ಸೋಮವಾರ, ಜುಲೈ 8, 2013

"ಕರಗಲಿದೆ ಛಾಯೆ"...

      "ಕರಗಲಿದೆ ಛಾಯೆ"...

ಬಿಸಿಯುಸಿರು ಕೊಸರುತಿದೆ ಒಳಗೆ
ಮಥಿಸುತಿವೆ ತುಮುಲಗಳು ಮೆಲ್ಲಗೆ..
ಸವರುತಿದೆ ಏಕಾಂತದ ಬಿಸಿಗಾಳಿ
ತುಂಬುತಿದೆ ಎಲ್ಲೆಲ್ಲೂ ಖಾಲಿ ಖಾಲಿ..

ಅರಳುವಾಗ ಹೂವಲ್ಲೂ ದಿವ್ಯ ಮೌನ
ಮುದುರುವಾಗ ಕೂಡ ಮತ್ತದೇ ಧ್ಯಾನ..
ಸೃಷ್ಟಿಕ್ರಿಯೆ ಸಂಗೀತ ಮೌನಮಿಳಿತ..
ಅಂತ್ಯ ಆದಿಗಳ ನಡುವೆ ಚೆಂದ ಏರಿಳಿತ..

ಬಿಂದುಗಳ ಸಂಧಿಯಲಿ ತುಂಬುಮೌನ
ತಂತಾನೇ ಜಾರೋ ಹನಿಗಳಿಗೂ ಮೌನಗಮನ..
ಕನ್ನಡಿಯಲಿ ಬಂಧಿಯಾದ ಬಿಂಬಗಳ ಒಳಗೂ
ಕಾಡುವುದು ನಾಳೆಗಳು ಉರುಳುವಾ ಕೊರಗು..

ಹುಟ್ಟಲಿದೆ ಮನಸಿನಲಿ ಮತ್ತೆ ತನನನ
ನೆನಪಿಸುತ ಬೆಳ್ಳಿಬಟ್ಟಲ ಚಂದ್ರಮನ..
ಕಡು ಮೌನ ಛಾಯೆ ಕರಗಲಿದೆಯಿನ್ನ..
ತುಂಬಲಿದೆ ಬೆಳಕ ಬೆತ್ತಲೆ ತುಂಡುಮೇಣ..

                              ~‘ಶ್ರೀ’
                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ