ಮಂಗಳವಾರ, ಜುಲೈ 16, 2013

        "ಸೆಳೆತ"..

ಜಾರದಿರಿ ನೆನಪುಗಳೇ ಇಂದು
ಕೆನ್ನೆಯಲಿ ಹಾಗೇ ಬಿಸಿ ಹನಿಗಳಾಗಿ
ಸುಡುವ ನಿನ್ನೆಗಳೇ ಸವೆಯದಿರಿ
ಮೌನದಲಿ ಹಾಗೇ ಸದ್ದಿಲ್ಲದಾ ಸದ್ದಾಗಿ..

ಮಳಲಿನಲ್ಲಿ ಬರೆವ ಹೆಸರು
ಬಂದುಸೋಕುವ ಅಲೆಗೆ ಸ್ವಂತ
ಕೊರಳಿನಲ್ಲಿ ಬೆಸೆದ ಉಸಿರು
ಉಸುರಲೇನೋ ಬಿಡದ ತುಡಿತ..

ಆರದಿಹ ದೀಪದಲಿ ಬೆಳಕು
ಛಾಯೆ ತೋರುವ ಮಾಯಾವಿ
ತಂತಿಗಳ ಮಿಡಿತದಲಿ ಪಲುಕು
ಕಲ್ಲೆದೆಯ ಕರಗಿಸುವ ಪಲ್ಲವಿ

ಕನಸಿನಲಿ ಕನಸಾಗಿ ಕನಸು
ಕನವರಿಸುವಾಗ ಬಿಡದ ಸೆಳೆತ
ಬಾರದಿಹ ನಿಜದ ಜೀವಕೆ
ಕವಿತೆಯಲಿ ಯಾಕೋ ಹುಚ್ಚು ಎಳೆತ..

ಸರಿದುಬಿಡು ಪದರಗಳ ಬುಡಕೆ
ಎದೆಯ ತೀರದ ಆಚೆ ದಡಕೆ..
ಸೋಕಬೇಕು ತಾಜಾ ಅಲೆಗಳು
ಗಾಳಿಯೊಡನೆ ಬೆರೆತು ಅಮಲು..


                      ~‘ಶ್ರೀ’
                        ತಲಗೇರಿ

1 ಕಾಮೆಂಟ್‌: