ಶನಿವಾರ, ಜುಲೈ 30, 2016

"ಬಿನ್ನಹ"...

ಖಾಲಿ ಹೆದ್ದಾರಿಯಲಿ
ಗೆಜ್ಜೆ ಸೋಕಿ ಬಂದ ತಂಗಾಳಿ
ಎಲೆಗಳೆದೆಯ ಮೆದೆಯಲ್ಲಿ
ಮುಖ ಹುದುಗಿಸಿದ ಹೂಗಳಿಗೆ
ಹೇಳುತ್ತಿತ್ತು ಕೂಜನದ ಕತೆಯ..
ಅದು ನಿನ್ನದೇ ವಿಷಯ...

ನಂಬಿರಲಿಲ್ಲ ನಾನೂ
ನೀ ಕುಂಚ ಹಿಡಿವವರೆಗೆ
ಅರೆಗಂದು ಬಣ್ಣದ ಕನಸ ಇದಿರು..
ದಿನನಿತ್ಯ ಜಾತ್ರೆಯೀಗ
ಗದ್ದಲದ ನಡುವೆಯೂ
ಕಣ್ತುಂಬಿಕೊಳಲು ನೀನೊಂದು ತೇರು..
ಬಿದಿಗೆಯಾ ರಾತ್ರಿಯಲಿ
ಸ್ವೇದದಲಿ ನೆನೆದಿತ್ತು ನಾಚಿಕೆಯ ನವಿರು..

ಚಂದ್ರ ಸೊಕ್ಕುತಿಹ
ನಿನ್ನ ಬೆವರ ಹನಿಗಳ ಬಿಂಕಕ್ಕೆ
ಲೆಕ್ಕವಿಡಬೇಡ ಆಕಾಶದಿಂದುದುರುವ
ಜೊಂಪೆ ಜೊಂಪೆ ನಕ್ಷತ್ರಗಳ..
ಕಿಟಕಿ ಪರದೆಯಲಿ ಇರಲಿ
ಉತ್ಸವಕೆ ಮುಗಿಲ ಫಸಲು..

ಬೆಳಕಿನ ಮೋಹದಿಂದಲ್ಲ
ಪುಟ್ಟ ಹಣತೆ ಹಚ್ಚಿ ನಕ್ಕಿದ್ದು..
ಹೀಗೊಮ್ಮೆ ನೋಡಿಕೊಳಲು
ನಮ್ಮೀರ್ವರ ನೆರಳು ಬೆಸೆವುದ, ಮೊದಲು..
ನಿನ್ನ ಅಂಗಾಲ ಮೇಲೆ
ಒಂದರೆಗಳಿಗೆ
ಬೆರಳ ಪಲ್ಲವಿ ಬರೆವ
ಹಕ್ಕೀಗ ನನಗೆ ದೊರೆಯಬಹುದೇ..
ಪ್ರೀತಿಯಲಿ
ಕವಿಯಾಗುವುದು ನನಗೂ ಹೊಸದೇ!...

                                    ~‘ಶ್ರೀ’
                                        ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ