ಶನಿವಾರ, ಡಿಸೆಂಬರ್ 1, 2012


     "ಈ ಕ್ಷಣದ ಸಲಿಗೆಯಲ್ಲಿ"...


  ಬರೆಯಬೇಕು ಕವಿತೆಗಳ,ಗೆಳತಿ
  ಮರುಭೂಮಿಯಲಿ ಒಂಟಿಯಾಗಿ
  ನಿಂತ ಆ ಒಣಮರದ ಬಗೆಗೆ
  ಕ್ಷಣಗಳರಿವಿರದೆ ಬರೆವ
  ಕರಿಯ ರೇಖಾಚಿತ್ರಗಳ
  ತುಂಬು ಒಲವಿನ ಧ್ಯಾನಲಹರಿಗೆ...


  ಯಾವ ಅವಸರಗಳಿವೆ ಈ ಒಂಟಿ ಬದುಕಿಗೆ?
  ಯಾರ ಆಸರೆಯಿದೆ ಈ ಹೆಗಲ ಗಂಟಿಗೆ?
  ಮುರಿಯಬಹುದು ನಾಳೆಯ ಬಿರುಗಾಳಿಗೆ!
  ಹಕ್ಕಿ ಗೂಡು ಕಟ್ಟಲಿದೆ ಎಂಬಾಸೆಯಿಲ್ಲ..
  ಹಾರಿಹೋಗುವ ಹಕ್ಕಿ ಕ್ಷಣಕಾಲ ಕೂರುವುದಲ್ಲ!
  ದಾರಿಹೋಕರು ದಣಿಯೆ ಕೈಸವರಿ ಹೋಗುವರಲ್ಲ!
  ಆ ಪ್ರೀತಿ ಸ್ಪರ್ಶವೇ ಭರವಸೆಯ ಬೀಜ...
  ಹಣ್ಣಿಲ್ಲ,ಎಲೆಯಿಲ್ಲ,ದಟ್ಟ ನೆರಳಿಲ್ಲ
  ಉಸಿರೊಂದೇ ನಿಜ...


  ಆಗಾಗ ಸುಳಿಗಾಳಿ ಬಳಿ ಸುಳಿಯೆ
  ಮರಳ ಕಣಕೂ ಎಂಥದೋ ಸೆಳವು..
  ಇನ್ನೂ ಹಚ್ಚಿಕೊಂಡಿದೆ ಇಂಥ ಮುಪ್ಪಿನಲ್ಲೂ
  ಈ ಭೂಮಿಗೂ,ಅರ್ಥವಾಗದ ಚೆಂದ ಒಲವು!..
  ಭ್ರಮೆಯಲ್ಲ ಪ್ರೀತಿ ಈ ಕ್ಷಣದ ಸಲಿಗೆಯಲ್ಲಿ..
  ಈಗೀಗ ಅನಿಸುತ್ತಿದೆ ಗೆಳತಿ
  ಆ ಮರವೂ ಒಂಟಿಯಲ್ಲ!!
  ಕವಲುದಾರಿಗಳ ಜಂಟಿಯಾಗಿಪ ಗಟ್ಟಿಗುರುತು..
  ಸಾಲು ನೆರಳ ಸಂಗೀತ,ಮತ್ತೆ ಮೃದು ಗಾಳಿಯೊಡನೆ ಕಲೆತು...


                                                        ~‘ಶ್ರೀ’
                                                          ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ