ಬುಧವಾರ, ಜನವರಿ 6, 2016

"ಖಾಲಿಯಾಗಬೇಕೆಂದಿದ್ದೇನೆ"...

ಬಿಸಿಯುಸಿರ ತುದಿಗೆ ಅಂಟಿಕೊಂಡಿಹ
ಹೊಟ್ಟೆಕಿಚ್ಚಿನ ಹೊಗೆಯ ವಾಸನೆ..
ಅಸಹ್ಯವಾಗಿ ಮೈಯೆಲ್ಲಾ ಹರಡಿರುವ
ನಾನೆಂಬ ಝೇಂಕಾರದ ಆಲಾಪನೆ..
ಮತ್ತೆಂದೂ ಎದೆಯ
ತುಂಡಿನ ಬದಿಗೂ ಹುಟ್ಟದಂತೆ
ಖಾಲಿಯಾಗಬೇಕೆಂದಿದ್ದೇನೆ...

ನುಣುಪು ಸೀರೆಯ ಚಿತ್ತಾರದಾ ಅಂಚಲ್ಲಿ
ಜಾರಿಬಿಡುವ ಜೋರು ತುಡಿತಗಳಿಗೆ
ನನ್ನದಲ್ಲದ ಚಂದ್ರಬಿಂಬದ ಚಾವಡಿಯ ಒಳಗೆ
ಹಚ್ಚೆ ಹಾಕುವ ಬೆರಳಿನೆಲ್ಲ ಉದ್ವೇಗಗಳಿಗೆ
ನನ್ನಿಂದ ನಾನಾಗೇ
ಹೊರಬಂದು ವಿದಾಯ ಹೇಳಿ
ಖಾಲಿಯಾಗಬೇಕೆಂದಿದ್ದೇನೆ...

ನಾ ಬರೆದ ರೇಖೆಗಳ ಅಳತೆಯನು ಪ್ರಶ್ನಿಸಿದ
ನಿನ್ನ ಹೆಜ್ಜೆಗಳ ಮೇಲೆ ಸುರಿದ ಕೆಂಬಣ್ಣ..
ಅಂಗಳದ ಬೇಲಿಯನು ಊರಗಲ ಹಬ್ಬಿಸಲು
ನಾ ಬೇಕಂತಲೇ ತುಳಿದ ಹಾದಿಯಾ ರಾಡಿ ಮಣ್ಣ..
ಈ ದಿನವೇ ದೂರ ಒಯ್ದು
ಚೆಂಗುಲಾಬಿ ಗಿಡವಲ್ಲಿ ನೆಟ್ಟು
ಖಾಲಿಯಾಗಬೇಕೆಂದಿದ್ದೇನೆ...

ಮುಂದೊಂದು ದಿನ ಹೂ ಬಿಡುವ ಮಧ್ಯಂತರದಿ
ಬುದ್ಧ ನಗುತ್ತಾನೆ..
ನನ್ನಲ್ಲೂ ಕೊಂಚ ಇಟ್ಟು ಕೂರುತ್ತಾನೆ..!
ಈಗ..
ಶೂನ್ಯದಲ್ಲಿಯೇ ನಾ
ಪೂರ್ಣನಾಗಬೇಕೆಂದಿದ್ದೇನೆ...

                                           ~‘ಶ್ರೀ’
                                              ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ