ಮಂಗಳವಾರ, ಮಾರ್ಚ್ 29, 2016

"ಸಂಜೆ"...

ಸಂಜೆ ಆರೇಳರ ಸಮಯ..
ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ
ಚಿತ್ರಿಸಿದ ಬಳ್ಳಿಗಳಿಗೆ
ಅರಳುತ್ತವಂತೆ ಹೂಗಳು;
ಅವನ ಕಾಲ್ಗಳ ಸದ್ದಿಗೆ..
ನೆರಳು ಕರಗುವ ಕ್ಷಣದಿ
ಗರಿ ಬಿಚ್ಚಲೆಂದೇ ಕಾದಿರುವ
ಕನಸುಗಳ ಸರದಿ...

ತೇಲಿಬಿಟ್ಟ ಹಿಟ್ಟಿನುಂಡೆ
ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ
ಎಣ್ಣೆಯ ಕಮಟು ವಾಸನೆಯ
ಅಭ್ಯಂಜನಕೆ
ನಾಸಿಕದ ರೋಮಗಳ ತಳಮಳ..
ಗಾಳಿಗೀಗ ತುಂಬು ಆಮಂತ್ರಣ...

ಕೋಲು ಹಿಡಿದ ಪೋರ
ಗೀಚುತ್ತಾನೆ ಮಣ್ಣಿನೆದೆಯ ತುಂಬಾ..
ಕಾಣಿಸುತ್ತದೆ ಆಗಸದಿ
ಮಂಟಪ ಕಟ್ಟುತಿಹ ಹಕ್ಕಿಹಿಂಡು;
ತಾನೂ ರೆಕ್ಕೆಗಳ ಹಚ್ಚಿಕೊಳುವಾಸೆ..
ಇನ್ನು ಕೆಲವರಿಗೆ
ಬರಲಿಷ್ಟವಿಲ್ಲ ಗೋಡೆಗಳಾಚೆ..
ತಾವಾಗಿಯೇ ಕೃತಕ ಬೆಳಕಿನಲಿ ಖೈದಿ...

ಕೊಲ್ಲುತ್ತ ಕೊಲ್ಲುತ್ತ ದಿನಗಳನ್ನು
ಹರಡಿಹೋಗುತ್ತಾನೆ ರಕ್ತ
ಕೊನೆಗೆ ಸೂರ್ಯ..
ಬಹುಶಃ ಅಣಕಿಸುತ್ತಿರುವವು
ಇರಬೇಕು ಅವುಗಳೇ
ಮತ್ತೊಬ್ಬನ ಅಧಿಪತ್ಯದಂಗಳದಿ
ತೂಗಿಬಿಟ್ಟ ಶ್ವೇತಾಗ್ನಿಗಳಾಗಿ..
ನಿನ್ನೆಯಷ್ಟೇ ಹೇಳಿದ್ದ ಆತ,
ಅಷ್ಟಕ್ಕೂ ಸುಳ್ಳಲ್ಲ;
ಗಡಿಯಾರಗಳು ಮಾತನಾಡುತ್ತವೆ..
ಪುಟ್ಟ ಬಟ್ಟಲಿನಲಿ ಹಚ್ಚಿಟ್ಟ ಧೂಪ
ಅಸ್ತಿತ್ತ್ವ ಪಡೆಯುತ್ತದೆ
ಗಾಳಿಯಲ್ಲೇ ಪರಿಮಳದ ಗೆರೆಗಳಾಗಿ...

                                  ~‘ಶ್ರೀ’
                                     ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ