ಭಾನುವಾರ, ಮೇ 31, 2015

"ಮತ್ತೆ..."

      "ಮತ್ತೆ..."

ತಾರೆಯಿರದ ರಾತ್ರಿಗಳಲಿ
ನಾವೆಗ್ಯಾರು ದಾರಿದೀಪ..
ಚಾಚೋ ಹುಟ್ಟಿನ ಹಟದಲಿ
ಕರಗೀತೇ ಕರಿಸ್ವರದ ಶಾಪ..

ನೀನೇ ಹಾಕಿದ ಬೇಲಿಯೊಳಗೆ
ಮುದುಡಿ ಕೂತಿದೆ ಮೌನ ಬಿಡಾರ..
ಬಾನು ತಾಕಿದ ಅಗಲ ದಿಶೆಗೆ
ಬೆಳಕು ಇಡುವುದೇ ನೆರಳ ಚಿತ್ತಾರ..

ಹಾರಿಹೋದ ಮೋಡವಿನ್ನು
ಮಳೆಯ ತರದೇ ‘ಕಾದ’ ಎದೆಗೆ..
ಹೀರಿಕೊಂಡ ಅರಳು ಜೇನು
ಹಸಿವ ಮರೆಸೀತೇ ಕೊನೆಯವರೆಗೆ..

ಆಳ ಗಾಯದ ನೋವ ತುದಿಗೂ
ಅಳೆದು ಕೂತಿದೆ ವಾಸಿಯಾಗುವ ಭರವಸೆ..
ಹೇಳಲಾಗದ ಹಲವು ಮಾತಿಗೂ
ಬಳಿದುಕೊಂಡಿಹೆ ಅರ್ಥ ದೊರಕಿಸೋ ಆಸೆ..

ಪರಿಧಿ ಕ್ರಮಿಸುವ ಸಮಯ
ದಾಟಿ ಬಂದಿದೆ ವಾಸ್ತುಬಾಗಿಲ ಒಳಗೆ..
ತೊರೆದು ಬಿರುದು,ದಾರದ ಭ್ರಮೆಯ
ಹೆಜ್ಜೆಯಿಡುವೆ ಮತ್ತೆ ಪರಸೆಯಾ ಒಡಲಿಗೆ...

                                                   ~‘ಶ್ರೀ’
                                                       ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ