ಮಂಗಳವಾರ, ನವೆಂಬರ್ 10, 2015

"ವರದಿ"...

                "ವರದಿ"...

ನೇಸರನ ಕಿಸೆಯಲ್ಲಿ ಹಣತೆಯನು ಹಚ್ಚಿ
ನಿಶೆಯನ್ನು ಚಂದ್ರಮನ ದರ್ಬಾರಿಗೆ ಬರೆದು
ಗಡಿಯಾರದಾ ಮುಳ್ಳು ಮುಲುಗುತಿರಲಿ ಪುನಃ
ಒಂದಿನಿತೂ ಕದಲದೇ,ನೀ ಇರಲು ಸನಿಹ..
ಮುಂಗುರುಳು ಕರೆವಾಗ ಕುಣಿಯುವುದು ಹೃದಯ
ಕಾಲುಂಗುರವು ನಾಚಿರಲು ಹುಟ್ಟುವುದು ವಿಷಯ..

ಎದೆಯೆದೆಯ ಮೃದು ಪಲ್ಲಂಗದಿ
ಮಿಲನ ರೇಖೆಗಳದೇ ಮಂದಾರ ಕುಸುರಿ..
ಮುಗಿಲ ಬದುಗಳಿಗೆ ಕಟ್ಟಿದಾ ಕಮಾನಿಗೆ
ನೀನೀಗ ತಂದಿರುವೆ ಜೀವಗಳ ಬೆಸುಗೆ..
ಮೊದಲ ಮಳೆಯ ಪರಿಮಳದ ಸುವ್ವಾಲಿ
ಆಗಾಗ ಗರಿಗೆದರೋ ಶೀತಲದ ಗಾಳಿ..


ಬಿಡಾರದಾ ಹೊಸ್ತಿಲಲಿ ಉಷೆಯ ಹೆಜ್ಜೆಯ ಸದ್ದು
ಇಬ್ಬನಿಯು ಕರಗಿಹುದು,ಹಸಿರ ತೋಳಲಿ ಬೆಚ್ಚನೆಯ ಮುದ್ದು..
ಕಲರವದ ಮೆರವಣಿಗೆಗೆ ಅಣಿಯಾಯ್ತು ಬೀದಿ
ಕನಸುಗಳೆಲ್ಲಾ ಕಲೆತಿಹವು ರಂಗೋಲಿಯಾ ತೆರದಿ..
ಎಲ್ಲೆಲ್ಲೂ ನೀ ತಂದ ಋತುಮಾನದಾ ಸುದ್ದಿ..
ಈಗಷ್ಟೇ ತಲುಪಿಹುದು,ಪಾರಿಜಾತ ಅರಳಿದಾ ವರದಿ...

                                                   ~‘ಶ್ರೀ’
                                                      ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ