ಮಂಗಳವಾರ, ಜನವರಿ 19, 2016

‘ಬಿಡಿ’ತಗಳು...-೪

‘ಬಿಡಿ’ತಗಳು...-೪

ಅತ್ತ,ಮುಗಿಲು ಬಿಕ್ಕಲು..
ಕಾದಿದ್ದ ಇಳೆಗೆ ಒಲವು ದಕ್ಕಿತೆಂದು,
ಇತ್ತ,ನವಿಲು ಲಯದಿ ಹೆಜ್ಜೆ ಹಾಕಿತು...

*****

ಅಂದು ರಾತ್ರಿ ನಕ್ಷತ್ರವೊಂದು
ಉದುರಿತು..
ಎತ್ತರದಲ್ಲಿದ್ದರೇನಂತೆ?..ಎಂದು ಹುಲ್ಲು
ಹಲುಬಿತು...

*****

ಕತ್ತಲ ಕಾಡಿನ
ಜೀರುಂಡೆಯ ಸದ್ದು
ಭಯದ ಬೆದರಿಕೆಯಲ್ಲ,
ನಾವೆಲ್ಲಾ ಎಚ್ಚರಿದ್ದೇವೆ
ಎಂಬ ಅಭಯಹಸ್ತ...

*****

ನನ್ನ ಮನೆ
ರಸ್ತೆ ಬದಿಗಿರಲಿ..
ದಿನಕ್ಕೊಬ್ಬ ಆಗಂತುಕ ಬರಲಿ,
ಒಲವ ತುತ್ತನ್ನ ಉಂಡುಹೋಗಲಿ...

*****

ಕರ್ಪೂರ
ಕರಗಿದ ಮೇಲೂ
ತಾನುರಿದುದರ ಬಗೆಗೆ
ಕಪ್ಪು ಕಲೆಯನ್ನಿಟ್ಟು ಹೋಗುತ್ತದೆ...

*****

ಒಂದು ಬಿಂದು,
ವಾಕ್ಯಕ್ಕೆ ಪೂರ್ಣವಿರಾಮ ಕೊಡುತ್ತದೆ;
ನಿಂತಲ್ಲೇ ನಿಂತರೆ!..
ಆದರೆ,ಅದೇ ಬಿಂದು
ಒಂದೆರಡು ಹೆಜ್ಜೆ ಮುನ್ನಡೆದರೆ
ಅದು ನಿರಂತರತೆ...!

*****

ಆ ಮರ ಬಳ್ಳಿಗಳು ಬೆತ್ತಲಾಗಿದ್ದು
ಕೇವಲ ಚಳಿಯ ತೀವ್ರತೆಗಲ್ಲ,
ಜೊತೆಗೆ ಮುಂದೆ ಬರಲಿರುವ
ಬದುಕಿನ ಚೈತ್ರಕ್ಕಾಗಿ...

                            ~‘ಶ್ರೀ’
                               ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ