ಮಂಗಳವಾರ, ಫೆಬ್ರವರಿ 9, 2016

"ಮೈಲಿಗಲ್ಲು"...

ನೀಳ ಚಾಚಿದ ದಾರಿ
ಅತ್ತಿತ್ತ ಸರಿಯದಂತೆ
ನಿಂತು ಕಾಯುವ ಬಗಲ ದಳಗಳು..
ಅರಸಿ ಬರುವ ಆಸೆಗಳಿಗೆ
ಗರಿಯ ತೇರು ಚಿಗುರುವಂತೆ
ಇದಿರುಗೊಳ್ಳುವ ಬಳಗ ಸಾಲು...

ಬಿಸಿಲ ಕೊರಳ ಬೆವರ ಕುಡಿದು
ತೊದಲು ಚಂದ್ರನ ಜೊಲ್ಲ ಅಳೆದು
ಮನೆಯ ತೋರುವ ಅನಿಕೇತನ..
ಭೃಂಗ ಗಾನದ ಪಲುಕ ಶೃಂಗಕೂ
ಹೂವು ಹಡೆಯುವ ಅಮಲು ಗಂಧಕೂ
ಸಡಿಲಗೊಳ್ಳದ ಬುದ್ಧ ಧ್ಯಾನ...

ಹಲವು ಹೆಸರ ಬರೆಸಿಕೊಂಡರೂ
ಎಷ್ಟೋ ಸದ್ದಿಗೆ ತೆರೆದುಕೊಂಡರೂ
ವರ್ಣಸಂತೆಯ ಅನಾಮಿಕ..
ಖಾಲಿಗೂಡನು ಕಾಯ್ವ ಮರಕೆ
ಅಂಟಿಕೊಂಡ ಕಲೆಯ ರಕ್ತಕೆ
ಮರುಗುಭಾಷೆಯ ಮೂಕ...

ದಾರಿಹೋಕನ ನೆರಳ ಸದ್ದಲೇ
ಧರಣಿ ನನ್ನೊಳು ಬೆರೆತ ಭಾವ..
ಕರಡು ಕನಸದು ಕಳೆವ ಮುನ್ನವೇ
ಬಿಡಲೇಬೇಕು ಇರುವ ಕುರಿತು
ಒಂದೆರಡು ಸುಳಿವ,ಕಟ್ಟಿ ಕಾಲವ...

                             ~‘ಶ್ರೀ’
                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ