ಭಾನುವಾರ, ಜನವರಿ 31, 2016

"ಬೆಸುಗೆ"...

ಒರಟು ಬಿದಿರಿನಲೂ ಜೀವ ಸ್ವರವು
ನಿನ್ನುಸಿರ ಆಸೆಗಳ ಬಿಸಿ
ಅದರೆದೆಗೆ ಸೇರಿದಾಗ..
ಬೆರಳುಗಳ ಭಾಷೆಯನು
ನೀ ಒಲವಲ್ಲಿ ತಿದ್ದಿದಾಗ...

ನಿನ್ನೆಗಳ ನೆರಳಲ್ಲಿ
ಕಟ್ಟಿದಾ ಬಿಡಾರಕೆಲ್ಲ
ನಾಳೆಗಳ ಹೊದಿಕೆಯು ನಿನ್ನದೇನೇ..
ಬಣ್ಣ ಬಣ್ಣದ ಕನಸು
ರಂಗೋಲಿ ಇಡುತಿವೆ;
ಆ ಅಂಗಳವು ನಮ್ಮದೇನೇ...

ಒಂಟಿಗೂಡಿನ ಹಕ್ಕಿ
ಏಕಾಂಗಿಯಲ್ಲ;ಒಣಗಿದರೂ
ಮರ,ಹಚ್ಚಿಕೊಂಡಿರುವ ತನಕ..
ರೆಕ್ಕೆ ಹರಡಿ,ಮುಗಿಲ ದಾಟಿ
ಅನುಭವಿಸಿ ನೋಡಬೇಕು
ಮರದ ಬೇರ ಕಣ್ಣ ಪುಳಕ...

ಹರವು ಹಿರಿದಾದರೇನು;
ನಾ ನಿಂತಷ್ಟೇ ಜಾಗ
ಈ ಕ್ಷಣಕೆ ನನಗೆ..
ಬೆರಳು ಹಲವಿದ್ದರೇನು,
ತಟ್ಟಿ ಮಲಗಿಸಿ
ಹೊಸದಾರಿ ತೆರೆವವರೆಗೆ..
ಬೆಸೆದು ನಡೆವವರೆಗೆ!...

                       ~‘ಶ್ರೀ’
                          ತಲಗೇರಿ

2 ಕಾಮೆಂಟ್‌ಗಳು: