ಭಾನುವಾರ, ಜುಲೈ 24, 2016

"ಕರೆ"...

ಎದೆಯೆದೆಯ ಬದು ದಾಟಿ
ಯಾವ ದಿಕ್ಕಲೋ ಒಂದು ಭೇಟಿ..
ಅತ್ತ ವಾರಿಧಿ ದೂರದಳತೆ
ಕವಲು ಕಲೆತು ಕಡಲ ಕವಿತೆ..
ಗರ್ಭದಲೇ ಬಿರಿದು
ಹಾದಿಯುದ್ದ ಟಿಸಿಲು, ಮತ್ತೆ ಒಂದೇ ಉಸಿರು..

ಒರಟು ಚರ್ಮದ ಬೆವರ ದಾರಿ
ಯಾವ ಉಳಿಯ ಬಿಸಿಯು ಜಾರಿ..
ಹೊಸತು ರೂಪ, ಹಡೆದ ಮೊದಲಿಗೆ
ಬಿಡದೇ ಮಿಸುಕುವ ಕಸುವು, ಎದುರಿಗೆ..
ಅರ್ಧದಲೇ ಮುರಿದು
ಬೆರಳು ಬಿಕ್ಕುವ ಸಮಯ, ನೆನೆದು ಸ್ಥಿರವದು ಹೃದಯ...

ಮಿಣುಕು ದೀಪದಿ ನೇಯ್ದು ಆಸೆಯ
ಯಾವ ಮಣ್ಣಲೋ ಕನಸ ಸಂಚಯ..
ಬಿಸಿಲ ತಾಪ, ಒಡೆದ ಗಳಿಗೆ
ಬಣ್ಣ ಬಳಿವುದು ಮೈಗೆ, ಕೊನೆಗೆ..
ಚಿಪ್ಪಿನಲೇ ಕಮರಿ
ಬೇರು ಬಿಡದಿರೆ ಹೇಗೆ, ಕಪ್ಪು ತಂಪಿನ ಕಾಯ!...

ಎಲ್ಲ ಇರುವಿನ ಹೆಗಲ ತುದಿಗೂ
ಜೋತುಬಿದ್ದ ಪುಟ್ಟ ಗಡಿಯಾರ..
ಪಿಸುದನಿಯ ಪರಿಮಿತಿಗೆ
ವೃತ್ತ ದಾಟುವ ಬಯಕೆ
ಹರಡಬಲ್ಲೆಯಾ ಕೇಳಿ, ಪಲುಕ ಲಹರಿ...

                                  ~‘ಶ್ರೀ’
                                      ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ