ಗುರುವಾರ, ಏಪ್ರಿಲ್ 14, 2016

"ಧ್ವನಿ"...

ಯಾರು ಹೇಳಿದ್ದು
ಅವು ಮಾತನಾಡುವುದಿಲ್ಲವೆಂದು!..
ನಮಗೆ ನಾವೇ
ಹಲ್ಲು ಮಸೆಯುವ ಶಬ್ದಕ್ಕೆ
ಸುಮ್ಮನಾಗಿವೆ ಬೇಕಂತಲೇ..

ಪಕ್ಕದ ಖಾನಾವಳಿಯ
ಖುರ್ಚಿಗಳಿಗೆ ಗೊತ್ತಿರಬಹುದು
ಹಸಿವಿನ ವಾಸನೆಯ ಅದೆಷ್ಟೋ ಕತೆ..
ಮೇಜುಗಳ ಮೇಲೆ ಬಿದ್ದ
ಚಹಾವನ್ನು ಒರೆಸಿಬಿಡುತ್ತೇವೆ
ಅದರ ಬಿಸಿ ಆರುವುದರೊಳಗೆ..

ಹಾದಿ ಬದಿಯಲ್ಲಿ ಹರಿದು ಬಿದ್ದ
ಚಪ್ಪಲಿಯ ಮೈಗೆ
ಅಂಟಿಕೊಂಡಿರಬಹುದು
ಅದೆಷ್ಟೋ ಹಗಲಿರುಳುಗಳ
ಬೆವರ ಹನಿಯ ಕಲೆಗಳು..
ಆದರೆ ಕೊನೆಗೆ ಕೆಲವೊಮ್ಮೆ
ಇನ್ನೊಂದು ಚಪ್ಪಲಿಯ
ಜೊತೆಯೂ ಸಿಗದ ಅನಾಥ..

ಪ್ರತಿ ಸಂಜೆ ಚಿಟ್ಟೆ ಹೂವಿನ
ಬಣ್ಣ ನೋಡಲು
ಉದ್ಯಾನದಲ್ಲಿ ನಡೆಯುವಾಗ
ಗಮನಿಸಿಲ್ಲ ನಾವು..
ಕಲ್ಲು ಆಸನಗಳ ಬಣ್ಣ
ಬದಲಾಗಿರಬಹುದೇ
ಅದೆಷ್ಟೋ ಪ್ರಣಯದ
ಪಿಸುಮಾತ ಕೇಳಿ..
ಅಥವಾ, ಚರ್ಮ
ಹಸಿಯಾಗುತ್ತಲೇ ಒಣಗಿರಬಹುದೇ
ಗೊತ್ತಾಗದೇ ಅತ್ತು, ಬಿದ್ದ ಕಣ್ಣೀರಿಗೆ..

ಯಾರು ಹೇಳಿದ್ದು
ಅವುಗಳೆಲ್ಲಾ ನಿರ್ಜೀವವೆಂದು!
ಇದೆ ಎಲ್ಲಕ್ಕೂ ಒಂದು ಧ್ವನಿ;
ಆಲಿಸುವ ಪ್ರೀತಿ ನಮಗಿದ್ದರೆ..
ನಮ್ಮೊಳಗೂ ಜೀವವಿದ್ದರೆ!..

                       ~‘ಶ್ರೀ’
                          ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ