ಭಾನುವಾರ, ನವೆಂಬರ್ 18, 2012


          "ರಕ್ತದಾ ಶಾಯಿ ಖಾಲಿಯಾಗುವ ಮುನ್ನ"...


  ಬರೆಯಬಲ್ಲೆ ನಿನ್ನೆದೆಯ
  ಬಿಳಿಹಾಳೆಯ ತುಂಬ ತುಂಬ
  ಬೆಳಕೆನಿಸಿ,ಬೆಳಕುಣಿಸಿ ಸೆಳೆವ
  ಕರುನಾಡಿನ ಪೂರ್ಣಬಿಂಬ...


  ನನ್ನ ನಾಡು ಬರಿಯ ಸೋಗಲ್ಲ ಗೆಳತಿ
  ನನ್ನೆದೆಯ ಸಿಹಿ ಸ್ವಪ್ನ ಪಾರಿಜಾತ
  ಹಂಪೆ ಹಳೆಬೀಡು ಬರಿಯ ಮಣ್ಣಲ್ಲ ಗೆಳತಿ
  ಗತವೈಭವದ ಗಂಭೀರ ಆತ್ಮ ಚರಿತ
  ನನ್ನ ನುಡಿಯು ಒಣ ಶಬ್ದಗಳ ಬರಿಯ ಸಾಲಲ್ಲ ಗೆಳತಿ
  ಕಲ್ಲೆದೆಯ ಕರಗಿಸುವ ಸುಪ್ರಭಾತ..
  ಶಿಲಾಬಾಲಿಕೆಯದು ಅಶ್ಲೀಲವಲ್ಲ ಗೆಳತಿ
  ಸೌಂದರ್ಯದ ಉಪಾಸನೆಯ ಸ್ಪರ್ಶದಾ ತುಣುಕು..
  ಹಚ್ಚುತಿದೆ ಹೊಚ್ಚ ಹೊಸ ಹೊನ್ನಿನ ಅರಿವ ಬೆಳಕು..
  ಅಳಿದುಹೋದರೂ ಆಳಿಹೋದರು
  ಗಂಡುಮೆಟ್ಟಿನ ಬಾನ್ಮಣಿಗಳು
  ಮೈಮರೆವ ಮಳೆಯಲಿ ಕೊಚ್ಚಿಹೋಗುತಿವೆ
  ವಾಸ್ತವದ ನಿಜ ಸಂಗತಿಗಳು
  ಎಲ್ಲ ಇದೆ,ಇಲ್ಲದಿದೆ ಒಲವಿನೆದೆಯಲಿ
  ರಾಜಕೀಯದ ಹೊಳಪು
  ಕಳೆಯುತಿದೆ,ಕೊಳೆಯ ಹರಿವಾಣದಲಿ
  ಸೋಜಿಗದ ಮಳೆ ಹನಿಸಬೇಕಿದೆಯಿನ್ನು
  ಬದುಕು ಚಿಗುರಲು ನಾಳಿನಾ ಬೀದಿಯಲಿ

  ಬರೆಯಬೇಕಿದೆ ಗೆಳತಿ
  ನನ್ನೆದೆಯ ರಕ್ತದಾ ಶಾಯಿ ಖಾಲಿಯಾಗುವ ಮುನ್ನ
  ಬಸಿಯಬೇಕಿದೆ ಹನಿ ಹನಿ ಒಲವಿನಲೇ
  ಹರಿಬಿಡಬೇಕಿದೆ ಎದೆಯೊಳಗಣ ಲಹರಿಯನ್ನ
  ನಿನ್ನೊಲವು ಕೂಡ ನನ್ನದೇ ಆಗಬೇಕಿದೆಯಿನ್ನ..


                                          ~‘ಶ್ರೀ’
                                            ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ