ಬುಧವಾರ, ಆಗಸ್ಟ್ 3, 2016

"ಪ್ರಕ್ರಿಯೆ"...

ಧರೆಯೊಳಗೆ ಅಧರವನ್ನಿಟ್ಟು
ಎಂದೋ ಕದ್ದ ಗುಲಾಬಿ ಪಕಳೆಗೆ
ಬಿಂಕ ತುಂಬಿದ ಕಾಲ..
ದಾರಿ ತುಂಬ ಸುಳಿವು
ಅಲೆದಿದ್ದು ಯಾಕೆ!..
ದುಂಬಿಗೀಗ ತಿಳಿದಿಹುದು
ಅರೆ ಒಗರು ಜೇನ
ನೀನಲ್ಲಿ ಮೆತ್ತಿದ್ದು...

ತಗ್ಗಿನಲೂ ಉಬ್ಬುಗಳ
ಕಾಯ್ದುಕೊಳ್ಳುವಿಕೆ ಹೊಸತಲ್ಲ
ಪ್ರಕೃತಿಗೆ...
ಬಣ್ಣದಾ ಹನಿ
ಜಾರಿದಾ ಬಳಿಕವೂ
ಹಗ್ಗದಂತೆ ಹುರಿಗೊಳಿಸಿ
ಮೈಗಂಟಿಕೊಂಬುದರ
ತಾತ್ಪರ್ಯವೇನು!
ಕಣಿವೆಯ ಅಂಚುಗಳ
ತೀಡಿತೇ ಮಳೆಬಾನು...

ಕಳೆದದ್ದು ಹುಡುಕುವುದು
ಕಳೆದುಹೋದದ್ದರಲ್ಲಲ್ಲ;
ಉಳಿದುಕೊಂಡಿದ್ದರಲ್ಲಿ!..
ಬೆಳಕು ತೀರಿದ್ದು
ಕಾವು ಇಳಿಯಿತೆಂದಲ್ಲ;
ಟಿಸಿಲೊಡೆವ ಗಳಿಗೆಗೆ
ಮತ್ತೆ ಅಣಿಯಾಗಲೆಂದು..
ಯಾರೋ ಬಚ್ಚಿಟ್ಟ ಹಿತವಿದೆ
ಅಲ್ಲೂ ಇಲ್ಲೂ;
ಕಪ್ಪಿನಲಿ ಕರಗಿರುವ
ಕಸುವ ಹುಡುಕುವುದರಲ್ಲಿ..
ಮೈಬಿರಿದು, ತೊದಲಿಗೆ
ಬಿಡಿಬಿಡಿಯ ಕಡಲಾಗುವುದರಲ್ಲಿ..
ಹಗಲು ಹರೆಯದಿ ಕೊಟ್ಟ
ಕಲೆಯಿಹುದು ಚಂದ್ರನಲ್ಲೂ..!

                        ~‘ಶ್ರೀ’
                          ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ