ಶುಕ್ರವಾರ, ಜುಲೈ 3, 2015

"ಸ್ಥಿತಿ"...

          "ಸ್ಥಿತಿ"...

ಸುತ್ತಮುತ್ತಲೂ ಮಳಲ ರಾಶಿ
ಮಂದಗಾಳಿಗೂ ನೆಲದ ಸೆಳೆತ ಮೀರಿ
ಮೇಲೆ ಹಾರುತಿಹವು ಕಣಗಳು..
ಎಲ್ಲಿಹೆನು ನಾನು !
ಸರಳ ಸ್ವಪ್ನದ ಸೆರಗ ಹುಡುಕಿ
ಸೂರಿರದ ಅಲೆಮಾರಿ
ಮರಳುಗಾಡಿನ ಮಡಿಲಲಿ..

ಕಂಡಂತೆ ಎಲ್ಲೋ ಜಲದ ಬಿಂಬ
ಮತ್ತೆ ಮರಳು..
ನೀರ ನೆರಳು ಬರಿಯ ಭ್ರಮೆ..
ತೆಂಗುಗರಿಗಳ ನೆರಿಗೆ
ಬಿಸಿಲ ಹಸಿವಿಗೆ ಸೊರಗಿದೆ
ಅಲ್ಲೂ ಕಂಡೂ ಕಾಣದ
ಚೂರು ತಂಪಿದೆ..

ಏನಿದು ಹಸಿ ವಿಸ್ಮಯ !
ಇಷ್ಟೊತ್ತು ಕಂಡ
ಉಸುಕ ರಾಶಿ ಈಗಿಲ್ಲ..
ಹಸಿರು ರೆಕ್ಕೆಯ ಹಚ್ಚಿಕೊಂಡು
ತೂಗುತಿರುವ ಕೊಂಬೆ ನೂರು..
ನಾ ನಿಂತ ನೆಲವದು ಈಗ
ಮರುಭೂಮಿಯಲ್ಲ..

ಈ ಬಾರಿ,ಬಿಸಿಲ ಸಾರವ ಹೀರಿ
ಮುಗಿಲಿಗೆಲ್ಲ ಮಾಡು ಕಟ್ಟುವ ಹುರುಪಲಿ
ಹಕ್ಕಿ ಗೂಡಿಗೂ ಹೆಗಲು ಕೊಟ್ಟಿವೆ
ಅದೇ ತೆಂಗಿನ ಮರಗಳು..
ತೆರೆಗಳಿರದ ನೀರ ನುಣುಪಲಿ
ನನ್ನೇ ನಾ ನೋಡಿದರೆ
ಅರೇ ! ನಾನೆಂಬ ನಾನಿಲ್ಲ..
ಬದಲು,ನನ್ನಂತೆಯೇ ಇರುವ
ಒರಟು ಕೀಲು ಗೊಂಬೆ... !!

                               ~‘ಶ್ರೀ’
                                   ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ