ಗುರುವಾರ, ಜನವರಿ 30, 2014

"ಒಳ ಕಿಟಕಿಯಲಿ.."

ತಮ್ಮೆಲ್ಲರ ಪ್ರೀತಿ ಹೀಗೇ ಇರುತ್ತದೆಂಬ ಭರವಸೆಯೊಂದಿಗೆ...ನನ್ನ ಕಾವ್ಯಜೀವನದ ೨೦೦ನೇ ಕವಿತೆ....

 "ಒಳ ಕಿಟಕಿಯಲಿ.."

ಕತ್ತಲೆಯೆ ಕೊಡು ನನಗೆ
ನಿನ್ನೆದೆಯ ನಡು ಛಾಯೆ..
ಬೆಳಕ ಪುಳಕದ ಒಳಗೆ
ತಂಪ ಕೊಡಲಿ ಹೊಸ ಮಾಯೆ...

ಭ್ರಾಂತಿ ನೂಲಿನ ಬೆಸುಗೆಯಿಂದಲಿ
ಹೊಲಿದು ತೊಟ್ಟಿಹ ಮೋಹದರಿವೆ..
ಹರಿತ ನೆರಿಗೆಯ ಅಂಚುಗಳಲಿ
ಅಲೆದು ಕಳೆದಿದೆ ನಿಜದ ಪರಿವೆ..

ನನ್ನೆದೆಯ ಒಳಕಿಟಕಿಯಲಿ
ಹೊಂಚುಹಾಕಿದೆ ಬೆಳಕ ಕಿರುಬಾಣ..
ಸುಳಿವಿರದ ನವ ಸೆಳೆತದಲಿ
ಮುಳುಗಿಹೋಗದೆ ತೇಲೀತೇ ಹರಿವಾಣ..

ಮರದ ಆಟಿಕೆಯ ಮನಸಿನೊಳಗೆ
ರಂಧ್ರ ಕೊರೆಯಲೇ ಭಾವ ತೂರಲು..
ಬೆರೆವ ಒಲವಿನ ತೈಲದೊಳಗೆ
ಅದ್ದಿ ತೆಗೆಯಲೇ ಎಲ್ಲ ಕೀಲು..

ದಿನವು ತೀರದ ದಾಹದೊಳಗೆ
ವಿರಹವನು ಬೆರೆಸಿ ತುಳುಕಿಸಲೇ..
ಕತ್ತಲೆಯೇ ನೀ ಸುಳಿಯೆ ಬಳಿಗೆ
ಆಗಾಗ ತಿಳಿಯಲಿ ಬೆಳಕಿನಾ ಬೆಲೆ...

                             ~‘ಶ್ರೀ’
                               ತಲಗೇರಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ