ಸೋಮವಾರ, ಜುಲೈ 8, 2013

"ಕರಗಬಲ್ಲದು ಮೇಣ"..

        "ಕರಗಬಲ್ಲದು ಮೇಣ"..

ಮನಸೇ..
ನಿನ್ನ ನಿರ್ದಿಗಂತ ಪ್ರಾಂಗಣದಿ
ಮೊಳಗುತಿದೆ ರಣದುಂದುಭಿ..
ಮತ್ತೆ ಕಹಳೆ..
ಸಾಲುಗಟ್ಟಿ ಸುತ್ತುವರೆಯುತಿವೆ
ಎತ್ತೆತ್ತ ಸೈನ್ಯಗಳು..
ಝೇಂಕಾರದ ನಡುವೆ
ರಣಧೀರ ನಾನಾ ಪಾರ್ಥ..!
ಬದಲಾಗುತ್ತಿವೆ ಅವೆಷ್ಟೋ ಸೈನ್ಯಗಳು..
ಮೊದಲಾಗುತ್ತಿವೆ ಇನ್ನೆಷ್ಟೋ ನೆನಪುಗಳು..
ಹೋರಾಟ ಶುರುವಾಗುವ ಮುನ್ನವೇ
ಶರಣಾಗುವ ಅನುಮಾನ,ಅವಮಾನ..!
ಧರ್ಮಯುದ್ಧವೇ ಇದು!
ಈ ಭೂಮಿಗ್ಯಾಕೆ ರಕ್ತ ಹೀರುವ ಬಯಕೆ!
ನನ್ನದೇ ಭಾವಗಳು..ಒಳ ಸಂಬಂಧಗಳು..
ಗಹಗಹಿಸುತಿವೆ..ನಿಂತಿಹೆ ನಾ ಹೇಡಿಯಂತೆ..
ಅಬ್ಬರಿಸಿ ಸಾಮ್ರಾಟನಾಗುವ
ಆ ಉನ್ಮಾದ ಅನುವಾಗಲಿಲ್ಲವೇಕೆ!
ನನ್ನೆಲ್ಲ ಕ್ಷಣದಿ ಜೊತೆಗಿದ್ದ
ಆ ಮೋಹ ವ್ಯಾಮೋಹ..
ಮತ್ತ ಪ್ರಮತ್ತ ಮದ..
ಮಧುಮಂಚದಮಲ ಲೋಭ..
ಹಾಸಿಗೆಯ ಮಡಿಕೆಯೊಳಗೆ
ಕೊಸರಿದ್ದ ಕಾಮ..
ಬಿಡುವಿನಾ ಕ್ಷಣಗಳಲಿ
ಹುಚ್ಚಂತೆ ಹಚ್ಚಿಕೊಂಡಿದ್ದ ಕ್ರೋಧ..
ಮತ್ತೆ ಸಿಗದ ಸೌಂದರ್ಯಕ್ಕುಕ್ಕಿದ ಮಾತ್ಸರ್ಯ..
ನನ್ನವೇ ಅಲ್ಲವೇ ಈ ಎಲ್ಲ ತಪ್ತ ಭಾವ!!..
ಇಲ್ಲಿಲ್ಲ ಯಾವ ಮಾಯಾವಿ,ಗೀತಾಚಾರ್ಯ..
ನಾನೇ ಸಾರಥಿ,ನಾನೇ ರಥಿಕ,ಆಂತರ್ಯದಿ ಒಳಪಾಕ..
ನಾನೇ ಆಚರಿಸಬೇಕೇ ಸೂತಕ!!
ಧರ್ಮನೆತ್ತರು ಬಸಿಯುವ ಬದಲು
ಬಿಸಿಯುಸಿರ ಕಣ್ಣೀರು ಜಾರುತಿದೆ ಮೊದಲು..
ನಿಲ್ಲಬಲ್ಲೆನೇ ನಾನು ನನ್ನವರ ಮುಂದೆ..?
ಗೆಲ್ಲಬೇಕಿದೆಯೇ ನಾನು ಈ ಸಂಬಂಧಗಳನ್ನೇ?
ಅರಿಗಳೋ,ಮೈತ್ರಿಯ ಸಿರಿಗಳೋ
ಅರಿಯದಾಗಿದೆ ಈ ಭಾರ ಮನಕೆ..
ಆಂತರ್ಯವಿದು ತಟ್ಟಿ ಪಿಸುಗುಡುತಿದೆ,
ವಿಜ್ರಂಭಿಸಿಬಿಡು ಸಮರದಿ..
ಪಲ್ಲವಿಸಲಿ ಜೀವೋನ್ಮಾದ,
ಪಾರ್ಥನಾ ಪಾತ್ರ ಬದಲಾಗುವ ಮೊದಲು!..
ಸಮರದೊಳು ಸರಿಯಲ್ಲ ನೀರಸ ಮೌನ..
ಪ್ರೀತಿಯಿದೆ ಸ್ನೇಹವಿದೆ ಅಲ್ಲೊಂದು ಧ್ಯಾನ!
ನಿನ್ನನ್ನೇ ನೀ ಗೆದ್ದುಬಿಡು..
ಕರಗಬಲ್ಲದು ತಂತಾನೇ ಮೇಣ..!!
ಮತ್ತೆಲ್ಲಿಯ ಚೈತ್ಯಯಾತ್ರೆ..ಅರ್ಥವಿಲ್ಲದ ಪಯಣ..
ನಿರ್ದಿಗಂತ ಪ್ರಾಂಗಣ,ಆಗ ತಾಜಾ ಹೂ ಬನ..


                                     ~‘ಶ್ರೀ’
                                       ತಲಗೇರಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ