೋ ಮನೆಯ ಮಣ್ಣಾಗಿ ಹೊಚ್ಚ ಹೊಸ ನೆರಳ ಬೇರಿಳಿಸಿಕೊಳ್ಳುವಾಗ ಈ ಪಾಚಿಯ ಗುರುತನ್ನು ಉಳಿಸಿಕೊಂಡು ಬಿಕ್ಕುತ್ತದೆಯೇ? ಮೋಡಗಳೆಲ್ಲವನ್ನೂ ತನ್ನೆದೆಗೆ ಬಿಟ್ಟುಕೊಂಡು , ಉಕ್ಕಿನ ಹಕ್ಕಿಗಳ ಧೂಮದ ಸುರುಳಿಸುರುಳಿಗೆ ಮತ್ತೆ ಮತ್ತೆ ತೆರೆದುಕೊಂಡು ತಿಳಿ ನೀಲಿ ತೊದಲಿನಲ್ಲಿ ಕಪ್ಪು ಬಿಳಿ ಕನಸುಗಳ ಬಾಯಿಪಾಠ ಮಾಡುವ ಓಹ್ ಗಗನಾ, ನಿನಗಿದು ಅರ್ಥವಾಗುವುದಿಲ್ಲ ಬಿಡು.. ನೀನು ಮತ್ತು ಭೂಮಿ  ಎಂದೂ ಭೇಟಿಯೇ ಆಗದ ಪ್ರೇಮಿಗಳಂತೆ.. ಅಥವಾ ದಿಗಂತದಲ್ಲಿ ಕೂಡಿಸಿದ್ದು ನಾವೇ; ಅದೂ ಭ್ರಮೆಯೇ!.. ಅದಕ್ಕೇ ಕಡಲೇ.. ಇದು ನಿನಗೆ ಮಾತ್ರ ಅರ್ಥವಾಗಬಹುದು.. ತವರು ಬಿಟ್ಟ ಅದೆಷ್ಟೋ ನದಿಗಳು ಬಂದು ನಿನ್ನ ಸೇರುತ್ತವೆ. ಎಲ್ಲಿಯದೋ ಕೊರಕಲು, ಎಲ್ಲಿಯದೋ ಮಣ್ಣ ಗಂಧ, ಎಲ್ಲಿಯದೋ ಸಸಿಯ ಕೊಳೆತ ಎಲೆಗಳ ಅಸ್ಥಿಪಂಜರ ಕರಗಿಸಿಕೊಂಡ ನೀರ ಪಾತ್ರಗಳು ನಿನ್ನೆದೆಯಲ್ಲಿ ಬೆರೆಯುತ್ತವೆ. ಇಷ್ಟೆಲ್ಲ ಆದರೂ ನಿನಗೊಂದು ಅಸ್ತಿತ್ವ ಸಿಕ್ಕಿಬಿಟ್ಟಿತು.; ಜೊತೆಗೆ ರುಚಿಯೂ.. ಅದೆಷ್ಟೋ ಭಾವಗಳು ನನ್ನೆದೆಯಲ್ಲಿ ಈಗಲೂ ಹುಟ್ಟಿಕೊಳ್ಳುತ್ತವೆ, ಇನ್ನೊಂದಿಷ್ಟು ಹುಟ್ಟಿಕೊಳ್ಳುವ ಮೊದಲೇ  ಗೋರಿ ಕಟ್ಟಿಕೊಳ್ಳುತ್ತವೆ. ಯಾರಿಗೂ ನನ್ನ ಅಸ್ತಿತ್ವವನ್ನು ಗಟ್ಟಿಪಡಿಸುವ ಎದೆಗಾರಿಕೆಯಿಲ್ಲ.. ಹೇಳು ಕಡಲೇ, ಹೇಳಲಿಲ್ಲವೇ ಯಾರೂ ನಿನಗೆ, ಹೂಟ್ಟೆಬಾಕನೆಂದು.. ಮಿಲನ ದರ್ಬಾರು ನಡೆಸುತ್ತಾ ಅದೇನೇನೋ ತನ್ನೊಳಗೇ ಬಚ್ಚಿಟ್ಟುಕೊಳ್ಳುವ ವ್ಯಾಮೋಹಿಯೆಂದು.. ಇಲ್ಲ, ಕಡಲೇ.. ನಿನ್ನೊಳಗೂ ಪಲ್ಲಟವಾಗುತ್ತಿರುವ ತುಂಡುಗಳಿವೆ.. ಅದಕ್ಕಾಗಿಯೇ ಅಲ್ಲವೇ ಒಮ್ಮೊಮ್ಮೆ ನೀನೂ ಸಿಡಿದೇಳುವುದು.. ಆದರೂ ಅದ್ ಹೇಗೆ ನೀನು ಆ ನಿರಂತರತೆಯನ್ನು ಕಾಯ್ದುಕೊಂಡೆ; ಬಹುತೇಕ ಒಂದೇ ತೆರನಾದ ಅಲೆ.. ಅದೆಷ್ಟೋ ತಪ್ಪಲುಗಳಲ್ಲಿ ಹಾಗೂ ಜಟೆಗಳಲ್ಲಿ ಮೂಲವಿಟ್ಟುಕೊಂಡು ಅದೆಷ್ಟೋ ಸಂಕ ಸೇತುವೆಗಳ ಕೆಳಗೆ ಹರಿದು, ಮತ್ತಿನ್ನೆಷ್ಟೋ  ಬಂಡೆಗಳ ಮೈಸವರಿ ಹೋಗುವ ನದಿಗಳು ನಿನ್ನೆದೆಯ ಸೇರಿದ ಮೇಲೆ ತಕರಾರೆತ್ತುವುದಿಲ್ಲವೇನೆ? ಅವೆಲ್ಲ ಮುಖವಾಡ ಕಳಚಿಟ್ಟವೇ, ಒಂದೇ ಒಳಗಾಗುವಂತೆ.. ಒಂದೇ ಹದವಾಗುವಂತೆ.. ಅಥವಾ ಪಾರದರ್ಶಕತೆಯ ಮುಖವಾಡ ತೊಟ್ಟಿದೆಯೇ?!.. ನಿನ್ನ ಆ ಅಗಾಧತೆಯ ಇದಿರು ನಾವೆಲ್ಲಾ ಅದೆಷ್ಟು ಚಿಕ್ಕವರಾಗಿಬಿಡುತ್ತೇವೆ ಅಲ್ವಾ!.. ಮತ್ತೆ ಮತ್ತೆ ಉಕ್ಕುತ್ತೀಯಾ ಗರ್ಭದೊಳಗಿನದೆಲ್ಲವನ್ನೂ ಗುಟ್ಟಾಗಿಯೇ ಇಟ್ಟುಕೊಂಡು; ಅದೆಂಥ ಕ್ರಿಯಾಶೀಲ ನೀನು..!

     ಗುರುತ್ವಗಳ ಗತಿಯಲ್ಲಿ ಏರುಪೇರಿದ್ದರೂ , ನಿನ್ನ ಮತ್ತು ದಡದ ಮರಳ ಸಂಬಂಧಗಳ ಮಧ್ಯ, ಮೈದಡವುತ್ತಾ ತಾಯ್ತನದ ಸುಖ ಪಡೆಯುತ್ತೀಯಾ.. ನೀಲ ನೀಲ ವಿಸ್ತಾರ.. ದೂರ ದೂರ ಹೋದಂತೆ ಇನ್ನೂ ಹತ್ತಿರ ಹತ್ತಿರ.. ಮುಳ್ಳುಪೊದೆಯ ಪುಟ್ಟ ಹೂವಿಗೆ ಹಾಡು ಹೇಳೋ ಗೆಳತಿ.. ನಿನ್ನ ಮೇಲೆ ಬಿದ್ದು ಬಿದ್ದು ನಿನ್ನ ಚೀಲದಿಂದ ಕದ್ದು ಕದ್ದು ತಿನ್ನುವ ಹದ್ದುಗಳಿಗೆ ಅಕ್ಕರೆಯ ಅಕ್ಕ.. ಭೂಮಿ ಮಡಿಲ ನೆರಿಗೆಯಲ್ಲಿ ಆಷ್ಟಷ್ಟೇ ಮೈಯ ಹರಡಿ, ಕಾಲು ಮುದುಡಿ ಮಲಗಿಕೊಂಡ ಮಗಳು.. ನಾನೂ ಒಬ್ಬ ಮಡದಿ.. ಬಹುಶಃ ಈ ನದಿಯಂತಿರಬೇಕು ನಾನು.. ಹರಿಯುತ್ತಿದ್ದರೆ ಮಾತ್ರ ಹಾಡು ಕೇಳುವುದು.. ಇನ್ನು ತಡ ಮಾಡುವುದಿಲ್ಲ; ಕಡಲೇ ಮತ್ತೆ ತಿರುಗಿ ಓಡಬೇಕು ನಾನು.. ಮತ್ತೆ ತಿರುಗಿ ನೋಡಬೇಕು ನಾನು.. ತುರ್ತಾಗಿ.. ತೊಟ್ಟುಕೊಂಡಿದ್ದೇನೆಂದೇ ತಿಳಿಯದ, ಮತ್ತೆ ಎಂದೂ ಕಳಚದ, ದಿಕ್ಕು ದಿಕ್ಕಿಗೆ ಬೇರೆ ಬೇರೆ ಬಣ್ಣ ತೋರುವ ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ.. ಬದುಕಿಸಿಕೊಳ್ಳುತ್ತೇನೆ.. ಸಂತೆ ಇನ್ನೂ ಮುಗಿದಿಲ್ಲ; ವ್ಯಾಪಾರವೂ...

~‘ಶ್ರೀ’
  ತಲಗೇರಿ

ಗುರುವಾರ, ಅಕ್ಟೋಬರ್ 6, 2016

"ಬಿಸಿಲು ಮಳೆ ಚಳಿಗೆ"...



ಅವಳೂರ ಕಡಲಲ್ಲಿ ಪ್ರತಿರಾತ್ರಿ ಮೃದಂಗದಂತೆ ಗುಂಯ್ ಗುಟ್ಟುವ ಅಲೆಗಳಿಗೆ ಅವನೂರ ಚಂದ್ರಮನ ತೋಳತೆಕ್ಕೆಯಲಿ ಪಿಸುಗುಡುತ್ತಿದ್ದ ನಾಳೆಗಳ ಇಂದಿನುಸಿರ ಬಿಸಿ ಸೆಳೆತ ಕಾರಣವಂತೆ.. ಇಷ್ಟಕ್ಕೂ, ಅಷ್ಟುದ್ದ ಮೈಹರವಿ ಬಿದ್ದಿರುವ ದಾರಿಗದು ಗೊತ್ತಿಲ್ಲವಂತೆ..ಆಯತದ ತಲೆದಿಂಬು ಅವಳ ಸುರುಳಿ ಸ್ವಪ್ನಗಳ ಎಳೆಯನ್ನು ಇಣುಕಿಣುಕಿ ಓದಿತ್ತಂತೆ.. ಹೆರಳಿಗಂಟಿದ್ದ ಹಳೇ ತಲೆಮಾರಿನ ಜಿಗುಟು ಸ್ನಾನಕ್ಕೆ ಹೊರಡುವಾಗ ಅಳಿದುಳಿದ ಗುಸುಗುಸು, ಮಂಚದ ಚಿತ್ತಾರಕ್ಕೆ ಕಣ್ಣುಮುಚ್ಚಾಲೆಯಾಡುವುದನ್ನು ಹೇಳಲೆತ್ನಿಸುತ್ತಿತ್ತಂತೆ.. ಒಂದೇ ನೆರಳ ಹಿಂದೆ ಅಡಗಿದ್ದ ದೀಪ, ಬೇರೆ ಬಣ್ಣ ಹಚ್ಚಲು ಕುಂಚ ಹುಡುಕುತ್ತಿತ್ತಂತೆ.. ಅವನಂತೂ ಅರ್ಧರಾತ್ರಿಯಲ್ಲಿ ಸುರಿದ ಮಳೆಯನ್ನು ಕೊಡಗಟ್ಟಲೆ ಹಿಡಿದು ರುಚಿ ನೋಡುತ್ತೇನೆಂದು ಚಪ್ಪಲಿ ಮೆಟ್ಟಿ, ಕೊಡೆಹಿಡಿದು ನಿಂತಿದ್ದಾನಂತೆ.. ಹೆಸರಿಲ್ಲದ ಕಾಡಹೂವೊಂದು ಎದ್ದು ಕುಳಿತು ತನ್ನ ನೆರಿಗೆ ಸರಿಪಡಿಸಿಕೊಂಡು, ಮಣ್ಣಿನಲಿ ಯಾರೋ ಧೂಪ ಹಚ್ಚಿಟ್ಟ ಕನಸು ಕಾಣುತ್ತ ಮತ್ತೆ ಮಲಗಿತಂತೆ.. ಅಷ್ಟಿಷ್ಟು ಸಂಗೀತ ಕಲಿತಿದ್ದ ಮುಗಿಲು ಆಗಾಗ ಅಭ್ಯಾಸ ಮಾಡುತ್ತಿತ್ತಂತೆ.. ಮೊನ್ನೆ ಅದು ಹೇಳಿದ ಮೇಲೆಯೇ ತಿಳಿದದ್ದು, ನಾಚಿಕೆಗೂ ಬಹಳಷ್ಟು ಅರ್ಥವುಂಟಂತೆ.. ಹ್ಞಾ, ಹೇಳುವುದ ಮರೆತಿದ್ದೆ; ಆದರಲ್ಲಿ ಯಾರಿಗೂ ತಿಳಿದಿರಲಿಲ್ಲ.. ಪ್ರೀತಿಗೆ ಸ್ವಂತ ಬಣ್ಣ ರುಚಿ ವಾಸನೆಯಿಲ್ಲ; ಅದು ಅನುಭೂತಿ ಅಷ್ಟೇ..! ನೆನಪಿಡಿ, ಬಾಡಿಗೆಯ ಫಲಕಗಳ ವಿಳಾಸದ ಅಕ್ಷರಗಳು ಮಸುಕಾಗುತ್ತವೆ ಬಿಸಿಲು ಮಳೆ ಚಳಿಗೆ...

~`ಶ್ರೀ'
    ತಲಗೇರಿ

ಸೋಮವಾರ, ಸೆಪ್ಟೆಂಬರ್ 19, 2016

"ಹೌದು, ಗಡಿಯಾರಗಳು ಮಾತನಾಡುತ್ತವೆ"...

                    

     ಇಷ್ಟಿಷ್ಟೇ ಮಾತನ್ನು ತಡೆತಡೆದು ಹೇಳಬಹುದೇ, ಅಷ್ಟೇನೂ ಗಮನಿಸದೆ ವಾಕ್ಯಗಳ ತಿದ್ದದೇನೆ.. ಪಾರಿಜಾತದ ನಗೆಯ ನಿನ್ನ ಕಂಗಳ ಕುಡಿಯ ಮೇಲುದುರಿದ ಇಬ್ಬನಿಯ ಕತೆಗಳನು ಹೆಕ್ಕಿ ಹೆಕ್ಕಿ ತಂದು ನಾ ಬರೆಯಲೇನು.. ಪರಿಚಯದ ಪುರವಣಿಯ ಗರಿಗರಿಯ ಹಾಳೆಗಳ ಎದೆಯೊಳಗೆ ಬೆಚ್ಚಗೆ ನಿನ್ನನ್ನು ಇರಿಸಲೇನು.. ನಾ ಒರಗಲೇನು ಹಾಗೇ ತಬ್ಬಿಕೊಂಡು.. ನೆನಪುಗಳನು ಮುದ್ದಾಗಿ ಹೊದ್ದುಕೊಂಡು...ಹೌದಂತೆ ಗೆಳತೀ.. ಈ ನೆನಪುಗಳಿಗೂ ಮತ್ತು ಕನಸುಗಳಿಗೂ ಒಂದೇ ರೂಪವಂತೆ.. ಸುರುಳಿ ಸುರುಳಿ ಮೆದುಳಿನಲಿ ಅಲ್ಲಲ್ಲಿ ಅಂಟಿ ಕೂತ ಇಬ್ಬರದೂ ಒಂದೇ ಗಮಕವಂತೆ.. ನುಸುಳಿಬರುವ ಪದಗಳಲ್ಲಿ ಪಲುಕು ಮಾತ್ರ ಬೇರೆಯಂತೆ!.. ಎಲ್ಲಕ್ಕೂ ಮೂಲ ಕಾಲವಂತೆ...

     ತುಂಬಾನೇ ವಿಚಿತ್ರ ಕಣೇ ಹುಡುಗಿ.. ಬದಲಾವಣೆಯನೇ ಕಾಲವೆಂದರೋ ಇಲ್ಲಾ, ಕಾಲವನೇ ಬದಲಾವಣೆಯೆಂದರೋ.... ಅಲ್ಲಿ ಇಲ್ಲಿ ಅದಲು ಬದಲೋ ಅಥವಾ ಒಂದೇ ತೊಗಲೋ.. ಗಟ್ಟಿ ಬಿಗಿದ ಮಾಂಸಖಂಡ ಹವೆಯ ಹಟದಲಿ, ಜೋತುಬೀಳೋ ತನಕ ತಿಕ್ಕಿಕೊಂಡ ‘ನಾನೂ’ ಕೂಡ ಹದಕೆ ಬರುವ ಹರಿವಿಗೆಂದೂ ತುಂಬು ಪ್ರಾಯವೇ?.. ಅಲ್ಲೂ ಎಳೆಯ ಮಧ್ಯ ಮುಪ್ಪುಗಳ ನ್ಯಾಯವೇ!.. ಅನುಕ್ರಮದ ಸರಣಿಯಲ್ಲಿ ಕಾಲವೆಂಬುದು ಭ್ರಮೆಯೇ.. ಅಥವಾ ತೀರಲಾರದ ಉಪಮೆಯೇ!.. ಒಂದಷ್ಟು ಕಿಸೆಗಳನು ಹೊಲಿದುಕೊಡು ಮಾರಾಯ್ತೀ, ನೆನಪುಗಳನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎದೆಗೆ ತುಂಬ ಹತ್ತಿರದಲ್ಲಿ... ತೇಪೆ ಹಚ್ಚಿದ ಎದೆಯೊಳಗೆ ತಡವಿಕೊಂಡಂತೆಲ್ಲಾ.., ಎಂದೋ ಮಾಸಿದ ನುಣುಪು, ಮೊನ್ನೆಯಷ್ಟೇ ಹೊಲಿದುಕೊಂಡ ಹಸಿ ಹುರುಪು, ಜೊತೆ ಜೊತೆಗೇ ಅರ್ಧರ್ಧ ಬಿಟ್ಟ ದಾರದ ಸೋಂಕು.. ಇರಲಿಬಿಡು, ನೆನಪುಗಳಲಾದರೂ ನೀನು ಪಾಲುದಾರಳಾದೆಯಲ್ಲ!.. ನೇರಳೆ ಮರದ ನೆರಳ ಕೆಳಗೆ ನವಿಲುಗರಿ ತಂದು ಬಣ್ಣಗಳ  ಬೇರ್ಪಡಿಸು ಎಂದಿದ್ದೆಯಲ್ಲ.. ಕಾಲುದಾರಿಯ ಬೇಲಿತುದಿಗೆ ಅಡಗಿಕೊಂಡ ಮೊಗ್ಗ ತಂದು ಹೆರಳ ಸಲಿಗೆಯ ಕೇಳಿಕೊಂಡ ನನಗೆ ಪೂರ್ತಿ ಹಕ್ಕು ಕೊಟ್ಟ ಮೇಲೂ, ಬಾಡಲಿಲ್ಲ ಮೊಗ್ಗು.. ಅರಳಿಕೊಂತು ಬಿಸಿಲು ಬಿದ್ದ ಹಾಗೆ..! ಅಂದು ಒಮ್ಮೆ ಕೆಸರಿನಲ್ಲಿ ಹೆಸರ ಬರೆದು ಕೆನ್ನೆಗೊಂದು ಬೊಟ್ಟು ಇಟ್ಟ ಮೇಲೆ ಸ್ಪರ್ಶಕೊಂದು ಅರ್ಥ ಬಂದಿತ್ತು..

     ಆಗಾಗ ಹಲುಬುತ್ತೇನೆ ಹುಡುಗೀ.. ಒಮ್ಮೆ ಜೋರಾದ ಮಳೆಯಲ್ಲಿ ತುಂಬಾನೇ ನೆನೆಯಬೇಕು.. ನಿನಗೆಂದೇ ನಾ ಹಚ್ಚಿಕೊಂಡ ಬಣ್ಣಗಳೆಲ್ಲಾ ತೊಳೆದುಹೋಗಿ ಖಾಲಿಯೆಂಬ(?) ನಾನುಳಿಯಬೇಕು.. ಬೆರಕೆ ಬಣ್ಣಗಳು ನೀರಿನಲಿ ಅದೆಷ್ಟು ಚಿತ್ರ ಬಿಡಿಸುವವೋ, ನಾ ಕಾದು ನೋಡಬೇಕು.. ಬೇಡ, ಬೇಡ.. ಮಳೆ ಬರುವುದೇ ಬೇಡ.. ನಿನಗೆಂದೇ ನಾ ಒಣಗಿಸಿಟ್ಟ ನಿನ್ನದೇ ಚಹರೆಗಳವು ಗೆಳತೀ.. ಹೇಳಿದೆನಲ್ಲ, ಮತ್ತೊಂದು ಮಗ್ಗುಲಲ್ಲಿ ಕನಸುಗಳಿವೆ.. ನನ್ನತನವ ಅಡವಿಡಬೇಕಿಲ್ಲವಂತೆ ಕನಸು ಕಾಣೋದಿಕ್ಕೆ.. ನೆನಪುಗಳೇ ಕನಸುಗಳೆಂದು, ಕನಸುಗಳೇ ನೆನಪುಗಳೆಂದು ಬಿಕರಿಗಿಡುತ್ತೇನೆ.. ದರ ಮಾತ್ರ ಕೇಳಬೇಡ; ಇದು ಮನಸಿನ ವ್ಯಾಪಾರ.. ! ಇನ್ನೊಂದಿಷ್ಟು ದಿನದಲ್ಲಿ ಹೊಸ ಒಪ್ಪಂದ ಶುರುವಾಗಬಹುದು.. ಮತ್ತ್ಯಾವುದೋ ಲೇಖನಿ ಇನ್ನೊಂದು ಶೀರ್ಷಿಕೆಯ ಬರೆಯಬಹುದು.. ನಾನು ಕೇಳಿಸಿಕೊಳ್ಳುತ್ತೇನೆ; ಹೌದು, ಇನ್ನು ಮುಂದೆ ಗಡಿಯಾರಗಳು ಮಾತನಾಡುತ್ತವೆ...


~‘ಶ್ರೀ’
  ತಲಗೇರಿ 

ಶನಿವಾರ, ಸೆಪ್ಟೆಂಬರ್ 17, 2016

‘ಅನ್ವೇಷಣ’ದ ಹಾದಿಯಲ್ಲಿ...

                 


     ಈ ಹುಡುಕಾಟ ಎನ್ನುವುದು ಹೇಗೆ ಮತ್ತು ಯಾಕೆ ಹುಟ್ಟಿಕೊಳ್ಳುತ್ತದೆ ಅನ್ನುವುದು ಒಂಥರಾ ವಿಸ್ಮಯ.. ಯಾರೂ ಇದರಿಂದ ಹೊರತಾಗಿಲ್ಲ; ಈ ಹುಡುಕಾಟವನ್ನೇ ವಸ್ತುವಾಗಿಸಿಕೊಂಡು ಶ್ರೀ ಎಸ್ ಎಲ್ ಭೈರಪ್ಪನವರು ಬರೆದಂಥ ಕಾದಂಬರಿ ‘ಅನ್ವೇಷಣ’. ಪಾತ್ರಗಳ ಗಟ್ಟಿತನ, ಕತೆಯ ಓಘ ಇತ್ಯಾದಿಗಳ ಬಗ್ಗೆ ಹೇಳಿ ವಿಮರ್ಶಾತ್ಮಕ ಓದುಗನಾಗುವುದಕ್ಕಿಂತ, ಅದರ ಸೌಂದರ್ಯವನ್ನು ಹಾಗೇ ಎದೆಗೆ ತುಂಬಿಕೊಂಡು ರಸಾಸ್ವಾದಕನಾಗುವುದೇ ಆಪ್ಯಾಯಮಾನ ಎನಿಸಿತು.‘ಅನ್ವೇಷಣ’ದ ಹಾದಿಯಲ್ಲಿ ನಾನು ಕಂಡ ನೆರಳು ಬೆಳಕುಗಳ ಸಂಯೋಜನೆಯನ್ನು ತಮ್ಮ ಮುಂದೆ ಈಗ ಹೀಗೆ ಹರಡುತ್ತಿದ್ದೇನೆ...

     ವ್ಯಕ್ತಿತ್ವಕ್ಕನುಗುಣವಾಗಿ ಆಲೋಚನೆ, ನಿರ್ಧಾರ, ಕೆಲಸಗಳ ಸರಣಿಯಲ್ಲಿ ಏರುಪೇರಾಗುತ್ತದೆ; ಅನುಕ್ರಮವಾಗೇ ಜರುಗಬೇಕೆಂದೇನಿಲ್ಲ.. ಇದು ಊಟ ಮಾಡುವಾಗ ಹಾಕಿಸಿಕೊಳ್ಳುವ ಪದಾರ್ಥಗಳಂತೆ!.. ಒಂದು ವಿಷಯ ಹೊರಗಿನಿಂದ ನೋಡುವವರಿಗೆ ಬೇರೆಯದಾಗಿಯೇ ಕಾಣಬಹುದು. ಆದರೆ, ಅದರಲ್ಲಿನ ತಿರುಳು ಇನ್ನೇನೋ ಆಗಿರಬಹುದು. ಅಂತೆಯೇ ಸಂಬಂಧಗಳು; ಹೊರಗಿನಿಂದ ಒಂದು ಹೆಣ್ಣು ಗಂಡಿನ ಸಂಬಂದ್ಘಕ್ಕೆ ಕಲ್ಪನೆಯ ರೆಕ್ಕೆ ಕೊಟ್ಟು, ಅದನ್ನು ಎಷ್ಟು ಕೆಳ ಮಟ್ಟಕ್ಕಾದರೂ ಇಳಿಸಬಹುದು ( ಇಳಿಸುತ್ತೇವೆಂಬುದೂ ಭ್ರಮೆಯೇ?! ).. ಆದರೆ ಆ ಸಂಬಂಧದ ಒಳ, ತಾಯಿ ಮಕ್ಕಳಷ್ಟು ಪವಿತ್ರವೂ ಆಗಿರಬಹುದು. ನಮ್ಮವರು ಎಂದುಕೊಡವರ ಬಗೆಗಿನ ಯೋಚನೆಗಳ ವರ್ತುಲದಲ್ಲಿ ಅವರ ಬಗೆಗೆ ಒಂದಷ್ಟು ಚಿತ್ರಗಳು ಗಾಢವಾಗಿ ಅಚ್ಚೊತ್ತಿಕೊಂಡಿರುತ್ತವೆ; ಅದು ಎಂಥಹುದೇ ಸ್ಥಿತಿಯಲ್ಲಿ ನಾವಿದ್ದರೂ!.. ಮನುಷ್ಯ ಸಂಬಂಧಗಳ ಕುರಿತಾಗಿ ಹೇಳುತ್ತಾ, ಒಂದು ಕಡೆ, ದಾರಿಯಲ್ಲಿ ನಡೆದುಹೋಗುವ ಪಾತ್ರವೊಂದನ್ನು ಮಾತನಾಡಿಸುವ ಜನರ ಮೂಲಕ ಅಂದಿನ ಹಳ್ಳಿಯ ಜೀವನಶೈಲಿಗೂ, ಇಂದಿನ ನಮ್ಮ ಜೀವನಶೈಲಿಗೂ ಇರುವ ವ್ಯತ್ಯಾಸವನ್ನು ಥಟ್ಟನೆ ನಮ್ಮೆದುರಿಗೆ ತಂದು ನಿಲ್ಲಿಸುತ್ತಾರೆ.

     ಸಾವಿರಾರು ಜನ ಓಡಾಡೋ ದಾರಿಯಲ್ಲಿ ಗರಿಕೆಯೂ ಬೆಳೆಯೋದಿಲ್ಲ. ಆದರೆ ಆ ದಾರಿಗೂ ‘ತನ್ನವರದ್ದು’ ಅನ್ನುವ ಹೆಜ್ಜೆಗಳು ಶಾಶ್ವತವಾಗಿ ಉಳಿಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ದಾರಿಯ ಧ್ವನಿ ಯಾರಿಗೂ ಕೇಳುವುದಿಲ್ಲ. ಎಲ್ಲೋ ಒಂದು ಚಿಗುರು ಕಾಣಿಸಿಕೊಳ್ಳಲಿ ಅಥವಾ ಉಳಿದುಹೋಗಲಿ ಅನ್ನುವಾಗ ಸಂಬಂಧದ ಬೇರುಗಳ ಗಟ್ಟಿತನ ಪ್ರಶ್ನೆಯಾಗುತ್ತದೆ. ಅಸಹಾಯಕ ದಾರಿಯ ಮೌನವು ಕಣ್ಣನ್ನು ತೇವವಾಗಿಸುತ್ತದೆ. ನೆನಪುಗಳು ಅದೆಷ್ಟು ಕೊಲ್ಲುತ್ತವೆ ; ಆದರೆ ಭಯವನ್ನು ಮೀರಿದವನು ಸಾವಿಗೆ ಹೆದರುವುದಿಲ್ಲ.. ಯಾವಾಗಲೂ ಕೇವಲ ದುಡ್ಡು ಕೊಟ್ಟು ತಂದ ವಸ್ತುವಿನಲ್ಲಿ ಋಣದ ಭಾರ ಕಡಿಮೆ ಅನ್ನುತ್ತಾ, ಅದು ಪ್ರೀತಿಗೆ ಅಂಟಿಕೊಳ್ಳುವುದು ಕೂಡಾ ಕಡಿಮೆಯೆಂದು ಶ್ರೀಯುತರು ಹೇಳಿದ್ದಾರೆ.

     ಒಂದು ಕಡೆ ಓದುವ ಮನಸ್ಸು (ಕರ್ತವ್ಯ), ಬಣ್ಣದ ಬದುಕಿನ ಸೆಳೆತ (ನಾವು ಹಾಕುವ ಸೋಗು), ಅಮ್ಮನನ್ನು ಹುಡುಕುತ್ತಾ ಅಲೆಯುವಿಕೆ (ನಮ್ಮೊಳಗಿನ ಮಗುತನ), ಹುತ್ತದೊಳಗೆ ಕೈಯಿಡುವಿಕೆ, ರೈಲುಹಳಿಗಳಲ್ಲಿ ನಡೆಯುವುದು (ಭಂಡತನ), ಆಗಾಗ ಅಳುವ ಹುಡುಗ (ಎಲ್ಲವನ್ನೂ ಕಳೆದುಕೊಳ್ಳುವ ಹತಾಶ ಭಾವ), ಒಂದಷ್ಟು ಗುಟ್ಟುಗಳು, ಎಲ್ಲವನ್ನೂ ತಿಳಿದು ನಿರ್ಲಿಪ್ತ ಸ್ಥಿತಿ, ನಮ್ಮೊಳಗೇ ಇರುವ ಒಂದು ಸತ್ತ್ವಯುತ ಅಧಿಕಾರ, ಎಲ್ಲೇ ಹೋದರೂ ನಮ್ಮ ಜೊತೆಗೇ ಸಾಗುವ ಗಾಯ, ಬೇನೆಗಳು, ನಮ್ಮನ್ನು ತಿದ್ದಿ ತೀಡುವ ಅನುಭವ ಮುಪ್ಪಂತೆ ಒಬ್ಬ ಪ್ರೌಢ, ತನ್ನನ್ನೇ ತಾನು ಒರೆಹಚ್ಚಿಕೊಳ್ಳುವ ಪ್ರಕ್ರಿಯೆ, ಪುರುಷಾರ್ಥಗಳೊಂದರ ಅಭಿವ್ಯಕ್ತಿ ಇದ್ದುದನ್ನು ಬಿಟ್ಟು ಇಲ್ಲದಿದ್ದುದರ ಕಡೆ ಅಥವಾ ಬೇರೆಯವರ ವಸ್ತುವಿನ ಕಡೆಗೆ ಸೆಳೆವ ಮನಸ್ಸು ಹೀಗೇ ಹೀಗೇ ಪ್ರತಿಯೊಂದು ಭಾವವೂ ಇಲ್ಲಿ ಒಂದೊಂದು ಪಾತ್ರವಾಗಿ ಕತೆಯ ತುಂಬಾ ಅಲೆದಾಡುತ್ತವೆ

     ನಮ್ಮ ಬೆನ್ನ ಮೇಲಿನ ಗಾಯ ನಮಗೆ ಕಾಣಿಸೋದಿಲ್ಲ, ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ನಾವು ಮಾಡೋದಿಲ್ಲ. ನೋವು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಗಮನಿಸಿದರೆ ಮಾತ್ರವೇ ಅರಿವಿಗೆ ಬರುತ್ತದೆ; ಅಂದರೆ ಇದಕ್ಕೆಲ್ಲಾ ಕಾರಣ ಮನಸ್ಸು ಮಾತ್ರ...

     ಮನುಷ್ಯ ತನಗೇ ತಾನು ಸತ್ಯ ಹೇಳಿಕೊಳ್ಳುವಲ್ಲಿಯೂ ತಡವರಿಸುತ್ತಾನೆ. ತನ್ನ ನಿಜವಾದ ಚಿತ್ರ ಮನಸ್ಸಿನಲ್ಲಿ ಮೂಡಿದಾಗ, ಅರೆಬರೆ ಸುಳ್ಳು ಅಲ್ಲಿಂದಲೇ ಆರಂಭವಾಗುತ್ತದೆ. ಅದಕ್ಕೆ ಸಮರ್ಥನೆಗಳೂ ಹುಟ್ಟಿಕೊಳ್ಳುತ್ತವೆ. ಈ ಸತ್ಯ ಸುಳ್ಳುಗಳೆಲ್ಲಾ ಅವರವರ ದೃಷ್ಟಿಗೆ ಸಂಬಂಧಿಸಿದ್ದಷ್ಟೇ ಅಲ್ಲವೇ! ಯಾವತ್ತು ಮನುಷ್ಯ ತನಗೇ ತಾನು ನಿಜ ಹೇಳಿಕೊಳ್ಳುವ ಶಕ್ತಿ ಪಡೆಯುತ್ತಾನೋ, ಆಗ ಆತ ಒಂದು ಮಟ್ಟ ಮುಟ್ಟಿದ ಅಂತ ಅರ್ಥ. ಕೆಲವೊಮ್ಮೆ ಪರಿಸ್ಥಿತಿ ಮನುಷ್ಯನ ಆಚಾರ ವಿಚಾರಗಳನ್ನು ರೂಪಿಸುತ್ತದೆ.

     ಪುರುಷಾರ್ಥಗಳಲ್ಲಿನ ಆಸಕ್ತಿ ಕಡಿಮೆಯಾದಂತೆ ನಾವು ಮಾಗುತ್ತಿದ್ದೇವೆ ಅಂತ ಅರ್ಥ. ಆ ನಿರಾಸಕ್ತಿ, ಒಳಗಿನ ಆಸಕ್ತಿಗೆ ಪೂರಕ. ನಮ್ಮನ್ನು ನಾವು ತಿಳಿಯುವ ಈ ಪ್ರಕ್ರಿಯೆಯಲ್ಲಿ, ಆಸಕ್ತಿ ನಿರಾಸಕ್ತಿಗಳು ಹಗಲು ರಾತ್ರಿಗಳಿದ್ದಂತೆ. ಅಕ್ಕಿ ಬೇಯುತ್ತದೆ, ಬೇಳೆಯೂ ಬೇಯುತ್ತದೆ.. ಆದರೆ ಉತ್ತಮ ಊಟದ ರುಚಿ ನಮ್ಮ ಕೈಯಲ್ಲೇ ಇದೆ. ಕೆಲವೊಮ್ಮೆ ಮನುಷ್ಯನ ಆಸೆಗಳು ಆತನನ್ನು ಮತ್ತೆ ಜೀವನ್ಮುಖಿಯಾಗಿಸುತ್ತವೆ. ನಮ್ಮಲ್ಲಿ ಅಂದರೆ, ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ, ನಮ್ಮಲ್ಲಿನ ಸೌಂದರ್ಯಕ್ಕೆ ಅದನ್ನು ಬಳಸಿಕೊಳ್ಳಬೇಕಾದುದು ನಮಗೇ ಬಿಟ್ಟಿದ್ದು.

     ಬೇರೆಯವರ ಮೇಲೆ ಹೊರಿಸುವ ತಪ್ಪುಗಳು ನಮ್ಮ ತಪ್ಪುಗಳಿಂದ ನಮ್ಮ ಮೇಲಾದ ಕಲೆಯನ್ನು ಅಳಿಸಿಹಾಕುವುದಿಲ್ಲ. ಆ ಕಲೆಯನ್ನು ತಿಕ್ಕಬೇಕು, ಹಳೇ ಪೊರೆ ಕಳಚಿ ಮತ್ತೆ ಮರುಹುಟ್ಟು ಇರಬೇಕು.

     ಅಧ್ಯಾತ್ಮ ಎನ್ನುವುದು ಜೀವನವನ್ನು ತುಂಬ ಕಂಡವರಲ್ಲಿ ಮತ್ತು ಅನುಭವಿಸಿದವರಲ್ಲಿ ಜಾಗೃತವಾಗುತ್ತದೆ. ಏನೂ ಕಾಣದವರಲ್ಲಿ ಅದರ ಕಲ್ಪನೆಯಷ್ಟೇ ಮೂಡುತ್ತದೆ.

     ಬರೆಯುವಿಕೆಯ ಮಹತ್ವವನ್ನೂ ಸೂಚ್ಯವಾಗಿ ಶ್ರೀಯುತರು ಹೇಳುತ್ತಾರೆ. ಬರೆಯುತ್ತಾ ಹೋದರೆ ಎಷ್ಟು ಪುಸ್ತಕ ಪ್ರಕಟಿಸಬಹುದಾಗಿತ್ತು ಎಂದು ಒಂದು ಪಾತ್ರದ ಮೂಲಕ ಹೇಳುತ್ತಾ, ಬರವಣಿಗೆಯಲ್ಲಿ ಗಟ್ಟಿತನ ಇರಬೇಕು, ಬರೆದದ್ದು ನೆಲೆ ಕೊಡಬೇಕು, ಅನಿಸಿದ್ದೆಲ್ಲವೂ ಬರವಣಿಗೆಯ ರೂಪ ಪಡೆದುಕೊಳ್ಳಲಿಕ್ಕಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

     ಹುಡುಕಾಟದಲ್ಲಿ ಹತ್ತಿರ ಬಂದ ನಮ್ಮನ್ನೇ ನಾವು ಕೆಲವೊಮ್ಮೆ ದೂರ ತಳ್ಳಿಕೊಳ್ಳುತ್ತೇವೆ. ಬಹುಶಃ ಅಷ್ಟು ವರ್ಷಗಳ ತಿಕ್ಕಾಟದ ಮೇಲಿನ ಜಿಗುಪ್ಸೆಯೋ ಅಥವಾ ಅಸ್ತಿತ್ವಕ್ಕೊಂದು ಅರ್ಥ ಕಂಡುಕೊಳ್ಳಲಾರದ ತಳಮಳದ ಇನ್ನೊಂದು ಮುಖವೋ.. ಹಪಹಪಿಸುತ್ತೇವೆ, ಸುಕ್ಕಾಗುತ್ತೇವೆ, ಮತ್ತೆ ಮತ್ತೆ ಬಿದ್ದು ಬಿದ್ದು ಏಳುತ್ತೇವೆ, ಗಟ್ಟಿಯಾಗುತ್ತೇವೆ. ಇನ್ನ್ಯಾವುದರಲ್ಲೋ ಅರ್ಥ ಹುಡುಕಲು ಶುರುವಿಟ್ಟುಕೊಳ್ಳುತ್ತೇವೆ. ಕೊನೆಗೆ ಯಾವುದೋ ಒಂದು ಮುಖವನ್ನಿಟ್ಟುಕೂಂಡು ಸಮಾಧಾನದ ಭ್ರಾಂತಿಯಲ್ಲಿ ಕಣ್ಣು ಮುಚ್ಚುತ್ತೇವೆ.

     ನಾವದೆಷ್ಟು ಜನ ಸ್ಥಿರಚಿತ್ತರಿದ್ದೇವೆ? ಏನೋ ಆಗಬೇಕೆಂದು ಕನವರಿಸುತ್ತೇವೆ. ಆ ಕನವರಿಕೆ ಒಳ್ಳೆಯ ನಿದ್ರೆಯಲ್ಲಿನ ಒಂದೆರಡು ಕ್ಷಣಗಳಾಗಿ ಹೊರಟುಹೋಗುತ್ತದೆಯೇ ಹೊರತು, ಹಗಲಿನ ಚುರುಕಾಗುವುದೇ ಇಲ್ಲ. ಸುಮ್ಮನೆ ನಡೆಯುತ್ತೇವೆ ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ಉದ್ದೇಶವೇ ಇರದೆ!.. ಸಂಬಂಧಗಳಿಗೆ ವ್ಯಾಖ್ಯೆ ಮತ್ತು ಅರ್ಥವನ್ನು ಕೊಟ್ಟುಕೊಳ್ಳುವವರು ನಾವೇ.. ಸಂಬಂಧಗಳ ಹೆಸರಿಗಿಂತಲೂ ಹೆಚ್ಚಾದ ಅನುಭೂತಿಯನ್ನು ನಾವೇ ಹುಟ್ಟಿಸಿಕೊಳ್ಳಬಹುದಲ್ವಾ?..

     ಬದುಕಿನ ಒಂದಷ್ಟು ಪುಟಗಳು ಖಾಲಿ ಅನ್ನುವುದಕ್ಕಿಂತ ಅವು ಮುಂದೆ ಬರೆಯಬೇಕಾದವುಗಳು ಅಂತ ಅಂದುಕೊಳ್ಳುವುದರಲ್ಲಿ ಅದೆಂಥ ಜೀವನೋತ್ಸಾಹವಿದೆ ಅಲ್ಲವೇ!.. ಬಹುಶಃ ಇದನ್ನೇ ಹುಡುಕಾಟ ಎನ್ನಬಹುದೇನೋ..!

     ಸಾವು ಭೌತಿಕವಾದದ್ದಲ್ಲ; ಅದು ಬೌದ್ಧಿಕವಾದದ್ದು.. ಹೊಸಹುಟ್ಟು, ಪುನರ್ ಸೃಷ್ಟಿಗೊಳ್ಳುತ್ತಲೇ ಇರುವ ನಮ್ಮ ವ್ಯಕ್ತಿತ್ವದ ಪಕ್ವತೆಗೆ ಪರಿಕರವಾಗಬೇಕು.. ನಿಜ, ಅದೆಷ್ಟೋ ಜನ ತಮ್ಮನ್ನು ತಾವು ಅರಿತಿದ್ದರೆ, ಪರಿಸ್ಥಿತಿಯ ಪರಿಹಾಸ್ಯಕ್ಕೆ ಪೆಚ್ಚು ಮೋರೆ ಹಾಕಿಕೊಂಡು ಆಗ ಸಿಕ್ಕ ಮುಖವಾಡಗಳನ್ನು ಹಾಕಿಕೊಳ್ಳುತ್ತಾ, ಒಂದಷ್ಟು ದಿನ ಭ್ರಮೆಯಲ್ಲಿ ಮೆರೆಯುತ್ತಾ ಮತ್ತೆ ಮತ್ತೆ ಸಾಯುತ್ತೇವೆ, ಹಾಗೇ ಹುಟ್ಟುತ್ತೇವೆ (ಕೆಲವೊಮ್ಮೆ!).. ಆಗಾಗ ಸತ್ತು ಹುಟ್ಟಬೇಕಂತೆ, ಹೇಗೆ?.. ಹೊಸ ಬದುಕಿನ ಅಥವಾ ಹೊಸ ಚೈತನ್ಯದ ಮರುಹುಟ್ಟೇ ಅಥವಾ ಹೊಸ ವ್ಯಕ್ತಿತ್ವದ್ದೇ?.. ಪ್ರತೀ ಸಲ ಮುಖವಾಡ ಬದಲಿಸಿಕೊಂಡಾಗಲೂ ಸಾವು ಹುಟ್ಟಿನ ಸರಸ ಖಚಿತವೇ? ಇಷ್ಟೆಲ್ಲಾ ಪಾತ್ರಗಳ ಭಾಗವಾಗುವಾಗ ‘ನಮ್ಮದು’ ಅಂತ ಒಂದು ಭಾವ ಆವರಿಸಿಕೊಳ್ಳುವುದಿಲ್ಲವೇ? ಒಂದಕ್ಕೇ ಆತುಕೊಳ್ಳುವವ ಬಹುಶಃ ಮನುಷ್ಯನಾಗಿರುವುದೇ ಇಲ್ಲವೇನೋ!.. ಪಾತ್ರಗಳ ಮತ್ತು ಅವುಗಳ ಸಂಬಂಧಗಳ ನಡುವಿನ ಎಳೆತ, ಸೆಳೆತ, ಬಿಗಿತಗಳೇ ಮನುಷ್ಯನನ್ನು ಕ್ರಿಯಾಶೀಲನಾಗಿಸುವುದು?!.. ಅಥವಾ ತಡೆದು ತಡೆದು ಬಣ್ಣಬಿಡುವ ತೀವ್ರತೆಯ ಹೆಚ್ಚಿಸುವುದು.. ಹುಡುಕುತ್ತೇವೆ, ಹುಡುಕಿಯೇ ಹುಡುಕುತ್ತೇವೆ ಯಾವುದೋ ಒಂದು ಘಟ್ಟದಲ್ಲಿ.. ಅದುವೇ ನಮ್ಮದೆಂದು ಅಥವಾ ಅದೇ ನಾವೆಂದು ಒಪ್ಪಿಕೊಳ್ಳುವ ಧೈರ್ಯ ಅಥವಾ ಮನಃಸ್ಥಿತಿ ಬಹುಶಃ ನಮಗಿರುವುದು ತುಂಬಾ ಕಡಿಮೆ. ಸಿಕ್ಕಿದೆ ಅಂದುಕೊಳ್ಳುತ್ತಿರುವಾಗಲೇ ಕಳೆದುಕೊಂಡಿರುತ್ತೇವೆ. ಯಾಕೆಂದರೆ ನಾವು ಹುಡುಕುವುದು ನಾವಾಗಿ ಅಲ್ಲ; ಅವರಾಗಿ!.. ನನಗೆ ಗೊತ್ತಿರುವ ನಾನಾದರೂ ಎಷ್ಟು ಸತ್ಯ? ಅಥವಾ ನಾನು ನನ್ನ ಚಿತ್ರ ಇಷ್ಟೇ ಇರಬೇಕೆಂದು ನನ್ನ ಸಂತೋಷಕ್ಕೆ ನಾನೇ ಎಳೆದ ಗೆರೆಗಳಲ್ಲಿ ಅದೆಷ್ಟು ನಾನಿದ್ದೇನೆ?!.. ಇದೇ ‘ಅನ್ವೇಷಣ’... :) :) :)


~‘ಶ್ರೀ’
  ತಲಗೇರಿ

ಭಾನುವಾರ, ಆಗಸ್ಟ್ 21, 2016

                                                  "ಅರ್ಧ ಅರ್ಧವೇ ಆವರಿಸು"...

     ಮೊದಲೇ ಹೇಳಿಬಿಡುತ್ತೇನೆ ಹುಡುಗೀ.. ಇವು ದಿನರಾತ್ರಿ ಸರಿವ, ಪೋಲಿ ಹುಡುಗನ ಸರಣಿ ಸ್ವಪ್ನದ ಕಂತುಗಳ ತುಣುಕುಗಳಲ್ಲ.. ಎಲ್ಲೋ ಮುಚ್ಚಿಟ್ಟ ನಕ್ಷತ್ರದೆದೆಯಿಂದ ಸ್ರವಿಸಿದ ಹಾಲ್ನೊರೆಯ ಹಸೀ ಸುಳ್ಳುಗಳೂ ಅಲ್ಲ!. ಪ್ರಾಯದ ಹರಿವಾಣದಲ್ಲಿ ಹಚ್ಚಿಟ್ಟ ಕಿರುಹಣತೆಗಳ ಹೊಂಬೆಳಕಿಗೆ ಚಿತ್ರ ಬರೆವ ಧೀಮಂತ ನೆರಳುಗಳ ಪಲ್ಲವಿಯಿದು..ಬಿಸಿಯೆದೆಯ ಅದೆಷ್ಟೋ ಕಂಪನಗಳಿಗೂ ಆರದೇ ಉಳಿದ ನನ್ನದೆಂಬುವ ಪ್ರೀತಿ ಬಿಂದುಗಳ ಜೋಡಿ ಜೋಡಿ ಕನವರಿಕೆಗಳ ತುಸು ತಲ್ಲಣವಿದು.. ನನಗೂ ನಿನಗೂ ಇಲ್ಲೊಂದು ಕತೆಯ ಕಟ್ಟುತಿದೆ ನೋಡು, ಗೊತ್ತಿಲ್ಲದೇ ಹುಟ್ಟಿಕೊಂಡ ಪದಪುಂಜಗಳ ಬಿಡಿಬಿಡಿಯ ಲಹರಿಗಳು ಒಟ್ಟಾಗಿ ಹರಿದಂಥ ಹಾಡು...

     ಗೆಳತೀ.. ಚಂದ್ರಮನ ಮೈಯಿಂದ ಜಾರಿದ ಬೆವರಿಗೆ ಆಯಸ್ಕಾಂತೀಯ ಗುಣವಿದೆಯೆಂದು ತಿಳಿದಿದ್ದೇ ಅದು ನಿನ್ನ ಹೆರಳುಗಳಲ್ಲಿ ಹೆಪ್ಪುಗಟ್ಟಿ ಮತ್ತೆ ಕರಗಿ ಮೈಯೆಲ್ಲಾ ಚದುರಿದಾಗ..ಮುಗಿಲ ದಿಬ್ಬಗಳು ಒಂದಾಗಿ ನಿನ್ನ ಮುಟ್ಟಲು ರಾಯಭಾರಿಯ ಅಟ್ಟಿದಾಗ ನಾ ಸುಮ್ಮನಿರುವುದು ಶಾಸ್ತ್ರ ಸಮ್ಮತವೇನೇ ಹುಡುಗೀ..!

                          ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
                          ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ..
                          ನನ್ನೆದೆಯ ಅಂಗಳದಿ ನಡೆದಾಡು ಗೆಳತಿ
                          ಅದಕಿರಲಿ ತಂಪು ಜಡಿಮಳೆಯ ಸಂಗೀತ...

     ಬಿಟ್ಟುಬಿಡೆಂದು ನಟ್ಟ ನಡುವೆ ಅಲ್ಲಲ್ಲಿಯೇ ಕನವರಿಸುವಾಗ, ಕದ್ದು ಕದ್ದು ಪಿಸುಮಾತ ಉಸುರಿದ್ದವಂತೆ ಸುತ್ತಲಿದ್ದ ಮಿಂಚುಹುಳುಗಳು..ಕತ್ತಲೆಯ ಹಂಗಿನಲ್ಲೂ ಕಡು ಶಾಪ ಕರಗಿದಂತೆ ಉರಿದುರಿದು ಮೆರೆದ ಮೇಣದ ಬತ್ತಿಯ ಬಿಸಿ ಗಂಧಕ್ಕೆ ರೆಕ್ಕೆ ಸುಟ್ಟಿದ ಪತಂಗಗಳು ಕೊರಗಲಿಲ್ಲವಂತೆ! ಬೆಳಕಿನೆದೆಯಲ್ಲಿ ಈಜುವುದು ಒಪ್ಪಂದವಿರದ ಹಕ್ಕೆಂದು ನೆನಪಾಗಿ ಉಳಿದವಂತೆ!.. ಇನ್ನು, ಇಷ್ಟು ವರ್ಷಗಳ ಕಾಲ ನಿನ್ನ ಮುಂಗುರುಳ ಜೋಕಾಲಿಯನು ಜೀಕಿದ್ದ ತಂಗಾಳಿಗೆ ನನ್ನ ಬೆರಳುಗಳ ಮೇಲೆ ಹೊಸದಾದ ಹೊಟ್ಟೆಕಿಚ್ಚಂತೆ... ನನ್ನುಸಿರ ಮೊಗೆಮೊಗೆದು ನಿನ್ನೆದೆಗೆ ತುಂಬುವ ಹೊಸ ಹುನ್ನಾರದ ರೂವಾರಿ ತಂಗಾಳಿಗೀಗ ನಮ್ಮಿಬ್ಬರಲೂ ಒಂದಾಗೋ ತವಕವಂತೆ.. ಸದಾ ಹಸಿವೆಂದು ಭೋರ್ಗರೆವ ಕಡಲ ಮೊರೆತಕ್ಕೆ, ನಮ್ಮ ಹೆಜ್ಜೆಗಳು ಕೂಡಿ, ಅದರ ತೀರದಲ್ಲಿ ಮೆಲ್ಲ ಮೆಲ್ಲ ಗುರುತು ಬಿಟ್ಟಾಗ, ಕಿರು ಬೆರಳಿಂದ ಹೆಬ್ಬೆರಳ ತನಕ ಹಬ್ಬಿಕೊಂಡ ಪುಟ್ಟ ಪುಟ್ಟ ಆಸೆಗಳ ಭಾಷೆ ಅರ್ಥವಾಯಿತಂತೆ! ಕಡಲೂ ತನ್ನ ಒಳಹರಿವ ನಿರಂತರತೆಗೆ ದನಿಯಾದ ನದಿಗಳ ಕುರಿತು ಪದ್ಯ ಬರೆಯುತ್ತೇನೆಂದು ಸದ್ಯ ಪ್ರೀತಿಯಲ್ಲಿ ಮತ್ತೊಮ್ಮೆ ಒದ್ದೆಯಾಗಲು ಕಾಯುತ್ತಿದೆಯಂತೆ!..

     ಹುಡುಗೀ.. ಋತುಮಾನವೆಲ್ಲ ನಿನ್ನದೇ ಗುಂಗಿನಲಿ ಬೀಗಬೇಕೆಂದು ಕಾದು ಕುಳಿತವನು ನಾನು.. ಮುದ್ದು ಮುದ್ದು ಅಂತರದಲ್ಲಿ ಅದೇನೋ ಸೆಳೆತ.. ಇದ್ದರೂ ಇಲ್ಲದಂತೆ, ಒಮ್ಮೊಮ್ಮೆ ಉಬ್ಬು ತಗ್ಗುಗಳಲ್ಲೆಲ್ಲಾ ಅಲೆದಲೆದು ಇಳಿದಿಳಿದು ಬಸವಳಿದು, ಕಣಿವೆಯಲ್ಲರಳಿದ ಹೂವ ಕಿಸೆಯಲ್ಲಿ ಜೋಪಾನವಾಗಿಟ್ಟು, ಬೊಗಸೆಯಲ್ಲೇ ತಬ್ಬುವ ಭಾಗ್ಯ ತೊದಲಿದಾ ತಕಧಿಮಿತಾ.. ಪೂರ್ತಿ ದಕ್ಕುವ ಪರಿಚಯದ ದಿಕ್ಕಾಗಬೇಡ ಹುಡುಗೀ..ಮೊಗ್ಗು ಮುಸುಕಿದ ಇಡಿಯ ಪಲ್ಲಂಗದಿ ಅರ್ಧ ಅರ್ಧವೇ ಆವರಿಸು.. ಅರಳುವಾಗಲೂ ಇರಲಿ ಅಲ್ಪ ವಿರಾಮ...


 ~`ಶ್ರೀ'
     ತಲಗೇರಿ